15 April 2013

ಕೊನೆ ಕೊನೆಗೆ ನೀ ಬದಲಾದರೂ, ನಾ ಮಾತ್ರ ಅದೆ ಹಚ್ಚ ಹಳಬ....







ತೊಳೆದಿಟ್ಟ ಮನೆಯಂತಹ ಮನ ಹೊತ್ತ ನನಗೆ
ನಿನ್ನ ಹೊರತು ಇನ್ಯಾರದೆ ಪಾದದ ಕೆಸರು.....
ಅಲ್ಲಿ ಚಿತ್ತಾರ ಮೂಡಿಸುವುದು ಬೇಕಿಲ್ಲ,
ಬೇರೆ ಇನ್ನೇನಿಲ್ಲ ನಿನ್ನ ನೆನಪಿನ ಪಸೆಯಷ್ಟೆ ಉಳಿದಿರೋದು
ಅದರಿಂದಲೆ ಸುದೀರ್ಘ ಇನ್ನೊಂದು ವರ್ಷವನ್ನ....
ನಾ ಸಂಯಮದಿಂದ ಕಳೆದಿರೋದು/
ಸರಿಯದ ಕ್ಷಣಗಳ ಹೊರತೂ ನಡೆಯದ ದಿನಗಳ ಮರೆತೂ....
ಸಂವತ್ಸರವೊಂದು ಮತ್ತೆಂದೂ ಸಿಗದಂತೆ ಕಳೆದೆ ಹೋಗಿದೆ,
ನೋವಿನ ಜಾರುಬಂಡಿಯ ಮೇಲೆ
ನಲಿವು ಸಲೀಸಾಗಿ ಜಾರಿದೆ.//


ಎಳೆಯ ಚಿಗುರ ಮಾವಿನೆಲೆಗಳನ್ನ
ಮನೆಯಂಗಳದಲ್ಲಿ ಕಾಣುವಾಗ.....
ನನಗದರಲ್ಲೂ ನಿನ್ನ ಮುಖವೆ
ಅದೇಕೆ ಕಂಡು ಕಾಡುತ್ತದೆಯೋ ಗೊತ್ತಾಗುತ್ತಿಲ್ಲ,
ತುಂಬಿದ ಮಾತುಗಳ ಗಲಭೆಯ ಸಭೆಯಲ್ಲಿ
ನನ್ನ ತಪ್ತ ಮನ ಮಾತ್ರ ಚಿರ ಮೌನ/
ಉಸುರಲಾಗದ ಕೆಲವು ಗುಟ್ಟುಗಳನ್ನ
ಗಾಳಿಯಲ್ಲಿ ತೇಲಿ ಬಿಟ್ಟಿದ್ದೇನೆ.....
ನಿನ್ನ ಹೆಸರ ವಿಳಾಸ ಅದಕ್ಕೂ ಗೊತ್ತು,
ಅದಕ್ಕೆ ನೋಡು ಅದು ನಿನಗೇನೆ ಹಾಕುತ್ತಿದೆ ಸುತ್ತು.//


ನೆಲವ ಸೋಕದ ನವಿರು ಕನಸುಗಳಿಗೆಲ್ಲ
ನಯವಾದ ಒಲವಿನ ತೋಳ್ತೆಕ್ಕೆಯಲ್ಲಿ.....
ಇರುಳೆಲ್ಲ ಅರೆಬಿರಿದ ಕಣ್ಗಳ ಸುಖದ ನಿದಿರೆ ಕಾದಿದೆ,
ಗಂಭೀರ ಒಲವಿನ ನಿಯತ್ತು ಸಂಶಯಕ್ಕೀಡಾದಾಗ
ಸ್ವ ಸಮರ್ಥನೆಯ ನೂರು ಮಾತುಗಳಿಗಿಂತ......
ಒಂದೆ ಒಂದು ದೀರ್ಘ ಮೌನವೆ ಉತ್ತಮ ಮನದೊಡವೆ/
ಮೊದಲ ಭೇಟಿಯ ನಲಿವು
ಕೊನೆಯ ವಿದಾಯ ಭೇಟಿಯ ಕಾಠಿಣ್ಯದ ನೋವು....
ನೆನಪಲ್ಲಿ ಲೀನವಾದ ನನ್ನ ಬಾಳು ಇಷ್ಟೆ,
ಅದೇನೆ ಆದರೂ ನಿನ್ನನೆ ನಾನಿಷ್ಟ ಪಟ್ಟೆ.//


ಮತ್ತೆ ನಿನ್ನ ನೆನಪು ಕಾಡುವಾಗ
ಅದರ ಹಿನ್ನೆಲೆಯಲ್ಲಿ ನನ್ನ ಮನಸು ಬಾಡುವಾಗ...
ನಾನು ನಿನ್ನ ಹೆಸರನೆ ಗುನುಗುತೀನಿ
ನೋವಲೂ ಸೊರಗಿದ ಕಣ್ಣನ್ನ ತುಸು ಮಿನುಗುತೀನಿ.
ಕತ್ತಲ ತೋಳ್ತೆಕ್ಕೆಯಲ್ಲಿ ಬೆತ್ತಲಾದ ಕನಸುಗಳ
ನರನರಗಳಲ್ಲೂ ಕಾತರದ ತಹತಹಿಕೆಯಿದೆ/
ಪಿಸುಪಿಸು ಮನದ ಮಾತುಗಳಿಗೆ
ತುಸುತುಸು ಕನಸ ಹನಿಗಳ ಬೆರಸಿ.....
ಹಸಿಬಿಸಿ ಕನವರಿಕೆಗಳನ್ನೆಲ್ಲ ನಸುನಸು ಕನವರಿಸುವುದೆ
ನಿಜವಾದ ನಿಷ್ಕಲ್ಮಶ ಪ್ರೀತಿ,
ಗುಣವಾಗದ ಖಾಯಿಲೆ ನನಗೆ
ಅದಕ್ಕೆ ಇಂಬುಕೊಡುವ ವಿರಹದ ಮದ್ದನ್ನ ಜೊತೆಯಲ್ಲೆ ಕಂಡಾಗ....
ಎಲ್ಲರಿಗೂ ಅದರ ಹೆಸರು
ಒಲವೆನ್ನೋದು ಖಚಿತವಾಯ್ತು.//


ಹೂಮನ ಅಕಾಲದಲ್ಲಿ ಬಿರಿದು
ನಗುವನೆಲ್ಲೂ ಕಾಣದೆ....
ಮತ್ತೆ ಮೊಗ್ಗಾಗಿ ಮುದುಡಿ ಹೋಯಿತು,
ಗತಿಸುವ ಪ್ರತಿಘಳಿಗೆಯೂ ನಾನಂದುಕೊಳ್ಳುತ್ತೇನೆ
ನಾವಿಬ್ಬರೂ ಒಬ್ಬರನ್ನೊಬ್ಬರು ಕ್ಷುಲ್ಲಕ ಕಾರಣಗಳಂದಾಗಿ ಕಳೆದುಕೊಂಡು......
ಅಸಲಿಗೆ ಬದುಕಿನಲ್ಲಿ, ಕಳೆದುಕೊಂಡದ್ದಾದರೂ ಏನನ್ನ?/
ಮತ್ತೆಂದೂ ಮೂಡದ ನಿರೀಕ್ಷೆಯ ರವಿ
ಮುಳುಗದ ನಿರಾಸೆಯ ಶಶಿ....
ಬಾಳೆಂದುಬು ಹುಸಿ ಭರವಸೆಗಳ ನಿತ್ಯ ದೊಂಬರಾಟ,
ಮಾಸಿದ ಹೆಜ್ಜೆಗುರುತುಗಳು
ಸೊರಗಿ ಕ್ಷೀಣವಾದ ನಿರೀಕ್ಷೆಯ ಹಸಿರು ಹಾದಿ....
ಕೊನೆಯುಸಿರಲ್ಲೂ ಕನವರಿಸುತಿರೋದು ಕೇವಲ ನಿನ್ನನೆ.//


ಘಳಿಗೆಗೊಮ್ಮೆ ಎದೆಯ ದಂಡೆ ಸೋಕುವ
ನೆನಪಿನ ಅಲೆಗಳಿಂದ ಮನದ ತೀರವೆಲ್ಲ ಒದ್ದೆ ಒದ್ದೆ.....
ಗಾಳಿ ಹೇಳಿದ ಪೋಲಿ ಗುಟ್ಟಿಗೆ
ಹೂವಿನೆದೆಯಲ್ಲಿ ಎದ್ದಿರೋದು ಲಜ್ಜೆಯ ಕಂಪನ,
ನಿನ್ನ ನಿರ್ಲಕ್ಷ್ಯದ ಅರಿವಿದ್ದರೂ
ನಿನ್ನನೆ ಕಾಯುವ ನನ್ನ ಮೊಂಡ ಮನಕ್ಕೆ.....
ವಿವೇಕದ ಮಾತುಗಳು ಖಂಡಿತ ಅರ್ಥವಾಗಲಾರವು/
ಗುಡಿಸಿ ಹಾಕಿದರೂ ಸವೆದು ಹೋಗದ
ನಿನ್ನ ನೆನಪಿನ ಧೂಳೆಲ್ಲ ಮನದ ನೆಲವನ್ನ ಗಾಢವಾಗಿ ಆವರಿಸಿವೆ.....
ನೀನಿಲ್ಲದ ನಿನ್ನ ಸ್ಥಾನದಲ್ಲಿ ಇನ್ಯಾರನ್ನೋ ಕಲ್ಪಿಸಿಕೊಳ್ಳೋದೂ
ನನಗೆ ಅಸಾಧ್ಯ,
ಇದ್ದರೂ ಇಲ್ಲದಿದ್ದರೂ
ಆ ಜಾಗ ನಿನಗಷ್ಟೆ ಮೀಸಲು.//

No comments: