31 December 2010

ಸಾಕು...

ಕಣ್ಣಿಗೆ ಯಾವ ಕಡಿವಾಣವೂ ಇಲ್ಲ.
ನೋಟಕೆ ತಡೆ ಹಾಕುವ ಕೋಟೆಯನ್ನು ಯಾರೂ ಕಟ್ಟಿಲ್ಲ/
ದೃಷ್ಠಿ ನಿನ್ನತ್ತ ಅದಾಗಿಯೆ ಅದು ನೆಟ್ಟು,
ನಿನ್ನಲ್ಲೆ ನೆಲೆಸಿದರೆ ಅದು ನನ್ನ ತಪ್ಪು ಹೇಗಾಗುತ್ತೆ?//

ಆದರೂ ಇದರಲ್ಲಿ ನನ್ನದೂ ಒಂಚೂರು ತಪ್ಪಿದೆ...
ನಿನ್ನ ಕನಸಿನ ಕೋಟೆಗೆ ಸೆರೆಯಾಗುವೆನೆಂಬ ಅರಿವಿದ್ದರೂ ನಾ ಲಗ್ಗೆ ಹಾಕಬಾರದಿತ್ತು/
ನಿನ್ನ ಒಲವ ತಿಳಿಗೊಳದಿಂದ ಹೊರ ಬಂದರೆ ಉಸಿರು ಸಿಗದೆ ಒದ್ದಾಡ ಬೇಕೆಂಬ ಅರಿವಿದ್ದರೂ ಸಹ,
ದೂರಮಾಡುವ ಗಾಳದ ಮೊನೆ ಕಚ್ಚಬಾರದಿತ್ತು//


ಸುತ್ತಲಿನ ಸೌಂದರ್ಯಕ್ಕೆ ಸೊಬಗು ಸಿಗೋದು ನೀ ನನ್ನ ಉಸಿರು ತಾಕುವಷ್ಟು ಹತ್ತಿರವಿದ್ದರೆ...
ಕಳೆದುಕೊಂಡರೂ ವಿಷಾದವೆನಿಸದೆ ವಿಚಿತ್ರ ಸಂಭ್ರಮವಾಗೋದು...
ನನಗೆ ಅರಿವಿಲ್ಲದಂತೆ ನೀ ನನ್ನ ಮನಸ ಕದ್ದರೆ/
ಟನ್ನಿನಷ್ಟು ಬೇಕಿಲ್ಲ.ಕ್ವಿಂಟಾಲ್ ನಷ್ಟನ್ನೂ ನಾ ಕೇಳ್ತಿಲ್ಲ...
ಕಿಲೋ ಸಹ ಬೇಡ...ಗ್ರಾಮ್ನಷ್ಟರ ಆಸೆಯೂ ಇಲ್ಲ,
...ಔನ್ಸ್ ಸಿಕ್ಕರೂ ಸಾಕು...
ಕೊಡುತೀಯ ಒಲವ? ಮೊಗೆದು ಮನಸ ಚಟಾಕು?!//

30 December 2010

ಭ್ರಮೆಯೂ ಇರಬಹುದೆ...?

ಅಮೂಲ್ಯವಾದದ್ದು ನಾನೇನಾದರೂ ಇಲ್ಲಿಯವರೆಗೆ ಗಳಿಸಿದ್ದೆ ಹೌದಾದರೆ,
ಅದು ಕೆಲಕಾಲವಾದರೂ ನನಗೆ ಸಿಕ್ಕ ನಿನ್ನ ಸಾಂಗತ್ಯ...
ನಿನ್ನ ಪ್ರೀತಿ ಎಂದು ಎದೆಯುಬ್ಬಿಸಿ ಹೇಳಬಲ್ಲೆ,
ಬರದಿದ್ದರೂ...
ಸಂತಸಗಳ ಹೊತ್ತು ತರದಿದ್ದರೂ ನಿನ್ನ ನೆನಪೆ ಸಾಕು...
ಅದೆ ನನ್ನ ಪಾಲಿಗೆ ಸಿರಿ...
ಅದರ ಕಾವಲಿಗೆ ಏನನ್ನಾದರೂ ಮಾಡಬಲ್ಲೆ ಎಲ್ಲಾ ಎಲ್ಲೆಯನೂ ಮೀರಿ/
ಸ್ಪಷ್ಟವಾಗಿ ಗೊತ್ತು ಮತ್ತೆ ನೀ ಮರಳಿ ಬರುವುದಿಲ್ಲ...
ನನ್ನ ಕಾಯುವಿಕೆಯಂತೂ ಸಂತಸದಲ್ಲಿ ಕೊನೆಗೊಳ್ಳುವುದಿಲ್ಲ,
ಹೀಗಿದ್ದರೂ ನನ್ನ ನಿರೀಕ್ಷೆಗೆ ಕೊನೆಯಿಲ್ಲ...
ಬದುಕಿನಲ್ಲದಿದ್ದರೂ ಸಾವಿನ ನಂತರವಾದರೂ...
ನಿನ್ನಾತ್ಮದಲ್ಲಿ ನಾನು ವಿಲೀನವಾಗುವುದರಲ್ಲಿ ಸಂಶಯವಿಲ್ಲ//


ಸುತ್ತಲಿನ ಸದ್ದಿಗೆಲ್ಲ ನಾ ಕಿವುಡ...
ನಿನ್ನ ಮುಖದ ನಸು ನಗುವ ಹೊರತು ಇನ್ನೆಲ್ಲದಕ್ಕೂ ಕುರುಡ....
ನಿನ್ನ ನಾಮ ಜಪದ ನೆಪವಿಲ್ಲದಿದ್ದರೆ ಪೂರ್ತಿ ಮೂಕ,
ಆದರೂ ಅದೇ ನನಗೆ ಪರಮ ಸುಖ..
ಇಂದಿಗೆ ನೀ ನನ್ನ ದೂರವಾಗಿಸಿ ಆ ದರಿದ್ರ ದೇಶ ಸೇರಿ ಹೋಗಿ ಒಂದು ಸಂವತ್ಸರ/
ಒಂದು ಮಾಸದ ಮೇಲೆರಡು ದಿನ ಕಳೆಯಿತು...
ಆದರೂ ನಿನ್ನ ಮೇಲು ಮೇಲಿಂದ ಹೀಗೆಳೆಯುವಂತೆ ನಟಿಸುತ್ತಲೇ....
ನನ್ನೊಳಗಿನ ಒಲವ ಭೂಮಿಯಲ್ಲಿ ಇನ್ನಷ್ಟು ಪ್ರೀತಿಯ ಬೀಜ ಮೊಳೆಯಿತು,
ಈ ಇಷ್ಟೂ ದಿನಗಳಲ್ಲಿ ಕಳೆದು ಕೊಂಡದ್ದಕ್ಕಿಂತ....
ಪಡೆದು ಕೊಂಡದ್ದೆ ಹೆಚ್ಚು ಅನ್ನುವುದು ನನ್ನ ಭಾವನೆ...
ಇದು ಭ್ರಮೆಯೂ ಇರಬಹುದು//

29 December 2010

ತೀರದ ತೃಷ್ಣಾ...

ಒಂಟಿತನದ ಶೂಲಕ್ಕೇರಿ...
ನಿರ್ಜೀವ ಭಾವಗಳ ಸಾಂಗತ್ಯದಲ್ಲಿ ಮೆರವಣಿಗೆ ಹೊರಟ ,
ನನ್ನೆಲ್ಲ ನೋವಿನ ಶಿಲುಬೆ ಹೊತ್ತ ನನ್ನ ಮನಸಿನ ಭಾರ ಇಳಿಸಲು ನೀ ಬಂದೇ ಬರುವೆ...
ಎಂಬ ಚೂರು ಆಸೆ ಇನ್ನೂ ಜೀವಂತವಾಗಿದೆ ಎದೆಯೊಳಗೆ/
ಮರೆತ ನೋವುಗಳನ್ನೆಲ್ಲಾ ಒಂದೊಮ್ಮೆ ನೀನೆ ಮರೆಯಾಗಿಸಿದ್ದೆ,
ಮರಳಿ ಮತ್ತದರಲ್ಲಿ ನಾ ಸೆರೆಯಾಗುವಂತೆ ಮಾಡಿದ್ದೂ ಕೂಡ...
ನೀನೆ ಎನ್ನುವುದು ಮಾತ್ರ ನನ್ನ ಬದುಕಿನ ಕ್ರೂರ ವ್ಯಂಗ್ಯ//

ಮುಗಿಯದ ಮೌನರಾಗದ ನಡುವೆ...
ಬಿಕ್ಕಳಿಕೆಯ ತಾಳ ಹಾಕುತ್ತ,
ರೋಧನೆಯ ನನ್ನ ಗಾಯನ ನಿರಂತರ ನಿನ್ನ ನೆನಪಿನಲ್ಲಿ ಜಾರಿಯಲ್ಲಿರುತ್ತದೆ/
ಹರಿವ ಯಾತನೆಯ ನದಿತೀರದಲ್ಲಿ ...
ನನ್ನದೂ ಒಂದು ನೋವಿನ ಧಾರೆ ಅದಕ್ಕೆ ಕೂಡಿಸುತ್ತ ಕೂತಿರುವ ನನ್ನ ವಿಹ್ವಲ ಚಿತ್ರ,
ನಿನ್ನ ಮನೆಗೋಡೆಯ ಮೇಲೆ ಆಲಂಕಾರಿಕ ಚಿತ್ರವಾಗಿ ತೂಗು ಹಾಕಿದ್ದೀಯಂತಲ್ಲ?...
ಇಷ್ಟೇಕೆ ನಿಷ್ಕರುಣೆ ನಿನಗೆ ನನ್ನಮೇಲೆ?//

ವಾಚಕರವಾಣಿಗೆ ನನ್ನ ಚೊಚ್ಚಲ ಪತ್ರ...!

ಮಾನ್ಯ ಸಂಪಾದಕರೆ...


ಇಂದಿನ ಪ್ರಜಾವಾಣಿಯ ಸಂಚಿಕೆಯಲ್ಲಿ (೨೮ ದಶಂಬರ ೨೦೧೦) " ಇಂಡಿಯಾ ಎನ್ನುವುದೆ ದಾಸ್ಯ"ಎಂಬ ಶಿರೋನಾಮೆಯಲ್ಲಿದ್ದ ವರದಿ ಪ್ರಕಟವಾಗಿದೆ.ಹಿರಿಯರೂ ಪ್ರಾಜ್ಞರೂ ಆದ ಡಾ ಚಿದಾನಂದಮೂರ್ತಿಗಳು ಮ್ಯಾನ್ಮಾರ್,ಶ್ರೀಲಂಕಗಳ ಮೇಲ್ಪಂಕ್ತಿ ಅನುಸರಿಸಿ ನಾವು ಅಂದರೆ ಭಾರತೀಯರೂ ವಸಾಹತುಶಾಹಿ ಕುರುಹಾದ 'ಇಂಡಿಯಾ'ವೆಂಬ ಹೆಸರಿನ ಕುರೂಪವನ್ನು ಹೋಗಲಾಡಿಸಿ 'ಭಾರತ'ವೆಂದು ದೇಶದ ಮರು ನಾಮಕರಣ ಮಾಡಿ ಸುರೂಪಗೊಳಿಸ ಬೇಕೆಂಬ ಆಶಯ ಮಂಡಿಸುತ್ತಾರೆ.ಅವರ ಈ ಆಗ್ರಹ ಅಪೇಕ್ಷಣೀಯವೆ ಆದರೂ ಈಗ ಅದರ ತುರ್ತು ಅಗತ್ಯ ಎಷ್ಟಿದೆ ಎಂಬುದು ಅವರೂ ಸೇರಿ ಎಲ್ಲರೂ ಯೋಚಿಸಬೇಕಾದ ಸಂಗತಿ.ಬಹುಸಂಖ್ಯಾತ ಉತ್ತರ ಭಾರತೀಯರು 'ಹಿಂದುಸ್ತಾನ್ 'ಎಂದು ಕರೆಯುವ ಈ ದೇಶ ಬಹಳ ಕಡಿಮೆ ಸಂಖ್ಯೆಯಲ್ಲಿರುವ ದಕ್ಷಿಣ ಭಾರತೀಯರಿಗಷ್ಟೇ "ಭಾರತ"ವಾಗುಳಿದಿದೆ ಎನ್ನುವುದು ಇಂದಿನ ವಾಸ್ತವ.ಜಾಯಮಾನ ಬದಲಾಗದೆ ಬರಿ ನಾಮವನ್ನಷ್ಟೆ ಬದಲು ಮಾಡುವ ತುರ್ತು ಸದ್ಯಕ್ಕಂತೂ ಇದೆ ಎಂದೆನಿಸುತ್ತಿಲ್ಲ.ಆದರೂ ಈ ಸಂಗತಿಯತ್ತ ಗಮನ ಸೆಳೆದ ಡಾ ಚಿದಾನಂದಮೂರ್ತಿಗಳ ಕಳಕಳಿ ಗಿಟ್ಟಿಸುವ ಮೆಚ್ಚುಗೆ ಮುಂದೆ ಅವರೇ ಆಡಿದ ಧರ್ಮಾಂಧ ಹೇಳಿಕೆಯಿಂದ ಮೌಲ್ಯ ಕಳೆದು ಕೊಂಡು ಗಟಾರ ಸೇರಿ ಹೋಗಿದೆ!


"ಅಲ್ಪ ಸಂಖಾಯತರ ಸಮುದಾಯದ ಹಬ್ಬಗಳನ್ನು ರಾಷ್ಟ್ರೀಯ ಹಬ್ಬ ಎಂಬಂತೆ ಆಚರಣೆ ಮಾಡುವುದು ಸರಿಯಲ್ಲ.ಭಾನುವಾರವೆ ವಾರದರಜೆ ನೀಡಬೇಕೆಂಬ ನಿಯಮ ಕೂಡ ಬದಲಾಗಬೇಕು" ಎಂದು ಅವರು ಮಾತು ಮುಂದುವರಿಸಿದರು ಎಂದು ವರದಿಯಾಗಿದೆ.ಜಾತ್ಯತೀತ ನಿಲುವಿನ ನಮ್ಮ ರಾಷ್ಟ್ರೀಯ ನೀತಿಯ ಮೆರಗು ಹೆಚ್ಚಿಸುವ ಅಲ್ಪಸಂಖ್ಯಾತ ಸಮುದಾಯಗಳ ಹಬ್ಬಗಳ ರಾಷ್ಟ್ರೀಯ ಆಚರಣೆ ಚಿದಾನಂದಮೂರ್ತಿಗಳ ಕಣ್ಣಿಗೆ ದುರಾಚಾರದಂತೆ ಕಾಣಲು ಅದೇನು ಪಾಪ ಮಾಡಿತ್ತು? ಅಲ್ಲದೆ ಸಿಖ್,ಬೌದ್ಧ ಧಮ್ಮ,ಜೈನ ಧರ್ಮಗಳಂತಹ ವೈದಿಕತೆಯ ಉಪಕವಲುಗಳಿಗಿಂತ ಇಸ್ಲಾಂ ಹಾಗು ಕ್ರೈಸ್ತ ರೂಪಿ ಪಶ್ಚಿಮದ ಧರ್ಮಗಳೆ ಅವರ ಮನಶಾಂತಿಗೆ ಕೊಳ್ಳಿಯಿಟ್ಟಿರುವುದು ಅವರ ಈ ಅಸಹನೆಪೂರಿತ ಹೇಳಿಕೆ ಮುಖಕ್ಕೆ ರಾಚಿದಂತೆ ಸ್ಪಷ್ಟಪಡಿಸಿದೆ.ಈ ಬಗೆಯ ಅಕಾರಣ ದ್ವೇಷದ ನಿಲುವು ಅವರ ವಯಸ್ಸಿಗೆ ಹಾಗು ಘನತೆಗೆ ಶೋಭಿಸುವುದಿಲ್ಲ.ಇನ್ನಾದರೂ ವಸ್ತುಸ್ಥಿತಿಯ ಉದಾತ್ತತೆ ಒಪ್ಪಿಕೊಂಡು ಇರಲಾಗದಿದ್ದಲ್ಲಿ ಕನಿಷ್ಠ ತಮ್ಮ ಹರಕು ಬಾಯಿಗೆ ಬೀಗ ಜಡಿದುಕೊಂಡಾದರೂ ಅವರು ಮಾನ ಉಳಿಸಿಕೊಳ್ಳುವುದು ಲೇಸು,ತುಂಬಿದ ಕೊಡ ಯಾವಾಗಲೂ ತುಳುಕ ಬಾರದು!

ಇನ್ನು ಭಾನುವಾರ ವಾರದ ರಜೆಯಾಗಿರುವ ಕುರಿತು.ಶುಕ್ರವಾರದಂದೆ ಜುಮ್ಮಾದ ಹೆಸರಿನಲ್ಲಿ ವಾರದ ರಜೆ ಕಡ್ಡಾಯಗೊಳಿಸಿರುವ ಕಟ್ಟರ್ ಇಸ್ಲಾಮಿ ರಾಷ್ಟ್ರಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ರಾಷ್ಟ್ರಗಳಲ್ಲೂ ಭಾನುವಾರದ ರಜಾ ಪದ್ದತಿಯೆ ಚಾಲ್ತಿಯಲ್ಲಿದೆ.ಇದು ಕ್ರೈಸ್ತ ನಂಬಿಕೆಗಳ ಅನುಸಾರ ರೂಪಿತವಾಗಿರುವ ಬಗ್ಗೆ ಏನೂ ಸಂಶಯವಿಲ್ಲವಾದರೂ ಈ ಬಗೆಗಿನ ಚರ್ಚೆಯೆ ಇದೀಗ ಅಪ್ರಸ್ತುತ.ಅಲ್ಲದೆ ಈ ವಾರಾಂತ್ಯದ ರಜಾ ಪದ್ದತಿಯಲ್ಲಿ ಹುಳುಕೇನೂ ಇಲ್ಲ.ಕೇವಲ ಗೊಡ್ಡು ಧಾರ್ಮಿಕತೆಯ ಚುಂಗು ಹಿಡಿದು ಹುಣ್ಣಿಮೆ,ಅಮಾವಾಸ್ಯೆ,ಏಕಾದಶಿಗಳಂದು ಸಾರ್ವತ್ರಿಕ ರಜೆ ಸಾರುವುದು ಎಷ್ಟು ಕಾರ್ಯಸಾಧುವಲ್ಲವೋ,ಅಷ್ಟೆ ಹಾಸ್ಯಾಸ್ಪದವೂ ಹೌದು.ಇಂತಹ ಚಿಲ್ಲರೆ ಸಲಹೆ ಸೂಚನೆ ಕೊಡುವುದನ್ನು ಬಿಟ್ಟು ಡಾ ಚಿದಾನಂದಮೂರ್ತಿಗಳು ನಿಜವಾದ 'ನಾಡೋಜ'ರಾಗೋದು ಯಾವಾಗ?

28 December 2010

ತೀರದ ನಿರೀಕ್ಷೆ...

ಜೊತೆಜೊತೆಯಲೆ ಅಲೆವ ಅಲೆಗಳಿಗೂ ಸುಳಿವು ಕೊಡದಂತೆ ಮರೆಯಾಗುತ್ತೇನೆ,
ಸಂಗಡವೆ ಅದುರುವ ಎಲೆಗಳಿಗೂ ಚೂರೂ ಸುದ್ದಿ ಸಿಗದಂತೆ ಜಾರಿ ಹೋಗುತ್ತೇನೆ/
ನೀನೆ ಮನದಾಳದಿಂದ ಬಯಸಿದಂತೆ...
ನಿನ್ನಿಂದ ದೂರವಾಗಿದ್ದು....ಮಣ್ಣಲ್ಲಿ ಮಣ್ಣಾಗಿ ಕರಗುತ್ತೇನೆ,
ನಿನ್ನ ನೆನಪುಗಳೊಂದೆ ನನಗೆ ಶಾಶ್ವತ.....
ಕಡೆಯುಸಿರು ಕಳೆದ ನಂತರವೂ ನನ್ನೊಂದಿಗೆ ಅದೊಂದೆ ಇರೋದು ನಿಶ್ಚಿತ//

ಬಲಿಯುತ್ತದೆ...ನಲಿಯುತ್ತದೆ,
ಮತ್ತೆ ನಗುವರಳಿಸುತ್ತ ಒಲಿಯುತ್ತದೆ ಈ ಹೆಪ್ಪುಗಟ್ಟಿದ ಬಾಳು....
ಒಂದೊಮ್ಮೆ ನೀ ಮರಳಿ ಬಂದರೆ/
ಹೃದಯದ ಕೊನೆಯಲ್ಲೊಂದು...
ಆಸೆಯ ಮೊನೆಯಾಗಿ ಚುಚ್ಚುತ್ತಲೆ...
ಸಂತಸದ ನೆತ್ತರ ಬಿಸಿಬುಗ್ಗೆ ಚಿಮ್ಮಿಸುತ್ತದೆ,
ಎಂದಾದರೊಮ್ಮೆ..
ಮರೆತಾದರೂ ನೀ ಮರಳಿ ಬಂದು ಮನದೊಳಗೆ ನಿಂತರೆ//

ಭಯವಿದೆ...

ಬಲಿಯುತ್ತಿರುವ ರಾತ್ರಿಯಲ್ಲಿ ಗರ್ಭಪಾತವಾದ...
ನನ್ನ ಕನಸಿನ ಪಿಂಡದ ಮುಖ,
ನಿನ್ನ ಸುಂದರ ನೆನಪುಗಳನ್ನೆ ಹೋಲುತ್ತಿದ್ದುದು ಕೇವಲ ಆಕಸ್ಮಿಕವಾಗಿರಲಿಕ್ಕಿಲ್ಲ/
ನಿನ್ನ ನಸುನಗೆಯ ಶೂಲಕ್ಕೆ ನನ್ನ ಏರಿಸಿದಂತೆ,
ತುಸು ಮುಂಜಾನೆ ಬಿದ್ದ ಮರು ಸ್ವಪ್ನವೂ ಕೂಡ ಬಹುಷಃ ಸುಳ್ಳಾಗಲಿಕ್ಕಿಲ್ಲ//

27 December 2010

ಕನಸು ಬಾಡದಿರಲಿ...

ಬಾಳಿನ ರೀಲು ಮತ್ತೆ ಹಿಂದೋಡುವಂತಿದ್ದರೆ,
ಮತ್ತೆ ನಿನ್ನ ಮುಗುಳ್ನಗುವಿನ ಪರಿಚಯ ಹೊಸತಾಗಿ ಆಗುತ್ತಿತ್ತು/
ಮರಳಿ ನೀ ನನ್ನ ಬಾಳಲಿ ಬರುತ್ತಿದ್ದೆ,
ನಿನ್ನೊಳಗೆ ನಾನು ನೂರು ಭರವಸೆಗಳನ್ನ ಹುಟ್ಟಿಸುತ್ತಿದ್ದೆ//

ನನ್ನೆಲ್ಲ ಕನಸುಗಳ ಮನೆಗೆ ಹಸಿರು ತೋರಣ ಕಟ್ಟಿ,
ಅಲ್ಲಿ ಕತ್ತಲು ಸುಳಿಯದಂತೆ ನಿನ್ನ ಹೊಳೆವ ಕಂಗಳ ದೀಪವ ನೀ ಹಚ್ಚುತ್ತಿದ್ದೆ...
ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವ?/
ಬಹುಷಃ ಅಂತೆಯೆ ಆದರೆ ಇವೇ ಸವಕಲು ಪದಗಳ ಬಳಸಿ...
ಮನದ ತುಮುಲಗಳನ್ನೆಲ್ಲ ತಿಳಿಸಿ.
ಮತ್ತೆ ನಿನ್ನ ಕೈಸೆರೆಯಾಗುವ ಸುಖದ ಕಲ್ಪನೆಯಲ್ಲಿ ರೋಮಾಂಚಿತನಾಗುತ್ತೇನೆ//

26 December 2010

ಹೇಳುತ್ತೀಯ?

ತುಟಿಯ ತುದಿಯಲಿ ಹುಟ್ಟಿದ ಮಾತು ತುಟಿಯೊಳಗೆ ಸಾಯಲಿ,
ಸದಾ ಒದ್ದೆಯಾಗಿಯೆ ಇರುವ ಕಣ್ಣಾಲಿಗಳು....
ಎಂದಾದರೊಮ್ಮೆ ಬಂದು ಅದನೊರೆಸುವ ಕೈಗಳಿಗಾಗಿ ಕಾಯಲಿ/
ನಿನ್ನ ನನ್ನ ನಡುವಿನ ಬಂಧವ ಬಾಯ್ಬಿಟ್ಟು ಎಲ್ಲರಿಗೂ ಹೇಳಬೇಕ?
ನಿನ್ನ ಮನಸಲ್ಲಿ ಬಂದು ನೆಲೆಯೂರಲು ನಾನು ಇನ್ಯಾರದೋ ಅನುಮತಿ ಕೇಳಬೇಕ?//

ನೀನೆಷ್ಟೆ ಹೇಳಿದರೂ...ಒಂದು ವೇಳೆ ನಾನದರ ಕೇಳಿದರೂ,
ಮನಸಿಗೆ ನಿನ್ನ ನೆನಪ ಅಳಿಸಿ ಹಾಕುವ ಕೆಲಸ ಸುಲಭವಲ್ಲ/
ನನ್ನ ಉಸಿರಿಂದ ನಿನ್ನಳಿಸಲೆ,
ಜೊತೆಯಾದ ಹೆಸರಿಂದ ನಿನ್ನನಳಿಸಲೆ?//

ತೊಯುತ್ತೇನೆ ನೋಯುತ್ತೇನೆ...!

ನಾನೇನೂ ವಿಶೇಷ ತಯಾರಿಯಿಂದ ಇಲ್ಲಿಗೆ ಬಂದು,
ಬರಕೊಂಡು ತಂದದ್ದನ್ನ ಇಲ್ಲಿ ಛಾಪಿಸುತ್ತ ಕೂರೋದಿಲ್ಲ....
ನಿನ್ನೊಂದಿಗೆ ಸಂಪರ್ಕ ಸೇತುವಾಗಿರುವ ಈ ನಿರ್ಜೀವ ಪರದೆಯ ಮುಂದೆ,
ಕ್ಷಣ ನಿನ್ನ ನೆನಪಿನಲ್ಲಿ ಧ್ಯಾನಸ್ಥನಾಗುತ್ತೇನೆ ಅಷ್ಟೆ...
ಮುಂದಿನದೆಲ್ಲ ಅದರಷ್ಟಕ್ಕೆ ಅದೇ ಆಗುತ್ತದೆ...ನನ್ನ ನಿಯಂತ್ರಣ ಮೀರಿ//


ನಗುವಿಗೆ ಸಂಚಕಾರ ತಂದಿದ್ದರೂ,
ನನ್ನದೆಯ ತಂಪನೆಲ್ಲ ಕುದಿ ಆವಿಯಾಗಿಸಿ/
ಕಣ್ಣೀರ ರೂಪದಲ್ಲಿ ಹೊರ ಚಲ್ಲಿದರೂ,
ನನಗ್ಯಾಕೋ ನಿನ್ನ ನೆನಪೆಂದರೆ ತುಂಬಾ ಇಷ್ಟ//

25 December 2010

ಬೋಳು ಬಾಳು..

ನೀನಿಲ್ಲದ ಕ್ಷಣಗಳ ಚಿತ್ರಣವನ್ನ ನಿನಗೂ ತೋರಿಸಬೇಕು,
ಒಂಟಿಯಾಗಿ ನಾ ಸಹಿಸಿದ ನೋವು ನಲಿವುಗಳನ್ನೆಲ್ಲ...
ನಿನ್ನೊಂದಿಗೆ ಹಂಚಿಕೊಳ್ಳಬೇಕೆಂದು ಅನಿಸಿದಾಗಲೆಲ್ಲ/
ಆತ್ಮಗತ ದಿನಚರಿಯಲ್ಲಿ ಅವನ್ನೆಲ್ಲ ದಾಖಲಿಸುತ್ತೇನೆ,
ಮುಂದೆಂದಾದರೂ ನೀನದನ್ನೋದಲಿ ಎಂಬಾಸೆ//

ಹಿಂದಿಗಿಂತಲೂ ನಾನೀಗ ತುಸು ಕುಗ್ಗಿದ್ದೇನೆ,
ಮಾನಸಿಕವಾಗಿ ಮುದುಡಿ ಬಾಡಿದ್ದೇನೆ/
ನೀನಿಲ್ಲದ ಚಿಂತೆಯ ಚಿತೆಯಲ್ಲಿ,
ಬೆಂದು ಬಳಲಿ ಬೆಂಡಾಗಿದ್ದೇನೆ//

ಅಲ್ಲವ?...

ಅಕಾಲದಲ್ಲಿ ಅದೇಕೊ ನನಗೆ ಮಳೆಯ ಹಂಬಲ,
ಮುಗಿಲ ಹನಿಗಳನ್ನು ಒಡಲಿಗಿಳಿಸಿಕೊಳ್ಳುವ ಇಳೆಯ ಹಂಬಲ/
ನಿನ್ನ ನಿರೀಕ್ಷೆಯೂ ನನ್ನ ಪಾಲಿಗೆ ಒಂಥರಾ ಹಾಗೇನೆ...
ಒಮ್ಮೆ ಒಟ್ಟು ಸೇರಿದ ಬಣ್ಣಗಳು ಮತ್ತೆ ಬೇರೆಯಾಗಲಾರವು ಅಲ್ಲವ?
ನಿನ್ನ ಆತ್ಮದ ಜೊತೆ ಸೇರಿ ಹೋದ ನನ್ನ ಉಸುರಿನದ್ದೂ ಕೂಡ ಇದೇ ಸ್ಥಿತಿ//

ಮುಗಿಲಿಗೂ ನೆಲಕ್ಕೂ ನಡುವೆ ಏನಿದೆ ಅನುಬಂಧ?,
ನೇಸರನಿಗೂ ಚಂದಿರನಿಗೂ ಮಧ್ಯೆ ಇರುವುದ್ಯಾವ ಬಂಧ?/
ವಿವರಿಸಲಿ ಹೇಗೆ ನನ್ನ ನಿನ್ನ ನಡುವಿನ ಸಂಬಂಧ?...
ಅದು ಹೀಗೆ ಇರಲಿ ಬಿಡು,
ಅದು ಹೀಗಿದ್ದರೇನೆ ಚಂದ//

24 December 2010

ನಿನ್ನ ಪರಿಮಳ...

ನೆನ್ನೆ ಬಸ್ಸಿನಲ್ಲಿ ಘಮ್ಮೆಂದು ಎದ್ದು ಬಂದ ಚಂಡೂ ಹೂವಿನ ಪರಿಮಳ,
ಬಾಲ್ಯದ ನೆನಪುಗಳನ್ನೆಲ್ಲ ಉದ್ರೇಕಗೊಳಿಸಿದವು/
ಆಗಾಗ್ಗ ನಿನ್ನ ಜೊತೆಯ ನೆನಪು ಮರುಕಳಿಸಿದಾಗ,
ಉಲ್ಲಸಿತನಾಗುತ್ತೆನಲ್ಲ ಹಾಗಾಗಿತ್ತು...
ಮೊದಲ ಮಳೆಗೆ ಮಣ್ಣವಾಸನೆ ಕೊಡುತ್ತದಲ್ಲ ಮುದ ಹಾಗೆ//


ನನ್ನ ಕೆನ್ನೆಗೆ ನಿನ್ನ ತುಟಿ ಸೋಕುವಾಗ ತುಂಬು ಪ್ರೀತಿಯೊಂದಿಗೆ...
ತುಳುಕಿದ ಎಂಜಲೂ ತಾಕದಿದ್ದರೆ ಅದೆಂತ ಚುಂಬನ?,
ನೀ ನನ್ನ ಬಿಗಿಯಾಗಿ ತಬ್ಬಿ ಗಲ್ಲ ಕಚ್ಚಿ...
ಅಲ್ಲಿ ನಿನ್ನ ಹಲ್ಲ ಗುರುತನಿಳಿಸದ ಮೇಲೆ ಅದಿನ್ನೆಂತ ಆಲಿಂಗನ?!/
ಮೊತ್ತ ಮೊದಲ ಬಾರಿ ನೀ ನನ್ನ ಮೈತುಂಬ ಮುತ್ತಿಟ್ಟಾಗ...
ಅದರ ಮುಂದಿನೆರಡು ದಿನ ನಾ ಮಿಂದಿರಲಿಲ್ಲ!,
ನನ್ನ ಮೈಗಂಟಿದ ನಿನ್ನ ಪರಿಮಳ ಅಳಿಸಿ ಹೋದೀತೆಂಬ ಭಯದಿಂದ...
ಆದಿನಗಳಲ್ಲಿ ಬಿಟ್ಟೂ ಬಿಡದೆ ಭೋರಿಟ್ಟು ಸುರಿಯುತ್ತಿದ್ದ ಮಳೆಯಲ್ಲಿ...
ಅಪ್ಪಿತಪ್ಪಿಯೂ ನೆಂದಿರಲಿಲ್ಲ//

ಏಕಾಂತ...

ಚುಮು ಚುಮು ಚಳಿಯಲಿ,
ಚೂರೆ ಚೂರು ಅದ್ದಿ ತೆಗೆದ ಚಂದದ ಸಂಜೆ/
ನನ್ನ ಒಳ ಮನಸ್ಸಿನಂತೆಯೆ ಖಾಲಿ ಖಾಲಿಯಾಗಿರುವ ಕಡುನೀಲಿ ಬಸ್ಸಿನಲ್ಲಿ...
ಗುರಿಯಿಲ್ಲದ ಪಯಣ,
ಮನಸ್ಸೊಂದು ವಿಕಟ ಮರ್ಕಟ//

23 December 2010

ಆದಿಕವಿ ಪಂಪ -ಹಾದಿಕವಿ ಚಂಪಾ

ಅರಿವುಗೇಡಿಯೊಬ್ಬನ ಐಲು-ಪೈಲು...

ಸದುದ್ದೇಶದಿಂದ ಕೂಡಿದ ಸಂಗತಿಯೊಂದು ಕುಹಕಿಯೊಬ್ಬನ ಕೈಚಳಕಕ್ಕೆ ಬಲಿಯಾಗಿ ಗಟಾರ ಸೇರುವುದನ್ನು ಆಗಾಗ ಕೇಳಿ ಅರಿಯುತ್ತಿದ್ದೆ.ಆದರೆ "ವಿಜಯ ಕರ್ನಾಟಕ"ದಂತಹ ಜನಮೆಚ್ಚಿದ ಉತ್ಕೃಷ್ಟ ದಿನಪತ್ರಿಕೆಯ ಸದಾಲೋಚನೆಯೊಂದನ್ನು ಹಳ್ಳ ಹಿಡಿಸಿದ ಘನಂದಾರಿ ಸಾಹಿತಿ ಚಂದ್ರಶೇಖರ ಪಾಟೀಲರ ವರಸೆಯಿಂದ ಅದರ ಖುದ್ದು ಅನುಭವವೂ ಆದಂತಾಯಿತು.ನವಂಬರ್ ಕನ್ನಡಿಗರ ತೀರದ ಹಾವಳಿಯೇ ಎಲ್ಲೆಲ್ಲೂ ವ್ಯಾಪಿಸಿರುವ ಈ ಕಾಲದಲ್ಲಿ (ಮಾನ್ಯ ಪಾಟೀಲರ ಮಟ್ಟವೂ ಅಷ್ಟೆ ಎಂದು ವಿಷಾದದಿಂದಲೇ ಹೇಳಬೇಕಿದೆ!) ನಮ್ಮ ನಿತ್ಯ ಬದುಕಿನಲ್ಲಿ ನಮಗರಿವಿಲ್ಲದೆ ನಾವು ಬಳಸುತ್ತಾ ನಮ್ಮೊಳಗೆ ಹಾಸು ಹೊಕ್ಕಾಗಿರುವ ಅನೇಕ ಪರಭಾಷಿಕ ಪದಗಳಿಗೆ ಕಸ್ತೂರಿ ಕನ್ನಡದಲ್ಲಿಯೆ ಬಳಕೆ ಕಡಿಮೆಯಾಗಿ ತೆರೆಮರೆ ಸರಿದಿರುವ ಅನೇಕ ಸಂವಾದಿಗಳನ್ನು ಹುಡುಕಿಸಿ ಬಳಕೆಗೆ ತರುವ ವಿನೂತನ ಪ್ರಯೋಗವಾಗಿತ್ತು "ವಿಜಯ ಕರ್ನಾಟಕ" ಆರಂಭಿಸಿದ್ದ 'ಪದಕಟ್ಟಿ'.


ಮಾತೃ ಭಾಷೆಯ ಬಗ್ಗೆ ಇದ್ದ ಅಪರಿಮಿತ ಅಭಿಮಾನ,ಅನಗತ್ಯವಾಗಿ ಹರಡಿರುವ ಪರಭಾಷಾ ಹಾವಳಿಯ ಬಗ್ಗೆ ನನ್ನೊಳಗೆ ಹುದುಗಿದ್ದ ಸುಪ್ತ ಅಸಹನೆ,ನವ ಸರಂಜಾಮು ಅಥವಾ ನಾಗರೀಕ ಸೇವೆಗಳಿಗೆ ಸೂಚಿಸುವ ಪದಗಳು ಪರ್ಯಾಯವಾಗಿ ಚಾಲ್ತಿಗೆ ಬರಲಿ ಎಂಬ ಒಳ ಆಸೆ ಇವೆಲ್ಲವೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ನನ್ನನ್ನು ಪ್ರಚೋದಿಸಿದವು,ಅಲ್ಲದೆ ಕಳೆದ ೨೦೦೨ಅಲ್ಲಿ ನಾನು ಹಾಗು ನನ್ನ ಆತ್ಮಸಖ ರುದ್ರಪ್ರಸಾದ ಶಿರಂಗಾಲ ಮೊದಲಿಗೆ ನಾವು ಮಾಡಿಸಿದ್ದ ನಮ್ಮ ಸ್ವ-ವಿಳಾಸ ಬಿಲ್ಲೆ (ವಿಸಿಟಿಂಗ್ ಕಾರ್ಡ್) ಯಲ್ಲಿ landlineಗೆ 'ಸ್ಥಿರ'ವೆಂತಲೂ,mobileಗೆ 'ಸ್ಥಾಯಿ' ಅಂತಲೂ emailಗೆ 'ಮಿಂಚಂಚೆ'ಯಂತಲೂ ಛಾಪಿಸಿಕೊಂಡು ಆ ಮೂರು ಪರ್ಯಾಯ ಪದಗಳನ್ನ ಅಧಿಕೃತವಾಗಿ ಚಾಲ್ತಿಗೆ ತಂದಿದ್ದೆವು.ಇಂದು ಅದರ ಮೂಲ ಅರಿಯದವರೂ ಅವನ್ನು ವ್ಯಾಪಕವಾಗಿ ಬಳಸುತ್ತಿರುವುದು ನಮ್ಮಿಬ್ಬರಿಗೂ ಅತೀವ ಸಂತಸದ ಹಾಗು ಹೆಮ್ಮೆಯ ವಿಚಾರ.ಈ ಹಿನ್ನೆಲೆಯಲ್ಲಿ ಆಸ್ಥೆವಹಿಸಿ 'ಪದಕಟ್ಟಿ'ಯಲ್ಲಿ ಭಾಗವಹಿಸಿದ್ದೆ.ಇಲ್ಲಿ ಬಹುಮಾನದ ಅಮಿಷಕ್ಕಿಂತಲೂ ಭಾಷೆ ಬೆಳೆಯಲಿ ಎಂಬ ಪ್ರಾಮಾಣಿಕ ಕಾಳಜಿಯಷ್ಟೇ ಇತ್ತು.


ಅದೃಷ್ಟಕ್ಕೆ ಕಳೆದ ಮಾಸಾರಂಭದಲ್ಲಿ ಪ್ರಕಟಿತ ಫಲಿತಾಂಶಗಳಲ್ಲಿ ನಾನು ಸೂಚಿಸಿದ್ದ ಪದಗಳು ಮೊದಲಸುತ್ತಿನಲ್ಲಿ ಜಯಿಸಿ ಆಯ್ಕೆ ಸುತ್ತಿಗೆ ಸೇರಿದ್ದು ಕಂಡು ಉಲ್ಲಸಿತನೂ ಆಗಿದ್ದೆ.ಮೊನ್ನೆ ಸೋಮವಾರ ಅಂದರೆ ೨೦ ದಶಂಬರ ೨೦೧೦ ರಂದು ವಿಪಿಎಲ್ ಬಳಗದ ಕಡೆಯಿಂದ ಬಂದ ದೂರವಾಣಿಕರೆ ವಿಜೇತರಲ್ಲಿ ನಾನೂ ಒಬ್ಬನೆಂದು ತಿಳಿಸಿದಾಗ ಸಹಜವಾಗಿ ಸಂತಸಗೊಂಡೆ.ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ತೀರ್ಪುಗಾರರಾದ ಮಾನ್ಯ ಚಂದ್ರಶೇಖರ ಪಾಟೀಲರು ಅನುಸರಿಸಿದ ಮಾನದಂಡಗಳನ್ನು ಬುಧವಾರ ಹಾಗು ಗುರುವಾರ ಅನುಕ್ರಮವಾಗಿ 'ಲವಲvk'ಯಲ್ಲಿ ಓದುತ್ತಿದ್ದಂತೆ ಆ ಸಂತಸದ ಬಲೂನಿಗೆ ಮುಳ್ಳು ಸೋಕಿಸಿದಂತಾಗಿ ಈಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪಶ್ಚಾತಾಪ ಪಡುತ್ತಿದ್ದೇನೆ.ಘನ ವಿದ್ವಾಂಸ ಪಾಟೀಲರ ಘನತೆಗೆ (ಯೋಗ್ಯತೆಗೆ!) ತಕ್ಕಂತೆ ಪರನಿಂದೆಗಳು,ವಿಷಯ ವ್ಯಾಪ್ತಿ ಹೊರತಾದ ವಸ್ತುನಿಷ್ಟತೆಯಿಲ್ಲದ ಸವಕಲು ಅಳತೆಗೋಲುಗಳು ಅಲ್ಲಿ ಕಂಡು ಕಂಗಾಲಾಗಿ ಕಡೆಗೆ ನನಗೆ ನಾನು ಇಷ್ಟನ್ನು ಮಾತ್ರ ಹೇಳಿಕೊಂಡೆ "ಒಂದುವೇಳೆ ಚಂದ್ರಶೇಖರ ಪಾಟೀಲರಂತಹ 'ವೃತ್ತಿ'ಕನ್ನಡ 'ಓ'ರಾಟಗಾರ ಈ ಸ್ಪರ್ಧೆಗೆ ತೀರ್ಪುಗಾರರಾಗಿರೋದು ಮೊದಲೆ ಅರಿವಿದ್ದಿದ್ದರೆ ಖಂಡಿತಕ್ಕೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ!" ಈಗಲೂ ಅಷ್ಟೆ ನಾನು ಸ್ಪರ್ಧೆಯಿಂದ ಹಿಂತೆಗೆದು ಕೊಳ್ಳುತ್ತಿದ್ದೇನೆ.ಹಾಗು ನೀವು ಬೆನ್ನುತಟ್ಟಿ ಕೊಡಮಾಡಿರುವ ಬಹುಮಾನವನ್ನ ನಮ್ರತೆಯಿಂದ ಹಿಂದಿರುಗಿಸ ಬಯಸುತ್ತೇನೆ.

ಈ ನಿರ್ಧಾರದ ಕಾರಣಗಳನ್ನು ಸಾದರ ಪಡಿಸಲು ಇಚ್ಛಿಸುತ್ತೇನೆ.ಮೊದಲನೆಯದಾಗಿ ಇದು ಕನ್ನಡ ಕಟ್ಟುವ ಕೆಲಸ ,ಆದರೆ ಅದರ ಮೂಲಭೂತ ಆಶಯಕ್ಕೆ ಪಾಟೀಲರು ಮಸಿ ಬಳಿದಿದ್ದಾರೆ.ಅವರ ತೀರ್ಪಿನ ಪ್ರಕಾರ 'ಲಿಫ್ಟು' 'ಬಸ್ಸು' 'ಕ್ರಿಕೆಟ್ಟು' 'ಬ್ಯಾಂಕು' 'ಫ್ಯಾಷನ್ನು' 'ಸೈಕಲ್ಲು' 'ಹ್ಯಾಂಡ್ಸ್ ಫ್ರೀ' 'ಬ್ಲಾಕ್ ಮೇಲ್' 'ಪ್ಲಾಸ್ಟಿಕ್' 'ಕಾಫಿ 'ಗ್ಯಾರೇಜ್' 'ರಾಕೆಟ್' 'ಸ್ಟೆತಾಸ್ಕೋಪ್' 'ಟರ್ನ್ ಕಿ' 'ಫೋಟೋಜೆನಿಕ್' 'ಫ್ಯಾಕ್ಸು' 'ಶೂ' 'ಬಲ್ಬು' ಇವೆಲ್ಲ ಇರಬೇಕಂತೆ! "ಸ್ವಾಮಿ ಪಾಟೀಲರೆ! ಇದಕ್ಕೆ ಪರ್ಯಾಯ ಸೂಚಿತವಾದವುಗಳನ್ನ ನೋಡಿ ಹೆಚ್ಚು ಸೂಕ್ತವಾದುದನ್ನು ಆಯ್ಕೆ ಮಾಡುವುದು ನಿಮ್ಮ ಹೊಣೆಯಾಗಿತ್ತೆ ಹೊರತು ನಿಮ್ಮ ಸ್ವ-ಅಭಿಪ್ರಾಯದ 'ಫಾತ್ವಾ'ವನ್ನ ಸ್ಪರ್ಧಾರ್ಥಿಗಳ ಮೇಲೆ ಹೇರೋದಲ್ಲ."ಆ ಸಾಹಿತಿ 'ವಿಧಾನಸೌಧಕ್ಕೆ' ಸೈಕಲ್ ಹೊಡೆದ!" ಎಂಬ ನಿಮ್ಮದೇ ವ್ಯಂಗ್ಯ ಧಾಟಿಯ ಉದಾಹಾರಣೆ ಬೇರೆ ಕೊಡ್ತೀರ! ನಿಮ್ಮ ವಯಸ್ಸಿಗೆ ( ವಯಸ್ಸಿಗೆ ಮಾತ್ರ!) ಕೊಡುತ್ತಿದ್ದ ಈವರೆಗಿನ ಮರ್ಯಾದೆಯನ್ನೂ ಮರೆತು ಹೇಳಬೇಕೆಂದಿದ್ದರೆ 'ಅದು ನಿಮ್ಮ ಸ್ವ-ಅನುಭವದ ಸ್ವಗತವ?'. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ದ್ವಿತಿಯ ಅವಧಿಗಾಗಿ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಗಾದಿಗಾಗಿ ನೀವು ಹೊಡೆದ ನಿಮ್ಮದೆ 'ಸೈಕಲ್ಲು' ಹಾಗು ಪರಿಷತ್ತಿನ ಚುನಾವಣೆಗಳಲ್ಲಿ ಅಧ್ಯಕ್ಷ ಪದವಿಗಾಗಿ ನೀವು ಮಾಡಿದ ಜಾತಿಯ 'ಬ್ಲಾಕ್ ಮೇಲ್'ಗಳಲ್ಲೆಲ್ಲ ನಮ್ಮಂತ ಹುಲುಮಾನವರ ಕಣ್ಣಿಗೆ ಕಾಣುತ್ತಿದ್ದುದು ಇದೇ ಸ್ವಾಮಿ.



ಇನ್ನು ಘನತೆವೆತ್ತ ಹಿರಿಯ,ವಯೋ ಹಾಗು ಜ್ಞಾನ ವೃದ್ಧ ಚಿದಾನಂದಮೂರ್ತಿಗಳ ವಿರುದ್ಧ ನೀವು ವ್ಯಥಾ ಬೀಸಿದ ವ್ಯಂಗ್ಯದ ಗದೆ. 'ಅಲ್ರಿ ಪಾಟೀಲರೆ! ಅವು ಈ ಸ್ಪರ್ಧೆಗೆ ಹೇಗೆ ಸಂಬಂಧಿಸಿವೆ? ಅವರು ಸ್ಥಿರವಾಣಿ ಹಾಗು ಚರವಾಣಿಗಳೆಂಬ ಪರ್ಯಾಯ ಪದಗಳನ್ನ ಸೂಚಿಸಿದರೆ ಕೈ ಎಟುಕದ ಕಡೆ ನಿಮಗ್ಯಾಕೆ ತುರಿಕೆ ಏಳುತ್ತದೆ? ಅಷ್ಟಕ್ಕೂ ಸ್ಪರ್ಧೆಯ ನೆಪದಲ್ಲಿ ನಾವೆಲ್ಲ ಸ್ಪರ್ಧಿಗಳು ಸೂಚಿಸಿರುವ ಉಳಿದೆಲ್ಲ ಪದಗಳಿಗಿಂತ ಅವೆ ಹೆಚ್ಚು ಸೂಕ್ತವೆಂಬ ಸತ್ಯ ಗೋಚರಿಸದಷ್ಟು ಹೊಟ್ಟೆಕಿಚ್ಚಿನ ಕುರುಡೆ ನಿಮ್ಮದು? ನಿಮ್ಮ ಚಿಲ್ಲರೆ ಸಾಹಿತ್ಯಿಕ ಜಗಳಗಳನ್ನೆಲ್ಲ (ವಾಸ್ತವವಾಗಿ ಅದು ಸಾಹಿತ್ಯಿಕವಾಗಿ ಕಡಿಮೆ,ನಿಮ್ಮ ವಯಕ್ತಿಕ ತೆವಲುಗಳೆ ನಿಮ್ಮೆಲ್ಲ ಜಗಳಗಳ ಮೂಲ) ಎಳೆದು ತಂದು ಸ್ಪರ್ಧೆಯ ಆಶಯಕ್ಕೆ ಮಸಿ ಬಳಿಯುವ ವಿಕೃತ ಮನಸೇಕೆ ಸ್ವಾಮಿ ನಿಮಗೆ?'

ಇಲ್ಲಿ ಕಳೆದೆರಡು ದಿನಗಳಿಂದ ಚೀರುವಯ್ಯನಾಗಿ ಚೀರುತ್ತಾ-ಸಾರುವಯ್ಯನಾಗಿ ಸಾರುತ್ತಾ ಮುಲ್ಲಾನಂತೆ 'ಫತ್ವಾ' ಹೊರಡಿಸಿದ್ದು ತಾವೆ ಹೊರತು ಇನ್ಯ್ಯಾರೂ ಅಲ್ಲ.ತನ್ನ ಸುಟ್ಟ ಸುಡುಗಾಡು ಜಾತಿಗಷ್ಟೆ 'ಜಗದ್ಗುರು'ವಾಗಿ ಮೆರೆಯುವ ಮೂರು ಕಾಸಿನ ಮಠಾಧಿಪತಿಗೂ ನಿಮಗೂ ಜಾಯಮಾನದಲ್ಲಿ ಚೂರೂ ವ್ಯತ್ಯಾಸವಿಲ್ಲ ಎಂಬುದು ಪುನಃ ಜಾಹೀರಾಗಿದೆಯಷ್ಟೆ. ಇನ್ನೊಂದು ವಿಷಯ :ನಾನಂತೂ ನಿಮ್ಮಂತೆ ಪೂರ್ವಾಗ್ರಹಪೀಡಿತನಲ್ಲ,ಹಾಗು ಕನ್ನಡ ನನಗೆ ಅವಕಾಶವಾದದ ಅಥವಾ ಅಧಿಕಾರದ ಅಥವಾ ಗೂಟದ ಕಾರಿನ ಸಂಪಾದನೆಯ ಸರಕೂ ಅಲ್ಲ.ಮತ್ತೊಂದು ಸಂಗತಿ ಸದಾ ನೆನಪಿನಲ್ಲಿಡಿ ವ್ಯಂಗ್ಯದ ಮದ್ದು ನಿಮಗೆ ಕಹಿ ಎಂದೆನಿಸುವಂತಿದ್ದರೆ ಬೇರೆಯವರಿಗೂ ಅದು ಹಾಗೆಯೆ ಇರುತ್ತದೆ.'ನಾಯಿ ಬಾಲ ಸದಾ ಡೊಂಕು' ಎಂಬ ಗಾದೆಯ ಸಂಪೂರ್ಣ ಅರಿವಿದ್ದರೂ ನಿಮಗೆ ಈ ಸಲಹೆ ಕೊಟ್ಟೆ.ಸ್ವೀಕರಿಸಿ ಬಿಡಿ ನನಗೇನೂ ಚಿಂತೆಯಿಲ್ಲ.ಕೊನೆಯದಾಗಿ,ಈ ಲೇಖನದಲ್ಲಿ ಬಳಸಿದ ಅಷ್ಟೂ ವ್ಯಂಗ್ಯ ಕೇವಲ ಪ್ರಾಸಂಗಿಕ ಹಾಗು ನಿಮ್ಮದೆ ರೀತಿಯಲ್ಲಿ ನಿಮಗೆ ತಿವಿದು ತೋರಿಸುವ ವಿಧಾನ.

22 December 2010

ಕಳೆದು ಹೋಗಿದ್ದೆ..

ಕತ್ತಲ ಗವಿಯಲ್ಲಿ ಕಳೆದು ಹೋಗಿದ್ದೆ ನಾನು,
ಬೆಳಕಿನ ಭರವಸೆಯಿಲ್ಲದ ಅಂಧಕಾರದ ಬಾಳು/
ಕುಡಿದೀಪ ಬೆಳಗಿದಂತೆ ಬದುಕಲ್ಲಿ ಬಂದೆಯಲ್ಲ ನೀನು,
ಬಂದಷ್ಟೇ ವೇಗವಾಗಿ ಮರಳಿ ಮರೆಯಾಗಿಯೂ ಹೋದೆ....
ಹೆಚ್ಚಿಸಿ ನನ್ನುಳಿದ ದಿನಗಳ ತುಂಬ ಒಂಟಿತನದ ಗೋಳು//

21 December 2010

ನಿನ್ನನುಳಿದು ಇನ್ನೇನು ಗೊತ್ತಿಲ್ಲ...

ಕರಾಳ ಬಾಳಲ್ಲಿ ನಿರಾಳ ಮಂದ ಮಾರುತ ನೀನು...
ನೀನಿಲ್ಲದೆ ಇನ್ನು ಹೇಗೆ ತಾನೆ ಇರಲಿ ನಾನು?/
ಇಳೆಯ ದಾಹವ ಎಂದಾದರೂ ಅರಿಯಲಾದೀತೆ ಬಾನು?
ಆಳ ಎಷ್ಟೇ ಇದ್ದರೂ ಮೋಡ ಕರಗಿ ನೆಲ ಮುಟ್ಟಲೇಬೇಕು...
ಇದೆ ಅಲ್ಲವ ಪ್ರಕೃತಿಯ ಅಲಿಖಿತ ಕಾನೂನು?//

20 December 2010

ನೀನಿಲ್ಲದೆ ಇನ್ನೇನಿಲ್ಲ...

ಸ್ಥಿಗ್ಧ ಆಗಸವ ಆವರಿಸಿದ ಕರಿ ಮೋಡ,
ಇತ್ತ ಹನಿ ಮಳೆಯನೂ ಸುರಿಸಲಿಲ್ಲ...
ಅತ್ತ ನೀಲಾಗಸವ ಕಣ್ ತುಂಬಿಕೊಳ್ಳಲೂ ಅವಕಾಶ ಹರಿಸಲಿಲ್ಲ/
ಮುಗ್ಧ ನನ್ನ ಹೃದಯವನ್ನ ಆಕ್ರಮಿಸಿ ಕ್ಷಣದಲ್ಲಿ ತೊರೆದು ಹೋದ ಥೇಟ್ ನಿನ್ನಂತೆ...
ಅತ್ತ ನೀನೂ ನನ್ನ ಒಲವ ಆದರಿಸಲಿಲ್ಲ,
ಇತ್ತ ನನ್ನ ಅಂತರಾಳ ನಿನ್ನ ಹೊರತು ಇನ್ಯಾರನ್ನೂ ಆ ಭಾವದಲ್ಲಿ ಆವರಿಸಲಿಲ್ಲ//

19 December 2010

तनहा थो इससे पहले भी मै था....

भीड़ भरे रेल में,
एक हम है लाचार अकेले/
मन थो है बिलकुल खाली खाली,
दिल का आँगन भी है मायूस//


मै खुद जानता नहीं था के ये जालिम इश्क मुज में भी चाजायेगा,
मुश्किल से हासिल हवी कुशी एक पल में को जाएगा/
तनहा थो इससे पहले भी मै था,
पर आपसे मिलने के भाद जितना हुवा हु...उससे भेशक कम//

18 December 2010

ಕನವರಿಕೆ...

ಕನಸಲ್ಲಿ ಬಂದು ಪ್ರತಿನಿತ್ಯ ಕಾಡುವ ನೀನು...ನನಸಿನಲ್ಲಿ ನನ್ನಿಂದ ಬಲುದೂರ,
ನಿಜದಲ್ಲಿ ನನ್ನ ಮನಸಾರೆ ತಿರಸ್ಕರಿಸುವ ನಿನ್ನ ಮನ ಕಲ್ಪನೆಯಲ್ಲಿ ನನ್ನೆಡೆಗೆ ಅದೆಷ್ಟು ಉದಾರ!/
ನಿನಗೆ ಅದ್ಹೇಗೊ ಗೊತ್ತಿಲ್ಲ,
ನನಗೊ ಬದುಕು..ಕನವರಿಕೆ ಎರಡೂ ಒಂದೇನೆ//

ಕಾರಣ...

ಸದ್ದಿರದೆ ಸಂಭವಿಸುವ ಸಂತಸದ ಸಿಡಿಲಿನಂತೆ,
ನೋವಿನ ಕರಿಯೆಲ್ಲವ ಅರೆಕ್ಷಣವಾದರೂ ಮರೆಮಾಚಿಸುವ ಮಿಂಚಂತೆ/
ನೆನಪಾಗಿ ಮತ್ತೆ ಮತ್ತೆ ಕಾಡಿದರೂ...ನಿನ್ನಲೂ ಒಂದು ಸವಿಯಿದೆ,
ನೀ ಜೊತೆಗಿಲ್ಲದ ಕಹಿಗೆ ಇದಕ್ಕಿಂತ ಹಿತವಾದ ಮದ್ದುಬೇಕ?//

ನೂರು ಭಾವಗಳ ಬಿಡದೆ ತಡವಿದರೂ,
ಮೂಕ ಮನಸಿನ ಆಸೆಗಳಿಗೆ ಸೂಕ್ತ ವ್ಯಕ್ತ ಭಾಷೆಸಿಗದೆ ತಡವರಿಸುತ್ತಿದ್ದೇನೆ/
ಇದರಲ್ಲಿ ನಿನ್ನದೇನು ತಪ್ಪಿಲ್ಲ,
ನನ್ನೆಲ್ಲ ನೋವಿಗೆ...ನನ್ನೊಳಗಿನ ದೋಷವೇ ಕಾರಣ//

ಕಾರಣ...

ಸದ್ದಿರದೆ ಸಂಭವಿಸುವ ಸಂತಸದ ಸಿಡಿಲಿನಂತೆ,
ನೋವಿನ ಕರಿಯೆಲ್ಲವ ಅರೆಕ್ಷಣವಾದರೂ ಮರೆಮಾಚಿಸುವ ಮಿಂಚಂತೆ/
ನೆನಪಾಗಿ ಮತ್ತೆ ಮತ್ತೆ ಕಾಡಿದರೂ...ನಿನ್ನಲೂ ಒಂದು ಸವಿಯಿದೆ,
ನೀ ಜೊತೆಗಿಲ್ಲದ ಕಹಿಗೆ ಇದಕ್ಕಿಂತ ಹಿತವಾದ ಮದ್ದುಬೇಕ?//

ನೂರು ಭಾವಗಳ ಬಿಡದೆ ತಡವಿದರೂ,
ಮೂಕ ಮನಸಿನ ಆಸೆಗಳಿಗೆ ಸೂಕ್ತ ವ್ಯಕ್ತ ಭಾಷೆಸಿಗದೆ ತಡವರಿಸುತ್ತಿದ್ದೇನೆ/
ಇದರಲ್ಲಿ ನಿನ್ನದೇನು ತಪ್ಪಿಲ್ಲ,
ನನ್ನೆಲ್ಲ ನೋವಿಗೆ...ನನ್ನೊಳಗಿನ ದೋಷವೇ ಕಾರಣ//

16 December 2010

ನಂಬಿಕೆ ಇಲ್ದಿದ್ರೇನು....

ಇತರರಿಗೆ ವಿಕ್ಷಿಪ್ತವೆನಿಸುವ ಅನೇಕ ಒಳ ಆಸೆಗಳು ನನ್ನೊಳಗಿವೆ.ಉದಾಹಾರಣೆಗೆ ಶತಾಬ್ದಿ ಎಕ್ಷ್ ಪ್ರೆಸ್ನಲ್ಲಿ ಭಿಕ್ಷೆ ಬೇಡಬೇಕು! ರಾಜಧಾನಿ ಎಕ್ಷ್ ಪ್ರೆಸ್ನಲ್ಲಿ ಟಿಕೆಟ್ ಇಲ್ಲದೆ ಎಲ್ಲ ಮಜಾ ಅನುಭವಿಸುತ್ತಲೆ ಪ್ರಯಾಣಿಸಬೇಕು! ಪಾಸ್ಪೋರ್ಟ್ ವೀಸಾದ ಹಂಗಿಲ್ಲದೆ ದರಿದ್ರ ಅಮೇರಿಕಾದಲ್ಲಿ ಅಂಡಲೆಯಬೇಕು ಹೀಗೆ...ಇದೇ ಸರಣಿಯ ಭಾಗವಾಗಿ ಬೀದಿ ಬದಿಯ ಫುಟ್ಪಾತ್ ದೇವರಲ್ಲಿ ಮೂರ್ಕಾಸಿನ ನಂಬಿಕೆ ಇಲ್ಲದಿದ್ದರೂ ಇವತ್ತು ಆದಷ್ಟು ದೇವಸ್ಥಾನ ಸುತ್ತಿ ಕೃಷ್ಣಯ್ಯ ಶೆಟ್ಟಿ ಅಂಡ್ ಕೋ ಪ್ರಾಯೋಜಿತ ಲಡ್ಡು ತಿನ್ನಬೇಕಂತ ಅನ್ಕೊಂಡಿದ್ದೇನೆ.ದೇವರಲ್ಲಿ ನಂಬಿಕೆ ಇಲ್ದಿದ್ರೇನು ಶೆಟ್ಟರ ಲಡ್ಡುವನ್ನ ಮನಪೂರ್ವಕ ನಂಬುತ್ತೇನೆ!ಚಿಕ್ಕಂದಿನಲ್ಲಿ ನಮ್ಮೂರ ಗಣಪತಿಕಟ್ಟೆಯ ತಂತ್ರಿಗಳ ಸಂಕಷ್ಟಿ ಪ್ರಸಾದಕ್ಕೂ ಹೀಗೆ ಶರಣಾಗ್ತಿದ್ದೆ.

08 December 2010

ಇದಕ್ಕೆ ಹೆಸರಿಲ್ಲ...

ಬೀಸುವ ಗಾಳಿಯಲ್ಲಿ ನಿನ್ನ ಬಿಸಿಯುಸಿರು,
ಸಾಗೊ ಹಾದಿಯುದ್ದ ನಿನ್ನವೆ ಹೆಜ್ಜೆಗುರುತು/
ಬಾಳ ಪಯಣವೆಲ್ಲ ನಿನ್ನದೆ ಜೊತೆಯನು...
ನೀನಿಲ್ಲದಿದ್ದರೂ ಭ್ರಮಿಸುತ್ತಿದ್ದೆನಲ್ಲ,
ನಾನೆಂತ ಮರುಳ?//

ನಿಜದ ಮೇಲಿಂದ ಸರಿದ ಪರದೆ ಇನ್ನಷ್ಟು ಕಾಲ ಹಾಗೆಯೆ ಇದ್ದಿದ್ದರೆ ಚೆನ್ನಾಗಿತ್ತು,
ಹಾಗಂತ ನಾನೂ ಏನು ಸುಭಗನಾಗಿಯೆ ಉಳಿಯುತ್ತಿರಲಿಲ್ಲ/
ಕುಡುಕನೂ ಆಗಿರುತ್ತಿದ್ದೆ....ಖಂಡಿತ ಈಗಿನಂತೆಯೇ ನಿದ್ದೆ ಮರೆತು ನೀರವ ಇರುಳನ್ನೆಲ್ಲ ನರಕವಾಗಿಸಿಯೂಕೊಳ್ಳುತ್ತಿದ್ದೆ,
ಆದರೆ ಇನ್ನೂ ಕೊಂಚ ತಡವಾಗಿ!//

07 December 2010

ಹೀಗ್ಯಾಕಾಯಿತೊ!

ಈ ಸಂಕಟಕೆ ಕೊನೆಯಿಲ್ಲ,
ಒಡೆದ ಹೃದಯದ ಚೂರುಗಳನು...ಮತ್ತೆ ಅಂಟಿಸುವ ಯಾವ ಬೆಸುಗೆಯೂ ಇಲ್ಲವಲ್ಲ/
ಮೌನದ ಚಿಪ್ಪಲಿ ಹುದುಗಿದ್ದರೂ ಮನಸೆಲ್ಲ ಅದೇಕೊ ಖಾಲಿಖಾಲಿ,
ಇಂತಹ ದಿನವೊಂದರ ನಿರೀಕ್ಷೆ ಖಂಡಿತ ನನಗಿರಲಿಲ್ಲ//

06 December 2010

ನರಳಿಕೆ...

ಮಾತು ನೂರಿದ್ದರೂ ಮೂಕನಾಗೋದು...
ಭಾವದ ಸಾವಿರ ಹೆದ್ದೆರೆಗಳ ಭಾರ ಮನಹೊತ್ತು ದಾಟೋದು/
ಮನಸ್ಸಿಲ್ಲದ ಮನಸ್ಸಿನಿಂದ ಒತ್ತಾಯದ ಒಂಟಿತನಕ್ಕೆ ಅಂಟಿಕೊಳ್ಳೋದು...
ನೀ ನೆನಪಾದಾಗಲೆಲ್ಲ ಅವ್ಯಾಹತವಾಗಿ ಉಕ್ಕಿಬರುವ ಕಂಬನಿಗಳ ಸ್ವತಂತ್ರ ಬಿಟ್ಟು ಬಿಡೋದು...
ಛೀ...ನನ್ನದೂ ಒಂದು ಬಾಳ?,
ಇದಕ್ಕೆ ಕೊನೆ ಎಂದು?!//

05 December 2010

ನನಗೇ ಇದೇನೆಂದು ಗೊತ್ತಿಲ್ಲ..

ಮಾತಿನ ಬಣ್ಣವೆಲ್ಲ ಬಯಲಾಗಿದೆ...
ಅಸಲಿಗೆ ನಿನ್ನ ಮೌನ ಇದಕ್ಕಿಂತ ಹಿತವಾಗಿತ್ತು,
ನಗುವಿನ ನಿಗೂಢತೆಗೆ ತೆರೆ ಬಿದ್ದಿದೆ...
ಆ ನಿನ್ನ ಸಿಡುಕುತನದಲ್ಲೆ ಹೆಚ್ಚು ನಿಜ ಹುದುಗಿತ್ತು/
ಸಂಚೇನು ಅಡಗಿರಲಿಲ್ಲ ನಿನ್ನ ತುಂಟ ಕಣ್ಣೋಟದಲ್ಲಿ...
ಆದರಿದೀಗ ಅದೇಕೊ ಹಾಗೆನಿಸಲಾರಂಭಿಸಿದೆ,
ಮಬ್ಬು ಆವರಿಸುತ್ತಿರಲಿಲ್ಲ ನನ್ನ ದೃಷ್ಟಿಗೆ...
ಈಗೀಗ ಕಂಬನಿಯ ಪೊರೆ ಸದಾ ಕವಿದಿರಲಾರಂಭಿಸಿದೆ//

04 December 2010

ನಾನು...ನನ್ನ ಮನಸು

ಬತ್ತಿದ ಭಾವಗಳಿಗೆಲ್ಲ ನೀಗದ ನೀರಡಿಕೆ,
ಸಾಯುತಿರುವ ಕನಸುಗಳ ಕಣ್ಣಲ್ಲೂ ನಿನ್ನದೆ ಕನವರಿಕೆ/
ಮತ್ತೇರಿಸ ಬೇಕಾದ ನಿಶ್ಚಲ ಹೊತ್ತಲಿ...
ಮುತ್ತುತ್ತಿರುವ ನೆನಪುಗಳ ಮುತ್ತಿಗೆಯಿಂದ ಜರ್ಜರಿತ,
ನಾನು...ನನ್ನ ಮನಸು//

ತೊಟ್ಟಿಕ್ಕುತ್ತಿವೆ

ಒದ್ದೆ ಮನಸಿನ ಭಾವಗಳೆಲ್ಲ,
ನಿನ್ನೊಂದಿಗೆ ಕಂಡಿದ್ದ ಕನಸುಗಳ ಭಾರಕ್ಕೆ ಮಂಜಾಗಿ ತೊಟ್ಟಿಕ್ಕುತ್ತಿವೆ/
ಕಂಡವರು ಇದನ್ನು ಕಣ್ಣೀರ್ ಎಂದರು,
ನಾನೂ...ಇದನ್ನೆ ನನ್ನ ಒಲವೆನ್ನುತ್ತೇನೆ//

03 December 2010

ನಿನ್ನವೇ ನೆನಪುಗಳು

ಏಕಾಂತವೂ ನನ್ನ ನಸೀಬಿನಲ್ಲಿಲ್ಲ...
ಎದೆಯೊಳಗೆ ಉಮ್ಮಳಿಸಿ ಬರುವ ನೆನಪಿನ ಅಲೆಗಳ ಸರಣಿ ಮನಸಿನ ದಡದ ಉಸುಕಿನ ದಂಡೆಯನ್ನು ಕರಗಿಸುತಲೆ ಇದೆ...
ನನ್ನೊಳಗಿನ ವಿಷಾದವೆಲ್ಲ ಹರಳುಗಟ್ಟುವ ಮೊದಲೆ ಹರಿದು ನೀರಾಗುತ್ತಿದೆ...
ಈಗಲೂ ಇದನ್ನು ಬರೆಯುತಿರುವುದು ನಾನಲ್ಲ...
ಕೈ ಓಡುತಿದೆ,ನಿನ್ನವೇ ನೆನಪುಗಳು ನನ್ನಿಂದ ಇವೆಲ್ಲವನ್ನೂ ಅಕ್ಷರಗಳಾಗಿ ಹೊರ ಬರಿಸುತಿವೆ..

24 November 2010

ನನ್ನ ಬಳಿ ನೀನೀಗಿಲ್ಲ...

ಬೆಳಕಿಲ್ಲದ ಹಾದಿಯ ಜೊತೆಗೆ ಕನಸೂಗಳೂ ಇಲ್ಲದ ಹಾದಿಯಲ್ಲಿ ತಡವರಿಸುತ್ತಾ ಸಾಗುತ್ತಿದ್ದೇನೆ,
ಎಡವಿ ಬಿದ್ದರೆ ಕೈ ಹಿಡಿದೆತ್ತಲು ನಿನ್ನಾಸರೆಯಿಲ್ಲ/
ಬದುಕಿನ ಈ ದೀರ್ಘಯಾನದಲಿ ಸೋತು ಸೊರಗಿ ಹೋದರೆ,
ತಲೆಯಾನಿಸಿ ಆಸರೆ ಪಡೆಯಲು ನಿನ್ನ ಹೆಗಲ ಮೆತ್ತೆಯಿಲ್ಲ//

ಬದುಕಿದ್ದೇನೆ ಕೇವಲ ಸತ್ತಂತೆ.
ಮಾತೀಗ ಮಿತ ಎಲ್ಲರೊಂದಿಗೆ...
ನೀನಿಲ್ಲದೆ ಜೊತೆ ತುಂಬಿದ ಸಂತೆಯಲಿ ಮಗುವೊಂದು ಒಂಟಿಯಾದಂತೆ/
ಬೆದರಿ ಬೆಚ್ಚಿ ದಿಕ್ಕುಗಾಣದ ಮನಸಿನ ವೇದನೆಗೆ ಕೊನೆಯೆ ಇಲ್ಲ,
ನಾನು ನಿಜವಾಗಿಯೂ ಒಂಟಿ ನನ್ನ ಬಳಿ ನೀನೀಗಿಲ್ಲ//

23 November 2010

ನೀನಿಲ್ಲದೆ ಏನೂ ಇಲ್ಲ..

ನಿನ್ನ ಭರವಸೆಯ ಬೆಳಕಿಲ್ಲದ ಮನಸಿಗೆ ಎಂಥಾ ದೀಪಾವಳಿ?,
ನೀ ಜೋತೆಯಿಲ್ಲದ ತೀರದ ನೋವಿನ ಜೊತೆ ಇನ್ನೆಂಥಾ ದಸರ?/
ಕಾಡುವ ಹಳೆಯ ನೆನಪುಗಳ ನಿರಂತರ ಹಾವಳಿ,
ಚೂರಾದರೂ ಹಿಮ್ಮೆಟ್ಟಿಸುತಿದೆ ನೀ ನನ್ನೊಂದಿಗಿಲ್ಲದ ಅನಂತ ಬೇಸರ//

ಕೊನೆ ಉಸಿರಿನವರೆಗೂ ನಿನ್ನ ಹಾದಿ ಕಾಯುವ ವಾಯಿದೆ,
ನನಗೆ ನಾನೆ ಕೊಟ್ಟುಕೊಂಡಾಗಿರುವ ವೇಳೆ/
ಒಂದೊಮ್ಮೆ ನೀ ಮರಳಿ ಬಂದರೂ ಸರಿ,
ಬಾರದಿದ್ದರೂ...ನನ್ನ ಕೊನೆಗಾಣದ ನಿರೀಕ್ಷೆ ನಿರರ್ಥಕವಲ್ಲ//

15 November 2010

ಮರೆಯೋದು ಹೇಗೆ?

ಮತ್ತೆ ಮರಳಿ ಬೀಳೊ ಕನಸು,

ಪುನಃ ನಾ ಮನಸೊಳಗೆ ಗುನುಗುವ ಹಾಡು/

ನಿನ್ನಲೆ ನೆಟ್ಟಿರುವಾಗ ನನ್ನ ಮನಸು,

ಅದರ ಕನ್ನಡಿಯಲಿ ಮೂಡಿರುವ ಬಿಂಬ ನಿನ್ನದೇನ?

ನೀನೆ ಬಂದಿಲ್ಲೊಮ್ಮೆ ನೋಡು//


ನೀ ಸಾಲ ಕೊಟ್ಟಿರುವ ನಸುನಗೆ ಜಾಲದಲಿ ಸಿಲುಕಿದ ಮನಸಿಗೆ,

ಕಾಲದ ಪರಿವೆಯಿಲ್ಲದೆ ಹಗಲಲೂ ನಾ ಕಾಣುವ ನಿನ್ನದೆ ಕನಸಿಗೆ/

ಬಲಿಯಾದ ನಾನು ನಿನ್ನೊಳಗೆ ಲೀನವಾಗಿ ಹೋದರೆ,

ಈಗಲೇ ಹೇಳಿ ಬಿಡುತ್ತೇನೆ ಕೇಳು...
ಅದಕ್ಕೆ ನಾನಂತೂ ಹೊಣೆಯಲ್ಲ//

06 November 2010

ನನ್ನೊಂದೆ ಒಂದು ಪ್ರಶ್ನೆ...

ನಿನ್ನ ಮೈಗಂಧ ನನಗಿಷ್ಟವೆಂದು,
ಸುಳಿಗಾಳಿಗೆ ಸುಳಿವು ಕೊಟ್ಟವರ್ಯಾರು?/
ನಿನ್ನನೆ ಪ್ರತಿಬಿಂಬಿಸುವ ಮಳೆಹನಿಯೊಂದನು,
ನೀಲಿ ಬಾನಂಚಿನ ಮಳೆಮೋಡದಲಿ ತಂದಿಟ್ಟವರ್ಯಾರು?//

ನಿನ್ನ ನಗುವನೆ ಅನುಕರಿಸುವ ಕಲೆಯನು,
ಅರಳಿ ನಗುವ ಹೂಗಳಿಗೆ ಕಲಿಸಿಕೊಟ್ಟವರ್ಯಾರು?/
ನನಗೆ ಹುಚ್ಚು ಹಿಡಿಸುವ ನಿನ್ನ ಕಂಗಳ ಕಾಂತಿಯನೆ,
ಇರುಳಾಗಸದ ತಾರೆಗಳಿಗೂ ಸಾಲವಿತ್ತವರ್ಯಾರು?//

26 October 2010

ಹನಿಗಳು...

ಕೊಳಲಾಗಬಹುದಿತ್ತು ನಾನು ನಿನ್ನ ತುಟಿಯಾದರೂ ಆಗ ನನ್ನ ಸೋಕುತ್ತಿತ್ತು,
ವೀಣೆಯಾದರೂ ಆಗಬೇಕಿತ್ತು ಆಗಲಾದರೂ ನಿನ್ನ ಬೆರಳುಗಳು ನನ್ನ ಮೀಟುತ್ತಿತ್ತು/
ಮೃದಂಗವಾದರೂ ಸಾಕಿತ್ತು...
ಬಾರಿಸುವ ನೆಪದಲ್ಲಾದರೂ ನಿನ್ನ ಅಂಗೈ ಪದೆ ಪದೆ ನನ್ನ ತಾಕುತ್ತಿತ್ತು,
ಆದರೆ ನನ್ನ ದುರದೃಷ್ಟ ನೋಡು...
ಕೇವಲ ಮನುಷ್ಯನಾಗಿದ್ದೇನೆ,
ನಿನ್ನಿಂದ ದೂರಾಗಿರುವುದೆ ಆಗಿದೆ ನನ್ನ ಪಾಡು//


ಮನಸ ಕಪಾಟಿನ ತುಂಬ ನೆನಪಿನ ಹಳೆ ಕಾಗದದ ಕಂಪು ತುಂಬಿದ ಪುಸ್ತಕಗಳೆ ತುಂಬಿವೆ,
ಪ್ರತಿಯೊಂದರ ಪುಟಗಳಲ್ಲೂ ನಿನ್ನದೆ ಸ್ಪರ್ಶದ ಪುರಾವೆ ಬೆರಳ ಗುರುತುಗಳಿವೆ/
ಯಾವುದೊ ಹೊತ್ತಗೆಯೊಂದರ ನಡುಪುಟ ನಿನ್ನ ತುಟಿ ಮುದ್ರೆಯ ಹೊತ್ತಿದೆ,
ಅದರ ಮೇಲೆ ಕೈಯಾಡುವಾಗಲೆಲ್ಲ ನನಗೆ ಅರಿವಿಲ್ಲದೆ ತುಂಬಿಬರುವ ಕಣ್ಣೀರಲೂ...
ನಿನ್ನದೆ ಸವಿನೆನಪ ಮತ್ತಿದೆ...ಕೆಳಗಿಳಿವ ಪ್ರತಿ ಹನಿಗಳಲೂ ನಿನ್ನ ವಿರಹದ ಮುತ್ತಿದೆ//

24 October 2010

ಮತ್ತದೆ ಕಥೇನ!?

ಇತ್ತೀಚೆಗಷ್ಟೆ ವೆಂಕಟೇಶ್ವರ ಟಾಕೀಸಿನಲ್ಲಿ ನೋಡಿರುತ್ತಿದ್ದ ಭೂತದ ಸಿನೆಮಾದ ಗುಂಗಿನಲ್ಲೆ :ಎಲ್ಲಿ ಬೇಗ ಉಂಡು ಮುಗಿಸಿದರೆ ಒಬ್ಬನೆ ಕೈ ತೊಳೆಯಲು ಹಿತ್ತಲಿಗೆ ಹೋಗಬೇಕಾಗುತ್ತದಲ್ಲ! ಎಂದು ವಿನಾಕಾರಣ ಅನ್ನವನ್ನು ನುರಿಸುತ್ತ ಸಾಧ್ಯವಾದಷ್ಟು ಊಟದ ಅವಧಿಯನ್ನ ವಿಸ್ತರಿಸುತ್ತಿದ್ದೆ.ಆದರೆ ದರಿದ್ರದ್ದು ನಮ್ಮ ಮನೆಗೆ ಕೇವಲ ಕೂಗಳತೆಯ ದೂರದಲ್ಲಿದ್ದ ಗುಡ್ಡದ ಮೇಲಿನ ವಿಶಾಲ ಮೈದಾನದಲ್ಲಿ ಅದಾಗಲೆ ಚಂಡೆ ಬಾರಿಸಿ ಭಾಗವತರು ಗಂಟಲು ಸರಿಪಡಿಸಿಕೊಳ್ಳಲು ಆರಂಭಿಸಿಯಾಗಿರುತ್ತಿತ್ತು. 'ಅಕ್ಕಿ ಮೇಲೆ ಆಸೆ...ನೆಂಟರ ಮೇಲೆ ಪ್ರೀತಿ' ಎಂಬಂತಹ ಉಭಯ ಸಂಕಟದ ಸ್ಥಿತಿ.ಯಾವುದೆ ಮೇಳಗಳು ನಮ್ಮೂರಿನಲ್ಲಿ ಆತ ಇಟ್ಟುಕೊಳ್ಳಲು ಬಯಸಿದರೆ ಇಲ್ಲಿಯೆ ಎಂಬಂತೆ ಸ್ಥಳ ನಿಗದಿಯಾಗಿತ್ತು.ಯಕ್ಷಗಾನದ ಉಗ್ರಾಭಿಮಾನಿಯಾಗಿದ್ದ ನನ್ನಜ್ಜನ ಬಾಲವಾಗಿ 'ಆಟ' ನೋಡಲು ಹೋಗೋದು ನನಗೆ ಬಲು ಪ್ರಿಯವಾಗಿದ್ದ ಹವ್ಯಾಸವಾಗಿತ್ತು,ಹಾಗೆಯೆ ಅಲ್ಲಿಗೆ ಬಂದಿರುತ್ತಿದ್ದ ಅಂಗಡಿಗಳಿಂದ ಚುರುಮುರಿ ಗೋಳಿಬಜೆ ಕೊಡಿಸುತ್ತಾರಲ್ಲ ಎನ್ನುವ ಮೇಲಾಕರ್ಷಣೆ ಬೇರೆ.ರಾತ್ರಿ ಒಂಬತ್ತೂವರೆ ಹತ್ತರ ಸುಮಾರಿಗೆ ಭಾಗವತರ ಗಟ್ಟಿ ಕಂಠದಲ್ಲಿ "ಗಜವದನ ಬೇಡುವೆ"ಯಿಂದ ಆರಂಭವಾಗುತ್ತಿದ್ದ ಪ್ರಸಂಗಗಳು ದುಷ್ಟ ಸಂಹಾರವಾಗಿ ಮುಗಿಯುವಾಗ ಚುಮು ಚುಮು ಛಳಿಯ ಮುಂಜಾನೆ ಮೂಡಣದಲ್ಲಿ ಕಣ್ಣಿನ ಪಿಸರು ಜಾರಿಸುತ್ತಾ ಸೂರ್ಯ ಆಕಳಿಸುತ್ತಾ ಬರುವ ಹೊತ್ತಗಿರುತ್ತಿತ್ತು.ಇಡೀ ರಾತ್ರಿಯ ಪ್ರಸಂಗಗಳಲ್ಲಿ ಹಾಸ್ಯ ಪಾತ್ರಗಳ ಅಭಿನಯದ ಹೊರತು ಇನ್ನೆಲ್ಲ ಪಾತ್ರಗಳ ನಟನೆಗೆ ನಿದ್ರೆಯ ಕಾಂಪ್ಲಿಮೆಂಟ್ ಕೊಡುತ್ತ,ರಕ್ಕಸ ಪಾತ್ರಗಳು ಬಂದಾಗ ಬೆಚ್ಚಿ ಸುತ್ತಿಕೊಂಡಿರುತ್ತಿದ್ದ ಶಾಲಿನಲ್ಲೆ ಇನ್ನಷ್ಟು ಮುದುಡುತ್ತ-ನಡುನಡುವೆ ಅಜ್ಜ ಕೊಡಿಸುವ ತಿಂಡಿಗಳಿಗೆ ಎಮ್ಮೆಯಂತೆ ಮೆಲುಕು ಹಾಕುತ್ತ ನಾನೂ ಯಕ್ಷಗಾನ ನೋಡುತ್ತಿದ್ದೆ!


ಪೆರ್ಡೂರು ಮೇಳ,ಧರ್ಮಸ್ಥಳ ಮೇಳ,ಸುರತ್ಕಲ್ ಮೇಳ,ಕಟೀಲು ಮೇಳ,ಮಂದಾರ್ತಿ ಮೇಳ ಹೀಗೆ ಶ್ರಾವಣದ ನಂತರ ಒಂದಾದರೊಂದರಂತೆ ಎಲ್ಲ ಮೇಳಗಳೂ ನಮ್ಮೂರಿಗೆ ಲಗ್ಗೆಯಿಡುತ್ತಿದ್ದವು.ನಮ್ಮೂರಿಗೆ ಯಕ್ಷಗಾನ ಮೇಳ ಬಂದಿರುವ ಬಾತ್ಮಿ ಮೊದಲು ತಿಳಿಯುತ್ತಿದ್ದುದು ನಮ್ಮಂತ ಕಿರಿಯರಿಗೆ.ತುಳು ಕನ್ನಡ ಎರಡೂ ಭಾಷೆಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಯಕ್ಷಗಾನಗಳಿಗೆ ಆಗೆಲ್ಲ ವಿಪರೀತ ಅಭಿಮಾನಿಗಳಿದ್ದರು.ನಮ್ಮದು ತಾಲೂಕು ಕೇಂದ್ರವಾಗಿದ್ದರಿಂದ ಹೋಲಿಕೆಯಲ್ಲಿ ಸುತ್ತಮುತ್ತಲ ಹಳ್ಳಿಗರಿಗಿಂತ ನಾವುಗಳು ಕೊಂಚ ಆಧುನಿಕರಾಗಿದ್ದೆವು,ಆ ಬಗ್ಗೆ ನಮ್ಮೊಳಗೊಳಗೆ ಕೊಂಚ ಧಿಮಾಕೂ ಇತ್ತೆನ್ನಿ,ಆದರೆ ಯಕ್ಷಗಾನದ ಕಲಾರಸಿಕತೆಯ ವಿಚಾರದಲ್ಲಿ ನಮ್ಮಿಬ್ಬರಲ್ಲೂ ಯಾವುದೆ ವ್ಯತ್ಯಾಸ ಇರಲೆ ಇಲ್ಲ.

ಸಂಜೆ ಬಯಲಿಗೆ ಆಡಲು ಹೋಗುತ್ತಿದ್ದ ನಾವು ಮಕ್ಕಳಿಗೆ ನಾಳೆ ನಮ್ಮೂರಿಗೆ ಯಕ್ಷಗಾನ ಮೇಳವೊಂದು ಬರುವ ಪುರಾವೆಗಳು ಸಿಗುತ್ತಿದ್ದವು.ಸದಾ ಹುಡಿಧೂಳಿನಿಂದ ಆವೃತ್ತವಾಗಿರುತ್ತಿದ್ದ ಮೈದಾನಕ್ಕೆಲ್ಲ ಒಂದು ಸುತ್ತು ನೀರು ಹೊಡೆದು ನಾಳೆ ಟರ್ಪಾಲ್ ಟೆಂಟು ಕಟ್ಟಲು ಅನುಕೂಲವಾಗುವಂತೆ ಮೈದಾನದ ಸುತ್ತಲೂ ಸರಳಿನಂತ ಗೂಟಗಳನ್ನ ಹೊಡೆಯಲು ಆರಂಭಿಸಿರುತ್ತಿದ್ದರು.

22 October 2010

ನೀನಿಲ್ಲದ ಮೇಲೆ...

ಸಂತಸಗಳೆಲ್ಲ ನಿನ್ನ ಸಂಗಡವೆ ಸಾಲಾಗಿ ಹೋದವಲ್ಲ,
ಒಂದೆ ಎಂದು ಕೊಂಡಿದ್ದ ನಮ್ಮಿಬ್ಬರ ಮನಸುಗಳು..
ಹರಿದು ಹಂಚಿ ಪಾಲಾಗಿ ಹೋದವಲ್ಲ/
ಕನಸುಗಳನ್ನೆಲ್ಲ ಸುಂದರವಾಗಿ ಪ್ರತಿಬಿಂಬಿಸುತ್ತಿದ್ದ ಹೃದಯ ಕನ್ನಡಿ...
ಕನ್ನ ಬಿದ್ದ ಅಂಗಡಿಯಂತಾಗಿ ಒಡೆದು ನುಚ್ಚುನೂರಾದಂತೆ,
ನೀ ಹೋದ ಕ್ಷಣದಿಂದ ನಾನೆಷ್ಟು ಒಂಟಿ ಗೊತ್ತ?...
ಬದುಕಿದ್ದೀನಿ ನಿಜ ಬರಿ ಸತ್ತಂತೆ//

21 October 2010

ಕಳೆದ ಆ ಕ್ಷಣಗಳು...

ಮನೆಯ ಮಾಡಿನ ಮೇಲೆ ಮಳೆಯ ಹನಿ ಸುರಿಯುತಿರುವಾಗ,
ಇತ್ತ ಮನದ ಗೂಡಿನ ಒಳಗೂ ನಿನ್ನ ನೆನಪಿನ ದನಿ ಮಾರ್ದನಿಸುತಿದೆ/
ಮಗ್ಗುಲು ಬದಲಿಸುತ್ತಿರುವ ಹಳೆಯ ಸವಿ ಕ್ಷಣಗಳ ಬಿಸುಪಿಗೆ...
ನಾನು ಕರಗಿ ಹೋಗುತ್ತಿದ್ದರೂ,
ನೀ ಜೊತೆಗಿಲ್ಲದ ಕೊರಗು ಪುನಃ ಕಾಡಿಸುತಿದೆ//


ಎಲ್ಲವ ಬಿಟ್ಟು ಎಲ್ಲರನೂ ಮರೆತು ಅಜ್ಞಾತನಂತೆ ಮರೆಯಾಗಿ....
ಅನಾಮಿಕತೆಯ ಗುಹೆಯಲ್ಲಿದ್ದು ಬಿಡುವ ಕಾಮನೆ,
ಮನದ ಮೂಲೆಯಲ್ಲೆಲ್ಲೊ ಕಾಮನೆಯ ಬೀಜ ಬಿತ್ತುತ್ತಿದ್ದರೂ/
ಬಿಡದೆ ಬೆನ್ನಟ್ಟುವ ನಿನ್ನ ನೆನಪುಗಳಿಂದ ಪಾರಾಗಿ ಹೋಗುವ ಮಾರ್ಗ ಮಾತ್ರ...
ಇನ್ನೂ ತೋಚದೆ,
ನಾ ಬಯಸುವ ಎಕಾಂತವಿನ್ನೂ ಮರೀಚಿಕೆಯಾಗಿಯೆ ಉಳಿದಿದೆ//

20 October 2010

ನಿನ್ನೊಂದಿಗೆ ಲೀನವಾಗಬೇಕು...

ಇಲ್ಲಿಯವರೆಗೂ ನನ್ನ ಅರೆ ಮರುಳ ಅನ್ನುತ್ತಿದ್ದ ಜನಕ್ಕೆ
ಈಗ ಪೂರ್ತಿ ನನ್ನ ತಲೆಕೆಟ್ಟಿರುವುದು ಖಾತ್ರಿ ಆದಂತಿದೆ/
ನನ್ನೆಡೆಗೆ ತಪ್ಪಿಯೂ ತಿರುಗಿ ನೋಡದ ನಿನ್ನ ಅಲಕ್ಷ್ಯವನ್ನೆ ಅಲಕ್ಷಿಸಿ....
ನಿನ್ನತ್ತಲೆ ಹರಿಸುತ್ತಿದ್ದೆನಲ್ಲ ನನ್ನೆಲ್ಲ ಒಲವಿನ ಕಾಲುವೆ,
ಅವರೆಲ್ಲರ ಪುರಾತನ ಶಂಕೆ ವಿಶ್ವಾಸದಲ್ಲಿ ದೃಢವಾಗಲು ಸಾಕಲ್ಲ ಇಷ್ಟು ಪುರಾವೆ?//


ನಿನ್ನ ನೆನಪುಗಳ ಚಿತೆಯಲ್ಲಿ ಸಹಾಗಮನ ಮಾಡಿಯಾದರೂ ಸರಿ....
ನಿನ್ನೊಳಗೆ ಸೇರಿ ಹೋಗಬೇಕು,
ನಿನ್ನೆಲ್ಲ ನಿರ್ಲಕ್ಷ್ಯಗಳ ಮೂರ್ತಿಗೆ ನನ್ನನೆ ಬಲಿ ಕೊಟ್ಟಾದರೂ ನಾ...
ನಿನ್ನಲೆ ಐಕ್ಯವಾಗಬೇಕು/
ನಿನ್ನೊಲವೆ ಪ್ರವಾಹ ತುಂಬಿ ಉಕ್ಕೆರಿದ ತುಂಗೆಯ ಸುಳಿಗೆ...
ನಿನ್ನ ಪ್ರೀತಿ ಮಡುವಲಿ ಅಂತರ್ಧಾನವಾಗಬೇಕು,
ನಿನ್ನ ಪ್ರೇಮದ ಜಲಪಾತದ ಮೇಲಿಂದ ಕಣ್ಮುಚ್ಚಿ ಧುಮುಕಲೂ ನಾ ತಯಾರು...
ಹಾಗಾದರೂ ನಿನ್ನೊಂದಿಗೆ ನಿನ್ನೊಲವಿನಾಳದಲಿ ನಾ ಲೀನವಾಗಬೇಕು//

19 October 2010

ನೀನು ನೀನಾಗಿರಲಿಲ್ಲ....

ನೀನು ನೀನಾಗಿರಲಿಲ್ಲ..
ಸಂತೆಯಲ್ಲಿ ಅಮ್ಮನ ತೋಳೊಳಗಿಂದಲೆ ನಕ್ಕ ಮಗುವಿನ ಮಂದಹಾಸದಂತೆ,
ತುಂಬಿದ ಬಸ್ಸಲಿ ಬೆವರು ತೊಯ್ದ ಕಂಕುಳ ಕುಬುಸಗಳ ನಾತದ ನಡುವೆಯೂ ....
ಕಂಪ ಸೂಸುವ ಮಲ್ಲಿಗೆದಂಡೆಯ ಸುಹಾಸದಂತೆ/
ಇನ್ನು ಸಿಗಲಾರದೆಂದು ನಿರಾಶರಾದಾಗ ಅಪರಿಚಿತ ಊರಲಿ ....
ಫಕ್ಕನೆ ಸಿಕ್ಕು ಖುಷಿಯುಕ್ಕಿಸುವ ವಿಳಾಸದಂತೆ//

ನೀನು ನೀನಾಗಿರಲಿಲ್ಲ...
ಹೆಕ್ಕಿ ತಂದ ಅಕ್ಕಿಯ ಮೇಲೆ ಅಕ್ಕರೆಯನು ಕೊರೆದು ತುತ್ತಿಡುವ ತಾಯಿ ಹಕ್ಕಿಯಂತೆ...
ಹನಿಬಿಡದೆ ಹಿಂಡಾಗಿದ್ದರೂ ಕರು ಬಂದಾಗ ಮೊಲೆಯುಣ್ಣಿಸಿ ನೋವಲೂ ನೆಮ್ಮದಿ ಕಾಣುವ ಕೊಟ್ಟಿಗೆಯ ದನದಂತೆ/
ಕಡಿದ ಕೊಡಲಿಗೂ ಪರಿಮಳವನ್ನೆ ದಾಟಿಸುವ ಶ್ರೀಗಂಧದಂತೆ,
ನಾಗರಕಟ್ಟೆಯ ಅರಳಿಯಿಂದಿಳಿದ ಬಿಳಲುಗಳು ನೆಲದೊಂದಿಗೆ ಬಿಗಿವ ಬಂಧದಂತೆ...
ಬಚ್ಚಲ ಇದ್ದಿಲ ಮಸಿಯಿಂದ ಮನೆಯ ಬಿಳಿ ನಾಯಿಮರಿಗೆ ನಾನಿಟ್ಟಿದ್ದ ದೃಷ್ಟಿಬೊಟ್ಟಿನ ಚಂದದಂತೆ//


ನೀನು ನೀನಾಗಿರಲಿಲ್ಲ...
ಬಾಲ್ಯದಲಿ ಅಪರೂಪಕ್ಕೆ ನಮ್ಮೂರ ಬಾನಲೂ ಬಂದು
ಬೆರಗು ಹುಟ್ಟಿಸುತ್ತಿದ್ದ ಲೋಹದ ಹಕ್ಕಿಯ ನಿಶ್ವಾಸದಂತೆ,
ಮರೆತರೂ ಮರೆತಂತಿರದ ಹಳೆಯ ಹಾಡೊಂದು ರೇಡಿಯೋದಲಿ
ಸುಳಿವಿರದೆ ಬಂದು ಮುದಗೊಳಿಸುವ ಚಿದ್ವಿಲಾಸದಂತೆ/
ಮುಂಜಾನೆ ಮನೆಯಂಗಳದ ತುಂಬಾ ಹೂವ ಹಾಸಿಗೆ ಹಾಸುತ್ತಿದ್ದ ಮರ ಪಾರಿಜಾತದಂತೆ,
ಬಿರುಬೇಸಗೆಗೆ ಬಳಲಿ ಬೆವೆತು ಬಾಯಾರಿದ ಭೂಮಿಗೆ ಮೊದಲ ಮಳೆಹನಿ...
ಜಾರಿಸೋ ಹೊಸ ಘಮದ ಸುಗಮದಂತೆ,
ಹರಿವ ತುಂಗೆಯಲಿ ಕಾಲಾಡ ಬಿಟ್ಟು ದಂಡೆಯ ಮರಳಲಿ...
ತಾರೆಗಳೆ ತುಂಬಿರುವ ಬಾನನೆ ನೋಡುತ ಕಳೆದ ಇರುಳ ಮೌನದಲ
ಕಿರುಕ್ಷಣದ ಮರು ಭಾಸದಂತೆ//

ನೀನು ನೀನಾಗಿರಲಿಲ್ಲ/
ನನಗೆಲ್ಲವೂ ಆಗಿರುವ
ನೀನಿಲ್ಲದೆ
ನಾನು ನಾನಾಗಿರಲಿಲ್ಲ//

ವಿನಂತಿ...

ಸುತ್ತ ಸುಳಿವ ಗಾಳಿಗೊಂದು ವಿನಂತಿ,
ಸಾಧ್ಯವಾದರೆ ನಿನ್ನ ಬೆವರ ಪರಿಮಳವನ್ನ ಮತ್ತೆ ಹೊತ್ತು ತರಲಿ/
ಹೊತ್ತು ಕಳೆವ ಬವಣೆ ಹೊತ್ಹೊತ್ತಿಗೂ ವಿಪರೀತ ಹೆಚ್ಚುತಿದೆ,
ಕಡೆಪಕ್ಷ ನಿನ್ನ ನೆನಪಿನ ಸುಗಂಧವನ್ನಾದರೂ ಅದು ಬಿತ್ತಲು ಬರಲಿ//

ನಿನ್ನ ನಡು ಬಳಸಿ ತುಟಿಗೆ ತುಟಿ ಅನಿಸಿ
ಕೊಟ್ಟೆನೋ...ಇಲ್ಲ ಪಡೆದೆನೋ ಎಂಬ ಮಧುರ ಗೊಂದಲ ಆಗಾಗ ಹುಟ್ಟಿಸುವ
ಕಾಲವೆ ಮತ್ತೆ ನೀ ಮರಳಿ ಬಾ/
ಕಡು ಕತ್ತಲ ರಾತ್ರಿಯಲಿ...ಬರಿ ಬೆತ್ತಲ ಹಣಿಗೆಯಲಿ
ಕಳೆದು ಹೋಗುತಿದ್ದ ಸವಿಯ ನೆನಪನೆಲ್ಲ,
ದಯಮಾಡಿ ಮರಳಿ ಮತ್ತೆ ಹೊತ್ತು ಬಾ...
ಅದೆ ರೋಮಾಂಚನವ ಹೊರಳಿ ಮರೆಯದೆ ಬಿತ್ತು ಬಾ//

ಹನಿ ಮಳೆ...

ತುಂಬಾ ದೂರ ಒಟ್ಟೊಟ್ಟಿಗೆ ನಡೆದಿದ್ದೆವು,
ಆದರೆ ಹಿಂದಿರುಗಿ ನೋಡಿದಾಗ ಜೊತೆಯಲ್ಲಿ ನೀನಿರಲಿಲ್ಲ/
ಬೆರಳಿಗೆ ಬೆರಳು ಹಣೆದು ಬಿಸಿಯುಸಿರು ತಾಕುವಷ್ಟು ಅಂಟಿಕೊಂಡೇ ಅಲೆದಿದ್ದೆವು,
ಖುಷಿ ಅರಳಿದಾಗ ಕಾತರಿಸಿ ಕರೆದರೆ ಕೇಳಿಸಿಕೊಳ್ಳಲು ನೀನಲ್ಲಿರಲಿಲ್ಲ//

ಮತ್ತೆ ನಿನ್ನದೆ ಗುಂಗಲಿ ಕರಗಿ ಉನ್ಮತ್ತನಂತೆ ಖಾಲಿ ರಸ್ತೆಯಲ್ಲಿ ನಡೆದಿದ್ದೆ,
ಮಳೆಹನಿಗೆ ಕೈಯಲ್ಲಿದ್ದ ಕೊಡೆ ಚಪ್ಪರ ಹಾಕಿತ್ತು...
ಸನಿ ಸನಿಹ ಸರಿದು ನಡೆದರೂ ಅರೆ ನೆನೆವಾಗಿನ ಮತ್ತು
ಹುಟ್ಟಿಸಲು ನನ್ನ ಸನಿಹ ನೀನಿರಲಿಲ್ಲ/
ಅಡ್ಡ ಮಳೆಯ ಹನಿಗಳಿಗೆ ನೀ ನೆನೆಯದಂತೆ ಕೊಡೆ ಆವರಿಸುವ ನೆಪದಲ್ಲಿ...
ನಿನ್ನ ತುಸು ಬಲವಾಗಿಯೇ ತಬ್ಬಿ ಕದ್ದು ಮುತ್ತಿಟ್ಟಿದ್ದೆನಲ್ಲ,
ಅದು ಬಾರಿಯ ನೆನಪೀಗ...
ಹಿಂದಿರುಗಿ ನನ್ನ ಮುತ್ತಿಗೆ ಮರು ಮುತ್ತು ಕೊಡಲು ಇಂದು ನೀನಿಲ್ಲಿರಲಿಲ್ಲ//

17 October 2010

ಅಪೇಕ್ಷೆ....

ಇಳಿದ ಹನಿಗಳು ಕಣ್ಣ ಹಿಡಿತದಲಿಲ್ಲ,
ಎದೆ ಬಿರಿವ ಭಾವಗಳು ನನ್ನ ಮನ ಮಿಡಿತದಲಿಲ್ಲ/
ಸತ್ತ ಸಂತಸದ ಕೂಸನ್ನು ಮಣ್ಣುಗಾಣಿಸಲಾಗದೆ ಮನಸು,
ಮತ್ತೆ ಮರಳಿ ನಿನ್ನ ಹಾದಿಯನೆ ನಿರೀಕ್ಷಿಸುತಿದೆ//


ಇಳಿಗತ್ತಲ ಮರೆಯಲ್ಲಿ ಬಿಕ್ಕಿ ಬಿಕ್ಕಿ ನಾ ಸುರಿಸಿದ ಕಣ್ಣೀರನು,
ಒರೆಸಲಾದರೂ ನೀ ನನ್ನ ಜೊತೆಗಿರಬೇಕಿತ್ತು...
ನಡು ಇರುಳಲಿ ಒಬ್ಬಂಟಿಯಾದ ಕೆಟ್ಟ ಕನಸ ಕಂಡು ಬೆಚ್ಚಿದ...
ನನ್ನ ಬಿಗಿದಪ್ಪಿ ಸಂತೈಸಲು,
ನಿನ್ನ ಬೆಚ್ಚನೆ ಎದೆಯಾಸರೆ ನನಗೆ ಬೇಕಿತ್ತು/
ಆದರೆ ನಿನಗಿಲ್ಲದ ಅಕ್ಕರೆಯ ಬಗ್ಗೆ...
ನನಗೇಕೆ ಅತಿ ನಿರೀಕ್ಷೆ?,
ನಿನ್ನಲರಳದ ಭಾವದ ಬೀಜ...
ನನ್ನೊಳಗೇಕೆ ಮೊಳಕೆ ಒಡೆಸುತಿದೆ ಹುಸಿ ಅಪೇಕ್ಷೆ//

16 October 2010

ನೀನಿಲ್ಲ...

ಊರೆಲ್ಲ ಹಬ್ಬದ ಗದ್ದಲ,
ನನ್ನೊಳಗೆ ನೀ ಮರಳಿ ಬಾರದ ನಿರಾಶ ಮೌನ/
ಮಾತೆಲ್ಲ ಮಡುಗಟ್ಟಿ ನಿಂತ ಕ್ಷಣ,
ಕದಡದ ಹೊರಗಣ ಕತ್ತಲನ್ನೂ ಅಣಗಿಸುತಿದೆ...
ಲಯ ಮರೆತು ಹೋದ ಭಗ್ನಮನದ ಒಡಕುಗಾನ//

ಹರಿದ ಮನದ ಮುಂದೆ...ಮೈ ಮೇಲಿರುವ ಹರಕು ಬಟ್ಟೆಯದೇನು ಹೆಚ್ಚುಗಾರಿಕೆ?.
ಮನವೆ ಮುರಿದಿರುವಾಗ....ಹರಕು ಮುರುಕು ಮನೆಯದೇನು ಸುಳ್ಳು ತೋರಿಕೆ?/
ಒಳಗಡೆಯ ಗಾಯ ಮಾಯಲಾಗದೆ ಕೊಳೆಯುತಿರುವಾಗ...
ಹೊರಗಡೆ ಮುಚ್ಚಿ ಮರೆಯಾಗಿಸುವ ಆಷಾಡಭೂತಿ ನಾನಲ್ಲ,
ಮುಚ್ಚಿಟ್ಟು ಸಾಧಿಸುವುದಾದರೂ ಎನುಳಿದಿದೆ ಈಗ...
ನೀನೆ ನನ್ನ ಜೋತೆಯಲಿಲ್ಲ//

14 October 2010

ಕರಗಿದ ಭಾವಗಳು..

ಮರಳಿ ಪ್ರೀತಿ ವಿನಿಮಯ ಮಾಡಿಕೊಳ್ಳೋಣ,
ನಿನ್ನ ಬೇಸರಗಳನ್ನೆಲ್ಲಾ ಕೊಡು...ನನ್ನ ನಲಿವುಗಳ ಬದಲಿಗೆ/
ಕಣ್ಣ ಆರ್ದ್ರತೆಯಲ್ಲಿ ಕರಗಿ..
ನೋಟ ಸ್ಪರ್ಶಿಸುವ ಮಾರ್ದವತೆಗೆ ಸೋತು ತನ್ಮಯರಾಗೋಣ ಬಾ,
ವಿಷಾದದ ಆವರಣ ಕಳಚಿ...ನಸು ನಗುವರಳಿಸೋಣ ಮೊದಲಿಗೆ//


ನಿನ್ನ ಕಣ್ಣಲ್ಲಿ ಅಡಗಿರಿಸಿರುವ ನೋವನ್ನೆಲ್ಲ ಹೀರುತೀನಿ,
ನೀ ನೊಂದರೆ ನಾನೂ ಬಿಕ್ಕಿಬಿಕ್ಕಿ ಚೀರುತ್ತೀನಿ/
ನಿನ್ನ ಅಣತಿಗೆ ಕಾದು ಅದರಂತೆಯೆ ಬಾಳುತೀನಿ,
ನಿನ್ನ ಕಣ್ತುಂಬಿ ಬಂದಾಗಲೆಲ್ಲ...
ನಾನೆ ಕಂಬನಿಯಾಗಿ ಕೆಳಗುರುಳುತೀನಿ//

ಕರಗಿದ ಭಾವಗಳು..

ಮರಳಿ ಪ್ರೀತಿ ವಿನಿಮಯ ಮಾಡಿಕೊಳ್ಳೋಣ,
ನಿನ್ನ ಬೇಸರಗಳನ್ನೆಲ್ಲಾ ಕೊಡು...ನನ್ನ ನಲಿವುಗಳ ಬದಲಿಗೆ/
ಕಣ್ಣ ಆರ್ದ್ರತೆಯಲ್ಲಿ ಕರಗಿ..
ನೋಟ ಸ್ಪರ್ಶಿಸುವ ಮಾರ್ದವತೆಗೆ ಸೋತು ತನ್ಮಯರಾಗೋಣ ಬಾ,
ವಿಷಾದದ ಆವರಣ ಕಳಚಿ...ನಸು ನಗುವರಳಿಸೋಣ ಮೊದಲಿಗೆ//


ನಿನ್ನ ಕಣ್ಣಲ್ಲಿ ಅಡಗಿರಿಸಿರುವ ನೋವನ್ನೆಲ್ಲ ಹೀರುತೀನಿ,
ನೀ ನೊಂದರೆ ನಾನೂ ಬಿಕ್ಕಿಬಿಕ್ಕಿ ಚೀರುತ್ತೀನಿ/
ನಿನ್ನ ಅಣತಿಗೆ ಕಾದು ಅದರಂತೆಯೆ ಬಾಳುತೀನಿ,
ನಿನ್ನ ಕಣ್ತುಂಬಿ ಬಂದಾಗಲೆಲ್ಲ...
ನಾನೆ ಕಂಬನಿಯಾಗಿ ಕೆಳಗುರುಳುತೀನಿ//

12 October 2010

ನೆನಪು ಜೋಪಾನ...

ನೆನಪುಗಳ ಹಳೆ ಪೆಟ್ಟಿಗೆಯಿಂದ ಅಮೂಲ್ಯವಾದ ನಗಗಳಲ್ಲನ್ನ ಆಯ್ದುಕೊಳ್ಳೋಣ,
ನಿನ್ನ ಪುಟ್ಟ ಕೈಗಳಲ್ಲಿ ಸ್ವಲ್ಪವೇ ಹಿಡಿಸೀತು...
ನಾನೇ ಬೊಗಸೆ ತುಂಬ ತೆಗೆದು ಸುರಿಯುತೀನಿ ತಾಳು/
ಕಳೆದ ಕ್ಷಣಗಳ ರತ್ನಮಾಲೆ ಜೋಪಾನ,
ಅದರ ಪ್ರತಿ ಮಣಿಗಳಲ್ಲೂ ನೀನಿದ್ದೀಯ...
ಅದರ ಹೊಳಪಲ್ಲಿ ಮಿನುಗುವ ನಿನ್ನ ನಗೆಯಲ್ಲೆ ನಿಂತಿದೆ ನನ್ನ ಇಡೀ ಬಾಳು//

ಏನೊಂದೂ ನುಡಿಯಬೇಡ ಪ್ರತಿ ಮಾತಿಗೂ ಕಟ್ಟಬೇಕಿದೆ,
ವಿರಹ ಸಂಕಟದ ಸುಂಕ...
ಮೌನವೆ ಹಿತವಾಗಿರುವಾಗ ಬರಿ ಒಣ ಮಾತಿನ ಹಂಗೇಕೆ?/
ಕಾಲ ಬಲು ಕ್ರೂರಿ...ಅದೆಷ್ಟೆ ಬೇಡಿದರೂ ಸಹ ತುಸು ಕೂಡ ನಿಲ್ಲೋಲ್ಲ,
ಸುಮ್ಮನೆ ಪಡುವುದೇತಕೆ ಆತಂಕ....
ಇರುವಷ್ಟು ಕಾಲ ನಿನ್ನ ಜೊತೆಯೆ ಇಷ್ಟು ನೆಮ್ಮದಿತರುವಾಗ ಇನ್ಯಾವುದೆ ಸುಖದ ಗುಂಗೇಕೆ?//

10 October 2010

ಇನ್ನೇನು ಉಳಿದಿದೆ ಹೇಳು?

ರಹದಾರಿ ಮುಗಿದ ಲಡಾಸು ಲೂನಾದಲ್ಲಿ,
ಒಲವಿನ ಹೆದ್ದಾರಿ ಮೇಲೆ ಸಾಗುವ ತಿರುಕನ ಕನಸು ಕಂಡ ನನ್ನ ಕಂಗಳದ್ದೆ ತಪ್ಪು/
ನವಿರಾದ ಆ ರಸ್ತೆಯ ಅಂದ ಚಂದಕ್ಕಷ್ಟೆ ಮರುಳಾದೆ ನೀನು ಅಂದುಕೊಂಡಿದ್ದೆ,
ಪಕ್ಕದಲ್ಲೆ ಮನಕ್ಕೆ ಕನ್ನ ಹಾಕುವಂತೆ ಸಾಗುತ್ತಿದ್ದ ಹೊಳೆವ ಕಾರುಗಳೂ ನಿನಗೆ ಮೋಡಿ ಮಾಡಿದ್ದು ಅರಿವಾಗುವಷ್ಟರಲ್ಲಿ...
ತಡವಾಗಿತ್ತು....ಒಲವು ಸೋರಿಹೋದ ನನ್ನೆದೆ ಬಡವಾಗಿತ್ತು//

09 October 2010

ಮೌನ ಮರ್ಮರ...

ಅದೇಕೊ ಹೇಳಲು ಅಂಜಿಕೆಯಾಗಿತ್ತು,
ಹೇಳೋಕೆ ಇದ್ದದು ಮೂರೆ ಪದ,ಒಂದೆ ಮಾತು/
ಹರಿದ ಬಾಳ ಅಂಗಿಗೆ ನಿನ್ನ ಜೊತೆಯ ಹೊಲಿಗೆ ಹಾಕಬಹುದಿತ್ತು...
ಮತ್ತೊಮ್ಮೆ ಮನಸು ಹರಿಯದಂತೆ ಜತನ ಮಾಡಬಹುದಿತ್ತು,
ಆದರೂ ನನ್ನ ತುಟಿ ಎರಡಾಗಲಿಲ್ಲ,
ಹೇಳೋಕೆ ಇದ್ದದು ಮೂರೆ ಪದ,ಒಂದೆ ಮಾತು//

ಬರಿ ಮಾತಲ್ಲ...

ನೆನ್ನೆಗಳೆಲ್ಲ ಎಲ್ಲಿ ಕಳೆದವೋ ಗೊತ್ತೆ ಆಗದ ಹಾಗೆ,
ಅದೆಲ್ಲಿ ಕಾಣೆಯಾದವು?...
ನಾವು ಜೊತೆಗೆ ಕಳೆದ ಆರ್ದ್ರ ಕ್ಷಣಗಳು,
ಎಲೆ ಮೇಲಿದ್ದ ಹನಿ ಜಾರಿ ಹೋದ ಹಾಗೆ/
ನೀ ಜೊತೆಗಿದ್ದರೆ ಸುತ್ತಲು ಸುಳಿವ ಗಾಳಿಯಲ್ಲೂ
ಹೊಸ ಭಾವ ಆವರಿಸಿದಂತೆ,
ನೀನೊಂದು ನವಿರು ಅನುಭವ...
ನಿನ್ನಿಂದಲೆ ಹುಟ್ಟುವುದು ನನ್ನ ಹಗಲು,
ಇರುಳಲೂ ಅರಳಿಸುವೆ ನೀನು ಕನಸ ಸಂತೆ//

04 October 2010

ಭಾವದ ಒಡ್ದು ತುಂಬಿದೆ..

ನನ್ನ ಮರೆವಿನ ಕಡತ ನಿನ್ನ ನೆನಪುಗಳಿಂದ ತುಂಬಿಸಿರುವ,
ಪೊಳ್ಳು ಸಮಾಧಾನ ನನ್ನದೆಂದು/
ಖಾತರಿ ಮಾಡಿದವು...ಏಕಾಂತದಲ್ಲಿ ಮನವ ಕಲಕಿ,
ಭಾವಗಳೊಂದಿಗೆ ಅರಿವೆ ಇಲ್ಲದೆ ಕಂಬನಿ ತುಂಬಿಬಂದು//

01 October 2010

ಅಲ್ಪ ತೃಪ್ತ ನಾನು...

ನೀ ಹೇಳದ ಮಾತುಗಳಿಗೆಲ್ಲ ನಾನು ಕಿವಿಯಾದೆ,
ನಿನ್ನೆದೆ ಗುನುಗಿರಬಹುದಾದ ಸಾಲುಗಳನ್ನೆಲ್ಲ ಕದ್ದು ಕವಿಯಾದೆ/
ನೀನೂ ಒಂದೊಮ್ಮೆ ಏಕಾಂತದಲ್ಲಾದರೂ ನೆನಪಿಸಿ ಕೊಂಡಿರಬಹುದಾದ ಸುಳಿಗಾಳಿ ನಾನು,
ನಿದ್ದೆ ಅಪ್ಪಿದ ರಾತ್ರಿಗಳಲಿ ಕಾಡುವ ಕನಸ ಕನವರಿಕೆಯೂ ಆದೇನು//


ನಿನಗೇನೂ ಜಗತ್ತು ವಿಶಾಲವಾಗಿದೆ,
ನಾನೂ ನಿನ್ನನೆ ನನ್ನ ಮೂರು ಲೋಕವೆಂದೆ/
ನಿನ್ನದೊ ಕಡೆಯತನಕ ಅತ್ಯಾಪ್ತರ ಹಿಂಡಿನಲ್ಲಿ ಕಳೆದು ಹೋಗುವ ತವಕ,
ನನಗೂ ನಿನ್ನ ನೆನಪ ಜೊತೆಯೊಂದೆ ಸಾಕೆನಿಸಿದೆ ಕಟ್ಟಕಡೆಯ ಉಸಿರಿರುವತನಕ//

22 September 2010

ಕ್ಷುದ್ರನಾಗಿಯೆ ಉಳಿದು ಹೋದೆ....

ಹೇಳೋದು ಬಹಳಷ್ಟಿತ್ತು/
ತೋರಿಸೋದು ಇನ್ನೂ ಇಷ್ಟು ಬಾಕಿಯಿತ್ತು//


ಬತ್ತಲೆ ಕಾಲ್ಗಳಲ್ಲಿ ಬರುತ್ತಿದ್ದ ನಿನ್ನ...
ಭಾವಗಳ ಮೆತ್ತೆಯ ಹಾಸಿ ನಡೆಸಬೇಕಿತ್ತು,
ಕತ್ತಲೆ ಕಾಲವೆ ತುಂಬಿದ್ದ ನನ್ನ ಬಾಳಲಿ
ನಿನ್ನ ಕಣ್ ಬೆಳಕ ಕಂದೀಲು ಹಿಡಿದು ತಡವರಿಸದೆ ನಡೆಯಬೇಕಿತ್ತು//



ಬಾನ ಅಂಚಿಗೆ ಒರಗಿಸಿಟ್ಟ ನಿಚ್ಚಣಿಕೆಯಲಿ ಮೋಡದ ತುದಿಗೆ ನಿಚ್ಚಳ ಬೆಳಕಲಿ ನಿನ್ನ ಏರಿಸಬೇಕಿತ್ತು,
ಕ್ಷುದ್ರ ಪ್ರಪಂಚದ ಸಣ್ಣತನವನ್ನೆಲ್ಲ ಅಲ್ಲಿಂದಲೆ ನಿನಗೆ ಬೊಟ್ಟು ಮಾಡಿ ತೋರಿಸಬೇಕಿತ್ತು...
ಕಡೆಗಾದರೂ ಅಲ್ಲಿಂದ ಬಚಾವಾಗಿ ಬಂದ ಸಂತಸ ನಿನ್ನಲ್ಲಿ ಮೂಡಿಸಿ ನಿನ್ನ ಖುಷಿಯ ಎಲ್ಲೆ ಮೀರಿಸಬೇಕಿತ್ತು/
ಧನವಿಲ್ಲದ ನನ್ನಂತವರೆಲ್ಲ ಕೇವಲ ದನಕ್ಕೆ ಸಮಾನೆಂದು ಕಟಕಿಯಾಡುವ ಕುಹಕಿಗಳಿಗೆಲ್ಲ
'ನೋಡಿ ನನ್ನ ಸಂಪತ್ತು!' ಎಂದು ನಿನ್ನನೆ ತೋರಿಸಿ ಅವರೆಲ್ಲ ಕುರುಬುವುದನ್ನು ಕಂಡು ಗಹಗಹಿಸಬೇಕಿತ್ತು//



ಕಾವ್ಯಕಥೆಗಳಲ್ಲಿ ಮಾತ್ರ ಕೇಳಿ ಗೊತ್ತಿರುವ ಆ ಸುರಲೋಕವನ್ನೂ ನಿನ್ನ ಕಾಲಡಿ ತರಬೇಕಿತ್ತು,
ಅವರ ಅಮೃತದ ಮತ್ತು...ಅಲ್ಲಿನ ಅತ್ತರಿನ ಗತ್ತು ನಿನ್ನ ಮುಂದೆ ಸಾಟಿಯೇ? ಎಂಬ ಸವಾಲನ್ನು ಕಣ್ಣಲೆ ಮಿಂಚಿಸಿ....
ಅಲ್ಲಿದ್ದವರನ್ನೆಲ್ಲ ನಾಚಿಸ ಬೇಕಿತ್ತು/
ನಿನ್ನ ಮುಂದೆ ಅಲ್ಲಿರುವ ಸುರಸುಂದರ ಸುಂದರಿಯರೆಲ್ಲ ಎಷ್ಟು ಕುರೂಪಿಗಳು ಎಂಬ ವಾಸ್ತವದ ದೀಪ ಹಚ್ಚಬೇಕಿತ್ತು,
ದೇವರನ್ನೇ ನಂಬದ ನನ್ನ ಮನದಗೂಡಿನಲ್ಲಿ ತೂಗು ಹಾಕಿದ್ದ ನಿನ್ನ ಬಿಂಬವ ಅಲ್ಲಿನವರಿಗೆಲ್ಲ ತೋರಬೇಕಿತ್ತು...
ನೀನೆ ನನ್ನ ದೈವ ಎಂದು ಸಾರಿ ಸಾರಿ ಹೇಳಬೇಕಿತ್ತು//


ನಾವಾಗಲೆ ಬಿಟ್ಟು ಬಂದಿದ್ದ ನೆಲದ ಸಣ್ಣತನಗಳ ಧೂಳಲ್ಲಿ...
ಕೊಳೆಯಾಗಿದ್ದ ಮಿಥ್ಯೆಯ ಅಂಗಿ ಕಳಚಬೇಕಿತ್ತು,
ನನ್ನೆಲ್ಲ ಅಹಂನ ಆವರಣ ಕಳಚಿ....
ನಿನ್ನೆದುರು ಸಂಪೂರ್ಣ ಬೆತ್ತಲಾಗಬೇಕಿತ್ತು/
ನಿನ್ನ ಕಾಂತಿಯ ಮುಂದೆ ತಾವೆಷ್ಟು ಮಂಕು ಎಂಬುದನ್ನು...
ತಾರೆ ಚುಕ್ಕಿಗಳಿಗೆ ಮನವರಿಕೆ ಮಾಡಿಸಬೇಕಿತ್ತು
ಸ್ವಚ್ಛಂದ ಹಾರುವ ಸುಖವೇನು? ಎನ್ನುವುದ ಬಾನ ವಿಶಾಲತೆಗೆ ಮನಸೋತ....
ನಿನ್ನ ಕನವರಿಕೆಯಾಗಿಸಬೇಕಿತ್ತು/
ಬಲಿಯನ್ನು ಬಲಿ ಹಾಕಿದ ವಾಮನನಂತೆ ಮೂಜಗವನ್ನೂ...
ಖಾಲಿ ಕಾಲಲ್ಲೆ ಅಳೆದು ಆಳಬೇಕಿತ್ತು,
ನೀನಿತ್ತಿರುತ್ತಿದ್ದ ಒಲವಿಗೆ ಖಂಡಿತ ಆ ಬಲವಿರುತ್ತಿತ್ತು//



ಆದರೆ ನೀನೂ ಅಪ್ಪ ಅಮ್ಮ ಗೆಳೆಯ ಗೆಳತಿಯರು ನಿನ್ನೂರು ನಿನ್ನ ಕನಸುಗಳ...
ಸೀಮಿತ ಜಾತ್ರೆಯಲ್ಲಿ ಕಳೆದುಹೋದೆ,
ನಿನ್ನ ನಿರೀಕ್ಷೆಯಲ್ಲೆ ಅದಾಗಲೆ ಬಾನನೌಕೆ ಏರಿ ಕುಳಿತಿದ್ದ ನಾನೊ.....
ಇತ್ತ ಇಲ್ಲೂ ಉಳಿಯದೆ ಅತ್ತ ಅಲ್ಲೂ ಸಲ್ಲದೆ ತ್ರಿಶಂಕುವಾಗಿ ಕುಗ್ಗಿ ಇಳಿದು ಹೋದೆ/
ಕಮರಿದ ಕಂಗಳಲ್ಲಿ ಹತಾಶೆಯ ಎಣ್ಣೆ ತೀರಿದ ಹಣತೆಯಾಗಿ...
ಉಸಿರಾಡುತ್ತಿದ್ದರೂ ನಡೆದಾಡುವ ಹೆಣವಾಗಿ,
ಕಡೆಗೂ ನಾನು ಈ ನೆಲದ ಕ್ಷುದ್ರನಾಗಿಯೆ ಉಳಿದು ಹೋದೆ//


ಹೇಳೋದು ಬಹಳಷ್ಟಿತ್ತು/
ತೋರಿಸೋದು ಇನ್ನೂ ಇಷ್ಟು ಬಾಕಿಯಿತ್ತು//

17 September 2010

ನೀನಿಲ್ಲವಲ್ಲ....

ಇದಕ್ಕೂ ಮೊದಲೂ ಹೀಗೆಯೆ ಅಬ್ಬರಿಸಿತ್ತು ಮೋಡ,
ಈ ಹಿಂದೆಯೂ ಹೀಗೆ ಹನಿದಿದ್ದ ಮಳೆ ತುಂಬಿತ್ತು ನನ್ನೆದೆಯ ಕೊಡ/
ಕನಸುಗಳ ಚಾದರ ಹೆಣೆದ ಕೈಬೆರಳುಗಳಿಗೆ ಹಿಂದೆಂದೂ ಈ ಪರಿ ಒಂಟಿತನ ಕಾಡಿರಲಿಲ್ಲ,
ಏಕೆಂದರೆ ಆಗೆಲ್ಲ ಅವುಗಳ ಸಂಗಡ ನಿನ್ನ ಕೈ ಹಣಿದಿತ್ತಲ್ಲ//


ಮುಸುಕು ಸಂಜೆಯ ಮಬ್ಬು ಬೆಳೆಕಿಗೂ ನನ್ನ ವೇದನೆಯ ಅರಿವಿಲ್ಲ,
ಮುಳುಗಿ ಮರೆಯಾದ ನೇಸರ ಕೆಂಪಿಗೂ ನನ್ನೊಳಗಿನ ಸಂಕಟ ತಿಳಿದಿಲ್ಲ/
ಕತ್ತಲೆಂದರೆ ಈಗೀಗ ಯಾಕೋ ವಿಪರೀತ ಭಯ,
ಜೊತೆಗಿದ್ದು ತಬ್ಬಿ ಸಂತೈಸಲು ಮೊದಲಿನಂತೆ ಇಲ್ಲೀಗ ನೀನಿಲ್ಲವಲ್ಲ//

14 September 2010

ಗಝಲ್...

ಈ ಕ್ಷಣಗಳ ಮಡಿಲಿನಲ್ಲಿ ಪರಿಶುದ್ಧವಾದ ಸಂಬಂಧಗಳಿವೆ,
ಒಲವಿನ ಯಾವುದೊ ಕವನ ಗುನುನುನಿಸೊ ದೇವತೆಗಳ ಮೃದು ಆಲಾಪಗಳಿವೆ/
ರಾಗಗಳೆ ತುಂಬಿವೆ ಮಲಗಿರುವ ಎದ್ದಿರುವ ಎಲ್ಲದರಲ್ಲೂ,
ಮೋಹಕ ಸುಗಂಧವೆ ಹಬ್ಬಿವೆ ಸುತ್ತಲೂ ಅರಳಿರುವ ಭಾವಗಳಲ್ಲೂ//

( 'ಜೋಧಾ-ಅಕ್ಬರ್' ಚಿತ್ರಕ್ಕಾಗಿ ಕವಿ ಜಾವೇದ್ ಅಖ್ತರ್ ಲೇಖನಿ ಹನಿಸಿದ ಚಂದದ ಸಾಲುಗಳಿವು)

13 September 2010

ನಿನ್ನ ಕಂಗಳ ಕಾಂತಿ....

ನೀ ಬರುವ ಹೆಜ್ಜೆ ಸಪ್ಪಳ ಕೇಳಿ....ಬೆನ್ನ ಹಿಂದೆ ಮರೆಯಾಗಿಸಿದ ಶೀಷೆಯಲಿ ತುಂಬಿದ್ದ ಕೇವಲ ನೀರು,
ನಿನ್ನ ಮಾದಕ ನೋಟ ಬಿದ್ದದ್ದೇ ನಶೆಯೇರಿಸುವ ಸುರೆಯಾಯಿತು/
ನಿರ್ಭಾವುಕವಾಗಿದ್ದ ಮೋಡ ಮುಸುಕಿದ ಆ ರಾತ್ರಿಯೂ,
ನಿನ್ನ ಕಂಗಳ ಕಾಂತಿ ತುಂಬಿಕೊಂಡು ಹೊಳೆಯುವ ಹುಣ್ಣಿಮೆಯಾಯಿತು//

ಮದಿರೆಯ ದಾಸನಲ್ಲದ ನನಗೂ ಏರಿಸಿದೆ ನಶೆ,
ಮತ್ತಿನ ಅನೂಹ್ಯ ಲೋಕಕ್ಕೆ ಕೈಹಿಡಿದು ಕರೆದೊಯ್ದೆಯಲ್ಲ...ಹೇಳು ನೀನ್ಯಾರು?/
ನೀ ಕರೆದಲ್ಲಿಗೆ ತಕರಾರಿಲ್ಲದೆ ಬರುವ ಹುಂಬತನ ಹುಟ್ಟಿಸಿರುವೆ ನನ್ನಲ್ಲಿ,
ಮರುಳುಗೂ ಮರುಳು ಹೆಚ್ಚಿಸುವಂತೆ ಆಗಿರುವೆ ನಾನು...ಹೇಳು ನಿನಗೆ ನಾನ್ಯಾರು?//

ಕೇವಲ ನಿನ್ನ ಜೊತೆ ಮಾತ್ರ.....

ಮೆಲ್ಲಗೆ ಬಂದು ನನ್ನ ತೋಳನು ತಾಕು,
ಕಣ್ಣಲ್ಲೆ ಮಾತನು ಹೊಮ್ಮಿಸುತ್ತ ...ನಾನು ಗೊತ್ತಾಯ್ತ? ಎಂದಷ್ಟೇ ಕೇಳು ಸಾಕು/
ಮೆತ್ತನೆ ಅಂಗೈಯಿಂದ ನನ್ನ ಹಸ್ತವನ್ನು ಅಮುಕಿ ಸುಮ್ಮನೆ ಜೊತೆ ಕುಳಿತುಕೊ,
ನಾ ಹೊದ್ದ ಮೌನದ ಚಾದರವನ್ನ ನಿನಗೂ ಹೊದೆಸುತ್ತೇನೆ...
ಅದರ ಒಳಗೆ ಹುದುಗಿರುವ ಭಾವನೆಗಳ ಆಳದಲ್ಲಿ ಇಬ್ಬರೂ ಕಳೆದು ಹೋಗೋಣ//


ಮರಳಿ ಹಳೆಯ ಕನಸಲ್ಲಿ ಕರಗುವಂತಿದ್ದರೆ,
ಮತ್ತೆ ಕಳೆದ ದಿನಗಳ ತಿಳಿಗೊಳದಲಿ ಈಜುವಂತಿದ್ದರೆ/
ಭಾವನೆಗಳ ಬಾನಲ್ಲಿ ಸ್ವಚ್ಛಂದ ಹಾರುವಂತಿದ್ದರೆ,
ಮನಸು ಬೇಡುತ್ತಿದ್ದುದು......ಕೇವಲ ನಿನ್ನ ಜೊತೆ ಮಾತ್ರ//

11 September 2010

ಮರೆತ ಮೇಲೆ...

ಕಣ್ಣೀರ ಮಳೆ ಹರಿಸುವುದರಿಂದ ಅದೃಷ್ಟ ಬದಲಾಗುವಂತಿದ್ದರೆ,
ಈ ಪ್ರಪಂಚದಲ್ಲಿ ಸ್ಮಶಾನಗಳೇ ಇರುತ್ತಿರಲಿಲ್ಲ...
ಅಲ್ಲಿ ಯಾವುದೆ ಕನಸುಗಳು ಸಮಾಧಿಗಿಳಿಯುತ್ತಿರಲಿಲ್ಲ/
ಈ ಎರಡು ಕೈಗಳಷ್ಟೇ ನನ್ನವು...
ಅದರ ಮೇಲೆ ಮೂಡಿರುವ ರೇಖೆಗಳಲ್ಲಿ ದುರಾದೃಷ್ಟವ ಕೊರೆದಿರೊ ವಿಧಿ,
ನೀನು...ನಿನ್ನ ನೆನಪು//


ಕಳೆದು ಹೋದ ಒಲವನ್ನ ಮತ್ತೆ ಮತ್ತೆ ನೆನಪಿಸಿಕೊಳ್ಳುವಾಗ,
ಒಂದೊ ಮದಿರೆಯಿಂದ ಗಂಟಲು ಹಸಿಯಾಗಿರಬೇಕು....
ಇಲ್ಲವೆ ನಿದಿರೆ ಮರೆತ ಕಣ್ಣುಗಳು ಪಸೆಯಾಗಿರಬೇಕು/
ಮೊದಲನೆಯದರಲ್ಲಿ ನನಗೆ ಆಸಕ್ತಿಯಿಲ್ಲ,
ಎರಡನೆಯದರಿಂದ ನನಗೆ ಮುಕ್ತಿಯೆ ಇಲ್ಲ//

ಕಾಮನೆಯ ಬಿಲ್ಲು...

ಸರಳ ಪದಗಳಲಿ ನನ್ನ ಪ್ರಣಯ ನಿವೇದಿಸಿಕೊಳ್ಳಲಾಗದ ಮೇಲೆ,
ನಾನು ಕವಿಯಾಗಿ ಏನು ಸುಖ?
ಕೇವಲ ಅದು ನನ್ನ ಭ್ರಮೆಯಿರಬಹುದೆ?/
ಮನದ ಮಾತುಗಳನು ಲೇಖನಿಯ ಮೊನೆಗೆ ದಾಟಿಸಿ...
ನಿನ್ನೆದೆಯಲಿ ಕಾಮನೆಯ ಬಿಲ್ಲು ಅರಳಿಸಲಾಗದ ಮೇಲೆ,
ನೀನು ನನ್ನ ಒಲವನ್ನ ಕಡೆಗಣ್ಣಲೂ ನೋಡದೆ ಕಡೆಗಣಿಸುತ್ತಿರೋದು....
ವಾಸ್ತವವಾಗಿ ನಿಜವಿರಬಹುದೆ?!//

10 September 2010

ಒಂದು ಚರ್ಚೆ...

ಸಿನೆಮಾ ಒಂದು ಶೋ ಬಿಸನೆಸ್ ಆಗಿರುವುದರಿಂದ ಇಲ್ಲಿ ಅರ್ಥ-ಅನರ್ಥಗಳಿಗಿಂತ ಲಾಭ-ನಷ್ಟದ ಲೆಕ್ಖಾಚಾರಗಳೆ ಯಾವಾಗಲೂ ಮುಖ್ಯವಾಗುತ್ತವೆ.ಹೀಗಾಗಿಯೆ 'ಮುಂಗಾರು ಮಳೆಯೆ' 'ರತ್ತೋ ರತ್ತೋ ರಾಯನ ಮಗಳೆ' 'ನನ್ನ ಎದೆಯಲಿ ಇಟ್ಟ ನಾಲ್ಕು' 'ಒಂದೇ ಸಮನೆ ನಿಟ್ಟುಸಿರು' 'ಓ ಕನಸ ಜೋಕಾಲಿ' 'ಒಂದೊಂದೇ ಬಚ್ಚಿಟ್ಟ ಮಾತು' 'ಯಾರೋ ಯಾರೋ ಗೀಚಿದ' 'ದೂರ ಸ್ವಲ್ಪ ದೂರ'ಗಳಂತಹ ಸದಭಿರುಚಿಯ ಸಾಲು ಗೀಚಿದ ಯೋಗರಾಜಭಟ್ಟರ ಲೇಖನಿಯೇ 'ಹಳೆ ಪಾತ್ರೆ ಹಳೆ ಕಬ್ಣ' 'ಸ್ವಲ್ಪ ಸೌಂಡು ಜಾಸ್ತಿ ಮಾಡು' 'ಹೊಸ ಗಾನ ಬಜಾನ' 'ಲೈಫು ಇಷ್ಟೇನೆ' 'ಎಕ್ಕ ರಾಜ ರಾಣಿ' 'ಇಡ್ಲಿ ವಡೆ ತಿನ್ನೋದಕ್ಕೆ' 'ಪಂಚರಂಗಿ ಹಾಡುಗಳು' ತರಹದ ತಲೆಕೆಟ್ಟ ಸಾಲುಗಳನ್ನೂ ತಡೆ ಇಲ್ಲದೆ ಸುರಿಸುತ್ತವೆ.ಇಂತಹ ಅನರ್ಥಕಾರಿ ಹಾಡುಗಳು ಅಲ್ಪಾಯುಶಿ ಅನ್ನೋದು ಬೇರೆ ಮಾತು.


ಇಲ್ಲಿ ಅವರು ಹೀಗೂ ಬರಿತಾರೆ! ಎಂಬ ಅಚ್ಚರಿಯೇ ಅನಗತ್ಯ.ಹೀಗೆ ಬರೆದದ್ದು ಹಣ ಹುಟ್ಟುವ ಮೂಲವಾಗಿರುವುದರಿಂದಲೇ ಅವರು ಹೇಗೆ ಬೇಕಾದರೂ ಬರೀತಾರೆ ಅನ್ನುವ ಕಾಮನ್ ಸೆನ್ಸ್ ನಮಗಿರಬೇಕಷ್ಟೆ.ಇನ್ನು ಚರ್ಚೆಯ ವಿಚಾರ ಕೆಲಸಕ್ಕೆ ಬಾರದ ಕಾಡುಹರಟೆಗೆ ಚರ್ಚೆಯ ದರ್ಜೆ ಕೊಟ್ಟು ಚೂರು ಹೆಚ್ಚೇ ಗೌರವ ತೋರಿಸಿದ್ದು ನನ್ನದೆ ತಪ್ಪು.ಅದು ಹಾಗೇನೆ, "ಇಷ್ಟವಾದ್ದು ಚರ್ಚೆ, ಇಷ್ಟವಿಲ್ಲವಾದ್ದು ಅನವಶ್ಯಕ ಹರಟೆ, ಗಾಂಪರ ಗುಂಪಿನ ಮೂರ್ಖತನಗಳು:)" ಎಂಬ ಸಿನಿಕರ ಜಾತ್ರೆಯಲ್ಲಿ ಸರಿಯಾಗಿ ಮರ್ಮಕ್ಕೆ ಮುಟ್ಟುವಂತೆ ಮಾತನಾಡಿದವ ತಾನು ಹೇಳಲು ಹೊರಟಾಗ ಚರ್ಚೆಯನ್ನಗಿಸುತ್ತಲೂ,ತನಗೆ ಬೇಡವಾದಾಗ ಮೂರ್ಖರ ಪ್ರಲಾಪ ಅನ್ನುತ್ತ ಇರೋವಂತೆ ಕಾಣೋದು ಅವರವರ ಯೋಚನೆಯ ಮಿತಿಯೆ ಹೊರತು.ಹೇಳುವ ಬಡಪಾಯಿ ಎಷ್ಟು ಜನರ ಬಾಯಿ ತಾನೇ ಮುಚ್ಚಿಸಿಯಾನು!.

ಉಳಿದಂತೆ ಭಟ್ಟರ ಅಭಿರುಚಿಯ ವಿಷಯಕ್ಕೆ ಬಂದರೆ ಅದು ಕೆಟ್ಟಿದೆ ಎನ್ನುವ ವಾದ ನನಗೆ ಸಮ್ಮತವಲ್ಲ.ಏನೂ ಇಲ್ಲ ಅನ್ನುವ ಸಂಗತಿಗಳನ್ನೂ ಸೊಂಟದ ಕೆಳಗಿಳಿಸದೆ ತಮ್ಮ ಚಿತ್ರಗಳಲ್ಲಿ ಹೇಳುವ ಅವರ ಶೈಲಿ ಖಂಡಿತ ಸ್ಕೀಕಾರಾರ್ಹ."ಕಥೆಯಿಲ್ಲದ ಸಿನೆಮಾವನ್ನು ಅದ್ಧೂರಿಯಾಗಿಸೋದು ಹೆಣಕ್ಕೆ ಮಾಡುವ ಶೃಂಗಾರ" ಎನ್ನುವ ಪ್ರಕಾಶ್ ತರಹದ ತರುಣ ನಿರ್ದೇಶಕರೂ ಇದೇ ಕಾಲದಲ್ಲಿ ಚಾಲ್ತಿಯಲ್ಲಿರೋದೂ ಅಷ್ಟೇ ನಿಜ.ಇತ್ತೀಚಿಗೆ ಭಟ್ಟರ ಮನೆಯಾಕೆ ರೇಣುಕ ತಮ್ಮ ಮಗುವಿಗೆ 'ಪುನರ್ವಸು' ಎಂದು ಹೆಸರಿಟ್ಟಿರೋದಾಗಿ ಹೇಳಿದರು.ಅದೊಂದೇ ಸಾಕು ಭಟ್ಟರ ಸದಭಿರುಚಿಗೆ ಮೊಹರು ಹಾಕಲು.ನಾವೆಲ್ಲಾ ಮರೆತೆ ಬಿಟ್ಟಿರುವ ಮಳೆ ನಕ್ಷತ್ರ ಅವರ ಬಾಳಲ್ಲಿ ಮತ್ತೆ ಮೂಡಿ ಬಂದಿದೆ.ಅದು ಅವರ ಸಂಭ್ರಮ ಅನುಗಾಲ ಹೆಚ್ಚಿಸಲಿ.


ಇನ್ನೊಂದು ಸಂಗತಿಯನ್ನ ಇಲ್ಲಿ ನೆನಪಿಸಿಕೊಳ್ಳೋದು ಉಚಿತ ಅನ್ನಿಸುತ್ತೆ.ಅದು ಭಟ್ಟರ ಅಂದು ಕೊಂಡದ್ದನ್ನು ಸಾಧಿಸುವ ಸ್ವಭಾವ.'ಮುಂಗಾರು ಮಳೆ' ತೆರೆಕಂಡು ಹೆಸರು ಮಾಡುತ್ತಿದ್ದ ಹೊತ್ತದು.'ಹೊಸ ದಿಗಂತ'ದ ಯುಗಾದಿ ವಿಶೇಷಾಂಕಕ್ಕಾಗಿ ನಮ್ಮ ಮನೆ ಸಮೀಪದ 'ಹೋಟೆಲ್ ಇಂದ್ರಪ್ರಸ್ಥ'ದಲ್ಲಿ ಭಟ್ಟರನ್ನ ಸಂದರ್ಶಿಸುವಾಗ ದಿಗಂತನನ್ನು ಹಾಲಿ'ವುಡ್' ನಟನೆಂದು ಛೇಡಿಸಿದ್ದೆ.ಆದರೆ ಭಟ್ಟರು ಅದನ್ನೇ ಸವಾಲಾಗಿ ತೆಗೆದು ಕೊಂಡರಷ್ಟೇ ಅಲ್ಲ ತಮ್ಮ ಮುಂದಿನ ಎರಡು ಸಿನೆಮಾಗಳಿಗೆ ಆತನೇ ನಾಯಕ ಎಂದು ಅಲ್ಲಿಯೆ ಘೋಷಿಸಿಬಿಟ್ಟರು! ದಿಗಂತ ಇನ್ನೂ ಚಡ್ಡಿ ಹಾಕಲು ಬಾರದ ವಯಸ್ಸಿನಿಂದಲೆ ನನಗೆ ಪರಿಚಿತ,ಅವನ ಅಣ್ಣ ಆಕಾಶ್ ಶಾಲೆಯಲ್ಲಿ ನನಗಿಂತ ಒಂದು ತರಗತಿ ಮುಂದಿದ್ದ ಇವನು ನನಗಿಂತ ವರ್ಷಕ್ಕೆ ಜೂನಿಯರ್.ಯಾವಾಗಲೂ ಬೇಬಿಫುಡ್ ನ ಮಾಡಲ್ ನಂತೆ ನನ್ನ ಕಣ್ಣಿಗೆ ಕಾಣಿಸುವ ದಿಗಂತ ನನ್ನ ಪ್ರಕಾರ ಉತ್ತಮ ನಟನಲ್ಲ,ರೂಪದರ್ಶಿಯಾಗಲು ಹೇಳಿ ಮಾಡಿಸಿದಂತಿದ್ದಾನೆ.ಹೀಗಿದ್ದರೂ ನಟನಾಗಿ ಅವನ ವೃತ್ತಿ ಬದುಕಿನ ಮೊದಲ ಸಂದರ್ಶನ ತೆಗೆದುಕೊಂಡಿದ್ದು ನಾನೆ; 'ಕರ್ಮವೀರ'ದಲ್ಲಿ ನಾನು ಬರೆಯುತ್ತಿದ್ದ ಸಿನೆಮಾ ಅಂಕಣದಲ್ಲಿ ಅದು ಪ್ರಕಟವಾಗಿತ್ತು.ಇನ್ನು ಒಂದು ಪ್ರಕರಣ 'ಗಾಳಿಪಟ'ತೆರೆ ಕಂಡ ಹೊಸತರಲ್ಲಿ ನಡೆದಿದ್ದು.'ವಿಜಯ ಕರ್ನಾಟಕ'ದ ಸಾಪ್ತಾಹಿಕ ಪುರಾವಣೆಗೆ ನಾನು ಹಾಗು ರುದ್ರಪ್ರಸಾದ್ ಒಟ್ಟಾಗಿ ಸೂರಿ ಜೊತೆಗೆ ಭಟ್ಟರನ್ನು ಸಂದರ್ಶಿಸಿದ್ದೆವು (ಸದರಿ ಸಂದರ್ಶನದಲ್ಲಿ ನಾನು ಕೇವಲ ಛಾಯಾಗ್ರಾಹಕ ಮಾತ್ರ ,ಅಸಲು ಸಂದರ್ಶಕ ರುದ್ರಪ್ರಸಾದ್ ಶಿರಂಗಾಲ.ಇದೇ ಸಂದರ್ಶನದ ಲೇಖನ ರೂಪಾಂತರ ನಂತರ "ವಿಕ್ರಾಂತ ಕರ್ನಾಟಕ'ದಲ್ಲೂ ಪ್ರಕಟವಾಗಿತ್ತು).ಆಗಲೂ ನಾನು ದಿಗಂತನ ನಟನೆಯನ್ನು ಟೀಕಿಸಿದ್ದೆ.ಪುನೀತ್ ಜೊತೆ 'ಲಗೋರಿ'ಆಡುವ ಭಟ್ಟರ ಕನಸು ಕೆಟ್ಟಿದ್ದ ದಿನಗಳವು.ಆಗಲೂ ಭಟ್ಟರು ಮುಂದಿನ 'ಮನಸಾರೆ'ಗೂ ಅವನನ್ನೇ ಆಯ್ದುಕೊಂಡರು.ಅನಂತರ 'ಮಂಗಳ'ದ ದೀಪಾವಳಿ ವಿಶೇಷಾಂಕಕ್ಕಾಗಿಯೂ ಅವರನ್ನು ಮಾತನಾಡಿಸಿದ್ದೆ ಯಥಾಪ್ರಕಾರ ಅವರ ಸಿನೆಮಾ ನಾಯಕನ ಕೃತಕ ನಟನೆಯ ಬಗ್ಗೆ ನನ್ನ ಲೇವಡಿಇತ್ತು.ಆದರೆ 'ಪಂಚರಂಗಿ'ಯಲ್ಲೂ ಮರಳಿ ದಿಗಂತನೆ ನಾಯಕ ಪಾತ್ರಕ್ಕೆ ಅವರ ಆಯ್ಕೆಯಾಗಿದ್ದ.ಈ ನಾಲ್ಕೂ ಚಿತ್ರಗಳಲ್ಲಿ ಗಮನಿಸುತ್ತ ಬಂದಿದ್ದೇನೆ ಒಬ್ಬ ನಟನಾಗಿ ದಿಗಂತ ಸುಧಾರಣೆಯ ಹಾದಿಯಲ್ಲಿದ್ದಾನೆ (ಹಿಂದೊಮ್ಮೆ ಏಕ್ತಾ ಕಪೂರ್ ತಮ್ಮ ಧಾರಾವಾಹಿಗಳ ಸರಣಿ ನಟನಾಗಿ ದಿನಕ್ಕೊಂದು ಲಕ್ಷದ ಸಂಭಾವನೆಯ ಮೇಲೆ ನಟಿಸಲು ಕೇಳಿದಾಗ ; ಹಿಂದಿ ಬಾರದು ಎಂದು ಹೆದರಿ ಹಿಂಜರಿದ ಪೆಕರ ಇವನೇನ? ಅನ್ನಿಸುವಷ್ಟು ಮಟ್ಟಿಗೆ!)' ಇದ್ದಕ್ಕೆಲ್ಲ ಅವನು ಭಟ್ಟರಿಗೆ ಋಣಿಯಾಗಿರಬೇಕು.ಇದು ಭಟ್ಟರು ಹಿಡಿದ ಕೆಲಸ ಬಿಡದೆ ಸಾಧಿಸುವ ಅವರ ಛಲದ ಕುರಿತಿರುವ ಪುರಾವೆ.


ಇದುವರೆಗೂ ಯೋಗರಾಜ ಭಟ್ಟರು ಗೀಚಿದ ಕವಿತೆಗಳಲ್ಲಿ ನನಗೆ ಅತ್ಯಂತ ಆಪ್ತವಾದ ಕವನದ ಹೆಸರು 'ಕನ್ನಡಿಯಂಗಡಿಯಲ್ಲಿ...'.ಎರಡುವರ್ಷದ ಹಿಂದೆ 'ಕನ್ನಡ ಪ್ರಭ'ದ ದೀಪಾವಳಿ ವಿಶೇಷಾಂಕದಲ್ಲಿ ಅದು ಪ್ರಕಟವಾಗಿತ್ತು ( ಅದೇ ಸಂಚಿಕೆಯಲ್ಲಿ ನಟ ರಮೇಶ್ ಬರೆದ ಒಂದು ಕಥೆಯೂ ಇತ್ತು).ತುಂಟತನದಿಂದ ಕೂಡಿದ್ದ,ಕನ್ನಡಿಗಳಿಗೂ ಒಂದು ವ್ಯಕ್ತಿತ್ವ ಆರೋಪಿಸಿ ಬರೆದಿದ್ದ ಕವಿತೆ ಅದು.ಸಿನೆಮಾ ಭಾಷೆಯಲ್ಲಿ ಹೇಳಬೇಕಾದರೆ 'ಮೀಟರ್'ನ ಹಂಗಿಲ್ಲದ ಸರಾಗ ಕವನ ಎನ್ನುವ ಕಾರಣಕ್ಕಾಗಿ ಬಹುಷಃ ಆ ಕವನದ ಹರಿವು ಕೇವಲ ಪದಗಳ ಚಮತ್ಕಾರಕ್ಕಷ್ಟೆ ಸೀಮಿತವಾಗಿರಲಿಲ್ಲ.ಹೀಗೆ ಕವಿಯಾಗಿ ಪರಿಚಿತರಾದ ಭಟ್ಟರು 'ಘಾ'ಯಕರಾಗಲು ಹೊರಟಾಗ ಕೇಳುಗರಿಗೆ ಅಂಗಿ ಹರಕೊಳ್ಳುವಂತಾಗೋದೂ ಅಷ್ಟೇ ನಿಜ.'ಮಿಸ್ಸಿಸಿಪ್ಪಿ ಮಸಾಲ'ದಿಂದ ಕಥೆಯೊಂದಿಗೆ ಹಿನ್ನೆಲೆ ಬಂಬೋ ಸಂಗೀತವನ್ನೂ ಎಗರಿಸಿ,ಸಾಲದ್ದಕ್ಕೆ ಮೂಗಿನಲ್ಲಿ ಹಾಡಿ ಅವರು ಕೊಡುವ ಹಿಂಸೆಗೆ ಕ್ಷಮೆಯಿಲ್ಲ!

ಒಂದು ಯಕಶ್ಚಿತ್ ಹರಟೆಗೆ ಇಷ್ಟೆಲ್ಲಾ ದೀರ್ಘ ವಿವರಣಾತ್ಮಕ ಉತ್ತರ ಕೊಡುವುದು ಸಾಧುವೂ ಅಲ್ಲ.ಅಷ್ಟು ಸಮಯ-ತಾಳ್ಮೆ ನನ್ನಲ್ಲೂ ಇಲ್ಲ ಎನ್ನುವುದು ನಿಜವಾದರೂ.ನನ್ನ ದೃಷ್ಟಿ ಕೋನದ ಬಗ್ಗೆ ಅಪಾರ ಅರ್ಥಮಾಡಿಕೊಂಡಿರುವ ಮೇಧಾವಿಗಳಿಗೆ ನನ್ನ ಅಸಲು ಬಿನ್ನಹದ ಅರಿಕೆ ಮಾಡುವ ಉದ್ದೇಶದಿಂದಷ್ಟೇ ಇದನ್ನು ವಿವರಿಸಿದ್ದು.ಇದನ್ನು ಅತಿಮರ್ಯಾದೆಯನ್ನಾಗಿ ಅಪಾರ್ಥ ಮಾಡಿಕೊಂಡರೆ.once again ಅದು ನನ್ನ ತಪ್ಪಲ್ಲ.

09 September 2010

ನೀನಿಲ್ಲ.

ನಿನ್ನ ತಟ್ಟದ ನನ್ನ ಕವನಗಳು ಬರಿ ಬರಡು,
ನಿನ್ನ ತಲುಪದ ನನ್ನ ಕನಸುಗಳು ನಿಚ್ಚಳ ಕುರುಡು/
ಭಾವನೆಗಳ ಜಡಿಮಳೆ ನನ್ನೊಳಗೆ ಸುರಿದರೇನು ಸುಖ...
ಅದರಲ್ಲಿ ನೀ ತೋಯದ ಮೇಲೆ,
ಮಾತುಗಳ ಮಂಟಪ ಅದೆಷ್ಟೇ ಚಂದವಾದರೂ ಏನು ಹಿತ....
ನೀನದರಲ್ಲಿ ಬಂದು ಕೂರದ ಮೇಲೆ//


ಬಾನಿನ ನೀಲಿಯೆಲ್ಲ ಕರಗಿದರೂನು,
ನಡು ಸಾಗರದ ಹಸಿರು ಹೇಳ ಹೆಸರಿಲ್ಲದಾದರೂನು/
ಬೆಳ್ಳಿ ಮೋಡಗಳೆಲ್ಲ ಮುನಿದು ಕಡು ಕಪ್ಪಾದರೂನು,
ಎದೆಯ ತುಂಬಿದ ಭಾವದ ಅಣೆಕಟ್ಟೆ ಇನ್ನೂ ಒಡೆದಿಲ್ಲ....
ನಿರೀಕ್ಷೆ ಬಾವಿಯ ಸೆಳೆಯ ಕಣ್ಣು ಇನ್ನೂ ಬತ್ತಿಲ್ಲ//

ಪಂಚರ್ ಟೈರಿನ ರಿಸ್ಕೀ ಪಯಣ...

ಉತ್ತಮ ಚಿತ್ರವೊಂದಕ್ಕೆ ಬೇಕಾದುದು ಬಿಗಿಯಾದ ಚಿತ್ರಕಥೆಯೆ ಹೊರತು ಕಥೆಯಲ್ಲ! ಎಂಬ ವಾದವೊಂದಿದೆ.ಹೊಸ ಹುಮ್ಮಸ್ಸಿನ,socalled ಫಾರ್ಮುಲಗಳಿಗೆ ಜೋತು ಬೀಳದ ಚಿತ್ರಗಳದ್ದೆಲ್ಲ ಅದೆ ಮೂಲ ಮಂತ್ರ.'ಪಂಚರಂಗಿ'ಯ ಮೂಲಕ ಯೋಗರಾಜ ಭಟ್ಟರು ಪಠಿಸುತ್ತಿರೋದೂ ಕೂಡ ಅದನ್ನೆ.ಇಲ್ಲಿ ಕಥೆಯ ಹಂಗಿಲ್ಲ,ಎಲ್ಲವನ್ನೂ-ಎಲ್ಲರನ್ನೂ ಲೇವಡಿ ಮಾಡುವ ಮಾತಿನ ದಭದಭೆಯಿದೆ.ಚಿತ್ರ ಕಥೆ ಸಶಕ್ತವಾಗಿದೆ.ಸಿರಿಲ್ಯಾಕ್ ಮಾಡಲ್ ದಿಗಂತ-ತುಂಡುಚಡ್ಡಿ ತೊಟ್ಟ ನಿಧಿ ಸುಬ್ಬಯ್ಯ ಭಟ್ಟರ ತಾಳಕ್ಕೆ ತಕ್ಕ ಹೆಜ್ಜೆ ಹಾಕಿದ್ದರೆ,ಅವರ ಲೇಖನಿಯ ವ್ಯಂಗ್ಯದ ಮೊನಚಿಗೆ ರಾಜು ತಾಳಿಕೋಟೆ-ಸುಧಾಕರರ ನಾಲಗೆ ಸಾಣೆ ಹಿಡಿದಿದೆ.ಪಡ್ಡೆಗಳ ಪರ್ಫೆಕ್ಟ್ ಸ್ಲಾಂಗ್ ಆಗಲು ಲಾಯಕ್ಕಾಗಿರುವ ವಿಚಿತ್ರ ಹಾಡು'ಗಳು' ಇವೆಲ್ಲವನ್ನೂ ಸೇರಿಸಿ ತುಂಬಾ ಸರಳವಾಗಿ ಯೋಗರಾಜ ಭಟ್ಟರು ಪ್ರೇಕ್ಷಕರನ್ನು ಯಾಮಾರಿಸಿದ್ದಾರೆ.ಒಟ್ಟಿನಲ್ಲಿ ಅವರ ಪ್ರಕಾರ ಲೈಫು ಇಷ್ಟೇನೆ!

ಆಸಕ್ತಿಕರ ಸಂಗತಿಯೇನೆಂದರೆ ಲೈಫು ಇಷ್ಟೆ ಅಲ್ಲದೆ ಇನ್ನೂ ಇರೋದರತ್ತ ಭಟ್ಟರ ಜಾಣ ಮರೆವು.ಕನ್ನಡದ ನಿರ್ದೇಶಕರಾದ ಭಟ್ಟರು ಹಾಲಿವುಡ್ ತಳಿಯ ಹಿಂಗ್ಲಿಶ್ ನಿರ್ದೇಶಕಿ ಮೀರಾ ನಾಯರ್ ಚಿತ್ರಗಳನ್ನ ನೋಡೋದು ತಪ್ಪೇನಲ್ಲ.ಆದರೆ ಇಂಪೋರ್ಟೆಡ್ ಮಾಲಿನ ಮೇಲೆ ತನ್ನ ಹೆಸರನ್ನು ಬೆರೆದು ಲೋಕಲ್ ಮಾರುಕಟ್ಟೆಗೆ ಸ್ಮಗ್ಲಿಂಗ್ ಮಾಡೋದು ಮಾತ್ರ ಹಾಸ್ಯಾಸ್ಪದ.ಯೋಗರಾಜ ಭಟ್ಟರಿಗೆ ಇಂದು ಬಿದ್ದ ಕನಸು ಮೀರಾ ನಾಯರ್ ರಿಗೆ ಹತ್ತಿಪ್ಪತು ವರ್ಷಗಳ ಹಿಂದೆಯೆ ಬಿದ್ದಿರೋದು ಬಹುಷಃ ಕಾಕತಾಳೀಯವಾಗಿರಲಾರದು! ಹತ್ತು ವರ್ಷದ ಹಿಂದಿನ 'ಮಾನ್ಸೂನ್ ವೆಡ್ಡಿಂಗ್'ಗೆ ಇಪ್ಪತ್ತೆರಡು ವರ್ಷ ಹಳತಾದ (ಆದರೆ ಇನ್ನೂ ಹಳಸಿರದ) 'ಮಿಸ್ಸಿಸಿಪ್ಪಿ ಮಸಾಲ' ಬೆರೆಸಿ ಭಟ್ಟರು ತೆರೆಗೆ ತಂದಿರುವ ಮಿಸಳಭಾಜಿಗೆ 'ಮುಂಗಾರಿನ ಮದುವೆ' ಎಂಬ ಪದಾನುವಾದದ ಶೀರ್ಷಿಕೆ ಸೂಕ್ತವಾಗಿ ಹೊಂದುತ್ತಿತ್ತು! ಆದರೆ ಭಟ್ಟರಿಗೆ 'ಪಂಚರಂಗಿ'ಯಾಗುವ ತವಕ.

ಉಗಾಂಡದ ಕಂಪಾಲದಲ್ಲಿ ಹುಟ್ಟಿ ಅಮೆರಿಕೆಯ ಬೋಸ್ಟನ್ ನಲ್ಲಿ ಬೆಳೆಯುವ 'ಮಿಸ್ಸಿಸಿಪ್ಪಿ ಮಸಾಲ'ದ ವಿಚಿತ್ರ ಹುಡುಗಿ ಇಲ್ಲಿ ನಾಯಕ ದಿಗಂತನಾಗಿ ಲಿಂಗಾಂತರವಾಗಿದ್ದಾರೆ,ಎಲ್ಲಿದ್ದರೂ ಅಚ್ಚ ಭಾರತೀಯ ಆಲದಮರಕ್ಕೆ ಜೋತುಬೀಳುವ ಗುಜರಾತಿ ಅಪ್ಪ ಅಮ್ಮ ಇಲ್ಲಿ ಕನ್ನಡದ ಅಪ್ಪ-ಅಮ್ಮನಾಗಿ ಪುನರಾವರ್ತನೆಯಾಗಿದ್ದರೆ. ಮದುವೆ ಅಲ್ಲಿಯೂ ಮುಖ್ಯ ಸಂಗತಿ,ಇಲ್ಲಿಯೂ ಕೂಡ.ಇನ್ನು ಪೋಷಕರ ಮಾತಿಗೆ ಎದುರಾಡುವ ಧೈರ್ಯವಿಲ್ಲದ ; ಅವರ ಇಚ್ಛೆಯಂತೆ ಬದುಕುವ ಅಲ್ಲಿನ ನಾಯಕಿಯ ದೊಡ್ಡಪ್ಪನ ಮಗ ಇಲ್ಲಿ ನಾಯಕನ ಖಾಸಾ ಅಣ್ಣ.ಮದುವೆ ಬಸ್ಸಿನ ಡ್ರೈವರ್ ಮನೆ ಕೆಲಸದವಳನ್ನ ಮೆಚ್ಚಿ ಮದುವೆಯಾಗೋದು ಸಹ ಕಳೆದ 'ಮಾನ್ಸೂನ್...'ನಲ್ಲೆ ಬಂದು ಹೋಗಿದೆ.ಅಲ್ಲಿ ನಗರದಿಂದ ಹೊರ ಹೋಗುವ ಕುಟುಂಬವನ್ನ ಇಲ್ಲಿ ಕರ್ನಾಟಕದ ಕರಾವಳಿಗೆ ತಂದು ಮುಟ್ಟಿಸಲಾಗಿದೆ.ಕಿಲಾಡಿ ಭಟ್ಟರು ಕಡಿಮೆ ಬಜೆಟ್ಟಿನಲ್ಲಿ ನಾಲ್ಕಾರು ಹಾಡುಗಳನ್ನ ತುರುಕಿಸಿ,ಅನಂತನಾಗ್-ಜಯಂತ್ ಕಾಯ್ಕಿಣಿ ಜೋಡಿಯನ್ನ ಪಾರ್ಟ್ ಟೈಮ್ ನಟರನ್ನಾಗಿಸಿ ಎರಡೂವರೆ ಘಂಟೆ ಬಿಟ್ಟೂ ಬಿಡದೆ ಕೆರೆದರೂ ಅವರ ಮಾತಿನ ಬಂಡಿ ಅದ್ಯಾಕೋ 'ಪಂಚರ್' ಆಗೋದರಿಂದ ತಪ್ಪಿಸಿಕೊಳ್ಳೋದರಲ್ಲಿ ವಿಫಲವಾಗಿದೆ.ಇಷ್ಟು ಶೀಘ್ರ ಅವರ ಬತ್ತಳಿಕೆ ಬರಿದಾದುದು ಅಚ್ಚರಿ ಹುಟ್ಟಿಸಿದರೆ ಅದಕ್ಕೆ ಚಿತ್ರ ಪ್ರೇಮಿ ಅವರ ಮೇಲಿಟ್ಟಿರುವ ಅತಿ ನಿರೀಕ್ಷೆಯೆ ಕಾರಣ.


ಪಾಲಿಗೆ ಬಂದದ್ದನ್ನೇ ಪಂಚಾಮೃತವೆನ್ನುವ ತಲೆಮಾರು ಈಗ ಇಲ್ಲದಿರುವುದನ್ನು ಅಪ್ಡೇಟ್ ಭಟ್ಟರು ಮರೆತಿರೋದು ದುರಂತ.ಹಾಗಂತ ಚಿತ್ರ ಪೂರ್ತಿ ಬರ್ನಾಸ್ ಏನೂ ಅಲ್ಲ.ಛಾಯಾಗ್ರಹಣ ಚನ್ನಾಗಿದೆ.ಮನೋಮೂರ್ತಿ ಮತ್ತೆ ತಮ್ಮ ಎಂದಿನ ಗುಂಗಿಗೆ ಮರಳಿದ್ದಾರೆ.ಒಂದು ಹಾಡಿನ ಹೊರತು ಕನ್ನಡದ ಧ್ವನಿಗಳು ಕಿವಿಗಳ ಮೇಲೆ ಹಿತವಾಗಿ ಬೀಳುತ್ತವೆ.ಮುಖ್ಯಪಾತ್ರಗಳೆ ನಗಿಸುವ ನೊಗ ಹೊತ್ತಿರುವುದರಿಂದ ಪ್ರತ್ಯೇಕ ಹಾಸ್ಯದ ಕಪಟ ನಾಟಕ ದುಃಸ್ವಪ್ನದಂತೆ ಕಾಡುವುದಿಲ್ಲ.ವಾಸ್ತವವಾಗಿ ಘಟಿಸುವ ಮೊದಲೆ ಚಿತ್ರೀಕರಿಸಿದ್ದರೂ ಭಟ್ಟರ ಕಾಮಿಸ್ವಾಮಿ ಮೀಮಾಂಸೆ ಸಮಕಾಲಿನತೆಗೆ ಹೆಚ್ಚು ಹತ್ತಿರವಾಗಿದೆ.ಒಟ್ಟಿನಲ್ಲಿ ಭಟ್ಟರ ಈ ಜಾಣ ಕನ್ನವನ್ನ 'ರಿಮೇಕ್' ಅನ್ನಬೇಕೋ ಇಲ್ಲ 'ರಿಮಿಕ್ಸ್' ಅನ್ನಬೇಕೊ? ಅನ್ನುವ ಗೊಂದಲ ಮಾತ್ರ ಚಿರಾಯು.

08 September 2010

ಇದು ಅದಲ್ಲ....

ಇದು ಅದಲ್ಲ....








ಸುತ್ತಲೂ ಬೆಟ್ಟಗಳಿಂದ ಆವೃತ್ತವಾಗಿದ್ದು ಸ್ವತಹ ತಾನೇ ನಡುವಿನ ಗುಡ್ಡ ಸಮುಚ್ಚಯದ ಮೇಲೆ ಹರಡಿ ಕೊಂಡಿರುವ ತೀರ್ಥಹಳ್ಳಿ ಪಟ್ಟಣದ ಚಿತ್ರಕ್ಕೆ ಕಟ್ಟು ಹಾಕಿಸಿದಂತಹ ನೋಟ ಕಾಣಬೇಕೆಂದಿದ್ದರೆ ಸುತ್ತಮುತ್ತಲಿನ ಯಾವುದಾದರೂ ಗುಡ್ಡ ಹತ್ತಿನಿಂತರಾಯಿತು.ಅಮಾಯಕ ಮಗುವಿಗೆ ಬೆಳ್ಳಿಯ ಉಡಿದಾರ ಕಟ್ಟಿದಂತೆ ಕಾಣುವ ತುಂಗೆಯ ಮಂದ ಹರಿವು,ಅದರ ನಡುವಿನ ಕಮಾನು ಸೇತುವೆ,ಇನ್ನೂ ಕಣ್ಣು ಕಿರಿದುಗೊಳಿಸಿ ನೋಡಿದರೆ ಹೊಳೆವ ಹೊಳೆ ಮಧ್ಯದ ರಾಮಮಂಟಪವೂ ನಿಮ್ಮ ಕಣ್ಣಿಗೆ ಬಿದ್ದೀತು.ಭಾರತದ ಎಲ್ಲ ಊರುಗಳ ಜನ್ಮಕ್ಕೆ ಪೌರಾಣಿಕ ಕಥೆಯೊಂದು ಲಂಗೋಟಿಯಂತೆ ಅಂಟಿಕೊಂಡಿರುವ ಹಾಗೆಯೆ ನಮ್ಮೂರಿಗೂ ಒಂದು ಸ್ಥಳಪುರಾಣ ತಗಲಿ ಹಾಕಿಕೊಂಡಿದೆ.ತಂದೆ ಜಮದಗ್ನಿಯ ಆಜ್ಞೆಯಂತೆ ಹೆತ್ತಬ್ಬೆ ರೇಣುಕೆಯ ಕುತ್ತಿಗೆಯನ್ನ ತನ್ನ ಪರಶುವಿನಿಂದ ಕಡಿದ ರಾಮ,ಅನಂತರ ಸಂತುಷ್ಟ ತಂದೆಯಿಂದ ವರದ ರೂಪದಲ್ಲಿ ತಾನೇ ಕಡಿದಿದ್ದ ತಾಯನ್ನೂ-ಕೋಪದ ಉರಿಗಣ್ಣಲ್ಲಿ ತಂದೆ ಸುಟ್ಟಿದ್ದ ಅಣ್ಣಂದಿರನ್ನೂ ಮರಳಿ ಪಡೆದನಂತೆ.ಆದರೆ ಕೊಡಲಿಗೆ ಅಂಟಿದ್ದ ರಕ್ತದೊಂದಿಗೆ ತಲೆಗೆ ಮಾತೃ ಹತ್ಯಾದೋಷವೂ ಅಂಟಿತ್ತಲ್ಲ? ಅದನ್ನು ಕಳೆದು ಕೊಳ್ಳಲು ಪುಣ್ಯಕ್ಷೇತ್ರ ಯಾತ್ರೆಗೆ ಹೊರಟನಂತೆ.ನೀರು ಕಂಡಲ್ಲೆಲ್ಲ ಅದೆಷ್ಟೇ ತಿಕ್ಕೀ ತಿಕ್ಕೀ ತೊಳೆದರೂ ಕೊಡಲಿಯ ಅಂಚಿಗೆ ಮೆತ್ತಿದ್ದ ಇನ್ನೊಂಚೂರು ನೆತ್ತರು ಹೋಗಲೇ ಇಲ್ಲವಂತೆ.ದಾರಿಯಲ್ಲಿ ದಣಿದವ ತುಂಗೆಯ ಕಲ್ಲುಸಾರದ ಮೇಲಿನ ಬಂಡೆಯೊಂದರ ಮೇಲೆ ಮೈ ಚಾಚಿ ಮಲಗಿದನಂತೆ.ಆಗ ಅವನ ಹಿಡಿತ ಮೀರಿ ಪರಶು ಬಂಡೆಗಳ ಮೇಲೆ ಉರುಳಿ ಬಿದ್ದು ಗಟ್ಟಿ ಬಂಡೆ ಬಿರುಕು ಬಿಟ್ಟಿತು! ( ದಯವಿಟ್ಟು ನೀವಿದನ್ನು ನಂಬಲೇ ಬೇಕು?!).ಹೀಗೆ ಅಲ್ಲಿ ಉಂಟಾದ ಹೊಂಡದೊಳಗೆ ಹರಿವ ತುಂಗೆ ಮಡುಗಟ್ಟಿ ನಿಂತಳಂತೆ.ರಾಮ ತನ್ನ ಕೊಡಲಿ ಮೇಲೆತ್ತಿ ನೋಡುತ್ತಾನೆ,ಎನ್ ಆಶ್ಚರ್ಯ! ತುಂಗೆಯ ನೀರು ಸೋಕಿ ಕೊಡಲಿ ಮೇಲೆ ಉಳಿದಿದ್ದ ರಕ್ತದ ಕಲೆ ಮಂಗಮಾಯ!!! ಇದರಿಂದ ಚಕಿತನಾದ ಪರಶುರಾಮ ಆ ಸ್ಥಳಕ್ಕೆ ತಾನೇ'ಪರಶುರಾಮ ಕೊಂಡ'ಎಂದು ಹೆಸರಿಟ್ಟನಂತೆ.ಸಾಲದ್ದಕ್ಕೆ ನದಿ ದಡದಲ್ಲೊಂದು ಶ್ರೀರಾಮೇಶ್ವರ ಲಿಂಗ ಪ್ರತಿಷ್ಠಾಪಿಸಿ ಆರಾಧಿಸಿದನಂತೆ.ಇಂದಿಗೂ ರಾಮೇಶ್ವರ ದೇವಸ್ಥಾನ ಇಲ್ಲಿದ್ದು ಪ್ರತಿ ವರ್ಷ ಜಾತ್ರೆಯ ದಿನ ಇಲ್ಲಿನ ತುಂಗಾಸ್ನಾನ,ಅದರಲ್ಲೂ ರಾಮ ಕೊಂಡದಲ್ಲಿ ಮುಳುಗು ಹಾಕಲು ರಾಮೇಶ್ವರನ ಭಕ್ತಕೋಟಿ ಮುಗಿಬೀಳುತ್ತದೆ.






ಮಳೆಯ ಭೀಕರ ಹೊಡೆತದೊಂದಿಗೆ ತುಂಗೆಯ ರುದ್ರ ನರ್ತನವನ್ನು ಬಾಲ್ಯದುದ್ದಕ್ಕೂ ಕಂಡಿದ್ದೆ.೧೯೮೨ರ ಶ್ರಾವಣ ಮಾಸದಲ್ಲಿ ನಾನು ಹುಟ್ಟಿದ್ದ ಹೊತ್ತಿನಲ್ಲಿ ವಿಪರೀತ ಮಳೆಯಿಂದ ಪ್ರವಾಹ ಉಕ್ಕೇರಿ ತೀರ್ಥಹಳ್ಳಿ ತತ್ತರಿಸಿ ಹೋಗಿತ್ತಂತೆ.ಹತ್ತಿರದ ಭೀಕರ ಪ್ರವಾಹದ ದಾಖಲೆ ಆ ಊರಲ್ಲಿ ಅದೇನೆ.ಹೊಳೆ ಮಧ್ಯದ ರಾಮಮಂಟಪದ ಮೇಲೆ ಎರಡಾಳು ನೀರು ನಿಂತದ್ದು ಆ ವರ್ಷವೆ ಅಂತೆ.ಅಂದು ನಿಂತಿದ್ದ ನೀರಿನ ಗುರುತನ್ನು ಗುರುತಿಟ್ಟಿಸಿರೋದನ್ನ ಅಲ್ಲಿನ ಪುತ್ತಿಗೆ ಮಠದ ಗೋಡೆಯ ಮೇಲೆ ನೋಡಬಹುದು.ಬದುಕಿರುವ ಯಾವುದನ್ನೂ ಗಂಗೆ ಮುಳುಗಿಸಲಾರಳು ಎಂಬುದು ಪ್ರಸಿದ್ಧ ನಂಬಿಕೆ,ಆದರೆ ತುಂಗೆಗೆ ಅಂತಹ ಯಾವುದೇ ಮಡಿವಂತಿಕೆ ಇದ್ದಂತಿಲ್ಲ.ನಾ ಹುಟ್ಟಿದ ಸಮಯದಷ್ಟಲ್ಲದಿದ್ದರೂ ಅನಂತರವೂ ಮಳೆಗಾಲದಲ್ಲಿ ಅತಿ ಹೆಚ್ಚಿದ್ದ ಪ್ರವಾಹಗಳನ್ನು ಕಂಡಿದ್ದೆ.ತನ್ನ ನಿಲುಕಿಗೆ ಸಿಕ್ಕಿದ್ದನ್ನೆಲ್ಲ ದೋಚುವ ದುರಾಸೆಯ ಹೆಣ್ಣಂತೆ ಮೈತುಂಬಿಕೊಂಡು ಕೆಂಪಗೆ ಹರಿಯುತ್ತಾ ಸಿಕ್ಕ ಸಿಕ್ಕವರನ್ನೆಲ್ಲ ತನ್ನ ಒಡಲೊಳಗೆ ಸೆಳೆದು ಆಕೆ ಹರಿಯುವುದನ್ನು ಬೆರಗುಗಣ್ಣುಗಳಿಂದ ದಿಟ್ಟಿಸಿದ್ದೇನೆ.ಮಳೆಯಿರದ ಉಳಿದ ಕಾಲದಲ್ಲೂ ಆಕೆ ಸಾಚ ಏನಲ್ಲ! ಆಕೆಯ ದುರಹಂಕಾರದ ಸೊಕ್ಕಿನ ಸುಳಿಗಳಿಗೆ ಸಿಕ್ಕಿಸಿ,ಅವಳೆದೆಯ ಮೇಲೆ ಈಜಲು ಹೋದವರನ್ನ ಶಾಶ್ವತವಾಗಿ ಅಪ್ಪಿ ಕೊಳ್ಳುವುದರಲ್ಲಿ ನಿಸ್ಸೀಮೆ ಆಕೆ.ಅದಕ್ಕೆ ಇತ್ತೀಚಿನ ಪ್ರಸಿದ್ಧ ಉದಾಹಾರಣೆಯೆಂದರೆ ಉದಯೊನ್ಮುಖ ಗಾಯಕ ಜಿ ವಿ ಅತ್ರಿಯವರ ಕೌಟುಂಬಿಕ ದುರ್ಮರಣ.




ನಮ್ಮ ಮನೆಯ ಹಿತ್ತಲಿನಿಂದ ದಿಟ್ಟಿಸಿದರೆ ಮಂಟಪದ ಟೊಪ್ಪಿ ತೊಟ್ಟ ಆನಂದಗಿರಿಯೂ ಅದಕ್ಕೆ ಸರತೊಡಿಸಿದಂತೆ ಕಾಣುತ್ತಿದ್ದ ತುಂಗಾಕಾಲೇಜೂ ಕಾಣುತ್ತಿತ್ತು.ಅದರ ಬಲ ಮಗ್ಗುಲಿನಲ್ಲಿ ತುಸುವೆ ದೂರ ಗೊಂಬೆಗಳಂತೆ ಕಾಣುತ್ತಿದ್ದ ಒಂದು ಪುಟ್ಟ ಹಳ್ಳಿಯೂ ಕಾಣಬಹುದಿತ್ತು,ಬಹುಷಃ ಅದು ಇಂದಾವರ ಇರಬೇಕು.ಆಗಿನ್ನೂ ನಾನು ಎರಡನೆ ತರಗತಿಯಲ್ಲಿದ್ದೆ.ಕನ್ನಡ ಪುಸ್ತಕದ ಮೊದಲನೆ ಪಾಠವೇ 'ನಮ್ಮೂರು'ಎಂದಿತ್ತು.ಅದರ ಸಕಲ ವಿವರಗಳೂ ಚಿತ್ರ ಬಿಡಿಸಿದಂತೆ ಇಂದಾವರದಲ್ಲಿ ಕಾಣುತ್ತಿತ್ತು! ಸಿಕ್ಕ ಸಿಕ್ಕದ್ದನೆಲ್ಲ ಓದಿ ಬಾಯಿಪಾಠ ಮಾಡಿಕೊಳ್ಳುವ ವಿಶಿಷ್ಟವೂ-ವಿಪರೀತವೂ ಆದ ಚಟ ನನಗಿದ್ದ ದಿನಗಳವು.ನಿತ್ಯ ಚಡ್ಡಿ ಜಾರಿಸಿ ನಿಂತು ಮನೆ ಹಿಂದಿನ ಚರಂಡಿಯಲ್ಲಿ ಮೈ ನೀರನ್ನು ಧಾರೆ ಧಾರೆಯಾಗಿ ಜಲಪಾತದಂತೆ ಹೊರತಳ್ಳುತ್ತ ಕಣ್ಣಿಗೆ ಬೀಳುತ್ತಿದ್ದ 'ಆ ನಮ್ಮೂರಿನ' ಮಿನಿಯೇಚರನ್ನು ಕಣ್ತುಂಬಿಕೊಳ್ಳುತ್ತಾ ರಾಗವಾಗಿ 'ನಮ್ಮೂರು'ಪಾಠವನ್ನ ದೊಡ್ಡ ದನಿಯಲ್ಲಿ ಅರಚುತ್ತ ದೊಡ್ಡವರಿಂದ ಉಗಿಸಿಕೊಳ್ಳುತ್ತಿದ್ದೆ.




ನಾನು ಶಾಶ್ವತವಾಗಿ ಊರು ಬಿಟ್ಟೆ ಹನ್ನೆರಡು ವರ್ಷಗಳಾಗುತ್ತ ಬಂತು.ಪುಟ್ಟಹುಡುಗನಾಗಿ ಆಗ ನಾನು ಕಂಡಿದ್ದ ಊರಿಗೂ-ಈಗಿನ ತೀರ್ಥಹಳ್ಳಿಗೂ ವಿಪರೀತ ವ್ಯತ್ಯಾಸವಿದೆ.ಕಮಾನು ಬಸ್ ನಿಲ್ದಾಣವಿದ್ದ,ಸೋಮವಾರದ ಸಂತೆಗೆ ವಿಪರೀತ ಜನಸೇರುತ್ತಿದ್ದ,ಗಾಂಧೀ ಚೌಕದಲ್ಲಿ ಮೂರು ಮಾರ್ಕಿನ ಬೀಡಿ ವ್ಯಾನಿನ ಮೇಲೆ ದಿಲೀಪ ಮಾಡುತ್ತಿದ್ದ ಮಾದಕ ನೃತ್ಯವನ್ನು ಬಾಯಿ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ,ಸಿನೆಮ ಬಿಡುವ ಸಮಯದಲ್ಲಿ ಪ್ರವಾಹದಂತೆ ಟಾಕೀಸಿನಿಂದ ಜನ ಹೊರ ಬರುತ್ತಿದ್ದ,ಆ ತೀರ್ಥಹಳ್ಳಿ ಅದೆಲ್ಲೋ ಕಳೆದೆ ಹೋಗಿದೆ.ತೇಜಸ್ವಿ ಕಥೆಗಳ ಮುಡಿಗೆರೆಯಂತೆ ಆಗ ಊರಿನ ಏಕೈಕ ಬಹುಮಹಡಿ ಕಟ್ಟಡವಾಗಿದ್ದ 'ಅಲಂಕಾರ್ ಪ್ಲಾಜ'ದ ಟರೆಸಿನ ಮೇಲೆ ನಿಂತು ಕೆಳಹಣಕಿದರೆ ಟೆಲಿಫೋನ್,ಕೇಬಲ್,ಕರೆಂಟಿನ ವಯರುಗಳ ಕಿಷ್ಕಿಂದೆಯಲ್ಲಿ ಬಲವಾಗಿ ಬಿಗಿಸಿಕೊಂಡು ನರಳುತ್ತಿದ್ದ ಪ್ರಾಣಿಯಂತೆ ಇಡೀ ಊರು ಕಾಣುತ್ತಿತ್ತು.ತೇಜಸ್ವಿಯವರೇ ಹೇಳುತ್ತಿದ್ದಂತೆ ಕಟ್ಟಿಂಗ್ ಪ್ಲೇಯರ್ ಒಂದು ಕೈಯಲ್ಲಿ-ವಯರುಗಳ ಕಂತೆ ಇನ್ನೊಂದು ತೋಳಲ್ಲಿ ತೂಗುಹಾಕಿಕೊಂಡು; ಅಣ್ಣಾತೆಗಳಂತೆ ಕಾಣುತ್ತಿದ್ದ,ನೆಲ ನೋಡದೆ ಆಕಾಶದ ಉದ್ದಗಲಕ್ಕೂ ಹರಡಿರುತ್ತಿದ್ದ ತಮ್ಮ ವಯರುಗಳ ಯೋಗಕ್ಷೇಮದ ಕುರಿತೆ ಚಿಂತಿತರಾಗಿ ಅವನ್ನೆ ದಿಟ್ಟಿಸುತ್ತ ಸಾಗುವ ಮೇಲಿನ ಮೂರೂ ವರ್ಗಗಳ ಮೆಂಟಲ್ ಗಳಂತಹ ಮೆಕ್ಯಾನಿಕ್ ಗಳನ್ನ ಅಡಿಗಡಿಗೂ ಊರ ತುಂಬಾ ಕಾಣಬಹುದಾಗಿತ್ತು.




ಬಸ್ಟ್ಯಾಂಡ್ ಮಯೂರ ಹೋಟೆಲಿನ ಮಸಾಲೆ ದೋಸೆ,ಮಸೀದಿ ರಸ್ತೆಯ ಅಂಚಿನಲ್ಲಿ ಸಂಜೆ ಕೆಪ್ಪ ಶೆಣೈಯ ರುಚಿ ರುಚಿಯಾಗಿರುತ್ತಿದ್ದ ಬೋಂಡ,ಗಾಯತ್ರಿಭವನದ ನೊರೆನೊರೆ ಕಾಫಿ,ವಸಂತ ವಿಹಾರದ ಬನ್ಸ್-ಕಡಲೆ ಗಸಿ ಇವೆಲ್ಲ ಇಂದು ಹಾಗೆಯೆ ಉಳಿದುಕೊಂಡಿಲ್ಲ.ನಾಲ್ಕಾಣೆಗೆ ಸಿಗುತ್ತಿದ್ದ ನೀರ್ ಐಸು,ಎಂಟಾಣೆಗೆ ಸಿಗುತ್ತಿದ್ದ ಹಾಲ್ ಐಸುಗಳ ಅಭಿಮಾನಿಗಳು ಇಲ್ಲಿನ ಆಟದ ಮೈದಾನಗಳಿಂದ ಮರೆಯಾಗಿ ಕುಲ್ಫಿ-ಕೋನ್ ಐಸುಗಳ ಹೊಸ ತಲೆಮಾರು ಕಾಣಿಸಿಕೊಳ್ಳುತಿವೆ.ಸ್ವಾತಂತ್ರ್ಯದಿನ ಹಾಗು ಗಣರಾಜ್ಯೋತ್ಸವಗಳಂದು ಊರಲ್ಲಿನ ಮೂರು ಟಾಕೀಸುಗಳಲ್ಲಿ ಅಸಂಬದ್ಧವಾಗಿ ತೋರಿಸುತ್ತಿದ್ದ ತಲೆಬುಡವಿಲ್ಲದ ಮೂರೇಮೂರು ರೀಲನ್ನು ನೋಡಲುಕಾತರಿಸಿ ಓಡುತ್ತಿದ್ದ ಶಾಲಾಮಕ್ಕಳ ಜಾಗ ಆ ಎರಡು ದಿನಗಳೂ ಕೇವಲ ಶಾಸ್ತ್ರಕ್ಕೆ ಶಾಲೆಗೆ ಹೋಗಿ ಮರಳಿ ಮನೆ ಸೇರಿ ವಿಡಿಯೋಗೇಂ ಆಡಲು ಹಂಬಲಿಸುವ ಮಕ್ಕಳು ಭರ್ತಿಮಾಡುತ್ತಿದ್ದಾರೆ.ಮೂರು ದಿನಗಳ ಜಾತ್ರೆಯಲ್ಲೂ ಮೊದಲಿನ ರಂಗಿಲ್ಲ,ಈಗ ಬೀಡಿವ್ಯಾನ್ ಮೇಲೆ ದಿಲೀಪ ಹೆಣ್ಣುವೇಷಧರಿಸಿ ಕುಣಿಯುವುದಿಲ್ಲ,ಕವಿತಾ ಹೋಟೆಲಿನ ಗೋಡೆಯ ಮೇಲೆ ಯಾರೂ ನಸೀಮ ಬೀಡಿ ಸೇದುತ್ತ ಸುರುಳಿ ಸುರುಳಿ ಹೊಗೆ ಬಿಡುವ ಫೋಸ್ ಕೊಡುವ ತೆಳುಮೀಸೆಯ ರಾಜ್ ಕುಮಾರ್,ಕಮಲ ಹಾಸನ್,ಜಿತೇಂದ್ರ,ರಜನಿಕಾಂತ್ ರ ಜಾಹಿರಾತನ್ನು ಚಿತ್ರಿಸುವುದಿಲ್ಲ,ಮೊಬೈಲ್ ಸಿಗ್ನಲ್ ಗಳ ನಡುವೆ ಸಂಬಂಧಗಳು ಸದಿಲಾಗುತ್ತಿವೆ,'ನೇರ-ದಿಟ್ಟ-ನಿರಂತರ' ಹಾಗು 'ಉತ್ತಮ ಸಮಾಜಕ್ಕಾಗಿ'ನಾಯಿ ಉಚ್ಚೆ ಹೊಯ್ದರೂ ಸುದ್ದಿ ಮಾಡುವವರ ನಡುವೆ ಇಲ್ಲಿನವರ ಏಕೈಕ ಟೈಮ್ ಪಾಸ್ ಆಗಿದ್ದ ಗಾಸಿಪ್ ಪ್ರಸರಣೆಗೆ ಕೊಕ್ಕೆಬಿದ್ದಿದೆ,ಒಬ್ಬರಿಗೊಬ್ಬರು ಪರಿಚಿತರೆ ಆಗಿರುತ್ತಿದ್ದ ಸಣ್ಣ ಊರಲ್ಲಿ ಆಧುನಿಕತೆಯ ಹವೆ ವಿಪರೀತ ಬೀಸಿ ಎಲ್ಲರೂ ಪರಸ್ಪರ ಅಪರಿಚಿತರಾಗುತ್ತಿದ್ದರೆ .ಒಟ್ಟಿನಲ್ಲಿ ಚಂದದ ಊರೊಂದು ನಿಧಾನವಾಗಿ ಸಾಯುತ್ತಿದೆ.

ಇದು ಅದಲ್ಲ....

ಇದು ಅದಲ್ಲ....








ಸುತ್ತಲೂ ಬೆಟ್ಟಗಳಿಂದ ಆವೃತ್ತವಾಗಿದ್ದು ಸ್ವತಹ ತಾನೇ ನಡುವಿನ ಗುಡ್ಡ ಸಮುಚ್ಚಯದ ಮೇಲೆ ಹರಡಿ ಕೊಂಡಿರುವ ತೀರ್ಥಹಳ್ಳಿ ಪಟ್ಟಣದ ಚಿತ್ರಕ್ಕೆ ಕಟ್ಟು ಹಾಕಿಸಿದಂತಹ ನೋಟ ಕಾಣಬೇಕೆಂದಿದ್ದರೆ ಸುತ್ತಮುತ್ತಲಿನ ಯಾವುದಾದರೂ ಗುಡ್ಡ ಹತ್ತಿನಿಂತರಾಯಿತು.ಅಮಾಯಕ ಮಗುವಿಗೆ ಬೆಳ್ಳಿಯ ಉಡಿದಾರ ಕಟ್ಟಿದಂತೆ ಕಾಣುವ ತುಂಗೆಯ ಮಂದ ಹರಿವು,ಅದರ ನಡುವಿನ ಕಮಾನು ಸೇತುವೆ,ಇನ್ನೂ ಕಣ್ಣು ಕಿರಿದುಗೊಳಿಸಿ ನೋಡಿದರೆ ಹೊಳೆವ ಹೊಳೆ ಮಧ್ಯದ ರಾಮಮಂಟಪವೂ ನಿಮ್ಮ ಕಣ್ಣಿಗೆ ಬಿದ್ದೀತು.ಭಾರತದ ಎಲ್ಲ ಊರುಗಳ ಜನ್ಮಕ್ಕೆ ಪೌರಾಣಿಕ ಕಥೆಯೊಂದು ಲಂಗೋಟಿಯಂತೆ ಅಂಟಿಕೊಂಡಿರುವ ಹಾಗೆಯೆ ನಮ್ಮೂರಿಗೂ ಒಂದು ಸ್ಥಳಪುರಾಣ ತಗಲಿ ಹಾಕಿಕೊಂಡಿದೆ.ತಂದೆ ಜಮದಗ್ನಿಯ ಆಜ್ಞೆಯಂತೆ ಹೆತ್ತಬ್ಬೆ ರೇಣುಕೆಯ ಕುತ್ತಿಗೆಯನ್ನ ತನ್ನ ಪರಶುವಿನಿಂದ ಕಡಿದ ರಾಮ,ಅನಂತರ ಸಂತುಷ್ಟ ತಂದೆಯಿಂದ ವರದ ರೂಪದಲ್ಲಿ ತಾನೇ ಕಡಿದಿದ್ದ ತಾಯನ್ನೂ-ಕೋಪದ ಉರಿಗಣ್ಣಲ್ಲಿ ತಂದೆ ಸುಟ್ಟಿದ್ದ ಅಣ್ಣಂದಿರನ್ನೂ ಮರಳಿ ಪಡೆದನಂತೆ.ಆದರೆ ಕೊಡಲಿಗೆ ಅಂಟಿದ್ದ ರಕ್ತದೊಂದಿಗೆ ತಲೆಗೆ ಮಾತೃ ಹತ್ಯಾದೋಷವೂ ಅಂಟಿತ್ತಲ್ಲ? ಅದನ್ನು ಕಳೆದು ಕೊಳ್ಳಲು ಪುಣ್ಯಕ್ಷೇತ್ರ ಯಾತ್ರೆಗೆ ಹೊರಟನಂತೆ.ನೀರು ಕಂಡಲ್ಲೆಲ್ಲ ಅದೆಷ್ಟೇ ತಿಕ್ಕೀ ತಿಕ್ಕೀ ತೊಳೆದರೂ ಕೊಡಲಿಯ ಅಂಚಿಗೆ ಮೆತ್ತಿದ್ದ ಇನ್ನೊಂಚೂರು ನೆತ್ತರು ಹೋಗಲೇ ಇಲ್ಲವಂತೆ.ದಾರಿಯಲ್ಲಿ ದಣಿದವ ತುಂಗೆಯ ಕಲ್ಲುಸಾರದ ಮೇಲಿನ ಬಂಡೆಯೊಂದರ ಮೇಲೆ ಮೈ ಚಾಚಿ ಮಲಗಿದನಂತೆ.ಆಗ ಅವನ ಹಿಡಿತ ಮೀರಿ ಪರಶು ಬಂಡೆಗಳ ಮೇಲೆ ಉರುಳಿ ಬಿದ್ದು ಗಟ್ಟಿ ಬಂಡೆ ಬಿರುಕು ಬಿಟ್ಟಿತು! ( ದಯವಿಟ್ಟು ನೀವಿದನ್ನು ನಂಬಲೇ ಬೇಕು?!).ಹೀಗೆ ಅಲ್ಲಿ ಉಂಟಾದ ಹೊಂಡದೊಳಗೆ ಹರಿವ ತುಂಗೆ ಮಡುಗಟ್ಟಿ ನಿಂತಳಂತೆ.ರಾಮ ತನ್ನ ಕೊಡಲಿ ಮೇಲೆತ್ತಿ ನೋಡುತ್ತಾನೆ,ಎನ್ ಆಶ್ಚರ್ಯ! ತುಂಗೆಯ ನೀರು ಸೋಕಿ ಕೊಡಲಿ ಮೇಲೆ ಉಳಿದಿದ್ದ ರಕ್ತದ ಕಲೆ ಮಂಗಮಾಯ!!! ಇದರಿಂದ ಚಕಿತನಾದ ಪರಶುರಾಮ ಆ ಸ್ಥಳಕ್ಕೆ ತಾನೇ'ಪರಶುರಾಮ ಕೊಂಡ'ಎಂದು ಹೆಸರಿಟ್ಟನಂತೆ.ಸಾಲದ್ದಕ್ಕೆ ನದಿ ದಡದಲ್ಲೊಂದು ಶ್ರೀರಾಮೇಶ್ವರ ಲಿಂಗ ಪ್ರತಿಷ್ಠಾಪಿಸಿ ಆರಾಧಿಸಿದನಂತೆ.ಇಂದಿಗೂ ರಾಮೇಶ್ವರ ದೇವಸ್ಥಾನ ಇಲ್ಲಿದ್ದು ಪ್ರತಿ ವರ್ಷ ಜಾತ್ರೆಯ ದಿನ ಇಲ್ಲಿನ ತುಂಗಾಸ್ನಾನ,ಅದರಲ್ಲೂ ರಾಮ ಕೊಂಡದಲ್ಲಿ ಮುಳುಗು ಹಾಕಲು ರಾಮೇಶ್ವರನ ಭಕ್ತಕೋಟಿ ಮುಗಿಬೀಳುತ್ತದೆ.






ಮಳೆಯ ಭೀಕರ ಹೊಡೆತದೊಂದಿಗೆ ತುಂಗೆಯ ರುದ್ರ ನರ್ತನವನ್ನು ಬಾಲ್ಯದುದ್ದಕ್ಕೂ ಕಂಡಿದ್ದೆ.೧೯೮೨ರ ಶ್ರಾವಣ ಮಾಸದಲ್ಲಿ ನಾನು ಹುಟ್ಟಿದ್ದ ಹೊತ್ತಿನಲ್ಲಿ ವಿಪರೀತ ಮಳೆಯಿಂದ ಪ್ರವಾಹ ಉಕ್ಕೇರಿ ತೀರ್ಥಹಳ್ಳಿ ತತ್ತರಿಸಿ ಹೋಗಿತ್ತಂತೆ.ಹತ್ತಿರದ ಭೀಕರ ಪ್ರವಾಹದ ದಾಖಲೆ ಆ ಊರಲ್ಲಿ ಅದೇನೆ.ಹೊಳೆ ಮಧ್ಯದ ರಾಮಮಂಟಪದ ಮೇಲೆ ಎರಡಾಳು ನೀರು ನಿಂತದ್ದು ಆ ವರ್ಷವೆ ಅಂತೆ.ಅಂದು ನಿಂತಿದ್ದ ನೀರಿನ ಗುರುತನ್ನು ಗುರುತಿಟ್ಟಿಸಿರೋದನ್ನ ಅಲ್ಲಿನ ಪುತ್ತಿಗೆ ಮಠದ ಗೋಡೆಯ ಮೇಲೆ ನೋಡಬಹುದು.ಬದುಕಿರುವ ಯಾವುದನ್ನೂ ಗಂಗೆ ಮುಳುಗಿಸಲಾರಳು ಎಂಬುದು ಪ್ರಸಿದ್ಧ ನಂಬಿಕೆ,ಆದರೆ ತುಂಗೆಗೆ ಅಂತಹ ಯಾವುದೇ ಮಡಿವಂತಿಕೆ ಇದ್ದಂತಿಲ್ಲ.ನಾ ಹುಟ್ಟಿದ ಸಮಯದಷ್ಟಲ್ಲದಿದ್ದರೂ ಅನಂತರವೂ ಮಳೆಗಾಲದಲ್ಲಿ ಅತಿ ಹೆಚ್ಚಿದ್ದ ಪ್ರವಾಹಗಳನ್ನು ಕಂಡಿದ್ದೆ.ತನ್ನ ನಿಲುಕಿಗೆ ಸಿಕ್ಕಿದ್ದನ್ನೆಲ್ಲ ದೋಚುವ ದುರಾಸೆಯ ಹೆಣ್ಣಂತೆ ಮೈತುಂಬಿಕೊಂಡು ಕೆಂಪಗೆ ಹರಿಯುತ್ತಾ ಸಿಕ್ಕ ಸಿಕ್ಕವರನ್ನೆಲ್ಲ ತನ್ನ ಒಡಲೊಳಗೆ ಸೆಳೆದು ಆಕೆ ಹರಿಯುವುದನ್ನು ಬೆರಗುಗಣ್ಣುಗಳಿಂದ ದಿಟ್ಟಿಸಿದ್ದೇನೆ.ಮಳೆಯಿರದ ಉಳಿದ ಕಾಲದಲ್ಲೂ ಆಕೆ ಸಾಚ ಏನಲ್ಲ! ಆಕೆಯ ದುರಹಂಕಾರದ ಸೊಕ್ಕಿನ ಸುಳಿಗಳಿಗೆ ಸಿಕ್ಕಿಸಿ,ಅವಳೆದೆಯ ಮೇಲೆ ಈಜಲು ಹೋದವರನ್ನ ಶಾಶ್ವತವಾಗಿ ಅಪ್ಪಿ ಕೊಳ್ಳುವುದರಲ್ಲಿ ನಿಸ್ಸೀಮೆ ಆಕೆ.ಅದಕ್ಕೆ ಇತ್ತೀಚಿನ ಪ್ರಸಿದ್ಧ ಉದಾಹಾರಣೆಯೆಂದರೆ ಉದಯೊನ್ಮುಖ ಗಾಯಕ ಜಿ ವಿ ಅತ್ರಿಯವರ ಕೌಟುಂಬಿಕ ದುರ್ಮರಣ.




ನಮ್ಮ ಮನೆಯ ಹಿತ್ತಲಿನಿಂದ ದಿಟ್ಟಿಸಿದರೆ ಮಂಟಪದ ಟೊಪ್ಪಿ ತೊಟ್ಟ ಆನಂದಗಿರಿಯೂ ಅದಕ್ಕೆ ಸರತೊಡಿಸಿದಂತೆ ಕಾಣುತ್ತಿದ್ದ ತುಂಗಾಕಾಲೇಜೂ ಕಾಣುತ್ತಿತ್ತು.ಅದರ ಬಲ ಮಗ್ಗುಲಿನಲ್ಲಿ ತುಸುವೆ ದೂರ ಗೊಂಬೆಗಳಂತೆ ಕಾಣುತ್ತಿದ್ದ ಒಂದು ಪುಟ್ಟ ಹಳ್ಳಿಯೂ ಕಾಣಬಹುದಿತ್ತು,ಬಹುಷಃ ಅದು ಇಂದಾವರ ಇರಬೇಕು.ಆಗಿನ್ನೂ ನಾನು ಎರಡನೆ ತರಗತಿಯಲ್ಲಿದ್ದೆ.ಕನ್ನಡ ಪುಸ್ತಕದ ಮೊದಲನೆ ಪಾಠವೇ 'ನಮ್ಮೂರು'ಎಂದಿತ್ತು.ಅದರ ಸಕಲ ವಿವರಗಳೂ ಚಿತ್ರ ಬಿಡಿಸಿದಂತೆ ಇಂದಾವರದಲ್ಲಿ ಕಾಣುತ್ತಿತ್ತು! ಸಿಕ್ಕ ಸಿಕ್ಕದ್ದನೆಲ್ಲ ಓದಿ ಬಾಯಿಪಾಠ ಮಾಡಿಕೊಳ್ಳುವ ವಿಶಿಷ್ಟವೂ-ವಿಪರೀತವೂ ಆದ ಚಟ ನನಗಿದ್ದ ದಿನಗಳವು.ನಿತ್ಯ ಚಡ್ಡಿ ಜಾರಿಸಿ ನಿಂತು ಮನೆ ಹಿಂದಿನ ಚರಂಡಿಯಲ್ಲಿ ಮೈ ನೀರನ್ನು ಧಾರೆ ಧಾರೆಯಾಗಿ ಜಲಪಾತದಂತೆ ಹೊರತಳ್ಳುತ್ತ ಕಣ್ಣಿಗೆ ಬೀಳುತ್ತಿದ್ದ 'ಆ ನಮ್ಮೂರಿನ' ಮಿನಿಯೇಚರನ್ನು ಕಣ್ತುಂಬಿಕೊಳ್ಳುತ್ತಾ ರಾಗವಾಗಿ 'ನಮ್ಮೂರು'ಪಾಠವನ್ನ ದೊಡ್ಡ ದನಿಯಲ್ಲಿ ಅರಚುತ್ತ ದೊಡ್ಡವರಿಂದ ಉಗಿಸಿಕೊಳ್ಳುತ್ತಿದ್ದೆ.




ನಾನು ಶಾಶ್ವತವಾಗಿ ಊರು ಬಿಟ್ಟೆ ಹನ್ನೆರಡು ವರ್ಷಗಳಾಗುತ್ತ ಬಂತು.ಪುಟ್ಟಹುಡುಗನಾಗಿ ಆಗ ನಾನು ಕಂಡಿದ್ದ ಊರಿಗೂ-ಈಗಿನ ತೀರ್ಥಹಳ್ಳಿಗೂ ವಿಪರೀತ ವ್ಯತ್ಯಾಸವಿದೆ.ಕಮಾನು ಬಸ್ ನಿಲ್ದಾಣವಿದ್ದ,ಸೋಮವಾರದ ಸಂತೆಗೆ ವಿಪರೀತ ಜನಸೇರುತ್ತಿದ್ದ,ಗಾಂಧೀ ಚೌಕದಲ್ಲಿ ಮೂರು ಮಾರ್ಕಿನ ಬೀಡಿ ವ್ಯಾನಿನ ಮೇಲೆ ದಿಲೀಪ ಮಾಡುತ್ತಿದ್ದ ಮಾದಕ ನೃತ್ಯವನ್ನು ಬಾಯಿ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ,ಸಿನೆಮ ಬಿಡುವ ಸಮಯದಲ್ಲಿ ಪ್ರವಾಹದಂತೆ ಟಾಕೀಸಿನಿಂದ ಜನ ಹೊರ ಬರುತ್ತಿದ್ದ,ಆ ತೀರ್ಥಹಳ್ಳಿ ಅದೆಲ್ಲೋ ಕಳೆದೆ ಹೋಗಿದೆ.ತೇಜಸ್ವಿ ಕಥೆಗಳ ಮುಡಿಗೆರೆಯಂತೆ ಆಗ ಊರಿನ ಏಕೈಕ ಬಹುಮಹಡಿ ಕಟ್ಟಡವಾಗಿದ್ದ 'ಅಲಂಕಾರ್ ಪ್ಲಾಜ'ದ ಟರೆಸಿನ ಮೇಲೆ ನಿಂತು ಕೆಳಹಣಕಿದರೆ ಟೆಲಿಫೋನ್,ಕೇಬಲ್,ಕರೆಂಟಿನ ವಯರುಗಳ ಕಿಷ್ಕಿಂದೆಯಲ್ಲಿ ಬಲವಾಗಿ ಬಿಗಿಸಿಕೊಂಡು ನರಳುತ್ತಿದ್ದ ಪ್ರಾಣಿಯಂತೆ ಇಡೀ ಊರು ಕಾಣುತ್ತಿತ್ತು.ತೇಜಸ್ವಿಯವರೇ ಹೇಳುತ್ತಿದ್ದಂತೆ ಕಟ್ಟಿಂಗ್ ಪ್ಲೇಯರ್ ಒಂದು ಕೈಯಲ್ಲಿ-ವಯರುಗಳ ಕಂತೆ ಇನ್ನೊಂದು ತೋಳಲ್ಲಿ ತೂಗುಹಾಕಿಕೊಂಡು; ಅಣ್ಣಾತೆಗಳಂತೆ ಕಾಣುತ್ತಿದ್ದ,ನೆಲ ನೋಡದೆ ಆಕಾಶದ ಉದ್ದಗಲಕ್ಕೂ ಹರಡಿರುತ್ತಿದ್ದ ತಮ್ಮ ವಯರುಗಳ ಯೋಗಕ್ಷೇಮದ ಕುರಿತೆ ಚಿಂತಿತರಾಗಿ ಅವನ್ನೆ ದಿಟ್ಟಿಸುತ್ತ ಸಾಗುವ ಮೇಲಿನ ಮೂರೂ ವರ್ಗಗಳ ಮೆಂಟಲ್ ಗಳಂತಹ ಮೆಕ್ಯಾನಿಕ್ ಗಳನ್ನ ಅಡಿಗಡಿಗೂ ಊರ ತುಂಬಾ ಕಾಣಬಹುದಾಗಿತ್ತು.




ಬಸ್ಟ್ಯಾಂಡ್ ಮಯೂರ ಹೋಟೆಲಿನ ಮಸಾಲೆ ದೋಸೆ,ಮಸೀದಿ ರಸ್ತೆಯ ಅಂಚಿನಲ್ಲಿ ಸಂಜೆ ಕೆಪ್ಪ ಶೆಣೈಯ ರುಚಿ ರುಚಿಯಾಗಿರುತ್ತಿದ್ದ ಬೋಂಡ,ಗಾಯತ್ರಿಭವನದ ನೊರೆನೊರೆ ಕಾಫಿ,ವಸಂತ ವಿಹಾರದ ಬನ್ಸ್-ಕಡಲೆ ಗಸಿ ಇವೆಲ್ಲ ಇಂದು ಹಾಗೆಯೆ ಉಳಿದುಕೊಂಡಿಲ್ಲ.ನಾಲ್ಕಾಣೆಗೆ ಸಿಗುತ್ತಿದ್ದ ನೀರ್ ಐಸು,ಎಂಟಾಣೆಗೆ ಸಿಗುತ್ತಿದ್ದ ಹಾಲ್ ಐಸುಗಳ ಅಭಿಮಾನಿಗಳು ಇಲ್ಲಿನ ಆಟದ ಮೈದಾನಗಳಿಂದ ಮರೆಯಾಗಿ ಕುಲ್ಫಿ-ಕೋನ್ ಐಸುಗಳ ಹೊಸ ತಲೆಮಾರು ಕಾಣಿಸಿಕೊಳ್ಳುತಿವೆ.ಸ್ವಾತಂತ್ರ್ಯದಿನ ಹಾಗು ಗಣರಾಜ್ಯೋತ್ಸವಗಳಂದು ಊರಲ್ಲಿನ ಮೂರು ಟಾಕೀಸುಗಳಲ್ಲಿ ಅಸಂಬದ್ಧವಾಗಿ ತೋರಿಸುತ್ತಿದ್ದ ತಲೆಬುಡವಿಲ್ಲದ ಮೂರೇಮೂರು ರೀಲನ್ನು ನೋಡಲುಕಾತರಿಸಿ ಓಡುತ್ತಿದ್ದ ಶಾಲಾಮಕ್ಕಳ ಜಾಗ ಆ ಎರಡು ದಿನಗಳೂ ಕೇವಲ ಶಾಸ್ತ್ರಕ್ಕೆ ಶಾಲೆಗೆ ಹೋಗಿ ಮರಳಿ ಮನೆ ಸೇರಿ ವಿಡಿಯೋಗೇಂ ಆಡಲು ಹಂಬಲಿಸುವ ಮಕ್ಕಳು ಭರ್ತಿಮಾಡುತ್ತಿದ್ದಾರೆ.ಮೂರು ದಿನಗಳ ಜಾತ್ರೆಯಲ್ಲೂ ಮೊದಲಿನ ರಂಗಿಲ್ಲ,ಈಗ ಬೀಡಿವ್ಯಾನ್ ಮೇಲೆ ದಿಲೀಪ ಹೆಣ್ಣುವೇಷಧರಿಸಿ ಕುಣಿಯುವುದಿಲ್ಲ,ಕವಿತಾ ಹೋಟೆಲಿನ ಗೋಡೆಯ ಮೇಲೆ ಯಾರೂ ನಸೀಮ ಬೀಡಿ ಸೇದುತ್ತ ಸುರುಳಿ ಸುರುಳಿ ಹೊಗೆ ಬಿಡುವ ಫೋಸ್ ಕೊಡುವ ತೆಳುಮೀಸೆಯ ರಾಜ್ ಕುಮಾರ್,ಕಮಲ ಹಾಸನ್,ಜಿತೇಂದ್ರ,ರಜನಿಕಾಂತ್ ರ ಜಾಹಿರಾತನ್ನು ಚಿತ್ರಿಸುವುದಿಲ್ಲ,ಮೊಬೈಲ್ ಸಿಗ್ನಲ್ ಗಳ ನಡುವೆ ಸಂಬಂಧಗಳು ಸದಿಲಾಗುತ್ತಿವೆ,'ನೇರ-ದಿಟ್ಟ-ನಿರಂತರ' ಹಾಗು 'ಉತ್ತಮ ಸಮಾಜಕ್ಕಾಗಿ'ನಾಯಿ ಉಚ್ಚೆ ಹೊಯ್ದರೂ ಸುದ್ದಿ ಮಾಡುವವರ ನಡುವೆ ಇಲ್ಲಿನವರ ಏಕೈಕ ಟೈಮ್ ಪಾಸ್ ಆಗಿದ್ದ ಗಾಸಿಪ್ ಪ್ರಸರಣೆಗೆ ಕೊಕ್ಕೆಬಿದ್ದಿದೆ,ಒಬ್ಬರಿಗೊಬ್ಬರು ಪರಿಚಿತರೆ ಆಗಿರುತ್ತಿದ್ದ ಸಣ್ಣ ಊರಲ್ಲಿ ಆಧುನಿಕತೆಯ ಹವೆ ವಿಪರೀತ ಬೀಸಿ ಎಲ್ಲರೂ ಪರಸ್ಪರ ಅಪರಿಚಿತರಾಗುತ್ತಿದ್ದರೆ .ಒಟ್ಟಿನಲ್ಲಿ ಚಂದದ ಊರೊಂದು ನಿಧಾನವಾಗಿ ಸಾಯುತ್ತಿದೆ.

ಸುಂದರ ತಾಣಗಳ ಆಗರ...

ಅಭಿಮಾನದ ಭರದಲ್ಲಿ ನೆನ್ನೆ ತೀರ್ಹಹಳ್ಳಿಯನ್ನ ವಿಪರೀತ ಹೊಗಳಿ ಬಿಟ್ಟೆನೇನೋ.ಇತ್ತೀಚಿಗೆ 'ನೆನಪಿರಲಿ' ಕನ್ನಡ ಚಿತ್ರಕ್ಕಾಗಿ ಹಂಸಲೇಖರವರು ಬರೆದ ಹಾಡೊಂದರಲ್ಲಿ'....ತೀರ್ಥಹಳ್ಳಿಲಿಕುವೆಂಪು ಹುಟ್ಟಿದ್ರು' ಎಂಬ ಸಾಲಿದೆ,ಅವರು ಸಿಕ್ಕಾಗ 'ಕುವೆಂಪು ಅಷ್ಟೇ ಅಲ್ಲ ಸಾರ್ ನಮ್ಮಂತ ಬಡಪಾಯಿಗಳೂ ಹುಟ್ಟಿದ್ದೇವೆ' ಅಂತ ತಮಾಷೆ ಮಾಡ್ತಿರ್ತೀನಿ.ಸಿನೆಮ ಅಂದ ಕೂಡಲೆ ಹೇಳಲೇ ಬೇಕಾದ ಮುಖ್ಯ ಸಂಗತಿಯೊಂದಿದೆ.ಇತ್ತೀಚಿಗೆ ಕನ್ನಡ ಚಿತ್ರರಂಗದ ಪಾಲಿಗೆ ತೀರ್ಥಹಳ್ಳಿ ಮಾವನ ಮನೆಯಂತಾಗಿದೆ.ಪ್ರತಿ ನಾಲ್ಕನೇ ಚಿತ್ರದ ಚಿತ್ರೀಕರಣಕ್ಕಾಗಿ ಗಾಂಧಿನಗರದ ಮಂದಿ ಇಲ್ಲಿಗೆ ಕ್ಯಾಮರಾದೊಂದಿಗೆ ದೌಡಾಯಿಸುತ್ತಾರೆ.ಆಗುಂಬೆ,ಕವಲೇದುರ್ಗ,ಭೀಮನಕಟ್ಟೆ,ಹುಂಚ,ಕುಂದಾದ್ರಿ ಬೆಟ್ಟ,ಬರ್ಕಣ,ಒನಕೆ ಅಬ್ಬಿ,ಗಾಜನೂರಿನ ಹಿನ್ನೀರು,ಚಕ್ರಾ-ಯಡೂರಿನ ವಾರಾಹಿ ಹಿನ್ನೀರು,ಮಂಡಗದ್ದೆ ಪಕ್ಷಿಧಾಮ,ಸಕ್ರೆಬೈಲಿನ ಹಿನ್ನೀರ ಬಳಿಯಿರುವ ಆನೆ ಬಿಡಾರ ,ಸಿಬ್ಬಲಗುಡ್ಡೆ,ಕುಪ್ಪಳಿ,ತೀರ್ಥಹಳ್ಳಿ ಪೇಟೆಯೊಳಗಿನ ಗ್ರಾಮೀಣ ಸೊಗಡು ಹೀಗೆ ಸುಂದರ ಹಿನ್ನೆಲೆಗೆ ಕೊರತೆ ಇಲ್ಲದಿರುವುದರಿಂದ ಸಿಕ್ಕ ಸಿಕ್ಕ ಸಿನೆಮಾಗಳ ಪತ್ರಿಕಾಗೋಷ್ಠಿಗಳಲ್ಲಿ ಕೊಡುವ ಪ್ರೆಸ್ನೋಟ್ ಗಳು ಖಡ್ಡಾಯ ಎಂಬಂತೆ ಹೊರಾಂಗಣಗಳ ಪಟ್ಟಿಯಲ್ಲಿ ತೀರ್ಥಹಳ್ಳಿಯನ್ನೂ ಒಳಗೊಂಡಿರುತ್ತವೆ.


ನನಗೆ ನೆನಪಿರುವಂತೆ ಆಕಸ್ಮಿಕ,ಕಾದಂಬರಿ,ಫಣಿಯಮ್ಮ,ನಿಲುಕದ ನಕ್ಷತ್ರ,ಮುಂಗಾರಿನ ಮಿಂಚು,ಉಲ್ಟಾಪಲ್ಟ,ಮಸಣದ ಮಕ್ಕಳು,ಸಂಭ್ರಮ,ಪ್ರೇಮ-ಪ್ರೇಮ-ಪ್ರೇಮ,ಸಂಸ್ಕಾರ,ಘಟಶ್ರಾದ್ಧ,ನಿನದೆ ನೆನಪು,ಕಾನೂರು ಹೆಗ್ಗಡತಿ,ಮೌನಿ,ಕಲ್ಯಾಣ ಮಂಟಪ,ಮೈ ಆಟೋಗ್ರಾಫ್,ಮಿಸ್ ಕ್ಯಾಲಿಫೋರ್ನಿಯ,ಚಿಲಿಪಿಲಿ ಹಕ್ಕಿಗಳು,ಕರಾವಳಿ ಹುಡುಗಿ,ಮಠ,ಮತದಾನ,ಮತ್ತೆ ಮುಂಗಾರು,ಗಾಳಿಪಟ,ಮಾತಾಡ್ ಮಾತಾಡ್ ಮಲ್ಲಿಗೆ,ಹೊಂಗನಸು,ನಮ್ ಏರಿಯಾಲ್ ಒಂದಿನ,ಲಿಫ್ಟ್ ಕೊಡ್ಲ?,ಶ್ರೀರಾಮದಾಸು (ತೆಲುಗು) ಹೀಗೆ ಅನೇಕ ಚಿತ್ರಗಳಿಗೆ ಇಲ್ಲಿ ರೀಲು ಸುತ್ತಲಾಗಿದೆ.

ಈ ಊರಿನ ಚಹರೆಪಟ್ಟಿ ವಿವರಿಸೋದು ಸುಲಭ,ನಿಮ್ಮ ಅಂಗಯ್ಯನ್ನೊಮ್ಮೆ ನೋಡಿ ಕೊಂಡರಾಯಿತು! ಥೇಟ್ ಅದರ ಪಡಿಯಚ್ಚೆ ನಮ್ಮ ತೀರ್ಥಹಳ್ಳಿ.ದಕ್ಷಿಣಕ್ಕೆ ಒಂದೆಡೆ ಊರನ್ನೂ,ಇನ್ನೊಂದೆಡೆ ಕುರುವಳ್ಳಿಯ ಕಲ್ಲು ಕ್ವಾರಿಗಳನ್ನೂ ಬಳಸಿಕೊಂಡು ತುಂಗೆ ಹರಿಯುತ್ತಾಳೆ,ಕೊಪ್ಪದ ಕಡೆಯಿಂದ ಬರುವವರಿಗೆ ಕಮಾನುಸೇತುವೆಯಿದೆ (ಹಿಂದೆ ಇಲ್ಲಿ ಕಲ್ಲುಸಾರ ಮಾತ್ರವಿತ್ತು,ಹೊಳೆದಾಟುವವರು ದೋಣಿಯನ್ನೇ ಆಶ್ರಯಿಸಬೇಕಿತ್ತು,ಕುವೆಂಪು-ಎಂ ಕೆ ಇಂದಿರಾ ಕಾದಂಬರಿಗಳಲ್ಲಿ ಇದರ ಚಿತ್ರಣ ನೀವು ಓದಿರಬಹುದು. ಸಾರ=ಕಾಲಲ್ಲಿ ಮಾತ್ರ ಸಾಗಬಹುದಾದ ಕಿರುಸೇತುವೆ).ಊರ ಮಧ್ಯ ಇರುವ ಮುಖ್ಯರಸ್ತೆ ಮೌಲಾನ ಅಬ್ದುಲ್ ಕಲಾಂ ಆಜಾದ್ ಎಂಬ ಮೈಲುದ್ದದ ಹೆಸರಿನದಾಗಿದ್ದರೂ ಜನ ಅದನ್ನು ಕರಿಯೋದು ಆಜಾದ್ ರಸ್ತೆ ಎಂದೇ.ಪೂರ್ವಕ್ಕೆ ಆನಂದಗಿರಿಯಿದೆ ಇದನ್ನ ಬಳಸಿಕೊಂಡು ಶಿವಮೊಗ್ಗ ರಸ್ತೆ ಊರನ್ನ ಕೂಡುತ್ತದೆ.ಪಶ್ಚಿಮಕ್ಕೆ ಯಡೇಹಳ್ಳಿ ಕೆರೆ ಇಲ್ಲಿಂದ ಸಾಗರ ರಸ್ತೆ ಸೀಬಿನಕೆರೆ ಹಾಗು ಕೋಳಿಕಾಲುಗುಡ್ಡ ಬಳಸಿ ಊರನ್ನು ಮುಟ್ಟುತ್ತದೆ.ವಾಯುವ್ಯಕ್ಕೆ ಸಿದ್ದೇಶ್ವರಗುಡ್ಡ ಇದರ ಪಕ್ಕದ ಹೆದ್ದಾರಿ ಮಂಗಳೂರಿಗೆ ಊರಿನ ಕೊಂಡಿ.ಎಡವಿದರೊಂದು ದೇವಸ್ಥಾನ ಸಿಗುವ ರಥಬೀದಿ,ಹಿಂದೊಮ್ಮೆ ಛತ್ರಗಳಿದ್ದಿರಬಹುದಾದ ಛತ್ರಕೆರಿ,ಊರಿಗೊಬ್ಬಳೇ ಪದ್ಮಾವತಿಯಂತಿದ್ದ ಏಕೈಕ ಬಡಾವಣೆ ಸೊಪ್ಪು ಗುಡ್ಡೆ ಅಲ್ಲಿನ ಸಂತೆ ಮೈದಾನ ಪಕ್ಕದ ಸಾಬರ ಕೇರಿ,ಮಸೀದಿ ರಸ್ತೆಯ ಅಂಚಿಗೆ ಸೆಯಿಂಟ್ ಮೇರಿಸ್ ಇಗರ್ಜಿ,ಹೊಸತಾಗಿ ವಿಸ್ತಾರವಾದ ಬೆಟ್ಟಮಕ್ಕಿ,ಊರ ಆರಂಭದ ಕುಶಾವತಿ (ಪಕ್ಕದಲ್ಲೇ ನಾಡ್ತಿ ಹಾಗು ಕುಶಾವತಿ ಸೆಲೆಯಿದೆ),ಬಾಳೆಬೈಲಿನ ಹೊರವಿಸ್ತಾರ ಇವಿಷ್ಟು ಸೇರಿ ತೀರ್ಥಹಳ್ಳಿ ರೂಪುಗೊಂಡಿದೆ.


ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದ ಗಡಿಯಾಗಿದ್ದ (ಘಟ್ಟದ ಕೆಳಗಿನ ದಕ್ಷಿಣ ಕನ್ನಡ ಆಗ ಮದರಾಸು ಪ್ರಾಂತ್ಯದ ಭಾಗವಾಗಿತ್ತು) ತೀರ್ಥಹಳ್ಳಿಗೆ ಒಡೆಯರ ಕೃಪಾದೃಷ್ಟಿ ಆಗಲೆ ಹರಿದಿತ್ತು.ಸರ್ ಎಂ ವಿಶ್ವೇಶ್ವರಯ್ಯನವರ ಮುತುವರ್ಜಿಯಿಂದ ಆ ಕಾಲದಲ್ಲಿಯೇ ತುಂಗೆಗೆ ಅಡ್ಡಲಾಗಿ ಕಮಾನು ಸೇತುವೆ ಕಟ್ಟಲಾಯಿತು,ಏಳು ದಶಕದ ಹಿಂದೆ ಕಟ್ಟಲಾಗಿರುವ ಆ ಸೇತುವೆ ಇವತ್ತಿಗೂ ಗಟ್ಟಿಮುಟ್ಟಾಗಿದೆ.ಮೂರೆದಿನಕ್ಕೆ ಬೀಳುವ ಇಂದಿನ ಸರಕಾರಿ ಸೇತುವೆಗಳ 'ಸಾಧನೆ'ಗಳನ್ನು ಇದು ಇಂದಿಗೂ ನಾಚಿಸುತ್ತಿದೆ.ಈಗಿನ ಕಾಲದಲ್ಲಾದರೆ ನಿಶ್ಚಿತ ಮೊತ್ತಕ್ಕಿಂತ ಹೆಚ್ಚುವರಿ ಅನುದಾನಕ್ಕಾಗಿ ಬಾಯಿ ಬಿಡುತ್ತಿದ್ದರೇನೋ? ಆದರೆ ಆಗಿನ ವಿಶ್ವೇಶ್ವರಯ್ಯನವರ ಕಾಮಗಾರಿಯಲ್ಲಿ ಸೇತುವೆ ಕಟ್ಟಿಯೂಕಚ್ಚಾ ಸಾಮಗ್ರಿ ಮಿಕ್ಕಿತು! ಉಳಿದಿದ್ದನ್ನು ಒಂದು ನೆಲೆ ಮುಟ್ಟಿಸಲು ಅವರು ಕಂಡುಕೊಂಡದ್ದೆ ಬೆಟ್ಟಕ್ಕೆ ಕಲ್ಲು ಹೊರುವ ಉಪಾಯ! ಅಂದು ಅವರು ಬೆಟ್ಟಕ್ಕೆ ಕಲ್ಲು ಹೊತ್ತದ್ದು ಖಂಡಿತ ನಿರುಪಯೋಗವಾಗಲಿಲ್ಲ.ಇಂದಿಗೂ ತೀರ್ಥಹಳ್ಳಿಯ ಯಾವುದೆ ಭಾಗದಿಂದಲಾದರೂ ಅನಂದಗಿರಿಯತ್ತ ಕಣ್ಣು ಹಾಯಿಸಿದರೆ ಅದರ ತುತ್ತತುದಿಯಲ್ಲಿ ಟೋಪಿಯಂತೆ ಕಾಣುವ ಸುಂದರ ಮಂಟಪವೊಂದನ್ನು ನೀವು ಕಾಣಬಹುದು.ಅದರ ತಪ್ಪಲಿನಲ್ಲಿರುವ ತುಂಗಾ ಕಾಲೇಜಿನ ದೂರದ ನೋಟವೂ ಸೇರಿ ಅದು ಮನೋಹರವಾಗಿ ಕಾಣುತ್ತೆ.ಸ್ಥಳಿಯರ ಬಾಯಲ್ಲಿ 'ವಿಶ್ವೇಶ್ವರ ಮಂಟಪ'ಎಂದೇ ಕರೆಸಿ ಕೊಳ್ಳುವ ಈ ಮಂಟಪಕ್ಕೆ ಎಲ್ಲಾದರೂ ಬಾಯಿದ್ದಿದ್ದರೆ ತನ್ನ ಆಸುಪಾಸಿನಲ್ಲಿ ಈ ತನಕ ನಡೆದಿರುವ ಪ್ರೇಮ ಕಲಾಪ-ಪ್ರಣಯ ಪ್ರಕರಣಗಳನ್ನು ಅದು ಇದ್ದ ಬದ್ದವರಿಗೆಲ್ಲ ಹೇಳಿ ಅನೇಕರ ಮನೆ ಹಾಳು ಮಾಡುತ್ತಿತ್ತು! ತಾಲೂಕಿನ ಕೇಂದ್ರದಲ್ಲಿರುವ ಸರಕಾರಿ ಆಸ್ಪತ್ರೆಯೂ ಮೈಸೂರಿನ ಒಡೆಯರ ಕೊಡುಗೆಯೆ,ಇದನ್ನು ಇಲ್ಲಿಯ ಜನ ಬಾಯ್ತುಂಬ 'ಜಯಚಾಮ ರಾಜೇಂದ್ರ ಆಸ್ಪತ್ರೆ' ಅನ್ನುತ್ತರೆಯೇ ಹೊರತು ಸರಕಾರಿ ಆಸ್ಪತ್ರೆ ಎನ್ನರು.

07 September 2010

ತೀರ್ಥಹಳ್ಳಿ ಎಂದರೆ...

ಮಲೆನಾಡಿನ ಒಳಗೆ ಹುದುಗಿರುವ ತೀರ್ಥಹಳ್ಳಿ ಸುಮಾರು ಹದಿನೈದು ಸಾವಿರ ಜನಸಂಖ್ಯೆಯೂ ಇರದ ಪುಟ್ಟ ಪಟ್ಟಣ. ಅತ್ತ ತೀರ ಹಳ್ಳಿಯೂ ಅಲ್ಲದೆ,ಇತ್ತ ಅರೆಬೆಂದ ಪಟ್ಟಣದ ಲಕ್ಷಣಗಳನ್ನ ರೂಢಿಸಿಕೊಳ್ಳುತ್ತಾ ತನ್ನ ಹೆಸರಿಗೆ ನ್ಯಾಯ ಸಲ್ಲಿಸುತ್ತಾ ಇದೆ.ನಾಲ್ಕೂ ಸುತ್ತಿನಲ್ಲಿರುವ ಗುಡ್ಡಗಳ ನಡುವೆ ತಟ್ಟೆಯಾಕಾರದಲ್ಲಿ ಊರು ಹಬ್ಬಿದ್ದು ಯಾವುದೆ ದಿಕ್ಕಿನಿಂದ ಊರು ಹೊಕ್ಕರೂ ನಿಮ್ಮ ಕಣ್ಣಿಗೆ ಅಡಿಕೆ ತೋಟಗಳು ಕಾಣುತ್ತವೆ.ಕಳೆದ ಅರ್ಧ ಶತಮಾನದಲ್ಲಿ ಆಗಿದ್ದ ಪ್ರಗತಿಯ ವೇಗವನ್ನ ಕಳೆದ ಐದೇ ವರ್ಷದಲ್ಲಿ ಸಾಧಿಸಿ ಅಡ್ಡಾದಿಡ್ಡಿ ಓಡುತ್ತಿರುವ ಕುಡುಕನಂತೆ ನನ್ನ ಕಣ್ಣಿಗೆ ಈ ನಡುವೆ ತೀರ್ಥಹಳ್ಳಿ ಕಾಣುತ್ತಿದೆ.


ಮೂಲತಃ ಕೆಳದಿ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿದ್ದ ಇಲ್ಲಿಗೆ ನವ ನಾಗರೀಕತೆ ಕಾಲಿಟ್ಟದ್ದು ಬಹುಷಃ ಎಪ್ಪತ್ತು ವರ್ಷಗಳ ಹಿಂದೆ ಮೈಸೂರಿನ ಒಡೆಯರು ತುಂಗಾನದಿಗೆ ಅಡ್ಡಲಾಗಿ ಕಟ್ಟಿಸಿದ ಕಮಾನು ಸೇತುವೆಯ ಮೂಲಕ.ಬಿದನೂರು,ಕೆಳದಿ,ನಗರ ಹಾಗು ಇಕ್ಕೇರಿ ಗಳಲ್ಲಿ ನಾಲ್ನಾಲಕ್ಕು ರಾಜಧಾನಿ ಇದ್ದಿದ್ದರೂ ಕೆಳದಿ ನಾಯಕರ ವಾಣಿಜ್ಯದ ಕೇಂದ್ರವಾಗಿತ್ತು ಇದು.

ಅವರ ಗುರು ಮಠ ಇದ್ದುದು ಇಲ್ಲಿನ ಕವಲೆದುರ್ಗದಲ್ಲಿರುವ ಕೋಟೆಯಲ್ಲಿ.ಇಂದಿಗೂ ಈ ಲಿಂಗಾಯತ ಮಠ ಅಸ್ತಿತ್ವದಲ್ಲಿದೆ.ಸಾಂಸ್ಕ್ರತಿಕವಾಗಿ ಆ ಕಾಲದಿಂದಲೂ ತೀರ್ಥಹಳ್ಳಿ ಸಮೃದ್ಧ.ಸುತ್ತಮುತ್ತಲಿನ ಹೊಸನಗರ,ಕೊಪ್ಪ,ಶೃಂಗೇರಿ,ನರಸಿಂಹರಾಜಪುರ,ಕುಂದಾಪುರ,ಕಾರ್ಕಳ, ಶಿವಮೊಗ್ಗ ತಾಲೂಕುಗಳು ಹೋಲಿಕೆಯಲ್ಲಿ ಸಾಂಸ್ಕೃತಿಕವಾಗಿ ಇನ್ನೂ ತೂಕಡಿಸುತ್ತಿದ್ದರೆ ಇತ್ತ ತೀರ್ಥಹಳ್ಳಿಯಲ್ಲಿ ಅಕ್ಷರಶಃ ಪ್ರತಿಭಾ ಸ್ಪೋಟವಾಗುತ್ತಿದೆ.


ಕರ್ನಾಟಕ ಸಂಗೀತದ ಪಿತಾಮಹ ಪುರಂದರ ದಾಸರು ಇಲ್ಲಿನ ಆರಗದವರು.ಕನ್ನಡದ ಮೊದಲ ಜ್ಞಾನಪೀಠ ಪಡೆದ ಕುವೆಂಪು ಇಲ್ಲಿಯ ಕುಪ್ಪಳಿಯವರು.ಆರನೇ ಜ್ಞಾನಪೀಠವೂ ಇಲ್ಲಿನ ಭಾರತೀಪುರದ ಅನಂತಮೂರ್ತಿಯವರಿಗೆ ಸಂದಿದೆ.ಐದು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ ನಿರ್ದೇಶಕ ಗಿರೀಶ್ ಇಲ್ಲಿನ ಕಾಸರವಳ್ಳಿಯವರು.ಕರ್ನಾಟಕದಲ್ಲಿ ಗೇಣಿ ಪದ್ಧತಿ ಜಾರಿಗೆ ತಂದ ನಾಡಿನ ಎರಡನೇ ಮುಖ್ಯಮಂತ್ರಿ ಮಂಜಪ್ಪ ಇಲ್ಲಿನ ಕಡಿದಾಳಿನವರು (ಅಂದಹಾಗೆ ವಿಧಾನಸೌಧದ ಉದ್ಘಾಟಕರು ಇವರೇ). ಈ ನಾಡು ಕಂಡ ವಿಶಿಷ್ಟ ರಾಜಕಾರಣಿ ಗೋಪಾಲಗೌಡರು ಇಲ್ಲಿನ ಶಾಂತಾವೆರಿಯವರು.ಇಂದಿನ ಯುವಕರ ಒಂದು ತಲೆಮಾರಿನ ಕಣ್ತೆರೆಸಿದ ಪೂರ್ಣಚಂದ್ರತೇಜಸ್ವಿ ಹುಟ್ಟಿದ-ಪ್ರಕೃತಿಯಲ್ಲಿ ಕಡೆಗೆ ಲೀನವಾದ ಊರಿದು.ಕನ್ನಡದ ವಿಶಿಷ್ಟ ಕವಿ ಎಸ್ ವಿ ಪರಮೇಶ್ವರ ಭಟ್ಟರು ಇಲ್ಲಿನ ಮಾಳೂರಿನವರು.ಅಂಕಣ ಬರಹ ಪಿತಾಮಹ ಮಾನಪ್ಪ ನಾಯಕರು ಇಲ್ಲಿನ ಹಾರೋಗುಳಿಗೆಯವರು.ರಾಜ್ಯದಲ್ಲಿ ರೈತ ಚಳುವಳಿ ಕಟ್ಟಿ ಬೆಳೆಸಿದ ದಿವಂಗತ ಸುಂದರೇಶ್,ಶಾಮಣ್ಣ ಇಲ್ಲಿನ ಕಡಿದಾಳಿನವರು.ಶರತ್ ಕಲ್ಕೋದ್,ಸತ್ಯಮೂರ್ತಿ ಆನಂದೂರು,ರಮೇಶ್ ಶಟ್ಟಿ,ವಿಕಾಸ ನೇಗಿಲೋಣಿ,ಶ್ರೀಕಾಂತ್ ಭಟ್ ಇವರೆಲ್ಲ ಸಧ್ಯ ಪತ್ರಿಕೋದ್ಯಮದಲ್ಲಿ ಬ್ಯುಸಿ.ಇಲ್ಲಿನ ಎಂ ಕೆ ಇಂದಿರಾ,ಶಾರದ ಉಳುವೆಯವರನ್ನ ಓದಿರದ ಕಾದಂಬರಿ ಪ್ರಿಯರು ಇದ್ದಿರಲಿಕ್ಕಿಲ್ಲ.ಆಕಾಲದ ಸುಂದರಾಂಗ ಮಾನು,ಈ ಕಾಲದ ಚಲುವ ದಿಗಂತ ಇಲ್ಲಿಂದ ಹೋಗಿ ಬೆಳ್ಳಿತೆರೆಯಲ್ಲಿ ಮಿನುಗುತ್ತಿದ್ದರೆ.ಕೋಡ್ಲು ರಾಮಕೃಷ್ಣ ಇಲ್ಲಿನವರೇ ಆದ ಚಿತ್ರ ನಿರ್ದೇಶಕ

06 September 2010

ಪಿಸುದನಿಯಾಗುತೀನಿ.....

ನಿನ್ನ ಮತ್ತೆ ಪಡೆವ ಗುಪ್ತ ಕಾಮನೆ ಮನಸೊಳಗೆ ಇಲ್ಲ ಎಂದು ಹೇಗೆ ಹೇಳಲಿ?,
ನೀನು ನನ್ನ ನಸೀಬಿನಲ್ಲಿಲ್ಲ ಅನ್ನೋದು ಬೇರೆ ಮಾತು/
ನಾಲ್ಕೇ ಆದರೂ ನಿನ್ನ ಜೊತೆ ನಡೆದ ಹೆಜ್ಜೆಗಳ ಅನುರಣನ ಮರೆಯುವುದು ಕಷ್ಟ ನನಗೆ,
ಮೋಡಗಟ್ಟಿದ ಬಾಳಿನ ಕೊಡೆಯ ತುಂಬ...ಹರಿದ ಕನಸುಗಳ ನೂರಾರು ತೂತು//


ಮೊದಲ ಮಳೆ ಮೋಡದಲಿ ಸೇರಿ ನಿನ್ನೆದೆಯಲಿ ಹನಿಯಾಗುತೀನಿ,
ಮೆಲ್ಲಗೆ ಮನಸಲಿ ಬೆರೆತು ನಿನ್ನೊಳಗಿನ ಪಿಸುದನಿಯಾಗುತೀನಿ/
ಏನೊಂದೂ ಹೇಳದೆ ಎದೆ ಬಡಿತದ ಪ್ರತಿ ಮಿಡಿತವಾಗುತೀನಿ,
ಅನುಮತಿಯನೆ ಕೇಳದೆ ನಿನ್ನಲಿ ನೆಲೆಸಿ ಆವರಿಸುತೀನಿ//

ಪಿಸುದನಿಯಾಗುತೀನಿ.....

ನಿನ್ನ ಮತ್ತೆ ಪಡೆವ ಗುಪ್ತ ಕಾಮನೆ ಮನಸೊಳಗೆ ಇಲ್ಲ ಎಂದು ಹೇಗೆ ಹೇಳಲಿ?,
ನೀನು ನನ್ನ ನಸೀಬಿನಲ್ಲಿಲ್ಲ ಅನ್ನೋದು ಬೇರೆ ಮಾತು/
ನಾಲ್ಕೇ ಆದರೂ ನಿನ್ನ ಜೊತೆ ನಡೆದ ಹೆಜ್ಜೆಗಳ ಅನುರಣನ ಮರೆಯುವುದು ಕಷ್ಟ ನನಗೆ,
ಮೋಡಗಟ್ಟಿದ ಬಾಳಿನ ಕೊಡೆಯ ತುಂಬ...ಹರಿದ ಕನಸುಗಳ ನೂರಾರು ತೂತು//


ಮೊದಲ ಮಳೆ ಮೋಡದಲಿ ಸೇರಿ ನಿನ್ನೆದೆಯಲಿ ಹನಿಯಾಗುತೀನಿ,
ಮೆಲ್ಲಗೆ ಮನಸಲಿ ಬೆರೆತು ನಿನ್ನೊಳಗಿನ ಪಿಸುದನಿಯಾಗುತೀನಿ/
ಏನೊಂದೂ ಹೇಳದೆ ಎದೆ ಬಡಿತದ ಪ್ರತಿ ಮಿಡಿತವಾಗುತೀನಿ,
ಅನುಮತಿಯನೆ ಕೇಳದೆ ನಿನ್ನಲಿ ನೆಲೆಸಿ ಆವರಿಸುತೀನಿ//

ನೆನಪ ಕೆರಯಲ್ಲಿ ಮುಳುಗೆದ್ದು...

ಪ್ರಣಯದ ಗಾಳಿ ಒಲವ ಕಣ್ತೆರೆಸಿ,
ಮತ್ತೆ ಕವಿದ ಮೋಡ ಎದೆಚಿಪ್ಪಲಿ ಹನಿಗಳ ಮುತ್ತಸುರಿಸಿ/
ಮನದ ಪ್ರತಿ ಮಿಡಿತಕ್ಕೂ ಕಾತರದ ನವಿರು ಹುಚ್ಚ ಹಿಡಿಸಿ,
ಗುಟ್ಟಾಗಿ ಸಂಚು ಹೂಡಿದ್ದು ಕೇವಲ ನಿನ್ನೊಂದು ಕಿರು ನಗೆಗಾಗಿ//

ಒಂಟಿಯಾಗಿ ಉಸಿರಾಡೋದೂ ವಿಪರೀತ ಕಷ್ಟವಿತ್ತು ಒಂದೊಮ್ಮೆ,
ನೀ ಸಿಗದಿದ್ದರೆ ಅನ್ನೋದು ನಿಜ...ಹೌದು/
ನಿರ್ಭರ ರಾತ್ರಿಗಳು...ದುರ್ಭರ ಕನಸುಗಳು,
ನನ್ನನು ಕಾಡದಂತೆ ಕಾಪಾಡಿದ್ದು....ನೀನಿತ್ತ ಜೊತೆ ಮಾತ್ರ//

02 September 2010

ಮರೆಯಲಾರೆ...

ನಿನಗೇ ನೀನು ಮರೆತು ಹೋಗುವಷ್ಟು ನಿನ್ನ ಪ್ರೀತಿಸುತ್ತೇನೆ,
ನನ್ನೊಲವ ಆಳದಲ್ಲಿ ಮನದಣಿಯುವವರೆಗೂ ಈಜಾಡಿಸುತ್ತೇನೆ/
ನನ್ನ ತುಟಿಯಂಚಿಂದ ಉದುರುವ ಪದಗಳಲೆಲ್ಲ ನಿನ್ನದೆ ಪಿಸುದನಿ,
ಎದೆಯ ಒಳಗೆಲ್ಲ ತುಂತುರು...ನಿನ್ನ ನೆನಪಿನದೆ ಮಳೆಹನಿ//

01 September 2010

ಒಲುಮೆಯ ಭಿಕ್ಷೆ ನಿರೀಕ್ಷೆ...

ಬರಡಾದ ಭಾವದ ಬಯಲಲ್ಲಿ ಮತ್ತೆ ಪ್ರೇಮದ ಹಸಿರು ಚಿಗುರಲಾರದು,
ಬತ್ತಿದ ಮನದ ಬಾವಿಯಲ್ಲಿ ಒಲವ ಒರತೆ ಪುನಃ ಸೆಲೆ ಒಡೆಯಲಾರದು/
ನೀನೆ ಮರಳಿ ಕಾಡಿದರೂ ಒಡೆದ ಮನಸ ಕನ್ನಡಿ ಮತ್ತೆ ಕೂಡಲಾರದು,
ಇನ್ನೇನಿದ್ದರೂ ಎದೆಯೊಳಗೆ ನೆನಪಿನ ಜಾತ್ರೆ...
ಅದರ ಮೆರವಣಿಗೆಯಲ್ಲಿ ಒಲವ ತಿರುಕ ನಾನು ಹಿಡಿದು ಸಾಗುವೆನು ಭಿಕ್ಷಾಪಾತ್ರೆ//

31 August 2010

ನೀ ನಕ್ಕರೆ ಮಳೆ...

ಎಲ್ಲರೊಳಗೊಂದಾಗದೆ ಗುಂಪಲ್ಲಿ ನಿಂತಿದ್ದರೂ ಏಕಾಂಗಿಯಾಗಿದ್ದೆ,
ಆ ಒಂಟಿತನ ಕಳೆದದ್ದು ನಿರೀಕ್ಷಿಸದೆ ಬಾಳಲ್ಲಿ ಪ್ರತ್ಯಕ್ಷವಾದ ನೀನು/
ಸುಮ್ಮನೆ ಕಾರಣವೆ ಇಲ್ಲದೆ...
ಅರಿಯದ ಭಾವವೊಂದಕ್ಕೆ ಕಾತರಿಸಿ ಪರಿತಪಿಸುತ್ತಿದ್ದೆ,
ಅದಕ್ಕೆ ಅರ್ಥ ಕೊಟ್ಟಿದ್ದು ನಿನ್ನ ನಗು ತುಂಬಿದ ಸಮ್ಮತಿ....
ಅದರ ಜೊತೆಜೊತೆಗೆ ಮಳೆ ಹನಿಸಿದ ಬಾನು//

ನಿನ್ನ ಕೈಬರಹ....

ನೆನಪುಗಳ ಭಾರಕ್ಕೆ ಹೃದಯ ಒಡೆದು ಹೋಗುತಿದೆ,
ಒಲವ ಆಳದ ಬಾವಿಗೆ ಶರಣಾದ ಭಾವಗಳು ಆತ್ಮಹತ್ಯೆ ಮಾಡಿಕೊಳ್ಳುತಿವೆ/
ಈಗಂತೂ ಹೀಗೆಯೆ ಬದುಕುವ ಅಭ್ಯಾಸ ರೂಢಿಯಾಗಿದೆ,
ನೀ ದೂರಾದರು...ಚೂರಾದರು ನಿನ್ನ ನೆನಪು ನನ್ನೋಳಗಿನ್ನೂ ಬಾಕಿಯಿದೆ//


ಒಲವಿನ ಕಾಡಿಗೆಯಿಂದ....ನಾಳೆಗಳ ಕಾಗದದ ಮೇಲೆ,
ನಿನ್ನ ಕೈಯಿಂದಲೇ ನನ್ನ ಹಣೆಬರಹ ಬರೆದು ಬಿಡು/
ಅಳಿಸಲಾಗದ ಶಾಯಿ ಎಲ್ಲಾದರೂ ಸಿಕ್ಕೀತು.....ಹುಡುಕಿ ತರುತೀನಿ ಸ್ವಲ್ಪ ಕಾಯಿ,
ಅಕ್ಕರೆಯ ನಾಲ್ಕು ಸಾಲುಗಳನ್ನೂ ಸೇರಿಸಿದ ಪದಗಳಿಂದಲೆ.....
ಅದೃಷ್ಟದ ಕವನ ಹರಿಸಿಬಿಡು//

30 August 2010

ಮತ್ತೆ ಮಲೆನಾಡು...

ನೆಟ್ಟಗೆ ರಸ್ತೆಗಳೇ ಇದ್ದಿರದಿದ್ದ ಮಲೆನಾಡಿನ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಮೊತ್ತ ಮೊದಲಿಗೆ ಆರುಚಕ್ರದ ಬಸ್ ಗಳನ್ನ ಓಡಿಸಿದ ಹಿರಿಮೆ ಕೊಪ್ಪದ 'ಶಂಕರ್ ಮೋಟರ್ ಸರ್ವಿಸ್' ಕಂಪನಿಯದು.ಓಂ ಪುರಿಯ ಕೆನ್ನೆಗೆ ಸವಾಲೊಡ್ಡುವಂತಿದ್ದ,ಟಾರ್ ಎಂಬ ಅತ್ಯಮೂಲ್ಯ ವಸ್ತುವಿನ ಬಗ್ಗೆ ಕೇಳಿಯೂ ಅರಿತಿರದ ಹಳ್ಳಿಯ ರಸ್ತೆಗಳಲ್ಲಿ ಈಗಿನಷ್ಟು ಖಾಸಗಿ ವಾಹನಗಳಿಲ್ಲದ ಒಂದು ಕಾಲದಲ್ಲಿ ದರ್ಬಾರು ನಡೆಸಿದ್ದ ಬಸ್ಸುಗಳದ್ದೆ ಒಂದು ರೋಚಕ ಇತಿಹಾಸ.
ಟಾರು ಎಂಬ ಆಧುನಿಕ ಕ್ರಾಂತಿ ಮಲೆನಾಡನ್ನು ಮುಟ್ಟಿದ್ದು ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ,ಅದಕ್ಕೂ ಮೊದಲು ತಾಲೂಕು ಕೇಂದ್ರಗಳ ಮುಖ್ಯರಸ್ತೆಗಳಿಗಷ್ಟೇ ಟಾರು ಕಾಣುವ ಭಾಗ್ಯವಿರುತ್ತಿತ್ತು,ಕೊಪ್ಪದಲ್ಲಿ ಲೋಕಸೇವಾನಿರತ ದ್ಯಾವೇಗೌಡರು ಅರವತ್ತರ ದಶಕದಲ್ಲೆ ಮಜಭೂತು ಕಾಂಕ್ರೀಟ್ ಮಾರ್ಗ ಮಾಡಿಸಿದ್ದರು,ಇಂದಿಗೂ ಕೊಪ್ಪದಲ್ಲಿ ಅದು ಗಟ್ಟಿಮುಟ್ಟಾಗಿರುವುದನ್ನು ಕಾಣಬಹುದು.ಉಳಿದಂತೆ ಮಣ್ಣು ಮಾರ್ಗಗಳೇ ಎಲ್ಲೆಲ್ಲೂ ಆವರಿಸಿದ್ದವು.ವರ್ಷದ ಎಂಟು ತಿಂಗಳು ಎಡೆಬಿಡದೆ ಸುರಿಯುತ್ತಿದ್ದ ಜಡಿ ಮಳೆಗೆ ಇಲ್ಲಿ ಕೆಸರಿನ ಸಿಂಚನವಾಗುತ್ತಿತ್ತು.ಇನ್ನುಳಿದ ನಾಲ್ಕು ತಿಂಗಳು ಹಿಟ್ಟಿನಂತೆ ಏಳುತ್ತಿದ್ದ ಧೂಳಿನಲ್ಲಿ ರಸ್ತೆಯ ಇಕ್ಕೆಲದ ಮರಗಳ ಜೊತೆ ತಾವೂ ಮಿಂದು ಪವಿತ್ರರಾಗುವ ಅವಕಾಶ ಬಸ್ ಪ್ರಯಾಣಿಕರದ್ದು.ಬಸ್ ಹೊರಟಲ್ಲಿಂದ ಹತ್ತಿ ಬಂದು ಮುಟ್ಟುವ ಊರಿನಲ್ಲಿ ಇಳಿಯುವಾಗ ಥೇಟ್ ಕಂಚಿನ ಪ್ರತಿಮೆಗಳಂತೆ ಎಲ್ಲರೂ ಕಂಗೊಳಿಸುತ್ತಿದ್ದರು.ಒಂದು ಕಾಲದಲ್ಲಿ ಸ್ವಚ್ಚವೆ ಆಗಿದ್ದಿರಬಹುದಾದ ಅವರ ವಸ್ತ್ರಗಳು ಬಿಳಿ ಬಣ್ಣದವು ಎಂದು ಆಣೆ-ಪ್ರಮಾಣ ಮಾಡಿ ಹೇಳಿದರೂ ನಂಬಲಾರದ ಮಟ್ಟಿಗೆ ಅವುಗಳ ಮೂಲ ಬಣ್ಣ ಮರೆಯಾಗಿರುತ್ತಿತ್ತು.

ಶಿವಮೊಗ್ಗದಿಂದ ತೀರ್ಥಹಳ್ಳಿ ನಡುವಿನ ೬೦ ಕಿಲೋಮೀಟರ್ ಪ್ರಯಾಣಕ್ಕೆ ಕನಿಷ್ಠ ಎರಡೂವರೆಯಿಂದ ಮೂರು ಘಂಟೆಗಳ ಪ್ರಯಾಣವಧಿ ತಗಲುತ್ತಿತ್ತು.ಇನ್ನು ಅದೇ ಮಾರ್ಗವಾಗಿ ಮಂಗಳೂರಿಗೆ ತಲುಪುವ ಕಾರ್ಯವಂತೂ ವಿಪರೀತ ಸಾಹಸದ್ದು.ಎಪ್ಪತ್ತರ ದಶಕದ ಕೊನೆಯವರೆಗೂ 'ದೇವಂಗಿ ಮೋಟರ್ ಸರ್ವಿಸ್' ಅಥವಾ 'ಮೇಗರವಳ್ಳಿ ಮೋಟರ್ ಸರ್ವಿಸ್'ಬಸ್ಸುಗಳ ಮೂಲಕ ಆಗುಂಬೆ ಸೇರಿ ಅಲ್ಲಿಂದ ಸುಮಾರು ಕಾದ ನಂತರ ಉಬ್ಬು ಮೂತಿಯ ಟ್ಯಾಕ್ಸಿಗಳಲ್ಲಿ ಕೂತು ಸೋಮೇಶ್ವರ ಮುಟ್ಟಿ ಮತ್ತೆ ಅಲ್ಲಿ ಹೆಣಕಾದಂತೆ ಕಾದು ಸಿಪಿಸಿ ಬಸ್ಸಿನಲ್ಲಿ ಮಂಗಳೂರಿಗೆ ಹೋಗಬೇಕಾಗುತ್ತಿತ್ತು.ಸಮಯದ ಖಾತ್ರಿ ಯಾರಿಗೂ ಇರುತ್ತಲೇ ಇರಲಿಲ್ಲ! ಇನ್ನು ದಿನಕ್ಕೆ ಒಂದೇ ಬಾರಿ ಆಗುಂಬೆಗೆ ಬಂದು ಹೋಗುವ ಈ ಎರಡೂ ಬಸ್ಗಳು ಮಾರ್ಗ ಮಧ್ಯೆ ಕೆಟ್ಟು-ಪಂಚರ್ ಆಗಿ ನಿಂತರಂತೂ ಪ್ರಯಾಣಿಕರು ಕಣ್ ಕಣ್ ಬಿಡುವುದನ್ನು ಬಿಟ್ಟು ಇನ್ನೇನನ್ನೂ ಮಾಡಲಾಗುತ್ತಿರಲಿಲ್ಲ.ಎಪ್ಪತ್ತರ ದಶಕಾಂತ್ಯದಲ್ಲಿ ನಟ ಸುದೀಪರ ತಂದೆ ಸಂಜೀವ್ ಮಾಲಕತ್ವದ 'ಸ್ವಸ್ತಿಕ್' ಮಿನಿ ಬಸ್ಸಿನ ಶಿವಮೊಗ್ಗ-ಮಂಗಳೂರು ನಡುವಿನ ನೇರ ಪ್ರಯಾಣ ಆರಂಭ ಗೊಂಡಾಗಲೆ ಈ ತಲೆನೋವು ಸ್ವಲ್ಪ ತಗ್ಗಿದ್ದು.ಇದಕ್ಕೂ ಮೊದಲು ನೇರ ಪ್ರಯಾಣದ ಸುಖ ಬಯಸುವವರು ಹರಿಹರದಿಂದ ತೀರ್ಥಹಳ್ಳಿ ಕುಂದಾಪುರ ಮಾರ್ಗವಾಗಿ ಹೋಗುತ್ತಿದ್ದ 'ಜಗದೀಶ್ವರ'ದಲ್ಲಿ ಹೋಗ ಬೇಕಾಗುತ್ತಿತ್ತು.ತುಂಬಾ ಸುತ್ತು ಬಳಸಿನ ಹಾದಿ ಅದಾಗಿದ್ದರಿಂದ ಬಹುತೇಕ ಯಾರೂ ಅದರತ್ತ ಆಸಕ್ತಿ ವಹಿಸುತ್ತಿರಲಿಲ್ಲ.


ಮಲೆನಾಡು ಮೊದಲ ಬಸ್ ಭಾಗ್ಯ ಕಂಡಿದ್ದೆ ಐವತ್ತರ ದಶಕದಲ್ಲಿ.ಆರಂಭದಲ್ಲಿ ಇದ್ದವು ಕಲ್ಲಿದ್ದಲು ಇಂಧನದ ಉಗಿಚಾಲಿತ ಬಸ್ ಗಳು.ಬಸ್ ಹಿಂಭಾಗದ ಹೊರ ಮೈಯಲ್ಲಿ ನೀರಿನ ಬಾಯ್ಲರ್ ಹಾಗು ಕಲ್ಲಿದ್ದಲಿನ ಒಲೆ ಹಾಗು ಚಕ್ರಾಕಾರದ ತಿದಿ ಇರುತ್ತಿದ್ದ ಹನುಮಂತನ ಮುಸುಡಿಯಂತೆ ಉಬ್ಬಿದ ಮುಂಭಾಗಕ್ಕಷ್ಟೇ ಬಣ್ಣ ಮೆತ್ತಿರುತ್ತಿದ್ದ ನಿರಾಭರಣ ಸುಂದರಿಯಂತಹ ಬಸ್ ನ್ನ ಕಲ್ಪಿಸಿಕೊಳ್ಳಿ.ಎರಡೂ ಪಕ್ಕ ತೆರೆದ ಕಿಟಕಿಗಳಿದ್ದು ಅದರ ಮೇಲ್ಭಾಗ ಮಳೆ ಬಂದರೆ ಇರಲಿ ಎಂಬಂತೆ ಉದ್ದನುದ್ದ ಟರ್ಪಾಲ್ ಬಿಗಿದಿರುತ್ತಿದ್ದರು.ಮುಂಭಾಗದ ತಲೆ ಮೇಲೆ ಕಿರೀಟದಂತೆ ಬಸ್ ಪ್ರವರ ಬರೆದ ಫಲಕ-ಡ್ರೈವರ್ ಬಾಗಿಲಿನ ಮೇಲೆ ದೊಡ್ಡ ಒತ್ತು ಹಾರನ್ ಇವಿಷ್ಟು ಬಿಟ್ಟರೆ ಇನ್ನೇನೂ ವಿಶೇಷ ಅಲಂಕಾರ ಇರುತ್ತಿರಲಿಲ್ಲ.ಹಿಂಬದಿಯ ಬಾಯ್ಲರ್ ನಲ್ಲಿ ಸಾಕಷ್ಟು ನೀರಿರುವುದನ್ನು ಖಚಿತ ಪಡಿಸಿಕೊಂಡ ಕ್ಲೀನರ್ ಬೇಕಾದಷ್ಟು ಕಲ್ಲಿದ್ದಲು ಸುರಿದು ತಿದಿ ಒತ್ತಿದನೆಂದರೆ ಬಸ್ ಎರಡೂ ಬದಿಗಳೊಳಗೆ ಅಂತರ್ಗತವಾಗಿರುತ್ತಿದ್ದ ಸಿಲೆಂಡರ್ ಗಳಲ್ಲಿ ಉಗಿ ತುಂಬಿಕೊಂಡು ಪ್ರಯಾಣಕ್ಕೆ ಬಸ್ ಸಿದ್ಧವಾದಂತೆ.ಗಾತ್ರ ಹಾಗು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಅನುಸರಿಸಿ ಎರಡು ಅಥವಾ ಮೂರು ಸಿಲೆಂಡರ್ ಬಸ್ಸುಗಳು ಚಾಲ್ತಿಯಲ್ಲಿದ್ದವು.ಅರ್ಧ ದಾರಿಯಲ್ಲೋ,ಉಬ್ಬು ರಸ್ತೆಯಲ್ಲೋ ಉಗಿಯ ಒತ್ತಡ ಸಾಲದೆ ಬಸ್ ನಿಂತರೆ ಚಾಲಕನೂ,ಇಲ್ಲವೆ ಕ್ಲೀನರೋ ಕೆಳಗಿಳಿದು ಮತ್ತೆ ಕಲ್ಲಿದ್ದಲು ಸುರಿದು ತಿದಿ ಒತ್ತಿ ಉಗಿ ಹೆಚ್ಚಿಸಿದಾಗಲೆ ಬಸ್ಸಿಗೆ ಮರಳಿ ಜೀವ ಬರುತ್ತಿದ್ದುದು.ಅಲ್ಲಿಯವರೆಗಿನ ವಿರಾಮದಲ್ಲಿ ನಡೆಯುತ್ತಿದ್ದ ಈ ಪ್ರಹಸನದ ಬಗ್ಗೆ ಚೂರೂ ತಲೆ ಕೆಡಿಸಿ ಕೊಳ್ಳದ ಪ್ರಯಾಣಿಕ ಮಹಾಶಯರು ಆರಾಮವಾಗಿ ಕೆಳಗಿಳಿದು ಕೆಮ್ಮಿ ಕ್ಯಾಕರಿಸಿ-ಉಚ್ಚೆ ಹೊಯ್ದು,ಎಲೆ-ಅಡಿಕೆ ಹಾಕಿ,ಮೋಟು ಬೀಡಿ-ನಶ್ಯ ಸೇದಿ,ಊರ ರಾಜಕೀಯ-ಮನೆಯ ಕಷ್ಟ ಸುಖ ಮಾತಾಡಿ ಮುಂದಿನ ಪ್ರಯಾಣಕ್ಕೆ ಸಿದ್ಧರಾಗುತ್ತಿದ್ದರು.ಹಳೆ ಸಿನೆಮಾಗಳ ಸ್ಲೋಮೊಶನ್ ದೃಶ್ಯಾವಳಿಗಳಂತಹ ಈ ಪ್ರಹಸನಗಳು ಆಗಾಗ ಮಲೆನಾಡಿನ ಉದ್ದಗಲಕ್ಕೂ ಕಾಣಲು ಸಿಗುತ್ತಿದ್ದವು.

********
ಇಂತಹ ಸಂಧಿಕಾಲದಲ್ಲಿಯೇ ನಾರಾಯಣ ಡ್ರೈವಿಂಗ್ ಕಲಿತದ್ದು.ಸಾಬಿ ಗುರುಗಳ ನಮ್ರ ಶಿಷ್ಯನಾಗಿದ್ದು ಚಾಲನ ವಿದ್ಯೆ ಕಲಿತ ನಾರಾಯಣ ಮೊದಲಿಗೆ ಟರ್ಪಾಲ್ ಹೊದೆಸಿದ ಫೋರ್ಡ್ ಕಾರಿನ ಚಾಲಕನಾಗಿದ್ದ.ಮುಂದೆ ಐತಾಳರು ಆ ಕಾಲದ ಅತ್ಯಾಧುನಿಕ ಅಂಬಾಸಿಡರ್ ಕೊಂಡಾಗ ಅದನ್ನು ತರಲು ಕಲ್ಕತ್ತಕ್ಕೂ ಹೋಗಿ ಬಂದ (ಆಗೆಲ್ಲ ಅಂಬಾಸಿಡರ್ ಕಲ್ಕತ್ತದಲ್ಲೇ ತಯಾರಾಗಿ ಬಿಕರಿಯಾಗುತ್ತಿತ್ತು).ಅಷ್ಟರಲ್ಲಿ ಕೊಪ್ಪದಲ್ಲಿ 'ಶಂಕರ್ ಕಂಪೆನಿ' ಯಶಸ್ವಿಯಾಗಿತ್ತು ( ದಕ್ಷಿಣ ಕನ್ನಡದಲ್ಲಿ ಅದರದ್ದೇ ಅಂಗ ಸಂಸ್ಥೆ 'ಶಂಕರ್ ವಿಟ್ಠಲ' ಅದೂವರೆಗೂ ಏಕಸಾಮ್ಯ ಮೆರೆಯುತ್ತಿದ್ದ ಸಿಪಿಸಿಯ ಮಗ್ಗುಲು ಮುರಿಯುತ್ತಿತ್ತು).ಈ ಯಶಸ್ಸಿನಿಂದ ಪ್ರೇರಿತರಾದ ಶಿವಮೊಗ್ಗದ ಸಿರಿವಂತರು ಹುಟ್ಟು ಹಾಕಿದ್ದೆ 'ನ್ಯೂ ಕಂಮೆಂಡ್ ಬುಕ್ಕಿಂಗ್ ಏಜನ್ಸಿ'.

29 August 2010

ನಗು ಅರಳಲೆ ಇಲ್ಲ...

ದಿನ ಮುಳುಗಿದೆಯಾದರೂ ಇನ್ನೂ ರಾತ್ರಿ ಬರುತ್ತಿಲ್ಲ,
ನೀ ಬರಲಾರೆಯಾದರೂ ನಿನ್ನ ನೆನಪು ಬೆನ್ನು ಬಿಡುತ್ತಿಲ್ಲ/
ಮತ್ತೆ ತುಂಬು ಚಂದಿರ ಮೂಡಿದನಾದರೂ ನೀ ಮಾತ್ರ ಬರಲೇ ಇಲ್ಲ,
ಹೊಸತೊಂದು ಮುಂಜಾವಿನ ಮೊಗ್ಗು ಮೂಡಿದರೂ....ನಿನ್ನ ನಗು ಅದರಲಿ ಅರಳಲೆ ಇಲ್ಲ//


ನೀನಿತ್ತಿದ್ದ ಒಲವನ್ನು ಬಡ್ಡಿ ಸಹಿತ ಹಿಂದಿರುಗಿಸುತ್ತಿದ್ದೇನೆ,
ಆದರೆ ನೀನಿತ್ತ ನೆನಪುಗಳನ್ನಲ್ಲ/
ಚೂರು ಸುಳಿವನ್ನೂ ಕೊಡದೆ ಕ್ಷಣದಲ್ಲಿ ಕೈ ಕೊಡವಿ ಹೋದೆಯಲ್ಲ....ಆಗಿಂದಲೆ ಆಘಾತಗೊಂಡಿದ್ದೇನೆ,
ಆದರೆ ನಿನ್ನಷ್ಟು ಹತಾಶನಾಗಿಲ್ಲ//

28 August 2010

ಘಟ್ಟದ ಋಣ...

{ ೨೩/ ಆಗಷ್ಟ್ ೨೦೦೮ ರಿಂದ ಮುಂದುವರಿಕೆ}



ನಡೆದಿರುವ ಘಟನೆಗಳೆಲ್ಲ ನನ್ನ ಬಾಳಿನ ಅಂಗಗಳೇ ಆದರೂ ಆದಷ್ಟು ನಿರ್ಲಿಪ್ತನಾಗಿ ವಸ್ತು ಸ್ಥಿತಿಯನ್ನಷ್ಟೆ ಇಲ್ಲಿ ಬಿಡಿಸಿಡಲು ಯತ್ನಿಸಿದ್ದೇನೆ.ಬಹಳಷ್ಟು ಸಂಗತಿಗಳಲ್ಲಿ ನಾನು ಪಾತ್ರಧಾರಿಯಲ್ಲ.ಅವುಗಳನ್ನೆಲ್ಲ ಒಂದೋ ಮನೆಯ ಹಿರಿಯರಿಂದ-ಇಲ್ಲವೆ ಬಲ್ಲ ಆತ್ಮೀಯರಿಂದ ಕೇಳಿ ತಿಳಿದು ಕೊಂಡದ್ದು.ಅಂತಹ ಸನ್ನಿವೇಶಗಳಲ್ಲಿ ಪ್ರತ್ಯಕ್ಷ ಪಾತ್ರವಾಗಿದ್ದವರು ಬದುಕಿದ್ದ ಪಕ್ಷದಲ್ಲಿ ಅವರನ್ನು ಪತ್ರ ಮುಖೇನ ಇಲ್ಲವೆ ದೂರವಾಣಿ ಮುಖೇನ ಸಂಪರ್ಕಿಸಿ ಸನ್ನಿವೇಶ ಗಳ ಸತ್ಯಾಸತ್ಯತೆ ಗಳನ್ನು ಖಚಿತ ಪಡಿಸಿ ಕೊಂಡೆ ಮುಂದು ವರೆದಿದ್ದೇನೆ.ಹೀಗಾಗಿ ಇಲ್ಲಿ ನಾನು ನಿರ್ಮಮ ಲಿಪಿಕಾರ ಮಾತ್ರ.ಬರವಣಿಗೆ ಕೇವಲ ನಡೆದ ಘಟನೆಗಳ ಕೈಗನ್ನಡಿ ಯಾಗಿರಬೇಕು,ಯಾವುದೇ ಅತಿರಂಜಿತ ಸಂಯೋಜನೆಯಲ್ಲಿ ಸತ್ಯಕ್ಕೆ ಅಪಚಾರವಾಗ ಬಾರದು ಎಂಬ ಕಳಕಳಿ ಇದಕ್ಕೆ ಕಾರಣ.




ಖುದ್ದು ನಾನೇ ಪಾತ್ರವಾಗಿರುವ ಸಂಗತಿಗಳನ್ನೂ ಥಿಯೇಟರ್ ನಲ್ಲಿ ಕೂತು ಇನ್ಯಾರದೋ ಸಿನೆಮ ನೋಡುವ ಮೂಡಿನಲ್ಲಿ ವಿವರಿಸಿದ್ದೇನೆ.ನನ್ನ ಪಾತ್ರದ ಮೇಲೆ ವಿಶೇಷ ಮಮಕಾರ ನನ್ನಲ್ಲಿ ಹುಟ್ಟದ ಕಾರಣ ನಾನು ಈ ಲಹರಿಯ 'ನಾಯಕ'ನೂ ಅಲ್ಲ.ಒಬ್ಬ ಪುಟ್ಟ ಹುಡುಗನಾಗಿ ನಾ ಕಂಡು ಕೇಳಿದ ಸಂಗತಿಗಳನ್ನು ನಯವಾಗಿ ಹರವಿಡುವ ಪ್ರಯತ್ನ ಮಾತ್ರ ನನ್ನದು.ವಯಕ್ತಿಕವಾಗಿ ನನಗೆ ಘಾಸಿಯನ್ನುಂಟು ಮಾಡಿದ ಘಟನೆ-ನೋವನ್ನು ಉಂಟುಮಾಡಿದ ವ್ಯಕ್ತಿಗಳ ಕುರಿತು ಬರೆಯುವಾಗಲೂ ಆದಷ್ಟು ಸಂಯಮವನ್ನ ಬರವಣಿಗೆಯಲ್ಲಿ ಸಾಧಿಸಲು ಪ್ರಯತ್ನಿಸಿದ್ದೇನೆ.ಮೊದಮೊದಲು ಇದು ಸ್ವಲ್ಪ ಕಷ್ಟ ಎಂದೆನಿಸಿದರೂ ಕ್ರಮೇಣ ಇದೆ ರೂಢಿಯಾಗ ತೊಡಗಿದೆ.ಈ ನನ್ನ ಮುಂಬರುವ ಯಾವುದೆ ಲೇಖನಗಳು ನನ್ನ ರಕ್ತ ಸಂಬಂಧಿಗಳಿಗೂ,ಸ್ನೇಹಿತರಿಗೊ,ಕುಲ ಬಾಂಧವರಿಗೂ ಜೀರ್ಣವಾಗದಿದ್ದರೆ ಅದವರ ಖಾಸಗಿ ಸಮಸ್ಯೆಯೆ ಹೊರತು ಪ್ರತಿಯೊಬ್ಬರಿಗೂ ಜಾಪಾಳ ಮಾತ್ರೆ ನುಂಗಿಸುವ ಕೆಲಸ ನನ್ನದಲ್ಲ.ಒಟ್ಟಿನಲ್ಲಿ ನಿರೀಕ್ಷಣಾ ಜಾಮೀನಿನಂತೆ ಹೇಳ ಬಯಸೋದು ಇಷ್ಟೆ ಕೇವಲ ಒಂದೆ ಕೈಯಲ್ಲಿ ಎಣಿಸಬಹುದಾದಷ್ಟು ಮಂದಿ ಮಾತ್ರ ನನ್ನ ಸ್ವಂತ ಭಾವಲೋಕದ ಬಂಧುಗಳು.ಅವರನ್ನು ಬಿಟ್ಟು ಇನ್ಯಾರ ಮೇಲೂ ನನಗೆ ರಾಗ-ದ್ವೇಷಗಳಿಲ್ಲ.ಈ ಹತ್ತಿರದವರ ಬಿಂಬಗಳೂ ಮುಸುಕಾಗದಂತೆ ಇಲ್ಲವರ ಚಿತ್ರಣ ಬರುತ್ತದೆ.ಮನಸಿನ ಮೇಲಿದ್ದ ನೆನಪಿನ ಭಾರವನ್ನು ಅಕ್ಷರಗಳಲ್ಲಿ ಕೆಳಗಿರಿಸಿ 'ಉಸ್ಸಪ್ಪ'ಎಂದು ಸುಧಾರಿಸಿಕೊಳ್ಳುವ ಧಾವಂತ ಹೊಸತೆ ಒಂದು ರೀತಿಯ ನೆಮ್ಮದಿಯನ್ನ ನನಗೆ ದಯಪಾಲಿಸಿದೆ ಅನ್ನೂದು ಮಾತ್ರ ಹದಿನಾರಾಣೆ ಸತ್ಯ,





*********************

ನನ್ನಜ್ಜನ ಕಾಲಕ್ಕೆ ದಕ್ಷಿಣ ಕನ್ನಡ ( ಈಗಿನ ಉದುಪಿ) ಜಿಲ್ಲೆಯಿಂದ ಘಟ್ಟಕ್ಕೆ ವಲಸೆ ಬಂದ ಕುಟುಂಬ ನಮ್ಮದು.ನನ್ನಜ್ಜ ನಾರಾಯಣ ಹೆಗಡೆಯದು ಒಂಚೂರು ಪುಕ್ಕಲು ಸ್ವಭಾವ.ನಾಲ್ಕುಜನ ಒಡಹುಟ್ಟಿದವರಲ್ಲಿ ಮೂರನೆಯವರಾದ ಅವರ ಹುಟ್ಟೂರು ಕಾರ್ಕಳ ತಾಲೂಕಿನ ಮುನಿಯಾಲು ಬಳಿಯಿರುವ ಗುಡ್ಡೆಮನೆ.ಮನೆಯ ಯಜಮಾನನಾಗಿದ್ದ ಹಿರಿಯಣ್ಣ ಹಾವು ಕಚ್ಚಿ ಸತ್ತ ನಂತರ ಮನೆಯ ಆಡಳಿತ ಅಕ್ಕ ಚನ್ನಕ್ಕನ ಪಾಲಾಯಿತು.ಅವರ ದಬ್ಬಾಳಿಕೆಯ ಹಾಗು ನಯವಿಲ್ಲದ ಒರಟು ನಡವಳಿಕೆಯನ್ನ ಮುಲಾಜಿಲ್ಲದೆ ಧಿಕ್ಕರಿಸಿ ಅಜ್ಜನ ತಮ್ಮ ನಾಗಪ್ಪ ಹೆಗಡೆ ತನ್ನ ವಯಸ್ಸಿನ್ನೂ ಎರಡಂಕಿ ಮೀರುವ ಮೊದಲೆ ಘಟ್ಟ ಹತ್ತಿ ಕೊಪ್ಪಕ್ಕೆ ಬಂದು ಸೇರಿದರು.ಆ ಕಾಲದಲ್ಲಿ ಜನಪ್ರಿಯರಾಗಿದ್ದ ಕೊಪ್ಪದ ದ್ಯಾವೆಗೌಡರ ಮನೆಯಲ್ಲಿ ದೀಪದ ಗಾಜು ಒರೆಸುವ (ಆಗ ವಿದ್ಯುತ್ ಸಂಪರ್ಕ ಕೊಪ್ಪದಲ್ಲಿ ಇರಲಿಲ್ಲ,ಹೀಗಾಗಿ ಬಡವರಿಂದ ಸಿರಿವಂತರವರೆಗೂ ದೀಪವೆ ಬೆಳಕಿಗೆ ಮೂಲವಾಗಿತ್ತು) ಕಾಯಕದೊಂದಿಗೆ ಅಲ್ಲಿ ಅವರ ದುಡಿಮೆ ಆರಂಭ ವಾಯ್ತು.ಹೀಗೆ ಧೈರ್ಯವಾಗಿ ಮನೆಬಿಟ್ಟು ಹೋಗಿದ್ದ ತಮ್ಮನ ಮೇಲ್ಪಂಕ್ತಿ ಅನುಸರಿಸಿ ನನ್ನಜ್ಜನೂ ಎರಡು ವರ್ಷಗಳ ನಂತರ ಘಟ್ಟ ಹಟ್ಟಿ ತೀರ್ತಹಳ್ಳಿಯಲ್ಲಿ ನೆಲೆಕಂಡರು.


ತೀರ್ಥಹಳ್ಳಿಯ ಕೊಪ್ಪ ರಸ್ತೆಯಲ್ಲಿರುವ ತಿಪ್ಪ ಜೋಯಿಸರ ಮನೆಯ ಅಡುಗೆ ಆಳಾಗಿ ಅವರ ಸ್ವಾತಂತ್ರ್ಯ ದುಡಿಮೆ ಶುರುವಾಯ್ತು.ಆಗಿನ ಮೊದಲ ಸಂಬಳ ನಲವತ್ತು ರೂಪಾಯಿಗಳು.ಕ್ರಮೇಣ ಮನೆಯವರ ನಂಬಿಕೆ ಗಿಟ್ಟಿಸಿ ಕೆಲಸ ಗಟ್ಟಿಯಾದ ಮೇಲೆ ಮನೆಯ ಅಡುಗೆಯವನಾಗಿ ಬಡ್ತಿಯೂ ಸಿಕ್ಕಿತು.ಅದೆ ವೇಳೆ ತಿಪ್ಪ ಜೋಯಿಸರ ಸಂಬಂಧಿಯಾದ ಶೀರ್ನಾಳಿಯ ಐತಾಳರು ತಾಲೂಕಿಗೆ ಮೊದಲ ಕಾರು ಕೊಂಡರು.ಟರ್ಪಾಲ್ ಹೊದೆಸಿದ ಹಡಗಿನಂತ ಫೋರ್ಡ್ ಕಾರಿನ ಜೊತೆ ಅದನ್ನು ನಡೆಸಲೊಬ್ಬ ಗಡ್ಡದ ಸಾಬಿ ಬೇರೆ! ಕೆಲ ಕಾಲ ಅಲ್ಲಿದ್ದು ಡ್ರೈವಿಂಗ್ ಎಂಬ ಆ ಕಾಲದ ವಿಶೇಷ ವಿದ್ಯೆಯನ್ನು ಸ್ಥಳೀಯರೊಬ್ಬರಿಗೆ ಕಲಿಸಿ ಆತ ಅಲ್ಲಿಂದ ಹೊರಡುವ ಕರಾರಾಗಿತ್ತು.ಸೂಕ್ತ ಅಭ್ಯರ್ಥಿಯ ತಲಾಶಿನಲ್ಲಿದ್ದ ಐತಾಳರ ಕಣ್ಣಿಗೆ ಜೋಯಿಸರ ಮನೆಯಲ್ಲಿದ್ದ ನಾರಾಯಣ ಬಿದ್ದ.ಅದೂವರೆಗೂ ಸವಟು ಹಿಡಿದಿದ್ದ ಕೈಗೆ ಹೀಗೆ ಚಕ್ರ ಬಂತು ಹಾಗು ಅದೆ ಮುಂದೆ ಖಾಯಂ ಕೂಡ ಆಯ್ತು.

{ನಾಳೆಗೆ ಮತ್ತೆ ಮುಂದುವರೆಸುವೆ}

27 August 2010

ವಿಕ್ಷಿಪ್ತ...

ಅದುಮಿಡಲಾಗದ ಸುಪ್ತ ಆಸೆ ಕಣ್ಣ ಬಟ್ಟಲಲ್ಲಿದೆ,
ಆದರೂ ಅದೇಕೋ ಮನದಂಗಳ ಇನ್ನೂ ಕತ್ತಲಲ್ಲಿದೆ/
ಮೋಡವೆ ಇಲ್ಲದೆ ಸುರಿದ ಮಳೆಯನ್ನು ಕಂಡು ಬಿಸಿಲು ನಕ್ಕ ಹಾಗೆ,
ಕೊನರದ ಭಾವಗಳೆಲ್ಲ ಕೊರಡಾಗಿದ್ದರೂ ಎದೆ ಸುಡುತಿದೆ ವಿರಹದ ಬೇಗೆ//


ನೀನೊಮ್ಮೆ ಹೇಳಿದರೆ ಬಾಳಿನುದ್ದಕ್ಕೂ ಕವಿತೆಗಳನ್ನು ಗೀಚುತ್ತಲೇ ಸವೆಯುತ್ತೇನೆ,
ಗಂಟಲ ನರ ಹರಿದು ಹೋಗುವವರೆಗೂ ವಿರಹದ ಗೀತೆಗಳನ್ನ ಚೀರುತ್ತಾ ನವೆಯುತ್ತೇನೆ/
ಕಣ್ ಸೋಲುವವರೆಗೂ ನಿನ್ನ ಹಾದಿ ನೋಡುತ್ತಾ ಇರುತ್ತೇನೆ,
ನೀ ಕರೆದ ಕ್ಷಣ ಸಂಭ್ರಮದಿಂದ ತೆವಳಿಕೊಂಡಾದರೂ ನೀ ಕರೆದಲ್ಲಿಗೆ ಬರುತ್ತೇನೆ//

ಹೆಜ್ಜೆ ಸಾಲು...

ನೀನಿಟ್ಟ ಪ್ರತಿ ಹೆಜ್ಜೆ ಗುರುತು ಮನದ ಒಂದೊಂದು ಮೆಟ್ಟಲಲ್ಲಿದೆ,
ನಿನ್ನ ಕೈ ತೂಗಿದ ಒಲವಿನ ಕೂಸು ಬೆಚ್ಚಗೆ ಎದೆಯ ತೊಟ್ಟಿಲಲ್ಲಿದೆ/
ಮಾಸಿಲ್ಲ ನಿನ್ನ ಹೆಸರ ಹಚ್ಚೆ ನನ್ನೆದೆ ಮೇಲೆ ಕೊರೆಸಿದ್ದು,
ಮುಸುಕಾಗಿಲ್ಲ ನಿನ್ನ ಚಿತ್ರ ನನ್ನ ಹೃದಯದಲ್ಲಿ ಬರೆಸಿದ್ದು//



ಒಲವ ಸುಂದರ ಕನಸುಗಳನ್ನ ಹೆಣೆಯುತ್ತೇನೆ,
ಯಾವಾಗಲೂ ಏಕಾಂತದಲ್ಲಿ ಕಣ್ತುಂಬಿ ಅಳುತ್ತೇನೆ....
ಒಂಟಿತನ ಒಮ್ಮೊಮ್ಮೆ ಕಾಡುತ್ತದೆ...
ಮತ್ತೊಮ್ಮೆ ಯಾರದೊ ನೆನಪು/
ಎಲ್ಲೋ ಸಿಡಿಲು ಬಡಿಯುತ್ತದೆ..
ಇಲ್ಲಿ ನನ್ನದೆಯ ಭಾವಗಳೆಲ್ಲ ಭಸ್ಮವಾಗುತ್ತವೆ,
ಎಲ್ಲೂ ನಿರೀಕ್ಷೆಯ ಹೂವರಳುತ್ತದೆ...
ಇಲ್ಲಿ ನನ್ನ ಕಾತರದ ಪರಿಮಳ ಹೊಮ್ಮುತ್ತದೆ//

ಗೊಂದಲದ ದಾಸ್ಯಕ್ಕೂ ಒಂದು ಮಿತಿಯಿದೆ/
ಆದರೆ ನನ್ನ ಅನುಭವ ಇದನ್ನು ಸುಳ್ಳೆನ್ನುತಿದೆ//

26 August 2010

ನೀ ಮರಳಿ ಬರುತ್ತೀಯಲ್ಲ?

ಪ್ರಪಂಚದ ಎಲ್ಲ ತಪ್ಪುಗಳಿಗೂ,
ನಾವಿಬ್ಬರೇ ಪರಸ್ಪರ ಕ್ಷಮೆ ವಿನಿಮಯ ಮಾಡಿಕೊಳ್ಳೋಣ/
ನಿನ್ನ ಹೊರತು ಇನ್ಯಾರಿಗೂ ನೆನಪಿರದ ನನ್ನ ಜನ್ಮದಿನದಂದು,
ಮರೆಯದೆ ನನ್ನೆದೆಯೊಳಗೆ ಮರಳಿ ಬರುತ್ತೀಯಲ್ಲ?//



ಎಂದೂ ಸಿಗದ ನೆನ್ನೆಗಳ ಹಪಹಪಿ ಸಾಕಿನ್ನು...
ಕಣ್ಣ ಹಣತೆಯಲ್ಲಿ ಕಂಬನಿಯ ಎಣ್ಣೆ ತೀರಿ ನಿರೀಕ್ಷೆಯ ದೀಪ ಆರುವ ಮೊದಲು ಮರಳಿ ಬರುತ್ತೀಯಲ್ಲ?/
ಕಾದೂ ಕಾದೂ ಕನಸು ಕೂಡ ಕಂಗಾಲಾಗಿದೆ...ಕಾತರದ ಅರಗಿಗೆ ವಾಸ್ತವ ಕಡ್ಡಿ ಗೀರಿ
ಕೊನೆಯದೊಂದು ಅಸೆ ಉರಿದು ಬೂದಿಯಾಗುವ ಮೊದಲು,
ನೀ ಮರಳಿ ಬರುತ್ತೀಯಲ್ಲ? ವಿರಹ ಕದಡಿದ ಬಾಳ ಕೊಳದಲ್ಲಿ ಪ್ರತಿಬಿಂಬಿಸಿ ಮುಗುಳ್ನಗುತ್ತೀಯಲ್ಲ?//

25 August 2010

ಮುಚ್ಚಿಟ್ಟ ಕನಸುಗಳು...

ನನ್ನೊಳಗಿನ ಮೂಕ ಭಾವಗಳಿಗೆ ನನ್ನಂತೆಯೆ ಬಾಯಿಲ್ಲ,
ನಾ ಸುಮ್ಮನಿದ್ದರೂ ಈ ಕಣ್ಣು ಮುಚ್ಚಿಡದ ಮಾತುಗಳನ್ನೆಲ್ಲ....ನೀ ಓದಿಯೆ ಇರುತ್ತೀಯಲ್ಲ/
ಕೇಳಿಸಿಕೊಳ್ಳುವೆಯಾದರೆ ಕೇಳಿಸಿಕೊ ನಾ ಹೇಳದ ಯೋಚನೆಯ ಯಾಚನೆಗಳನ್ನೆಲ್ಲ,
ಹೇಳೋದು ಬಾಕಿ ಇನ್ನೂ ಇದೆ...ನನ್ನೆಲ್ಲ ಕನಸುಗಳನ್ನ ನಾನಿನ್ನೂ ನಿನ್ನಲ್ಲಿ ಹೇಳಿಯೇ ಇಲ್ಲ//



ಗಾಳಿಯಲಿ ತೂರಿ ಬಿಟ್ಟ ನನ್ನ ಮುತ್ತು ನಿನ್ನ ತುಟಿಯನೆ ಸೇರಲಿ,
ಮಳೆನೀರ ಪ್ರವಾಹದಲಿ ತೇಲಿ ಬಿಟ್ಟ ನೆನಪಿನ ಕಾಗದದ ದೋಣಿ ನಿನ್ನ ಮನದ ಅಂಗಳದಲೇ ದಡ ಮುಟ್ಟಲಿ/
ಇಂದಿನ ಹುಣ್ಣಿಮೆಯ ಚಂದಿರ ಸುರಿವ ತಂಪೆಲ್ಲ ನಿನ್ನದಾಗಲಿ,
ಹಂಚಿಕೊಳ್ಳಲು ಖಂಡಿತ ಕೂಡೋಣ ಒಂದು ಕ್ಷಣ...ಆ ದಿನ ಬೇಗ ಬರಲಿ//

ವಾಸ್ತವ...

ಅರಳುವ ಮೊದಲೆ ಮುದುಡಿವೆ ಅನೇಕ ಮೊಗ್ಗುಗಳು,
ಕರಟಿದ ಕನಸುಗಳು ಮುರುಟಿ ಹಾಕಿವೆ ಹಲವಾರು ನನ್ನಿರುಳು/
ಬಾನು ಬಿಕ್ಕಳಿಸಿ ಅತ್ತಾಗಲೂ ನನ್ನ ನೋವಿಗೆ ಸರಿಗಟ್ಟಲಾಗಲಿಲ್ಲ,
ಸುರಿವ ಮಳೆಯ ಯಾವ ಹನಿಗೂ ನನ್ನೊಲವ ಆರ್ದ್ರತೆ ಕಿಂಚಿತ್ತೂ ಅರಿವಿಲ್ಲ//


ಭೋರಿಟ್ಟು ಬಿಕ್ಕಿ ಬಿಕ್ಕಿ ಅಳುವ ಕರಿ ಮೋಡದ ಕಣ್ಣ ಮಳೆ ಹನಿಗಳಿಗೆ,
ನೆನಪುಗಳ ಸೋಕಿ ಮನಸ ನಯನ ತೇವಗೊಳಿಸೊ ಮುಂಜಾನೆಯ ಇಬ್ಬನಿ ಮಣಿಗಳ ತಂಪಿಗೆ/
ಹಾಗೂ ಖುದ್ದು ನಿನಗೆ ತಿಳಿದಿರುವಷ್ಟು,
ನನ್ನ ಒಲವ ಬತ್ತದ ತೊರೆಯ ಆಳ ಇನ್ಯಾರಿಗೂ ಗೊತ್ತಿಲ್ಲ//


ಒಂಟಿ ಹೃದಯದ ಒಂಟಿ ಪಯಣದಲೂ,
ಕಣ್ಣು ಹಾಯುವಲೆಲ್ಲ ಅದಕ್ಕೆ ನಿನ್ನನೆ ಹುಡುಕುವ ಚಪಲ/
ಸಂಜೆ ಮಬ್ಬುಗತ್ತಲಲ್ಲಿ ಹೊರಹೊಮ್ಮುವ ಹೊಗೆ ಪರದೆಯಿಂದ....
ನೀ ಹೊರ ಹೊಮ್ಮಲು ಬದುಕೇನು ಕೆಟ್ಟು ಕೆರ ಹಿಡಿದ ಸಿನೆಮಾ ಅಲ್ಲ,
ಆದರೂ ನಿನ್ನನ್ನು ಕಂಡೆ ಕಾಣುವ ಛಲ...
ಅದೆ ನನ್ನುಸಿರಿಗೆ ಇನ್ನೂ ಬಲ//

23 August 2010

ಕಳೆದು ಹೋದೆ....

ನನ್ನೊಳಗಿನ ಮಹಾನಗರ ನೀನು,
ನಿನ್ನೊಲವ ಜಂಗುಳಿಯಲ್ಲಿ ಹುಡುಕಲಾಗದಂತೆ ಕಳೆದು ಹೋಗಿದ್ದೇನೆ/
ಎಲ್ಲರ ತಿರಸ್ಕಾರದ ಜಾತ್ರೆಯಲ್ಲಿ....ತಪ್ಪಿಸಿ ಕೊಂಡ ಮಗು ನನ್ನ ಮನಸು,
ನೀ ಚಾಚಿದ ಕೈಯ ಕಿರುಬೆರಳನೆ ಭದ್ರವಾಗಿ ಹಿಡಿದು....
ಹೆಣೆಯಿತಿದೆ ಹೊಸತು ನೂರು ಕನಸು//

ಶಾಲೆಯ ದಿನಗಳು...

{ಮೊನ್ನೆಯಿಂದ ಮುಂದುವರಿಕೆ}








ಸ್ಟ್ಯಾಂಡಿಗೆ ಬಂದ ಕೂಡಲೆ ಬಸ್ ಬಾಗಿಲಲ್ಲಿ ತುಂಬಿ ತುಳುಕುವ ಪ್ರಯಾಣಿಕರ ಧಾವಂತ.ನಮ್ಮ ಕಡೆ ಡ್ರೈವರ್ ಬಾಗಿಲಿನಲ್ಲಿ ನುಗ್ಗೋದು-ಟಾಪ್ ಮೇಲೆ ಕೂತು ಪ್ರಯಾಣಿಸೋದು ಆಗಲೂ ಇರಲಿಲ್ಲ,ಈಗಲೂ ಇಲ್ಲ.ಇದರ ನಡುವೆ ಹರಸಾಹಸ ಮಾಡೋದು ನನ್ನಂತ ಲಗೇಜಿನ ಹಂಗಿಲ್ಲದಿದ್ದ ಎಳೆಯರಿಗೆ ಚಿಟಿಕೆ ಹೊಡೆದಷ್ಟು ಸುಲಭ.ಹೀಗಾಗಿ ನನ್ನ ಸೀಟು ಹಿಡಿಯುವ ಆಸೆಗೆ ಎಂದೂ ಕಲ್ಲು ಬಿದ್ದಿರಲಿಲ್ಲ.ಸಾಗರದ ದಿಕ್ಕಿನಿಂದ ಹೊರಟು ತೀರ್ಥಹಳ್ಳಿಯ ಮೇಲ್ ಬಸ್ ಸ್ಟ್ಯಾಂಡಿಗೆ ಬರುತ್ತಿದ್ದ ಬಸ್ ಒಂದು ಕಿಲೋಮೀಟರ್ ದೂರದ ಮುಖ್ಯ ಬಸ್ ನಿಲ್ದಾಣಕ್ಕೆ ಹೋಗಿ ಬಂದ ಶಾಸ್ತ್ರ ಮಾಡಿ ಪುನಃ ಮಂಗಳೂರಿನತ್ತ ಮುಖ ಮಾಡುತ್ತ ಮೇಲಿನ ಸ್ಟ್ಯಾಂಡಿಗೆ ಬರಬೇಕಲ್ಲ?
ಸಾಗರದಿಂದ ಬಸ್ ಬಂದದ್ದೆ ಇಳಿಯುವವರಿಗೂ ಬಿಡದೆ ಮೊದಲೆ ತೂರಿಕೊಂಡು ಖಾಲಿಯಾದ ಸೀಟೊಂದನ್ನು,ಅದರಲ್ಲೂ ಕಿಟಕಿ ಪಕ್ಕದ ಸೀಟನ್ನೇ ಕಬಳಿಸಿ ಕೂತುಬಿಡುತ್ತಿದ್ದೆ.ಅಮ್ಮ ಕೆಳಗಡೆಯೆ ನಿಂತು ಕಾಯುತ್ತಿರುವಾಗ ಬಸ್ ಊರ ಸವಾರಿಗೆ ಹೊರಟು ಮರಳಿ ಬಂದಲ್ಲಿಗೆ ಮುಟ್ಟುತ್ತಿತ್ತು.ಈ ಹೊತ್ತಿಗೆ ಮಾಡಿರುತ್ತಿದ್ದ ಎರಡು ಕಿಲೋಮೀಟರ್ ಬಿಟ್ಟಿ ಪ್ರಯಾಣ ನನ್ನೊಳಗಿನ ಬಸ್ ಸವಾರಿಯ ತೆವಲನ್ನು ಬಹುಪಾಲು ತೀರಿಸಿರುತ್ತಿತ್ತು.



ಕಾಯುತ್ತಿದ್ದ ಅಮ್ಮನಿಗೆ ಅವರ ಸೀಟ್ ಬಿಟ್ಟು ಕೊಟ್ಟು ಒಲ್ಲದ ಮನಸ್ಸಿನಿಂದ ಕೆಳಗಿಳಿಯುತ್ತಿದ್ದೆ.ಬಸ್ ಹೊರತು ನನ್ನ ದೃಷ್ಟಿಯಿಂದ ಪೂರ್ತಿ ಮರೆಯಾಗುವವರೆಗೂ ಅಲ್ಲಿಯೇ ನಿಂತಿದ್ದು ಅನಂತರವಷ್ಟೇ ಭಾರವಾದ ಹೆಜ್ಜೆ ಎಳೆಯುತ್ತ ಮನೆಯತ್ತ ಹೊರಡುತ್ತಿದ್ದೆ.ನನಗೆ ಅರಿವಿಲ್ಲದೆ ಕಣ್ಣುಗಳೆರಡೂ ತುಂಬಿ ಬಂದು ಮುಂದಿನ ಮಾರ್ಗವೆಲ್ಲ ಮಂಜುಮಂಜಾಗುತ್ತಿದ್ದವು.ಈ ಕಣ್ಣೀರು ಅಮ್ಮ ನನ್ನನ್ನು ಜೊತೆಗೆ ಕರೆದೊಯ್ಯದಿದ್ದುದಕ್ಕೋ? ಇಲ್ಲವೆ ಅವರನ್ನಗಲಿ ಮುಂದಿನ ನಾಲ್ಕಾರು ದಿನ ಇರಬೇಕಿದ್ದುದಕ್ಕೋ ಗೊತ್ತಿರುತ್ತಿರಲಿಲ್ಲ.ಅವರಿಗೂ ಆ ಹೊತ್ತಿನಲ್ಲಿ ಕಣ್ತುಂಬಿ ಬಂದಿರಬಹುದು ಎಂದುಕೊಳ್ಳುತ್ತಿದ್ದೆನಾದರೂ,ತವರಿಗೆ ಹೋಗುವಾಗ ಸಹಜವಾಗಿ ಉಲ್ಲಾಸದಿಂದ ಇರಬಹುದಾಗಿದ್ದ ಅವರ ದೃಷ್ಟಿ ಕೋನದಿಂದ ಯಾವಾಗಲೂ ಯೋಚಿಸಿರಲೇ ಇಲ್ಲ.



ಬಾಳಿನಲ್ಲಿ ಅನೇಕ ಬಾರಿ ತಪ್ಪು ಹೆಜ್ಜೆಗಳನ್ನು ಇಟ್ಟಿದ್ದೇನೆ ಅನ್ನಿಸುತ್ತೆ.ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗಲೆಲ್ಲ ಸೆಟೆದು ನಿಂತಿದ್ದೇನೆ.ಆದರೆ ಘಟನೆಯೊಂದರಲ್ಲಿ ನನ್ನಿಂದಲೆ ಅಚಾತುರ್ಯ ಘಟಿಸಿದ್ದಾಗ ಭಿಡೆಯಿಲ್ಲದೆ ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ್ದೇನೆ.ನನ್ನ ಸಹಜ ಸಿದ್ಧ ಸ್ವಭಾವವನ್ನ ನಾನು ಆತ್ಮಾಭಿಮಾನ ಅಂತೇನೆ,ಉಳಿದವರು ದುರಹಂಕಾರ ಅಂತಾರೆ ಇಷ್ಟೇ ವ್ಯತ್ಯಾಸ! ಒಟ್ಟಿನಲ್ಲಿ ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಾ ನೇರವಾಗಿ ನಡೆಯೋದರಿಂದ ಅನೇಕರ ನಿಷ್ಠೂರ ಕಟ್ಟಿ ಕೊಳ್ಳಬೇಕು ಅನ್ನುವ ಸಂಗತಿ ಮಾತ್ರ ಖಚಿತವಾಗಿದೆ.ನಾನಾ ರೀತಿಯ ಅಯೋಗ್ಯರೆಲ್ಲ ಎತ್ತರದ ಸ್ಥಾನಗಳಿಗೆ ಲಗ್ಗೆ ಹಾಕುವಾಗ ಅಂತಲ್ಲಿಗೆ ತಲುಪುವ ಸಕಲ ಅರ್ಹತೆ ಇದ್ದೂ ನಾನಲ್ಲಿಗೆ ತಲುಪುವಲ್ಲಿ ಎಡವುತಿರೋದು ವಿಷಾದವೆನಿಸಿದರೂ ಜಿಗುಪ್ಸೆಯನ್ನಂತೂ ಹುಟ್ಟಿಸಿಲ್ಲ.ನನ್ನೊಳಗೆ ನಾ ಪ್ರಾಮಾಣಿಕನಾಗಿರುವ ಭರವಸೆ ಕೈ ಬಿಡದ ತನಕ ಅಯೋಗ್ಯರ socalled ಉನ್ನತಿ ನನ್ನನ್ನು ಹತಾಶನನ್ನಾಗಿಸಿಲ್ಲ thank god i didn't become cinic!

ಸಂಬಂಧಗಳ ವಿಚಾರಗಳಲ್ಲೂ ನನ್ನ ಧೋರಣೆ ನೇರ.ಹಾಗೆ ನೋಡಿದರೆ ತೀರ್ಥಹಳ್ಳಿಯ ದಿನಗಳಿಂದಲೂ ನಾನು ಬಹುಪಾಲು ಒಬ್ಬಂಟಿ.ಶಾಲೆಯಲ್ಲೂ ನನಗೆ ಹೆಚ್ಚು ಗೆಳೆಯರಿರಲಿಲ್ಲ.ಆಗೆಲ್ಲ ಕೀಳರಿಮೆಯ ಕೂಪದಲ್ಲಿದ್ದುದೆ ಅದಕ್ಕೆ ಕಾರಣ.ನನ್ನ ಸಹಪಾಟಿಗಳೆಲ್ಲ ತಕ್ಕ ಮಟ್ಟಿನ ಸ್ಥಿತಿವಂತರೆ,ನನ್ನದೋ ಕುಚೇಲನಿಗೆ ಹತ್ತಿರದ ನೆಂಟಸ್ತನ.ಇತ್ತ ನನ್ನ ಹೆತ್ತಮ್ಮನದೊಂದು ದ್ವಿಮುಖ ವ್ಯಕ್ತಿತ್ವ.ತನ್ನ ನಿರೀಕ್ಷೆ-ಅಗಾಧವಾಗಿದ್ದ ಬಾಳಿನ ಕನಸುಗಳನ್ನೆಲ್ಲ ಮಣ್ಣು ಪಾಲಾಗಿಸಿದ್ದ ನಾನು ಕೂತಲ್ಲಿ ನಿಂತಲ್ಲಿ ತಪ್ಪು ಕಂಡು ಹಿಡಿದು ಭೀಕರವಾಗಿ ಶಿಕ್ಷಿಸುತ್ತಿದ್ದಳು.ಬಿಸಿ ಇಸ್ತ್ರಿ ಪೆಟ್ಟಿಗೆಯಿಂದ ಸುಡುವುದು,ವಿದ್ಯುತ್ ಸ್ಟವ್ ಬಿಸಿ ಮಾಡಿ ಬಲವಂತವಾಗಿ ಕೈಯಿಂದ ಮುಟ್ಟಿಸುವುದು,ಬ್ಯಾಡಗಿ ಮೆಣಸಿನ ಹೊಗೆ ಹಾಕುವುದು,ದನ ಕಟ್ಟುವ ಹಗ್ಗದಲ್ಲಿ ಕೈ ಹಿಂದೆ ಬಿಗಿದು-ಕಾಲು ಕಟ್ಟಿ ಕೋಣೆಯಲ್ಲಿ ಕೂಡಿ ಹಾಕೊದು ಇಂತಹ ಪೈಶಾಚಿಕ ಶಿಕ್ಷೆಗಳನ್ನೆಲ್ಲ ಇನ್ನೂ ವಯಸ್ಸು ಆರು ಮುಟ್ಟುವ ಮೊದಲೆ ಅನುಭವಿಸಿದ್ದೆ.ಕೈಗೆ ಸಿಕ್ಕ ಮಣೆ-ಕೋಲು-ಹಗ್ಗಗಳಲ್ಲಿ ಹೊಡೆಸಿ ಕೊಂಡದ್ದು ಇವುಗಳ ಮುಂದೆ ಏನೇನೂ ಅಲ್ಲ.ಅದು ಅವರ ಒಂದು ಮುಖವಾದರೆ ಸಾಮಾಜಿಕವಾಗಿ ಹೊರಗಡೆ ನಾನು ಅತಿ ಕಟ್ಟುನಿಟ್ಟಿನಿಂದ ಬೆಳೆದ ಶಿಸ್ತಿನ ಹುಡುಗ ಎಂದು ಬಿಂಬಿಸುವ ತೆವಲು! ಓದಿನಲ್ಲೂ ಪ್ರತಿಷ್ಠಿತ ಶಾಲೆಯಲ್ಲೇ ಓದಿಸಬೇಕೆಂಬ ಹುಚ್ಚು ಹಂಬಲ.ಆಗ ತೀರ್ಥಹಳ್ಳಿಯ ಮಟ್ಟಿಗೆ ಇದ್ದುದು ಎರಡೆ ಎರಡು ಖಾಸಗಿ ಶಾಲೆಗಳು.ಪರೀಕ್ಷೆಯ ಫಲಿತಾಂಶದಿಂದ ಹಿಡಿದು ಕ್ರೀಡಾಕೂಟ ಇನ್ನಿತರ ಚಟುವಟಿಕೆ ಹಾಗು ನವೊದಯಕ್ಕೆ ಆಯ್ಕೆಗಳಂತಹ ಸಣ್ಣ ಸಣ್ಣ ವಿಷಯಗಳಲ್ಲೂ ರಾಷ್ಟ್ರೋತ್ಥಾನ ಪರಿಷತ್ ನ ಅಂಗಸಂಸ್ಥೆ 'ಸೇವಾ ಭಾರತಿ" ಹಾಗು ಕ್ಯಾಥೊಲಿಕ್ ಮಹಾಸಭಾದ ಅಂಗಸಂಸ್ಥೆ 'ಸೆಯಿಂಟ್ ಮೇರಿಸ್' ಶಾಲೆಗಳ ನಡುವೆ ಭಾರೀ ಪೈಪೋಟಿ.ನನ್ನನ್ನು ಸೇವಾಭಾರತಿಯ ಶಿಶು ಮಂದಿರ 'ಭಾರತಿ ಶಿಶುವಿಹಾರಕ್ಕೆ ಸೇರಿಸಲಾಗಿತ್ತು.ಅದಾಗಲೇ ನಾನು ಮನೆಯ ಹತ್ತಿರವೇ ಪುರಸಭೆಯವರು ನಡೆಸುತ್ತಿದ್ದ ರೋಟರಿ ಶಿಶುವಿಹಾರದಲ್ಲಿ ತಕ್ಕ ಮಟ್ಟಿಗೆ ಆಡಲು ಹಾಡಲು ಕಲಿತಿದ್ದೆ.


{ನಾಳೆಗೆ ಮುಂದುವರಿಸುತ್ತೇನೆ}

22 August 2010

ನೆನಪಲ್ಲಿ ನಿಸ್ಸಹಾಯಕ...

ಸದ್ದೇ ಇರದ ಊರಿನಲ್ಲಿ ಕಿವುಡನಾದಂತೆ,
ಬೆಳಕು ಇದ್ದಿರದ ಜಾಗದಲ್ಲೂ ಕುರುಡನಾದಂತೆ/
ನೆಲವೇ ಸಿಗದಷ್ಟು ಆಳಕ್ಕೆ ಜಾರಿ ಬೀಳುವಾಗಲೂ ಕುಂಟನಾನು,
ಬಿದ್ದ ನೋವಲೂ ಮತ್ತೆ ಆ ಕತ್ತಲ ಕೂಪದಲಿ ನಿನ್ನ ನೆನಪಿನತ್ತಲೆ ತೆವಳುವೆನು//

21 August 2010

ಮಾತು ಮರೆತೆ...

ಮಾತಿನ ಮನೆಗೆ ಹಾಕಿ ಮೌನದ ಬೇಲಿ,
ಜೊತೆಜೊತೆಯಾಗಿಯೆ ನಾವಿಬ್ಬರೂ ಕಂಡಿದ್ದ ಕನಸುಗಳನ್ನೆಲ್ಲ ಮಾಡುವಂತೆ ಗೇಲಿ/
ಹೇಳು,ನೀ ಹೀಗೆ ಥಟ್ಟನೆ ಮುನಿದು ಹೋಗಬೇಕಿತ್ತೆನು?,
ನಾನೋಲ್ಲದಿದ್ದರೂ ನೀನೆ ಬಿಗಿಯುತ್ತಿದ್ದ ಒಲವ ಪಾಶದ್ದು ಅಸಲು ಇದೆ ಹಕೀಕತ್ತೇನು?//

ಕನಸೊಡೆದ ಚೂರು...

ನೆನ್ನೆಯ ಕನಸು ಇಂದು ನನಸಾಗುವುದು,
ಇಂದಿನ ಕನಸು ನಾಳೆ ನನಸಾಗುವುದು ಕೇವಲ ಕಥೆ-ಕಾದಂಬರಿಗಳಲ್ಲಿ ಮಾತ್ರ/
ನಿನ್ನ ಜೊತೆಯಲ್ಲಿ ಸದಾ ಇರುವ ನನ್ನ ಕನಸು ಒಡೆದು ಚೂರಾದಾಗಲೇ,
ನನಗಿದು ಖಾತ್ರಿಯಾಯ್ತು//

{ಮೊನ್ನೆಯಿಂದ ಮುಂದುವರಿಕೆ} ಕರಾವಳಿಯ ಕರೆ...

ಬೇಸಿಗೆ ಹಾಗು ದಸರೆಯ ಶಾಲಾರಜೆಗಳನ್ನು ನಾನು ಜಾತಕಪಕ್ಷಿಯಂತೆ ಕಾಯುತ್ತಿದ್ದೆ.ಈ ಮೊದಲೆ ಹೇಳಿದಂತೆ ನನ್ನ ರಜಾದಿನಗಳನ್ನು ಕಳೆಯಲು ನನಗಿದ್ದದ್ದು ಕೇವಲ ಸೀಮಿತವಕಾಶ.ಒಂದೋ ಅಮ್ಮನ ತವರು ಸಾಗಿನಬೆಟ್ಟಿಗೆ ಅವರೊಂದಿಗೆ ಹೋಗಬೇಕು,ಇಲ್ಲವೆ ಕೊಪ್ಪದಲ್ಲಿದ್ದ ಚಿಕ್ಕಪ್ಪ (ಅಜ್ಜನ ತಮ್ಮ) ನ ಮನೆಗೆ ಹೋಗಬೇಕು,ಅದೂ ಇಲ್ಲದಿದ್ದರೆ ದಬ್ಬಣ gaddeyallidda ಪ್ರಭಾಕರನ್ನನ ಮನೆಗೆ ಹೋಗಬೇಕು ( ಅವ್ರ ಬಗ್ಗೆ ಮುಂದೆ ಹೇಳುತ್ತೇನೆ). ಇವಿಷ್ಟರಲ್ಲಿ ನನ್ನ ಪ್ರಾಥಮಿಕ ಆದ್ಯತೆ ಇರುತ್ತಿದ್ದುದು ಅಮ್ಮನ ಜೊತೆಗೆ ಸಾಗಿನ ಬೆಟ್ಟಿಗೆ ಹೋಗುವುದು.

ಹಳ್ಳಿಯ ವಾತಾವರಣದ ಹಿನ್ನೆಲೆ,ಗದ್ದೆ-ತೋಟಗಳಲ್ಲಿ ಸ್ವಚ್ಛಂದವಾಗಿ ಅಲೆಯುವ ಮುಕ್ತ ಅವಕಾಶ,ನೇಜಿ ನೆಡುವವರ 'ಓ ಬೇಲೆ' ಕೇಳುತ್ತ ಇತ್ತ ಕೋಣಕಟ್ಟಿ ಹೂಡುವವರ 'ಊ ಹು ಊ ಹು ಊ'ರಾಗವನ್ನ ಕೇಳ್ತಾ ಇರುವ ಹಂಬಲ,ಮನೆಯ ಜಾಗದೊಳಗೆ ಬಳುಕುತ್ತ ಹರಿಯುವ 'ಫಲ್ಗುಣಿ'ಯ ನೀರಲ್ಲಿ ಆಡುವ ತವಕ, ಹಟ್ಟಿಯಲ್ಲಿದ್ದ ಹೂಡುವ ಕೋಣಗಳನ್ನು ತೋಡಲ್ಲಿ ಮೀಯಿಸುವಾಗ ತೆಂಗಿನ ಚೊಪ್ಪಿನಲ್ಲಿ ಅವುಗಳ ಮೈ ತಿಕ್ಕುವ ರೋಮಾಂಚನ (ತಿಕ್ಕೋದು ಕಡಿಮೆಯಾಗಿ ನೀರಲ್ಲಿ ಬಿದ್ದು ಹೊಡಕೋದೆ ಜಾಸ್ತಿಯಾಗಿರುತ್ತಿತ್ತು).ಮನೆಗೆ ಅಂಟಿಕೊಂಡಿದ್ದ ಕೆರೆಯಲ್ಲಿ ಅಮ್ಮನ ಅಣ್ಣ ಸುಂದರಮಾವ ಈಜುವಾಗ ನಾನೂ ಕೋಮಣ ಕಟ್ಟಿಕೊಂಡು ಅವರ ಈಜಿನ ಕೊನೆಯಲ್ಲಿ ಕೇವಲ ಐದೇ ಐದು ನಿಮಿಷವಾದರೂ ಅವರಿಂದ ಈಜು ಕಲಿಯುವ ಹಠ ಇವೆಲ್ಲ ಊರಿನತ್ತ ಇರುತ್ತಿದ್ದ ಪ್ರಮುಖ ಆಕರ್ಷಣೆಗಳು.

ಜೊತೆಗೆ ಮನೆಯಲ್ಲಿ ಮಾಡುತ್ತಿದ್ದ ಮೂಡೆ,ಕೊಟ್ಟೆ ಕಡುಬು,ನೀರ್ ತೆಲ್ಲಾವು,ಪುಂಡಿ,ಅರಿ ಸೇಮಿಗೆ-ಕೈ ಪೇರ್,ಉದ್ದು ದೋಸೆ,ಕೆಂಡದಡ್ದಯೇ,ಕಡಲೆಬೇಳೆ ಪಾಯಸಗಳಂತಹ ತುಳು ತಿಂಡಿಗಳು ಮೋಡಿ ಹಾಕುತ್ತಿದ್ದವು.ಅಲ್ಲದೆ ಈ ತಿಂಡಿಗಳೊಡನೆ ಹೇರಳವಾಗಿ ಮೇಯಲು ಸಿಗುತ್ತಿದ್ದ ಮಾವು,ಪೇರಳ-ಸಾಂತಿ-ಕೇಪಳ-ಹಲಸು-ನೇರಳೆ-ಬಿಂಬುಳಿ-ನಲ್ಲಿ ಮುಂತಾದ ಹಣ್ಣುಗಳ ರುಚಿ ಅತ್ತಲೆ ಹೋಗುವಂತೆ ಪ್ರೇರೇಪಿಸುತ್ತಿದ್ದವು ಅನ್ನಿಸುತ್ತದೆ.ಇವೆಲ್ಲದರ ಬಾಲ ಹಿಡಿದು ಅಮ್ಮನೊಟ್ಟಿಗೆ ಊರಿಗೆ ಹೋಗಲು ಸದಾಒಂತಿ ಕಾಲಲ್ಲಿ ನಿಂತಿರುತ್ತಿದ್ದೆ.ಅಲ್ಲಿಂದ ತೀರ್ಥಹಳ್ಳಿಗೆ ಮರಳಿ ಬರುವಾಗ ಕಾರ್ಕಳದ ಕಾಬೇತ್ತಿನಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ಒಂದು ದಿನ,ಹಾಗು ಮುನಿಯಾಲಿನ ಬಳಿಯ ಗುದ್ದೆಮನೆಯಲ್ಲಿದ್ದ ಅಜ್ಜನ ಮನೆಯಲ್ಲಿ ಒಂದು ದಿನ ಕಳೆಯಲು ಸಿಗುತ್ತಿದ್ದ ಸಂತಸದ ವೇಳೆ ಸಾಗಿನ ಬೆಟ್ಟಿಗೆ ಹೋಗಲು ಇದ್ದ ಪ್ರಮುಖ ಆಕರ್ಷಣೆ.


ಹಾಗಂತ ಊರಿಗೆ ಹೋಗುವಾಗಲೆಲ್ಲ ಅಮ್ಮ ನನ್ನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು ಎಂದೇನಲ್ಲ.ಹಲವಾರು ಬಾರಿ ನನ್ನ ಶಾಲಾ ದಿನಗಳಲ್ಲೇ ಅವರು ಊರಿಗೆ ಹೊರಡುತ್ತಿದ್ದುದೂ ಉಂಟು,ಆಗೆಲ್ಲ ನಾನು ಅದೆಷ್ಟೇ ಅತ್ತು-ಕರೆದು ರಂಪ ಮಾಡುತ್ತಿದ್ದರೂ ಫಲ ಮಾತ್ರ ನಾಸ್ತಿ.ಅಂತಹ ಸಂದರ್ಭಗಳಲ್ಲಿ ಅಡುಗೆ ಮನೆಯ ಮೂಲೆಯಲ್ಲಿರುತ್ತಿದ್ದ ನಾಗರಬೆತ್ತಕ್ಕೆ ನನ್ನ ಮೇಲೆ ಸವಾರಿ ಮಾಡಲು ಮುಫತ್ ಅವಕಾಶ ಬೇರೆ ಸಿಗುತ್ತಿತ್ತು!.ಬರುಬರುತ್ತಾ ಈ ಪೆಟ್ಟಿನ ಹೆದರಿಕೆಯಿಂದ ನಾನು ಹಟ ಕಡಿಮೆ ಮಾಡಿದೆನಾದರೂ ಪೂರ್ತಿ ರಾಜಿ ಯಾಗಲಿಲ್ಲ.ಆದ ರಾಜಿಸೂತ್ರದ ಪ್ರಕಾರ ಅಮ್ಮ ನನ್ನನ್ನು ಊರಿಗೆ ಕರೆದೊಯ್ಯದ ಸಂದರ್ಭಗಳಲ್ಲಿ ಅವರಿಗಾಗಿ ಬಸ್ಸಿನಲ್ಲಿ ಸೀಟು ಹಿಡಿಯುವುದಕ್ಕಷ್ಟೇ ನನ್ನ ಹಾರಾಟದ ಕಾರ್ಯವ್ಯಾಪ್ತಿ ಸೀಮಿತವಾಯ್ತು.


ಈ ಸೀಟು ಹಿಡಿಯುವುದು ನನಗಾಗ ಒಂದು ಮೋಜಿನ ಆಟ.ತೀರ್ಥಹಳ್ಳಿ ಪಟ್ಟಣದ ಚಹರೆಪಟ್ಟಿಯ ಅರಿವು ನಿಮಗಿದ್ದಲ್ಲಿ ಮುಂದೆ ನಾನು ಕೊಡುವ ವಿವರಣೆ ಸರಳವಾಗಿ ನಿಮಗೆ ಅರ್ಥವಾದೀತು.ಶಿವಮೊಗ್ಗದಿಂದ ಸುಮಾರು ೬೦ ಕಿಲೋಮೀಟರ್ ದೂರದಲ್ಲಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯಹೆದ್ದಾರಿಯಲ್ಲಿ ನಮ್ಮೂರಿದೆ ( ಈಗ ಅದು ರಾಷ್ಟ್ರೀಯಹೆದ್ದಾರಿಯ ದರ್ಜೆಗೇರಿದೆ).ಹೀಗಾಗಿ ಮಂಗಳೂರು,ಸಾಗರ,ಹೊಸನಗರ,ಕುಂದಾಪುರಗಳತ್ತ ಸಾಗುವ ಬಸ್ಸುಗಳದ್ದೊಂದು ದಿಕ್ಕಾದರೆ,ಶಿವಮೊಗ್ಗ,ಬೆಂಗಳೂರಿಗೆ ಸಾಗುವ ಬಸ್ಸುಗಳದ್ದು ಇನ್ನೊಂದು.ಇನ್ನು ಕೊಪ್ಪ-ಶೃಂಗೇರಿಗಳ ಕಡೇ ಸಾಗುವವದ್ದು ಮೆಲಿನೆರಡರ ನಡುವಿನ ದಾರಿ.ಹೀಗಾಗಿ ಈ ಗೊಂದಲಾಪುರದಲ್ಲಿ ಮೂರ್ಮೂರು ಬಸ್ ನಿಲ್ದಾಣಗಳಿವೆ.ಮುಖ್ಯಬಸ್ ನಿಲ್ದಾಣ ಕೆಳಗಿನಸ್ಟ್ಯಾಂಡ್ ಎಂದು ಕರೆಯಿಸಿ ಕೊಂಡರೆ,ಉಳಿದೆರಡು ಮೇಲ್ ಸ್ಟ್ಯಾಂಡ್ ಹಾಗು ಕೊಪ್ಪಸ್ಟ್ಯಾಂಡ್ ಎನ್ನಲಾಗುತ್ತದೆ.ಈ ಮೂರೂ ದಿಕ್ಕಿನಿಂದ ಬರುವ ಬಸ್ಸುಗಳು ಮುಖ್ಯ ಬಸ್ ನಿಲ್ದಾಣಕ್ಕೆ ಬರುವುದು ಖಡ್ಡಾಯವಾದರೂ ಉಳಿದಂತೆ ತಮ್ಮತಮ್ಮ ದಿಕ್ಕಿನ ಕಡೆಗಿನ ನಿಲ್ದಾಣಗಳಲ್ಲೇ ಹೆಚ್ಚು ಸಮಯ ನಿಲ್ಲುತ್ತವೆ.ಈ ಮೂರೂ ನಿಲ್ದಾಣಗಳ ನಡುವೆ ಒಂದೊಂದು ಕಿಲೋಮೀಟರ್ ಅಂತರವಿದೆ.
ಈಗಲೂ ಅಲ್ಲಿ ಇದೆ ಪರಿಸ್ಥಿತಿಯಿದೆ,



ಶಿವಮೊಗ್ಗದಿಂದ ಮಂಗಳೂರಿನತ್ತ ಸಾಗುವ ಬಹುತೇಕ ಬಸ್ಸುಗಳೆಲ್ಲ ಹೆಬ್ರಿ-ಉಡುಪಿ ಮಾರ್ಗವಾಗಿಯೆ ಹೋಗುತ್ತಿದ್ದರಿಂದ ಕಾರ್ಕಳ-ಮೂಡಬಿದ್ರಿಗಳ ಕಡೆಗೆ ಸಾಗುವ ಬಸ್ಸುಗಳು ಕಡಿಮೆಯಿದ್ದವು.ಈ ಮಾರ್ಗವಾಗಿ ಸಾಗಿದರೂ ಉಡುಪಿ ಮೇಲೆ ಸಾಗಿದಷ್ಟೇ ಮಂಗಳೂರಿಗೆ ಅಂತರ ಇದ್ದರೂ ರಸ್ತೆ ಹೋಲಿಕೆಯಲ್ಲಿ ಅಷ್ಟು ಚೆನ್ನಾಗಿರದ ಕಾರಣ ( ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಚೆನ್ನಾಗಿದೆ) ಹಾಗು ಮಣಿಪಾಲದತ್ತ
ಚಿಕಿತ್ಸೆಗಾಗಿ ಸಾಗುವ ರೋಗಿ ಪ್ರಯಾಣಿಕರ ಸಂಖ್ಯೆಯೂ ಗಣನೀಯವಾದುದರಿಂದ ಆರ್ಥಿಕ ಹಿತದೃಷ್ಟಿಯಿಂದ ಮಂಗಳೂರಿಗೆ ಹೋಗುವ ಬಸ್ಸುಗಳೆಲ್ಲ ಅದೆ ಮಾರ್ಗವಾಗಿ ಸಂಚರಿಸುತ್ತಿದ್ದವು.ಹೀಗಾಗಿ ಮೂಡುಬಿದ್ರಿ-ಕಾರ್ಕಳದ ದಿಕ್ಕಿಗೆ ಧಾರಾಳ ಬಸ್ಸಿನ ಕೊರತೆಯಿತ್ತು.ಒಂದೋ ಮಂಗಳೂರಿನ ಬಸ್ಸಿನಲ್ಲಿ ಹೆಬ್ರಿ ಮುಟ್ಟಿ ಅಲ್ಲಿ ಇನ್ನೊಂದು ದಿಕ್ಕಿನ ಬಸ್ ಬದಲಿಸಬೇಕಿತ್ತು,ಇಲ್ಲವೋ ಇದು ಹೆಚ್ಚು ತ್ರಾಸ ಎಂದೆನಿಸಿದರೆ ಸಾಗರದಿಂದ ಗುರುವಾಯನಕೆರೆಗೆ ಹೋಗುತ್ತಿದ್ದ 'ಪುಷ್ಪದಂತ' ಹಾಗು 'ನವಶಕ್ತಿ' ಎನ್ನುವ ಎರಡು ಬಸ್ಸುಗಳಿದ್ದವು,ಸಾಮಾನ್ಯವಾಗಿ ಧರ್ಮಸ್ಥಳಕ್ಕೆ ಹೋಗುವ ಭಕ್ತಕೋಟಿಯಿಂದ ತುಂಬಿ ತುಳುಕಾಡುತ್ತಿದ್ದ ಅವನ್ನೇ ಕಾದು ಒಂಟಿಕಾಲಲ್ಲಿ ನಿಂತಾದರೂ ಊರು ಸೇರ ಬೇಕಿತ್ತು.ತೀರ್ಥಹಲ್ಲಿಗೂ ಮೂಡಬಿದ್ರಿಗೂ ಸರಿ ಸುಮಾರು ನೂರು ಕಿಲೋಮೀಟರ್ ಅಂತರ ಹಾಗು ಎರಡೂ ಎರಡೂವರೆ ಗಂಟೆಗಳ ದೀರ್ಘ ಪ್ರಯಾಣ ಹೀಗಾಗಿ ನಿಂತು ಸಾಗೋದು ಕಷ್ಟ.ಸಾಲದ್ದಕ್ಕೆ ಆಗುಂಬೆ ಘಾಟಿಯ ಕಡಿದಾದ ತಿರುವುಗಳಲ್ಲಿ ಪದೇ ಪದೇ ಒತ್ತಿಸಿಕೊಳ್ಳುವ ಬಸ್ಸಿನ ಬ್ರೇಕಿಗೆ ಹಚ್ಚಿರುವ ಕೀಲೆಣ್ಣೆ ಡೀಸಲ್ ಘಮದೊಂದಿಗೆ ಹೊರಹೊಮ್ಮಿಸುವ ದರಿದ್ರ ವಾಸನೆ .ಈ ವಾಸನೆಗೆ ತಲೆ ತಿರುಗಿದಂತಾಗಿ ಹೊಟ್ಟೆ ತೊಳಿಸಿ ಪ್ರಯಾಣದುದ್ದಕ್ಕೂ ಬಕ ಬಕ ವಾಂತಿ ಮಾಡಿಕೊಳ್ಳುತ್ತ ತಿಂದದ್ದನೆಲ್ಲ ಕಾರಿಕೊಳ್ಳುವ ಮಂಜುನಾಥನ ಭಕ್ತಕೋಟಿ!ಒಂದಾ? ಎರಡ? ಈ ಎಲ್ಲ ವಿವಿಧ ವಿನೋದಾವಳಿಗಳನ್ನು ನೋಡಿಯೇ ಸವಿಯಬೇಕು.ಒಟ್ಟಿನಲ್ಲಿ ಇದೊಂಥರಾ ಕಾಲಾಪಾನಿ ಶಿಕ್ಷೆ.ಈ ಎಲ್ಲ ರಗಳೆಗಳಿಂದ ಮುಕ್ತರಾಗ ಬೇಕಿದ್ದಲ್ಲಿ ಸೀಟು ಹಿಡಿದು ಕೂತು ಪ್ರಯಾಣಿಸಬೇಕು.

{ನಾಳೆಗೆ ಮುಂದುವರೆಸುವೆ}

19 August 2010

ಮೋಕ್ಷವಿಲ್ಲ...

ನೀನಿಲ್ಲದೆ ನರಳುತಿವೆ,
ಕರಗುತಿವೆ ಕನಸುಗಳು ನೀನಿಲ್ಲದೆ/
ನಿದ್ದೆಗೆ ಶಾಶ್ವತ ರಜೆ,
ನೀನೆ ಇಲ್ಲದ ಮೇಲೆ ಇನ್ನೆಲ್ಲಿ ನನಗೆ ನಿದ್ದೆ,//

ಮುದುಡುತಿವೆ ನನ್ನ ಅರಳು ಕಣ್ಣುಗಳು,
ಕಣ್ಣಲೆ ಇಂಗುತಿವೆ ನೋವಿನ ಹನಿಗಳು/
ಮುದುಡಿದ್ದು ಮನಸು ಮಾತ್ರವಲ್ಲ,
ನಾನೂ ಬಾಡಿ ಮುದುಡಿದ್ದೇನೆ//

ಮೂಕ ನಾನು...

ವರ್ಷಗಳೆ ಹಿಡಿದವು ಭಯಬಿಟ್ಟು ನಿನ್ನಲ್ಲಿ ಉಸುರಲು,
ಕೇವಲ ಎರಡಕ್ಷರವಿತ್ತು...ಅದು ಒಂದೆ ಒಂದು ಮಾತಾಗಿತ್ತು/
ಮನದ ಮಾತಿಗೆ ರಂಗು ಹಚ್ಚುವ...
ಮುಂಬರುವ ಇರುಳನ್ನೆಲ್ಲ ಬೆಳಕಾಗಿಸುವ,
ಮೌನದಲೇ ಮಾತನೆಲ್ಲ ತಾಕುತ....
ಬಯಕೆಗಳ ಉಯ್ಯಾಲೆ ಜೀಕುವ//


ನಿನ್ನಿರುಳುಗಳೂ ಬಹುಶಃ ನನ್ನ ಪ್ರತಿ ಇರುಳುಗಳಂತೆಯೆ
ಸತ್ತು ಮತ್ತೆ ಹುತ್ತುತ್ತಿದ್ದವೇನೊ?/
ಮಾತೊಂದನೂ ಆಡದೆ ನೀ ನಿಭಾಯಿಸಿದ್ದಿ.
ನನ್ನ ಚೂರೇ ಚೂರು ದ್ರೋಹವನ್ನ//

ಬಚ್ಚೆಗೌಡರ ಪೌರುಷ ಪುರಾಣ part-3

"ಬಚ್ಚೆಗೌಡರು ತುಂಬಾ ಸಾತ್ವಿಕ ಮನುಷ್ಯರು.ಅವರು ಇಂತಹ ಅಪರಾಧ ಎಸಗೋದು ಅಸಾಧ್ಯ!?" ಹೀಗಂತ ಪುಕ್ಕಟೆ ಹೇಳಿಕೆ ನೀಡಿರುವವರು ಕರ್ನಾಟಕ ರಾಜ್ಯ ಸರಕಾರದ ಅಬಕಾರಿ ಸಚಿವ ರೇಣುಕಾಚಾರ್ಯ.ಈ ರೇಣುಕಾಚಾರ್ಯ ಎಂದರೆ ಯಾರು ಎಂಬ ಗೊಂದಲದಲ್ಲಿ ಬೀಳುವವರಿಗೆ ನರ್ಸ್ ರೇಣು,ರಸಿಕ ರೇಣು,ಕಿಸ್ಸರ್ ಕಿಂಗ್ ರೇಣು ಮುಂತಾದ ಸಮಾನಾರ್ಥಕ ಪದಗಳನ್ನು ಹೇಳಿದರೆ ಅವರ ಗೊಂದಲ ನಿವಾರಣೆಯಾಗಬಹುದು.ಮಾಜಿ ಮುಜುರಾಯಿ ಸಚಿವ ಮಾಲೂರು ಕೃಷ್ಣಯ್ಯ ಶಟ್ಟಿಯಿಂದ ತೆರವಾಗಿರುವ ರಾಜ್ಯ ಸಚಿವ ಸಂಪುಟದ ಆಸ್ಥಾನ ವಿದೂಷಕನ ಸ್ಥಾನದಲ್ಲಿ ಸದ್ಯ ವಿರಾಜಮಾನರಾಗಿರುವ ಈ ರೇಣು ಎಂಬ ಹೊನ್ನಾಳಿ ಬೀಜದ ಹೋರಿ ತುಂಬಾ ಕಾಳಜಿಯಿಂದ 'ಕಳ್ಳ ದೇವರಿಗೆ ಸುಳ್ಳ ಪುಜಾರಿ'ಯಂತೆ ಶ್ರೀಮಾನ್ ಬಚ್ಚೆಗೌಡರ ಬಗ್ಗೆ ಯಾರೇನು ಕೇಳದಿದ್ದರೂ ತಮ್ಮ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ.


ಇತ್ತ ಬಚ್ಚೆಗೌಡರಿಗೆ ಕಾಮಾಲೆ ಕಾಯಿಲೆಯಾಗಿರುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿವೆ.'ಸಿಎಂ ಹೇಳಿಕೆಗೆ ತಲೆಬಾಗಿ ವಿವಾದಕ್ಕೆ ಅಂತ್ಯ' ಹಾಡುವ ಮಾತನಾಡುತ್ತಲೆ 'ನಾನು ವಕೀಲ ದೇವದಾಸ್ ಜೂನಿಯರ್ ಆಗಿದ್ದೆ ಕಣ್ರೀ ;ಇಷ್ಟಕ್ಕೆ ಎಲ್ಲ ಮುಗೀತು ಅನ್ಕಾಬೇಡಿ...ಇದು ಅಂತ್ಯವಲ್ಲ ಆರಂಭ!' ಎಂಬ ವಿರೋಧಾಭಾಸದ ನುಡಿಮುತ್ತುಗಳನ್ನು ಥೇಟ್ ವಜ್ರಮುನಿ ಸ್ಟೈಲ್ ನಲ್ಲಿ ಗುಟುರು ಹಾಕುತ್ತಿರುವ ಈ ಮಾಜಿ ಅಡ್ವೋಕೇಟ್ ಸಚಿವರಿಗೆ ತಮ್ಮ ವಿರುದ್ಧ ಸುದ್ಧಿ ಪ್ರಕಟಿಸಿದ "ವಿಜಯ ಕರ್ನಾಟಕ" ಪೀತ ಪತ್ರಿಕೆಯಾಗಿ ಕಂಡಿದೆ.ಉಳಿದೆಲ್ಲರಿಗೂ ಬಿಳಿ ಹಾಳೆಯ ಮೇಲೆ ಕಪ್ಪು ಮುದ್ರಣವಷ್ಟೇ ಕಾಣುತ್ತಿರುವಾಗ ಬಚ್ಚೆಗೌಡರಿಗೆ ಅದು ಅರಿಶಿನವಾಗಿ ಕಾಣಿಸುತ್ತಿದೆ ಎಂದಾದರೆ ಸಮಾಜದ ಹಿತ ದೃಷ್ಟಿಯಿಂದ ತುರ್ತಾಗಿ ಅವರಿಗೆ ಚಿಕತ್ಸೆಯೊಂದು ಬೇಕೆಬೇಕು ಅನ್ನಿಸುತ್ತೆ.ಸಾಲದ್ದಕ್ಕೆ ಅವರ ಮಾನ ಬೇರೆ ನಷ್ಟ ಆಗಿದೆಯಂತೆ,ಈ ಸಂಬಂಧ ಅವರು 'ವಿ ಕ' ದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತಾರಂತೆ! 'ಕಳೆದು ಕೊಳ್ಳುವಷ್ಟು ಮಾನ ಬಚ್ಚೆಗೌಡರ ಬಳಿ ಇದೆಯಾ?' ಎಂದು ಪತ್ರಕರ್ತ "ಅಗ್ನಿ" ಶ್ರೀಧರ್ ಪ್ರಶ್ನಿಸಿರುವುದು ಮಾರ್ಮಿಕವಾಗಿದೆ.



"ಹುಟ್ಟು ಗುಣ ಸುಟ್ಟರೂ ಹೋಗದು" ಎಂಬಂತೆ ತಮ್ಮ ಪಾಳೇಗಾರಿಕೆಯ ಗತ್ತಿಗೆ ಅಮಾಯಕರನ್ನು ಬಲಿಕೊಡುವ ಬಚ್ಚೆಗೌಡರು ತಮ್ಮನ್ನು ಹೊರತು ಪಡಿಸಿ ಉಳಿದ ಆರು ಕೋಟಿ ಕನ್ನಡಿಗರನ್ನು ಕೇವಲ ಬಚ್ಚಾಗಳು ಅಂದುಕೊಂಡಂತಿದೆ.ಜೊತೆಗೆ 'ಊಸರವಳ್ಳಿಗೆ ಬೇಲಿ ಸಾಕ್ಷಿ' ಎಂಬಂತೆ ಇತ್ತ ಸಹೋದ್ಯೋಗಿ ರಸಿಕ ಕುಲತಿಲಕ ರೇಣುಕಾಚಾರ್ಯನ ಶಿಫಾರಸ್ಸು ಬೇರೆ.ಮಾನ್ಯ ಮುಖ್ಯಮಂತ್ರಿಗಳಾದ ಬೂಸಿಯ ಮಾತ್ರ ಸಿಕ್ಕಾಪಟ್ಟೆ ನಿಶಕ್ತಿ ಹಾಗು ನರದೌರ್ಬಲ್ಯದಿಂದ ನರಳುತ್ತಿರುವಂತೆ ಕಾಣುತ್ತಿದ್ದು ತೀರ ತಮ್ಮ ಸಂಪುಟ ಸಹೋದ್ಯೋಗಿಗಳನ್ನೂ ಆಳಲಾರದಷ್ಟು ಅಸಹಾಯಕ ಪರಿಸ್ಥಿತಿಯಲ್ಲಿ ಇರುವಂತಿದೆ.ಇಂತಹ ತಾನು ತನ್ನ ಕುರ್ಚಿ ಭದ್ರ ಮಾಡಿಕೊಳ್ಳುವುದನ್ನು ಬಿಟ್ಟು ಧೀಮಂತವಾಗಿ ಈ ರಾಜ್ಯವನ್ನು ಆಳುತ್ತೇನೆ ಎಂದು ನಂಬಲು ಸ್ವತಹ ಅವರೇ ಸಿದ್ಧರಿದ್ದಂತಿಲ್ಲ! ಯಾರಾದರು ರಹಸ್ಯರೋಗಗಳ ರಣವೈದ್ಯರು ಇವರ ಈ ಅಸಹಾಯಕತಾ ಪೂರ್ವಕ ನಿಮಿರು ದೌರ್ಬಲ್ಯಕ್ಕೆ ಖಚಿತ ಕಾರಣ ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡಬೇಕಿದೆ.ಮಾನ್ಯ ಮುಖ್ಯಮಂತ್ರಿಗಳು ಇನ್ನು ಮುಂದೆ ಅವರ ಆಸ್ಥಾನ ವಿದೂಷಕ ಪಟ್ಟವನ್ನು ಓವರ್ ಟೇಕ್ ವೀರ ಬಚ್ಚೆಗೌಡರಿಗೆ ಕಿಸ್ಸಿಂಗ್ ಶೂರ ರೇಣುಕಾಚಾರ್ಯರೊಂದಿಗೆ ಹಂಚಿ ಕೊಡಲು ಅಡ್ಡಿಯಿಲ್ಲ.

18 August 2010

ಬಚ್ಚೆಗೌಡ ಪುರಾಣಮು...part-2

ಸಚಿವ ಬಚ್ಚೆ ಗೌಡರ ಕೊಚ್ಚೆ ಬಾಯಿ ಮತ್ತೊಮ್ಮೆ ಬಿಟ್ಟಿದೆ.ಈ ಬಾರಿ ಪರಮ ಸಾತ್ವಿಕನ ಗೆಟಪ್ಪಿನಲ್ಲಿ ಅನ್ನೋದಷ್ಟೇ ಚಿಕ್ಕ ಬದಲಾವಣೆ.ಕಳೆದ ಮೂರು ದಿನಗಳಿಂದ ಅವರ ವಿರುದ್ಧ ನಡೆಯುತ್ತಿರುವುದು ವ್ಯವಸ್ತಿತ ಪಿತೂರಿಯಂತೆ! ಭಾರಿ ಷಡ್ಯಂತ್ರವಂತೆ!! ಸದ್ಯ,ಇದರ ಹಿಂದೆ ವಿದೇಶಿ ಕೈವಾಡ ಇದೆ ಎಂದು ಅವರು ಹೇಳಲಿಲ್ಲ,ಅವಸರದಲ್ಲಿ ಮರೆತು ಬಿಟ್ಟರೆನೋ?!


ಮೊನ್ನೆ ಅಂದರೆ ಆಗಷ್ಟ್ ೧೫ರನ್ದು ಸಂಜೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದದ್ದಿಷ್ಟು.ಮಾನ್ಯ ಸಚಿವ ಬಚ್ಚೆ ಗೌಡರ ಸವಾರಿ ಹಾಸನದಿಂದ ಬೆಂದಕಾಳೂರಿಗೆ ಚಿತ್ತೈಸುತ್ತಿತ್ತು.ಆವಾಗ ಭರತ್ನೆಂಬ ದುರುಳ ಅವರ ಸರಕಾರಿ ವಾಹನವನ್ನು ಓವರ್ ಟೇಕ್ ಮಾಡುವ ದುಸ್ಸಾಹಸಕ್ಕೆ ಇಳಿದಿದ್ದಾನೆ.ಸದರಿ ಸಂದರ್ಭದಲ್ಲಿ ಆತ ಸಫಾರಿ ವಾಹನದಲ್ಲಿದ್ದುದು ಮೊದಲನೇ ತಪ್ಪು ( ಸಚಿವರಿಗಿಂತ ದುಬಾರಿ ವಾಹನದಲ್ಲಿ ಅವರೆದುರಿಗೆ ಮೆರೆಯುವುದು ಎಂದರೇನು?),ಸಾಲದ್ದಕ್ಕೆ ಒಳಗಿನ ಲೇನ್ ನಲ್ಲಿದ್ದ ಅವನ ವಾಹನ ಘನ ಸಚಿವರ ಎರಡನೇ ಲೇನ್ ನಲ್ಲಿದ್ದ ಸರಕಾರಿ ಸಾರೋಟನ್ನ ಹಿಂದಿಕ್ಕುವ ಉದ್ಧಟತನ ತೋರಿದ್ದು ಎರಡನೇ ತಪ್ಪು.ಇಂತಹ ಪಾಪಿಗೆ...ನೀಚನಿಗೆ ಸ್ಥಳದಲ್ಲಿಯೆ ತಮ್ಮ ನಿತ್ಯದ ಶೈಲಿಯ ಅಮ್ಮ ..ಅಕ್ಕ... ಮಂತ್ರಪುಷ್ಪವನ್ನು ಧಾರಾಳವಾಗಿ ಉದುರಿಸುತ್ತ ಸನ್ಮಾನ್ಯ ಸಚಿವರು ಅರ್ಚನೆ ಆರಂಭಿಸಿದ್ದಾರೆ.ನಡುವೆ ತಮ್ಮ ಕಾಲಿಗೆರಗಿ ಕೃಪಾಶಿರ್ವಾದಕ್ಕಾಗಿ ಅಂಗಲಾಚಿದ ಭರತ್ ತಂದೆ ಲೋಕಪ್ಪಗೌಡರಿಗೆ ತಮ್ಮ ಬೂಟುಗಾಲಿನಿಂದ ಸರಿಯಾಗಿ ಪೂಜೆಯನ್ನೂ ಮಾಡಿದ್ದಾರೆ.ಇವರೊಂದಿಗೆ ಬಚ್ಚೆಗೌಡರ ಗಣ ಗಳಾದ ಡ್ರೈವರ್ ದೇವದಾಸ್ ಹಾಗು ಗನ್ ಮ್ಯಾನ್ ರಾಜಶೇಖರ್ ಇತ್ತ ಭರತ್ ನನ್ನ ಸರಿಯಾಗಿ ವಿಚಾರಿಸಿಕೊಂಡು ತಮ್ಮ ಆದಿದೈವದ ಪೂಜೆ ಸಾಂಗವಾಗಿ ನೆರವೇರಲು ತಮ್ಮ ಕೈಲಾದ ಸೇವೆ ಸಲ್ಲಿಸಿದ್ದಾರೆ.



ಮಾನ್ಯ ಕಾರ್ಮಿಕ ಸಚಿವರು ಯಾವುದಾದರು ರಾಜಮಾರ್ಗಗಳಲ್ಲಿ ಕೇವಲ ಹತ್ತೆ ಕಿಲೋಮೀಟರ್ ವೇಗದಲ್ಲಿ ತಮ್ಮ ಸರಕಾರಿ ಗೂಟದ ಐರಾವತವನ್ನೇರಿ ಲೋಕ ಸಂಚಾರಕ್ಕಾಗಿ ಹೊರಟರೆ ಉಳಿದ ಎಲ್ಲಾ ಪಾಮರರು ಸಚಿವರ ಗೌರವಾರ್ಥವಾಗಿ ಕೇವಲ ಐದೇ ಕಿಲೋಮೀಟರ್ ವೇಗದಲ್ಲಿ ಸಾಹೇಬರ ಅಂಬಾರಿಯ ಹಿಂದೆ ತೆವಳುತ್ತ ಡೊಗ್ಗು ಸಲಾಮು ಹಾಕದೆ ತಿಮಿರು ತೋರಿದಲ್ಲಿ ಭರತ್ ಎಂಬ ಈ ದುರುಳನಿಗಾದ ಗತಿಯೆ ಅವರಿಗೂ ಆಗುತ್ತದೆ ಹಾಗು ಆಗಲೇಬೇಕು.ಎಷ್ಟೆಂದರೂ ಅವರು ಆಳುವ ಪ್ರಭುಗಳು ಹಾಗು ನಾವು ನೀವೆಲ್ಲ ಅವರ ಸೇವೆಗೆ ಟೊಂಕ ಕಟ್ಟಿ ನಿಲ್ಲಬೇಕಾದ ಪ್ರಜೆಗಳು.ಅಲ್ಲಲ್ಲಿ-ಆಗಾಗ ದುಷ್ಟರ ಹಾವಳಿ ಹೆಚ್ಚಿದಾಗ ಬಿಜೆಪಿ ಸರಕಾರದ ಮಂತ್ರಿ ಮಹೋದಯರು ದುಷ್ಟ ಶಿಕ್ಷೆಗೂ...ಶಿಷ್ಟ (ಅಂದರೆ ಸದರಿ ಮಂತ್ರಿಗಳು ಅಂತ ಓದಿಕೊಳ್ಳಬೇಕಾಗಿ ವಿನಂತಿ) ರಕ್ಷಣೆಗೂ ಮುಂದಾಗುತ್ತಾರೆ ಎನ್ನುವುದಷ್ಟೇ ಈ ಪುಣ್ಯ ಕಥೆಯ ಸಾರ..enjoy...

ನನ್ನೊಲವಿನ ಪಾರಿಜಾತ...

{ಮೊನ್ನೆಯಿಂದ ಮುಂದುವರೆದುದು}





ರತ್ನಗಂಧಿ,ಅಬ್ಬಲಿಗೆ,ಕಾಕಡ-ಮಂಗಳೂರು-ಕಸ್ತೂರಿ ಮಲ್ಲಿಗೆಗಳು,ಚಂಡು ಹೂ,ನಂದಬಟ್ಟಲು,ಕೆಂಪು-ಕೆನೆ ಬಣ್ಣದ ಗುಲಾಬಿ,ಸೇವಂತಿಗೆ,ಸೂರ್ಯಕಾಂತಿ,ಅರಿಶಿನದ ಹೂ ( ಹೆಸರು ಮಾತ್ರ ಅರಿಶಿನ ;ಹೂ ಬಿಳಿಯದೆ),ಕಬಾಳೆ ಹೂ,ಕೆಂಪು-ಗುಲಾಲಿ ತುಂಬೆ ಹೂ,ನೆಲ ಗುಲಾಬಿ,ಕೆಂಪು-ಹಳದಿ-ಬಿಳಿ-ಕೆನೆವರ್ಣದ ದಾಸವಾಳದ ಹೂ,ಹೀಗೆ ಅಸಂಖ್ಯ ಹೂ ಗಿಡಗಳು ಮೈತುಂಬ ಹೂ ಹೊಮ್ಮಿಸಿ ಕಣ್ಣಿಗೆ ಹಿತವಾಗುತ್ತಿದ್ದರೂ ಅದೆಲ್ಲಕ್ಕಿಂತ ಎತ್ತರದಲ್ಲಿ ಮರದಲ್ಲರಳಿ ನೆಲ ಮುಟ್ಟುತ್ತಿದ್ದ ಪಾರಿಜಾತದಷ್ಟು ಇನ್ಯಾವುದೇ ಹೂವು ನನಗೆ ಮೋಡಿ ಮಾಡಿರಲಿಲ್ಲ.ಪಾರಿಜಾತದ್ದು ಅಲ್ಪಾಯುಷ್ಯ.

ಸಂಜೆ ಹೊತ್ತು ಕಂತುವಾಗ ಮುತ್ತು ಪೋಣಿಸಿದಂತೆ ಕಾಣುವ ದುಂಡು ಮೊಗ್ಗುಗಳು ನಸು ಮುಂಜಾನೆಯಲ್ಲಿ ಅಂದವಾಗಿ ಅರಳಿ ಏಳೆಂಟು ಗಂಟೆಯ ಹೊತ್ತಿಗೆಲ್ಲ ಉದುರಿ ನೆಲಮುಟ್ಟುತ್ತಿದ್ದವು.ಇತ್ತ ಸಂಸ್ಕೃತ ವಾರ್ತೆಯ ಕೊನೆಯ ಸಾಲು "...ಇತಿ ವಾರ್ತಾಹ" ಕೇಳಿಬರುತ್ತಿದ್ದ ಹಾಗೆ ಓಡಿಹೋದರೆ ಹೂವುಂಟು,ಇಲ್ಲದಿದ್ದರೆ ಅರ್ಧ ಅಂಗಳದಲ್ಲಿ-ಇನ್ನರ್ಧ ರಸ್ತೆಯಲ್ಲಿ ಬೀಳುತ್ತಿದ್ದ ಅವು ಒಂದೊ ಓಡಾಡುವವರ ಕಾಲ್ತುಳಿತಕ್ಕೆ ಸಿಕ್ಕು ಇಲ್ಲವೆ ಮೇಲೇರುವ ಸೂರ್ಯನ ಧಗೆಗೋ ಮುರುಟಿ ಮಣ್ಣು ಪಾಲಾಗುತ್ತಿದ್ದವು.ಬೆಳಗಾತ ಎದ್ದ ಕೂಡಲೇ ಮನೆಯ ಅಂಗಳ ಗುಡಿಸಿ ಸಾರಿಸಿ ನಮ್ಮ ಕಲ್ಲು ದಣಪೆಯ ಮುಂದೆ ಅಂದವಾಗಿ ಅಮ್ಮನೋ-ಚಿಕ್ಕಂಮಂದಿರೋ ಇಟ್ಟಿರುತ್ತಿದ್ದ ರಂಗೋಲಿಯ ಅಂಕುಡೊಂಕು ಸಾಲುಗಳ ಮೇಲೆ ಉದುರಿದ ಪಾರಿಜಾತಗಳನ್ನೆಲ್ಲ ಆರಿಸಿ ತಂದು ತಲೆ ಕೆಳಗಾಗಿ ತೊಟ್ಟು ಮೇಲಾಗಿ ಜೋಡಿಸಿಟ್ಟು ಅಂದ ನೋಡುವುದು ನನ್ನ ಅತ್ಯಂತ ಪ್ರಿಯವಾದ ಹವ್ಯಾಸ.ಬಿಳಿ ಪಕಳೆಗಳ ಹಿಂದಿನ ಕೇಸರಿ ತೊಟ್ಟು ಪಾರಿಜಾತಕ್ಕೆ ವಿಶೇಷ ವರ್ಣವೈಭವವನ್ನ ಕೊಟ್ಟಂತೆ ಅನ್ನಿಸುತ್ತಿತ್ತು.ಈ ಹೂವನ್ನು ದಾರದಲ್ಲಿ ಕಟ್ಟಲಾಗದಷ್ಟು ಸೂಕ್ಷ್ಮವಾಗಿ ಅದಿರುತ್ತಿದ್ದರಿಂದ ಸೂಜಿಗೆ ದಾರ ಪೋಣಿಸಿ ಅದನ್ನು ಹೆಣೆದು ದೇವರ ಪಟಕ್ಕೆ ಮಾಲೆಯಾಗಿ ಹಾಕುತ್ತಿದ್ದುದು ನೆನಪಾಗುತ್ತದೆ.


ಪಾರಿಜಾತದ ಶಾಪದ ಕಥೆ ಅಲ್ಲಿಗೆ ಮುಗಿಯಲಿಲ್ಲ.ಇತ್ತ ಗಿಡ ತಂದು ಸತ್ಯಭಾಮೆಗೆ ಕೊಟ್ಟ ಕೃಷ್ಣ ಅದನ್ನು ನೆಡುವಾಗ ಮತ್ತೆ ತನ್ನ ಕುತಂತ್ರ ಮೆರೆದ.ನೆಟ್ಟದ್ದು ಭಾಮೆಯ ಅಂಗಳದಲ್ಲಾದರೂ ಅದು ಬೆಳೆದು ಬಾಗಿದ್ದು ರುಕ್ಮಿಣಿಯ ಅಂಗಳದತ್ತ! ಹೂವೆಲ್ಲ ಅಲ್ಲಿಯೇ ಉದುರುತ್ತಿತ್ತು.ಅಲ್ಲಿಗೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಆ ಕರಿಯ.ನಿತ್ಯ ಹೂ ಸಿಕ್ಕು ರುಕ್ಮಿಣಿಯೂ ಸುಖಿ! ತನ್ನಂಗಳದಲ್ಲೇ ಪೂರ ಮರ ಹೊಂದಿ ಮತ್ಸರ ಸಾಧಿಸಿಕೊಂಡ ಭಾಮೆ ಪರಮಸುಖಿ!!


ಒಮ್ಮೆ ನವರಾತ್ರಿಯ ಸಮಯ ಶಾಲೆಯಲ್ಲಿ ಸರಸ್ವತಿ ಪೂಜೆಗಾಗಿ ಎಲ್ಲ ಮಕ್ಕಳಿಗೂ ಹೂ ತರಲು ಹೇಳಿದ್ದರು.ನನ್ನ ಸಹಪಾಟಿಗಳೆಲ್ಲ ತಮ್ಮ ಮನೆಯಲ್ಲಿ ಅರಳಿದ್ದೋ-ಇಲ್ಲ ಉಳ್ಳವರ ಅಪ್ಪಂದಿರು ಹೂವಂಗಡಿಯಲ್ಲಿ ಕೊಡಿಸಿದ್ದೋ ಅಂತೂ ಭಾರಿ ಚಂದದ ಹೂಗಳನ್ನೆ ಕೊಂಡೊಯ್ದು ಹೊಗಳಿಸಿಕೊಂಡಿದ್ದರೆ,ಅಷ್ಟೇ ಅಸ್ಥೆಯಿಂದ ನಾನೂ ಆರಿಸಿ ಕೊಂಡೊಯ್ದಿದ್ದ ಪಾರಿಜಾತದ ಹೂ ಶಾಲೆ ತಲುಪುವಾಗಲೆ ಅರೆ ಬಾಡಿದ್ದು ನಾನು ಎಲ್ಲರಿಂದ ಅಪ ಹಾಸ್ಯಕ್ಕೀಡಾಗಿದ್ದೆ.ಆಗಷ್ಟೇ ನಾನು ಹೊಸ ಹೊಸತಾಗಿ ಒಲವಲ್ಲಿ ಪರಿಚಯದ ಹುಡುಗಿಯೊಬ್ಬಳ ಒಲವಲ್ಲಿ ಬಿದ್ದಿದ್ದೆ ( ಒಲವಾಗಿದ್ದು ಒಂದೇ ಸಾರಿ,ಇಂದಿಗೂ ಅವಳನ್ನೇ ಪ್ರೀತಿಸುತ್ತಿದ್ದೇನೆ ಅವಳೀಗ ಸಾನ್ ಫ್ರಾನ್ಸಿಸ್ಕೊದಲ್ಲಿದ್ದಾಳೆ). ಒಂಬತ್ತನೇ ತರಗತಿಯ ಕೊನೆಯ ಪರೀಕ್ಷೆಯ ದಿನಗಳವು.ಪರೀಕ್ಷೆಯ ಹಾಲಿನಲ್ಲಿ ಬೆಂಚಿಗೆ ಇಬ್ಬರಂತೆ ಒಬ್ಬ ಒಂಬತ್ತನೆಯ ತರಗತಿಯ ಹಾಗು ಇನ್ನೊಬ್ಬ ಎಂಟನೆಯ ತರಗತಿಯವರನ್ನ ಕ್ರಮವಾಗಿ ಕೂರಿಸುತ್ತಿದ್ದರು.ನನ್ನ ಅದೃಷ್ಟಕ್ಕೆ ಎಂಟನೆ ತರಗತಿಯಲ್ಲಿನ ಅವಳ ಕ್ರಮಸಂಖ್ಯೆಯೂ ಒಂಬತ್ತರಲ್ಲಿದ್ದ ನನ್ನ ಕ್ರಮಸಂಖ್ಯೆಯೂ ಒಂದೇ ಬೆಂಚಿನಲ್ಲಿ ಬಿದ್ದಿತ್ತು! ಕನಿಷ್ಠ ಆರು ದಿನಗಳ ಮಟ್ಟಿಗಾದರೂ ನನಗೆ ಲಾಟರಿ ಹೊಡೆದಿತ್ತು!! ಆ ಖುಷಿಗೆ ತೀರ ಬಾಲಿಶವಾಗಿ ವರ್ತಿಸಿ ಬೇಕೂಫನೂ ಆಗಿದ್ದೆ.ಪರೀಕ್ಷೆಯ ಕೊನೆಯ ದಿನದ ಹಿಂದಿನ ಸಂಜೆ ಅವಳಿಗಾಗಿ ವಿಶೇಷವಾಗಿ ಪಾರಿಜಾತದ ದುಂಡು ಮೊಗ್ಗುಗಳನ್ನೆಲ್ಲ ಜೋಪಾನವಾಗಿ ಬಿಡಿಸಿ ನನ್ನ ಕರ್ಚಿಫ್ನಲ್ಲಿ ಕಟ್ಟಿ ಮನೆಯ ಮಾಡಿನ ಮೇಲೆ ಇಬ್ಬನಿಗೆ ಇಟ್ಟಿದ್ದೆ.ಅರಳಿದ ಮೇಲೆ ಅದು ಬಾಡಿ ಹೋದೀತು ಎಂಬ ಅರಿವಿದ್ದುದರಿಂದ ವಹಿಸಿದ್ದು ಈ ಮುತುವರ್ಜಿ.ಇಷ್ಟೆಲ್ಲಾ ಮುಂಜಾಗರೂಕತೆ ವಹಿಸಿದ್ದರೂ ಶಾಲೆಗೆ ಹೋಗುವಾಗ ( ಅಂದು ಮಧ್ಯಾಹ್ನ ಪರೀಕ್ಷೆ ಇತ್ತು) ಯಥಾಪ್ರಕಾರ ಮೊಗ್ಗು ಕೂಡ ಬಾಡಿ ಹೋಗಿ ಕೊಡಲು ಕೀಳರಿಮೆ ಕಾಡಿ ಮನಸ್ಸಾಗಲೇ ಇಲ್ಲ.ಅಷ್ಟು ಆಸೆಯಿಂದ ಕೊಡುವ ಅಂದು ಕೊಂಡಿದ್ದ ನನ್ನ ಮನಸೂ ಕೂಡ ಆ ದಿನ ಥೇಟ್ ಪಾರಿಜಾತದಂತೆ ಮುದುಡಿ ಮುರುಟಿ ಹೋಗಿತ್ತು.ಹೂ ಕೊಡಲಾಗಲಿಲ್ಲ ಎಂಬ ಸಂಕಟ ಇಂದಿಗೂ ನನ್ನ ಭಾದಿಸುತ್ತಿದೆ.


{ನಾಳೆಗೆ ಮುಂದುವರಿಸುವೆ}

17 August 2010

ಅಬ್ಬರಿಸಿ ಬೋಬ್ಬಿರಿದರೆ ಇಲ್ಯಾರಿಗೂ ಭಯವಿಲ್ಲ...

ದಿನ ಕಳೆದಂತೆ ಕರ್ನಾಟಕದ ರಾಜಕಾರಣಿಗಳ ವರ್ತನೆ ಹೇಸಿಗೆ-ರೇಜಿಗೆ ಎರಡನ್ನೂ ಏಕಕಾಲದಲ್ಲಿ ಹುಟ್ಟಿಸುತ್ತಿದೆ.ಸಚಿವ ಬಚ್ಚೇಗೌಡರ ಆಟಾಟೋಪದ ಪ್ರಕರಣ ಹೇಸಿಗೆ ಹೆಚ್ಚಿಸಿದ ಅಂತಹದ್ದೊಂದು ಪ್ರಕರಣಗಳ ಸಾಲಿಗೆ ಹೊಸ ಸೇರ್ಪಡೆ.ಬಿಹಾರ-ಉತ್ತರ ಪ್ರದೇಶಗಳಲ್ಲಿ ಆಗುತ್ತದೆ ಎಂದಷ್ಟೇ ಕೇಳಿಗೊತ್ತಿದ್ದ ಅಂಧಾದರ್ಬಾರಿಗೆ ಈ ಮೂಲಕ ಕನ್ನಡದ ಜನರೂ ಸಾಕ್ಷಿಯಾಗಿದ್ದಾರೆ.ನಾಚಿಕೆಗೇಡಿನ ಸಂಗತಿಯೆಂದರೆ ಜನರ ಸೇವೆ ಮಾಡಬೇಕಾದ (ಅದಕ್ಕೆ ಅವರಿಗೆ ಆ ಸ್ಥಾನಮಾನ ಸಿಕ್ಕಿರೋದು) ಸಚಿವನೋಬ್ಬನ ಪುಂಡಾಟದ ಈ ವರ್ತನೆಗೆ ಎಲ್ಲರೂ ಮೂಕಸಾಕ್ಷಿಗಳಾಗಿದ್ದರೆ ಅಷ್ಟೇ. ಇಂತಹ ದುರಹಂಕಾರಿಗೆ ಮುಲಾಜಿಲ್ಲದೆ ತಾಗಿಸ ಬೇಕಾದ ಜನಶಕ್ತಿಯ ಅಸಹನೆಯ ಬಿಸಿ ಪರಿಣಾಮಕಾರಿಯಾಗಿ ಮುಟ್ಟುತ್ತಿಲ್ಲ."ವಿಜಯ ಕರ್ನಾಟಕ"ವೂ ಸೇರಿ ಕೇವಲ ಒಂದೆರಡು ಕನ್ನಡ ದಿನಪತ್ರಿಕೆಗಳು ಮುಖಪುಟದಲ್ಲೇ ಸುದ್ದಿಗೆ ಪ್ರಾಮುಖ್ಯತೆ ನೀಡಿ ಜನರ ಆಶೋತ್ತರಗಳಿಗೆ ಧ್ವನಿಯಾದರೆ,ಅಂಗ್ಲಪತ್ರಿಕೆಗಳಲ್ಲೂ ಎರಡೇ ಪತ್ರಿಕೆಗಳು ಈ ಬಗ್ಗೆ ಧ್ವನಿ ಎತ್ತಿವೆ.ಉಳಿದ ಪತ್ರಿಕೆಗಳ ಹಣೆಬರಹಕ್ಕೆ ಒಳಪುಟದಲ್ಲಿ ಪ್ರಕಟ ಸದರಿ ಸುದ್ದಿ ಪ್ರಕಟವಾಗಿದ್ದರೆ ಒಂದೆರಡು ಪತ್ರಿಕೆಗಳ ಪಾಲಿಗೆ ಅದೊಂದು ಸುದ್ದಿಯೇ ಅಲ್ಲ! .ಬಚ್ಚೇಗೌಡರಂತಹ ಯಕಶ್ಚಿತ್ ಸಚಿವನಿಗಿರುವ ಪೊಗರು ಇಡೀ ಸರ್ಕಾರದ ಧೋರಣೆಯ ಪ್ರತಿಬಿಂಬವೆ ಹೊರತು ಕೇವಲ ವಯಕ್ತಿಕ ನೆಲೆಯಲ್ಲಿ ಕಂಡು ಮರೆತು ಬಿಡುವ ಸರಳ ವಿಚಾರ ಅಲ್ಲ ಎಂಬುದು ನಮಗೆಲ್ಲ ನೆನಪಿರಬೇಕು.ಪರಿಸ್ಥಿತಿಯ ವ್ಯಂಗ್ಯವೆಂಬಂತೆ ಸ್ವಾತಂತ್ರ್ಯ ದಿನಾಚರಣೆಯ ದಿನವೇ ನಡೆದ ನಾಚಿಗೆಗೇಡಿನ ಈ ಪ್ರಕರಣ ಶ್ರೀಸಾಮಾನ್ಯನೊಬ್ಬನಿಗೆ,ಸಾಧಾರಣ ಮತದಾರ ಪ್ರಭುವಿಗೆ ( ಈ ಪ್ರಭುವಿನ ಪಟ್ಟ ಚುನಾವಣೆಯ ಹೊತ್ತಿಗಷ್ಟೇ ಸೀಮಿತ!) ಈ ರಾಜ್ಯದಲ್ಲಿ ಇರುವ ವ್ಯಕ್ತಿ ಸ್ವಾತಂತ್ರ್ಯಕ್ಕೆ ನಿದರ್ಶನ ಅನ್ನಿಸುತ್ತದೆ.


ಹಾಸನಜಿಲ್ಲಾ ಉಸ್ತುವರಿಯಷ್ಟೇ ಬಚ್ಚೆಗೌಡರಿಗಿರುವುದು ಹೊರತು ಅಲ್ಲಿನ ಪಾಳೆಗಾರಿಕೆಯಲ್ಲ.ಅಲ್ಲದೆ ಎಲ್ಲಾದರೂ ಕರ್ನಾಟಕದ ಜನತೆಯ ಹಣೆಬರಹ ಕೆಟ್ಟು "ಬಚ್ಚಾಸ್ಥಾನ್" ಒಂದು ಮುಂದೆಂದಾದರೂ ರೂಪುಗೊಂಡಾಗ ಮಾತ್ರ ಅವರ ಕಾಡಿನ ಕಾನೂನು ಅಲ್ಲಿ ಜಾರಿಗೆ ಬಂದರೂ ಬರಬಹುದು.ಆದರೆ ಮಾನ್ಯಸಚಿವರ ದುರದೃಷ್ಟಕ್ಕೆ ಇದು ಕರ್ನಾಟಕ ಹಾಗು ಅವರು ಇಲ್ಲಿನ ಆರುಕೋಟಿ ಜನರ ಪ್ರಾತಿನಿಧಿಕ ಸರ್ಕಾರದ ಒಬ್ಬ ಕನಿಷ್ಠ ಸಚಿವ,ನೇರ ಮಾತಿನಲ್ಲಿ ಹೇಳಬೇಕೆಂದರೆ ಜನರ ಹಿತಕಾಯ ಬೇಕಾದ ವಾಚಮೆನ್ ಅಷ್ಟೇ.ಅಷ್ಟಕ್ಕೇ ಈ ಪರಿ ಹಾರಾಡುವ ಇವರ ಉದ್ದವಾಗಿರೋ ನಾಲಗೆ ಹಾಗು ಬಾಲವನ್ನ ಕತ್ತರಿಸಬೇಕಾದ ಶಿಸ್ತಿನ ಕಮಲಪಕ್ಷದ ವರಿಷ್ಠರು ಬಾಯಿಮುಚ್ಚಿ ಕೊಂಡಿರೋದ್ಯಾಕೋ? ಇನ್ನು ಮಾನ್ಯ ಮುಖ್ಯಮಂತ್ರಿಗಳು ನೊಂದ ಕುಟುಂಬದ ಮಂದಿಯನ್ನು ಕರೆದು ಮಾತನಾಡಿಸುತಾರಂತೆ! ಏನಂತ? ಪ್ರತಿ ದೂರು ಕೊಡದಂತೆ ತಾಕೀತು ಮಾಡೋದಕ್ಕ ಕರೆಸೋದು? ಇಲ್ಲ ಈ ಸಚಿವ ಭೂಪ ಅಲ್ಲಿ ಕ್ಷಮೆ ಕೇಳ್ತಾರ? ಬೀದೀಲಿ ಕಳೆದ ಮಾನಕ್ಕೆ ಮುಚ್ಚುಗೆಯಲ್ಲಿ ಕ್ಷಮೆಯ ನಾಟಕವ? ಇಷ್ಟೊಂದು ಧ್ರಾಷ್ಟ್ಯದಿಂದ ಹದ್ದುಮೀರಿ ವರ್ತಿಸಿದ,ತಮ್ಮ ತಪ್ಪಿಗೆ ಯಾವ ಪಶ್ಚಾತಾಪದ ಎಳೆಯೂ ಇಲ್ಲದ ತಮ್ಮ ಸಂಪುಟ ಸಹೋದ್ಯೋಗಿಯನ್ನ ಅಲುಗಾಡಿಸಲೂ ಆಗದ ನಿಶಕ್ತ ಮುಖ್ಯಮಂತ್ರಿ ಇನ್ನೂ ಹೆಚ್ಚಿಗೆ ಹೇಸಿಗೆ ಹುಟ್ಟಿಸುತ್ತಾರೆ.


ನಾವೆಲ್ಲರೂ ಒಂದು ನಾಗರೀಕ ಪ್ರಪಂಚದಲ್ಲಿ ಬದುಕುತ್ತಿದ್ದೇವೆ ಎಂಬ ಅರಿವು ಸಚಿವ ಮಹಾಶಯರಿಗೆ ಇದ್ದಂತಿಲ್ಲ.ಲಿಂಗ-ಜಾತಿ-ಮತ-ಅಂತಸ್ತು-ಪ್ರಾದೇಶಿಕತೆಗಳಿಗೆ ಮೀರಿದ ಏಕೈಕ ಕಾನೂನಷ್ಟೇ ಈ ನೆಲದಲ್ಲಿರುವುದು.ಅಥವಾ ಸಚಿವರಿಗೊಂದು-ಶ್ರೀಸಾಮಾನ್ಯನಿಗೊಂದು ಎಂಬ ಎರಡು ಸೆಟ್ ಕಾನೂನು ಕಟ್ಟಳೆಗಳೇನಾದರೂ ಜಾರಿಯಲ್ಲಿವೆಯೆ? ಅಷ್ಟಕ್ಕೂ ನಡು ಹೆದ್ದಾರಿಯಲ್ಲಿ ಬೀದಿ ಪುಂಡನಂತೆ ಸಾಮಾನ್ಯನೊಬ್ಬನ ಮೇಲೆ ತೋಳೇರಿಸಿ ಕೊಂಡು ಹೋಗುವ ಮುಕ್ತ ಅವಕಾಶವನ್ನೇನಾದರೂ ವಿಶೇಷ ಕಾಯ್ದೆಯಡಿ ಮಾನ್ಯ ಬಚ್ಚೆಗೌಡರಿಗೆ ಈ ಮೂರ್ಕಾಸಿನ ಮಂತ್ರಿಗಿರಿ ತಂದು ಕೊಟ್ಟಿದೆಯೇ? ಸದ್ಯ ಜಾರಿಯಲ್ಲಿರುವ ರಾಷ್ಟ್ರೀಯ ಮೋಟಾರು ವಾಹನ ಕಾಯ್ದೆಯಡಿ ಇಲ್ಲದ ವಿಶೇಷ ಮಾನ್ಯತೆಯನ್ನು ಹೊಸತಾಗಿ ನಮ್ಮ ಸಂವಿಧಾನದಲ್ಲೇನಾದರೂ ಕಲ್ಪಿಸಿ ಕೊಡಲಾಗಿದೆಯೇ? ತನ್ನನ್ನು ತಾನು ಅಡ್ವೋಕೇಟ್ ಎಂದೂ; ಕಾನೂನಿನ ವಿಷಯಗಳಲ್ಲಿ ಸರ್ವಜ್ಞನೆಂದೂ ಫೋಸು ಕೊಡುವ ಬಚ್ಚೆಗೌಡರಿಗೆ ಈ ಕಾನೂನು ಸೂಕ್ಷ್ಮದ ಅರಿವೇನಾದರೂ ಇದೆಯೆ?



ಇಷ್ಟೇ ಸಾಲದು ಎಂಬಂತೆ ಸಚಿವರ ಕಾಮಾಲೆ ಕಣ್ಣಿಗೆ ಈ ಅಮಾಯಕ ಭಯೋತ್ಪಾದಕನಂತೆ ಬೇರೆ ಕಾಣಿಸಿದ್ದಾನೆ! ಭಯೋತ್ಪಾದಕರನ್ನು ಗುರುತಿಸುವ ವಿಶೇಷ ಪರಿಣತ ಸೂತ್ರಗಳೇನಾದರೂ ಇದ್ದರೆ ದಯವಿಟ್ಟು ಶ್ರೀಮಾನ್ ಬಚ್ಚೆಗೌಡರು ಕರ್ನಾಟಕದ ಜನತೆಗೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಬೇಕು.."ಅವನು ಕುಡಿದು ಚಾಲನೆ ಮಾಡ್ತಿದ್ದ: ಪದೇ ಪದೇ ನನ್ನ ವಾಹನಕ್ಕೆ ಗುದ್ದಲು ಪ್ರಯತ್ನಿಸಿದ ,ಆಗ ನಾನು ಕೆಳಗಿಳಿದು 'ನೀನು ಮುಸಲ್ಮಾನನೋ? ಇಲ್ಲ ಮಲೆಯಾಳಿಯೋ (!?) ' ಎಂದು ನಯವಾಗಿ ಕೇಳಿದೆ!" ಎಂದಿರುವ ಸಚಿವರು ತಮ್ಮದೇ ಇನ್ನೊಂದು ಹೇಳಿಕೆಯಲ್ಲಿ "ನಾನು ಕಾರಿಂದ ಇಳಿದಿರಲೆ ಇಲ್ಲ , ಹಾಸನದಲ್ಲಿ ಹತ್ತಿದವ ಬೆಂಗಳೂರಲ್ಲೇ ಇಳಿದಿದ್ದು : ದಾರಿ ಮಧ್ಯದಲ್ಲಿ ನನ್ನ ಸಹಾಯಕ ರಾಜಶೇಖರ್ ಹಾಗು ಚಾಲಕ ದೇವದಾಸ್ ಮತ್ತೊಂದು ವಾಹನದ ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದರು,ಆದರೆ ನಾನೇ ಮಧ್ಯ ಪ್ರವೇಶಿಸಿ ಬುದ್ಧಿ ಹೇಳಿ(!) ಕಲಿಸಿದೆ" ಎಂದು ವಿರೋಧಾಭಾಸದ ಹೇಳಿಕೆ ನೀಡುವ ಮೂಲಕ ಕೇಳುವವರ ಕಿವಿಮೇಲೆ ಹೂವಿಟ್ಟಿದ್ದಾರೆ.ಸಚಿವರ ಪ್ರಕಾರ ಆ ಸಮಯದಲ್ಲಿ ಅಲ್ಲಿ ನೆರೆದ ಗುಂಪು ಅವರ ಅಪಾರ ಬೆಂಬಲಿಗರದಂತೆ,ಭೇಷ್! ಬಚ್ಚೆಗೌಡರೆ ನಿಮ್ಮ ಈ ವಿಶ್ವ ಪ್ರಸಿದ್ಧಿಯ ಅರಿವು ಇಲ್ಲಿಯವರೆಗೂ ನಮಗ್ಯಾರಿಗೂ ಇರಲೇ ಇಲ್ಲ.ತಮ್ಮ ಗನ್ ಮ್ಯಾನ್ ಭರತ್ ಅಂಗಿಯ ಕೊರಳು ಪಟ್ಟಿ ಹಿಡಿದು,ನಿಮ್ಮ ಡ್ರೈವರ್ ಹಳೆ ಸಿನೆಮಾದ ತಲೆ ಮಾಸಿದ ಖಳನಟನ ಅಟ್ಟಹಾಸದಲ್ಲಿ ಬಾಕ್ಸರ್ರ್ನಂತೆ ಮುಷ್ಠಿ ಕಟ್ಟಿ ಕೊಂಡು ಭರತರ ಹಲ್ಲುದುರುವಂತೆ ಹೊಡೆದದ್ದು ಕೇವಲ ಚಕಮಕಿಯ? ಭಪ್ಪರೆ,ಇನ್ನು ಥೇಟ್ ಭಬ್ರುವಾಹನನ ಅಪರಾವತಾರದಂತೆ ಅಂಗಲಾಚಿ ಕೊಂಡು ತನ್ನ ಮಗನ ರಕ್ಷಣೆಗೆ ಮೊರೆಯಿಡುತ್ತ ನಿಮ್ಮ ಕಾಲು ಹಿಡಿದ ಲೋಕಪ್ಪ ಗೌಡರನ್ನ ಜಾಡಿಸಿ ಒದ್ದದ್ದು ಕೇವಲ ಪಾದಾಶಿರ್ವಾದವೇ? 'ನೀನು ಮುಸ್ಲೀಮನೋ? ಇಲ್ಲ ಮಲೆಯಾಳಿಯೋ ಟೆರರಿಸ್ಟ್ ತರ ಕಾಣ್ತೀಯ ಎಂದು ನಯವಾಗಿ ತಾವು ಭರತರನ್ನು ಗದರಿದಿರಂತೆ,ಪಾಪ! ಯಾಕೆ ಸ್ವಾಮೀ ತಮ್ಮ ರಾಜ್ಯಭಾರದಲ್ಲಿ ಮುಸ್ಲೀಮರಿಗೂ-ಮಲೆಯಾಳಿಗಳಿಗೂ ಟೆರರಿಸ್ಟ್ ಪಟ್ಟ ಕಟ್ಟಲಾಗಿದೆಯೇ? ಸ್ವಾತಂತ್ರ್ಯ ಭಾರತದ ಅಂಗವಾಗಿರುವ ಕರ್ನಾಟಕದಲ್ಲಿ 'ಸಮೃದ್ಧ' ಆಡಳಿತ ನೀಡುತ್ತಿರುವ ನಿಮ್ಮ 'ಪ್ರಗತಿಪರ' ಸರ್ಕಾರ ಈ ಎರಡು ವರ್ಗಗಳ ಮೇಲೆ ವಿಶೇಷ ನಿರ್ಬಂಧವನ್ನೇನಾದರೂ ಹೇರಿದ್ದರೆಯೇ?


ಹಾಸನದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ನಾಲ್ಕುಪಥದ ರಸ್ತೆಯಲ್ಲಿ ಸದರಿ ಪ್ರಕರಣ ನಡೆದದ್ದು.ಈ ಗೂಂಡ ಸಚಿವರಿಗೆ ಲೇನ್ ಶಿಸ್ತಿನ ಬಗ್ಗೆ ಪ್ರಾಥಮಿಕ ಅರಿವೇನಾದರೂ ಇದೆಯೇನು? ಒಳ ಲೇನಿನಲ್ಲಿ ಗಂಟೆಗೆ ೧೦೦ ಕಿ ಮಿ ಗೆ ಕಡಿಮೆ ಇಲ್ಲದಂತೆ,ಮೂರನೇ ಲೇನಿನಲ್ಲಿ ಗಂಟೆಗೆ ೮೦ ಕಿ ಮಿ ಗೆ ಕಡಿಮೆ ಇಲ್ಲದಂತೆ,ಎರಡನೇ ಲೇನಿನಲ್ಲಿ ೬೦ ಕಿ ಮಿ ಗೆ ಕಡಿಮೆ ಇಲ್ಲದಂತೆ ಹಾಗು ಕಡೆಯ ಲೇನಿನಲ್ಲಿ ಗಂಟೆಗೆ ೪೦ ಕಿ ಮಿ ಮೀರದಂತೆ ವಾಹನದ ವೇಗ ಮಿತಿಯಿರುವುದು ಆ ರಸ್ತೆಯಲ್ಲಿ ಖಡ್ಡಾಯವೆ ಆಗಿರುವಾಗ ಬಚ್ಚೆಗೌಡರ ಗ್ರಧೃ ದೃಷ್ಟಿಗೆ ಅದು ಹೇಗೆ ತಪ್ಪಾಗಿ ಕಂಡಿತು? ಬಹುಷಃ ಅಡ್ವೋಕೇಟ್ ಆಗಿರುವ ಅವರು ಓದಿರುವ ಕಾನೂನಿನ ಪುಸ್ತಕಗಳಲ್ಲಿ ಅದು ಅಪರಾಧದ ಕಲಾಂನೊಳಗೆ ಬರುತ್ತದೋ ಏನೋ? ತಿಳಿದವರಾದ ಅವರು ಅಲ್ಪಜ್ನ್ಯರಾದ ನಮಗೆಲ್ಲ ತಿಳಿಸಿ ಪುಣ್ಯ ಕಟ್ಟಿ ಕೊಳ್ಳಬೇಕಿದೆ.



ಕಟ್ಟಾ ಕಡೆಯದಾಗಿ ಭರತ್ ಕುಡಿದು ಚಾಲನೆ ಮಾಡಿದ್ದರೆ ಎನ್ನುವುದು ಸಚಿವರ ಆರೋಪ..ಹಾಗಿದ್ದಲ್ಲಿ ನೆಲಮಂಗಲ ಪೊಲೀಸ್ ಥಾನೆಯಲ್ಲಿ ಭರತ್ ವಿರ್ರುದ್ಧ ದೂರು ನೀಡಿದಾಗ ವೈದ್ಯಕೀಯ ಪರೀಕ್ಷೆಗೆ ಅವರನ್ಯಾಕೆ ಒಳಪದಿಸಲಿಲ್ಲ ( ಸ್ವತಹ ಮಧುಮೇಹಿ ಯಾಗಿರುವ ಭರತ್ ಗೆ ಆ ಕ್ಷಣ ನಿಜವಾಗಿ ವೈಧ್ಯಕೀಯ ನೆರವು ಬೇಕಿತ್ತು!).ಅಲ್ಲದೆ ಥಾನೆಯಲ್ಲಿ ಅತಿವೇಗದ ಚಾಲನೆಯ ದೂರಷ್ಟೇ ದಾಖಲಾಗಿದೆ ಪಾಪ ವಾಸನೆ ಕಂಡು ಹಿಡಿದ ಸಚಿವರ ಮೂಗಿಗೆ ಬೆಲೆಯೇ ಇಲ್ಲ! (ಸದರಿ ಘಟನೆ ನಡೆದ ಸ್ಥಳ ಬಿಡದಿ ಗ್ರಾಮಾಂತರ ವೃತ್ತ ವ್ಯಾಪ್ತಿಗೆ ಬರುವುದರಿಂದ ಪ್ರಕರಣ ಹಾಗು ದೂರನ್ನು ಕೂದೂರು ಠಾಣೆಗೆ ವರ್ಗಾಯಿಸಲಾಗಿದೆ).ಇತ್ತ ಥಾನೆಯಲ್ಲಿ ಇನ್ನೊಂದು ಸುತ್ತಿನ ಬೆದರಿಕೆ ಎದುರಿಸಿದ ಭರತ್ ರಿಂದ ಅವರು ಮಾಡದ ತಪ್ಪಿಗಾಗಿ ದಂಡವಾಗಿ ರೂ ೩೦೦ ಸುಲಿಯಲಾಗಿದೆ.



ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬದ ಮೇಲೆ ಆಗಾಗ ನೆಪ ಹುಡುಕಿ ಕೊಂಡು ಎರಗಿಸಲು ತಮ್ಮ ಬತ್ತಳಿಕೆಯಲ್ಲಿ ಈ 'ಬಚ್ಚಾಸ್ತ್ರ'ವನ್ನು ಸದಾ ಸನ್ನದ್ಧವಾಗಿ ಇಟ್ಟುಕೊಂಡಿರುವ ಮಾನ್ಯ ಮುಖ್ಯಮಂತ್ರಿ ಬೂಸಿಯರವರ ರಾಜಿನಾಮೆ ಕೇಳುವ ಶತಮಾನದ ಸವಕಲು ಜೋಕ್ ಮಾಡುವ ಉಮೇದು ಇಲ್ಲವಾದರೂ.ಕನಿಷ್ಠಪಕ್ಷ ನೈತಿಕತೆಯ ಆಧಾರದ ಮೇಲೆ ಬಚ್ಚೆಗೌಡರ ರಾಜಿನಾಮೆಯನ್ನೇಕೆ ಪಡೆಯಬಾರದು? ಅಥವಾ ಅಷ್ಟು ಅಧಿಕಾರ ವ್ಯಾಪ್ತಿ ಕುರ್ಚಿಗೆ ಅಂಟಿಕೊಂಡ ಮುಖ್ಯಮಂತ್ರಿಗಳಿಗೆ ಇಲ್ಲವೋ? ಇಂತಹ ಭಂಡರ ನಡುವೆ ಬೆಂಡಾಗಿರುವವ ಮಾತ್ರ ಬಡ ಬೋರೆಗೌಡ.ಓಟು ಕೊಟ್ಟು ಅಯೋಗ್ಯರನ್ನ ಅಧಿಕಾರಕ್ಕೆ ತಂದ ತಪ್ಪಿಗೆ ಇಂತಹ ಕಿರುಕುಳ ಗಳನ್ನೆಲ್ಲ ಅನುಭವಿಸಲೇ ಬೇಕಲ್ಲ.

16 August 2010

ಪ್ರತಿಬಿಂಬ

ವಸಂತ ಬರುವ ಮೊದಲು ನೀ ಬಾ,
ಮುಂಜಾನೆಯ ಮೊದಲ ಬೆಳಕು ಮೂಡುವ ಮೊದಲು ನೀನಿಲ್ಲಿ ಬಂದು ಬಿಡು/
ಮತ್ತೆಂದೋ ಬರುವುದು ಈ ಮಾರ್ದವ ಋತು,
ನಿರೀಕ್ಷೆಯ ಆಷಾಢ ಮತ್ತೆ ಕಾಡುವುದರೊಳಗಾಗಿ ದಯಮಾಡಿ ಮರಳಿ ಬಂದುಬಿಡು//

ಮೂಡುತೇನೆ...

ನಿನ್ನನೇ ಕನವರಿಸುವ ನನ್ನೊಡನೆಯೇ ಇರುವೆ ನೀನು,
ಎಂದೆಂದೂ ಮುಗಿಸಲಾಗದ ಮಾತಿನಂತೆ ನನ್ನೊಳಗೆ ನೀನು/
ಮನಸೊಳಗೆ ದುಃಖದ ನೆರೆ ತುಂಬಿ ಬಂದರೂನು, ಕೊಚ್ಚಿ ಹೋಗದೆ...
ಪ್ರವಾಹದ ನಡುವೆ ನಿಂತ ಗಟ್ಟಿ ದ್ವೀಪ ನೀನು//


ಸತ್ತರೂ ನಾ ನಿನ್ನ ನೆನಪಲ್ಲಿ ಕಾಡುತೇನೆ,
ನಿನ್ನ ಸಂತಸದ ಕಣ್ಣೀರಲಿ ಪ್ರತಿಬಿಂಬವಾಗಿ ಮೂಡುತೇನೆ/
ನಿನ್ನುಸಿರುಗಳ ನಡುವಿನ ಅಂತರದಲಿ,
ಅಳಿಸಲಾಗದ ಚಿರವಿರಹದ ಹೆಜ್ಜೆಗುರುತಾಗಿ ಉಳಿಯುತೇನೆ//

ಹೂ ಕಥೆ...

ಇನ್ನೇನು ಹತ್ತು ದಿನದಲ್ಲಿ ನನಗೆ ಇಪ್ಪತೆಂಟು ಸಂವತ್ಸರ ಭರ್ತಿಯಾಗುತ್ತದೆ.೧೯೮೨ರ ಆಗಷ್ಟ್ ೨೬ರಿಂದ ಇಲ್ಲಿಯವರೆಗೆ ಕಳೆದಿರುವ ಹತ್ತು ಸಾವಿರದ ಇನ್ನೂರ ಹತ್ತು ದಿನಗಳಲ್ಲಿ ಅತಿಹೆಚ್ಚು ದಿನಗಳನ್ನು ನಾನು ಬೆಂಗಳೂರಿನಲ್ಲೇ ಕೆಳೆದಿದ್ದೇನೆ.೧೯೯೯ರ ಈ ಊರಿಗೆ ಸೇರಿ ಹೋಗಿದ್ದು,ಬರಿಗೈಯಲ್ಲಿ ಏನೇನೂ ಇಲ್ಲದೆ ಅನ್ನ -ವಿದ್ಯೆ ಅರಸಿ ಇಲ್ಲಿಗೆ ಬಂದ ನನ್ನ ಬಗ್ಗೆ ನಿರೀಕ್ಷೆಗೂ ಮೀರಿ ಈ ಊರು ಉದಾರವಾಗಿದೆ.ಇದೀಗ ನನ್ನೂರು,ನಾನೀಗ ಹದಿನಾರಾಣೆ ಬೆಂಗಳೂರಿಗ ಎನ್ನುವ ಹೆಮ್ಮೆ ನನಗಿದೆ.ಬಹುಷಃ ನನ್ನ ಕೊನೆಯುಸಿರಿರುವವರೆಗೂ ನಾನಿಲ್ಲಿಯೇ ಇದ್ದೇನು."ಬೆಂಗಳೂರು ನನ್ನ ಮೊದಲ ಮನೆ: ಕೊಲಂಬೊ ಎರಡನೆಯದು" ಎಂದು ನಾನು ಆಗಾಗ ಹೇಳುವುದಿದೆ.ಬೆಂಗಳೂರಿನಷ್ಟೇ ನನ್ನ ಬೆಳವಣಿಗೆಗಳಿಗೆ ಪೋಷಕವಾಗಿ ನೀರೆರೆದ ಕೊಲೊಂಬೋ ಕೂಡ ನನ್ನ ಮನಸಿಗೆ ಆಪ್ತ.



ನನ್ನ ಬದುಕಿನ ಆರಂಭದ ಹತ್ತು ವರ್ಷಗಳನ್ನ ತೀರ್ಥಹಳ್ಳಿಯಲ್ಲಿ ಕಳೆದಿದ್ದೆ.ಸೊಪ್ಪುಗುಡ್ಡೆಯ ನಾಲ್ಕನೇ ತಿರುವಿನಲ್ಲಿದ್ದ ೪೦*೬೦ರ ಜಾಗದೊಳಗೆ ಇಷ್ಟು ಸುದೀರ್ಘ ಸಮಯ ಕಳೆಯುವ ಅನಿವಾರ್ಯತೆಯೂ ನನಗಿತ್ತು.ನನ್ನ ಹೆತ್ತಮ್ಮನ ತವರಾದ ಅಲ್ಲಿಯೇ ನಾನು ಹುಟ್ಟಿದ್ದು.೧೯೮೦ರಲ್ಲಿ ನನ್ನ ಹೆತ್ತವರ ಮದುವೆ ತೀರ್ಥಹಳ್ಳಿಯ ಸರಕಾರಿ ನೌಕರರಭವನದಲ್ಲಿ ಆಯಿತು.ನೋಡಲು ಸದೃಢ ಕಾಯನೂ ಸುರಸುಂದರಾಂಗನೂ ಆಗಿದ್ದ ನಮ್ಮಪ್ಪನಿಗೆ ವಿದ್ಯೆ ನಾಸ್ತಿ.ಅವರ ಅಪ್ಪ ಅವರಿನ್ನೂ ಚಿಕ್ಕವರಾಗಿರುವಾಗಲೇ ಹಾವು ಕಚ್ಚಿ ಸತ್ತು ಹೋಗಿದ್ದು ನನ್ನಪ್ಪನೂ ಸೇರಿದಂತೆ ಮೂರು ಗಂಡು ಮಕ್ಕಳು ಹಾಗು ಕಡೆಯದೊಂದು ಹೆಣ್ಣು ಅಮ್ಮ ಸಂಜೀವಮ್ಮನ ಪೋಷಣೆಯಲ್ಲಿ ಬೆಳೆದವು.ಆದರೆ ಗಂಡು ದಿಕ್ಕಿಲ್ಲದ ಮನೆಯಲ್ಲಿ ಅರಸನ ಅಂಕೆಯಿಲ್ಲದೆ ಬೆಳೆದ ಮನೆಯ ಹಿರಿಮಗ ನಮ್ಮಪ್ಪ ನಾಲ್ಕನೇ ಕ್ಲಾಸಿಗೂ ಸರಿಯಾಗಿ ಮಣ್ಣು ಹೊರದೆ ಪೋಲಿ ಅಲೆದುಕೊಂಡು ಇನ್ನೂ ಹನ್ನೆರಡು ವರ್ಷ ಮೀರುವ ಮೊದಲೇ ಬೀಡಿಯ ಚಟಕ್ಕೆ ಬಿದ್ದು,ಹದಿನೈದಾಗುವಾಗ ಕುಡಿತವನ್ನೂ ಕಲಿತು ಕೆಲಸ ಅರಸಿ ಮಾಯಾನಗರಿ ಬೊಂಬಾಯಿಗೆ ಹೋಗಿದ್ದರು.ಮದುವೆಗೆ ಐದು ವರ್ಷ ಮೊದಲೇ ಬೊಂಬಾಯಿ ಸೇರಿದ್ದ ಅವರು ತಮ್ಮ ಪುಷ್ಟಕಾಯದ ದೆಸೆಯಿಂದ ಮೊದಲು ನೈಟ್ ಕ್ಲಬ್ ಒಂದರಲ್ಲಿ ಬೌನ್ಸರ್ ಆಗಿದ್ದರು.ಆದರೆ ಆ ಕೆಲಸ ಮನಸಿಗೆ ಹಿಡಿಸದೆ ಹೋಟೆಲೊಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿ ಒಳ್ಳೆಯ ಪಾಕಪ್ರವೀಣರಾದರು.ಅವರಿಗೆ ಸಂಪೂರ್ಣ ಒಲಿದಿದ್ದ ಕಲೆ-ವಿದ್ಯೆ ಎಂದರೆ ಬಹುಷಃ ಅದೊಂದೆ.ಇತ್ತ ನನ್ನ ಹೆತ್ತಮ್ಮನೂ ಆಗತಾನೆ ಎಸ್ ಎಸ್ ಎಲ್ ಸಿ ಯಲ್ಲಿ ಡುಮ್ಕಿ ಹೊಡೆದು ತ್ರಿವೇಣಿ,ಎಂ ಕೆ ಇಂದಿರಾ,ಸಾಯಿಸುತೆ,ಹೆಚ್ ಜಿ ರಾಧಾದೇವಿ ಮುಂತಾದವರ ವಿಶ್ವವಿದ್ಯಾಲಯಕ್ಕೆ ತಾಜಾ ಅರ್ಜಿ ಹಾಕಿಕೊಂಡು ಕಾದಂಬರಿ ಗೀಳಿಗೆ ಬಿದ್ದಿದ್ದರು.ಮನೆಗೆ ಹಿರಿ ಮಗಳು ಬೇರೆ ;ವಿಪರೀತ ಹಟಮಾರಿ ಸ್ವಭಾವ.ಹೀಗಿದ್ದರೂ ನನ್ನಜ್ಜನ ಪ್ರೀತಿಯ ಮಗಳು.ಇಂತಿದ್ದ ಅಹಲ್ಯ ಎಂಬ ಕನ್ಯೆಯನ್ನು ಮುಂಬೈ ಸೇರಿದ್ದಾನೆ ಎಂಬ ಏಕೈಕ ಅರ್ಹತೆಯ ಮನ್ಮಥರೂಪಿ ವರಮಹಾಶಯ ಮಂಜುನಾಥ ಪಾಣಿಗ್ರಹಣ ಮಾಡಿಕೊಂಡ.ಮದುವೆ ಮಾಡಿಕೊಂಡಷ್ಟೇ ಬೇಗ ಹೆಂಡತಿಯನ್ನು ತವರಲ್ಲೇ ಬಿಟ್ಟು ಬೊಂಬಾಯಿ ಸೇರಿಯೂ ಕೊಂಡ.ಆದರೆ ಅಮ್ಮನ ( ಅಜ್ಜಿಯನ್ನು ನಾನು ಅಮ್ಮ ಎನ್ನುತ್ತೇನೆ) ಮುತುವರ್ಜಿಯಿಂದ ಮಗಳು ಗಂಡನ ಬಳಿ ಬೊಂಬಾಯಿ ತಲುಪಿಕೊಂಡಳು.ಇವಳಿಗೂ ಬೊಂಬಾಯಿಯಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಯೋಜನೆಗಳಿದ್ದವೇನೋ : ಆದರೆ ದುರಾದೃಷ್ಟವಶಾತ್ 'ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು' ಎನ್ನುವಂತೆ ಮೈ ಮರೆತ ಕ್ಷಣವೊಂದರಲ್ಲಿ ಅವರ ಮುಂದಿನ ಎಲ್ಲ ಬೊಂಬಾಯಿ ಕೇಂದ್ರಿತ ಕನಸುಗಳಿಗೆ ಸರಾಗವಾಗಿ ಕೊಳ್ಳಿಯಿಡುವಂತೆ ನಾನು ಮೂಡಿದೆ! ಸರಕಾರೀ ಸಂತಾನ ನಿಯಂತ್ರಣ ಯೋಜನೆಗಳ ಬಗ್ಗೆ ಅವರಿಬ್ಬರಿಗೂ ( ವಿಶೇಷವಾಗಿ ನನ್ನ ಹೆತ್ತಮ್ಮನಿಗೆ!) ಮಾಹಿತಿಯ ಕೊರತೆ ಇತ್ತೇನೋ,ಇಲ್ಲದಿದ್ದಲ್ಲಿ ಖಂಡಿತ ನನ್ನಂತ ಅನಪೇಕ್ಷಿತ ತಪ್ಪು ಘಟಿಸುವ ಸಾಧ್ಯತೆ ಇರುತ್ತಿರಲಿಲ್ಲ.ಪ್ರಪಂಚದಲ್ಲಿ ಇನ್ನೊಬ್ಬ idiot ಕಡಿಮೆಯಾಗಿರುತ್ತಿದ್ದ ಅನ್ನಿಸುತ್ತೆ.


ಬಸುರಿ ಹೆಂಡತಿಯನ್ನು ಹೆರಿಗೆಗಾಗಿ ತವರಿಗೆ ಸಾಗ ಹಾಕಿದ ಮಹಾಶಯ ಮಗುವಿನ ಮುಖನೋಡಲು ಅವಸರಾವಸರವಾಗಿ ಓಡೋಡಿ ಬಂದ ಪಾಪ,ಕೇವಲ ಐದೂವರೆ ವರ್ಷದಷ್ಟು ತಡವಾಗಿ! ಅಲ್ಲಿಯವರೆಗೂ ನನ್ನ ಪುಟ್ಟ ಪ್ರಪಂಚದಲ್ಲಿ ಅಪ್ಪನೆಂಬ ಪ್ರಾಣಿಯ ಕಲ್ಪನೆಯೂ ಇರಲಿಲ್ಲ.ಶಿಶುವಿಹಾರದಲ್ಲಿ ಸಹಪಾಟಿಗಳ ಅಪ್ಪಂದಿರನ್ನ ಕಾಣುತ್ತಿದ್ದೆನಾದರೂ ಈ 'ಅಪ್ಪ' ಎಂಬ ವ್ಯಕ್ತಿ ಕೇವಲ optionel ಎಂಬ ಅಭಿಪ್ರಾಯ ನನ್ನದಾಗಿದ್ದ ದಿನಗಳವು.ಅಲ್ಲದೆ ನನ್ನ ಹೆತ್ತಮ್ಮನೂ ಸೇರಿದಂತೆ ಚಿಕ್ಕಮಂದಿರು-ಮಾವಂದಿರು ಎಲ್ಲ ಅಜ್ಜನನ್ನು ಅಪ್ಪ ಎಂದು ಕರೆಯುವಾಗ ಕೂಡು ಕುಟುಂಬದ ಮಗು ಸುಲಭವಾಗಿ ಹಿರಿಯರನ್ನು ಕಂಡು ಅನುಕರಿಸುವುದನ್ನು ಕಲಿಯುವ ಹಾಗೆ ನಾನೂ ಅಜ್ಜನನ್ನೇ ಅಪ್ಪ ಎಂದು ಕರೆಯುತ್ತಿದ್ದೆ.ಆದರೆ ೨೫ಕ್ಕೆ ಸರಿ ಸುಮಾರು ೨೪ರ ಸಮೀಪವೇ ಎಲ್ಲ ವಿಷಯಗಳಲ್ಲೂ ಗಳಿಸಿರುತ್ತಿದ್ದ ನನ್ನ ಮಾರ್ಕ್ಸ್ ಕಾರ್ಡಿನಲ್ಲಿ (ನಾನು ಓದಿದ್ದು ಒಂದು ಸ್ವದೇಶಿ ಖಾಸಗಿಶಾಲೆಯಲ್ಲಿ, ಇಲ್ಲಿ ಶಿಶುವಿಹಾರಕ್ಕೂ ಪರೀಕ್ಷೆಗಳಿರುತ್ತಿದ್ದವು!) ತಂದೆಯ ಹೆಸರಿರುವ ಕಡೆ ನಾರಾಯಣ ಹೆಗಡೆ (ನನ್ನಜ್ಜ) ಎಂದಿರುವ ಬದಲು ಮಂಜುನಾಥ ಹೆಗಡೆ ( ನನ್ನಪ್ಪ) ಎಂಬ ಹೆಸರಿರುವುದನ್ನು ಕಂಡು ಗೊಂದಲವಾಗುತ್ತಿತ್ತು.


ಹೀಗೆ ತನ್ನ ಕನಸಿನ ವೈವಾಹಿಕ ಬದುಕು ಹಳಿತಪ್ಪಿದ ಸಿಟ್ಟಿಗೆ ನನ್ನ ತಪ್ಪಲ್ಲದ ಸಣ್ಣತಪ್ಪುಗಳಿಗೂ ಕ್ರೂರವಾಗಿ ಶಿಕ್ಷೆ ಕೊಡುತ್ತಿದ್ದ ನನ್ನ ಹೆತ್ತಮ್ಮನಿಂದ ಬಹುತೇಕ ದೂರವಿರೋದೆ ನನಗಿಷ್ಟವಾಗುತ್ತಿತ್ತು.ಹೀಗಾಗಿ ಅಮ್ಮನಿಗೆ ಹೆಚ್ಚು ಅಂಟಿ ಬೆಳೆದೆ.ಉಳಿದಂತೆ ನಾನು ಅಂತರ್ಮುಖಿಯಾಗಿಯೇ ಬೆಳೆದೆ ;ಆ ವಯಸ್ಸಿಗೆ ಮೀರಿದ ಏಕಾಂತಪ್ರಿಯತೆಯನ್ನು ರೂಢಿಸಿಕೊಂಡೆ.ಪಟ್ಟು ಬಿದ್ದಷ್ಟೂ ಹೆಚ್ಚು ಹಟಮಾರಿಯಾದೆ.ಆಗೆಲ್ಲ ನನ್ನ ಆತ್ಮ ಸಂಗಾತಿಗಳಾಗಿದ್ದು ಕೊಟ್ಟಿಗೆಯಲ್ಲಿದ್ದ ಕರುಗಳು ಹಾಗು ಮನೆಯ ಆವರಣದಲ್ಲಿದ್ದ ನಾಲ್ಕು ಮರಗಳು!

ಮನೆಯೆದುರು ಅಂಗಳದಲ್ಲಿ ಒಂದು ಮೂಲೆಯಲ್ಲಿ ಪಾರಿಜಾತ,ಇನ್ನೊಂದು ಮೂಲೆಯಲ್ಲಿ ರತ್ನಗಂಧಿ ಮರಗಳಿದ್ದವು.ಹಿಂದಿನ ಆವರಣದಲ್ಲಿ ಒಂದು ಪಪ್ಪಾಯಿ ಮರ ಇನ್ನೊಂದು ತೆಂಗಿನ ಮರಗಳಿದ್ದವು.ಈ ತೆಂಗಿನಮರದ ಬಗ್ಗೆ ನನಗೆ ವಿಶೇಷ ಮಮತೆ.ನಾನು ಹುಟ್ಟಿದ ಖುಷಿಗಾಗಿ ನನ್ನಜ್ಜ ಅದೇ ದಿನ ತಂದು ನೆಟ್ಟ ಸಸಿಯಂತೆ ಅದು,ಅವರು ಹಾಗೆ ಹೇಳುವಾಗ ನನಗದು ಹುಟ್ಟಿದವನನ್ನು ಕಂಡಂತೆ ಅನ್ನಿಸುತ್ತಿತ್ತು.ನನ್ನಷ್ಟೇ ವಯಸ್ಸಾಗಿದೆ ಅದಕ್ಕೆ.ಆದರೆ ಹದಿನೈದು ವರ್ಷ ತುಂಬುವ ತನಕವೂ ಕಾಯಿ ಬಿಡದೆ ನನ್ನ ಹೊರತು ಉಳಿದೆಲ್ಲರಿಂದಲೂ ಛಿ ಥೂ ಎಂದು ಉಗಿಸಿಕೊಂಡು ;ಒಂದು ಹಂತದಲ್ಲಿ ಬರಡು ಮರ ಎಂಬ ಆರೋಪ ಹೊತ್ತು,ನನ್ನ ವಿರೋಧವನ್ನೂ ಲೆಕ್ಖಿಸದೆ ಕೊಡಲಿಗೆ ಆಹುತಿಯಾಗಲಿದ್ದುದು ಅವಾಗಷ್ಟೆ ಹಿಂಗಾರ ಕುಡಿಯೊಡೆದು ಕಡೆ ಕ್ಷಣದಲ್ಲಿ ಜೀವ ಉಳಿಸಿಕೊಂಡಿತ್ತದು.ಈಗ ಭರಪೂರ ಫಲ ನೀಡುತ್ತಿದ್ದು ಅಂದು ತೆಗಳುತ್ತಿದ್ದ ಸ್ವಾರ್ಥಿಗಳಿಂದಲೇ; ಇಂದು ಮೆಚ್ಚುಗೆ ಗಿಟ್ಟಿಸುತ್ತ ಅವರ ಜೇಬನ್ನೂ ತುಂಬುತ್ತಿದೆ! ಅದನ್ನು ಬಿಟ್ಟರೆ ನನಗೆ ತೀರ ಇಷ್ಟವಾಗುತ್ತಿದ್ದುದು ಪಾರಿಜಾತದ ಮರ.ಇವತ್ತಿಗೂ ಅಷ್ಟೊಂದು ಸೊಗಸಾದ ಹೂವನ್ನ ನಾನು ಕಂಡಿಲ್ಲ.ನನಗಿಷ್ಟವಾದ ಹೂವ್ಯಾವುದು ಎಂಬ ಪ್ರಶ್ನೆಗೆ ಗುಮಾನಿಯೆ ಇಲ್ಲದೆ ಪಾರಿಜಾತ ಅನ್ನುತ್ತೇನೆ.ಅದರ ಪರಿಮಳದಲ್ಲೊಂದು ಮೋಹಕತೆಯಿದೆ.


ಈ ಪಾರಿಜಾತ ಭೂಮಿಗೆ ಹೇಗೆ ಬಂತು ಎನ್ನುವ ಬಗ್ಗೆ ಒಂದು ಸ್ವಾರಸ್ಯಕರವಾದ ಪೌರಾಣಿಕ ಕಥೆಯಿದೆ.ಆದರೆ ಭಾಗವತದಲ್ಲೂ ಇಲ್ಲವೇ ಮಹಾಭಾರತದಲ್ಲೂ ಕೃಷ್ಣ ತನ್ನ ಜೀವಮಾನದಲ್ಲಿ ಸ್ವರ್ಗಕ್ಕೆ ಹೋದ ಪ್ರಸ್ತಾಪ ಎಲ್ಲೂ ಬಾರದ ಕಾರಣ ಇದೊಂದು ದಂತ ಕಥೆಯಿರಬೇಕು ಅನ್ನಿಸುತ್ತೆ.ಶ್ರೀಕೃಷ್ಣನೊಮ್ಮೆ ಇಂದ್ರನ ಅಮರಾವತಿಗೆ ಹೋಗಿ ದೇವತೆಗಳ ಆದರಾತಿಥ್ಯವನ್ನು ಪಡೆದಿದ್ದನಂತೆ.ದೇವಲೋಕದ ಕಾಮಧೇನು (ದನ), ಕಲ್ಪವೃಕ್ಷ (ತೆಂಗಿನ ಮರ), ಐರಾವತ (ಬಿಳಿಯಾನೆ) ಯಂತೆ ಪಾರಿಜಾತವೂ ದೇವಪುಷ್ಪವಾಗಿತ್ತಂತೆ (ಅಂದರೆ ಇಂದ್ರನ ರಾಣಿ ಶಚಿಗೂ...ಅವನ ಸೂಳೆಯರಾದ ರಂಭೆ,ಮೇನಕೆ,ತಿಲೋತ್ತಮೆ,ಊರ್ವಶಿ,ಘ್ರತಾಚಿ ಮುಂತಾದವರಿಗಷ್ಟೇ ಸೀಮಿತವಾಗಿದ್ದ ಹೂವದು) ಅದೊಮ್ಮೆ ಅರಳಿದರೆ ಬಾಡುವ ಮಾತೆ ಇರಲಿಲ್ಲವಂತೆ.ಶ್ರೀಕೃಷ್ಣ ಮರಳಿ ಮನೆಗೆ ಹೊರಡುವಾಗ ಪತ್ನಿ ರುಕ್ಮಿಣಿ ಆಸೆಯಿಂದ ಹೇಳಿ ಕಳಿಸಿದ್ದನ್ನು ನೆನಪಿಸಿಕೊಂಡು ಅವಳಿಗಾಗಿ ಇಂದ್ರನಿಂದ ಕೇಳಿ ಪಡೆದ ನಾಲ್ಕಾರು ಪಾರಿಜಾತದ ಹೂಗಳನ್ನು ತನ್ನ ಉತ್ತರೀಯದ ಅಂಚಿಗೆ ಕಟ್ಟಿಕೊಂಡು ಮರಳಿ ಬಂದನಂತೆ.ಬಂದವ ರುಕ್ಮಿಣಿಗೆ ಹೂವು ಮುಟ್ಟಿಸಿ ಸತ್ಯಭಾಮೆಯ ಬಿಡಾರಕ್ಕೆ ಬಂದ.ಅಲ್ಲಿ ಅವನ ಉತ್ತರೀಯಕ್ಕೆ ಅಂಟಿದ್ದ ಪಾರಿಜಾತದ ಸೌಗಂಧಕ್ಕೆ ಮರುಳಾದ ಅವಳು ಅವಳಿಗಾಗಿಯೇ ಇವನು ತಂದಿದ್ದ ಸೌಗಂಧಿಕ ಪುಷ್ಪ,ಕಾಮಧೇನುವಿನ ಹಾಲು ಇವನ್ನೆಲ್ಲ ಎಡಗೈಯಲ್ಲೂ ಮುಟ್ಟದೆ ಏನೋ ವಿಶೇಷವಾದದ್ದನ್ನ ನನಗೆ ತಾರದೆ ವಂಚಿಸಿದ್ದಿ ಎಂದು ಸವತಿ ಮಾತ್ಸರ್ಯದಿಂದ ರಂಪ ಮಾಡಿದಳಂತೆ! ಅಷ್ಟೇ ಅಲ್ಲದೆ ಅದೊಂದು ಹೂವೆಂದು ತಿಳಿದೊಡನೆ ನನಗದರ ಮರವೇ ಬೇಕೆಂದು ಹಠಮಾಡಿದಳಂತೆ?! ಇದರಿಂದ ರೋಸತ್ತ ಶ್ರೀಕೃಷ್ಣ ಪರಮಾತ್ಮ ಮರಳಿ ಸ್ವರ್ಗಕ್ಕೆ ಹೋಗಿ,ಇಂದ್ರನಿಗೆ ವಿಷಯ ಅರುಹಿ ಹೂವಿನ ಗಿಡ ತಂದು ಭಾಮೆಗೆ ಕೊಟ್ಟ ನಂತರವೇ ಅವಳ ಕೋಪ ಶಮನ ಆಯಿತಂತೆ.ಇಷ್ಟೆಲ್ಲಾ ರಣರಂಪಕ್ಕೆ ಕಾರಣವಾದ ಪಾರಿಜಾತಕ್ಕೆ ಇನ್ನು ಮೇಲೆ ಅರಳಿದಷ್ಟೇ ವೇಗವಾಗಿ ಬಾಡಿಯೂ ಹೋಗು, ನಿನ್ನ ಮೈ ಮೇಲೆ ಧಾರಾಳವಾಗಿ ಹುಳು-ಹುಪ್ಪಡಿಗಳು ಮನೆ ಮಾಡಲಿ ಎಂಬ ಘೋರ ಶಾಪ ಕೊಟ್ಟನಂತೆ ಕೃಷ್ಣ (ಇದ್ಯಾವ ಸೀಮೆ ನ್ಯಾಯ ಸ್ವಾಮಿ? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ! ಅಲ್ಲ ಸತ್ಯಭಾಮೆಯ ಮುಂದೆ ಕುನ್ನಿಯಂತೆ ಬಾಲಮುದುರಿ ಕೊಂಡಿದ್ದ ಹೆಂಡತಿ ಗುಲಾಮ ಕೃಷ್ಣ [ಇವ ಜಗತ್ ರಕ್ಷಕ ಬೇರೆಯಂತೆ,ಥೂ ಅದ್ಬೇರೆ ಕೇಡು ಆ ಕರಿ ಮುಖಕ್ಕೆ] ಏನೂ ತಪ್ಪರಿಯದ ಪಾಪದ ಪಾರಿಜಾತಕ್ಕೆ ಭೀಕರ ಶಾಪ ಕೊಟ್ಟ) ಹೀಗೆ ನೆಲ ಸೇರಿದ ಶಾಪಗ್ರಸ್ತ ಪಾರಿಜಾತಕ್ಕೆ ಮರಳಿ ದೇವಲೋಖದ ಪ್ರವೇಶ ಸಿಗಲಿಲ್ಲವಂತೆ.ಇಂದೂ ಕೂಡ ಅದಿರುವ ಮನೆಯಲ್ಲಿ ಗಂಡ-ಹೆಂಡಿರಲ್ಲಿ ಜಗಳವಾಗಿಯೇ ತೀರುತ್ತದೆ ಎನ್ನುವುದು ಪ್ರತೀತಿ.
{ನಾಳೆಗೆ ಮುಂದುವರೆಸುವೆ}