26 September 2012

ಮರಳುಗಾಡಿನ ಮರ್ಮರ... (ಭಾಗ -2)

ಈ ಕಾಬಾ ಗುಡಿಯ ಸ್ಥಾಪನೆ, ಆರಾಧನೆ ಅರೇಬಿಯಾದ ಪುರಾಣ ಕಥೆಗಳಲ್ಲಿ ಬರುವ ಯಹೂದಿ ಹಾಗು ಕ್ರೈಸ್ತರ ಪ್ರವಾದಿ ಅಬ್ರಾಹಂನಿಂದ ಆಯಿತು ಎಂದು ಮುಸ್ಲೀಮರು ನಂಬುತ್ತಾರೆ. ದೇವರು ಅಬ್ರಾಹಂನನ್ನು ಭೂಮಿಗೆ ಕಳುಹಿಸಿ "ದೇವರೊಬ್ಬನೆ ಹಾಗೂ ಅಬ್ರಾಹಂ ಆತನ ಪ್ರತಿನಿಧಿ" ಎಂದು ಸಾರಲು ಆದೇಶಿಸುತ್ತಾನೆ. ಈ ಅಬ್ರಾಹಮನಾದರೋ ಸ್ವತಹ ಪ್ರವಾದಿಯಾಗಿದ್ದರೂ ಕೇವಲ ಮೂರೆ ಬಾರಿ ತನ್ನ ಜೀವನದಲ್ಲಿ ಸುಳ್ಳುಹೇಳಿರುತ್ತಾನೆ. ಎರಡು ಬಾರಿ ದೇವರ ಸಲುವಾಗಿ "ನನಗೆ ಸೌಖ್ಯವಿಲ್ಲ" ಅಂತಲೂ, "ಇಗೋ! ಇದೆ ಆ ಬೃಹತ್ ವಿಗ್ರಹ ಎಸಗಿದೆ!" ಅಂತಲೂ ಹಾಗೂ ಮೂರನೆ ಬಾರಿ ತನ್ನ ಮಡದಿ ಸಾರಾಳ ದೆಸೆಯಿಂದ ಸುಳ್ಳು ಹೇಳುತ್ತಾನೆ. ಆ ಸುಳ್ಳಿನ ಕಥೆ ಹೀಗಿದೆ. ಅಲೆಮಾರಿಯಾಗಿದ್ದ ಅಬ್ರಾಹಂ ಹೀಗೆ ಸುತ್ತುತ್ತಾ ಪ್ರಜಾಪೀಡಕನಾಗಿದ್ದ ರಾಜನೊಬ್ಬನ ರಾಜ್ಯಕ್ಕೆ ಬಂದಾಗ ಆ ಕಟುಕ ರಾಜ ತನ್ನ ಹೆಂಡತಿಗಾಗಿ ಹಂಬಲಿಸಿಯಾನು ಎಂದರಿತು, ಹೆಂಡತಿಗೆ 'ತಾನು ಅವಳ ಅಣ್ಣನೆಂದು...ಪತಿಯಲ್ಲವೆಂದು!' ಹೇಳುವಂತೆ ತಿಳಿಸುತ್ತಾನೆ. ಅವನು ನೆನೆಸಿದಂತೆ ರಾಜದೂತರು ಅವಳನ್ನು ರಾಜನ ಸನ್ನಿಧಿಗೆ ಕೊಂಡೊಯ್ಯುತ್ತಾರೆ. ಅಲ್ಲಿ ಅವಳನ್ನು ಕಂಡು ಮೋಹಿಸುವ ರಾಜ ಅವಳ ಕೈ ಹಿಡಿಯಲು ಧಾವಿಸುತ್ತಾನೆ. ದುರದೃಷ್ಟವಶಾತ್ ಆ ಕೈ ಭದ್ರವಾಗಿ ಅಲ್ಲಿಯೆ ಅಂಟಿಕೊಂಡು ಬಿಡುತ್ತದೆ! ಹೆದರಿದ ರಾಜ "ದಯವಿಟ್ಟು ಕೈ ಬಿಡುಗಡೆಯಾಗುವಂತೆ ದೇವರನ್ನು ಬೇಡಿಕೊ"ಎಂದು ಯಾಚಿಸಲು ಆಕೆ ಬೇಡಿದಾಗ ಕೈ ಬಿಡುಗಡೆಯಾಗುತ್ತದೆ. ನಿಟ್ಟುಸಿರು ಬಿಡುವ ರಾಜ ಅವಳ ದೈವಿಶಕ್ತಿಗೆ ಹೆದರಿ ಅವಳಿಗೊಬ್ಬ ಗುಲಾಮ ಹೆಣ್ಣನ್ನು ಬಳುವಳಿಯಾಗಿ ಕೊಟ್ಟು ತನ್ನ ಆಸ್ಥಾನದಿಂದ ಹೊರಗಟ್ಟುತ್ತಾನೆ. ಇತ್ತ ಪತ್ನಿಯನ್ನ ರಾಜನ ಬಳಿ ಕಳುಹಿಸಿ ದೈವದ ಮೊರೆಹೋಗಿದ್ದ ಅಬ್ರಾಹಂ ಈ ಪರಿ ಆಕೆ ಮರಳಿ ಬಂದಾಗ ಸಂತೋಷಗೊಂಡು ಕೂಡಲೆ ಇರಾಕ್ ಹಾಗು ಸಿರಿಯಾದ ದಿಕ್ಕಿಗೆ ಪ್ರಯಾಣಿಸುತ್ತಾನೆ. ಹೀಗೆ ಸಾಗುವಾಗ ಗುಲಾಮ ಹೆಣ್ಣು ಹಾಜರಾಳೊಂದಿಗೆ ಅಬ್ರಾಹಂ ನಡೆಸುವ ದೈಹಿಕ ಸಂಬಂಧದಿಂದ 'ಇಸ್ಮಾಯಿಲ್' ಎಂಬ ಬಾಲಕನ ತಂದೆಯಾಗುತ್ತಾನೆ. ಅದರಿಂದ ಸವತಿ ಮಾತ್ಸರ್ಯಕ್ಕೆ ತುತ್ತಾಗುವ ಸಾರಾಳ ಒತ್ತಡ ತಾಳಲಾರದೆ ತಾಯಿ- ಮಗ ಇಬ್ಬರನ್ನೂ ಮೆಕ್ಕಾಗೆ ತಂದು ಬಿಡುತ್ತಾನೆ. ಇತ್ತ ಮರಳಿ ಸಾರಾಳನ್ನ ಬಂದು ಸೇರುವ ಅಬ್ರಾಹಂ ಅವಳಿಂದ ಐಸಾಕ್ ಹಾಗೂ ಜಾಕೊಬ್ ಎಂಬ ಮಕ್ಕಳನ್ನ ಪಡೆಯುತ್ತಾನೆ. ಅಬ್ರಾಹಂ ಮೆಕ್ಕಾದ ಎತ್ತರ ಪ್ರದೇಶವೊಂದರ ಮರದಡಿ ಹಾಜರಾ ಮತ್ತು ಇಸ್ಮಾಯಿಲ್ ಇಬ್ಬರನ್ನೂ ಬಿಟ್ಟು ಹೋದನಲ್ಲ, ಜನವಸತಿಯಾಗಲಿ- ಜಲವಸತಿಯಾಗಲಿ ಇಲ್ಲದ ಈ ಬರಡು ಭೂಮಿಯಲ್ಲಿ ಹೀಗೆ ತ್ಯಜಿಸಿ ಹೋಗುವವನನ್ನ ಹಾಜರಾ ಹಿಂಬಾಲಿಸಿ ಹೋಗುತ್ತಾಳೆ. 'ನಮ್ಮನ್ನು ಅನಾಥರಾಗಿ ಈ ಅಪರಿಚಿತ ಸ್ಥಳದಲ್ಲಿ ಬಿಟ್ಟು ಎಲ್ಲಿ ಹೋಗುತ್ತೀಯ?' ಎಂದವಳು ಕೇಳಿದಾಗ ಅವನಿಂದ ಉತ್ತರ ಬರುವುದಿಲ್ಲ. ಆಕೆ ಪುನಃ 'ದೇವರ ಆದೇಶದಂತೆ ನೀನು ಈ ಕೆಲಸ ಮಾಡುತ್ತಿರುವುದಾ?" ಎಂದು ಮರುಪ್ರಶ್ನಿಸಿದಾಗ ಅಬ್ರಾಹಂ "ಹೌದು!" ಎಂದೆ ಉತ್ತರಿಸುತ್ತಾನೆ. 'ಯಾರ ಆಸರೆಯಲ್ಲಿ ನಾವಿರಬೇಕು?' ಎನ್ನುತ್ತಾಳವಳು. ಇವನ ಉತ್ತರ "ದೇವರು!". "ಹೀಗಿದ್ದರೆ ನಾನಿದನ್ನು ಸ್ವೀಕರಿಸುವೆ" ಎನ್ನುವ ಆಕೆ ಹಿಂದಿರುಗುತ್ತಾಳೆ. ಹೀಗೆ ಹಾಜರಾ ಮರೆಯಾದ ನಂತರ ಅಬ್ರಾಹಂ ಈಗಿರುವ ಕಾಬಾದ ಕಡೆಗೆ ಮುಖಮಾಡಿ ದೇವರನ್ನು "ನನ್ನ ಹೆಂಡತಿ ಹಾಜರಾ ಹಾಗು ಮಗು ಇಸ್ಮಾಯಿಲ್'ನನ್ನು ಈ ಪವಿತ್ರ ಕಣಿವೆಯ ಬಳಿ ಬಿಟ್ಟಿದ್ದೇನೆ. ಅವರಿಗೆ ಸುಖ ಸಮೃದ್ಧಿ ದೊರಕಲಿ ಎಂದು ಪ್ರಾರ್ಥಿಸುತ್ತಾನೆ. ಇತ್ತ ಹಾಜರಾ ತನ್ನೊಂದಿಗೆ ಇದ್ದ ಚರ್ಮದ ಚೀಲದಲ್ಲಿದ್ದ ನೀರನ್ನೆಲ್ಲ ಕುಡಿದಾದ ನಂತರ ತನ್ನ ಮಗುವಿಗೆ ಹಾಲೂಡಿಸುತ್ತಾಳೆ, ಆದರೆ ಅವಳ ದಾಹ ಹೆಚ್ಚುತ್ತದೆ. ಕೂಸನ್ನು ಅಲ್ಲಿಯೆ ಬಿಟ್ಟು ನೀರಿಗಾಗಿ ಹುಡುಕುತ್ತ ಅಲೆದು ಹತ್ತಿರದ 'ಸಾಫಾ' ಗಿರಿಯನ್ನೇರುತ್ತಾಳೆ. ಶಿಖರದ ಮೇಲೇರಿ ದೂರದೂರದವರೆಗೆ ದಿಟ್ಟಿಸಿದರೂ ಜನವಸತಿ ಕಾಣದೆ ಹತಾಶಳಾಗುತ್ತ ಹತ್ತಿರದ ಇನ್ನೊಂದು ಗಿರಿ 'ಮಾರ್ವ'ವನ್ನೇರಿದಾಗ ಅವಳಿಗೊಂದು ಅಶರೀರವಾಣಿ ಕೇಳಿಸುತ್ತದೆ. "ಒಹ್! ನನಗೆ ನೀನು ಕೇಳಿಸುತ್ತಿದ್ದೀಯ! ನನಗೆ ಸಹಾಯಕವಾಗಲು ನಿನ್ನ ಬಳಿ ಏನಿದೆ?" ಎಂದಾಕೆ ದಿಗ್ಭ್ರಮೆಯಿಂದ ಕೇಳಲು ಅವಳಿಗೆ ಕಂಡದ್ದು ಒಬ್ಬ ಯಕ್ಷ. ಮೆಕ್ಕಾದ 'ಜುಮ್ ಜುಮ್' ಎಂಬಲ್ಲಿ ಆತ ತನ್ನ ಹಿಮ್ಮಡಿಯಿಂದ ನೆಲ ಅಗಿಯುತ್ತಿರುವಾಗ ಅಲ್ಲಿ ಜಲಧಾರೆ ಉಕ್ಕುತ್ತದೆ. ಆಗ ತಡ ಮಾಡದೆ ಆ ನೀರನ್ನೆಲ್ಲ ತನ್ನ ತೊಗಲಿನ ಚೀಲಕ್ಕೆ ತುಂಬಿಕೊಳ್ಳುವ ಆಕೆ ಅಲ್ಲಿಯೆ ತಂಗುತ್ತಾಳೆ. ಕಾಲಕ್ರಮೇಣ ನೀರು ಕಂಡ ಪಕ್ಷಿಗಳೂ, ಅದರ ಜಾಡು ಹಿಡಿದ ಬುಡಕಟ್ಟಿನವರೂ ಅಲ್ಲಿ ಬಂದು ತಂಗುತ್ತಾರೆ. ಹೀಗೆ ಹಾಜಿರಾ ನೆಮ್ಮದಿಯ ಬಾಳನ್ನು ಕಾಣುವಂತಾಗುತ್ತದೆ. ಕಾಲಾನಂತರ ಅವಳ ಮರಣವಾಗಿ, ವಯಸ್ಕನಾಗುವ ಅವಳ ಮಗನಿಗೆ ಅದೆ ಬುಡಕಟ್ಟಿನವರು ಹೆಣ್ಣುಕೊಟ್ಟು ಮದುವೆ ಮಾಡುತ್ತಾರೆ. ಹೀಗೆ ಅವನ ಸಂಸಾರ ಸಾಗುತ್ತಿರುವಾಗ ಅಬ್ರಾಹಂ ತಾನು ತೊರೆದು ಹೋದ ಕುಟುಂಬವನ್ನ ನೋಡಲು ಬರುತ್ತಾನೆ. ಆದರಾಗ ಇಸ್ಮಾಯಿಲ್ ಮನೆಯಲ್ಲಿರುವುದಿಲ್ಲ. ಅವನು ಅನ್ನ ಸಂಪಾದಿಸಲು ಹೊರಗೆ ಹೋಗಿದ್ದಾನೆನ್ನುವ ಹೆಂಡತಿಗೆ "ನಿನ್ನ ಗಂಡನಿಗೆ ನನ್ನ ವಿಜ್ಞಾಪನೆ ತಿಳಿಸು ಹಾಗೂ ಮನೆಯ ಹೊಸ್ತಿಲನ್ನ ಶೀಘ್ರ ಬದಲಿಸೋಕೆ ಹೇಳು!" ಎನ್ನುವ ಅಬ್ರಾಹಂ ಅಲ್ಲಿಂದ ನಿರ್ಗಮಿಸುತ್ತಾನೆ. ಯಾಥಾವತ್ ಮಾತುಗಳನ್ನ ಗಂಡ ಬಂದಾಗ ಆಕೆ ಅರುಹಿದಾಗ. ಒಡನೆಯೆ ಇಸ್ಮಾಯಿಲ್ " ಒಹ್! ಬಂದಿದ್ದವನು ನನ್ನ ತಂದೆ ಅವನು ನಿನ್ನನ್ನು ತ್ಯಜಿಸಲು ಹೇಳಿದ್ದಾನೆ! ಎಂದವನೆ ಆಕೆಗೆ ವಿಚ್ಚೇದನ ಕೊಟ್ಟು ಇನ್ನೊಬ್ಬಳನ್ನ ಕಟ್ಟಿಕೊಳ್ಳುತ್ತಾನೆ. ಆಕೆ ತವರಿಗೆ ಮರಳುತ್ತಾಳೆ. ಪುನಃ ಸ್ವಲ್ಪ ಕಾಲದ ನಂತರ ಅಬ್ರಾಹಂ ಮಗನ ಮನೆಗೆ ಬರುತ್ತಾನೆ. ಆತನ ಹೊಸ ಹೆಂಡತಿಯನ್ನ ನೋಡಿ ಸಂಸಾರದ ಸ್ಥಿತಿಗತಿಯನ್ನ ವಿಚಾರಿಸಿದಾಗ ಆಕೆ "ನಾವು ಚೆನ್ನಾಗಿದ್ದೇವೆ" ಎಂದು ತಿಳಿಸುತ್ತಾಳೆ. ಸಂತುಷ್ಟನಾಗುವ ಅಬ್ರಾಹಂ "ಆತನಿಗೆ ನನ್ನ ವಿಜ್ಞಾಪನೆ ತಿಳಿಸು ಹಾಗೂ ಮನೆಯ ಹೊಸ್ತಿಲನ್ನ ಭದ್ರವಾಗಿರಿಸಿಕೊಳ್ಳಲು ತಿಳಿಸು" ಎಂದು ಹೇಳಿ ಮರೆಯಾಗುತ್ತಾನೆ. ಪತಿ ಮನೆಗೆ ಬಂದಾಗ ಅವಳು ಆತನಿಗಿದನ್ನ ತಿಳಿಸಿದಳು. ಆಗ ಇಸ್ಮಾಯಿಲ್ "ಬಂದವನು ನನ್ನ ತಂದೆ! ನಿನ್ನನ್ನ ತ್ಯಜಿಸದೆ ಇಟ್ಟುಕೊಳ್ಳಲು ನನಗೆ ಉಪದೇಶವಾಗಿದೆ" ಎಂದಂದ. ಮುಂದೊಮ್ಮೆ ಮರಳಿ ಅಬ್ರಾಹಂ ಮಗನನ್ನು ಹುಡುಕಿಕೊಂಡು ಬಂದಾಗ ಅವನಿಗೆ ಮಗನ ಸಹಾಯವೂ ಸೇರಿ ಮೊತ್ತ ಮೊದಲಿಗೆ 'ಕಾಬಾ'ದ ಗುಡಿ ಮೇಲೆದ್ದಿತು ಅನ್ನುವುದು ಐತಿಹ್ಯ. ಇಸ್ಮಾಯಿಲ್'ನ ವಂಶಸ್ಥರಲ್ಲಿ ಅವರ್ ಬಿನ್ ಲುಹಾಯಿ ಪ್ರಸಿದ್ಧನಾಗಿದ್ದ. ಬಲು ಧರ್ಮಿಷ್ಠನಾಗಿದ್ದ ಆತ ತನ್ನ ಉದಾರ ದಾನ-ಧರ್ಮಗಳ ಕಾರಣದಿಂದ ಜನಾನುರಾಗಿಯಾಗಿದ್ದ. ಈ ಜನಪ್ರಿಯತೆಗೆ ಮಾರುಹೋದ ಅಲ್ಲಿನ ಬುಡಕಟ್ಟಿನವರು ಅವನನ್ನೆ ತಮ್ಮ ರಾಜನನ್ನಾಗಿ ಘೋಷಿಸಿಕೊಂಡರು. ಮೆಕ್ಕಾ ಹಾಗು ಅಲ್ಲಿನ ಕಾಬಾ ಅವನ ಆಳ್ವಿಕೆಗೆ ಒಳಪಟ್ಟಿತ್ತು. ಮಧ್ಯಪ್ರಾಚ್ಯದ ದೇಶಗಳಾದ ಸಿರಿಯಾ, ಲೆಬೆನಾನ್ ಹಾಗೂ ಪ್ಯಾಲಸ್ತೈನ್'ಗಳನ್ನು ಸಂದರ್ಶಿಸಿದ ಆತ ಅಲ್ಲಿನ ವಿಗ್ರಹಾರಾಧನೆಗಳಿಂದ ಅತ್ಯಂತ ಪ್ರಭಾವಿತನಾಗಿ ಅಲ್ಲಿಂದ ಮರಳುವಾಗ ತನ್ನ ಜೊತೆಯಲ್ಲಿಯೆ ಮೆಕ್ಕಾಗೆ ಒಂದು ವಿಗ್ರಹ ತಂದ. 'ಹುಬಾಬ್' ಎಂದು ಆತ ಅದನ್ನು ಕರೆದು ಕಾಬಾದಲ್ಲಿ ಅದನ್ನ ಪ್ರತಿಷ್ಠಾಪಿಸಿದ. ತನ್ನ ಜನರಿಗೆ ಅದನ್ನ ಆರಾಧಿಸಲು ಆತ ಕರೆನೀಡಿದ. ತಮ್ಮ ರಾಜನ ಆಗ್ರಹಕ್ಕೆ ಮಣಿದ ಬುಡಕಟ್ಟಿನ ಮಂದಿ ಮತ್ತೆ ಹಳೆಯ ವಿಗ್ರಹಾರಾಧನೆಗೆ ಮರಳಿದರು. ಇಸ್ಲಾಮಿಕ್ ನಂಬಿಕೆಗಳ ಪ್ರಕಾರ ಅಬ್ರಾಹಂ ಹಾಗೂ ಇಸ್ಮಾಯಿಲ್ ಕಾಬಾವನ್ನು ನಿರ್ಮಿಸಿದ ಬಳಿಕ ಅದರ ಒಡೆತನವನ್ನು "ಜೋರ್'ಹೂಮ್" ಬುಡಕಟ್ಟಿನವರು ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ ಅವರ ದುಂಡಾವರ್ತಿ ನಡೆ ಹೆಚ್ಚಿದ್ದರಿಂದ ಮೆಕ್ಕಾದ ಖುರೈಷಿ ಪಂಗಡದವರು ಅವರನ್ನು ಅಲ್ಲಿಂದ ಹೊಡೆದೋಡಿಸಬೇಕಾಯಿತು. ಖುರೈಷಿಗಳಲ್ಲಿ ಹುಲುಲ್ ಹಾಗೂ ಅರಾಮ್ ಎಂಬ ಎರಡು ಪಂಗಡಗಳಿದ್ದವು. ಅಲ್ಲದೆ 'ಬಾನ್ ಕಿನಾನಾಹ್' ಎನ್ನುವಲ್ಲಿಂದ ವಲಸೆ ಬಂದಿದ್ದ ಅನೇಕ ಕುಟುಂಬಗಳೂ ಮೆಕ್ಕಾದಲ್ಲಿ ವಾಸವಿದ್ದವು. ಖುರೈಷಿಗಳ 'ಕಹುಜಾಹ್ನ್' ಎಂಬಾತ ಕಾಬಾದ ಪಾರುಪತ್ಯ ವಹಿಸಿಕೊಂಡ. ಅನಂತರದ ಪಾರುಪತ್ಯದ ಜವಾಬ್ದಾರಿ ಅವನ ಸಂತತಿಯವರಿಗೆ ಸಂದಿತು. ಅವರು ಮುಂದೆ ಹಲೀಲ್ ಬಿನ್ ಹುಬೈಷಾ ಎಂಬಾತನಿಗೆ ಅದನ್ನ ವಹಿಸಿಕೊಟ್ಟರು. ಈ ಹಲೀಲ್'ನ ಮಗಳನ್ನು ಕುಸೈ ಬಿನ್ ಕಿಲಾಬ್ ಎಂಬಾತ ಲಗ್ನವಾಗಿ ಹಲೀಲ್ ಮರಣ ಹೊಂದಿದ ಬಳಿಕ ಬುಡಕಟ್ಟಿನ ಇತರ ಆಕ್ಷಾಂಶಿಗಳೊಂದಿಗೆ ಕಾದಾಡಿ ಕಾಬಾದ ಪಾರುಪತ್ಯಕ್ಕೆ ಪ್ರಯತ್ನಿಸಿದ. ಅಂತಿಮವಾಗಿ ಒಪ್ಪಂದವೊಂದು ಜರುಗಿ ಖುರೈಶಿಗಳಿಗೆ ಅಲ್ಲಿ ಹೆಚ್ಚಿನ ಅಧಿಕಾರ ಇರುವುದಾಗಿ ತೀರ್ಮಾನ ಹೊರಬಿದ್ದು ಅವನಿಗೆ ಕಾಬಾದ ಪಾರುಪತ್ಯವನ್ನ ಅವರ ಸಮ್ಮತಿ ಪಡೆದು ವಹಿಸಲಾಯ್ತು. ಅವನು ಕ್ರಮೇಣ ತನ್ನವರನ್ನಲ್ಲಿಗೆ ಬರಮಾಡಿಕೊಂಡು ಮುಂದೆ ತಾನೆ ಅಲ್ಲಿನ ರಾಜ ಎಂದು ಕರೆದುಕೊಂಡ ! ಕುಸೈನ ಆಡಳಿತದಲ್ಲಿ ಕಾಬಾಕ್ಕೆ ಬರುವ ಯಾತ್ರಿಕರಿಗೆ ನೀರು ನೀಡುವ ಪವಿತ್ರ ಕಾರ್ಯ , 'ಎನ್-ನದ್ವಾ' ಸಭಾಂಗಣದ ಯಜಮಾನಿಕೆ, ಯುದ್ಧ ದ್ವಜದ ಸ್ವಾಧೀನತೆ ಅವನ ಬಳಿಯೆ ಇತ್ತು. ಅವನ ನಂತರ ಅವನ ನಾಲ್ವರು ಮಕ್ಕಳು ಸೌಹಾರ್ದತೆಯಿಂದ ಭಿನ್ನಾಭಿಪ್ರಾಯಕ್ಕೆ ಎಡೆ ಮಾಡಿಕೊಡದಂತೆ ತಂದೆ ಹಾಕಿಕೊಟ್ಟಿದ್ದ ದಾರಿಯಲ್ಲೆ ಆಡಳಿತದ ಯಜಮಾನಿಕೆ ನಡೆಸಿದರು. ಆನಂತರ ಅವನ ಸಹೋದರರ ಮಕ್ಕಳ ಕೈಮೇಲಾಗಿ ಖುರೈಶಿಯರ ಅಬ್ಬೆ ಮುನಾಫನ ಮಗ ಅಲ್-ಮುತ್ತಲಿಬ್ ಪ್ರಮುಖನಾಗಿ ಹೊಮ್ಮಿದ. ಅವನ ನಂತರ ಮೆಕ್ಕಾ ಅವನ ತಮ್ಮ ಹಾಶೀಮನ ಕೈಸೇರಿತು. ಆದರೆ ಉಮಯ್ಯ ಎಂಬಾತ ಚಿಕ್ಕಪ್ಪನ ಮೇಲೆ ಹಕ್ಕಿಗಾಗಿ ವಾಜ್ಯ ಹೂಡಿದ. ಇದು ಪ್ರಕೋಪಕ್ಕೆ ತಿರುಗಿ ಹೋರಾಟ ನಡೆದರೂ ಹಾಶೀಮನದೆ ಮೇಲುಗೈಯಾಯಿತು. ಕ್ರಿಸ್ತಶಕ 510ರಲ್ಲಿ ಹಾಶೀಮ್ ಸತ್ತ ನಂತರ ಅವನ ಮಗ ಅಬ್ದುಲ್ ಮುತ್ತಾಲಿಬ್ ಬೆಳಕಿಗೆ ಬಂದ. ಇವನಿಗೆ ಒಟ್ಟು ಹನ್ನೆರಡು ಗಂಡು ಹಾಗು ಆರು ಹೆಣ್ಣು ಮಕ್ಕಳಿದ್ದರು. ಮುಂದೆ ಪ್ರವಾದಿ ಎಂದೆನಿಸಿದ ಮಹಮದ್ದನ ತಂದೆ ಅಬ್ದುಲ್ಲಾ ಇವರಲ್ಲೊಬ್ಬ. ಆತ ನಂತರ 'ಖುರಾಯಿಶ್' ಬುಡಕಟ್ಟಿನ 'ಸುಹ್ರಾ' ಮನೆತನದ ಅಮೀನಾ ಎನ್ನುವ ಕನ್ಯೆಯನ್ನ ವಿವಾಹ ಮಾಡಿಕೊಂಡ, ಇವರ ಒಬ್ಬನೆ ಮಗ ಮಹಮದ್. ದಾಖಲೆಗಳ ಪ್ರಕಾರ ಮಹಮದ್ ಜನಿಸಿದ್ದು ಕ್ರಿಸ್ತಶಕ 571ರಲ್ಲಿ. ಈ ಕಾಲಘಟ್ಟದಲ್ಲಿ ಮೆಕ್ಕಾದ ಮೇಲಿನ ಹಕ್ಕಿಗಾಗಿ ಆಗಾಗ ಹಾಶಿಮ್ ಹಾಗು ಉಮಯ್ಯಾನ ಸಂತತಿಯವರು ಕಾದಾಡುತ್ತಲೆ ಇದ್ದರು. ಅಲ್ಲಿನ ಶೇಖ್ ಪದವಿ ಗಳಿಸಿದ ಹಶೀಂ ಕುಲದವರು ಉಮೈದರನ್ನು ಅವಕಾಶ ಸಿಕ್ಕಾಗಲೆಲ್ಲ ಹೀಯಾಳಿಸಿ- ಕೆಣಕಿ ಈರ್ಷ್ಯೆಯಿಂದ ಅವರ ಸ್ಥಾನಮಾನಗಳಿಗೆ ಧಕ್ಕೆ ತರುತ್ತಲೆಯಿದ್ದರು. ಜೋರ್'ಹೂಮ್' ಬುಡಕಟ್ಟಿನವರು ಕಾದಾಟದಲ್ಲಿ ಸೋತ ನಂತರ ಮೆಕ್ಕಾದ ಒಡೆತನ ಖುಜಾಹ ಬುಡಕಟ್ಟಿಗೆ ಸರಿದಾಗ ಅವರು ಅಲ್ಲಿನ ಪವಿತ್ರ ಕಪ್ಪುಶಿಲೆ 'ಮುಕಾಂ ಇಬ್ರಾಹಿಮ್'ನ್ನು ಹಾಗೂ ಜುಮ್ ಜುಮ್ ಬಾವಿಯನ್ನೂ ಯಾರಿಗೂ ಸಿಗದಂತೆ ಹುಗಿದು ಮೆಕ್ಕಾವನ್ನು ತ್ಯಜಿಸಿ ಹೋದರು. ಕ್ರಮೇಣ ಕುಸೈ ಬಿನ್ ಕಿಲಾಬನ ಕಾಲಕ್ಕೆ ಮತ್ತೆ ಮೆಕ್ಕಾ ಮೆರಗು ಪಡೆಯಿತು. ಖುರೈಷಿಗಳು ಬಂದು ಅಲ್ಲಿ ನೆಲೆಯೂರಿದರು. ಆದರೆ ಅಬ್ದುಲ್ ಮುತ್ತಾಲಿಬನ ಕಾಲದವರೆಗೂ ಜುಮ್ ಜುಮ್ ಬಾವಿ ಪತ್ತೆಯೆ ಆಗಿರಲಿಲ್ಲ. ಮಹಮದ್'ನ ಅಜ್ಜ ಅಬ್ದುಲ್ ಮುತ್ತಲಿಬ್'ನಿಗೆ ಒಂದು ರಾತ್ರೆ ಬಿದ್ದ ಕನಸು ಅದರ ಕುರುಹನ್ನು ತೋರಿಸಿತು. ಆ ಪ್ರಕಾರವೆ ನೆಲ ಅಗೆದ ಅವನಿಗೆ ಬಾವಿ ಗೋಚರಿಸಿತು. ಇನ್ನೂ ನೆಲ ಅಗೆದಾಗ ಅಪಾರ ಶಸ್ತ್ರಾಸ್ತ್ರ ಹಾಗೂ ಚಿನ್ನಾಭರಣಗಳೂ ಅಲ್ಲಿ ದೊರೆತವು. ಇದರ ವಾಸನೆ ಹಿಡಿದ ಖುರೈಷಿಗಳು ಸಂಪತ್ತಿನ ಹಂಚಿಕೆಗೆ ಕೋರಿದರು, ಆದರೆ ಅಬ್ದುಲ್ ಮುತ್ತಾಲಿಬ್ ನಿರಾಕರಿಸಿದ. ಆದರೆ ಆತ ಸಮಸ್ಯೆಯ ಪರಿಹಾರಕ್ಕೆ ಮಧ್ಯವರ್ತಿಯೋಬ್ಬನ ನೇಮಕಕ್ಕೆ ಒಪ್ಪಿಕೊಂಡ! ಅದೆ ಸಮಯಕ್ಕೆ ಒಂದು ವಿಚಿತ್ರವಾದ ಹರಕೆಯನ್ನೂ ಹೊತ್ತ. ಅದೇನೆಂದರೆ ದೇವರು ತನಗೆ ಹತ್ತು ಮಕ್ಕಳನ್ನು ಕರುಣಿಸಿದರೆ ಅವರಲ್ಲಿ ಒಬ್ಬನನ್ನು ಆತ ವಯಸ್ಸಿಗೆ ಬಂದ ಕೂಡಲೆ ಕಾಬಾದ ಗುಡಿಗೆ ಬಲಿನೀಡುವೆ! ಎಂಬುದಾಗಿತ್ತು. ಅದೆ ಪ್ರಕಾರ ಅವನಿಗೆ ಸಾಲಾಗಿ ಹತ್ತು ಮಕ್ಕಳಾದವು. ಅವರಲ್ಲಿ ಅಬ್ದುಲ್ಲ ಎಂಬಾತನಿದ್ದ, ಅವನೆ ಮುಂದೆ ಮಹಮದ್'ನ ತಂದೆಯಾದದ್ದು. ಮಕ್ಕಳಿಗೆ ಈ ವಿಷಯ ಅರುಹಿದ ಮುತ್ತಲಿಬ್, ಅವರು ತಂದೆಯ ಹರಕೆ ಪೂರೈಸಲು ಸಿದ್ಧರಾದರು. ಆದರೆ ಯಾರನ್ನ ಬಲಿ ನೀಡೋದು ಎಂಬ ಪ್ರಶ್ನೆ ಉದ್ಭವಿಸಿತು. ಅದಕ್ಕೆ ಪರಿಹಾರವಾಗಿ ಕಾಬಾದ 'ಹುಬುಲ್' ವಿಗ್ರಹದ ಮುಂದೆ ಹತ್ತೂ ಜನರ ಹೆಸರು ಬರೆದ ಪ್ರತ್ಯೇಕ ಬಾಣಗಳನ್ನಿಟ್ಟು ಅಲ್ಲಿನ ಪೂಜಾರಿಯಿಂದ ಒಂದನ್ನು ಎತ್ತಿಸಲಾಯಿತು. ಸಂಪ್ರದಾಯದ ಪ್ರಕಾರ ಅದನ್ನ ಬಿಲ್ಲಿಗೆ ಹೂಡಿ ಹೊಡೆದಾದ ನಂತರ ನೋಡಿದಾಗ ಅದು ಅಬ್ದುಲ್ಲಾನ ಹೆಸರಿನದಾಗಿತ್ತು! ಅವನ ಬಗ್ಗೆ ಕನಿಕರಗೊಂಡ ಖುರೈಷಿಗಳು ಮುತ್ತಲಿಬ್ ಬಲಿ ನೀಡಲು ಒರೆಯಿಂದ ಕತ್ತಿ ತೆಗೆದಾಗಲೆ ಅವನನ್ನ ತಡೆದರು. ಹೀಗಾದರೆ ಹರಕೆ ಪೂರೈಕೆ ಹೇಗೆಂದು ಆತ ಕೇಳಿದಾಗ, ಅಬ್ದುಲ್ಲಾನ ಬದಲು ಹತ್ತು ಒಂಟೆ ಬಲಿನೀಡಲು ಸೂಚಿಸಲಾಯಿತು. ಅವರ ಸೂಚನೆಯಂತೆ ಒಂಟೆಗಳನ್ನು ಪ್ರತಿನಿಧಿಸುವ ಹೆಸರುಗಳ ಒಟ್ಟಿಗೆ ಅಬ್ದುಲ್ಲಾನ ಹೆಸರಿನ ಚೀಟಿ ಇಟ್ಟು ಎತ್ತಿದಾಗ ಅಬ್ದುಲ್ಲನ ಚೀಟಿಯೆ ಬಂತು! ಹೀಗೆ ಹತ್ತರ ಸಂಖ್ಯೆಗಳಲ್ಲಿ ಒಂಟೆಗಳ ಸಂಖ್ಯೆ ಹೆಚ್ಚಿಸುತ್ತಾ ಹೋದಾಗಲೂ ದುರಾದೃಷ್ಟವಶಾತ್ ಅಬ್ದುಲ್ಲಾನ ಹೆಸರೆ ಮತ್ತೆ ಮತ್ತೆ ಬಂತು! ಕಡೆಗೆ ಅವನ ಹೆಸರು ತಪ್ಪಿದ ಚೀಟಿ ಮೇಲೇಳುವಾಗ ಒಂಟೆಗಳ ಸಂಖ್ಯೆ ನೂರು ಮುಟ್ಟಿತ್ತು. ಹೀಗಾಗಿ ಆ ನೂರೂ ಒಂಟೆಗಳನ್ನ ಬಲಿನೀಡಿ ಮುತ್ತಲಿಬ್ ತನ್ನ ಹರಕೆ ಮುಟ್ಟಿಸಿದ. ಹೀಗಾಗಿ ಮುಂದೆ ಮಹಮದ್ ತಾನು 'ಎರಡು ಬಲಿದಾನಗೈದವರ ಮಗ" ಎಂದು ಹೇಳಿಕೊಳ್ಳಲು ಇದೆ ಕಾರಣ. ಮೆಕ್ಕವನ್ನ ಯಾವ ಅಧಿಕೃತ ಸರಕಾರಗಳೂ ಎಂದೂ ಆಳಿರಲಿಲ್ಲ. ಅದು ಆಗಾಗ ಬುಡಕಟ್ಟುಗಳ ಅಧೀನದಲ್ಲಷ್ಟೆ ಇತ್ತು. ಅವಕ್ಕೂ ಅವುಗಳದ್ದೆ ಆದ ರೀತಿನೀತಿ,ನಡೆನುಡಿಗಳಿದ್ದವು. ಕ್ಷುಲ್ಲಕ ಕಾರಣಕ್ಕೂ ರಕ್ತ ಚೆಲ್ಲಿ ಕಾದಾಡುವ ಹಾಗೂ ಪ್ರತಿಕಾರಕ್ಕಾಗಿ ಹಾತೊರೆಯುವ ಅರಬ್ಬರ ಗುಣ ಇಂದಿಗೂ ಅಷ್ಟೆ ಪ್ರಖರವಾಗಿರುವುದನ್ನು ಕಾಣಬಹುದಾಗಿದೆ. ಒಂದು ಬಾರಿ ಒಬ್ಬನ ರಕ್ತ ಚಲ್ಲಿದಾಗ ಆ ವ್ಯಕ್ತಿಯ ಕುಟುಂಬ, ಬುಡಕಟ್ಟು, ಪಂಗಡ, ಜನಾಂಗದ ಉಳಿದವರು ಅವನನ್ನು ಕೊಲೆ ಮಾಡಿದ ವ್ಯಕ್ತಿಯನ್ನು ಅಥವಾ ಅವನ ಬುಡಕಟ್ಟನ್ನು ಪ್ರತಿಕಾರದ ಸಲುವಾಗಿ ಬೇಟೆಯಾಡುವುದು ಅಂದೂ ಸಾಮಾನ್ಯವಾಗಿತ್ತು, ಇಂದೂ ಅದು ಅಲ್ಲಿನ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿಯೆ ಉಳಿದುಬಂದಿದೆ ! ಹಾಗೊಂದು ವೇಳೆ ಎದುರಾಳಿಗಳು ಬಲಿಷ್ಠರಾಗಿದ್ದಾಗ ಕೆಲಕಾಲ ಹಿಂದಡಿ ಇಡಲಾಗುತ್ತಿತ್ತಾದರೂ ಒಂದೊಮ್ಮೆ ಅವಕಾಶ ಸಿಕ್ಕರೆ ಪ್ರತಿಕಾರ ತೀರಿಸಿಕೊಳ್ಳುವುದು ತಮ್ಮ ಜನ್ಮಸಿದ್ಧ ಹಕ್ಕೆಂದೆ ಅಲ್ಲಿ ಬಗೆಯಲಾಗುತ್ತಿತ್ತು. ಅದಕ್ಕೆ ಅಗತ್ಯವಾಗಿ ಇನ್ನೊಬ್ಬ ಬಲವಂತನ ನೆರವನ್ನು ಪಡೆಯಲಾಗುತ್ತಿತ್ತು. ಅಂತಹ ಒಬ್ಬ ಬಲವಂತನೆ ಪ್ರವಾದಿ ಮಹಮದ್ ಪೂರ್ವಜ ಕೂಸೈ. ಕ್ರಿಸ್ತಶಕ 400ರ ಕಾಲಕ್ಕೆ ಈತ ಪ್ರಶ್ನಾತೀತನಾಗಿರಲು ಜನಬೆಂಬಲಿತ ಈತನ ಬಾಹುಬಲವೆ ಕಾರಣ ಎಂದರೂ ತಪ್ಪಿಲ್ಲ. (ನಿರೂಪಣೆ ಇಲ್ಲಿಗೆ ಮುಗಿಯಿತು... ಇನ್ನು ಪ್ರವಾದಿಯ ಕಥೆ ಶುರು...)

No comments: