22 October 2015

ವಲಿ - ೧೩







ಮೆಕ್ಕಾ ನಗರ ಪ್ರಾಚೀನ ಕಾಲದಿಂದಲೂ ಒಂದು ಧಾರ್ಮಿಕ ಕೇಂದ್ರವಾಗಿತ್ತು. ಅಲ್ಲಿದ್ದ ಪ್ರಸಿದ್ಧ ಕಾಬಾ ಗುಡಿಗೆ ಯಹೂದಿಗಳು, ಕ್ರೈಸ್ತರು ಹಾಗೂ ಮೂರ್ತಿಪೂಜಕ ಸಮುದಾಯದವರು ಸಮಾನ ಶ್ರದ್ಧೆಯಿಂದ ನಡೆದುಕೊಳ್ಳುತ್ತಿದ್ದರು. ವಾರ್ಷಿಕವಾಗಿ ದೊಡ್ದ ಹಾಗೂ ಚಿಕ್ಕ ಯಾತ್ರೆಗಳು ನಡೆಯುವ ಕ್ರಮವಿದ್ದು, ಅಲ್ಲಿನ ಯಾತ್ರೆಗೆ ಹೋಗುವುದು ಪವಿತ್ರ ಕಾರ್ಯ ಎನ್ನುವ ಮನೋಭಾವನೆ ಪ್ರತಿಯೊಂದು ಸಮುದಾಯದಲ್ಲೂ ಇತ್ತು. ಧಾರ್ಮಿಕ ಕೇಂದ್ರವಾಗಿರುವುದರ ಜೊತೆಗೆ ಅದೊಂದು ಪ್ರಸಿದ್ಧ ವ್ಯಾಪಾರ ವಾಹಿವಾಟಿನ ಕೇಂದ್ರವೂ ಸಹ ಆಗಿತ್ತು. ಅಂದಿನ ವ್ಯಾಪಾರಗಳೆಲ್ಲ ಸಾರ್ಥ ಅಥವಾ ಕ್ಯಾರವಾನ್'ಗಳನ್ನ ಅವಲಂಬಿಸಿತ್ತು. ಒಂದು ಪ್ರದೇಶದಲ್ಲಿ ಕಡಿಮೆ ಬೆಲೆಗೆ ಸಿಗುವ ಉತ್ಕೃಷ್ಟ ವಸ್ತುಗಳನ್ನ, ಸಾಮಾನು ಸರಂಜಾಮುಗಳನ್ನ ಚಿನ್ನದ ಬೆಲೆಗೆ ಅಥವ ಬೆಳ್ಲಿಯ ಕ್ರಯಕ್ಕೆ ವಿಕ್ರಯಿಸಿ ಇನ್ನೊಂದು ಜಾಗದಲ್ಲಿ ಅದರ ಬೇಡಿಕೆಯನ್ನ ಪೂರೈಸಲು ಹೊತ್ತೊಯ್ದು ವ್ಯಾಪಾರ ಮಾಡುವುದನ್ನೆ ಕ್ಯಾರವಾನ್ ಎನ್ನಲಾಗುತ್ತದೆ.


ಅಂದಿನ, ಕಾಂಚಿ, ಮಿಥಿಲಾ, ಬಾದಾಮಿ, ಮುಲ್ತಾನ, ಸೋಮನಾಥ, ಅಮೃತಸರ, ಮಥುರಾ, ಟೆಹರಾನ, ಬಗ್ದಾದ್, ಕೈರೋ, ಮೆಕ್ಕಾ, ಬಸ್ರಾ ಇವೆಲ್ಲಾ ಪ್ರಸಿದ್ಧ ಕ್ಯಾರವಾನ್ ನಿಲ್ದಾಣಗಳೂ ಹಾಗೂ ವ್ಯಾಪಾರಿ ಕೇಂದ್ರಗಳೂ ಆಗಿದ್ದವು. ಮೆಕ್ಕಾದಿಂದ ಬೆಲೆ ಬಾಳುವ ಖನಿಜ ಸಂಪತ್ತು, ಸಾಂಬ್ರಾಣಿ - ಸೋಬಾನ ಹಾಗೂ ಇನ್ನಿತರ ಸುಗಂಧ ದ್ರವ್ಯಗಳು ಈ ಸಾರ್ಥಗಳ ಮೂಲಕ ಹೊರ ದೇಶಗಳಿಗೆ ರಫ್ತಾಗುತ್ತಿದ್ದವು. ಅದೇ ಬಗೆಯಲ್ಲಿ ಅಲ್ಲಿಗೆ ಹೋದ ಕ್ಯಾರವಾನುಗಳು ಮತ್ತೆ ಹಿಂದಿರುಗುವಾಗ ಅಲ್ಲಿಂದ ರೇಷ್ಮೆ ಬಟ್ಟೆಗಳು - ಸಿದ್ಧ ಉಡುಪುಗಳು, ಹಾಗೂ ಆಹಾರೋತ್ಪನ್ನಗಳು ಅಲ್ಲಿಂದ ಇಲ್ಲಿಗೆ ಬಂದು ಮುಟ್ಟಿಸುತ್ತಿದ್ದವು. ಸಿರಿಯಾ ಹಾಗೂ ಪರ್ಷಿಯಾದೊಂದಿಗೆ ಈ ವಾಣಿಜ್ಯ ವಹಿವಾಟನ್ನ ಮೆಕ್ಕಾದ ಖುರೈಷಿಗಳು ಅನಾದಿ ಕಾಲದಿಂದಲೂ ಇಟ್ಟುಕೊಂಡಿದ್ದರು. ಇಂತಹ ಕ್ಯಾರವಾನುಗಳಲ್ಲಿ ಸಾಮಾನ್ಯವಾಗಿ ಎರಡು ಅಥವಾ ಎರಡೂವರೆ ಸಾವಿರ ಒಂಟೆಗಳು ಹೇರನ್ನ ಹೊರಲು ಬಳಕೆಯಾಗುತ್ತಿದ್ದವು.




ಈ ವ್ಯಾಪಾರಗಳ ಲಾಭದಿಂದ ಮೆಕ್ಕಾದ ಖುರೈಷಿಗಳು ಸಹಜವಾಗಿ ಲಾಭ ಕಾಣುತ್ತಿದ್ದರು. ಆದರೆ ಅವರಿಗಿದ್ದ ದೊಡ್ಡ ತಲೆ ನೋವೆಂದರೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿಸುವಾಗ ಈ ಕ್ಯಾರವಾನ್'ಗಳ ಸುರಕ್ಷತೆಯದ್ದು. ಅವುಗಳ ಸಂರಕ್ಷಣೆ ಹಾಗೂ ಸುರಕ್ಷತೆ ಬಹುತೇಕ ಕಠಿಣವಾಗಿತ್ತು. ದಾರಿ ಮಧ್ಯದಲ್ಲಿ ಕಳ್ಳಕಾಕರ ಭಯವಿತ್ತು. ದರೋಡೆಕೋರರು ಹಾದಿ ಮಧ್ಯದಲ್ಲಿಯೆ, ಅದರಲ್ಲೂ ವಿಶೇಷವಾಗಿ ರಾತ್ರಿಯ ಹೊತ್ತಿನಲ್ಲಿ ಹೊಂಚು ಹಾಕಿ ಕ್ಯಾರವಾನ್'ಗಳನ್ನ ಲೂಟಿ ಮಾಡುತ್ತಿದ್ದರು. ಅದರ ವಿರುದ್ಧ ಅನೇಕ ರಕ್ಷಣಾ ಕ್ರಮಗಳನ್ನ ವ್ಯಾಪಾರಿಗಳೆಲ್ಲ ರೂಢಿಸಿಕೊಂಡಿದ್ದರಾದರೂ ಸಹ ಅದು ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ರಕ್ಷಣೆಯ ಜೊತೆಗೆ ಗೂಢಚಾರರನ್ನ ನೇಮಿಸಿಕೊಂಡು ದರೋಡೆಕೋರರ ಕುರಿತು ಮೊದಲೆ ಮಾಹಿತಿ ಕಲೆ ಹಾಕುವ ಕ್ರಮವನ್ನೂ ಸಹ ಈ ಹಿನ್ನೆಲೆಯಲ್ಲಿ ರೂಢಿಗೆ ತರಲಾಯಿತು.



ಮಹಮದನಿಗೆ ಖತೀಜಾಳ ಕ್ಯಾರವಾನಿನೊಂದಿಗೆ ಈಗಾಗಲೆ ವ್ಯಾಪಾರಕ್ಕಾಗಿ ಸಿರಿಯಾ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಿಗೆ ಹೋಗಿ ಬಂದ ಗಾಢ ಅನುಭವವಿತ್ತು. ಹೀಗಾಗಿ ಈ ಬಡತನದ ಬೇಗೆಯಿಂದ ಹೀಗೆ ತಾನೂ ತನ್ನ ಸಮುದಾಯದವರೂ ಬಳಲಿ ಸಾಯುವುದಕ್ಕಿಂತ ಕ್ಯಾರವಾನ್'ಗಳ ಲೂಟಿ ಮಾಡುವ ಮೂಲಕ ಸಿರಿಯನ್ನ ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು ಎನ್ನುವ ಹಂಚಿಕೆಯನ್ನ ಅವನು ಹಾಕಿದ. ಅದರ ಪ್ರಕಾರ ಹಂಝಾನ ನೇತೃತ್ವದಲ್ಲಿ ಒಂದು ದರೋಡೆಯ ಪಡೆಯನ್ನ ಮದೀನಾ ವಲಸೆಯ ನಂತರದ ಏಳನೆ ತಿಂಗಳಿನಲ್ಲಿ ರಚಿಸಲಾಯಿತು. ಅವನ ಮುಂದಾಳತ್ವದಲ್ಲಿ ಮೂವತ್ತು ಸದೃಢ ಯುವಕರ ಪಡೆಯನ್ನ ಸಿರಿಯಾದಿಂದ ಮದೀನಾ ಮಾರ್ಗವಾಗಿ ಮೆಕ್ಕಾದೆಡೆಗೆ ಸಾಗುತ್ತಿದ್ದ ಕ್ಯಾರವಾನ್ ಒಂದನ್ನ ಲೂಟಿ ಹೊಡೆಯಲು ಕಳಿಸಲಾಯಿತು. ಆದರೆ ಖುರೈಷಿಗಳು ಸಂಖ್ಯೆಯಲ್ಲಿ ಹತ್ತಿರ ಹತ್ತಿರ ಮೂರು ಸಾವಿರದ ಮೇಲಿದ್ದರು. ಅಲ್ಲದೆ ಅವರೆಲ್ಲಾ ಬಹುಪಾಲು ಮಹಮದನ ಬಂಧು ವರ್ಗದವರೆ ಆಗಿದ್ದರು. ಹೀಗಾಗಿ ಸೆರೆಯಾದ ಇವರ ತಂಡವನ್ನ ಶಿಕ್ಷಿಸಲು ಬಿಡದೆ ಸೆರೆ ಸಿಕ್ಕ ನಂತರ ರಾಜಿ ಪಂಚಾಯ್ತಿ ಮಾಡಿ ಸುರಕ್ಷಿತವಾಗಿ ಹಿಂದುರುಗಿ ಹೋಗಲು ಹಂಝಾನ ಪಡೆಗೆ ಅವಕಾಶ ಕೊಡಲಾಯಿತು ಎನ್ನುತ್ತಾನೆ ತನ್ನ 'ಮಹಮದ್' ಕೃತಿಯಲ್ಲಿ ಇತಿಹಾಸಕಾರ ಕ್ಯಾರನ್ ಅರ್ಮಸ್ಟ್ರಾಂಗ್.


ಹಂಝಾ ಬರಿಗೈಯಲ್ಲಿ ಹಿಂದಿರುಗಿದ್ದನ್ನ ನೋಡಿ ಮಹಮದ್ ಏನೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಆತ ಪುನಃ ಒಂದು ತಿಂಗಳ ಬಳಿಕ ತನ್ನ ಸಮೀಪದ ಬಂಧುವಾಗಿದ್ದ ಒಬೈದ್'ನ ನೇತೃತ್ವದಲ್ಲಿ ಇನ್ನೊಂದು ದಾಳಿಕೋರರ ಪಡೆಯನ್ನ ಕ್ಯಾರವಾನ್ ದೋಚಲು ಮಾರ್ಗದರ್ಶಿಸಿ ಕಳಿಸಿದ. ಆಗಲೂ ಖುರೈಷಿಗಳ ಇನ್ನೂರು ಮಂದಿ ಕಾವಲು ಕಾಯುತ್ತಿದ್ದ ಆ ಸಾರ್ಥವನ್ನ ದೋಚುವುದಿರಲಿ ಹತ್ತಿರ ಸಹ ಸಾಗಲಾಗದ ಮುಸಲ್ಮಾನರ ಮೂವತ್ತು ಮಂದಿಯ ಪಡೆ ದೂರದಿಂದಲೆ ಬಾಣ ಬೀಸಿ ತೃಪ್ತಿ ಪಡಬೇಕಾಯಿತು. ಒಬೈದ್ ಆಗ ಹೊಡೆದಿದ್ದ ಬಾಣ 'ಇಸ್ಲಾಮಿನ ಮೊದಲ ಬಾಣ' ಎಂದು ಬಣ್ಣಿಸಿದ್ದಾನೆ ತನ್ನ 'ಪ್ರವಾದಿಯ ಜೀವನ ಚರಿತ್ರೆಯಲ್ಲಿ' ಇತಿಹಾಸಕಾರ ಅಲ್ ತಮೀಮಿ.


ಪುನಃ ಇನ್ನೊಂದು ತಿಂಗಳ ಅಂತರದ ನಂತರ ಅಬು ಬಖ್ವಾಸನ ನೇತೃತ್ವದಲ್ಲಿ ಇನ್ನೊಂದು ಲೂಟಿಕೋರರ ಪಡೆಯನ್ನ ಮಹಮದ್ ಕ್ಯಾರವಾನ್'ಗಳ ಮೇಲೆರಗಲು ಕಳುಹಿಸಿದ. ಆದರೆ ಈ ಪ್ರಯತ್ನವೂ ಸಹ ಹುಸಿ ಹೋಯಿತು. ಅವರು ನಿರ್ಧರಿಸಿದ ಸ್ಥಳವನ್ನ ತಲುಪುವ ಮೊದಲೆ ಕ್ಯಾರವಾನ್ ಅಲ್ಲಿಂದ ಬಹುದೂರ ಸಾಗಿ ಹೋಗಿದ್ದರಿಂದ ಆಗಬಹುದಾದ ಹಾನಿಯಿಂದ ಖುರೈಷಿಗಳು ತಪ್ಪಿಸಿಕೊಂಡರು ಹಾಗೂ ಮಹಮದನ ಹಂಚಿಕೆ ವಿಫಲಗೊಂಡಿತು. ಇದರೆಲ್ಲದರಿಂದ ಬೇಸತ್ತ ಮಹಮದ್ ಮುಂದಿನ ಬೇಸಿಗೆಯ ಕಾಲದಲ್ಲಿ ಸ್ವಲ್ಪ ವಿರಾಮದ ನಂತರ ತಾನೆ ಒಂದು ಪಡೆಯ ನೇತೃತ್ವ ವಹಿಸಿ ಧಾಳಿ ಸಂಘಟಿಸಲು ಖುದ್ದಾಗಿ ಹೊರಟನು.



ಮೆಕ್ಕಾದಿಂದ ಒಂದು ಖುರೈಷಿಗಳ ಕ್ಯಾರವಾನ್ ಸಿರಿಯಾದ ಬಸ್ರಾದ ದಿಕ್ಕಿಗೆ ಹೋಗುವ ಮಾಹಿತಿಯನ್ನ ಅನುಸರಿಸಿ ಅವರು ಧಾಳಿಯ ರೂಪುರೇಷೆಗಳನ್ನ ನಿರ್ಧರಿಸಿದ್ದರು. ಆದರೆ ಈಸಲವೂ ಹೋಗುವುದು ಕೊಂಚ ತಡವಾಗಿ ಖುರೈಷಿಗಳ ಸಾರ್ಥ ಅದಾಗಲೆ ಬಹುದೂರ ಸಾಗಿ ಹೋದ ಕಾರಣ ಎಲ್ಲಾ ಯೋಚನೆಗಳೂ ಯೋಜನೆಗಳಾಗುವ ಮುನ್ನವೆ ನೆಲ ಕಚ್ಚಿ ಹೋದವು. ಮಹಮದ್ ಅತೀವ ನಿರಾಸೆಗೊಂಡ. ಆದರೆ ಹಿಂದಿರುಗುವ ಹಾದಿಯಲ್ಲಿ ಮಹಮದ್ ಅಲ್ಲಿನ ಬಾನ್ ಮುಂಡ್ಲಿಜ್ ಬುಡಕಟ್ಟಿನ ನೇತಾರರನ್ನ ಸಂಧಿಸಿ ಅವರೊಂದಿಗೆ ಒಪ್ಪಂದಗಳನ್ನ ಮಾಡಿಕೊಂಡ. ಮಹಮದನ ನೇತೃತ್ವದಲ್ಲಿ ನಡೆದ ಮೊತ್ತಮೊದಲ ಈ ದಂಡಯಾತ್ರೆಯನ್ನ 'ಅಲ್ ಅದ್ವಾ ದಂಡಯಾತ್ರೆ' ಎಂದು ಕರೆಯಲಾಗಿದೆ. ಇದಾದ ಬಳಿಕ ಕ್ರಿಸ್ತಶಕೆ ೬೨೪ರಲ್ಲಿ ಮಹಮದ್ ತನ್ನ ಸಮುದಾಯದ ಸಮಗ್ರತೆಯ ದೃಷ್ಟಿಯಿಂದ ನವೆಂಬರ್ ಹಾಗೂ ಡಿಸೆಂಬರಿನ ಆಸುಪಾಸಿನಲ್ಲಿ ಏಳು ಜನರ ನಿರಾಶ್ರಿತರ ಪಡೆಯೊಂದನ್ನ ಅಬ್ದುಲ್ಲ ಇಬ್ನ ಜಹ್ವ್ ಎಂಬಾತನ ನೇತೃತ್ವದಲ್ಲಿ ರಚಿಸಿದ. ತನ್ನ 'ಸೀಲ್ಡ್ ನೆಕ್ಟರ್' ಕೃತಿಯಲ್ಲಿ ಇತಿಹಾಸಕಾರ ಅಲ್ ಮುಬಾರಖಿ ಈ ಅಬ್ದುಲ್ಲಾನನ್ನ 'ಇಸ್ಲಾಮಿನ ಮೊತ್ತಮೊದಲ ಸೇನಾಧಿಪತಿ' ಎಂದೆ ಕರೆದಿದ್ದಾನೆ.


ಇದಾಗಿ ತಿಂಗಳ ನಂತರ ಅವನ ಪಡೆಗೆ ಅದೇಶವೊಂದನ್ನ ನೀಡಿದ ಮಹಮದ್ ಒಂದು ಪತ್ರ ಬರೆಸಿ ಅದನ್ನ ಮುಚ್ಚಿದ ಲಕೋಟೆಯಲ್ಲಿರಿಸಿ ಅಬ್ದುಲ್ಲಾನ ಕೈಗಿತ್ತ. ಮೆಕ್ಕಾ ಸಮೀಪದ ಜಾಗವೊಂದರಲ್ಲಿ ಹೋಗಿ ಠಿಕಾಣಿ ಹೂಡಬೇಕೆಂದೂ, ಅಲ್ಲಿ ಹೋಗಿ ಮುಟ್ಟಿದ ನಂತರ ಈ ಪತ್ರವನ್ನ ಒಡೆದು ಓದಬೇಕೆಂದೂ ಮೌಖಿಕವಾದ ಆದೇಶವನ್ನವನಿಗೆ ನೀಡಲಾಯಿತು. ಅದರಂತೆಯೆ ಅಬ್ದುಲ್ಲಾ ಅಲ್ಲಿ ಹೋದ ನಂತರ ಅದನ್ನ ಒಡೆದು ಓದಿದಾಗ ಅದರಲ್ಲಿ 'ನಖ್ಲಾ' ಎನ್ನುವ ಸ್ಥಳದಲ್ಲಿ ಬೀಡು ಬಿಡಬೇಕೆಂದೂ ಅಲ್ಲಿನ ಹಾದಿಯಾಗಿ ಮರುದಿನ ಒಂದು ಕ್ಯಾರವಾನ್ ಖುರೈಷಿಗಳದ್ದು ಹೋಗಲಿದೆಯೆಂದೂ, ಅದನ್ನ ದೋಚ ಬೇಕೆಂದೂ ಸೂಚಿಸಲಾಗಿತ್ತು. ಅದರನುಸಾರ ಅಬ್ದುಲ್ಲ ನಖ್ಲಾದಲ್ಲಿ ಬೀಡು ಬಿಟ್ಟ.



ಅಲ್ಲಿ ಅವನ ಪಡೆ ಹೊಂಚು ಹಾಕಿ ಕಾಯುವಾಗ ಖುರೈಷಿಗಳ ಒಂದು ಕ್ಯಾರವಾನ್ ದ್ರಾಕ್ಷಿ, ಚರ್ಮದ ವಸ್ತುಗಳು ಹಾಗೂ ಆಹಾರ ಪದಾರ್ಥಗಳನ್ನ ಹೊತ್ತು ಸಾಗುತ್ತಾ ಬಂತು. ಅದರ ರಕ್ಷಣೆಯ ಹೊಣೆಯನ್ನ ಕೇವಲ ನಾಲ್ಕೆ ನಾಲ್ಕು ಖುರೈಷಿ ಯೋಧರು ಹೊತ್ತುಕೊಂಡಿದ್ದರು. ಖುರೈಷಿಗಳ ನಂಬಿಕೆಯ ಪ್ರಕಾರ ಅವು ಶಾಂತಿಯ ಮಾಸದ ದಿನಗಳಾಗಿದ್ದು ಯಾವುದೆ ಬುಡಕಟ್ಟಿನವರು ಪರಸ್ಪರ ಕಾದಾಡುವುದಾಗಲಿ, ಹೋರಾಡಿ ರಕ್ತಪಾತ ನಡೆಸುವುದಾಗಲಿ ಸಾಧ್ಯವಿರಲಿಲ್ಲ. ಪರಸ್ಪರರು ಸಂಪ್ರದಾಯದ ಪ್ರಕಾರ ಯುದ್ಧ ಮಾಡದೆ ಶಾಂತಿಯನ್ನ ಕಾಪಾಡಿಕೊಂಡು ಬರಬೇಕಾಗಿತ್ತು. ಹೀಗಾಗಿಯೆ ರಕ್ಷಣೆಗೆ ಹೆಚ್ಚು ಯೋಧರನ್ನ ಅಲ್ಲಿ ನಿಯೋಜಿಸಲಾಗಿರಲಿಲ್ಲ. ಇಂತಹ ಸದಾವಕಾಶವನ್ನ ಕಳೆದುಕೊಳ್ಳಲು ಅಬ್ದುಲ್ಲಾನಂತೂ ತಯ್ಯಾರಿರಲಿಲ್ಲ. ಹೀಗಾಗಿ ಖುರೈಷಿಗಳ ನಿರೀಕ್ಷೆಗೆ ವಿರುದ್ಧವಾಗಿ ಮುಸಲ್ಮಾನರು ಅವರ ಮೇಲೆ ಧಾಳಿ ಎಸಗಿದರು. ಖುರೈಷಿ ಯುವಕ ಅಲ್ ಹದ್ರಮಿ ಈ ಕಾದಾಟದಲ್ಲಿ ಹತನಾದ. ಅಲ್ ನೆಫಾಲ್ ಎಂಬಾತ ಮಾತ್ರ ಕುದುರೆ ಏರಿ ಅಲ್ಲಿಂದ ಪಾರಾಗಲು ಯಶಸ್ವಿಯಾದ ಬಾಕಿ ಇಬ್ಬರನ್ನ ಹೆಡೆಮುರಿ ಕಟ್ಟಿ ಸೆರೆ ಹಿಡಿಯಲಾಯಿತು.




ಅತ್ತ ನೆಫಾಲ್ ಮೆಕ್ಕಾಗೆ ಮರಳಿ ಆತಂಕಿತನಾಗಿ ತನ್ನ ಗುಂಪಿನವರಿಗೆ ದರೋಡೆಯ ಸುದ್ದಿ ಮುಟ್ಟಿಸುವ ಕಾಲಕ್ಕೆ ಇತ್ತ ಅಬ್ದುಲ್ಲಾ ದೋಚಿದ ಸರಕುಗಳೊಡನೆ ಸುರಕ್ಷಿತವಾಗಿ ಇಬ್ಬರು ಬಂಧಿಗಳೊಂದಿಗೆ ಮದೀನಾ ಬಂದು ಮುಟ್ಟಿ ಆಗಿತ್ತು. ತನ್ನ ಆಜ್ಞೆ ಕೇವಲ ಹೆದರಿಸಿ ದೋಚುವುದಕ್ಕೆ ಮಾತ್ರ ಸೀಮಿತವಾಗಿದ್ದರೂ ಸಹ ಅಬ್ದುಲ್ಲಾ ಕೊಲೆಯೊಂದನ್ನ ಮಾಡಿ ರಕ್ತ ಹರಿಸಿದ್ದು ಮಹಮದನಿಗೆ ಸರಿ ಕಾಣಲಿಲ್ಲ. ಸಾಲದ್ದಕ್ಕೆ ಸಮುದಾಯದ ಪ್ರತಿರೋಧವನ್ನೂ ಸಹ ತಾನು ಈ ಕಾರಣದಿಂದ ಎದುರಿಸಬೇಕಾಗಿ ಬಂದೀತು ಅನ್ನುವ ಅಪಾಯದ ಅರಿವು ಆತನಿಗಿದ್ದೇ ಇತ್ತು. ಅಬ್ದುಲ್ಲಾ ನನ್ನು ಮೇಲ್ನೋಟಕ್ಕೆ ಆತ ಈ ಬಗ್ಗೆ ಅಸಮ್ಮತಿಯಿಂದ ನಿಂದಿಸಿದ್ದು ಹೌದಾದರೂ, ಅಂತರಂಗದಲ್ಲಿ ಅವರ ಸ್ಥೈರ್ಯವನ್ನ ಉಡುಗಿಸಲು ಆತ ತಯ್ಯಾರಿರಲಿಲ್ಲ. ಅವರ ಆ ಕಾರ್ಯಕ್ಕೆ ಹೊಗಳಿಕೆಯಂತೆಯೆ ಮುಂದೆ ಖುರ್ಹಾನಿನ ೨/೨೧- ೧೭ ಹಾಗೂ ೯/೩-೬ರ ಸಾಲುಗಳು ಸರಾಗವಾಗಿ ದೈವವಾಣಿಯ ಹೆಸರಿನಲ್ಲಿ ಮಹಮದನ ಕಂಠದಿಂದ ಮೂಡಿ ಹೊರಬಂದವು.


ಅದರ ಪ್ರಕಾರ ದೇವರು "ಅಲ್ಲಾಹನು ಹಾಗೂ ಅವನ ಸಂದೇಶವಾಕರು ಬಹುದೇವವಿಶ್ವಾಸಿಗಳಿಂದ ಯಾವುದೆ ಹೊಣೆಯಿಂದ ವಿಮುಕ್ತರಾಗಿರುವವರೆಂದೂ, ಅಲ್ಲಾಹ ಮತ್ತವನ ರಸೂಲರ ಕಡೆಯಿಂದ 'ಹಝ್ ಉಲ್ ಅಕ್ಬರ' ಅಂದರೆ ಪವಿತ್ರ ಹಝ್ ಯಾತ್ರೆಯ ದಿನದಂದು ಮಾಡುತ್ತಿರುವ ಘೋಷಣೆಯ ಅನುಸಾರ ನೀವು ಪಶ್ಚಾತಾಪ ಪಟ್ಟರೆ ನಿಮಗೆ ಒಳಿತು! ಒಂದುವೇಳೆ ಅದರಿಂದ ನೀವು ವಿಮುಖರಾದರೆ ಯಾವುದೆ ರೀತಿಯಿಂದಲೂ ಅಲ್ಲಾಹನನ್ನು ನೀವು ಪರಾಜಿತಗೊಳಿಸಲಾರಿರಿ ಎಂದು ಚೆನ್ನಾಗಿ ತಿಳಿದುಕೊಳ್ಳಿರಿ, ಓ ಪೈಗಂಬರರೆ ಎಲ್ಲಾ ಸತ್ಯ ನಿಷೇಧಿಗಳಿಗೆ ವೇದನಾಯುಕ್ತವಾದ ಈ ಸುವಾರ್ತೆ(?)ಯನ್ನ ತಿಳಿಸಿಬಿಡಿರಿ?!"


"ನೀವು ಒಪ್ಪಂದ ಮಾಡಿಕೊಂಡಿದ್ದು, ತಮ್ಮ ಒಪ್ಪಂದದ ಪಾಲನೆಯಲ್ಲಿ ಅವರು ನಿಮ್ಮೊಂದಿಗೆ ಯಾವತ್ತಾದರೂ ಲೋಪವೆಸಗದಿದ್ದರೆ ಹಾಗೂ ನಿಮ್ಮ ವಿರುದ್ಧ ಇನ್ಯಾರಿಗೂ ಸಹಾಯ ಮಾಡದಿದ್ದರೆ, ಆ ಬಹುದೇವವಿಶ್ವಾಸಿಗಳು ಇದಕ್ಕೆ ಹೊರತಾಗಿದ್ದಾರೆ. ಇಂತವರೊಂದಿಗೆ ಆ ನಿರ್ದಿಷ್ಟ ಅವಧಿಯ ವರೆಗೆ ನೀವೂ ಒಪ್ಪಂದವನ್ನ ಪಾಲಿಸಿ. ಏಕೆಂದರೆ ಅಲ್ಲಾಹನು ಧರ್ಮನಿಷ್ಠರನ್ನೆ ಮೆಚ್ಚುತ್ತಾನೆ. ಆದರೆ ನಿಷೇಧಿತ ಮಾಸಗಳನ್ನ ಕಳೆದ ಬಳಿಕ ಈ ಕಪಟಿ ಬಹುದೇವವಿಶ್ವಾಸಿಗಳನ್ನ ಸಿಕ್ಕಲ್ಲಿ ವಧಿಸಿರಿ. ಅವರನ್ನ ಸೆರೆ ಹಿಡಿಯಿರಿ, ಮುತ್ತಿಗೆ ಹಾಕಿರಿ ಹಾಗೂ ಬೇಹು ನಡೆಸುವಲ್ಲೆಲ್ಲಾಅವರನ್ನ ಹೊಂಚು ಹಾಕುತ್ತಾ ಕುಳಿತುಕೊಳ್ಳಿರಿ. ಮುಂದೆ ಅವರು ಪಶ್ಚಾತಾಪ ಪಟ್ತು ನಮಾಝನ್ನ ಸಂಸ್ಥಾಪಿಸಿದರೆ ಹಾಗೂ ಝಕಾತ್ ಕೊಟ್ಟರೆ ಅವರನ್ನ ಬಿಟ್ಟು ಬಿಡಿರಿ. ಅಲ್ಲಹನು ಕ್ಷಮಾಶೀಲನೂ! ಕರುಣಾನಿಧಿಯೂ ಆಗಿರುತ್ತಾನೆ?!"



"ಬಹುದೇವವಿಶ್ವಾಸಿಗಳ ಪೈಕಿ ಯಾರಾದರೂ ( ಅಲ್ಲಾಹನ ವಾಣಿಯನ್ನಾಲಿಸಲಿಕ್ಕಾಗಿ.) ನಿಮ್ಮೊಡನೆ ಅಭಯ ಯಾಚಿಸಿ ನಿಮ್ಮ ಬಳಿಗೆ ಬರಲು ಇಚ್ಛಿಸಿದರೆ ಅಲ್ಲಾಹನ ವಚನವನ್ನು ಅವನು ಆಲಿಸಿಕೊಳ್ಳುವವರೆಗೆ ಅವನಿಗೆ ಅಭಯ ನೀಡಿರಿ. ಅನಂತರ ಅವನನ್ನು ಅವನ ಸ್ಥಾನಕ್ಕೆ ಸುರಕ್ಷಿತವಾಗಿ ತಲುಪಿಸಿಬಿಡಿರಿ. ಅವರು ತಿಳುವಳಿಕೆ ಇಲ್ಲದವರಾದುದರಿಂದ(?) ಹೀಗೆ ಮಾಡಬೇಕಿದೆ"


ಈ ಬಹುದೇವವಿಶ್ವಾಸಿಗಳಿಗೆ ಅಲ್ಲಾಹ ಮತ್ತು ಅವನ ರಸೂಲರ ಬಳಿ ಒಪ್ಪಂದ ಇರುವುದಾದರೆ ಅದು ಹೇಗೆ? ಮಸ್ಝಿದ್ ಉಲ್ ಹರಾಮ್ ಬಳಿ ಒಪ್ಪಂದ ಮಾಡಿಕೊಂಡವರೊಡನೆ ಹೊರತು ಅವರು ನಿಮ್ಮೊಡನೆ ನೇರವಾಗಿರುವವರೆಗೂ ನೀವೂ ಅವರೊಡನೆ ನೇರವಾಗಿ ವರ್ತಿಸಿ. ಏಕೆಂದರೆ ಅಲ್ಲಾಹನು ಧರ್ಮ ನಿಷ್ಠರನ್ನು ಮೆಚ್ಚುತ್ತಾನೆ"


"ಆದರೆ ಅವರ ಹೊರತು ಇತರ ಬಹುವಿಶ್ವಾಸಿಗಳೊಂದಿಗೆ ಒಪ್ಪಂದ ಇರುವುದಾದರೂ ಹೇಗೆ? ಅವರ ಅವಸ್ಥೆ ಏನೆಂದರೆ ಅವರು ನಿಮ್ಮ ಮೇಲೆ ಜಯ ಗಳಿಸಿದರೆ ನಿಮ್ಮ ವಿಷಯದಲ್ಲಿ ಬಾಂಧವ್ಯವನ್ನಾಗಲಿ, ಒಪ್ಪಂದದ ಹೊಣೆಗಾರಿಕೆಯನ್ನಾಗಲಿ ಪರಿಗಣಿಸುವುದಿಲ್ಲ. ಅವರ ಅಂತಃಕರಣಗಳು ನಿಷೇಧಿಸುತ್ತವೆ.ಅವರಲ್ಲಿ ಹೆಚ್ಚಿನವರು ಕರ್ಮಭ್ರಷ್ಟರು ಅವರು ಅಲ್ಲಾಹನ ಸೂಕ್ತಗಳ ಬದಲಿಗೆ ಅತ್ಯಲ್ಪ ಬೆಲೆಯನ್ನು ಸ್ವೀಕರಿಸಿಕೊಂಡಿರುವವರು. ಅನಂತರ ಅಲ್ಲಾಹನ ಮಾರ್ಗಕ್ಕೆ ತಡೆಯನ್ನು ತಂದರು. ಅವರು ಮಾಡುತ್ತಿದ್ದ ಕಾರ್ಯಗಳೆಲ್ಲಾ ಅತ್ಯಂತ ನಿಕೃಷ್ಟವಾಗಿದ್ದವು"


"ಒಬ್ಬ ಸತ್ಯ ವಿಶ್ವಾಸಿಯ ವಿಷಯದಲ್ಲಿ ಇವರು ಬಾಂಧವ್ಯಗಳನ್ನಾಗಲಿ ಅಥವಾ ಹೊಣೆಗಾರಿಕೆಯನ್ನಾಗಲಿ ಒಪ್ಪಂದವಿದ್ದರೂ ಪರಿಗಣಿಸುವುದಿಲ್ಲ. ಅತಿರೇಕವು ಯಾವಾಗಲೂ ಅವರ ಕಡೆಯಿಂದಲೆ ಆಗಿದೆ ಆದರೂ ಅವರು ಈ ಬಗ್ಗೆ ಪಶ್ಚಾತಾಪವನ್ನು ಪಟ್ಟರೆ ಹಾಗೂ ಜಮಾಝನ್ನ ಸಂಸ್ಥಾಪಿಸಿ ಝಕಾತನ್ನ ಕೊಟ್ಟರೆ ಆಗವರು ನಿಮ್ಮ ಧರ್ಮ ಬಾಂಧವರಾಗುತ್ತಾರೆ. ಆಗ ತಿಳುವಳಿಕೆ ಉಳ್ಳವರಾಗುವ(?) ಅವರಿಗೆ ನಾವು ನಮ್ಮ ಆದೇಶವನ್ನ ವಿಶದೀಕರಿಸುತ್ತೇವೆ?!"



"ಒಪ್ಪಂದದ ಅನಂತರ ಅವರು ಪುನಃ ತಮ್ಮ ಶಪಥಗಳನ್ನು ಮುರಿದು ನಿಮ್ಮ ಧರ್ಮದ ಮೇಲೆ ಆಕ್ರಮಣವನ್ನು ಎಸಗಲು ಆರಂಭಿಸಿದರೆ ಸತ್ಯ ನಿಷೇಧದ ಮುಂದಾಳುಗಳೊಂದಿಗೆ ಯುದ್ಧ ಮಾಡಿರಿ. ಏಕೆಂದರೆ, ಅವರ ಶಪಥಗಳನ್ನು ನಂಬಲಾಗದು. ಪ್ರಾಯಶಃ ಅವರು ಪುನಃ ಖಡ್ಗ ಬಲದ ಮೂಲಕವೆ ಹಿಂಜರಿಯಬಹುದು!" ( ಖುರ್ಹಾನ್ ಭಾವಾನುವಾದ ೯/೩-೧೨.)


ಈ ಸಂದೇಶದ ಪ್ರಕಾರ ಪವಿತ್ರ ದಿನಗಳಲ್ಲಿ ಕದನ ಜರುಗಿಸುವುದು ಸಲ್ಲದು. ಆದರೆ ಅದಕ್ಕಿಂತಲೂ ದೇವರ ಹಾದಿಯಲ್ಲಿ ಸಾಗುವುದು. ಮೆಕ್ಕಾದ ಪವಿತ್ರಗುಡಿಯನ್ನ ಪೂಜಿಸುವುದು ಹಾಗೂ ಅಲ್ಲಿ ಕಾಬಾದ ಆರಾಧನೆಗಾಗಿ ಬಂದ ಭಕ್ತರನ್ನ ಹಿಂಸಿಸಿ ಓಡಿಸುವುದು ಪ್ರಮಾದಕರವಾಗಿತ್ತು. ಮಹಮದನಿಗೆ ದೇವರ ಈ ಸಂದೇಶ ದೊರಕಿದ ಕೂಡಲೆ ಅವನು ಮುಂದಿನ ಕಾರ್ಯಪ್ರವರ್ತನಾದ. ಅರೇಬಿಯಾದ ಬುಡಕಟ್ಟುಗಳ ರೂಢಿಯ ಪ್ರಕಾರ ಆತನ ಅನುಚರರು ಸೆರೆ ಹಿಡಿದಿದ್ದ ಖುರೈಷಿ ಯುವಕರನ್ನ ಬಿಡಿಸಿಕೊಳ್ಳಲು ಬಂದ ಅವರ ಬಂಧುಗಳಿಂದ ಒತ್ತೆ ಹಣವನ್ನ ಪಡೆದ. ದೋಚಿದ್ದ ಸರಕಿನಲ್ಲಿ ತನ್ನ ಪಾಲಿನ ಐದನೆ ಒಂಧು ಭಾಗವನ್ನ ಪಡೆದುಕೊಂಡು ಉಳಿದಿದ್ದನ್ನ ಕೇವಲ ಮುಸಲ್ಮಾನ ಸಹಚರರಿಗೆ ಹಂಚಿದ.




ಸರ್ ವಿಲಿಯಂ ಮ್ಯೂರ್ ತನ್ನ ಐತಿಹಾಸಿಕ ಕೃತಿ 'ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ಇನ್ನೂರ ಹತ್ತರಲ್ಲಿ ಹೇಳುವ ಹಾಗೆ ಮುಸ್ಲಿಂ ಇತಿಹಾಸಕಾರರು ಈ ದಂಡಯಾತ್ರೆಗೆ ವಿಪರೀತ ಪ್ರಾಮುಖ್ಯತೆ ನೀಡುತ್ತಾರೆ. ಇಬ್ನ ಹಿಶಾಮ್ 'ಮಹಮದರು ಪಡೆದ ಪ್ರಥಮ ಲೂಟಿ, ವಶ ಪಡಿಸಿಕೊಂಡ ಪ್ರಪ್ರಥಮ ಒತ್ತೆಯಾಳುಗಳು ಹಾಗೂ ಪ್ರಪ್ರಥಮ ಜೀವ ಹತ್ಯೆ!" ಎಂದು ಹಾಡಿ ಹೊಗಳಿದ.


"ನಿಮಗೆ ಯುದ್ಧವನ್ನು ಶಾಸನಗೊಳಿಸಲಾಗಿದೆ ಅದು ನಿಮಗೆ ಅಪ್ರಿಯವಾಗಿದೆ. ಒಂದು ವಸ್ತುವು ನಿಮಗೆ ಅದೆಷ್ಟೇ ಅಪ್ರಿಯವಾಗಿದ್ದರೂ ಸಹ ಅದೆ ನಿಮಗೆ ಗುಣಕಾರಕವಾಗಿರಲು ಸಹ ಸಾಧ್ಯವಿದೆ. ಅಂತೆಯೆ ಒಂದು ವಸ್ತುವು ನಿಮಗೆ ಪರಮ ಪ್ರಿಯವಾಗಿದ್ದರೂ ಸಹ ಅದು ನಿಮ್ಮ ಪಾಲಿಗೆ ಹಾನಿಕಾರಕವಾಗಿರಲುಘ ಸಾಧ್ಯವಿದೆ. ಅಲ್ಲಹನು ಅದನ್ನು ಬಲ್ಲವನಾಗಿದ್ದಾನೆ ಹೊರತು ಮೂಢರಾದ ನೀವು ಬಲ್ಲವರಲ್ಲ. ಮಾನ್ಯ ಮಾಸದಲ್ಲಿ ಕಾದಾಡುವ ಬಗ್ಗೆ ಜನರು ನಿಮ್ಮಲ್ಲಿ ಕೇಳುತ್ತಾರೆ. ಹೇಳಿರಿ ಅದರಲ್ಲಿ ಕಾದಾಡುವುದು ಮಹಾಪರಾಧವೆ ಸರಿ. ಆದರೆ ಜನರನ್ನು ದೇವಮಾರ್ಗದಿಂದ ತಡೆಯುವುದು, ಅಲ್ಲಾಹನನ್ನು ನಿಷೇಧಿಸುವುದು,  ದೇವಾರಾಧಕರ ಪಾಲಿಗೆ ಮಸ್ಝಿದ್ ಉಲ್ ಹರಾಮ್'ನ ಹಾದಿಯನ್ನು ಮುಚ್ಚುವುದು, ಕಾಬಾದ ಒಳಗಿರುವವರನ್ನು ಅಲ್ಲಿಂದ ಹೊರಕ್ಕೆ ಅಟ್ಟುವುದು ಅಲ್ಲಾಹನ ದೃಷ್ಟಿಯಲ್ಲಿ ಅದಕ್ಕಿಂತ ಮಹತ್ತರ ಅಪರಾಧವಾಗುತ್ತದೆ. ಮತ್ತು ಕ್ಷೋಭೆ ಮತ್ತು ರಕ್ತಪಾತಕ್ಕಿಂತಲೂ ಸಹ ಗುರುತರ ಅಪರಾಧವಾಗಿರುತ್ತದೆ" ( ಸುರಾ ೨/೨೧೬-೧೭ ಖುರ್ಹಾನ್ ಭಾವಾನುವಾದ.)



( ಇನ್ನೂ ಇದೆ.....)

No comments: