Pages

16 June 2013

ನಿರ್ಜೀವ ಸಂಸತ್ತಿನಲ್ಲಿ ಕೆಲಸಕ್ಕೆ ಬಾರದ ಸಂಸದರು.......




( ಕರಾವಳಿ ಕರ್ನಾಟಕದ ಸಂಸದರಿಗೆ ಈ ಮಾತನ್ನು ಬರೆದದ್ದು, ಈ ಸಂದೇಶವನ್ನ ಅವರಲ್ಲಿ ಇಬ್ಬರ ಗಮನಕ್ಕೆ ತರಲಾಗಿದೆ, ಮೂರು ಕಾಸಿನ ಪ್ರಯೋಜನ ಇದರಿಂದ ಇಲ್ಲ ಎನ್ನುವ ಅರಿವಿದ್ದೂ ಸಹ.)


ಇದೇನಿದು ಸಂಸದರೆ ಮಂಗಳೂರಿಗೆ, ಅದು ಸಹ ವಾರಕ್ಕೊಮ್ಮೆ ಕಳೆದ ರೈಲ್ವೆ ಬಜೆಟ್‍ನಲ್ಲಿ ಘೋಷಿಸಿದ್ದ ಹೊಸ ರೈಲು ಕೇವಲ "ರೈಲು" ಬಿಟ್ಟಂತಾಗಿದೆಯಲ್ಲ!

ಸೇಲಂ, ಕೊಯಮತ್ತೂರು, ಪಾಲ್ಘಾಟ್, ಕಣ್ಣೂರು ದಾರಿಯಾಗಿ ಈ ಕಣ್ಣೊರೆಸುವ ರೈಲು ಬಿಟ್ಟಿರೋದು ಯಾವ ಕರ್ಮಕ್ಕಾಗಿ? ಮಲಯಾಳಿ ಸಂಸದರು ಲಾಬಿ ಮಾಡುವಾಗ ನೀವೆಲ್ಲ ನಿದ್ದೆಯಲ್ಲಿದ್ದಿರಾ ಸ್ವಾಮಿ? ನಿಮ್ಮನ್ನೆ ನಂಬಿದ್ದೆವಲ್ಲ ನಾವೆಲ್ಲ.

ಈಗಾಗಲೆ ಕೊಂಕಣ ರೈಲ್ವೆ ಮಾರ್ಗಕ್ಕೆ ಸಂಪರ್ಕವಾಗುವ ಪಾಲ್ಘಾಟ್ ಸೀಳುದಾರಿಯಿಂದ ಈ ಮಾರ್ಗವಾಗಿ ಕೇರಳ ಹಾಗೂ ತಮಿಳುನಾಡಿನ ಉದ್ದಗಲದಿಂದ ಬರೋಬ್ಬರಿ ೩೮ ರೈಲುಗಳು ನಿತ್ಯ ಸಿಟಿ ಬಸ್ಸಿನಂತೆ ಮಂಗಳೂರಿನ ಕಡೆಗೆ ಓಡಾಡುತ್ತಿವೆ. ಅದರಲ್ಲಿ ಒಂದು ರೈಲಂತೂ ನೇರ ಬೆಂಗಳೂರಿನಿಂದ ಇದೇ ಮಾರ್ಗವಾಗಿ ಕಣ್ಣೂರಿನವರೆಗೆ ನಿತ್ಯ ಸಂಪರ್ಕ ಕಲ್ಪಿಸುತ್ತಿದೆ. ಇದು ಸಾಲದು ಅಂತ ಮಂಗಳೂರಿನ ನಿತ್ಯ ಇರುಳಿನ ರೈಲಿಗೂ ಕಣ್ಣೂರಿನವರೆಗೆ ಅನಗತ್ಯ ವಿಸ್ತರಣೆ! ಈಗ ಅದೆ ಸಾಲಿಗೆ ಇನ್ನೊಂದು ಹೊಸ ರೈಲು ಸಿಕ್ಕ ಮಲಯಾಳಿಯ ಮನ ಪ್ರಸನ್ನವಾಗಿರಲಿಕ್ಕೆ ಸಾಕು. ನಮ್ಮವರ ನಿಷ್ಕ್ರಿಯತೆಯ ಫಲಾಭವಿ ಮಲಯಾಳಿಯಾಗುತ್ತಿದ್ದರೆ ಕರಾವಳಿ ಕನ್ನಡಿಗ ಮಾತ್ರ ಎಂದಿನ ಹಾಗೆ ಪೆಕರನಂತೆ ಬಾಯಿಬಾಯಿ ಬಿಡುತ್ತಿದ್ದಾನೆ.


ಇಷ್ಟೆಲ್ಲಾ ನಾಟಕ ಮಾಡೊದಕ್ಕಿಂತ ಒಂದೊಳ್ಳೆ ರೇಟು ಬಂದರೆ ಸಮಯ ನೋಡಿಕೊಂಡು ನಮ್ಮ ಕರಾವಳಿ ಜಿಲ್ಲೆಗಳನ್ನ ಮಲಯಾಳಿಗಳಿಗೂ, ಮೈಸೂರು ಭಾಗದ ನಾಲ್ಕಾರು ಜಿಲ್ಲೆಗಳನ್ನ ತಮಿಳುನಾಡಿಗೂ, ಅಳಿದುಳಿವ ಉತ್ತರ ಕರ್ನಾಟಕದ ಏಳೆಂಟು ಜಿಲ್ಲೆಗಳನ್ನ ಮರಾಠಿಗರಿಗೂ ಹರಾಜು ಹಾಕೋದು ವಾಸಿ. ಸದ್ಯದ ಪರಿಸ್ಥಿತಿಯಲ್ಲಿ ಹಂಗಾದರೂ ನಾವು ಬಡ ಎಬಡ ಕನ್ನಡಿಗರು ಸುಖವಾಗಿದ್ದೇವು ಅನ್ನಿಸುತ್ತೆ!

ಅಲ್ಲಾ ಮಂಗಳೂರು, ಉಡುಪಿ, ಕಾರವಾರ ಇವೆಲ್ಲಾ ಬಡಪಾಯಿ ಪಟ್ಟಣಗಳು ನಮ್ಮ ರಾಜ್ಯದಲ್ಲಿಯೆ ಇವೆಯೋ ಇಲ್ಲಾ ಕೇರಳದಲ್ಲಿದೆಯೋ? ಒಂದು ಕೆಲಸ ಮಾ,ಡಿ ಈ ಪರಿ ನಮ್ಮನ್ನ ಮಂಗ ಮಾಡಿ ಮಾನಸಿಕವಾಗಿ ಹಿಂಸಿಸೋದಕ್ಕಿಂತ ಇಡಿ ಈ ಮೂರು ಕರಾವಳಿ ಜಿಲ್ಲೆಗಳ ಹಣೆಬರಹ ನಿರ್ಧರಿಸುವ ಹಕ್ಕನ್ನ ಪೂರ್ತಿ ಮಲೆಯಾಳಿಗಳಿಗೆ ಧಾರೆ ಎರೆದು ಕೊಟ್ಟು ನೀವೆಲ್ಲ ನಿರಮ್ಮಳವಾಗಿದ್ದು ಬಿಡಿ. ನಮ್ಮಂತಹ ನೊಂದ ತಲೆತಿರುಕರ ಕಾಟವಾದರೂ ನಿಮಗಾಗ ತಪ್ಪುತ್ತದಲ್ಲ.

ನಿಮಗೆ ಮತ್ತು ಇನ್ನುಳಿದ ಕರಾವಳಿ ಕರುನಾಡಿನ ಇನ್ನಿಬ್ಬರು ಸಂಸದರಿಗೆ ಒಳ್ಳೆಯದಾಗಲಿ.