23 March 2013

ವಿಕಾರ ಬುದ್ಧಿಯ ವಿಷಯ ತಜ್ಞರ ವಿಕೃತ ಚರ್ಚೆಗಳು....


"ನೇರವಾಗಿ ಮೂರೂ ಬಿಟ್ಟು ದಿಟ್ಟವಾಗಿ ನೋಡುಗರ ದಿಕ್ಕೆಡಿಸಿ ನಿರಂತರವಾಗಿ ಕನ್ನಡಿಗರ ಅಭಿರುಚಿ ಕೆಡಿಸುವ" ವ್ಯಭಿಚಾರಿ ಶೈಲಿಯ ಉತ್ತಮ ಸಂ"ಮಜ"ಕ್ಕಾಗಿ ಪಣ ತೊಟ್ಟವರಂತೆ ಕಂಡವರ ಮನೆಯ ಗಳ ಹಿರಿದು ಹಲ್ಲು ಕಿರಿಯುತ್ತಾ ಅಲ್ಲಿನ ಕಟ್ಟೆ ಪುರಾಣ ಕೊಚ್ಚುವ ಕನ್ನಡದ ವಾರ್ತಾವಾಹಿನಿಗಳ ಮಾನಗೇಡಿ ವರ್ತನೆಗೆ ಮಿತಿಯೆ ಇದ್ದಂತಿಲ್ಲ. ಪಾತಾಳಕ್ಕಿಂತ ಕೆಳಗಿಳಿದ ಇವರೆಲ್ಲರ ಅಭಿರುಚಿಗೆ ಇತ್ತೀಚಿನ ಉದಾಹರಣೆ ಗಾಯಕ-ನಟ ರಾಜೇಶ್ ಕೃಷ್ಣನ್'ರ ಮುರಿದ ಮದುವೆಯ ಕಥೆ. ಅದನ್ನ ಬೆಡ್'ರೂಮ್ ರಹಸ್ಯಗಳ ಸಹಿತ ರಣೋತ್ಸಾಹದಿಂದ "ಸುವರ್ಣ"ಕ್ಕನ ಹೀನಾತಿಹೀನ ಅಕ್ರಮ ಸಂತಾನಗಳು ಹಾಗೂ "ಒಂಬತ್ತನೆ ನಂಬರ್" ಛಾನಲ್ಲಿನ ಸುಣ್ಣಬಣ್ನ ಬಳಿದುಕೊಂಡ ನಿರೂಪೆಕರರು ಹಾಗೂ ವರದಿಕೋರರು ನೋಡುಗರಿಗೆ ಯಾವ ಆಸಕ್ತಿ ಇಲ್ಲದಿದ್ದರೂ ದಿನವಿಡಿ ಥೆರೆವಾರಿ ರೀತಿಯಲ್ಲಿ ಕೊರೆದೆ ಕೊರೆದರು.



ಅವಳ್ಯಾರೋ ಗಂಡನಿಗೆ ಲೈಂಗಿಕ ಅತೃಪ್ತಿಯಿಂದ ಸೋಡಾಚೀಟಿ ಕೊಡಲು ಉಧ್ಯುಕ್ತವಾದರೆ ಟಿವಿ ವಾರ್ತಾವಾಹಿನಿ ಜಗತ್ತಿನ "ಆಸ್ಥಾನ ಕಲಾವಿದ"ರಂತಹ ಅರ್ಜೆಂಟ್ ವಿಷಯ ತಜ್ಞ(?)ರನ್ನೆಲ್ಲ ಇದ್ದಲ್ಲಿಂದಲೆ ಇದ್ದಕ್ಕಿದ್ದಂತೆ ಗೋರಿ ರಾಶಿ ಹಾಕಿಕೊಂಡು ಬಾಯಿ ಚಪ್ಪರಿಸಿಕೊಳ್ಳುತ್ತಾ

"ಸೋಡಾಚೀಟಿ ಎಸೆದವಳು ಲೈಂಗಿಕವಾಗಿ ಬಹಳ ಹಸಿದಿದ್ದಳೆ!"

"ಅವಳ ದೇಹದ ದಾಹ- ಕಾಮತೃಷೆಯನ್ನ ತಣಿಸುವಲ್ಲಿ ಅವನು ವಿಫಲವಾದದ್ದು ಹೌದೆ?"

"ಹೆಣ್ಣಿನ ಕಾಮದ ಹಸಿವು ಅದೆಷ್ಟು ಭೀಕರ!"

"ಗಂಡನೆನೆಸಿಕೊಂಡ ಅವನು ನಿಜವಾಗಿಯೂ ಹಾಸಿಯ ಮೇಲೆ ಗಂಡನೆ ಆಗಿದ್ದೆನೆ ಇಲ್ಲಾ ಆತ ಷಂಡನೆ?!"

ಎನ್ನುವ ಇಂದಿನ ವರ್ತಮಾನದ "ತುರ್ತು ಅಗತ್ಯ"ಗಳ ಕುರಿತು ಅಗ್ಗದ ನೀಲಿಚಿತ್ರಗಳಿಗಿಂತ ಹೆಚ್ಚು ರೋಚ"ಕಥೆ"ಯಿಂದ ಕೂಡಿದ್ದ ಘನಘೋರ ಪ್ಯಾನಲ್ ಚರ್ಚೆಗಳೂ ಕೂಡ ಬಿಡುವಿಲ್ಲದೆ "ಪಬ್ಲಿಕ್" ಆಗಿ ನಡೆದು ಈ "ಸಮಯ"ದಲ್ಲಿ ಇದೆ ಬಹುಷಃ ಕರುನಾಡ "ಜನಶ್ರೀ"ಗೆ ತುರ್ತು ಅಗತ್ಯವಾದ ಮಾಹಿತಿಯೇನೋ ಎಂಬಂತೆ ಧಾರಾಳ ಇಂಗ್ಲಿಷ್ ಬೆರೆಸಿದ ಅಚ್ಛ "ಕಸ್ತೂರಿ" ಕನ್ನಡದಲ್ಲಿ ೨೪*೭ ಎಗ್ಗುಸಿಗ್ಗಿಲ್ಲದೆ ಈ ಕ್ಷುಲ್ಲಕ ಸಂಗತಿಯ ಮರಣೋತ್ತರ ಪರೀಕ್ಷೆ ಕಿರುತೆರೆಯ ಮೇಲೆ ನಡೆಸಲಾಯಿತು. ಆಡಿದ್ದನ್ನೆ ಆಡಿ ಅಲ್ಲಿನ "ನಿರೋಧ್ ಪ್ರಿಯ" ನಿರೂಪಕರು ಆಗಬಾರದ ಕಡೆ ರೋಮಾಂಚಿತರಾಗುತ್ತಿದ್ದರೋ, ಇಲ್ಲವೆ ಚರ್ಚೆಯೆಂಬ ಹೆಸರಿನ ಸೊಂಟದ ಕೆಳಗಿನ ಶೈಲಿಯ ಸೋಮಾರಿ ಕಟ್ಟೆ ಪಂಚಾಯ್ತಿಯ ಹರಟೆಯಲ್ಲಿ ಜೊಲ್ಲು ಸುರಿಸಿಕೊಂಡು ಆಗಾಗ ನಾಲಗೆ ಸವರಿಕೊಳ್ಳುತ್ತಿದ್ದ ಈ ಅಬ್ಬೆಪಾರಿ ಲಡಕಾಸಿ "ವಿಷಯ ತಜ್ಞ"ರು ಪ್ರಫುಲ್ಲಿತರಾಗುತ್ತಿದ್ದರೋ ಅನ್ನುವ ಗೊಂದಲ ಮಾತ್ರ ಮೊನ್ನೆ ಗುರುವಾರ ಈ ಚಾನಲ್'ಗಳನ್ನೆಲ್ಲ ಕಾಸು ಕೊಟ್ಟು ಕೊಂಡ ಕರ್ಮಕ್ಕೆ ನೋಡ ಬೇಕಾದ ಅನಿವಾರ್ಯತೆಗೆ ಸಿಲುಕಿದ ಕಿರುತೆರೆಯ ವೀಕ್ಷಕರಿಗೆ ಎದುರಾಗಿತ್ತು.



ಕಂಡವರ ಷಂಡತನಕ್ಕೆ ಕ್ಯಾಮರಾ ಹಿಡಿದು ಹಬ್ಬ ಮಾಡುವ ಈ ನಾಮರ್ದರ ಅಟ್ಟಹಾಸಗಳನ್ನ ನೋಡಿದ ನಾವು ಕನ್ನಡಿಗ ವೀಕ್ಷಕರು "ಕಾಸು ಕೊಟ್ಟು ಅವರು ತೋರಿಸಿದ ವಿಕಾರ-ಅಸಹ್ಯದ ಕಾರ್ಯಕ್ರಮಗಳನ್ನೆ ನೋಡಿ ಸುಮ್ಮನಿದ್ದು ಷಂಡರಾಗಬೇಕೆ?" ಅನ್ನುವ ಪ್ರಶ್ನೆಯನ್ನ ಈಗಲಾದರೂ ಕ್ಯಾಕರಿಸಿ ಅಂತಹ ಕಮಂಗಿಗಳ ದರಬೇಶಿ ಮುಖಕ್ಕೆ ಉಗಿದು ವಿಚಾರಿಸಿಕೊಳ್ಳುವುದನ್ನ ಬಿಟ್ಟು ಹೀಗೆ ಸುಮ್ಮನಿದ್ದರೆ ಇನ್ನು ಮುಂದೆ ಇವರ ಅಸಹ್ಯವನ್ನೂ ಮೀರಿದ ಅರ್ಭಟಕ್ಕೆ ಕೊನೆ ಮೊದಲಿರುವುದಿಲ್ಲ. ಹೀಗೆ ಕಂಡವರ ಶಯನ ಕೋಣೆಗೆ ಕ್ಯಾಮರಾ ಹರಿಸಿ ಅನ್ನ ಸಂಪಾದಿಸಿಕೊಳ್ಳುವ ಅನಿವಾರ್ಯತೆಗಿಳಿದಿರುವ ಗತಿಗೆಟ್ಟ ಈ ಹರಾಮರ ಮನೆಯಲ್ಲಿ ಇಂತಹ ಅಪಸವ್ಯಗಳು ನಡೆದೆ ಇಲ್ಲವ? ಆವಾಗಲೆಲ್ಲ ಹೀಗೆ ಕ್ಯಾಮರಾ ಹೊತ್ತು ಕ್ಷಣಕ್ಷಣದ ರೋಚಕ ಮಾಹಿತಿಗಳನ್ನ ಹೀಗೆಯೆ ಬಿತ್ತರಿಸಿ ತಾವು ಕೂಡ ಕೂತಲ್ಲೆ ಸುಮ್ಸುಮ್ನೆ ಬೆಚ್ಚಗಾಗುತ್ತಿದ್ದರಾ? ಅದೆಲ್ಲಾ ಅತ್ತಲಾಗಿರಲಿ ಕರೆದ ಕೂಡಲೆ ಅಗ್ಗದ ಪ್ರಚಾರಕ್ಕೆ ಬಾಯಿಬಿಟ್ಟುಕೊಂಡು ಬರಗೆಟ್ಟವರಂತೆ ಮೇಕಪ್ ಬಳಿದುಕೊಂಡು ಕ್ಯಾಮರಾ ಮುಂದೆ ಕುಳಿತು ಕರುನಾಡಿಗರಿಗೆ ತಮ್ಮ ಖಾಲಿತಲೆಯ ಜ್ಞಾನ ಸಂಪನ್ನತೆಯನ್ನ ಹಂಚಿ ಸಾರ್ಥಕವಾಗುವ ಈ ವಿಶೇಷ ಜ್ಞಾನಿ "ವಿಷಯ ತಜ್ಞ" ಪ್ರಜೆಗಳನ್ನ ಎಲ್ಲಕ್ಕೂ ಮೊದಲು "ಸರಿಯಾಗಿ ವಿಚಾರಿಸಿಕೊಳ್ಳಿ" ಆಗ ಇಂತಹ ಅನರ್ಥಗಳು ಅರ್ಧ ನಿಲ್ಲುತ್ತವೆ.


ಇಲ್ಲೊಬ್ಬಳು ಆಗಾಗ ತೆರೆಯ ಮೇಲೆ ಚರ್ಚೆಗೆ ಧಾವಿಸುವ "ಲೈಂಗಿಕ ತಜ್ಞೆ" ವೈದ್ಯೆಯಿದ್ದಾಳೆ. ನಾನು ಆಗಷ್ಟೆ ಎಫ್ ಎಂ ರೈನ್'ಬೋ ಆಗಿದ್ದ ಆಗಿನ ಎಫ್ ಎಂ ಮೆಟ್ರೋದಲ್ಲಿ ಕಾರ್ಯಕ್ರಮ ನಿರೂಪಕನಾಗಿದ್ದಾಗ ಹೊಸತಾಗಿ ಆರಂಭಿಸಿದ್ದ "ಲಂಚ್ ಬಾಕ್ಸ್" ಕಾರ್ಯಕ್ರಮದಲ್ಲಿ ಆಕೆಯನ್ನ ಸಂದರ್ಶಿಸುವ ವ್ಯವಸ್ಥೆ ಮಾಡಿದ್ದೆ. ನಮ್ಮ ವಾಹಿನಿಯ ಉಸ್ತುವಾರಿಯಾಗಿದ್ದ ಆಕಾಶವಾಣಿಯ ಉಪ ನಿರ್ದೇಶಕಿಯಾಗಿದ್ದ ಸರಸ್ವತಿ ಆಗ ಈ ಕಾರ್ಯಕ್ರಮಕ್ಕೆ ಒಪ್ಪಿದ್ದರು ಅಂತ ನೆನಪು. ಬಹುಷಃ ಆವರೆಗೂ ಕೇವಲ ಪತ್ರಿಕೆಗಳಲ್ಲಿ ಲೈಂಗಿಕ ವಿಷಯ ಸಂಬಂಧಿಸಿದ ಲೇಖನಗಳನ್ನೋ ಇಲ್ಲವೆ ಗುಪ್ತ ಸಮಾಲೋಚನೆಗಳ ಕುರಿತ ಓದುಗರ ಪ್ರಶ್ನೆಗಳಿಗೆ ಉತ್ತರಿಸಿಕೊಂಡಿದ್ದ ಆ "ಲೈಂಗಿಕ ತಜ್ಞೆ"ಗೆ ಅದೆ ವಿದ್ಯುನ್ಮಾದ ಮಾಧ್ಯಮದಲ್ಲಿ ದಕ್ಕಿದ ಮೊದಲ ಪ್ರಚಾರದ "ಪ್ರಸಾದ" ಅಂತಲೂ ನನಗೆ ನೆನಪಿದೆ. ಇದೆಲ್ಲ ಹತ್ತಿರ ಹತ್ತಿರ ಹತ್ತು ವರ್ಷಗಳ ಹಿಂದಿನ ಕಥೆ. ಆದರೆ ಈ ಸುಡುಗಾಡು "ಒಂಬತ್ತನೆ ನಂಬರ್"ನ ಖಾಸಗಿ ವಾರ್ತಾವಾಹಿನಿಗಳ ಸಾಲುಸಾಲು ಹಳವಂಡ ಆರಂಭವಾಯಿತು ನೋಡಿ ಈಕೆಗೀಗ ಫುಲ್ ಡಿಮಾಂಡ್. ಅದೆಷ್ಟು ಅತಿರೇಕಕ್ಕೇರಿದೆಯೆಂದರೆ ಆಕೆ ತನ್ನ ನರ್ಸಿಂಗ್ ಹೋಂಗಿಂತ ಹೆಚ್ಚು ಯಾವುದಾದರೂ ಅರೆಬೆಂದ ವಾರ್ತಾವಾಹಿನಿಯಲ್ಲಿಯೆ ದಿನದ ಅರ್ಧ ಭಾಗವನ್ನ ಬಹುತೇಕ ವ್ಯಯಿಸುವಷ್ಟು. ಟಿವಿ ವಾಹಿನಿಗಳು ಕರೆಯುವುದಕ್ಕೆ ಕಾದಿದ್ದವಳಂತೆ ಅಲ್ಲಿ ಕಂಡವರ ಮನೆಯುರಿಗೆ ಬಿದ್ದ ಬೆಂಕಿಯಲ್ಲಿ ತಾನೂ ಮೈ ಕಾಯಿಸಿಕೊಳ್ಳಲು ಈಕೆ ಧಾವಿಸಿ ಬರುತ್ತಾಳೆ! ಸದರಿ ತಜ್ಞೆಯ ಮನೆಯಲ್ಲೂ ಹೀಗೆ ಲೈಂಗಿಕ ಸಮಸ್ಯೆ ತಲೆದೋರಿದಾಗಲೂ ಆಕೆ ಅದನ್ನ ಸುಧಾಸಿ ಸಂಭಾಳಿಸುವ ಬದಲು ಹೀಗೆಯೆ ಅದನ್ನ "ಒಂಬತ್ತನೆ ನಂಬರ್"ನ "ಸುವರ್ಣ"ಕ್ಕನ ಅಂಗಳದಲ್ಲಿ ಹೀಗೆ ಹಲ್ಲು ಬಿಟ್ಟು ನಗಾಡುತ್ತಾ "ಪಬ್ಲಿಕ್"ಕ್ಕಾಗಿ ಕನ್ನಡಿಗರೊಂದಿಗೆ ಹಂಚಿಕೊಳ್ಳುತ್ತಾರಾ ಎನ್ನುವುದು ಇಲ್ಲಿ ಹುಟ್ಟುವ ಮುಖ್ಯ ಪ್ರಶ್ನೆ.



ಹಾಗೆಯೆ ಮೂರುಮೂರು ವಿಧಾನಸಭಾ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಹಾಗೂ ಕೇವಲ ಸುಣ್ಣಬಣ್ಣ ಹೊಡೆದುಕೊಂಡರೆ ಮಾತ್ರ ನೋಡಲು ಸಹನೀಯವಾಗಿರುವ "ವಿಷಯ ತಜ್ಞೆ" ವಕೀಲೆಯೊಬ್ಬಳಿದ್ದಾಳೆ. ತಾನಿನ್ನೂ "ಪ್ರಮೀಳೆ"ಯೆಂದೆ ಭ್ರಮಿಸಿಕೊಂಡಿರುವ ಆಕೆಗೂ ಇಂತಹ ಮನೆಮುರುಕ ಪ್ಯಾನಲ್ ಚರ್ಚೆಗಳಲ್ಲಿ ಭಾಗವಹಿಸಲು ಅಸೀಮ ಕಾತರ. ಕ"ಮಲ" ಪಕ್ಷದ ಹುರಿಯಾಳಾಗಿ ಮತ್ತೆ ಬರಲಿರುವ ವಿಧಾನಸಭಾ ಚುನಾವಣೆಯ ಕಣಕ್ಕೆ ಧುಮುಕುವ ಅದಮ್ಯ ಆಸೆಯಿರುವ ಆಕೆಗೆ ಪದೆಪದೆ ಹೀಗಾದರೂ ಟಿವಿ ಪರದೆ ಮೂಲಕ ಪ್ರಚಾರದಲ್ಲುಳಿದು ಮಾನ್ಯ ಮತದಾರ ಬಾಂಧವರ ಕಣ್ಮಣಿಯಾಗುವ ಬಯಕೆ. ತನ್ನ ಮಕ್ಕಳ ಮನೆ ಮುರಿದಾಗಲೂ ಹೀಗೆಯೆ ಆಕೆಗೆ ಬಹಿರಂಗ ಚರ್ಚೆಗಿಳಿಯುವ ರಣೋತ್ಸಾಹ ಮೂಡಿಬರುತ್ತದಾ? ಎನ್ನುವುದು ಚರ್ಚೆಗೆ ಯೋಗ್ಯ ವಿಚಾರ. ಜೆ ಹೆಚ್ ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಆಯೋಜಿತವಾಗಿದ್ದ ವಿಶ್ವಸುಂದರಿ ಸ್ಪರ್ಧೆಯನ್ನ ವಿಧಾನ ಸಭಾಧಿವೇಶನದಲ್ಲಿ ಆವೇಶದಿಂದ ವಿರೋಧಿಸಿ ಮಾತನಾಡಿದ್ದ ಆ ಕಾಲದ ಶಾಸಕಿಯಾಗಿದ್ದ ಈ ಅವಿವೇಕಿ ವಕೀಲೆಗೆ "ನೋಡಿ ಅದು 'ಸುಂದರಿ'ಯರಿಗೆ ಸಂಬಂಧಿಸಿದ ವಿಷಯ, ನೀವ್ಯಾಕೆ ನಿಮ್ಮದಲ್ಲದ ಈ ವಿಷಯದಲ್ಲಿ ಸುಮ್ಮನೆ ಕಂಠ ಶೋಷಣೆ ಮಾಡಿಕೊಳ್ಳುತ್ತೀರ!" ಅಂತ ತಣ್ಣಗೆ ಹೇಳಿ ಮುಖ್ಯಮಂತ್ರಿ ಪಟೇಲರು ಈಕೆಯ ಮುಖದ ಮೇಲೆ ಬೆವರಿಳಿಸಿ, ಆ ಬೆವರ ಹನಿಗಳಿಗೆ ಈಕೆ ಮಾಡಿಕೊಂಡಿದ್ದ ಮೇಕಪ್ ಕರಗಿ ಹರಿದು ಹೋಗುವಂತೆ ಮಾಡಿದ್ದರು. ಅದರ ಮುಂದಿನ ಚುನಾವಣೆಗಳಲ್ಲಿ ಸಾಲಾಗಿ ಸೋತು ಮಕಾಡೆ ಮಲಗಿರುವ ಈಕೆಗೆ ಈಗ ಪದೆಪದೆ ಕಂಡವರ ಒಡೆದ ಮನೆಯ ಕತೆಯನ್ನ ಆಲಿಸಿ ಅದಕ್ಕೆ ಇನ್ನಷ್ಟು ತನ್ನ ವಿಶ್ಲೇಷಣೆ ಸೇರಿಸಿ ಅಸಂಬದ್ಧ "ಕಥೆ" ಹೊಡೆಯುವ ಕೆಟ್ಟ ಚಾಳಿ.


ಇನ್ನೊಬ್ಬ ಚಾಮರಾಜಪೇಟೆಯ "ಆದರ್ಶ"ಯುತ ಮಾರ್ವಾಡಿ ಕಾಲೇಜೊಂದರ ಪ್ರಾಂಶುಪಾಲ ಕೊರಮನಿದ್ದಾನೆ. ಕರ್ನಾಟಕದ ಪ್ರಸಿದ್ಧ "ಮಾನಸಿಕ ವಿಶ್ಲೇಷಕ"ನೆಂಬ ಆರೋಪ ಹೊತ್ತ ಇವನೂ ಈ ಆಸ್ಥಾನ ಕಲಾವಿದರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾನೆ. ಇಂತಹ ಅಸಂಬದ್ಧ ವಿಚಾರಗಳ ಕುರಿತ ಚರ್ಚೆಗೆ ಕರೆದವರ ಮಾನಸಿಕ ವಿಕೃತಿಯನ್ನ ವಿಶ್ಲೇಷಿಸಿ ಅವರಿಗೆ ಸೂಕ್ತ ಚಿಕಿತ್ಸೆಗೆ ಶಿಫಾರಸ್ಸು ಮಾಡಬೇಕಾದ ಈ "ವಿಷಯ ತಜ್ಞ" ಕೊರಮ ಅದರ ಬದಲಿಗೆ ಅವರ ಕರೆಯನ್ನೆ ಕಾದಿದ್ದವನಂತೆ ಅಲ್ಲಿಗೆ ಓಡೋಡಿ ಬಂದು ವಿಷಯ ಪ್ರಸ್ತಾಪಿಸುವ ವಿಕಾರಿ ನಿರೂಪಕರನ್ನೂ ಮೀರಿಸುವ ವಿಕೃತಿಯೊಂದಿಗೆ ಕಾರ್ಯಕ್ರಮದಲ್ಲಿ ತನು-ಮನದಿಂದ ಭಾಗವಹಿಸಿ ಅವರು ಬಿಸಾಡುವ ಹೀನ ಧನಕ್ಕೆ ನಾಚಿಕೆಯಿಲ್ಲದೆ ನಾಲಗೆಯೊಡ್ಡಿ ಪುನೀತನಾಗುತ್ತಾನೆ. ಈ "ಶ್ರೀ"ಯುತ ಪ್ರಾಂಶುಪಾಲರಿಗೆ ಇರುವ ಮಾನಸಿಕ ಸಮಸ್ಯೆಯೇನು? "ಧರೆ"ಯ ಮೇಲೆಲ್ಲಾದರೂ ಅದಕ್ಕೆ ಮದ್ದು ಲಭ್ಯವಿದೆಯೆ? ಅನ್ನುವ ಬಗ್ಗೆ ಒಂದು ಪ್ಯಾನಲ್ ಚರ್ಚೆ ತುರ್ತಾಗಿ ನಡೆದರೆ ಆತನ ಹಾಗೂ ಆತನ ವಿಕಾರ ವಾದಕ್ಕೆ ಕಿವಿಗೊಡುವ ಕರ್ಮಕ್ಕೆ ಒಳಗಾಗಿರುವ ಕನ್ನಡಿಗರ ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು.


ಇನ್ನು ಟಿವಿ ಒಂಬತ್ತರ ನಿರೂಪೆಕರ ಆಗಾಗ ವಿಪರೀತ ಕಾತರನಾಗಿ "ಆತನಿಗೆ ನರದೌರ್ಬಲ್ಯವಿತ್ತಾ?" ಎಂದು ಕೇಳುತ್ತಲೆ "ಆತ ನನಗಷ್ಟೆ ಅಲ್ಲ ಯಾವ ಹೆಂಗಸಿಗೂ ಆತ ಸುಖ ಕೊಡಲಾರ!" ಅಂತ ಗಾಯಕನ ಪತ್ನಿ ಸಲ್ಲಿಸಿದ ಅಫಿಡವಿಟ್'ನಲ್ಲಿದ್ದ ಸಾಲನ್ನ ಅನಗತ್ಯವಾಗಿ ಮತ್ತೆ ಮತ್ತೆ ಜೊಲ್ಲು ಸುರಿಸಿಕೊಂಡು ಓದುತ್ತಾ ಆಕೆಗೆ ದೊರೆಯದಿದ್ದ "ಸುಖ"ಕ್ಕಾಗಿ ಲೊಚಗುಟ್ಟುತ್ತಾ ಕಾರ್ಯಕ್ರಮವನ್ನ ನಿರೂಪಿಸುತ್ತಿದ್ದ. ಆತನ ಮರ್ಜಿ ನೋಡಿದರೆ ತುರ್ತಾಗಿ ತಾನೆ ಆಕೆಯಿದ್ದಲ್ಲಿ ಓಡಿ ಹೋಗಿ ಆಕೆಗೆ ಆ "ಸುಖ"ವನ್ನ ದಯಪಾಲಿಸಲು ಅಪಾರ "ರೆಹಂ"ನೊಂದಿಗೆ ಕಾತರನಾಗಿದ್ದಂತೆ ಕಾಣುತ್ತಿತ್ತು. "ಸುಂದರವಾಗಿರುವ ತರುಣರು ಕಾಮಕ್ರೀಡೆಯಲ್ಲಿ ಹಿಂದಿರುತ್ತಾರಂತೆ ಹೌದಾ?" ಎನ್ನುವ ಅರ್ಥ ಬರುವ ಪ್ರಶ್ನೆಗಳನ್ನ ತನ್ನ ಪ್ಯಾನಲ್'ನಲ್ಲಿದ್ದ ತಲೆಮಾಸಿದ ಚರ್ಚಾಪಟುಗಳಿಗೆ ನೋಡಲು ತಕ್ಕ ಮಟ್ಟಿಗೆ ಸ್ಪುರದ್ರೂಪಿಯೂ ಆಗಿರುವ ಈ ಗಡವ ಸುಮ್ಮ ಸುಮ್ಮನಾದರೂ ಕೇಳಿ ರೋಮಾಂಚಿತವಾಗುತ್ತಿತ್ತು. ನೋಡುಗರಿಗೆ ಮಾತ್ರ ಇದು ಅವ ತನ್ನ ಸ್ವಂತ "ನರ ದೌರ್ಬಲ್ಯ"ದ ಕುರಿತೆ ಕೇಳಿದ ಆತ್ಮಗತ ಪ್ರಶ್ನೆಯಂತೆ ಕೇಳಿಸುತ್ತಿತ್ತು ಅನ್ನೋದು ಮಾತ್ರ ದೊಡ್ಡ ತಮಾಷೆ.



ಇನ್ನು ಸುವರ್ಣಕ್ಕನ ಅಂಗಳದಲ್ಲಿ ಮಾತ್ರ ಈ ಮನೆ ಮುರುಕ ವಿಚಾರದ ಪ್ರಸಾರವೆ ಅಂದಿನ ಮಟ್ಟಿಗೆ ಬಹಳ ಹೆಮ್ಮೆಯ ವಿಚಾರವಾಗಿತ್ತು. ತನ್ನ ಮುಖ"ಅರವಿಂದ"ವನ್ನ ಆಗಾಗ ವಾರ್ತೆಯಲ್ಲಿ ತೋರುತ್ತಿದ್ದ ತಪರೇಸಿ ನಿರೂಪೆಕರನೊಬ್ಬ "ಬೆಳಗ್ಯೆಯಿಂದ ನಾವು ಕುರಿತ ಕ್ಷಣ ಕ್ಷಣದ ಸುದ್ದಿಯನ್ನ ನಿಮ್ಮ ಮನೆಯಂಗಳಕ್ಕೆ ತಲುಪಿಸುತ್ತಿದ್ದೇವೆ! ಇದು ನಿಮ್ಮ ಸುವರ್ಣ ನ್ಯೂಸ್'ನಲ್ಲಿ ಮಾತ್ರ?!" ಅಂತ ಅದೇನೋ ಕಡಿದು ಕಟ್ಟಿಹಾಕುತ್ತಿರುವವನ ಗೆಟಪ್ಪಿನಲ್ಲಿ ಕಾಲರ್ ಮೇಲೇರಿಸಿಕೊಳ್ಳುತ್ತಾ ಊಳಿಡುತ್ತಿದ್ದ. ನಿಜವಾಗಿಯೂ ಇವರ್ಯಾರೂ ಈ ಕಾರ್ಯಕ್ರಮದಲ್ಲಿ ಚರ್ಚಿಸುತ್ತಿದ್ದಂತೆ ಷಂಡತನದಿಂದ ನರಳುತ್ತಿದ್ದುದೆ ಇಲ್ಲವಾಗಿದ್ದಲ್ಲಿ, ಅವರಿಗ್ಯಾರಿಗೂ ಅಡಿಗಡಿಗೆ ನರ ದೌರ್ಬಲ್ಯದಿಂದ ನರಳುತ್ತಿರದಿಲ್ಲದಿದ್ದರೆ ಅವರಿಗೆ ಈ ತರಹದ ಮಾಹಿತಿ ಪೂರ್ವ ಕಾರ್ಯಕ್ರಮವನ್ನ ನಡೆಸಿಕೊಡಲು ಅನೇಕ ರೋಚಕ ವಿಷಯಗಳು ದಂಡಿಯಾಗಿ ಇವೆ.


ಉದಾಹರಣೆಗೆ ಅವತ್ತು ಸುವರ್ಣಕ್ಕನ ಅಂಗಳದಲ್ಲಿ ಆ ವಿಷಯವಾಗಿ ಪ್ಯಾನಲ್ ಚರ್ಚೆಯ ಹೆಸರಿನಲ್ಲಿ ತೌಡು ಕುಟ್ಟುತ್ತಿದ್ದ ಅಜಿತವಾಗಿಯೆ "ಮಾಲತಿ" ಹನುಮನೆಂಬ ಬಿರುದಾವಳಿ ಹೊತ್ತ ಸಿಂಗಳೀಕ ಪದೆಪದೆ

"ಆಕಿಯ ಜೊತೆ ಅಕ್ಕಿಯ ಆಸೆಗೆ ಬೇಲಿ ಹಾರುವಾಗಲೆಲ್ಲ ಆತನಿಗೆ ನರದೌರ್ಬಲ್ಯ ಕಾಡುತ್ತಿರಲಿಲ್ಲವ?"

"ಆತನ ಹೀನ ಸುಳಿಯ ಚಾನಲ್ಲಿನ ಅಕ್ರಮ "ಸಂಪಾದಕ"ನಾಗಿರುವ ವಿಶ್ಶಿಶ್ಶಿ ಭಟ್ಟನ ಮೊದಲನೆ ರೆಡ್ಡಿ ಹೆಂಡತಿ ಅವನಿಗೆ ಮದುವೆಯಾದಷ್ಟೆ ಶೀಘ್ರವಾಗಿ ಸೋಡಾಚೀಟಿ ಎಸೆದು ಪಾರಾದದ್ದೇಕೆ? ಭಟ್ಟನ ನರವೂ ಆಗ ಕೈಕೊಟ್ಟಿತ್ತಾ?"

ಅಥವಾ


"ದಿನಾ ಆಗ ಕಛೇರಿಗೆ ಬರುವಾಗ ಈ ವಿಕೃತ ಭಟ್ಟ ಕಾಲರಿನವರೆಗೂ ಗಟ್ಟಿಯಾಗಿ ಬಟನ್ ಹಾಕಿಕೊಂಡು ತನ್ನ ಕತ್ತಿನ ವರೆಗಾಗಿರುತ್ತಿದ್ದ ಯಾವ ಕಾಮ ಜ್ವರ ಪೀಡಿತ ಪರಚಿದ ಹೆಣ್ಣು ಚಿರತೆಯ ಉಗುರಿನ ಗುರುತುಗಳನ್ನ ಮರೆಮಾಚಲು ನಿತ್ಯ  ಪರದಾಡುತ್ತಿದ್ದ? ಅವನಿಗಿದ್ದಿಲ್ಲ 'ನರ'ವೆ ಅವನಿಂದ ತಾಳಿ ಕಟ್ಟಿಸಿಕೊಂಡು ದೇಹ ಸುಖಕ್ಕೆ ಕಾದು ನಿರಾಶಳಾದ ಈ ಕಾಮ ಸಂತ್ರಸ್ತೆಯ ದಿಟ್ಟವಾದ ನೇರ ನಿರಂತರ ದಾಳಿಗೆ ಕಾರಣವಾಗಿರುತ್ತಿತ್ತಾ?"



ಹೀಗೆ ಕ್ಯಾಮರಾ ಹಿಡಿದು ಹುಡುಕಿದ್ದರೆ ಪ್ಯಾನಲ್ ಚರ್ಚೆಗೆ ವಿಷಯಗಳು ನಿಜಕ್ಕೂ ನೂರಿದ್ದವು. ಆದರೆ ಆ ಪ್ಯಾನಲ್ ಚರ್ಚೆಯ ನಿರೂಪೆಕರ ಹನುಮನಿಗಿರದಿದ್ದದ್ದು ಮಾತ್ರ ಕೇವಲ ತನಿಖಾ ಪತ್ರಿಕೋದ್ಯಮದ ಕನಿಷ್ಠ ಸಾಮಾನ್ಯ ಜ್ಞಾನ.



ಸುವರ್ಣಕ್ಕನ್ನ ಅಂಗಳದಿಂದ ಹೀಗೆ ಪಂಥಾಹ್ವಾನ ಬಂದದ್ದೆ ತಡ ಎಲ್ಲಿ ತಾವು ಈ ಹೀನಾಯ ಸ್ಪರ್ಧೆಯಲ್ಲಿ ಹಿನ್ನೆಡೆ ಯನ್ನನುಭವಿಸುತ್ತೀವೋ? ಎನ್ನುವ ಗಾಬರಿಗೆ ಬಿದ್ದ ಒಂಬತ್ತನೆ ನಂಬರಿನವರು ಮಲ್ಲೇಶ್ವರದಲ್ಲಿರುವ ರಾಜೇಶ್ ಮನೆಗೆ ಹಾಗೂ ಗಿರಿನಗರದಲ್ಲಿರುವ ರಾಜೇಶ್ ಪೋಷಕರ ಮನೆಗೆ ನೇರ ವರದಿಗಾರಿಕೆಗಾಗಿ ತಮ್ಮ ವರದಿಗಾರರನ್ನ ಅಟ್ಟಿದರು. ಮುಂದಿನದೆಲ್ಲ ಕ್ಷಣಕ್ಷಣದ ನೇರ ಅಧ್ವಾನದ ನಿರಂತರ ಪ್ರಸಾರ! ಸಾಲದ್ದಕ್ಕೆ ಅದೆ ವಿಷಯವಾಗಿ ವಿಶೇಷ ನಿರೂಪಣೆಯ ಕಾರ್ಯಕ್ರಮದ ಪ್ರಸಾರದ ಜಾಹಿರಾತು ಪ್ರಸಾರಿಸುತ್ತಾ ನಾವೂ ಹಿಂದೆ ಬೀಳುವವರಲ್ಲ ಎಂದು ಇಲ್ಲದ ಮೀಸೆ ತಿರುವಿ ಬೀಗಿದರು. ಇವನ್ನೆಲ್ಲ ನೋಡಿ ಅವಮಾನದಿಂದ ಕುಗ್ಗಿ ಬಾಗಿದ್ದು ಮಾತ್ರ ಕನ್ನಡದ ಕಿರುತೆರೆ ವೀಕ್ಷಕರು.  ಅಂತೂ ಈ ಎಲ್ಲಾ ಅಪಸವ್ಯಗಳು ಅನುಚಾನಾಗಿ ದಿನವಿಡಿ ನಡೆದವು. ಅವರ ಈ ತೆವಲಿಗೆ ಕರುನಾಡ ವೀಕ್ಷಕರ ಅಭಿರುಚಿಯೆ ಕಾರಣ ಇವರ್ಯಾರೂ ಮಲಯಾಳಿ ಕಿರುತೆರೆ ವೀಕ್ಷಕರಷ್ಟು ಪ್ರಬುದ್ಧರಲ್ಲ ಎನ್ನುವ ಸ್ವಯಂ ಸಂಶೋಧನೆಯ ಫತ್ವಾ ಹೊರಡಿಸಿ "ಸುವರ್ಣಕ್ಕ"ನ ನಿರೂಪೆಕರ ಇದೇ ಹನುಮಕ್ಕನೆಂಬ ಆದಿಮಾನವ ಹಿಂದೊಮ್ಮೆ "ಕಪ್ರ"ದಲ್ಲಿ ಠೇಂಕರಿಸಿ ಕನ್ನಡಿಗರನ್ನು "ಹೆಪ್ರ"ರನ್ನಾಗಿಸಿದ್ದು ನಿಮಗೆ ನೆನಪಿರಬಹುದು.


 ಹೌದು, ರಾಜೇಶ್ ಸಾಂಸಾರಿಕ ಸಮಸ್ಯೆಗಳ ಸರಣಿಯನ್ನೆ ಹೊಂದಿದ್ದಾರೆ. ಹಿಂದೊಮ್ಮೆ ಕರ್ನಾಟಕದ ಸಿನೆಮಾ ಪತ್ರಿಕೋದ್ಯಮದ ಪ್ರಭಾವಿ ಪತ್ರಿಕೆಯೊಂದಕ್ಕೆ ನಟ-ಗಾಯಕ ಸುನಿಲ್ ರಾವ್'ರನ್ನ ಸಂದರ್ಶಿಸುವ ಹೊತ್ತಿನಲ್ಲಿ ಅವರಿಗೆ ಇದೆ ವಿಷಯವನ್ನ ಉದ್ದೇಶಿಸಿ ಪ್ರಶ್ನೆ ಕೇಳಿದ್ದೆ. ಅವರ ಅಕ್ಕ ಸೌಮ್ಯ ರಾಜೇಶರ ಮೊದಲ ಪತ್ನಿ. ಆ ಸಂದರ್ಶನದ ವೇಳೆಗೆ ಅವರ ವಿಚ್ಚೇದನವಾಗಿ ಕೆಲವೆ ವಾರಗಳಾಗಿತ್ತು. ಸುನಿಲ್ ಅಮ್ಮನನ ಅಪ್ಪ ಬಸರಿಕಟ್ಟೆಯ ಕೃಷ್ಣಯ್ಯ ನನ್ನಜ್ಜನ ಹೊಕ್ಕು ಬಳಕೆಯವರಾಗಿದ್ದರಿಂದ ಆ ಸಲುಗೆಯಲ್ಲಿಯೆ ಸಂದರ್ಶನದಲ್ಲಿ ಅಪ್ರಸ್ತುತವಾಗಿದ್ದರೂ ನಾನವರಿಗೆ ಆ ಪ್ರಶ್ನೆಯನ್ನ ಎಸೆದಿದ್ದೆ. "ಅದು ಆಕೆಯ ವಯಕ್ತಿಕ ಬದುಕು ಹಾಗೂ ಅದನ್ನ ಅವಳೆ ಮಾತನಾಡಬೇಕು ನಾನಲ್ಲ" ಎಂದು ಹೇಳಿ ಅವತ್ತು ಸುನಿಲ್ ಧೀಮಂತಿಕೆ ಮೆರೆದಿದ್ದರು. ಮನಸ್ಸು ಮಾಡಿದ್ದರೆ ಅವತ್ತೆ ಅವರು ಆ ಬಗ್ಗೆ ತಮ್ಮ ಮನಸಲ್ಲಿರುವುದನ್ನೆಲ್ಲ ಕಾರ ಬಹುದಾಗಿತ್ತು. ಆದರೆ ಅವರ ಸಂಯಮದ ನಡೆ ಪ್ರಶ್ನೆ ಕೇಳಿದ್ದ ನನ್ನನ್ನೆ ನಾಚಿಕೆಗೆ ದೂಡಿತು. ಇದಾಗಿ ವರ್ಷದೊಳಗೆ ರಾಜೇಶ್ ಡಾ, ಹರಿಪ್ರಿಯ ಎಂಬ ದಂತ ವೈದ್ಯೆಯನ್ನ ಮದುವೆಯಾಗಿದ್ದರು. ಆ ದಾಂಪತ್ಯದ ಆಯಸ್ಸು ಉಳಿದದ್ದು ಕೇವಲ ಆರು ತಿಂಗಳಷ್ಟೆ. ಆಗಲಾದರೂ ಆತ ಎಚ್ಚೆತ್ತುಕೊಳ್ಳಬಹುದಾಗಿತ್ತೇನೋ. ಮತ್ತೆ ರಮ್ಯಾ ವಸಿಷ್ಠರನ್ನ ವರಿಸಿ ಈಗ ಮತ್ತೆ ಮದುವೆ ಮುರಿದು ಬೀಳುವ ಹಂತಕ್ಕೆ ಬಂದು ಮುಟ್ಟಿದೆ. ಅದೇನೆ ಇದ್ದರು ಇದು ಅವರಿಬ್ಬರ ವಯಕ್ತಿಕ ಸಂಗತಿ ಹಾಗೂ ಕೇವಲ ರಾಜೇಶ್ ಸಿನೆಮಾ ನಟ-ಗಾಯಕ ಅನ್ನುವ ಕಾರಣಕ್ಕೆ ಈ ಸಂಗತಿ ಒಂದಿಡೀ ದಿನ ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗುವ ಜರೂರತ್ತೇನೂ ಇರಲಿಲ್ಲ. ಆದ್ರೂ ಈ ಕಳ್ಳ ಭಡವರು ತಮ್ಮ ತುತ್ತಿನ ಚೀಲ ತುಂಬಿಕೊಳ್ಳಲು ರಾಜೇಶ್-ರಮ್ಯಾ ವಯಕ್ತಿಕ ಬಾಳಿನ ಜೊತೆ ಚಲ್ಲಾಟವಾಡಿದರು. ಇತ್ತೀಚೆಗೆ ಇವರಲ್ಲೊಬ್ಬನಾಗಿದ್ದ ಶಿವ ಅಮೇಧ್ಯದ ಪ್ರಸಾದ ತಿಂದದ್ದನ್ನ ಊರೆಲ್ಲಾ ಅದು  ನಾರುತ್ತಿದ್ದರೂ ಮುಚ್ಚಿಟ್ಟ ಇವರೆಲ್ಲರೂ ಇಲ್ಲಿ ಮಾತ್ರ ತಮ್ಮೆಲ್ಲ ವಿಕೃತಿಯನ್ನ ಧಾರಾಳ ಮೆರೆದರು.




ಮಲಯಾಳಿ ವಾರ್ತಾವಾಹಿನಿಯ ವೀಕ್ಷಕರಲ್ಲಿ ಅಜಿತನೆಂಬ ಹನುಮ ಕಾಣುವ ಪ್ರಬುದ್ಧತೆ ಆ ಗಡವನಿಗೆ ಅಲ್ಲಿನ ವಾಹಿನಿಗಳಲ್ಲಿಯೂ ಇರೋದು ಯಾಕೆ ಕಾಣಿಸಲ್ಲ? ಅಲ್ಲಿರುವ ಡಝನ್ ವಾರ್ತಾವಾಹಿನಿಗಳಲ್ಲಿ ಅವರ್ಯಾರೂ ಇಂತಹ ಮನೆಯೊಡಕ ಕಾರ್ಯಕ್ರಮಕ್ಕೆ ಪುರೋಹಿತಿಕೆ ವಹಿಸುವುದಿಲ್ಲ. ಇವರಂದುಕೊಂಡಂತೆ ವಿವಾಹ ರದ್ದತಿ ಅರ್ಜಿಯ ಕುರಿತ ಮಾಹಿತಿಯನ್ನಷ್ಟೆ ವೀಕ್ಷಕರಿಗೆ ದಾಟಿಸಿ ಅವರನ್ನ ಪ್ರಬುದ್ಧರಾಗಿಸಲು ಅವರಿಗೆ ಇಂತಹ ಅಗ್ಗದ ಗಿಮಿಕ್ಕಿನ ಅವಶ್ಯಕತೆಯೆ ಇಲ್ಲ. ಯಾವಾಗಲಾದರೂ ಅದನ್ನವರು ಮಾಡಿ ಪ್ರಸಾರಿಸಿಯಾರು. ಮುಗಿಸುವ ಮುನ್ನ ನನ್ನ ಪತ್ರಕರ್ತ ಸಹುದ್ಯೋಗಿಯೊಬ್ಬ ಹೇಳಿದ್ದ ಘಟನೆಯೊಂದು ನನಗೆ ನೆನಪಾಗುತ್ತಿದೆ. ಇತ್ತೀಚೆಗೆ ಹೀಗೆ "ಕನ್ನಡದ ಕರಿಯ"ನೊಬ್ಬನ ಮನೆ ಮುರಿದಾಗಲೂ ಹಿರಿಯ ಸಿನೆಮಾ ಪತ್ರಕರ್ತ ಸದಾಶಿವ ಶಣೈರವರಿಗೆ ಇಂತಹ ಮನೆಮುರುಕುತನದಲ್ಲಿ ನಿಷ್ಣಾತರಾಗಿರುವ ಕುಖ್ಯಾತ ವಾರ್ತಾವಾಹಿನಿಯಿಂದ ಪ್ಯಾನಲ್ ಚರ್ಚೆಯಲ್ಲಿ ಭಾಗವಹಿಸುವ ಆಹ್ವಾನ ಹೊತ್ತ ಫೋನ್ ಕರೆ ಬಂದಿತ್ತಂತೆ. ಅವರು "ಈ ಬಗ್ಗೆ ಚರ್ಚಿಸಲಿಕ್ಕೇನಿದೆ? ನಾನಲ್ಲಿ ಬಂದು ಏನನ್ನ ಚರ್ಚಿಸಲಿ?" ಅಂತ ಕೇಳಿದರಂತೆ, ಅದಕ್ಕೆ ಅತ್ತ ಕಡೆಯಿಂದ "ಅದೆ ಸರ್, ಹೇಗೆ ಅವರ ಮನೆಯೊಡೆಯಿತು? ಅದಕ್ಯಾರು ಕಾರಣ?" ಅಂತ ಆ ಕಡೆಯಿಂದ ವಿಷಯವನ್ನ ಅರುಹಿದರಂತೆ. ಅದಕ್ಕೆ ಶಣೈ ಮಾಮ್ " ಕಾರಣ! ಇನ್ಯಾರು? ನೀವೆ?!" ಅಂತಂದದ್ದೆ ತಡ ಆ ಕಡೆಯಿಂದ ಕರೆ ಕಡಿತವಾಯಿತಂತೆ!. ಅಲ್ಲಿಗೆ ಶಣೈರವರೇನೋ ಆ ಅಸಹ್ಯದ ಚರ್ಚೆಗೆ ಹೋಗದೆ ಪಾರಾದರು ಅದರೆ ಮೇಲೆ ಹೇಳಲಾಗಿರುವ ಅಷ್ಟೂ ಮಂದಿ ನಿಲಯದ ಕಲಾವಿದರು ನಿರೂಪೆಕರನೆಂಬ ಆಸ್ಥಾನ ವಿದೂಷಕನ ಮುಂದೆ ಚರ್ಚೆಗಾಗಿ ಹಾಜರಿದ್ದರು ಎನ್ನುವುದನ್ನ ಪ್ರಬುದ್ಧರಾದ ನಿಮಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ!

1 comment:

rajudavangere said...

ವಾಸ್ತವವನ್ನು ಬಿಚ್ಚಿಟ್ಟಿದ್ದೀರಿ. ಮಾನ, ಮ಻ರ್ಯಾದೆ, ನಾಚಿಕೆ ಬಿಟ್ಟು ಹೊಟ್ಟೆ ತುಂಬಿಸಿಕೊಳ್ಳಲು ನಾಟಕ ಮಾಢುತ್ತಾ ಜೀವಿಸುತ್ತಿದ್ದಾರೆ