01 October 2014

ಜೀವಂತವಿರುವವರ ನೋವಿಗೆ ಕಿವಿಯಾಗದೆ ಕಲ್ಲ ಪೂಜಿಸುವ ಮೂಢ ಸರಕಾರ....



ಖಾದಿ ಹಾಗೂ ಗಾಂಧಿ ತಮ್ಮ ಮನೆಯ ಸ್ವಂತ ಆಸ್ತಿ ಎನ್ನುವಂತೆ ವರ್ತಿಸುವ ಕಾಂಗ್ರೆಸ್ ಸರಕಾರ ನಾಳೆ ಕಲ್ಲು ಹೃದಯದ ಆಳುವ ಮಂದಿ ಕೂತುಕೊಂಡು ದರ್ಬಾರು ನಡೆಸುವ ವಿಧಾನ ಸೌಧ ಹಾಗೂ ವಿಕಾಸ ಸೌಧದ ನಡುವೆ ತಾವೆ ಗೋರಿ ತೋಡಿ ಹೂತ ಗಾಂಧಿ ತತ್ವಗಳಿಗೆ ಅದೆ ಮೋಹನದಾಸ ಕರಮಚಂದ ಗಾಂಧಿಯವರ ಕಲ್ಲಿನ ವಿಗ್ರಹ ಕೂರಿಸಿ ಸಮಾಧಿ ಉದ್ಘಾಟಿಸಲಿದೆ. ತಾನು ನಿತ್ಯ ಗಾಂಧಿತತ್ವವನ್ನ ಮಣ್ಣಾಗಿಸುತ್ತಿರೋದನ್ನ ಸಾಂಕೇತಿಕವಾಗಿ ಈ ಮೂಲಕ ಸರಕಾರ ಸಾರ ಹೊರಟಿದೆ.

ಅದೆ ಕಳೆದ ಇಪ್ಪತ್ತ ಐದು ದಿನಗಳಿಂದ ಬೆಂಗಳೂರು ನಗರದ ಪುರಭವನದ ಮುಂದೆ 'ಅಕ್ರಮ ಸರಕಾರಿ ಭೂ ಕಬಳಿಕೆ"ಯ ವಿರುದ್ಧ 'ಆಮ್ ಆದ್ಮಿ' ಪಕ್ಷ ಸಂಘಟಿಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ತಪ್ಪದೆ ನಿತ್ಯವೂ ಬೆಳಗಿನಿಂದ ಇಳಿ ಸಂಜೆಯವರೆಗೂ ಪಾಲ್ಗೊಳ್ಳುತ್ತಿರುವ ಹಿರಿಯ ಗಾಂಧಿವಾದಿ ವಯೋವೃದ್ಧ ತೊಂಬತ್ತೇಳರ ಪ್ರಾಯದ ಹೆಚ್ ಎಸ್ ದೊರೆಸ್ವಾಮಿಯವರನ್ನ 'ಏನು ನಿಮ್ಮ ಸಮಸ್ಯೆ?' ಎಂದು ಕೇಳುವ ವ್ಯವಧಾನ ಆಳುವ ಮಂದಿಗ್ಯಾರಿಗೂ ಇದ್ದ ಹಂಗಿಲ್ಲ. ಈ ನಡುವೆ ಬೆಂಗಳೂರಿನಲ್ಲಿ ಭಾರಿ ಮಳೆ ಬಿದ್ದು ರಾಡಿಯಾಗಿ ಹೋಗಿತ್ತು. ಇದೆಲ್ಲವನ್ನೂ ಲೆಕ್ಕಿಸದೆ ಈ ಹಿರಿಯ ಗಾಂಧಿವಾದಿ ಜೀವ ತಪ್ಪದೆ ಪ್ರತಿಭಟನೆಗೆ ನಿತ್ಯವೂ ಹಾಜರಾಗಿದೆ.

ರಾಜ್ಯ ರೈತ ಸಂಘದ ಪ್ರಮುಖರು, ಭೂ ಕಬಳಿಕೆಯ ವಿರುದ್ಧ ಸರಕಾರಕ್ಕೆ ವರದಿ ಕೊಟ್ಟ ಎ ಟಿ ರಾಮಸ್ವಾಮಿ ಎಲ್ಲರೂ ಅಲ್ಲಿಗೆ ಬಂದು ಹೋಗಿದ್ದಾಗಿದೆ. ಆದರೆ ಅದರ ಬಗ್ಗೆ ಪ್ಯಾನಲ್ ಚರ್ಚೆ ಮಾಡುವುದು ಅತ್ತಲಾಗಿರಲಿ ಕನಿಷ್ಠ ದಿನಕ್ಕೊಮ್ಮೆ ವರದಿ ಮಾಡುವುದಕ್ಕೂ ಕಾಸಿಗಾಗಿ ಸುದ್ದಿ ಮಾರುವ ಯಾವುದೆ 'ಒಂಬತ್ತನೆ' ನಂಬರಿನ 'ಸುವರ್ಣ'ಕ್ಕನಿಗಾಗಲಿ, ಕರುನಾಡ 'ಜನಶ್ರಿ'ಗೆ ಮೂರು ಕಾಸಿನ ಉಪಯೋಗವಾಗದ ಸುದ್ದಿಗಳನ್ನೆ 'ಕಸ್ತೂರಿ' ಕನ್ನಡದಲ್ಲಿ ನಿತ್ಯ 'ಪಬ್ಲಿಕ್ಕಾ'ಗಿ ಊಳಿಡುವ, 'ಬಿಟಿ'(ವಿ)ಯಾಗಿ ಏನೊಂದನ್ನೂ ಪ್ರಸಾರ ಮಾಡುವ ಅಭ್ಯಾಸವೆ ಇಲ್ಲದೆ 'ರಾಜ್'ಆರೋಷವಾಗಿ 'ಉದಯ'ಕಾಲದಿಂದಲೆ ವಸೂಲಿಗೆ ಇಳಿವ ಚಟಸ್ಥರೆ ವಿರಾಜಮಾನರಾಗಿರುವ ಯಾವೊಂದು 'ಸಮಯ'ಸಾಧಕ ಸುದ್ದಿವಾಹಿನಿಗಳೂ ಸಹ ಆಸಕ್ತಿ ವಹಿಸಿಲ್ಲ.

ನಾಳೆ ಖಾದಿ ಕುರ್ತಾ ಗಾಂಧಿ ಟೋಪಿ ಛದ್ಮವೇಷದಲ್ಲಿ ಕಂಗೊಳಿಸಸುವ ರಾಜಕಾರಣಿಗಳಿಗೂ, 'ನಿತ್ಯಾ' ಕಂಡವರ 'ಮೈತ್ರಿಯ' 'ಕಾರ್ತಿಕ' ಪ್ರಣಯ ಲೀಲೆಗಳನ್ನೆ ಚಪ್ಪರಿಸುವಲ್ಲಿ ವ್ಯಸ್ತವಾಗುವ ಮೂರು ಕಾಸಿನ ಸುದ್ದಿ ಶೂರರಿಗೂ ಏನು ತಾನೆ ವ್ಯತ್ಯಾಸ? ವಾಸ್ತವದಲ್ಲಿ ಗಾಂಧಿ ತತ್ವಗಳನ್ನ ಗೋರಿಗಿಳಿಸಿ ಢೋಂಗಿ ಗಾಂಧಿ ತತ್ವದ ಪ್ರದರ್ಶನಕ್ಕಷ್ಟೆ ಇವರ ದೊಂಬರಾಟಗಳು ಸೀಮಿತಗೊಳ್ಳುತ್ತವೆ ಎನ್ನುವುದಕ್ಕೆ ಈ ಪ್ರಕರಣಕ್ಕಿಂತ ಒಳ್ಳೆಯ ಉದಾಹರಣೆ ಬೇಕಿಲ್ಲ. ಇದೊಂಥರಾ ನಿಜದ ನಾಗರವ ಕೊಂದು ಕಲ್ಲು ನಾಗನಿಗೆ ಹಾಲೆರೆವ ಕೆಲಸದಂತಹದು. ಅಷ್ಟಕ್ಕೂ ಅಕ್ರಮವಾಗಿ ಸರಕಾರಿ ಭೂಮಿಗಳಿಗೆ ಬೇಲಿ ಸುತ್ತಿ ಸ್ವಂತವಾಗಿಸಿಕೊಂಡವರೆ ತಾನೆ ಇವತ್ತು ನಮ್ಮನ್ನ ಆಳುತ್ತಿರೋದು?!

No comments: