19 May 2009

ಸಮಯ ಅಮೂಲ್ಯ...

ಕಳೆದು ಹೋಗಿದೆ....

ಸೂರ್ಯೋದಯ ಸೂರ್ಯಾಸ್ತಕ್ಕೂ ನಡುವೆ,

ಅರವತ್ತು ವಜ್ರ ಖಚಿತ ನಿಮಿಷಗಳನ್ನು ಕೂಡಿಸಿದ್ದ ಒಂದು ಬಂಗಾರದ ಘಂಟೆ/

ಬಹುಮಾನ ಘೋಷಿಸಿಲ್ಲ ಅದನು ಹುಡುಕಿ ಕೊಟ್ಟವರಿಗೆ,

ಏಕೆಂದರೆ ಸಿಗಲಾರದಂತೆ...

ಅದು ಕಳೆದೆ ಹೋಗಿದೆ//

-ಲಾರ ಇಂಗಲ್ಸ್ ವೈಲ್ದೆರ್

( ಭಾವಾನುವಾದ)

16 May 2009

ನಿಲ್ಲದಿರಲಿ ಒಲುಮೆಯ ಮಳೆ.....

ನಿಲ್ಲದ ಮಳೆಹನಿಯ ಆತುರ,

ಮೋಡದ ಎದೆಯೊಳಗೆ ಅಡಗಿದ ಕಾತರ/

ಮುತ್ತಿನ ಮಣಿಗಳಾಗಿ......ಭೂರಮೆಯ ಅಂಗುಲ ಅಂಗುಲವನ್ನೂ,

ಬಿಡದೆ ಚುಮ್ಬಿಸಿವೆ

ಇಬ್ಬನಿಯಲಿ ಮೀಯುವ ತವಕ,

ಮೋಡದಲ್ಲಿ ತೇಲುವ ಕನಸೇ ಮೋಹಕ/

ಈ ಮುಂಜಾನೆಯ ಮೊಗ್ಗು ಮೂಡದಿದ್ದರೆ,

ಸವಿ ಸ್ವಪ್ನದ ಇರುಳು ಜಾರದಿದ್ದರೆ.....ಸೊಗಸಿತ್ತು//

11 May 2009

ಗುಟ್ಟು ಹೇಳಿತು...

ಎಲೆ ಬಿಸಿಲ ಕೊಳದಲ್ಲಿ,

ನಿಂತಿದ್ದ ಬೆಳಕ ತಿಳಿನೀರು/

ಚಲುವೆ ಧರೆಯ ಕುಡಿ ನೋಟಕೆ,

ಕಲಕಿ...ರಾಡಿಯೆದ್ದಿದೆ//

ಬೆಚ್ಚಗೆ ಮುದುಡಿ ಮಲಗಿದ್ದ ಭೂಮಿಗೆ/

ಬಾನು ಬಾಗಿ,

ಕಿವಿಯಲ್ಲಿ ಉಸುರಿದ ಗುಟ್ಟು....

ಈ ಮುಂಜಾವು//

09 May 2009

ಎದೆ ಗಾಯ...

ಒಲವಿನ ಅಗಾಧ ಸಾಗರದಲ್ಲಿ,
ನಾನು ತಹತಹಿಸುವ ಕಿರು ಮೀನು/
ನಿರೀಕ್ಷೆಯ ಉಪ್ಪು ನೀರು ತಾಗಿ...
ಉರಿವ ಎದೆಗಾದ ಗಾಯದ ನೋವ,
ನಿವಾರಿಸುವ ಕೃಪೆ ತೋರಬಾರದೆ ನೀನು//

08 May 2009

ಸುಮ್ಮನೆ ಒಂದಷ್ಟು ಹರಟೆ...

ಆತ್ಮೀಯರೇ

ನಾಳೆ ಅಂದರೆ ದಿ ೯/೦೫/೦೯ ರಂದು ದೂರದರ್ಶನದ ಕನ್ನಡ ವಾಹಿನಿ ಚಂದನದಲ್ಲಿ ನಾನು

ಸಾಹಿತಿ ನಾ ಡಿ'ಸೊಜರೊಂದಿಗೆ ನಡೆಸಿಕೊಟ್ಟ ಅರ್ಧಘಂಟೆ ಅವಧಿಯ ಸಂದರ್ಶನ ಪ್ರಸಾರವಾಗುತ್ತದೆ ಸಾಧ್ಯವಾದರೆ ವೀಕ್ಷಿಸಿ.

ಸಮಯ-ಭಾರತದಲ್ಲಿ: ಮಧ್ಯಾಹ್ನ ೨;೦೦ ಘಂಟೆಗೆ.

[ಮರುಪ್ರಸಾರ : ಡಿ ೧೦/೦೬/೦೯

ಆದಿತ್ಯವಾರ ರಾತ್ರಿ ೧೦:೦೦ ಘಂಟೆಗೆ]

ಸಂಯುಕ್ತ ರಾಷ್ಟ್ರಗಳಲ್ಲಿ; ನಡುರಾತ್ರಿ ೧:೩೦ಕ್ಕೆ ಪಶ್ಚಿಮ ತೀರ ಹಾಗು ನಡುರಾತ್ರಿ ೨:೩೦ಕ್ಕೆ ಪೂರ್ವ ತೀರ

[ಮರುಪ್ರಸಾರ: ದಿ ೧೦/೦೫/೦೯ ರಂದು ಬೆಳಿಗ್ಯೆ ೯:೩೦ಕ್ಕೆ ಪಶ್ಚಿಮತೀರ ಹಾಗು ಬೆಳಿಗ್ಯೆ ೧೦:೩೦ಕ್ಕೆ ಪೂರ್ವತೀರ]

-ನಿಮ್ಮವ -

ಶ್ರೀಹರ್ಷ ಹೆಗಡೆ

06 May 2009

ಅರಳಲಿ ಕನಸ ಹೂವು....

ಉರಿ ಮೊಗದಲಿ ನಗುವ ನೇಸರನೆ.....
ಪುಣ್ಯ ಸಿಕ್ಕೀತು,
ಮಾಡುತೀಯ ದಯವಿಟ್ಟು ನನಗೊಂದು ಉಪಕಾರ/
ಧರೆಯ ಇನ್ನೊಂದು ಅಂಚಿನಲ್ಲಿದೆ...
ನನ್ನೊಲವಿನ ಜೀವ,
ಅಲ್ಲೀಗ ಇರುಳು...
ಕಳೆದ ರಾತ್ರಿ ನಾ ಕಂಡ ಅಪೂರ್ಣ ಕನಸ ಆ ಮನಸಿಗೂ ದಾಟಿಸಿಬಿಡು......
ಅದಲ್ಲಿ ಮತ್ತೆ ಅರಳಲಿ//

ಅಭಿಲಾಷೆ...

ಮನಸೊಳಗೆ ಅದುಮಿಟ್ಟುಕೊಳ್ಳಲಾರೆ,
ಕನಸ ಆಕಾಶದ ವಿಸ್ತಾರ...
ನಿನಗೂ ತೋರಿಸುವ ಆಸೆಯಿದೆ/
ಹೇಳಲೇ ಬೇಕು...
ಎಂಬ ಹಂಬಲವಿದೆ ಎದೆಯೊಳಗೆ ಕಾವಿಗೆ ಕೂತ ಭಾವಗಳ ಬಿಡಿಸಿ,
ಮನಸಿಟ್ಟು ನೀನು ಕೇಳದೆ ಇದ್ದರೂನು!//

05 May 2009

ಹುಟ್ಟದೆ ಬೇಸರ?

ಗುಳಿ ಬಿದ್ದ ಕೆನ್ನೆ ಕಣಿವೆ...ಕಾಮನಬಿಲ್ಲು,

ಕಳೆದೆ ಹೋಗಿದೆ ಮನಸು ಅದರಲ್ಲೆಲ್ಲೋ/

ಹುಡುಕಿ ತರುವ ಹಠ ನನಗಂತೂ ಇಲ್ಲ,

ಅದಲ್ಲೇ ದಿಕ್ಕೆತು ಅಲೆಯಲಿ ...

ಎಂಬ ಆಸೆ ಅದಮ್ಯ ಹಂಬಲ//

ನಿತ್ಯ ಹುಟ್ಟಿ,

ಮತ್ತೆ ಕರಗಿ...

ಮರಳಿ ನಗುವ ನೇಸರ/

ಹಾಡಿದ ಅರುಣ ರಾಗವನ್ನೇ...

ಪದೇಪದೇ ಗುನುಗಲು,

ಹುಟ್ಟದೆ ನಿನಗೆ ಬೇಸರ?//

03 May 2009

ನಶೆಯ ಹನಿ..

ಅದೆಲ್ಲೋ ಅಡಗಿದ್ದ ಅಕ್ಷಾ೦ಕ್ಷೆ ಅರಳಿಸಿದ ನಿನ್ನ ಸಾಮಿಪ್ಯ,

ಕನವರಿಸುತ್ತಿದ್ದ ಕನಸುಗಳ ಕೆರಳಿಸಿದ ನಿನ್ನ ಸಾನಿಧ್ಯ/

ಹನಿ ಮಧುವನ್ನೂ ಮುಟ್ಟದ,

ನನ್ನನ್ನೂ ಚಿತ್ತಾಗಿಸಿ...ಉನ್ಮತ್ತನಾಗಿಸಿದೆ////

02 May 2009

ಪಡೆವೆನೆ?

ಜಾರಿ ಬೀಳಲೋ?

ಬೇಡವೋ ಎಂಬ ಬಿನ್ನಾಣ ಹೊತ್ತು,

ನೇಸರನ ಪ್ರಭೆಗೆ ಮಿಂಚಿ ಹೊಳೆವ ಇಬ್ಬನಿ ನತ್ತು/

ಇನ್ನೇನು ಕ್ಷಣದಲಿ...

ಕರಗಿ ಕಥೆಯಾಗಲಿದೆ//

ಸುತ್ತಿಬಳಸಿ ಹೇಳಲು ಬರೋಲ್ಲ,

ಸುಳ್ಳೇ ಹಾಡಿ ಹೊಗಳಲು ಕವಿಯೂ ನಾನಲ್ಲ/

ನನ್ನದೇನಿದ್ದರೂ....ನಿನ್ನೆದೆಯ ಗೆಲ್ಲೋ ಹಂಬಲ,

ನಿನ್ನೊಲವ ಪಡೆದೇ ತೀರುವ...ತ್ರಿವಿಕ್ರಮ ಛಲ//