ಖೂಳರ ಕಾರಸ್ಥಾನವಾಗುತ್ತಿದೆ ದಿನ ನಿತ್ಯದ ಬಾಳು,
ಯಾರು ತಾನೆ ಕೇಳಿಯಾರು ಹೇಳಿ?
ಪ್ರತಿದಿನ ಸತ್ತು ಸುಣ್ಣವಾಗುವವರ ಗೋಳು!
ಧರ್ಮದ ಹೆಸರಿನಲ್ಲಿ ಉದ್ದಿಮೆ ನಡೆಸುವ
ಕಾಣಿಕೆಯ ಕೋಟಿ ರೂಪಾಯಿಗಳ ಕಾಸಿನಲ್ಲೆ
ಸಾಮ್ರಾಜ್ಯ ಕಟ್ಟಿ ಮೆರೆಯುವ
ತನ್ನನ್ನ ತಾನೆ ಧರ್ಮಕ್ಕೆ ಅಧಿಕಾರಿಯಾಗಿ
ಸ್ವಘೋಷಿತ ಪ್ರವಾದಿಯಂತೆ ಉದ್ಭವಿಸಿರುವ ನೀಚ
ಕಾಮಾಂಧರ ಪಡೆಯ ಕಮಾಂಡರನಾಗಿದ್ದರೂ
ಖಾವಂದನೆಂದು ಪೊಡಮಡುವ ಮೂಢರು.
ಧರ್ಮವನ್ನೆ ತನ್ನ ಅಸ್ತಿತ್ವಕ್ಕೆ ನೆಲೆಯಾಗಿಸಿಕೊಂಡು
ಯಾರೂ ಒಪ್ಪಿಸಿರದಿದ್ದರೂ ತನಗೆ ತಾನೆ
ಅದರ ಗುತ್ತಿಗೆ ಪಡೆದುಕೊಂಡುˌ
ದೇಶ ಮುನ್ನಡೆಸುವ ಬದಲು
ದೇಶವಾಸಿಗಳ ನಡುವೆಯೆ
ತಂದಿಟ್ಟು ಅವರರವರೆ ಹೊಡೆದಾಡಿಕೊಂಡು
ಸಾಯಲು ಪುಸಲಾಯಿಸುವ ತಿದಿಯೊತ್ತಿ.
ಹಾಗೆ ಸತ್ತವರ ಚಿತೆಯ ಉರಿಯಲ್ಲಿ
ತನ್ನ ಮೋಟು ಬೀಡಿ ಹೊತ್ತಿಸಿಕೊಳ್ಳುವ
ನಿಷ್ಕೃಷ್ಟನ "ಭಾರತ ಭಾಗ್ಯ ವಿಧಾತ"
ಎಂದೆ ನಂಬಿ ಆ ಅಧಮನ
ಮಹಿಮೆಯ ಕೂತಲ್ಲಿ-ನಿಂತಲ್ಲಿ ಕೊಂಡಾಡುವರು.
ರಾಜಕೀಯವೆಂಬುದು ಕಾಸು ಕೊಳ್ಳೆ ಹೊಡೆವ ಉದ್ಯಮ
ವ್ಯಥೆಯ ಧ್ವನಿಯಲ್ಲಿ "ಅದು ಹಾಗಲ್ಲಣ್ಣ" ಅನ್ನುವವರೆ
ಈಗಿಲ್ಲಿ ಇಂತವರ ನಡುವಿನ ಅಧಮˌ
ಹಸಿದು ಹೊಟ್ಟೆ ಪಾಡಿಗೆ ಕೈಯೊಡ್ಡುವವನ
ಹಂಗಿಸಿ ಬೆರೆಸಾಡುವ ಮಂದಿ.
ಅದೆˌ ಸರಕಾರಿ ಖಜಾನೆಗೆ ಕನ್ನ ಕೊರೆದು ಕೊಬ್ಬುವವನ
ಧರ್ಮದ ಮಂಕುಬೂದಿ ಎರಚಿ
ಮೈ ಬಗ್ಗಿಸಿ ದುಡಿಯಲೊಲ್ಲದೆ ಕೂತಲ್ಲೆ
ಪರಪುಟ್ಟನಾಗಿ ತನ್ನ ತಿಕದ ಛರ್ಬಿ ಹೆಚ್ಚಿಸಿಕೊಳ್ಳುವವನ ಉಧೋ ಉಧೋ ಎಂದು ಬಹುಪರಾಕು ಊಳಿಡುವ
ಮತಿಸತ್ತವರ ನೇರ ಮೆದುಳಿಗೇನೆ ಲಕ್ವಾ ಹೊಡೆದಿರುವ
ಮಾನಸಿಕ ಪಾರ್ಶ್ವವಾಯು ಪೀಡಿತರ ಮಂದೆ.
ಕೇವಲ ಬೆವರಲ್ಲ ರಕ್ತ ಸುರಿಸಿ
ಗೇಯ್ದು ಪೈಸೆ ಪೈಸೆ ತೆರಿಗೆ ಕಟ್ಟುವ ಶ್ರಮಜೀವಿಯ
ಕಡು ಕಷ್ಟದ ದುಡಿಮೆಯ ದುಡ್ಡಲ್ಲಿ
ಸಂಸತ್ತಿನಲ್ಲಿ ತಿರುಪೆ ಶೋಕಿ ಮಾಡಿಕೊಂಡು
ಪ್ರಭುಗಳು ಮತ್ತವರ ಪಟಾಲಂ
"ವಂದೆ ಮಾತರಂ" ಗೀತೆಯ ಮೇಲೆ
ದಿನಗಟ್ಟಲೆ ಹಣ-ಸಮಯ
ವ್ಯರ್ಥಗೊಳಿಸಿ ಅನಗತ್ಯ ಒಣಚರ್ಚೆ ಅಲ್ಲ ಕಣ್ರಪ್ಪ
ನಡೆಸ ಬೇಕಿರೋದು ಈ ಹೊತ್ತಿಗೆ,
ಅತ್ತ ಹಸಿದು ಸಾಯದಂತೆ
ಇತ್ತ ಅದನ್ನೊಂದನ್ನೆ ನಂಬಿ
ಬದುಕಲೂ ಆಗದಂತೆ
ಕುಟುಂಬಕ್ಕೆ ಐದು ಕಿಲೋ ಸೊಸೈಟಿ ಅಕ್ಕಿಯ
ಭಿಕ್ಷೆ ಎಸೆದು ಅಂಟದಂತೆ ತಡೆಯಲಾಗಿದೆ
ಬಡವರ ಬೆನ್ನು ಹೊಟ್ಟೆಗೆ.
ಪ್ರಜೆಗಳೆಂಬ ಜೀವಂತ ನಡೆದಾಡುವ ಶವಗಳˌ
ಜ್ವಲಂತ ಸಮಸ್ಯೆಗಳ ನೈಜ ಬದುಕು
ನೀನು-ನಾನೆನ್ನದೆ ನಮ್ಮೆಲ್ಲರನ್ನೂ
ಹಿಂಡಿ ಹಿಪ್ಪೆ ಮಾಡಿ ಹೈರಾಣಾಗಿಸಿರೋವಾಗ
ಒಂದಾಗಿ ಭ್ರಾತೃತ್ವ ಬೆಳೆಸಿ ಕೊಂಡು
ನಮ್ಮ-ನಿಮ್ಮ ಹಿರಿಯರಂದು ಕಟ್ಟಿ ಕೊಟ್ಟಿರುವ
ಈ ದೇಶವನ್ನ ಉಳಿಸಿ-ಬೆಳೆಸಿಕೊಂಡು
ಹೋಗುವುದು ಇಂದಿನ ತುರ್ತು ಅಗತ್ಯ.
"ದ್ವೇಷ"ಪ್ರೇಮವಲ್ಲ ಕಾಣಿರೋ
ದೇಶಪ್ರೇಮವಷ್ಟೆ ಅಂತಿಮ ಸತ್ಯ.
ಖೂಳರ ಕಾರಸ್ಥಾನವಾಗುತ್ತಿದೆ ದಿನ ನಿತ್ಯದ ಬಾಳು,
ಯಾರು ತಾನೆ ಕೇಳಿಯಾರು ಹೇಳಿ?
ಪ್ರತಿದಿನ ಸತ್ತು ಸುಣ್ಣವಾಗುವವರ ಗೋಳು!
- 🙂
No comments:
Post a Comment