27 November 2008

ಒಮ್ಮೆ ನೋಡಿದರೆ ಮತ್ತೊಮ್ಮೆ..ಮತ್ತೆ ನೋಡಿದರೆ ಮಗದೊಮ್ಮೆ..

ಒಂಟೆತ್ತಿನ ಗಾಡಿಯ ಮೇಲೆ ಎರಡೂ ಪಕ್ಕ ಜೋತು ಬಿದ್ದ ಪೋಸ್ಟರ್ ಗಳ ಸಂದಿಯಲ್ಲಿ ಸಿಕ್ಕಿಸಿದ ಡೈನಮೋ ಚಾಲಿತ ಸ್ಪೀಕರಿನಲ್ಲಿ ಫಕೀರನ ಕೀರಲು ಧ್ವನಿ ಮೂರು ದಿಕ್ಕಿಗೂ ಮಾರ್ದನಿಸಿ ಕಿವಿಯ ಮೇಲೆ ಬಿದ್ದಾಗ ಇಹಪರದ ಅರಿವು ಕ್ಷಣಕಾಲ ಮರೆತು ಹೋಗುತಿತ್ತು."ಒಮ್ಮೆ ನೋಡಿದರೆ ಮತ್ತೊಮ್ಮೆ ...ಮತ್ತೆ ನೋಡಿದರೆ ಮಗದೊಮ್ಮೆ..ಹೀಗೆ ಬಾರಿ ಬಾರಿಗೂ ನೋಡಲೇ ಬೇಕೆನಿಸುವ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಮಹೋನ್ನತ {ಅದೆಷ್ಟೇ ಕಳಪೆ ಸೀ-ಗ್ರೇಡಿನದಾಗಿದ್ದರೂ!} ಕನ್ನಡ ಚಲನಚಿತ್ರ ನಿಮ್ಮ ನೆಚ್ಚಿನ (?!) ವೆಂಕಟೇಶ್ವರ ಚಿತ್ರಮಂದಿರದಲ್ಲಿ........ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ!" ಎಂಬ ಫುಲ್ ಸ್ಟಾಪ್ ಇಲ್ಲದ ಉದ್ಘೋಷ ಕಿವಿಯಂಚಿಗೆ ತಲಪುತ್ತಲೇ ಮನಸ್ಸು ಹೆಂಡ ಕುಡುಕನಿಗೆ ಬಾರ್ ಎದುರಾದಾಗ ಆಗುವಂತೆ ಚಡಪಡಿಸಿ ಹೋಗುತ್ತಿತ್ತು! ಯಾವಾಗ ಎದ್ದು ಆ ಬಂಡಿ ಹಿಂದೆ ಓಡಲಿಲ್ಲ..ಒಂಚೂರೂ ಅರ್ಥವಾಗದಿದ್ದರೂ ಫಕೀರ ಎಸೆಯುತ್ತಿದ್ದ "ಮಹೋನ್ನತ ಕನ್ನಡ ಚಲನಚಿತ್ರ"ದ ಹ್ಯಾಂಡ್ ಬಿಲ್ ಹಿಡಿಯಲಿಲ್ಲ....ಎಂಬ ಉಮೇದು ಹುಚ್ಚಿನಂತೆ ಉಕ್ಕೇರಿ ಬಿಡುತ್ತಿತ್ತು.ನನ್ನಂತೆ ಅವನ ಮೋಹಕ(?) ಸ್ವರ ಮಾಧುರ್ಯಕ್ಕೆ ಮನಸೋತ ನನ್ನದೇ ವಯಸ್ಸಿನ ಇನ್ನಿತರ ಪ್ರತಿಸ್ಪರ್ಧಿಗಳ ಪೈಪೋಟಿಯೂ ತಡವಾದಂತೆಲ್ಲ ಹೆಚ್ಚುವ ಸಹಜ ಸಾಧ್ಯತೆಯೂ ಇರುವುದರಿಂದ ಈ ತಹತಹಿಕೆ-ಆತಂಕ ಸಹಜ.

ಫಕೀರ ನಮ್ಮೂರಿನ ಏಕಾಮೆದ್ವಿತೀಯ ಶ್ರೀವೆಂಕಟೇಶ್ವರ ಚಿತ್ರಮಂದಿರದ ಗೇಟ್ ಕೀಪರ್ ಆಗಿದ್ದವ.ಸಮಯಕ್ಕೆ ತಕ್ಕಂತೆ ಟಿಕೆಟ್ ಮಾರಾಟ,ಸಿನೆಮ ಪ್ರಚಾರ,ಅಗತ್ಯಬಿದ್ದರೆ ಉದ್ದನೆಕೋಲಿನಿಂದ ಪರದೆ ಸರಿಸೋದನ್ನೂ ಮಾಡುತ್ತಾ ಒಟ್ಟಾರೆ ಆಲ್ ಇನ್ ವನ್ ಆಗಿದ್ದ.ಪುಂಗಿಯ ನಾದಕ್ಕೆ ಮನ ಸೋಲುವ ಮಿಡಿನಾಗರಗಳಂತಹ ನನ್ನಂತ ಅನೇಕ ಅಭಿಮಾನಿಗಳೂ ಅವನಿಗಿದ್ದೆವು ಎಂಬುದೂ ಸತ್ಯ.ಅವನ ಗಾಡಿ ಸಿಂಗಾರಗೊಂದು ಬೀದಿಗಿಳಿದರೆ ನಮ್ಮ ನಿರೀಕ್ಷೆ ಗರಿಗೆದರುತ್ತಿತ್ತು.ಅವನ ವಿವರಣೆ ಚಿತ್ರಗಳಲ್ಲಿ ನಟಿಸಿರೋ ನಟರ ಇಮೇಜಿಗೆ ತಕ್ಕಂತೆ ಏರಿಳಿಯುತ್ತ ಬದಲಾಗುತ್ತಿತ್ತು.ಪದ್ಮಭೂಷಣ ಡಾ,ರಾಜಕುಮಾರ್,ಸಾಹಸಸಿಂಹ ವಿಷ್ಣುವರ್ಧನ್,ರೆಬೆಲ್ ಸ್ಟಾರ್ ಅಂಬರೀಶ್,ಪ್ರಣಯರಾಜ ಶ್ರೀನಾಥ್,ಕ್ರೇಜಿಸ್ಟಾರ್ ರವಿಚಂದ್ರನ್,ಮಿನುಗುತಾರೆ ಶ್ರತಿ,ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್,ಕನಸಿನ ರಾಣಿ ಮಾಲಾಶ್ರಿ ಇವರೆಲ್ಲ ನನಗೆ ಮೊದಲಿಗೆ ಪರಿಚಿತರಾಗಿದ್ದು ಅದೇ ಫಕೀರಣ ಕ್ರಪೆಯಿಂದ!

ಅವನೊಂಥರಾ ತೀರ್ಥಹಳ್ಳಿಯ ಕಿಂದರಿಜೋಗಿ.ಹಾಗೆ ನೋಡಿದರೆ ಆಗ ನಮ್ಮೂರಿನಲ್ಲಿ ಇನ್ನೂ ಒಂದು ಟಾಕೀಸು ಎಂಬ ಕಳ್ಳ ಹೆಸರಿನ ಜೈಶಂಕರ್ ಟೆಂಟುಇತ್ತು.ಆದರೆ ಆಕರ್ಷಣೆಯ ಕೇಂದ್ರ ಮಾತ್ರ ಅವತ್ತೂ ವೆಂಕಟೇಶ್ವರನೇ-ಇವತ್ತೂ ಅವನೇ...ಏಕೆಂದರೆ ಮೂಗಿನಲ್ಲಿ ಮಾತನಾಡೋ ಫಕೀರ ಅಲ್ಲಿದ್ದ!

No comments: