16 March 2013

ತುಳುಗಾದೆ-೪೬









"ಬಂಟೆರ್ ಪೋಯಿನಲ್ಪ ಮೊಡಂಕ್ ತಪ್ಪಂದ್, ಮೊಡೆಂಜಿ ಪೋಯಿನಲ್ಪ ಕಳಂಕ್ ತಪ್ಪಂದ್"


{ ತುಳುನಾಡಿನಲ್ಲಿ ಜಾತಿವಾರು ಪ್ರಾತಿನಿಧ್ಯವನ್ನ ಗಣನೆಗೆ ತೆಗೆದುಕೊಂಡರೆ ಬಹುಷಃ ಬಂಟರ ಮತ್ತು ಜೈನರ ನಡುವೆ ಮೊದಲನೆ ಸ್ಥಾನಕ್ಕಾಗಿ ಪೈಪೋಟಿ ಏರ್ಪಡಬಹುದು. ಆದರೆ ಇಲ್ಲಿ ಜೈನ ಮತಕ್ಕೆ ಮತಾಂತರವಾದವರೆಲ್ಲರೂ ಬಂಟರೆ ಆಗಿರುವುದರಿಂದ ಅವರನ್ನ ಬಂಟ ಮೂಲದವರೆಂದೆ ಪರಿಭಾವಿಸಿದರೆ ನಿಸ್ಸಂಶಯವಾಗಿ ಬಂಟರೆ ಇಲ್ಲಿ ಬಹುಸಂಖ್ಯಾತರಾಗುತ್ತಾರೆ. ಬಂಟರದ್ದು ಕ್ಷಾತ್ರ ಗುಣ. ಹಿಂದೆ ಆಳರಸರ ಸೇನೆಯಲ್ಲಿ ಸೇನಾಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದುದರಿಂದಲೋ ಎನೋ ಕಾದಾಡುವ ಗುಣ ಅವರ ರಕ್ತದಲ್ಲಿ ಹರಿದುಬಂದಿದೆ. ಅದೆಷ್ಟರ ಮಟ್ಟಿಗೆ ಎಂದರೆ ಇಂದು ಊರೊಟ್ಟಿನ ಕೆಲಸಗಲಲ್ಲಿ ಸಹಜವಾಗಿ ಯಜಮಾನಿಕೆ ವಹಿಸಿ ಓಡಾಡುವ ಬಂಟ ಪ್ರತಿನಿಧಿಗಳು ಚರ್ಚೆ-ವಿಚಾರ ಭಿನ್ನಾಭಿಪ್ರಾಯ ತಲೆದೋರುವ ಹೊತ್ತಿಗೆಲ್ಲ ಮಾತಿಗೆ ಮುಂಚೆ ತಮ್ಮ ತೋಳೇರಿಸಿಕೊಂಡು ತಯಾರಾಗುತ್ತಾರೆ! ತುಳುನಾಡಿನ ಗುತ್ತು-ಬರ್ಕೆ-ಬೀಡುಗಳನ್ನ ಆಳಿ ಜೈನ- ಹೆಗಡೆಗಳೊಂದಿಗೆ ಆಡಳಿತದಲ್ಲಿ ಪಾಲುದಾರರಾಗಿರುತ್ತಿದ್ದ ಬಂಟರದ್ದು ಮುಂಗೋಪದ ಸ್ವಭಾವ. ಅವರಲ್ಲಿ ನಾಲಗೆಗಿಂತಲೂ ಕೈಗೆ ಹೆಚ್ಚು ಕೆಲಸ ಅನ್ನುವುದು ಒಂದು ಉತ್ಪ್ರೇಕ್ಷಿತ ನಂಬಿಕೆ. ಹೃದಯ ವೈಶಾಲ್ಯದಲ್ಲಿ ಸಾಟಿಯಿಲ್ಲದ ಬಂಟರು ಸಂಧಿ ಸಾಧಿಸುವ ಸೂಕ್ಷ್ಮಗುಣದಲ್ಲಿ ಮಾತ್ರ ಪರಮ ಹೆಡ್ಡರು. ಯುದ್ಧ ಮಾಡಿ ಗೆದ್ದು ಬರುವ ಆವೇಶ ಹುಮ್ಮಸ್ಸು ತುಸು ಹೆಚ್ಚೆ ಇರುವ ಇವರು ನಂಬಿದವರಿಗೆ, ಅಭಯ ಬಯಸಿ ಬಂದವರಿಗೆ ತಮ್ಮ ಪ್ರಾಣವನ್ನೆ ಬೇಕಿದ್ದರು ಬರೆದು ಕೊಟ್ಟಾರು ವಿನಃ ಇನ್ನೊಬ್ಬರಿಗೆ ಕತ್ತೆ ಕಾಲು ಕಟ್ಟಲಾದರೂ ಡೊಗ್ಗು ಸಲಾಮು ಹೊಡೆಯಲೊಲ್ಲರು!



ಇದನ್ನೆ ಶೆಟ್ಟರ ಗತ್ತು ಎನ್ನುವುದು. ಸಾಮಾನ್ಯವಾಗಿ ಅಧಿಕಾರ ಕೇಂದ್ರಗಳಾದ ಗುತ್ತು-ಬರ್ಕೆಗಳ ಬೆಂಬಲ ಹಾಗೂ ಹಿನ್ನೆಲೆಯಿಲ್ಲದ ಬಂಟರನ್ನ ತುಳುನಾಡಿನ ಇತರ ವರ್ಗದವರು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಈ ಶೆಟ್ಟರಲ್ಲಿ ಮಾತ್ರ ಗುತ್ತಿಲ್ಲದಿದ್ದರೂ ಗತ್ತಿಗೆ ಕಿಂಚಿತ್ತೂ ಬರವಿರುವುದಿಲ್ಲ. ಯಾವುದಾದರೂ ಸಮೂಹ ಕೆಲಸ ಒದಗಿಬಂದರೆ ತಾನೂ ಒಬ್ಬ ಯಜಮಾನನಾಗಿ ಹೆಗಲ ಮೇಲೊಂದು ಬೈರಾಸು ಹಾಕಿಕೊಂಡು ಮುಂಡು ಸುತ್ತಿಕೊಂಡ ಬಂಟ ಅಲ್ಲಿಗೆ ಹೊರಟೆ ಬಿಡುತ್ತಾನೆ! ಸ್ಥೂಲವಾಗಿ ಬಂಟರೆಂದು ಗುರುತಿಸಲ್ಪಡುವ ಬಂಟರಲ್ಲಿ ಶೆಟ್ಟಿ, ಭಂಡಾರಿ, ಬಲ್ಲಾಳ, ರೈ, ಅಜಿಲ, ಚೌಟ, ಪೂಂಜ, ಹೆಗ್ಗಡೆ, ಪರಾರಿ, ಸಮಾನಿ ಹೀಗೆ ಅನೇಕ ಉಪನಾಮಗಳು ಚಾಲ್ತಿಯಲ್ಲಿವೆ. ತುಳುನಾಡಿನ ಬಂಟರ ಹತ್ತಿರದ ನೆಂಟರೆಂದರೆ ಉತ್ತರ ಕನ್ನಡದ ನಾಡವರು. ಮೂಲತಃ ಅವೈದಿಕ ಪರಂಪರೆಯವರಾದ ಬಂಟರ ಕುಲಪುರೋಹಿತ್ಯವನ್ನ ಅವರ ಜಾತಿಯ ಗುರಿಕಾರ ಅಂದರೆ ಮುಖಂಡನೆ ವಹಿಸುವುದು ಪದ್ಧತಿ. ಒಟ್ಟಿನಲ್ಲಿ ಯಾರಿಗೆ ಗುರುಮಠವಿಲ್ಲವೋ, ಮದುವೆಯಲ್ಲಿ ಯಾರು ಧಾರೆಯನ್ನ ಎರೆಯದೆ ಏರಿಸುತ್ತಾರೋ, ಯಾರು ಮಕ್ಕಳ ಕಟ್ಟಿಗೆ ಒಳಪಡದೆ ಅಳಿಯ ಕಟ್ಟನ್ನ ಅನುಸರಿಸುತ್ತಾರೋ ಅವರನ್ನ ವಿಶಾಲಾರ್ಥದಲ್ಲಿ ಬಂಟರೆಂದು ಕರೆಯಬಹುದು. ಈ ಬಂಟರನ್ನ ಒಕ್ಕಲು ವೃತ್ತಿ ಮಾಡುತ್ತಾರೆಂಬ ಏಕೈಕ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಧಿವಶರಾದ ಮಠಾಧೀಶರೊಬ್ಬರು ರಾಜಕೀಯವಾಗಿ ತಮ್ಮ ಕುಲದೊಂದಿಗೆ ಒಗ್ಗೂಡಿಸಿ ಅವರ ಕುಲಗುರು ಎನ್ನಿಸಿಕೊಳ್ಳುವ ವಿಫಲ ಪ್ರಯತ್ನ ಮಾಡಿದರು. ಇದೀಗ ಬೆಜ್ಜವಳ್ಳಿಯಲ್ಲಿ ಅಪಾಪೋಲಿಯಾಗಿ "ವಿಶ್ವ"ವನ್ನೆ "ಸಂತೋಷ"ವಾಗಿ ಸುತ್ತು ಹಾಕುತ್ತಿದ್ದ ಎಡಬಿಡಂಗಿಯೊಬ್ಬ ವಯಕ್ತಿಕ ತೆವಲಿನ ಹಿಕಮತ್ತನ್ನ ಸಾಧಿಸಿಕೊಳ್ಳಲು ತನ್ನ ಹಳೆಯಹೆಸರಿನ ಮುಂದೆ "ಭಾರತಿ ಶ್ರೀಪಾದಂಗಳ್" ಎನ್ನುವ ದೊಂಬರ ಹಾಗಿನ ಉತ್ತರ ನಾಮ ಸಿಕ್ಕಿಸಿಕೊಂಡು ಹಾಸ್ಯಾಸ್ಪದನಾಗಿ ಕಂಗೊಳಿಸುತ್ತಿದ್ದಾನೆ, ಅದೆಷ್ಟೆ ಲಾಗ ಹೊಡೆದರೂ ಆತನೂ ಬಂಟರಲ್ಲಿ ಮಠ ಪರಂಪರೆ ಹುಟ್ಟು ಹಾಕುವುದು ಅಸಾಧ್ಯ.


ಇಂತಿಪ್ಪ ಬಂಟರು ಶೀಘ್ರ ಕೋಪಿಗಳಾಗಿರುವುದರಿಂದ ನ್ಯಾಯ ಪಂಚಾಯ್ತಿಯೋ- ಊರ ದೇವಸ್ಥಾನದ ಉತ್ಸವವೊ ಎಲ್ಲೆ ಅವರು ಹೋದಲ್ಲಿ, ಅಲ್ಲೊಂದು ಹೊಡೆದಾಟವಾಗುವುದು ನಿಶ್ಚಿತ! ಎನ್ನುತ್ತದೆ ಈ ಗಾದೆಯ ಪೂರ್ವಾರ್ಧ. ಈ ಮೊದಲೆ ಹೇಳಿದಂತೆ ಬಂಟರ ಸಾಮಾನ್ಯ ನೆಲೆಯಲ್ಲಿನ ಸ್ವಭಾವವನ್ನ ಈ ಹೇಳಿಕೆ ಆಧರಿಸಿದೆ. ಅಂತೆಯೆ ಮೊಡಂಜಿ ಮೀನಿನ ಗುಣ. ಸಿಹಿ ನೀರಿನ ಬೃಹತ್ ಮೀನಾದ ಮೊಡಂಜಿ ತನ್ನ ಗಾತ್ರವೆ ಹೆಚ್ಚು ಎಂದು ಮೆರೆಯುತ್ತದಂತೆ. ಕಡಲಿನ ಒಡಲಿನಲ್ಲಿರಬಹುದಾದ ತನಗಿಂತ ದೊಡ್ದ ಮೀನುಗಳ ಗಾತ್ರದ ಅರಿವಿಲ್ಲದ ಮೊಡಂಜಿ ತಾನಿರುವಲ್ಲಿ ಮಾತ್ರ ಕೆಸರೆಬ್ಬಿಸಿಕೊಂಡು ದರ್ಬಾರು ಮಾಡುತ್ತಾ ಇನ್ನಿತರ ಸಣ್ಣಪುಟ್ಟ ಮೀನುಗಳ ಸಹಿತ ಜಲಚರಗಳನ್ನ ಹೆದರಿಸಿಕೊಂಡು ಕಾಲ ಹಾಕುತ್ತದೆ. ಬಂಟರ ನೇರ ನಡೆ, ಒಂದು ಏಟು ಎರಡು ತುಂಡು ಎನ್ನುವ ಖಡಕ್ಕಾದ ಮಾತುಗಾರಿಕೆಯ ವರ್ತನೆಯನ್ನ ವಕ್ರವೆಂದು ತಪ್ಪಾಗಿ ಗ್ರಹಿಸಿದ ಮಂದಿ ಮೊಡಂಜಿಯ ದಾದಾಗಿರಿಯನ್ನ ಬಂಟರಿಗೆ ಸಮೀಕರಿಸಿ ಈ ಗಾದೆಯನ್ನ ಹುಟ್ಟು ಹಾಕಿಕೊಂಡಿರಬಹುದು.}


( ಬಂಟೆರ್ ಪೋಯಿನಲ್ಪ ಮೊಡಂಕ್ ತಪ್ಪಂದ್, ಮೊಡೆಂಜಿ ಪೋಯಿನಲ್ಪ ಕಳಂಕ್ ತಪ್ಪಂದ್ = ಬಂತರು ಹೋದಲ್ಲಿ ವಕ್ರತೆ ತಪ್ಪದು, ಮೊಡಂಜಿ ಹೋದಲ್ಲಿ ಕೆಸರು ತಪ್ಪದು.)

No comments: