12 November 2008

ಡಾ ವರ್ಗೀಸ್ ಕುರಿಯನ್ ತಮ್ಮ ಮೊಮ್ಮಗ ಸಿದ್ಧಾರ್ಥನಿಗೆ ಬರೆದ ಆತ್ಮೀಯ ಪತ್ರ.

ನನ್ನ ಪ್ರೀತಿಯ ಸಿದ್ಧಾರ್ಥ,

ನಿನಗೆ ಯಾವಾಗ ನಾನು ಬರೆದದ್ದು? ಜ್ಞಾಪಿಸಿಕೊಳ್ಳುವುದು ಕೂಡ ನನಗೆ ಕಷ್ಟವಾಗುತ್ತಿದೆ! ವೇಗವಾಗಿ ಓಡುತ್ತಿರುವ ಇಂದಿನ ಪ್ರಪಂಚದಲ್ಲಿ ತಕ್ಷಣದ ಸಂಪರ್ಕಕ್ಕೆ ಮೊಬೈಲನ್ನು ನಾವು ಬಳಸುತ್ತೇವೆ. ಫೋನಿನಲ್ಲಿ ಮಾತನಾಡಿದ ತಕ್ಷಣ ಮಿಂಚಿ ಮರೆಯಾಗುವಂತ ಸಂತೋಷವೇನೋ ಸಿಗುವುದು ನಿಜ. ಆದರೆ ಬರವಣಿಗೆಯ ಛಾಪೆ ಬೇರೆ. ಬರವಣಿಗೆ ಅದು ಕೇವಲ ಪತ್ರವೆ ಇರಲಿ, ನಮ್ಮ ಇಂದಿನ ತಾಪತ್ರಯಗಳು ಹಾಗೂ ಇಂದು ನಮ್ಮ ಸುತ್ತಮುತ್ತ ನಡೆಯುತ್ತಿರುವ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಆ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಶೇಖರಿಸಿ ವರ್ಷಗಳುರುಳಿದಂತೆ ಓದಿ ಆನಂದಿಸುವ ಆಸ್ತಿಯಾಗುತ್ತದೆ.

ಮುಂದೆ ಬರಲಿರುವ ಅಧ್ಯಾಯಗಳು ಪತ್ರಕ್ಕಿಂತ ಹೆಚ್ಚಿನವು. ನೀನು ಇದನ್ನು ಇಡಿಯಾಗಿ ಓದ ಬಯಸದೆ ಇರಬಹುದು. ಆದರೆ ಹತ್ತಾರು ವರ್ಷ ಕಳೆದ ನಂತರ ಈ ಟಿಪ್ಪಣಿಗಳನ್ನು ಎತ್ತಿಕೊಂಡು ನೀನು ನೋಡಿದಾಗ ನಾನು ಏನು ಮಾಡಿದೆ? ಎಂಬುದರ ಅಂತರಾರ್ಥ ಹಾಗು ನಮ್ಮ ದೇಶದ ರೈತರ ಸೇವೆಗೆ ತೊಡಗಿದುದರ ಕಾರಣ ತಿಳಿಯಬಹುದು. ಇಪ್ಪತ್ತೊಂದನೆಯ ಶತಮಾನಕ್ಕೆ ಪ್ರಪಂಚ ಕಾಲಿಡುವ ಮುನ್ನ ಅಮೂಲ್ಯವಾದ ಆ ದಿನಗಳು ನಿನಗೆ ಆಗ ಗೋಚರಿಸುತ್ತವೆ. ಆವಾಗ ನನ್ನ ನೆನಪುಗಳನ್ನು ನಿನ್ನ ಪೀಳಿಗೆಯ, ಇಲ್ಲವೆ ನಿನಗಿಂತ ಕಿರಿಯರಿಗೋ ನಿನ್ನ ಅಜ್ಜಿ ಅಜ್ಜಂದಿರು ಬಾಳಿದ ಮತ್ತು ತಿಳಿದಿದ್ದ ಪ್ರಪಂಚವನ್ನು ಹಂಚಿಕೊಳ್ಳಬಹುದು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದೊಡನೆ ನಾನು ನನ್ನ ವೃತ್ತಿ ಜೀವನವನ್ನು ಆರಂಭಿಸಿದೆ. ಅಂದಿನ ದಿನಗಳಲ್ಲಿ ನಮ್ಮ ಕನಸಿನ ಭಾರತದ ಜನ ಸಾಮಾನ್ಯರು ತಲೆಯೆತ್ತಿ ಮೆರೆಯುವುದೆ ಅಲ್ಲದೆ, ನಾವು ಈ ದೇಶವನ್ನು ಕಟ್ಟಲು ಯಾವುದೆ ಮಾರ್ಗದಲ್ಲಿ ನಮ್ಮ ಕೊಡುಗೆಗಳನ್ನು ಕೊಡುವುದೆ ಶ್ರೇಷ್ಠ ಕಾರ್ಯವೆಂದು ತಿಳಿದಿದ್ದೆವು. ನಮ್ಮ ಜನ ಪರಸ್ಪರ ಗೌರವ ಮತ್ತು ಸ್ನೇಹ - ಪ್ರೇಮದಿಂದ ಬಾಳುವ ದೇಶ ನಮ್ಮದಾಗಬೇಕು. ಮುಂದುವರೆದ ರಾಷ್ಟ್ರಗಳಲ್ಲಿ ಮೊದಲ ಪಂಕ್ತಿಯಲ್ಲಿ ಪರಿಗಣಿತವಾಗಬೇಕು ಎಂಬ ಆಸೆಯಿತ್ತು. ಒಂದು ರೀತಿಯ ಬಾಳನ್ನು ಆಯ್ಕೆ ಮಾಡಿಕೊಂಡಾಗ ಇನ್ನಿತರ ಆಯ್ಕೆಗಳು ಅದೆಷ್ಟೆ ಆಕರ್ಷಕವಾಗಿದ್ದರೂ ಬದಿಗಿರಿಸುವುದು ಅನಿವಾರ್ಯ ಎಂಬ ಅರಿವಿನ ವಿನೀತ ಭಾವ ನನ್ನಲ್ಲಿ ಮೂಡಿತು. ಈ ಪರಿವರ್ತನೆ ಸಾಧ್ಯವಾದದ್ದು ಐವತ್ತು ವರ್ಷಗಳ ಹಿಂದೆ ತಮ್ಮ ಜೀವನದ ಮೇಲೆ ಹತೋಟಿ ಸಾಧಿಸಿ ಸ್ವಾವಲಂಬಿಗಳಾಗಲು ಯತ್ನಿಸುತ್ತಿದ್ದ ಹೈನುಗಾರ ರೈತರ ಒಂದು ಸಣ್ಣ ಸಹಕಾರಿ ಸಂಘಕ್ಕೆ ಕೆಲಸ ಮಾಡಲು ಒಪ್ಪಿದಾಗ.


ಪ್ರಾಮಾಣಿಕವಾಗಿ ಹೇಳುವದಾದರೆ ನನ್ನ ವೃತ್ತಿ ಬಾಳ್ವೆ ನಮ್ಮ ನಾಡಿನ ರೈತರ ಸೇವೆಗಾಗಿ ಎಂದು ನಾನು ಎಂದೂ ತೀರ್ಮಾನಿಸಿರಲಿಲ್ಲ. ಆದರೆ ಅದು ಹೇಗೊ ಘಟನೆಗಳ ಸರಮಾಲೆ ನನ್ನನ್ನು ಒಂದು ಗೊತ್ತಾದ ಸ್ಥಳಕ್ಕೆ ಸರಿಯಾದ ಸಮಯದಲ್ಲಿ ತಲುಪಿಸಿತು. ಓದಿದ್ದ ಮೆಟಲರ್ಜಿಯ ಬಲದಿಂದ ಯಾವುದಾದರೂ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿ ಅದರ ಸಿಇಓ ಆಗಬಹುದಿತ್ತು, ಇಲ್ಲವೇ ಸೈನ್ಯಕ್ಕೆ ಸೇರಿ ಬಹುಷಃ ಜನರಲ್ ಆಗಿ ನಿವೃತ್ತನಾಗಬಹುದಿತ್ತು. ಆದರೆ ನಾನು ಇವ್ಯಾವುದನ್ನೂ ಆಯ್ಕೆ ಮಾಡಿಕೊಳ್ಳಲಿಲ್ಲ. ಏಕೆಂದರೆ ಆಳದಲ್ಲೆಲ್ಲೋ ನಾನು ಇಲ್ಲಿ ಅಂದರೆ ಗುಜರಾತಿನ ಆನಂದ್'ನಲ್ಲಿ ಒಂದು ಅರ್ಥಪೂರ್ಣ ಕೊಡುಗೆಗಾಗಿ ದುಡಿಯುವುದು ಸಾಧ್ಯ ಎಂಬ ಅರಿವು ನನಗಿತ್ತು. ನಿನ್ನ ಅಜ್ಜಿ ಕೂಡ ಈ ನನ್ನ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಳು. ಆ ದಿನಗಳಲ್ಲಿ ನಾವಿಂದು ಸಾಮಾನ್ಯ ಸೌಲಭ್ಯಗಳೆಂದು ಪರಿಗಣಿಸುವ ಸವಲತ್ತುಗಳೂ ಅಲ್ಲಿ ಅಲಭ್ಯ. ಆದರೂ ಅವಳು ಅಲ್ಲೆ ನನ್ನೊಂದಿಗೆ ವಾಸಿಸಿ, ಅಲ್ಲಿಯೆ ಬದುಕ ಕಟ್ಟುವ ನನ್ನ ಆಯ್ಕೆಯನ್ನು ಮನಸಾರೆ ಬೆಂಬಲಿಸಿದಳು. ನನ್ನ ಬೆಂಗಾವಲಾಗಿ ನಿಂತ ನಿನ್ನ ಅಜ್ಜಿಯ ಆಯ್ಕೆ ನನಗೆ ನೀಡಿದ ಮಾನಸಿಕ ಶಕ್ತಿಯಿಂದಲೇ ಎಲ್ಲ ಮಹತ್ವದ ಹೆಜ್ಜೆಗಳನ್ನು ಹಿಂಜರಿಯದೆ ಮುನ್ನಡೆಸಿತು.

ದೇಶದ ಪ್ರಗತಿಗೆ ಸಂದ ನನ್ನ ದುಡಿಮೆಯನ್ನು ಗುರುತಿಸಿ ಸನ್ಮಾನಿಸಿದಾಗಲೆಲ್ಲ ಅನೇಕ ಜನರ ಸಾಧನೆಗಳಿಗೆ ನನ್ನ ಮೂಲಕ ಸಂದ ಮನ್ನಣೆಯಿದು ಎಂಬುದನ್ನೂ ಒತ್ತಿ ಒತ್ತಿ ಹೇಳುತ್ತೇನೆ ಹಾಗೂ ನನ್ನವೆ ಆದ ಕೆಲವು ಮೂಲ ಮೌಲ್ಯಗಳೂ ಇವಕ್ಕೆ ಕಾರಣ. ನನ್ನ ತಂದೆ ತಾಯಿಗಳ - ಕುಟುಂಬದ ಹಿರಿಯರ, ಆನಂದಿನ ನನ್ನ ಮಾರ್ಗದರ್ಶಕ ತ್ರಿಭುವನದಾಸ್ ಪಟೇಲರಲ್ಲಿ ನಾನು ಕಂಡ ಮೌಲ್ಯಗಳೂ ಇದರ ಹಿಂದಿವೆ. ಒಟ್ಟಾರೆ ಹೇಳ ಬೇಕೆಂದರೆ ಪ್ರಾಮಾಣಿಕತೆ, ತನಗೆ ತಾನು ಪ್ರಾಮಾಣಿಕನಾಗಿರುವುದು. ನೀನೂ ಸದಾ ನಿನಗೆ ಪ್ರಾಮಾಣಿಕನಾಗಿದ್ದರೆ ಇತರರೊಂದಿಗೂ ಹಾಗೆಯೇ ಇರಲು ಕಷ್ಟವಾಗಲಾರದು.


ನಾನು ಅರಿತಂತೆ ಒಂದು ದಿನ ಖಂಡಿತ ನೀನೂ ಜೀವನ ಎಂಬುದೊಂದು ಸುಯೋಗ, ಇದನ್ನು ಹಾಳು ಮಾಡುವುದು ತಪ್ಪು ಎಂಬುದನ್ನೂ ಅರಿಯುವೆ. ಬಾಳು ಎಂಬ ಭಾಗ್ಯದಲ್ಲಿ ನಿನ್ನ ಜವಾಬ್ದಾರಿಯನ್ನು ನೀನು ಒಪ್ಪಿ ಅರಿತುಕೊಳ್ಳಬೇಕು. ನಿನ್ನ ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಶ್ರೀಸಾಮಾನ್ಯನ ಒಳಿತಿಗಾಗಿ ಯಾವುದಾದರೂ ಒಂದು ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿದಿನ ಈ ಅಗತ್ಯಗಳು ನಿನ್ನ ಮುಂದೆ ಬಂದೆ ಬರುತ್ತವೆ. ಹಾಗೆಯೇ ನೀನು ಸುತ್ತ ದೃಷ್ಟಿ ಹಾಯಿಸಿದರೆ ನಿನಗಾಗಿ ಕಾಯುತ್ತಿರುವ ಅವುಗಳನ್ನು ಕಾಣಬಹುದು. ನಿನ್ನ ಗೆಳೆಯನಿಗೆ ಸಹಾಯ ಬೇಕಿರಬಹುದು, ನಿನ್ನ ಉಪಾಧ್ಯಾಯರಿಗೆ ಸ್ವಯಂ ಸೇವಕ ಬೇಕಾಗಿರಬಹುದು ಅಥವಾ ನೀನು ಜೀವಿಸುತ್ತಿರುವ ಸಮುದಾಯಕ್ಕೆ ನಿನ್ನ ಕೊಡುಗೆಯ ಅಗತ್ಯ ಇರಲೂಬಹುದು. ಜಯದ ಪರಿವೆ ಇಲ್ಲದೆ, ಸೋಲಿನ ಹತಾಶೆಗೂ ಕುಗ್ಗದೆ ನಿನ್ನ ಉಪಯುಕ್ತ ಕೊಡುಗೆಗಳನ್ನೂ ಶ್ರಮವಹಿಸಿ ನೀಡಬಹುದು.


ನಾನು ಕಂಡಂತೆ ಯಾವ ಕ್ಷಣದಲ್ಲೂ ತಪ್ಪಾಗಬಹುದು. ಅನೇಕ ಬಾರಿ ಹಾಗೆಯೇ ಆಗುತ್ತದೆ ಜನರು ಬಾಳುತ್ತಿರುವ ಪರಿಸರ ಹಾಗೂ ಅವರೆಷ್ಟು ಸಂತೋಷವಾಗಿದ್ದರೆ ಎಂಬುದಕ್ಕೆ ತಾಳಮೇಳ ಇರುವುದಿಲ್ಲ. ನಮ್ಮ ಸಂಬಂಧಿ, ಪರಿಚಿತ ಅಥವಾ ಇನ್ಯಾರೋ ರಸ್ತೆಯಲ್ಲಿ ಹೋಗುವವನೊಂದಿಗೆ ಹೋಲಿಸಿಕೊಂಡು ಕುರುಬುತ್ತೇವೆ. ಆದರೆ ನಾವು ಗಮನವಿಟ್ಟು ಹತ್ತಿರದಿಂದ ನೋಡಿದಾಗ ಅವು ಪೂರ್ಣತೆಯ ಪ್ರತಿಬಿಂಬಗಳು ಎಂಬುದರ ಅರಿವಾಗುತ್ತವೆ. ಇಲ್ಲದಿರುವುದರ ಬಗ್ಗೆ ಚಿಂತಿಸದೆ ಇರುವುದರಲ್ಲೆ ನೆಮ್ಮದಿಯಾಗಿರಲು ಇವು ಸಹಕರಿಸುತ್ತವೆ.

೧೯೯೯ರಲ್ಲಿ ನನಗೆ ರಾಷ್ಟ್ರಾಧ್ಯಕ್ಷರು ಪ್ರಶಸ್ತಿ ನೀಡುವ ಭವ್ಯ ಸಮಾರಂಭಕ್ಕೆ ಬಂದದ್ದು ನಿನಗೆ ನೆನಪಿದೆಯೆ? ತುಂಬ ಹೆಮ್ಮೆಯಿಂದ ಪದಕವನ್ನು ಕೊರಳಿಗೆ ಹಾಕಿಕೊಂಡು ಅದನ್ನು ಅಚ್ಚರಿಯಿಂದ ನೋಡಿ ಇದನ್ನು ನಾನು ಇಟ್ಟುಕೊಳ್ಳಲೆ? ಎಂದು ಕೇಳಿದೆ. ಆಗ ನಾನು ಮತ್ತು ನಿನ್ನ ಅಜ್ಜಿ ಹೇಳಿದ್ದು ನೆನಪಿದೆಯೆ? ಈ ಪದಕ ನನ್ನದರಂತೆ ನಿನ್ನದೂ ಕೂಡ, ಆದರೆ ನೀನು ನನ್ನ ಪದಕಗಳನ್ನು ಕೂಡುವುದರಲ್ಲಿ ತೃಪ್ತನಾಗಬಾರದು. ಸವಾಲಿರುವುದು ಮುಂದೆ ನಿನ್ನ ಪರಿಶ್ರಮಕ್ಕೆ ತಕ್ಕ ಪ್ರಶಸ್ತಿಗಳನ್ನು ನೀನೆ ಗಳಿಸುವುದರಲ್ಲಿ.


ಕೊನೆಯದಾಗಿ ಎಲ್ಲವನ್ನೂ,ಎಲ್ಲರನ್ನೂ ಪ್ರೀತಿಸುವ ಶಕ್ತಿ. ಇನ್ನೊಬ್ಬರ ಸಂತಸದಲ್ಲೂ ನಲಿವ ಎದೆಗಾರಿಕೆ ಹಾಗು ಬಾಳಲು ನಮ್ಮೆಲ್ಲರಿಗೂ ಸಾಕಷ್ಟು ಅವಕಾಶವಿದೆ ಎಂಬ ವಿವೇಕ ನಿನ್ನಲ್ಲಿದ್ದರೆ ಬಾಳು ಅರ್ಥಪೂರ್ಣ.

ಸಿದ್ಧಾರ್ಥ, ಈ ಚಿಂತನೆಗಳು ನಿನಗಾಗಿ ಹಾಗು ನಿನ್ನ ತಲೆಮಾರಿನ ನಮ್ಮ ಸುಂದರ ದೇಶದ ಲಕ್ಷಾಂತರ ಮಕ್ಕಳಿಗಾಗಿ. ಇದನ್ನು ಓದಿದ ಮೇಲೆ ನೀವು ಆಯ್ದುಕೊಂಡ ಕ್ಷೇತ್ರದಲ್ಲಿ ಭಯವಿಲ್ಲದೆ ಮುನ್ನುಗ್ಗಿ ದೇಶದ ಬಹುಜನರ, ಮಾನವತೆಯ ಹಿತಕ್ಕಾಗಿ ಸ್ಫೂರ್ತಿ ಸಿಗುವುದೆಂದು ಭಾವಿಸುತ್ತೇನೆ. ಹಾಗೆ ನಿಮಗೆ ಬರುವ ಪ್ರಶಸ್ತಿಗಳೆ ನಿಜವಾದ ಪ್ರಶಸ್ತಿಗಳು ಹಾಗು ಸಾರ್ಥಕ ಬದುಕಿಗೆ ಅವೆ ನಿಜವಾದ ಮನ್ನಣೆಗಳು ಎಂಬುದನ್ನೂ ಮರೆಯದಿರಿ.

ನನ್ನ ನಲುಮೆಯ ಪ್ರೀತಿಯೊಂದಿಗೆ

ನಿನ್ನ ಒಲುಮೆಯ
ದಾದ

1 comment:

Anagha Kirana ಅನಘ ಕಿರಣ said...

ಸಿದ್ಧಾರ್ಥನಿಗೆ ಅವನಜ್ಜ ಬರೆದ ಪತ್ರದಲ್ಲಿ ಇದೊಂದು ಪಂಕ್ತಿ ಬಿಟ್ಟು ಹೋಗಿತ್ತು ಕ್ಷಮಿಸಿ...


ನಾನು ಅರಿತಂತೆ ಒಂದು ದಿನ ಖಂಡಿತ ನೀನೂ ಜೀವನ ಎಂಬುದೊಂದು ಸುಯೋಗ ಇದನ್ನು ಹಾಳು ಮಾಡುವುದು ತಪ್ಪು ಎಂಬುದನ್ನೂ ಅರಿಯುವೆ. ಬಾಳು ಎಂಬ ಭಾಗ್ಯದಲ್ಲಿ ನಿನ್ನ ಜವಾಬ್ದಾರಿಯನ್ನು ನೀನು ಒಪ್ಪಿ ಅರಿತುಕೊಳ್ಳಬೇಕು. ನಿನ್ನ ಕೌಶಲ್ಯ ಹಾಗು ಸಾಮರ್ಥ್ಯವನ್ನು ಶ್ರೀಸಾಮಾನ್ಯನ ಒಳಿತಿಗಾಗಿ ಯಾವುದಾದರೂ ಒಂದು ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರತೀದಿನ ಈ ಅಗತ್ಯಗಳು ನಿನ್ನ ಮುಂದೆ ಬಂದೆ ಬರುತ್ತವೆ.ಹಾಗೆಯೇ ನೀನು ಸುತ್ತ ದೃಷ್ಟಿ ಹಾಯಿಸಿದರೆ ನಿನಗಾಗಿ ಕಾಯುತ್ತಿರುವ ಅವುಗಳನ್ನು ಕಾಣಬಹುದು. ನಿನ್ನ ಗೆಳೆಯನಿಗೆ ಸಹಾಯ ಬೇಕಿರಬಹುದು,ನಿನ್ನ ಉಪಾಧ್ಯಾಯರಿಗೆ ಸ್ವಯಂಸೇವಕ ಬೇಕಾಗಿರಬಹುದು ಅಥವಾ ನೀನು ಜೀವಿಸುತ್ತಿರುವ ಸಮುದಾಯಕ್ಕೆ ನಿನ್ನ ಕೊಡುಗೆಯ ಅಗತ್ಯ ಇರಲೂಬಹುದು. ಜಯದ ಪರಿವೆ ಇಲ್ಲದೆ, ಸೋಲಿನ ಹತಾಶೆಗೂ ಕುಗ್ಗದೆ ನಿನ್ನ ಉಪಯುಕ್ತ ಕೊಡುಗೆಗಳನ್ನು ನೀನು ಶ್ರಮವಹಿಸಿ ನೀಡಬಹುದು.