19 August 2010

ಬಚ್ಚೆಗೌಡರ ಪೌರುಷ ಪುರಾಣ part-3

"ಬಚ್ಚೆಗೌಡರು ತುಂಬಾ ಸಾತ್ವಿಕ ಮನುಷ್ಯರು.ಅವರು ಇಂತಹ ಅಪರಾಧ ಎಸಗೋದು ಅಸಾಧ್ಯ!?" ಹೀಗಂತ ಪುಕ್ಕಟೆ ಹೇಳಿಕೆ ನೀಡಿರುವವರು ಕರ್ನಾಟಕ ರಾಜ್ಯ ಸರಕಾರದ ಅಬಕಾರಿ ಸಚಿವ ರೇಣುಕಾಚಾರ್ಯ.ಈ ರೇಣುಕಾಚಾರ್ಯ ಎಂದರೆ ಯಾರು ಎಂಬ ಗೊಂದಲದಲ್ಲಿ ಬೀಳುವವರಿಗೆ ನರ್ಸ್ ರೇಣು,ರಸಿಕ ರೇಣು,ಕಿಸ್ಸರ್ ಕಿಂಗ್ ರೇಣು ಮುಂತಾದ ಸಮಾನಾರ್ಥಕ ಪದಗಳನ್ನು ಹೇಳಿದರೆ ಅವರ ಗೊಂದಲ ನಿವಾರಣೆಯಾಗಬಹುದು.ಮಾಜಿ ಮುಜುರಾಯಿ ಸಚಿವ ಮಾಲೂರು ಕೃಷ್ಣಯ್ಯ ಶಟ್ಟಿಯಿಂದ ತೆರವಾಗಿರುವ ರಾಜ್ಯ ಸಚಿವ ಸಂಪುಟದ ಆಸ್ಥಾನ ವಿದೂಷಕನ ಸ್ಥಾನದಲ್ಲಿ ಸದ್ಯ ವಿರಾಜಮಾನರಾಗಿರುವ ಈ ರೇಣು ಎಂಬ ಹೊನ್ನಾಳಿ ಬೀಜದ ಹೋರಿ ತುಂಬಾ ಕಾಳಜಿಯಿಂದ 'ಕಳ್ಳ ದೇವರಿಗೆ ಸುಳ್ಳ ಪುಜಾರಿ'ಯಂತೆ ಶ್ರೀಮಾನ್ ಬಚ್ಚೆಗೌಡರ ಬಗ್ಗೆ ಯಾರೇನು ಕೇಳದಿದ್ದರೂ ತಮ್ಮ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ.


ಇತ್ತ ಬಚ್ಚೆಗೌಡರಿಗೆ ಕಾಮಾಲೆ ಕಾಯಿಲೆಯಾಗಿರುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿವೆ.'ಸಿಎಂ ಹೇಳಿಕೆಗೆ ತಲೆಬಾಗಿ ವಿವಾದಕ್ಕೆ ಅಂತ್ಯ' ಹಾಡುವ ಮಾತನಾಡುತ್ತಲೆ 'ನಾನು ವಕೀಲ ದೇವದಾಸ್ ಜೂನಿಯರ್ ಆಗಿದ್ದೆ ಕಣ್ರೀ ;ಇಷ್ಟಕ್ಕೆ ಎಲ್ಲ ಮುಗೀತು ಅನ್ಕಾಬೇಡಿ...ಇದು ಅಂತ್ಯವಲ್ಲ ಆರಂಭ!' ಎಂಬ ವಿರೋಧಾಭಾಸದ ನುಡಿಮುತ್ತುಗಳನ್ನು ಥೇಟ್ ವಜ್ರಮುನಿ ಸ್ಟೈಲ್ ನಲ್ಲಿ ಗುಟುರು ಹಾಕುತ್ತಿರುವ ಈ ಮಾಜಿ ಅಡ್ವೋಕೇಟ್ ಸಚಿವರಿಗೆ ತಮ್ಮ ವಿರುದ್ಧ ಸುದ್ಧಿ ಪ್ರಕಟಿಸಿದ "ವಿಜಯ ಕರ್ನಾಟಕ" ಪೀತ ಪತ್ರಿಕೆಯಾಗಿ ಕಂಡಿದೆ.ಉಳಿದೆಲ್ಲರಿಗೂ ಬಿಳಿ ಹಾಳೆಯ ಮೇಲೆ ಕಪ್ಪು ಮುದ್ರಣವಷ್ಟೇ ಕಾಣುತ್ತಿರುವಾಗ ಬಚ್ಚೆಗೌಡರಿಗೆ ಅದು ಅರಿಶಿನವಾಗಿ ಕಾಣಿಸುತ್ತಿದೆ ಎಂದಾದರೆ ಸಮಾಜದ ಹಿತ ದೃಷ್ಟಿಯಿಂದ ತುರ್ತಾಗಿ ಅವರಿಗೆ ಚಿಕತ್ಸೆಯೊಂದು ಬೇಕೆಬೇಕು ಅನ್ನಿಸುತ್ತೆ.ಸಾಲದ್ದಕ್ಕೆ ಅವರ ಮಾನ ಬೇರೆ ನಷ್ಟ ಆಗಿದೆಯಂತೆ,ಈ ಸಂಬಂಧ ಅವರು 'ವಿ ಕ' ದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತಾರಂತೆ! 'ಕಳೆದು ಕೊಳ್ಳುವಷ್ಟು ಮಾನ ಬಚ್ಚೆಗೌಡರ ಬಳಿ ಇದೆಯಾ?' ಎಂದು ಪತ್ರಕರ್ತ "ಅಗ್ನಿ" ಶ್ರೀಧರ್ ಪ್ರಶ್ನಿಸಿರುವುದು ಮಾರ್ಮಿಕವಾಗಿದೆ.



"ಹುಟ್ಟು ಗುಣ ಸುಟ್ಟರೂ ಹೋಗದು" ಎಂಬಂತೆ ತಮ್ಮ ಪಾಳೇಗಾರಿಕೆಯ ಗತ್ತಿಗೆ ಅಮಾಯಕರನ್ನು ಬಲಿಕೊಡುವ ಬಚ್ಚೆಗೌಡರು ತಮ್ಮನ್ನು ಹೊರತು ಪಡಿಸಿ ಉಳಿದ ಆರು ಕೋಟಿ ಕನ್ನಡಿಗರನ್ನು ಕೇವಲ ಬಚ್ಚಾಗಳು ಅಂದುಕೊಂಡಂತಿದೆ.ಜೊತೆಗೆ 'ಊಸರವಳ್ಳಿಗೆ ಬೇಲಿ ಸಾಕ್ಷಿ' ಎಂಬಂತೆ ಇತ್ತ ಸಹೋದ್ಯೋಗಿ ರಸಿಕ ಕುಲತಿಲಕ ರೇಣುಕಾಚಾರ್ಯನ ಶಿಫಾರಸ್ಸು ಬೇರೆ.ಮಾನ್ಯ ಮುಖ್ಯಮಂತ್ರಿಗಳಾದ ಬೂಸಿಯ ಮಾತ್ರ ಸಿಕ್ಕಾಪಟ್ಟೆ ನಿಶಕ್ತಿ ಹಾಗು ನರದೌರ್ಬಲ್ಯದಿಂದ ನರಳುತ್ತಿರುವಂತೆ ಕಾಣುತ್ತಿದ್ದು ತೀರ ತಮ್ಮ ಸಂಪುಟ ಸಹೋದ್ಯೋಗಿಗಳನ್ನೂ ಆಳಲಾರದಷ್ಟು ಅಸಹಾಯಕ ಪರಿಸ್ಥಿತಿಯಲ್ಲಿ ಇರುವಂತಿದೆ.ಇಂತಹ ತಾನು ತನ್ನ ಕುರ್ಚಿ ಭದ್ರ ಮಾಡಿಕೊಳ್ಳುವುದನ್ನು ಬಿಟ್ಟು ಧೀಮಂತವಾಗಿ ಈ ರಾಜ್ಯವನ್ನು ಆಳುತ್ತೇನೆ ಎಂದು ನಂಬಲು ಸ್ವತಹ ಅವರೇ ಸಿದ್ಧರಿದ್ದಂತಿಲ್ಲ! ಯಾರಾದರು ರಹಸ್ಯರೋಗಗಳ ರಣವೈದ್ಯರು ಇವರ ಈ ಅಸಹಾಯಕತಾ ಪೂರ್ವಕ ನಿಮಿರು ದೌರ್ಬಲ್ಯಕ್ಕೆ ಖಚಿತ ಕಾರಣ ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡಬೇಕಿದೆ.ಮಾನ್ಯ ಮುಖ್ಯಮಂತ್ರಿಗಳು ಇನ್ನು ಮುಂದೆ ಅವರ ಆಸ್ಥಾನ ವಿದೂಷಕ ಪಟ್ಟವನ್ನು ಓವರ್ ಟೇಕ್ ವೀರ ಬಚ್ಚೆಗೌಡರಿಗೆ ಕಿಸ್ಸಿಂಗ್ ಶೂರ ರೇಣುಕಾಚಾರ್ಯರೊಂದಿಗೆ ಹಂಚಿ ಕೊಡಲು ಅಡ್ಡಿಯಿಲ್ಲ.

No comments: