19 November 2015

ವಲಿ - ೩೨





ಮೆಕ್ಕಾ ನಗರ ಮಹಮದನ ವಶಕ್ಕೆ ಬರುವ ಮೊದಲು ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ಅಲ್ಲಿನ ಕಾಬಾಗುಡಿಗೆ ಸುತ್ತಮುತ್ತಲ ಕ್ರೈಸ್ತರು, ಯಹೂದಿಗಳು, ಈಜಿಪ್ಟ್, ಗ್ರೀಕ್ ಹಾಗೂ ರೋಮನ್ ಸಂಪ್ರದಾಯದ ಮೂರ್ತಿಪೂಜಕರು, ಪರ್ಷಿಯಾದ ಅಗ್ನಿ ಆರಾಧಕರು ಜೊತೆಗೆ ಗಡಿ ಹಿಂದೂಸ್ತಾನದ ಸನಾತನಿಗಳು ಎಲ್ಲರೂ ತಮ್ಮತಮ್ಮ ನಂಬಿಕೆಗನುಗುಣವಾಗಿ ಹರಕೆ ಹೊತ್ತು ಬಂದು ಬಲಿ ಹಾಗೂ ಮುಡಿ ನೀಡಿ ಹರಕೆಯನ್ನ ತೀರಿಸುವ ಪದ್ಧತಿ ಇತ್ತು. ನಗರದೊಳಗೂ ಸಹ ಅಲ್ಪಸ್ವಲ್ಪ ಪರಿಮಾಣದಲ್ಲಿ ಈ ಎಲ್ಲಾ ವರ್ಗದ ಮಂದಿ ಯಾವುದೆ ತಂಟೆ ತಕರಾರಿಲ್ಲದೆ ನೆಲೆಸಿ ಸಹಬಾಳ್ವೆ ನಡೆಸುತ್ತಿದ್ದರು. ಸ್ವತಃ ಮಹಮದನ ಬುಡಕಟ್ಟಾದ ಖುರೈಷಿಗಳೆ ಮೂರ್ತಿಪೂಜಕರಾದ ಅರೆ ಸನಾತನಿಗಳಾಗಿದ್ದರು, ಅವರ ಆಚರಣೆಗಳಲ್ಲಿ ಸನಾತನ ಧರ್ಮದಷ್ಟೆ ಗ್ರೀಕನ್ ಆರಾಧಾನ ಪದ್ಧತಿಗಳು ಹಾಗೂ ಯಹೂದಿ ಆಚರಣೆಗಳು ಮಿಳಿತವಾಗಿದ್ದವು. ಸರಳವಾಗಿ ಹೇಳಬೇಕೆಂದರೆ ಒಟ್ಟಿನಲ್ಲಿ ಇಂದಿನ ಭಾರತದ ಯಾವುದೆ ಒಂದು ಪ್ರಸಿದ್ಧ ಯಾತ್ರಾಸ್ಥಳದ ಮಾದರಿಯಲ್ಲಿ ಮೆಕ್ಕಾ ಸಹ ಇತ್ತು.



ಈಗಲೂ ಸಹ ಇಸ್ರೇಲಿನ ಜುರೇಸಲಂ ಹಾಗೂ ಶ್ರೀಲಂಕಾದ ಕದಿರಗಾಮ ಹೀಗೆ ಕೇವಲ ಕೆಲವೇ ಕೆಲವು ಯಾತ್ರಾ ಸ್ಥಳಗಳು ಮಾತ್ರ ನಾನಾ ಮತಾವಲಂಭಿಗಳ ಆರಾಧನ ಸ್ಥಳವಾಗಿ ಉಳಿದಿವೆ. ಆದರೆ ಮಹಮದನ ಸರ್ವಾಧಿಕಾರ ಅಲ್ಲಿ ಆರಂಭಗೊಂಡದ್ದೆ ತಡ ಈ ಎಲ್ಲಾ ಧಾರ್ಮಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಬಿತ್ತು. ಮುಸಲ್ಮಾನರಾಗದವರು ಅಲ್ಲಿ ಬಾಳುವಂತೆಯೂ ಇರಲಿಲ್ಲ ಹಾಗೂ ಇಸ್ಲಾಮಿನ ಅನುಯಾಯಿಗಳಲ್ಲದ ವ್ಯಕ್ತಿ ಯಾವುದೆ ಕಾರಣಕ್ಕೂ ನಗರವನ್ನ ಪ್ರವೇಶಿಸುವುದೂ ಸಾಧ್ಯವಿರಲಿಲ್ಲ. ಇವತ್ತಿಗೂ ಸುಮಾರು ಹದಿನಾಲ್ಕು ಶತಮಾನಗಳ ನಂತರವೂ ಈ ಧಾರ್ಮಿಕ ಅಸಹಿಷ್ಣು ಪರಿಸ್ಥಿತಿ ಅಲ್ಲಿ ಬದಲಾಗಿಲ್ಲ.


ಮಹಮದ್ ಈಗ ಅಲ್ಲಿನ ನಿರ್ಣಾಯಕ ವಿಧಿಯಾಗಿ ಪರಿಣಮಿಸಿದ ನಂತರ ಅಲ್ಲಿನ ಹತ್ತು ಹನ್ನೆರಡು ಮಂದಿಯನ್ನ ಹೊರತು ಪಡಿಸಿ ಉಳಿದೆಲ್ಲರನ್ನೂ ಅವರ ಹಿಂದಿನ ಎಲ್ಲಾ ಕೃತ್ಯಗಳಿಗಾಗಿ ಕ್ಷಮಿಸಲಾಯಿತು. ಕಾರಣ ಸರಳ ಅವರೆಲ್ಲಾ  ಆತನ ತೋಲ್ಬಲಕ್ಕೆ ಹೆದರಿ ಇಸ್ಲಾಮನ್ನ ಒಪ್ಪಿಕೊಂಡು ಮುಸಲ್ಮಾನರಾಗಿ ದೀಕ್ಷೆ ತೆಗೆದುಕೊಂಡರು. ಹಾಗಂತ ಈ ಹನ್ನೆರಡು ಮಂದಿಯೂ ಇದಕ್ಕೆ ತಯ್ಯಾರಿರಲಿಲ್ಲ ಅಂತೇನಲ್ಲ. ಆದರೆ ಅವರು ಎಸಗಿದ್ದ ಅಪರಾಧಗಳು ಮಹಮದನ ದೃಷ್ಟಿಯಲ್ಲಿ ಯಾವತ್ತಿಗೂ ಕ್ಷಮಾರ್ಹವಾಗಿರಲಿಲ್ಲ.



ಈ ಶಿಕ್ಷೆಗೆ ಗುರಿಯಾದವರಲ್ಲೂ ಸಹ ನಾಲ್ಕು ಮಂದಿಗೆ ಮಾತ್ರ ಮರಣದಂಡನೆಯನ್ನ ವಿಧಿಸಲಾಯಿತು. ಆ ನಾಲ್ವರಲ್ಲಿ ಇಬ್ಬರು ಗರ್ಭಿಣಿಯಾಗಿದ್ದ ಮಹಮದನ ಮೊದಲ ಹೆಂಡತಿ ಖತೀಜಳ ಮಗಳು ಝೈನಬ್ ಮೇಲೆ ಹಲ್ಲೆ ಮಾಡಿ ಅವಳ ಗರ್ಭಪಾತಕ್ಕೆ ಕಾರಣರಾಗಿದ್ದರು. ಮುಂದೆ ಅವಳ ಸಾವಿಗೂ ಅದೆ ಮೂಲವಾಗಿತ್ತು. ಒಬ್ಬ ಮೆಕ್ಕಾ ಪ್ರವೇಶದ ವೇಳೆ ಖಾಲೀದನೊಡನೆ ಕಾದಾಡಿ ಪ್ರತಿರೋಧ ಒಡ್ಡಿದ್ದ ಹಾಗೂ ಕೊನೆಯದಾಗಿ ಕವಯತ್ರಿಯೊಬ್ಬಳು ಮಹಮದನ ಪೊಳ್ಳು ಪ್ರವಾದಿತ್ವವನ್ನ ಗೇಲಿ ಮಾಡಿ ಹಾಡಿ ಇಲ್ಲಿಯವರೆಗೆ ಎಲ್ಲರನ್ನ ರಂಜಿಸುತ್ತಿದ್ದ ಅಪರಾಧಕ್ಕಾಗಿ ಆಕೆಯನ್ನೂ ಸಹ ಸಾವಿನ ಮನೆಗೆ ಅಟ್ಟಲಾಯಿತು.


ಈ ಕ್ಷಮಾದಾನವನ್ನೇನೂ ಮಹಮದ್ ಸಂಪೂರ್ಣ ಸಮ್ಮತಿಯಿಂದ ಇನ್ನಿತರೆಲ್ಲರಿಗೆ ನೀಡಿರಲಿಲ್ಲ ಅನ್ನುವುದನ್ನೂ ಸಹ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ರಿನ ಪುಟ ಸಂಖ್ಯೆ ೭೮೭ರಲ್ಲಿ ಉದಾಹರಣೆ ಸಹಿತ ಎತ್ತಿ ತೋರಿಸುತ್ತಾನೆ. ಅಬ್ದುಲ್ಲಾ ಇಬ್ನ್ ಅಬಿ ಸರ್ಹ್ ಎಂಬಾತ ಮಹಮದನ ಅನುಯಾಯಿಯಾಗಿದ್ದ. ಆತನನ್ನ ಸ್ವತಃ ಅನಕ್ಷರಸ್ಥನಾಗಿದ್ದ ಮಹಮದ್ ತಾನು ಕಾಲಕಾಲಕ್ಕೆ ಉಸುರುವ ಸುರಾಗಳನ್ನ ದಾಖಲಿಸಿ ಬರೆದಿಡಲು ನೇಮಿಸಿದ್ದ. ಆದರೆ ಈ ಕೆಲಸದಿಂದ ಬೇಸತ್ತು ಮತಾಂತರವಾಗಿದ್ದ ನಂತರವೂ ಆತ ಉಪಾಯವಾಗಿ ಮದೀನಾದಿಂದ ತಲೆ ತಪ್ಪಿಸಿಕೊಂಡು ಬಂದು ಮೆಕ್ಕಾದಲ್ಲಿ ಮರಳಿ ನೆಲೆಸಿದ್ದ. ಮತ್ತೆ ಹಳೆಯ ಧಾರ್ಮಿಕ ಆಚರಣೆಗಳಿಗೆ ಜೋತುಬಿದ್ದಿದ್ದ.




ಆತನನ್ನ ವಿಶೇಷ ಸೂಚನೆ ಕೊಟ್ಟು ಮಹಮದ್ ಕೈಸೆರೆ ಹಿಡಿಸಿದ. ಆದರೆ ಶಿಕ್ಷೆ ವಿಧಿಸುವ ಹತ್ತಿನಲ್ಲಿ ಆತನ ಮಲ ಸಹೋದರನ ಕ್ಷಮಾದಾನದ ಬೇಡಿಕೆಗೆ ಮಣಿದು ಅವನ್ನು ಜೀವ ಸಹಿತ ಬಿಟ್ಟು ಕಳುಹಿಸಲಾಯಿತು. ಮನಸ್ಸಿಲ್ಲದ ಮನಸ್ಸಿನಿಂದ ಮಹಮದ್ ಅವನನ್ನು ಕ್ಷಮಿಸಿದ್ದ. ಆತ ತನ್ನ ಸಹೋದರನೊಂದಿಗೆ ಅಲ್ಲಿಂದ ಜೀವ ಸಹಿತ ನಿರ್ಗಮಿಸಿದ ನಂತರ ಮಹಮದ್ ತನ್ನ ಅನುಯಾಯಿಗಳ ಮೇಲೆ ಇದೆ ಕಾರಣಕ್ಕೆ ಸಿಡಿಮಿಡಿಗೊಂಡ. ನಾನು ನ್ಯಾಯ ನೀಡುವ ಮೊದಲೆ ಮುಂದಾಗಿ ನಿಮ್ಮಲ್ಲಿ ಯಾರಾದರೂ ಒಬ್ಬರು ಆ ಧರ್ಮದ್ರೋಹಿ ಅಬ್ದುಲ್ಲಾನ ರುಂಡವನ್ನೇಕೆ ಕಡಿದು ಉರುಳಿಸಲಿಲ್ಲ? ಅಂತಹದೊಂದು ಸ್ವಾಗತಾರ್ಹ ನಡೆಯನ್ನ ನಾನು ನಿಮ್ಮಿಂದ ನಿರೀಕ್ಷಿಸಿದ್ದೆ! ಎಂದು ಆತ ಬೇಸರ ವ್ಯಕ್ತ ಪಡಿಸಿದ. ನೀವ್ಯಾಕೆ ಅದರ ಸೂಚನೆ ನೀಡಲಿಲ್ಲ ಎಂದು ಮರಳಿ ಅವನ್ನನ್ನೆ ಬೆಂಬಲಿಗರು ಪ್ರಶ್ನಿಸಿದಾಗ ಛೆ ಛೆ ಎಲ್ಲದರೂ ಉಂಟೆ! ಹಾಗೆಲ್ಲಾ ಸೂಚನೆ ನೀಡುವುದು ಪ್ರವಾದಿಯಾದವನ ಘನತೆಗೆ ಶೋಭಿಸುವುದಿಲ್ಲ?! ಎಂದಂದುಬಿಟ್ಟ. ಈ ಘಟನೆಯನ್ನ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ ಕೃತಿ 'ದ ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ನಾಲ್ಕುನೂರಾ ಒಂಬತ್ತರಲ್ಲಿ ಖಚಿತಪಡಿಸುತ್ತಾರೆ.


ಮೆಕ್ಕ ಕೈವಶವಾದ ಎರಡನೆಯ ಬೆಳಗ್ಯೆ ಅಧಿಕೃತವಾಗಿ ಮಹಮದ್ ಮೆಕ್ಕಾವನ್ನ ಪವಿತ್ರ ನಗರವೆಂದು ಘೋಷಿಸಿದ. ಇದರ ಪಾವಿತ್ರ್ಯತೆಯ ಊರ್ಜತೆಯ ಅವಧಿ ಅಂತಿಮ ತೀರ್ಪಿನ ದಿನದವರೆಗೂ ಉಳಿಯುವುದೆಂದು ಸಾರಿದ. ಇಲ್ಲಿ ಇನ್ನು ಮುಂದೆ ರಕ್ತಪಾತ ಎಸಗುವಂತಿಲ್ಲ, ಅಗತ್ಯ ಬಿದ್ದರೆ ತಾನು ಮಾತ್ರ ರಕ್ತಪಾತ ಮಾಡಬಲ್ಲೆ. ಪ್ರವಾದಿಯಾಗಿ ತನಗೆ ದೇವರು ದಯಪಾಲಿಸಿದ ವಿಶೇಷ ಅಧಿಕಾರ ಅದಾಗಿದೆ ಎಂದಾತ ತಿಳಿಸಿದ.


ಮೆಕ್ಕಾದ ಸುತ್ತಮುತ್ತಲು ಕಾಬಾ ಹೊರತು ಪಡಿಸಿ ಇನ್ನೂ ಅನೇಕ ಚಿಕ್ಕಪುಟ್ಟ ವಿಗ್ರಹಾರಾಧನೆಯ ಗುಡಿಗಳು ಇದ್ದವು. ಅವ್ಲೆಲ್ಲವನ್ನೂ ಆದ್ಯತೆಯ ಮೇಲೆ ನಾಶ ಪಡಿಸಲು ಆತ ಹಂಚಿಕೆ ಹಾಕಿದ. ಅದಕ್ಕಾಗಿ ಒಂದು ಸೈನ್ಯವನ್ನೆ ಕಳುಹಿಸಲಾಯಿತು. ಅಲ್ಲಿನ ಪ್ರಸಿದ್ಧ ಅಲ್ ಓಝ್ಲಾ ಸುವಾ ಹಾಗೂ ಅಲ್ ಮನ್ನಾತ್ ಎಂಬ ಶಕ್ತಿಶಾಲಿ ದೇವಾನುದೇವತೆಗಳ ಮೂರ್ತಿಗಳನ್ನ ಪುಡಿಗಟ್ಟಲಾಯಿತು. ಈ ಕಾರ್ಯಾಚರಣೆಯ ನೇತೃತ್ವವನ್ನ ಮಹಮದನ ನೆಚ್ಚಿನ ಬಂಟ ಖಾಲಿದ್ ವಹಿಸಿಕೊಂಡಿದ್ದ. ಈ ಅತಿ ನಂಬುಗೆಯ ದೇವಾಲಯಗಳನ್ನು ನಾಶ ಪಡಿಸಿ ಮರಳಿ ಮೆಕ್ಕಾಕ್ಕೆ ಹೋಗುವಾಗ ಈ ಖಾಲಿದ್ ವಿಗ್ರಹಭಂಜಕತೆಯ ಅಮಲಿನಲ್ಲಿ ವಿಪರೀತ ವಿಕೃತವಾಗಿ ವರ್ತಿಸಿದ.



ಝಾದಿಮ್ ಎನ್ನುವ ವಿಗ್ರಹಾರಾಧಕ ಬುಡಕಟ್ಟಿನವರನ್ನು ಆತ ಎದುರುಗೊಂಡ. ಅವರೆಲ್ಲರನ್ನೂ ಇಸ್ಲಾಮ್ ಸ್ವೀಕರಿಸುವಂತೆ ಅದೇಶಿಸಿದ. ಅನ್ಯ ಮಾರ್ಗವಿಲ್ಲದ ಅವರು ಸಹ ಮುಸಲ್ಮಾನರ ಅಪಾರ ಬಲದ ಮುಂದೆ ತೆಪ್ಪಗೆ ಶರಣಾಗಿ ಇಸ್ಲಾಮಿನ ಅನುಯಾಯಿಗಳಾಗಲು ಒಪ್ಪಿ ಮತಾಂತರವಾದರು. ಆದರೆ ಯುದ್ಧ ನೀತಿಗೆ ವಿರುದ್ಧವಾಗಿ ಆ ಶರಣಾಗತರನ್ನೆಲ್ಲಾ ಖಾಲಿದ್ ಸೆರೆ ಹಿಡಿಸಿದ ಹಾಗೂ ಅವರೆಲ್ಲರನ್ನೂ ಹತ್ಯೆ ಮಾಡಿಸುವ ಬರ್ಬರ ನಿರ್ಧಾರಕ್ಕೆ ಬಂದ. ಆದರೆ ಈ ಹೀನಕೃತ್ಯವನ್ನ ಸಹಿಸಲಾಗದೆ ಆತನದೆ ಪಡೆಯಲ್ಲಿದ್ದ ಕೆಲವು ಮದೀನಾವಾಸಿಗಳು ಇದನ್ನ ತಡೆದರು. ಈ ಒಂದು ವಿಷಯಕ್ಕಾಗಿ ಅವರ ವೈರವನ್ನು ಕಟ್ಟಿಕೊಳ್ಳಲು ಇಚ್ಛಿಸದೆ ಖಾಲಿದ್ ಈ ನಿರ್ಧಾರದಿಂದ ಹಿಂದೆ ಸರಿದ.




ಮಹಮದನಿಗೆ ಈ ಸುದ್ದಿ ತಿಳಿದು ಬಂದಾಗ ಆತ ಅತೀವ ದುಃಖಿತನಾದ. ದೇವರಿಗೆ ಕೈ ಮುಗಿಯುತ್ತಾ ಖಾಲಿದನ ಈ ಕುಕೃತ್ಯಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಮೊರೆಯಿಟ್ಟ. ಅದರಿಂದ ತಾನು ಎಂದೂ ಬಾಧಿತನಾಗಲಾರೆ ಎಂದು ಹೇಳುತ್ತಾ ಕಳಕಳಿಯಿಂದ ಪ್ರಾರ್ಥಿಸಿದ. ಆದಾಗ್ಯೂ ಆರಂಭದ ವಿಚಾರಣೆಯ ಹಂತದಲ್ಲಿ ಖಾಲಿದನ ಕತ್ತಿಯ ರುಚಿ ಕಂಡು ಸತ್ತು ನೆಲಕ್ಕೊರಗಿದ ಅಮಾಯಕರ ಸಂಬಂಧಿಗಳನ್ನ ಕರೆಸಿ ತನ್ನಿಂದ ಆದಷ್ಟು ದ್ರವ್ಯ ಸಹಾಯ ಮಾಡಿ ಅವರ ನೋವಿನಲ್ಲಿ ತನ್ನ ಪ್ರಾಮಾಣಿಕ ಸಂತಾಪಗಳನ್ನು ಆತ ತೋರ್ಪಡಿಸಿದ.


ಅದೇ ರೀತಿ ಮೆಕ್ಕಾವನ್ನು ಅತಿಕ್ರಮಿಸಿದ ಮೊದಲ ರಾತ್ರಿ ನಡೆದ ಒಂದು ವಿದ್ರಾವಿಕ ಘಟನೆ ಮಹಮದನ ಹೃದಯವನ್ನ ಕಲಕಿ ಹಾಕಿಬಿಟ್ಟಿತು. ಅಸಲಿಗೆ ಆತ ಖೋಝಾ ಬುಡಕಟ್ಟಿನವರ ನೆರವಿಗೆ ಮೆಕ್ಕಾಕ್ಕೆ ಧಾವಿಸಿದ್ದನಷ್ಟೆ! ಆದರೆ ತನ್ನ ಮೂಲ ಉದ್ದೇಶ ಈಡೇರಿದ ನಂತರ ಆತ ಅವರ ಸಂಗತಿಯನ್ನೆ ಮರೆತುಬಿಟ್ಟಿದ್ದ. ಆದರೆ ಖೋಝಾಗಳು ಅದನ್ನು ಮರೆಯಲು ತಯ್ಯಾರಿರಲಿಲ್ಲ. ಹೀಗಾಗಿ ಆ ರಾತ್ರಿ ಪರಿಸ್ಥಿತಿಯ ಲಾಭ ಪಡೇದು ಅವರು ಏಕಾಂಗಿಗಳಾಗಿ ಬೆನ್ ಬಕರ್'ಗಳ ವಸತಿಯ ಮೇಲೆ ಮುಗಿ ಬಿದ್ದರು ಅಪಾರ ಹಿಂಸಾಚಾರ ನಡೆಸಲಾದ ಈ ಪ್ರತಿಕಾರದ ಕಾರ್ಯಾಚರಣೆಯಲ್ಲಿ ಒಬ್ಬನನ್ನು ಕೊಂದರು.



ಈ ಸಂಗತಿ ಮಹಮದನಿಗೆ ಮರುದಿನ ಬೆಳಗ್ಯೆ ತಿಳಿದುಬಂತು. ತಾನು ಮೆಕ್ಕಾವನ್ನು ಶಾಂತಿಪೂರ್ವಕವಾಗಿ ಆಕ್ರಮಿಸಬೇಕೆಂದು ಬಯಸಿದ್ದರೂ ಈ ಪರಿ ರಕ್ತಪಾತಗಳಾದದ್ದಕ್ಕೆ ಆತ ಖೇದಗೊಂಡಿದ್ದ ಹಾಗೂ ಅವನ ಈ ಬೇಸರ ಪ್ರಾಮಾಣಿಕವಾದದ್ದೇ ಆಗಿತ್ತು ಸಹ! ಹೀಗಾಗಿಯೆ ಕಾಬಾದಲ್ಲಿನ ತನ್ನ ಆ ಮಧ್ಯಾಹ್ನದ ಪ್ರಾರ್ಥನೆಯ ನಂತರ ಭಕ್ತಾಧಿಗಳನ್ನ ಉದ್ದೇಶಿಸಿ ಆತ ಈ ಬಗ್ಗೆ ವಿಶೇಷವಾದ ಪ್ರವಚನ ಕೊಟ್ಟ. ಅದರಲ್ಲಿ "ದೇವರು ಆಕಾಶ ಹಾಗೂ ಭೂಮಿಯನ್ನ ಸೃಷ್ಟಿಸಿದ ದಿನವೆ ಈ ಮೆಕ್ಕಾವನ್ನೂ ಸಹ ಪವಿತ್ರಗೊಳಿಸಿದ. ಇದರ ವ್ಯಾಪ್ತಿಯಲ್ಲಿ ಕೊಳ್ಳೆ ಹೊಡೆಯುವುದು ನನಗಾಗಲಿ ಅಥವಾ ಇನ್ಯಾರಿಗಾಗಲಿ ತರವಲ್ಲ! ಬೆನ್ ಖೋಝಾ ಜನರೆ, ರಕ್ತ ಚೆಲ್ಲಾಡುವ ನಿಮ್ಮ ಪಾಪಿ ಕೈಗಳನ್ನ ಹಿಂದಕ್ಕೆ ಒಯ್ಯಿರಿ. ನೀವು ಕೊಂದ ಆ ಮನುಷ್ಯನಿಗೆ ನಿಮ್ಮ ಪರವಾಗಿ ನಾನು ಸಹಾಯ ಧನ ನೀಡುವೆನು. ಆದರೆ ಈ ಮಾತನ್ನ ಮೀರಿ ಇನ್ನು ಮುಂದೆ ಯಾರು ಕೊಲೆಗಡುಕರಾಗುತ್ತಾರೋ ಅವರನ್ನ ಅದೆ ಕೊಲೆಗಡುಕನ ಕೈಗೆ ಕೊಡಲಾಗುವುದು ಎನ್ನುವುದು ನೆನಪಿರಲಿ?!" ಎಂದು ದೃಢವಾಗಿ ಹೇಳಿಕೆ ನೀಡಿದ.


ಮಮಹಮದನನ್ನು ನಾನಾ ವಿಧವಾಗಿ ಹೀಯ್ಯಾಳಿಸಿ, ನಿಂದಿಸಿ, ಕೋಟಲೆಗಳನ್ನ ಕೊಟ್ಟು ಅಲ್ಲಿಂದ ಒದ್ದು ಓಡಿಸಿದ್ದ ಮೆಕ್ಕಾ ನಗರ ಈಗ ಆತನ ಅಡಿಯಾಳಾಗಿತ್ತು. ಇಡಿ ಮೆಕ್ಕಾದ ಆತನ ವಿರೋಧಿ ಪಡೆಯವರೆಲ್ಲಾ ಬೇಷರತ್ತಾಗಿ ಆತನ ದಾಸಾನುದಾಸರಾಗಿ ಪರಿವರ್ತನೆಯಾಗಿದ್ದರು. ಆತನನ್ನ ಪ್ರವಾದಿ ಎಂದು ಭಕ್ತಿಯೊಂದ ಕರೆಯಲಾರಂಭಿಸಿದ್ದರು. ಆತ ಅದರ ಪ್ರಾಚೀನತೆಯ ಪಾವಿತ್ರ್ಯವನ್ನ ಮೊದಲಿನಂತೆಯೆ ಉಳಿಸಿಕೊಳ್ಳಲು ನಿರ್ಧರಿಸಿದರೂ ಅಲ್ಲಿ ಉಳಿದುಕೊಳ್ಳಲು ಇಚ್ಛಿಸಲಿಲ್ಲ. ಕಷ್ಟಕಾಲದಲ್ಲಿ ತನಗೆ ಆಸರೆ ನೀಡಿದ ಮದೀನಾಕ್ಕೆ ಹಿಂದಿರುಗುವ ನಿರ್ಧಾರವನ್ನಾತ ಕೈಗೊಂಡಾಗಿತ್ತು. ತನಗೂ ತನ್ನ ಅನುಯಾಯಿಗಳಿಗೂ ವಿಪತ್ತಿನ ದಿನಗಳಲ್ಲಿ ಆಸರೆ, ಸಾಂತ್ವಾನ, ಆಹಾರ, ನೆಲೆ ಹಾಗೂ ನೆಮ್ಮದಿಯನ್ನ ದಯಪಾಲಿಸಿದ ತನ್ನ ಕರ್ಮಭೂಮಿ ಮದೀನಾವೆ ತನ್ನ ಮನೆ ಎಂದಾತ ನಿರ್ಧರಿಸಿದ್ದ. ಹೀಗಾಗಿ ತನ್ನ ಪರವಾಗಿ ಮೆಕ್ಕಾದ ಆಡಳಿತಾಧಿಕಾರಿಯಾಗಲು ಖುರೈಷಿಗಳಲ್ಲಿಯೆ ಒಬ್ಬನಾದ ನವ ಮುಸಲ್ಮಾನ ಅತ್ತಾಬ್'ನನ್ನು ನೇಮಕ ಮಾಡಿದ. ಅಂತೆಯೆ ಕಾಬಾ ಹಾಗೂ ಸುತ್ತಮುತ್ತಲ ಇನ್ನಿತರ ಪವಿತ್ರ ಕ್ಷೇತ್ರಗಳ ಧಾರ್ಮಿಕಾಚರಣೆಯನ್ನ ನಿರ್ವಹಿಸುತ್ತಾ ಅದರ ನಿರ್ವಹಣೆ ಮಾಡಲು ಮದೀನಾದ ಪ್ರಜೆ ಓಅದ್ ಇಬ್ನ್ ಝಾಬೆಲ್ ಎಂಬಾತನನ್ನು ನೇಮಿಸಿದ ಅನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ 'ದ ಸೀಲ್ಡ್ ನೆಕ್ಟರ್' ಕೃತಿಯ ಪುಟಸಂಖ್ಯೆ ೭೯೧ರಲ್ಲಿ.




( ಇನ್ನೂ ಇದೆ.)



No comments: