10 September 2010

ಒಂದು ಚರ್ಚೆ...

ಸಿನೆಮಾ ಒಂದು ಶೋ ಬಿಸನೆಸ್ ಆಗಿರುವುದರಿಂದ ಇಲ್ಲಿ ಅರ್ಥ-ಅನರ್ಥಗಳಿಗಿಂತ ಲಾಭ-ನಷ್ಟದ ಲೆಕ್ಖಾಚಾರಗಳೆ ಯಾವಾಗಲೂ ಮುಖ್ಯವಾಗುತ್ತವೆ.ಹೀಗಾಗಿಯೆ 'ಮುಂಗಾರು ಮಳೆಯೆ' 'ರತ್ತೋ ರತ್ತೋ ರಾಯನ ಮಗಳೆ' 'ನನ್ನ ಎದೆಯಲಿ ಇಟ್ಟ ನಾಲ್ಕು' 'ಒಂದೇ ಸಮನೆ ನಿಟ್ಟುಸಿರು' 'ಓ ಕನಸ ಜೋಕಾಲಿ' 'ಒಂದೊಂದೇ ಬಚ್ಚಿಟ್ಟ ಮಾತು' 'ಯಾರೋ ಯಾರೋ ಗೀಚಿದ' 'ದೂರ ಸ್ವಲ್ಪ ದೂರ'ಗಳಂತಹ ಸದಭಿರುಚಿಯ ಸಾಲು ಗೀಚಿದ ಯೋಗರಾಜಭಟ್ಟರ ಲೇಖನಿಯೇ 'ಹಳೆ ಪಾತ್ರೆ ಹಳೆ ಕಬ್ಣ' 'ಸ್ವಲ್ಪ ಸೌಂಡು ಜಾಸ್ತಿ ಮಾಡು' 'ಹೊಸ ಗಾನ ಬಜಾನ' 'ಲೈಫು ಇಷ್ಟೇನೆ' 'ಎಕ್ಕ ರಾಜ ರಾಣಿ' 'ಇಡ್ಲಿ ವಡೆ ತಿನ್ನೋದಕ್ಕೆ' 'ಪಂಚರಂಗಿ ಹಾಡುಗಳು' ತರಹದ ತಲೆಕೆಟ್ಟ ಸಾಲುಗಳನ್ನೂ ತಡೆ ಇಲ್ಲದೆ ಸುರಿಸುತ್ತವೆ.ಇಂತಹ ಅನರ್ಥಕಾರಿ ಹಾಡುಗಳು ಅಲ್ಪಾಯುಶಿ ಅನ್ನೋದು ಬೇರೆ ಮಾತು.


ಇಲ್ಲಿ ಅವರು ಹೀಗೂ ಬರಿತಾರೆ! ಎಂಬ ಅಚ್ಚರಿಯೇ ಅನಗತ್ಯ.ಹೀಗೆ ಬರೆದದ್ದು ಹಣ ಹುಟ್ಟುವ ಮೂಲವಾಗಿರುವುದರಿಂದಲೇ ಅವರು ಹೇಗೆ ಬೇಕಾದರೂ ಬರೀತಾರೆ ಅನ್ನುವ ಕಾಮನ್ ಸೆನ್ಸ್ ನಮಗಿರಬೇಕಷ್ಟೆ.ಇನ್ನು ಚರ್ಚೆಯ ವಿಚಾರ ಕೆಲಸಕ್ಕೆ ಬಾರದ ಕಾಡುಹರಟೆಗೆ ಚರ್ಚೆಯ ದರ್ಜೆ ಕೊಟ್ಟು ಚೂರು ಹೆಚ್ಚೇ ಗೌರವ ತೋರಿಸಿದ್ದು ನನ್ನದೆ ತಪ್ಪು.ಅದು ಹಾಗೇನೆ, "ಇಷ್ಟವಾದ್ದು ಚರ್ಚೆ, ಇಷ್ಟವಿಲ್ಲವಾದ್ದು ಅನವಶ್ಯಕ ಹರಟೆ, ಗಾಂಪರ ಗುಂಪಿನ ಮೂರ್ಖತನಗಳು:)" ಎಂಬ ಸಿನಿಕರ ಜಾತ್ರೆಯಲ್ಲಿ ಸರಿಯಾಗಿ ಮರ್ಮಕ್ಕೆ ಮುಟ್ಟುವಂತೆ ಮಾತನಾಡಿದವ ತಾನು ಹೇಳಲು ಹೊರಟಾಗ ಚರ್ಚೆಯನ್ನಗಿಸುತ್ತಲೂ,ತನಗೆ ಬೇಡವಾದಾಗ ಮೂರ್ಖರ ಪ್ರಲಾಪ ಅನ್ನುತ್ತ ಇರೋವಂತೆ ಕಾಣೋದು ಅವರವರ ಯೋಚನೆಯ ಮಿತಿಯೆ ಹೊರತು.ಹೇಳುವ ಬಡಪಾಯಿ ಎಷ್ಟು ಜನರ ಬಾಯಿ ತಾನೇ ಮುಚ್ಚಿಸಿಯಾನು!.

ಉಳಿದಂತೆ ಭಟ್ಟರ ಅಭಿರುಚಿಯ ವಿಷಯಕ್ಕೆ ಬಂದರೆ ಅದು ಕೆಟ್ಟಿದೆ ಎನ್ನುವ ವಾದ ನನಗೆ ಸಮ್ಮತವಲ್ಲ.ಏನೂ ಇಲ್ಲ ಅನ್ನುವ ಸಂಗತಿಗಳನ್ನೂ ಸೊಂಟದ ಕೆಳಗಿಳಿಸದೆ ತಮ್ಮ ಚಿತ್ರಗಳಲ್ಲಿ ಹೇಳುವ ಅವರ ಶೈಲಿ ಖಂಡಿತ ಸ್ಕೀಕಾರಾರ್ಹ."ಕಥೆಯಿಲ್ಲದ ಸಿನೆಮಾವನ್ನು ಅದ್ಧೂರಿಯಾಗಿಸೋದು ಹೆಣಕ್ಕೆ ಮಾಡುವ ಶೃಂಗಾರ" ಎನ್ನುವ ಪ್ರಕಾಶ್ ತರಹದ ತರುಣ ನಿರ್ದೇಶಕರೂ ಇದೇ ಕಾಲದಲ್ಲಿ ಚಾಲ್ತಿಯಲ್ಲಿರೋದೂ ಅಷ್ಟೇ ನಿಜ.ಇತ್ತೀಚಿಗೆ ಭಟ್ಟರ ಮನೆಯಾಕೆ ರೇಣುಕ ತಮ್ಮ ಮಗುವಿಗೆ 'ಪುನರ್ವಸು' ಎಂದು ಹೆಸರಿಟ್ಟಿರೋದಾಗಿ ಹೇಳಿದರು.ಅದೊಂದೇ ಸಾಕು ಭಟ್ಟರ ಸದಭಿರುಚಿಗೆ ಮೊಹರು ಹಾಕಲು.ನಾವೆಲ್ಲಾ ಮರೆತೆ ಬಿಟ್ಟಿರುವ ಮಳೆ ನಕ್ಷತ್ರ ಅವರ ಬಾಳಲ್ಲಿ ಮತ್ತೆ ಮೂಡಿ ಬಂದಿದೆ.ಅದು ಅವರ ಸಂಭ್ರಮ ಅನುಗಾಲ ಹೆಚ್ಚಿಸಲಿ.


ಇನ್ನೊಂದು ಸಂಗತಿಯನ್ನ ಇಲ್ಲಿ ನೆನಪಿಸಿಕೊಳ್ಳೋದು ಉಚಿತ ಅನ್ನಿಸುತ್ತೆ.ಅದು ಭಟ್ಟರ ಅಂದು ಕೊಂಡದ್ದನ್ನು ಸಾಧಿಸುವ ಸ್ವಭಾವ.'ಮುಂಗಾರು ಮಳೆ' ತೆರೆಕಂಡು ಹೆಸರು ಮಾಡುತ್ತಿದ್ದ ಹೊತ್ತದು.'ಹೊಸ ದಿಗಂತ'ದ ಯುಗಾದಿ ವಿಶೇಷಾಂಕಕ್ಕಾಗಿ ನಮ್ಮ ಮನೆ ಸಮೀಪದ 'ಹೋಟೆಲ್ ಇಂದ್ರಪ್ರಸ್ಥ'ದಲ್ಲಿ ಭಟ್ಟರನ್ನ ಸಂದರ್ಶಿಸುವಾಗ ದಿಗಂತನನ್ನು ಹಾಲಿ'ವುಡ್' ನಟನೆಂದು ಛೇಡಿಸಿದ್ದೆ.ಆದರೆ ಭಟ್ಟರು ಅದನ್ನೇ ಸವಾಲಾಗಿ ತೆಗೆದು ಕೊಂಡರಷ್ಟೇ ಅಲ್ಲ ತಮ್ಮ ಮುಂದಿನ ಎರಡು ಸಿನೆಮಾಗಳಿಗೆ ಆತನೇ ನಾಯಕ ಎಂದು ಅಲ್ಲಿಯೆ ಘೋಷಿಸಿಬಿಟ್ಟರು! ದಿಗಂತ ಇನ್ನೂ ಚಡ್ಡಿ ಹಾಕಲು ಬಾರದ ವಯಸ್ಸಿನಿಂದಲೆ ನನಗೆ ಪರಿಚಿತ,ಅವನ ಅಣ್ಣ ಆಕಾಶ್ ಶಾಲೆಯಲ್ಲಿ ನನಗಿಂತ ಒಂದು ತರಗತಿ ಮುಂದಿದ್ದ ಇವನು ನನಗಿಂತ ವರ್ಷಕ್ಕೆ ಜೂನಿಯರ್.ಯಾವಾಗಲೂ ಬೇಬಿಫುಡ್ ನ ಮಾಡಲ್ ನಂತೆ ನನ್ನ ಕಣ್ಣಿಗೆ ಕಾಣಿಸುವ ದಿಗಂತ ನನ್ನ ಪ್ರಕಾರ ಉತ್ತಮ ನಟನಲ್ಲ,ರೂಪದರ್ಶಿಯಾಗಲು ಹೇಳಿ ಮಾಡಿಸಿದಂತಿದ್ದಾನೆ.ಹೀಗಿದ್ದರೂ ನಟನಾಗಿ ಅವನ ವೃತ್ತಿ ಬದುಕಿನ ಮೊದಲ ಸಂದರ್ಶನ ತೆಗೆದುಕೊಂಡಿದ್ದು ನಾನೆ; 'ಕರ್ಮವೀರ'ದಲ್ಲಿ ನಾನು ಬರೆಯುತ್ತಿದ್ದ ಸಿನೆಮಾ ಅಂಕಣದಲ್ಲಿ ಅದು ಪ್ರಕಟವಾಗಿತ್ತು.ಇನ್ನು ಒಂದು ಪ್ರಕರಣ 'ಗಾಳಿಪಟ'ತೆರೆ ಕಂಡ ಹೊಸತರಲ್ಲಿ ನಡೆದಿದ್ದು.'ವಿಜಯ ಕರ್ನಾಟಕ'ದ ಸಾಪ್ತಾಹಿಕ ಪುರಾವಣೆಗೆ ನಾನು ಹಾಗು ರುದ್ರಪ್ರಸಾದ್ ಒಟ್ಟಾಗಿ ಸೂರಿ ಜೊತೆಗೆ ಭಟ್ಟರನ್ನು ಸಂದರ್ಶಿಸಿದ್ದೆವು (ಸದರಿ ಸಂದರ್ಶನದಲ್ಲಿ ನಾನು ಕೇವಲ ಛಾಯಾಗ್ರಾಹಕ ಮಾತ್ರ ,ಅಸಲು ಸಂದರ್ಶಕ ರುದ್ರಪ್ರಸಾದ್ ಶಿರಂಗಾಲ.ಇದೇ ಸಂದರ್ಶನದ ಲೇಖನ ರೂಪಾಂತರ ನಂತರ "ವಿಕ್ರಾಂತ ಕರ್ನಾಟಕ'ದಲ್ಲೂ ಪ್ರಕಟವಾಗಿತ್ತು).ಆಗಲೂ ನಾನು ದಿಗಂತನ ನಟನೆಯನ್ನು ಟೀಕಿಸಿದ್ದೆ.ಪುನೀತ್ ಜೊತೆ 'ಲಗೋರಿ'ಆಡುವ ಭಟ್ಟರ ಕನಸು ಕೆಟ್ಟಿದ್ದ ದಿನಗಳವು.ಆಗಲೂ ಭಟ್ಟರು ಮುಂದಿನ 'ಮನಸಾರೆ'ಗೂ ಅವನನ್ನೇ ಆಯ್ದುಕೊಂಡರು.ಅನಂತರ 'ಮಂಗಳ'ದ ದೀಪಾವಳಿ ವಿಶೇಷಾಂಕಕ್ಕಾಗಿಯೂ ಅವರನ್ನು ಮಾತನಾಡಿಸಿದ್ದೆ ಯಥಾಪ್ರಕಾರ ಅವರ ಸಿನೆಮಾ ನಾಯಕನ ಕೃತಕ ನಟನೆಯ ಬಗ್ಗೆ ನನ್ನ ಲೇವಡಿಇತ್ತು.ಆದರೆ 'ಪಂಚರಂಗಿ'ಯಲ್ಲೂ ಮರಳಿ ದಿಗಂತನೆ ನಾಯಕ ಪಾತ್ರಕ್ಕೆ ಅವರ ಆಯ್ಕೆಯಾಗಿದ್ದ.ಈ ನಾಲ್ಕೂ ಚಿತ್ರಗಳಲ್ಲಿ ಗಮನಿಸುತ್ತ ಬಂದಿದ್ದೇನೆ ಒಬ್ಬ ನಟನಾಗಿ ದಿಗಂತ ಸುಧಾರಣೆಯ ಹಾದಿಯಲ್ಲಿದ್ದಾನೆ (ಹಿಂದೊಮ್ಮೆ ಏಕ್ತಾ ಕಪೂರ್ ತಮ್ಮ ಧಾರಾವಾಹಿಗಳ ಸರಣಿ ನಟನಾಗಿ ದಿನಕ್ಕೊಂದು ಲಕ್ಷದ ಸಂಭಾವನೆಯ ಮೇಲೆ ನಟಿಸಲು ಕೇಳಿದಾಗ ; ಹಿಂದಿ ಬಾರದು ಎಂದು ಹೆದರಿ ಹಿಂಜರಿದ ಪೆಕರ ಇವನೇನ? ಅನ್ನಿಸುವಷ್ಟು ಮಟ್ಟಿಗೆ!)' ಇದ್ದಕ್ಕೆಲ್ಲ ಅವನು ಭಟ್ಟರಿಗೆ ಋಣಿಯಾಗಿರಬೇಕು.ಇದು ಭಟ್ಟರು ಹಿಡಿದ ಕೆಲಸ ಬಿಡದೆ ಸಾಧಿಸುವ ಅವರ ಛಲದ ಕುರಿತಿರುವ ಪುರಾವೆ.


ಇದುವರೆಗೂ ಯೋಗರಾಜ ಭಟ್ಟರು ಗೀಚಿದ ಕವಿತೆಗಳಲ್ಲಿ ನನಗೆ ಅತ್ಯಂತ ಆಪ್ತವಾದ ಕವನದ ಹೆಸರು 'ಕನ್ನಡಿಯಂಗಡಿಯಲ್ಲಿ...'.ಎರಡುವರ್ಷದ ಹಿಂದೆ 'ಕನ್ನಡ ಪ್ರಭ'ದ ದೀಪಾವಳಿ ವಿಶೇಷಾಂಕದಲ್ಲಿ ಅದು ಪ್ರಕಟವಾಗಿತ್ತು ( ಅದೇ ಸಂಚಿಕೆಯಲ್ಲಿ ನಟ ರಮೇಶ್ ಬರೆದ ಒಂದು ಕಥೆಯೂ ಇತ್ತು).ತುಂಟತನದಿಂದ ಕೂಡಿದ್ದ,ಕನ್ನಡಿಗಳಿಗೂ ಒಂದು ವ್ಯಕ್ತಿತ್ವ ಆರೋಪಿಸಿ ಬರೆದಿದ್ದ ಕವಿತೆ ಅದು.ಸಿನೆಮಾ ಭಾಷೆಯಲ್ಲಿ ಹೇಳಬೇಕಾದರೆ 'ಮೀಟರ್'ನ ಹಂಗಿಲ್ಲದ ಸರಾಗ ಕವನ ಎನ್ನುವ ಕಾರಣಕ್ಕಾಗಿ ಬಹುಷಃ ಆ ಕವನದ ಹರಿವು ಕೇವಲ ಪದಗಳ ಚಮತ್ಕಾರಕ್ಕಷ್ಟೆ ಸೀಮಿತವಾಗಿರಲಿಲ್ಲ.ಹೀಗೆ ಕವಿಯಾಗಿ ಪರಿಚಿತರಾದ ಭಟ್ಟರು 'ಘಾ'ಯಕರಾಗಲು ಹೊರಟಾಗ ಕೇಳುಗರಿಗೆ ಅಂಗಿ ಹರಕೊಳ್ಳುವಂತಾಗೋದೂ ಅಷ್ಟೇ ನಿಜ.'ಮಿಸ್ಸಿಸಿಪ್ಪಿ ಮಸಾಲ'ದಿಂದ ಕಥೆಯೊಂದಿಗೆ ಹಿನ್ನೆಲೆ ಬಂಬೋ ಸಂಗೀತವನ್ನೂ ಎಗರಿಸಿ,ಸಾಲದ್ದಕ್ಕೆ ಮೂಗಿನಲ್ಲಿ ಹಾಡಿ ಅವರು ಕೊಡುವ ಹಿಂಸೆಗೆ ಕ್ಷಮೆಯಿಲ್ಲ!

ಒಂದು ಯಕಶ್ಚಿತ್ ಹರಟೆಗೆ ಇಷ್ಟೆಲ್ಲಾ ದೀರ್ಘ ವಿವರಣಾತ್ಮಕ ಉತ್ತರ ಕೊಡುವುದು ಸಾಧುವೂ ಅಲ್ಲ.ಅಷ್ಟು ಸಮಯ-ತಾಳ್ಮೆ ನನ್ನಲ್ಲೂ ಇಲ್ಲ ಎನ್ನುವುದು ನಿಜವಾದರೂ.ನನ್ನ ದೃಷ್ಟಿ ಕೋನದ ಬಗ್ಗೆ ಅಪಾರ ಅರ್ಥಮಾಡಿಕೊಂಡಿರುವ ಮೇಧಾವಿಗಳಿಗೆ ನನ್ನ ಅಸಲು ಬಿನ್ನಹದ ಅರಿಕೆ ಮಾಡುವ ಉದ್ದೇಶದಿಂದಷ್ಟೇ ಇದನ್ನು ವಿವರಿಸಿದ್ದು.ಇದನ್ನು ಅತಿಮರ್ಯಾದೆಯನ್ನಾಗಿ ಅಪಾರ್ಥ ಮಾಡಿಕೊಂಡರೆ.once again ಅದು ನನ್ನ ತಪ್ಪಲ್ಲ.

No comments: