30 March 2013

ತುಳುಗಾದೆ-೫೭









"ಇರ್ತಲೆಗ್ ರಡ್ ನಾಲಾಯಿ, ಪಿತ್ತಲೆಗ್ ನಾಲ್ ಕೆಬಿ"



( ಇದು ಸ್ವಂತಿಕೆ, ಸ್ವ ಬುದ್ಧಿಯ ಹಂಗಿಲ್ಲದೆ ಬೇಕಾಬಿಟ್ಟಿ ಕಂಡವರ ಮಾತಿಗೆ ಕಿವಿಗೊಟ್ಟು ಮರುಳಾಗುವ ಮಂದಿಯನ್ನ ಗೇಲಿ ಮಾಡಲು ಬಳಸಲಾಗುವ ಗಾದೆ ಮಾತು. ತನ್ನ ಮನದ ಮಾತಿಗೆ ಕಿವಿಗೊಡದೆ ಕಂಡ ಕಂಡ ಕಿವಿ ಕಚ್ಚುವ ಭಟ್ಟಂಗಿಗಳ ಸವಿಯಾದ ಭೋಪರಾಕಿಗೋ, ಅವರ ಚಾಡಿ ಮಾತುಗಳಿಗೋ ಮರುಳಾಗಿ ಸ್ವಂತಿಕೆಯನ್ನ ಪ್ರತಿಪಾದಿಸದೆ ನಿರ್ಧಾರ ಕೈಗೊಳ್ಳುವ ಅವಸರಗೇಡಿ ಮೂರ್ಖರನ್ನ ನಾವು ಕಾಣುತ್ತೇವಲ್ಲ ಅವರ ನಡೆಯನ್ನ ಹೀಗೆ ಶ್ರೀಸಾಮಾನ್ಯರು ಲೇವಡಿ ಮಾಡುತ್ತಾರೆ. ಹಿತ್ತಳೆ ಕಿವಿಯೆಂದರೆ ಅದು. ಅದರಲ್ಲಿ ಅಂದದ್ದೆಲ್ಲ ಅನುರಣಿಸಿ ಎಡವಟ್ಟಿಗೆ ಕಾರಣವಾಗುವುದು ಸಹಜ. ಹಿತ್ತಾಳೆ ದುಬಾರಿಯಾದ ಲೋಹವಾಗಿದ್ದು ಬಡವರಿಗೆ ಸುಲಭವಾಗಿ ಎಟುಕದಿದ್ದ ಆ ಕಠಿನ ಲೋಹದ ವಸ್ತುಗಳು ಸಿರಿವಂತರ-ಅಧಿಕಾರಸ್ಥರ ಮನೆಗಳಲ್ಲಿಯೆ ಇರುತ್ತಿದ್ದವು ಎನ್ನುವುದು ಇಲ್ಲಿ ಗಮನಾರ್ಹ.


ಅಂತೆಯೆ ಎರಡು ತಲೆಯ ಹಾವು, ವಾಸ್ತವವಾಗಿ ಭೂಮಿಯ ಮೇಲೆ ಎರಡು ತಲೆಯ ಹಾವು ಎನ್ನುವ ಕಲ್ಪಿತ ಸರಿಸೃಪ ಬದುಕಿಯೆ ಇಲ್ಲ! ತಲೆ ಹಾಗೂ ಬಾಲ ಎರಡೂ ಒಂದೆ ಪ್ರಮಾಣದಲ್ಲಿ ಗೋಚರಿಸುವ ಮಣ್ಣಿನ ಹಾವನ್ನು ಎರಡು ತಲೆಯ ಹಾವೆಂದೆ ಮೂಢರು ನಂಬಿದ್ದಾರೆ. ಅಲ್ಲದೆ ಧರ್ಮದ ಹೆಸರಿನಲ್ಲಿ ಶ್ರೀಸಾಮಾನ್ಯರನ್ನ ವಂಚಿಸಿ ಹೊಟ್ಟೆಹೊರೆದುಕೊಳ್ಳುವ ಸ್ವ ಘೋಷಿತ ಗುರುಗಳು, ಜ್ಯೋತಿಷಿಗಳು ಎರಡು ತಲೆಯ ಹಾವು ಅದೃಷ್ಟದ ಸಂಕೇತ ಅದನ್ನು ಸಾಕಿದವರಿಗೆ ಭಾಗ್ಯ ಒದ್ದುಕೊಂಡು ಬರುತ್ತದೆ ಎಂದು ನಂಬಿಸಿ ತಮ್ಮ ಪರಪುಟ್ಟ ಬದುಕಿಗೊಂದು ದಾರಿ ಮಾಡಿಕೊಂಡಿದ್ದಾರೆ. ಎರಡು ತಲೆ ಇರುವುದಾದರೆ ಅದರಲ್ಲಿ ಎರಡು ಬಾಯಿಗಳು ಹಾಗೂ ಆ ಎರಡೂ ಬಾಯಿಯಲ್ಲಿ ಎರಡೆರಡು ನಾಲಗೆ ಇರಬೇಕಲ್ಲ! ಎನ್ನುವ ಸಹಜ ತರ್ಕದ ಮೇಲೆ ಈ ಗಾದೆಯ ಮೊದಲಾರ್ಧ ನಿಂತಿದೆ.


ಅಂತೆಯೆ ಅಧಿಕಾರದ ಆಯಕಟ್ಟಿನ ಸ್ಥಳದಲ್ಲಿರುವ ಮಂದಿಗೆ ಸ್ವಂತ ಬುದ್ಧಿಯಿಲ್ಲದಿದ್ದಲ್ಲಿ ಆಡಳಿತದಲ್ಲಿ ಆಗಬಹುದಾದ ಅನಾಹುತವನ್ನೋ, ಆ ಮೂಲಕ ಪಾಪದ ನಾಗರೀಕರ ಮೇಲೆ ಎರಗ ಬಹುದಾದ ಅನಿರೀಕ್ಷಿತ ವಿಪತ್ತುಗಳನ್ನೋ ಸೂಚಿಸುವ ಆಶಯ ಈ ಗಾದೆಯ ಉತ್ತರಾರ್ಧಕ್ಕಿದೆ. ಪಂಡಿತೋತ್ತಮ ಗಡವರ ಮಾತಿಗೆ ಹಿತ್ತಳೆ ಕಿವಿಯಾಗಿ ದೇವಗಿರಿಗೆ ಮತ್ತೆ ಅಲ್ಲಿಂದ ಮರಳಿ ದೆಹಲಿಗೆ ರಾಜಧಾನಿಯನ್ನ ವರ್ಗಾಯಿಸಿದ ಮಹಮದ್ ಬಿನ್ ತುಘಲಕ್, ಕಂಡವರ ಮಾತಿಗೆ ಬಲಿಯಾಗಿ ತನ್ನ ಮಾರ್ಗದರ್ಶಕ ತಿಮ್ಮಣರಸರನ್ನು ಜೈಲಿಗೆ ದೂಡಿ ಹಾಳಾದ ಕೃಷ್ಣದೇವರಾಯ, ಪಿತೂರಿಗಾರರ ಮರುಳು ಮಾತುಗಳಿಗೆ ತಲೆಯಾಡಿಸಿ ಭಕ್ತಿ ಭಂಡಾರಿ ಬಸವಣ್ಣರನ್ನ ಅಮಾತ್ಯ ಪದವಿಯಿಂದ ಕಿತ್ತು ಹಾಕಿ ಬರಬಾದಾದ ದೊರೆ ಬಿಜ್ಜಳ ಹೀಗೆ ಇತಿಹಾಸದಾದ್ಯಂತ ಇದಕ್ಕೆ ನೂರಾರು ಉದಾಹರಣೆಗಳು ಸಿಗುತ್ತವೆ.)



( ಇರ್ತಲೆಗ್ ರಡ್ ನಾಲಾಯಿ, ಪಿತ್ತಲೆಗ್ ನಾಲ್ ಕೆಬಿ = ಎರಡು ತಲೆಗೆ ಎರಡು ನಾಲಗೆ, ಹಿತ್ತಾಳೆಗೆ ನಾಲ್ಕು ಕಿವಿ.)


*ನೆನ್ನೆ ೨೯ ಮಾರ್ಚ್‍ನಂದು ಕಾರ್ಯದೊತ್ತಡದಿಂದ ಒಂದು ತುಳುಗಾದೆ ತಪ್ಪಿ ಹೋಗಿದೆ. ಕ್ಷಮಿಸಿ ಮುಂದೆ ಆ ಉದಾಸಿನ ಮರುಕಳಿಸದು.

No comments: