06 November 2014

ಕಂಡವರ ಮನೆಯ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಂಡು ಚಳಿ ಕಾಯಿಸುವ ಕ'ಮಲ' ಪಕ್ಷದ ಭಂಡ ಪೀಡೆಗಳು.......








ಇದೊಂದು ಸರಳ ಪ್ರಕರಣ. ಸೊಕ್ಕು ಹೆಚ್ಚಾಗಿ ಬಾಲಕಿಯನ್ನ ಕಾಮದಾಟಕ್ಕೆ ಬಳಸಿಕೊಂಡ ಆರೋಪ ಹೊತ್ತವರನ್ನ ತಕ್ಷಣ ಒದ್ದು ಒಳಗೆ ಹಾಕಿದ್ದರೆ ಪ್ರಕರಣ ಇಷ್ಟು ವಿಕೋಪದ ಪರಿಸ್ಥಿತಿಗೆ ಹೋಗುತ್ತಿರಲಿಲ್ಲ. ಅದು ಬಿಟ್ಟು ಸುಳ್ಳು ಸುಳ್ಳೇ type ಮಾಡಿದ death note ಸೃಷ್ಟಿಸಿ ನಾಟಕ ಶುರುಮಾಡಿದ ನಂತರ ಬಿಜೆಪಿ ಪುಂಡು ಪೋಕರಿಗಳಿಗೆ ವಿಧ್ವಂಸಕ ಕಾರ್ಯಗಳನ್ನ ಎಸಗಲಿಕ್ಕೆ ಮುಕ್ತ ಪರವಾನಗಿ ದೊರೆತಂತಾಗಿ ವಿಕೋಪದ ಹಂತ ದಾಟಿ ಪ್ರಕೋಪಕ್ಕೆ ಹೋಗಿದೆ.

ಹಾಗಂತ ಇದು ಬಿಜೆಪಿ ಪುಂಡರ ಪ್ರಲಾಪದಂತೆ ಅತ್ಯಾಚಾರದ ಪ್ರಕರಣ ಅಲ್ಲವೇ ಅಲ್ಲ. ಮೊದಲನೆಯದಾಗಿ ಇದು ಒಂದು ಎಳೆಯರ ಪ್ರೇಮ ಪ್ರಕರಣ,

ಎರಡನೆಯದಾಗಿ ಮೊನ್ನೆ ಅದೊಮ್ಮೆ ಆಗಿದ್ದರೂ ಅದು ಸಮ್ಮತಿಯ sex ಹೊರತು ಬಲವಂತದ ಅತ್ಯಾಚಾರ ಅಲ್ಲ.

ಮೂರನೆಯದಾಗಿ ಇದರಲ್ಲಿ ಶಾಮೀಲಾದ ಆರೋಪ ಹೊತ್ತ ಎಲ್ಲರೂ ಮುಸಲ್ಮಾನರಲ್ಲ ಒಬ್ಬ ಸಾಬ, ಒಬ್ಬ ಬ್ಯಾರಿ ( ನಂದಿತಾಳ ಪ್ರೇಮಿ.) ಹಾಗೂ ಒಬ್ಬ ಹಿಂದೂ ಹುಡುಗ.

ಕೊನೆಯದಾಗಿ ಪರಿಸ್ಥಿತಿ ಶಾಂತವಾಗುವ ತನಕ ಈ ಮೂವರನ್ನ ವಶಕ್ಕೆ ಪಡೆದು ಅನಂತರ ಬೇಕಿದ್ದರೆ ಜಾಮೀನು ಮಂಜೂರು ಮಾಡಿದ್ದರೆ ಸಾಕಿತ್ತು.

ಇದು ಬಿಟ್ಟು "ದಿನಕ್ಕೊಂದು ಕಥೆ" ಹೊಡೆಯುತ್ತಿರುವ ಪೊಲೀಸ್ ಹಾಗೂ ಬಿಜೆಪಿ ಪುಂಡರು ಊರಿನ ಸ್ವಾಸ್ಥ್ಯವನ್ನ ಬೇಕಂತಲೇ ಹಾಳುಗೆಡವುತ್ತಿದ್ದಾರೆ. ಇಲ್ಲೀಗ ಹುಡುಗಿಯೊಬ್ಬಳಿಗೆ ಅತ್ಯಾಚಾರ ಘಟಿಸಿ ಆಕೆ ವಿಷ ಕುಡಿದು ಸತ್ತಳು ಅನ್ನೋದಕ್ಕಿಂತ ಅವಳು "ಹಿಂದೂ" ಹುಡುಗಿ, ಅವರು "ಮುಸ್ಲಿಂ" ಹುಡುಗರು ( ವಾಸ್ತವದಲ್ಲಿ ಇಬ್ಬರು ಮಾತ್ರ.) ಅನ್ನೋದಷ್ಟೇ ಮುಖ್ಯವಾಗುತ್ತಿದೆ.

ಇದನ್ನೇ ನೆಪ ಮಾಡಿಕೊಂಡು ಈಗ ತೀರ್ಥಹಳ್ಳಿಯ ವ್ಯಾಪಾರ ವಲಯದಲ್ಲಿ ಪ್ರಬಲರಾಗುತ್ತಿರುವ "ನ್ಯಾಷನಲ್ ಸಮೂಹ"ದ ಬ್ಯಾರಿಗಳನ್ನ ಹಣಿಯಲು ಬಿಜೆಪಿಯವರು ಹೊರಟಿದ್ದಾರೆ. ಏಕೆಂದರೆ ಅವರ ಮೆರೆದಾಟದಿಂದ ಹೆಚ್ಚು ಹಾನಿಯಾಗಿರೋದು ಕೊಂಕಣಿಗಳ, ಬಂಟರ ಹಾಗೂ ಬ್ರಾಹ್ಮಣರ ವ್ಯಾಪಾರಿ ಹಿತಾಸಕ್ತಿಗೆ. ಇವರೆಲ್ಲರೂ ಸಾಂಪ್ರದಾಯಿಕ ಬಿಜೆಪಿ ಬೆಂಬಲಿಗರು ಅನ್ನೋದಿಲ್ಲಿ ಗಮನಾರ್ಹ.

ಮೊದಲು ಪೊಲೀಸರು ಕಥೆ ಹೊಡೆಯುವುದನ್ನ ಬಿಟ್ಟು ಸೂಕ್ತ ಕ್ರಮ ಕೈಗೊಂಡು ಆರೋಪಿಗಳನ್ನ ಅದರಲ್ಲೂ ಅವಳ ಭಂಡ ಅಪ್ಪನನ್ನು ವಶಕ್ಕೆ ಪಡೆಯಲಿ. ವಾಸ್ತವದಲ್ಲಿ ಅವರಿಬ್ಬರೂ ಆನಂದಗಿರಿಗುಡ್ದದ ಸಮೀಪ ತುಂಗಾ ಮಹಾವಿದ್ಯಾಲಯದ ಕ್ಯಾಂಟೀನಿನ ಹತ್ತಿರದ ದಿಬ್ಬದಲ್ಲಿ ಮಾತಾಡುತ್ತಾ ಕುಳಿತಿದ್ದಾಗ 'ನೈತಿಕ ಪೊಲೀಸ್' ಗೂಂಡಾಗಳ ಕೈಗೆ ಸಿಕ್ಕಿ ಬಿದ್ದಿದ್ದರು. ಅಲ್ಲಿ ಅವರಿಬ್ಬರ ಧರ್ಮವನ್ನೆ ನೆಪ ಮಾಡಿಕೊಂಡ ಅವರು ಹುಡುಗನ ಮೇಲೆ ಹಲ್ಲೆ ನಡೆಸಿದ್ದಾರೆ. ಅನಂತರ ಅವಳ ಅಪ್ಪನನ್ನ ಅವಳಿಂದಲೆ ನಂಬರ್ ಪಡೆದು ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಅವಳು ಯಾವ ಕಟ್ಟಿಗೆ ಹೆರಕುತ್ತಿದ್ದ ಅಜ್ಜಿಗೂ ಸಿಕ್ಕಿಲ್ಲ ಅವಳ ಮೈ ಕೆಸರೂ ಆಗಿರಲಿಲ್ಲ. ಅದೆಲ್ಲ ಬಿಜೆಪಿಯ ಅದ್ಭುತ ಕಥಾಕೋರರು ಸೃಷ್ಟಿಸಿ ತೇಲಿ ಬಿಟ್ಟ ಅಡುಗೂಲಜ್ಜಿ ಕಥೆ. ಚಂದಾಮಾಮದಲ್ಲಿ ಅದಕ್ಕಿಂತ ಚಂದದ ಕಥೆಗಳು ಬರುತ್ತಿದ್ದವು ಅಂತ ನೆನಪು. ಇಷ್ಟಾಗಿ ಆಮೇಲೆ ಅಕ್ಕ ಪಕ್ಕದ ಜಿಲ್ಲೆಗಳಿಂದ ಬಂದು ಇಲ್ಲಿ ಗಲಭೆ ಎಬ್ಬಿಸುತ್ತಿರುವ ಬಿಜೆಪಿ ಪುಂಡರ ಮುಕುಳಿ ಮೇಲೆ ಒದ್ದು ಒಳಗೆ ಹಾಕಿ ಒಬ್ಬೊಬ್ಬರ ಮೇಲೂ ಗೂಂಡಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಿ. ಆಗ ಎಲ್ಲಾ ಸರಿಯಾಗಿ ತೀರ್ಥಹಳ್ಳಿ ಮೊದಲಿನಂತಾಗುತ್ತದೆ.

ನಂದಿತ ಅಪ್ಪನ ನಡುವಳಿಕೆ ಸಂಶಯಾಸ್ಪದ. ಆತ ಸ್ಪಷ್ಟವಾಗಿ ಸುಳ್ಳು ಹೇಳುತ್ತಿದ್ದಾನೆ. ಇನ್ನು ಯಾರೋ ಮತಿವಿಕಲನ ಬಡಬಡಿಕೆಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಮತಿಗೆಟ್ಟಂತೆ share ಮಾಡುತ್ತಿದ್ದಾರೆ. ನನಗೆ ತಿಳಿದ ಮಟ್ಟಿಗೆ ಅದು ಶುದ್ಧ ಸುಳ್ಳು. ಇಬ್ರಾಹಿಂ ಶರೀಫ್ ದುಡ್ಡು ಮಾಡಿದ್ದು ರಸ್ತೆ ಕಾಮಗಾರಿ ಗುತ್ತಿಗೆಯಲ್ಲಿಯೇ ಹೊರತು ಆ ಬೇವಕೂಫ ಬಡಬಡಿಸಿದಂತೆ ಕಳ್ಳಸಾಗಣಿಕೆಯಿಂದಲ್ಲ. ಹಾಗಂದವನ ಆಲೋಚನೆಗಳು ಅದೆಲ್ಲಿಂದ ಕಳ್ಳಸಾಗಣೆಯಾದವು ಅನ್ನೋದು ಮೊದಲು ತನಿಖೆಯಾಗಬೇಕು. ಈ ವಿಚಾರಗಳು ಅಲ್ಲದೇ ಇನ್ನೂ ಒಂದು ಖಚಿತ ಮಾಹಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕಿದೆ.

ಮೊನ್ನೆ ನಂದಿತಾ ಮನೆಗೆ ಕರೆತಂದ ಅಪ್ಪ ಹೊಡೆದ ನಂತರ ಅವಮಾನಿತಳಾಗಿ ನಡು ರಾತ್ರೆ ಎದ್ದು ಫಿನಾಯಲ್ ಕುಡಿದು ಮೆಗ್ಗಾನ್ ಆಸ್ಪತ್ರೆಗೆ ಸೇರಿದ್ದಾಗ ನ್ಯಾಷನಲ್ ಶರೀಫರ ಮದ್ಯಸ್ಥಿಕೆಯಲ್ಲಿ ಚಿಕಿತ್ಸಾ ವೆಚ್ಚದ ಹೆಸರಿನಲ್ಲಿ ಐದು ಲಕ್ಷ ರೂಪಾಯಿಗೆ ಅವಳ ಅಪ್ಪ ಹಣ ಪಡೆದು ಸುಮ್ಮನಾಗಲು ಒಪ್ಪಿದ್ದ. ತಮ್ಮಿಂದ ಯಾವ ತಪ್ಪಾಗಿರದಿದ್ದರೂ ಆರ್ಥಿಕವಾಗಿ ಈಗಾಗಲೆ ತಮ್ಮ ಬಂಡವಾಳವನ್ನ ವಿವಿಧ ಉದ್ದಿಮೆಗಳಲ್ಲಿ ಸ್ಥಳಿಯವಾಗಿ ತೊಡಗಿಸಿರುವ ಶರೀಫ್ ತನ್ನ ವ್ಯಾಪಾರಿ ಹಿತಾಸಕ್ತಿಗೆ ಸುಖಾಸುಮ್ಮನೆ ಒದಗಬಹುದಾದ ಧಕ್ಕೆಯಿಂದ ತಪ್ಪಿಸಿಕೊಳ್ಳಲು ಬ್ಯಾರಿ ಸಮುದಾಯದ ಜಮಾತ್ ಮುಖಂಡರಾಗಿ ಅನಿವಾರ್ಯವಾಗಿ ಇದಕ್ಕೆ ಒಪ್ಪಿಕೊಂಡಿದ್ದರು.

ಆದರೆ ನಂದಿತಾಳ ಸಾವು ಈ ಎಲ್ಲಾ ಲೆಖ್ಕಾಚಾರಗಳನ್ನೂ ತಲೆ ಕೆಳಗಾಗಿಸಿತು. ಪರಿಸ್ಥಿತಿಯ ಲಾಭ ಪಡೆದ ಬಿಜೆಪಿಯ ಸಮಯಸಾಧಕ ರಾಜಕಾರಣಿ ಜ್ಞಾನೇಂದ್ರರು ಹೆಣೆದ ಕುತಂತ್ರದ ಫಲ ಪರ ಜಿಲ್ಲೆಗಳಿಂದ ತೀರ್ಥಹಳ್ಳಿಗೆ ಸಂಬಂಧವೇ ಇಲ್ಲದ ಬಿಜೆಪಿ ಪುಂಡರು, ಗೂಂಡಾಗಳು ಜಿಲ್ಲೆಗೆ ಧಾವಿಸಿ ಬಂದರು. ಸಾಮೂಹಿಕ ಅತ್ಯಾಚಾರ ಹಾಗೂ ಅದರಿಂದ ನೊಂದು ಆತ್ಮಹತ್ಯೆ ಎನ್ನುವ ಕಥೆ ಕಟ್ಟಲಾಯಿತು. ಮೊದಲು ಒಪ್ಪಿದ್ದ ಹಣ ಕೈ ಸೇರದೆ ಹತಾಶನಾಗಿದ್ದ ನಂದಿತಾಳ ಅಪ್ಪ ಕೂಡಾ ನಿರ್ಲಜ್ಜನಾಗಿ ಇದಕ್ಕೆ ಸಾಥ್ ಕೊಟ್ಟ.

ಸುತ್ತಲ ಯಾವ ಊರು ಹೊತ್ತಿ ಉರಿದರೂ ಇಲ್ಲಿಯವರೆಗೆ ಕೋಮು ದ್ವೇಷದ ಕಿಡಿ ತೀರ್ಥಹಳ್ಳಿಯನ್ನ ಮುಟ್ಟಿರಲಿಲ್ಲ. ಈಗ ಈ ಊರಲ್ಲೂ ಗಲಾಟೆ ಮಾಡಿಸಿ ಬಿಜೆಪಿ ಗೂಂಡಾಗಳಿಗೆ ತೃಪ್ತಿಯಾಗಿರಬಹುದು. ಸದ್ಯ ಕಾರ್ಕಳ ಒಂದು ಈತನಕ ಕೋಮು ಗಲಭೆಗೆ ಈ ವಲಯದಲ್ಲಿ ಬಲಿಯಾಗಿಲ್ಲ. ಈ ಹರಾಮಿಗಳು ಅಲ್ಲಿನ ಜನರ ನೆಮ್ಮದಿಗೆ ಯಾವಾಗ ಕಿಚ್ಚಿಡುತ್ತಾರೋ ಗೊತ್ತಿಲ್ಲ. ಇವರ ರಾಜಕೀಯದ ತೆವಲಿಗಷ್ಟು ಬೆಂಕಿ ಹಾಕ.

ಪರಿಸ್ಥಿತಿಯನ್ನ ವಿವೇಚಿಸಿ, ಬೇಕಾಬಿಟ್ಟಿ ವದಂತಿ ಹರಡಬೇಡಿ grow up yourself. ಅದೆಲ್ಲಾ ಬಿಜೆಪಿ ತಂತ್ರ. ರೇಪ್ case ಹಾಕೋದೆ ಆದರೆ ಮೊದಲು ಅವರ ಅಧಿನಾಯಕ 'ಬೂಸಿಯ'ನ ಮೇಲೆ ಹಾಕಬೇಕು. ಅಲ್ಲಿ ಸಂತ್ರಸ್ತರು ಶೋಭಕ್ಕ ಹಾಗೂ ನೊಂದವರು ಭಾರತಿಯಕ್ಕ?! ಹೇಳಿಕೇಳಿ ಅದು ನೀಲಿಚಿತ್ರ ರಸಿಕರ, ಹಾಗೆ ಸದನದಲ್ಲಿ ಹಾಡುಹಗಲೆ ನೋಡಿ ಕಲಿತಿದ್ದನ್ನ ನಟ್ಟ ನಡುರಾತ್ರಿ ಕಂಡವರ ಮನೆಯಲ್ಲಿ ಮಾಡಿ ನಲಿವ ಜೀವರಾಜ್, ಹಾಲಪ್ಪ ಹಾಗೂ ಕಾರ್ತಿಕರಂತಹ ಅನರ್ಘ್ಯ ರತ್ನಗಳಿರುವ ಕುಲಗೆಟ್ಟ ಪಕ್ಷ.

ಇನ್ನು ಸ್ಥಳಿಯ ಶಾಸಕರಾದ ಕಿಮ್ಮನೆ ರತ್ನಾಕರ ಇವತ್ತು ದೇವರಿಗೆ ಹುಯಿಲು ಕೊಟ್ಟಿರೋದು ಸ್ಥಳಿಯ ಆಚರಣೆಗೆ ಅನುಸಾರವಾಗಿಯೆ ಇದೆ. ಕಾನೂನಿಗೆ ಹೆದರದ ಭಂಡರು ಇವತ್ತಿಗೂ ಅಲ್ಲಿ ಮಾರಿ, ಜಕಣಿ, ಭೂತ ಹಾಗೂ ಊರ ದೇವರು ರಾಮೇಶ್ವರನ ಕಾರಣಕ್ಕೆ ಹೆದರಿ ಸಾಯುತ್ತಾರೆ. ಅದಕ್ಕೆ ತಕ್ಕಂತೆ ಕಿಮ್ಮನೆ ವರ್ತಿಸಿದ್ದಾರೆಯೆ ಹೊರತು ಇದರಲ್ಲಿ ವಿಶೇಷವೇನೂ ಇಲ್ಲ. ಪ್ರಕರಣ ಘಟಿಸಿದ ಆರಂಭದಲ್ಲಿಯೇ ಅದಕ್ಕೆ ಷರಾ ಬರೆದು ಹಾಸ್ಯಾಸ್ಪದವಾಗಿ ಅಂತಿಮ ತೀರ್ಪು ಕೊಟ್ಟಂತೆಯೆ ವರದಿ ಮಾಡಿದ ೨೪*೭ ಪೀಡೆಗಳ ಬಗ್ಗೆ ಆದಷ್ಟು ಕಡಿಮೆ ಮಾತನಾಡುವುದು ಸಮಾಜದ ಸ್ವಾಸ್ಥ್ಯಕ್ಕೇನೆ ಬಹಳ ಒಳ್ಳೆಯದು.

ಇದು ಕೊಲೆ ಅಲ್ಲವೇ ಅಲ್ಲ ಆತ್ಮಹತ್ಯೆ. ಇನ್ನು ಸಾಮೂಹಿಕ ಅತ್ತಲಾಗಿರಲಿ ಒಬ್ಬನಿಂದಲೂ ನಂದಿತಾಳ ಕನ್ಯತ್ವ ಹರಣವಾಗಿಲ್ಲ ( ಮಣಿಪಾಲ ಆಸ್ಪತ್ರೆಯ ವೈದ್ಯರು ಕೊಟ್ಟಿರುವ ಚಿಕಿತ್ಸಾ ಹಾಗೂ ಪರಿಕ್ಷಾ ವರದಿಯನ್ನ ಗಮನಿಸಿ.). ಹಾಗೊಮ್ಮೆ ಪ್ರಕರಣದಲ್ಲಿ ಯಾರನ್ನಾದರೂ BOOK ಮಾಡಬೇಕಿದ್ದರೂ ಮೊತ್ತಮೊದಲಿಗೆ ಅವಳಪ್ಪನನ್ನೇ BOOK ಮಾಡಬೇಕು. ಏಕೆಂದರೆ ಅವಳು ಅಸ್ವಸ್ಥ್ಯಳಾದದ್ದು ಮನೆಯಲ್ಲಿ. ಹಾಗೂ ವೈದ್ಯರಿಗೆ ಈ ಬಗ್ಗೆ ರಾತ್ರೆ ಉಂಡ ಆಹಾರದಲ್ಲಿ ವಿಷವಾಗಿದೆ ( ಅದೆ ಆಹಾರ ಉಂಡ ಆ ಭಂಡನಿಗೇಕೆ ವಿಷ ಪ್ರಕೋಪ ಕಾಡಲಿಲ್ಲವೋ ನಾಕಾಣೆ!.) ಅಂತಲೆ ಸುಳ್ಳು ಸುಳ್ಳೇ ಹೇಳಿ ಚಿಕಿತ್ಸೆಯ ಹಾದಿ ತಪ್ಪಿಸಿದ ಪುಂಡನವ. ಮೊದಲೆ ಫಿನಾಯಲ್ ಸೇವನೆ ಬಗ್ಗೆ ಗೊತ್ತಿದ್ದರೆ ಎನಿಮಾ ಕೊಟ್ಟು ಮುಂದಿನ ಸೂಕ್ತ ಚಿಕಿತ್ಸೆಯನ್ನಾದರೂ ಕೊಡಲು ಅವರು ಹೋದ ಮೂರೂ ಆಸ್ಪತ್ರೆಗಳ ವೈದ್ಯರಿಗೆ ಖಂಡಿತಾ ಸಾಧ್ಯವಾಗುತ್ತಿತ್ತು. ಆಗ ಸಾವಿನ ಸಾಧ್ಯತೆ ಗಣನೀಯವಾಗಿ ತಪ್ಪುತ್ತಿತ್ತು.

 ಬಾಲಕಿ ಸಾವಿನ ಮೊದಲು ಯಾರಲ್ಲೂ ಯಾವ ಹೇಳಿಕೆಯನ್ನೇ ಕೊಟ್ಟಿಲ್ಲ. ಸರಣಿ ಹೃದಯಾಘಾತದಿಂತ ಆಕೆ ಸತ್ತ ನಂತರ ಅನಿವಾರ್ಯವಾಗಿ ಅವಳಪ್ಪ ಪೊಲೀಸ್ ದೂರು ದಾಖಲಿಸಿದ ನಂತರವಷ್ಟೆ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದೆ. ಅವಳಪ್ಪ ಹೇಳುತ್ತಿರುವ ಅವಳ ಮರಣ ಪೂರ್ವ ಹೇಳಿಕೆಯ ಕಥೆಗಳು ಯಾವ ಕಾಗಕ್ಕ ಗೂಬಕ್ಕರ ಕಥೆಗಳಿಗೂ ಕಡಿಮೆ ಇಲ್ಲ. ತನ್ನ ಸ್ವಂತ ಮಗಳ ಸಾವನ್ನೆ ಪ್ರಹಸನವಾಗಿಸಿ ಸಾವಿನ ನಂತರ ಅವಳ ಮಾನಭಂಗದ ಕಥೆ ಕಟ್ಟಿದ ಹರಾಮಿ ಅಪ್ಪನೆನ್ನುವ ಪ್ರಾಣಿಗೆ ನಾಚಿಕೆಯಾಗಬೇಕು. ಸಾಮಾನ್ಯ ಜ್ಞಾನ ಇರುವವರಿಗೆ ಈ ಸರಳ ಸತ್ಯ ಅರ್ಥವಾಗುತ್ತದೆ. ಇನ್ನೂ ಕಥೆ ಹೊಡೆಯುವ ರೋಗಿಷ್ಟರಿಗೆ ತೀರ್ಥಹಳ್ಳಿ ಇರಲಿ ಬಹುಷಃ ಜಗತ್ತಿನ ಇನ್ಯಾವ ಊರಿನಲ್ಲೂ ಮದ್ದು ಸಿಗಲಾರದು.

02 November 2014

ನೀರ ಮೇಲೆ ಅವಳ ಹೆಜ್ಜೆ....





( ಭಾಗ - ೪.)


ಅವನಿಗೇನೆ ಅರಿವಿಲ್ಲದಂತೆ ಅವ ಯಾಂತ್ರಿಕವಾಗಿ ರೈಲೇರಿದ, ಏರಿದ ಅನ್ನುವುದಕ್ಕಿಂತ ಹೊರಗೆ ತುಂಬಿದ್ದ ಗಲಾಟೆಯ ಜನಜಂಗುಳಿ ದೂಡುತ್ತಲೇ ಅವನನ್ನು ಒಳಗೆ ತರುಬಿತು. ಯಾವುದೋ ಹೊರಗಿನ ಒತ್ತಡಕ್ಕೆ ಒಳಗಾಗಿ ಅದರ ಇಚ್ಛಾನುಸಾರ ವರ್ತಿಸುವ ತೊಗಲುಬೊಂಬೆಯಂತಾಗಿದ್ದ ಆ ಹೊತ್ತಿನಲ್ಲವನು. ಇಡಿ ಬೋಗಿ ಕಿಕ್ಕಿರಿದು ತುಂಬಿತ್ತು. ರೈಲು ಬೆಂಗಳೂರಿನ ದಿಕ್ಕಿನಿಂದ ಧಾವಿಸುವಾಗಲೆ ಹೆಣಕ್ಕೆ ಕಾದು ನಿಂತ ಹದ್ದುಗಳಂತೆ ಒಂದಷ್ಟು ಮಂದಿ ಸನ್ಮಾನ್ಯ ಪ್ರಯಾಣಿಕರು ಅದರ ಮೇಲೆರಗಲು ಹೊಂಚು ಹಾಕುತ್ತಾ ತಂಗುಗಟ್ಟೆಯ ಮೇಲೆ ಕಾದಿದ್ದರು. ಕೆಲವು ಭಂಡ ಸಾಹಸಿಗಳು ಹಳಿ ದಾಟಿ ಅತ್ತಲಿಂದಲೂ ಬಂದು ನಿಲ್ಲುವ ರೈಲಿನ ಮೇಲೆ ಮುಗಿ ಬೀಳಲು ಟೊಂಕ ಕಟ್ಟಿ ನಿಂತಿದ್ದರು. ಒಟ್ಟಿನಲ್ಲಿ ಬಂದು ಮುಟ್ಟಿದ ಪ್ರಯಾಣಿಕರೊಬ್ಬರೂ ಹೊರಗಿಳಿಯುವ ಮುಂದೆಯೆ ಅವರನ್ನೆಲ್ಲ ದೂಡಿಕೊಂಡು ಒಳ ನುಗ್ಗುವವರ ಸಂಖ್ಯೆ ಅಲ್ಲಿನ ಸ್ಥಳ ಸಾಮರ್ಥ್ಯಕ್ಕಿಂತಲೂ ದುಪ್ಪಟ್ಟಾಗಿದ್ದು ಕೂತು ಕೊಳ್ಳುವುದಕ್ಕಿರಲಿ ನಿಲ್ಲಲಿಕ್ಕೂ ಸಹ ಚೂರು ಎಡೆ ಸಿಕ್ಕರೆ ಅದೆ ಅವರ ಅಜ್ಜಿ ಮಾಡಿದ ಪುಣ್ಯ ಅನ್ನುವ ತುರ್ತು ಪರಿಸ್ಥಿತಿ ಅಲ್ಲಿತ್ತು.


ಅದು ಹೇಗೋ ಪ್ರಯಾಸ ಪಟ್ಟು ಒಳ ನುಗ್ಗಿದವನಿಗೆ ಬಾಗಿಲ ಬಳಿ ಕೊಂಚ ನಿಲ್ಲಲು ಎಡೆ ಮಾತ್ರ ಸಿಕ್ಕಿತು. ಅಲ್ಲಿ ನಿಂತೆ ಆತ ಕಾಣದ ನಾಳೆಗೆ ಭಯ ಪಟ್ಟು ಮುಂದಿನ ಬಾಳಿನ ಅನಿಶ್ಚಿತತೆಯ ಬಗ್ಗೆ ಚಿಂತಿಸ ತೊಡಗಿದ. ಬೆಂಗಳೂರಿನಲ್ಲಿ ಹೋಗಿ ಎಲ್ಲಿರಬೇಕು ಅನ್ನುವ ಪ್ರಶ್ನೆಗೆ ಅವನೆ ಒಂದು ತಕ್ಷಣದ ಉತ್ತರ ಕಂಡುಕೊಂಡಿದ್ದ, ಅವನೊಂದಿಗೆ ಹೈಸ್ಕೂಲಿನಲ್ಲಿ ಓದುತ್ತಿದ್ದ ಒಬ್ಬ ಓದಿನಲ್ಲಿ ಆಸಕ್ತಿ ತೋರದೆ ಬೆಂಗಳೂರಿಗೆ ಹೋಗಿ ಅಲ್ಲಿ ತನ್ನ ಅಣ್ಣನ ಜೊತೆ ಏನೋ ಕೆಲಸ ಮಾಡಿಕೊಂಡು ಇದ್ದಾನೆ ಎನ್ನುವ ಸುಳಿವವನಿಗಿತ್ತು. ಹರಸಾಹಸ ಮಾಡಿ ತನ್ನ ಬುದ್ಧಿ ಮತ್ತೆಯನ್ನೆಲ್ಲಾ ಉಪಯೋಗಿಸಿ ಅವನ ಅಮ್ಮನಿಂದ ಅವನ ವಿಳಾಸವನ್ನಿವ ಸಂಪಾದಿಸಿದ್ದ. ಆಕೆಗೆ ವಿಳಾಸ ಕೊಡಲು ಮನಸ್ಸಿರಲಿಲ್ಲ ಹೇಗಾದರೂ ಮಾಡಿ ಅದನ್ನ ಗಿಟ್ಟಿಸದೆ ಇವನಿಗೆ ಅನ್ಯಮಾರ್ಗವೆ ಇರಲಿಲ್ಲ! ಸಾವಿರ ಸುಳ್ಳಿನ ಮಾಲೆ ಹಣೆದು ಕಡೆಗೂ ಆ ವಿಳಾಸವನ್ನ ಗೆದ್ದುಕೊಳ್ಳುವಷ್ಟರಲ್ಲಿ ಅವನಿಗೆ ಸಾಕು ಬೇಕಾಗಿತ್ತು. ಇದೆಲ್ಲವನ್ನೂ ಕೇವಲ ಮೂರು ದಿನಗಳಲ್ಲಿ ಅವನು ಸಾಧಿಸಿದ್ದ!

ಒಂದು ಸುದೀರ್ಘ ಶ್ವಾಸವನ್ನ ಎಳೆದುಕೊಂಡ ರೈಲು ಚೂರೆಚೂರು ಹಿಂದೆ ತಳ್ಳಿದಂತಾಗಿ ಮುಂದೆ ಮೆಲ್ಲಗೆ ಹಳಿಯ ಮೇಲೆ ತೆವಳ ತೊಡಗಿತು. ಅಲ್ಲಿಯವರೆಗೆ ಸ್ವಗತದ ಸರೋವರದಲ್ಲಿ ಮೂಗಿನ ಮಟ್ಟ ಮುಳುಗಿದ್ದ ಅವನಿಗೆ ಇದರಿಂದ ಒಮ್ಮೆಲೆ ಅಘಾತವಾದಂತಾಗಿ ವಾಸ್ತವಕ್ಕೆ ದೊಪ್ಪನೆ ಎಸೆದಂತಾಯಿತು. ನೋಡಿದರೆ ರೈಲು ಮೆಲ್ಲನೆ ವೇಗ ಹೆಚ್ಚಿಸಿಕೊಳ್ಳುತ್ತಿದೆ! ಒಮ್ಮೆಲೆ ಮನೆಗೆ ಮರಳುವ ಹಂಬಲ ಕಾಡಿ ಹಾಗೆಯೆ ಹೊರ ಹಾರಿ ಮನೆಯ ಹಾದಿ ಹಿಡಿಯಲ? ಅನ್ನುವ ಆಲೋಚನೆಯೂ ಸುಳಿದು ಹೋಯಿತು. ಹಾಗೊಮ್ಮೆ ಹೋದರೆ ಅಲ್ಲಿ ಆರತಿ ಹಿಡಿದು ತನ್ನನ್ನ ಸ್ವಾಗತಿಸುವವರ್ಯಾರಾದರೂ ಇದ್ದಾರ? ಎಂದು ಯೋಚಿಸಿದಾಗ ಮಾತ್ರ ಮತ್ತೆ ಅನಾಥ ಭಾವವೆ ಮನೆ ಮಾಡಿ ದೋಭಿಯ ನಾಯಿಯಂತಾದೆ ನಾನು ಎಂದವನಿಗನ್ನಿಸಿತು. ವಿಷಾದದ ನಗೆಯೊಂದು ಮೂಡಿದಷ್ಟೆ ಬೇಗ ತುಟಿಯಂಚಿನಲ್ಲಿ ಅಸ್ತಂಗತವೂ ಆಯ್ತು.

.....


ಹಾಗೆ ನೋಡಿದರೆ ಅವನಿಗೆ ಅವನವರೆಂದು ಹೇಳಿಕೊಳ್ಳಲು ಎಲ್ಲಾ ಸಂಬಂಧಿಕರೂ ಇದ್ದರು. ಆದರೆ "ಕೇವಲ" ಹೇಳಿಕೊಳ್ಳಲು ಮಾತ್ರ. ಯಾರೊಬ್ಬರಿಗೂ ಅವನ ಅಭ್ಯುದಯದ ಬಗ್ಗೆ ಆಸಕ್ತಿ ಇರಲೇ ಇಲ್ಲ. ತಂದೆಯ ಒಡ ಹುಟ್ಟಿದವರೆಲ್ಲ ತೀರಾ ಬಡವರಾಗಿದ್ದು ಹಳ್ಳಿಗರಾಗಿದ್ದರಿಂದ ಅವರಿಂದ ಏನೊಂದನ್ನೂ ನಿರೀಕ್ಷಿಸುವಂತಿರಲಿಲ್ಲ. ಹೆಚ್ಚೆಂದರೆ ಅವರಿಗೆ ಸಾಧ್ಯವಿದ್ದರೆ ಇವನೇ ಏನನ್ನಾದರೂ ಕೊಡಬಹುದಾಗಿತ್ತು ಅಷ್ಟೆ. ಆದರೆ ತಾಯಿಯ ಒಡ ಹುಟ್ಟಿದವರ್ಯಾರೂ ಆರ್ಥಿಕವಾಗಿ ಸೋತವರಾಗಿರಲಿಲ್ಲ. ಆದರೆ ಸ್ವಾರ್ಥದಲ್ಲಿ ಉನ್ಮತ್ತರಾಗಿದ್ದರಿಂದ ಅವರಿಂದಲೂ ಮೂರು ಕಾಸಿನ ಪ್ರಯೋಜನ ಅವನಿಗೆ ಇದ್ದಿರಲೇ ಇಲ್ಲ. ಹಾಗಂತ ಅವರಲ್ಲಿ ಔದಾರ್ಯಕ್ಕೇನೂ ಕೊರತೆ ಇರಲಿಲ್ಲ. ಇವನ ಹೊರತು ಇನ್ನಿತರ ಮನೆಯ ಮೊಮ್ಮಕ್ಕಳ ಬೇಡಿಕೆಗಳನ್ನೆಲ್ಲ ಅವರೆಲ್ಲ ಸಾಮರ್ಥ್ಯಾನುಸಾರ ಪೂರೈಸುವುದಿತ್ತು. ಆದರೆ ತಮಗೆ ಏನೊಂದೂ ಸಹಾಯ ಮಾಡುವ ಸ್ಥಿತಿಯಲ್ಲಿ ಇದ್ದಿಲ್ಲದ ಈ ಅಕ್ಕನ ಮಗನ ಮಗನ ಬಗ್ಗೆ ಅವರಿಗೆ ಸಹಜವಾಗಿ ಅಸಡ್ಡೆ ಇತ್ತು. ತಮಗೆ ಏನೊಂದೂ ತಿರುಗಿ ದೊರೆಯದಲ್ಲಿ ಪುಕ್ಕಟೆ ಕೃಪೆ ತೋರಲು ಅವರ್ಯಾರೂ ಸುತಾರಾಂ ತಯ್ಯಾರಿರಲಿಲ್ಲ.


ಅದರೆ ಇವನನ್ನ ತಮ್ಮ ಕೆಲಸಗಳಿಗೆ ಉಪಯೋಗಿಸಿಕೊಳ್ಳ ಬೇಕಾದ ಸಂದರ್ಭಗಳಲ್ಲಿ ಮಾತ್ರ ಅವರಿಗೆ ಸಂಬಂಧ ನೆನಪಾಗುತ್ತಿತ್ತು. ಅಂತಹ ಹೊತ್ತಿನಲ್ಲಿ ಇವನ ಎರವಲು ಸೇವೆಯನ್ನ ಉಪಯೋಗಿಸಿಕೊಳ್ಳಲು ಅವರ್ಯಾರೂ ಮರು ಆಲೋಚಿಸುತ್ತಲೇ ಇರಲಿಲ್ಲ. ಅವರ ಪಾಲಿಗೆ ಇವನೊಬ್ಬ ಅಗ್ಗದ ಸೇವಕನಾಗಿದ್ದ. ಒಂಥರಾ ಸಂಬಳ ಕೇಳದ ಜೀತದಾಳು. ಇದೆಲ್ಲಾ ಅವನಿಗೆ ಬಾಲ್ಯದಲ್ಲಿ ಅರ್ಥವಾಗುತ್ತಲೆ ಇರಲಿಲ್ಲ. ಯಾರು ಏನೆ ಹೇಳಿದರೂ ಸಹ ಮುಗ್ಧವಾಗಿ ನಂಬುತ್ತಿದ್ದನವ. ಅಲ್ಲದೆ ಯಾರೊಬ್ಬರೂ ತನಗೆ ವಂಚಿಸರು ಎನ್ನುವ ಕುರುಡು ನಂಬಿಕೆಯೊಂದು ಬೇರೆ ಅವನಲ್ಲಿತ್ತು. ಕೊಂಚ ಹೊಗಳಿಕೆಗೆ ಮರಳಾಗುವ ಅವನ ಬಲಹೀನತೆಯನ್ನ ಅವಶ್ಯಕತೆ ಬಿದ್ದಗಲೆಲ್ಲಾ ಧಾರಾಳವಾಗಿ ಅವರೆಲ್ಲ ಉಪಯೋಗಿಸಿಕೊಳ್ಳುತ್ತಿದ್ದರು.


ಅವನನ್ನ ಒಂಬತ್ತನೆ ವಯಸ್ಸಿನಲ್ಲಿ ಅವನ ತಾಯಿಯ ಒಡ ಹುಟ್ಟಿದವಳೆ ಓದಿಸುವ ನೆಪ ಮಾಡಿ ತನ್ನೂರಿಗೆ ಕರೆದೊಯ್ದಿದ್ದಳು. ಅಲ್ಲಿ ತನ್ನ ಮನೆ ಕೆಲಸಕ್ಕೆ ತಿಂಗಳಾನುಗಟ್ಟಲೆ ಉಪಯೋಗಿಸಿಕೊಂಡು ಆಮೇಲೆ ತನ್ನ ಅವಶ್ಯಕತೆ ತೀರಿದ ಮೇಲೆ ವಿದ್ಯಾರ್ಥಿ ನಿಲಯವೊಂದಕ್ಕೆ ಉಪಾಯವಾಗಿ ಸಾಗ ಹಾಕಿ ತನ್ನ ಹೊಣೆಯಿಂದ ಪಾರಾಗಿದ್ದಳು. ಕರೆದು ಕೊಂಡು ಹೋಗುವಂತೆ ಇವನೇನೂ ಆಶಿಸಿರಲಿಲ್ಲ, ಅವಳ ಮನೆಯಲ್ಲಿ ಮಗುವನ್ನ ನೋಡಿಕೊಳ್ಳಲಿಕ್ಕೆ ಒಂದು ಜನ ಸಿಗದೆ ಪರದಾಡುತ್ತಿದ್ದವಳು ಸುಲಭವಾಗಿ ತನ್ನೂರಿಗೆ ಸೆಳೆದೊಯ್ದಿದ್ದಳು. ಮಗು ನೋಡಿಕೊಳ್ಳುವ ಜೊತೆಗೆ ಮನೆಯ ಸಕಲೆಂಟು ಕೆಲಸಗಳನ್ನೂ ಆತ ಬೇಸರವಿಲ್ಲದೆ ಮಾಡುತ್ತಿದ್ದ. ಆದರೆ ಅವಳ ಗಂಡನಿಗೆ ಇವ ಅಲ್ಲಿರೋದು ಇಷ್ಟವಿರಲಿಲ್ಲ. ಹಾಗಂತ ಕರೆ ತಂದಾಗಿತ್ತು ಸೂಕ್ತ ಕಾರಣ ಕೊಡದೆ ವಾಪಾಸು ಕಳಿಸುವ ಹಾಗೂ ಇರಲಿಲ್ಲ.


ಅವನ ಇಚ್ಛೆಗೆ ವಿರುದ್ಧವಾಗಿ ಮೊದಲಿಗೆ ವಿಧ್ಯಾರ್ಥಿ ನಿಲಯಕ್ಕೆ ಸೇರಿಸಿ ಪಾರಾಗಿದ್ದವರು ಮೂರು ವರ್ಷಗಳ ನಂತರ ಅಷ್ಟೆ ಅಸ್ಥೆಯಿಂದ ದೂರದೂರೊಂದರ ಇನ್ನೊಂದು ಉಚಿತ ವಸತಿ ಶಾಲೆಗೆ ಸಾಗ ಹಾಕಿ ಶಾಶ್ವತವಾಗಿ ತಮ್ಮ ಹೊಣೆಗಾರಿಕೆಯಿಂದ ಹೆಗಲು ಕೊಡವಿಕೊಂಡು ಸಲೀಸಾಗಿ ಪಾರಾಗಿದ್ದರು. ಅಲ್ಲಿಂದೀಚೆಗೆ ಅವನ ಬದುಕು ಸೂತ್ರ ತಪ್ಪಿದ ಪಟದಂತಾಗಿ ಹೋಗಿತ್ತು. ಹೆತ್ತವರಿಗೆ ಇವನೊಬ್ಬ ಬದುಕಿದ್ದಾನೆ ಅಂತಲೆ ನೆನಪಿರಲಿಲ್ಲ. ತಮ್ಮ ಸ್ವಾರ್ಥಕ್ಕೆ ಕರೆದು ಕೊಂಡು ಹೋದವರಿಗೆ ತಮ್ಮ ಕೆಲಸ ತೀರಿದ ಮೇಲೆ ಇವ 'ಹೊಳೆ ದಾಟಿಸಿದ ಅಂಬಿಗ'ನಾಗಿದ್ದ, ಹೆಚ್ಚಿನ ಹೊಣೆ ಹೊರಲು ಅವರೂ ಸಹ ಸಿದ್ಧರಿರಲಿಲ್ಲ.

.......


ಶಿವಮೊಗ್ಗ ನಿಲ್ದಾಣ ಬಿಟ್ಟು ಹೊರಟ ರೈಲು ನಡುಗುವಂತೆ ತುಂಗಾ ಸೇತುವೆಯ ಮೇಲೆ ಸಾಗುತ್ತಿದ್ದಾಗ ಬಿಸಿಲಿಗೆ ಬತ್ತಿದ್ದರೂ ಅಲ್ಲಲ್ಲಿ ಕೊರಕಲಲ್ಲಿ ಹರಿಯುತ್ತಿದ್ದ ಹೊಳೆ ಕಣ್ಣಿಗೆ ಬಿದ್ದಾಗ ಖುಷಿಯೊಂದು ತಕ್ಷಣ ಆವರಿಸಿ ಅವ ಭಾವುಕನಾದ. ಇದೇ ಹೊಳೆ ಅವನೂರು ದಾಟಿ ಇಲ್ಲಿಗೆ ಬರುತ್ತಿತ್ತಲ್ಲ, ಅಲ್ಲಿ ಮೈತುಂಬಿ ಹರಿಯುತ್ತಿದ್ದವಳು ಇಲ್ಲಿ ಕೊರಕಲುಗಳ ನಡು ಕಡು ಕಷ್ಟದಿಂದ ಪಾರಾಗಿ ಮುಂದುವರೆಯುತ್ತಿದ್ದ ಹಾಗೆ ಅವನ ಕಣ್ಣಿಗೆ ಕಂಡಿತು. ಅನೇಕ ಬೇಸರದ ಸಂಜೆಗಳನ್ನ ತುಂಗೆಯ ತಟದಲ್ಲಿ ಒಂಟಿಯಾಗಿ ಕೂತು ಅವನು ಕಳೆದಿದ್ದ. ಅವಳೊಂದಿಗೆ ತನ್ನ ಅನೇಕ ನೋವುಗಳನ್ನ ರಹಸ್ಯಗಳನ್ನ ನಸು ಸಂಜೆಯಲ್ಲಿ ಹೇಳಿ ಹಂಚಿಕೊಂಡು ಹಗುರಾಗಿದ್ದ. ಆಕೆ ತನ್ನನ್ನ ಹರಿಯುತ್ತಲೆ ಆಲಿಸುತ್ತಾಳೆ ಎನ್ನುವ ಭ್ರಮೆ ಅವನಲ್ಲಿತ್ತು. ಸಂಕಟದ ಸಂಜೆಗಳಲ್ಲಿ ಅವಳ ಸಾನಿಧ್ಯದಲ್ಲಿ ಮನಸಿನ ಭಾರಗಳನ್ನೆಲ್ಲ ಹೇಳಿಕೊಂಡು ಇಳಿಸಿ ಹಗುರಾಗುವಾಗ ಅವಳೊಬ್ಬ ಆತ್ಮೀಯ ಗೆಳತಿಯಂತೆ ಭಾಸವಾಗಿದ್ದಳು. ಎಂದೆಂದೂ ತನ್ನ ದೂರದ, ತನ್ನ ಎಂದೂ ತಿರಸ್ಕರಿಸದ ನಿಷ್ಕಾಮಿ ಸಖಿ ಅವಳಂತ ಆತ ಬಗೆದಿದ್ದ.


ಈಗ ತನ್ನನ್ನ ಬೀಳ್ಕೊಡುವ ಮನಸಿಲ್ಲದೆ ತುಂಗೆ ನೋವಿನಲ್ಲಿ ಸೋತು ಸೊರಗಿದ್ದಾಳೆ ಅಂತನ್ನಿಸಿತವನಿಗೆ. ತುಂಗೆಯೊಂದಿಗೆ ಒಂದು ಅವ್ಯಕ್ತ ಭಾವನಾತ್ಮಕ ನಂಟನ್ನ ಬೆಳೆಸಿಕೊಂಡಿದ್ದ ಫಲ ಅದು. ಇನ್ನು ಮತ್ಯಾವಾಗ ಮರಳಿ ಅವಳ ದಡದ ಮರಳಲ್ಲಿ ಕೂತು ಕೊಳ್ಳೋದು? ಹರಿವ ಅವಳ ನಿಶ್ಚಲ ಎದೆಯಲ್ಲಿ ಮತ್ತೆಂದು ತಾನು ಬೆತ್ತಲೆ ಕಾಲುಗಳನ್ನ ಇಳಿಬಿಟ್ಟು ತನ್ನ ಒಂಟಿತನದ ನೋವನೆಲ್ಲ ಕ್ಷಣ ಕಾಲವಾದರೂ ಮರೆಯೋದು? ಎನ್ನುವ ಉತ್ತರಗಾಣದ ಪ್ರಶ್ನೆಗಳ ಅಲೆಗಳು ಮನದ ಪಾತ್ರದಲ್ಲಿ ಏಳುತ್ತಿದ್ದಂತೆ ಅವನಿಗೇನೆ ಅರಿವಿಲ್ಲದಂತೆ ಕಣ್ಣು ತುಂಬಿ ಬಂತು. ಸುಮ್ಮನೆ ಮೂಕ ಪಶುವಿನಂತೆ ಕಣ್ಣೀರು ಹಾಕಿದ.

ಅದೆಷ್ಟು ಹೊತ್ತು ಹಾಗೆಯೆ ನಿಂತಿದ್ದನೋ ಅವನಿಗರಿವಿರಲಿಲ್ಲ. ನಿಂತೂ ನಿಂತೂ ಕಾಲು ಬಚ್ಚಿತ್ತು, ಅಲ್ಲಸಲ್ಲದ್ದನ್ನ ವಿನಾಕಾರಣ ಮತ್ತೆ ಮತ್ತೆ ಆಲೋಚಿಸಿ ಅವನ ಮಂಡೆಯೂ ಬಳಲಿತ್ತು. ಹಾಗೆ ಅಕ್ಕ ಪಕ್ಕ ಅಲ್ಲೆ ನೆಲದ ಮೇಲೆ ಕೂತವರತ್ತ ಆರ್ತ ದೃಷ್ಟಿ ಬೀರಿ ಅವರ ಕೃಪೆಯಿಂದ ಸಿಕ್ಕಿದ ತುಣುಕು ಎಡೆಯಲ್ಲಿ ಕಷ್ಟದಿಂದ ತಾನೂ ಅಂಡೂರಿದ. ಕೇವಲ ಹೆಸರು ಮಾತ್ರ ಕೇಳಿ ಗೊತ್ತಿದ್ದ ಊರುಗಳೆಲ್ಲ ಒಂದೊಂದಾಗಿ ಹಿಂದಾಗುತ್ತಿದ್ದವು. ಹೆಸರೂ ಸಹ ಕೇಳಿ ಗೊತ್ತಿಲ್ಲದ ಅನೇಕ ನಿಲ್ದಾಣಗಳಲ್ಲಿ ಆಗಾಗ ನಿಂತು ರೈಲುಬಂಡಿ ಮುಂದೋಡುತ್ತಿತ್ತು.

ರೈಲು ಮತ್ತವನ ಮನಸಿನ ಚಲನೆಯಲ್ಲೊಂದು ಸಾಮ್ಯತೆ ಇತ್ತು. ತಾದ್ಯಾತ್ಮನಾಗಿ ಆಲೋಚಿಸುತ್ತಿದ್ದ ಅವನ ಮನದ ಬಂಡಿ ಹಿಂದಿರುಗಿ ನೆನ್ನೆಗಳತ್ತ ಓಡುತ್ತಿತ್ತು. ಆದರೆ ಅವ ಕುಳಿತ ಬಂಡಿ ಮಾತ್ರ ಹೊಸ ಕನಸುಗಳ ಬೆನ್ನು ಹತ್ತಿದ ನಾಳೆಗಳತ್ತ ದೌಡಾಯಿಸುತ್ತಾ ಮುಂದೋಡುತ್ತಿತ್ತು. ಹೊರಗೆ ಸೂರ್ಯ ಮುಪ್ಪಾಗುತ್ತಿದ್ದ. ಅನಿರೀಕ್ಷಿತಗಳಿಗೆ ಅನಿವಾರ್ಯವಾಗಿ ತೆರೆದುಕೊಳ್ಳಲು ಅವನೂ ಹೆದರು ಹೆದರುತ್ತಲೇ ತಯಾರಾಗುತ್ತಿದ್ದ. ಅದ್ಯಾವುದೋ ಒಂದು ಜಂಕ್ಷನ್ನಿನಲ್ಲಿ ರೈಲು ಒಮ್ಮೆಲೆ ನಿಂತಾಗ ಅಲ್ಲಿನ ಗೌಜಿ ಗದ್ದಲಕ್ಕೆ ಬೆಚ್ಚಿ ವಾಸ್ತವಕ್ಕವನು ಮರಳಿದ. ರೈಲಿಳಿಯುವವರ ಭರಾಟೆ. ಅದೂ ಇದು ಮಾರುವವರ ಗಲಾಟೆ ಗದ್ದಲ, ಏರಲು ಕಾತರದಿಂದ ಕಾಯುತ್ತಿರುವವರ ಅವಸರ ಇವೆಲ್ಲದರ ನಡುವೆ ಇವನ ನೋವು ಅನಾಥ ಕೂಸಿನಂತಿತ್ತು. ಇಳಿಯುವವರು ಇಳಿಯುತ್ತಿದ್ದರು ಏರುವವರು ಏರುತ್ತಿದ್ದರು ಬೀಡಿ ಸೇದುವವರು ಸೇದುತ್ತಿದ್ದರು. ಒಟ್ಟಿನಲ್ಲಿ ಅಲ್ಯಾರಿಗೂ ಇವನೊಬ್ಬ ಲಕ್ಷ್ಯ ಕೊಡಬೇಕಾದ ವಿಶೇಷ ವ್ಯಕ್ತಿಯೇನೂ ಆಗಿರಲಿಲ್ಲ. ಅಲ್ಲಿ ನೆರೆದ ಯಾರಿಗೂ ಅವನ ನೋವು ಕಾಣುತ್ತಿರಲಿಲ್ಲ. ಜಗತ್ತು ಅದರ ಪಾಡಿಗದು ಓಡುತ್ತಿತ್ತು. ಇವ ಇವನ ಲೋಕದ ಝಂಜಡದಲ್ಲಿಯೆ ಮುಳುಗಿ ಹೋಗಿದ್ದ.


( ಮುಂದಿದೆ.)