12 September 2012

ಏಯಂ ಆಕಾಶವಾಣಿ..




ರಾತ್ರೆ ಮನೆಯ ಒಳಗೆ ಅಡುಗೆಮನೆಯ ಕಡೆಯುವ ಕಲ್ಲಿನ ಹತ್ತಿರವೋ ಇಲ್ಲವೇ ಮೆಟ್ಟಿಲ ಹತ್ತಿರವೋ ಬೆಚ್ಚಗೆ ಗೋಣಿ ಹಾಸಿ ಅದರ ಮೇಲೆ ಮಲಗಿಸಲಾಗುತ್ತಿದ್ದ ಕರುಗಳೆಂದರೆ ನನಗೆ ಬಹಳ ಅಕ್ಕರೆ. ಸುಮಾರು ದನಗಳು ನಮ್ಮ ಹಟ್ಟಿಯಲ್ಲಿದ್ದು ವರ್ಷಪೂರ್ತಿ ಒಂದಲ್ಲ ಒಂದು ದನಗಳು ಗಬ್ಬವಾಗಿ ಕರು ಹಾಕುತ್ತಲೇ ಇದ್ದುದರಿಂದ ಮುನ್ನೂರೈವತ್ತು ದಿನವೂ ಈ ರೀತಿ ಕರುಗಳನ್ನು ಮನೆಯೊಳಗೆ ಮಲಗಿಸಿಕೊಳ್ಳುವುದನ್ನು ಕಾಣಬಹುದಾಗಿತ್ತು. ಚಳಿ-ಮಳೆ ವಿಪರೀತವಾಗಿದ್ದ ನಮ್ಮೂರಿನಲ್ಲಿ ಈ ಎಳೆ ಬೊಮ್ಮಟೆಗಳನ್ನು ಒಂದಷ್ಟು ದಿನ ಹೀಗೆ ಮನೆಯೊಳಗೆ ಮಲಗಿಸಿಕೊಳ್ಳಲೆ ಬೇಕಾಗುತ್ತಿತ್ತು..ಆ ಎಳೆ ಬೊಮ್ಮಟೆಗಳಿಗೆ ಥಂಡಿಗೆ ನ್ಯುಮೋನಿಯ ಆಗದಂತೆ ಕಾಪಾಡಲು ಹೀಗೆ ಮಾಡದೆ ವಿಧಿಯೇ ಇರುತ್ತಿರಲಿಲ್ಲ.ನನಗೊ ಅವುಗಳೆಂದರೆ ಭ್ರಾತೃ ವಾತ್ಸಲ್ಯ.ತಮ್ಮ ನುಣುಪು ಕಂದು-ಬಿಳಿ ಮೈಯಿಂದ ಸಿನುಗು ವಾಸನೆ ಹೊರಹೊಮ್ಮಿಸುತ್ತ ಇಷ್ಟಗಲ ಕಣ್ಣು ಬಿಟ್ಟು ಕೊಂಚ ಬೆದರಿದಂತೆ ಅಚ್ಚರಿಯಿಂದ ನನ್ನತ್ತ ಅವು ದಿಟ್ಟಿಸಿ ನೋಡುತ್ತಿದ್ದಾಗ ಅವುಗಳಷ್ಟೇ ಪುಟ್ಟ ಮಗುವಾಗಿದ್ದ ನನ್ನೊಳಗೆ ವಾತ್ಸಲ್ಯ ಉಕ್ಕಿಬಂದು ತಬ್ಬಿಕೊಂಡು ಆ ಮುದ್ದಾದ ಕಣ್ಣುಗಳಿಗೆ ಮುತ್ತಿಡುವ ಎಂದೆನಿಸುತ್ತಿತ್ತು.ಎಷ್ಟೋ ರಾತ್ರಿಗಳು ಅತ್ತು ಕೂಗಿ ರಂಪಾಟ ಮಾಡಿ ಹಟತೊಟ್ಟು ಅವುಗಳನ್ನು ತಬ್ಬಿಕೊಂಡು ಅವುಗಳೊಂದಿಗೆ ಅವುಗಳ ಗೋಣಿ ಹಾಸಿಗೆಯಲ್ಲೇ (ಉಚ್ಚೆ ಮಾಡಿ-ಸಣ್ಣ ಮಕ್ಕಳಂತೆ ಕಕ್ಕ ಮಾಡಿ ಎಷ್ಟೋ ಸಾರಿ ಆ ಗೋಣಿ ತಾಟುಗಳು ನಾತ ಹೊಡೆಯುತ್ತಿದ್ದರೂ ಸಹ, ಎಳೆಗರುಗಳು ಸಗಣಿ ಹಾಕದೆ ಸಣ್ಣ ಮಕ್ಕಳಂತೆ ಮಲ ಹಾಕುತ್ತವೆ) ನಾನೂ ಒಬ್ಬನಾಗಿ ನಿದ್ದೆ ಹೋಗುತ್ತಿದ್ದೆ.


"ಎಯಂ ಆಕಾಶವಾಣಿ ಸಂಪ್ರತಿ ವಾರ್ತಾಹ ಶೂಯನ್ತಾಂ...ಪ್ರವಾಚಕಹ ಬಲದೇವಾನಂದ ಸಾಗರಹ" (ಕೆಲವೊಮ್ಮೆ ದೇವೇಂದ್ರ ಮಿಶ್ರಹ} ಹೀಗೊಂದು ಅಶರೀರವಾಣಿ ಕಿವಿಮೇಲೆ ಬೀಳುತ್ತಿದ್ದಾಗ ಮೆಲ್ಲಗೆ ನನಗೆ ಎಚ್ಚರವಾಗುತ್ತಿತ್ತು. ಚುಮುಚುಮು ಚಳಿಯಲ್ಲಿ ನಿಧಾನವಾಗಿ ಪಿಳಿಪಿಳಿ ಕಣ್ಣು ಬಿಟ್ಟು ಅತ್ತಿತ್ತ ನೋಡುತ್ತಿರೋವಾಗ ಏನಾಶ್ಚರ್ಯ! ನಾನು ಅಮ್ಮನ ( ಅಜ್ಜಿಯನ್ನ ನಾನು ಅಮ್ಮ ಎನ್ನುತ್ತೇನೆ) ಹಾಸಿಗೆಯಲ್ಲಿ ಅವರ ಮಂದರಿಯೊಳಗೆ ಹುದುಗಿರುತ್ತಿದ್ದೆ!! ಮೆಲ್ಲಗೆ ಕಡೆಯುವ ಕಲ್ಲಿನ ಕರು ಕಟ್ಟಿದೆಡೆಗೆ ಕಣ್ಣು ಹಾಯಿಸಿದರೆ ಅದೂ ಮಾಯ!!! ತನ್ನಮ್ಮನ ಬಳಿ ಮೈ ನೆಕ್ಕಿಸಿ ಕೊಳ್ಳುತ್ತಾ ಮೊಲೆ ಚೀಪಲು ಓಡಿರುತ್ತಿತ್ತು. "....ಇತಿ ವಾರ್ತಾಹ" ಎನ್ನುವ ರಾಗಬದ್ಧ ಧ್ವನಿ ಕಿವಿಗೆ ಬಿದ್ದು ಸೋಮಾರಿ ಸಿದ್ಧನಾಗಿ ಮೈ ಮುರಿದು ಏಳುವ ಸಮಯಕ್ಕೆಲ್ಲ ಪ್ರದೇಶ ಸಮಾಚಾರದ ಗಡಸು ಕನ್ನಡದ ಧ್ವನಿ ಮೊಳಗಲು ಬೀಳಲಾರಂಭವಾಗಿರುತ್ತಿತ್ತು. ಸಾಮಾನ್ಯವಾಗಿ ಬೆಳಗಿನ ಹೊತ್ತುಗಳಲ್ಲಿ ನಮ್ಮ ಮನೆಯಲ್ಲಿ ಉಲಿಯುತ್ತಿದ್ದುದು ಒಂದೋ ಆಕಾಶವಾಣಿಯ ಭದ್ರಾವತಿ ಕೇಂದ್ರದ ಕಾರ್ಯಕ್ರಮಗಳು ಇಲ್ಲವೇ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳು.

ಚಿಂತನ, ನಗರದಲ್ಲಿ ಇಂದು, ಸಂಸ್ಕೃತದಲ್ಲಿ ವಾರ್ತೆಗಳು (ಅದೂ ದೆಹಲಿ ಕೇಂದ್ರದ ಸಹ ಪ್ರಸಾರದೊಂದಿಗೆ!), ಪ್ರದೇಶ ಸಮಾಚಾರ, ಪ್ರಚಲಿತ, ರಸವಾರ್ತೆ, ಕನ್ನಡದಲ್ಲಿ ವಾರ್ತೆಗಳು, ಚಿತ್ರಗೀತೆಗಳು, ಪುನಃ ದೆಹಲಿಯಿಂದ ಹಿಂದಿ ಹಾಗು ಇಂಗ್ಲಿಶ್ ವಾರ್ತೆಗಳು ಇವೆಲ್ಲ ನನ್ನ ಬಾಲ್ಯದ ಬೆಳಗಿಗೆ ರಂಗು ತುಂಬುತ್ತಿದ್ದವು. ಎದ್ದು ಹಲ್ಲುಜ್ಜಿ, ಚಾ ಸವಿದು, ವರ್ತನೆ ಮನೆಗಳಿಗೆ ಹಾಲು ಕೊಟ್ಟು ಮತ್ತೆ ಬಂದವ ಕೊಂಚ ಹೊತ್ತು ಪುಸ್ತಕ ಓಡುವ ಪ್ರಹಸನ ನಡೆಸಿ ನಡು ನಡುವೆ ಹಲವಾರು ಕಾರಣಗಳಿಗಾಗಿ ಹಿರಿಯರಿಂದ ಬಯ್ಯಿಸಿಕೊಂಡು ಕರೆದಾಗ ಹೋಗಿ ಸ್ನಾನ ಮಾಡಿಸಿಕೊಂಡು (ಈ ಸ್ನಾನ ಮಾಡೋದು ನನ್ನಿಡಿ ಬಾಲ್ಯದಲ್ಲಿ ನನಗೊಂದು ಘನ ಘೋರ ಶಿಕ್ಷೆಯಂತೆಯೆ ಭಾಸವಾಗುತ್ತಿತ್ತು. ದನಗಳ ಹಿಂಡೇ ನಮ್ಮ ಬಚ್ಚಲ ಪಕ್ಕದ ಹಟ್ಟಿಯಲ್ಲಿ ಇರುತ್ತಿದ್ದಿದ್ದರಿಂದ ಪ್ರತಿ ಐದು ನಿಮಿಷಕ್ಕೊಮ್ಮೆ ಯಾವುದಾದರೊಂದು ದನ ಬಾಲ ಎತ್ತುತ್ತಿತ್ತು. ಕೂಡಲೆ ಕೀ ಕೊಟ್ಟ ಬೊಂಬೆಯಂತೆ ನನ್ನ ಪ್ರತಿರೋಧವನ್ನೂ ಲೆಕ್ಖಿಸದೆ ನಮ್ಮಮ್ಮ ಬಲವಂತವಾಗಿ ದರದರನೆ ಎಳೆದು ದನದ ಮೂತ್ರಾಭಿಷೇಕ ಮಾಡಿಸಿಯೇ ಮಾಡಿಸುತ್ತಿದ್ದರು. ಸಾಲದ್ದಕ್ಕೆ ಅಲ್ಲೆ ಯಾವಾಗಲೂ ತಯಾರಿರುತ್ತಿದ್ದ ಚೊಂಬೊಂದರಲ್ಲಿ ಭರ್ತಿ ಗೋಮೂತ್ರ ಹಿಡಿದು ನನ್ನ ವಿರೋಧವನ್ನು ಚೂರೂ ಪರಿಗಣಿಸದೆ ಕುಡಿಸಿಯೇ ಕುಡಿಸಿರುತ್ತಿದ್ದರು. ಗಜಗಾತ್ರದ ಸಿಂಧಿ ದನಗಳ ಚೊಂಬು ಭರ್ತಿ ಮೂತ್ರಪಾನದ ಸುಖವನ್ನು ಕಲ್ಪಿಸಿಕೊಳ್ಳಿ! ಹಾಗೆ ನೋಡಿದರೆ ಇಲ್ಲಿಯವರೆಗೆ ನಾನು ದನದ ಹಾಲಿಗಿಂತ ಹೆಚ್ಚು ಉಚ್ಚೆ ಕುಡಿದಿದ್ದೇನೆ. ದನದ ಉಚ್ಚೆ ನಿತ್ಯ ಕುಡಿದವನು ಬುದ್ಧಿವಂತನಾಗುತ್ತಾನಂತೆ!! ಹಾಗೆ ಅವರ ಕಿವಿಚುಚ್ಚಿದ ಪುಣ್ಯಾತ್ಮ ನನ್ನ ಇನ್ನೂ ಹುಡುಕುತ್ತಿದ್ದೇನೆ... ಕೈಗೊಮ್ಮೆ ಸಿಗಲಿ ಇದೆ ಅವನಿಗೆ!?) . ಅನಂತರ ಸೂಜಿಯಂತಹ ಹಣಿಗೆಯಲ್ಲಿ ತಲೆ ಬಾಚಿಸಿಕೊಂಡು ದೇವರಿಗೆ ಅಡ್ಡ ಬಿದ್ದು, ಪ್ರದಕ್ಷಿಣೆ ಹಾಕಿ ಹಣೆಗೆ ಕುಂಕುಮದ ಬೊಟ್ಟಿಡಿಸಿಕೊಳ್ಳುತ್ತಾ ಸಮವಸ್ತ್ರ ತೊಟ್ಟುಕೊಂಡರೆ ಒಂದು ಹಂತಕ್ಕೆ ಸಿದ್ಧನಾದಂತೆ.

ಕೊಟ್ಟ ತಿಂಡಿ ತಿಂದು ಅಂಗಡಿಗೆ ಹೋಗಿ ಏನಾದರೂ ಚಿಲ್ಲರೆ ಸಾಮಾನು ತರೋದೋ, ಇಲ್ಲ ಹೂ ಕುಯಿದು ಕೊಡೋದೋ ಮುಂತಾದ ಚಿಲ್ಲರೆ ಕೆಲಸ ಮುಗಿಸುವ ಹೊತ್ತಿಗೆ ನಮ್ಮ ರೇಡಿಯೋ ಹಲವಾರು ಬಾರಿ ಕಿವಿ ಹಿಂಡಿಸಿಕೊಂಡು ಭದ್ರಾವತಿಯಿಂದ ಧಾರವಾಡಕ್ಕೂ, ಅಲ್ಲಿಂದ ಗುಲ್ಬರ್ಗಾಕ್ಕೂ, ಅಲ್ಲಿಂದ ಮಂಗಳೂರಿಗೂ ಅಥವಾ ಕೆಲವೊಮ್ಮೆ ಬೆಂಗಳೂರಿಗೂ ಕೂತಲ್ಲಿಂದಲೆ ವಿಶ್ವ ಪರ್ಯಟನೆ ಹೋಗಿ ಬಂದಿರುತ್ತಿತ್ತು. ಅಸಾಧ್ಯ ಗದ್ದಲದ ನಡುವೆ ತುಣುಕು ತುಣುಕಾಗಿ ಯಾವುದಾದರೊಂದು ಚಿತ್ರಗೀತೆಯನ್ನ ಹಾಡುತ್ತಲೆ ಇರುತ್ತಿತ್ತು. ಎಸ್ ಪಿ ಬಾಲಸುಬ್ರಮಣ್ಯಮ್, ಪಿ ಲೀಲಾ, ಪಿ ಸುಶೀಲ, ವಾಣಿ ಜಯರಾಂ, ಪಿ ಬಿ ಶ್ರೀನಿವಾಸ್, ಬೆಂಗಳೂರು ಲತಾ, ಎಸ್ ಪಿ ಶೈಲಜಾ, ಬಿ ಕೆ ಸುಮಿತ್ರ, ಎಲ್ ಅರ್ ಈಶ್ವರಿ, ಕಸ್ತೂರಿ ಶಂಕರ್, ಕೆ ಎಸ್ ಸೌಂದರ್ ರಾಜನ್, ಘಂಟಸಾಲ, ಜಯಚಂದ್ರನ್, ರಾಜ್ಕುಮಾರ್ ಭಾರತಿ, ಯೇಸುದಾಸ್ ಮುಂತಾದವರಿಗೆ ಪಾಪ ದಿನ ನಿತ್ಯ ಬೆಳಗಾಗೆದ್ದು ನಮ್ಮನೆ ರೇಡಿಯೋದಲ್ಲಿ ಹಾಡೋದೊಂದೇ ಕೆಲಸ!. ಇಷ್ಟೆಲ್ಲಾ ಗಂಟಲು ಹರಕೊಂಡು ಹಾಡಿದರೂ ಒಂದೆ ಒಂದು ದಿನವೂ ತಮ್ಮ ಕತ್ತೆ ದುಡಿಮೆಗೆ ಬೇಸರಿಸಿಕೊಳ್ಳದೆ ಇವತ್ತಿಗೂಅವರೆಲ್ಲ ಹಾಗೆಯೆ ಹಾಡುತ್ತಲೇ ಇದ್ದಾರೆ. ಹೀಗಾಗಿ ಮೊದಲ ಬಾರಿಗೆ ಜಾನಕಿಯಮ್ಮ ,ಬಾಲು ಸರ್, ವಾಣಿ ಮೇಡಂ ( ಇವರೆಲ್ಲರೂ ಈಗ ನನ್ನ ಆಪ್ತರು) ರನ್ನ ಪ್ರತ್ಯಕ್ಷ ಕಂಡು ಅವರೊಂದಿಗೆ ಕಾಫಿ ಕುಡಿಯುತ್ತ ಮಾತನಾಡಿದಾಗ ಅವರು ನಮ್ಮನೆಯವರಲ್ಲದೆ ಬೇರೆಯವರು ಅಂತ ಅನ್ನಿಸಲೆ ಇಲ್ಲ!.

5 comments:

Srikanth Manjunath said...

"ಎಯಂ ಆಕಾಶವಾಣಿ ಸಂಪ್ರತಿ ವಾರ್ತಾಹ ಶೂಯನ್ತಾಂ...ಪ್ರವಾಚಕಹ ಬಲದೇವಾನಂದ ಸಾಗರಹ
ಈ ವಾಣಿ..ಮುಲಾಜಿಲ್ಲದೆ ನಮ್ಮನ್ನು ನಮ್ಮ ಬಾಲ್ಯದ ದಿನಗಳಿಗೆ ಒಯ್ಯುತ್ತದೆ...ಆಕಾಶವಾಣಿ ಈರಣ್ಣ, ರೈತರಿಗೆ ಸಲಹೆ..ಈ ಕಾರ್ಯಕ್ರಮಗಳಿಂದಲೇ ನಮಗೆ ಆಗ ಬೆಳಗಾಗುತಿದ್ದುದು..ಬೆಳಿಗ್ಗೆ ಅಪರ್ಣ, ನಂದನ..ರಾತ್ರಿ ಬೃಂದಾವನ..ಎಂತ ಸೊಗಸಿತ್ತು ಆ ಕಾಲ...ರೇಡಿಯೋಗಳು ಎಲ್ಲರ ಮನೆಯ ಸದಸ್ಯನಾಗಿರುತಿದ್ದ ಕಾಲ ಅದು...
ಸುಂದರವಾದ ಲೇಖನ...ಬೆಳಿಗ್ಗೆಯೇ ಸುಮಾರು ೨೫ ವರುಷಗಳನ್ನ ಹಿಂದಕ್ಕೆ ತಳ್ಳಿದ ನಿಮ್ಮ ಮೂರು ಲೇಖನಗಳು ಸೊಗಸಾಗಿವೆ...ಅಭಿನಂದನೆಗಳು..

Ashok.V.Shetty, Kodlady said...

ಇದು ನಿಮ್ಮ ಬಾಲ್ಯದ ಅನುಭವ ವೋ ನನ್ನ ಬಾಲ್ಯದ ಅನುಭವವೋ ???? ನಿಮ್ಮ ಈ ಲೇಖನ ನನ್ನ ಚಿಕ್ಕಂದಿನ ನೆನಪುಗಳ ಕ್ಷೆರಾಕ್ಷ್ ಕಾಪಿ ಯಂತಿದೆ. ಸಂಸ್ಕೃತ ವಾರ್ತೆಯ ಬಲದೇವಾನಂದ ಸಾಗರ್, ಕನ್ನಡ ವಾರ್ತೆಯ ರಂಗರಾವ್, ಪಿ. ಉಪೇಂದ್ರ, ಶುಭಾ ದಾಸ್, ಪ್ರದೇಶ ಸಮಾಚಾರದ ನಾಗೇಶ್ ಶಾನುಭೋಗ್ ಇವರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ.....ನನಗೆ ಇನ್ನು ಸರಿಯಾಗಿ ನೆನಪಿದೆ ೬.೫೫ ಕ್ಕೆ ಸಂಸ್ಕೃತ ವಾರ್ತೆ , ೭.೦೫ ಕ್ಕೆ ಪ್ರದೇಶ ಸಮಾಚಾರ, ೭.೩೫ ಕ್ಕೆ ಕನ್ನಡ ವಾರ್ತೆ.......ಆ ವೇಳಾಪಟ್ಟಿ...ಮಧ್ಯದಲ್ಲಿ ಇಂದಿನ ಕಾರ್ಯಕ್ರಮಗಳ ವಿವರ, ರೈತರಿಗೆ ಸಲಹೆ........... ನಿಮ್ಮ ಬರಹ ಇಷ್ಟವಾಯಿತು.....

Shantharam V.Shetty said...

ರೇಡಿಯೋ ಬಂದ ಮೊದ ಮೊದಲಲ್ಲಿ ಅದು ಸುರುವಾಗುವ ಮೊದಲು ಒಂದು ಸುಮಧುರ ಸ್ವರ ಮೂಡಿಸುತ್ತಿತ್ತು. ಅದನ್ನೂ ಬಿಡದೆ ಕೇಳುತ್ತಿದ್ದೆ. ಮಂಗಳೂರು ಆಕಾಶವಾಣಿಯ ಶ್ಯಾಮ್ ಭಟ್ರ ಕೃಷಿರಂಗ ರೈ ಯವರ ಕೆಂಚನ ಕುರ್ಲರಿ , ಆಗೋಲಿ ಮಂಜಣ್ಣನ ಪಾಡ್ದನ , ರಮಾಕಾಂತ್ ಅವರ ರಸೆವಾರ್ತೆ ಮನದಾಲದಲ್ಲಿ...ಈಗಲೂ ಗುನುಗುಟ್ಟುತ್ತಿದೆ ನೆನಪು ಮರು ಹುಟ್ಟಿಸಿದ ನಿಮಗೆ ವಂದನೆಗಳು

SHARATH HEGDE, KADTHALA said...

ತುಂಬಾ ಒಳ್ಳೆಯ ಲೇಖನ. ನಿಮ್ಮ ಬಾಲ್ಯದ ದಿನಗಳ ಹಾಗೆ ನನ್ನ ಬಾಲ್ಯವೂ ಕಳೆದಿದೆ. ರೇಡಿಯೋ ನಮ್ಮ ಮನೆಯ ಗಡಿಯಾರವೂ ಆಗಿತ್ತು. ಸುಮಾರು 25 ವರ್ಷಗಳ ಒಡನಾಟವದು. ಕೊನೆಗೂ ರೇಡಿಯೋದಲ್ಲಿ ಮಾತನಾಡುತ್ತೇನೆ ಅಂದುಕೊಂಡಿರಲಿಲ್ಲ. ಅದೂ ಆಯಿತು. ಸುಮಾರು ನಾಲ್ಕುವರ್ಷ ಮಂಗಳೂರು ಆಕಾಶವಾಣಿ ಮಾತನಾಡಿಸಿತು. ಮಂಗಳೂರಿಗೆ ಹೋಗಿ ಆ ಎತ್ತರದ ಟವರ್‌ ನೋಡಿ ಒಮ್ಮೆ ಭಾವುಕನಾಗುತ್ತೇನೆ. ಈಗಲೂ ಬೇಜಾರಾದಾಗ ಸ್ಟುಡಿಯೋದೊಳಗೊಮ್ಮೆ ಹೋಗಿಬರುತ್ತೇನೆ.
ಇನ್ನು ದನ ಕರು ಇವೂ ಬದುಕಿನ ಭಾಗಗಳೇ. ಮನೆಯ ಸದಸ್ಯರೇ. ಹೊಟ್ಟೆಪಾಡಿಗೆ ಊರುಬಿಟ್ಟು ಬಂದು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಒಂದು ಸಕಾಲಿಕ, ಅತ್ಯುತ್ತಮ ಬರಹ

Anagha Kirana ಅನಘ ಕಿರಣ said...

ಹೂಂ, ಬಹುತೇಕ ಎಲ್ಲಾ ಮಲೆನಾಡಿಗರ-ಕರಾವಳಿಗರ ಎಂಬತ್ತರ - ತೊಂಬತ್ತರ ದಶಕದ ಬದುಕಿನ ಚಿತ್ರಣ ಇದೇನೆ ಅನ್ನಿಸುತ್ತದೆ.