07 July 2013

ಸಂಕಟ ಸದಾ ಒಂಟಿ, ಸಂತಸಕ್ಕಷ್ಟೆ ಇರೋದು ನೂರು ನೆಂಟರು.....

ಇರುಳು ಸರಿಯದ ದುಗುಡದ ಚಾಪೆಯ ಮೇಲೆ
ನಿಜೀವ ಕನಸು ತೂಕಡಿಸುತ್ತಿದೆ....
ಮನ ಮೌನದಲ್ಲಿ ನೋವಿನಾಲಾಪವ ಮಂದ್ರದಲ್ಲಿಯೆ ಹೊರಡಿಸುತ್ತಿದೆ,
ಅನುಕ್ಷಣ ಕರಗಿ ನೀರಾದರೂ ಸಹ
ನೆನಪುಗಳ ನಿತ್ಯ ಸಾಂಗತ್ಯ....
ಮೌನಿ ಮನದ ಒಳಗೊಳಗೆ ಅವ್ಯಕ್ತ ಆಹ್ಲಾದವನ್ನೆ ಹೊತ್ತು ತರುತ್ತವೆ/
ಸ್ವಪ್ನದಲ್ಲಿಯೂ ನೀ ಕಳೆದು ಹೋಗುವ ಹೆದರಿಕೆಯ ಹಿನ್ನೆಲೆಯಲ್ಲಿ
ನಿದಿರೆ ಮರೆತ ಕಣ್ಣುಗಳು ನಿಶೆಯಿಡೀ.....
ತೂಕಡಿಸದೆ ನೆನಪ ನಶೆಯಲ್ಲಿ ತೇಲುತ್ತಿರುತ್ತದೆ,
ಕೆಲವೊಮ್ಮೆ ಕಾಡುವ ಈಡೇರದ ಕನಸುಗಳ ಜಾಡಿನಲ್ಲಿ
ಸತ್ತರೂ ಸರಿ ಮತ್ತೊಮ್ಮೆ ಸಾಗುವ ಅದಮ್ಯ ಹಂಬಲ....
ಎದೆಯೊಳಗಿನ್ನೂ ಅಡಗಿಯೆ ಇದೆ//


ಮನಸೋಲೋದೆಂದೂ ನಿಶ್ಚಿತವಲ್ಲ-ಯೋಜಿತವಲ್ಲ
ಅದಕ್ಕೆ ಬಹುಷಃ ಧಾರಾಳ ತಪ್ಪುಗಳು....
ಒಲವ ದಾರಿಯಲ್ಲಿ ಹಾಗೆಯೆ ಸಾಗುವಾಗ ಆಗಿಯೇ ತೀರುತ್ತವಲ್ಲ,
ಗಾಳಿಯ ನಿರ್ದಯ ನಿರಂತರ ದಾಳಿಗೆ ಸಿಲುಕಿ
ನಲುಗಿ ನೆಗ್ಗಾದರೂ ನಗುತಲೆ ಇರುವ ಹಳೆಯ ಸುಮದೆದೆಯೊಳಗೆ....
ತುಂಬಿರೋದು ಮಾತ್ರ ಮಂದ್ರ ಮಾರುತ
ಹಿಂದೊಮ್ಮೆ ಸೋಕಿದ್ದ ಮೋಹಕ ನೆನಪು ಮಾತ್ರ/
ಸಲುಗೆಯ ಪರಿಮಿತಿಯೆ ವಿರಹ
ಅತಿಯಾಗಿದ್ದಾಗಲೆ ಅಲ್ಲವ....
ಅದನ್ನ ಕರೆಯೋದು ಒಲವ ನವಿರು ಭಾವ?,
ಕಳುವಾದ ಕನಸಿನ ಬೆನ್ನು ಹತ್ತಿದ ಮನಸಿಗೆ
ನಿರಾಸೆ ಸದಾ ಕಟ್ಟಿಟ್ಟಿರೋದು ಅಭಾಸಕಾರಿ ವಾಸ್ತವ.//


ಮೌನದ ಚಾದರ ಹೊದ್ದು ಹೊರಬಿದ್ದ ಮನಕ್ಕೆ
ಮಾತಿನ ಝಡಿಮಳೆಯಲ್ಲಿ ತೋಯುವ ಅನಿವಾರ್ಯತೆಯಿಲ್ಲ.....
ಹೃದಯ ಹೊಕ್ಕು ಹೊರಬಂದ ನನ್ನ ಪ್ರತಿ ನೆತ್ತರ ಕಣಗಳೂ
ಸಹ ನಿನ್ನ ಹೆಸರ ಹಚ್ಚೆಯನ್ನ ಹೊತ್ತಿವೆ,
ಒಡಲಾಳದ ಒಲವಿನ ಮೂಕಭಾವಗಳಿಗೆ
ಮಾತಿನ ಒರತೆಯ ದಾರಿ ಕಾಣಿಸಿದ....
ನಿನ್ನ ಕನಸುಗಳಿಗೆ ನಾನು ಋಣಿ./
ಬೂದು ಮೋಡಗಳ ಒಡಲಲ್ಲಿ
ಸ್ಪಟಿಕ ಶುದ್ಧ ಮಳೆ ಹನಿಗಳು ಖಂಡಿತಾ ಇವೆ....
ನನ್ನೆದೆಯ ಚಿಪ್ಪಲ್ಲಿ ನಿನ್ನೆಡೆಗೆ ಸುರಿವ
ಒಲವ ಮುತ್ತುಗಳು ಹುದುಗಿರುವ ಹಾಗೆ,
ಕಣ್ಣ ಅಂಚಿನ ಕೊನೆಯಲ್ಲಿ
ಅವಿತು ಕುಳಿತ ಕಂಬನಿಯ ಕಿರು ಹನಿಗೂ....
ಅದ್ಯಾರದೋ ವಿರಹದ ವೇದನೆ.//


ನಂಬಿಕೆಯ ಬುನಾದಿಯೆ ಕುಸಿದು ಬೀಳುವಾಗಲೂ
ಆಳದಲ್ಲೊಂದು ಆಶಾವಾದ ಕುಟುಕು ಜೀವವನ್ನ ಹಿಡಿದೆ ಇರುತ್ತದೆ.....
ನೋವ ನೆಲೆಯಲ್ಲಿಯೂ ಭರವಸೆಯ ಎಳೆಗಳಿವೆ
ಕ್ಷಣ ಭಂಗುರ ಮಾತಿಗಿಂತ ಮೌನದ ಲೇಪವೆ ಬಾಳಿನ ಕುರೂಪಕ್ಕೆ ಭೂಷಣ,
ನೆನಪ ಜೊತೆಯಿರದ ಏಕಾಂತ
ಸ್ಮೃತಿ ಸೆಲೆ ಬತ್ತಿ ಹೋದ ಲೋಕಾಂತ.....
ಎರಡೂ ಬರಿ ಬರಡು/
ಇಳಿಸಂಜೆಯ ಆವರಣಕ್ಕೆ
ಕನಸಿನ ಗಗನನೌಕೆ ಮೆಲ್ಲಗೆ ಇಳಿದು ಬರುತಿದೆ....
ತುಂಟ ತಾವರೆ ಕಣ್ಗಳಿಗೆ
ಸೋಕಲಿ ಸವಿನಿದಿರೆ ಅರೆಘಳಿಗೆ,
ಮುಂಜಾವು ಸುಂದರವಾಗೋದು
ಕಾರಿರುಳು ಸವಿ ಗುಂಗಾಗಿ ಕಾಡೋದು....
ನಿನ್ನ ನೆನಪುಕ್ಕುವಾಗ ಮಾತ್ರ.//

No comments: