07 February 2022

ಅವನ ಜೊತೆ ಅವಳ ಕಥೆ......೬

ಅವಳ ಜೊತೆ ಅವನ ಕಥೆ.......೬


"ಮುನಿಸಿನ ಮೂಲ ಮನಸೆˌ
ಅದು ಬಯಸಿದರೆಲ್ಲ ಸೊಗಸೆ."

ಇತ್ತೀಚೆಗೆ ಸೂಕ್ತ ಮರಮತ್ತು ಕಾಣದೆ ಉಪ್ಪರಿಗೆಯ ಸೂರಿಗೆ ಹೊದಿಸಿದ್ದ ಟಾರು ಕಾಗದವೆಲ್ಲಾ ಬಿರುಗಾಳಿಗೆ ಛಿದ್ರ ಛಿದ್ರವಾಗಿ ಅಗಲವಾಗಿ ತೆರೆದುಕೊಂಡಿದ್ದ ಮೇಲ್ಛಾವಣಿಯ ಹಲಗೆಗಳ ಎಡೆಗಳಿಂದ ಮನೆಯ ಒಳ ಸುರಿದಿದ್ದ ಹಿಮ ಒಂದಷ್ಟು ಗುಪ್ಪೆ ಗುಪ್ಪೆಗಳಾಗಿ ನೆಲದಲ್ಲೆಲ್ಲಾ ಹರಡಿಕೊಂಡಿತ್ತು. ಗುಡಿಸಿ ಅವನ್ನೆಲ್ಲಾ ತೆಗೆಯದಿದ್ದರೆ ವಾತಾವರಣದಲ್ಲಿ ಉಷ್ಣತೆ ಏರಿದಾಗ ಮನೆಯೊಳಗೆಲ್ಲಾ ಅದು ನೀರಾಗಿ ಹರಿದು ಮೇಲುಪ್ಪರಿಗೆಯ ಹಲಗೆಯ ನೆಲವೆಲ್ಲಾ ನೀರು ಹೀರಿ ಕುಂಬಾಗುತ್ತಿದ್ದುದು ಮಾತ್ರವಲ್ಲದೆˌ ಮುಂದೆ ಕರಗಿ ಕೆಳಗಿನ ನೆಲಕ್ಕೆ ಹರಿಯಲಿದ್ದ ಜಲಧಾರೆ ನೆಲ ಅಂತಸ್ತಿನಲ್ಲೆಲ್ಲಾ ರಾಡಿಯೆಬ್ಬಿಸುವ ಸಾಧ್ಯತೆ ಇತ್ತು.

ಸುಲ್ತಾನನನ್ನ ಮೊದಲು ಹಟ್ಟಿಯ ಪಕ್ಕದ ಲಾಯದತ್ತ ಮುನ್ನಡೆಸಿದನವನು. ಇದ್ದುದರಲ್ಲಿ ಹಟ್ಟಿಯ ಪರಿಸ್ಥಿತಿ ಪರವಾಗಿರಲಿಲ್ಲ. ಚಕಮಕಿ ಕಲ್ಲುಗಳಿಂದ ಕಿಡಿ ಹೊಮ್ಮಿಸಿ ಅಲ್ಲಿನ ಒಳಾವರಣ ಬೆಚ್ಚಗಾಗಿಸಲು ಅಗ್ಗಿಷ್ಟಿಕೆಗೆ ಪುರುಳೆ ಕಲ್ಲಿದ್ದಲು ತುಂಬಿ ಬೆಂಕಿಯಬ್ಬಿಸಿದ.

ಮನೆಯ ಉಪ್ಪರಿಗೆ ಗುಡಿಸಿ ಹರಡಿಕೊಂಡಿದ್ದ ಹಿಮ ಗೋರಿ ಹೊರಗೆಸದು ಬಿರುಕು ಬಿಟ್ಟಿದ್ದ ಮಾಡಿನ ಜಂತಿಗೆ ಮತ್ತೆ ಟಾರು ಕಾಗದ ಮೊಳೆ ಹೊಡೆದು ಮತ್ತೆ ಹಿಮಪಾತ ಮನೆಯೊಳಗಾಗದಂತೆ ತಡೆದ. ಹಟ್ಟಿಗೆ ಮರಳಿದವನಿಗೆ ಈಗ ತಕ್ಕಮಟ್ಚಿಗೆ ಲಾಯ ಬೆಚ್ಚಗಾಗಿದೆ ಅನಿಸಿತು. ಸುಲ್ತಾನನ ಬಾಯಿ ಚೀಲ ಬಿಡಿಸಿ ನೋಡಿದರೆ ಹಾಕಿದ್ದ ಆಹಾರದಲ್ಲಿ ಬಹುಪಾಲನ್ನ ಕುದುರೆ ತಿಂದು ಮಗಿಸಿತ್ತು. ಮತ್ತೆ ಮೂಗು ಸೋರುವ ಲಕ್ಷಣ ಗೋಚರಿಸಿತು. ಅದಕ್ಕೆ ಕೂಡಲೆ ಔಷಧಿ ಗೊಟ್ಟಕ್ಕೇರಿಸಿ ಕುಡಿಸದೆ ವಿಧಿಯಿರಲಿಲ್ಲ. ಸುಲ್ತಾನನ ಮೈ ತಿಕ್ಕಿ ಕುತ್ತಿಗೆ ಕೆರೆದು ಅವನ ಮೈ ನೋವಿಗೆ ಚೂರು ಬಿಡುಗಡೆ ತಂದವನೆˌ ಅವನ ಮೈಮೇಲೆ ದಪ್ಪನೆಯದೊಂದು ಛಾದರ ಹೊದಿಸಿ ಗೊಂತಿಗಿಷ್ಟು ರೈ ಹುಲ್ಲು ಹಾಕಿˌ ಕುಡಿಯಲಷ್ಟು ಬಿಸಿ ನೀರನ್ನೂ ಸುರಿದುˌ ಲಾಯದ ಬಾಗಿಲೆಳೆದುಕೊಂಡು ಔಷಧಿ ಕೊಂಡು ತರಲು ನೇರ ಗಾಡಿಖಾನೆಯತ್ತ ಲಗುಬಗೆಯಿಂದ ಹೆಜ್ಜೆ ಹಾಕಿದ.

ಮನೆಯಿಂದ ಗಾಡಿಖಾನೆಯ ದಿಕ್ಕಿನತ್ತ ಹೋಗುವಾಗ ನೂರು ಗಜ ಮುಂದೆ ಬಲಕ್ಕೆ ತಿರುಗಿ ಮುನ್ನೂರು ಗಜ ನಡೆದು ಮತ್ತೆ ಎಡಕ್ಕೆ ತಿರುಗಿ ಒಂದೈವತ್ತು ಗಜ ನಡೆದರೆ ಸಾಕು ಅದೋ ಬಲಕ್ಕಿದೆಯಲ್ಲ ಅದೆ ಆಟಿಕೆ ಮಾರುವ ಬಾಬಯ್ಯನ ಮನೆ. ಗೋಪಿ ಈಗವನ ಮನೆಯಳಿಯˌ ಗಾಡಿಖಾನೆಗೆ ಆ ಹಾದಿ ಚೂರು ಬಳಸಾದರೂˌ ಗೆಳೆಯನನ್ನ ಹೋಗಿ ಕೂಗಿ ಜೊತೆಗೆಳೆದುಕೊಂಡು ಹೋಗಲು ಅವನು ನಿರ್ಧರಿಸಿದ. ಸುಲ್ತಾನನಂತಹ ಬೆಳೆದು ನಿಂತಿರುವ ಬಲಿಷ್ಠ ಕುದುರೆಗೆ ಗೊಟ್ಟ ಎತ್ತಿ ಔಷಧಿ ಕುಡಿಸಲು ಒಬ್ಬರಿಂದ ಅಸಾಧ್ಯವಾಗುತ್ತಿತ್ತು. ಸಹಾಯಕ್ಕೆ ಜೊತೆಗೊಬ್ಬರಿದ್ದರೆ ಅನುಕೂಲವಾಗುತ್ತಿತ್ತು. ಪೇಟೆಯಲ್ಲಿ ಗೋಪಿಗಿಂತ ಅನುಕೂಲಕರ ಜೊತೆಗಾರ ಅವನಿಗೆ ಮತ್ತಿನ್ಯಾರಿದ್ದಾರು ಹೇಳಿ?

ಮನೆಯ ಆವರಣದಲ್ಲಿ ಹೊಸಲಿನಿಂದೊಳಗೆ ಆ ಚಳಿಯಲ್ಲೆ ಕುಕ್ಕುರುಗಾಲಲ್ಲಿ ಕೂತು ಬಾಬಯ್ಯ ಹೊಸತಾಗಿ ಹಿಕರಿ ಬೇರಿನಿಂದ ಕೊರೆದಿದ್ದ ಮೃದು ಆಟಿಕೆಗಳಿಗೆ ಬಣ್ಣ ಹಚ್ಚಿ ಮತ್ತಷ್ಟು ಅಂದ ಹೆಚ್ಚಿಸುವ ಮೊದಲು ಕೊನೆಯ ಸ್ಪರ್ಷ ನೀಡಿ ಗೊಂಬೆಯನ್ನ ನಿಖರವಾಗಿ ತಿದ್ದಿ ತೀಡಲು ಕೂತಿದ್ದ. ಅಷ್ಟು ಬೆಳ್ಳಂಬೆಳಗ್ಯೆ ಇವನ ಆಗಮನವನ್ನ ನಿರೀಕ್ಷಿಸಿರದ ಬಾಬಯ್ಯ ಒಂದರೆಕ್ಷಣ ಬೆಚ್ಚಿ ಬಿದ್ದ. ಗೋಪಿಯನ್ನ ಕರೆಯಬೇಕೆಂದೂˌ ತಾನು ಕೆಲಸದ ಮೇಲೆ ಪೇಟೆಗೆ ಬಂದಿರುವೆನೆಂದೂ ಇವತ್ತೆ ಮರಳಿ ತೋಟದ ಮನೆಗೆ ಹೋಗುವ ದರುದು ಇದೆಯೆಂದೂ ಇವ ಹೇಳುತ್ತಿದ್ದರೆ ಅವೆಲ್ಲವನ್ನೂ ಕೇಳುತ್ತಿದ್ದ ಬಾಬಯ್ಯ ಒಂದು ಸಿಟ್ಟಿನ ಪ್ರತಿಕ್ರಿಯೆ ಕೊಟ್ಟು "ರಾಜಾ ರಾಣಿಯರಿಗೆ ಇನ್ನೂ ಹಗಲಾದಂಗಿಲ್ಲಪ್ಪˌ ತಾವು ದಯಮಾಡಿಸಿ ಭೋಪರಾಕು ಹೇಳಿ ಈ ವಿನಮ್ರ ಸೇವಕ ಒಡೆಯ ಒಡತಿಯರನ್ನ ಅವರ ಅಂತಃಪುರದಿಂದ ಹೊರಗೆ ಮೆಲುವಾಗಿ ಕೂಗಿ ಕರೆದುಕೊಂಡು ಬರುತ್ತೇನೆ!" ಅಂತ ಜಾತ್ರೆಯ ನಾಟಕದವರು ಉದುರಿಸುವ ಸಂಭಾಷಣೆಯ ಧಾಟಿಯಲ್ಲಿ ವ್ಯಂಗ್ಯವಾಗಿ ಹೇಳಿದ್ದ.

ಅಲ್ಲಿಗೆ ಅಳಿಯನ ಬಗ್ಗೆ ಮುದುಕನ ಮೊದಲಿಕೆ ಕೇಳಿ ಹಗಲಾಗಿದ್ದರೂ ಇನ್ನೂ ಗಂಡ ಹೆಂಡಿರು ಶಯನ ಕಕ್ಷೆ ಬಿಟ್ಟಿಳಿದಿಲ್ಲ ಅನ್ನೋದೇನೋ ಖಚಿತವಾಯಿತುˌ ಆದರೆ ಇಷ್ಟೊಂದು ಮೊನಚಾಗಿ ನಾಟಕೀಯ ಸಂಭಾಷಣೆ ಮೂಲಕ ಮೊದಲಿಸಿರುದಕ್ಕೆ ಮಾತ್ರ ಕಾರಣ ಹೊಳೆಯಲಿಲ್ಲ. ಇರಲಿˌ ಎದ್ದ ಕೂಡಲೆ ಗಾಡಿಖಾನೆಯತ್ತ ಕಳಿಸಿ ನಾನಲ್ಲೆ ಅವನನ್ನ ಭೇಟಿಯಾಗುತ್ತೇನೆ ಅಂದವನೆ ಅಲ್ಲಿಂದ ಕಾಲ್ಕಿತ್ತ.

ವಾಸ್ತವವಾಗಿ ಅವರ ಮನೆಯ ಒಳ ಜಗಳಗಳ ಮುನಿಸು ಭರ್ತ್ಸನೆಗಳ ಅನಗತ್ಯ ಕಿರಿಕಿರಿಗಳಲ್ಲಿ ಬೆಳ್ಳಂಬೆಳಗ್ಯೆ ತಾನೂ ಪಾಲುದಾರನಾಗಿ ಬೇಡದ ಗೊಂದಲ ಗೋಜಲಿನಲ್ಲಿ ಸಿಲುಕಿಕೊಳ್ಳುವ ಉಸಾಬರಿ ಅವನಿಗೆ ಬೇಕಿರಲಿಲ್ಲ. ಅದೇನಿದ್ದರೂ ತಾನು ಕೇಳದಿದ್ದರೂ ಸಹ ಸಿಕ್ಕಿದಾಗ ಗೋಪಿ ಹೇಳದೆ ಬಿಡಲಾರ! ಸಹಜವಾಗಿ ಕುಪ್ಪಿಯಿಂದ ಕರಗಿ ಹೊರ ಬರುವ ಎಣ್ಣೆಯನ್ನ ಅನಗತ್ಯವಾಗಿ ಬೆಂಕಿಯ ಶಾಖಕ್ಕೆ ಹಿಡಿದು ಕರಗಿಸುವ ಅಗತ್ಯವಿದೆಯೆ? ಎಂದವನು ತರ್ಕಿಸಿ ಗಾಡಿಖಾನೆಯತ್ತ ತಿರುಗಿದ್ದ. ಅದಲ್ಲದೆ ಈಗಾಗಲೆ ಅಂದುಕೊಂಡ ಸಮಯಾವಧಿಗಿಂತ ಹೆಚ್ಚು ಒಮ್ಮುಖ ಪಯಣದಲ್ಲಿಯೆ ವ್ಯರ್ಥವಾಗಿದ್ದುˌ ಈಗ ಮನೆಯ ಕಿರು ರಿಪೇರಿ ಕೆಲಸ ಮತ್ತೊಂದಷ್ಟು ಅಮೂಲ್ಯ ಸಮಯವನ್ನ ಹಾಳು ಮಾಡಿತ್ತು. ಹೀಗಾಗಿ ಒಣ ಹರಟೆ ಹೊಡೆಯುತ್ತಾ ದೇಶಾವರಿ ಮಾತಾಡಿಕೊಂಡು ಕತ್ತು ಹಿಸುಕಿ ಕೊಲ್ಲುವಷ್ಟು ಸಮಯ ಅವತ್ತು ಅವನಲ್ಲಿಯೂ ಇದ್ದಿರಲಿಲ್ಲ. ಆದರೆ ಬಾಬಯ್ಯ ಮತ್ತು ಗೋಪಿಯ ತಿಕ್ಕಾಟದ ಕಾರಣ ಮೂರನೆ ಮೂಲವೊಂದರಿಂದ ಬಯಸದಿದ್ದರೂ ಅವನ ಕಿವಿಗೆ ಬಂದು ಬಿತ್ತು.

ಗಾಡಿಖಾನೆಯ ಬಾಗಿಲಲ್ಲೆ ಹುಲ್ಲು ಮಾರುವ ಪಾಪಮ್ಮ ಅವನಿಗೆ ಎದುರಾದಳು. ಸಮೀಪದ ತೋಟದ ಮನೆಗಳಿಗೆ ಸುಗ್ಗಿಯ ಕಾಲದಲ್ಲಿ ಅಂಡಲೆದು ರೈˌ ಓಟ್ಸ್ˌ ಜವೆಗೋಧಿಯ ಹುಲ್ಲುˌ ಗೋವಿನಜೋಳದ ಕಡ್ಡಿˌ ಕಬ್ಬಿನ ಸಿಪ್ಪೆ ಹಿಂಡಿ ಹಿಪ್ಪೆಯಾದ ಜಲ್ಲೆ ಎಲ್ಲವನ್ನೂ ಕನಿಷ್ಠ ಕ್ರಯ ಕಟ್ಟಿ ಪಾಪಮ್ಮ ಕೊಂಡುಕೊಂಡು ಒಂಟಿ ಫೋನಿ ಕುದುರೆ ಕಟ್ಟಿದ್ದ ಕಿರು ಬಂಡಿಗೆ ಅದನ್ನೇರಿಸಿಕೊಂಡು ಅವೆಲ್ಲವನ್ನೂ ಸಹ ತನ್ನ ಪೇಟೆಯ ಮನೆಗೆ ಸಾಗಿಸುತ್ತಿದ್ದಳು. ಐದು ಕಾಸು ಹತ್ತು ಕಾಸು ಕೊಟ್ಟು ರೈತರ ಒಕ್ಕಣೆಯ ಕಣದಿಂದ ಕೊಂಡು ತಂದ ಆ ಪಶು ಆಹಾರವನ್ನ ಊರೊಳಗೆ ಅದರ ಎರಡು ಬೆಲೆಗೆ ಮಾರಿ ಚೂರು ದುಡಿಮೆ ಮಾಡಿಕೊಳ್ಳುತ್ತಿದ್ದಳು. ಪೇಟೆಯಲ್ಲಿ ಮನೆಯಿರುವ ಪ್ರತಿಯೊಬ್ಬರೂ ಸಹ ಒಂದೆರಡು ಜಾನುವಾರು ಕಟ್ಟಿ ಸಾಕಿದವರೆ ಆಗಿದ್ದರೂˌ ಅವರಲ್ಲಿ ಹೆಚ್ಚಿನವರು ರೈತಾಪಿಗಳೂ ಆಗಿರಲಿಲ್ಲ - ಅವರ್ಯಾರೂ ಹೊಲಮನೆಯ ಒಡೆಯರೂ ಆಗಿರಲಿಲ್ಲ. ಅಂತವರಿಗೆ ಹೀಗೆ ಒಣಹುಲ್ಲನ್ನ ಹಾಗೂ ತೊಂಡು ಮೇವನ್ನ ಪಾಪಮ್ಮನಿಂದ ಖರೀದಿಸದೆ ವಿಧಿಯಿರಲಿಲ್ಲ. ಆ ಕಾರಣದಿಂದ ಊರಿನ ಪ್ರತಿಮನೆಯೊಳಗೂ ಹುಲ್ಲಿನ ಪಾಪಮ್ಮನ ಹೊಕ್ಕು ಬಳಕೆಯಿತ್ತು. ಹಾಗೆ ಹೋದವಳುˌ ಹುಲ್ಲಿನ ಹೊರೆಯ ಕಟ್ಟು ತೆಗೆದಿಳಿಸಿದವಳೆ ವೀಳ್ಯ ಹಾಕಿಕೊಂಡು ನಾಲ್ಕು ಘಳಿಗೆ ಹಿತ್ತಲಲ್ಲಿ ಕೂತು ಆ ಮನೆಯವರ ಕಷ್ಟಸುಖ ಹಂಚಿಕೊಂಡು ಬರುತ್ತಿದ್ದಳು. ಅವಳಿಗೆ ಕುಡಿಯಲೊಂದು ಲೋಟ ಚಹಾ ಕೊಟ್ಟ ಆ ಮನೆಯವರೂ ಸಹ ತಮ್ಮ ಮನೆಯ ವಿಚಾರ ಅವಳಿಗೆ ಹೇಳಿ ಇನ್ಯಾರದೋ ಮನೆಯ ವಿಚಾರ ಅವಳಿಂದ ಕೇಳಿ ತಿಳಿದುಕೊಳ್ಳುತ್ತಿದ್ದರು!

ಒಟ್ಟಿನಲ್ಲಿ ಜನ ಜಾನುವಾರು ಸಹಿತ ಊರಿನ ಸಕಲ ಜೀವಿಗಳ ಲಾಭ ನಷ್ಟಗಳ ಅಂತರಂಗದ ವಿಚಾರಗಳಲ್ಲಿ ಪಾಪಮ್ಮ ಪಾರಂಗತಳಾಗಿರುತ್ತಿದ್ದಳು. ಅವಳಿಗಿದ್ದ ಏಕೈಕ ದುರಭ್ಯಾಸವೆಂದರೆ ಪಾಪಮ್ಮ ಚೂರು ಬಾಯಿಬುಡುಕಿ. ಈಗಿನ ಉದಾಹರಣೆ ಕೊಟ್ಟು ಹೇಳೋದಾದರೆ ಒಂಥರಾ ಆಲಿಂಡಿಯಾ ರೇಡಿಯೋದ ಆ ಊರಿನ ಕೇಂದ್ರ ಪಾಪಮ್ಮ. ಅಂದರೆ ವಿಷಯವೊಂದನ್ನ ಪಾಪಮ್ಮನ ಕಿವಿಗೆ ಹಾಕುವುದೂ ಸರಿˌ ನೇರ ಕಹಳೆಯ ಮೂತಿಗೆ ಹೋಗಿ ಮುತ್ತಿಡುವುದೂ ಸರಿ! ಪಾಪಮ್ಮನ ಅಂತರಂಗ ಹೊಕ್ಕ ವಿಷಯವೊಂದು ವಾರ ಒಪ್ಪೊತ್ತಿನಲ್ಲಿ ಅವಳ ಪರಿಚಿತರೆಲ್ಲರ ಮುಂದೆ ಬೇಧ ಭಾವವಿಲ್ಲದೆ ಬಹಿರಂಗವಾಗುತ್ತಿತ್ತು.



************



"ಹಗಲು ಕಿರಿದು ಇರುಳು ಹಿರಿದು ಚಳಿಯ ಮೊನಚು ಅಲಗುಗಳು ಇಳೆಯ ಅಂಗಾಂಗ ಕೊರೆದುˌ ಶಿಶಿರ ಮಾಡುವ ನಿರಂತರ ಧಾಳಿ ವಸಂತನ ಕನವರಿಸುವಂತೆ ಮಾಡಿದೆ."

ಹೀಗಾಗಿ ಮುಖದ ಮುಂದೆ ಅವಳನ್ನ ಚೆನ್ನಾಗಿ ಮಾತನಾಡಿಸುತ್ತಿದ್ದವರೆ ಅವಳ ಬೆನ್ನ ಹಿಂದೆ ಅವಳನ್ನು "ಒಡಕು ವಾಲಗ ಪಾಪಮ್ಮ" ಅಂತ ಅಡ್ಡ ಹೆಸರಿಟ್ಟು ಕರೆಯುವುದು ರೂಢಿಯಾಗಿತ್ತು. ಆದರೆ ಅದೆಲ್ಲಾ ಅವಳ ಹಿಂದುಗಡೆಯಿಂದ ಮಾತ್ರ. ಅಪ್ಪಿ ತಪ್ಪಿ ಅವಳ ಮುಂದೆ ಯಾರಾದರೂ ಹೀಗೆ ಅವಳನ್ನ ಕರೆಯುವ ಭಂಡ ಧೈರ್ಯ ಮಾಡಿದರೆ ಸಾಕು ಉರಿದು ಬೀಳುತ್ತಿದ್ದ ಪಾಪಮ್ಮ ಅಂತವರ ಜನ್ಮ ಜಾಲಾಡಿ ಝಾಡಿಸಿ ಬಿಡುತ್ತಿದ್ದಳು. ಹಾಗೊಮ್ಮೆ ಅರಿಯದೆ ಅಂದು ಅವಳ ಬಾಯಿಗೆ ಸಿಕ್ಕಿ ಸಿಗಿದು ತೋರಣ ಕಟ್ಟಿಸಿಕೊಂಡವರು ಮತ್ತೆಂದೂ ಜನ್ಮದಲ್ಲಿ ಕನಸು ನನಸಿನಲ್ಲಿಯೂ ಸಹ ಆ ಬಾಯಿಬಡುಕಿಯ ಮಾತಿನ ಕೊರಂಬುಗಳ ಧಾಳಿಗೆ ಸಿಕ್ಕಿಹಾಕಿಕೊಂಡು ನರಳುವ ಸಾಹಸಕ್ಕಿಳಿಯುತ್ತಿರಲಿಲ್ಲ. ಪಾಪಮ್ಮನ ಹರಿತಗೊಳಿಸಿದಂತಿದ್ದ ಚುರುಕು ನಾಲಗೆಯ ಶಕ್ತಿಯೆಂದರೆ ಅದು.

ಅಂತಾ ಒಡಕು ವಾಲಗದ ಪಾಪಮ್ಮ ತನ್ನ ನಿತ್ಯದ ವ್ಯಾಪಾರವನ್ನ ಬೆಳ್ಳಂಬೆಳಗ್ಯೆಯೆ ಆರಂಭಿಸಲು ಹುಲ್ಲಿನ ಕಟ್ಟುಗಳನ್ನ ಗಾಡಿಖಾನೆಯ ಮುಂದೆ ರಾಶಿ ಹಾಕಿಕೊಂಡು ಸಂಭವನೀಯ ಗಿರಾಕಿಗಳ ನಿರೀಕ್ಷೆಯಲ್ಲಿ ಕಾಯುತ್ತಿದ್ದಳು. ಇವನನ್ನ ಅಪರೂಪಕ್ಕೆ ಕಂಡವಳೆ ಅದೂ ಇದೂ ಮಾತಿಗಾರಂಭಿಸಿ ವೀಳ್ಯದ ಖರ್ಚಿಗೆ ನಾಲ್ಕು ಕಾಸು ಕೇಳಿ ಇಸಿದುಕೊಂಡಳು. ಅವಳ ಒಡನಾಟವಿದ್ದ ಅವನೂ ಸಹ ನಗುನಗುತ್ತಲೆ ತಕರಾರು ಮಾಡದೆ ಕಾಸು ಕೊಟ್ಟ. ಗಾಡಿಗನಿಗೆ ಕುದುರೆಯ ವಿಷಮ ಸ್ಥಿತಿ ಹೇಳಿ ಶೀಘ್ರವಾಗಿ ಶೀತಕ್ಕೆ ಔಷಧಿಯನ್ನ ಅರೆದು ಕೊಡುವಂತೆ ವಿನಂತಿಸಿದ. ಔಷಧಿ ಅರೆದು ಕೊಡಲು ಸಮಯವಿದ್ದ ಕಾರಣ "ಏನ್ ಪಾಪಮ್ಮ ಬಾಬಯ್ಯನ ವಿಚಾರ? ಗೋಪಿ ಅಂದ್ರೆ ಮುದುಕ ನಸುಕಿನಲ್ಲೆ ಕೆಂಡಾಮಂಡಲವಾದನಲ್ಲ?" ಅಂತ ವಿಷಯ ಪ್ರಸ್ತಾವಿಸಿದ. ಆಗಷ್ಟೆ ಸುಣ್ಣ ಸವರಿದ್ದ ಕಡು ಖಾರದ ಅಂಬಾಡಿ ಎಲೆ ಮೆದ್ದು ಚುರು ಚುರುಗುಟ್ಟುತ್ತಿದ್ದ ಪಾಪಮ್ಮನ ನಾಲಗೆಗೆ ಜೀವ ಬಂದು ಅವಳ ಬೊಂಬಾಯಿ ಬಾಯಿಯ ತೂಬು ಕೊಚ್ಚಿಕೊಂಡು ಹೋಗಿ ಮಾತಿನ ದಭದಭೆ ಉಕ್ಕಿ ಹರಿಯಲು ಅಷ್ಟು ಪ್ರಚೋದನೆ ಸಾಕಾಯಿತು.

ಪಾಪಮ್ಮನ ಪ್ರಕಾರ ಅದೇನೂ ಬಹಳ ಗಹನ ವಿಚಾರವಾಗಿರಲಿಲ್ಲ. ಆದರೆ ಇತ್ತೀಚೆಗೆ ಗೋಪಿಯ ಪೋಲಿತನ ಹೆಚ್ಚುತ್ತಿದ್ದುದೆ ಬಾಬಯ್ಯ ಉರಿದೇಳಲು ಕಾರಣವಾಗಿತ್ತು. ಹಾಗಂತ ಗೋಪಿಯೇನು ಊರು ಮೇಯುವ ಚಾಳಿಗಿಳಿದಿರಲಿಲ್ಲ. ತುಂಬಿ ತುಳುಕಲಾರಂಭಿಸಿದ್ದ ಅವನ ರಸಿಕತೆಗೆ ಬಲಿಯಾದ ರತಿ ಸ್ವತಃ ಅವನ ಹೆಂಡತಿಯೆ! ತನ್ನೊಂದಿಗೆ ಒಂದೆ ಮುಹೂರ್ತದಲ್ಲಿ ಸಂಸಾರವಂದಿಗನಾಗಿದ್ದ ಗೋಪಿಗೆ ತನ್ನ ರಾಜನಿಗಿಂತ ಮೂರು ತಿಂಗಳಷ್ಟೆ ಕಿರಿಯ ಹೆಣ್ಣುಮಗುವಿತ್ತು. ಅದಾಗಿ ಹೆಚ್ಚು ಕಡಿಮೆ ವರ್ಷದ ಮೇಲೆ ತಿಂಗಳೆರಡು ಕಳೆಯುತ್ತಾ ಬಂದಿವೆ. ಆದರೆ ಆತನಕ ಚುರುಕಾಗಿ ಬಾಬಯ್ಯನ ಗೊಂಬೆ ತಯಾರಿಕೆಯ ಉದ್ಯಮದಲ್ಲಿ ವಿಧೇಯ ವಿದ್ಯಾರ್ಥಿಯಂತೆ ಕೆಲಸ ಕಲಿತ ಗೋಪಿ ಹೊರಗೆ ಹಮಾಲನಾಗಿಯೂ ಮನೆಯೊಳಗೆ ಬಾಬಯ್ಯನ ಸಹಾಯಕನಾಗಿಯೂ ಸಂಸಾರದ ಭಾರ ವಹಿಸಿಕೊಂಡು ಮುನ್ನಡೆಯುತ್ತಿದ್ದವˌ ಕೆಲಸ ಕಡಿಮೆಯಿರುವ ಈ ಚಳಿಗಾಲದಲ್ಲಿ ಮಾತ್ರ ಸಂಸಾರವನ್ನ ಹೆಚ್ಚಿಸುವ ಘನಕಾರ್ಯದಲ್ಲಿ ಸಂಪೂರ್ಣ ತೊಡಗಿಕೊಂಡು ಬಿಟ್ಟಿದ್ದ. ಹಗಲಾಗಿ ಬೆಳಕು ಕಣ್ಣು ಕುಕ್ಕುವಷ್ಟು ನಿಚ್ಚಳವಾದರೂ ಉಪ್ಪರಿಗೆಯ ಶಯನದ ಕೋಣೆಯಿಂದ ಗಂಡ ಹೆಂಡಿರು ಇಳಿದು ಬರುತ್ತಿರಲಿಲ್ಲ! ಹೇಗೂ ಈಗ ಕೆಲಸವಿಲ್ಲವಿಲ್ಲ ಪ್ರಣಯ ಕೇಳಿಯನ್ನಾದರೂ ನಡೆಸೋಣ ಅನ್ನೋದು ಅವನ ಧೋರಣೆ. ಹೀಗಾಗಿ ಇತ್ತೀಚೆಗೆ ನಸುಕಿನಲ್ಲಿಯೂ ಅವನ ಪ್ರೇಮ ಕಲಾಪ ತಾರಕಕ್ಕೇರುವುದೂ ಇತ್ತು. ಆದರೆ ಮುಂಜಾನೆ ಚಳಿಗೆ ಸಶಬ್ಧವಾಗಿ ಮಲಗುವ ಮನೆಯಿಂದ ಹೊರಡುತ್ತಿದ್ದ ಮಗಳು ಅಳಿಯನ ಪ್ರಣಯ ಗೋಷ್ಠಿ ಹೆಂಡತಿಯಿಲ್ಲದೆ ಒತ್ತಾಯದ ಬ್ರಹ್ಮಚಾರಿಯಾಗಿದ್ದ ಬಾಬಯ್ಯನಿಗೆ ಕಿರಿಕಿರಿ ಹುಟ್ಟಿಸುತ್ತಿತ್ತು. ಎಲ್ಲರೂ ಹಗಲು ಮೂಡುವ ಮೊದಲೆ ಎದ್ದು ಕೆಲಸಗಳತ್ತ ಹೊರಳಿದರೆ ಗೋಪಿ ಹಗಲಾಗುತ್ತಿದ್ದುದೆ ತಡ ಹೆಂಡತಿಯತ್ತ ಹೊರಳಿ ಅವಳನ್ನ ತನ್ನ ಪಕ್ಕಕ್ಕೆಳೆದುಕೊಳ್ಳುತ್ತಿದ್ದ. ವಿಷಯ ಇಷ್ಟೆ.

ಆದರೆ ಸ್ವಲ್ಪ ಹೊತ್ತಿನ ಮುಂಚಿನ ಬಾಬಯ್ಯನ ನಾಟಕೀಯ ಪ್ರತಿಕ್ರಿಯೆ ನೆನಪಾಗಿˌ ಅದಕ್ಕೆ ಸರಿಯಾಗಿ ಅಭಿನಯ ಶಾರದೆಯಂತೆ ಇದರ ಹಿಂದಿನ ಕಾರಣವನ್ನು ಪಾಪಮ್ಮ ಬಣ್ಣಿಸಿದ ಪರಿ ಕೇಳಿ ಹೊಟ್ಟೆ ಹುಣ್ಣಾಗುವಂತೆ ಅವನು ಜೋರಾಗಿ ನಕ್ಕ. ಅಲ್ಲಾ ಆ ಊರಿಗೆ ಬಂದು ಸೇರಿ ಆಗಲೆ ವರ್ಷ ನಾಲ್ಕಾಗಿದ್ದರೂˌ ಬಾಬಯ್ಯನ ಮನೆಯಳಿಯನಾಗಿ ವರ್ಷವೆರಡು ಮೀರಿದ್ದರೂ ಇನ್ನೂ ನೆಟ್ಟಗೆ ನಾಲ್ಕು ಸಾಲು ಸ್ಥಳಿಯ ಭಾಷೆ ಕಲಿತಿರದ ಸೋಮಾರಿ ಗೋಪಿ ಹಾಗೂ ಗೋಪಿಯ ಭಾಷೆಯ ಓನಾಮ ಅರಿತಿರದ ಅವನ ಮಡದಿ ಅದಿನ್ಯಾವ ಭಾಷೆಯಲ್ಲಿ ಪರಸ್ಪರ ತಮ್ಮ ಪ್ರಣಯ ವ್ಯವಹಾರ ನಡೆಸುತ್ತಾರೋ! ಒಬ್ಬರ ಭಾಷೆ ಇನ್ನೊಬ್ಬರಿಗೆ ಅರ್ಥವಾಗದ ಹೊತ್ತಿಗೆ ಹೀಗೆˌ ಇನ್ನು ಇಬ್ಬರಿಗೂ ಇಬ್ಬರ ನುಡಿಗಳೂ ಅರ್ಥವಾಗುವಂತಿದ್ದರೆ ಇವರಿಬ್ಬರನ್ನೂ ಹಿಡಿದು ನಿಲ್ಲಿಸಲಿಕ್ಕಾಗುತ್ತಿರಲಿಲ್ಲವಲ್ಲ! ಅನ್ನುವ ಪೋಲಿ ಆಲೋಚನೆ ಮನಸೊಳಗೆ ಸುಳಿದೊಡನೆ ಮತ್ತಷ್ಟು ಜೋರಾಗಿ ನಕ್ಕ. ಜೊತೆಗೆ ಜುಲಮೆಗೆ ಅವಳೂ ಚೂರು ಹಲ್ಲು ಕಿರಿದಳಾದರೂˌ ಅಲ್ಲಾ ತಾನು ಹೇಳಿದ ಈ ಗಂಡ ಹೆಂಡಿರ ಪೋಲಿ ಕಥೆಯಲ್ಲಿ ಅಷ್ಟೊಂದು ಜೋರಾಗಿ ಗಹಗಹಿಸಿ ನಗುವಷ್ಟು ತಮಾಷೆಯಾದರೂ ಏನಿತ್ತು? ಅನ್ನೋದೆ ಅರ್ಥವಾಗದೆ ಪಾಪಮ್ಮ ಕಕ್ಕಾಬಿಕ್ಕಿಯಾಗಿ ನಿಂತಿದ್ದಳು. ಅದು ಅರ್ಥವಾಗುವ ವಯಸ್ಸನ್ನ ಪಾಪಮ್ಮ ಅದಾಗಲೆ ದಾಟಿಯಾಗಿತ್ತು. ಒಂದು ವೇಳೆ ಅವನ ತುಂಟ ನಗುವಿಗೆ ಕಾರಣ ಅರಿವಾಗುವಂತಿದ್ದರೂ ಸಹˌ ಅವನ ಮನೋವ್ಯಾಪಾರವನ್ನ ಅರಿತು ಅದರ ಆಲೋಚನೆಗಳನ್ನ ಓದುವ ಅತಿಮಾನುಷ ಶಕ್ತಿ ಅವಳಿಗಿರಲಿಲ್ಲವಲ್ಲ!

ಹಸಿರು ಮದ್ದನ್ನ ಗಾಡಿಗನೂ ಆಗಿರುವ ಅವನ ಹೆಂಡತಿಯ ಮಾವ ಅರೆದು ಕುಪ್ಪಿಗೆ ಸುರಿದು ಕೊಟ್ಟರೂ ಈ ರಸಿಕ ಚಕ್ರವರ್ತಿ ಗೋಪಿಯ ಪತ್ತೆಯಿಲ್ಲ! ಸರಿ ಈಗ ತಾನೆ ಪುನಃ ಅವನ ಮನೆಯಾಗಿ ಹೋಗಿ ಇನ್ನೂ ಎದ್ದೇಳದೆ ಶೇಲೆ ಮಾಡುತ್ತಿದ್ದರೆ ಆ ರಸಿಕ ಚಕ್ರವರ್ತಿಯನ್ನ ಒದ್ದು ಎಬ್ಬಿಸಿ ಬರಿ ಮೈಯಲ್ಲಾದ್ರೂ ಸರಿ ಕುತ್ತಿಗೆ ಹಿಡಿದು ಎಳೆದುಕೊಂಡು ಹೋಗೋದೆ ಅಂತ ನಿರ್ಧರಿಸದವನೆ ದಾಪುಗಾಲು ಹಾಕುತ್ತಾ ಬಾಬಯ್ಯನ ಮನೆ ಕಡೆಗೆ ಅವನು ಹೆಜ್ಜೆ ಹಾಕಿದ. ಗಾಡಿಗನಿಗೆ ಔಷಧಿಯ ಕಾಸು ಕೊಟ್ಟು ಹೊರಟವನಿಗೆ ತನ್ನ ಹುಲ್ಲಿನ ದಾಸ್ತಾನು ಖಾಲಿಯಾಗುತ್ತಾ ಬಂದಿದೆಯೆಂದೂ ಸೋಮ ಸರೋವರದ ಮಂಜಿನ ತೆರೆ ಮತ್ತೆ ನೀರಾಗಿ ಹರಿಯುವ ಪಕ್ಷದ ಒಳಗೆ ತಾನು ಅವನನ್ನ ಹುಡುಕಿಕೊಂಡು ತೋಟದ ಮನೆಗೆ ಬರುವುದಾಗಿಯೂˌ ಒಂದೆರಡು ಮೆದೆ ರೈ ಹುಲ್ಲುˌ ಕಬ್ಬಿನ ಜಲ್ಲೆಯ ಜೊಂಡುˌ ಕಾಕಂಬಿ ಹಾಗೂ ಒಂದಷ್ಟು ಪೌಂಡು ಗೋವಿನ ಜೋಳವನ್ನ ತನಗೆ ಮಾರಿ ಉಪಕರಿಸಬೇಕೆಂದು ಪಾಪಮ್ಮ ಬೆನ್ನ ಹಿಂದಿದ್ದ ಕೂಗಿ ಹೇಳಿ ಮುನ್ಸೂಚನೆ ಕೊಟ್ಟಳು. ಇವನೂ ಆಗಬಹುದು ಎಂದು ಕೂಗಿ ಒಪ್ಪಿಗೆ ಸೂಚಿಸುತ್ತಲೆ ಮುನ್ನಡೆದ.

ಒಡಕು ಬಾಯಿಯ ಆರೋಪ ಅದೇನೆ ಇದ್ದರೂ ಪಾಪಮ್ಮನ ಮನಸು ಮಾತ್ರ ಸ್ವಚ್ಛ. ಅದೆಷ್ಟೆ ಊರಿಂದೂರಿಗೆ ಸುದ್ದಿ ಹರಡಿದರೂ ಸಹ ಆ ಮುದುಕಿ ಎಂದೂ ಪರಸ್ಪರರ ವಿರುದ್ಧ ಇಲ್ಲಸಲ್ಲದ ಚಾಡಿ ಮಾತು ಹೇಳಿ ಜಗಳ ಹಚ್ಚಿ ಹಾಕಿ ಯಾರದ್ದೂ ಮನೆ ಮನ ಒಡೆದವಳಲ್ಲ. ಈಗ ಇವನಿಗೆ ಗೋಪಿಯ ಕಚ್ಚೆ ಸಡಿಲವಾಗಿರುವ ಸುದ್ದಿ ಮುಟ್ಟಿಸಿದವಳು ಇವನಿಂದ ಇವನ ಹೆಂಡತಿಯ ಎರಡನೆ ಬಸಿರಿನ ವಿಚಾರವನ್ನ ಮೆಲ್ಲನೆ ಬಾಯಿ ಬಿಡಿಸಿಯಾಗಿದೆ. ಖಂಡಿತವಾಗಿ ಅದನ್ನ ಊರಲ್ಲಿ ಕೇಳದವರಿಗೂ ಕರೆದು ಹೇಳದಿರಲಾರಳು. ಸ್ವತಃ ಅವಳ ಮಾವನಿಗೂ ಗೊತ್ತಿಲ್ಲದ ಆ ವಿಷಯ ಅವನ ಕಿವಿಗೂ ಪಾಪಮ್ಮನ ಬಾಯಿಯೆ ಸುರಿದರೂ ಅದರಲ್ಲಿ ಆಶ್ಚರ್ಯ ಪಡುವಂತದ್ದು ಏನೂ ಇರಲಿಲ್ಲ.

ಚಳಿಯ ಮಂದರಿ ಮೆಲ್ಲ ಮೆಲ್ಲನೆ ಸರಿಸಿ ಪಟ್ಟಣ ಪುಟ್ಟದಾಗಿ ಮೈ ಮುರಿದು ಹೊಸತೊಂದು ಹಗಲಿಗೆ ಹೊಂದಿಕೊಳ್ಳತೊಡಗಿತ್ತು. ಸಶಬ್ಧವಾಗಿ ಮಾನವರ ಪ್ರಾಣಿ ಪಕ್ಷಿಗಳ ಕಲರವಗಳೊಂದಿಗೆ ಆಗಷ್ಟೆ ಮೈಮುರಿದೇಳುತ್ತಿತ್ತು ಊರು.



***********


ಬೆಳ್ಳನೆ ಬೆಳಕು ಬಿಟ್ಟುಬಿಟ್ಟು ಸುರಿಯುತ್ತಿದ್ದ ಹಿಮದ ಮಳೆಯ ನಡುವೆಯೂ ನಿಧಾನವಾಗಿ ಕತ್ತಲನ್ನ ಕತ್ತು ಹಿಡಿದು ಊರಿಂದ ಹೊರಗಟ್ಟಿ ತನ್ನ ಸಾಮ್ರಾಜ್ಯವನ್ನ ಯಶಸ್ವಿಯಾಗಿ ಸ್ಥಾಪಿಸಿಯಾಗಿತ್ತು. ಅಲ್ಲಲ್ಲಿ ಮನೆಗಳ ಗಂಡಸರು ಹೊರಡುತ್ತಿದ್ದರು.

ಬಾಬಯ್ಯನ ಮನೆ ಹತ್ತಿರವಾಗುತ್ತಿದ್ದಂತೆ ಪರಸ್ಪರ ಇಬ್ಬರಿಗೂ ಅರ್ಥವಾಗದ ಭಾಷೆಗಳಲ್ಲಿ ಅಳಿಯ ಮಾವ ಬೈದಾಡಿಕೊಳ್ಳುತ್ತಾ ಇರೋದು ಕಿವಿಗಪ್ಪಳಿಸಿತು. ಬಾಬಯ್ಯನ ಅಸಹನೆ ಅವನ ಮಾತುಗಳಲ್ಲಡಗಿದ್ದರೆ ಹುಡುಗು ಮುಂಡೆಗಂಡ ಗೋಪಿ ನೇರವಾಗಿ ಪೋಲಿ ಬೈಗುಳಗಳನ್ನೆ ಉಪಯೋಗಿಸಿ ಮಾವನ ಆಕ್ರಮಣವನ್ನ ಎದುರಿಸುತ್ತಿದ್ದ. ಸದ್ಯ ಊರಿನ ಯಾರಿಗೂ ಅವನ ಭಾಷೆಯಾಗಲಿˌ ಅದನ್ನವನು ಆಡುವ ಧಾಟಿಯಾಗಲಿ ಅರ್ಥವಾಗದಿದ್ದುದರಿಂದ ಬಚಾವು. ಇಲ್ಲದಿದ್ದರೆ ಬೆಳ್ಳಂಬೆಳಗ್ಯೆ ಊರಿನ ಕೆಲವರಿಗಾದರೂ ಅವನ ಅಶ್ಲೀಲ ಬೈಗುಳಗಳು ಪುಗಸಟ್ಟೆ ಮನರಂಜನೆ ಕೊಡುತ್ತಿದ್ದುದರಲ್ಲಿ ಸಂಶಯವಿಲ್ಲ. ದೂರದಿಂದ ಇವನ ಆಗಮನವನ್ನ ಕಂಡವನೆ ಗೋಪಿ ಬೇಲಿ ಬದಿವರೆಗೂ ಬಂದು ಇವನನ್ನ ಎದುರುಗೊಂಡ. ಈಗಷ್ಟೆ ಮಂಚ ಬಿಟ್ಟಿಳಿದ ಸೋಮಾರಿ ಕಳೆ ಢಾಳವಾಗಿ ಅವನ ಮುಖದಲ್ಲಿ ಕಾಣಿಸಿತು. ಕಣ್ಣಿನ ಪಿಸುರು ಹೌದು ಅದು ನಿಜ ಅನ್ನುವ ಸಾಕ್ಷಿ ಹೇಳಿತು. ಇವನ ಮುಖ ದರ್ಶನವಾದದ್ದೆ ಗೋಪಿ ಆನಂದದಿಂದ ಕಿವಿಯಿಂದ ಕಿವಿಯವರೆಗೆ ಹಲ್ಲು ಕಿರಿಯುತ್ತಾ ಇವನನ್ನ ಎದುರುಗೊಂಡ. ಏನೋ ಭಂಡಬಡ್ಡಿ ಮಗನೆ ಬೆಳ್ಳಂಬೆಳಗ್ಯೆ ಅದೇನೋ ನಿನ್ನ ಪ್ರಣಯ ಲೀಲೆ ಅಂತ ಬೈದವನಿಗೆ ತಾನು ಮುಖ ಪ್ರಕ್ಷಾಳನ ಮಾಡಿ ಸಂಗಡ ಬರುವುದಾಗಿಯೂˌ ಇವನು ಹೆಂಡತಿ ಮಾಡಿಕೊಡುವ ಚಹಾ ಸವಿಯಬೇಕಂತಲೂ ಹೇಳುತ್ತಾ ಬೇವಿನ ಕಡ್ಡಿಯನ್ನ ಕಚ್ಚುತ್ತಾ ಹಲ್ಲು ತಿಕ್ಕಿಕೊಳ್ಳ ತೊಡಗಿದ ಗೋಪಿ ಹಿಂದಿನ ಬಚ್ಚಲ ಕಡೆಗೆ  ಪರಾರಿಯಾದ.

ಮನೆಯ ಹಜಾರದಲ್ಲಿ ಚೂರು ಕತ್ತಲಿತ್ತು ಹೊರಗಿನಿಂದ ಬಂದ ಅವನಿಗೆ ಆ ಮಂದ ಬೆಳಕಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ಬಾಬಯ್ಯನ ಜೊತೆ ಅದೂ ಇದೂ ಕಷ್ಟ ಸುಖ ಮಾತನಾಡುತ್ತಿದ್ದಂತೆ ಗೋಪಿಯ ಹೆಂಡತಿ ತಂದುಕೊಟ್ಟ ಹಾಲು ಸಕ್ಕರೆ ಸುರಿದ ಹಬೆಯಾಡುವ ಚಹಾ ಹಾಗೂ ಇವನೆ ತಂದುಕೊಟ್ಟಿದ್ದ ಜೇನು ಜೊತೆಗೆ ಮನೆಯ ಎಮ್ಮೆಯ ಬೆಣ್ಣೆ ಸವರಿದ್ದ ಅಂಗಡಿಯ ಗಟ್ಟಿರೊಟ್ಟಿಯ ತುಂಡು ಆ ಕಾಡುವ ಚಳಿಗೆ ಹಿತಾನುಭವ ಹುಟ್ಟಿಸಿತು. ತನ್ನ ಗಂಡನ ಹಾಗೂ ಅಪ್ಪನ ಮಧ್ಯೆ ಮುಂಜಾನೆಯೆ ಆರಂಭವಾಗಿರೋ ಕೋಳಿ ಜಗಳˌ ಅದಕ್ಕೆ ಮೂಲ ಕಾರಣ ನಮ್ಮ ಪ್ರೇಮ ಕಲಾಪದ ಅತಿರೇಕವೆ ಅನ್ನೋದೇನಾದರೂ ಒಂದು ವೇಳೆ ಅವನ ಅರಿವಿಗೆ ಬಂದಿದ್ದರೆ! ಅನ್ನುವ ಅನುಮಾನ ಮನದೊಳಗೆ ಹೊತ್ತಿದ್ದ ಆ ಹುಡುಗಿ ಎಂದಿನಂತೆ ಹೆಚ್ಚು ಹರಟೆ ಹೊಡೆಯದೆ ನಾಚಿಕೆಯಿಂದ ನೀರಾದವಳಂತೆ ಬಂದಷ್ಟೆ ಬೇಗ ಅಲ್ಲಿಂದ ಓಡಿ ಹೋಗಿ ಬದುಕಿದೆಯ ಬಡ ಜೀವ ಅಂದು ಕೊಂಡಳು. ಎಷ್ಟಾದರೂ ಹೆಂಗಸರಿಗೆ ಚೂರು ನಾಚಿಕೆ ಜಾಸ್ತಿ ನಿರ್ಲಜ್ಜ ಗಂಡಸರ ಭಂಡತನ ಅವರಿಗಿರಲು ಹೇಗೆ ಸಾಧ್ಯ ಹೇಳಿ?

ಬಾಬಯ್ಯನ ಜೊತೆಗಿನ ಸಂಭಾಷಣೆಯುದ್ದ ಅವನು ಈ ಪೋಲಿಪುಟ್ಟ ಅಳಿಮಯ್ಯನ ನಡುವಳಿಕೆಯಿಂದ ಅನುಭವಿಸುತ್ತಿರುವ ಕಿರಿಕಿರಿಯ ಕುರಿತ ಕಷ್ಟದ ಪಟ್ಟಿಯೆ ಉದ್ದವಾಗಿತ್ತೆ ಹೊರತುˌ ಅದರಲ್ಲೆಲ್ಲೂ ಸುಖದ ಅಂಶಗಳು ಅಷ್ಟಾಗಿ ಇದ್ದಿರಲಿಲ್ಲ. ಗೆಳೆಯನಾದ ನೀನಾದರೂ ಚೂರು ಈ ಹುಡುಗು ಬುದ್ಧಿಯವಕ್ಕೆ ಕಿವಿ ಹಿಂಡಿಯಾದರೂ ಬುದ್ಧಿ ಹೇಳಪ್ಪˌ ದುಡಿಯವ ಕಾಲದಲ್ಲಿ ಹೀಗೆ ಸುಖಲೋಲುಪತೆಯಲ್ಲಿ ಜಡ ಬಿದ್ದು ಹೋದರೆ ಮನೆ ಉಳಿದೀತ ಅಂತ ಮುದುಕ ಮಾತು ಮುಗಿಸುವ ಹೊತ್ತಿಗೆ ಸರಿಯಾಗಿ ಚಳಿಯಿಂದ ರಕ್ಷಣೆಗೆ ತಕ್ಕ ಧಿರಿಸು ಧರಿಸಿದ ಗೋಪಿ ತಾನೂ ಒಂದು ಚಹಾದ ಬಟ್ಟಲು ಹಿಡಿದು ಅಲ್ಲಿ ಹಾಜರಾದ. ಇವರ ಭಾಷೆ ಬಾರದ ಕಾರಣ ಅವರ ಸಂಭಾಷಣೆಯ ಸಾರ ಅವನಿಗರ್ಥವಾಗುವುದು ಅಷ್ಟರಲ್ಲೆ ಇತ್ತು. ಆದರೂ ಇವರಿಬ್ಬರೂ ವಿಷಯ ಬದಲಿಸಿ ವಾತಾವರಣದ ವೇಪರಿತ್ಯ ಹಾಗೂ ಕೊರೆವ ಚಳಿಯ ಈ ಹಿಮಮಳೆಯ ಅಸಾಧ್ಯ ಹಾವಳಿಗಳ ಬಗ್ಗೆ ಹೊರಳಿಕೊಂಡರು.

ತಾನು ಈ ಊರಿಗೆ ಬಂದು ಬರುವ ಮಠದ ಜಾತ್ರೆಗೆ ಸರಿಯಾಗಿ ಇಪ್ಪತ್ತು ವರ್ಷ ತುಂಬುತ್ತದೆಯಂತಲೂˌ ಅದಾಗಲೆ ಸಂಸಾರಸ್ಥನಾಗಿದ್ದ ತಾನು ಮಡದಿ ಹಾಗೂ ಮೂರು ವರ್ಷದ ಗಂಡು ಮಗುವಿನೊಂದಿಗೆ ಮತ್ತಷ್ಟು ನೆಮ್ಮದಿಯ ನೆಲೆಯನ್ನರಸಿ ಈ ಕಾಣದೂರಿಗೆ ಬಂದ ಹೊಸತರಲ್ಲಿ ಇಲ್ಲಿ ಕಂಡ ಭಾರಿ ಹಿಮಪಾತದ ಚಳಿಗಾಲ ಇದು ಎರಡನೆಯದಂತಲೂˌ ಇಲ್ಲಿ ಬಂದ ಮರು ವರ್ಷವೆ ಜನಿಸಿದ ತನ್ನ ಮಗಳು ಹುಟ್ಟಿ ಕೇವಲ ನಾಲ್ಕು ವರ್ಷದ ಕೂಸಾಗಿರುವಾಗ ಇಂತಹದ್ದೆ ಒಂದು ಭಯಂಕರ ಚಳಿಗಾಲವನ್ನ ಆಗಿನ್ನೂ ನವವಲಸಿಗರ ಆರಂಭದ ತಂಡ ಮಾತ್ರ ಆಗಮಿಸಿ ಕಟ್ಟಿಕೊಂಡಿದ್ದ ಈ ಹೊಸ ಪಟ್ಟಣದಲ್ಲಿ ಕಂಡು ಅನುಭವಿಸಿ ಬೆಚ್ಚಿ ಬೆದರಿ ಹೈರಾಣಾಗಿ ಹೋಗಿದ್ದ ಕಥೆಯನ್ನ ಬಾಬಯ್ಯ ವಿವರಿಸಿದ. ತನ್ನ ಹೆಂಡತಿಗೆ ಈ ಪರಿಸರದ ಹವೆ ಆಗಿ ಬರಲಿಲ್ಲವೆಂದೂˌ ಆ ಭಯಂಕರ ಚಳಿಗಾಲದ ನಂತರ ಅವಳ ಉಬ್ಬಸದ ಕಾಯಿಲೆ ಅವಳನ್ನ ವರ್ಷ ವರ್ಷಕ್ಕೂ ಹಿಂಡಿ ಹಿಪ್ಪೆ ಮಾಡಿ ಮುಂದಿನ ಮೂರು ವರ್ಷಗಳೊಳಗೇನೆ ಅವಳ ಇಹಲೋಕದ ವ್ಯಾಪಾರ ಮುಗಿದು ಪ್ರಭುವಿನ ಪಾದವನ್ನವಳು ಸೇರಿಕೊಂಡಳೆಂದೂ ಅದೆಲ್ಲಾ ನೆನ್ನೆ ಮೊನ್ನೆ ನಡೆದ ಸಂಗತಿಯೇನೋ ಅನ್ನುವಂತೆ ಹೇಳ ಹೇಳುತ್ತಲೆ ಅವನು ಹನಿಗಣ್ಣಾಗಿ ಗಂಟಲು ಕಟ್ಟಿಕೊಂಡು ಮುಂದಿನ ಮಾತುಗಳು ಸ್ಪಷ್ಟವಾಗದೆ ಗೊಗ್ಗರಿಸಿತು. ಅಷ್ಟರಲ್ಲಿ ಗೋಪಿಯ ಚಹಾ ಸೇವನೆಯೂ ಮುಗಿದು ಬಾಬಯ್ಯನಿಂದ ಬೀಳ್ಕೊಂಡ ಅವನು ಗೋಪಿಯ  ಸಂಗಡ ತನ್ನ ಮನೆಯತ್ತ ಹೆಜ್ಜೆ ಹಾಕಿದ.

ಗೋಪಿಯ ಈ ಪ್ರಣಯ ಚೇಷ್ಟೆಯ ಕಥೆ ಇಷ್ಟೊಂದು ವಿಪರೀತಕ್ಕೆ ಏರಿರೋದರ ಬಗ್ಗೆ ಅರಿವಿದ್ದಿರದ ಇವನು ಆ ಅಯೋಗ್ಯನ ಬೇಜವಬ್ದಾರಿಗೆ ದಾರಿಯುದ್ಧ ಹೀನಾಮಾನ ರೇಗಿದ. ಅಲ್ಲ ಕಣೋ ಪೋಲಿ ಮುಂಡೆಗಂಡ ಬರಿ ಮಕ್ಳು ಮಾಡಿದರೆ ಹೆಂಗೋ? ನಾಳೆ ಅವಕ್ಕೆ ಸರಿಯಾದ ನೆಮ್ಮದಿಯ ಬದುಕು ಕೊಡುವ ಹೊಣೆಗಾರಿಕೆಯಿಲ್ಲದ ಮೇಲೆ ಆ ಮಕ್ಳನ್ನ ಕೇಳಿದವರಿಗೆ ಜಾತ್ರೆಯಲ್ಲಿ ಹಿಕರಿ ಬೇರಿನ ಗೊಂಬೆಗಳಂತೆ ಮಾರಿ ಬಿಡಕ್ಕಾಗ್ತದೇನಲೆ ಭಡವ? ಮೊದ್ಲು ದುಡಿಮೆಗೆ ಗಮನ ಕೊಡು. ದಿನ ಬೆಳಗಾದ್ರೆ ಹೀಗೆ ಪೋಲಿ ಪುಟ್ಟನಾಗ್ತಾ ಹೋದ್ರೆˌ ಈಗ ಕೇವಲ ನಿನ್ನ ಮಾವ ಉಗಿತಿದಾನೆ. ನಾಳೆ ಕಂಡಕಂಡವಲೆಲ್ಲ ಉಗಿದುಗಿದು ಉಪ್ಪಿನಕಾಯಿ ಹಾಕ್ತಾರೆ ನೋಡ್ತಿರು ಅಂತ ಎಕ್ಕಾಮಕ್ಕ ಗದರಿಸುತ್ತಾ ಹೇಳಿದ. ಗೋಪಿಗೆ ಹೀಗೆ ಬೈದು ಬುದ್ಧಿ ಹೇಳುವ ಅಧಿಕಾರ ಇದ್ದದ್ದು ಆ ಊರಿನಲ್ಲಿ ಅವನಿಗೊಬ್ಬನಿಗೆ. ಅವನ ಕಾಳಜಿಯ ಬುದ್ಧಿಮಾತಿನ ನುಡಿಗಳು ಗೋಪಿಗೇನೂ ಆಕ್ಷೇಪಾರ್ಹ ಅನಿಸಲಿಲ್ಲ. ಆದರೂ ಅವನ ಪ್ಯಾಲಿ ನಗು ಹೊತ್ತ ಮುಖ ಅವನೇನು ಈ ಬದುಕುವ ಮಾರ್ಗದ ಮಾರ್ಗದರ್ಶನದ ಮಾತುಗಳಿಗೆ ಗಂಭೀರ ಸಮ್ಮತಿ ಸೂಚಿಸಿರುವ ದ್ಯೋತಕವೋ? ಇಲ್ಲಾ ಅದನ್ನೂ  ಅವನು ಹಗುರವಾಗಿ ತೆಗೆದುಕೊಂಡನೋ ಅನ್ನುವುದನ್ನ ಸ್ಪಷ್ಟ ಪಡಿಸದಂತಾಗಿಸಿತು.

ಅಷ್ಟರಲ್ಲಿ ಅವರಿಬ್ಬರೂ ಅವನ ಪೇಟೆಯ ಮನೆಗೆ ಬಂದು ಮುಟ್ಟಿದ್ದರು. ಸುಲ್ತಾನನಿಗೆ ಮೊದಲು ಔಷಧಿಯನ್ನ ಗೊಟ್ಚದಲ್ಲೆತ್ತ ಬೇಕಿತ್ತು. ಅದಕ್ಕೂ ಮೊದಲು ಆಗ ಆ ಹಾಡಿಯಲ್ಲಿ ಮಾಡಿದ್ದಂತೆ ನಸ್ಯದ ಪ್ರಯೋಗ ಮಾಡಿ ಮತ್ತೊಂದು ಸಲ ಅವನ ಕಟ್ಟಿಕೊಂಡಿದ್ದ ಮೂಗಿನ ಹೊಳ್ಳೆಗಳಿಂದ ಗರಣೆ ಗಟ್ಟಿರುವ ಸಿಂಬಳದ ಒಡಕನ್ನ ಹೊರಗೆಳೆದು ಮತ್ತದನ್ನ ಸ್ವಚ್ಛಗೊಳಿಸಿ ನೀಲಗಿರಿ ಎಣ್ಣೆ ಮೂಗಿನ ಹೊರಳೆಗಳಿಗೆ ಸೋಕಿಸಿ ಉಪಚರಿಸಬೇಕಿತ್ತು. ಗಾಡಿಖಾನೆಗೆ ತೆರಳುವ ಮುಂಚೆಯೆ ಒಲೆಯ ಮೇಲೆ ಕುದಿಯಲಿಟ್ಟಿದ್ದ ಹಿಮದ ಗಟ್ಟಿ ಕರಗಿ ನೀರಾಗಿ ಕುದಿಯಲಾರಂಭಿಸಿತ್ತು. ಅವನು ಮರು ಮಾತನಾಡದೆ ತನ್ನ ಪಾಲಿನ ಕೆಲಸದಲ್ಲಿ ನಿರತನಾದಂತೆಯೆˌ ತನ್ನ ಕೆಲಸವನ್ನಾರಂಭಿಸಿದ ಗೋಪಿ ಹಟ್ಟಿಯ ಅಟ್ಟದ ಅಟ್ಟಣಿಗೆಗೆ ಹೊಡೆದ ಮೊಳೆಗೆ ತೂಗು ಹಾಕಿದ್ದ ಮರದ ಗೊಟ್ಟಕ್ಕೆ ಅಂಟಿದ್ದ ಧೂಳು ಒರೆಸಿ ಕುದಿ ನೀರಲ್ಲಿ ಅದನ್ನ ಗಲಬರಿಸಿ ತೊಳೆದುˌ ಗಾಡಿಗ ಕುಟ್ಟಿ ಕೊಟ್ಟಿರುವ ಹಸಿರು ಮದ್ದನ್ನ ಅದರಲ್ಲಿ ಹಾಕಿ ಜೊತೆಗಷ್ಟು ಕುಟ್ಟಿದ ಕಾಳುಮೆಣಸು ಹಾಕಿ ಕಲಕಿ ಕುದುರೆಗೆ ಕುಡಿಸಬೇಕಾದ ಔಷಧಿಯನ್ನ ಸರಿಯಾದ ಪ್ರಮಾಣದಲ್ಲಿ ಸಿದ್ಧಪಡಿಸಿಟ್ಟಿದ್ದ.



***********



"ಕದಡದ ತನಕ ಕೆರೆಯ ನೀರು
ಕಮಲದ ಅವಾಸ ಬಗ್ಗಡವಲ್ಲˌ
ಮುಗಿಯದ ತನಕ ಶಿಶಿರದ ಜೋರು
ಭೂಮಿಯ ಸಹನೆಯೂ ಸಹ ಬತ್ತುವುದಿಲ್ಲ"

ಕುದುರೆಗಳು ಸಾಮಾನ್ಯವಾಗಿ ಅಪರಿಚಿತರ ಸಂಪರ್ಕಕ್ಕೆ ಬಂದರೆ ಹೆದರಿ ಗಲಿಬಿಲಿಗೊಳಗಾಗುತ್ತವೆ. ಹೀಗಾಗಿ ಅವುಗಳನ್ನ ನಿಯಂತ್ರಿಸುವವರು ಯಾವತ್ತೂ ಅವಕ್ಕೆ ಹೊಕ್ಕು ಬಳಕೆಯಿರುವ ಪರಿಚಿತರೆ ಆಗದ್ದಷ್ಟೂ ಒಳ್ಳೆಯದು. ಗೋಪಿ ಸುಲ್ತಾನನಿಗೆ ಅಪರಿಚಿತನೇನೂ ಆಗಿರಲಿಲ್ಲ. ಮದುವೆಗೆ ಮೊದಲು ಗೋಪಿ ಅವನೊಂದಿಗೆ ಹೊಸ ತೋಟದ ಮನೆಯಲ್ಲಿ ಗೇಯುತ್ತಾ ಅರೆಕಾಲಿಕ ರೈತಾಪಿ ಆಗಿದ್ದಾಗ ಈ ಸುಲ್ತಾನ ಇನ್ನೂ ಮರಿಯಾಗಿದ್ದ. ಆಗೆಲ್ಲ ಗೋಪಿಯ ಆರೈಕೆ ಸಹಜವಾಗಿ ಅವನಿಗೆ ಸಿಕ್ಕಿತ್ತು. ಅವನನ್ನು ಬಿಟ್ಟರೆ ತನ್ನ ಬೆನ್ನೇರಿ ಸವಾರಿ ಮಾಡಲು ಸುಲ್ತಾನ ಅವಕಾಶ ಈತನಕ ಇತ್ತಿರೋದು ಗೋಪಿಗೆ ಮಾತ್ರ.

ಹೀಗಾಗಿ ಪರಸ್ಪರ ಪರಿಚಯ ಹಾಗೂ ಸಲುಗೆಯಿದ್ದ ಅವನ ಉಪಸ್ಥಿತಿಯನ್ನ ಅಶ್ವ ಸಹಜವಾಗಿಯೆ ತೆಗೆದುಕೊಂಡಿತು. ಅವನು ಅದರ ಮೂಗಿನ ಒಡ್ಡು ಬಿರಿದು ನೆಲಕ್ಕೆ ಸುರಿದ ಸಿಂಬಳದ ಗಟ್ಟಿಗಳನ್ನೆಲ್ಲ ಎತ್ತಿ ಗುಡಿಸಿ ಹೊರಗೆಸೆಯುವ ಹೊತ್ತಲ್ಲಿ ಗೋಪಿ ಸುಲ್ತಾನನ ಬಳಿ ಸಾರಿ ಅಲ್ಲಿದ್ದ ಬ್ರೆಷ್ಷಿನಿಂದ ಹಿತವಾಗಿ ಅವನ ಬೆನ್ನು ಕುತ್ತಿಗೆ ಸವರಿ ಮರಳಿ ತಮ್ಮ ಸ್ನೇಹ ಸಂಬಂಧದ  ತಂತುವನ್ನ ಕುದುರೆಯೊಂದಿಗೆ ಸಾಧಿಸಿಕೊಂಡˌ ಮೆಲುವಾಗಿ ಕೆನೆದ ಕುದುರೆ ಅವನ ಪ್ರೀತಿಯ ಆರೈಕೆಗೆ ಹಿತಾನುಭವ ಅನುಭವಿಸುತ್ತಾ ಪ್ರತಿಸ್ಪಂದಿಸಿತು.

ಅದರ ವಿಶ್ವಾಸವನ್ನ ಮತ್ತಷ್ಟು ಗಿಟ್ಟಿಸಿಕೊಂಡೆ ಗೊಟ್ಟ ಎತ್ತುವ ಉಪಾಯ ಮಾಡಿದ ಗೋಪಿ ರೈ ಹುಲ್ಲಿನ ಕಟ್ಟು ಬಿಡಿಸಿ ಮತ್ತಷ್ಟು ಹುಲ್ಲನ್ನ ಸುಲ್ತಾನನ ಗೊಂತಿಗೆ ತಂದು ಸುರಿದ. ಅಷ್ಟರಲ್ಲಿ ಅವನು ಅವನ ಸಿಂಬಳವನ್ನೆಲ್ಲ ಸ್ವಚ್ಛಗೊಳಿಸಿ ಅದರ ಹನಿಗಳು ಅಂಟಿದ್ದ ಅಶ್ವದ ಕೊಳಕಾಗಿದ್ದ ಮೋರೆಯನ್ನೆಲ್ಲಾ ತೊಳೆದು ಒಣ ಬಟ್ಟೆಯಿಂದ ಒರೆಸಿಯಾಗಿತ್ತು. ಈಗ ಕುದುರೆಯನ್ನ ರಮಿಸುತ್ತಾ ಮೆಲ್ಲನೆ ಬಾಯಿ ಕಳಿಸಿ ಗೊಟ್ಟದ ಕೊಳವೆಯ ಮೂತಿಯನ್ನ ಅದರ ಹಲ್ಲುಗಳ ನಡುವೆ ಇಳಿಸಿ ತಲೆಯೆತ್ತಿಯೆ ಬಿಟ್ಟರು. ಕಟು ರುಚಿಯ ಹಸಿರು ಔಷಧಿ ಕುದುರೆಯ ಕುತ್ತಿಗೆಯಲ್ಲಿಳಿಯಿತು.

ಮನುಷ್ಯರಂತೆ ತಿಂದದ್ದನ್ನೊ ಕುಡಿದಿದ್ದನ್ನೊ ತಿರುಗಿ ತುಪ್ಪುವ ಕಲೆ ಅರಿಯದ ಕುದುರೆಯಂತ ಜಾನುವಾರು ಜಾತಿಗೆ ಸೇರಿದ ಪ್ರಾಣಿಗಳಿಗೆ ಬಾಯಿಗೆ ಬಿದ್ದ ಮದ್ದನ್ನ ನುಂಗದೆ ವಿಧಿಯೆ ಇರುವುದಿಲ್ಲ. ಹಾಗೊಮ್ಮೆ ಬಾಯಲ್ಲಿ ಕೊಂಚ ಮದ್ದು ಉಳಿದರೆ ಅವು ಕಟಬಾಯಿಯಿಂದ ಜೊಲ್ಲು ಸುರಿಸುಕೊಂಡು ನಿಂತಿರುತ್ತವೆಯೆ ಹೊರತು ಉಗಿದು ಬಾಯಿಯನ್ನ ಮುಕ್ಕಳಿಸಿ ಆ ಕಹಿಯಿಂದ ಪಾರಾಗಲು ಅವುಗಳಿಗೆ ಸಾಧ್ಯವಿರುವುದಿಲ್ಲ. ಕ್ಷಣಾರ್ಧದಲ್ಲಿ ನಡೆದು ಹೋದ ಈ ಔಷಧ ಪ್ರಾಶನದಿಂದ ಕಕ್ಕಾಬಿಕ್ಕಿಯಾದ ಸುಲ್ತಾನ ಬಾಯಿಗೆ ಬಿದ್ದ ಮದ್ದಿನ ಕಟು ರುಚಿಗೆ ಮುಖ ಕಿವಿಚಿಕೊಂಡ ಹಾಗೆ ನಿಂತುಕೊಂಡು ಮರಾ ಮೋಸದಲ್ಲಿ ತನಗದನ್ನು ಕುಡಿಸಿದ ಇವರಿಬ್ಬರನ್ನೂ ಮಿಕಿ ಮಿಕಿ ನೋಡುತ್ತಾ ನಿಂತಿತು. ಅದರ ಮೂಗಿನ ಹೊಳ್ಳೆಗಳಿಗೆ ನೀಲಗಿರಿ ತೈಲದ ಹನಿಗಳನ್ನ ಸೋಕಿಸಿದ ಮೇಲೆ ಅವನಿಗೆ ಒಂದು ಮಟ್ಟಿಗೆ ತೃಪ್ತಿಯಾಯಿತು. ಸಂಜೆ ಊರಿಗೆ ಹೊರಡುವ ಮೊದಲು ಮತ್ತೊಮ್ಮೆ ಗೊಟ್ಟ ಎತ್ತಿ ಕುದುರೆಗೆ ಔಷಧಿ ಕುಡಿಸಿದರೆ ಸಾಕುˌ ಮತ್ತೆ ನೆಗಡಿಯ ಬಾಧೆ ಕಾಡದೆ ಖಂಡಿತ ಕಡಿಮೆಯಾಗಿಯೆ ಬಿಡುತ್ತದೆ ಅನ್ನುವ ಭರವಸೆ ಅವನಿಗಿತ್ತು.

ಒಂದೆರಡು ದಿನಗಳ ಹೆಚ್ಚಿನ ಆರೈಕೆ ಇನ್ನೂ ಬೇಕಿರುತ್ತದೆ. ಮನೆಯ ಲಾಯದಲ್ಲಿ ಇನ್ನಿತರ ಜಾನುವಾರುಗಳಿಂದ ಹಾಗೂ ಹಯಗಳಿಂದ ಪ್ರತ್ಯೇಕಿಸಿ ಕಟ್ಟಿ ಆರೈಕೆ ಮಾಡಿದಷ್ಟೂ ಒಳ್ಳೆಯದು. ಸ್ವಚ್ಛ ವಾತಾವರಣದಲ್ಲಿ ಏಕಾಂಗಿಯಾಗಿ ಚಿಕಿತ್ಸೆಗೊಳಗಾಗುವ ಕುದುರೆಯ ಕಾಯಿಲೆ ಆದಷ್ಟು ಬೇಗ ಗುಣವಾಗುತ್ತದೆ. ಜೊತೆಜೊತೆಗೆ ಅವುಗಳಿಂದ ಕೊಟ್ಟಿಗೆಯ ಇನ್ನಿತರ ಜಾನುವಾರುಗಳಿಗೂ ಜೊಲ್ಲುˌ ಬಾಯ ನೊರೆ ಹಾಗೂ ಸಿಂಬಳದ ಲೋಳೆಯ ಮೂಲಕ ನೆಗಡಿಯ ಸೋಂಕು ಹರಡಿ ಹೈರಾಣಾಗಿಸಿ ಕಾಡುವುದು ಕೂಡ ತಪ್ಪುತ್ತದೆ. ಗಾಡಿಗ ಕಟ್ಟಿ ಕೊಟ್ಟಿರುವ ಹಸಿರು ಮದ್ದು ಇನ್ನೂ ನಾಲ್ಕು ದಿನಕ್ಕೆ ಸಾಲುತ್ತಿತ್ತು.

ಗೋಪಿ ವಾಸ್ತವದಲ್ಲಿ ಉಢಾಳನೇನಲ್ಲ. ಹುಡುಗು ಬುದ್ಧಿ ಹಾಗೂ ಭವಿಷ್ಯದ ಬಗ್ಗೆ ಗಂಭೀರವಾಗಿಲ್ಲದೆ ಬಂದ ಹಾಗೆ ಬಾಳನ್ನ ಎದುರಿಸುತ್ತಾ ಹೋಗುವ ಬ್ರಹ್ಮಚಾರಿ ಬಾಳ್ವೆಯ ಹಳೆಯ ಚಾಳಿಯಿಂದ ಅವನು ಇನ್ನೂ ಹೊರಬಂದಿರಲಿಲ್ಲ ಅಷ್ಟೆ. ಪುಟ್ಟ ಮಕ್ಕಳೆಂದರೆ ಅವನಿಗೆ ಮುಚ್ಚಟೆ ಜಾಸ್ತಿ. ಅವನ ಮಗಳಿಗೆ ಅಮ್ಮನಿಗಿಂತ ಅವಳಪ್ಪನೆ ಅಚ್ಚುಮೆಚ್ಚು. ಇನ್ನೂ ತೊದಲು ನುಡಿಗಳನ್ನ ನುಡಿಯಲಾರಂಭಿರುವ ಆ ಬೊಂಬೆಯಂತ ಕೂಸಿಗೆ ಅಮ್ಮನ ಭಾಷೆಯಷ್ಟೆ ಸ್ಥಳಿಯವಲ್ಲದ ಅಪ್ಪನಾಡುವ ಭಾಷೆಯೂ ಅರ್ಥವಾಗುತ್ತದೆ. ಅಪ್ಪನ ಮಾತುಗಳನ್ನ ಆಲಿಸುವ ಮಗು ಅದನ್ನೆ ಪುನರುಚ್ಛರಿಸಿ ಮತ್ತೆ ಮತ್ತೆ ಅದನ್ನೆ ಪಠಿಸಿ ಅಪ್ಪನೊಂದಿಗೂ ಆಡಿ ಅವನ ಮುದ್ದನ್ನ ಗಿಟ್ಟಿಸಿಕೊಳ್ಳುತ್ತದೆ. ಇವನ ಮಗ ರಾಜನಿಗೂ ಗೋಪಿ  ಚಿಕ್ಕಪ್ಪ ಅಂದರೆ ಸಾಕು ಖುಷಿಯೋ ಖುಷಿ.

ಮಕ್ಕಳನ್ನೆತ್ತಿ ಗಾಳಿಯಲ್ಲಿ ಹಾರಿಸಿ ಮುತ್ತಿಕ್ಕಿ ಅವರ ಹೊಟ್ಟೆ ಕಂಕುಳಲ್ಲಿ ಕಚಗುಳಿಯೆಬ್ಬಿಸಿ ಗಲಗಲ ನಗಿಸಿ ಪೇಟೆಯಿಂದ ತಾನು ತರುವ ಸಕ್ಕರೆ ಮಿಠಾಯಿಗಳನ್ನ ಅವರ ಕೈಗೆ ಕೊಟ್ಟುˌ ಹಿಕರಿ ಬೇರುಗಳಿಂದ ಅವನೆ ಕೆತ್ತಿ ತಯಾರಿಸುತ್ತಿದ್ದ ಮಾಟವಾದ ಬಣ್ಣ ಹಚ್ಚಿ ಅಂಗಿ ಚಡ್ಡಿ ಫ್ರಾಕು ತೊಡಿಸಿ ತಲೆಬಾಚಿ ಕೂದಲು ಗಂಟು ಹಾಕಿದ ಗೊಂಬೆಗಳನ್ನ ನೀಡಿˌ ಕುದುರೆ ದನ ಎಮ್ಮೆ ಕುರಿ ಮೇಕೆ ಚಿರತೆ ಸಾರಂಗಗಳ ಪ್ರತಿಕೃತಿ ಬೊಂಬೆಗಳನ್ನ ಅವರ ಆಟಿಕೆಯನ್ನಾಗಿಸಿ ಅವರ ಮನಸೂರೆಗೊಳ್ಳುತ್ತಿದ್ದ. ಅವನ ತೋಟದ ಮನೆಯಲ್ಲೂ ಇವನ ಸ್ವಂತ ಮನೆಯಲ್ಲೂ ಎರಡೂ ಮಕ್ಕಳೂ ಗೋಪಿಯ ಪುನರಾಗಮನವನ್ನ ವಸಂತದ ಆಗಮನಕ್ಕೆ ಕಾತರಿಸಿ ಕತ್ತೆತ್ತಿ ಕಾಯುವ ಜಾತಕಪಕ್ಷಿಗಳಂತೆ ಕಾಯುತ್ತಿದ್ದವು.

ಚಳಿಗಾಲ ತೀವೃವಾಗಿದ್ದರೂ ಸಹ ದಿನಕ್ಕೆ ಕನಿಷ್ಠ ಒಂದು ಸಾರಿಯಾದರೂ ಗೋಪಿಯ ಸವಾರಿ ತಪ್ಪದೆ ಊರ ಎಲ್ಲೆಯಂಚಿನ ಬಳಿಯಿದ್ದ ಮಠಕ್ಕೆ ಹೋಗುತ್ತಿತ್ತು. ಬಾಬಯ್ಯನ ಮನ ಒಲಿಸಿ ಅವಳ ಮಗಳನ್ನ ತನ್ನ ಮಡದಿಯನ್ನಾಗಿಸಿ ಮದುವೆಗೆ ಸಮ್ಮತಿಸಿ ತನ್ನನ್ನೂ ಗೃಹಸ್ಥನನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಠದ ಗುರುಗಳೆಂದರೆ ಅವನಿಗೆ ವಿಪರೀತ ಭಯ ಭಕ್ತಿ. ಅನಕ್ಷರಸ್ಥನಾಗಿರುವ ಗೋಪಿಗೆ ನಾಲ್ಕಕ್ಷರ ಕಲಿಸುವ ಗುರುಗಳ ಪ್ರಯತ್ನದ ಸರಣಿಗಳೆಲ್ಲಾ ನೀರ ಮೇಲೆ ಹೋಮ ಮಾಡಿದಂತೆ ವಿಫಲವಾಗಿ ಅವನ ಮಡ್ಡ ಮಂಡೆಗೆ ಅರೆದು ಹಚ್ಚಿ ಅದರಲ್ಲೊಂದು ತೂತು ಕೊರೆದು ವರ್ಣಮಾಲೆಯನ್ನೆ ಮುದ್ದೆ ಮಾಡಿ ಆ ಒಟ್ಟೆಯೊಳಗೆ ಹಾಕಿ ತುಂಬಿದರೂ ಸಹ ನಾಲ್ಕಾಣೆಯ ಪ್ರಯೋಜನವಿಲ್ಲ ಅನ್ನೋದು ಮನದಟ್ಟಾದ ಮೇಲೆ ಗುರುಗಳು ಆ ಕಪ್ಪು ಕುದುರೆಯನ್ನ ಸರೋವರದ ನೀರಲ್ಲಿ ತಿಕ್ಕಿ ತಿಕ್ಕಿ ತೊಳೆದು ಬೆಳ್ಳಗಾಗಿಸುವ ಅಸಾಧ್ಯ ಕೆಲಸವನ್ನ ಕೈ ಬಿಟ್ಟು ಜಾಣರಾಗಿದ್ದರು.

ಬರವಣಿಗೆಯ ಅಕ್ಷರಭ್ಯಾಸ ಅತ್ತಲಾಗಿರಲಿ ಸಂವಹನದ ಸ್ಥಳಿಯ ಆಡುನುಡಿಯ ಕಲಿಕೆಯಲ್ಲೂ ಗೋಪಿ ಅಷ್ಟೆ ಮುಂದಿದ್ದ. ಆದರೆ  ಓದಿನಲ್ಲಿ ಹಿಂದೆ ಬಿದ್ದಿದ್ದರೂ ಕಸುಬುಗಳನ್ನ ಕಲಿಯುವುದರಲ್ಲಿ ಅವನು ಜಾಣ. ಮಠದ ಸಣ್ಣಪುಟ್ಟ ಮರಮತ್ತಿನ ಕೆಲಸಗಳಿಗೆ ಗೋಪಿಯಿಲ್ಲದೆ ಗತಿಯಿಲ್ಲ ಅನ್ನುವ ಮಟ್ಟಿಗೆ ಗೋಪಿ ಗುರುಗಳಿಗೆ ಇತ್ತೀಚೆಗೆ ಅನಿವಾರ್ಯ ಭಂಟನಾಗಿದ್ದ. ಬಾಬಯ್ಯನ ಮನೆಯ ಪರಿಸ್ಥಿತಿಯ ಅರಿವಿದ್ದ ಗುರುಗಳು ಬಿಟ್ಟಿ ದುಡಿಸಿಕೊಳ್ಳದೆ ತಪ್ಪದೆ ಅವನ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡುತ್ತಿದ್ದರು. ಅದನ್ನ ಪಡೆಯಲು ಸಂಕೋಚಿಸುವ ಗೋಪಿಗೆ ಅಧ್ಯಾತ್ಮ ಬೇರೆˌ ಲೌಕಿಕದ ಬದುಕು ಬೇರೆ ಎಂದು ಬೈದು ಬುದ್ಧಿ ಹೇಳಿದ್ದರವರು. ಇತ್ತೀಚೆಗೆ ಗೋಪಿ ಪೋಲಿ ಪುಟ್ಟನಾಗಿರುವ ಸುದ್ದಿ ಇನ್ನೂ ಗುರುಗಳ ಕಿವಿಗೆ ಬಿದ್ದಿಲ್ಲದೆಯಿರುವುದರಿಂದ ಅವರಿಂದ ಕಿವಿ ಹಿಂಡಿಸಿಕೊಳ್ಳದೆ ಗೋಪಿ ಬಚಾವಾಗಿದ್ದ. ಪಾಪಮ್ಮನ ವಾಲಗದ ಆಲಾಪದ ಧ್ವನಿ ಮಠದ ಕೊಟ್ಟಿಗೆ ದಾಟಿ ಮೊಗಸಾಲೆ ಮುಟ್ಟಲಿದ್ದ ದಿನ ಮಾತ್ರ ಅವನಿಗೆ ಗ್ರಹಚಾರ ಕಾದಿರುತ್ತಿತ್ತು.




https://youtu.be/hX5D3uSg42o


https://youtu.be/X6NTxZnjKu0



https://youtu.be/hOuX5UHHnSY


https://youtu.be/z15Jk3W9Xg0



03 February 2022

ಅವನ ಜೊತೆ ಅವಳ ಕಥೆ.....೫

ಅವಳ ಜೊತೆ ಅವನ ಕಥೆ....



"ಹಾದಿಗುಂಟ ಹಿಮದ ಹಾಸು
ಮುಗಿಯಲೊಲ್ಲದು ಚಳಿಗಾಳಿಯ ಬೀಸುˌ
ಬಾಳ ನೊಗಕ್ಕೆ ಬಿಗಿದ ಅಶ್ವದಂತಾಗಿರುವಾಗ ಜೀವನ
ಈ ಶಿಶಿರದ ಹಿಮನ ಹೊಡೆತವೆಲ್ಲ ಅಕ್ಷರಶಃ ತೃಣ."


ತನ್ನ ಹಾಗೂ ತನ್ನನ್ನ ನಂಬಿ ಬಂದವಳ ರಕ್ಷಣೆಯ ಹೊಣೆಯ ಭಾರ ಅವನದಾಗಿತ್ತು. ಹಾಗಂತ ಪಟ್ಟಣದ ಈ ವ್ಯವಹಾರ ನಿಮಿತ್ತ ಯಾತ್ರೆಯನ್ನೂ ಕಡೆಗಣಿಸವಂತಿರಲಿಲ್ಲ. ಇವೆಲ್ಲಾ ಕಾರಣಗಳಿಂದ ಅವನು ಅಂದು ಪಟ್ಟಣ ಮುಟ್ಟಿ ಬಾಕಿ ವಸೂಲಿಯ ಕೆಲಸ ಮೊದಲು ಮುಗಿಸಿ ಅನಂತರ ತನಗೆ ಈ ಚಳಿಗಾಲದಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಕಲ್ಲಿದ್ದಲು ಕೊಂಡುˌ ಉಳಿದಂತೆ ದಿನಸಿ ಪದಾರ್ಥಗಳನ್ನಷ್ಟು ಖರೀದಿಸಿ ಜೊತೆಗೆ ಔಷಧಿಗಳ ತಯಾರಿಕೆಗಾಗಿ ಚೂರು ಪೂರ್ವದ ಸಾಂಬಾರ ಪದಾರ್ಥಗಳನ್ನೂ ಕೊಂಡುಕೊಳ್ಳಬೇಕಿತ್ತು. ಅಷ್ಟರಲ್ಲಿ ಮಧ್ಯಾಹ್ನದ ಊಟದ ಹೊತ್ತಾಗಿರುವ ಸಂಭವವಿದ್ದುˌ ಕೊಟ್ಟ ಕೊನೆಗೆ ಅವಳು ಕೊಟ್ಟ ಪಟ್ಟಿಯಲ್ಲಿದ್ದ ಉಣ್ಣೆಯ ಉಂಡೆˌ ಕ್ರೋಷಾ ಕಡ್ಡಿˌ ಹೊಲಿಗೆಯ ನೂಲುˌ ಬೇರೆ ಬೇರೆ ಗಾತ್ರಗಳ ಸೂಜಿ ಹೀಗೆ ಅವಳ ಕರಕೌಶಲದ ಕೆಲಸದ ವಸ್ತುಗಳಲ್ಲವನ್ನೂ ಖರೀದಿಸಿ ಊರ ಕಡೆಗೆ ಹೊರಡಲೆಬೇಕಿತ್ತು. ಹಗಲು ಬೇರೆ ಕಿರಿದಾಗಿರುವ ಈ ಚಳಿಗಾಲದ ಶೀತ ಮಾರುತ ನಿರ್ದಯವಾಗಿ ಹಾಕಿ ಚಚ್ಚುತ್ತಿರುವ ವಿಷಮಕಾಲದಲ್ಲಿ ಎಷ್ಟು ಬೇಗ ಹಿಂದಿರುಗಿ ಮನೆಯತ್ತ ಮರುಪ್ರಯಾಣ ಆರಂಭಿಸಿದರೂ ಅಷ್ಟು ಒಳ್ಳೆಯದು ಎನ್ನುವ ಪರಿಸ್ಥಿತಿ ಇತ್ತು. ಹೀಗಾಗಿ ದಿಕ್ಸೂಚಿಯ ಮಾರ್ಗದರ್ಶನದಂತೆ ಮುನ್ನಡೆಯುತ್ತಾ ಸುಲ್ತಾನನನ್ನ ಅವನು ಆದಷ್ಟು ವೇಗವಾಗಿ ನಡೆಯುವಂತೆ ಹುರಿದುಂಬಿಸುತ್ತಲಿದ್ದ. ಆದರೆ ಕುದುರೆಯ ಪ್ರತಿಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿರದೆಯಿರೋದು ಅವನ ಅರಿವಿಗೆ ಬಂತು. ನಿತ್ಯದ ಆಹ್ಲಾದಮಯ ನಡುವಳಿಕೆ ಅಂದು ಅಶ್ವದಲ್ಲಿ ಕಾಣ ಸಿಗಲಿಲ್ಲ.


ಹೀಗೆ ಮುನ್ನಡೆಸುತ್ತಿದ್ದಾಗ ಸುಲ್ತಾನ ಇದ್ದಕ್ಕಿದ್ದಂತೆ ತನ್ನ ಮುಖ ಕೊಡವ ತೊಡಗಿದ. ಚಳಿಯ ತೀವೃತೆಗೆ ಉಸಿರೆ ಹಿಮಗಟ್ಟಿ ಮೂಗಿನ ಹೊಳ್ಳೆಗಳು ಮಂಜಿನಿಂದ ಮುಚ್ಚಿ ಹೋಗಿ ಉಸಿರಾಡಲು ಕಷ್ಟವಾಗುವಾಗ ಕುದುರೆಗಳು ಹೀಗೆ ವರ್ತಿಸುವುದು ಸಹಜ. ಕೂಡಲೆ ಕೆಳಗೆ ಹಾರಿದವನೆˌ ಸುಲ್ತಾನನ ಬೆನ್ನ ಮೇಲಿನ ಕೊಂಚ ಜಾರಿ ಹೋದಂತಿದ್ದ ಮಂದರಿಯನ್ನ ಇನ್ನಷ್ಟು ಸರಿಯಾಗಿ ಹೊದಿಸಿ ಬೆನ್ನಿಗೆ ಸಿಕ್ಕಿಸಿಕೊಂಡಿದ್ದ ಕಿರು ಸುತ್ತಿಗೆ ಹೊರಗೆಳೆದು ಅದರಿಂದ ಸುಲ್ತಾನನ ಮೂತಿ ಮೇಲೆತ್ತಿ ಅವನ ಮೂಗಿನ ಹೊಳ್ಳೆಯ ತುಂಬಿ ಹೋಗಿದ್ದ ಮಂಜನ್ನ ಬಿಡಿಸಿ ತೆಗೆಯ ತೊಡಗಿದ. ಬಲ ಹೊಳ್ಳೆ ತೆಗೆದವ ಎಡಗಡೆಯ ಹೊಳ್ಳೆಯದನ್ನೂ ಇನ್ನೇನು ಕೆರೆದು ತೆಗೆದು ಹೊರಗೆಳೆದು ತೆಗೆಯುವಷ್ಟರಲ್ಲಿ ಸುಲ್ತಾನ ಮತ್ತೆ ತಲೆಕೊಡವಿ ಇವನ ಹಿಡಿತ ಮೀರಿ ಬಲವಾಗಿ ಸೀನಿದ ಪರಿಣಾಮ ಕುದುರೆಯ ಮೂಗಿನ ಎಡಹೊಳ್ಳೆಗೆ ಕಟ್ಟಿಕೊಂಡಿದ್ದ ಹಿಮದ ಪರದೆ ತೂಬು ಒಡೆದ ಕೆರೆಯ ಕೋಡಿಯಂತೆ ಕಿತ್ತು ಎಗರಿ ಹೋದದ್ದಷ್ಟೆ ಅಲ್ಲದೆ ಅದರಿಂದ ಧಾರಾಳವಾಗಿ ಹಳದಿ ಲೋಳೆ ಲೋಳೆ ಸಿಂಬಳದ ಧಾರೆಯೆ ಮುನ್ನುಗ್ಗಿ ಸುರಿದು ಬಂತು. ಕೂಡಲೆ ಅದರ ಮುನ್ಸೂಚನೆ ಗ್ರಹಿಸಿ ಅವನು ಬಲಗಡೆ ಎಗರಿದನಾದರೂ ಸಿಂಬಳದ ಕೆಲವು ಹನಿಗಳ ಸಿಡಿತದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. 


ಕುದುರೆ ಸಿಂಬಳದ ಧಾರೆ ಸುರಿಸುರಿಸುತ್ತಲೆ ಮತ್ತೊಮ್ಮೆ ಪ್ರಚೋದನೆಗೆ ಒಳಗಾದಂತೆ ಬಲವಾಗಿ ತಲೆಯಿತ್ತಿ ಸೀನಿತಾದರೂ ಅದೂ ಸಹ ಇನ್ನಷ್ಟು ಹಳದಿ ಹಸುರು ಲೋಳೆಯ ಒಡಕು ಹಾಲಿನಂತಹ ಗೊಣ್ಣೆಗಟ್ಟಿದ ಸಿಂಬಳವನ್ನ ಎಡಹೊಳ್ಳೆಯಿಂದಲೆ ಸುರಿಸುತ್ತಾ ನಿಂತಿತು. ಈಗ ಅವನಿಗೆ ಸುಲ್ತಾನನ ಅನ್ಯ ಮನಸ್ಕತೆಯ ಕಾರಣ ಹೊಳೆಯಿತು. ಪಾಪˌ ಶೀತಗಾಳಿಯ ಹೊಡೆತಕ್ಕೆ ಲಾಯದೊಳಗೆ ಬೆಚ್ಚಗೆ ಕೊಟ್ಟಿಗೆಯ ಇತರ ಪಶುಗಳ ಮೈ ಶಾಖ ಹಾಗೂ ಎಡೆಬಿಡದೆ ತಾನು ಉರಿಸುತ್ತಿರುವ ಅಗ್ಗಿಷ್ಟಿಕೆಯ ಹಿತವಾದ ಬೆಚ್ಚಗಿನ ವಾತಾವರಣದ ನಡುವೆಯೂ ಸುಲ್ತಾನನಿಗೆ ಶೀತವಾಗಿದೆ. ಅದರ ಬಾಧೆ ತಲೆಯವರೆಗೆ ಏರಿ ಸಿಂಬಳದ ಗಟ್ಟಿ ಹೊಳ್ಳೆಯುದ್ದ ಮೆದುಳ ತನಕ ಕಟ್ಟಿಕೊಂಡದ್ದೆ ಕುದುರೆ ಚಡಪಡಿಸುತ್ತಾ ಸರಿಯಾಗಿ ಉಸಿರಾಡಲಾಗದೆ ಹೇಗ್ಹೇಗೆಯೋ ಆಡುತ್ತಿರಲು ಕಾರಣ. 


ಇದನ್ನ ಮೂಲದಲ್ಲೆ ಚಿವುಟಿ ಹಾಕಬೇಕು. ಇಲ್ಲದಿದ್ದರೆ ತಿಂಗಳುಗಟ್ಟಲೆ ಕುದುರೆ ಕಾಯಿಲೆ ಬೀಳುವ ಸಂಭವವಿತ್ತು. ಕುದುರೆಗಳು ದೈಹಿಕ ಕ್ಷಮತೆಯ ವಿಷಯಗಳಲ್ಲಿ ತುಂಬಾ ಸೂಕ್ಷ್ಮ. ಅವು ಅಷ್ಟು ಶ್ರಮಜೀವಿಗಳೋ ಅಷ್ಟೆ ಆರೋಗ್ಯದ ವಿಷಯದಲ್ಲಿ ಬೇಗ ಸೋಂಕುಗಳಿಗೆ ಬಲಿಯಾಗುತ್ತವೆ. ಮನುಷ್ಯರಂತೆ ಅವಕ್ಕೂ ಚಳಿ ಜ್ವರ ನೆಗಡಿ ಆಗೋದಿದೆ. ಹುಚ್ಚುನಾಯಿ ಅಥವಾ ಹಾವಿನ ಕಡಿತಕ್ಕೆ ಒಳಗಾಗುವ ಮನುಷ್ಯನ ಹಾಗೂ ಕುದುರೆಯ ಇಬ್ಬರ ಅನಂತರದ ನಡುವಳಿಕೆಗಳಲ್ಲೂ ಹೆಚ್ಚಿನ ಅಂತರವಿರುವುದಿಲ್ಲ. ಮಾನವರಂತೆಯೆ ಕುದುರೆಗಳೂ ಕೂಡ ಸೂಕ್ತ ಸಮಯದ ಮಿತಿಯಲ್ಲಿ ಸಿಗುವ ಚಿಕಿತ್ಸೆಗೆ ಸ್ಪಂದಿಸಿ ಸರಿಯಾದ ಔಷಧೋಪಚಾರಗಳಿಂದ ಚೇತರಿಸಿಕೊಳ್ಳುತ್ತವೆ. ಒಂದೊಮ್ಮೆ ವೈದ್ಯಕೀಯ ನೆರವಿನ ಅಲಭ್ಯತೆ ಎದುರಾದಲ್ಲಿ ಥೇಟ್ ಮಾನವರಂತೆಯೆ ನರಳುತ್ತಾ ಆ ರೋಗ ರುಜಿನ ವಿಷಪ್ರಾಶನದಿಂದ ಅಸಹಾಯಕವಾಗಿ ಸಾಯುತ್ತದೆ.



ಇವನಿಗೀಗ ಸುಲ್ತಾನನ ಆರೋಗ್ಯದ ವಿಚಾರವೆ ಮುಖ್ಯವಾಯಿತು. ಪೇಟೆ ಮನೆಗೆ ಹೋದ ಮೇಲೆ ಒಂದು ಹಂತಕ್ಕೆ ಚಿಕಿತ್ಸೆ ನೀಡಬಹುದಾಗಿದ್ದರೂˌ ಅದಿನ್ನೂ ಹನ್ನೆರಡು ಮೈಲಿ ಅಂತರದ ವಿಚಾರ. ತಕ್ಷಣಕ್ಕೆ ಸರಳ ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡು ಪ್ರಥಮ ಚಿಕಿತ್ಸೆ ನೀಡದಿದ್ದರೆ ಪರಿಸ್ಥಿತಿ ಕೈ ಮೀರುವ ಸಂಭವವೂ ಇದ್ದೆ ಇತ್ತು. ಆದರೆ ಅವನ ದುರಾದೃಷ್ಟಕ್ಕೆ ಅವರಿಬ್ಬರೂ ಈ ಹಿಂದುಮುಂದಿಲ್ಲದ ಹಿಮಧಾರೆಯಷ್ಟೆ ಖಚಿತವಾಗಿರುವ ಕಾಡ ಹಾದಿಯಲ್ಲಿ ಪ್ರಯಾಣದ ನಡುವೆ ಸಿಕ್ಕು ಹಾಕಿಕೊಂಡಿದ್ದರು. ಕೊಂಚ ಮೆದುಳಿಗೆ ಕೆಲಸ ಕೊಟ್ಟು ದಿಕ್ಸೂಚಿಯನ್ನ ತಿರುಗಿಸಿ ತಾನಿರುವ ನೆಲೆಯನ್ನ ಮನಸಿನೊಳಗೆ ಲೆಕ್ಕ ಹಾಕಿ ಖಚಿತ ಪಡಿಸಿಕೊಂಡವನಿಗೆ ಅಲ್ಲಿಂದ ಒಂದೂವರೆ ಮೈಲಿಯಷ್ಟು ದೂರ ಎಡಕ್ಕೆ ಇಲ್ಲಿನ ಸ್ಥಳಿಯ ಬುಡಕಟ್ಟಿನವರ  ಹಾಡಿಯಿರುವುದು ನೆನಪಿಗೆ ಬಂತು. ಆ ಹಾಡಿಯ ಜನರೆಲ್ಲಾ ಈ ನವ ವಲಸೆಗಾರರ ಹಾವಳಿಯಿಂದ ಬೇಸತ್ತುˌ ಇವರ ಒತ್ತುವರಿಯನ್ನ ಪ್ರತಿಭಟಿಸಲಾರದೆ ತಮ್ಮ ನೆಲೆಯ ವ್ಯಾಪ್ತಿ ದಿನದಿಂದ ದಿನಕ್ಕೆ ಕಿರಿದಾಗುತ್ತಾ ಸಾಗಿˌ ತಮ್ಮ ಸಾಂಪ್ರದಾಯಿಕ ಸಂಚಾರದ ರಸ್ತೆಗಳ ಮೇಲೆಲ್ಲಾ ಹೊಸ ಹೊಲಮನೆಗಳೆದ್ದು ಅಲ್ಲಿ ನೆಲೆ ನಿಂತವರು ಬೇಲಿ ಬಿಗಿದು ಸಾಮಾನ್ಯ ಸಂಚಾರಿ ಮಾರ್ಗಗಳೂ ಸಹ ಮುಚ್ಚಿಹೋಗಿ ಕೆಂಗೆಟ್ಟಂತಾಗಿ ಕಡೆಗೆ ತಾವೆ ಈ ನಿರಂತರ ಕಿರುಕುಳಗಳಿಂದ ಬೇಸತ್ತವರಂತೆ ತಮ್ಮ ತಮ್ಮ ಗಂಟೂ ಮೂಟೆ ಕಟ್ಟಿಕೊಂಡು ಈ ಚಳಿಗಾಲ ಆರಂಭವಾಗುವ ಮೊದಲೆ ಆ ನೆಲೆಯನ್ನ ಶಾಶ್ವತವಾಗಿ ತೊರೆದು ಇನ್ನಷ್ಟು ಪಶ್ಚಿಮದ ಕಾಡುಗಳತ್ತ ಒಲ್ಲದ ಮನಸ್ಸಿನಿಂದಲೆ ಜನ ಜಾನುವಾರು ಸಹಿತ ವಲಸೆ ಹೋಗಿಯಾಗಿತ್ತು. 


ಈಗ ಆ ಹಾಡಿ ಒಂಥರಾ ಯಜಮಾನರಿಲ್ಲದ ಮೌನ ಸ್ಮಶಾನದಂತಹ ಜಾಗವಾಗಿದೆ. ಸದ್ಯಕ್ಕೆ ಅಲ್ಲಿ ಯಾರೂ ವಾಸವಿಲ್ಲ. ಇವನೂ ಸಹ ಈಗಲ್ಲಿಗೆ ಹೋಗದೆ ವಿಧಿಯಿರಲಿಲ್ಲ. ಸಾಧಾರಣ ಶೀತ ವಿಪರೀತ ನೆಗಡಿಯಾಗಿ ಕುದುರೆಯ ಜೀವ ಹಿಂಡಿ ಹಿಪ್ಪೆ ಮಾಡುವುದನ್ನ ತಡೆಯಲು ಅದರ ಸಿಂಬಳದ ಲೋಳೆಗಳೆಲ್ಲವನ್ನ ತೊಳೆದು ತೆಗೆದು ಅನಂತರ ಪ್ರಥಮ ಚಿಕಿತ್ಸೆ ನೀಡಲು ಅವನಿಗೆ ಕೊಂಚ ಬಿಸಿನೀರಿನ ಅವಶ್ಯಕತೆಯಿತ್ತು. ಸುತ್ತಲೂ ನೀರಿನ ಗಟ್ಟಿಯೆ ಸುರಿದು ಹಿಮದ ರೂಪದಲ್ಲಿ ಶೇಖರಣೆಯಾಗಿದ್ದರೂ ಸಹ ಮನುಷ್ಯ ನೆಲೆಯೊಂದರಲ್ಲಿ ಸದ್ಯ ನೆರವನ್ನ ಹುಡುಕದೆ ಗತ್ಯಂತರವೆ ಇರಲಿಲ್ಲ. ಹಾಗೊಮ್ಮೆ ನಿರ್ಲಕ್ಷ್ಯ ವಹಿಸಿದರೆ  ಪರಿಸ್ಥಿತಿ ಕೈಮೀರಿ ಹೋಗುವ ಸಂಭವವಿತ್ತು ಹಾಗೂ ರೈತನಷ್ಟೆ ಅಲ್ಲದೆ ಉತ್ತಮ ಗೌಳಿಯೂ ಅಶ್ವರೋಹಿಯೂˌ ರಥಿಕನೂ ಆಗಿದ್ದ ಅವನಿಗೆ ತನ್ನ ಕೊಟ್ಟಿಗೆಯ ಪಶುಗಳ ಆಯುರಾರೋಗ್ಯ ತನ್ನ ಕುಟುಂಬದ ಕ್ಷೇಮ ಸಮಾಚಾರದಷ್ಟೆ ಮುಖ್ಯವಾಗಿತ್ತು.


ನಿರುತ್ಸಾಹಿಯಂತಾಗಿದ್ದ ಸುಲ್ತಾನನ್ನ ಹುರಿದುಂಬಿಸುತ್ತಾ ಮುನ್ನಡೆಸುತ್ತಾ ಆತ ಆ ಹಾಡಿಯತ್ತ ಅಡ್ಡದಾರಿ ಹಿಡಿದು ಮುನ್ನಡೆದ. ಒಂದರ್ಧ ತಾಸು ಕಳೆಯುವಷ್ಟರಲ್ಲಿ ಅವರಿಬ್ಬರೂ ಆ ಹಾಡಿಯನ್ನ ಒಂದು ಮುಟ್ಟಿದ್ದರು.

***********


"ಜೀವಕಳೆ ಮರೆತಿತುˌ
ಪ್ರೇತಕಳೆಗೆ ಮರಳಿತು"


ಒಂದಾನೊಂದು ಕಾಲದಲ್ಲಿ ನಳನಳಿಸುತ್ತಾ ಅಜ್ಜಂದಿರ ಕೆಮ್ಮುˌ ಅಮ್ಮಂದಿರ ಲಾಲಿ ಬೈಗುಳ ಮುಚ್ಚಟೆˌ ಅಪ್ಪಂದಿರ ದಂಡನೆ ತರಬೇತಿ ಶಿಸ್ತುˌ ಹದಿ ಹರೆಯದವರ ಪ್ರೀತಿ ಪ್ರೇಮದ ಪ್ರಣಯ ಚೇಷ್ಟೆಗಳುˌ ಎಳೆಯರ ತುಂಟಾಟದ ಪರಮಾವಧಿˌ ಅಜ್ಜಿಯಂದಿರ ಕುಟ್ಟಾಣಿಯ ಸದ್ದುˌ ಅಡುಗೆ ಮನೆಗಳಲ್ಲಿ ರೊಟ್ಟಿ ತಟ್ಟುವ ಸದ್ದನ್ನ ಕೂಡಿ ಹಾಡಿಯೆಲ್ಲ ಪಸರಿಸುತ್ತಿದ್ದ ಶಿಕಾರಿಯಾದ ಸಾರಂಗದ್ದೊ ಇಲ್ಲಾ ಕಾಡೆಮ್ಮೆಯದ್ದೋ ಮಾಂಸ ಒಲೆಯ ಉರಿಯ ಮೇಲೆ ದೊಡ್ಡ ಮರಿಗೆಯಲ್ಲಿ ಬೇಯುತ್ತಿದ್ದ ಘಮ ಇವೆಲ್ಲಾ ತುಂಬಿ ಕಳೆಕಳೆಯಾಗಿದ್ದಿರಬಹುದಾದ ಹಾಡಿ ಪ್ರೇತ ಕಳೆ ಹೊತ್ತು ಚಳಿಯ ನಡುಕ ತಾಳಲಾರದೆ ಸ್ಮಶಾನ ಮೌನ ಹೊದ್ದು ಅವಸಾನದ ಕ್ಷಣಕ್ಕೋಸ್ಕರವೆ ಕಾಯುತ್ತಾ ನಿರ್ಜೀವ ಕಣ್ಗಳಲ್ಲಿ ಕನಸೆ ಇಲ್ಲದಂತೆ ಜೀವಚ್ಛವವಾಗಿ ಕೊಳಕು ಚಾಪೆಯೊಂದರ ಮೇಲೆ ದೀರ್ಘ ಶ್ವಾಸವನ್ನೆಳೆದುಕೊಳ್ಳುತ್ತಾ ಮಲಗಿರುವ ವಯೋವೃದ್ಧನಂತೆ ದೂರದಿಂದಲೆ ಗೋಚರಿಸುತ್ತಿತ್ತು. 



ಇಡಿ ಹಾಡಿ ನರ ಮನುಷ್ಯರ ವಾಸವಿಲ್ಲದೆ ಬಿಕೋ ಅನ್ನುತ್ತಿತ್ತು. ಸೂಕ್ತ ನಿರ್ವಹಣೆಯ ಹೊರತಾಗಿಯೂ  ಮಣ್ಣಿನ ಗೋಡು ಸರೋವರದ ಬದಿಯ ಹುಲ್ಲಿನ ಹೆಪ್ಪು ಸವರಿ ನಿರ್ಮಿಸಿದ್ದ ಗೋಡೆಗಳ ಮೇಲೆ ಸೀಳಿದ ಪೈನ್ ತೊಲೆಗಳನ್ನ ಏರಿಸಿ ಅದಕ್ಕೆ ಹಾಕಿದ್ದ ರೈ ಹುಲ್ಲಿನ ಛಾವಣಿಯ ಗುಡಿಸಲುಗಳು ಅಲ್ಲೊಂದು ಇಲ್ಲೊಂದು ಗೋಡೆ ಜರಿದದ್ದೋ ಇಲ್ಲವೆ ಚಳಿಗಾಳಿಗೆ ಛಾವಣಿ ಎಗರಿ ಹೋಗಿರೋದೋ ಬಿಟ್ಟರೆ  ಬಾಕಿ ಉಳಿದಂತೆ ಭದ್ರವಾಗಿಯೆ ಇತ್ತು. ಅಂತಹ ಜರಿದಿದ್ದ ಗೋಡೆಯೊಂದರ ಒಳಗಿನ ಕೋಣೆಗೆ ಸುಲ್ತಾನನ್ನು ಇವನು ಮುನ್ನಡೆಸಿದ. ಆ ಗುಡಿಸಲುಗಳ ತಲೆ ಬಾಗಿಲುಗಳು ಮನುಷ್ಯರೆ ತಗ್ಗಿ ಬಗ್ಗಿ ಹೋಗುವಷ್ಟು ಕಿರಿದಾಗಿರುತ್ತಿದ್ದುˌ ಹಾಗೆಲ್ಲಾ ಕುದುರೆಗಳು ಪ್ರವೇಶಿಸಲು ಸಾಧ್ಯವೆ ಇಲ್ಲದಂತಿದ್ದವು. ಹೀಗಾಗಿ ಕುಸಿದು ಬಿದ್ದಿದ್ದ ಗೋಡೆಯೆ ಗತಿಯಾಯ್ತು ಒಳ ನುಗ್ಗಲು. ಒಳಗೆ ಹೊರಗಿನ ಹಿಮದ ಹೊಡೆತದ ಹೊರತಾಗಿಯೂ ತಕ್ಕಮಟ್ಟಿಗೆ ಬೆಚ್ಚಗಿನ ಹಿತಕರ ವಾತಾವರಣವೆ ಇತ್ತು. ಮನೆಯ ಒಳಗೆಲ್ಲಾ ಒಂಥರಾ ಆ ಬುಡಕಟ್ಟಿನವರ ಮೈ ಗಂಧದ ಘಮ ಇನ್ನೂ ಆವರಿಸಿಕೊಂಡೆ ಇದ್ದಂತೆ ಅವನಿಗೆ ಭಾಸವಾಯಿತು. ಅದಕ್ಕೂ ಹೊರತಾದ ಇನ್ಯಾವುದೋ ಸುಪರಿಚಿತ ವಾಸನೆ ಅವನ ಮೂಗಿಗೆ ಅಡರಿತು. ಹೌದು! ಇದು ಎಮ್ಮೆತೋಳಗಳದ್ದೆ ಮೈಯ ನಾತ. ತೋಳಗಳ ಮೈಗಂಧ ಹೆಚ್ಚು ಕಡಿಮೆ ಸಾಕು ನಾಯಿಗಳ ಮೈ ವಾಸನೆಯನ್ನೆ ಹೋಲುತ್ತದೆ. ಆದರೆ ಕಾಡುವಾಸಿಗಳಾದ ಅವುಗಳ ಮೈ ಗಂಧ ಮನೆಯ ನಾಯಿಗಳಿಂದಲೂ ಕಟುವಾಗಿರುತ್ತದೆ. ಅಂದರೆ ಇಲ್ಲಿಗೆ ತೋಳಗಳು ಇತ್ತೀಚೆಗೆ ಧಾಳಿಯಿಟ್ಟಿವೆ! ಸಾಮಾನ್ಯವಾಗಿ ಸ್ಥಳಿಯ ಬುಡಕಟ್ಟಿನವರದು ವನ್ಯಮೃಗಗಳ ಜೊತೆಗೆ ಸಹಬಾಳ್ವೆ. ಇತ್ತಂಡಗಳೂ ಇನ್ನೊಬ್ಬರ ವಾಸಸ್ಥಳದ ಗಡಿ ಮೀರದೆ ಒಬ್ಬರಿಗೊಬ್ಬರು ಹೊಂದಿಕೊಂಡೆ ಬದುಕುವುದನ್ನ ಕಲಿತು ಶತಮಾನಗಳಿಂದ ಸೌಹಾರ್ದಯುತವಾಗಿ ಬಾಳುತ್ತಲೂ ಇದ್ದರು. ತೋಳಗಳ ಸಹಜಾಹಾರವಾದ ಕಾಡಿನ ಕೆಲವು ಸಸ್ಯಾಹಾರಿ ಪ್ರಾಣಿಗಳನ್ನ ಬೇಟೆಯಾಡಿ ಅವುಗಳ ಅನ್ನದ ತಟ್ಟೆಗೆ ಮನುಷ್ಯ ಮೃಗ ಕೈ ಹಾಕುತ್ತಿದ್ದುದು - ಕೆಲವೊಮ್ಮೆ ಚರ್ಮದ ಅಗತ್ಯಗಳಿಗಾಗಿ ಎಮ್ಮೆತೋಳಗಳಲ್ಲೆ ಕೆಲವನ್ನ ಹೊಡೆದುರುಳಿಸಿ ಶಿಕಾರಿ ಮಾಡುತ್ತಿದ್ದುದನ್ನ ಬಿಟ್ಟರೆˌ ತೋಳಗಳು ತಾವಾಗಿ ಹಾಡಿಗಳತ್ತ ಸುಳಿಯೋದಾಗಲಿˌ ಮನುಷ್ಯ ಅವಾಸದ ಸುತ್ತಮುತ್ತ ಹೊಂಚು ಹಾಕಿ ಅವರ ಸಾಕೆಮ್ಮೆˌ ದನˌ ಕುರಿˌ ಮೇಕೆˌ ಹಂದಿಗಳನ್ನ ಹಿಡಿದು ಕೊಂದು ತಿಂದದ್ದಾಗಲಿ ಅಲ್ಲಿನ ಇತಿಹಾಸದಲ್ಲೆ ಕಂಡು ಕೇಳರಿಯದ ಸಂಗತಿಯಾಗಿತ್ತು! ಈ ಆಕ್ರಮಣಕೋರ ನವ ವಸಾಹತುಶಾಹಿಗಳು ದೂರದ ನಾಡಿನಿಂದ ಬಂದು ಇಲ್ಲಿಯ ಭೂಮಿಯ ಹಾಗೂ ನೈಸರ್ಗಿಕ ಸಂಪತ್ತುಗಳ ಮೇಲೆ ತಮ್ಮ ಹಕ್ಕು ಸಾಧಿಸುವ ತನಕ.



ಇದ್ದಕ್ಕಿದ್ದಂತೆ ಜನಸಂಖ್ಯೆಯಲ್ಲಿ ವಿಪರೀತ ಏರಿಕೆಯಾಗಿ ಕ್ರಮೇಣ ಒಳನಾಡುˌ ಗುಡ್ಡಗಾಡು ಪ್ರದೇಶಗಳತ್ತಲೂ ಜನಸಾಂದ್ರಂತೆ ಒತ್ತಿಕೊಂಡು ಬಂತು. ಅವರೆಲ್ಲರೂ ರೈತಾಪಿ ಹಾಗೂ ಕಾರ್ಮಿಕ ವರ್ಗದವರಾಗಿದ್ದರು. ಮಾಂಸ ಹಾಗೂ ಚರ್ಮಕ್ಕೆ ಶಿಕಾರಿ ವಿಪರೀತ ಹೆಚ್ಚಿತುˌ ಈ ಹಿಂದೆ ಆದಿವಾಸಿಗಳು ಬೇಟೆಯಾಡಿದರೂ ಈ ವಸಾಹತು ಹೂಡಲು ಬಂದವರಷ್ಟು ನಿರ್ದಯವಾಗಿ ಬಂದೂಕು ಬಳಸಿ ಅಗತ್ಯ ಮೀರಿ  ವನ್ಯಜೀವಿಗಳನ್ನ ಅವರೆಂದೂ ಕೊಂದು ರಾಶಿ ಹಾಕಿರಲಿಲ್ಲ. ಹೀಗಾಗಿ ಒಂದು ಸ್ಥಿರತೆ ಅವುಗಳ ಸಂಖ್ಯೆಯಲ್ಲೂ ಉಳಿದಿತ್ತು. ಈಗ ಅದೆಲ್ಲಾ ತಲೆ ಕೆಳಗಾಗಿ ಬೇಟೆಯಾಡುವ ಹಿಂಸೃಕ ಪ್ರಾಣಿಗಳ ಸಂಖ್ಯೆಗಿಂತ ಅವುಗಳ ಬೇಟೆಯಾಗಿದ್ದ ಸಾಧು ಪ್ರಾಣಿಗಳ ಸರಾಸರಿ ಶೋಚನೀಯವಾಗಿ ಕುಸಿದು ಎಮ್ಮೆತೋಳಗಳು ಮೇಯಿಸಲು ಬಿಟ್ಟ ಸಾಕು ಪ್ರಾಣಿಗಳನ್ನ ಹೊತ್ತೊಯ್ಯುವ ದೈನೇಸಿ ಸ್ಥಿತಿಗೆ ಬಂದು ಮುಟ್ಟಿದವು. ಗುಂಪುಗುಂಪಾಗಿ ಚಲಿಸುವ ಗುಣದ ಅವು ಕೆಲವೊಮ್ಮೆ ತಮ್ಮ ಸುಷುಪ್ತಿಯಲ್ಲಿ ಅಚ್ಚಾಗಿರುವ ಪರಿಧಿಯ ದಾರಿಗಳಿಗೆ ಅಡ್ಡಲಾಗಿ ಎದ್ದ ತೋಟದ ಮನೆಗಳಿಂದ ಭದ್ರವಾದ ವ್ಯವಸ್ಥೆಯಿಲ್ಲದ ಕೊಟ್ಟಿಗೆˌ ರೊಪ್ಪ ಹಾಗೂ ಲಾಯಗಳಿಗೂ ದಾಳಿಯಿಟ್ಟು ಕುರಿˌ ಕರುˌ ಕುದುರೆಮರಿˌ ಹಂದಿˌ ಕೋಳಿˌ ಬಾತು ಹೀಗೆ ಸಿಕ್ಕಿದ್ದನ್ನ ಸಿಗಿದು ತಿನ್ನುವ ಲೂಟಿಗೂ ಇಳಿದವು. ಇದು ಸಹಜವಾಗಿ ಮನುಷ್ಯ ಹಾಗೂ ಮೃಗಗಳ ನಡುವಿನ ತಿಕ್ಕಾಟ ಹಾಗೂ ನಿರಂತರ ಸಂಘರ್ಷಕ್ಕೆ ಮೂಲವಾಯಿತು. ಇದರ ಸಂಪೂರ್ಣ ಹೊಣೆಗಾರಿಕೆಯೂ ಮಾನವ ಮೃಗದ್ದೆ ಆಗಿತ್ತು ಎನ್ನುವುದನ್ನ ಬಿಡಿಸಿ ಹೇಳಬೇಕಿಲ್ಲ. ತಾನು ಮಾಡಿದ್ದನ್ನೆ ಮುಂದವನು ಉಣ್ಣುತ್ತಿದ್ದ ಅಂತ ಇಟ್ಕಳಿ. ಆದರೆ ಇದೆಲ್ಲದರ ನಡುವೆ ಸ್ಥಳಿಯ ಬುಡಕಟ್ಟಿನ ಜನರಂತೆ ತೋಳಗಳೂ ಸ್ಥಳಿಯ ಕಾಡನ್ನ ತೊರೆದು ಪಶ್ಚಿಮದ ಕಡೆಗೆ ಸಾಮೂಹಿಕ ವಲಸೆ ಹೂಡಲಾರಂಭಿಸಿದ್ದವು. ಅದಕ್ಕೆ ಮಾತ್ರ ಯಥಾಪ್ರಕಾರ ಅವುಗಳ ತುಪ್ಪಟ ಹಾಗೂ ಚರ್ಮಗಳ ದುರಾಸೆಗೆ ಈ ವಸಾಹತು ಹೂಡಲು ಬಂದವರು ನೇರ ಬೇಟೆಯ ಸಂಹಾರಕ್ಕೆ ಇಳಿದದ್ದೆ ಕಾರಣ. ಪ್ರಾಣಿಗಳಾದರೇನು? ಅವುಗಳಿಗೂ ಅಳಿವಿನಂಚಿಗೆ ಬಂದಾಗ ಪರಾರಿಯಾಗಿಯಾದರೂ ಉಳಿಯುವಷ್ಟು ಉಪಾಯ ತೋಚದೆ ಹೋದೀತೆ ಹೇಳಿ?


ಬಹುಶಃ ವಾರಗಳೆರಡರ ಹಿಂದೆ ಇಲ್ಲಿಗೆ ಎಮ್ಮೆತೋಳಗಳ ಹಿಂಡು ಬಂದು ಹೋಗಿರಬಹುದು ಎನ್ನುವುದನ್ನವನು ಗ್ರಹಿಸಿದ. ಒಣಗಿ ಗಟ್ಟಿಯಾಗಿದ್ದ ಅವುಗಳ ಉಚ್ಛಿಷ್ಠ ಅದನ್ನ ಖಚಿತ ಪಡಿಸಿದವು. 


ಕುದುರೆಯ ಬೆನ್ನ ಮೇಲಿಂದ ಕೆಳಗಿಳಿದು ಸುಲ್ತಾನನ್ನ ಗೂಟವೊಂದಕ್ಕೆ ಬಿಗಿದವನೆ ಪಾತ್ರೆ ಪಗಡಗಳೇನಾದರೂ ಅಲ್ಲಿದಾವ ಎಂದು ಹುಡುಕಿದ. ಮೂರು ಗುಡಿಸಲು ದಾಟಿ ತಡಕಾಡಿದವನಿಗೆ ಆ ಬುಡಕಟ್ಟಿನ ಮಂದಿ ಹೊತ್ತೊಯ್ಯಲಾಗದೆ ಬಿಟ್ಟು ಹೋಗಿದ್ದ ಮಣ್ಣಿನ ಮರಿಗೆಗಳು ಸಿಕ್ಕವು. ಕೊಂಚ ಪುರುಳೆಗಳೂˌ ಕಲ್ಲಿದ್ದಲ ಗಟ್ಟಿಗಳೂ ಅದ್ಯಾವುದೋ ಜೋಪಡಿಯ ಒಲೆಯ ಬಳಿ ಅನಾಥವಾಗಿ ಬಿದ್ದದ್ದು ಕಣ್ಣಿಗೆ ಬಿತ್ತು. ಕಲ್ಲಿದ್ದಲಂದರೇನೆಂದೆ ಅರಿವಿರದ ಈ ಅನಾಗರೀಕ ಜನರ ಜೋಪಡಿಯಲ್ಲಿ ಇದನ್ನ ಕಂಡು ಅವನಿಗೆ ವಿಸ್ಮಯವಾಯಿತು. ಅದು ಹೇಗೆಯೋ ರೈಲು ರಸ್ತೆ ಹಾಸಲು ಬಂದಿದ್ದ ಕೂಲಿಗಳ ಜೊತೆ ಸಮನ್ವಯ ಸಾಧಿಸಿದ್ದ ಅವರು ತಾವು ಮನೆಯಲ್ಲೆ ಕೊಳೆಹಾಕಿ ತಯಾರಿಸಿದ್ದ ಒಳ್ಳೆಯ ರೈ ಹುಳಿ ಹೆಂಡವನ್ನು ಪಾನಪ್ರಿಯರಾದ ಅವರಿಗೆ ಕೈ ದಾಟಿಸಿ ಅದಕ್ಕೆ ಬದಲಾಗಿ ಆವರೆಗೂ ತಾವು ಕಂಡರಿತಿರದ ಕಲ್ಲಿದ್ದಲನ್ನ ಅವರಿಂದ ವಿನಿಮಯ ರೂಪದ ಇನ್ನಿತರ ವಸ್ತುಗಳ ಜೊತೆಗೆ ಪಡೆದಿರುವ ಸಂಗತಿ ಅವನಿಗೆ ಗೊತ್ತೆ ಇರಲಿಲ್ಲ. 

ಹಾಗೆ ರಾಶಿ ರಾಶಿ ಕಲ್ಲಿದ್ದಲನ್ನ ಪಡೆದುಕೊಂಡಿದ್ದರೂ ಸಹ ಅದರ ಸಮರ್ಪಕ ಬಳಕೆಯ ಓನಾಮ ಗೊತ್ತಿಲ್ಲದೆ ನಿರುಪಯುಕ್ತ ವಸ್ತು ಎಂದೆ ಪರಿಗಣಿಸಿದ ಅವರೆಲ್ಲˌ ಅಸಡ್ಢೆಯಿಂದ ಅದನ್ನ ತಮ್ಮ ತಮ್ಮ ಗುಡಿಸಲುಗಳ ಅಡುಗೆ ಒಲೆಗೆ ಹತ್ತಿರದ ಮೂಲೆಗಳಲ್ಲಿ ಕಲ್ಲಿದ್ದಲನ್ನ ರಾಶಿ ಹಾಕಿಟ್ಟುˌ ಹಾಡಿ ತೊರೆದು ಹೋಗುವಾಗಲೂ ಜೊತೆಯಲ್ಲಿ ಕೊಂಡೊಯ್ಯದೆ ಅಸಡ್ಡೆ ಮಾಡಿ ಬಿಟ್ಟು ಹೋಗಿದ್ದರು. ಇವನ ಪುಣ್ಯಕ್ಕೆ ಅಷ್ಟು ಕಲ್ಲಿದ್ದಲು ಅದೊಂದೆ ಹಾಡಿಯಲ್ಲಿ ಕಂಡದ್ದೆ ಬಂಪರ್ ಲಾಟರಿ ಹೊಡೆದಂತಾಗಿತ್ತು ಅವನಿಗೆ. ಈಗವನು ಬಿಸಿನೀರಿಗೂ ಪರದಾಡಬೇಕಿರಲಿಲ್ಲ.


**********


ಮುಂದೆಂದಾದರೂ ಇಲ್ಲಿಗೆ ಬಂದು ಸಮ್ಮನೆ ರಾಶಿ ಬಿದ್ದು ಹಾಳಾಗುತ್ತಿರುವ ಆ ಅನಾಥ ಕಲ್ಲಿದ್ದಲನ್ನ ಗಂಟು ಮೂಟೆ ಕಟ್ಟಿಕೊಂಡು ಸಾಗಿಸುವ ಹಂಚಿಕೆಯನ್ನವನು ಮನದೊಳಗೆ ಹಾಕಿದ. ಅಲ್ಲಿರುವ ದಾಸ್ತಾನು ತೀರಾ ದುಂದುವೆಚ್ಚ ಮಾಡಿ ಉರಿಸಿದರು ಸಹ ಇನ್ನೂ ಐದು ವರ್ಷಗಳ ಚಳಿಗಾಲ ಕಳೆಯಲು ಅವನಿಗೆ ಸಾಕಾಗುವಷ್ಟಿತ್ತು. 


ಸದ್ಯ ಪೇಟೆಯಿಂದ ಕಾಸು ಕೊಟ್ಟು ಕೊಂಚ ಕಲ್ಲಿದ್ದಲನ್ನ ಅದೂ ಹೊತ್ತುಕೊಂಡು ಬರುವ ಶ್ರಮ ತಪ್ಪಿತು ಎಂದವನು ಖುಷಿ ಪಟ್ಟ. ಈಗ ಸುಲ್ತಾನನ ಆರೈಕೆ ಮಾಡುವುದು ಆದ್ಯತೆಯಾಗಿತ್ತು ಹೀಗಾಗಿ ಅವುಗಳಲ್ಲೆ ಕೆಲವನ್ನು ಪುರುಳೆಗಳೊಂದಿಗೆ ಆಯ್ದು ಅಲ್ಲೆ ಬಿದ್ದಿದ್ದ ಚಕಮಕಿ ಕಲ್ಲುಗಳನ್ನ ಎತ್ತಿಕೊಂಡು ಮರಿಗೆಗೆ ತುಂಬಿಸಿ ಕುದುರೆ ಕಟ್ಟಿ ಬಂದಿದ್ದ ಗುಡಿಸಿಲ ಕಡೆಗೆ ಹೆಜ್ಜೆ ಹಾಕಿದ.


ಹೊರಗೆ ಬಿದ್ದಿದ್ದ ಹಿಮದಲ್ಲೆ ಸ್ವಲ್ಪ ಮರಿಗೆಗೆ ತುಂಬಿಸಿಕೊಂಡು ಬಂದವ ಒಲೆಯ ಮೇಲೆ ಅದನ್ನಿರಿಸಿ ಚಕಮಕಿ ಕಲ್ಲಿನಿಂದ ಪುರಳೆ ಹೊತ್ತಿಸಲು ಹವಣಿಸಿದˌ ತೀರಾ ಥಂಡಿಯಾಗಿದ್ದರಿಂದಲೋ ಏನೋ ಕಲ್ಲುಗಳಿಂದ ಅದೆಷ್ಟೆ ಕುಟ್ಟಿದರೂ ಕಿಡಿ ಏಳಲಿಲ್ಲ. ಪ್ರಯತ್ನ ಬಿಡದೆ ಚಕಮಕಿ ಕಲ್ಲುಗಳನ್ನ ಚೆನ್ನಾಗಿ ನೆಲಕ್ಕೆ ಹಾಕಿ ಉಜ್ಜಿ ಬಿಸಿಯೇರಿಸಿ ಮತ್ತೆ ಪ್ರಯತ್ನಿಸಿದಾಗ ಪುರುಳೆ ರಾಶಿಗೆ ಕಿಡಿ ಹಾರಿ ಕಡೆಗೂ ಹೊಗೆಯೆದ್ದಿತು. ಮೆಲ್ಲಗೆ ಊದಿ ಕಲ್ಲಿದ್ದಲನ್ನೂ ಒಟ್ಟಿಗೆ ಸೇರಿಸಿ ಕಡೆಗೂ ಒಲೆಯ ಒಡಲಲ್ಲಿ ಸರಿಯಾಗಿ ಜ್ವಾಲೆ ಪ್ರಜ್ವಲಿಸುವಂತೆ ಮಾಡಿದ. ಬೆಂಕಿಯ ಶಾಖಕ್ಕೆ ಒಡ್ಡಿಕೊಂಡ ಮೈ ಕೈಗೆ ತುಂಬಾ ಹಿತಾನುಭಾವ ದೊರಕಿದಂತಾಯಿತು. ಬೆನ್ನ ಚೀಲದಲ್ಲಿ ಕೊಂಚ ಚಹಾದ ಎಲೆಗಳನ್ನ ಕಟ್ಟಿಕೊಂಡು ಬಂದಿದ್ದˌ ಸ್ವಲ್ಪ ಚಹಾ ಹೀರಿ ಚಳಿಗೆ ಮರಗಟ್ಟಿದಂತಾಗಿರುವ ದೇಹದ ನರನಾಡಿಗಳಲ್ಲೂ ಚೈತನ್ಯದ ನೆತ್ತರು ಪ್ರವಹಿಸುವಂತಾಗಿಸಲು ಮನಸು ಮಾಡಿ ಅಲ್ಲೆ ಬಿದ್ದಿದ್ದ ಕುಡಿಕೆಯೊಂದನ್ನಾಯ್ದು ನಿಧಾನವಾಗಿ ನೀರಾಗುತ್ತಿದ್ದ ಹಿಮದಲ್ಲಿ ಗಾಳಿಸಿ ತೊಳೆದು ಕೊಂಚ ಹಿಮ ಜೊತೆಗಿಷ್ಟು ಚಹಾ ಸೊಪ್ಪು ಸುರಿದು ಪಕ್ಕದ ಒಲೆಗೂ ಉರಿ ವಿಸ್ತರಿಸಿ ಕುದಿಯಲಿಟ್ಟ.


ನೀರು ಕುದಿಯಲು ಆ ಕಡು ಚಳಿಯ ವಾತಾವರಣದಲ್ಲಿ ಸಮಯ ತಗುಲುವುದು ಸಹಜˌ ಅದೆಷ್ಟೆ ಕುದಿಬಿಂದುವನ್ನ ತಲುಪಿದರೂ -೨೦ ರಿಂದ -೩೫ರ ತನಕವೂ ಜಾರುವ ಉಷ್ಣತೆಯ ವಿಪರೀತ ಹವಾಮಾನದ ವೇಪರೀತ್ಯದಲ್ಲಿ ಆ ಕುದಿನೀರು ಕೂಡ ಮರಗಟ್ಟಿ ಹೋದ ಹಾಗಿರುವ ಜಡವಾಗುವತ್ತ ಸಾಗಿರುವ ದೇಹಕ್ಕೆ ಬೆಚ್ಚಗಿನ ಭಾವ ಕೊಡಬಲ್ಲದು. ಮನುಷ್ಯರ ಹಾಗೆ ಪ್ರಾಣಿಗಳಿಗೂ ಸಹ. ಸುರಿದ ಸಿಂಬಳದ ಲೋಳೆಯೂ ಚಳಿಗೆ ಗಂಟುಗಟ್ಟಿದ ಹಾಗೆ ಗಟ್ಟಿಯಾಗಿ ಹೋಗಿರುವ ಸುಲ್ತಾನನ ಮುಸುಡಿ ಕೂಡ ಬಿಸಿನೀರಿನಿಂದ ತೊಳಿಸಿಕೊಂಡು ಶುದ್ಧವಾಗಲು ಕಾತರಿಸುತ್ತಿತ್ತು. 

ಬಿಸಿ ನೀರಿನ್ನ ಮೊಗೆ ಮೊಗೆದು ಚೋಪಿ ಚೂರೂ ಅಸಹ್ಯ ಪಡದೆ ಅವನು ಮೆಲ್ಲನೆ ಸುಲ್ತಾನನ ಮೂತಿಯ ಸುತ್ತ ಹರಡಿದ್ದ ಸಿಂಬಳವನ್ನ ತೊಳೆದು ತೆಗೆದು ಕೈ ಬಟ್ಟೆಯಲ್ಲಿ ಒರಸಿದ. ಕುದುರೆಯ ಮೇಲ್ತುಟಿಗೂ ಸಿಂಬಳದ ಒಡಕು ಹಾಲಿನಂತಹ ಗಲೀಜು ಅಂಟಿಕೊಂಡು ಕಲ್ಲಿನಂತಾಗಿ ಹೋಗಿತ್ತು. ಹುಷಾರಾಗಿ ಅದನ್ನ ನೀರು ಸೋಕಿಸಿ ಮೆದುವಾಗಿಸಿ ತಿಕ್ಕಿ ತೊಳೆದು ತೆಗೆಯದೆ ಬಲ ಪ್ರಯೋಗಿಸಿ ಕೀಳಲು ಹವಣಿಸಿದರೆ ತುಟಿಯ ಮೃದು ಚರ್ಮಕ್ಕೆನೆ ಹಾನಿಯಾಗುವ ಸಕಲ ಸಾಧ್ಯತೆಗಳೂ ಇದ್ದವು. ಹೀಗಾಗಿ ಜೋಪಾನವಾಗಿ ನಯ ನಾಜೂಕಿನಿಂದ ಲೋಳೆ ಸಿಂಬಳವನ್ನೆಲ್ಲ ತೊಳೆದು ತೆಗಿಯವಷ್ಟರಲ್ಲಿ ಅವನ ಜಾಣ್ಮೆಯೆಲ್ಲಾ ಉಪಯೋಗಿಸಬೇಕಾಗಿ ಬಂತು. 

ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಚರ್ಮದ ಸೊಂಟಪಟ್ಟಿಯಲ್ಲಿದ್ದ ಸಣ್ಣ ಸಂದೂಕದಲ್ಲಿರಿಸಿಕೊಂಡಿದ್ದ ಪೂರ್ವದ ಭಾರತದಿಂದ ತರಿಸಿದ್ದ ಘಾಟು ಹೊಗೆಸೊಪ್ಪಿನ ನಶ್ಯದ ಪುಡಿ ತೆಗೆದು ಚಿಟಿಕೆಯಷ್ಟನ್ನ ಹೆಬ್ಬೆರಳು ಮತ್ತು ತೋರು ಬೆರಳ ಮಧ್ಯೆ ಹಿಡಿದು ತೆಗೆದವನೆ ಸುಲ್ತಾನ ಉಸಿರೆಳೆದುಕೊಳ್ಳುವ ಕ್ಷಣವನ್ನೆ ಕಾದು ಅವನ ಮೂಗಿನ ಎರಡೂ ಹೊಳ್ಳೆಗಳಿಗೆ ಹಾಕಿ ತುಂಬಿದ. ದೀರ್ಘವಾಗಿ ಉಸಿರೆಳೆದುಕೊಳ್ಳುತ್ತಿದ್ದ ಕುದುರೆಯ ನೆತ್ತಿಗೆ ನಶ್ಯದ ಘಾಟು ಮುಟ್ಟಿದ್ದೆ ತಡ ಎಗರೆಗರಿ ತಲೆ ಕೊಡವುತ್ತಾ ಕುದುರೆ ಸರಣಿ ಸೀನುಗಳನ್ನ ಸೀನ ತೊಡಗಿತು. ಅದರ ಪ್ರತಿ ಸೀನಿಗೂ ಎರಡೂ ಹೊಳ್ಳೆಗಳಿಂದ ಗರಣೆಗಟ್ಟಿದ ಹಸಿರು ಹಳದಿ ಒಡಕಿನ ಸಿಂಬಳದ ಧಾರೆ ಧಾರೆ ಕಿತ್ತುಕೊಂಡು ಬಂದು ನೆಲದ ತುಂಬೆಲ್ಲಾ ಗುಪ್ಪೆ ಗುಪ್ಪೆಯಾಗಿ ಹರಡಿಕೊಂಡು ಸೀನಿನ ಸರಣಿ ಮುಗಿದು ತಲೆಕೊಡವಿದಾಗ ಕುದುರೆಗೆ ಒಂಥರಾ ಸುಖಾನುಭಾವವಾಯಿತು. ಅದರ ನೆತ್ತಿ ಹತ್ತಿದ್ದ ಶೀತದ ಸೋಂಕು ಬುಡ ಸಹಿತ ಕಿತ್ತು ಹೊರ ಚಲ್ಲಿ ಅದರ ತಲೆಭಾರ ಇಳಿದು ಹೋಗಿತ್ತು. ಮತ್ತೆ ಬಿಸಿನೀರನ್ನ ಹಿತವಾಗಿ ಚೋಪಿ ಅವನು ಆ ತಾಜಾ ಲೋಳೆಯ ಸಿಂಬಳದ ಮುಖ ತೊಳಿಸಿ ಅದರ ಹಿತಾನುಭಾವವನ್ನ ಮತ್ತಷ್ಟು ಹೆಚ್ಚಿಸಿದ. ಒಣ ಬಟ್ಚೆಯಲ್ಲಿ ತೊಳೆಸಿದ ಮೂತಿ ಒರೆಸಿದ ನಂತರ ಸೊಂಟಪಟ್ಟಿಯ ಸಂದೂಕದಿಂದ  ತೆಗೆದ ಕಿರುಕುಪ್ಪಿಯಲ್ಲಿದ್ದ ಕಚ್ಚಾ ನೀಲಗಿರಿ ಎಣ್ಣೆಯ ನಾಲ್ಕಾರು ಹನಿಗಳನ್ನ ಕುದುರೆಯ ಎರಡೂ ಮೂಗಿನ ಹೊಳ್ಳೆಗಳಿಗೆ ಸೋಕಿಸಿದ. ಶ್ವಾಸದೊಂದಿಗೆ ನೀಲಗಿರಿಯ ಘಮವನ್ನೂ ಉಸಿರಾಡಿದ ಸುಲ್ತಾನ ಮತ್ತಷ್ಟು ಹಗುರ ಭಾವ ಅನುಭವಿಸುತ್ತಾ ಎಂದಿನ ಲವಲವಿಕೆಗೆ ಮರಳ ತೊಡಗಿದ. ಪಟ್ಟಣ ಸೇರಿ ಗೊಟ್ಟದಲ್ಲಿ ಚಳಿಗೆ ತಕ್ಕ ಔಷಧಿಯನ್ನ ಗಾಡಿಖಾನೆಯಲ್ಲಿ ಏರಿಸಿದರೆ ಅವನ ಶೀತದ ಬಾಧೆ ಸಂಪೂರ್ಣ ಹಿಡಿತಕ್ಕೆ ಬರುವುದರಲ್ಲಿ ಯಾವ ಸಂಶಯವೂ ಈಗ ಉಳಿದಿರಲಿಲ್ಲ. ಪಟ್ಟಣ ಮುಟ್ಟುವ ತನಕ ಈ ಪ್ರಥಮ ಚಿಕಿತ್ಸೆ ಖಂಡಿತವಾಗಿ ಅವನನ್ನ ಸ್ವಸ್ಥವಾಗಿರಿಸುತ್ತಿತ್ತು. 


ಕುದುರೆಯ ಆರೈಕೆ ಮುಗಿಸಿದವನೆˌ ಅದೆ ನೀರು ಮೊಗೆದ ಕೈ ಪಾತ್ರೆಗೆ ಸುಲ್ತಾನನ ಕುತ್ತಿಗೆಯ ಜೋಳಿಗೆಯಲ್ಲಿದ್ದ ಹುರುಳಿಯೊಂದು ಹಿಡಿ ಓಟ್ಸ್ ಒಂದು ಹಿಡಿ ಸೊಂಟಪಟ್ಟಿಯ ಸಂದೂಕದಿಂದ ತೆಗೆದ ನಾಲ್ಕು ಕಾಳು ಭಾರತದ ಕಾಳು ಮೆಣಸು ಕುಟ್ಟಿ ಹಾಕಿ ಕುದಿಯಲು ಇಟ್ಟುˌ ಹಬೆಯೇರುತ್ತಿದ್ದ ಚಹಾವನ್ನ ಬಿಸಿಯಾರಿಸುತ್ತಾ ಗುಟುಕು ಗುಟುಕಾಗಿ ಹೀರುತ್ತಾ ತನ್ನ ಮೈ ಮನಕ್ಕೆ ಉಲ್ಲಾಸದ ಔಷಧಿ ಏರಿಸ ತೊಡಗಿದ. ಕಡುಚಳಿಗೆ ಹಾಲು ಸಕ್ಕರೆ ಸೇರಿಸದ ಕುದ್ದು ಕುದ್ದು ಕಂದು ಕಷಾಯವಾಗಿದ್ದ ಕಹಿ ರುಚಿಯ ಕಣ್ಣಾ ಚಹ ಹೊಸ ಹುಮ್ಮಸ್ಸಿನ ಗಣಿಯಂತೆ ಅವನಿಗೆ ಅನಿಸ ಹತ್ತಿತು. ಬೆಂದ ಹುರುಳಿ ಓಟ್ಸಿನ ಮಿಶ್ರಣವನ್ನ ಕೊಂಚ ಬಿಸಿಯಾರಿಸಿ ಬೆಚ್ಚಗಿರುವಾಗಲೆ ಅದನ್ನ ಕುದುರೆಯ ಬಾಯಿಚೀಲಕ್ಕೆ ತುಂಬಿಸಿ ಸುಲ್ತಾನನ ಮೂತಿಗೆ ಬಿಗಿದ. 


ಅದರ ಬೆಚ್ಚನೆ ಹಬೆಗೆ ಮೂಗು ಮತ್ತೆ ಕಟ್ಟಿಕೊಳ್ಳದಿರಲಿ  ಅನ್ನೋದು ಮೊದಲ ಕಾರಣವಾಗಿದ್ದರೆˌ ಹಾದಿಯದ್ದ ಅವನ ನೆಚ್ಚಿನ ತಿನಿಸನ್ನ ಮೆಲ್ಲುತ್ತಲಿದ್ದರೆ ತಕರಾರಿಲ್ಲದೆ ಮುಂದೆ ಮುಂದೆ ಹೆಜ್ಜೆ ಹಾಕುತ್ತಾ ಆದಷ್ಟು ಬೇಗ ಪಟ್ಟಣವನ್ನ ಹೋಗಿ ಮಟ್ಟಬಹುದು ಅನ್ನುವ ಹಂಚಿಕೆಯೂ ಅದರ ಹಿಂದಿತ್ತು. ಅದಾಗಲೆ ಈ ಕಿರು ವೈದ್ಯದ ಕಾರಣ ಅಮೂಲ್ಯವಾದ ಸುಮಾರು ಎರಡು ತಾಸು ಅಲ್ಲಿ ಕಳೆದು ಹೋಗಿತ್ತು. ಮತ್ತೆ ಕುದುರೆಯನ್ನೇರಿ ಪಟ್ಟಣದ ಹಾದಿಯನ್ನವನು ಹಿಡಿದ. ಬೆನ್ನ ಹಿಂದೆ ದೂರಾಗುತ್ತಾ ಬಂದ ಹಾಡಿ ಯಾರದ್ದೋ ಅನಾಥ ಗೋರಿಯಂತೆ ನಿರ್ಲಿಪ್ತವಾಗಿ ನಿಂತಿದ್ದು ಅವರಿಬ್ಬರನ್ನೂ ಬೀಳ್ಕೊಟ್ಟು ಮತ್ತೆ ಮೌನದಂಚಿಗೆ ಜಾರಲು ಸನ್ನದ್ದವಾಯಿತು. ಮುಂದಿನ ಭವಿಷ್ಯದಲ್ಲಿ ಯಾರೂ ಬಂದು ವಾಸ ಮಾಡುವ ಸಾಧ್ಯತೆಯಿಲ್ಲದ ಆ ಹಾಡಿ ಕಾಲನ ಹೊಡೆತಕ್ಕೆ ಬಲಿಯಾಗಿ ಇನ್ನೇನು ಕೆಲವೆ ದಿನಮಾನಗಳಲ್ಲಿ ಕುಸಿದು ಮಣ್ಣಲ್ಲಿ ಮಣ್ಣಾಗಿ ಹೋಗಿ ಶಾಶ್ವತವಾಗಿ ನಾಮಾವಶೇಷವಾಗುವುದು ಖಚಿತವಾಗಿತ್ತು.


ಅವರ ಪ್ರಯಾಣ ನೀರವತೆಯ ಬೇಧಿಸಿ ಮುಂದುವರೆಯಿತು. ಹೊರಗಿನ್ನೂ ಚಳಿಗಾಳಿಯ ಹುಯಿಲಿನ ಅರ್ಭಟ ಕಡಿಮೆಯಾಗಿರಲಿಲ್ಲ. ಬೆಳಕಿನ ಸೆಲೆ ಕೊಂಚ ಕಾಣುತ್ತಿತ್ತಾದರು ಕತ್ತಲ ಸೆರಗು ಇನ್ನೂ ಇಳೆಯ ಮೈಯಿಂದ ಪೂರ್ತಿ ಜಾರಿ ಹೋಗಿರಲಿಲ್ಲ. ಆ ವರ್ಷವಷ್ಟೆ ಕಾಲಿನ ಗೊರಸುಗಳಿಗೆ ಲಾಳ ಕಟ್ಟಿಸಿಕೊಂಡಿದ್ದ ಸುಲ್ತಾನನ ಓಟದ ಲಯಬದ್ಧ ಸದ್ದನ್ನೂ ಮೀರಿಸಿ ಹಿಮಗಾಳಿ ಬೀಸುತ್ತಿತ್ತು.



**********



"ಮಳೆಗಾಲದಲ್ಲಿ ಅಪರೂಪಕ್ಕೆ ಮೋಡದ ಮುಸುಕಿನೊಳಗಿಂದ ಮೂಡಿಬರುವ ಶುಭ್ರ ನೀಲಿ ಬಾನು, 
ನೀನಿಲ್ಲದೆ ಏಕಾಂಗಿಯಾದ ನನ್ನೊಳಗಿನ ಸಂತಸ ಹಾಗೂ ನಾನು."

ದಾರಿಯುದ್ದ ಚಳಿಗಾಳಿಯ ಅರ್ಭಟ ಎದುರಿಸುತ್ತಾ ಅವರಿಬ್ಬರ ಸವಾರಿ ಬಹುಶಃ ಮೂರೋ ನಾಲ್ಕೋ ಮೈಲಿ ದೂರ ಸಾಗಿದ್ದಿರಬಹುದು. ಪಟ್ಟಣ ಇನ್ನೇನು ಅದರ ಎರಡರಷ್ಟು ದೂರದ ಫಾಸಲೆಯಲ್ಲಿ ಮಾತ್ರ ಇದೆ ಅನ್ನುವಷ್ಟರಲ್ಲಿ ಒಂದು ದೊಡ್ಡ ಹಿಮಸಾರಂಗಗಳ ಗುಂಪು ಚಲ್ಲಾಪಿಲ್ಲಿಯಾದಂತೆ ಇವರ ಹಾದಿ ಕತ್ತರಿಸುತ್ತಾ ರಸ್ತೆಯ ಒಂದು ಭಾಗದ ಕಾಡಿನ ಕಡೆಯಿಂದ ಚಂಗನೆ ನೆಗೆಯುತ್ತಾ ಇನ್ನೊಂದೆಡೆಯ ಬಯಲಿನಂತಹ ಹಿಮಚ್ಛಾದಿತ ತೆರೆದ ಸ್ಥಳದತ್ತ ಜೀವಭಯದಿಂದ ಅನ್ನುವಂತೆ ನುಗ್ಗಿ ಓಡೋಡಿ ಹೋಗುವುದು ಅವನ ಕಣ್ಣಿಗೆ ಬಿತ್ತು. ಒಂದು ನಿರ್ದಿಷ್ಟ ವೇಗದಲ್ಲಿ ಆತನಕ ದಾರಿ ಸವೆಸುತ್ತಿದ್ದ ಅವರಿಬ್ಬರಿಗೂ ಒಮ್ಮೆಲೆ ಮುಗ್ಗರಿಸಿ ಬಿದ್ದಂತಾಗಿ ಸುಲ್ತಾನನ ಕುತ್ತಿಗೆಯ ಲಗಾಮನ್ನ ಅವನು ಎಳೆದ ವೇಗಕ್ಕೆ ಅನಿರೀಕ್ಷಿತವಾಗಿ ಪ್ರಯಾಣ ನಿಂತಿತು. ಹಾರಿ ಓಡಿ ಹೋಗುತ್ತಿದ್ದ ಹಿಮಸಾರಂಗಗಳ ಹಿಂಡಿಗೂ ಇವರಿಬ್ಬರಿಗೂ ನಡುವೆ ಅಂದಾಜು ನೂರು ಗಜ ದೂರವಿದ್ದರೆ ಹೆಚ್ಚು ಹೆಚ್ಚು. ಆದ ಅಘಾತದಿಂದ ಅವನಿನ್ನೂ ಚೇತರಿಸಿಕೊಂಡೆ ಇರಲಿಲ್ಲˌ ಹಿಂಡಿನ ಹಿಂದೆಯೆ ಬಿಲ್ಲಿನಿಂದ ಚಿಮ್ಮಿ ಹೊರಟ ಬಾಣಗಳಂತೆ ಹೆಚ್ಚು ಕಡಿಮೆ ಅದೆ ವೇಗದಿಂದ ಎರಡು ತರುಣ ಪ್ರಾಯದ ಹಿಮಚಿರತೆಗಳು ಅಟ್ಟಿಸಿಕೊಂಡು ವೇಗವಾಗಿ ಓಡಿ ಬಂದು ಅದೆ ವೇಗದಲ್ಲಿ ರಸ್ತೆ ದಾಟಿ ತಮ್ಮ ಬೇಟೆಯ ಹಿಂಡನ್ನ ಬೆಂಬಿಡದೆ ಬೆನ್ನಟ್ಟಿದವು.



ಅದರೊಲ್ಲೊಂದು ಬಲಿಷ್ಠವಾಗಿದ್ದ ಹಿಮಚಿರತೆ ಆ ಅವಸರದ ಬೇಟೆಯ ನಡುವೆಯೂ ಇವರ ಹಾಜರಿಯನ್ನ ಗಮನಿಸಿ ತನ್ನ ವೇಗವನ್ನ ನಿಯಂತ್ರಿಸಿಕೊಂಡಂತೆ ಒಮ್ಮೆಗೆ ನಿಂತು ಇತ್ತ ದಿಟ್ಟಿಸಿˌ ಮರುಕ್ಷಣ ಮರಳಿ ಹಿಂಡಿನ ಹಿಂದೆ ಎಗರಿ ಓಡಿತು. ಬಹುಶಃ ಬೇಟೆಯ ಸಮಯ ಅಷ್ಟು ಸಮೀಪದಲ್ಲಿ ಮನುಷ್ಯನ ಹಾಜರಿಯನ್ನ ಅದು ನಿರೀಕ್ಷಿಸಿರಲಿಲ್ಲವೆಂದು ತೋರುತ್ತದೆ. ಅವುಗಳ ಲಕ್ಷ್ಯವೆಲ್ಲಾ ಕೇವಲ ಹಿಮಸಾರಂಗಗಳತ್ತ ನೆಟ್ಟಿದ್ದ ಕಾರಣ ಅವರಿಬ್ಬರೂ ಹಿಮಚಿರತೆಗಳ ಮುಖಾಮುಖಿಯಾಗುವುದರಿಂದ ಕೂದಲೆಳೆಯಿಂದ ಪಾರಾಗಿದ್ದರು ಅನಿಸುತ್ತೆ. ಬೇರೆ ಸಮಯದಲ್ಲಾಗಿದ್ದರೆ ಮೂಳೆ ಕೊರೆವ ಈ ಭೀಕರ ಚಳಿಯಲ್ಲಿ ಹಸಿದು ಕೆಂಗೆಟ್ಟಿರುವ ಜೋಡಿ ಚಿರತೆಗಳು ಸುಲಭವಾಗಿ ದಕ್ಕಬಹುದಾಗಿದ್ದ ಕುದುರೆಯ ಕೊಂದು ತಿನ್ನಲು ಸಹ ಹೇಸುತ್ತಿರಲಿಲ್ಲ. ಹಸಿವು ತುಂಬಾ ಕೆಟ್ಟದ್ದುˌ ಪ್ರಾಣಿಗಳಿಗಾದರೂ ಸರಿˌ ಮನುಷ್ಯ ಮೃಗಕ್ಕಾದರೂ ಸರಿ. ವಾರಗಟ್ಟಲೆ ಆಹಾರ ಕಾಣದೆ ಕಂಗಾಲಾಗಿದ್ದ ಅವುಗಳ ಹೊಟ್ಟೆ ಹಸಿದಿದ್ದ ಪರಿ ಹೇಗಿತ್ತೆಂದರೆˌ ಸಾಮಾನ್ಯವಾಗಿ ಮನುಷ್ಯರಿಂದ ಅಂತರ ಕಾಯ್ದುಕೊಳ್ಳುವುದನ್ನೆ ಆಯ್ಕೆ ಮಾಡಿಕೊಳ್ಳುತ್ತಿದ್ಢ ಆ ವನ್ಯಮೃಗಗಳು ಇಂದು ಕೊಂಚ ಮಟ್ಟಿನ ಅಪಾಯವನ್ನ ಮೈ ಮೇಲೆಳೆದು ಕೊಂಡಾದರೂ ಸರಿ ತಮ್ಮ ಹಸಿವನ್ನ ನೀಗಿಸಿಕೊಳ್ಳಲು ಹೇಸುತ್ತಿರಲಿಲ್ಲವೆನ್ನಬಹುದು.


ಇವನು ಹಿಮಚಿರತೆಗಳನ್ನ ಕಂಡು ಬೆದರಿದ್ದ ಸುಲ್ತಾನನಿಗೆ ಕುತ್ತಿಗೆ ಸವರಿ ಧೈರ್ಯ ಹೇಳುತ್ತಾ ಮುನ್ನಡೆಸಿದ. ವೇಗ ಕುಗ್ಗಿಸಿಕೊಂಡು ಅವರಿಬ್ಬರೂ ರಸ್ತೆಯಲ್ಲಿ ಸಾಗುತ್ತಿರುವದನ್ನು ಈಗ ಸ್ಪಷ್ಟವಾಗಿ ಅವೆರಡು ಚಿರತೆಗಳೂ ತಮ್ಮ ಕ್ರೂರ ಕಣ್ಣುಗಳ ಚೂಪು ನೋಟದಲ್ಲಿ ಗುರುತಿಸಿದವು. ಬೇಟೆ ಭರ್ಜರಿಯಾಗೆ ಆಗಿತ್ತು. ರಸ್ತೆಯಿಂದ ಒಂದೈನೂರು ಗಜ ದೂರದಲ್ಲಿ ಸರಿ ಸುಮಾರು ನೂರು ಕಿಲೋವಾದರೂ ತೂಗಬಹುದಾದ ಒಂದು ಹೋತ ಹಿಮಸಾರಂಗವನ್ನ ಅವೆರಡೂ ಅಡ್ಡಗಟ್ಟಿ ಗುಂಪಿನಿಂದ ಬೇರ್ಪಡಿಸಿ ಚಾಕಚಾಕ್ಯತೆಯ ಜೊತೆಗಾರಿಕೆಯಿಂದ ಕೆಳಗೆ ಕೆಡವಿ ಕೊಂದಿದ್ದವು. ಒಂದು ನೂರು ಗಜವಾದರೂ ಸಹ ಕುತ್ತಿಗೆಯ ಬುಡಕ್ಕೆ ನಾಟಿಸಿದ್ದ ತನ್ನ ಚೂಪು ಕೋರೆಹಲ್ಲುಗಳ ಆಧಾರದಲ್ಲೆ ನೇತಾಡುತ್ತಾ ಅದರಲ್ಲೊಂದು ಹಿಮಚಿರತೆ ಓಡುತ್ತಿದ್ದ ಹಿಮಸಾರಂಗದ ಜೊತೆಜೊತೆಯೆ ಎಳೆದುಕೊಂಡು ಹೋಗಿತ್ತು. ಸೋತ ಹೋತ ಅಡ್ಡಬಿದ್ದ ಕೂಡಲೆ ಇನ್ನೊಂದೂ ಸಹ ಅದರ ಮೇಲೇರಿ ಇನ್ನೂ ಜೀವಂತವಾಗಿದ್ದ ಹಿಮಸಾರಂಗದ ಮುಖದ ಚರ್ಮ ಹರಿದೆಳೆಯುತ್ತಾ ಚಿಮ್ಮಿ ಹಾರುತ್ತಿದ್ದ ಬಿಸಿ ರಕ್ತವನ್ನ ಹೀರಿ ತನ್ನ ಹಸಿವನ್ನ ತೀರಿಸಿಕೊಳ್ಳಲು ಆರಂಭಿಸಿಯಾಗಿತ್ತು. 


ಈ ರಣ ಭೀಕರ ಬೇಟೆಯಾಟವನ್ನ ನೇರವಾಗಿ ಕಂಡದ್ದು ಅವನಿಗೆ ಬೆರಗು ಹುಟ್ಟಿಸಿದರೂ ಸಹ ಅಂತಹ ಅಪೂರ್ವ ಅರಣ್ಯ ನ್ಯಾಯಕ್ಕೆ ನೇರ ಸಾಕ್ಷಿಯಾಗಲು ತನಗೆ ದೊರೆತ ಅನಿರೀಕ್ಷಿತ ಅವಕಾಶಕ್ಕಾಗಿ ಅವನು ದೇವರಿಗೆ ಮನಸಿನೊಳಗಿಂದಲೆ ಕೃತಜ್ಞತೆ ಸಲ್ಲಿಸಿದ. ತಮ್ಮ ಭೋಜನವನ್ನಾರಂಭಿಸಿದ ಚಿರತೆಗಳ ಚಿತ್ತ ಕದಡದಂತೆ ಪಟ್ಟಣದ ದಿಕ್ಕಿಗೆ ದೌಡಾಯಿಸುವಂತೆ ಸುಲ್ತಾನನ ಲಗಾಮನ್ನ ಸಡಿಲ ಬಿಟ್ಟ. ಇಷಾರೆ  ಅರಿತ ಕುದುರೆ ಕೆನೆಯುತ್ತಾ ವೇಗವಾಗಿ ಮುಂದೋಡಿತು. ತಮ್ಮ ಗುಂಪಿನ ಒಂದು ಹೋತ ಬಿದ್ದು ಬಲಿಯಾದದ್ದನ್ನು ನೋಡಲೂ ಸಹ ಸಮಯವಿಲ್ಲದವುಗಳಂತೆ ಹಿಮಸಾರಂಗಗಳ ಗುಂಪು ಇವರ ಎಡಕ್ಕೆ ಕಾಡಿನತ್ತ ಬದುಕಿದರೆ ಬೇಡಿ ತಿಂದೇವು ಅನ್ನುವ ಭಾವದಲ್ಲಿ ಓಡಿ ಹೋಗಿ ಮರೆಯಾದವು. ಬಹುಶಃ ಅವರಿಬ್ಬರಿಗೆ ಆರಂಭದಲ್ಲಿ ನಸು ಮುಂಜಾನೆಯೆ ಎದುರಾಗಿದ್ದ ಆ ಒಂಟಿ ಗರ್ಭಿಣಿ ಹಿಮಸಾರಂಗ ಸಹ ಇದೆ ಗುಂಪಿನ ಸದಸ್ಯೆಯಾಗಿದ್ದಿರಬಹುದು. ಇನ್ಯಾವುದೋ ಇಂತಹದ್ದೆ ಧಾಳಿ ಅವುಗಳ ಮೇಲೆ ಈ ಹಿಂದೆಯೂ ಆಗಿದ್ದಾಗ ಬೆದರಿ ಓಡಿದ್ದ ಅದು ಗುಂಪಿನಿಂದ ಬೇರ್ಪಟ್ಟಿರಬಹುದು ಎಂದವನು ಗ್ರಹಿಸಿದ.


ಸುಲ್ತಾನ ಇವನ ಮನೋಭಿಲಾಶೆಯನ್ನರಿತಂತೆ ಬಿಸು ಬಿಸುವಾಗಿ ಹೆಜ್ಜೆ ಹಾಕುತ್ತಾ ಗಮ್ಯದೆಡೆಗೆ ತನ್ನ ಸಾಮರ್ಥ್ಯವನ್ನೆಲ್ಲ ಮೀರಿ ಓಡ ತೊಡಗಿದ. ಈಗ ದೂರದಲ್ಲಿ ಗೊಂಬೆಗಳಂತೆ ಪಟ್ಟಣದ ಕಟ್ಟಡಗಳು ಕಾಣ ತೊಡಗಿದವು. ಅವುಗಳ ಮಾಡಿನಿಂದ ಮೊಳೆತು ಮೇಲೆದ್ದಂತಿದ್ದ ಹೊಗೆ ಕೊಳವೆಗಳಿಂದ ಬೂದು ಬಣ್ಣದ ಧೂಮದ ಪರದೆ ಮೇಲೇಳುತ್ತಿರೋದು ಅಸ್ಪಷ್ಟವಾಗಿ ಕಣ್ಣಿಗೆ ಬೀಳತೊಡಗಿತು. ಚಳಿಗಾಲದಲ್ಲಿ ಸಾಮಾನ್ಯವಾಗಿ ಬಿರುಗಾಳಿ ಬೀಸದ ಹೊರತು ಹೊಗೆ ಗೂಡಿನಿಂದ ಎದ್ದ ಹೊಗೆಯ ಪರದೆ ಬರೆದಿಟ್ಟ ಚಿತ್ರದಂತೆ ಸ್ಥಿರವಾಗಿ ಒಂದೆ ಕಡೆ ನಿಂತಂತೆ ಕಾಣತ್ತಿತ್ತು. ಹಳ್ಳಿಮನೆಯ ಸುತ್ತಮುತ್ತˌ ಕಾಡಿನ ಹಾದಿಯದ್ದ ಎಡೆಬಿಡದೆ ಕಾಡಿದ್ದ ಹಿಮಮಾರುತದ ಪ್ರಕೋಪ ಆಶ್ಚರ್ಯಕರವಾಗಿ ಇರುಳಿನ ನಿದ್ದೆ ಕಳೆದು ಹೊಸ ಬೆಳಗಿಗೆ ಮೈ ಮುರಿದುಕೊಂಡು ಮಗ್ಗುಲು ಬದಲಿಸಿ ಏಳಲು ಹವಣಿಸುವಂತೆ ಕಾಣಿಸುತ್ತಿದ್ದ ಪಟ್ಟಣದ ಸಮೀಪ ಅಷ್ಟು ಕಾಡುತ್ತಿದ್ದಂತಿರಲಿಲ್ಲ. 

ಪರಿಸರ ಆಗೊಮ್ಮೆ ಈಗೊಮ್ಮೆ ಬೀಸುತ್ತಿದ್ದ ಚಳಿಗಾಳಿಯ ಮರ್ಮರದ ಹೊರತು ಶಾಂತವಾಗಿಯೆ ಇತ್ತು. ಆ ಶಾಂತತೆಯ ಕೊಳಕ್ಕೆ ಕಲ್ಲೆಸೆದಂತೆ ಆಗೊಮ್ಮೆ ಈಗೊಮ್ಮೆ ಯಾರದ್ದೋ ಲಾಯದಿಂದ ಕುದುರೆಯ ಕೆನೆತˌ ಇನ್ಯಾರದ್ದೋ ಕೊಟ್ಟಿಗೆಯಿಂದ ತನ್ನ ಕರುವ ಕೂಗಿ ಕರೆಯುತ್ತಿದ್ದ ದನದ ಕೂಗುˌ ತನ್ನ ಕಂದನಿಗೆ ಹಾಲೂಡಿಸುವ ಸುಖದ ಪರಾಕೇಷ್ಠೆಯಲ್ಲಿ ಟ್ರೋಂಯ್ ಗುಡುತ್ತಿದ್ದ ಎಮ್ಮೆಯ ಕೂಗು. ಬೆಳಗಾಗಿದ್ದರೂ ಸಹ ಇನ್ನೂ ಹಾಸಿಗೆ ಬಿಟ್ಟೇಳದ ಮಕ್ಕಳನ್ನ ಅಡುಗೆ ಮನೆಯ ಪಾತ್ರೆಯ ಸದ್ದು ಗದ್ದಲದ ನಡುವೆಯೆ ಕೂಗಿ ಬೈದು ಎದ್ದೇಳಿಸಲು ಹೆಣಗುತ್ತಿದ್ದ ಅಮ್ಮಂದಿರ ಕೂಗುˌ ತಮ್ಮ ಯಜಮಾನರು ಅದ್ಯಾವಾಗ ಬೆಳಗಿನ ಮೇವು ಹಾಕಿ ಗೂಡಿನಿಂದ ಹೊರಗೆ ಬಚ್ಚಲ ಕೆಸರಿನ ಹುಳ ಹುಪ್ಪಡಿ ಹುಡುಕಿ ಭೋಜನವನ್ನಾರಂಭಿಸಲು ಹೊರಗೆ ಬಿಟ್ಟಾನೆಯೋ ಎಂದು ಚಡಪಡಿಸುತ್ತಾ ಒಟಗುಟ್ಟುತ್ತಿದ್ದ  ಬಾತುಕೋಳಿಗಳ ಲಯಬದ್ಧ ಕುಕ್ಕೂ ಸ್ವರ ಹೌದೋ ಅಲ್ಲವೋ ಎನ್ನುವಂತೆ ಅವನ ಕಿವಿಗಾಪು ಹಾಕಿದ ಶ್ರವಣದ್ವಯಗಳ ಮೇಲೆ ಬೀಳುತ್ತಿದ್ದಂತೆಯೆ ಅವರಿಬ್ಬರೂ ಕೂಡಿ ಪಟ್ಟಣ ಪ್ರವೇಶಿಸಿದ್ದರು. 


ಮೊದಲಿಗೆ ಸುಲ್ತಾನನ ಆರೈಕೆಯೆ ಅವನ ಆದ್ಯತೆಯಾಗಿತ್ತು ಅನ್ನುವುದನ್ನ ಬಿಡಿಸಿ ಹೇಳಬೇಕಿರಲಿಲ್ಲ. ಅವನ ಶೀತದ ಬಾಧೆ ಕೈ ಮೀರುವ ಮೊದಲೆ ಕುದುರೆಗೆ ಔಷಧೋಪಚಾರ ಮಾಡಿಸಿಯೆ ಮುಂದಿನ ಕೆಲಸಗಳಿಗೆ ಕೈ ಹಾಕಲು ಅವನು ನಿರ್ಧರಿಸಿದ್ದ. ಅವರ ಸವಾರಿ ಮೊದಲು ಊರೊಳಗಿನ ಅವರ ಮನೆಗೆ ಹೋಗಿ ತಲುಪಿತು. ಓಣಿ ದಾಟಿ ಹಟ್ಟಿಯತ್ತ ಅವರು ಸಾಗಿದರು.


***********


https://youtu.be/h7vTDUvLNF8


https://youtu.be/YarwjMttRuM


https://youtu.be/M5OfqPT7HsI


https://youtu.be/_7PDVYYyH5w