Pages

09 February 2013

ತುಳುಗಾದೆ-೬


"ಕಾಳಗ್ ಬತ್ತಿ ಬಡು ಬೊಳ್ಳೆಗುಲಾ ಬರು" { ತುಳುನಾಡಿನಲ್ಲಿ ಗದ್ದೆಯನ್ನ ಹೂಡಲಿಕ್ಕೆ ಕೋಣದ ಜೋಡಿಯನ್ನ ಕಟ್ಟಲಾಗುತ್ತದೆ. ಅದರಲ್ಲಿ ಸಾಮಾನ್ಯವಾಗಿ ಒಂದನ್ನ ಕಾಳ ಅಂದರೆ ಕರಿಯ ಮತ್ತು ಇನ್ನೊಂದನ್ನ ಬೊಳ್ಳ ಅಂದರೆ ಬಿಳಿಯ ಅಂತ ಸಾಮಾನ್ಯವಾಗಿ ಕರೆಯಲಾಗುತ್ತದೆ. ಕೆಲಸದ ಹೊತ್ತಲ್ಲಿ ಕಾಳನಿಗೆ ಬಾರುಕೋಲಿನ ಪೆಟ್ಟು ಬಿದ್ದಾಗ ಬೊಳ್ಳ 'ಅವನಿಗೆ ಹಾಅಗೆಯೆ ಆಗಬೇಕು! ಸರಿಯಾದ ಶಾಸ್ತಿಯಾಯ್ತು" ಅಂತ ಮನಸಿನಲ್ಲೆ ಖುಷಿ ಪಡುತ್ತದಂತೆ, ಆದರೆ ಅದೆ ವೇಳೆಗೆ ಆ ಬೆತ್ತದ ಏಟಿನ ರುಚಿ ನನಗೂ ಬೀಳುತ್ತದೆ ಅನ್ನೋದನ್ನ ಅದು ಮರೆತಿರುತ್ತದೆ! ಇದು ಈ ಗಾದೆಯ ವಾಚ್ಯಾರ್ಥ. ನಿಜವಾಗಿ ಇನ್ನೊಬ್ಬರಿಗೆ ಕಷ್ಟ ಬಂದಾಗ ನೆರೆಯವರಿಗೆ ಸಂಕಟ ಬಂದಾಗ ನಾವು ಅವರಿಗಾದ ನೋವಿಗೆ ಮರುಗಬೇಕಲ್ಲದೆ ವಿಕೃತವಾಗಿ ಒಳಗೊಳಗೆ ಖುಷಿ ಪಡಲೇಬಾರದು. ಅವರಿಗೆ ಬಂದ ಸಂಕಟ ಮುಂದೊಮ್ಮೆ ನಮಗೂ ಒದಗಿ ಬಂದೀತು. ಆಗ ನಮ್ಮ ಸಂಕಟಕೂ ಯಾರಾದರು ನಕ್ಕರೆ ನೋವಿನ ಬಾಧೆ ನಮಗೆ ಹೆಚ್ಚಾಗಬಹುದು ಅನ್ನುವುದನ್ನ ಯಾವಾಗಲೂ ಮರೆಯಬಾರದು ಎನ್ನುವ ಸಾರ ಈ ಗಾದೆಯದು. "ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ" ಎನ್ನುವ ಕನ್ನಡ ಗಾದೆ ಇದಕ್ಕೆ ಸಂವಾದಿಯಾದ್ದದ್ದು.)
( ಕಾಳಗ್ ಬತ್ತಿ ಬಡು ಬೊಳ್ಳೆಗುಲಾ ಬರು = ಕಾಳನಿಗೆ ಬಂದ ಬೆತ್ತ ಬೊಳ್ಳನಿಗೂ ಬಂದೀತು.)

No comments:

Post a Comment