Pages

11 February 2013

ತುಳುಗಾದೆ-೮


"ಸೈತಿ ಎರ್ಮೆಗ್ ಐಯ್ಯಲ ಪೇರ್" { ಸತ್ತ ಎಮ್ಮೆಗೆ ಐದು ಬಳ್ಳ ಹಾಲು! ಅನ್ನುತ್ತದೆ ಈ ವ್ಯಂಗ್ಯ ಗಾದೆ. ಬದುಕಿದ್ದಾಗ ಬದುಕಿನುದ್ದ ನೆಟ್ಟಗೆ ನಾಲ್ಕು ಕುಡ್ತೆ ಹಾಲು ಕೊಡದೆ ಗೊಡ್ಡೆಮ್ಮೆ ಸತ್ತಾಗ ಮಾತ್ರ ಅದನ್ನ 'ಅಯ್ಯೋ ನಾಲ್ಕು ಸೇರು ಹಾಲು ಕರೆಯುತ್ತಿದ್ದ ಎಮ್ಮೆ ಸತ್ತು ಹೋಯ್ತಲ್ಲ ದೇವರೆ!" ಅಂತ ಜನ ಗೋಳಾಡುತ್ತಾರೆ. ಒಬ್ಬ ವ್ಯಕ್ತಿ ಬದುಕಿದ್ದಾಗ ನಾಲ್ಕು ಜನರಿಗೆ ಬೇಡದವನಾಗೂ, ಕೆಲವೊಮ್ಮೆ ಲೋಕ ಕಂಟಕನಾಗಿ ವ್ಯರ್ಥ ಬಾಳನ್ನ ಬಾಳಿದವನಾದರೂ ಆತ ಸತ್ತ ಕ್ಷಣ ಅವನನ್ನ ನೆನೆದು ಕಣ್ಣೀರಿಡುವ ಅವಕಾಶವಾದಿಗಳತ್ತ ವ್ಯಂಗ್ಯದ ಕೊರಂಬು ಎಸೆಯುತ್ತದೆ ಈ ಗಾದೆ. ಜನರನ್ನ ಭರ್ತಿ ಯಾಮಾರಿಸಿ, ತನ್ನ ತಿಜೋರಿ ತುಂಬಿ ಕೊಂಡ ಸ್ವ-ಘೋಷಿತ ಸಮಾಜ ಸೇವಕನೋ, ಮಠಾಧಿಪತಿಯೋ ಇಲ್ಲಾ ಒಬ್ಬ ದುಷ್ಟ ರಾಜಕಾರಣಿಯೋ ಬರಬಾರದ ಸಾವನ್ನ ಪಡೆದು ಕಡೆಗೂ ತೊಲಗಿ ಹೋದಾಗ ಅವನ ಸಾವಿನಲ್ಲೂ ಆತ್ಮವಂಚಕ ಮಂದಿ 'ಅವರ ಸಾವು ತುಂಬಲಾರದ ನಷ್ಟ!' ಅಂತ ಗೋಳಿಡುವುದು ಇಂದಿನ ದಿನಮಾನದಲ್ಲಿ ಅತಿ ಸಾಮಾನ್ಯ. ಅಂತಹವರನ್ನ ಗೇಲಿ ಮಾಡುತ್ತದೆ ಈ ಗಾದೆಯ ವಾಚ್ಯಾರ್ಥ.} ಸೈತಿ ಎರ್ಮೆಗ್ ಐಯ್ಯಲ ಪೇರ್ = ಸತ್ತ ಎಮ್ಮೆಗೆ ಐದು ಬಳ್ಳ ಹಾಲು.

No comments:

Post a Comment