28 March 2013

ತುಳುಗಾದೆ-೫೬










"ಉಗುರ್ ಸುತ್ತುದ ಮಿತ್ ಉಜ್ಜೆರ್‍‍‍‍‍ದ ಪೆಟ್"



{ ಉಗುರು ಸುತ್ತು ಎನ್ನುವುದೊಂದು ಅತಿ ಸಾಮಾನ್ಯವಾದ ಖಾಯಿಲೆ. ಹಲವಾರು ಕಾರಣಗಳಿಂದ ಅಸ್ಥಿ ಮಜ್ಜೆಗೆಯಿಂದ ಆರಂಭವಾದ ಉಗುರಿನ ಬುಡ ಎಲುಬಿನ ಮೇಲ್ಪದರಕ್ಕೆ ಸರಿಯಾಗಿ ಅಂಟಿಕೊಳ್ಳುವಲ್ಲಿ ವಿಫಲವಾಗಿ ನಡುವಿನ ಸಂದಿಯಲ್ಲಿ ವೃಣವಾಗಿ ಅದರಿಂದ ಕೀವು ಸೋರುವ ಹಾಗಾದಾಗ ಹುಟ್ಟುವ ನರಕಯಾತನೆಯನ್ನೆ "ಉಗುರು ಸುತ್ತು" ಎನ್ನಲಾಗುತ್ತದೆ. ಕರಾವಳಿ ಜಿಲ್ಲೆಗಳ ತೇವಭರಿತ ಒಣ ವಾತಾವರಣದಲ್ಲಿ ಉಗುರು ಸುತ್ತಿನ ಬಾಧೆಯಿಂದ ನರಳುವವರ ಸಂಖ್ಯೆ ಘಟ್ಟದ ಮೇಲಿನ ಮಂದಿಗಿಂತ ಹೋಲಿಕೆಯಲ್ಲಿ ಅಧಿಕ, ಈ ನೋವಿಗೆ ಸೂಕ್ತ ಚಿಕಿತ್ಸೆ ದೊರಕದೆ ನರಳುವ ರೋಗಿಗಳನ್ನ ಕಂಡಾಗ ಅಯ್ಯೋ ಎನಿಸುತ್ತದೆ.


ಇಂತಿಪ್ಪ ಉಗುರು ಸುತ್ತಿನ ನೋವಿಗೆ ಹೈರಾಣಾಗಿರುವವರಿಗೆ ಅದರ ಮೇಲೆ ಜೋರಾದ ಒನಕೆ ಪೆಟ್ಟು ಸಹ ಬಿದ್ದರೆ ಹೇಗಾದೀತು? ಉಹಿಸಲೆ ಅಸಾಧ್ಯವದು. ನೋವಿನ ಚರಮ ಸೀಮೆ ಅಂತೇನಾದರೂ ಇದ್ದರೆ ಬಹುಷಃ ಅದು ಉಗುರು ಸುತ್ತಿನ ಮೇಲೆ ಬಿದ್ಧ ಒನಕೆ ಪೆಟ್ಟೆ ಇದ್ದೀತೇನೋ! ಗ್ರಾಮೀಣ ಭಾರತದ ಇತರೆಡೆಗಳಂತೆ ಆಧುನಿಕ ಯಂತ್ರೋಪಕರಣಗಳು ದೈನಂದಿನ ಬಳಕೆಯಲ್ಲಿ ಹಾಸು ಹೊಕ್ಕಾಗುವ ಮುನ್ನ ತುಳುನಾಡಿಗರೂ ಸಹ ಭತ್ತವನ್ನ ಅಕ್ಕಿ ಮಾಡಲು ಒನಕೆಯ ಉಪಯೋಗವನ್ನೆ ಅವಲಂಬಿಸಿದ್ದರು. ಭತ್ತವನ್ನ ಒರಳಿನಲ್ಲಿ ಹಾಕಿ ಒನಕೆಯಿಂದ ಕುಟ್ಟಿ ಸಿಪ್ಪೆ ಬೇರ್ಪಡಿಸಿದ ಅಕ್ಕಿಯನ್ನ ಪಡೆಯುವ ರೂಢಿಯಿತ್ತು. ಹಾಗೆ ಅಕ್ಕಿ ಮಾಡಿಕೊಳ್ಳುವುದು ಅನಿವಾರ್ಯವೆ ಆಗಿದ್ದ ದಿನಗಳಲ್ಲಿ ಪರಮೋಷದಿಂದ ಉಗುರು ಸುತ್ತಾದ ಒನಕೆ ಕುಟ್ಟುವ ಕೈಬೆರಳಿನ ಮೇಲೆ ರಭಸದಿಂದ ಒನಕೆಯ ಪೆಟ್ಟು ಬಿದ್ದಿರಬೇಕು ಹಾಗೂ ಈ ಗಾದೆಗೆ ನಾಂದಿ ಅಲ್ಲಿಂದಲೆ ಹುಟ್ಟಿರಬೇಕು.



ನೋವಿನಲ್ಲಿ ಸಂಕಟ ಪಡುವ ದೀನರ, ನೊಂದವರ ಸರಣಿ ಸಮಸ್ಯೆಗಳನ್ನ ನೋಡುವಾಗ ಈ ಗಾದೆಯ ಉಪಮೆಯನ್ನ ಬಳಸಲಾಗುತ್ತದೆ. ಒಂದಾದ ಮೇಲೊಂದು ಸಂಕಟದಲ್ಲಿ ಸಿಲುಕಿ ತಮ್ಮ ಆತ್ಮವಿಶ್ವಾಸವನ್ನೆ ಕಳೆದುಕೊಳ್ಳುವವರ ಪಾಡು ಹೀಗೆ ಉಗುರುಸುತ್ತಿನ ನೋವಿನ ಮೇಲೆ ಬಿದ್ದ ಒನಕೆಯ ಪೆಟ್ಟಿನಂತಹದು. "ಗಾಯದ ಮೇಲೆ ಬರೆಬಿದ್ದಂತೆ" ಎನ್ನುವ ಕನ್ನಡಗಾದೆ ಹಾಗೂ "ಅಧಿಕ ಮಾಸೆ ಅನಾವೃಷ್ಟಿ" ಎನ್ನುವ ಸಂಸ್ಕೃತ ಗಾದೆಯ ತಾತ್ಪರ್ಯವೂ ಅದೇನೆ.}



( ಉಗುರ್ ಸುತ್ತುದ ಮಿತ್ ಉಜ್ಜೆರ್‍‍‍‍‍ದ ಪೆಟ್ = ಉಗುರು ಸುತ್ತಿನ ಮೇಲೆ ಒನಕೆಯ ಪೆಟ್ಟು.)