31 January 2022

ಅವನ ಜೊತೆ ಅವಳ ಕಥೆ......೪

ಅವಳ ಜೊತೆ ಅವನ ಕಥೆ......೪


"ಹಿಮದ ಹನಿಗಳ ಮುತ್ತುಮಣಿಗಳೆಲ್ಲ
ಇಳೆಯ ಕೊರಳ ಹಾರದ ಮುತ್ತುಗಳಂತೆ ಕಂಡುˌ
ಮರಮರದ ಪ್ರತಿ ರೆಂಬೆಕೊಂಬೆಯ ಮೇಲೆಯೂ ಅಂತ ಅಸಂಖ್ಯ ಮಾಲೆಗಳೆ ಕಾಣುತ್ತಿವೆಯಲ್ಲ ಹಿಂಡು ಹಿಂಡು."


ಅಷ್ಟರಲ್ಲಾಗಲೆ ಆಹಾರವೂ ಇಲ್ಲದೆ ತೀವೃ ನಿತ್ರಾಣ ಸ್ಥಿತಿ ತಲುಪಿದ್ದ ಆ ಬಸುರಿ ಸಾರಂಗ ತಲೆಯನ್ನಲ್ಲಾಡಿಸಿ ಹೊರಗೆಳೆದುಕೊಳ್ಳಲೂ ಆಗದೆˌ ಕಷ್ಟಪಟ್ಟು ಬಾಯಿಂದ ಉಸಿರೆಳೆದುಕೊಳ್ಳುತ್ತಾ ದೈನ್ಯವಾಗಿ ತನ್ನ ಸಾವನ್ನ ಎದುರು ನೋಡುತ್ತಾ ನಿಂತಿತ್ತು ಅಂತ ಕಾಣುತ್ತದೆ. ಅದಕ್ಕುಳಿದಿದ್ದ ಆಯ್ಕೆಗಳೆ ಅತಿ ವಿರಳ. ಒಂದಾ ಈ ರಣ ಹಿಮಪಾತಕ್ಕೆ ಮರಗಟ್ಟಿ ಸಾಯಬೇಕುˌ ಇಲ್ಲಾ ಹಿಮಚಿರತೆ ಅಥವಾ ಎಮ್ಮೆತೋಳಗಳ ಕಣ್ಣಿಗೆ ಬಿದ್ದರೆ ನಿಂತ ನಿಂತತೆಯೆ ಅವು ಹರಿದು ಮುಕ್ಕುತ್ತವೆˌ ಅದೂ ಇಲ್ಲದಿದ್ದರೆ ಶಿಕಾರಿಗೆ ಬಿಲ್ಲೋ ಬಂದೂಕವೋ ಎತ್ತಿಕೊಂಡು ಇಂತಹ ಚಳಿಯಲ್ಲೂ ಅಂಡಲೆಯುವ ಮನುಷ್ಯ ಪ್ರಾಣಿಯ ಕಣ್ಣಿಗೇನಾದರೂ ಬಿದ್ದರೆ ಆತನ ಬಾಯಿ ಚಪಲದ ತೆವಲಿಗೆ ಬಲಿಯಾಗಬೇಕು. ಇವು ಮೂರೂ ಅಲ್ಲದಿದ್ದರೂ ಒಂದಿಡಿ ದಿನ ನಿಂತಿದ್ದ ಹಾಗೆ ಹಿಮ ಸುರಿಯುತ್ತಲೆ ಇದ್ದಿದ್ದರೂ ಸಹ ಅದು ಜೀವಂತ ಹಿಮ ಸಮಾಧಿಯಾಗುವ ಸಂಭವವೂ ಇಲ್ಲದಿರಲಿಲ್ಲ.

ಮರುಕದಿಂದ ಬಳಿ ಸಾರಿದ ಇವನು ಸುಲ್ತಾನನ್ನ ಬಗಲಿಗೆ ನಿಲ್ಲಿಸಿಕೊಂಡು ಸಾರಂಗದ ಸ್ಥಿತಿಯನ್ನೊಮ್ಮೆ ಅವಲೋಕಿಸಿದ. ಮರುಕ್ಷಣ ಯೋಚಿಸದೆ ಕೂಡಲೆ ಬೆನ್ನಿಗೆ ಬಿಗಿದುಕೊಂಡಿದ್ದ ಕೈಕೊಡಲಿ ಮತ್ತು ಕೈ ಹಾರೆಯಿಂದ ಅದರ ಮೂತಿಯ ಸುತ್ತ ಕಟ್ಟಿಕೊಂಡಿದ್ದ ಹಿಮ ಕುಟ್ಟಿ ಕೆರೆದು ತೆಗೆದ. ಸಾರಂಗದ ಬಾಯಿ ನೆಲದಿಂದ ಮುಕ್ತಿಯನ್ನೇನೋ ಪಡೆಯಿತು. ಆದರೆ ಮೂಗಿನ ಹೊಳ್ಳೆಗಳಲ್ಲಿ ಹತ್ತಿಯ ಉಂಡೆಗಳಿಟ್ಟಂತೆ ಹಿಮದ ಕಲ್ಲುಗಳು ಸಿಕ್ಕಿಕೊಂಡು ಸರಿಯಾಗಿ ಉಸಿರಾಡಲು ಅದಿನ್ನೂ ಪರಿತಪಿಸುತ್ತಿತ್ತು. ಈತ  ನಿಧಾನವಾಗಿ ಅದಕ್ಕೆ ಗಾಬರಿಯಾಗದಂತೆ ಎರಡೂ ಹೊಳ್ಳೆಗಳಿಂದ ಅದನ್ನ ಕಿತ್ತು ತೆಗೆದ. ಬೇರೆ ಸಂದರ್ಭದಲ್ಲಾದರೆ ಇಷ್ಟು ಸಮೀಪ ಬಂದ ಮನುಷ್ಯನ ಮೇಲೆ ಧಾಳಿ ಮಾಡಿಯೋ ಇಲ್ಲಾ ಬೆದರಿ ಓಡಿಯೋ ಹೋಗಬಹುದಾಗಿದ್ದ ಸಾರಂಗ ನಿತ್ರಾಣವೂ ಆಗಿದ್ದರಿಂದ ಕಕ್ಕಾಬಿಕ್ಕಿಯಾಗಿ ಸಹಕರಿಸುವಂತೆ ನಿಂತೆ ಇತ್ತು. ಅದರ ಪರಿಸ್ಥಿತಿಗೆ ಮರುಗಿ ಸುಲ್ತಾನನ ಕುತ್ತಿಗೆಗೆ ಕಟ್ಟಿದ್ದ ಜೋಲಿಯಿಂದ ಅವನದೆ ಮೇವಿನ ಕೊಂಚ ಭಾಗ ತೆಗೆದು ಅದರ ಮೂತಿಗೆ ಹಿಡಿದ. ಹಸಿದ ಅದು ಮೊದಲು ಅನುಮಾನಿಸಿದರೂ ಅನಂತರ ಬಕಬಕನೆ ಅದನ್ನ ಚಪ್ಪರಿಸಿ ತಿಂದಿತು. ಇವ ಕುದುರೆ ಮೇಲೇರಿದ. ಮುಂದೆ ಮುಂದೆ ಸಾಗಿದ ಇವರಿಬ್ಬರ ಸವಾರಿಯನ್ನ ಕೃತಜ್ಞತೆಯಿಂದೇನೋ ಅನ್ನುವಂತೆ ಸಾರಂಗ ನೋಡುತ್ತಾ ಇನ್ನೂ ನಿಂತೆ ಇತ್ತು. ಬಹುಶಃ ಬಸುರಿ ಸಾರಂಗದ ಬಳಲಿಕೆಯಿನ್ನೂ ಕಳೆದಿರಲಿಲ್ಲˌ ಮನುಷ್ಯ ಮೃಗವೊಂದು ಅತಿ ಹತ್ತಿರ ಬಂದು ಅಪಾಯಕಾರಿಯಾಗಿ ವರ್ತಿಸದೆ ಉಪಕಾರಿಯಾಗಿ ನಡೆದುಕೊಂಡ ಅಘಾತದಿಂದ ಅದಿನ್ನೂ ಚೇತರಿಸಿಕೊಂಡಂತಿರಲಿಲ್ಲ. 


ಇವರಿಬ್ಬರ ಪ್ರಯಾಣ ಯಥಾಪ್ರಕಾರ ಪಟ್ಟಣದ ದಿಕ್ಕಿಗೆ ಮುಂದುವರೆಯಿತು. ಹಿಮಪಾತವೂ ಸಹ ಏಕತಾನ ಹಿಡಿದಂತೆ ಒಂದೆ ಸಮನೆ ರಚ್ಚೆ ಹಿಡಿದು ಸುರಿಯುತ್ತಲೆ ಇತ್ತು. ಸ್ಥೂಲವಾಗಿ ಹಿಮದ ಮಳೆಯಲ್ಲಿ ಮೀಯುತ್ತಿರುವ ಕಾಡಿನ ಇಕ್ಕೆಲದ ಮರಗಳ ನಡುವಿನ ಅಗಲ ಸ್ಥಳವನ್ನ ದಾರಿ ಎಂದು ಅಂದಾಜಿಸಿಕೊಂಡು ಮುಂದುವರೆಯುವ ಪರಿಸ್ಥಿತಿ ಅಲ್ಲಿತ್ತು. ವಸಂತದ ನಂತರದ ದಿನಮಾನದಲ್ಲಿ ಅಷ್ಟು ಹೊತ್ತಿಗೆಲ್ಲಾ ಹೊಳೆಯುತ್ತಾ ಭೂಮಿಯ ಮೇಲಿನ ಕತ್ತಲ ಕೊಳೆ ತೊಳೆಯುತ್ತಾ ಬೆಚ್ಚಗೆ ಮೂಡಿರುತ್ತಿದ್ದ ಸೂರ್ಯನೂ ಈ ಭೀಕರ ಹಿಮಪಾತದ ಚಳಿಯ ಹೊಡೆತಕ್ಕೆ ಹೆದರಿ ತಲೆಮರೆಸಿಕೊಂಡು ಓಡಿ ಹೋಗಿದ್ದ. ಕೇವಲ ಮೂಡಣದ ದಿಕ್ಕಿನಲ್ಲಿ ಒಲೆಯ ಬೂದಿ ಕದಡಿದಂತೆ ಕೊಂಚ ಬೂದು ಬೂದು ಬೆಳಕು ಕಂಡಂತಾಗಿ ಮರೆಯಾದದ್ದು ಬಿಟ್ಟರೆ ಮಿಕ್ಕಂತೆ ಹಗಲು ಕಣ್ತೆರೆದಿರೋದಕ್ಕೆ ಆ ನಿಶಾಚರ ಮಾರ್ಗದುದ್ದ ಯಾವೊಂದು ನಿಶಾನಿಯೂ ಅವನಿಗೆ ಕಾಣಸಿಗಲಿಲ್ಲ. 


ಚಳಿಯ ಹೊಡೆತಕ್ಕೆ ತತ್ತರಿಸಿ ಕಾಡಿನ ಹಕ್ಕಿಗಳೆಲ್ಲಾ ಒಂದೋ ಅವುಗಳ ಪೊಟರೆˌ ಗೂಡುಗಳನ್ನ ಬಿಟ್ಟು ಹೊರ ಬರುವ ಧೈರ್ಯವನ್ನೆ ಮಾಡಿರಲಿಲ್ಲˌ ಇಲ್ಲಾ ಅವುಗಳೆಲ್ಲ ತತ್ಕಾಲಿಕವಾಗಿ ಬೆಚ್ಚನೆ ಆಶ್ರಯ ಅರಸಿ ಇನ್ನಷ್ಟು ದಕ್ಷಿಣಕ್ಕೆ ಹಾರಿ ಹೋಗಿ ತಮ್ಮ ಜೀವ ಉಳಿಸಿಕೊಂಡಿದ್ದವು. ಅಷ್ಟು ದೂರ ಸಾಗುವ ಶಕ್ತಿಯಿಲ್ಲದ ನೆಲವಾಸಿಗಳಾದ ಕತ್ತೆಮೊಲಗಳುˌ ಹಿಮಸಾರಂಗಗಳುˌ ಹೆಬ್ಬಾತುಗಳುˌ ಮುಂಗುಸಿಗಳುˌ ಹಾವುಗಳುˌ ಕೆಂಜಳಿಲುಗಳುˌ ಗಡವ ಪಾರಿವಾಳಗಳೆಲ್ಲ ಅಲ್ಲಲ್ಲಿ ಸಿಕ್ಕ ಆಶ್ರಯಗಳಲ್ಲಿ ಸೇರಿ ಹೋಗಿ ಒಮ್ಮೆ ಈ ಚಳಿ ಮುಗಿಯಲಪ್ಪ ದೇವರೆ ಎನ್ನುವಂತೆ ಕಾಯುತ್ತಾ ಉಳಿದ ಹಾಗೆ ಇಡಿ ಪರಿಸರ ಹಿಮ ಸುರಿತದ ಸದ್ದೊಂದರ ಹೊರತು ಶಾಂತವಾಗಿಯೆ ಇದ್ದಂತಿತ್ತು. ದೂರದೂರದವರೆಗೂ ಬರಿ ಬೆಳ್ಳನೆ ಹಿಮರಾಶಿಯೆ. ನಡುನಡುವೆ ಎಲೆಯುದುರಿದ್ದರೂ ಸಹ ತಲೆ ಎತ್ತಿ ನಿಂತ ಕಾನನದ ಹೊರತು ದೂರದೂರದವರೆಗೂ ಅವನ ಸುಲ್ತಾನನ ಹೊರತು ಇನ್ನೊಂದು ಜೀವ ಅಲ್ಲಿ ಕಾಣ ಸಿಗುವ ಸಾಧ್ಯತೆಯೆ ಇರಲಿಲ್ಲ.


ಇಂದು ಇವನಿಗೆ ಹೊರಡುವಾಗಲೆ ಹಿಂದಿರುಗಿ ಇಂದೆ ಮನೆಗೆ ಬಂದು ಮುಟ್ಟಬೇಕು ಅನ್ನುವ ಉದ್ದೇಶ ಮನ ಹೊಕ್ಕಿತ್ತು. ಈ ನಡುವೆ ಮನೆಗೆ ಬಂದಿದ್ದ ತಿಮ್ಮಯ್ಯ ಹೇಳಿದ್ದ ಪ್ರಕರಣವೊಂದು ಅವನ ಕಳವಳ ಹೆಚ್ಚಿಸಿತ್ತು. ಇಲ್ಲದಿದ್ದಲ್ಲಿ ಬಹುಶಃ ಒಂದಿರುಳನ್ನ ಪಟ್ಟಣದ ತಮ್ಮ ಬಿಡಾರದಲ್ಲಿ ಕಳೆಯುವ ಧೈರ್ಯವನ್ನವನು ಖಂಡಿತವಾಗಿ ಮಾಡಿರುತ್ತಿದ್ದ. ಈ ಹಂಗಾಮಿನ ಚಳಿಗಾಲ ಇಷ್ಟು ತೀವೃವಾಗುವ ಬಗ್ಗೆ ಇನಿತು ಸುಳಿವು ಸಿಕ್ಕಿದ್ದರೂ ಸಾಕಿತ್ತುˌ ಅವನು ಆಗ ಪುನಃ ಎರಡು ತಿಂಗಳ ಬಸುರಿಯಾಗಿದ್ದ ಅವಳನ್ನೂ ಕೈಗೂಸು ರಾಜನನ್ನೂ ಪಟ್ಟಣದ ಬಿಡಾರಕ್ಕೆ ಸ್ಥಳಾಂತರಿಸಿಯೆ ಬಿಡುತ್ತಿದ್ದ. ಪಟ್ಟಣದಲ್ಲಿ ಜನವಸತಿಯ ನಡುವೆ ಇಂತಹ ವಿಪರೀತ ಪರಿಸ್ಥಿತಿಯಲ್ಲಿ ಕಾಲ ಹಾಕುವುದು ಜಾಣತನ. ಅಲ್ಲದೆ ಗೋಪಿಯ ಕುಟುಂಬ ಸಹ ಅಲ್ಲೆ ಇತ್ತಲ್ಲ. ತುರ್ತು ಅಗತ್ಯಗಳಿಗೆ ಒದಗಿಬರುವ ಒಳ್ಳೆಯ ನೆರೆಕರೆ ಅವರಾಗಿದ್ದರು. 


ಆದರೆ ಈ ಸಲದ ಒಕ್ಕಣೆ ಮುಗಿಸಿ ಹುಲ್ಲು ಮೆದೆ ಹಾಕಿ ಧಾನ್ಯಗಳ ಹೊಟ್ಟು ಗಾಳಿಗೆ ತೂರಿ ಪಣತ ತುಂಬಿಸುವಾಗಲೆ ತಡವಾಗಿ ಹೋಗಿತ್ತು. ಕೂಲಿಗೆ ಸಮಯಕ್ಕೆ ಸರಿಯಾಗಿ ಕೂಲಿಯಾಳುಗಳು ಸಿಕ್ಕಿರಲಿಲ್ಲ. ಈ ಸಾರಿ ಸಮೀಪದಲ್ಲಿಯೆ ಇನ್ನೆರಡು ಹೊಲಮನೆಗಳ ಜಮೀನಿನ ಬೇಸಾಯದ ಚಟುವಟಿಕೆಗಳೂ ಆರಂಭವಾಗಿ  ಕೂಲಿ ಕೆಲಸಗಾರರ ಬೇಡಿಕೆ ಸಹಜವಾಗಿ ಏರಿತ್ತು. ಹೀಗಾಗಿ ಅವರ ಲಭ್ಯತೆಯನ್ನ ಅನುಸರಿಸಿಕೊಂಡು ಸುಗ್ಗಿ ಒಕ್ಕಣೆಯನ್ನ ತಾನೂ ಸಹ ಮುಂದು ಹಾಕಿಕೊಳ್ಳಬೇಕಾಗಿ ಬಂದಿತ್ತು. ಅದೆಲ್ಲ ರಗಳೆ ಮುಗಿಸಿ ಪೇಟೆಗೆ ಚಳಿಗಾಲದಲ್ಲಿ ಉಪಯೋಗಕ್ಕೆ ಬೇಕಾಗುವ ದಿನಸಿ ತರಲು ಹೋಗಿದ್ದ ವೇಳೆ ಆ ಸ್ಥಳಿಯ ಬುಡಕಟ್ಟಿನ ಹಿರಿಕನ ಮಾತನ್ನ ಪಟ್ಟಣದ ಭಂಡಸಾಲೆಯಲ್ಲಿ ಯಾರೋ ಉದ್ಧರಿಸಿ ಉಢಾಫೆಯಿಂದ ಗೇಲಿ ಮಾಡುತ್ತಿದ್ದುದು ಕೇಳಿ ಇವನ ಕಿವಿ ನಿಮಿರಿತು. ಯಾವುದೆ ಕಾರಣಕ್ಕೂ ಹಿರಿಯರ ಸ್ಥಳಿಯರ ಜೀವನಾನುಭಾವದ ಮಾತುಗಳನ್ನ ಕಡೆಗಣಿಸಲೆಬಾರದು ಅನ್ನುವ ಪ್ರಾಥಮಿಕ ಬದುಕಿನ ಪಾಠ ಅವನಿಗೆ ಅವನ ಅಪ್ಪನಿಂದಾಗಿತ್ತು. 


ಆದರೆ ಇದೀಗ ಈ ಸುದ್ದಿ ಅವನ ಕಿವಿಗೆ ಬೀಳುವ ಹೊತ್ತಿಗೆ ಆ ಹಿರೀಕ ಅದನ್ನ ಘಂಟಾಘೋಷವಾಗಿ ಒದರಿ ಹೋಗಿ ಎರಡು ಪೂಜೆಯ ಆದಿತ್ಯವಾರಗಳು ಕಳೆದು ಮೂರು ದಿನ ಕಳೆದಿತ್ತು. ಅಂದರೆ ಹದಿನೇಳು ದಿನಗಳ ಹಿಂದೆ ಅವ ಇಲ್ಲಿನ ಎಲ್ಲರಿಗೂ ಈ ಎಚ್ಚರಿಕೆ ಸಾರಿದ್ದ. ಈಗ ಹೆಚ್ಚೆಂದರೆ ಎರಡು ಮೂರು ದಿನಗಳಲ್ಲಿ ಈ ಹಂಗಾಮಿನ ಚಳಿ ಆವರಿಸಿಕೊಳ್ಳಲು ಹವಣಿಸುತ್ತಿರೋವಾಗ ಏಕಾಏಕಿ ಸ್ಥಳಾಂತರವಾಗಲು ಸಾಧ್ಯವೆ? ಜನ ಬಂದರೆ ಜಾನುವಾರು ಬಾರದುˌ ಜಾನುವಾರು ತಂದರೆ ಜನರನ್ನ ಕರೆತರಲಾಗದು ಅನ್ನುವ ಇಬ್ಬಂದಿಯ ಪರಿಸ್ಥಿತಿ. ಹಾಗೊಮ್ಮೆ ಜಾನುವಾರುಗಳನ್ನ ಅಲ್ಲೆ ಬಿಟ್ಟು ಬಂದರೂ ಸಹ ನಿತ್ಯ ಅಲ್ಲಿಂದಿಲ್ಲಿಗೆ ಓಡಾಡಿಕೊಂಡು ಎರಡೂ ಕಡೆ ನಿಭಾಯಿಸುವುದು ಅಪಾಯಕ್ಕೆ ಕರೆದು ಆಹ್ವಾನ ಕೊಟ್ಟಂತಾಗುತ್ತಿದ್ದುದರಲ್ಲಿ ಯಾವ ಸಂಶಯವೂ ಇಲ್ಲ. ಹೀಗಾಗಿ ಅವನು ಈ ಪರಿಶ್ರಮ ತೆಗೆದುಕೊಳ್ಳಲಿಲ್ಲ.

**************


"ಊರು ಮುಗಿದರೂ ಯಾವುದೆ ಸೂರು ಕಾಣಲಿಲ್ಲˌ
ಮನೆಗಳ ಗಡಿ ದಾಟಿದವರಿಗೂ ಸಹ ಮನಗಳ ಎಲ್ಲೆ ಮೀರಲಾಗಿಯೆ ಇಲ್ಲ./
ಸುತ್ತಲೂ ಕವಿದ ಮೌನ ಮಾರ್ದವವೋ ಭೀಕರವೋ ಯಾರಿಗೆ ಗೊತ್ತುˌ
ಇನ್ನೂ ಅದನ್ನರಯಲಾಗಲಿಲ್ಲ."



ಬೆಳಗ್ಯಿನಿಂದ ಪ್ರಯಾಣ ಆರಂಭವಾದಾಗಲಿಂದಲೂ ಸುಲ್ತಾನ ಅದೇಕೋ ಅನ್ಯ ಮನಸ್ಕನಾಗಿರುವಂತೆ ಅವನಿಗನಿಸ ತೊಡಗಿತು. ಅವನ ಅನ್ಯಮನಸ್ಕತೆ ಉತ್ಸಾಹ  ಹೀನತೆ ಅವನ ನಡೆಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು. ಕುದುರೆಗಳು ತುಂಬಾ ಸೂಕ್ಷ್ಮ ಜೀವಿಗಳು ಅವಿನ್ನೂ ವಯಸ್ಕರಾಗುವ ಮೊದಲೆ ತುಂಬಾ ತಾಳ್ಮೆಯಿಂದ ಅವುಗಳ ಕಾಟುಮಾರಿತನˌ ಒಡ್ಡೊಡ್ಡು ನಡುವಳಿಕೆಗಳನ್ನೆಲ್ಲ ನಯವಾಗಿಯೆ ತಿದ್ದುತ್ತಾ ಅವುಗಳನ್ನ ಮನುಷ್ಯನ ಉಪಯೋಗಕ್ಕೆ ಯೋಗ್ಯವಾಗಿಸಿಕೊಳ್ಳಬೇಕು. ಸಾಮಾನ್ಯವಾಗಿ ಈ ಪ್ರದೇಶದ್ದೆ ಸ್ಥಳಿಯ ತಳಿಗಳಾದ ಸಪೂರ ಮೈಕಟ್ಟಿನ ಕಾಡುಕುದುರೆಗಳನ್ನ ಪಳಗಿಸಿಕೊಂಡೆ ಸ್ಥಳಿಯ ಬುಡಕಟ್ಟಿನ ಜನರು ಅವುಗಳನ್ನ ಸವಾರಿಗೆ ಉಪಯೋಗಿಸುತ್ತಿದ್ದರು. ತೀರಾ ಕನಿಷ್ಠ ಮಟ್ಟದ ವ್ಯವಸಾಯ ಕೃಷಿ ಮಾಡುತ್ತಿದ್ದ ಆ ಸ್ಥಳಿಯರಿಗೆ ಕುದುರೆಗಳನ್ನ ಬೇಸಾಯಕ್ಕೆ ಉಪಯೋಗಿಸುವ ಅವಶ್ಯಕತೆಯೆ ಬೀಳಲಿಲ್ಲ. 


ಅಲ್ಲದೆ ಲಗಾಮು ಜೀನು ಮುಂತಾದ ನವನಾಗರೀಕತೆಯ ಸಾಧನಗಳೊಂದರ ಪರಿಚಯವೂ ಇದ್ದಿರದಿದ್ದ ಅವರದ್ದೇನಿದ್ದರೂ ಬತ್ತಲೆ ಕುದುರೆ ಮೇಲಿನ ಸಾಹಸಮಯ ಸವಾರಿ. ಅದನ್ನು ಪಳಗಿಸುವ ಹಂತದಲ್ಲಾದರೂ ಸರಿ ಪಳಗಿಸಿ ಉಪಯೋಗಿಸುವ ಹಂತದಲ್ಲಾಗಿರಲಿ ಅವರು ಜೀನು ಬಿಗಿದು ಕೂತದ್ದೆ ಇಲ್ಲ. ತಾವೂ ಕೌಪಿನಧಾರಿಗಳಾಗಿರುತ್ತಿದ್ದ ಆ ಬುಡಕಟ್ಟುಗಳ ಯುವಕ ಯುವತಿಯರು ಬರಿ ಬೆನ್ನಿನ ಕುದುರೆಯನ್ನ ಹಾರಿ ಏರಿˌ ಅದರದ್ದೆ ಮೇಲ್ಗುತ್ತಿಗೆಯ ಜೂಲನ್ನ ಹಿಡಿದು ಮಾರ್ಗದರ್ಶಿಸಿ ಮುನ್ನಡೆಸುತ್ತಿದ್ದರು. ಅವರ ನಿಖರವಾದ ಬಾಯಿ ಮಾತುˌ ಕಾಲಿನ ಬೆರಳಗಳಿಂದ ಅವರು ಹೊಟ್ಟೆಗೆ ಗುದ್ದಿ ಕೊಡುತ್ತಿದ್ದ ಸೂಚನೆˌ ಜೂಲನ್ನ ಸಡಿಲ ಬಿಟ್ಟೋ ಇಲ್ಲಾ ಬಲವಾಗಿ ಹಿಡಿದು ತಮ್ಮ ತೋಳಿನ ಬಿಸುಪನ್ನ ಅಶ್ವಗಳ ಮಸ್ತಿಷ್ಠಕ್ಕೂ ದಾಟಿಸಿ ಕೊಡುತ್ತಿದ್ದ ದೈಹಿಕ ಸಂಜ್ಞೆಗಳನ್ನ ಅನುಸರಿಸಿ ಆ ಕುದುರೆಗಳು ತನ್ನ ಸವಾರನ ಮನೋಭಿಲಾಶೆಯಂತೆ ವರ್ತಿಸುತ್ತಾ ಎಲ್ಲಿಯೂ ಎಲ್ಲೆ ಮೀರದಂತೆ ಮುನ್ನಡೆಯುತ್ತಿದ್ದವು. ಅವರೆಂದೂ ಸಾರೋಟು ಗಾಡಿ ಹೂಡುವ ಪ್ರಮೇಯವೆ ಇಲ್ಲದಿರುತ್ತಿದ್ದುದ್ದರಿಂದˌ ಇಂತಹ ಕಾಡುಕುದುರೆಗಳಿಗೆ ಜೊತೆ ಮಾಡುವ ಅಥವಾ ಬಂಡಿ ಎಳೆಯುವ ತರಬೇತಿ ಕೊಡುವ ಯಾವೊಂದು ಅಗತ್ಯವೂ ಬರುತ್ತಿರಲಿಲ್ಲ. 

ಅವುಗಳ ಆಹಾರದಲ್ಲೂ ಅಷ್ಟೆˌ ಕಾಡು ಮೇಯ್ದುಕೊಂಡು ಹಸಿರು ಹುಲ್ಲನ್ನೆ ಮುಖ್ಯ ಹೊಟ್ಟೆಪಾಡು ಮಾಡಿಕೊಂಡಿರುತ್ತಿದ್ದ ಆ ತುರಗಗಳಿಗೆ ಅವರು ತೋರುತ್ತಿದ್ದ ಔದಾರ್ಯವೇನೆಂದರೆ ಚಳಿಗಾಲದಲ್ಲಿ ತಮ್ಮ ಸೇವನೆಗೆಂದು ತಾವು ಬೆಳೆದಿಟ್ಟುಕೊಳ್ಳುತ್ತಿದ್ದ ಹುರುಳಿಯನ್ನಷ್ಟು ಅವಕ್ಕೂ ಬೇಯಿಸಿ ಹಾಕಿ ಮೇಲೆ ಚೂರು ತಾವೆ ತಯಾರಿಸಿಕೊಳ್ಳುತ್ತಿದ್ದ ಮನೆ ತಯಾರಿಕೆಯ ಕಳ್ಳಿನಲ್ಲೂ ಕೊಂಚ ಪಾಲು ಕೊಟ್ಟು ಅವುಗಳ ಮೈಯನ್ನೂ ಬೆಚ್ಚಗಾಗಿಸುತ್ತಿದ್ದುದ್ದು. ಸತ್ತ ಕುದುರೆಯಿಂದ ಜೂಲು ಗೊರಸು ಬಾಲದ ಕೂದಲು ರೆನ್ನೆಟ್ ಹಲ್ಲು ಚರ್ಮ ಪಕ್ಕೆಲುಬುಗಳು ಹೀಗೆ ಬಳಸಬಹುದಾದ ಸಕಲ ಅಂಗೋಂಪಾಂಗಗಳನ್ನೂ ಕಡಿದು ಬೇರ್ಪಡಿಸಿ ತಮ್ಮ ಅನುಕೂಲಕ್ಕೆ ಅನುಸಾರವಾಗಿ ಅವನ್ನ ಬಳಸಿಕೊಳ್ಳುತ್ತಿದ್ದರವರು.

ಇನ್ನು ಇವನ ಕುಲಸ್ಥರು ದೂರದ ಖಂಡಾಂತರದಿಂದ ನವನಾಡಿನಲ್ಲಿ ನೆಮ್ಮದಿಯ ಬದುಕನ್ನ ಅರಸಿಕೊಂಡು ಬರಲಾರಂಭಿಸಿದ ಹೊಸತರಲ್ಲಿಯೆ ಅವರಲ್ಲಿ ಕೆಲವರ ಜೊತೆ ಕುಬ್ಜ ಮೈಕಟ್ಟಿನ ಪುಟ್ಟ ಪುಟ್ಟ ಕಾಲುಗಳ ಕೊಂಚ ಸ್ಥೂಲ ಮೈಕಟ್ಟಿನ ಫೋನಿ ಜಾತಿಯ ಕುದುರೆಗಳನ್ನ ಕರೆತಂದಿದ್ದರು. ಶೀತಪ್ರದೇಶ ಮೂಲದಿಂದಲೆ ಬಂದಿದ್ದ ಫೋನಿಗಳ ಮೈತುಂಬಾ ಕೂದಲೆಂದರೆ ಕೂದಲು. ಅವುಗಳನ್ನ ನೋಡಲು ಆಕರ್ಷಕವಾಗಿಸುತ್ತಿದ್ದ ಆ ಕೂದಲುಗಳೆ ಅವುಗಳಿಗೆ ಪೀಡೆಯಾಗಿಯೂ ಪರಿಣಮಿಸುತ್ತಿದ್ದವು. ಚಳಿಗಾಲದ ಉತ್ತುಂಗದಲ್ಲಿ ಹೇನು ಉಣ್ಣೆಗಳಾಗುವುದಂತೂ ಅತಿ ಸಾಮಾನ್ಯ ಈ ತಳಿಗಳಲ್ಲಿ. ಚಳಿಯಿಂದ ಪಾರಾಗಿ ಬೆಚ್ಚನೆ ಆಶ್ರಯ ಹಾಗೂ ತಾಜಾ ಸ್ವಾದಿಷ್ಟ ರಕ್ತವನ್ನ ಬಯಸಿ ಇರೋಬರೋ ಕ್ರಿಮಿ ಕೀಟಗಳೆಲ್ಲ ಇವುಗಳ ಜೂಲಿನಲ್ಲಿ ಅಡಗಿ ನೆತ್ತರು ಹೀರುತ್ತಿದ್ದವು. ಹೀಗೆ ರಕ್ತದಾನ ಮಾಡಿ ಮಾಡಿಯೆ ಮೇಲಿಂದ ಜೂಲಿನ ದೆಸೆಯಿಂದ ಕೃತಕವಾಗಿ ದಷ್ಟಪುಷ್ಟವಾಗಿದೆ ಅನ್ನುವ ಭ್ರಮೆ ಹುಟ್ಟಿಸುತ್ತಿದ್ದ ಈ ಫೋನಿಗಳು ಒಳಗೊಳಗೆ ರಕ್ತ ಹೀನತೆಯಿಂದ ಬಡಕಲಾಗುವುದೂ ಇತ್ತು. 

ಅಷ್ಟೆ ಅಲ್ಲದೆ ಇವುಗಳ ಮುಖಾಂತರ ಕೊಟ್ಟಿಗೆಯ ಇನ್ನಿತರ ಜಾನುವಾರುಗಳಿಗೂ ಈ ಪರಪುಟ್ಟ ಕ್ರಿಮಿಕೀಟಗಳು ದಾಟಿ ಕಿರುಕುಳ ಕೊಡುವ ಸಾಧ್ಯತೆಗಳೂ ಇದ್ದವಲ್ಲ! ಅಲ್ಲದೆ ಸಗಣಿ ಗಂಜಲ ಬಿದ್ದು ಬೇಗ ಕೊಳೆಯಾಗುತ್ತಿದ್ದ ಇವುಗಳ ಜೂಲುಗಳು ಕಾಲಕಾಲಕ್ಕೆ ಮೈತೊಳೆದು ಮೀಯಿಸದಿದ್ದರೆ ಇವುಗಳ ಮೈಯೇರಿ ಅಲ್ಲೆ ಗಟ್ಟಿಯಾಗುವ ಕೊಳೆಯ ದುರ್ನಾತ ಇವುಗಳೊಂದಿಗೆ ಸುತ್ತಲ ಪರಿಸರವನ್ನೂ ನಾರುವಂತೆ ಮಾಡುತ್ತಿದ್ದವು. ಒಟ್ಟಿನಲ್ಲಿ ಆಗಾಗ ತೊಳೆದುˌ ವರ್ಷ ಅಥವ ಎರಡು ವರ್ಷಕ್ಕೊಮ್ಮೆ ಮೈಕೂದಲು ಹೆರೆದು ಬೋಳಿಸಿ ಗೊಂಬೆಗಳಂತೆ ಅಂದಗೊಳಿಸಿಟ್ಟುಕೊಂಡು ಜತನವಾಗಿ ಇವುಗಳ ದೇಖಾರೇಖಿ ಮಾಡುವುದು ಈ ಫೋನಿ ಕುದುರೆಗಳ ಮಾಲಕರಾಗಿರುವ ರೈತಾಪಿಗಳಿಗೆ ಅನಿವಾರ್ಯ ಕರ್ಮವೆ ಆಗಿರುತ್ತಿತ್ತು. ಹಾಗಂದ  ಮಾತ್ರಕ್ಕೆ ಇವು ಶ್ರಮದ ದುಡಿಮೆಗೆ ಪೂರಕವಾದ ಮೈಕಟ್ಟು ಹೊಂದಿಯೂ ಇರುತ್ತಿರಲಿಲ್ಲ. ಸಣ್ಣಪುಟ್ಟ ಹೂಟಿಯ ಕೆಲಸಕ್ಕಷ್ಟೆ ಭುಜ ಕೊಡಬಲ್ಲˌ ಬಗ್ಗಿಬಂಡಿಯ ಹೊರತು ಬೇರೆ ಯಾವ ಸಾರೋಟಿಗೂ ಕಟ್ಟಲಾಗದ ಒಟ್ಟಿನಲ್ಲಿ ಉಪಯೋಗಕ್ಕಿಂತ ಹೆಚ್ಚಿನ ಕಾಳಜಿ ಹಾಗೂ ಸೇವೆ ಬಯಸುತ್ತಿದ್ದ ಈ ಫೋನಿ ಕುದುರೆಗಳು ಕೃಷಿಕರ ಹಿತಾಸಕ್ತಿಯಿಂದ ದೃಷ್ಟಿಸಿ ಹೇಳೋದಾಗಿದ್ದರೆ ಇರೋದಕ್ಕಿಂತ ಇಲ್ಲದಿರೋದೆ ಹೆಚ್ಚು ವಾಸಿ!



ಆದರೆ ವಸಾಹತುಗಳ ಜನದಟ್ಟಣೆ ಕಾಲಕ್ರಮೇಣ ಹೆಚ್ಚಿ ಇಲ್ಲಿಯೂ ಜನರ ಶಾಶ್ವತ ನೆಲೆಗಳು ಬೇರೂರ ತೊಡಗಿದ ಅನಂತರದ ದಿನಮಾನಗಳಲ್ಲಿ ಅವರ ಅಗತ್ಯಗಳಿಗೆ ತಕ್ಕಂತೆ ಪರಿಸ್ಥಿತಿಗಳೂ ಬದಲಾಗುತ್ತಲೆ ಸಾಗಿದವು. ಕೃಷಿ ಚಟುವಟಿಕೆ ಗರಿಗೆದರಿತು. ದೂರ ದೂರ ಭೂಮಿಯನ್ನ ಅತಿಕ್ರಮಿಸುತ್ತಾ ಈ ವಲಸಿಗರ ಪಡೆ ಪಶ್ಚಿಮಾಭಿಮುಖವಾಗಿ ಇನ್ನಷ್ಟು ಒಳನಾಡುಗಳತ್ತ ಒತ್ತುವರಿ ಮುಂದುವರೆಸಿಕೊಂಡು ಮುಂದುವರೆದಾಗ ಅವರಿಗೆ ಒದಗಿ ಬಂದದ್ದು ಈ ಬಲಿಷ್ಠ ಅರೆಬಿಯನ್ ತಳಿಯ ಕುದುರೆಗಳು. ಕನಿಷ್ಠ ಏಳೂವರೆಯಡಿ ಮೈಕಟ್ಟಿನˌ ಗೊರಸಿಂದ ತಲೆಯವರೆಗೆ ಕಡಿಮೆಯೆಂದರೂ ಆರಡಿ ಉದ್ದವಿರುತ್ತಿದ್ದ ಈ ಸೈಂಧವ ಗಾತ್ರದ ಅಶ್ವಗಳು ಕಷ್ಟ ಸಹಿಷ್ಣುಗಳಾಗಿದ್ದು ಬಂಡಿ ಬಗ್ಗಿ ಪ್ರಯಾಣಕ್ಕೂˌ ಸವಾರಿಗೂ ಹಾಗೂ ನೊಗ ನೇಗಿಲು ಹೂಡಲೂ ಪ್ರಶಸ್ತವಾಗಿದ್ದವು. ಇವುಗಳ ಪುಂಡಾಟಿಕೆ ಸ್ವಲ್ಪ ಅಧಿಕˌ ಪಳಗಿಸುವುದು ಚೂರು ತ್ರಾಸದಾಯಕ ಅನ್ನೋದು ಬಿಟ್ಟರೆ ಕಡಿಮೆ ನಿರ್ವಹಣೆ ಬಯಸುತ್ತಿದ್ದ ಇವು ರೈತಾಪಿಗಳಿಗೆ ಸಹಜವಾಗಿಯೆ ಅಚ್ಚುಮೆಚ್ಚಿನದಾಗಿದ್ದವು. 



ಆದರೆ ಬರುಬರುತ್ತಾ ಅವುಗಳಲ್ಲೂ ತಳಿಸಂಕರವಾಗಿ ಸ್ಥಳಿಯ ತಳಿಗಳ ಜೊತೆ ಸೇರಿ ಹುಟ್ಟಿದ ಅನೇಕ ಕುದುರೆಗಳೂ ಈಗ ಇವೆ ಅನ್ನಿ. ಆದರೆ ಅಂತಹ ಮಿಶ್ರತಳಿಗಳಿಗೆ ಮಾರುಕಟ್ಟೆಯಲ್ಲಿ ಅಂತಹ ಬೇಡಿಕೆಯಿರಲಿಲ್ಲ. ಪೇಟೆಯಲ್ಲಿ ಬಂಡಿಯೆಳೆಯಲು ಹೇರು ಹೊತ್ತು ಸಾಗಲು ಮಾತ್ರ ಅವು ಲಾಯಕ್ಕು ಅಂತ ಜನ ತೀರ್ಮಾನಿಸಿದ್ದರು. ಈಗಲೂ ಶುದ್ಧ ತಳಿಯ ಅದರಲ್ಲೂ ಸರಿಯಾಗಿ ಪಳಗಿಸಲಾದ ಅರೇಬಿಯನ್ ಕುದುರೆಗೆ ಬೇಡಿಕೆ ಇದ್ದೆ ಇತ್ತು. ಹುಡುಕಿಕೊಂಡು ಬರುವ ಗ್ರಾಹಕರು ಅಂತಹ ಅಶ್ವಗಳಿಗೆ ಕನಿಷ್ಠ  ಬೆಲೆಯಾಗಿಯೆ ಇನ್ನೂರು ರೂಪಾಯಿಗಳನ್ನ ಕೊಟ್ಟು ಖರೀದಿಸಲು ತಯಾರಾಗುತ್ತಿದ್ದರುˌ ಪರಿಶುದ್ಧ ತಳಿಯ ಅರೇಬಿಯನ್ ಕುದುರೆ ಹೊಂದಿರುವುದೆ ಅಂತಸ್ತಿನ ಲಕ್ಷಣ ಅಂತ ಜನರು ಭಾವಿಸುತ್ತಿದ್ದರು. ಸುಲ್ತಾನ ಅಂತಹ ಅರೇಬಿಯನ್ ಶುದ್ಧ ತಳಿಯವ. ಅವನ ಮುತ್ತಜ್ಜನ ಅಪ್ಪ ಹಾಗೂ ಅಮ್ಮನನ್ನ ಇವನ ಅಜ್ಜ ಅರವತ್ತು ವರ್ಷಗಳ ಹಿಂದೆ ಅಶ್ವ ವ್ಯಾಪಾರಿಯಿಂದ ಖರೀದಿಸಿ ಸಾಕಿದ್ದರು.

************

"ಹಳ್ಳಿಯ ಬದುಕು ಹಳಿಗೆ ಬಂದರಷ್ಟೆ ಸೊಗಸುˌ 
ಪೇಟೆಯವರ ಕಣ್ಣಿಗೇನು
ದೂರದ ಬೆಟ್ಟ ಸದಾ ಹಸಿರಾಗಿರುವ ಹಾಗೆಯೆ ಬೀಳುತ್ತಿರತ್ತೆ ಪುಗಸಟ್ಟೆ ಕನಸು"


ಮುಂದೆ ಅವುಗಳದೆ ವಂಶಾಭಿವೃದ್ಧಿಯಾಗಿ ತಳಿಶುದ್ಧತೆ ಕಾಪಿಟ್ಟುಕೊಂಡ ಅವರ ಕುಟುಂಬ ಪಾಲು ಪಡೆದು ಸ್ವತಂತ್ರವಾದ ಅವರ ಕುಟುಂಬಸ್ಥರೆಲ್ಲರಿಗೂ ಅವುಗಳ ಸಂತತಿಗಳನ್ನ ಹಂಚುತ್ತಾ ಹೋಗಿˌ ಸದ್ಯ ಮಾದೇವ ಹಾಗೂ ರಾಜಿ ಇವನ ಪಾಲಿಗೆ ಬಂದಿದ್ದರು. ಸಹಜವಾಗಿ ಆಗ ರಾಜಿಯ ಹಾಲೂಡುತ್ತಿದ್ದ ಕೂಸು ಸುಲ್ತಾನನೂ ಇವನ ಕೊಟ್ಟಿಗೆ ಸೇರಿ ಹೋಗಲು ಇದೆ ಕಾರಣವಾಗಿತ್ತು.

ಹಾಗೆ ನೋಡಿದರೆ ಇವನ ಕೈಯಡಿಯ ತರಬೇತಿಯಲ್ಲಿ ಪಳಗುತ್ತಿರುವ ಮೊದಲ ಅಶ್ವ ಸುಲ್ತಾನ. ಕುದುರೆ ಪಳಗಿಸುವಲ್ಲಿ ತಾಳ್ಮೆ ಇರಬೇಕುˌ ಕೊಂಚ ತಾಳ್ಮೆಗೆಟ್ಟರೂ ಒಂದು ವಿಧೇಯ ಕುದುರೆಯಾಗಬಲ್ಲ ಜಾತಿಯ ತುರಗವೊಂದು ಕೆಟ್ಟು ಹೋಗಿ ಕೇವಲ ಕಸಾಯಿಖಾನೆಯ ವಧೆಗೆ ಮಾತ್ರ ಅರ್ಹವಾಗುತ್ತದೆ ಅನ್ನುವ ಅಪ್ಪನ ಮಾತು ಪದೆ ಪದೆ ಅವನಿಗೆ ನೆನಪಾಗುತ್ತಿತ್ತು. ಹೀಗಾಗಿ ಹಚ್ಚು ದಂಡಿಸಿ ಹೊಡೆದು ಅವನಿವನನ್ನ ಬಾಗಿಸಲೂ ಹೊರಡಲಿಲ್ಲˌ ಹಾಗಂತ ಅತಿ ಮುದ್ದು ಮಾಡಿ ನಯ ವಿನಯದ ನುಡಿಗಳಿಂದ ಕುದುರೆಯ ಅಭ್ಯಾಸಗಳನ್ನ ಕೆಡಿಸಲೂ ಇಲ್ಲ. ಹೀಗಾಗಿ ಶಿಸ್ತಿನ ಸಿಪಾಯಿಯಂತೆ ಸುಲ್ತಾನ ಇವನ ತರಬೇತಿಯಲ್ಲಿ ಪಳಗುತ್ತಲಿದ್ದ. 


ಒಬ್ಬ ಉತ್ತಮ ಅಶ್ವರೋಹಿ ತನಗಿಂತ ಮೊದಲು ತನ್ನ ಕುದುರೆಯ ಕಾಳಜಿ ವಹಿಸುತ್ತಾನೆ ಅನ್ನುವ ಅಪ್ಪನದೆ ಮತ್ತೊಂದು ಮಾತನ್ನೂ ಚಾಚೂ ತಪ್ಪದೆ ಇವನು ಪಾಲಿಸುತ್ತಿದ್ದ. ಯಾವುದೆ ಶ್ರಮದಾಯಕ ಕೆಲಸ ಮಾಡಿಸಿದˌ ದೂರ ಪ್ರಯಾಣ ಹೋಗಿಸಿದ ತರುವಾಯ ಮೊದಲು ಹಟ್ಟಿ ಹುಡುಕಿ ಸ್ವಚ್ಛವಾದ ಸೂಕ್ತ ಗೊಂತಿನಲ್ಲಿ ಸುಲ್ತಾನನ ತಂಗುವ ವ್ಯವಸ್ಥೆ ಮಾಡಿˌ ಅವನ ಮೇವು ನೀರಿನ ಮೇಲುಸ್ತುವರಿ ವಹಿಸಿ. ಅವನ ಮೈ ನೋವಿಗೆ ಅಗತ್ಯವಿದ್ದರೆ ಎಣ್ಣೆ ಮಾಲೀಷಿನ ವ್ಯವಸ್ಥೆಯನ್ನೂ ಮಾಡಿˌ ಕುತ್ತಿಗೆ ತಿಕ್ಕಿ ಮುಖ ಕೆರೆದು ಮುದ್ದಿಸಿ ನಾಲ್ಕು ಮಾತುಗಳನ್ನಾಡಿ ಆಗಾಗ ಆತ್ಮೀಯತೆಯನ್ನ ಪ್ರಕಟಿಸುತ್ತಾ ಕುದುರೆಯೊಂದಿಗೆ ಒಂದು ಸಮನ್ವಯವನ್ನವನು ಸಾಧಿಸಿದ್ದ. ಮಾದೇವನಿಂದ ಪೌರುಷದ ಮೈಕಟ್ಟನ್ನೂ ಹಾಗೂ ರಾಜಿಯಿಂದ ಜೇನು ಬಣ್ಣವನ್ನೂ ಸಹಜವಾಗಿ ಪಡೆದಿದ್ದ ಸುಲ್ತಾನನ್ನ ಸಾಮರ್ಥ್ಯದಲ್ಲಾಗಲಿ ರೂಪದಲ್ಲಾಗಲಿ ಮೀರಿಸುವ ಕುದುರೆಗಳು ಸುತ್ತಲಿನ ಫಾಸಲೆಯಲ್ಲೆ ಇಲ್ಲ ಅನ್ನುವ ಅತೀವ ವಿಶ್ವಾಸ ಅವನಲ್ಲಿ ಮನೆ ಮಾಡಿತ್ತು. ಮುಂದೆ ಸಂಪೂರ್ಣವಾಗಿ ಪ್ರೌಢನಾದ ನಂತರ ಸುಲ್ತಾನ ಅವನ ಗತ್ತು ಗೈರತ್ತನ್ನ ಮತ್ತಷ್ಟು ಹಚ್ಚಿಸಲಿದ್ದ.


ಇತ್ತೀಚೆಗೆ ಈ ಅರೇಬಿಯನ್ ತಳಿಯ ಕುದುರೆಗಳಿಗೆ ಹೆಚ್ಚಿರುವ ಬೇಡಿಕೆಯಿಂದ ಅವುಗಳನ್ನ ಕದ್ದು ಕಳ್ಳ ಸಾಗಣೆ ಮಾಡಿ ಇನ್ನೂ ದೂರದ ಪಶ್ಚಿಮದಲ್ಲಿ ಅವನ್ನ ಮರು ಮಾರಾಟ ಮಾಡುವ ಢಕಾಯತರ ದಂಧೆ ಗರಿಗೆದರಿತ್ತು. ಸಾಮಾನ್ಯವಾಗಿ ಈ ಕುದುರೆ ಕಳ್ಳರ ಗ್ಯಾಂಗಿನ ಕಾರ್ಯಾಚರಣೆಗಳು ಇಂತಿರುತ್ತಿದ್ದವು. 


ಮೊದಲಿಗೆ ಯಾವುದಾದರೂ ನವ ವಸಿತ ಊರನ್ನ ಗುರುತಿಸಿ ಆ ಗುಂಪಿನ ಕೇಡಿಗಳಲ್ಲೊಬ್ಬ ರೈತಾಪಿಯ ಸೋಗಿನಲ್ಲಿ ಪಟ್ಟಣದ ರೈತ ಸಲಕರಣೆ ಮಾಡುವ ಗಾಡಿಖಾನೆಯಲ್ಲಿˌ ಪಡಖಾನೆಯಲ್ಲಿˌ ಊಟದ ಮನೆಗಳಲ್ಲಿ ಅಂಗಡಿಗಳಲ್ಲಿ ಗ್ರಾಹಕರ ಸೋಗಿನಲ್ಲಿ ಅದೂ ಇದು ಮಾತನಾಡಿ ಆ ಸೀಮೆಯ ಸುತ್ತಮುತ್ತಲಿನಲ್ಲಿರುವ ಬಲಶಾಲಿ ಅರೇಬಿಯನ್ ಅಶ್ವಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದ. ಅನಂತರ ಅಂತಹ ತೋಟದ ಮನೆಗಳಿಗೆ ಅವರಲ್ಲಿಬ್ಬರು ಕೌಬಾಯ್ಗಳ ವೇಷದಲ್ಲಿ ಕುದುರೆ ಕ್ರಯ ಮಾಡಲು ತೆರಳುವ ವೇಷದಲ್ಲಿ ಹೋಗಿ ಆ ಜಮೀನಿನ ರೈತನಿಗೆ ತಾವು ಬಂದ ಉದ್ದೇಶ ಅರುಹುತ್ತಿದ್ದರು. ಮಾರುವ ಉದ್ದೇಶ ರೈತನಿಗಿರದಿದ್ಢರೆ ಕನಿಷ್ಠ ಕುದುರೆಯನ್ನ ತೋರಿಸುವಂತಾದರೂ ಪ್ರಾರ್ಥಿಸುತ್ತಿದ್ದರು. ಹಾಗೆ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಕುದುರೆಯನ್ನ ತೋರಿಸಿದರೆ ಸಾಕು ಆಗ ಅದನ್ನ ತಟ್ಟಿ ತಡವಿ ಅದರ ಅಂದ ಚಂದವನ್ನ ಹೊಗಳಿˌ ಅದರ ಕುದುರೆ ಜಾತಕವಿದ್ದರೆ ತೋರಿಸಿ ಅಂತ ಜುಲುಮೆ ಮಾಡುತ್ತಿದ್ದರು. 


ಕಡೆಗೆ ತನ್ನ ಕುದುರೆಯ ಸ್ತುತಿ ಕೇಳಿ ಉಬ್ಬಿದ ರೈತ ಒತ್ತಾಯಕ್ಕೆ ಮಣಿದು ಅದರ ಸುಳಿ ಜಾತಕ ತೋರಿಸಿದ್ದೆ ತಡ ತಮ್ಮಲ್ಲಿರುತ್ತಿದ್ದ ಅಶ್ವ ಪಂಚಾಂಗಕ್ಕೆ ಅದನ್ನ ಹೋಲಿಸಿ "ಆಹಾ ಇಂತಾ ಕುದುರೆಯನ್ನ ಈ ಜನ್ಮದಲ್ಲೆ ತಾವು ಕಂಡಿಲ್ಲ ಅಂತಲೂ!" "ಇಂತಹ ಶ್ರೇಷ್ಠ ತಳಿಯ ಕುದುರೆಯನ್ನ ಕಂಡದ್ದೆ ತಮ್ಮ ಪೂರ್ವ ಜನ್ಮ ಪುಣ್ಯ" ಅಂತಲೂˌ "ಸಾಧ್ಯವಾದರೆ ಅದನ್ನ ಕೊಳ್ಳುವುದು ತಮ್ಮ ಅಜನ್ಮ ಸಾರ್ಥಕತೆ" ಅಂತಲೂ ತಾರಾಮಾರ ಹೊಗಳಿ ಅವುಗಳ ದೈಹಿಕ ಲಕ್ಷಣ ಹಾಗೂ ಅದರ ಸಾಮರ್ಥ್ಯ - ಅಂದ ಚಂದಗಳನ್ನ ಪರಿಪರಿಯಾಗಿ ಬಣ್ಣಿಸಿ ಈಗಾಗಲೆ ಹೆಮ್ಮೆಯಿಂದ ಉಬ್ಬಿ ನೆಲದಿಂದ ಒಂದಡಿ ಮೇಲೆ ತೇಲುತ್ತಿರುತ್ತಿದ್ದ ಕುದುರೆಯ ಮಾಲಿಕನನ್ನ ನೇರ ಅಟ್ಟಕ್ಕೇರಿಸಿ ಅವನ ಮುಂದೆ ಒಂದು ಪ್ರಸ್ತಾವನೆಯನ್ನಿಡುತ್ತಿದ್ದರು. ದೂಸರಾ ಮಾತಿಗೆ ಅವಕಾಶ ನೀಡದಂತೆ "ಆ ಅಶ್ವಕ್ಕೆ ಸುತ್ತು ಸೀಮೆಯಲ್ಲೆ ಮುನ್ನೂರು ರೂಪಾಯಿಗೆ ಕಡಿಮೆ ದರ ಇರಲಿಕ್ಕಿಲ್ಲ" ಅಂತಲೂˌ "ತಾವು ಯಾವುದೆ ಚೌಕಾಸಿ ಈ ವಿಷಯದಲ್ಲಿ ಮಾಡದೆ ಖರೀದಿಸಲು ತುದಿಗಾಲ ಮೇಲೆ ನಿಂತಿದ್ದೇವೆ" ಅಂತಲೂˌ ರೈತನಿಗೆ ನಂಬಿಸುವಂತೆ ಮಾತನಾಡಿ ಸ್ಥಳದಲ್ಲೆ ನೂರು ರೂಪಾಯಿ ಮುಂಗಡ ತೆಗೆದು ಮೇಜಿನ ಮೇಲಿಟ್ಟುˌ ಸದ್ಯಕ್ಕೆ ಅದನ್ನ ಇಟ್ಟುಕೊಳ್ಳುವಂತೆಯೂ ಈ ಸುಗ್ಗಿ ಮುಗಿದ ಮೇಲೆ ಚಳಿಗಾಲದಲ್ಲಿಯೆ ತಾವು ಬಂದು ಕುದುರೆ ಕೊಂಡು ಹೋಗುವುದಾಗಿಯೂˌ ಆಗ ಬಾಕಿ ಉಳಿದ ಮೊತ್ತವನ್ನ ಅವತ್ತಿನ ಮಾರುಕಟ್ಟೆ ದರಕ್ಕೆ ತಕ್ಕಂತೆ ಲೆಕ್ಕ ಹಾಕಿ ಪಾವತಿಸುವುದಾಗಿಯೂ ಹಾಗೊಂದು ವೇಳೆ ತಾವು ವಾಯಿದೆ ಮೀರಿದರೆ ಯಾವುದೆ ಕಾರಣಕ್ಕೂ ರೈತ ಮುಂಗಡವಾಗಿ ಕೊಟ್ಟ ಹಣವನ್ನ ಹಿಂದಿರುಗಿಸಬೇಕಿಲ್ಲ ಎಂದು ಹೇಳಿ ರೈತನ ತಲೆ ಕೆಡಿಸುತ್ತಿದ್ದರು. 


ಹೇಗೆ ನೋಡಿದರೂ ತನಗೆ ಸಾಧಕವಾಗಿಯೂ ಲಾಭದಾಯಕವಾಗಿಯೂ ಪರಿಣಮಿಸಬಹುದಾದ ಈ ಏಕಮುಖ ವ್ಯವಹಾರದಿಂದ ಸಂತುಷ್ಟಗೊಳ್ಳುತ್ತಿದ್ದ ರೈತ ಅಸಲಿಗೆ ಮಾರಲು ಮನಸಿಲ್ಲದಿದ್ದರೂ ಸಹ ಆಗುವ ಅಪಾರ ಲಾಭವನ್ನ ಊಹಿಸಿಯೆ ರೋಮಾಂಚಿತನಾಗಿ ಅರೆ ಮನಸಿನಿಂದಲೆ ಇದಕ್ಕೆ ಸಮ್ಮತಿಸುತ್ತಿದ್ದ. ಮಾರುಕಟ್ಟೆಯಲ್ಲಿ ಕೊಂಡು ಹೋಗಿ ಮಾರಿದರೆ ನೆಟ್ಟಗೆ ಇನ್ನೂರು ರೂಪಾಯಿ ದರ ಮೀರದ ತನ್ನ ಕುದುರೆಗೆ ಈ ಅಪರಿಚಿತರು ಅರ್ಧ ಪಟ್ಟು ಹೆಚ್ಚುವರಿ ಬೆಲೆಯನ್ನ ಅದೂ ಮನೆ ಬಾಗಿಲಿಗೆ ಬಂದು ಕೊಟ್ಟು ಕೊಳ್ಳುವುದೇನು ಸಾಮಾನ್ಯದ ವಿಷಯವೆ? ಬರುವ ಹಂಗಾಮಿನಲ್ಲಿ ಇದನ್ನ ಬೆದೆಗೆ ಬಂದ ಹೆಣ್ಣು ಕುದುರೆಯ ಮೇಲೇರಿಸಿ ಗಬ್ಬವಾಗಿಸಿದರೆ ಇದನ್ನ ಮಾರಿದರೂ ಮತ್ತೆರಡು ವರ್ಷಗಳಲ್ಲಿ ಇದರಂತಹದ್ದೆ ಬಲಶಾಲಿ ತುರಗ ತನ್ನ ಹಟ್ಟಿಯಲ್ಲಿ ಕೆನೆಯುತ್ತಾ ನಿಂತಿರುತ್ತದೆ. ಅಷ್ಟಲ್ಲದೆ ಸುಗ್ಗಿಗೆ ಇನ್ನೂ ನಾಲ್ಕು ಋತುಗಳು ಬಾಕಿಯಿದ್ದು ಹೇಗೂ ಮುಂದಿನ ಏಳೆಂಟು ತಿಂಗಳುಗಳ ಕಾಲ ಕುದುರೆ ಬಳಿಯೆ ಇರುವದರಿಂದ ಈ ಹಂಗಾಮಿನಲ್ಲಿ ಅದರ ಗರಿಷ್ಠ  ಪ್ರಯೋಜನವನ್ನ ಪಡೆದುˌ ಬೇಕಿದ್ದರೆ ಮುಂದಿನ ವರ್ಷ ಬಾಡಿಗೆಗೆ ಅಕ್ಕಪಕ್ಕದವರ ಅಶ್ವಗಳನ್ನ ಪಡೆದು ನೊಗಕ್ಕೇರಿಸಿದರಾಯಿತು ಎಂದು ಯೋಚಿಸುತ್ತಿದ್ದ. ಕೂತಲ್ಲೆ ಆಗುವ ನೂರರಿಂದ ನೂರೈವತ್ತು ರೂಪಾಯಿಯ ಲಾಭದಿಂದ ತನ್ನ ತೋಟ ಮನೆಯ ಅಗತ್ಯಗಳು ತೀರಿ ಸಾಧ್ಯವಾದರೆ ಮುಂದಿನ ವರ್ಷದೊಳಗೆ ತಾನೂ ಸಹ ಸಾರೋಟು ಇಟ್ಟವರ ಸಾಲಿಗೆ ಸೇರಬಹುದು ಎನ್ನುವ ಕನಸು ಕಾಣುತ್ತಾ ಕೈ ನೀಡಿ ಆ ಹಣವನ್ನ ಇಸಿದುಕೊಳ್ಳುತ್ತಿದ್ದ.

ಅಷ್ಟರಲ್ಲಾಗಲೆ ಸಂಜೆಯಾಗಲು ಸಮೀಪಿಸುತ್ತಿತ್ತು. ಹೀಗಾಗಿ ಕತ್ತಲಲ್ಲಿ ತಡವರಿಸಿಕೊಂಡು ಪ್ರಯಾಣ ಮುಂದುವರೆಸುವುದಕ್ಕಿಂತ ಅವತ್ತಿನ ರಾತ್ರಿ ಬೇಕಿದ್ದರೆ ಆರಾಮವಾಗಿ ಅಲ್ಲೆ ಕಳೆದು ಹೋಗುವಂತೆ ಹೇಳಿದರೂ ಸಹ ಕುದುರೆ ಕೊಳ್ಳಲು ಬಂದ ಸೋಗಿನ ವ್ಯಾಪಾರಿಗಳು ಆ ಆತಿಥ್ಯದ ಆಹ್ವಾನವನ್ನ ನಿರಾಕರಿಸಿ ಕೇವಲ ಚಹಾ ತಿಂಡಿಗಳ ಉಪಚಾರಕ್ಕೆ ತೃಪ್ತರಾದಂತೆ ನಟಿಸಿ ಒಪ್ಪಂದದ ಪತ್ರಕ್ಕೆ ರೈತನ ಹೆಬ್ಬೆಟ್ಟಿನ ಗುರುತು ಹಾಕಿಸಿಕೊಂಡು. ಅಲ್ಲಿಂದ ಕಾಲ್ಕೀಳುತ್ತಿದ್ದರು.


*********

ರಾತ್ರಿ ಇನ್ನೇನು ಆರಂಭವಾಗಲಿಕ್ಕಿರೋದರಿಂದ ಕೈಲಿರುವ ಆ ದೊಡ್ಡ ಮೊತ್ತವನ್ನ ನಾಳೆ ಬ್ಯಾಂಕಿಗೆ ಕಟ್ಟುವ ಅಂದು ರೈತ ಅದೊಂದು ರಾತ್ರಿ ಮನೆಯಲ್ಲೆ ದುಡ್ಡನ್ನ ಇರಿಸಿಕೊಳ್ಳುವುದು ಅನಿವಾರ್ಯವಾಗುತ್ತಿತ್ತು. ಅಸಲು ಕಥೆ ಆರಂಭವಾಗುತ್ತಿದ್ದುದೆ ಅನಂತರ. ಬಂದವರು ಸರಿಯಾಗಿ ಕಣ್ಣಲ್ಲೆ ಅಲ್ಲಿನ ಪರಿಸರವನ್ನ ಅಳೆದು ಹೋಗಿರುತ್ತಿದ್ದರಲ್ಲˌ ಸರಿಯಾಗಿ ಅದೆ ರಾತ್ರಿ ಮುಖ ಮೋರೆ ಮುಚ್ಚಿಕೊಂಡ ನಾಲ್ಕೈದು ಮಂದಿ ಆ ತೋಟಕ್ಕೆ ದಾಳಿಯಿಡುತ್ತಿದ್ದರುˌ ಮಾರಕಾಸ್ತ್ರಗಳನ್ನ ತೋರಿಸಿ ಬೆದರಿಸಿ ಅವರನ್ನ ಕಂಭಕ್ಕೆ ಕಟ್ಟಿ ಹಾಕಿˌ ಆ ಹಣವನ್ನಷ್ಟೆ ಅಲ್ಲದೆ ಇನ್ನಿತರ ಉಳಿತಾಯವನ್ನೂ ದೋಚುತ್ತಿದ್ದರು. ಕೆಲವೊಮ್ಮೆ ಮರಿ ಕುದುರೆಗಳಿದ್ದರೆ ಅವನ್ನೂ ಕದ್ದು ಜೊತೆಗೆ ಕೊಂಡೊಯ್ಯುತ್ತಿದ್ದರು. ಈ ಅನಿರೀಕ್ಷಿತ ದರೋಡೆಕೋರರ ದಾಳಿಯಿಂದ ಸಹಜವಾಗಿ ರೈತ ಕಂಗಾಲಾಗಿ ಹೋಗಿರುತ್ತಿದ್ದ. ತೋಟಗಳು ಪರಸ್ಪರ ಮೈಲಿಗಟ್ಟಲೆ ದೂರ ಇರುತ್ತಿದ್ದುದರಿಂದ ಈ ದರೋಡೆಯ ಸುದ್ದಿ ಅನ್ಯರಿಗೆ ಅರಿವಾಗದೆ ದಿನ ಎರಡು ದಿನ ಯಾರೂ ಬಿಡಿಸಲು ಬಾರದೆ ಹಾಗೆ ಹಿಂಸೆ ಅನುಭವಿಸುತ್ತಾ ಕಂಭಕ್ಕೆ ಬಿಗಿಸಿಕೊಂಡಂತೆಯೆ ಉಳಿದಿರುತ್ತಿದ್ದವರೂ ಇದ್ದರು! ಹೀಗಾಗಿ ಪಟ್ಟಣದ ಅಪರಾಧ ಪ್ರಕರಣಗಳ ತನಿಖೆ ನಡೆಸುವ ಶರೀಫನ ಕಛೇರಿಯಲ್ಲಿ ಹಲವು ಬಾರಿ ಈ ಬಗ್ಗೆ ದೂರೆ ದಾಖಲಾಗುತ್ತಿರಲಿಲ್ಲ. ಅದು ಆ ಕಳ್ಳ ಕುದುರೆ ವ್ಯಾಪಾರಿಗಳಿಗೆ ಸಹಜವಾಗಿ ಸಾಧಕವಾಗಿ ಪರಿಣಮಿಸುತ್ತಿತ್ತು.


ಅದಾಗಿ ಮೂರ್ನಾಲ್ಕು ತಿಂಗಳಲ್ಲಿ ಮುಂಗಡ ಕೊಟ್ಟವ ಹಿಂತಿರುಗಿ ಬಂದು ಮಹಾ ವಿಪತ್ತೊಂದರಲ್ಲಿ ತನ್ನ ವ್ಯವಹಾರಿಕ ಪಾಲುದಾರ ಸತ್ತನೆಂದೂˌ ಈಗ ಒಂಟಿಯಾಗಿ ಈ ವ್ಯಾಪಾರ ನಡೆಸಲು ತಾನು ಶಕ್ತನಲ್ಲವೆಂದೂˌ ಆದಾಗ್ಯೂ ರೈತ ತಾನು ಮುಂಗಡವಾಗಿ ಕೊಟ್ಟ ಹಣದಲ್ಲಿ ಕೇವಲ ತನ್ನ ಪಾಲಿನ ಐವತ್ತು ಶೇಕಡಾ ಹಣವನ್ನಾದರೂ ಹಿಂದಿರುಗಿಸಬೇಕೆಂದೂ ಹೊಸ ವರಸೆ ತೆಗೆಯತ್ತಿದ್ದ. ಈಗಾಗಲೆ ದರೋಡೆಗೆ ಒಳಗಾಗಿ ಬರಿಗೈಯವನಾಗಿ ಕಡೆಗೆ ಅವರಿವರಿಂದ ಸಾಲ ಮಾಡಿ ಹೇಗೋ ತನ್ನ ಹಳಿ ತಪ್ಪಿದ ಬದುಕನ್ನ ಮತ್ತೆ ಹಸನುಗೊಳಿಸಿಕೊಳ್ಳಲು ಹಣಗಾಡುತ್ತಿರುವ ಬಡ ರೈತ ಈ ಅನಿರೀಕ್ಷಿತ ಬೇಡಿಕೆಯನ್ನ ಆಲಿಸಿಯೆ ಕಂಗಾಲಾಗುತ್ತಿದ್ದ. ನಿಂತ ನಿಲುವಲ್ಲೆ ಐವತ್ತು ರೂಪಾಯಿಯಷ್ಟು ಬೃಹತ್ ಮೊತ್ತ ಹೊಂದಿಸಿಕೊಡುವುದು ಅವನ ಸಾಮರ್ಥ್ಯಕ್ಕೆ ಮೀರಿದುದಾಗಿರುತ್ತಿತ್ತು. ಅವನ ಪರಿಪರಿಯಾದ ವಿನಂತಿಗಳಿಗೆ ಕಿಂಚಿತ್ತೂ ಕಿವಿಗೊಡದ ಆ ಕುದುರೆ ಕಳ್ಳರ ಗುಂಪಿನ ವ್ಯಾಪಾರಿ ಒಂದಾ ತನಗೆ ಕೂಡಲೆ ಹಣ ಹೊಂದಿಸಿ ಕೊಡಬೇಕಂತಲೂ ಇಲ್ಲದಿದ್ದಲ್ಲಿ ಕುದುರೆಯನ್ನಾದರೂ ಅಂದಿನ ಮಾರುಕಟ್ಟೆ ದರಕ್ಕೆ ಕ್ರಯ ಮಾಡಿ ಕೊಟ್ಟಾದರೂ ಸರಿ ವ್ಯವಹಾರ ಚುಕ್ತಾ ಮಾಡಬೇಕೆಂದು ಒತ್ತಡ ಹೇರುತ್ತಿದ್ದ. ಹಾಗಾಗದಿದ್ದಲ್ಲಿ ಶರೀಫನಲ್ಲಿಗೆ ಈ ವಾಜ್ಯ ಕೊಂಡೊಯ್ಯುವ ಬೆದರಿಕೆಯನ್ನೊಡ್ಡಿ ರೈತನ ವಿರುದ್ಧ "ವಂಚನೆ ಪ್ರಕರಣ" ದಾಖಲಿಸುವುದಾಗಿಯೂ ಕಳ್ಳ ವ್ಯಾಪಾರಿ ಒಳಗುದ್ದು ಕೊಟ್ಟು ರೈತನ ಕಳವಳ ಮಾನಸಿಕ ಗೊಂದಲ ಹಚ್ಚಿಸುತ್ತಿದ್ದ. 


ಈ ವರ್ಷ ಕಳೆದರೆ ಮಾಡಿರುವ ಸಾಲ ತೀರಿಸಿ ಇವನ ಹಣ ಹೊಂದಿಸಿಕೊಡುವ ಭರವಸೆ ಅದಾಗಲೆ ಕಳೆದುಕೊಂಡಿರುತ್ತಿದ್ದ ರೈತನಿಗೆˌ ಈಗಾಗಲೆ ಹಣಕಾಸಿನ ವಿಷಯದಲ್ಲಿ ಕುಗ್ಗಿ ಹೋಗಿರುವ ತಾನು ಈ ಬೇಡದ ಪಂಚಾಯ್ತಿಕೆಯ ಗೋಜಲುಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ ಗೊಡವೆ ಸಹಜವಾಗಿ ಬೇಡವಾಗಿರುತ್ತದೆ. ಸಾಲದ್ದಕ್ಕೆ ಶರೀಫನ ಕಛೇರಿಯಲ್ಲಿ ವಂಚನೆಯ ಮೊಕದ್ದಮೆ ದಾಖಲಾಗಿ ಊರೆಲ್ಲ ಒಮ್ಮೆ ಹೆಸರು ಕೆಟ್ಟರೆ ಮುಂದೆ ಅಲ್ಲಿಯೆ ತಳ ಊರಿ ಬದುಕಬೇಕಾದ ತನಗೆ ಅಸಂಖ್ಯ ಕಷ್ಟ ನಷ್ಟಗಳು ಎದುರಾಗುವ ಭೀತಿಯೂ ಕಾಡುತ್ತದೆ. ಹೀಗೆ ಮಾನಸಿಕವಾಗಿ ಜರ್ಜರಿತನಾಗುವ ರೈತ ಆ ಕುದುರೆಯನ್ನ ಕೊಟ್ಟೆ ಋಣ ಮುಕ್ತನಾಗುವ ಸುಲಭ ಪರಿಹಾರವನ್ನೆ ಸಹಜವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ. ಆದರೆ ಈ ಹಿಂದೆ ಮುನ್ನೂರರವರೆಗೂ ಕುದುರೆಯ ದರವನ್ನೇರಿಸಿ ಬೆಟ್ಟ ಹತ್ತಿಸಿದ್ದ ಅದೆ ವ್ಯಾಪಾರಿ ಈಗ ಮಾರುಕಟ್ಟೆಯ ಗರಿಷ್ಠ ದರ ಇನ್ನೂರೆ ಎಂದೂ ಇನ್ನಷ್ಟು ಚೌಕಾಸಿ ಮಾಡಿ ಮತ್ತೂ ಇಪ್ಪತ್ತೈದು ರೂಪಾಯಿ ಅಗ್ಗವಾಗಿಯೆ ದರ ನಿಷ್ಕರ್ಶೆ ಮಾಡಿ ಮುಂಗಡ ಕಡಿದು ಕೊಂಡು ಕೇವಲ ಎಪ್ಪತ್ತೋ ಎಂಬತ್ತೋ ರೂಪಾಯಿಗಳಿಗೆ ಇನ್ನೂರು ಇನ್ನೂರೈವತ್ತು ರೂಪಾಯಿಗಳ ಕುದುರೆ ಬಿಚ್ಚಿಕೊಂಡು ಹೋಗುತ್ತಿದ್ದ. ದೂರ ಪಶ್ಚಿಮದಲ್ಲಿ ಅದನ್ನೆ ಮತ್ತೆ ಇನ್ನೂರಕ್ಕೆ ಮಾರಿ ತಾನು ಮುಂಗಡ ಕೊಟ್ಟು ದೋಚಿದ್ದ ಹಣವೂ ಸೇರಿ ಭರ್ತಿ ಒಂದಕ್ಕೆ ಐದರಷ್ಟು ಲಾಭದ ಸುರಿಮಳೆ ಗಳಿಸುತ್ತಿದ್ದ. ಅದೆ ಸಮಯಕ್ಕೆ ಈ ಮೋಸದ ಬಲೆಗೆ ಬಿದ್ದ ರೈತನ ಬದುಕು ಮಾತ್ರ ಮೂರಾಬಟ್ಟೆಯಾಗಿ ಹೋಗಿರುತ್ತಿತ್ತು.

ಇಂತಹ ಹಗಲು ದರೋಡೆಯ ಪ್ರಕರಣಗಳು ಈ ಹೊಸ ತೋಟ ಮನೆಗಳ ಸುತ್ತಮುತ್ತಲ ವಠಾರದಲ್ಲೂ ನಡೆದ ಸುದ್ದಿ ಇವನ ಕಿವಿಗೂ ಬಂದು ಮುಟ್ಟಿತ್ತು. ಹೆಚ್ಚು ದೂರ ಏಕೆ? ಹೊಸತಾಗಿ ಅಲ್ಲೆ ಹತ್ತು ಮೈಲಿ ಸಮೀಪದಲ್ಲಿ ಹೊಸತಾಗಿ ಹೊಲಮನೆ ಮಾಡಲು ಬಂದಿದ್ದ ರೈತನೊಬ್ಬ ಇತ್ತೀಚೆಗೆ ಹೀಗೆ ಮೋಸ ಹೋಗಿದ್ದ. ಗೋಪಿಯಂತೆ ಸ್ಥಳಿಯ ವಲಸಿಗರ ಭಾಷೆ ಬಾರದ ದೇಶದಿಂದ ಬಂದಿದ್ದವನವನು. ಅವನನ್ನೂ ಹೀಗೆ ಕುತಂತ್ರದಿಂದ  ತಮ್ಮ ಖೆಡ್ಡಾದ ಜಾಲಕ್ಕೆ ಕೆಡವಿಕೊಂಡಿದ್ದ ಖದೀಮರು ರಾತ್ರೋ ರಾತ್ರಿ ಅವನ ತೋಟದ ಮನೆಯಲ್ಲಿ ದರೋಡೆ ಮಾಡಿ ಅವನಲ್ಲಿದ್ದ ಎರಡು ಕುದುರೆಗಳಿಗೆ ತಾವೆ ಮುಂಗಡವಾಗಿ ಕೊಟ್ಟಿದ್ದ ಇನ್ನೂರು ರೂಪಾಯಿಗಳಲ್ಲದೆ ಸಂಸಾರವಂದಿಗನಾದ ಅವನ ಹೆಂಡತಿ ಹಾಗೂ ಪುಟ್ಟ ಮಕ್ಕಳನ್ನೂ ಬಿಡದೆ ಕಂಭಕ್ಕೆ ಬಿಗಿದು ಹಿಂಸಿಸಿ ನೂರಾರು ರೂಪಾಯಿ ಬೆಲೆ ಬಾಳುತ್ತಿದ್ದ ಅವರ ನಗ ನಟ್ಟುಗಳನ್ನೂ ಸಹ ಒಂದೂ ಬಿಡದ ಹಾಗೆ ದೋಚಿದ್ದರು. ಸಾಲದ್ದಕ್ಕೆ ಅವನ ಹಟ್ಟಿಯಿಂದ ಎರಡು ಎಳೆಯ ಕುದುರೆ ಮರಿಗಳನ್ನೂ ಕೊಂಡೊಯ್ದಿದ್ದರು. ಅವರ ಈ ದೈನೇಸಿ ಸ್ಥಿತಿ ಪಕ್ಕದ ತೋಟದ ತಿಮ್ಮಯ್ಯ ಎರಡು ದಿನ ಕಳೆದು ಕಾರ್ಯ ನಿಮಿತ್ತ ಅವರಲ್ಲಿಗೆ ಹೋದಾಗಲಷ್ಟೆ ಬಯಲಿಗೆ ಬಂದಿತ್ತು. ಎರಡು ದಿನ ಅನ್ನ ನೀರಿಲ್ಲದೆ ನಿತ್ರಾಣರಾಗಿ ಕಟ್ಟಿದಲ್ಲೆ ಜೋತು ಬಿದ್ದಿದ್ದ ಅವರ ಸ್ಥಿತಿ ದಾರುಣವಾಗಿತ್ತು. 

ಸಹೃದಯಿ ತಿಮ್ಮಯ್ಯ ಹಾಗೂ ಲೀಲಕ್ಕ ಅವರಿಗೆ ಸಾಂತ್ವಾನ ಹೇಳಿˌ ಬಲವಾದ ಪಹರೆಗೆ ವ್ಯವಸ್ಥೆ ಮಾಡಿ ಅವರೊಂದಿಗೆ ಎರಡು ದಿನ ತಂಗಿ ಅವರ ಕಷ್ಟಕ್ಕೆ ಸ್ಪಂದಿಸದಿದ್ದಿದ್ದರೆ ಅವರು ಆ ಅಘಾತದಿಂದ ಚೇತರಿಸಿಕೊಳ್ಳುವುದೆ ಕಷ್ಟವಾಗುತ್ತಿತ್ತು. ದರೋಡೆ ನಡೆದು ದಿನವೆರಡು ಆಗಿದ್ದುದರಿಂದ ಕಳ್ಳರ ಜಾಡು ಹಿಡಿದು ಯಾವ ದಿಕ್ಕಿಗೆ ಆ ಖದೀಮರು ಸಾಗಿರಬಹುದು ಎಂಬ ತನಿಖೆಗೆ ಇಳಿಯುವದೂ ಅಸಾಧ್ಯವಾಗಿತ್ತು. ಇದಾಗಿ ಸರಿಯಾಗಿ ಮೂರೂವರೆ ತಿಂಗಳಾಗುವಷ್ಟರಲ್ಲೆ ಮೇಲೆ ವಿವರಿಸಿದಂತೆಯೆ ಆ ಖದೀಮ ವ್ಯಾಪಾರಿಗಳು ಏಕಾಏಕಿ ಯಾವ ಸೂಚನೆಯನ್ನೂ ಕೊಡದೆ ಬಂದು. ತಮ್ಮ ಕರುಣಾಜನಕ ಕಟ್ಟುಕಥೆ ಹೇಳಿˌ  ಚಿಲ್ಲರೆ ಕಾಸಿಗೆ ಆ ರೈತನ ಕುದುರೆಗಳೆರಡನ್ನೂ ಅಕ್ಷರಶಃ ದೋಚಿಕೊಂಡು ಪರಾರಿಯಾಗಿದ್ದರು.


ಹೀಗಾಗಿ ಇಂತಹ ಸಂಭವನೀಯ ದರೋಡೆಗಳಿಂದ ಹುಷಾರಾಗಿ ಪಾರಾಗಬೇಕಾದ ಅಗತ್ಯ ಪ್ರತಿಯೊಬ್ಬ ಶ್ರಮಿಕ ರೈತಾಪಿಗೂ ಇತ್ತು. ಸುದೂರವಾದ ತೋಟದ ಒಂಟಿ ಮನೆಗಳಲ್ಲಿ ಸಂಸಾರವಂದಿಗರಾಗಿ ಕೃಷಿಯ ಸಾಹಸಕ್ಕಿಳಿದು ವ್ಯವಸಾಯದ ಜೀವನದಲ್ಲಿನ ಕಷ್ಟ ನಷ್ಟಗಳನ್ನ ಏಗಿ ಎದುರಿಸಿ ಅನುಭವಿಸಿ ಅದರಿಂದ ಪಾರಾಗಲು ಸದಾ ತಾನೆ ಕುತ್ತಿಗೆಗೆ ನೊಗ ಏರಿಸಿಕೊಂಡ ಕುದುರೆಯಂತೆ ದುಡಿಯುವ ಸಾಹಸಿ ರೈತರಿಗೆ ಇಂತಹ ಅನಿರೀಕ್ಷಿತ ಅಪಾಯಗಳನ್ನ ಎದುರಿಸುತ್ತಲೆ ಬಾಳುವುದು ಅನಿವಾರ್ಯ ಕರ್ಮವೆ ಆಗಿತ್ತು. ಪರಿಸ್ಥಿತಿ ಹೀಗಿರೋವಾಗ ಇವನೂ ಸಹ ತನ್ನ ಸಂಸಾರದ ಕಾಳಜಿ ವಹಿಸಲೆಬೇಕಾಗುತ್ತಿತ್ತು. ಅಷ್ಟಲ್ಲದೆ ಇವನ ಹೆಂಡತಿಗೆ ಇದೀಗ ಎರಡನೆ ಕೂಸಿನ ಬಸಿರು ಬೇರೆ ಕಟ್ಟಿದೆ. ರಾಜ ಬೇರೆ ಇನ್ನೂ ಕೈಗೂಸು. ಮನೆಯಲ್ಲಿ ಧೈರ್ಯಕ್ಕೆ ಕರಿಯನನ್ನ ಬಿಟ್ಟು ಬಂದಿದ್ದ. ಸಾಲದ್ದಕ್ಕೆ ತುಂಬಿದ ಕೋವಿಯನ್ನೂ ಸಹ ಅವಳ ಆತ್ಮರಕ್ಷಣೆಗೆ ಕೊಟ್ಟು ಬಂದಿದ್ದ. ಅದೇನೆ ಇದ್ದರೂ ತಾನಿರುವಂತಾಗುತ್ತದೆಯೆ?

https://youtu.be/Os3kPG9puck


https://youtu.be/Gzap0Uk-5m8


https://youtu.be/1pZbQrPJ1tg



https://youtu.be/8m4va3b_k24

28 January 2022

ಅವನ ಜೊತೆ ಅವಳ ಕಥೆ.....೩

ಅವಳ ಜೊತೆ ಅವನ ಕಥೆ.....೩



ಅವರಿಬ್ಬರ ಹಳ್ಳಿ ಮನೆಯ ರೈತಾಪಿ ಬಾಳ್ವೆಯ ಅಧ್ಯಾಯ ಆರಂಭವಾಗಿ ಆರು ತಿಂಗಳೊಳಗೆ ರಾಜ ಅವಳ ಹೊಟ್ಟೆಯೊಳಗಿಳಿದಿದ್ದ. ಅವನು ಭೂಮಿಯ ಬೆಳಕು ಕಾಣುವ ಮೊದಲೆ ಪಟ್ಟಣದ ಮನೆಯನ್ನ ಕಟ್ಟಿ ಮುಗಿಸಲು ಅವನು ಪಣ ತೊಟ್ಟ. ಕಷ್ಟವೊ ನಷ್ಟವೊ ಎರಡು ತಿಂಗಳ ಅವಧಿಯಲ್ಲಿ ತೋಟದ ಮನೆಯಿಂದ ಪೇಟೆಗೂ ಪೇಟೆಯಿಂದ ತೋಟದ ಮನೆಗೂ ಬಂಡಿಯೋಡಿಸಿ ತಕ್ಕ ಮಟ್ಟಿಗೆ  ಸುಸಜ್ಜಿತವಾದ ಅಗ್ಗಿಷ್ಟಿಕೆಯ ಸಹಿತವಾದ ಒಂದು ಅಂತಸ್ತಿನ ಉಪ್ಪರಿಗೆ ಮನೆˌ ಕೋಳಿಗೂಡು ಸಹಿತವಾದ ಜಾನುವಾರು ಕೊಟ್ಟಿಗೆ ಕಟ್ಟಿ ಮುಗಿಸಿದ. ಗೋಪಿ ಮತ್ತವನ ಮಡದಿಯ ಸಹಕಾರ ಅದಕ್ಕೆ ಒದಗಿಬಂತು. 


ಅದರ ಒಳಮನೆಯಲ್ಲೆ ರಾಜ ಕಳೆದ ಶಿಶಿರ ಋತುವಿನ ಆರಂಭದಲ್ಲಿ ಹುಟ್ಟಿ ಹೊರಬಂದದ್ದು. ಬಸುರಿಗೆ ಒಬ್ಬಂಟಿಯಾಗಿ ತೋಟದ ಮನೆಯಲ್ಲಿರಲು ತ್ರಾಸವಾಗಬಹುದು ಅಂತ ಆತಂಕಿತನಾಗಿ ಇನ್ನೂ ಹೆರಿಗೆಗೆ ಮೂರು ತಿಂಗಳು ಬಾಕಿ ಇರುವಾಗಲೆ ಅವಳನ್ನ ಅಲ್ಲಿಗೆ ಸ್ಥಳಾಂತರಿಸಿದˌ ಜಾನುವಾರುಗಳೂ ಅದರ ಹಿಂದೆಯೆ ಪೇಟೆಮನೆ ಸೇರಿದವು. ಮಾಂಸಕ್ಕೆ ಬೆಳಸುವ ಪ್ರಾಣಿಗಳು ಮಾತ್ರ ತೋಟದ ಮನೆಯ ರೊಪ್ಪ ಹಾಗೂ ದೊಡ್ಡಿಯಲ್ಲಿ ಉಳಿದವು. ದಿನ ಬಿಟ್ಟು ದಿನ ಗೋಪಿ ಮತ್ತಿವನು ತೋಟದ ಮನೆಗೆ ಬಂಡಿಯೋಡಿಸಿಕೊಂಡು ಬಂದು ಪಶುಗಳಿಗೆ ಮೇವು ನೀರು ಕಾಣಿಸಿ ಆವರಣ ಸ್ವಚ್ಛಗೊಳಿಸಿ ಹೋಗುತ್ತಿದ್ದರು. ಶ್ರಾವಣದ ನಂತರವೆ ಮಗುವಿನೊಂದಿಗೆ ಅವರು ಹಳ್ಳಿಮನೆಗೆ ಮರಳಿ ಬಂದುದಾಗಿತ್ತು.


ರೈತಾಪಿ ಕಸಬುದಾರಿಕೆಯ ಕಸುವು ಅವನಲ್ಲಿ ಸಹಜ ಪ್ರವೃತ್ತಿಯಂತೆ ಬಾಲ್ಯದಿಂದಲೆ ನೆಲೆಯಾಗಿತ್ತು. ಅವನ ಈ ಆಸಕ್ತಿಯನ್ನ ಸಕಾಲದಲ್ಲಿ ಗುರುತಿಸಿದ ಅವನ ತಂದೆ ಅಕ್ಷರಭ್ಯಾಸದಲ್ಲಿ ಅವನ ಅನಾಸಕ್ತಿಯನ್ನ ಗುರತರ ಅಪರಾಧವೆಂದು ಪರಿಗಣಿಸದೆ ಶಿಕ್ಷಕನಾಗಲು ಬಯಸಿ ಅದರತ್ತ ಲಕ್ಷ್ಯ ನೆಟ್ಟ ಹಿರಿಮಗನನ್ನು ಬೆನ್ನುತಟ್ಟಿದಂತೆಯೇˌ ಮಠ ಸೇರಲು ಅಧ್ಯಾತ್ಮದತ್ತ ಆಸಕ್ತಿ ತೋರಿದ ಎರಡನೆಯವನನ್ನು ಬೆಂಬಲಿಸಿದಂತೆಯೆ ಇವನನ್ನೂ ರೈತಾಪಿ ಬದುಕಿನತ್ತ ಪ್ರೋತ್ಸಾಹಿಸಿದರು. ಕೃಷಿಯ ಕಷ್ಟನಷ್ಟˌ ಬೇಸಾಯೇತರ ಆದರೆ ಕೃಷಿ ಪೂರಕ ಚಟುವಟಿಕೆಗಳನ್ನೂ ಜೊತೆಜೊತೆಗೆ ರೂಢಿಸಿಕೊಂಡು ಸಂಭವನೀಯ ಅನಿರೀಕ್ಷಿತ ನಷ್ಟಗಳನ್ನ ಸರಿದೂಗಿಸಿಕೊಂಡು ಹೋಗುವ ಸೂಕ್ಷ್ಮˌ ಕೃಷಿ ಸಲಕರಣೆಗಳ ಸಣ್ಣಪುಟ್ಟ ರಿಪೇರಿ ದುರಸ್ತಿˌ ಪಶು ಅಶ್ವಗಳ ಪರಿಪಾಲನೆಯ ರಹಸ್ಯˌ ಅವುಗಳನ್ನ ಕೆಡಿಸದಂತೆ ಪಳಗಿಸಿಕೊಳ್ಳುವ ಗುಟ್ಟುˌ ಜೇನುˌ ಉಣ್ಣೆ ಉತ್ಪತ್ತಿˌ ಉಪ್ಪು ಹಾಕಿ ಊರಿಟ್ಟು ಮಾಂಸದ ಮೌಲ್ಯವರ್ಧನೆ ಮಾಡೋದುˌ ಹಾಲು ಹೈನುಗಳ ಸಮರ್ಪಕ ಉತ್ಪನ್ನಗಳ ತಯಾರಿಕೆˌ ವರ್ಷಕ್ಕೊಮ್ಮೆ ಕಾಡಿಗೆ ಹೋಗಿ ಹಿಕರಿ ಚೆಕ್ಕೆˌ ಸೊಗದೆ ಲಾವಂಚದ ಬೇರುˌ ಜಾಯಿಕಾಯಿˌ ಮೇಪಲ್ ರಸ ಸಂಗ್ರಹಿಸಿ ಆಲೆಮನೆ ಹಾಕಿ ಸಕ್ಕರೆ ಮಾಡೋದುˌ ನೀಲಗಿರಿ ಎಣ್ಣೆ ತೆಗೆಯೋದುˌ ರಾಳ ಸಂಗ್ರಹಿಸೋದುˌ ಬೆಳೆದ ದ್ರಾಕ್ಷಿಯನ್ನ ಸರಿಯಾಗಿ ಪಿಪಾಯಿಗಳಲ್ಲಿ ಕೊಳೆ ಹಾಕಿ ಮಾಗಿದ ಮೇಲೆ ಅದರ ರಸ ಹಿಂಡಿ ಭಟ್ಟಿ ಇಳಿಸಿ ಗುಣಮಟ್ಟದ ದ್ರಾಕ್ಷಾರಸ ತಯಾರಿಸುವ ಸೂತ್ರˌ ಸರಿಯಾಗಿ ಹುದುಗು ಬರಿಸಿದ ಹುಳಿ ಹಿಟ್ಟಿನಿಂದ ಒಣಧಾನ್ಯಗಳ ರೊಟ್ಟಿ ಸುಡುವುದುˌ ಬಲಿಪ್ರಾಣಿಗಳ ಸಂಖ್ಯೆ ಕುಸಿಯದಂತೆ ಅದೆಕಾಲಕ್ಕೆ ಅಳತೆ ಮೀರಿ ಹೆಚ್ಚದಂತೆ ಅವುಗಳನ್ನ ನಿಯಂತ್ರಣದಲ್ಲಿಡಲು ಮಾತ್ರ ಹೇಗೆ ಶಿಕಾರಿ ಮಾಡುವುದು. ಇವೆಲ್ಲವನ್ನೂ ಒಂದೂ ಬಿಡದಂತೆ ಹೇಳಿಕೊಟ್ಟರು. 


ಅವನ ಹತ್ತನೆ ಪ್ರಾಯದಿಂದ ಹದಿನಾರನೆ ಪ್ರಾಯದವರೆಗೆ ಅವರ ಹೊಲದಲ್ಲಿ ದುಡಿಸಿಕೊಂಡರು. ಆರುನೂರು ಎಕರೆ ಜಮೀನಿನ ದೊಡ್ಡ ಹಿಡುವಳಿ ಹೊಂದಿದ್ದ ಅಪ್ಪನಿಗೆ ಆಳುಗಳನ್ನ ಇಟ್ಟುಕೊಳ್ಳುವುದು ಅನಿವಾರ್ಯವೂ ಆಗಿತ್ತು. ಹೀಗಾಗಿ ಕೆಲಸದ ವಿಷಯದಲ್ಲಿ ಮಗನನ್ನೂ ಆಳೆಂದೆ ಪರಿಗಣಿಸಿ ಬೇಧ-ಭಾವ ತೋರದೆ ದುಡಿಸಿಕೊಂಡದ್ದಷ್ಟೆ ಅಲ್ಲˌ ದಿನಕ್ಕೆ ಕಾಲಾಣೆಯಂತೆ ನಿಗದಿತ ಸಂಬಳವನ್ನೂ ಕೊಟ್ಟರು. ಅವೆಲ್ಲವನ್ನೂ ಅವರೆ ಪಟ್ಟಣದ ಬ್ಯಾಂಕಿನಲ್ಲಿ ಅವನ ಹೆಸರಿನಲ್ಲೆ ಉಳಿತಾಯ ಖಾತೆ ಮಾಡಿ ಕೂಡಿಡುವುದನ್ನೂ ಹೇಳಿಕೊಟ್ಟಿದ್ದರು. ಮೊದಲ ಬಾರಿ ಬ್ಯಾಂಕಿನ ಗುಮಾಸ್ತೆ ಶ್ರೀಯುತ ಅಂತ ಬರೆದಿರುವಲ್ಲಿ ತನ್ನ ಹೆಸರು ಬರೆದು ಹನ್ನೆರಡು ರೂಪಾಯಿ ಜಮೆ ನಮೂದಿಸಿ ಪಾಸುಬುಕ್ಕನ್ನ ಕೈಗಿತ್ತಾಗ ತಾನೂ ದೊಡ್ಡ ಮನುಷ್ಯನಾದೆ ಅನ್ನುವ ಹಾಗನಿಸಿತ್ತು ಅವನಿಗೆ. ತುಂಬಾ ವಿನಮ್ರನಾಗಿ ಆ ಪಾಸುಪುಸ್ತಕ ಗುಮಾಸ್ತೆಯಿಂದ ಪಡೆದವನೆ ಪಟ್ಟಣದ ನಾಗರೀಕರಂತೆ ಧನ್ಯವಾದಗಳು ಅಂತ ಹೇಳಿ ಅಪ್ಪನನ್ನೂ ಅಚ್ಚರಿಗೊಳಿಸಿದ್ದ. ವಾಸ್ತವವಾಗಿ ತನ್ನ ಪಟ್ಟಣದ ಪರಿಚಿತರೊಂದಿಗೆ ಅಪ್ಪ ಮಾತು ಮುಗಿಸುವಾಗ ಹಾಗಂದು ಮುಕ್ತಾಯಗೊಳಿಸೋದನ್ನ ಅವನು ಕಂಡಿದ್ದನಲ್ಲ? ಅದನ್ನೆ ಅವತ್ತು ಅನುಕರಿಸಿದ್ದ ಅಷ್ಟೆ. ಈ ಆರು ವರ್ಷಗಳ ದುಡಿಮೆಯ ಉಳಿತಾಯ ಹಬ್ಬದ ಬೋನಸ್ಸೂ ಸೇರಿ ವರ್ಷಕ್ಕೆ ಸುಮಾರು ಮೂವತ್ತು ರೂಪಾಯಿಗಳಂತೆ ನೂರೆಂಬತ್ತು ರೂಪಾಯಿಗಳ ಗಂಟಾಗಿತ್ತು. ಸ್ವತಂತ್ರನಾದಾಗ ಅಪ್ಪ ತನ್ನ ಮುಂದಿನ ಬದುಕಿಗೆ ಕೊಟ್ಟ ಮೂಲಧನವಷ್ಟೆ ಅಲ್ಲದೆ ಈ ಒಂದು ಮೊತ್ತಕ್ಕೆ ವರ್ಷಕ್ಕೆ ಐದು ಶೇಕಡ ಬಡ್ಡಿಯಂತೆ ಹೆಚ್ಚುವರಿ ಮೂವತ್ತೊಂದುವರೆ ರೂಪಾಯಿ ತನಗೆ ಬ್ಯಾಂಕ್ ಕೊಟ್ಟದ್ದನ್ನ ನೋಡಿ ಹಿರಿಹಿರಿ ಹಿಗ್ಗಿದ. ಅದು ಆಪದ್ಧನ ಅಂತಲೂˌ ವಿವೇಚನೆಯಿಂದ ಅದನ್ನ ಬಳಸುವಂತೆಯೂ ಅಪ್ಪ ಅಮ್ಮ ಇಬ್ಬರೂ ಇವನಿಗೆ ವಿವೇಕ ಹೇಳಿ ಹರಸಿ ಕಳುಹಿಸಿದ್ದರು. 



ಅವನ ಕಾಲ ಮೇಲೆ ಅವನೆ ನಿಲ್ಲಲು ಹೊರಡುತ್ತಿರುವ ಮಗನ ಬಗ್ಗೆ ಅವರಿಗೂ ಹೆಮ್ಮೆ ಇತ್ತು. ಒಂದೊಮ್ಮೆ ಅವನ ಸಾಹಸ ವಿಫಲವಾದರೆ ತಮ್ಮ ಜಮೀನನ್ನೆ ಅವನ ಸುಪರ್ದಿಗೆ ಒಪ್ಪಿಸುವುದು ಇದ್ದೆ ಇತ್ತು. ಆದರೆ ಅವನು ಇದರಲ್ಲಿ ವಿಫಲನಾಗಲಾರನು ಎಂಬ ಭರವಸೆ ಅವರಿಬ್ಬರಿಗೂ ಇದ್ದ ಹಾಗಿತ್ತು. ಹೊಸತಾಗಿ ಹುಟ್ಟುತ್ತಿರುವ ನವನಾಗರೀಕತೆಯ ದೇಶದಲ್ಲಿ ತಮ್ಮ ಮೂವರೂ ಗಂಡು ಮಕ್ಕಳು ಹೀಗೆ ವಿಭಿನ್ನ ವೃತ್ತಿಗಳನ್ನ ಆಯ್ಕೆ ಮಾಡಿಕೊಂಡು ದೇಶ ಕಟ್ಟುವಲ್ಲಿ  ಸಕ್ರಿಯರಾಗುತ್ತಿರುವ ಬಗ್ಗೆ ಅವರಿಬ್ಬರಿಗೂ ಸಂತೃಪ್ತಿ ಇತ್ತು. ಇದು ಅವನು ರೈತನಾದ ಹಿನ್ನೆಲೆಯ ಕಥೆ.


ಇವನ ತೋಟದ ಮನೆಯಿಂದ ಪಟ್ಟಣಕ್ಕೆ ಹೋಗುವ ದಾರಿಯಲ್ಲಿ ಸೋಮ ಸರೋವರ ದಾಟಿ ಆರು ಮೈಲಿಗಳಾಚೆ ರೈಲು ರಸ್ತೆಯ ಕಾಮಗಾರಿ ನಡೆಯುತ್ತಿತ್ತು. ಪೂರ್ವದ ರಾಜಧಾನಿಯಿಂದ ಶುರುವಾಗಿದ್ದ ಹಳಿಗಳನ್ನ ಹಾಸುವ ಕಾರ್ಯ ಈಗ ಇವರ ಪಟ್ಟಣದ ಸಮೀಪದವರೆಗೆ ಬಂದು ಮುಟ್ಟಿತ್ತು. ಸದ್ಯದಲ್ಲಿಯೆ ಅದು ಸಮರ್ಪಕವಾಗಿ ಮುಗಿದರೆ ಇನ್ನಷ್ಟು ವಲಸಿಗರು ಪೂರ್ವದಿಂದ ಸುಲಭವಾಗಿ ಉಗಿಬಂಡಿ ಏರಿ ಬಂದು ಸದ್ಯ ವಿರಳ ಜನವಸತಿಗಳಿರುವ ಆ ಪ್ರದೇಶದಲ್ಲೂ ಜನಸಂಖ್ಯೆ ಹೆಚ್ಚುವ ಸೂಚನೆಗಳು ಅವನಿಗೆ ಸಿಕ್ಕಿದ್ದವು. ರೈಲು ರಸ್ತೆಯ ಗುತ್ತಿಗೆದಾರ ಅಲ್ಲೆ ಸಮೀಪದಲ್ಲಿದ್ದ ಪಾಳುಬಿದ್ದಿದ್ದ ಹಳೆಯ ಹೊಲಮನೆಯೊಂದನ್ನ ಬಾಡಿಗೆಗೆ ಹಿಡಿದು ಚೂರು ದುರಸ್ತಿ ಮಾಡಿ ಪೂರ್ವದ ನಾಡುಗಳಿಂದ ತಾನು ಕರೆಸಿದ್ದ ಕೂಲಿಗಳಿಗೆ ಅಲ್ಲಿ ತಂಗಲು ವ್ಯವಸ್ಥೆ ಮಾಡಿದ್ದ. ಊರಿಟ್ಟ ಮಾಂಸ ಮೀನು ಒಣರೊಟ್ಟಿಗಳು ಅಗತ್ಯ ಮಸಾಲೆ ಪದಾರ್ಥಗಳು ಹಿಟ್ಟು ಸಕ್ಕರೆ ಧಾನ್ಯಗಳು ಚಹಾಪುಡಿ ಎಲ್ಲವನ್ನೂ ನೆಲಮಹಡಿಯ ಸ್ಟೋರ್ ರೂಮಿನಲ್ಲಿ ತಂದಿಟ್ಟು ಅವರ ಖಾನ ಪಾನದ ವ್ಯವಸ್ಥೆಯನ್ನೂ ಮಾಡಿದ್ದ. 



ಸ್ಥಳಿಯ ಭಾಷೆ ಹಾಗೂ ನಾಗರೀಕ ನಡುವಳಿಕೆ ಇವೆರಡೂ ಅಷ್ಟಾಗಿ ರೂಢಿಯಿದ್ದಿರದ ಅವರು ಶ್ರಮಜೀವಿಗಳು. ದಿನವಿಡಿ ಕಲ್ಲು ಒಡೆದುˌ ಸುರಂಗ ಕೊರೆದುˌ ರೈಲಿನ ಲೋಹದ ಪಟ್ಟಿ ಹೊತ್ತುˌ ಮರದ ಸ್ಲಿಪರ್ಗಳನ್ನ ಕೂಯ್ದು ಹಾಸಿ ವಿಪರೀತ ಶ್ರಮದಾಯಕ ಕೆಲಸಗಳನ್ನ ಬೆವರು ಸುರಿಸಿ ಗೆಯ್ದುˌ ಸಂಜೆ ವೇಳೆ ಪಟ್ಟಣದ ಪಡಖಾನೆಯಿಂದ ತಂದಿರುತ್ತಿದ್ದ ಮದ್ಯ ಸೇವಿಸಿ ವಿಪರೀತ ಗದ್ದಲ ಮಾಡುತ್ತಿದ್ದರು. ಅವರವರಲ್ಲೆ ಗಲಾಟೆ ಕೂಗಾಟ ಕೆಲವೊಮ್ಮೆ ತಾರಕಕ್ಕೇರಿ ಅವರಲ್ಲೆ ಇಬ್ಬರಲ್ಲಿ ಹೊಯ್ ಕೈ ಆಗುವುದೂ ಇತ್ತು. ಆದರೆ ಅದೇನೆ ಕೂಗಿ ಕಿರುಚಿ ಜಗಳವಾಡಿದರೂ ಅವರ ಆ ಕಾಟುಭಾಷೆ ಇಲ್ಲಿನವರಿಗೆ ಅರ್ಥವಾಗದ ಕಾರಣ ಅವರ ಜಗಳದ ಅಸಲಿ ಕಾರಣವನ್ನೆ ಕಂಡು ಹಿಡಿಯಲಾಗುತ್ತಿರಲಿಲ್ಲ.


************


ರಾತ್ರಿ ಅದೆಷ್ಟೆ ಶರಂಪರ ಕಿತ್ತಾಡಿಕೊಂಡರೂ ಬೆಳಗ್ಯೆ ಹಗಲಾಗುತ್ತಿದ್ದಂತೆ ಅದೊಂದನ್ನೂ ನೆನಪಿಟ್ಟುಕೊಳ್ಳದ ಅವರುˌ ಹಾಗೊಂದು ಕರಾಳ ರಾತ್ರಿ ಕಳೆದದ್ದೆ ಸುಳ್ಳೇನೋ ಅನ್ನುವಂತೆ ಮತ್ತೆ ಗುಂಪಾಗಿ ಪೂರ್ವದ ಅದ್ಯಾವುದೋ ಹಾಡನ್ನ ಹಾಡಿಕೊಂಡುˌ ಸೀಟಿ ಹೊಡೆದುಕೊಂಡು ತಮ್ಮ ನಿತ್ಯದ  ಪರಿಶ್ರಮದ ಕೂಲಿ ಕೆಲಸವನ್ನ ಯಥಾಪ್ರಕಾರ ಮುಂದುವರೆಸಿಕೊಂಡು ಹೋಗುತ್ತಿದ್ದರು. ಪ್ರತಿ ಶುಕ್ರವಾರ  ಅವರಿಗೆಲ್ಲ ವಾರದ ಸಂಬಳದ ಬಟವಾಡೆ ಆಗುತ್ತಿತ್ತು. ಸಹಜವಾಗಿ ಶನಿವಾರದ ಸಂಜೆ ಪಟ್ಟಣದ ಪಡಖಾನೆಯಲ್ಲಿ ಅವರೆ ಗಿಜುಗುಟ್ಟುತ್ತಿದ್ದರು. ಆದಿತ್ಯವಾರದ ರಜಾದಿನವೂ ಅವರಲ್ಲಿ ಕೆಲವರು ಪಡಖಾನೆಯಲ್ಲಿಯೆ ಬಿದ್ದುಕೊಂಡು ಸಂಜೆ ತೂರಾಡುತ್ತಾ ತಮ್ಮ ಕ್ಯಾಂಪಿನ ಮನೆಗೆ ಒಲ್ಲದ ಮನಸಿನಿಂದ ಸಾಗಿ ಹೋಗುವುದನ್ನು ಕಾಣಬಹುದಿತ್ತು. ಅವರೊಂದಿಗೆ ಆ ತೋಟದ ಹೊಲಮನೆಯ ಕ್ಯಾಂಪಿನಲ್ಲಿ ಹೆಂಗಸರೂ ಮಕ್ಕಳೂ ತಂಗಿದ್ದರು. ಒಟ್ಟಿನಲ್ಲಿ ಅದೊಂದು ಸಂತೆ.


ಆದರೆ ಈ ಸಲದ ಪ್ರಚಂಡ ಶೀತಗಾಳಿ ಅಂತಹ ಮಹಾ ಒರಟರ ಆತ್ಮಸ್ಥೈರ್ಯವನ್ನೂ ಅಲ್ಲಾಡಿಸಿ ಬಿಟ್ಟಿತ್ತು. ಈ ಖಂಡಾಂತರ ಸಾಗಿ ಬಂದಿರುವ ಸಾಹಸಿ ಹಾಗೂ ಕ್ರೂರಿ ವಲಸಿಗರಿಂದ ತನಗೆ ತನ್ನವರಿಗೆ ಪರಮ ಅನ್ಯಾಯವಾಗಿದ್ದರೂˌ ಇವರ ಬೇಟೆಯ ತೆವಲಿನ ಅಟ್ಟಹಾಸಕ್ಕೆ ಬಲಿಯಾಗಿ ತಮ್ಮೊಂದಿಗೆ ತಲೆಮಾರುಗಳಿಂದ  ಸಹಜೀವನ ನಡೆಸುತ್ತಿದ್ದ ಕತ್ತೆಮೊಲಗಳು - ಕಾಡೆಮ್ಮೆಗಳು ವಿನಾಶದ ಅಂಚಿಗೆ ತಲುಪಿರುವ ನೋವದೆಷ್ಟೆ ಇದ್ದರೂˌ ಅದೆಲ್ಲಿಂದಲೋ ಬಂದ ಇವನ ಹಾಗಿನ ನವ ನಾಗರೀಕತೆಯವರಿಂದ ತಮ್ಮ ಸ್ಥಳಿಯ ಸಂಸ್ಕೃತಿ ದಬ್ಬಾಳಿಕೆಗೊಳಗಾಗುತ್ತಿರೋದನ್ನ ಸಹಿಸಲಾರದೆ ಸ್ವತಃ ತಾವೆ ತಮ್ಮ ಹಾಡಿ ಕಾಡು ನೆಲ ಎಲ್ಲವನ್ನೂ ತ್ಯಜಿಸಿ ಇನ್ನೂ ಈ ಪರಕೀಯರ ಕಾಟ ಅಷ್ಟಾಗಿ ಹಬ್ಬಿರದಷ್ಟು ಪಶ್ಚಿಮಕ್ಕೆ ತಾವೆ ವಲಸೆ ಹೋಗುವ ಶೋಚನೀಯ ಪರಿಸ್ಥಿತಿ ಎದುರಾಗಿದ್ದರೂ ಸಹ ಆ ಸ್ಥಳದ ಅಲ್ಲಿನ ವಾತಾವರಣದ ಹಾಗೂ ಆಪತ್ತು ವಿಪತ್ತುಗಳ ಸಂಪೂರ್ಣ ಅರಿವಿದ್ದ ಸ್ಥಳಿಯರ ಬುಡಕಟ್ಟಿನ ಹಿರಿಯ ಈ ಚಳಿಗಾಲ ಹನ್ನೆರಡು ವರ್ಷಗಳಿಗೂ ಹಿಂದೆ ಕಾಡಿದ್ದ ವಿಪರೀತ ಶಿಶಿರಕ್ಕಿಂತ ಭೀಕರವಾಗಿರಲಿದೆ ಎಂದು ಪೇಟೆಗೆ ತಾನೆ ಖುದ್ದಾಗಿ ಬಂದು ಗಟ್ಟಿ ಧ್ವನಿಯಲ್ಲಿ ಘೋಷಿಸಿ ಸೂಚನೆ ಕೊಟ್ಟಿದ್ದರೂ ಸಹ ಈ ಬಗ್ಗೆ ಮುಂಜಾಗ್ರತೆ ವಹಿಸದೆ ಅದ್ಯಾವುದೋ ಹಕ್ಕಿಪುಕ್ಕ ತಲೆಯ ರುಮಾಲಿಗೆ ಸಿಕ್ಕಿಸಿಕೊಂಡು ವಿಚಿತ್ರ ಧಿರಿಸು ಧರಿಸಿ ಮಣಿ ಸರಗಳ ಮಾಲೆ ತೊಟ್ಟು ಕೈಯಲ್ಲೊಂದು ದೊಣ್ಣೆ ಊರಿಕೊಂಡು ಬಂದಿದ್ದ ಅವನನ್ನೆ "ಅನಾಗರೀಕ ಮುದುಕ" ಅಂತ ಗೇಲಿ ಮಾಡಿದ್ದವರೆಲ್ಲರೂ ಈಗ ಕಷ್ಟಕ್ಕೆ ಸಿಕ್ಕಿ ಹಾಕಿಕೊಂಡಿದ್ದರು. 


ಅವನ ಜೀವನಾನುಭವದ ಮುಂದೆ ಇವರ ನಾಗರೀಕತೆಯ ಲೆಕ್ಕಾಚಾರಗಳಲ್ಲ ತಲೆಕೆಳಗಾಗಿದ್ಢವು. ಕೇವಲ ಬಾನಿನಲ್ಲಿ ಕಳೆದ ಆರು ಹುಣ್ಣಿಮೆಗಳ ಪೂರ್ಣಚಂದ್ರ ಹಾಗೂ ನಕ್ಷತ್ರಗಳ ಚಲನೆಯನ್ನ ನೋಡಿ ಮನದಲ್ಲೆ ಗುಣಿಸಿ ಭಾಗಿಸಿ ಖಚಿತವಾಗಿ ಈ ಕಂಡರಿಯದ ಹಿಮಪಾತದ ಹವಾಮಾನದ ಬಗ್ಗೆ ಆ ಹಿರಿಕ ಸ್ಥಳಿಯ ಮುನ್ನೆಚ್ಚರಿಕೆ ನೀಡಿದ್ದ. ಅದರ ಆರಂಭಿಕ ಹೊಡೆತವೆ ಅದೆಷ್ಟು ಬಿಗಿಯಾಗಿತ್ತೆಂದರೆˌ ಸುಲಭವಾಗಿ ಯಾವ ಕಠಿಣ ಪರಿಸ್ಥಿತಿಗೂ ಜಗ್ಗದಂತಿದ್ದ ರೈಲು ರಸ್ತೆ ಹಾಸಲು ಬಂದಿದ್ದ ಈ ಒರಟರ ಗುಂಪು ಬಾಲ ಮುದುರಿಕೊಂಡು ಮತ್ತೆ ಪೂರ್ವದತ್ತ ಗಂಟು ಮೂಟೆ ಕಟ್ಟಿಕೊಂಡು ದೌಡಾಯಿಸಿದ್ದರು. ಗುತ್ತಿಗೆದಾರ ಅದೇನೆ ಅಮಿಷ ಒಡ್ಡಿ ಅದೆಷ್ಟೆ ಬೇಡಿಕೊಂಡರೂ ಅವರ್ಯಾರೂ ಅದಕ್ಕೆ ಕಿಂಚಿತ್ತೂ ಸೊಪ್ಪು ಹಾಕಲಿಲ್ಲ. 


ಆದರೆ ಅವರಂತೆ ಅಲೆಮಾರಿಗಳಾಗಿಲ್ಲದ ಹೊಲಮನೆ ಮಾಡಿ ಪರಿಶ್ರಮದಿಂದ ಹೋರಾಟದ ಬದುಕು ನಡೆಸುತ್ತಾ ಬಂದು ನೆಲೆಸಿರುವ ರೈತಾಪಿಗಳಿಗಾಗಲಿˌ ಹೊಸ ಪ್ರದೇಶಕ್ಕೆ ಬಂದು ಅಂಗಡಿˌ ಹೊಟೆಲುˌ ದರ್ಜಿಯಂಗಡಿˌ ಕುಂಬಾರಿಕೆˌ ಕಮ್ಮಾರಿಕೆˌ ಭಂಡಸಾಲೆ ಹೀಗೆ ನಾನಾ ತರಹದ ವ್ಯವಹಾರಗಳಿಗೆ ತಮ್ಮ ಜೀವಮಾನದ ಗಳಿಕೆಯನ್ನೆಲ್ಲಾ ಬಂಡವಾಳ ಹೂಡಿ ಅದನ್ನೆ ತಮ್ಮ ಭವಿಷ್ಯ ಅಂದುಕೊಂಡಿರುವವರಿಗೆಲ್ಲ ಹೀಗೆ ಏಕಾಏಕಿ ಇದ್ದದ್ದನ್ನು ಇದ್ದಲ್ಲಿಯೆ ಬಿಟ್ಟು ಬಂದಂತೆಯೆ ಬಂದಿದ್ದಲ್ಲಿಗೆ ಪಲಾಯನಗೈಯಲು ಸಾಧ್ಯವೆ ಇರಲಿಲ್ಲ. ಅಂತಹ ಅಸಹಾಯಕ ಸಾಹಸಿ ರೈತಾಪಿಗಳಲ್ಲಿ ಅವನೂ ಒಬ್ಬನಾಗಿದ್ದ. ಅಷ್ಟಕ್ಕೂ ಎಂದೆಂದಿಗೂ ಬದಲಾಗದ ಸತ್ಯ ಈ ವಾತಾವರಣದ ವೈಪರೀತ್ಯ. ಮುಂದೆಯೂ ಇದರೊಂದಿಗೆ ಗುದ್ದಾಡಿಕೊಂಡೆ ಹೊಂದಾಣಿಕೆಯ ಬದುಕನ್ನ ನಡೆಸಬೇಕಿರುವಾಗ ಶಾಶ್ವತವಾಗಿ ಅಲ್ಲಿ ನೆಲೆಸಿದವರ್ಯಾರೂ ಹಾಗೆ ತತ್ಕಾಲಿಕವಾಗಿಯಾದರೂ ಸರಿ ಪಲಾಯನ ಮಾಡುವುದು ಮರು ವಲಸೆ ಹೂಡುವುದು ವಾಸ್ತವವೂ ವಿವೇಕವೂ ಆಗಿರಲ್ಲ.


ರೈಲು ರಸ್ತೆಯ ಕಾರ್ಮಿಕರು ಖಾಲಿ ಮಾಡಿ ಹೋದ ತೋಟದ ಮನೆಯೂ ಈಗ ಹಿಮಪಾತದ ಚಳಿಗಾಲದುದ್ದ ಬಿಕೋ ಅನ್ನುತ್ತಿದ್ದುˌ ಈಗ ಅವರ ತೋಟದ ಮನೆಗೆ ಪಟ್ಟಣದ ಹಾದಿಯಲ್ಲಿ ಮೂವತ್ತು ಮೈಲಿ ದೂರ ಒಂದು ನರಪಿಳ್ಳೆಯೂ ಸಹಿತ ವಾಸವಿರಲಿಲ್ಲ. 


ಇವತ್ತು ಅವನು ಹಾಗೆ ನಸುಗತ್ತಲ ಮುಂಜಾವಿನಲ್ಲಿಯೆ ಅದೆಲ್ಲಿಗೋ ಹೊರಡುವ ಸೂಚನೆ ಸಿಕ್ಕೊಡನೆಯೆ ಅಗ್ಗಿಷ್ಟಿಕೆಯ ಹತ್ತಿರದ ಗೋಡೆಯ ಗೂಟಕ್ಕೆ ಬಿಗಿದಿದ್ದ ತನ್ನ ಕುತ್ತಿಗೆಯ ಹಗ್ಗ ಕಿತ್ತು ಬರುವಂತೆ ಎಳೆದುಕೊಳ್ಳುತ್ತಾ ನಾನೂ ಬರುತ್ತೇನೆಂದು ನಾಯಿ ಕರಿಯ ಎಗರಾಡ ತೊಡಗಿದ. ಅದರ ನಿರೀಕ್ಷೆ ಇದ್ದುದರಿಂದಲೆ ಮುಂಜಾಗ್ರತ ಕ್ರಮವಾಗಿ ಅವನನ್ನು ರಾತ್ರಿಯೆ ಉಪಾಯವಾಗಿ ಗೂಟಕ್ಕೆ ಬಿಗಿದು ಕಟ್ಟಿದ್ದರು. ಈ ಭೀಕರ ಚಳಿಗಾಲಕ್ಕೂ ಮೊದಲು ಬಹುತೇಕ ಕಾಣೆಯಾಗಿದ್ದ ಹಿಮಚಿರತೆಗಳು ಈಗ ಏಕಾಏಕಿ ಹವಾಮಾನ ವೇಪರೀತ್ಯದ ಕಾರಣದಿಂದಲೋ ಏನೋˌ ಪುನಃ ತೋಟದ ಮನೆಯ ಸುತ್ತಮುತ್ತ ಸುಳಿದಾಡಲು ಆರಂಭಿಸಿರೋದರಿಂದ ಹೀಗೆ ಕರಿಯನನ್ನು ರಾತ್ರಿ ಹೊತ್ತಿನಲ್ಲಿ ಮನೆಯೊಳಗೆ ಕೂಡಿ ಹಾಕುವುದು ಅನಿವಾರ್ಯವೂ ಆಗಿತ್ತು. ಇಲ್ಲದಿದ್ದಲ್ಲಿ ಶ್ವಾನಮಾಂಸ ಪ್ರಿಯ ಶ್ವಪಚ ಚಿರತೆಗಳು ಬಹಳ ಹಿಂದೆಯೆ ಕರಿಯನಿಗೊಂದು ಗತಿ ಕಾಣಿಸುತ್ತಿದ್ದುದರಲ್ಲಿ ಯಾವ ಸಂಶಯವೂ ಇರಲಿಲ್ಲ ಅಂತ ಇಟ್ಟುಕೊಳ್ಳಿ. ಅದೂ ಸಾಲದು ಅಂತ ಈ ಎಮ್ಮೆತೋಳಗಳ ಹಿಂಡುಗಳು ಬೇರೆ ಆಗೀಗ ತೋಟವನ್ನು ಬಳಸಿಕೊಂಡು ಗುಂಪು ಗುಂಪಾಗಿ ವಲಸೆ ಹೋಗಲಾರಂಭಿಸಿವೆ. ಬಹುಶಃ ತನ್ನ ತೋಟದ ಜಾಗ ಬೇಲಿ ಬಿಗಿದ ಜಮೀನು ಎಲ್ಲವೂ ಅವುಗಳ ಸುಶುಪ್ತಿಯಲ್ಲಿ ಅಚ್ಚಾಗಿರುವ ವಲಸೆ ಹಾದಿಯಲ್ಲೆ ಇದ್ದಿರಲೂಬಹುದು. ಕರಿಯನನ್ನೆಲ್ಲಾದರೂ ಸಡಿಲ ಬಿಟ್ಟರೆ ಅವನು ಅಂತಹ ಗುಂಪುಗಳ ಮೇಲೆ ಹಾರಿ ಹೋರಾಡಲೂ ಹೇಸುವವನಲ್ಲ. ತಾನು ಮನೆಯಲ್ಲಿಲ್ಲದ ಸಂದರ್ಭ ಕರಿಯನಾದರೂ ಅವಳˌ ಮಗ ರಾಜನ ಹಾಗೂ ಕೊಟ್ಟಿಗೆಯ ಬಂಧುಗಳ ಕಾವಲಿಗೆ ಅಲ್ಲಿಯೆ ಇರಬೇಕಾಗಿದ್ದುದು ಅನಿವಾರ್ಯವಾಗಿತ್ತು.


ಆದರೆ ಅವನ ವೇಷಭೂಷಣ ನೋಡಿ ತಡೆಯಲಾಗದೆ ಕರಿಯನೂ ತಕಥೈ ಕುಣಿಯಲಾರಂಭಿಸಿದ. ಅದರಲ್ಲೂ ಇವನ ಕೈಯಲ್ಲಿ ಒಂದೊಮ್ಮೆ ಕೋವಿಯನ್ನೇನಾದರೂ ಕಂಡಿದ್ದರೆ ಅವನನ್ನ ಸಂಭಾಳಿಸವುದೆ ಕಷ್ಟವಾಗುತ್ತಿತ್ತು. ಕೋವಿ ಅಂದರೆ ಶಿಕಾರಿ ಅನ್ನುವ ಕನಿಷ್ಠ ಅರಿವು ನಾಯಿ ಕರಿಯನಿಗೂ ಇದ್ದೆ ಇದೆ. ಬೇಟೆಯ ಹುಮ್ಮಸ್ಸಿನಲ್ಲಿ ಅವನು ಸದಾ ಮುಂದು. ಕೋವಿ ಕೈಲಿದ್ದವರ ಹಿಂದೆ ಅತ್ಯುತ್ಸಾಹದಿಂದ ಚಿಮ್ಮಿ ಮುಂದೋಡಿ ಹೋಗುವ ದುರ್ಬುದ್ಧಿ ಒಂದಿಲ್ಲದಿದ್ದಿದ್ದರೆ ಕರಿಯ ಎಂದಿಗೂ ತನ್ನ ಯಜಮಾನ ಹಾಗೂ ಯಜಮಾನತಿಗೆ ವಿಧೇಯನೆ. ಕೋವಿ ಕಂಡರೆ ಮಾತ್ರ ಅವನ ಸಕಲೇಂದ್ರಿಯಗಳಲ್ಲೂ ಎಂತಹ ವಿಪರೀತ ಪರಿಸ್ಥಿತಿಗಳಲ್ಲೂ ಜೀವಸಂಚಾರವಾಗುತ್ತಿತ್ತು ಅಷ್ಟೆ.


ಈಗಲೂ ಕೋವಿಯನ್ನ ಲೋಡು ಮಾಡಿ ಅದನ್ನಿವನು ಮೇಲುಪ್ಪರಿಗೆಯ ಕಡ ಮಾಡಿಗೆ ತೂಗು ಹಾಕಿ ಬಂದಿದ್ದ. ಅವಳಿಗೆ ತಾನು ಹಿಂದಿರುಗಿ ಬರುವ ಮೊದಲು ತೀರಾ ಅಗತ್ಯ ಬಿದ್ದಲ್ಲಿ ಸ್ವರಕ್ಷಣೆಗಾಗಿ ಅದನ್ನ ಬಳಸಲು ಸೂಚನೆಯನ್ನೂ ಕೊಟ್ಟಿದ್ದ. ಹಳ್ಳಿ ಮನೆ ಬದುಕು ಅದೂ ನಿರ್ಮಾನುಷ ಜಾಗದಲ್ಲಿ ಅಂದರೆ ಹೀಗೆಯೆ. ಯಾವಾಗ ಏನಾಗುತ್ತದೆ ಎಂದು ಹೇಳಲಾಗುವುದಿಲ್ಲ. ಎಲ್ಲಾ ಬಗೆಯ ಅನಿರೀಕ್ಷಿತ ಅನಿಷ್ಟಗಳ ವಿರುದ್ಧ ಕಾದಾಡಲು ಸದಾ ಕಣ್ಣು ಕಿವಿ ತೆರೆದಿಟ್ಟುಕೊಂಡು ಜಾಗ್ರತ ಸ್ಥಿತಿಯಲ್ಲಿಯೆ ಕಾಲ ಹಾಕಬೇಕಿರುತ್ತದೆ.




****************





"ಮಂಜು ಕವಿದ ಇಳೆಯೆದೆಯೊಳಗೆ ಹೊಳೆವ ಸೂರ್ಯನ ನಿರೀಕ್ಷೆ ನಿರಂತರˌ ವಸಂತ ಬೇರೆಯಲ್ಲ ಶಿಶಿರ ಅನ್ಯನಲ್ಲ ಇಬ್ಬರ ನಡುವೆ ಇರೋದು ಇನಿತೆ ಅಂತರ."


ಇವನಿಗೆ ಈ ಕರಿಯ ಸಿಕ್ಕಿದ್ದೂ ಸಹ ಒಂದು ಸ್ಮರಣಾರ್ಹ ಸಂಗತಿಯೆ. ಎರಡು ಚಳಿಗಾಲಗಳ ಹಿಂದೆ ಆಗಿನ್ನೂ ಬ್ರಹ್ಮಚಾರಿಯಾಗಿದ್ದ ತಾನು ಅಪ್ಪನ ಕರೆಯ ಕಾಗದ ತಲುಪಿದ್ದೆ ಹಿರಿಯ ತಂಗಿಯ ಮದುವೆಗೆ ಮನೆ ಕಡೆಗೆ ಹೋಗುವ ಪರಿಸ್ಥಿತಿ ಎದುರಾಗಿತ್ತು. ಅದು ಒಕ್ಕಣೆ ಮುಗಿದ ಸುಗ್ಗಿಯ ನಂತರದ ಸಮಯವಾಗಿದ್ದರಿಂದಲೂˌ ಆ ವರ್ಷ ಮನೆ ಕಟ್ಟುವ ಕೆಲಸ ಬಿಗಿಯಾಗಿದ್ದಿದ್ದರಿಂದ ಮೇವಿನ ಬೆಳೆಗಳ ಹೊರತು ಹೆಚ್ಚಿನ ಬೆಳೆಯದಿದ್ದುದರಿಂದಲೂ ಒಕ್ಕಣೆ ಬೇಗ ಮುಗಿದಿತ್ತು ಬೇರೆ. ವರ್ಷದ ನೆಲ ಕಂದಾಯ ಐದು ರೂಪಾಯಿಗೆ ಆಗ ಬಂದಿದ್ದ ಫಸಲು ಪುಟಗೋಸಿಗೂ ಸಾಕಾಗುತ್ತಿರಲಿಲ್ಲ. ಆದರೆ ಮೊದಲ ವರ್ಷದ ಬೇಸಾಯದಲ್ಲಿ ಈ ಬಗೆಯ ಏರುಪೇರು ಕಷ್ಟನಷ್ಟಗಳೆಲ್ಲ ಇದ್ದದ್ದೆˌ ಅದೆ ರೈತಾಪಿ ಬದುಕು. ಹೀಗಾಗಿ ಆಗ ಜೊತೆಯಲ್ಲಿಯೆ ವಾಸವಿದ್ದ ಗೋಪಿಗೆ ತಿಂಗಳುಗಳ ಕಾಲ ಹೊಲಮನೆಯ ಉಸ್ತುವರಿ ವಹಿಸಿ ತಾನು ಕುದುರೆ ಬಂಡಿಯೋಡಿಸಿಕೊಂಡು ತವರಿಗೆ ಮರಳಿದ್ದ. 


ಹಾಗೆ ಹೋಗಿದ್ದವ ಹಿಂದೆ ಬರುವ ಹಾದಿಯಲ್ಲಿ ನಡುವಿನ ಒಂದು ಪುಟ್ಟ ಪಟ್ಟಣದ ಊಟದ ಮನೆಯೊಂದರಲ್ಲಿ ರಾತ್ರಿ ತಂಗಬೇಕಾಗಿ ಬಂದಿತ್ತು. ತಾನು ಬಿಸಿಬಿಸಿ ರೊಟ್ಟಿ ಜೊತೆಗೆ ಮಾಂಸದ ಮೇಲೋಗರ ಮಲ್ಲುತ್ತಾ ಮೂಳೆ ಕೊರೆವ ಚಳಿಗೆ ಸುಡು ಮದ್ದಿನಂತಹ ಒಂದೊಂದೆ ಗುಟುಕು ದ್ರಾಕ್ಷಾರಸ ಹೀರುತ್ತಿದ್ದಾಗ ಅಸಹಾಯಕ ಕರಿ ನಾಯಿಮರಿಯೊಂದು ದೈನ್ಯತೆ ತುಂಬಿದ ಕಣ್ಣುಗಳಿಂದ ತನ್ನ ಕೈ ಬಾಯನ್ನೆ ನೋಡುತ್ತಾ ತನ್ನ ಊಟದ ಮೇಜಿಗೆ ಅನತಿ ದೂರ ಮೂಕಿ ಇಳಿಸಿದ್ದ ತನ್ನದೆ ಕುದುರೆ ಬಂಡಿಯ ಚಕ್ರದ ಬಳಿ ನಿಂತು ಪಿಳಿಪಿಳಿ ನೋಡುತ್ತಿದ್ದುದು ಅರಿವಿಗೆ ಬಂತು. ಕನಿಷ್ಠ ಕೂಂಯ್ಗುಡಲಾರದಷ್ಟೂ ಅದು ಹಸಿವಿನಿಂದ ಬಳಲಿದಂತಿತ್ತು. ಮರುಕದಿಂದ ಕರೆದˌ ಹತ್ತಿರ ಬರಲಿಲ್ಲ. ತಾನೆ ಒಂದು ತುಂಡು ರೊಟ್ಟಿಯನ್ನ ಅದರತ್ತ ಎಸೆದ. ಬರಲೋ ಬೇಡವೋ ಅಂತ ಅನುಮಾನಿಸುತ್ತಾ ಅದರ ಬಳಿ ಸಾರಿದ ಮರಿ ಗಬಗಬನೆ ಆ ರೊಟ್ಟಿ ತುಂಡನ್ನ ಜಗೆಯಲೂ ಮರೆತಂತೆ ನುಂಗಿ ಮುಗಿಸಿದು. ಇವ ಮತ್ತೊಂದು ತುಂಡೆಸದ. ಅದರದ್ದೂ ಅದೆ ಕಥೆ. ಹೀಗೆ ಎರಡು ರೊಟ್ಟಿಗೆ ಅದರ ಹಸಿವು ತೀರಿ ಜೀವಕಳೆ ಆ ಬಡಕಲು ಕುನ್ನಿಯ ದೇಹದಲ್ಲಾಡಿತು. ಅಷ್ಟಾಗಿಯೂ ಬಾಲ ಅಲ್ಲಾಡಿಸಿದ ಅದು ಹತ್ತಿರ ಬರುವ ಧೈರ್ಯವನ್ನ ಮಾತ್ರ ಮಾಡಲೆ ಇಲ್ಲ. 


ಬೆಳಗಾಗೆದ್ದು ಚಹಾ ಹೀರಿ ಮುಗಿಸಿದವ ಬಂಡಿ ಹೂಡಿ ತನ್ನ ತೋಟದ ಮನೆಯತ್ತ ದೌಡಾಯಿಸುವಾಗ ಮುಂದೆ ಸುಮಾರು ದೂರ ನಿರ್ಜನ ದಾರಿಯಲ್ಲಿ ಬಂಡಿ ನಡೆಸಿದವನೆ ಕುದುರೆಗಳಿಗೆ ಮೇವು ಹಾಕಿ ತುಸು ವಿಶ್ರಾಂತಿ ಕೊಟ್ಟು ಮತ್ತೆ ಮುಂದುವರೆಯುವ ದೃಷ್ಟಿಯಿಂದ ಪ್ರಶಸ್ತ ಸ್ಥಳದಲ್ಲಿ ಬಂಡಿ ನಿಲ್ಲಿಸಿದವ ಅದ್ಯಾಕೋ ತಿರುಗಿ ನೋಡಿದರೆ ಬಿಳಿ ಮಂಜಿನ ಹೊದಿಕೆಯ ಮೇಲೆ ಕರಿ ಚುಕ್ಕಿಯೊಂದು ತನ್ನತ್ತಲೆ ಓಡಿ ಬರುತ್ತಿದೆ! ಅದು ಅದೆ ಕರಿ ನಾಯಿ ಮರಿ ಅನ್ನೋದು ಖಚಿತವಾದ ನಂತರ ಹದಿನೆಂಟು  ಮೈಲಿ ಹೀಗೆ ದಾರಿಯುದ್ದ ತನ್ನನ್ನ  ಹಿಂಬಾಲಿಸಿಕೊಂಡು ಅದು ಬಂದಿರೋ ಬಗ್ಗೆಯೆ ಇವನು ಅಚ್ಚರಿಗೊಂಡ. ಈ ಸಾರಿ ಪ್ರೀತಿಯಿಂದ ಹತ್ತಿರ ಕರೆದಾಗ ಅನುಮಾನಿಸುತ್ತಲೆ ಮೆಲ್ಲಗೆ ಬಾಲವಾಡಿಸತ್ತಾ ಅದು ಹತ್ತಿರ ಬಂದಿತು. ಅಷ್ಟು ದೂರ ಓಡಿ ಬಂದು ಅದು ಬಳಲಿತ್ತುˌ ಆ ಚಳಿಯಲ್ಲೂ ಅದರ ಮೈ ಕೊಂಚ ಬೆವರಿತ್ತು. ಈ ಸಾರಿ ಅದಕ್ಕೆ ಮತ್ತೆ ಓಡಿ ಬರುವ ಅಗತ್ಯ ಬೀಳಲಿಲ್ಲ. ಅದನ್ನೂ ಇವ ಬಂಡಿಗೇರಿಸಿಕೊಂಡˌ ಬಳಲಿ ಬೆಂಡಾಗಿದ್ದ ನಾಯಿಕುನ್ನಿ ಬಂಡಿಯೊಳಗೆ ಕಾಲು ಇಡುವ ಜಾಗದಲ್ಲಿ ಮೈ ಚಾಚಿ ನಿಶ್ಚಿಂತವಾಗಿ ಮಲಗಿ ಬಂಡಿಯ ಕುಲುಕಾಟಕ್ಕೆ ತೊಟ್ಟಲಿನಲ್ಲಿ ತೂಗಿ ಮಲಗಿಸಿದ ಕಂದನಂತೆ ನಿದ್ರೆ ಹೋಯಿತುˌ ಮುಂದೆ ಅವನ ಬಣ್ಣವೆ ಅವನ ನಿಜ ನಾಮಧೇಯವೂ ಆಯಿತು. ಹೀಗೆ ಕರಿಯ ಇವನ ಕುಟುಂಬದ ಒಬ್ಬ ಸದಸ್ಯನಾಗಿ ಹೋಗಿದ್ದ.


ಇಂತಹ ಶಿಕಾರಿ ಪ್ರಿಯ ಕರಿಯನನ್ನ ಹಿಂದಿನ ರಾತ್ರಿಯೆ ಕಟ್ಟಿ ಬಿಗಿಯದಿರುತ್ತಿದ್ದಿದ್ದರೆ ಅದಾಗಲೆ ಅವನ ಸವಾರಿ ಗಾಡಿಖಾನೆಯತ್ತ ಸಾಗಿಯಾಗಿರುತ್ತಿತ್ತು. ಮನೆಯ ತಲೆಬಾಗಿಲನ್ನ ಬಾಗಿಲನ್ನ ತೆರೆದಿದ್ದೆ ತರ ಸಶಬ್ಧವಾಗಿ ಭೋರ್ರ್ ಎಂದು ಬೀಸುತ್ತಿದ್ದ ಹಿಮ ಮಾರುತ ಬೆಚ್ಚಗಿದ್ದ ಮನೆಯೊಳಗೆ ನುಗ್ಗಿ ಬಂತುˌ ಹೀಗಾಗಿ ತಾನು ಬಲ ಹಾಕಿ ತಡೆದುˌ ತನಗೆ ಹೊರ ನುಗ್ಗಲು ಬೇಕಾದಷ್ಟು ಎಡೆ ಸಿಕ್ಕೊಡನೆ ಹೊರ ಹಾರಿದ ಅವನು ಬಲ ಬಿಟ್ಟು ಎಳೆದು ಬಾಗಿಲನ್ನು ಹೊರಗಿನಿಂದ ಹಾಕಿಕೊಂಡˌ ಒಳಗಿನಿಂದ ಅವಳು ಚಿಲಕ ಜಡಿದುಕೊಂಡಳು. ಚಳಿಗಾಳಿಯ ಅರ್ಭಟ ಇವತ್ತು ಊಹೆಯನ್ನ ಮೀರಿಸಿದ್ದಾಗಿತ್ತು. ಕ್ಷಣಕ್ಷಣಕ್ಕೂ ಹಿಮದ ಆವರಣದ ಮಟ್ಟ ಇಂಚಿಂಚು ಏರುತ್ತಲೆ ಇತ್ತು. ಮೊದಲಿಗೆ ಇವನು ಇವತ್ತು ಬಗ್ಗಿ ಬಂಡಿಗೆ ಕುದುರೆ ಹೂಡಲು ನಿರ್ಧರಿಸಿದ್ದ. ಕಳೆದ ಸುಗ್ಗಿಯಲ್ಲಿ ಕಂಡಿದ್ದ ಲಾಭದ ಹಣದಲ್ಲಿ ಖರೀದಿಸಿದ ಹೊಸ ಗಾಡಿಯಾಗಿತ್ತು ಈ ಬಗ್ಗಿ. ಬಗ್ಗಿ ಬಂಡಿಗೆ ಚಕ್ರಗಳಿರುವುದಿಲ್ಲ. ಅದರ ಬದಲು ಕಬ್ಬಿಣದ ಪಟ್ಟಿ ಹೊಡೆದ ಪೈನ್ ಹಲಗೆಯನ್ನ ಅಡ್ಡಲಾಗಿ ಅಡಿಯಲ್ಲಿ ಎರಡೂ ಕಡೆ ಅಳವಡಿಸಲಾಗಿರುತ್ತದೆ. ರೈಲು ರಸ್ತೆಯ ಮರದ ಸ್ಲೀಪರಿನಂತಹ ಆ ಚಪ್ಪಟೆ ಹಲಗೆ ಎದುರಿಗೆ ಚೂರು ಅಗಲ ಕಡಿಮೆಯಿದ್ದು ಹಿಂದೆ ಅಗಲವಾಗಿರುತ್ತದೆ. ಹಿಮದ ರಾಶಿಯ ಮೇಲೆ ಚಕ್ರಗಳಿರುವ ಬಂಡಿಗಳು ಪದೆ ಪದೆ ಹೂತು ಹೋಗುವ ಸಂಭವ ಹೆಚ್ಚು. ಅಲ್ಲದೆ ಹಿಮಪಾತ ಏರು ತಗ್ಗಾಗಿ ಸೃಷ್ಟಿಸಿಬಿಡುವ ಸಕ್ಕರೆಯಂತಹ ಹಿಮದ ರಾಶಿ ಅವುಗಳ ಚಕ್ರಗಳನ್ನ ಸರಾಗವಾಗಿ ಚಲಿಸದಂತೆ ಮೈಲಿಗೆ ಮೂರು ಬಾರಿಯಾದರೂ ತಡೆಯುವ ಸಾಧ್ಯತೆಯಿರುತ್ತದೆ. ಹಾಗಾದಲ್ಲಿ ಬಂಡಿ ನಡೆಸುವವರು ಆ ಅಸಾಧ್ಯ ಕೊರೆಯುವ ಚಳಿಯಲ್ಲಿ ಬಂಡಿಯಿಂದ ಕೆಳಗಿಳಿದು ಬಂದು ಚಕ್ರವನ್ನ ಆ ಹಿಮರಾಶಿ ಬಿಡಿಸಿ ಪಾರು ಮಾಡಬೇಕು. ಅಷ್ಟರಲ್ಲಿ ಅಂಗೈ ಮರಗಟ್ಟುವಂತಾಗಿರುತ್ತದೆ. ಕೈಯಲ್ಲಿ ಹಿಡಿವ ಲಗಾಮಿನ ಅನುಭವ ಸಹ ಆಗದಷ್ಟು ಹತ್ತಕ್ಕೆ ಹತ್ತೂ ಬೆರಳುಗಳು ಸೆಟೆದುಕೊಂಡಿರುತ್ತವೆ. 


ಆದರೆ ಬಗ್ಗಿ ಬಂಡಿ ಹಾಗಲ್ಲ ಹಿಮದ ನೆಲದ ಮೇಲೆ ಸರಾಗವಾಗಿ ಜಾರುತ್ತದೆ. ತಳಕ್ಕೆ ಹೊಡೆದ ಮರದ ಪಟ್ಟಿಗಳು ಹೆಚ್ಚು ಶ್ರಮ ಬಯಸದೆ ಸುಲಭವಾಗಿ ಹಿಮದ ರಾಶಿಯ ಮೇಲೆ ಜಾರಿ ಬರುತ್ತದೆ. ಬಂಡಿಗೆ ಕಟ್ಟಿರುವ ಕುದುರೆಗಳಿಗೂ ಸಹ ಅಧಿಕ ಶಕ್ತಿ ವ್ಯಯಿಸದೆ ಅರಾಮವಾಗಿ ಮುಂದೋಡುತ್ತಾ ಭಾರವನ್ನೆಳೆಯಲು ಅನುಕೂಲಕರ. ಚಳಿಗಾಲದಲ್ಲಿ ಯಮಭಾರದ ಪೈನ್ ಹಾಗೂ ಓಕ್ ಧಿಮ್ಮಿಗಳನ್ನೂ ಸಹ ಜನ ಇಂತಹ ಬಗ್ಗಿ ಬಂಡಿಗಳಲ್ಲಿ ಹೇರಿಕೊಂಡೋ ಇಲ್ಲಾ ಬಲವಾಗಿ ಅವನ್ನ ಬಂಡಿಗಳ ಹಿಂದೆ ಕಟ್ಟಿಕೊಂಡೋ ತಮ್ಮ ಕುದುರೆಗಳಿಂದ ಅವನ್ನ ಮೈಲುಗಟ್ಟಲೆ ದೂರ ಎಳೆಸಿಕೊಂಡು ಆ ಮರಮಟ್ಟುಗಳನ್ನ ಕಡಿದಿಟ್ಟ ಕಾಡಿನಿಂದ ಮನೆಯಂಗಳಕ್ಕೆ ತರುತ್ತಾರೆಂದರೆ ಊಹಿಸಿ. 


ಹೀಗಾಗಿ ಸುಲ್ತಾನನಿವತ್ತು ಬಗ್ಗಿಬಂಡಿಗೆ ಬಿಗಿಸಿಕೊಳ್ಳುವವನಿದ್ದ. ಆದರೆ ಕಡೆಯ ಕ್ಷಣದಲ್ಲಿ ಯೋಜನೆ ಬದಲಿಸಿ ಅವನ ಬೆನ್ನೇರಿ ಹೋಗುವುದೆ ಸರಿ ಎಂದು ಇವನು ನಿರ್ಧರಿಸಿದ್ದ. ಮೊದಲನೆಯದಾಗಿ ದೂರ ಪ್ರಯಾಣಗಳಲ್ಲಿ ಸುಲ್ತಾನನಿನ್ನೂ ಪರಿಪೂರ್ಣವಾಗಿ ಪಳಗಿರಲಿಲ್ಲ. ಇಂತಹ ತೀವೃ ಹಿಮಪಾತದ ದಿನಮಾನಗಳಲ್ಲಿ ವಿಪರೀತ ಪರಿಸ್ಥಿತಿ ಎದುರಾದಾಗ ಅದನ್ನ ಸಮಾಧಾನದಿಂದ ಎದುರಿಸುವ ಸಮಯಾವಧಾನ ಅವನಿಗಿನ್ನೂ ಸಿದ್ಧಿಸಿರಲಿಲ್ಲ. ಹಾದಿಯಲ್ಲಿ ಕೊರಕಲಿನ ಮೇಲೆ ಕಾಲಿಟ್ಟು ಹಿಮದ ರಾಶಿಯೆಲ್ಲಾದರೂ ಕುಸಿದರೆ ರಾಜಿ ಅಥವಾ ಮಾದೇವ ಶಾಂತವಾಗಿರುತ್ತಿದ್ದರುˌ ಇವನು ಕೆಳಗಿಳಿದು ಬೆನ್ನಿಗೆ ಕಟ್ಟಿಕೊಂಡಿರುತ್ತಿದ್ದ ಕೈ ಹಾರೆಯಲ್ಲಿ ಅವರ ಕಾಲು ಕುಸಿದ ಕಡೆಯ ಹಿಮ ಮೇಲೆಳೆದು ಅವರಿಗೆ ಮೇಲೇರಲು ತಾನು ಅನುವು ಮಾಡಿ ಕೊಡುವ ತನಕ ತಾಳ್ಮೆಯಿಂದ ಅವರಿಬ್ಬರೂ ಕಾಯುತ್ತಿದ್ದರು. ಅಂತಹ ಅನುಭವ ಜನ್ಯ ನಡತೆಯ ಸೂಕ್ಷ್ಮತೆಯನ್ನ ಈ ಪಡ್ಡೆ ಹೈದನಿಂದ ನಿರೀಕ್ಷಿಸುವಂತೆಯೆ ಇರಲಿಲ್ಲ. ಹೀಗೆ ಹಲವಾರು ಸುದೀರ್ಘ ಪ್ರಯಾಣಗಳನ್ನˌ ಅದೂ ಇಂತಹ ವಿಪರೀತ ಹವೆಯಲ್ಲಿ ಮಾಡಿ ಕಲಿಯಬೇಕಿತ್ತವನು.



**************



"ಚಂದ್ರನಿರದ ಬಾನಿನಲ್ಲಿ ಬೆಳದಿಂಗಳ ಛಾಯೆ ಮಾತ್ರ ಮಾಸಿಲ್ಲˌ 
ಹಿಮಪಾತವಾಗುವ ಇಬ್ಬನಿಯೂ ಹೆದರುವ ಇರುಳಲ್ಲಿ ತಿಂಗಳ ಬೆಳಕು ಇಳೆಯ ಮೀಸಿಲ್ಲ."


ಹಾಗೆ ಮೇಲೆತ್ತಿದ ಮೇಲೆ ಅವರ ಮೂಗಿನ ಹೊಳ್ಳೆಗಳ ಹೊರಾವರಣದಲ್ಲಿ ಹಪ್ಪುಗಟ್ಟಿರುವ ಅವರದ್ದೆ ಉಸಿರನ್ನ ಕಿತ್ತು ಬಿಡಿಸಿ ಸರಾಗವಾಗಿ ಉಸಿರೆಳೆದುಕೊಳ್ಳಲು ಅನುವು ಮಾಡಿಕೊಟ್ಟುˌ ಅವರ ಕುತ್ತಿಗೆ ಕೆರೆದು ಮುಂದೊಗಲು ಚಪ್ಪರಿಸಿ ಅವಕ್ಕೆ ಉತ್ಸಾಹ ತುಂಬಿದರೆ ಸಾಕು ಮುಂದೆಲ್ಲೋ ಮೈಲಿ ದೂರದಲ್ಲಿ ಸಿಗಬಹುದಾದ ಅಂತದ್ದೆ ಮತ್ತೊಂದು ಕೊರಕಲಿನಲ್ಲಿ ಬೀಳುವ ತನಕ ಹುಮ್ಮಸ್ಸಿನಿಂದ ಅವರಿಬ್ಬರೂ ಮುನ್ನುಗ್ಗಿ ಓಡುತ್ತಿದ್ದರು. ಅವನ ಅಪ್ಪ ಅವುಗಳನ್ನ ಪಳಗಿಸಿ ಕೊಟ್ಟ ತರಬೇತಿ ಅಷ್ಟು ನಿಖರವಾಗಿತ್ತು. 


ಆದರೆ ಸುಲ್ತಾನನ ವಿಷಯ ಹಾಗಲ್ಲˌ ಮೊದಲನೆಯದಾಗಿ ಅವನಿನ್ನೂ ಎಳಸು ಪುಂಡˌ ಕೊನೆಯದಾಗಿ ಅವನಪ್ಪನಷ್ಟು ತಾಳ್ಮೆಯ ತರಬೇತುದಾರ ಅವನಾಗಿರಲೂ ಇಲ್ಲ. ಮನೆಯಿಂದ ನೇರ ಕೊಟ್ಟಿಗೆಗೆ ಹೋಗಿ ತಾನು ಕಣ್ಣಿಗೆ ಹಿಮ ಬೀಳದಂತೆ ಮುಂಗಾಪು ತೊಡಿಸಿˌ ಬೆನ್ನಿಗೆ ಜೀನು ಬಿಗಿದಿದ್ದ ಸುಲ್ತಾನನನ್ನ ಅವನ ಗೊಂತಿನಿಂದ ಹಿನ್ನಡೆಸಿ ಹೊರ ತೆಗೆದ. ಸಂಜೆ ಹಾಲು ಕರೆಯಲು ಅಸಾಧ್ಯವಾಗಿದ್ದರಿಂದ ಕರುಗಳನ್ನ ಅಂದು ಕಟ್ಟದೆ ಮನಸಾದಾಗ ಅವುಗಳ ಅಮ್ಮಂದಿರ ಮೊಲೆಯುಣ್ಣಲು ಅನುಕೂಲವಾಗುವಂತೆ ಕುಣಿಕೆ ಸಡಿಲಿಸಿ ಬಿಟ್ಟಿದ್ದ. ಇವನು ಹಟ್ಚಿಗೆ ಬರುವ ಮೊದಲು ಕುಣಿದಾಡಿ ಹಾರಾಡಿ ಕೊಟ್ಟಿಗೆ ತುಂಬಾ ಹುಡುಗಾಟದಿಂದ ತುಂಟಾಟ ಮಾಡಿಕೊಂಡಿದ್ದ ಅವು ಈಗ ಭಾರಿ ಮೈಯ ಸುಲ್ತಾನ ತನ್ನ ಗೊಂತಿನಿಂದ ಗುಟುರು ಹಾಕುತ್ತಾ ಹೊರ ಬರುತ್ತಿದ್ದಂತೆ ಬೆಚ್ಚಿ ಹುಲ್ಲೆಗಳಂತೆ ನಡುಗುತ್ತಾ ಬೆದರಿದ ನೋಟಗಳನ್ನ ಬೀರುತ್ತಾ ಇನ್ನೂ ಆಗಷ್ಟೆ ಉಂಡ ಮೇವನ್ನ ಮೆಲುಕು ಹಾಕುತ್ತಾ ನುರಿಸುತ್ತಾ ನಿಂತಿದ್ದ ತಮ್ಮ ತಮ್ಮ ತಾಯಂದಿರ ಕಾಲಡಿಗಳಲ್ಲಿ ಹೋಗಿ ಅಡಗಿಕೊಂಡವು. ಅಲ್ಲಿಂದಲೆ ಅಡಿಯಿಂದ ಮುಡಿಯವರೆಗೂ ಉಣ್ಣೆ ವಸ್ತ್ರಗಳಿಂದ ಅದರ ಮೇಲೆ ಶಾಲಿನಿಂದ ಆವೃತ್ತನಾಗಿˌ ತಲೆಗೆ ಉಣ್ಣೆಯ ಟೋಪಿ ಕಾಲಿಗೆ ಮಂಡಿವರಗಿನ ಗಂ ಬೂಟುˌ ಅಂಗೈಗೆ ಚರ್ಮದ ಕೈಗಾಪು ಹಾಕಿಕೊಂಡು ಅದರ ಮೇಲೆ ಉಣ್ಣೆಯ ಕೈ ಕವಚ ತೊಟ್ಚುಕೊಂಡ ಇವನುˌ ಜೀನು ಬಿಗಿದುˌ ಅದರ ಬೆನ್ನ ಮೇಲೆ ಚಳಿಗೆ ದಪ್ಪದ ಕಂಬಳಿ ಹೊಚ್ಚಿದ ಸುಲ್ತಾನನನ್ನು ಹೊರಗೆಳದುಕೊಂಡು ಹೋಗುವುದನ್ನೆ ತಬ್ಬಿಬ್ಬಾಗಿ ನೋಡುತ್ತಿದ್ದವು. ಮೇಲೆ ಮಾಡಿಗೆ ತೂಗು ಹಾಕಿರುವ ಬೊಂಬಿಗೆ ತೂಗುಬಿಟ್ಟಿದ್ದ ಲಾಟೀನಿನ ಜ್ವಾಲೆಯನ್ನ ಕುಗ್ಗಿಸಿ ಇವನು ಸುಲ್ತಾನನೊಂದಿಗೆ ಕೊಟ್ಟಿಗೆಯಿಂದ ಹೊರಬಿದ್ದ. 


ಬೆನ್ನಿಗೆ ಬಿಗಿದಿದ್ದ ಚೀಲದಲ್ಲಿ ಅವಳ ಕೈ ತಯಾರಿಕೆಯ ಮೇಣದಬತ್ತಿˌ ಸೋಪುಗಳುˌ ಕುಡಿಯಲು ನೀರು ಹಾಗೂ ಊಟದ ಬುತ್ತಿ ಇತ್ತು. ಹೆಗಲ ಪಕ್ಕ ಕೈ ಹಾರೆಯನ್ನ ಕಟ್ಟಿಕೊಂಡವ ಸುಲ್ತಾನನ ಬೆನ್ನೇರಿ ಅವನ ಕುತ್ತಿಗೆ ಚಪ್ಪರಿಸಿ ಲಗಾಮು ಒಮ್ಮೆ ಎಳೆದು ತಕ್ಷಣ ಸಡಿಲ ಬಿಟ್ಟ. ಕುದುರೆ ಬಿಲ್ಲಿನಿಂದ ಬಿಟ್ಟ ಬಾಣದಂತೆ ಮುಂದೋಡಿತು. ಅವಳು ಕಿಡಕಿಯ ಪಾರದರ್ಶಕ ಗಾಜಿನಿಂದ ಇದನ್ನೆಲ್ಲಾ ನೋಡುತ್ತಲೆ ಇದ್ದಳು. ಹಿಮಪಾತದ ನಡುವೆ ಮಬ್ಬುಮಬ್ಬಾಗಿ ಇವೆಲ್ಲಾ ಅವಳ ಕಣ್ಣಿಗೆ ಬೀಳುತ್ತಿತ್ತು. ಪ್ರಯಾಣಕ್ಕೆ ಜಾಗ್ರತೆಯ ನುಡಿಗಳು ಕೇಳಿಸಲಾರದಷ್ಟು ದೂರದಲ್ಲಿ ಅವನಿದ್ದ. ಕೂಗಿ ಹೇಳಿದರೂ ಸಹ ಈ ಹಿಮಗಾಳಿಯ ಅರ್ಭಟದಲ್ಲಿ ಅದು ಅವನನ್ನ ಮುಟ್ಟುವುದು ಅಷ್ಟರಲ್ಲ ಇತ್ತು. ಅವನು ಅಲ್ಲಿಂದಲೆ ಕೈಬೀಸಿ ಪ್ರಯಾಣ ಆರಂಭಿಸಿದ. ಇವಳು ಇದ್ದಲ್ಲಿಂದಲೆ ಕೈ ಬೀಸುತ್ತಲೆ ಮಾರುತ್ತರಿಸಿ ಅವನ ಶುಭ ಹಾಗೂ ಸುರಕ್ಷಿತ ಪ್ರಯಾಣವನ್ನ ಹಾರೈಸಿದಳು.


ಹೊರಳ ಬೇಕಾದ ಹಾದಿಯಾವುದು ಸೋಮ ಸರೋವರ ಯಾವ ದಿಕ್ಕಿನಲ್ಲಿದೆ ಅನ್ನುವುದನ್ನೂ ಅಂದಾಜು ಮಾಡಲಾಗಷ್ಟು ಬಿರುಸಿನಿಂದ ಹಿಮದ ಮಳೆ ಎಡೆಬಿಡದೆ ಸುರಿಯುತ್ತಲೆ ಇತ್ತು. ಆಗಾಗ ಮೈಮೇಲೆ ಬಿದ್ದು ಅಲ್ಲೆ ಹೆಪ್ಪುಗಟ್ಟಲು ಹವಣಿಸುವ ಹಿಮವನ್ನ ಕೊಡವಲು ಹೆಗಲು ಕುಣಿಸಿ ಪಾರಾಗಬೇಕಾಗಿ ಬರುತ್ತಿತ್ತು. ಜೇಬಿನಲ್ಲಿದ್ದ ದಿಕ್ಸೂಚಿಯೊಂದೆ ಈ ಸಮಯದಲ್ಲಿ ಅವನ ಆಪ್ತ ಮಿತ್ರ. ಮನೆಯಿಂದ ನೇರ ದಕ್ಷಿಣ ದಿಕ್ಕಿನತ್ತ ಎರಡು ಮೈಲಿ ಸಾಗಿದರೆ ಸಾಕು ಸೋಮ ಸರೋವರ ಸಿಗುತ್ತದೆ. ಅದರ ಹೆಪ್ಫುಗಟ್ಟಿದ ನೀರಿನ ಚಪ್ಪಡಿಯ ಮೇಲೆಯೆ ಸಾಗಿ ಹಾಗೆ ಆಚೆ ದಡದಿಂದ ಇನ್ನಷ್ಟು ದಕ್ಷಿಣಕ್ಕೆ ಹನ್ನೆರಡು ಮೈಲಿ ಮುಂದೆ ಸಾಗಿದರೆ ಸಾಕು ದಿಬ್ಬದ ಮೇಲಿಯರುವ ಆ ರೈಲು ರಸ್ತೆ ಕೂಲಿಗಳ ಕ್ಯಾಂಪಿನ ಮನೆ ಗೋಚರಿಸುತ್ತದೆ. ಅದನ್ನ ದಾಟಿ ಕರಾರುವಕ್ಕಾಗಿ ಎರಡು ಮೈಲಿ ದಾಟಿ ಪಶ್ಚಿಮಕ್ಕೆ ತಿರುಗಿದರೆ ಮುಂದಿನ ಹತ್ತು ಮೈಲು ಕಳೆಯುವಷ್ಟರಲ್ಲಿ ಪಟ್ಟಣದ ಮನೆಗಳ ಅಗ್ಗಿಷ್ಟಿಕೆಗಳ ಹೊಗೆ ಕೊಳವೆಗಳಲ್ಲಿ ಬೂದು ಬಣ್ಣದ ಹೊಗೆಯಾಡುವುದು ಕಾಣಿಸಲೆಬೇಕು. ಹಾಗೊಂದು ವೇಳೆ ಅದು ಕಾಣದಿದ್ದರೆ ತನ್ನ ಪ್ರಯಾಣ ಗುರಿ ತಪ್ಪಿ ಇನ್ಯಾವುದೋ ಹೊರಳು ಹಾದಿಯತ್ತ ತಾನು ದಾರಿ ತಪ್ಪಿರುವುದು ಖಾತ್ರಿ. ಇದನ್ನೆ ಯೋಚಿಸುತ್ತಾ ತಾನು ಮಗ್ನನಾಗಿ ಮುಂದೆ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಮುಂಗಾಲು ಮುಗ್ಗರಿಸಿ ಬಿದ್ದ ಸುಲ್ತಾನ ಇವನ ಆಲೋಚನಾ ಲಹರಿಗೆ ಭಂಗ ತಂದ.


ಸಣ್ಣ ಕೊರಕೊಲೊಂದರಲ್ಲಿ ಮೇಲೆ ಮಾತ್ರ ಪರದೆಯಂತೆ ಕಟ್ಟಿಕೊಂಡಿದ್ದ ಹಿಮರಾಶಿಯ ಪರದೆಗೆ ಏಮಾರಿ ಕಾಲಿಟ್ಟ ಪರಿಣಾಮ ಸುಲ್ತಾನನ ಕಾಲು ಜಾರಿ ಆ ಗುಂಡಿಯೊಳಗೆ ಇಳಿದು  ಅದರಲ್ಲಿ ಕುದುರೆ ಸಿಕ್ಕಿ ಹಾಕಿಕೊಂಡಿತ್ತು. ಇಂತವೆಲ್ಲ ಸುಲ್ತಾನನಿಗೆ ಹೊಸತಾಗಿರುವ ಕಾರಣ ಚೂರು ಗಾಬರಿ ಪ್ರಕಟವಾಗಿ ಅವನ ಮುಖದಲ್ಲಿ ಕಾಣುತ್ತಿತ್ತು. ಕುದುರೆ ಇನ್ನಷ್ಟು ಗಾಬರಿಗೊಳ್ಳದಂತೆ ನೆಗೆದು ಕೆಳಗಿಳಿದವನೆ ಅದರ ಕುತ್ತಿಗೆ ತಟ್ಟಿ ಸವರಿ ಧೈರ್ಯ ತುಂಬುತ್ತಾ ತನ್ನ ಕೈಗೊಡಲಿಯಿಂದ ಮೆಲ್ಲ ಮೆಲ್ಲಗೆ ಅವನ ಕಾಲಿನ ಸುತ್ತ ಗುಪ್ಪೆಯಾಗಿದ್ದ ಮಂಜನ್ನ ಸರಿಸಿ  ಗೊರಸಿಗೆ ತಾಗಿ ನೋವಾಗದಂತೆ ಕೆರೆದು ತೆಗೆದು ಹುಮ್ಮಸ್ಸು ತುಂಬುತ್ತಾ ಕುದುರೆಯನ್ನ ಅದರ ಮೂಗುದಾರ ಹಿಡಿದು ಮಾತಾಡಿಸುತ್ತಾ ಮೇಲೆಬ್ಬಿಸಿ ಮುನ್ನಡೆಸಿದ. ಗಾಬರಿ ಕಳೆಯಲಿ  ಅಂತ ಕೂಡಲೆ ಮೇಲೇರದೆ ಲಗಾಮು ಹಿಡಿದು ತಾನೂ ಜೊತೆಜೊತೆಗೆ ಕೊಂಚ ದೂರ ಹೆಜ್ಜೆ ಹಾಕಿದ. ಕುದುರೆ ಅವನ ಚರ್ಯೆಯನ್ನೆ ಅನುಸರಿಸುತ್ತಾ ಮಾತಾಡಿ ಕುತ್ತಿಗೆ ತಟ್ಟಿದಾಗ ಮಾರುತ್ತರ ಕೊಡುತ್ತಿದೆಯೇನೋ ಅನ್ನುವಂತೆ ಮೆಲುವಾಗಿ ಕೆನೆದು ಇವನ ಜೊತೆಗೆ ನಡೆದು ಬಂತು.


ಅದೂ ಅಲ್ಲದೆ ಸರೋವರವನ್ನೂ ದಾಟಿ ಅದಾಗಲೆ ಮೂರು ಮೈಲು ದೂರ ಒಂದೆ ಭಂಗಿಯಲ್ಲಿ ಜೀನಿನ ಮೇಲೆ ಕೂತು ಅವನಿಗೂ ಜೋಮು ಹಿಡಿದಂತಾಗಿತ್ತುˌ ಸ್ವಲ್ಪವಾದರೂ ಕೈ ಕಾಲನ್ನ ಆಡಿಸಿ ರಕ್ತ ಸಂಚಾರ ನರ ನಾಡಿಗಳಲ್ಲಿ ಆಡುವಂತೆ ಮಾಡದಿದ್ದರೆ ಸ್ವತಃ ತಾನೆ ಮರಗಟ್ಟಿ ಮಂಜಿನ ಕಲ್ಲಾಗಿ ಹೋದೇನು ಅಂತ ಅವನಿಗನಿಸಿತು. ಹೀಗಾಗಿ ಸ್ವಲ್ಪ ದೂರ ನಡೆದವ ಇನ್ನೇನು ಮತ್ತೆ ಕುದುರೆಯ ಬೆನ್ನ ಮೇಲೇರಲು ಉಧ್ಯುಕ್ತನಾದವನನ್ನ ಕಣ್ಣಿಗೆ ಅಯಾಚಿತವಾಗಿ ಬಿದ್ದ ದೃಷ್ಯ ಕ್ಷಣಕಾಲ ತಡೆಯಿತು. ಒಂದು ದಷ್ಟಪುಟ್ಟ ಸಾರಂಗ ಮೇಯಲು ಹುಲ್ಲಿನ ಪೊದರಿಗೆ ಬಾಯಿ ಹಾಕಿರುವ ಭಂಗಿಯಲ್ಲಿಯೆ ಮರಗಟ್ಟಿದಂತೆ ನಿಂತಿತ್ತು. ವಾಸ್ತವವಾಗಿ ತುಂಬು ಗರ್ಭಿಣಿಯಾಗಿದ್ದ ಆ ಹಿಮಸಾರಂಗ ಎಲ್ಲೆಲ್ಲೂ ಹಿಮದ ಹೊದಿಕೆಯೆ ಹಬ್ಬಿರುವ ಈ ವಿಪರೀತ ಹಿಮಪಾತದ ಕಾಲದಲ್ಲಿ ತನ್ನ ಗುಂಪಿನಿಂದ ಬೇರ್ಪಟ್ಟು ಹಸಿವಿನಿಂದ ಕೆಂಗೆಟ್ಟಿರಬೇಕು. ಹೀಗಾಗಿ ಮರುಭೂಮಿಯ ಒಯಸ್ಸಿಸ್ಸಿನಂತೆ ಹಿಮರಾಶಿಯ ನಡುವೆ ತುಸು ಹಸಿರು ಕಂಡ ಈ ಪೊದೆಗೆ ಬಾಯಿ ಹಾಕಿದೆ. ಆದರೆ ಅದರ ದುರದೃಷ್ಟಕ್ಕೆ ಏದುಸಿರು ಬಿಡುತ್ತಾ ಅವಸರಕ್ಕೆ ದಕ್ಕಿದ ನಾಲ್ಕೆಲೆ ಎಳೆದು ತಿನ್ನಲು ಹವಣಿಸುತ್ತಿದ್ದಾಗ ಅದರದೆ ಏದುರಿನ ನೀರಪಸೆ ಗಟ್ಟಿ ಹೆಪ್ಪಾಗಿ ಅದಕ್ಕೆ ಅರಿವಿಲ್ಲದಂತೆ ನೆಲಕ್ಕೂ ಮುಖಕ್ಕೂ ಗೋಂದು ಹಚ್ಚಿದಂತೆ ಮೆಲ್ಲ ಮೆಲ್ಲನೆ ಸುರಿಯತ್ತಿದ್ದ ಹಿಮಪಾತಕ್ಕೆ ಅದರ ಮುಖದ ಬಾಯಿಯ ಭಾಗ ನೆಲಕ್ಕೆ ಅಂಟಿಕೊಂಡಿತ್ತು.



https://youtu.be/S_agP6XyjKU



https://youtu.be/H2i4kdnIBng



https://youtu.be/pyXj7XItMNk


https://youtu.be/npcV206glS0

24 January 2022

ಅವನ ಕಥೆ ಅವಳ ಜೊತೆ......೨

ಅವನ ಕಥೆ ಅವಳ ಜೊತೆ.....೨

ಅವಳ ಕಥೆ ಅವನ ಜೊತೆ



ಚಳಿಗಾಲದಲ್ಲಿ ವಾಡಿಕೆಯಂತೆ ವಾರಕ್ಕೊಂದೆ ಸ್ನಾನ. ವಾರಕ್ಕೊಮ್ಮೆ ಪಟ್ಟಣದ ಸಮೀಪದ ಮಠದಲ್ಲಿನ ಸಾಮೂಹಿಕ ಬೆಳಗಿನ ಪೂಜೆಗೆ ತೀವೃ ಹಿಮಪಾತವಾಗದ ದಿನಗಳಲ್ಲಿ ಹೋಗೋದು ಪದ್ಧತಿ. ಹೀಗಾಗಿ ಶನಿವಾರ ಸಂಜೆ ಸ್ನಾನದ ಬಾನಿಯನ್ನ ಹಜಾರದಲ್ಲಿ ನೀರು ಹರಿದು ಹೋಗಲು ಹೊರ ಕೊಳವೆ ಬಿಟ್ಟಲ್ಲಿ ಇಟ್ಟುˌ ಹೊರ ಸುರಿದ ಹಿಮದ ರಾಶಿಯಲ್ಲಿ ಒಂದಷ್ಟನ್ನು ಬಕೇಟುಗಳಲ್ಲಿ ತುಂಬಿ ತಂದು ಒಲೆಯ ಉರಿಯ ಮೇಲಿಟ್ಟಿರುವ ಲೋಹದ ಕಡಾಯಿಯಲ್ಲಿ ಕುದಿಸಿ ಹದ ಮಾಡುತ್ತಾನೆ. ಅದನ್ನೆ ಸ್ನಾನದ ಬಾನಿಗೆ ತುಂಬಿ ಬಿಸಿ ಹದ ಮಾಡಲು ಸಮೀಪದಲ್ಲೆ ತಣ್ಣನೆ ನೀರಿನ ಬಕೇಟನ್ನೂ ನೀರು ತೋಡಿ ಮೀಯಲು ಕೈ ಪಾತ್ರೆಯನ್ನೂ ಸಾಬೂನು ತಿಕ್ಕಲು ಕತ್ತದ ಸಹಿತ  ಪಕ್ಕದಲ್ಲೊಂದು ಸ್ಟೂಲಿನ ಮೇಲಿಡುತ್ತಾನೆ. 


ಅವಳು ಮೊದಲಿಗೆ ಒಂದೂವರೆ ವರ್ಷ ತುಂಬಿರುವ ರಾಜನಿಗೆ ಆ ಹಬೆಯಾಡುವ ನೀರಲ್ಲಿ ಬಾನಿಗಿಳಿಸಿ ತಿಕ್ಕಿ ತಿಕ್ಕಿ ತಲೆಯ ಮುಡಿಯಿಂದ ಕಾಲಿನ ಉಗುರ ತುದಿ ತನಕ ಸಾಬೂನು ಹಚ್ಚಿ ಸ್ವಚ್ಛವಾಗಿ ಮೀಯಿಸುತ್ತಾಳೆ. ಅವನು ಕಣ್ಣಿಗೆ ಸೋಪು ಹೋಗಿ ಕಿಟಾರನೆ ಕೂಗಿ ಗಲಾಟೆ ಮಾಡಿದಾಗಲೆಲ್ಲ ರಮಿಸುತ್ತಾ ಆ ಊರಿನ ಆಡುಗೂಲಜ್ಜಿಯ ಕಥೆ ಹೇಳಿ ಉಪಾಯವಾಗಿ ಅವನ ಗಮನ ಅತ್ತ ತಿರುಗಿಸಿ ಕಾರ್ಯ ಸಾಧಿಸಿಕೊಳ್ಳುತ್ತಾಳೆ. ಸ್ನಾನ ಮಾಡಿಸಿದ್ದೆ ಶುಭ್ರವಾದ ಒಣಗಿದ ಬಟ್ಟೆಯ ತುಂಡಿನಿಂದ ಮಗುವನ್ನ ಒರೆಸಿ ಧೂಪಕ್ಕೆ ಹಿಡಿದು ಕಾಡಿಗೆ ಹಚ್ಚಿ ಬೆಚ್ಚನೆ ಬಟ್ಟೆ ತೊಡಿಸಿ ಉಣ್ಣೆಯ ಶಾಲಿನಲ್ಲಿ ಸುತ್ತಿ ಮೊಲೆಯುಣಿಸಿ ರಮಿಸುವ ವೇಳೆಗೆಲ್ಲ ಮಗು ರಾಜ ನಿಧಾನವಾಗಿ ಮೊದಲು ಮಂಪರಿಗೆ ಅನಂತರ ನಿದ್ಧೆಗೆ ಜಾರಿರುತ್ತದೆ. 

ಇತ್ತ ಮೇಲೆ ಉಪ್ಪರಿಗೆಯಲ್ಲಿ ಇಷ್ಟಾಗುವಷ್ಟರಲ್ಲಿ ಬಾನಿಯ ಆ ಕೊಳೆ ನೀರನ್ನ ಮೋರಿಗೆಸೆದು ಹೊಸತಾಗಿ ಕುದಿನೀರು ಹಾಕಿ ತಣ್ಣನೆ ನೀರು ಬೆರೆಸಿ ಹದ ಮಾಡಿ ತಾನೂ ಅದರಲ್ಲಿಳಿದು ಚನ್ನಾಗಿ ಸೋಪು ಹಚ್ಚಿಕೊಂಡು ಸುಗಂಧಿತ ಸೊಗದೆ ಬೇರಿನ ಕತ್ತದಲ್ಲಿ ಮೈ ತಿಕ್ಕಿಕೊಂಡು ಸ್ನಾನ  ಮುಗಿಸುವ ಇವನು ಮೈ ಒರೆಸಿಕೊಂಡಾದ ಮೇಲೆ ಮತ್ತೆ ಯಥಾವತ್ ಆ ನೀರನ್ನೂ ಮೋರಿಗೆ ಚೆಲ್ಲಿ ಅವಳ ಸ್ನಾನಕ್ಕೆ ಎಲ್ಲಾ ಅಣಿ ಮಾಡಿಟ್ಟು ಮೇಲೆ ಹೋಗಿ ಈ ವಾರದ ಮನೆಯುಡುಪು ಬೆಚ್ಚನೆ ಬಟ್ಟೆ ಧರಿಸಿ ತಲೆಗೆ ಅಲೀವ್ ಎಣ್ಣೆಯಲ್ಲಿ ಕರಗಿಸಿದ ಹಿಮಕರಡಿ ಕೊಬ್ಬನ್ನ ತಿಕ್ಕಿಕೊಂಡು ಬೈತಲೆ ತೆಗೆದು ಬಾಚಿಕೊಂಡುˌ ನಾಳೆ ಮಠಕ್ಕೆ ಹೋಗುವಾಗ ಹಾಕಬೇಕಾದ ತಮ್ಮ ಮೂವರ ಚರ್ಮದ ಬೂಟುಗಳ ಹೊಳಪೇರಿಸಲು ಜಿಂಕೆ ಛರ್ಬಿಗೆ ಕರಿ ಮಸಿ ಬೆರಸಿ ತಾನೆ ತಯಾರಿಸಿಟ್ಟಿರೋ ಪಾಲೀಷನ್ನ ಹಚ್ಚಲು ಆರಂಭಿಸುತ್ತಾನೆ. 


ಅವನ ಗಮನ ಅತ್ತ ಹರಿಯುವ ಹೊತ್ತಿಗೆ ಇವಳು ಸ್ನಾನದ ಮರಿಗೆಗೆ ಇಳಿದಿರುತ್ತಾಳೆ. ಥತ್ ಈ ಹೆಂಗಸರ ಗೊಳೆ ಇದು! ಅಂತ ಕನಿಷ್ಠ ಒಂದು ತಾಸಾದರೂ ಕೂದಲು ತೊಳೆದು  ಅನಂತರವಷ್ಟೆ ಮೈ ತೊಳೆದುಕೊಳ್ಳುವ ಶಾಸ್ತ್ರಕ್ಕಿಳಿಯುವ ಅವಳನ್ನ ನೋಡಿ ಅಣಗಿಸುತ್ತಾನೆ. ಹದಿನೈದಿಪ್ಪತ್ತು ನಿಮಿಷಕ್ಕೆಲ್ಲ ಸ್ನಾನ ಮುಗಿಸಿ ಮೇಲೆದ್ದು ಬರೋದು ಕೊಟ್ಟಿಗೆಯಲ್ಲಿರೋ ಮಹಿಷಿಯ ಗಂಡ ಪಕ್ಕದ ಲೀಲಕ್ಕನ ತೋಟದ ಮನೆಯ ಕೊಟ್ಟಿಗೆಯಲ್ಲಿರೋ ಕೋಣ ಕರಿಯನಂತವರು ಮಾತ್ರ ಅಂತ ಅವಳೂ ಸೇರಿಗೆ ಸವ್ವಾ ಸೇರಿನಂತೆ ಮಾರುತ್ತರಿಸುತ್ತಾಳೆ. ಅಷ್ಟು ಬೇಗ ನೀರಲ್ಲಿಳಿದು ಕೆಸರಲ್ಲಿ ಕೋಣ ಹೊಡಕಾಡಿದಂತೆ ಮೀಯೋದೂ ಒಂದು ಸ್ನಾನವೆ? ವಾರದ ಕೊಳೆ ದೇಹದಿಂದ ಅಷ್ಟು ಬೇಗ ಬಿಟ್ಟು ತೊಲಗಲು ಸಾಧ್ಯವೆ? ಅನ್ನುವ ಅವಳ ಮೊದಲಿಕೆಗೆ ಇವನ ಮುಖದ ಫ್ರೇಮಿನ ತುಂಬ ದಂತಪಂಕ್ತಿಗಳು ಕಿರಿಯುತ್ತವೆ.


ಅವಳ ಸ್ನಾನ ಮುಗಿದ ಮೇಲೆ ಸ್ನಾನದ ಮರಿಗೆ ಉಳಿದ ನೀರಲ್ಲಿ ಸ್ವಚ್ಛಗೊಂಡು ಸೂರಿಗೆ ನೇತು ಹಾಕಿರುವ ಗೊಂತಿಗೆ ನೇತು ಬೀಳುತ್ತದೆ. ಅದನ್ನ ಮುಗಿಸಿದವನೆ ಆವರಣ ಸ್ವಚ್ಛಗೊಳಿಸಿ ಅಲ್ಲಿ ಗಂಧದ ಕಡ್ಡಿ ಹಚ್ಚಿಡುವಷ್ಟರಲ್ಲಿ ಅವಳಿಂದ ಊಟದ ಕರೆ ಬರುತ್ತದೆ. ವಾಸ್ತವದಲ್ಲಿ ಅವಳು ಸ್ನಾನಕ್ಕೂ ಮೊದಲೆ ಅಂದಿನ ಅಡುಗೆ ಅಣಿ ಮಾಡಿ ಒಲೆಯ ಮೇಲೆ ಬೇಯಲಿಟ್ಟಾಗಿರುತ್ತದೆ. ಮಿಂದು ಬಂದವಳು ಉಡುಪು ತೊಟ್ಟು ಅದಕ್ಕೆ ಒಗ್ಗರಣೆ ಹಾಕಿ ಊಟದ ಮೇಜನ್ನ ಸಜ್ಜುಗೊಳಿಸುವುದು ಮಾತ್ರ ಬಾಕಿ ಉಳಿದಿರುತ್ತದೆ. ಅಡುಗೆ ವಿಚಾರದಲ್ಲಿ ಅವಳು ಕಡು ಜಾಣೆ. ಖಾಲಿ ಪಾತ್ರೆ ಬರಿ ನೀರಿದ್ದರೂ ಸಾಕು ಸ್ವಾದಿಷ್ಟ ಖಾದ್ಯಗಳನ್ನ ಕ್ಷಣಮಾತ್ರದಲ್ಲಿ ತಯ್ಯಾರು ಮಾಡಿ ಬಡಿಸಬಲ್ಲ ಚಾಣಾಕ್ಷೆ. ರುಚಿಯಲ್ಲೂ ಸಹ ಉಪ್ಪು ಹುಳಿ ಖಾರಗಳ ಹದವಾದ ಪಾಕ ಪ್ರಾವಿಣ್ಯತೆ ಅವಳದು. ಈ ವಿಷಯದಲ್ಲಿ ಅವನು ಅದೃಷ್ಟವಂತ. 


ಸ್ವತಃ ಇವನೆ ಹುದುಗು ಬರಿಸಿ ಭಟ್ಟಿ ಇಳಿಸಿದ್ದ ವೈನಿನ ಜೊತೆಗೆ ಹುರಿದ ಜಿಂಕೆ ಮಾಂಸˌ ಬೆಂದ ಬಾತಿನ ಮೊಟ್ಟೆˌ ಮನೆಯ ಉಗ್ಗಷ್ಟಿಕೆಯಲ್ಲಿ ತಯಾರಾದ ತಾಜಾ ಕಂದು ರೊಟ್ಟಿˌ ನಂಚಿಕೊಳ್ಳಲು ಲ್ಯೂಟಸ್ ಎಲೆ ಕೊಚ್ಚಿ ಸೇರಿಸಿದ ಬೀಫ್ ಟೀˌ ಕುರಿ ಮಾಂಸದ ಹುರುಕಲುˌ ಬೇಯಿಸಿ ಒಗ್ಗರಿಸಿದ ಆಲೂಗೆಡ್ಡೆˌ ಜೊತೆಗೆ ಭಟ್ಟಿ ಇಳಿಸಿದ ಕಟು ಸ್ವಾದದ ದ್ರಾಕ್ಷಾರಸ! "ಬೆಚ್ಚನೆ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿತು ನಡಿವ ಸತಿಯಿರಲು" ಅವನು "ಸ್ವರ್ಗಕ್ಕೆ ಕಿಚ್ಚು ಹಚ್ಚುವ ಸರ್ವಜ್ಞ"ನಾಗಿ ಅವಳೊಂದಿಗೆ ಮೊದಲಿಗೆ ರಾತ್ರಿಯ ಊಟ ಅದು ಮುಗಿದ ಮೇಲೆ ಮಂಚ ಎರಡನ್ನೂ ಸಂತೃಪ್ತನಾಗಿ ಹಂಚಿಕೊಳ್ಳುತ್ತಾನೆ. ಇದು ವಾರದ ಸ್ನಾನದ ದಿನದ ಏಕತಾನತೆ.


ಆದರೆ ಈ ಸಲ ಬಹುಶಃ ಈ ಪಾಟಿ ಹಿಮದ ಹಾವಳಿಯಿರುವಾಗ ಮಠಕ್ಕೆ ವಾರದ ಪೂಜೆಗೆ ಹೋಗಿ ಬರೋದು ಅಸಾಧ್ಯˌ ಅಲ್ಲದೆ ಪಕ್ಕದ ತೋಟದ ಮನೆಯ ತಿಮ್ಮಯ್ಯನ ಜೊತೆಗೆ ಸೇರಿ ಮೊನ್ನೆಯ ಕದ್ದಿಂಗಳಲ್ಲಿ ತೋಟದಿಂದ ಹತ್ತು ಮೈಲು ದೂರದಲ್ಲಿ ಸಾಗುತ್ತಿದ್ದ ಚುಕ್ಕಿ ಜಿಂಕೆಗಳ ಶಿಕಾರಿ ಮಾಡಿ ಇಬ್ಬರೂ ನಾಡ ಬಂದೂಕಿನಿಂದ ಗುರಿಯಿಟ್ಟು ಸುಮಾರು ಹನ್ನೆರಡು ಜಿಂಕೆಗಳನ್ನ ಹೊಡೆದುರುಳಿಸಲು ಸಫಲರಾಗಿದ್ದರು. ಅದರಲ್ಲಿ ಸರಿಪಾಲು ಸಿಕ್ಕಿದ್ದಷ್ಟೆ ಅಲ್ಲದೆ ದೊಡ್ಡ ಹಿಡುವಳಿದಾರ ತಿಮ್ಮಯ್ಯ ತನ್ನ ಪಾಲಿನ ಬಲಿಗಳ ಚರ್ಮ ಹಾಗೂ ಕೊಂಬುಗಳನ್ನೂ ಇವನಿಗೆ ಬಿಟ್ಟು ಕೊಟ್ಟಿದ್ದ. 


ಮರುದಿನ ಅಂದರೆ ನೆನ್ನೆ ಅದನ್ನೆಲ್ಲ ಸುಲಿದು ಉಪ್ಪು ಬಳಿದು ಹದ ಹಾಕುವಷ್ಟರಲ್ಲೆ ಕತ್ತಲಾವರಿಸಿತ್ತು. ಅಲ್ಲದೆ ನಾಳೆ ಬೇರೆ ಪಟ್ಟಣಕ್ಕೆ ಹೋಗಬೇಕು ಹೀಗಾಗಿ ಶನಿವಾರದ ನಿಯಮ ಮುರಿದು ಬುಧವಾರವೆ ವಾರದ ಸ್ನಾನಕ್ಕೆ ಅವನು ಎಲ್ಲಾ ಅಣಿಗೊಳಿಸಿಕೊಂಡು ನೆನ್ನೆ ಸಂಜೆಯೆ ಮಿಂದು ತಲೆಗೆ ಕರಡಿ ಕೊಬ್ದಿನ ಎಣ್ಣೆ ಹಚ್ಚಿಕೊಂಡು ಶುಭ್ರನಾಗಿದ್ದ. ಬೂಟು ಸಹ ಹೊಳೆಹೊಳೆಯುತ್ತಾ ಪಾಲೀಶು ಬಳಿಸಿಕೊಂಡು ಬೆಳಗಿನ ಪಟ್ಟಣದ ಪ್ರಯಾಣಕ್ಕೆ ತಯಾರಾಗಿತ್ತು.


************


ಮುಸ್ಸಂಜೆಯಲ್ಲಿ ಕವಿದಿದ್ದ ಮೌನ ಬಾನ ಭಿತ್ತಿಯಲಿ ಕಾಲನ ಲೇಖನಿ ಮತ್ತಿನ್ನೇನನ್ನೋ ಬರೆದ ಹಾಗೆಯೆ ಉಳಿದು ಹೋಗಿತ್ತುˌ ಕತ್ತಲ ಕಾಡಿಗೆ ತೀಡಿದ ಇಳೆಯ ಕಣ್ಗಳಲ್ಲಿ ಬೆಳದಿಂಗಳ ನಿರೀಕ್ಷೆಯ ಹೊಳಪು ಇನ್ನೂ ಮೂಡಿಯೆ ಇತ್ತು. ಆದರೆ ಎಡಬಿಡದ ಈ ಹಿಮದ ಮಳೆ ಜೊತೆಗೆ ಭೋರೆಂದು ಎದೆ ನಡುಗಿಸುವ ಹಾಗೆ ಬೀಸುತ್ತಿರುವ ತೆಂಕಣದ ಸುಳಿಗಾಳಿ ವಾತಾವರಣಕ್ಕೊಂದು ಭೀಭತ್ಸತೆಯ ಚಹರೆಪಟ್ಟಿ ಕಲ್ಪಿಸಿಕೊಟ್ಟ ಹಾಗಾಗಿತ್ತು. ಪೇಟೆಗೆ ಹೋಗಿ ಮಾರಿ ಬರುವ ಸಾಮಾನುಗಳಂತೆ ಪೇಟೆಯ ಅಂಗಡಿಗಳಿಂದ ತರಬೇಕಿದ್ದ ಅವಳ ಅಗತ್ಯದ ಕೆಲವು ಸಾಮಾನುಗಳ ಪಟ್ಟಿಯೂ ಅವನ ಕಿಸೆಯೊಳಗಿತ್ತು. ಉಪಹಾರ ಮುಗಿಸಿದವನೆ ಪೇಟೆಯ ದಿಕ್ಕಿಗೆ ಹೊರಡಲು ಉಧ್ಯುಕ್ತನಾದ. 


ಚಳಿಗಾಳಿಯ ಭೀಕರ ಹುಯ್ದಾಟದ ಸದ್ದಿಗೆ ಮಗು ರಾಜ ಎಚ್ಚರಗೊಂಡ. ಮಗ್ಗುಲಿನಲ್ಲಿ ತನ್ನ ಅಮ್ಮ ಇಲ್ಲದನ್ನ ಕಂಡೊಡನೆ ಕಂಗಾಲಾಗಿ ಜೋರಾಗಿ ಅಳ ತೊಡಗಿದ. ಇವಳು ಮಗನ ರಾಗಾಲಾಪ ಕೇಳಿ ಉಪ್ಪರಿಗೆಯ ಮಲಗುವ ಮನೆಗೆ ಹೋಗಿ ಮಗುವನ್ನ ಎತ್ತಿಕೊಂಡು ಬಂದಳು. ಇವ ಮರದ ಮರಿಗೆ ಇಳಿಸಿ ಹಿಮ ಕರಗಿಸಿ ಬಿಸಿನೀರಾಗಿಸಿದ್ದ ಕಡಾಯಿ ಬಳಿ ಇರಿಸಿ ಅವಳಿಗೆ ಸಹಕರಿಸಿದ. ಬಟ್ಟೆಯಲ್ಲಿ ಬೆಚ್ಚಗೆ ಸುತ್ತಿಡುವ ಮುನ್ನ ಅವನ ಶೌಚಕಾರ್ಯ ಮಾಡಿಸಿ ತೊಳೆದು ಶುಭ್ರವಾಗಿ ಒರೆಸಿಡಬೇಕಿತ್ತು. ಸಾಲದ್ದಕ್ಕೆ ಮಗು ಹಾಸಿಗೆಯಲ್ಲೆ ಹಲವು ಬಾರಿ ಉಚ್ಛೆ ಹೊಯ್ದು ಅವಾಂತರವಾಗಿತ್ತು. ರಬ್ಬರಿನ ಶೀಟು ಮೇಲೆ ಹಾಸಿರದಿರುತಿದ್ರೆ ಮಾತ್ರ ಮಗುವಿನ ಪುಟ್ಟ ಹಾಸಿಗೆ ಹೇಸಿಗೆಯಾಗಿ ಯಾವುದೋ ಕಾಲವಾಗಿರುತ್ತಿತ್ತು.

ಇನ್ನು ಇವನನ್ನ ಬೀಳ್ಕೊಟ್ಚ ಮೇಲೆ ಅವಳ ದಿನಚರಿ ಆರಂಭವಾಗುತ್ತಿತ್ತು. ಮಗುವಿಗೆ ಮತ್ತೆ ಮೊಲೆಯುಣಿಸಿ ಏನನ್ನಾದರೂ ತಿನ್ನಿಸಿ ತಾನೂ ಒಂದಷ್ಟು ತಿಂದು ಮುಸುರೆ ಪಾತ್ರೆಗಳನ್ನ ಮರಿಗೆಯಲ್ಲಿ ತೊಳೆದು ಬಿಸಿ ನೀರಾಗಿಸಲು ಹಿಮ ಹೊತ್ತು ತಂದು ಸುರಿದು ಅನಂತರ ಅವಳು ಮನೆವಾರ್ತೆಗೆ ಗಮನ ಹರಿಸಬೇಕಾಗುತ್ತಿತ್ತು. ಮೊದಲಿಗೆ ಕೊಟ್ಟಿಗೆಗೆ ಹೋಗಿ ಕೋಳಿಗಳಿಗೆ ಮೇವು ಹಾಕಬೇಕು ನೀರು ಇಡಬೇಕು. ಅವುಗಳದ್ದಾದ ಮೇಲೆ ಬಾತುಗಳ ಮುತುವರ್ಜಿ ವಹಿಸಬೇಕು. ಅವುಗಳದ್ದಾದ ಮೇಲೆ ಸೊಪ್ಪು ಕುರಿಗಳ ರೊಪ್ಪ ಗುಡಿಸಿ ಅವಕ್ಕೆ ಹುಲ್ಲು ನೀರು ಹಿಂಡಿ ಬೂಸ ಕಾಣಿಸಬೇಕು. ಅವುಗಳ ದೇಖಾರೇಖಿ ಮುಗಿಸಿದ ಕುಕ್ಕೂಡಲೆ ಹಂದಿಗಳ ಹಟ್ಟಿಗೆ ಹೋಗಿ ಹೊಲಸು ಗುಡಿಸಿ ತೆಗೆದು ಮೇವು ನೀರು ಇಡಬೇಕು. ಇಷ್ಟಾಗುವಾಗ ಮಧ್ಯಾಹ್ನವಾಗಿರುತ್ತದೆ.

ಅನಂತರ ಮನೆಯ ಅಗ್ಗಿಷ್ಟಿಕೆ ದೊಡ್ಡದಾಗಿಸಿ ಅದರ ಎದುರಿನ ಅರಾಮ ಕುರ್ಚಿಯಲ್ಲಿ ಮಗುವನ್ನ ತೊಡೆಯ ಮೇಲೆ ತೂಗಿಸುತ್ತಾ ಕೂತು ಮಲಗಿಸುತ್ತಾಳೆ. ಆಮೇಲೆ ತಾನೇನಾದರೂ ತುಸು ತಿಂದು ಅದೆ ಕುರ್ಚಿಯ ಮೇಲೆ ಕೂತು ಅಗ್ಗಿಷ್ಟಿಯ ಉರಿಯ ಬೆಳಕಲ್ಲಿ ಕಳೆದ ಸಾರಿ ಅವನು ಪೇಟೆಯಿಂದ ಮರಳಿ ಬರುವಾಗ ತಂದಿದ್ದ ರಾಜಧಾನಿಯ ವೃತ್ತ ಪತ್ರಿಕೆಗಳ ಪುಟ್ಟ ಕಟ್ಟನ್ನ ಬಿಚ್ಚಿ ಒಂದೊಂದಾಗಿ ಓದಿ ಪ್ರಪಂಚದ ಆಗುಹೋಗುಗಳನ್ನ ಅರಿತುಕೊಳ್ಳಲು ಪ್ರಯತ್ನಿಸುತ್ತಾಳೆ. ನಗರದಲ್ಲಿ ಬಂದಿರುವ ಹೊಸ ಫ್ಯಾಷನ್ನಿನ ತುಣುಕು ಅದರಲ್ಲಿ ಅವಳಿಗೆ ಓದಲು ಸಿಗುತ್ತದೆ. ಅವಳೇನೂ ಅವಿದ್ಯಾವಂತೆಯಲ್ಲ. ಇವನನ್ನ ಭೇಟಿಯಾಗುವ ಮುನ್ನ ಪಟ್ಟಣದ ಮಗ್ಗುಲಿನ ಅನಾಥಾಲಯದಲ್ಲಿ ಮೂರನೆ ಇಯತ್ತೆಯವರೆಗೂ ಓದಿದ್ದಾಳೆ. 


ಅವಳ ಏಕೈಕ ಪೋಷಕನಾಗಿದ್ದ ಸಹೋದರ ಮಾವ ಅಪ್ಪ ಅಮ್ಮನಿಲ್ಲದ ಕೂಸನ್ನ ಅನಾಥಾಲಯಕ್ಕೆ ಸೇರಿಸಿದ್ದ. ಅಲ್ಲಿ ಅವಳು ತಕ್ಕಮಟ್ಟಿಗೆ ಓದು ಬರಹˌ ಕಸೂತಿ ಕ್ರೋಷ ಹೊಲಿಗೆ ಹಾಡು ಹಸೆ ಅಡುಗೆ ಮುಂತಾದ ಕಲೆಗಳನ್ನ ಶಕ್ತ್ಯಾನುಸಾರ ಕಲಿತಿದ್ದಳು. ಕಾಲಿನಲ್ಲಿ ಪೆಡಲನ್ನ ಒತ್ತಿ ಪಿಯಾನೋ ನುಡಿಸಲು ಸಹ ಅವಳು ಕಲಿತಿದ್ದಳು ಅಂದರೆ ನೋಡಿ! ಇವನ ಪರಿಚಯವಾಗಿˌ ಪರಿಚಯ ಪ್ರೇಮಕ್ಕೆ ತಿರುಗಿ ಮದುವೆ ಸಂಸಾರ ಅಂತಾಗದಿದ್ದರೆ ಬಹುಶಃ ಮುಂದೆಯೂ ಇನ್ನಷ್ಟು ಓದಿ ಶೂಶ್ರುಷಕಿ ಅಥವಾ ಶಿಕ್ಷಕಿಯಾಗುವ ಕನಸನ್ನೂ ಅವಳು ಕಾಣುತ್ತಿದ್ದ ಕಾಲ ಒಂದಿತ್ತು.


ಆದರೆ ಕಾಲ ಸರಿದ ಹಾಗೆ ಒದಗಿ ಬಂದ ಅವಕಾಶ ಹಾಗೂ ಅನುಕೂಲತೆಗಳಿಗೆ ಅನುಸಾರವಾಗಿ ಬದುಕಿನ ಯೋಜನೆಗಳು ಬದಲಾಗುತ್ತಾ ಬಂದವು. ಇದೀಗ ಇಲ್ಲಿಗೆ ಬಂದು ಮುಟ್ಟಿದೆ. ಹಾಗೆ ನೋಡಿದರೆ ಇವಳಿಗಿಂತ ಕಡಿಮೆ ಶಾಲೆ ಕಲೆತವನವನು. ಪೂರ್ವದ ಊರಲ್ಲಿ ದೂರದ ವಲಸಿಗರ ನಾಡಿನಿಂದ ಹಡಗು ಹಿಡಿದು ಬಂದು ಇಳಿದವರ ಮೂರನೆ ತಲೆಮಾರು ಇವನದು. ಅಪ್ಪನಿಗೆ ಅಜ್ಜನಿಂದ ಬಂದಿದ್ದ ಬಳುವಳಿಯಲ್ಲಿ ಇವನಪ್ಪ ಸರಕಾರದ ಜೊತೆ ಒಪ್ಪಂದದಡಿ ನಾನೂರೆಕರೆ ಬೇಸಾಯಕ್ಕೆ ಗುತ್ತಿಗೆ ಮಾಡಿಕೊಂಡು ಕಡಲ ತಡಿಗೆ ಸಮೀಪ ಅನ್ನಿಸುವಷ್ಟು ದೂರದಲ್ಲಿದ್ದ ರಾಜಧಾನಿಯಿಂದ ಪಶ್ಚಿಮದ ದಿಕ್ಕಿಗೆ ಇನ್ನೂರರವತ್ತು ಮೈಲಿಯಾಚೆಯ ಕಾಡಿನಂಚಿನಲ್ಲೆ ಶಾಶ್ವತವಾಗಿ ನೆಲೆಸಿಬಿಟ್ಟಿದ್ದ. ಈ ಸರಕಾರಿ ಜಮೀನಿನ ಒಪ್ಪಂದದ್ದೆ ಒಂದು ದೊಡ್ಡ ಕಥೆ. ಮುಂದೆ ಯಾವತ್ತಾದರೂ ಅದರ ಮಹಾಭಾರತದ ಬಗ್ಗೆ ಹೇಳ್ತಿನಿ. ಸದ್ಯಕ್ಕೆ ದುಗ್ಗಾಣಿ ಕಾಸಿಗೆ ಮನುಷ್ಯ ಪ್ರಾಣಿ ವಾಸ ಮಾಡಲು ಏನೇನೂ ಅನುಕೂಲತೆಯಿಲ್ಲದ ವಿಶಾಲ ಭೂಮಿಯನ್ನ ಗುತ್ತಿಗೆಗೆ ಪಡೆದು ಅದನ್ನ ಹಸನುಗೊಳಿಸಿ ಕನಿಷ್ಠ ಹತ್ತು ವರ್ಷ ಕಂದಾಯವನ್ನೂ ಕಟ್ಟಿ ಸಕಲೆಂಟು ಹಾವಳಿಗಳನ್ನ ಮಟ್ಟ ಹಾಕಿ ಲಾಭವನ್ನೂ ಕಂಡವರಿಗೆ ಆ ಇಡಿ ಭೂಮಿಯ ಶಾಶ್ವತ ಮಾಲಕತ್ವ ಹತ್ತು ವರ್ಷಗಳ ನಂತರ ವರ್ಗಾವಣೆಯಾಗುವ ಒಂದು ಓಬಿರಾಯನ ಕಾಲದ ಸರಕಾರಿ ವ್ಯವಸ್ಥೆ ಅಂತ ಅರಿತುಕೊಂಡಿರಿ ಸಾಕು. 


ಇವನೂ ಸೇರಿ ಇವನಪ್ಪನಿಗೆ ಆರು ಮಕ್ಕಳುˌ ಇವ ಮೂರನೆಯವ. ಮುಂದಿಬ್ಬರು ಅಣ್ಣಂದಿರು ಹಿಂದೆ ಮೂವರು ತಂಗಿಯರಿವನಿಗಿದ್ದರು. ಮಗನಿಗೆ ರೈತಾಪಿ ಬದುಕಿನ ಚಾಕಚಾಕ್ಯತೆಗಳೆಲ್ಲವನ್ನೂ ಆತನ ಕಲಿಕೆಯ ಆಸಕ್ತಿ ಗಮನಿಸಿ ಕಲಿಸಿದ ಅಪ್ಪ ಮಗ ಹದಿಹರೆಯದವನಾದ ನಂತರ ರಾಜಿ ಮತ್ತವಳ ಗಂಡ ಮಾದೇವ ಕುದುರೆˌ ಸೀತೆ ದನ ಮತ್ತವಳ ಕರು ಲಕ್ಷ್ಮಿˌ ಇನ್ನೂ ಹಸುಗೂಸಾಗಿದ್ದ ಕರು ಮಹಿಷಿ ಮತ್ತವಳ ಅಮ್ಮನ ಜೊತೆ ಎರಡು ಡಝನ್ ಹಂದಿ ಹಾಗೂ ಹತ್ತು ಸೊಪ್ಪುಕುರಿಗಳ ಮಂದೆಯ ಜೊತೆಗೆ ಮುನ್ನೂರಾ ಎಂಬತ್ತು ರೂಪಾಯಿ ಕಾಸು ಬಂಡವಾಳ ಜೊತೆಗೊಂದು ಕುದುರೆ ಬಂಡಿ ಕೊಟ್ಟು ಅವನನ್ನ ಸ್ವತಂತ್ರರಾಗಿಸಿದ್ಧರು. ಜೀವನದಲ್ಲಿ ಬದ್ಧತೆಯಿರುವ ಈ ಮಧ್ಯದ ಮಗ ರೈತಾಪಿ ಬದುಕಿನಲ್ಲಿ ಖಂಡಿತವಾಗಿ ಯಶಸ್ಸು ಕಾಣುತ್ತಾನೆ ಅನ್ನುವ ಭರವಸೆ ಅವರಿಗಿತ್ತು. ಅಪ್ಪನ ಹಳೆ ಸ್ನೇಹಿತ ವಲಸೆಗಾರರ ಎರಡನೆ ತಲೆಮಾರಿನ ತಿಮ್ಮಯ್ಯ ಇಲ್ಲಿ ಜಮೀನು ಮನೆ ಮಾಡಿಕೊಂಡಿರುವ ವಿಚಾರ ತಿಳಿದುˌ ಅಪ್ಪನ ಶಿಫಾರಸ್ಸಿನ ಮೇಲೆಯೆ ಅವರಿಂದ ಇನ್ನಷ್ಟು ಬೇಸಾಯದ ಮರ್ಮ ಕಲಿತು ಅವರ ಸಹಾಯದಿಂದಲೆ ಸರಕಾರಿ ಒಪ್ಪಂದದಡಿ ಎಕರೆಗೆ ನಾಲ್ಕಾಣೆಯಂತೆ ಮುನ್ನೂರೈವತ್ತು ಎಕರೆಯ ಕಾಡು ಭೂಮಿಯ ಗುತ್ತಿಗೆ ಹಿಡಿದು ಹಟತೊಟ್ಟು ಹುಟ್ಟೂರಿಂದ ಸಾವಿರ ಮೈಲು ದೂರ ಪಶ್ಚಿಮಕ್ಕೆ ಬಂದು ನೆಲೆಸಿದ್ದ. ಅಭಿವೃದ್ಧಿ ಕಾರ್ಯಗಳು ಪೂರ್ವಕ್ಕೆ ಹೋಲಿಸಿದರೆ ಇಲ್ಲಿ ಈಗಿನ್ನೂ ಆಮೆಗತಿಯಲ್ಲಿತ್ತು. ನವ ನಾಗರೀಕತೆಯ ಥಳುಕು ಬಳುಕು ಇನ್ನೂ ಆ ಪ್ರದೇಶವನ್ನು ಪ್ರವೇಶಿಸಿರಲಿಲ್ಲ. ಪೂರ್ವ ತೀರದ ಜನವಸತಿಯ ನಗರಗಳನ್ನ ಪಶ್ಚಿಮ ತೀರಕ್ಕೆ ಬೆಸೆಯಲು ಸರಕಾರ ಸದ್ಯದಲ್ಲಿಯೆ ರೈಲು ರಸ್ತೆ ನಿರ್ಮಿಸುತ್ತದೆ ಅನ್ನುವ ವದಂತಿಗಳಿದ್ದವು. ಆ ರೈಲು ರಸ್ತೆಯ ಕಾಮಗಾರಿ ಪೂರ್ವದ ದಿಕ್ಕಿನಿಂದ ಆರಂಭವಾಗಿ ಸುಮಾರು ದೂರ ಈಗಾಗಲೆ ಬಂದು ಮುಟ್ಟಿರೋದನ್ನ ಸ್ವತಃ ಇವನೆ ಕಂಡಿದ್ದ. ಅದು ಇವರ ಸಮೀಪದ ಪಟ್ಟಣವನ್ನೂ ಹಾಯ್ದು ಹೋಗುವುದನ್ನೂ ಸಹ ರೈಲು ಕಾಮಗಾರಿ ಗುತ್ತಿಗೆದಾರರ ಬಳಿಯಿದ್ದ ನಕಾಶೆ ನೋಡಿ ಅರಿತಿದ್ದ. ಆದರೆ ಅದೆಲ್ಲ ಆಗುವುದು ಯಾವಾಗ ಅನ್ನುವ ಖಚಿತ ಅರಿವು ಮಾತ್ರ ಅವನಿಗಿರಲಿಲ್ಲ. ಒಟ್ಟಿನಲ್ಲಿ ಹಟತೊಟ್ಟು ನೆಲೆಸಿ ನೆಲವನ್ನ ಸ್ವಂತವಾಗಿಸಿಕೊಳ್ಳಬೇಕಿತ್ತು ಅಷ್ಟೆ.


ಲೀಲಕ್ಕನ ಗಂಡ ವಾಸಣ್ಣ ಹಾಗೂ ಅಪ್ಪನ ಗೆಳೆಯ ತಿಮ್ಮಯ್ಯ ಇವರಿಬ್ಬರೆ ಅವನ ಸಮೀಪದ ನೆರೆಕೆರೆ. ಅವರೂ ಸಹ ಕನಿಷ್ಠ ಆರೇಳು ಏಳು ಮೈಲಿ ದೂರದ ತಮ್ಮ ತಮ್ಮ ತೋಟದ ಮನೆಗಳಲ್ಲಿ ನೆಲೆ ನಿಂತಿದ್ದರು.


*************


ಆದ್ಯತೆಯಲ್ಲಿ ಮೊದಲು ಜಮೀನಿನ ತೆರೆದ ಭಾಗವೊಂದರಲ್ಲಿ ಸ್ಥಳ ಗುರುತಿಸಿ ಮನೆ ಕೊಟ್ಟಿಗೆ ರೊಪ್ಪ ಹಟ್ಟಿಗಳನ್ನ ಕಟ್ಟಿಕೊಂಡು ಅದರ ಸುತ್ತ ಬೇಲಿ ಹಾಕಬೇಕಿತ್ತು. ನೀರಿನಾಸರೆಗೊಂದು ಬಾವಿ ಕೊರೆಯಲೆಬೇಕಿತ್ತು. ಅಪ್ಫ ಕೊಟ್ಟಿದ್ದ ಮೂಲಧನದ ಮೂರನೆ ಒಂದು ಭಾಗ ಈಗಾಗಲೆ ಜಮೀನಿನ ಮುಂಗಡಕ್ಕೆˌ ಪಟ್ಟಣದಲ್ಲಿ ಕೊಂಡ ಅಗತ್ಯ ರೈತಾಪಿ ಸಲಕರಣೆಗಳ ಖರೀದಿಗೆˌ ಮುಂದಿನ ವರ್ಷದ ಬೆಳೆಗಾಗಿ ಕ್ಯಾರೆಟ್ˌ ಆಲೂಗೆಡ್ಡೆˌ ಬೀಟ್ರೂಟ್ˌ ಗೆಣಸುˌ ಓಟ್ಸ್ˌ ಜವೆಗೋಧಿˌ ರೈ ಮುಂತಾದವುಗಳ ಬೀಜ ಖರೀದಿಗಂತಲೆ ಖರ್ಚಾಗಿತ್ತು. ಕನಿಷ್ಠ ಈ ವರ್ಷವಾದರೂ ಬರಡು ಬಂಜರು ನೆಲ ಉತ್ತು ಬಿತ್ತಿ ಗೊಬ್ಬರ ಹಾಕಿ ಹಸನು ಮಾಡಲು ಕೂಲಿಗಳ ಅವಶ್ಯಕತೆ ಇದ್ದೆ ಇತ್ತು. 


ಮನೆ ಕಟ್ಟುವ ಆಲೋಚನೆಯೂ ಇದ್ದುದರಿಂದ ಒಬ್ಬಂಟಿಯಾಗಿ ಎಲ್ಲಾ ಕೆಲಸ ಮಾಡುವುದು ಅಸಾಧ್ಯವಾಗಿತ್ತು. ಜಾನುವಾರುಗಳಿಗೆ ಹಾಗೂ ಪಶುಗಳಿಗೆ ಸದ್ಯದ ಮೇವಿನ ಎರವಲು ತಿಮ್ಮಯ್ಯನಿಂದ ಸಿಕ್ಕಿದ್ದು ಒಂದು ಅದೃಷ್ಟ. ಇಲ್ಲದಿದ್ದರೆ ಅದನ್ನೂ ಕಾಸು ಕೊಟ್ಟೆ ಖರೀದಿಸಬೇಕಾದ ಸಂಕಟ ಎದುರಾಗುವ ಭೀತಿಯಿತ್ತು. ಜೊತೆಗಿಬ್ಬರು ಕೂಲಿಗಳನ್ನ ಹೊಂದಿಸಿಕೊಂಡು ಜಮೀನಿನ ಪಕ್ಕದ ಕಾಡಿನಿಂದ ಆಯ್ದು ಗುರುತಿಸಿದ ಹತ್ತು ಪೈನ್ ಹಾಗೂ ಓಕ್ ಮರಗಳನ್ನ ಕಡಿಸಿ ಅಲ್ಲೆ ನಾಟಾ ಕುಯ್ಯಿಸಿ ರಾಜಿ ಮತ್ತವಳ ಸಂಗಾತಿ ಮಾದೇವರನ್ನ ಜಮೀನಿನಿಂದ ಕಾಡಿಗೆ ಕಾಡಿನಿಂದ ಜಮೀನಿಗೆ ಓಡಿಸಿ ದಿಮ್ಮಿಗಳನ್ನˌ ನಾಟದ ಹಲಗೆಗಳನ್ನ ಸಾಗಿಸಿಯೆ ಬಿಟ್ಟ. ಅನುಭವಿ ತಿಮ್ಮಯ್ಯ ಹಾಕಿಕೊಟ್ಟ ನೀಲ ನಕಾಶೆಯಂತೆ ನಾಲ್ಕು ಕೋಣೆಗಳ ಉಪ್ಪರಿಗೆ ಸಹಿತವಾದ ವಿಶಾಲ ಮರದ ಮನೆ ಹಾಗೂ ಸಮೀಪದಲ್ಲಿಯೆ ಕೊಟ್ಟಿಗೆ ರೊಪ್ಪ ಹಟ್ಟಿ ಕಟ್ಟುವ ನಿರ್ಮಾಣ ಕಾರ್ಯವೂ ನೋಡ ನೋಡುತ್ತಿದ್ದಂತೆ ಆರಂಭವಾಗಿಯೆ ಬಿಟ್ಟಿತು!


ಮನೆಯ ಕೆಲಸದ ಜೊತೆಜೊತೆಗೆ ಜಲದ ಸೆಲೆ ಇದ್ದ ಕೊಟ್ಟಿಗೆಗೆ ಅಂಟಿಕೊಂಡಂತೆ ಬೆಳೆದಿದ್ದ ಪೈನ್ ಮರದ ಬುಡದಡಿ ಬಾವಿ ತೋಡುವುದು ಎಂದು ನಿರ್ಧಾರವಾಯಿತು. ಈಗಾಗಲೆ ಹತ್ತಾರು ಮನುಷ್ಯರ ತಲೆಮಾರು ಕಂಡಿದ್ದಿರಬಹುದಾದ ಈ ಪೈನ್ ಮರ ಸದ್ಯ ತನ್ನ ವಯೋ ವೃದ್ಧಾವಸ್ಥೆಯಲ್ಲಿದ್ದರೂ ತಕ್ಕಮಟ್ಟಿಗೆ ಗಟ್ಟಿಮುಟ್ಟಾಗಿಯೆ ಮೇಲ್ನೋಟಕ್ಕೆ ಕಾಣುತ್ತಿದ್ದರೂ ಒಳಗೊಳಗೆ ಗೆದ್ದಲು ಹಿಡಿದು ಪೊಳ್ಳಾಗಿದ್ದ ಕಾಂಡದ ದೆಸೆಯಿಂದ ಸುಲಭವಾಗಿ ಹೆಚ್ಚು ಶ್ರಮ ಬಲವಂತ ನಿರೀಕ್ಷಿಸದೆ ಧರೆಗುರುಳಿ ತನ್ನ ಬದುಕ ಲೆಕ್ಕಾಚಾರ ಮುಗಿಸಿತು. ಅದರ ಪೊಳ್ಳು ಕಾಂಡ ಮುಂದೆ ಸ್ನಾನದ ಮರಿಗೆˌ ಹಾಲಿನ ಬಕೇಟುˌ ವೈನಿನ ಪಿಪಾಯಿˌ ಹಿಕರಿ ಹೊಗೆ ಹಾಕಿ ಬಲಿಪ್ರಾಣಿಗಳ ಮಾಂಸಖಂಡ ಮಾಗಿಸಿ ಒಣಗಿಸುವ ಕೊಳವೆ ಮಾಡಲು ಹೀಗೆ ತರೇವಾರಿ ಉಪಯೋಗಕ್ಕೆ ಬಂತು. 



ಗೆದ್ದಲು ಹಿಡಿದು ಬಹುತೇಕ ಲಡ್ಡಾಗಿದ್ದ ಅದರ ಬುಡದ ಬೊಡ್ಜೆ ಹಾಗೂ ಬೇರು ಬಿಳಲುಗಳು ಇನ್ನೂ ಇವರ ಮನೆಯ ಅಗ್ಗಷ್ಟಿಕೆಯ ಇಂಧನ ಮೂಲವಾಗಿವೆ ಎಂದರೆ ಊಹಿಸಿಕೊಳ್ಳಿ. ವರ್ಷಕ್ಕೊಂದಾವರ್ತಿ ಕಡಿಯುವ ಹೋರಿಕರುˌ ಕೋಣಗಳ ಹಾಗೆ ಕನಿಷ್ಠ ಭಾಗಗಳನ್ನ ಮಾತ್ರ ಎಸೆದು ಅವುಗಳ ಬಹುತೇಕ ಎಲ್ಲಾ ಅಂಗೋಪಾಂಗಗಳನ್ನ ಮೂಳೆ ಅಸ್ಥಿಮಜ್ಜೆಯ ಸಹಿತ ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತಿದ್ದಂತೆ ಈ ಬಹುಪಯೋಗಿ ಪೈನ್ ಸಹ. ಇದರಲ್ಲಿ ಕಸವಾಗಿ ಎಸೆಯಲು ಬಹುತೇಕ ಏನೊಂದೂ ಇರುತ್ತಲೆ ಇರಲಿಲ್ಲ.


ಬೇರು ನೆಲಕ್ಕಿಳಿದಿದ್ದ ಕಡೆಯೆ ಅಗೆದು ಗುಂಡಿ ತೋಡಿ ಮೇಣದ ಬತ್ತಿ ಹಚ್ಚಿ ಹಗ್ಗ ಕಟ್ಟಿದ ಬಕೇಟಿನಲ್ಲಿ ಅದನ್ನ ಇರಿಸಿ ಒಳಗಿಳಿಸಿ ವಿಷಗಾಳಿ ಇರುವ ಆಳ ಖಚಿತ ಪಡಿಸಿಕೊಂಡ. ಸಿಡಿಮದ್ದು ಹಾಕಿ ಸಿಡಿಸಿ ಆ ವಿಷವಾಯುವೆಲ್ಲ ಬಾವಿ ಬಿಟ್ಟು ಹೋಗಲು ಅನವು ಮಾಡಿದ. ಅನಂತರ ಮತ್ತೆ ಮೇಣದಬತ್ತಿ ಕೆಳಗಿಳಿಸಿದಾಗ ಅದು ಪ್ರಕಾಶಮಾನವಾಗಿ ಬೆಳಗುತ್ತಲೆ ಇತ್ತು. ಅಲ್ಲಿಗೆ ಅದಕ್ಕೊಂದು ಹಲಗೆಯ ಮುಚ್ಚುಗೆ ಮಾಡಿಸಿ ಅಚ್ಚುಕಟ್ಟಾಗಿ ಮುಚ್ಚಿದೊಡನೆ ಬಾವಿ ಸಿದ್ಧವಾಗಿತ್ತು. ಕೇವಲ ಹನ್ನೆರಡಡಿ ಆಳದಲ್ಲಿ ಗಂಗೆ ಚಿಮ್ಮಿ ಬಂದಿದ್ದಳು.


ಇನ್ನು ಮನೆ ಕೆಲಸಕ್ಕೆ ಪೇಟೆಯಿಂದ ಕೂಲಿಗೆ ಬಂದಿದ್ದ ನಾಲ್ವರಲ್ಲಿ ಗೋಪಿ ಅನ್ನುವನೊಬ್ಬ ಪಡ್ಡೆಯೂ ಇದ್ದ. ಇವನಿಗಿಂತ ಹಿರಿಯರೆ ಒಡನಾಡುತ್ತಿದ್ದ ಪರಿಸರದಲ್ಲಿ ಸಮವಯಸ್ಕನಾಗಿ ಒಡನಾಡಲು ಸಿಕ್ಕವ ಈ ಬಡಗಿ ಸಹಾಯಕನಾಗಿ ಬಂದಿದ್ದ ಗೋಪಿ ಮಾತ್ರ. ಗೋಪಿ ಮೊದಲ ತಲೆಮಾರಿನ ವಲಸಿಗ. ಈ ಪ್ರದೇಶದ ಬಹುತೇಕರು ಮಾತನಾಡುವ ಭಾಷೆ ಅರಿಯದ ಪೂರ್ವದ ನಾಡೊಂದರಿಂದ ಉತ್ತಮ ಬದುಕಿನ ಆಸೆ ಹೊತ್ತು ಹಡಗೇರಿ ಬಂದಿದ್ದ. ಇಲ್ಲಿನವರ ಭಾಷೆ ಅವನಿಗೆ ಬರುತ್ತಿರಲಿಲ್ಲ. ಅವನ ಗ್ರಾಮ್ಯ ಭಾಷೆ ಮತ್ತದರ ಒರಟು ಉಚ್ಛಾರ ಕೇಳಿ ಇಲ್ಲಿನವರು ಅವನನ್ನ ಗೇಲಿ ಮಾಡುತ್ತಿದ್ದರು! ಅವನ ಮಾತಿನ ಕೆಲವೊಂದು ಪದಗಳು ಇವರ ಭಾಷೆಯಲ್ಲಿ ಬೇರೆಯೆ ಅರ್ಥ ಹೊಮ್ಮಿಸುತ್ತಿದ್ದುದೂ ಸಹ ಈ ತಮಾಷೆಗೆ ಸರಕಾಗಿತ್ತು ಅಂದರೂ ಸುಳ್ಳಲ್ಲ. 



ಈ ವಿಪರೀತ ಪರಿಸ್ಥಿತಿಯಲ್ಲೂ ಗೋಪಿಗೆ ಏನಾದರೂ ಕೈ ಕಸುಬು ಮಾಡಿ ದುಡಿದು ತನ್ನ ಬದುಕನ್ನ ತಾನು ಕಟ್ಟಿಕೊಳ್ಳುವುದು ಅನಿವಾರ್ಯವಾಗಿತ್ತು. ಹುಟ್ಟಿದ ನಾಡಿಗೆ ತಿರುಗಿ ಹೋಗುವ ಉಪಾಯವಿಲ್ಲದ ಅವನಿಗೆ ಈ ನವನಾಡೆ ಭವಿಷ್ಯವೂ ವರ್ತಮಾನವೂ ಒಟ್ಟೊಟ್ಟಿಗೆ ಆಗಿತ್ತು. ಅಂತಹ ಗೋಪಿಯನ್ನ ಆಡಿಕೊಳ್ಳದೆ ಸರಿಸಮಾನನಾಗಿ ಆತ್ಮಿಯತೆಯಿಂದ ಕಂಡವನು ಬಹುಶಃ ಈ ನಾಡಿನಲ್ಲೆ ಇವನೊಬ್ಬನೆ! ಹೀಗಾಗಿ ಸುಲಭವಾಗಿ ಇವನ ಹೊಲಮನೆಯ ಶ್ರಮಕ್ಕೆ ಹೆಗಲು ಕೊಡಲು ನಿರ್ಧರಿಸಿ ಆರಂಭದ ಬವಣೆಯ ಕಾಲದಲ್ಲಿ ಗೋಪಿ ಸಹಾಯಕನಾಗಿ ಅವನ ತೋಟದಲ್ಲೆ ನೆಲೆ ನಿಂತ. ಅವನಿಗೂ ತತ್ಕಾಲಿಕವಾಗಿ ಒಂದು ಬಿಡಾರ ಬೇಕಿತ್ತಲ್ಲ?


ಮೂರು ತಿಂಗಳ ಅವಧಿಯಲ್ಲಿ ಮನೆ ಎದ್ದು ನಿಂತಿತು. ಪೈನ್ ರೀಪುಗಳನ್ನ ಸಾಲಾಗಿ ಜೋಡಿಸಿದ್ದ ಮೇಲಿನ ಛಾವಣಿಯ ಮಾಡಿಗೆ ಓಕ್ ಹಲಗೆಗಳನ್ನ ಹೊದೆಸಿಸಿದರು. ಉಪ್ಪರಿಗೆ ಹಾಗೂ ನೆಲ ಮಹಡಿಗಳ ನಡುವಿನ ಅಂತಸ್ತಿಗೂ ಗಟ್ಟಿಮುಟ್ಟಾದ ಓಕ್ ಹಲಗೆಗಳೆ ಬಳಕೆಯಾಯಿತು. ಅದನ್ನೆ ನೆಲ ಮಹಡಿಗೂ ಹಾಸಲಾಯಿತು. ಮಳೆನೀರು ಒಳಗೆ ತೊಟ್ಟಿಕ್ಕದಂತೆ ಛಾವಣಿಗೆ ಟಾರು ಕಾಗದ ಮೊಳೆ ಹೊಡೆದು ಕೂರಿಸಲಾಯಿತು. ಗೋಡೆಯ ನಡುವೆ ಸ್ಥಳ ಗುರುತಿಸಿ ಧಿಮ್ಮಿ ಗೋಡೆಗಳ ಕೊರೆದು ಸುತ್ತಲೂ ಸರಿಯಾಗಿ ಗಾಳಿಯಾಡಲು ಎಂಟು ಕಿಟಕಿ ಮಾಡಲಾಯಿತು. ಅದರ ಫ್ರೇಮುಗಳನ್ನ ಪ್ರತ್ಯೇಕವಾಗಿ ಮಾಡಿ ಇತ್ತೀಚೆಗೆ ಜನಪ್ರಿಯವಾಗುತ್ತಿದ್ದ ಪಾರದರ್ಶಕ ಗಾಜುಗಳನ್ನ ತುಸು ದುಬಾರಿ ಅನಿಸಿದರೂ ಪೇಟೆಯ ಮರ್ತಪ್ಪಯ್ಯನ ಅಂಗಡಿಯಿಂದ ತಂದು ಅಳವಡಿಸಿದ. 


ಮಲಗುವ ಕೋಣೆಯನ್ನ ಒಂದು ಬದಿಯಿಂದ ಹಾದು ಹೋಗುವಂತೆ ತಳಮಹಡಿಯ ಅಗ್ಗಿಷ್ಟಿಕೆಯ ಹೊಗೆ ಕೊಳವೆಯನ್ನ ಅಳವಡಿಸಿದ. ಮೇಲುಪ್ಪರಿಗೆಯಲ್ಲೂ ಬಲಮೂಲೆಯಲ್ಲಿ ಸೋಮ ಸರೋವರದಿಂದ ಆಯ್ದು ತಂದ ಕಲ್ಲುಕಟ್ಟಿ ಅಗ್ಗಷ್ಟಿಕೆ ಹೊಗೆ ಕೊಳವೆ ಅಳವಡಿಸಿದ. ಎರಡೂ ಕಡೆಗಳಿಂದ ಚಳಿಗಾಲದಲ್ಲಿ ಮಲಗುವ ಮನೆ ಬೆಚ್ಚಗಾಗಿರಲಿ ಅನ್ನುವ ಉದ್ದೇಶ ಇದರ ಹಿಂದಿತ್ತು ಅಷ್ಟೆ. ಇಷ್ಟೆಲ್ಲ ಆಗುವಾಗ ಸಾಕಷ್ಟು ದುಡ್ಡು ಕೈ ಬಿಟ್ಟಿತ್ತಷ್ಟೆ ಅಲ್ಲˌ ಆದ ಖರ್ಚಿಗೆ ಬೇಸರಿಸಲಾಗದಂತೆ ಮನೆ ಎದ್ದು ನಿಂತಿತ್ತು.


ಇನ್ನು ಕೊಟ್ಟಿಗೆ ಹಟ್ಟಿ ರೊಪ್ಪ ಕೋಳಿಗೂಡು ಬೇಲಿ ಕಟ್ಟಲು ಕೂಲಿಗಾರರು ಬೇಡ ಅನಿಸಿತು. ಹೇಗೂ ಗೋಪಿ ಇದ್ದˌ ವಾಸಣ್ಣ ಮೈಯಾಳಿನಂತೆ ಬರಲು ತಯಾರಿದ್ದ. ಮೂವರೆ ಸೇರಿ ಅವನ್ನೆಲ್ಲ ಮಾಡಬಹುದಿತ್ತು. ಹೀಗೆ ಒಂದೊಂದಾಗಿ ಕೆಲಸ ಮುಗಿಸುವಾಗ ಸ್ವಲ್ಪ ನೆಲ ಹಸನುಗೊಳಿಸಿ ಬಿತ್ತಿದ್ದ ರೈ ಹಾಗೂ ಜವೆಗೋಧಿ ಕಟಾವಿಗೆ ಬಂದಿತ್ತು. ಆಲೂಗಡ್ಡೆ ಹಾಗೂ ಬೀಟ್ರೂಟುಗಳೂ ಬಂಪರ್ ಬೆಳೆ ಬಂದಿದ್ದವು. ಧಾನ್ಯಗಳ ಉತ್ಪತ್ತಿ ಹೇಳಿಕೊಳ್ಳುವಷ್ಟಿದ್ದಿರದಿದ್ದರೂ ಸಹˌ ಅವುಗಳ ಹುಲ್ಲು ಜಾನುವಾರುಗಳಿಗೆ ಮುಂದಿನ ಚಳಿಗಾಲದುದ್ದ ಸಾಕಾಗುವಷ್ಟು ಸಂಗ್ರಹವಾಗಿದ್ದವು. ಮೊದಲ ಬೆಳೆಯ ಧಾನ್ಯದ ಒಂದು ಪಾಲು ಪಟ್ಟಣಕ್ಕೆ ಹೋಗಿ ಅಂಚೆಯಲ್ಲಿ ಅಪ್ಪ ಅಮ್ಮನಿಗೆ ಕಳಿಸಿ ಬಂದ. ಧಾನ್ಯ ಒಕ್ಕಿ ಹುಲ್ಲು ಮೆದೆ ಹಾಕಿ ಮುಗಿಸುವಾಗಲೆ ಭೀಕರ ಚಳಿಗಾಲ ಒಕ್ಕರಿಸಿಯೆ ಬಿಟ್ಟಿತ್ತು.



************


ಗೋಪಿಗೂ ಆ ಚಳಿಗಾಲ ಇವನ ಮನೆಯೆ ನೆಲೆ. ಇಬ್ಬರು ಬ್ರಹ್ಮಚಾರಿಗಳು ಚಳಿಗಾಲದುದ್ದ ಕಳ್ದಿಂಗಳ ಬೇಟೆˌ ಕೂಡುಬೇಟೆˌ ಸರೋವರದಂಚಿನ ಕಾಡುಬಾತು ಬೇಟೆˌ ಹೆಪ್ಫುಗಟ್ಟಿದ ನೀರಿನಡಿಯ ಮೀನುಬೇಟೆ ಹೀಗೆ ಸಾಹಸಗಳನ್ನ ಮಾಡುತ್ತಲೆ ಆ ಚಳಿಗಾಲವನ್ನ ಕಳೆದರು. ಆ ಹಂಗಾಮಿನಲ್ಲಿ ಅವರು ಸುಮಾರು ಆರು ಹಿಮಕರಡಿˌ ಹತ್ತಿರ ಹತ್ತಿರ ಮೂರು ಡಝನ್ ಚುಕ್ಕಿ ಜಿಂಕೆಗಳು ಹಾಗೂ ಒಂದಿನ್ನೂರು ಕಾಡುಬಾತು ಶಿಕಾರಿ ಮಾಡಿದ್ದರು! ಹಿಡಿದ ಮೀನುಗಳಿಗಂತೂ ಲೆಕ್ಕವೆ ಇಲ್ಲ. ನಡುನಡುವೆ ಆಗಾಗ ಸಮೀಪದ ಪಟ್ಟಣಕ್ಕೆ ಹೋಗಿ ಜನರೊಂದಿಗೆ ಬೆರೆತು ಅರಿತು ಮನರಂಜನೆಯ ತಾಣಗಳಲ್ಲಿ ಕುಡಿದು ಕುಣಿದು ಕುಪ್ಪಳಿಸಿ ಮಜವಾಗಿಯೆ ದಿನ ಕಳೆದರು. ಹಾಗೊಮ್ಮೆ ಅಲ್ಲಿ ಅವನ ಕಣ್ಣಿಗೆ ಅವಳು ಬಿದ್ದಳು.


ಇವನ ರಾಜಿ ಮತ್ತು ಮಾದೇವನಿಗೆ ಲಾಳ ಹೊಡೆಸುವ ಹಾಗೂ ಅವರೆಳೆಯುವ ಗಾಡಿಗೆ ಅವಧಿಗೊಮ್ಮೆ ಮರಮತ್ತು ಮಾಡಿಸುವ ಅವಶ್ಯಕತೆ ಇತ್ತೆ ಇತ್ತು. ಹಿಂದೆ ಹೊಡೆಸಿದ್ದ ಲಾಳದ ಸುತ್ತ ಹೊಸ ಚರ್ಮ ಬೆಳೆದು ಕಸ ಕಡ್ಡಿ ಸಂದಿಗೊಂದಿಗಳಲ್ಲಿ ಸೇರಿ ಇಬ್ಬರೂ ಚಳಿಗಾಲ ಬಂತೆಂದರೆ ಸರಾಗವಾಗಿ ನಡೆಯಲು ಯಾತನೆ ಪಡುತ್ತಿದ್ದರು. ಸಾಲದ್ದಕ್ಕೆ ಹಿಮದ ಮೇಲೆ ನಡೆಯುವಾಗ ಅವರ ಹಿಡಿತ ಬಲವಾಗಿರದೆ ಕಾಲು ಜಾರಲು ಸಹ ಆರಂಭವಾಯಿತು. ಹೀಗಿರೋವಾಗ ಪಟ್ಟಣದ ಪೇಟೆ ಬೀದಿಯಂಚಿಗೆ ಕುದುರೆ ಲಾಯದ ಆಚೆಗಿದ್ದ ಲಾಳ ಕಟ್ಟುವಲ್ಲಿಗೆ ಅವರಿಬ್ಬರನ್ನೂ ಗಾಡಿ ಸಹಿತ ಇವನು ಕರೆದೊಯ್ದ. ಅಲ್ಲಿ ಇವಳನ್ನ ಕಂಡˌ ವಾಸ್ತವವಾಗಿ ಮಠಕ್ಕೆ ಆಗೀಗ ವಾರದ ಪೂಜೆಗೆ ಹೋಗಿದ್ದಾಗ ಪ್ರಾರ್ಥನೆ ಹಾಡುವ ಹಾಡುಗ ಹುಡುಗಿಯರ ಗುಂಪಿನಲ್ಲಿ ಇವಳೂ ಇದ್ದದ್ದು ಹಿರಿಯ ಸನ್ಯಾಸಿನಿಯರ ಅನುಪಸ್ಥಿತಿಯಲ್ಲಿ ಸ್ವತಃ ಇವಳೆ ಪಿಯಾನೋ ನುಡಿಸುತ್ತಾ ಹಾಡುಗರನ್ನ ಹಾಡಿಸುತ್ತಿದ್ದುದು ಕಂಡಿದ್ದ. 


ಇವಳ ಸ್ವರ ಮಾಧುರ್ಯವನ್ನೂ ಮೆಚ್ಚಿದ್ದ. ಎಲ್ಲಾ ಹದಿಹರೆಯದ ಹುಡುಗರಿಗೆ ಚೆಂದುಳ್ಳಿ ಚೆಲುವೆಯರನ್ನ ಕಂಡಾಗ ಒಳಗಡೆ ಏನೇನಾಗುತ್ತದೋ ಅದೆಲ್ಲಾ ಅವನಿಗೂ ಅಂದು ಆಗಿತ್ತು. ಸಾಲದ್ದಕ್ಕೆ ಪದೆ ಪದೆ ಅವಳ ನೆನಪಾಗುವಷ್ಟು ಅವಳ ಬಿಂಬ ಮನದೊಳಗೆ ಇಳಿದು ಹೋಗಿತ್ತು. ಅಂತವಳನ್ನ ಸಂಜೆಯ ಈ ಹೊತ್ತಲ್ಲಿ ಅದೂ ಪಡಖಾನೆˌ ಲಾಳದ ಗಾಡಿಖಾನೆˌ ಚುಟ್ಟಾ ಸಿಗಾರಿನ ಅಂಗಡಿˌ ಅಗ್ಗದ ದರದ ಅನ್ನದ ಮನೆ ಎದುರಿನ ಬೀದಿಯ ಚರಂಡಿ ಯಾವುದು ರಸ್ತೆ ಯಾವುದು ತಿಳಿಯಲಾಗದಂತಹ ದುರ್ಗಂಧದ ಬಚ್ಚಲು ನೀರು ಹರಿವ ಕೊಚ್ಚೆˌ ಅದರಲ್ಲಿ ಉತ್ಪತ್ತಿಯಾಗಿ ಊರವರದೆಲ್ಲ ರಕ್ತದ ರುಚಿ ನೋಡುವ ಉಮೇದಿನಲ್ಲಿರುವ ಸೊಳ್ಳೆಗಳ ಹಾಗೂ ವಿಸರ್ಜಿತ ಮಲ ಅಡುಗೆಯ ಪರಿಮಳ ಎರಡರಲ್ಲೂ ಸಮಪಾಲು ಬಯಸುತ್ತಾ ಅಡುಗೆ ಮನೆ ಪಾಯಖಾನೆ ಎರಡರಲ್ಲೂ ಜೂಂಯ್ಗುಡುತ್ತಾ ರಸಸ್ವಾದನೆಗಿಳಿವ ನೀಲಿನೊಣಗಳ ತವರು ಮನೆ ಹೆಜ್ಜೆಗೆರಡರಂತಿರವ ತುಸು ಕೊಳಚೆ ಅನ್ನುವಂತಹ ಪರಿಸರವಿರುವ ಈ ಗಾಡಿಖಾನೆಯಲ್ಲಿ ಕಂಡಾಗ ಆಶ್ಚರ್ಯ ಚಕಿತನಾದ. ಅವನ ಅಗತ್ಯ ಹಾಗೂ ಅಹವಾಲು ವಿಚಾರಿಸಲು ಅವಳೆ ಮುಂದೆ ಬಂದಿದ್ದಳು. 


ವಾಸ್ತವವಾಗಿ ಅದು ಅವಳ ಮಾವನ ಗಾಡಿಖಾನೆ. ವಾಸದ ಮನೆ ಮುಂದಿನ ದಿವಾನಖಾನೆಯನ್ನೆ ಅವ ತನ್ನ ವ್ಯವಹಾರದ ಅಡ್ಡೆ ಮಾಡಿಕೊಂಡಿದ್ದ. ಅಂಗಳದಲ್ಲಿ ಕುಲುಮೆ ಹಾಕಿ ಮರದ ಬಕೇಟು ಪಿಪಾಯಿಗಳಿಗೆ ಸೀಸದ ಬೆಸುಗೆ ಹಾಕುವುದುˌ ಕುದುರೆ ದನ ಎಮ್ಮೆಗಳಿಗೆ ಲಾಳ ಹೊಡೆಯುವುದುˌ ಕುದುರೆ ಬಂಡಿಗಳ ಕೀಲು ರಿವೀಟು ಎಲ್ಲಾ ಬಿಚ್ಚಿ ತುಕ್ಕು ಕೆರೆದು ತೆಗೆದು ಸಂಪೂರ್ಣ ಗ್ರೀಸ್ ಹಚ್ಚಿ ಮರು ಜೋಡಿಸಿ ಅಗತ್ಯ ರಿಪೇರಿ ಕಾರ್ಯ ಮಾಡಿ ಅದನ್ನ ಸರಾಗವಾಗಿ ಚಲಿಸುವಂತೆ ಮಾಡುವುದು ಇವೆ ಮುಂತಾದ ಕೆಲಸ ಕಾರ್ಯಗಳನ್ನ ಅವನು ಮಾಡಿ ಕೊಡುತ್ತಿದ್ದ. ಅಲ್ಲೆ ಒಂದು ಮೂಲೆಯಲ್ಲಿ ಕುಂಬಾರಿಕೆಯ ಕೆಲಸವನ್ನೂ ಮಾಡುವ ಬಂಡಿ ಚಕ್ರ ಹಾಕಿದ್ದ. ಮನೆಯ ದಿನ ಬಳಕೆಯ ಮಣ್ಣಿನ ಪಾತ್ರೆ ಪಗಡ ಅನ್ನದ ಚಟ್ಟಿ ಮರಿಗೆ ಮೊಸರಿನ ಕುಡಿಕೆ ಸಾರಿನ ಮಡಿಕೆ ಹೀಗೆ ವಿವಿಧ ಗಾತ್ರಗಳ ಪಾತ್ರೋಪಕರಣಗಳನ್ನ ತಯಾರಿಸಿ ಪಕ್ಕದ ಮೂಲೆಯಲ್ಲಿ ಜೋಡಿಸಿಟ್ಟಿದ್ದ. ಅಂತಹ ಗಾಡಿಖಾನೆಗೆ ಇವನು ಮರಮತ್ತಿಗೆ ತನ್ನ ಗಾಡಿ ಮತ್ತು ಕುದುರೆಯನ್ನ ಕೊಂಡೊಯ್ದಾಗ ಅವಳು ಅಲ್ಲಿದ್ದಳುˌ ವಾಸ್ತವವಾಗಿ ಅವಳು ಸಂಜೆ ವೇಳೆ ಹೆಚ್ಚು ಕೆಲಸವಿರುವ ಹೊತ್ತಲ್ಲಿ ಮಾವನ ಸಹಾಯಕಿಯಾಗಿ ಅಲ್ಲಿ ಗೇಯುತ್ತಿದ್ದಳು.

ಹಾಗೆ ನೋಡಿದರೆ ಅದು ಅವಳ ಸ್ವಂತ ಮನೆˌ ಮಾವನೆ ಅಲ್ಲಿಗೆ ಅವಳಿನ್ನೂ ಪುಟ್ಟ ಹುಡುಗಿಯಾಗಿದ್ದಾಗ ಅತಿಥಿಯಾಗಿ ಬಂದು ಸೇರಿ ಮುಂದೆ ಯಜಮಾನಿಕೆ ಮಾಡುತ್ತಿರೋದು. ಕಳೆದ ಹಂಗಾಮಿನಲ್ಲಿ ಪಟ್ಟಣದಲ್ಲಿ ಹರಡಿದ್ದ ಪ್ಲೇಗಿಗೆ ಅವಳ ಅಪ್ಪ ಅಮ್ಮ ಹಾಗೂ ಅಣ್ಣ ಒಬ್ಬೊಬ್ಬರಾಗಿ ಬಲಿಯಾಗಿದ್ದರು. ಆಗ ಏನೂ ಕೆಲಸವಿದ್ದಿರದ ಈ ಸಹೋದರ ಮಾವ ಇವರ ಮನೆ ಬಂದು ಸೇರಿ ತಿಂಗಳು ಮೂರು ಕಳೆದಿತ್ತು. ಕಡೆಗೆ ಇವಳ ಆರೈಕೆಯ ನೆಪದಲ್ಲಿ ಅವನೂ ಅಲ್ಲೆ ಶಾಶ್ವತವಾಗಿ ನೆಲೆಸಿದ. ಮಠದ ಅಡುಗೆ ಕೆಲಸ ಮಾಡುವ ಚೊಟ್ಟ ಕಾಲಿನ ದಾಮೂ ಮಾಸ್ಟರನ ಮೂರನೆ ಮಗಳನ್ನ ಅದು ಹೇಗೋ ಪಟಾಯಿಸಿ ಮದುವೆಯಾಗಿ ಸಂಸಾರವಂದಿಗನೂ ಆದ. ಬೆಕ್ಕಿನ ಕಣ್ಣಿನ ಆ ಸರೋಜಾ ಅತ್ತೆ ವಿಪರೀತ ಬೆರಕೆ ಹೆಂಗಸು. ಎಂದಿದ್ದರೂ ಕಾನೂನಾತ್ಮಕವಾಗಿ ಈ ಆಸ್ತಿಯ ಹಕ್ಕು ತಮ್ಮದಾಗುವುದಿಲ್ಲ ಅನ್ನುವ ಅರಿವು ಅವಳಿಗಿದ್ದೆ ಇತ್ತು. ಹೀಗಾಗಿ ಇವಳನ್ನು ಕೂತಲ್ಲಿ ನಿಂತಲ್ಲಿ ಬೈದು ಹಂಗಿಸಿ ಮಾನಸಿಕವಾಗಿ ಹಿಂಸಿಸಿ ತನ್ನ ಹತಾಶೆಯನ್ನ ವ್ಯಕ್ತವಾಗಿಯೆ ತೋರಿಸುತ್ತಿದ್ದಳು. ಅವಳ ಇಂತಹ ಕಿರುಕುಳ ಹೆಚ್ಚಾದಾಗಲೆಲ್ಲಾ ಸುಮ್ಮನೆ ಮಲಗುವ ದಿಂಬನ್ನ ಒದ್ದೆ ಮಾಡುತ್ತಾ ನಿಶ್ಯಬ್ಧವಾಗಿ ಅಳುತ್ತಿದ್ದ ಇವಳು ಈ ನರಕದಿಂದ ತನಗೆ ಮುಕ್ತಿ ಕೊಡಿಸುವ ದೇವದೂತನಿಗಾಗಿ ಕಾದೆ ಇದ್ದಳು. 


ಮಠದ ಆದಿತ್ಯವಾರದ ಸಾಮೂಹಿಕ ಪೂಜೆಯ ಸಮಯ ನೆರೆದ ಭಕ್ತರ ಜಂಗುಳಿಯಲ್ಲಿ ಈ ಊರಿನಲ್ಲೆಂದೂ ಕಂಡು ನೆನಪಿಲ್ಲದ ಬಂಗಾರದ ಬಣ್ಣದ ಕೂದಲಿನ ಕುಡಿ ಮೀಸೆ ನವಿರು ಗಡ್ಡದ ಅಪ್ಪಟ ನೀಲಿ ಕಣ್ಣುಗಳ ಈ ಹೊಸಬ ಅವಳ ಕಣ್ಣಿಗೂ ಬಿದ್ದಿದ್ದ. ಆದರೆ ಅವನ ಗುರುತಿನ ಪತ್ತೆದಾರಿಕೆ ಮಾಡುವುದು ಅವಳ ಯೋಗ್ಯತೆಗೆ ಮೀರಿದ್ದಾಗಿತ್ತು. ಹಾಗೊಂದು ವೇಳೆ ವಿಪರೀತ ಕಾಳಜಿ ತೋರಿದಲ್ಲಿ ಏಕೆ? ಏನು? ಏನಕ್ಕಂತೆ? ಮುಂತಾದ ಅಸಂಖ್ಯ ಕೆಟ್ಟ ಕುತೂಹಲಿಗಳ ಕೌತುಕಕ್ಕೆ ಪುಗಸಟ್ಟೆ ಆಹಾರವಾಗುವ ಅಪಾಯ ಬೇರೆ ಇತ್ತು. ಹೀಗಾಗಿ ಅವಳು ಆ ನಿಟ್ಟಿನಲ್ಲಿ ತುಸುವೂ ಮುಂದುವರೆದಿರಲಿಲ್ಲ.

ಹೀಗಿರುವಾಗ ಒಂದು ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಅವರಿಬ್ಬರೂ ಮತ್ತೆ ಮುಖಾಮುಖಿಯಾಗಿದ್ದರು. ಅವಳ ಆಕರ್ಷಣೆಯ ಕಾರಣವೋ ಇಲ್ಲಾ ನಿಜವಾಗಲೂ ಅವನಿಗೆ ಅವಳ ಮಾವನ ಗಾಡಿಖಾನೆಗೆ ಹೋಗುವ ದರುದು ಒದಗಿ ಬಂದಿತ್ತೋ ಲಾಳ ಹೊಡೆಸಿ ಗಾಡಿ ರಿಪೇರಿ ಮಾಡಿಸಿದ ನಂತರವೂ ಹಟ್ಟಿಯ ಪಶುಗಳಿಗೆ ಗೊಂತಿಗೆ ಕಟ್ಟುವ ಹಗ್ಗ ತರಲುˌ ಅವುಗಳ ಮುರು ತುಂಬುವ ಬಕೀಟುಗಳಿಗೆ ಸೀಸದ ಬೆಸುಗೆ ಹಾಕಿಸಲುˌ ಸಣ್ಣಪುಟ್ಟ ರೈತಾಪಿ ಉಪಕರಣಗಳಿಗೆ ಸಾಣೆ ಹಿಡಿಸಲು ಪದೆ ಪದೆ ಅವನು ಅವಳಲ್ಲಿಗೆ ಸುಳಿದ. ಅವನ ಈ ಭೇಟಿಗಳ ಹಿಂದಿನ ಉದ್ದೇಶದ ವಾಸನೆ ಅದಾಗಲೆ ಅವಳ ಸಹೋದರ ಮಾವನ ಮೂಗಿಗೂ ತುಸು ಮುಟ್ಟಿತ್ತು ಅಂತ ಕಾಣ್ತದೆ. ಆದರೆ ಅವನಾಗಿಯೆ ವಿಷಯ ಪ್ರಸ್ತಾವಿಸಲಿ ಆಮೇಲೆ ತಮ್ಮ ಬಲವಾದ ಪಟ್ಟು ಹಾಕಿ ಸುಲಭವಾಗಿ ಕನ್ಯಾಸೆರೆ ಬಿಡಿಸಿಕೊಳ್ಳೋಣ ಅಂತ ಘಾಟಿ ಸರೋಜತ್ತೆ ಮಾವನೊಂದಿಗೆ ಸರಿಯಾದ ಸಮಯಕ್ಕಾಗಿ ಹೊಂಚು ಹಾಕಿ ಕಾದಿದ್ದಳು.

ಇವನು ಮೊದಲು ಈ ವಿಷಯವನ್ನ ಪ್ರಸ್ತಾವಿಸಿದ್ದು ಹೌದು. ಆದರೆ ಅವಳ ಮಾವನ ಬಳಿ ಅಲ್ಲˌˌ ಮಠದ ಹಿರಿಯ ಸನ್ಯಾಸಿನಿಯ ಬಳಿ. ಆಗ ಅವರ ಕರೆ ಇವಳ ಮಾವನಿಗೆ ಹೋಯಿತು. ಇದು ಹೀಗಾಗುತ್ತದೆ ಅನ್ನುವ ನಿರೀಕ್ಷೆ ಇದ್ದಿರದೆ ಸಹೋದರ ಮಾವ ತಲೆ ಕೆರೆದುಕೊಳ್ಳುತ್ತಾ ಗುರುಗಳ ಮುಂದೆ ಬಾಗಿ ನಿಂತ. ಅವರು ವಿಷಯ ಪ್ರಸ್ತಾಪ ಮಾಡಿ ಒಪ್ಪಿಗೆಯೆ ಅಂದರುˌ ತೋಟದ ಮನೆ ಮಾಡಿ ಕೃಷಿ ಸಾಹಸಕ್ಕಿಳಿದಿರುವ ಈ ಯುವಕ ಅವರ ದೃಷ್ಟಿಯಲ್ಲಿ ಯೋಗ್ಯನೂ ಅನುರೂಪನೂ ಆಗಿದ್ದ ಅವಳಿಗೆ. ಅವಳಾದರೋ ಅವರ ಅನಾಥಾಲಯದಲ್ಲೆ ಉಳಿದು ಬೆಳೆದಿದ್ದ ಮಗು ಬೇರೆ.



***********



ಅವಳ ಅಪ್ಪ ಅಮ್ಮ ತನ್ನಿಂದ ನೂರಾರು ರೂಪಾಯಿ ಸಾಲ ಮಾಡಿ ತೀರಿಸದೆ ಸತ್ತು ಹೋಗಿದ್ದಾರೆಂದೂˌ ಅದರ ವ್ಯವಸ್ಥೆ ಆಗುವುದಾದರೆ ಈ ಮದುವೆಗೆ ತನ್ನ ಅಭ್ಯಂತರ ಏನೇನೂ ಇಲ್ಲವೆಂದೂˌ ಆದರೆ ಸದ್ಯದ ಪರಿಸ್ಥಿತಿಯಲ್ಲಿ ತನ್ನ ಬಳಿ ಮದುವೆಗೆ ಖರ್ಚು ಮಾಡುವಷ್ಟು ಶಕ್ತಿ ಇಲ್ಲವೆಂದೂ ವರ ಮಹಾಶಯನೆ ಎರಡೂ ಕಡೆಯ ಔತಣೋಪಚಾರದ ಖರ್ಚು ವಹಿಸಿಕೊಳ್ಳೋದಾದರೆ ಮುಂದಿನ ವಾರದ ಮುಹೂರ್ತದಲ್ಲೆ ಮದುವೆ ಮಾಡಿಕೊಡಲು ತಾನು ತಯ್ಯಾರೆಂದೂ ಸಹೋದರ ಮಾವ ಗುರುಗಳ ಮುಂದೆ ಘಟವಾಣಿ ಸರೋಜತ್ತೆ ಬಾಯಿಪಾಠ ಮಾಡಿ ಕಳಿಸಿದ್ದ ಉರು ಹೊಡೆದ ಮಾತುಗಳನ್ನೆ ಉರುಟಿ ನಿಸೂರನಾದ.

ಮಠದ ಗುರುಗಳಿಗೆ ಅವನ ಕೃಪಣತೆ ಕಂಡು ಜಿಗುಪ್ಸೆಯಾಯಿತು. ವಾಸ್ತವವಾಗಿ ನೆಲೆಯರಿಸಿಕೊಂಡು ಬರಿಗೈಯಲ್ಲಿ ಈ ಊರಿಗೆ ಬಂದಿದ್ದವನು ಅವನೆ ಹೊರತುˌ ಅವನಿಂದ ಇವಳ ಅಪ್ಪ ಅಮ್ಮ ದುಗ್ಗಾಣಿ ಕಾಸನ್ನೂ ಸಾಲ ಪಡೆದಿರಲಿಲ್ಲ. ಹಾಗಂತ ಯಾವ ಸಾಲಪತ್ರವೂ ಅವನ ಬಳಿ ಇರಲಿಲ್ಲ. ಯಾರಾದರೂ ಗದ್ದರಿಸಿ ಕೇಳಿದ್ದರೆ ಎಲ್ಲವನ್ನೂ ಇದ್ದಂತೆಯೆ ಅವಳ ಸುಪರ್ದಿಗೊಪ್ಪಿಸಿ ಅವನಲ್ಲಿಂದ ಕಾಲು ಕೀಳಬೇಕಾಗುತ್ತಿತ್ತು. ಆದರೆ ಆರು ಸಂತಾನವಿರುವ ಸಂಸಾರವಂದಿಗನಾದ ಅವನ ಮೇಲಿನ ಕರುಣೆಯಿಂದ ಹೆಚ್ಚು ಪೀಡಿಸದೆ ಊರ ಅಂಚಿನಲ್ಲಿರುವ ಅವಳ ಅಪ್ಪನ ಹೆಸರಿನ ನಿವೇಶನವೊಂದನ್ನ ಹೊರತುಪಡಿಸಿ ಬಾಕಿ ಮನೆ ಹಿತ್ತಲು ಗಾಡಿಖಾನೆಯ ಸಹಿತ ಸಮಸ್ತ ಚರಾಚರ ಅವಳಪ್ಪನ ಸಂಪಾದನೆ ಅವನಿಗೆ ಸೇರತಕ್ಕದ್ದೆಂದೂˌ ಬದಲಾಗಿ ವಿವಾಹದ ಸಮಭಾಗ ಖರ್ಚು ಅವನೂ ಮಾಡಲೆಬೇಕೆಂದೂ ಅದಕ್ಕೆ ಬೇಕಾದರೆ ತನ್ನ ಜಾಮೀನಿನ ಮೇಲೆ ಊರ ಬಡ್ಡಿ ವ್ಯಾಪಾರಿ ಸುಂದರ ಶೆಟ್ಟರಿಂದ ಅವನು ಇಪ್ಪತ್ತೈದು ರೂಪಾಯಿ ಕೈಗಡ ಪಡೆಯಬಹುದೆಂದೂ ಗುರುಗಳು ತೀರ್ಪು ಕೊಟ್ಟರು. ಆರಂಭದಲ್ಲಿ ಕೊಂಚ ಕೊಸರಾಡಿದನಾದರೂ ಕಡೆಗೂ ಈ ವ್ಯವಸ್ಥೆಗೆ ಸಹೋದರ ಮಾವ ತನ್ನ ಒಪ್ಪಿಗೆ ಸೂಚಿಸಿದ. ಅಷ್ಟೆ ಅಲ್ಲದೆ ಈ ಸುಳ್ಳು ತಟವಟಗಳೇನೆ ಇದ್ದರೂ ಲಾಳ ಹೊಡೆಯುವುದರಲ್ಲಿ ಹಾಗೂ ಸಾಣೆ ಹಿಡಿಯುವಲ್ಲಿ ಅವನ ಸಾಮರ್ಥ್ಯ ಅದ್ವಿತೀಯವಾಗಿತ್ತು. ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದುˌ ಸಮೀಪದಲ್ಲಿ ಸುತ್ತಮುತ್ತಲು ತೋಟದ ಮನೆಗಳು ಒಂದೊಂದಾಗಿ ನೆಲೆಯೂರಲಾರಂಭಿಸಿದ್ದವು. ಅವರಿಗೆಲ್ಲ ಕೃಷಿ ಸಲಕರಣೆಗಳ ದುರಸ್ತಿಗೆ ಹತ್ತಿರದಲ್ಲಿ ಇವನನ್ನು ಬಿಟ್ಟರೆ ಬೇರೆ ವ್ಯವಸ್ಥೆ ಇರಲಿಲ್ಲ. ಈ ಲೌಖಿಕವೂ ಗುರುಗಳನ್ನ ಹೆಚ್ಚು ಕಟುವಾಗದಂತಾಗಿಸಿತು. ಅಲ್ಲಿಗೆ ಅವಳ ಅವನ ಮದುವೆ ನಿಕ್ಕಿಯಾಯಿತು. ಈ ವಾರದ ಕೂಡುಪೂಜೆಯಲ್ಲಿ ಮಠದ ಗುರುಗಳು ಈ ಬಗ್ಗೆ ಪ್ರಕಟಣೆ ಹೊರಡಿಸಿ ಯಾರಿಗಾದರೂ ಆಕ್ಷೇಪಣೆಗಳಿದ್ದಲ್ಲಿ ಮಠದ ಗುರುಗಳನ್ನ ಸಂಪರ್ಕಿಸಿ ಎಂದು ಸಾರಿದರು. ಹಾಗೆ ಅವರಿಬ್ಬರ ಜೀವನ ಸಾಂಗತ್ಯದ ಕಥೆ ಮೊದಲಾಯಿತು.


ಅದೆ ಹೊತ್ತಿಗೆ ಮಠದ ಜಾತ್ರೆಯಲ್ಲಿ ಮಕ್ಕಳ ಆಟಿಕೆ ಮಾರುವ ಬಾಬಯ್ಯನ ಮಗಳ ಮೇಲೆ ಗೋಪಿಗೂ ಮನಸಾಗಿತ್ತು. ಅದನ್ನವನು ಇವನಲ್ಲಿ ಅರುಹಿಯೂ ಇದ್ದ. ಬಾಬಯ್ಯನ ಮಗಳೂ ಮಠದ ಸಂಗೀತಗೋಷ್ಠಿಯ ಗಾಯಕಿಯರಲ್ಲೊಬ್ಬಳೆ. ಅವಳ ಜೊತೆ ಗೋಪಿ ಪ್ರಣಯ ನಿವೇದನೆ ಮಾಡಿ ಅವಳದನ್ನ ಒಪ್ಪಿಯೂ ಆಗಿತ್ತು. ಗೋಪಿಗೆ ಸ್ಥಳಿಯರ ಭಾಷೆ ಇನ್ನೂ ಅಷ್ಟಾಗಿ ಸರಿಯಾದ ಉಚ್ಛಾರಣೆಯಲ್ಲಿ ಮಾತನಾಡಲು ಬರುತ್ತಿರಲಿಲ್ಲ ಹೊರತುˌ ಉಳಿದಂತೆ ಅವನೂ ಸುಂದರಾಂಗನೆ. ಕೆಲಸಗಳಲ್ಲೂ ಶ್ರಮಜೀವಿ. ಬಾಬಯ್ಯನ ಹೆಂಡತಿ ತೀರಿ ಹೋದ ಮೇಲೆ ಹಿರಿ ಮಗನೂ ಮದುವೆಯಾಗಿ ಇನ್ನಷ್ಟು ಪಶ್ಚಿಮಕ್ಕೆ ವಲಸೆ ಹೋಗಿ ಅಲ್ಲೊಂದು ಪಟ್ಟಣದಲ್ಲಿ ಹೊಟೆಲ್ ವ್ಯಾಪಾರಕ್ಕಿಳಿದು ಹೆಂಡತಿಯೊಡನೆ ಪ್ರತ್ಯೇಕ ನೆಲೆಸಿದ ಮೇಲೆ ಇಲ್ಲಿ ಮನೆಯಲ್ಲಿ ಅಪ್ಪ ಮಗಳು ಇಬ್ಬರೆ ಆಗಿದ್ದರು. ಸ್ವಂತಕ್ಕೆ ಮನೆಯೇನೋ ಇತ್ತು. ಆದರೆ ಆಟಿಕೆಗಳ ವ್ಯಾಪಾರದಲ್ಲಿ ಅಂತಾ ಹೇಳಿಕೊಳ್ಳುವಂತ ಲಾಭ ಹುಟ್ಟುತ್ತಿರಲಿಲ್ಲ. ಗೋಪಿಯನ್ನ ಮನೆಯಳಿಯ ಮಾಡಿಕೊಳ್ಳಲು ಬಾಬಯ್ಯನಿಗೆ ಏನೇನೂ ಅಭ್ಯಂತರವಿರಲಿಲ್ಲ. 


ಮಗಳ ಮದುವೆಗೆ ಅವ ಹತ್ತು ರೂಪಾಯಿ ಉಳಿಸಿ ಕೂಡಿಟ್ಟಿದ್ದ. ವಧುವಿಗೆ ಕೊಡಬೇಕಾದ ತಾಳಿ ಉಂಗುರ ಕಾಲುಂಗರದ ಖರ್ಚಿಗೆ ಇವನೆ ಗೋಪಿಗೆ ಹತ್ತು ರೂಪಾಯಿ ಮುಂಗಡ ಕೊಟ್ಟ. ಅಲ್ಲದೆ ಗೋಪಿಯ ಸಂಬಳದ ಬಾಬ್ತು ಹೆಚ್ಚುವರಿ ಹತ್ತು ರೂಪಾಯಿಯೂ ಸೇರಿ ಈ ಮೊತ್ತ ದುಪ್ಪಟ್ಟಾಯಿತು. ಮಠಕ್ಕೆ  ಮದುವೆ ಶುಲ್ಕ ಎಂಟಾಣೆ ಒಂದು ಜೋಡಿಗೆ ನಿಗದಿಯಾಗಿತ್ತು. ಎರಡೂ ಜೋಡಿಗೆ ಸೇರಿ ಇವನೆ ಐದು ರೂಪಾಯಿ ಮದುವೆ ಕಾಣಿಕೆ ಕಟ್ಟಿದ. ಗುರುಗಳು ಇವನ ಧಾರಾಳತನದಿಂದ ಸಂತೃಪ್ತರಾದರು. ಅನಾಥಾಲಯದಲ್ಲೆ ಮದುವೆಯ ಔತಣಕ್ಕೂ ಏರ್ಪಾಡು ಮಾಡಿ ಅದರ ಬಾಬ್ತು ತಲಾ ಐದೈದು ರೂಪಾಯಿಗಳನ್ನು ಅವಳ ಮಾವನಿಂದಲೂ ಇವನಿಂದಲೂ  ಪ್ರತ್ಯೇಕವಾಗಿ ಕಟ್ಟಿಸಿಕೊಂಡರು. ಹೀಗೆ ಎರಡು ವರ್ಷಗಳ ಹಿಂದೆ ಚಳಿಗಾಲ ಮುಗಿದು ವಸಂತ ಕಾಲ ಮೂಡಲು ಇನ್ನೂ ಒಂದು ಋತು ಬಾಕಿ ಇದ್ದಂತೆಯೆ ಇವೆರಡು ಜೋಡಿಗಳು ಬಾಳಿನಲ್ಲಿ ಸತಿ ಪತಿಗಳಾಗಿ ಭಡ್ತಿ ಪಡೆದರು. ಮದುವೆಗೆ ಪತ್ರ ಬರೆದಿದ್ದರೂ ಬರಲಾಗಿರದಿದ್ದ ಅವನ ತಾಯಿ ಹಾಗೂ ತಂಗಿಯಂದರು ತಾವೆ ಕಸೂತಿ ಹಾಕಿ ಪೂರ್ವದ ಭಾರತದಿಂದ ತರಿಸಿದ್ದ ಮಸ್ಲಿನ್ ಬಟ್ಟೆಯಲ್ಲಿ ಲೇಸುಗಳನ್ನ ಕೂರಿಸಿ ತಾವೆ ಹೊಲಿದಿದ್ದ ವಧುವಿನ ಧಿರಿಸು ಹಾಗೂ ವರನಿಗೆ ಪಂಚೆ ಶಲ್ಯ ಉಲ್ಲಾನಿನ ಕೋಟು ಟೈ ಉಲ್ಲಾನ್ ಬಟ್ಟೆಯದ್ದೆ ಚೊಣ್ಣ ಕಳಿಸಿಕೊಟ್ಟಿದ್ದರು. ನೀಲಿಬಣ್ಣದ ಅದರ ಕಿಸೆಯಲ್ಲಿ ಬಿಳಿ ಕರವಸ್ತ್ರ ಕಾಣುವಂತೆ ಇಡಲಾಗಿದ್ದು ಅದರಲ್ಲಿ "ಶುಭ ವಿವಾಹ" ಎಂದು ಅಂದವಾಗಿ ಕಸೂತಿ ಹಾಕಲಾಗಿತ್ತು.

ಪೇಟೆಯ ಗಡಿಬಿಡಿ ಜನಜಂಗುಳಿ ಗಜಿಬಿಜಿ ಕೊಳಕು ವಾತಾವರಣವನ್ನಷ್ಟೆ ಕಂಡು ಬೆಳೆದಿದ್ದ ಅವಳಿಗೆ ಈ ಹಳ್ಳಿಯ ವಾತಾವರಣ ಹೊಸತು. ಮೊದಲಬಾರಿಗೆ ಗಾಡಿಯೇರಿ ಇವನ ಸಂಗಡ ಅತ್ತ ಬರುವಾಗ ಅತ್ತೆ ಮಾವ ವಾಡಿಕೆಯಂತೆ ಅತ್ತಂತೆ ನಟಿಸಿ ಒಂದು ಬುಟ್ಟಿಯನ್ನ ಅವಳ ಕೈ ದಾಟಿಸಿದರು. ಮಾವನ ಹಿರಿಮಗ ಅವಳ ಪುಸ್ತಕ ಹಾಗೂ ಬಟ್ಟೆ ಗಂಟನ್ನ ತಂದು ಬಂಡಿಯಲ್ಲಿಟ್ಟ. ಕೈ ಚೀಲದಲ್ಲಿ ರಾತ್ರಿಯೂಟಕ್ಕೆ ಪೇಸ್ಟಿˌ ಚೂರು ಕೇಕ್ˌ ಚೀಸ್ ಗೆಡ್ಡೆ ಹಾಗೂ ಬೆಣ್ಣೆಮುದ್ದೆಗಳಿದ್ದವು. ಅದಷ್ಟೆ ಅವಳಿಗೆ ಅವಳ ತವರಿನಿಂದ ಬಂದಿದ್ದ ಸ್ತ್ರೀಧನ! ಇನ್ನು ಅವಳ ಪಾಲಿಗೆ ಪಟ್ಟಣದಂಚಿಗೆ ಸಿಕ್ಕಿದ್ದ ಪಿತ್ರಾರ್ಜಿತದ ನಿವೇಶನ ವಿಶಾಲವಾಗಿದ್ದು ಅದರ ಎರಡೂ ಬದಿ ಹೊಸತಾಗಿ ಮನೆ ಕಟ್ಟುತ್ತಿದ್ದರು. ಆದಷ್ಟು ಬೇಗ ತಾನೂ ಸಹ ಅಲ್ಲೊಂದು ಮನೆ ಕೊಟ್ಟಿಗೆ ಕಟ್ಟಿ ಪೇಟೆಯಲ್ಲೂ ಒಂದು ತುರ್ತು ಅಗತ್ಯದ ಪುಟ್ಟ ಪಟ್ಟಣದ ಮನೆ ಮಾಡುವ ಆಲೋಚನೆ ಅವನಿಗೆ ಬಂತು.


ವಿಶಾಲ ಭೂಮಿˌ ದೂರದೂರವಿರುವ ತೋಟದ ಮನೆಗಳುˌ ಬೇಸಿಗೆಯಲ್ಲಿ ಕರಗಿ ನೀರಾದರೆ ಸುತ್ತಿ ಬಳಸಿ ಹೋಗುವಾಗ ಪಟ್ಟಣವನ್ನ ಮತ್ತೂ ಮೂರು ಮೈಲಿ ದೂರ ಮಾಡುವ ಸೋಮ ಸರೋವರದ ನೀರ್ಗಲ್ಲುಗಳ ಮೇಲೆಯೆ ಬಂಡಿ ಜಾರಿಕೊಂಡು ಗಮ್ಯ ಮುಟ್ಟಿದ್ದು. ಹಾದಿಯುದ್ದ ಹಿಮಪಾತವಾಗುವಾಗ ಎಲೆ ಉದುರಿಸಿಕೊಂಡು ಹಿಮ ಹೊದ್ದು ನಿಂತಿದ್ದ ಅಗಾಧ ಗಾತ್ರಗಳ ಪೈನ್ ಓಕ್ ಸಿಲ್ವರ್ ನೀಲಗಿರಿ ಮರಗಳ ಸಾಲುಗಳಿದ್ದ ಕಾಡು ಕಾಣ ಸಿಕ್ಕಿದ್ದುˌ ಅವಳಲ್ಲಿಗೆ ಹೋದ ವಾರವೆ ಬೆಳದಿಂಗಳ ರಾತ್ರಿಯೊಂದರಲ್ಲಿ ಪಶ್ಚಿಮದಿಂದ ಪೂರ್ವದೆಡೆಗೆ ಸಾಗಿ ಹೋಗುತ್ತಿದ್ದ ಕತ್ತೆ ಗಾತ್ರದ ತೋಳಗಳ ಹಿಂಡು ಇವರ ಮನೆ ಕೊಟ್ಟಿಗೆ ಇವೆಲ್ಲವನ್ನೂ ಹಾದು ಹೋದದ್ದು. ಹೋಗುವಾಗ ಅವುಗಳ ಅಸಂಖ್ಯ ಗುಂಪು ಬೆಳದಿಂಗಳಲ್ಲಿ ಕೊಟ್ಟಿಗೆ ಮನೆಯ ಗೋಡೆಯನ್ನ ತಮ್ಮ ಉಗುರಲ್ಲಿ ಕೆರೆದಿದ್ದ ಗುರುತು ಬೆಳಗ್ಯೆ ಕಂಡದ್ದು. ಇವರ ಹಜಾರದ ಗೋಡೆಯಾಚೆ ಕೊಂಚ ಕಾಲ ನಿಂತಿದ್ದ ಗಡವ ತೋಳವೊಂದು ಕಿಟಕಿಯೆತ್ತರ ನಿಂತು ಗಾಜಿನಲ್ಲಿ ಬೆಳಕಿದ್ದ ಒಳಾವರಣ ದಿಟ್ಟಿಸಿದ್ದು. ಗೋಡೆಯಾಚೆಯ ಅದರ ಉಸಿರಿನ ಬಿಸಿ ಈಚೆಗೂ ಅನುಭವಕ್ಕೆ ಬಂದದ್ಧು ಇವೆಲ್ಲವೂ ಅವಳ ಪಾಲಿಗೆ ತುಂಬಾ ಹೊಸದು. 


ರೈತಾಪಿ ಬಾಳ್ವೆಯಾದರೂ ಸರಿ ಸ್ವಂತದ ಮನೆಯಲ್ಲಿ ಚಿರಕಾಲ ಇರುವ ಅವಳ ಕನಸು ಈ ಮೂಲಕ ನನಸಾಗಿತ್ತು. ಜೊತೆಗೆ ಪ್ರೀತಿಯ ಉತ್ತುಂಗದಲ್ಲಿರಿಸಿದ್ದ ಅವನು ಜೊತೆಯಲ್ಲಿದ್ದ. ಅವಳಿಗೆ ಬೇಕಿದ್ದ ಬಾಳ್ವೆ ಇದೇನೆ.



( ಮುಂದುವರೆಯುವುದು.)

22 January 2022

ಅವನ ಕಥೆ ಅವಳ ಜೊತೆ.... ೧

ಅವಳ ಕಥೆ ಅವನ ಜೊತೆ....



ಕಾರ್ಗತ್ತಲು ಕವಿದ ನೆಟ್ಟಿರುಳ ರಾತ್ರಿಯಲ್ಲಿ ಒಬ್ಬಂಟಿಯಾಗಿ ಏಕಾಂಗಿಯಾಗಿ ನಿಂತಿರುವ ಹಿಮಚ್ಛಾದಿತ ಊರಿನ ವಿಶಾಲ ಜಮೀನಿನ ಮಧ್ಯದ ತೋಟದ ಮನೆ. ಓಕ್ ಮತ್ತು ಪೈನ್ ಮರಗಳ ಹಲಗೆಗಳನ್ನೆ ನಯಗೊಳಿಸಿ ನೆಲಕ್ಕೂ ಹಾಸಿ ಅದರ ಮೇಲೆ ನೆಲಕಂಬಳಿ ಹೊಚ್ಚಿˌ ಮಾಡಿಗೂ ಅದನ್ನೆ ಹೊಸೆದು ಮೇಲೆ ನೀರು ಸಂದುಗಳಿಂದ ಒಳಗೆ ಸೋರದಂತೆ ಟಾರು ಕಾಗದ ಅಂಟಿಸಿˌ ಗೋಡೆಗಳೂ ಒಂದಕ್ಕೊಂದು ಬೆಸೆದ ಪೈನ್ ಮರದ ಧಿಮ್ಮಿಗಳೆ ಆಧಾರ. ನಡುವಿನ ನಾಲ್ಕು ಸರಳುಗಳಿಲ್ಲದ ಖಾಲಿ ಫ್ರೇಮಿನ ಕಿಟಕಿಗಳಿಗೆ ಮೇಲೆತ್ತುವ ಸೌಕರ್ಯವಿದ್ದು ಪಾರದರ್ಶಕ ಗಾಜು ಹಾಕಲಾಗಿದೆ. 


ಒಳಗೊಂದು ಮೊಂಬತ್ತಿಯ ಬೆಳಕಲ್ಲಿ ಅಗ್ಗಷ್ಟಿಕೆಯ ಹತ್ತಿರದ ಅತ್ತಿತ್ತ ವಾಲುವ ಆರಾಮ ಕುರ್ಚಿಯಿಂದೆದ್ದು ತಲೆಗೆ ಮುಂಗಾಪು ಕಾಲಿಗೆ ಕಾಲುಚೀಲ  ದೇಹಕ್ಕೆ ಸ್ವೆಟರ್ ಹಾಕಿರುವ ಅವಳು ಆಗಾಗ ಕಿಟಕಿಯಾಚಿನ ಕತ್ತಲಲ್ಲಿ ಹಣಕುತ್ತಾ ಲಾಟೀನಿನ ಮಿಣುಕು ಬೆಳಕು ನಿಡುಸುಯ್ಯುವ ಕುಳಿರ್ಗಾಳಿಗೆ ಅತ್ತಿಂದಿತ್ತ ಹೊಯ್ದಾಡುತ್ತಿರುವ ಕೊಂಚ ದೂರದ ಕೊಟ್ಚಿಗೆಯ ಕಡೆಗೊಮ್ಮೆˌ ಹಗಲಲ್ಲಿ ಪೇಟೆಗೆ ಹೋಗಿದ್ದ ಅವನು ತಿರುಗಿ ಬಂದಾನೆಯೆ ಎಂದು ದಾರಿಯ ಕಡೆಗೊಮ್ಮೆ ಆತಂಕದಲ್ಲಿ ದಿಟ್ಟಿಸುತ್ತಾ ನಿರೀಕ್ಷೆಯಲ್ಲಿ ಕಾಯುತ್ತಿದ್ದಾಳೆ. ಭೋರಿಟ್ಟು ಬೀಸುತ್ತಿರುವ ಹಿಮ ಸುರಿವ ಚಳಿಗಾಳಿಗೆ ಕಿಟಕಿ ಬಾಗಿಲುಗಳನ್ನ ತೆಗೆಯುವ ಹಾಗೆಯೂ ಇಲ್ಲ.


ಹೊರಬಿಟ್ಟ ಉಸಿರೂ ಹಿಮಗಟ್ಟುವ ಹಾಗಿರುವ ವಾತಾವರಣದಲ್ಲಿ ಮನೆಯೊಳಗಿನ ಅಗ್ಗಿಷ್ಟಿಕೆಯಲ್ಲಿ ಕೋಣೆ ಬೆಚ್ಚಗಿರಿಸಲು ಕಲ್ಲಿದ್ದಲು ಪೈನ್ ಬೇರಿನ ಬೊಡ್ಡೆಯೊಂದಿಗೆ ಉರಿಯುತ್ತಿದೆ. ಇದ್ದಿಲ ಮಸಿಕೊಳವೆಯಿಂದಲೂ ಕುಳಿರ್ಗಾಳಿ ಭೋರ್ಗೆರೆಯುತ್ತಾ ಒಳ ನುಗ್ಗಲು ಹವಣಿಸುತ್ತಿದೆ. ಅತಿ ಹತ್ತಿರದ ಇಂತದ್ದೆ ಇನ್ನೊಂದು ತೋಟದ ಮನೆ ಕೇವಲ ಹದಿನೈದು ಮೈಲಿ ದೂರದಲ್ಲಿದೆ.

ಅವನು ಈ ಚಳಿ ಸೀಳುತ್ತಾ ತನ್ನ ಕುದುರೆಯೇರಿ ಬಂದಾನೆಯೆ? ಕೊಟ್ಟಿಗೆಯಲ್ಲಿ ಗೊಂತಿಗೆ ಕುದುರೆ ಕಟ್ಟಿ ಅದಕ್ಕೆ ಹುರುಳಿ ಹಾಕಿ. ಮೈ ತಿಕ್ಕಿ ಮಾಲೀಷು ಮಾಡಿˌ ಪಕ್ಕದಲ್ಲೆ ಮುದುಡಿ ಮಲಗಿರಬಹುದಾದ ದನ ಲಕ್ಷ್ಮಿ ಮತ್ತವಳ ಪುಟ್ಟ ಕರುವಿಗೆ ಹುಲ್ಲು ಹಾಕಿ ನೀರಿಟ್ಟಾನೆಯೆ? ಅಗ್ಗಿಷ್ಟಿಕೆ ಸಮೀಪ ಬಿಸಿ ಅರಸಿ ಮುದುಡಿ ಮಲಗಿರೋ ನಾಯಿ ಕರಿಯ ಹಾಗೂ ಒಲೆಯ ಸಮೀಪ ಬೆಚ್ಚಗೆ ಮಲಗಿರೋ ಬೆಕ್ಕು ಲಿಲ್ಲಿ ಮತ್ತವಳ ಮರಿಗಳ ಮೈ ತಡವಿಯಾನೆಯೆ?

**********


ಸಂಜೆಗತ್ತಲು ಕವಿಯುವ ಮೊದಲು ತೋಟದ ಮನೆಯನ್ನ ಮರಳಿ ಬಂದು ಮುಟ್ಟಬೇಕು ಅಂತಲೆ ನಸುಕಿನ ಚುಮುಚುಮು ಚಳಿ ಆರುವ ಮೊದಲೆ ತನ್ನ ವಾಹನವಾಗಿರುವ ಅರೇಬಿಯನ್ ಕಂದು ಕುದುರೆ ಸುಲ್ತಾನನ ಬೆನ್ನಿಗೆ ಜೀನೇರಿಸಿ ತಾನು ಅದರ ಮೇಲೆ ಕೂತವನೆ ಪಟ್ಟಣದ ದಿಕ್ಕಿಗೆ ಪಯಣವನ್ನವನು ಆರಂಭಿಸಿದ್ದ. 

ಸಾಮಾನ್ಯವಾಗಿ ಸುಲ್ತಾನನ ತಾಯಿ ರಾಜಿಯ ಸವಾರಿ ಮಾಡುತ್ತಾ ಹೀಗೆ ಪಟ್ಟಣದ ಕಡೆಗಿನ ಕೆಲಸಗಳಿಗೆ ಹೋಗೋದು ರೂಢಿ. ಆದರೆ ರಾಜಿ ಈಗ ತುಂಬು ಗರ್ಭಿಣಿ. ಇನ್ನೊಂದು ವಾರದಲ್ಲಿ ಮರಿ ಹಾಕುವ ಹಾಗಿದ್ದಾಳೆ. ಇಂತಹ ಪರಿಸ್ಥಿತಿಯಲ್ಲಿ ಮೂವತ್ತು ಮೈಲಿ ಹೋಗಿ ಮೂವತ್ತು ಮೈಲಿ ತಿರುಗಿ ಬರಲು ಅವಳಿಗೆ ಪ್ರಯಾಸವಾದೀತು. ಹೀಗಾಗಿ ಅನನುಭವಿ ಪಡ್ಡೆ ಸುಲ್ತಾನನ್ನೆ ಅಣಿಗೊಳಿಸಿ ಸವಾರಿ ಹೊರಟಿದ್ದನಿವನು.

ಸುಲ್ತಾನನಿಗಿದು ಎರಡನೆ ಪಟ್ಟಣದೆಡೆಗಿನ ಪ್ರಯಾಣ. ಅವನ ಉತ್ಸಾಹ ಅದೇನೆ ಇದ್ದರೂ ಇನ್ನೂ ಅವನು ಸಾಕಷ್ಟು ಪಳಗಬೇಕಿರೋದು ಬಾಕಿ ಉಳಿದಿತ್ತು. ರಾಜಿಯಷ್ಟು ತಾಳ್ಮೆಯ ಸ್ವಭಾವ ಇವನದಾಗಿರಲಿಲ್ಲ. ಕಳೆದ ತಿಂಗಳು ಹದಮಾಡಿದ ಕಾಡುಬಾತುಗಳˌ ಕಾಡುಮೊಲಗಳ ಚರ್ಮಗಳಿದ್ದˌ ವರ್ಷಕ್ಕೊಂದಾವರ್ತಿ ಹೆರೆವ ಸಾಕಿದ ರೊಪ್ಪದ ಸೊಪ್ಪುಕುರಿಗಳ ಉಣ್ಣೆಯ ಕಟ್ಟಿದ್ದˌ ಹದ ಮಾಡಿ ಮಂಜುಗಟ್ಟಿಸಿದ್ದ ಸಾಕಿದ ಬಾತುಕೋಳಿಗಳ ಮಾಂಸದ ಪೊಟ್ಟಣಗಳಿದ್ದˌ ಹದವಾಗಿ ಕೆನೆಕಟ್ಟಿಸಿ ದನ ಲಕ್ಷ್ಮಿ ಹಾಗೂ ಸಾಕೆಮ್ಮೆ ಮಹಿಷಿಯ ಹಾಲಿಂದ ಮಾಡಿದ್ದ ಚೀಸುˌ ಬೆಣ್ಣೆˌ ತುಪ್ಪ ಹಾಗೂ ಗಿಣ್ಣಿನ ಭರಣಿಗಳನ್ನ ಹೇರಿದ್ಢˌ ವರ್ಷದ ಮಾಂಸಕ್ಕಾಗಿ ಕಡಿದಿದ್ದ ಮೂರು ಹಂದಿಗಳ ಮಾಂಸವನ್ನ ಉಪ್ಪು ಹಾಕಿ ಹದಗೊಳಿಸಿ ತುಂಬಿಟ್ಟಿದ್ದ ಸಾಸೇಜಿನ ಕಡಾಯಿಗಳಿದ್ದˌ ಪಕ್ಕದ ತೋಟದ ಮನೆಯ ಲೀಲಕ್ಕ ಎರಡು ವರ್ಷಗಳ ಹಿಂದೆ ಇವರಿಬ್ಬರು ಇಲ್ಲಿ ನೆಲೆಸಲು ಬಂದಿದ್ದ ಹೊಸತರಲ್ಲಿ ಮುತುವರ್ಜಿಯಿಂದ ತನ್ನ ಕೋಳಿಗಳನ್ನ ಕಾವಿಗೆ ಕೂರಿಸಿ ಹೆಣ್ಣು ಹೇಂಟೆಗಳನ್ನೆ ಆಯ್ದು ತಂದು ಕೊಟ್ಚಿದ್ದದು ಇಂದು ಎರಡು ಡಝನ್ ಇದ್ದದ್ದು ಇಪ್ಪತ್ತು ಡಝನ್ನಾಗಿ ಇಟ್ಟಿದ್ದ ನಾಟಿಮೊಟ್ಟೆಗಳೆ ತುಂಬಿದ್ದ ಬುಟ್ಟಿಗಳಿದ್ದˌ ಚಳಿಯ ರಾತ್ರಿಯಲ್ಲಿ ಬೇಟೆಗೆ ಬಲಿಯಾಗಿದ್ದ ಚುಕ್ಕಿ ಜಿಂಕೆಯ ಮಾಂಸವನ್ನ ಟೊಳ್ಳು ಕಾಂಡದಲ್ಲಿ ಮಾಡಿಗೆ ನೇತು ಹಾಕಿ ಹಿಕರಿಯ ಹೊಗೆ ಹಾಕಿ ಕಾಪಿಟ್ಟಿದ್ದ ಕಾಡುಮಾಂಸದ ಖಂಡಗಳ ಸರಗಳಿದ್ದ ಬುಟ್ಟಿಗಳಿದ್ದˌ ಸಾಕಿದ್ದ ಜೇನುಗಳ ಹಿಂಡಿದ ತುಪ್ಪ ಹಾಗೂ ಮೇಪಲ್ ರಸದ ಗಟ್ಟಿ ನೀರುಸಕ್ಕರೆ ತುಂಬಿದ್ದ ಜಾಡಿಗಳಿದ್ದ ಗಾಡಿಯನ್ನ ಎಳೆಯುತ್ತಾ ತೋಟದ ಮನೆಗೆ ಅನತಿ ದೂರದಲ್ಲಿದ್ದ ಚಳಿಗಾಲಕ್ಕೆ ಮಂಜುಗಟ್ಟುವ ಸೋಮ ಸರೋವರದ ನೀರ ಚಪ್ಪಡಿಗಳ ಮೇಲೆಯೆ ಸಾಗಿ ಅವೆಲ್ಲ ಸರಕು ಸರಂಜಾಮುಗಳನ್ನೂ ತನ್ನ ಚೊಚ್ಚಲ ಪಯಣದಲ್ಲಿಯೆ ಯಶಸ್ವಿಯಾಗಿ ಆ ವಿಲಾಸಪುರಿ ಪಟ್ಟಣದ ಪೇಟೆ ಬೀದಿಗಳಿಗೆ ತಂದು ಮುಟ್ಟಿಸಿದ್ದ.


ಆದರೆ ಇಂದು ಎಳೆಯಲು ಗಾಡಿಯಿರಲಿಲ್ಲ. ಅವನ ಬೆನ್ನೇರಿ ಯಜಮಾನ ಜೀನಿನ ಮೇಲೆ ಕೂತಿದ್ದ. ಹೀಗಾಗಿ ಸಹಜವಾಗೊಂದು ಗಾಬರಿ ಮನೆಮಾಡಿತ್ತು. ಇಬ್ಬರ ಮನದೊಳಗೂ.


ಪಟ್ಟಣದ ಪೇಟೆ ಬೀದಿಗಳಲ್ಲಿ ಇವರ ಹಳ್ಳಿಯ ತಾಜಾ ಮಾಲುಗಳಿಗೆ ಭಯಂಕರ ಬೇಡಿಕೆಯಿತ್ತು. ಆದರೆ ಕೊಳ್ಳುವ ವ್ಯವಹಾರಸ್ಥರು ಆ ಅಸಲು ಮಾಲಿಗೆ ತಾವು ಕೊಡಬೇಕಾದ ನಿಖರ ಮೌಲ್ಯಕ್ಕೆ ಮಾತ್ರ ವಿಪರೀತ ಚೌಕಾಸಿ ಮಾಡಿˌ ಕಂಜೂಸುತನವನ್ನ ಅನಾವರಣಗೊಳಿಸುತ್ತಿದ್ದರು. ಹಾಗೆ ಕೊಡುವ ಹಣವನ್ನೂ ಸಹ ಕೂಡಲೆ ಕೊಡದೆ ವಾಯಿದೆಯ ಮೇರೆಗೆ ಮಾಲನ್ನ ಇಳಿಸಿಕೊಳ್ಳುತ್ತಿದ್ದರು. ಅಂತಹ ಒಂದು ವಾಯಿದೆಯ ಮೇಲೆ ಮರು ವಸೂಲಿಯ ಉದ್ದೇಶದಿಂದ ಇವರಿಬ್ಬರ ಜಂಟಿ ಪಯಣ ಪಟ್ಟಣದ ದಿಕ್ಕಿನತ್ತ ಹೊರಟಿತ್ತು.


ಹೊರಗಿನ್ನೂ ಗಾಳಿ ಭೋರ್ಗರೆಯುತ್ತಲೆ ಇತ್ತು. ಅಸಾಧ್ಯ ಚಳಿ ಮೂಳೆಯ ಆಳವನ್ನೂ ಹೊಕ್ಕುವ ಹಾಗಿತ್ತು. ಹಿಮ ನೆನ್ನೆ ಸಂಜೆಗಿಂತ ಎರಡಡಿ ಹೆಚ್ಚು ಬಿದ್ದಿರುವ ಹಾಗಿತ್ತು. ಅದರ ಮೇಲೆಯೆ ಇವರ ಪಯಣ ಸಾಗಿತು. ಸಂಜೆಯೆ ಹಿಂದಿರುಗಿ ಬರುವ ಭರವಸೆಯ ಮೇಲೆ. ಬರಿ ಭರವಸೆಯ ಮೇಲೆ.


*********


ಹಿಮ ಸುರಿತದ ಕಾಲವಾಗಿರುವ ಕಾರಣ ಹಗಲು ಹಾಗೂ ಇರುಳನ್ನ ವಿಭಜಿಸುವ ಪ್ರಕೃತಿ ಸಹಜ ಕಲರವಗಳ ಸೂಚನೆ ಶರತ್ ಋತುವಿನಲ್ಲಿ ಕಾಣಲಾಗಲಿ ಕೇಳಲಾಗಲಿ ಸಿಗುತ್ತಿರಲಿಲ್ಲ. ಹಗಲು ತಡವಾಗಿ ಕಣ್ತೆರೆಯುತ್ತಿತ್ತೇನೋ ಅನ್ನುವ ಹಾಗೆ ಬೆಳಕು ಮೂಡುವಾಗ ಮುಂಜಾವು ಕಳೆದು ಘಳಿಗೆ ಎರಡಾಗಿರುತ್ತಿದ್ದರೆˌ ಮುಸ್ಸಂಜೆಗೆ ಎರಡು ಘಳಿಗೆಗೆ ಮೊದಲೆ ಕತ್ತಲ ಕಾವಳ ಎಲ್ಲೆಲ್ಲೂ ಕವಿದು ಸುಂಯ್ಗುಡುವ ಚಳಿ ಗಾಳಿ ಎಡೆಬಿಡದೆ ಸುರಿವ ಹಿಮ ಇವಷ್ಟೆ ಶಾಶ್ವತ ಸತ್ಯಗಳೇನೋ ಅನ್ನುವ ಭ್ರಮೆ ಮೂಡಿಸುತ್ತಿತ್ತು. 


ಒಳ್ಳೆಯ ಕಸುಬುದಾರ ರೈತಾಪಿಗಳು ತಮ್ಮ ಮನೆಯ ಹಾಗೂ ಕೊಟ್ಟಿಗೆಯ ಮುಂದಿನ ನಾಲ್ಕು ತಿಂಗಳುಗಳ ಖರ್ಚಿಗಾಗುವಷ್ಟು ದವಸ ಧಾನ್ಯ ಚಹಾಪುಡಿ ಸಕ್ಕರೆ ಉಪ್ಪು ಮಸಾಲೆ ಲ್ಯೂಟಸ್ ಎಲೆಗಳು ಕಾಳುಮೆಣಸು ತರಕಾರಿ ಹಣ್ಣು ಮಾಂಸ ಹುಲ್ಲು ಗೋಗ್ರಾಸ ಹುರುಳಿ ಇವನ್ನೆಲ್ಲ ಮೊದಲೆ ಸಂಗ್ರಹಿಸಿಟ್ಟುಕೊಳ್ಳುವ ಚತುರತೆ ಹೊಂದಿರುತ್ತಿದ್ದರು. ಅಂತಹ ಬುದ್ಧಿವಂತರಲ್ಲಿ ಇವನೂ ಒಬ್ಬನಾಗಿದ್ದ.


ಉಳಿದಂತೆ ಆ ನಾಲ್ಕು ತಿಂಗಳು ಮಾಡಲು ಹೆಚ್ಚಿನ ಕೆಲಸವಿರುತ್ತಿರಲಿಲ್ಲ ಎಂದೇನಲ್ಲ. ರೈತಾಪಿಗಳು ಭೂಮಿಯಲ್ಲಿ ದುಡಿಯದ ಕಾಲ ಭೂಮಿಯ ಮೇಲೆ ದುಡಿಯಲು ಬಳಸುವ ಸಾಧನ ಸರಂಜಾಮು ಹಗ್ಗ ಮಿಣಿ ಲಾಳ ಗಾಡಿ ರಿಪೇರಿ ಮಾಂಸ ಹದ ಹಾಕುವುದು ತಾಜಾ ಮಾಂಸ ಬೇಕಾದಾಗ ಕದ್ದಿಂಗಳ ರಾತ್ರಿಗಳಲ್ಲಿ ಹಿಮಕರಡಿ ಹಿಮಸಾರಂಗಗಳ ಬೇಟೆಯಾಡುವುದುˌ ಮುಂಜಾವಿನ ಹೊತ್ತಲ್ಲಿ ಅತಿ ಶೀತದ ಉತ್ತರದಿಂದ ಸುಖಶೀತೋಷ್ಣದ ದಕ್ಷಿಣಕ್ಕೆ ಸಾವಿರಾರು ಮೈಲುಗಟ್ಟಲೆ ವಂಶಾಭಿವೃದ್ಧಿ ಮಾಡಲೆ ಹಾರುವ ಕಾಡುಬಾತುಗಳು ದಾರಿಯ ನಡುವೆ ವಿಶ್ರಾಂತಿಗಾಗಿ ಕೊಂಚ ಕಾಲ ತಂಗುವ ಸೋಮ ಸರೋವರದ ಅಂಚುಗಳಲ್ಲಿ ಕಾದಿದ್ದು ಅದೃಷ್ಟವದ್ದಷ್ಟವನ್ನು ಹೊಡೆದುರುಳಿಸುವುದು. ಅಲ್ಲೆಲ್ಲಾದರೂ ಹೆಪ್ಪುಗಟ್ಟಿದ ಸರೋವರದ ಮೇಲ್ಪದರ ತೆಳುವಾಗಿದ್ದರೆ ಅದನ್ನ ಒಡೆದು ನಾಲ್ಕು ಹಿಡಿ ಓಟ್ಸ್ ಎಸೆದು ಅದರಾಸೆಗೆ ಬರುವ ಭಾರಿ ಗಾತ್ರದ ಮೀನುಗಳನ್ನ ಕಡಿದು ಮೇಲೆಳೆದುಕೊಳ್ಳೋದು. ಮುಂದಿನ ಕ್ರಿಸ್ಮಸ್ಸಿಗೆ ಬೇಕಾದ ಐಸ್ ಕ್ರೀಂ ತಯಾರಿಸಲು ಹಿಮಮಾನವನ ಮಾಡಲು ಅಗತ್ಯವಿರೋವಷ್ಟು ಮಂಜುಗಡ್ಡೆಗಳ ಕಲ್ಲುಹಾಸುಗಳನ್ನ ಸರೋವರದ ಮೇಲಿಂದ ಕೂಯ್ದು ತಂದು ಕೊಟ್ಟಿಗೆ ಪಕ್ಕ ಹೊಟ್ಟು ತುಂಬಿಸಿದ ಗೋಡೆಗಳ ನಡುವೆ ಆ ಶೀತದ ಇಟ್ಟಿಗೆಗಳನ್ನಿರಿಸಿ ಶೀತಗೃಹ ಕಟ್ಟೋದು. ಹರಿದ ಉಡೂಪುˌ ಜಾನುವಾರುಗಳಿಗೆ ತೊಡಿಸುವ ಚಳಿಗಾಪುˌ ನೆಲಹಾಸು ಇವಕ್ಕೆಲ್ಲ ತೇಪೆ ಹಾಕೋದುˌ ಇವಿಷ್ಟೆ ಸಾಲದು ಅಂತ ನಿತ್ಯದ ಮನೆವಗತನ ಹಾಲು ಕರೆಯೋದು ಹುಲ್ಲು ಹಾಕೋದು ಕೊಟ್ಟಿಗೆ ಬೆಚ್ಚಗಿರಿಸಲು ಮುರು ಬೇಯಿಸುವ ಅಲ್ಲಿನ ಒಲೆಗೆ ಪೈನ್ ಬೇರಿನ ಬೊಡ್ಡೆಗಳನ್ನ ತುರುಕುತ್ತಾ ಬೆಂಕಿಯಾರದಂತೆ ನಿಗಾ ವಹಿಸೋದುˌ ಗೊಬ್ಬರ ಎತ್ತಿ ಜಾನುವಾರುಗಳ ಉಚ್ಛೆ ಇಂಗಲು ಮಣ್ಣಿನ ಮೇಲ್ಪದರ ಹಾಕಿರುವ ಕೊಟ್ಟಿಗೆಯ ನೆಲವನ್ನ ಗುಡಿಸೋದು ಹೀಗೆ ದೀನ ನಿತ್ಯದ ಕೆಲಸಗಳಿಗೆ ಬರವಂತೂ ಇರುತ್ತಲೆ ಇರಲಿಲ್ಲ.


ಅದರ ನಡುನಡುವೆ ಹೀಗೆ ಪಟ್ಟಣಕ್ಕೆ ತಮ್ಮ ಕಾಡುತ್ಪತ್ತಿˌ ಬೇಟೆˌ ಕಸೂತಿˌ ಕರಕೌಶಲ್ಯˌ ಉಪ ರೈತಾಪಿ ಕಸುಬುಗಳ ಪದಾರ್ಥಗಳನ್ನ ಮಾರಿ ಖರ್ಚಿಗೆ ನಾಲ್ಕು ಕಾಸು ಮೇಲು ಸಂಪಾದನೆ ಮಾಡೋದು ಇದ್ದೆ ಇರುತ್ತಿತ್ತು. ಅವನು ಅವತ್ತು ಪಟ್ಟಣಕ್ಕೆ ಹೊರಟಿದ್ದನಾದರೂ ಕೊಟ್ಟಿಗೆಯ ಅವನ ನಿತ್ಯದ ನಿರ್ವಹಣೆಯನ್ನ ಮುಗಿಸಿಯೆ ಅದರತ್ತ ಗಮನ ಹರಿಸಬೇಕಿತ್ತು. ಹೀಗಾಗಿ ಒಂದು ಅಂದಾಜಿನ ಮೇಲೆ ತನ್ನ ಎದೆಯ ಮೇಲೆ ಇದ್ದ ಅವಳ ತೋಳನ್ನ ಮೆಲ್ಲಗೆ ಸರಿಸಿ ಮಂದರಿಯಿಂದ ಹೊರಬಿದ್ದ. ಕಟಕಟಿಸುವ ಚಳಿಯ ಘಾಟು ಅರಿವಿಗೆ ಬರುವ ಮೊದಲೆ ತನ್ನ ಒಳ ಉಡುಪು ಧರಿಸಿ ಮೇಲೆ ಮೈ ಬಿಗಿಯುವ ಚೊಣ್ಣ ಮತ್ತು ಅಂಗಿ ಹಾಕಿಕೊಂಡ. ಉಪ್ಪರಿಗೆಯ ಅಗ್ಗಿಷ್ಟಿಕೆ ಆರಿ ಹೋಗುವ ಹಾಗಾಗಿತ್ತುˌ ಅದಕ್ಕಷ್ಟು ಪೈನ್ ಬೊಡ್ಡೆ ಕಲ್ಲಿದ್ದಲು ಹಾಕಿ ಊದಿ ಉರಿಸಿ ಕಾಲುಚೀಲ ಹಾಗೂ ಪಾದರಕ್ಷೆ ಧರಿಸಿ ಕೆಳಗಿಳಿದು ಬಂದ. ಅಲ್ಲೂ ಅಗ್ಗಿಷ್ಟಿಕೆ ಆಗಲೋ ಈಗಲೋ ಅನ್ನುವಂತಿತ್ತು. ಅದಕ್ಕೂ ತಕ್ಕ ವ್ಯವಸ್ಥೆ ಮಾಡಿ ಅದರಲ್ಲೆ ಕ್ಯಾಟೆಲ್ಲಿನಲ್ಲಿ ನೀರು ಕುದಿಯಲಿಟ್ಟು ಹಾಲು ಕರೆದು ತರಲು ಕೊಟ್ಟಿಗೆಯತ್ತ ನಡೆದ. ಮುಂಬಾಗಿಲನ್ನ ತೆರೆದೊಡನೆಯೆ ಶೀತಲ ಸುಂಟರಗಾಳಿ ರಪ್ಪನೆ ಮುಖಕ್ಕೆ ರಾಚಿತು. ಕೊಟ್ಟಿಗೆ ಹಾಗೂ ಮನೆಯ ನಡುವೆ ಕಟ್ಟಿದ್ದ ಹಗ್ಗವನ್ನು ಹಿಡಿದವನೆ ಆ ಕತ್ತಲಲ್ಲಿ ಮನೆಯ ಬಾಗಿಲನ್ನ ಭದ್ರವಾಗಿ ಮುಚ್ಚಿ ಆದಷ್ಟು ಬೇಗ ಕೊಟ್ಟಿಗೆಯನ್ನ ಸೇರಿ ಅಸಾಧ್ಯ ಚಳಿಯ ಅರ್ಭಟಗಳಿಂದ ಪಾರಾದ. ಹೊರಗೆ ಎಡೆಬಿಡದೆ ಹಿಮ ಸುರಿಯುತ್ತಲೆ ಇತ್ತು. ಕೊಟ್ಟಿಗೆ ಕೊಂಚ ಮಟ್ಟಿಗೆ ಬೆಚ್ಚಗಿತ್ತು. ಬಾಗಿಲು ಸರಿಸಿ ಒಳ ಹೊಕ್ಕ ಇವನ ಕಾಲು ಹಜ್ಜೆಯ ಸಪ್ಪಳ ಕೇಳಿದ್ದೆ ತಡ ಲಕ್ಷ್ಮಿ ಆಕಳಿಸಿದಳುˌ ರಾಜಿ ಕೆನೆದಳುˌ ಮಹಿಷಿ ತಲೆ ಅಲ್ಲಾಡಿಸಿ ಟ್ರಾಂಯ್ಗುಟ್ಟಿದಳು. ಒಳಗಿನ ಗೋಡೆಗೆ ನೇತು ಹಾಕಿದ್ದ ಉಷ್ಣತಾ ಮಾಪಕದಲ್ಲಿ ಪಾದರಸದ ಮಟ್ಟ -೨೫ ತೋರಿಸುತ್ತಿತ್ತು. ಆದರೂ ಜಾನುವಾರುಗಳ ಮೈ ಶಾಖ ಹಾಗೂ ಮುಚ್ಚುಗೆಯಿರುವ ಕಾರಣ ಕೊಟ್ಟಿಗೆಯೊಳಗೆ ತಕ್ಕಮಟ್ಟಿನ ಬೆಚ್ಚಗಿನ ವಾತಾವರಣವಿತ್ತು. 



ಅದನ್ನ ಇನ್ನಷ್ಟು ಹೆಚ್ಚಿಸಲು ತಕ್ಷಣ ಅಲ್ಲಿನ ಒಲೆಗೆ ಪೈನ್ ಬೊಡ್ಡೆ ಹಾಗೂ ಕಲ್ಲಿದ್ದಲು ತುಂಬಿ ಊದಿ ಬೆಂಕಿಯನ್ನವ ದೊಡ್ಡದಾಗಿಸಿದ. ನೆಲದಲ್ಲಿದ್ದ ಬಕೆಟಿಗೆ ಕೊಂಚ ಹೊರಗಿನ ಹಿಮ ತುಂಬಿ ತಂದು ಕರಗಲು ಇಟ್ಟ. ಇನ್ನೊಂದು ಒಲೆಗೆ ಮತ್ತಷ್ಟು ಹಿಮ ತುಂಬಿಸಿದ ಕಡಾಯಿಯನ್ನೇರಿಸಿ ಅದಕ್ಕೆ ಬೂಸ ಹಿಂಡಿ ನೆನ್ನೆ ಅರಿದಿದ್ದ ಕ್ಯಾರೆಟ್ ಓಟ್ಸ್ ಒಣ ಹುಲ್ಲಿನ ಪುಡಿ ಸೇರಿಸಿ ಮುರು ಕುದಿಯಲು ಇಟ್ಟ. ಅಲ್ಲಿಗೆ ದಿನಕೃತ್ಯಗಳೊಂದಿಗೆ ಅವನ ಅವತ್ತಿನ ಹಗಲು ಹಾಗೆ ಕಣ್ತೆರೆದಿತ್ತು.


**********

ಹೊರಗೆ ಹಿಮ ಸುರಿತದ ನಿರಂತರತೆಯ ಜೊತೆಜೊತೆ ಜ್ಯುಯ್ಯೆನ್ನುವ ಸದ್ದನ್ನ ಹೊರಡಿಸುತ್ತಾ ಬೀಸುತ್ತಿದ್ದ ಚಳಿಗಾಳಿಯ ಪ್ರಕೋಪ ಮುಂದುವರೆದೆ ಇತ್ತು. ಇವ ಮೊದಲಿಗೆ ಮೂಲೆಯಲ್ಲಿದ್ದ ಸಗಣಿ ಎತ್ತುವ ಕೈ ಬುಟ್ಟಿಯನ್ನ ಎತ್ತಿಕೊಂಡ. ಇವನ ಆಗಮನವನ್ನ ಸ್ವಾಗತಿಸುತ್ತಾ ಕೊಟ್ಟಿಗೆಯ ಜಾನುವಾರುಗಳು ಎದ್ದು ನಿಂತು ಮೈಮುರಿದು ಇವನ ಬಟ್ಟೆಯ ವಾಸನೆಯನ್ನ ಅಘ್ರಾಣಿಸಿ ಪ್ರೀತಿ ಪ್ರಕಟಿಸಿದವು. ಅವುಗಳ ಕುತ್ತಿಗೆಗಳನ್ನ ಉಗುರಲ್ಲಿ ಮೆತ್ತಗೆ ಕೆರೆದು ಇವನೂ ಪ್ರತಿಸ್ಪಂದಿಸಿದ. ಕರುಗಳು ಏಕಾಏಕಿ ನಿದ್ದೆ ಕೆಟ್ಟು ಕಂಗಾಲಾಗಿ ತನ್ನ ಅಮ್ಮಂದಿರ ಕಾಲಡಿ ಹೋಗಿ ಒರಗಿ ನಿಂತವು. ತಾಯಂದಿರು ತಮ್ಮ ತಮ್ಮ ಕಂದಂದಿರನ್ನ ಸಂತೈಸುತ್ತಾ ತಮ್ಮ ತಮ್ಮ ಒರಟು ನಾಲಗೆಯಲ್ಲಿ ಅವುಗಳ ಮೈ ನಕ್ಕಿದವು. ಕಸಬರಿಕೆಯಿಂದ ಕೆಳ ಬಿದ್ದಿದ್ದ ಹುಲ್ಲು ಕಸ ಗುಡಿಸಿ ತೆಗೆದು ಬುಟ್ಟಿಗೆ ಹಿಂದೆ ಹರಡಿದ್ದ ಸಗಣಿಯ ರಾಶಿಯನ್ನ ತುಂಬಿಸಿ ಅದನ್ನ ಅಲ್ಲೆ ಮೂಲೆಯಲ್ಲಿ ರಾಶಿ ಹಾಕಿದ. ಅವಳು ಆಮೇಲೆ ಅದರ ಬೆರಣಿ ತಟ್ಟಲಿದ್ದಳು. ಅಷ್ಟರಲ್ಲಿ ಬಿಸಿನೀರಾಗಿದ್ದ ಕರಗಿದ ಹಿಮ ಹಿತವಾಗಿ ಹಬೆಯಾಡುತ್ತಿತ್ತು. ಒಲೆಯ ಮೇಲಿಂದ ಒಂದು ಚೊಂಬಿನಷ್ಟು ಎತ್ತಿಕೊಂಡು ಕೈತೊಳೆದು ಅದೆ ನೀರಲ್ಲಿ ಮುಖವನ್ನೂ ಮೂಲೆಯ ಬಚ್ಚಲಿನಲ್ಲಿ ಅವಳ ಕೈ ತಯಾರಿಕೆಯ ಸೋಪು ಹಾಕಿಕೊಂಡು ತೊಳೆದುಕೊಂಡ. ಹಲ್ಲು ಕಟಕರಿಸುತ್ತಿದ್ದರೂನು ಮೂಳೆ ಪುಡಿ ಕೂಪಿನ ಇದ್ದಲು ಸೇರಿಸಿ ಮಾಡಿದ್ದ ಹಲ್ಲುಪುಡಿಯಿಂದ ಉಜ್ಜಿ ಮುಖಮಾರ್ಜನ ಮುಗಿಸಿದ.


ಮತ್ತೊಂದು ಒಲೆಯಲ್ಲಿ ಕುದಿಯಲು ತೊಡಗಿದ್ದ ಮುರುವನ್ನ ದೊಡ್ಡ ಕೈಪಾತ್ರೆಯಲ್ಲಿ ತೆಗೆದು ಪಶುಗಳ ಬಾನಿಗಳಿಗೆ ತಂದು ಸುರಿದ. ಅಷ್ಟರಲ್ಲೆ ಆ ಅಸಾಧ್ಯ ಚಳಿಯ ಹೊಡೆತಕ್ಕೆ ಅವು ಅರ್ಧ ಬಿಸಿಯಾರಿರುತ್ತಿದ್ದವು. ಹಬೆಯಾಡುವ ಆ ಬೆಳಗಿನ ಊಟವನ್ನ ಕೊಟ್ಟಿಗೆಯ ಬಂಧುಗಳೆಲ್ಲ ಸಶಬ್ದ ಮೇಯಲಾರಂಭಿಸಿದರು. ಮಾಡಿನ ಅಟ್ಟದಿಂದ ನಾಲ್ಕು ಕಟ್ಟು ರೈ ಹುಲ್ಲನ್ನೂ ಎಳೆದು ಬಿಡಿಸಿ ಹಾಕಿ ಅವರೆಲ್ಲರ ಊಟದ ರುಚಿ ಇನ್ನಷ್ಟು ಹೆಚ್ಚಿಸಿದ. ಕಡೆಗೆ ಗೊಂತಿಗೆ ಸಮೀಪದ ಗೋಡೆಯ ಮೊಳೆಗೆ ತೂಗು ಹಾಕಿದ್ದ ಮರದ ಬಕೇಟಿನ ಜೊತೆ ಗೂಡಿನಲ್ಲಿಟ್ಟು ಗಟ್ಟಿಯಾಗಿದ್ದ ಅಲೀವ್ ಎಣ್ಣೆಯ ಮಿಳ್ಳಿಯನ್ನ ಒಲೆಯ ಬೆಂಕಿಗೆ ಹಿಡಿದು ಚೂರು ಕರಗಿಸಿ ತನ್ನ ಪುಟ್ಟ ಸ್ಟೂಲನ್ನ ಅವರ ಕೆಚ್ಚಲಿಗೆ ಸಮಾಂತರವಾಗಿರಿಸಿ ಕೂತು ಮೆಲ್ಲಗೆ ಚಳಿಗೆ ಸೆಟೆದ ಆ ಮೊಲೆ ತೊಟ್ಟುಗಳಿಗೆ ಬಕೇಟಿನಲ್ಲಿದ್ದ ಬಿಸಿನೀರನ್ನ ಚುಮುಕಿಸಿದˌ ಮರಗಟ್ಟಿದಂತಿದ್ದ ಕೆಚ್ಚಲಿನಲ್ಲಿ ಅದರಿಂದ ಜೀವ ಸಂಚಾರವಾದಂತಾಗಿ ಪಶುಗಳು ಹಿತಾನುಭಾವ ಅನುಭವಿಸಿದವು. ಅನಂತರ ಅದನ್ನ ಒರೆಸಿ ಮಿಳ್ಳಿಯೊಳಗೆ ಬೆರಳಿಳಿಸಿ ಎಣ್ಣೆ ಸೋಕಿದ ಬೆರಳನ್ನ ಅವುಗಳ ಕೆಚ್ಚಲ ಹಾಗೂ ಮೊಲೆ ತೊಟ್ಟಿನ ಸುತ್ತ ಹಚ್ಚಿ ಮೃದುವಾಗಿ ಒತ್ತುತ್ತಾ ಮಾಲೀಸು ಮಾಡುವವನಂತೆ ನೀವಿದ. ಪಶುಗಳು ಸುಖಾನುಭಾವದಲ್ಲಿ ಮೆಲುವಾಗಿ ಮುಲುಕುವಂತೆ ಧ್ವನಿ ಹೊರಡಿಸಿದವು. ಈಗ ಕರುಗಳ ಕುತ್ತಿಗೆಯ ಹಗ್ಗ ಕಳಚಿ ಎರಡು ಮೊಲೆ ತೊಟ್ಟುಗಳನ್ನ ಅವಕ್ಕೆ ಚೀಪಲು ಬಿಟ್ಟು ಉಳಿದೆರಡರಲ್ಲಿ ಸರಸರನೆ ಹಾಲೆಳೆದುಕೊಂಡು ನೊರೆ ಹಾಲಿಂದ ಬಕೇಟು ತುಂಬಿಸಿಕೊಂಡ. ನಾಲ್ಕು ಬಕೇಟುಗಳು ತುಂಬುತ್ತಲೆ ಎದ್ದು  ಮೇಲೆ ಕಟ್ಟೆಯ ಮೇಲೆ ಅವನ್ನಿಟ್ಟು ತನ್ನ ಕಾಲು ಸುತ್ತಿ ಸುತ್ತಿ ಬರುತ್ತಿದ್ದ ಹಟ್ಟಿಯ ಅಟ್ಟದ ಉಸ್ತುವರಿ ಹೊತ್ತ ಇಲಿ ಬೇಟೆ ನಿಪುಣೆ ಲಿಲ್ಲಿಯ ತಟ್ಟೆಗೊಂದಷ್ಟು ನೊರೆ ನೊರೆ ಹಾಲನ್ನ ಬಗ್ಗಿಸಿದ. ಬೆಚ್ಚನೆ ಹಾಲನ್ನ ತೃಪ್ತ ಭಾವದಿಂದ ಬಾಲ ಕುಣಿಸುತ್ತಾ ಬಾಣಂತಿ ಲಿಲ್ಲಿ ಸಶಬ್ದವಾಗಿ ಹೀರ ತೊಡಗಿದಳು.

ಈಗ ಹೊರಡುವ ತಯಾರಿ ಮಾಡಬೇಕಿತ್ತು. ಅಷ್ಟರಲ್ಲಿ ಹುರುಳಿಯ ಹಂಡೆಯಲ್ಲಿ ಹಬೆಯಾಡ ತೊಡಗಿತ್ತು. ರಾಜಿ ಮತ್ತವಳ ಮಗ ಸುಲ್ತಾನನಿಗೆ ಅದನ್ನ ಕೈ ಪಾತ್ರೆಯಿಂದೆತ್ತಿ ಬಾನಿಗೆ ಬಡಿಸಿದ. ಪಶುಗಳ ಖಾಲಿ ಬಾನಿಗಳಿಗೆ ಕುಡಿಯಲು ನೀರು ಸುರಿದ. ರಾಜಿಯ ಮೈ ಉಜ್ಜಿ ಮಾತನಾಡಿಸಿದ. ಸುಲ್ತಾನನಿಗೂ ಮೈ ತಿಕ್ಕಿ ಕಿವಿಗಾಪುˌ ಜೀನುˌ ಲಗಾಮು ಎಲ್ಲಾ ತೊಡಿಸಿದ. ಪೇಟೆಯಂಚಿನ ಮಠದ ಜಾತ್ರೆಯಲ್ಲಿ ಅವನಿಗಂತಲೆ ಆಯ್ದು ತಂದಿದ್ದ ಹೊಸ ಚರ್ಮದಂಚಿನ ಮೆತ್ತನೆ ಜೀನು ಅವನ ಬೆನ್ನಿಗೆ ಹೇಳಿ ಮಾಡಿಸಿದಂತಿತ್ತು. ಆದರೆ ಅದರ ಅನುಭವ ಇದ್ದಿರದ ಸುಲ್ತಾನ ಜೀನನ್ನ ಕೆಡವಲು ಬೆನ್ನು ಕುಣಿಸಿ ವಿಫಲನಾದ. ಬಿಗಿಯಾಗಿ ಬಿಗಿದಿದ್ದ ಅದು ತುಸುವೂ ಅಲುಗಾಡಲಿಲ್ಲ.


ಹಾಲು ತುಂಬಿದ್ದ ಬಕೇಟುಗಳನ್ನ ಸುಳಿಗಾಳಿಯ ಹೊಡೆತಕ್ಕೆ ಚೂರೂ ಚೆಲ್ಲದಂತೆ ಕೊಟ್ಟಿಗೆಯಿಂದ ಮನೆಗೆ ಕೊಂಡೊಯ್ಯುವುದು ಸವಾಲಿನ ಕೆಲಸವೆ ಸರಿ. ಅಡ್ಡಾದಿಡ್ಡಿ ಬೀಸುವ ಚಳಿಗಾಳಿ ಹಾಲನ್ನೆಲ್ಲ ಹಾರಿಸಿಕೊಂಡು ಹೋಗುತ್ತದೆ. ಇವನೋ ಕಷ್ಟದಿಂದ ಬಕೇಟುಗಳ ಮುಚ್ಚಳ ಹಾಕಿ ಮನೆಯತ್ತ ಬಾಗಿಲು ತೆರೆದು ಭದ್ರ ಪಡಿಸಿ ಒಂದು ಕೈಯಲ್ಲಿ ತಂತಿ ಮತ್ತೊಂದು ಕೈಯಲ್ಲಿ ಬಕೇಟುಗಳ ತೂಗಿದ್ದ ಸನಿಕೆ ಕೋಲನ್ನ ಹಿಡಿದು ಮುಂದುವರೆದ ಉತ್ತರದಿಂದ ಬೀಸಿ ಬರುತ್ತಿದ್ದ ಕುಳಿರ್ಗಾಳಿ ಅಳ್ಳೆದೆಯವರನ್ನೆಲ್ಲ ಕೆಂಗೆಡಿಸುವಂತೆ ಅರ್ಭಟಿಸುತ್ತಾ ಬೀಸುತ್ತಲೆ ಇತ್ತು. ಕಷ್ಟದಲ್ಲಿ ಮನೆ ಸೇರಿ ನೋಡಿದರೆ ಅರ್ಧ ಪಾಲು ಹಾಲು ಗಾಳಿಗೆ ನೈವೇದ್ಯವಾಗಿದ್ದು ಸ್ಪಷ್ಟವಾಯಿತು.


ಇವಳು ಅವನ ಹಿಂದೆಯೆ ಎದ್ದು ಒಳ ಉಡುಪು ಮೇಲು ಉಡುಪು ಉಣ್ಣೆಯ ಟೋಪಿ ಕಾಲ್ಚೀಲ ಬೂಟು ಕಿವಿಗಾಪು ಕೈ ಗವಸು ಎಲ್ಲಾ ಧರಿಸಿ ಬೆಚ್ಚಗಾಗಿˌ ಕೆಳಗಿಳಿದು ಬಂದು ಮೂಲೆಯ ಸಿಂಕಿನಲ್ಲಿ ಮುಖ ಹಾಗೂ ದಂತ ಮಾರ್ಜನ ಮುಗಿಸಿ ಇವನು ಕುದಿಯಲಿಟ್ಟಿದ್ದ ಕೆಟಲಿಗಷ್ಚು ಟೀ ಸೊಪ್ಪು ಸುರಿದು ಒಲೆ ಹೊತ್ತಿಸಿ ಆ ಹೊತ್ತಿಗೆಲ್ಲಾ ರೈ ರೊಟ್ಟಿ ಓಟ್ಸ್ ದೋಸೆ ಮಾಡಿ ಅವನ ಬುತ್ತಿ ಕಟ್ಟಿಟ್ಟುˌ ಅವ ಕರೆದು ತಂದ ತಾಜಾ ಹಾಲು ಬೆರೆಸಿದ ಚಹಾ ಸುರಿದು ಕುಡಿಯಲು ಕೊಟ್ಟಳು. ಚಳಿಗೆ ಬಿಸಿ ಚಹಾ ತುಂಬಾ ಹಿತವೆನಿಸಿ ಊಟದ ಟೇಬಲ್ಲಿನ ಪಕ್ಕದ ಕುರ್ಚಿಯಲ್ಲಿ ಕೂತು ಅವನದನ್ನ ಆಸ್ವಾದಿಸಿದ. ಕಾದ ಹಂಚಿಗೆ ಹಂದಿ ಕೊಬ್ಬು ಸವರಿ ಓಟ್ಸಿನ ದೋಸೆ ಎರೆದು ತಟ್ಟೆಗೆ ದಾಟಿಸಿ ಬೆಣ್ಣೆಮುದ್ದೆ ಹಾಗೂ ಮೇಪಲ್ ಸಕ್ಕರೆಯ ಅಲಂಕಾರ ಮಾಡಿ ಅದನ್ನವನಿಗೆ ತಿನ್ನಲು ತಂದಿಟ್ಟಳು. ಹೆಚ್ಚು ಮಾತುಕತೆಯಿಲ್ಲದೆ ಉಪಹಾರ ಮುಗಿಸಿದˌ ಈ ಓಟ್ಸ್ ದೋಸೆಯದೆ ಒಂದು ರಾಮಾಯಣ. ಹುದುಗು ಬಂದು ಒಂದು ಮಟ್ಟಿನ ಹುಳಿ ರುಚಿ ಅದಕ್ಕೆ ಬರಲಿ ಅಂತ ಹತ್ತು ದಿನಗಳ ಹಿಂದೆನೆ ಅದನ್ನ ರುಬ್ಬಿ ಹಿಟ್ಟು ಮಾಡಿ ನೆನೆ ಹಾಕಿಟ್ಟಿದ್ದಳು. ಯಿಸ್ಟ್ ಬೆರೆಸಿದ್ದರೂ ಸಹ ಈ ಅಸಾಧ್ಯ ಚಳಿಯಲ್ಲಿ ಅದು ಅಷ್ಟು ಹುದುಗಿದ್ದೆ ಹೆಚ್ಚು. ಜೊತೆಜೊತೆಗೆ ಅವನ ಮಧ್ಯಾಹ್ನದೂಟದ ಬುತ್ತಿಗೆ ರೈ ರೊಟ್ಟಿ ಬೇಯಿಸಿದ ಬೀನ್ಸ್ ಮತ್ತೆ ಹಂದಿ ಮಾಂಸದ ಬೇಕನ್ ಅಡುಗೆ ಮನೆಯಲ್ಲಿ ಮಸಾಲೆˌ ಉಪ್ಪುˌ ಒಗ್ಗರಣೆ ಹೀಗೆ ಒಂದೊಂದನ್ನೆ ಹಾಕಿಸಿಕೊಳ್ಳುತ್ತಾ ತಯಾರಾಗುತ್ತಿತ್ತು. 

ಸಂಜೆ ಅದೆಷ್ಟೆ ತಡವಾದರೂ ಸಹ ಮರಳಿ ಬಂದೆ ಬರುತ್ತೇನೆ ಅಂತ ಅವನಂದಿರೋದರಿಂದ ಅವಳು ರಾತ್ರಿಗೂ ಸೇರಿಸಿ ಬುತ್ತಿಗಂಟನ್ನ ಕಟ್ಟಲಿಲ್ಲ. ಕಳೆದ ಚಳಿಗಾಲದಲ್ಲಿ ಮಾಂಸಕ್ಕಾಗಿ ಕೊಂದಿದ್ದ ಹಂದಿಗಳ ಕೊಬ್ಬಿಗೆ ನೊರೆಕಾಯಿ ಹಾಗೂ ಒಲೆಯ ಬೂದಿ ಸೇರಿಸಿ ತಾನು ತಯಾರಿಸಿದ್ದ ಸೋಪಿನ ಕಟ್ಟುಗಳಿದ್ದˌ ಬೇಟೆಗೆ ಬಲಿಯಾಗಿದ್ದ ಮೂರು ಹಿಮಕರಡಿಗಳ ಕೊಬ್ಬಿನಿಂದ ತಯಾರಾಗಿದ್ದ ಮೇಣದಬತ್ತಿಯ ಕಟ್ಟುಗಳಿದ್ದ ಅವನ ಬೆನ್ನುಚೀಲದಲ್ಲಿ ಈ ರೊಟ್ಟಿಯ ಬುತ್ತಿ ಹಾಗೂ ನೀರಿನ ಶೀಶೆಯನ್ನೂ ಇಟ್ಟು ಅವಳು ಅದರ ಬಾಯಿ ಕಟ್ಟಿದಳು. ಅವಳ ತಯಾರಿಕೆಯ ಈ ವಸ್ತುಗಳಿಗೂ ಪಟ್ಟಣದ ಬಂಡಸಾಲೆಗಳಲ್ಲಿ ಬೇಡಿಕೆಯಿತ್ತು.

( ಮುಂದುವರೆಯವುದು.)


https://youtu.be/4OaDgHVkAQs


https://youtu.be/acTPdB5e-J0


https://youtu.be/-_zza7gqArs


https://youtu.be/3hI1xiPCoeQ