18 August 2010

ನನ್ನೊಲವಿನ ಪಾರಿಜಾತ...

{ಮೊನ್ನೆಯಿಂದ ಮುಂದುವರೆದುದು}





ರತ್ನಗಂಧಿ,ಅಬ್ಬಲಿಗೆ,ಕಾಕಡ-ಮಂಗಳೂರು-ಕಸ್ತೂರಿ ಮಲ್ಲಿಗೆಗಳು,ಚಂಡು ಹೂ,ನಂದಬಟ್ಟಲು,ಕೆಂಪು-ಕೆನೆ ಬಣ್ಣದ ಗುಲಾಬಿ,ಸೇವಂತಿಗೆ,ಸೂರ್ಯಕಾಂತಿ,ಅರಿಶಿನದ ಹೂ ( ಹೆಸರು ಮಾತ್ರ ಅರಿಶಿನ ;ಹೂ ಬಿಳಿಯದೆ),ಕಬಾಳೆ ಹೂ,ಕೆಂಪು-ಗುಲಾಲಿ ತುಂಬೆ ಹೂ,ನೆಲ ಗುಲಾಬಿ,ಕೆಂಪು-ಹಳದಿ-ಬಿಳಿ-ಕೆನೆವರ್ಣದ ದಾಸವಾಳದ ಹೂ,ಹೀಗೆ ಅಸಂಖ್ಯ ಹೂ ಗಿಡಗಳು ಮೈತುಂಬ ಹೂ ಹೊಮ್ಮಿಸಿ ಕಣ್ಣಿಗೆ ಹಿತವಾಗುತ್ತಿದ್ದರೂ ಅದೆಲ್ಲಕ್ಕಿಂತ ಎತ್ತರದಲ್ಲಿ ಮರದಲ್ಲರಳಿ ನೆಲ ಮುಟ್ಟುತ್ತಿದ್ದ ಪಾರಿಜಾತದಷ್ಟು ಇನ್ಯಾವುದೇ ಹೂವು ನನಗೆ ಮೋಡಿ ಮಾಡಿರಲಿಲ್ಲ.ಪಾರಿಜಾತದ್ದು ಅಲ್ಪಾಯುಷ್ಯ.

ಸಂಜೆ ಹೊತ್ತು ಕಂತುವಾಗ ಮುತ್ತು ಪೋಣಿಸಿದಂತೆ ಕಾಣುವ ದುಂಡು ಮೊಗ್ಗುಗಳು ನಸು ಮುಂಜಾನೆಯಲ್ಲಿ ಅಂದವಾಗಿ ಅರಳಿ ಏಳೆಂಟು ಗಂಟೆಯ ಹೊತ್ತಿಗೆಲ್ಲ ಉದುರಿ ನೆಲಮುಟ್ಟುತ್ತಿದ್ದವು.ಇತ್ತ ಸಂಸ್ಕೃತ ವಾರ್ತೆಯ ಕೊನೆಯ ಸಾಲು "...ಇತಿ ವಾರ್ತಾಹ" ಕೇಳಿಬರುತ್ತಿದ್ದ ಹಾಗೆ ಓಡಿಹೋದರೆ ಹೂವುಂಟು,ಇಲ್ಲದಿದ್ದರೆ ಅರ್ಧ ಅಂಗಳದಲ್ಲಿ-ಇನ್ನರ್ಧ ರಸ್ತೆಯಲ್ಲಿ ಬೀಳುತ್ತಿದ್ದ ಅವು ಒಂದೊ ಓಡಾಡುವವರ ಕಾಲ್ತುಳಿತಕ್ಕೆ ಸಿಕ್ಕು ಇಲ್ಲವೆ ಮೇಲೇರುವ ಸೂರ್ಯನ ಧಗೆಗೋ ಮುರುಟಿ ಮಣ್ಣು ಪಾಲಾಗುತ್ತಿದ್ದವು.ಬೆಳಗಾತ ಎದ್ದ ಕೂಡಲೇ ಮನೆಯ ಅಂಗಳ ಗುಡಿಸಿ ಸಾರಿಸಿ ನಮ್ಮ ಕಲ್ಲು ದಣಪೆಯ ಮುಂದೆ ಅಂದವಾಗಿ ಅಮ್ಮನೋ-ಚಿಕ್ಕಂಮಂದಿರೋ ಇಟ್ಟಿರುತ್ತಿದ್ದ ರಂಗೋಲಿಯ ಅಂಕುಡೊಂಕು ಸಾಲುಗಳ ಮೇಲೆ ಉದುರಿದ ಪಾರಿಜಾತಗಳನ್ನೆಲ್ಲ ಆರಿಸಿ ತಂದು ತಲೆ ಕೆಳಗಾಗಿ ತೊಟ್ಟು ಮೇಲಾಗಿ ಜೋಡಿಸಿಟ್ಟು ಅಂದ ನೋಡುವುದು ನನ್ನ ಅತ್ಯಂತ ಪ್ರಿಯವಾದ ಹವ್ಯಾಸ.ಬಿಳಿ ಪಕಳೆಗಳ ಹಿಂದಿನ ಕೇಸರಿ ತೊಟ್ಟು ಪಾರಿಜಾತಕ್ಕೆ ವಿಶೇಷ ವರ್ಣವೈಭವವನ್ನ ಕೊಟ್ಟಂತೆ ಅನ್ನಿಸುತ್ತಿತ್ತು.ಈ ಹೂವನ್ನು ದಾರದಲ್ಲಿ ಕಟ್ಟಲಾಗದಷ್ಟು ಸೂಕ್ಷ್ಮವಾಗಿ ಅದಿರುತ್ತಿದ್ದರಿಂದ ಸೂಜಿಗೆ ದಾರ ಪೋಣಿಸಿ ಅದನ್ನು ಹೆಣೆದು ದೇವರ ಪಟಕ್ಕೆ ಮಾಲೆಯಾಗಿ ಹಾಕುತ್ತಿದ್ದುದು ನೆನಪಾಗುತ್ತದೆ.


ಪಾರಿಜಾತದ ಶಾಪದ ಕಥೆ ಅಲ್ಲಿಗೆ ಮುಗಿಯಲಿಲ್ಲ.ಇತ್ತ ಗಿಡ ತಂದು ಸತ್ಯಭಾಮೆಗೆ ಕೊಟ್ಟ ಕೃಷ್ಣ ಅದನ್ನು ನೆಡುವಾಗ ಮತ್ತೆ ತನ್ನ ಕುತಂತ್ರ ಮೆರೆದ.ನೆಟ್ಟದ್ದು ಭಾಮೆಯ ಅಂಗಳದಲ್ಲಾದರೂ ಅದು ಬೆಳೆದು ಬಾಗಿದ್ದು ರುಕ್ಮಿಣಿಯ ಅಂಗಳದತ್ತ! ಹೂವೆಲ್ಲ ಅಲ್ಲಿಯೇ ಉದುರುತ್ತಿತ್ತು.ಅಲ್ಲಿಗೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಆ ಕರಿಯ.ನಿತ್ಯ ಹೂ ಸಿಕ್ಕು ರುಕ್ಮಿಣಿಯೂ ಸುಖಿ! ತನ್ನಂಗಳದಲ್ಲೇ ಪೂರ ಮರ ಹೊಂದಿ ಮತ್ಸರ ಸಾಧಿಸಿಕೊಂಡ ಭಾಮೆ ಪರಮಸುಖಿ!!


ಒಮ್ಮೆ ನವರಾತ್ರಿಯ ಸಮಯ ಶಾಲೆಯಲ್ಲಿ ಸರಸ್ವತಿ ಪೂಜೆಗಾಗಿ ಎಲ್ಲ ಮಕ್ಕಳಿಗೂ ಹೂ ತರಲು ಹೇಳಿದ್ದರು.ನನ್ನ ಸಹಪಾಟಿಗಳೆಲ್ಲ ತಮ್ಮ ಮನೆಯಲ್ಲಿ ಅರಳಿದ್ದೋ-ಇಲ್ಲ ಉಳ್ಳವರ ಅಪ್ಪಂದಿರು ಹೂವಂಗಡಿಯಲ್ಲಿ ಕೊಡಿಸಿದ್ದೋ ಅಂತೂ ಭಾರಿ ಚಂದದ ಹೂಗಳನ್ನೆ ಕೊಂಡೊಯ್ದು ಹೊಗಳಿಸಿಕೊಂಡಿದ್ದರೆ,ಅಷ್ಟೇ ಅಸ್ಥೆಯಿಂದ ನಾನೂ ಆರಿಸಿ ಕೊಂಡೊಯ್ದಿದ್ದ ಪಾರಿಜಾತದ ಹೂ ಶಾಲೆ ತಲುಪುವಾಗಲೆ ಅರೆ ಬಾಡಿದ್ದು ನಾನು ಎಲ್ಲರಿಂದ ಅಪ ಹಾಸ್ಯಕ್ಕೀಡಾಗಿದ್ದೆ.ಆಗಷ್ಟೇ ನಾನು ಹೊಸ ಹೊಸತಾಗಿ ಒಲವಲ್ಲಿ ಪರಿಚಯದ ಹುಡುಗಿಯೊಬ್ಬಳ ಒಲವಲ್ಲಿ ಬಿದ್ದಿದ್ದೆ ( ಒಲವಾಗಿದ್ದು ಒಂದೇ ಸಾರಿ,ಇಂದಿಗೂ ಅವಳನ್ನೇ ಪ್ರೀತಿಸುತ್ತಿದ್ದೇನೆ ಅವಳೀಗ ಸಾನ್ ಫ್ರಾನ್ಸಿಸ್ಕೊದಲ್ಲಿದ್ದಾಳೆ). ಒಂಬತ್ತನೇ ತರಗತಿಯ ಕೊನೆಯ ಪರೀಕ್ಷೆಯ ದಿನಗಳವು.ಪರೀಕ್ಷೆಯ ಹಾಲಿನಲ್ಲಿ ಬೆಂಚಿಗೆ ಇಬ್ಬರಂತೆ ಒಬ್ಬ ಒಂಬತ್ತನೆಯ ತರಗತಿಯ ಹಾಗು ಇನ್ನೊಬ್ಬ ಎಂಟನೆಯ ತರಗತಿಯವರನ್ನ ಕ್ರಮವಾಗಿ ಕೂರಿಸುತ್ತಿದ್ದರು.ನನ್ನ ಅದೃಷ್ಟಕ್ಕೆ ಎಂಟನೆ ತರಗತಿಯಲ್ಲಿನ ಅವಳ ಕ್ರಮಸಂಖ್ಯೆಯೂ ಒಂಬತ್ತರಲ್ಲಿದ್ದ ನನ್ನ ಕ್ರಮಸಂಖ್ಯೆಯೂ ಒಂದೇ ಬೆಂಚಿನಲ್ಲಿ ಬಿದ್ದಿತ್ತು! ಕನಿಷ್ಠ ಆರು ದಿನಗಳ ಮಟ್ಟಿಗಾದರೂ ನನಗೆ ಲಾಟರಿ ಹೊಡೆದಿತ್ತು!! ಆ ಖುಷಿಗೆ ತೀರ ಬಾಲಿಶವಾಗಿ ವರ್ತಿಸಿ ಬೇಕೂಫನೂ ಆಗಿದ್ದೆ.ಪರೀಕ್ಷೆಯ ಕೊನೆಯ ದಿನದ ಹಿಂದಿನ ಸಂಜೆ ಅವಳಿಗಾಗಿ ವಿಶೇಷವಾಗಿ ಪಾರಿಜಾತದ ದುಂಡು ಮೊಗ್ಗುಗಳನ್ನೆಲ್ಲ ಜೋಪಾನವಾಗಿ ಬಿಡಿಸಿ ನನ್ನ ಕರ್ಚಿಫ್ನಲ್ಲಿ ಕಟ್ಟಿ ಮನೆಯ ಮಾಡಿನ ಮೇಲೆ ಇಬ್ಬನಿಗೆ ಇಟ್ಟಿದ್ದೆ.ಅರಳಿದ ಮೇಲೆ ಅದು ಬಾಡಿ ಹೋದೀತು ಎಂಬ ಅರಿವಿದ್ದುದರಿಂದ ವಹಿಸಿದ್ದು ಈ ಮುತುವರ್ಜಿ.ಇಷ್ಟೆಲ್ಲಾ ಮುಂಜಾಗರೂಕತೆ ವಹಿಸಿದ್ದರೂ ಶಾಲೆಗೆ ಹೋಗುವಾಗ ( ಅಂದು ಮಧ್ಯಾಹ್ನ ಪರೀಕ್ಷೆ ಇತ್ತು) ಯಥಾಪ್ರಕಾರ ಮೊಗ್ಗು ಕೂಡ ಬಾಡಿ ಹೋಗಿ ಕೊಡಲು ಕೀಳರಿಮೆ ಕಾಡಿ ಮನಸ್ಸಾಗಲೇ ಇಲ್ಲ.ಅಷ್ಟು ಆಸೆಯಿಂದ ಕೊಡುವ ಅಂದು ಕೊಂಡಿದ್ದ ನನ್ನ ಮನಸೂ ಕೂಡ ಆ ದಿನ ಥೇಟ್ ಪಾರಿಜಾತದಂತೆ ಮುದುಡಿ ಮುರುಟಿ ಹೋಗಿತ್ತು.ಹೂ ಕೊಡಲಾಗಲಿಲ್ಲ ಎಂಬ ಸಂಕಟ ಇಂದಿಗೂ ನನ್ನ ಭಾದಿಸುತ್ತಿದೆ.


{ನಾಳೆಗೆ ಮುಂದುವರಿಸುವೆ}

No comments: