17 August 2010

ಅಬ್ಬರಿಸಿ ಬೋಬ್ಬಿರಿದರೆ ಇಲ್ಯಾರಿಗೂ ಭಯವಿಲ್ಲ...

ದಿನ ಕಳೆದಂತೆ ಕರ್ನಾಟಕದ ರಾಜಕಾರಣಿಗಳ ವರ್ತನೆ ಹೇಸಿಗೆ-ರೇಜಿಗೆ ಎರಡನ್ನೂ ಏಕಕಾಲದಲ್ಲಿ ಹುಟ್ಟಿಸುತ್ತಿದೆ.ಸಚಿವ ಬಚ್ಚೇಗೌಡರ ಆಟಾಟೋಪದ ಪ್ರಕರಣ ಹೇಸಿಗೆ ಹೆಚ್ಚಿಸಿದ ಅಂತಹದ್ದೊಂದು ಪ್ರಕರಣಗಳ ಸಾಲಿಗೆ ಹೊಸ ಸೇರ್ಪಡೆ.ಬಿಹಾರ-ಉತ್ತರ ಪ್ರದೇಶಗಳಲ್ಲಿ ಆಗುತ್ತದೆ ಎಂದಷ್ಟೇ ಕೇಳಿಗೊತ್ತಿದ್ದ ಅಂಧಾದರ್ಬಾರಿಗೆ ಈ ಮೂಲಕ ಕನ್ನಡದ ಜನರೂ ಸಾಕ್ಷಿಯಾಗಿದ್ದಾರೆ.ನಾಚಿಕೆಗೇಡಿನ ಸಂಗತಿಯೆಂದರೆ ಜನರ ಸೇವೆ ಮಾಡಬೇಕಾದ (ಅದಕ್ಕೆ ಅವರಿಗೆ ಆ ಸ್ಥಾನಮಾನ ಸಿಕ್ಕಿರೋದು) ಸಚಿವನೋಬ್ಬನ ಪುಂಡಾಟದ ಈ ವರ್ತನೆಗೆ ಎಲ್ಲರೂ ಮೂಕಸಾಕ್ಷಿಗಳಾಗಿದ್ದರೆ ಅಷ್ಟೇ. ಇಂತಹ ದುರಹಂಕಾರಿಗೆ ಮುಲಾಜಿಲ್ಲದೆ ತಾಗಿಸ ಬೇಕಾದ ಜನಶಕ್ತಿಯ ಅಸಹನೆಯ ಬಿಸಿ ಪರಿಣಾಮಕಾರಿಯಾಗಿ ಮುಟ್ಟುತ್ತಿಲ್ಲ."ವಿಜಯ ಕರ್ನಾಟಕ"ವೂ ಸೇರಿ ಕೇವಲ ಒಂದೆರಡು ಕನ್ನಡ ದಿನಪತ್ರಿಕೆಗಳು ಮುಖಪುಟದಲ್ಲೇ ಸುದ್ದಿಗೆ ಪ್ರಾಮುಖ್ಯತೆ ನೀಡಿ ಜನರ ಆಶೋತ್ತರಗಳಿಗೆ ಧ್ವನಿಯಾದರೆ,ಅಂಗ್ಲಪತ್ರಿಕೆಗಳಲ್ಲೂ ಎರಡೇ ಪತ್ರಿಕೆಗಳು ಈ ಬಗ್ಗೆ ಧ್ವನಿ ಎತ್ತಿವೆ.ಉಳಿದ ಪತ್ರಿಕೆಗಳ ಹಣೆಬರಹಕ್ಕೆ ಒಳಪುಟದಲ್ಲಿ ಪ್ರಕಟ ಸದರಿ ಸುದ್ದಿ ಪ್ರಕಟವಾಗಿದ್ದರೆ ಒಂದೆರಡು ಪತ್ರಿಕೆಗಳ ಪಾಲಿಗೆ ಅದೊಂದು ಸುದ್ದಿಯೇ ಅಲ್ಲ! .ಬಚ್ಚೇಗೌಡರಂತಹ ಯಕಶ್ಚಿತ್ ಸಚಿವನಿಗಿರುವ ಪೊಗರು ಇಡೀ ಸರ್ಕಾರದ ಧೋರಣೆಯ ಪ್ರತಿಬಿಂಬವೆ ಹೊರತು ಕೇವಲ ವಯಕ್ತಿಕ ನೆಲೆಯಲ್ಲಿ ಕಂಡು ಮರೆತು ಬಿಡುವ ಸರಳ ವಿಚಾರ ಅಲ್ಲ ಎಂಬುದು ನಮಗೆಲ್ಲ ನೆನಪಿರಬೇಕು.ಪರಿಸ್ಥಿತಿಯ ವ್ಯಂಗ್ಯವೆಂಬಂತೆ ಸ್ವಾತಂತ್ರ್ಯ ದಿನಾಚರಣೆಯ ದಿನವೇ ನಡೆದ ನಾಚಿಗೆಗೇಡಿನ ಈ ಪ್ರಕರಣ ಶ್ರೀಸಾಮಾನ್ಯನೊಬ್ಬನಿಗೆ,ಸಾಧಾರಣ ಮತದಾರ ಪ್ರಭುವಿಗೆ ( ಈ ಪ್ರಭುವಿನ ಪಟ್ಟ ಚುನಾವಣೆಯ ಹೊತ್ತಿಗಷ್ಟೇ ಸೀಮಿತ!) ಈ ರಾಜ್ಯದಲ್ಲಿ ಇರುವ ವ್ಯಕ್ತಿ ಸ್ವಾತಂತ್ರ್ಯಕ್ಕೆ ನಿದರ್ಶನ ಅನ್ನಿಸುತ್ತದೆ.


ಹಾಸನಜಿಲ್ಲಾ ಉಸ್ತುವರಿಯಷ್ಟೇ ಬಚ್ಚೆಗೌಡರಿಗಿರುವುದು ಹೊರತು ಅಲ್ಲಿನ ಪಾಳೆಗಾರಿಕೆಯಲ್ಲ.ಅಲ್ಲದೆ ಎಲ್ಲಾದರೂ ಕರ್ನಾಟಕದ ಜನತೆಯ ಹಣೆಬರಹ ಕೆಟ್ಟು "ಬಚ್ಚಾಸ್ಥಾನ್" ಒಂದು ಮುಂದೆಂದಾದರೂ ರೂಪುಗೊಂಡಾಗ ಮಾತ್ರ ಅವರ ಕಾಡಿನ ಕಾನೂನು ಅಲ್ಲಿ ಜಾರಿಗೆ ಬಂದರೂ ಬರಬಹುದು.ಆದರೆ ಮಾನ್ಯಸಚಿವರ ದುರದೃಷ್ಟಕ್ಕೆ ಇದು ಕರ್ನಾಟಕ ಹಾಗು ಅವರು ಇಲ್ಲಿನ ಆರುಕೋಟಿ ಜನರ ಪ್ರಾತಿನಿಧಿಕ ಸರ್ಕಾರದ ಒಬ್ಬ ಕನಿಷ್ಠ ಸಚಿವ,ನೇರ ಮಾತಿನಲ್ಲಿ ಹೇಳಬೇಕೆಂದರೆ ಜನರ ಹಿತಕಾಯ ಬೇಕಾದ ವಾಚಮೆನ್ ಅಷ್ಟೇ.ಅಷ್ಟಕ್ಕೇ ಈ ಪರಿ ಹಾರಾಡುವ ಇವರ ಉದ್ದವಾಗಿರೋ ನಾಲಗೆ ಹಾಗು ಬಾಲವನ್ನ ಕತ್ತರಿಸಬೇಕಾದ ಶಿಸ್ತಿನ ಕಮಲಪಕ್ಷದ ವರಿಷ್ಠರು ಬಾಯಿಮುಚ್ಚಿ ಕೊಂಡಿರೋದ್ಯಾಕೋ? ಇನ್ನು ಮಾನ್ಯ ಮುಖ್ಯಮಂತ್ರಿಗಳು ನೊಂದ ಕುಟುಂಬದ ಮಂದಿಯನ್ನು ಕರೆದು ಮಾತನಾಡಿಸುತಾರಂತೆ! ಏನಂತ? ಪ್ರತಿ ದೂರು ಕೊಡದಂತೆ ತಾಕೀತು ಮಾಡೋದಕ್ಕ ಕರೆಸೋದು? ಇಲ್ಲ ಈ ಸಚಿವ ಭೂಪ ಅಲ್ಲಿ ಕ್ಷಮೆ ಕೇಳ್ತಾರ? ಬೀದೀಲಿ ಕಳೆದ ಮಾನಕ್ಕೆ ಮುಚ್ಚುಗೆಯಲ್ಲಿ ಕ್ಷಮೆಯ ನಾಟಕವ? ಇಷ್ಟೊಂದು ಧ್ರಾಷ್ಟ್ಯದಿಂದ ಹದ್ದುಮೀರಿ ವರ್ತಿಸಿದ,ತಮ್ಮ ತಪ್ಪಿಗೆ ಯಾವ ಪಶ್ಚಾತಾಪದ ಎಳೆಯೂ ಇಲ್ಲದ ತಮ್ಮ ಸಂಪುಟ ಸಹೋದ್ಯೋಗಿಯನ್ನ ಅಲುಗಾಡಿಸಲೂ ಆಗದ ನಿಶಕ್ತ ಮುಖ್ಯಮಂತ್ರಿ ಇನ್ನೂ ಹೆಚ್ಚಿಗೆ ಹೇಸಿಗೆ ಹುಟ್ಟಿಸುತ್ತಾರೆ.


ನಾವೆಲ್ಲರೂ ಒಂದು ನಾಗರೀಕ ಪ್ರಪಂಚದಲ್ಲಿ ಬದುಕುತ್ತಿದ್ದೇವೆ ಎಂಬ ಅರಿವು ಸಚಿವ ಮಹಾಶಯರಿಗೆ ಇದ್ದಂತಿಲ್ಲ.ಲಿಂಗ-ಜಾತಿ-ಮತ-ಅಂತಸ್ತು-ಪ್ರಾದೇಶಿಕತೆಗಳಿಗೆ ಮೀರಿದ ಏಕೈಕ ಕಾನೂನಷ್ಟೇ ಈ ನೆಲದಲ್ಲಿರುವುದು.ಅಥವಾ ಸಚಿವರಿಗೊಂದು-ಶ್ರೀಸಾಮಾನ್ಯನಿಗೊಂದು ಎಂಬ ಎರಡು ಸೆಟ್ ಕಾನೂನು ಕಟ್ಟಳೆಗಳೇನಾದರೂ ಜಾರಿಯಲ್ಲಿವೆಯೆ? ಅಷ್ಟಕ್ಕೂ ನಡು ಹೆದ್ದಾರಿಯಲ್ಲಿ ಬೀದಿ ಪುಂಡನಂತೆ ಸಾಮಾನ್ಯನೊಬ್ಬನ ಮೇಲೆ ತೋಳೇರಿಸಿ ಕೊಂಡು ಹೋಗುವ ಮುಕ್ತ ಅವಕಾಶವನ್ನೇನಾದರೂ ವಿಶೇಷ ಕಾಯ್ದೆಯಡಿ ಮಾನ್ಯ ಬಚ್ಚೆಗೌಡರಿಗೆ ಈ ಮೂರ್ಕಾಸಿನ ಮಂತ್ರಿಗಿರಿ ತಂದು ಕೊಟ್ಟಿದೆಯೇ? ಸದ್ಯ ಜಾರಿಯಲ್ಲಿರುವ ರಾಷ್ಟ್ರೀಯ ಮೋಟಾರು ವಾಹನ ಕಾಯ್ದೆಯಡಿ ಇಲ್ಲದ ವಿಶೇಷ ಮಾನ್ಯತೆಯನ್ನು ಹೊಸತಾಗಿ ನಮ್ಮ ಸಂವಿಧಾನದಲ್ಲೇನಾದರೂ ಕಲ್ಪಿಸಿ ಕೊಡಲಾಗಿದೆಯೇ? ತನ್ನನ್ನು ತಾನು ಅಡ್ವೋಕೇಟ್ ಎಂದೂ; ಕಾನೂನಿನ ವಿಷಯಗಳಲ್ಲಿ ಸರ್ವಜ್ಞನೆಂದೂ ಫೋಸು ಕೊಡುವ ಬಚ್ಚೆಗೌಡರಿಗೆ ಈ ಕಾನೂನು ಸೂಕ್ಷ್ಮದ ಅರಿವೇನಾದರೂ ಇದೆಯೆ?



ಇಷ್ಟೇ ಸಾಲದು ಎಂಬಂತೆ ಸಚಿವರ ಕಾಮಾಲೆ ಕಣ್ಣಿಗೆ ಈ ಅಮಾಯಕ ಭಯೋತ್ಪಾದಕನಂತೆ ಬೇರೆ ಕಾಣಿಸಿದ್ದಾನೆ! ಭಯೋತ್ಪಾದಕರನ್ನು ಗುರುತಿಸುವ ವಿಶೇಷ ಪರಿಣತ ಸೂತ್ರಗಳೇನಾದರೂ ಇದ್ದರೆ ದಯವಿಟ್ಟು ಶ್ರೀಮಾನ್ ಬಚ್ಚೆಗೌಡರು ಕರ್ನಾಟಕದ ಜನತೆಗೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಬೇಕು.."ಅವನು ಕುಡಿದು ಚಾಲನೆ ಮಾಡ್ತಿದ್ದ: ಪದೇ ಪದೇ ನನ್ನ ವಾಹನಕ್ಕೆ ಗುದ್ದಲು ಪ್ರಯತ್ನಿಸಿದ ,ಆಗ ನಾನು ಕೆಳಗಿಳಿದು 'ನೀನು ಮುಸಲ್ಮಾನನೋ? ಇಲ್ಲ ಮಲೆಯಾಳಿಯೋ (!?) ' ಎಂದು ನಯವಾಗಿ ಕೇಳಿದೆ!" ಎಂದಿರುವ ಸಚಿವರು ತಮ್ಮದೇ ಇನ್ನೊಂದು ಹೇಳಿಕೆಯಲ್ಲಿ "ನಾನು ಕಾರಿಂದ ಇಳಿದಿರಲೆ ಇಲ್ಲ , ಹಾಸನದಲ್ಲಿ ಹತ್ತಿದವ ಬೆಂಗಳೂರಲ್ಲೇ ಇಳಿದಿದ್ದು : ದಾರಿ ಮಧ್ಯದಲ್ಲಿ ನನ್ನ ಸಹಾಯಕ ರಾಜಶೇಖರ್ ಹಾಗು ಚಾಲಕ ದೇವದಾಸ್ ಮತ್ತೊಂದು ವಾಹನದ ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದರು,ಆದರೆ ನಾನೇ ಮಧ್ಯ ಪ್ರವೇಶಿಸಿ ಬುದ್ಧಿ ಹೇಳಿ(!) ಕಲಿಸಿದೆ" ಎಂದು ವಿರೋಧಾಭಾಸದ ಹೇಳಿಕೆ ನೀಡುವ ಮೂಲಕ ಕೇಳುವವರ ಕಿವಿಮೇಲೆ ಹೂವಿಟ್ಟಿದ್ದಾರೆ.ಸಚಿವರ ಪ್ರಕಾರ ಆ ಸಮಯದಲ್ಲಿ ಅಲ್ಲಿ ನೆರೆದ ಗುಂಪು ಅವರ ಅಪಾರ ಬೆಂಬಲಿಗರದಂತೆ,ಭೇಷ್! ಬಚ್ಚೆಗೌಡರೆ ನಿಮ್ಮ ಈ ವಿಶ್ವ ಪ್ರಸಿದ್ಧಿಯ ಅರಿವು ಇಲ್ಲಿಯವರೆಗೂ ನಮಗ್ಯಾರಿಗೂ ಇರಲೇ ಇಲ್ಲ.ತಮ್ಮ ಗನ್ ಮ್ಯಾನ್ ಭರತ್ ಅಂಗಿಯ ಕೊರಳು ಪಟ್ಟಿ ಹಿಡಿದು,ನಿಮ್ಮ ಡ್ರೈವರ್ ಹಳೆ ಸಿನೆಮಾದ ತಲೆ ಮಾಸಿದ ಖಳನಟನ ಅಟ್ಟಹಾಸದಲ್ಲಿ ಬಾಕ್ಸರ್ರ್ನಂತೆ ಮುಷ್ಠಿ ಕಟ್ಟಿ ಕೊಂಡು ಭರತರ ಹಲ್ಲುದುರುವಂತೆ ಹೊಡೆದದ್ದು ಕೇವಲ ಚಕಮಕಿಯ? ಭಪ್ಪರೆ,ಇನ್ನು ಥೇಟ್ ಭಬ್ರುವಾಹನನ ಅಪರಾವತಾರದಂತೆ ಅಂಗಲಾಚಿ ಕೊಂಡು ತನ್ನ ಮಗನ ರಕ್ಷಣೆಗೆ ಮೊರೆಯಿಡುತ್ತ ನಿಮ್ಮ ಕಾಲು ಹಿಡಿದ ಲೋಕಪ್ಪ ಗೌಡರನ್ನ ಜಾಡಿಸಿ ಒದ್ದದ್ದು ಕೇವಲ ಪಾದಾಶಿರ್ವಾದವೇ? 'ನೀನು ಮುಸ್ಲೀಮನೋ? ಇಲ್ಲ ಮಲೆಯಾಳಿಯೋ ಟೆರರಿಸ್ಟ್ ತರ ಕಾಣ್ತೀಯ ಎಂದು ನಯವಾಗಿ ತಾವು ಭರತರನ್ನು ಗದರಿದಿರಂತೆ,ಪಾಪ! ಯಾಕೆ ಸ್ವಾಮೀ ತಮ್ಮ ರಾಜ್ಯಭಾರದಲ್ಲಿ ಮುಸ್ಲೀಮರಿಗೂ-ಮಲೆಯಾಳಿಗಳಿಗೂ ಟೆರರಿಸ್ಟ್ ಪಟ್ಟ ಕಟ್ಟಲಾಗಿದೆಯೇ? ಸ್ವಾತಂತ್ರ್ಯ ಭಾರತದ ಅಂಗವಾಗಿರುವ ಕರ್ನಾಟಕದಲ್ಲಿ 'ಸಮೃದ್ಧ' ಆಡಳಿತ ನೀಡುತ್ತಿರುವ ನಿಮ್ಮ 'ಪ್ರಗತಿಪರ' ಸರ್ಕಾರ ಈ ಎರಡು ವರ್ಗಗಳ ಮೇಲೆ ವಿಶೇಷ ನಿರ್ಬಂಧವನ್ನೇನಾದರೂ ಹೇರಿದ್ದರೆಯೇ?


ಹಾಸನದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ನಾಲ್ಕುಪಥದ ರಸ್ತೆಯಲ್ಲಿ ಸದರಿ ಪ್ರಕರಣ ನಡೆದದ್ದು.ಈ ಗೂಂಡ ಸಚಿವರಿಗೆ ಲೇನ್ ಶಿಸ್ತಿನ ಬಗ್ಗೆ ಪ್ರಾಥಮಿಕ ಅರಿವೇನಾದರೂ ಇದೆಯೇನು? ಒಳ ಲೇನಿನಲ್ಲಿ ಗಂಟೆಗೆ ೧೦೦ ಕಿ ಮಿ ಗೆ ಕಡಿಮೆ ಇಲ್ಲದಂತೆ,ಮೂರನೇ ಲೇನಿನಲ್ಲಿ ಗಂಟೆಗೆ ೮೦ ಕಿ ಮಿ ಗೆ ಕಡಿಮೆ ಇಲ್ಲದಂತೆ,ಎರಡನೇ ಲೇನಿನಲ್ಲಿ ೬೦ ಕಿ ಮಿ ಗೆ ಕಡಿಮೆ ಇಲ್ಲದಂತೆ ಹಾಗು ಕಡೆಯ ಲೇನಿನಲ್ಲಿ ಗಂಟೆಗೆ ೪೦ ಕಿ ಮಿ ಮೀರದಂತೆ ವಾಹನದ ವೇಗ ಮಿತಿಯಿರುವುದು ಆ ರಸ್ತೆಯಲ್ಲಿ ಖಡ್ಡಾಯವೆ ಆಗಿರುವಾಗ ಬಚ್ಚೆಗೌಡರ ಗ್ರಧೃ ದೃಷ್ಟಿಗೆ ಅದು ಹೇಗೆ ತಪ್ಪಾಗಿ ಕಂಡಿತು? ಬಹುಷಃ ಅಡ್ವೋಕೇಟ್ ಆಗಿರುವ ಅವರು ಓದಿರುವ ಕಾನೂನಿನ ಪುಸ್ತಕಗಳಲ್ಲಿ ಅದು ಅಪರಾಧದ ಕಲಾಂನೊಳಗೆ ಬರುತ್ತದೋ ಏನೋ? ತಿಳಿದವರಾದ ಅವರು ಅಲ್ಪಜ್ನ್ಯರಾದ ನಮಗೆಲ್ಲ ತಿಳಿಸಿ ಪುಣ್ಯ ಕಟ್ಟಿ ಕೊಳ್ಳಬೇಕಿದೆ.



ಕಟ್ಟಾ ಕಡೆಯದಾಗಿ ಭರತ್ ಕುಡಿದು ಚಾಲನೆ ಮಾಡಿದ್ದರೆ ಎನ್ನುವುದು ಸಚಿವರ ಆರೋಪ..ಹಾಗಿದ್ದಲ್ಲಿ ನೆಲಮಂಗಲ ಪೊಲೀಸ್ ಥಾನೆಯಲ್ಲಿ ಭರತ್ ವಿರ್ರುದ್ಧ ದೂರು ನೀಡಿದಾಗ ವೈದ್ಯಕೀಯ ಪರೀಕ್ಷೆಗೆ ಅವರನ್ಯಾಕೆ ಒಳಪದಿಸಲಿಲ್ಲ ( ಸ್ವತಹ ಮಧುಮೇಹಿ ಯಾಗಿರುವ ಭರತ್ ಗೆ ಆ ಕ್ಷಣ ನಿಜವಾಗಿ ವೈಧ್ಯಕೀಯ ನೆರವು ಬೇಕಿತ್ತು!).ಅಲ್ಲದೆ ಥಾನೆಯಲ್ಲಿ ಅತಿವೇಗದ ಚಾಲನೆಯ ದೂರಷ್ಟೇ ದಾಖಲಾಗಿದೆ ಪಾಪ ವಾಸನೆ ಕಂಡು ಹಿಡಿದ ಸಚಿವರ ಮೂಗಿಗೆ ಬೆಲೆಯೇ ಇಲ್ಲ! (ಸದರಿ ಘಟನೆ ನಡೆದ ಸ್ಥಳ ಬಿಡದಿ ಗ್ರಾಮಾಂತರ ವೃತ್ತ ವ್ಯಾಪ್ತಿಗೆ ಬರುವುದರಿಂದ ಪ್ರಕರಣ ಹಾಗು ದೂರನ್ನು ಕೂದೂರು ಠಾಣೆಗೆ ವರ್ಗಾಯಿಸಲಾಗಿದೆ).ಇತ್ತ ಥಾನೆಯಲ್ಲಿ ಇನ್ನೊಂದು ಸುತ್ತಿನ ಬೆದರಿಕೆ ಎದುರಿಸಿದ ಭರತ್ ರಿಂದ ಅವರು ಮಾಡದ ತಪ್ಪಿಗಾಗಿ ದಂಡವಾಗಿ ರೂ ೩೦೦ ಸುಲಿಯಲಾಗಿದೆ.



ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬದ ಮೇಲೆ ಆಗಾಗ ನೆಪ ಹುಡುಕಿ ಕೊಂಡು ಎರಗಿಸಲು ತಮ್ಮ ಬತ್ತಳಿಕೆಯಲ್ಲಿ ಈ 'ಬಚ್ಚಾಸ್ತ್ರ'ವನ್ನು ಸದಾ ಸನ್ನದ್ಧವಾಗಿ ಇಟ್ಟುಕೊಂಡಿರುವ ಮಾನ್ಯ ಮುಖ್ಯಮಂತ್ರಿ ಬೂಸಿಯರವರ ರಾಜಿನಾಮೆ ಕೇಳುವ ಶತಮಾನದ ಸವಕಲು ಜೋಕ್ ಮಾಡುವ ಉಮೇದು ಇಲ್ಲವಾದರೂ.ಕನಿಷ್ಠಪಕ್ಷ ನೈತಿಕತೆಯ ಆಧಾರದ ಮೇಲೆ ಬಚ್ಚೆಗೌಡರ ರಾಜಿನಾಮೆಯನ್ನೇಕೆ ಪಡೆಯಬಾರದು? ಅಥವಾ ಅಷ್ಟು ಅಧಿಕಾರ ವ್ಯಾಪ್ತಿ ಕುರ್ಚಿಗೆ ಅಂಟಿಕೊಂಡ ಮುಖ್ಯಮಂತ್ರಿಗಳಿಗೆ ಇಲ್ಲವೋ? ಇಂತಹ ಭಂಡರ ನಡುವೆ ಬೆಂಡಾಗಿರುವವ ಮಾತ್ರ ಬಡ ಬೋರೆಗೌಡ.ಓಟು ಕೊಟ್ಟು ಅಯೋಗ್ಯರನ್ನ ಅಧಿಕಾರಕ್ಕೆ ತಂದ ತಪ್ಪಿಗೆ ಇಂತಹ ಕಿರುಕುಳ ಗಳನ್ನೆಲ್ಲ ಅನುಭವಿಸಲೇ ಬೇಕಲ್ಲ.

No comments: