22 December 2014

ಭರವಸೆಯೊಂದೆ ಬದುಕು.......




ಕನಸುಗಳ ತೋಟದ ಮಾಲಿ ನಾನು,
ಅರಳಿದ ಹೂಗಳನ್ನ ಕೀಳುವ ಅಧಿಕಾರವಿಲ್ಲ....
ಇನ್ಯಾರ ಕಣ್ಣೂ ಅದರ ಮೇಲೆ ನಾನಿರುವಾಗ ಬೀಳುವಂತಿಲ್ಲ,
ನನಸಿನ ಲೋಕದ ಹಮಾಲಿಯೂ ಆಗಿಲ್ಲವೇನು?/
ಸಂಕಷ್ಟಗಳ ಮೂಟೆಯನ್ನ ನಿತ್ಯ ಹೊತ್ತೇ ಇದ್ದರೂ
ಬಾಗಿದ ಬೆನ್ನಿನಡಿಯಲ್ಲಿಯೆ ಕಿರು ನಗುವುದು ರೂಢಿಯಾಗಿದೆ
ಎಲ್ಲರ ಬದುಕಿನ ನೀತಿಯೂ ಇಷ್ಟೆ.....
ಇದಕ್ಕೆ ಹೊರತಲ್ಲ ನಾನೂನು//


ಈ ಭರವಸೆ ನಾಳಿನ ನಿರೀಕ್ಷೆಗಳಿವೆಲ್ಲ
ನಮಗೆ ನಾವೆ ನಿತ್ಯ ಕೊಟ್ಟುಕೊಳ್ಳುವ ನಿರಂತರ ಜಾಮೀನು,
ಕಹಿ ಮಾತ್ರೆ ಹೌದು ಜೀವನ
ಅದಕ್ಕೆ ತುಸುವಾದರೂ ಸರಿ೮ ಸೇರಿಸಿಕೊಳ್ಳಲೇಬೇಕು ಸಂತಸದ ಹನಿ ಜೇನು/
ಹೋಗಲೇ ಬೇಕು ಪ್ರತಿಯೊಬ್ಬರೂ
ಈ ಜಗವ ಶಾಶ್ವತವಾಗಿ ಒಂದು ದಿನ ತೊರೆದು
ಇದರಲ್ಲಿ ರಿಯಾಯತಿ ಯಾರಿಗಾದರೂ ಇದೆಯೇನು?,
ಇಂದು ಅವನು ನಾಳೆ ನೀನು
ಹಿಂದೆಯೆ ಒಂದಿನ ನಾನು//


ಅಂಗೈ ರೇಖೆಗಳ ನೋಡಿ ಒಬ್ಬರ ಅದೃಷ್ಟ ಅಳಿಯಲಾಗುವುದಿಲ್ಲ
ಕೈಯಿಲ್ಲದ ಹೆಳವರಿಗೂ ಒಳ್ಳೆಯ ಕಾಲ ಒಂದಿದ್ದೇ ಇರುತ್ತದೆ,
ಹಣೆಬರಹವ ನಂಬಿ ಎಂದೂ ವಿಧಿ ಮಣೆ ಹಾಕುವುದಿಲ್ಲ.....
ನೊಂದು ತಲೆಯ ಮೇಲೆ ಕೈಯಿಟ್ಟು ಕೂತವನಿಗೂ
ಸಂತಸದ ಕಾಲವೊಂದನ್ನ ತಪ್ಪದೆ ಹೊತ್ತು ತರುತ್ತದೆ/
ಕೆಲವು ಯೋಜನೆಗಳು ಮನದೊಳಗೆ ಖಚಿತವಿದ್ದರೆ ಸಾಕು
ಸೋತು ಸುಮ್ಮನೆ ಕೂರದೆ ಸಾಧನೆಯ
ಕಿರು ಹಾದಿಯೆಡೆ ಕೆಲವು ಹೆಜ್ಜೆ ಹಾಕಲೇಬೇಕು,
ಅದೃಷ್ಟ ಆಗ ತಗ್ಗಿಬಗ್ಗಿ
ನಮ್ಮ ವಿಳಾಸವನ್ನ ಮರೆಯದೆ ಹುಡುಕಿಕೊಂಡೆ ಬರುತ್ತದೆ//

21 December 2014

ಇದು ನಮಗೂ ಆಗಲೇಬೇಕಿತ್ತು........!




ಮಾತು ಮರೆತ ಮೇಲೆ ಮೌನವನ್ನಾದರೂ
ಗಟ್ಟಿಯಾಗಿ ಅಪ್ಪಿಕೊಳ್ಲಲೇ ಬೇಕಲ್ಲ?
ವರ್ಷಾನುಗಟ್ಟಲೆ ಜೊತೆಯಿದ್ದು ಅಂತರಂಗವನ್ನ
ಅರಿತ ಮೇಲೂ,
ತುಸುವಾದರೂ ನನ್ನ ಮೇಲೆ ನಂಬಿಕೆ ಅದೇಕೆ ಇಲ್ಲ?/
ಸೋತ ಕಾಲುಗಳ ಕಾಲದ ಕುದುರೆಯ
ಬೆತ್ತಲೆ ಬೆನ್ನೇರಿ,
ಮರೀಚಿಕೆಯಂತಹ ಕನಸುಗಳ ಹಾದಿಯದ್ದ
ಕಿರಿದುಗೊಳಿಸಿದ ದೃಷ್ಟಿಯ ಕಣ್ಣೂರಿ....
ಗುರಿ ತಪ್ಪಿ ಹಾಕುತ್ತಿರುವ ಪ್ರತಿ ಹೆಜ್ಜೆಗಳ ಹಿನ್ನೆಲೆಯಲ್ಲೂ
ನಿನ್ನ ನೆನಪುಗಳ ಗುಂಗಿದೆ//



ಗುರುತು ಬೇಡವೆಂದು ದೂರ ಓಡಿದಷ್ಟೂ
ಸಲ್ಲದ ಚಿನ್ಹೆಗಳನ್ನ ತಂದು ಒತ್ತುತ್ತಾರೆ,
ಎಲ್ಲಾ ನಿಶಾನಿಗಳನ್ನ ಎತ್ತಿ ಒಗೆದಿದ್ದರೂ ಸಹ
ಬಲ್ಲಿದರಂತೆ ಜಾತಿಯೊಂದರ ಮೊಹರನ್ನ ಬಂದು ಇತ್ತಿದ್ದಾರೆ....
ಅದೇನೋ ಅಂದರಪ್ಪ ಇದನು ಕಾನೇಶುಮಾರಿ!
ಜಾತಿ ಭೂತವ ಅದೆಂದೋ ಶಾಶ್ವತವಾಗಿ ಊರ ಗಡಿದಾಟಿಸಿ ಬಂದಿದ್ದರೂ ಮತ್ತೆ
ಈ ರೂಪದಲ್ಲಿ ಮನೆಗೆ ಬಂದು ಮರಳಿ ವಕ್ಕರಿಸಿತಲ್ಲ ಮತ್ತದೇ ಮಾರಿ!/
ವಿಶ್ವಮಾನವರಾಗುವುದೆಲ್ಲ ಬರಿ ಚಂದದ ಬೊಗಳೆ
ಬೆಳಗ್ಯೆ ಎದ್ದಲ್ಲಿಂದ ಸಂಜೆ ಬೀಳುವಲ್ಲಿಯವರೆಗೂ......
ಯಾವುದಾದರೊಂದು ಕರಾಳ ರೂಪದಲ್ಲಿ
ನಮ್ಮೆಲ್ಲರ ಕಾಡುತ್ತಲೆ ಇರುತ್ತದೆ ಈ ಜಾತಿಯ ರಗಳೆ,
ನಾಮ ಜುಟ್ಟು ಜನಿವಾರಗಳನ್ನ ಹೊತ್ತಿರಲೇಬೇಕಿಲ್ಲ
ಮನದ ತುಟಿಯಂಚಲ್ಲಿ ಅಲ್ಲಾ ಇಲ್ಲಾ ಏಸುವಿನ ಜಪದ ಮತ್ತಿರಲೇಬೇಕಿಲ್ಲ.....
ಸೈತಾನರು ಕಾಯುತ್ತಲೇ ಇರುತ್ತಾರೆ ಕೊನೆವರೆಗೆ
ತಪ್ಪಿಸಿ ಕೊಳ್ಳೋದು ಕಡು ಕಷ್ಟ ಈ ಜಾತಿಯತೆಯ ಅಂಗಿ ಬಲು ದೊಗಳೆ//




ಮನದ ಕಿಟಕಿಯ ಸದಾ
ತೆರೆದಿದ್ದರೆ ಸಾಕು,
ಇಲ್ಲಸಲ್ಲದ ಆದರ್ಶದ ನುಡಿಗಳ ದೇಶಾವರಿಯ ಧಾಟಿಯಲ್ಲಿ
ಅದ್ಯಾಕೆ ಆಡಿಕೊಂಡಿರಬೇಕು?/
ತೋರಿಕೆಯ ನಿತ್ಯ ಸ್ವತಂತ್ರ್ಯರ ಹಾವಳಿಯೆ ಜಗದಲ್ಲಿ ಬಹಳ
ಮೆಲ್ಲನೆ ನಿಮ್ಮ ಕುಲದ ನೆಲೆಯನರಿವತ್ತ
ಪರಿಚಯವಾಗುತ್ತಲೇ ಇಳಿಬಿಡುತ್ತಾರೆ ಮನಸೊಳಗೊಂದು ಗಾಳ,
ಹಾಗೆ ಕೇಳಿದ ಮಾತ್ರಕ್ಕೆ ತಪ್ಪು ಅವರದ್ದೂ ಅಲ್ಲ
ಹೆಡ್ಡರಂತೆ ಹೆತ್ತವರು ಅಂಟಿಸಿದ ಪಂಗಡ ನಾಮದ ಕಿರೀಟವನ್ನ.....
ಇನ್ನೂ ಹುಸಿ ಹೆಮ್ಮೆಯಿಂದ ಹೊತ್ತೇ ನಾವು ತಿರುಗುತ್ತಿದ್ದೀವಲ್ಲ?!//

ಕನಸು ಮಾತ್ರ ನಮ್ಮದು, ನನಸು ಎಂದೆಂದಿಗೂ ಅಲ್ಲ........!




ತನ್ನ ಕೂಗದ ಕರೆಗೆ ಹಿಂದಿರುಗಿ ನೋಡುವ ತವಕ,
ಎದೆಯಾಳದ ಕೆರೆಯಲ್ಲಿ ಮಾತು ನೂರಡಗಿದ್ದರೂ ಎರಡು
ತುಟಿಗಳು ಮಾತ್ರ ಏನೊಂದನ್ನೂ ಆಡದಂತಾಗಿ ಮೂಕ/
ಬತ್ತಿದ ಕನಸುಗಳೂ ಬತ್ತಲಾರದಂತೆ ಕಣ್ಣ ತುಂಬಿ ಕಾಡುವಾಗ,
ನಿಸ್ಸಂದೇಹವಾಗಿ ಆ ನಿಷ್ಕಲ್ಮಶ ಹೃದಯವನ್ನ
ಅದ್ಯಾರೋ ನಿರ್ದಯವಾಗಿ ಒಡೆದಿದ್ದಾರೆ ಎನ್ನಬಹುದು//



ಕಡಲಿನ ಒತ್ತಡಕ್ಕೆ ಬಸಿರಾಗಿ ಕಟ್ಟುವ ಹನಿ ಹನಿ ಮೋಡಕ್ಕೇನು ಗೊತ್ತು?
ಅದ್ಯಾವ ಚಿಪ್ಪಿನ ಎದೆ ಕವಾಟದಲ್ಲಿ ಬಿದ್ದು ತಾನಾದೇನೆಂದು ಮುತ್ತು?/
ಯಾವ ಕಂಠದ ಆಭರಣವಾಗಿ ಹೊಳೆಯೋದು ಯಾವತ್ತು?,
ಯಾರು ತನ್ನ ಬಯಸಿ ಕೊಂಡಾರೋ! ಯಾರ ಖಜಾನೆಯ ಸೇರಿ
ಪುನಃ ಕತ್ತಲಲ್ಲಿ ಬಂಧಿಯಾಗುವ ಆ ಹೊತ್ತು?//




ಬಾಳ ನಾಳೆ ಎಂದೂ ನಮ್ಮ ಕೈಯಲ್ಲಿರೋಲ್ಲ,
ಸವೆದ ನೆನ್ನೆಗಳೂ ಸಹ ನಮ್ಮ ಕೈಲಿರಲಿಲ್ಲ/
ಹೆಚ್ಚೆಂದರೆ ಏನೋ ಸ್ವಲ್ಪ ಸಹನೀಯವಾಗುವಂತೆ ಭವಿಷ್ಯವ ಯೋಜಿಸಬಹುದಷ್ಟೇ!,
ನಾವಂದುಕೊಂಡದ್ದೇ ಯಾವಾಗಲೂ ನಿಜವಾಗಬೇಕಿಲ್ಲ ಈ ಧಗಾಕೋರ ವಿಧಿಯ
ದರಿದ್ರ ಹಣೆಬರಹ ಎಂದಿಗೂ ಬರಿ ಇಷ್ಟೇ?!//

19 December 2014

ಮೊನ್ನೆ ನಿಜವಾಗಿಯೂ ಅತ್ಯಾಚಾರ ಆಗಿದ್ದು ಕನ್ಯೆ ತೀರ್ಥಹಳ್ಳಿಯ ಮೇಲೆ! ಸರದಿ ಪ್ರಕಾರ ಅದನ್ನ ಮಾಡಿ ಮುಗಿಸಿದ್ದು ಭಾಜಪದ ಭಂಡರು.......


ರಾಜ್ಯದಾದ್ಯಂತ ತೀರ್ಥಹಳ್ಳಿಯನ್ನ ಆಗಬಾರದ ಕಾರಣಕ್ಕೆ ಸುದ್ದಿಯಾಗಿಸಿದ ಭಾಜಪ ಭಂಡರ ತೆವಲಿನ 'ನಂದಿತಾ ಸಾವು' ಪ್ರಕರಣವನ್ನ ಶತಾಯಗತಾಯ ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಹೇಗಾದರೂ ಸರಿ ಜೀವಂತವಾಗಿಡುವ ಬಿಜೆಪಿ ಸ್ಥಳಿಯ ಮುಖಂಡರೆಂಬ ನಾಲಾಯಕ್ಕರ ಪ್ರಯತ್ನದ ಮುಂದುವರೆದ ಭಾಗವಿದು. ನಂದಿತಾಳ ಸಮಯಸಾಧಕ ಅಪ್ಪ ಕೃಷ್ಣಮೂರ್ತಿಯ ಜೀವನಾಧಾರವಾಗಿದ್ದ ಬಾಳೆಬೈಲಿನ ದಿನಸಿ ಅಂಗಡಿಗೆ ಕಳೆದ 12ನೇ ತಾರೀಕಿನ ಬೆಳಗ್ಯೆ 3 ರ ಸುಮಾರಿಗೆ ಬೆಂಕಿ ಇಡಲಾಗಿದೆ.



ಸಚಿವರೂ ಆಗಿರುವ ಸ್ಥಳಿಯ ಶಾಸಕರು ತಕ್ಷಣ ಕ್ಷೇತ್ರಕ್ಕೆ ಹಿಂದಿರುಗಿ ಬರಲಾಗದ ಇಕ್ಕಟ್ಟಿನ ಸಂದರ್ಭದಲ್ಲಿ ಸಾಧ್ಯವಾದರೆ ಇನ್ನೊಂದು ಸುತ್ತಿನಲ್ಲಿ ಊರನ್ನ ಉದ್ರೇಕಿಸಲು ಬಿಜೆಪಿಯ ಕಳ್ಳ ಭಡವರು ಬೆಳಗಾವಿ ಅಧಿವೇಶನದ ಸಮಯ ಸಾಧಿಸಿ ಅಂಗಡಿ ಸುಟ್ಟಿದ್ದಾರೆ. ಸಿಐಡಿ ವರದಿಯಲ್ಲಿ ತಮ್ಮ ವಿರುದ್ಧವೆ ಹೊರಬಂದ ಸತ್ಯವನ್ನ ಅರಗಿಸಿಕೊಳ್ಳಲಾಗದ ಬಿಜೆಪಿಯವರು ಪ್ರಕರಣವನ್ನ ಜೀವಂತವಾಗಿರಿಸಲು ನಡೆಸಿದ ಕುತಂತ್ರ ಇದು ಎನ್ನುವುದು ಸ್ಥಳಿಯರ ಗುಮಾನಿ.



ಅಲ್ಲದೆ ಮೊನ್ನೆ ಮೊನ್ನೆ ನವೆಂಬರ್ ತಿಂಗಳ ಅಂತ್ಯದಲ್ಲಿ ಪ್ರಕರಣದ ಸಿಬಿಐ ತನಿಖೆಗಾಗಿ ಬಿಜೆಪಿ ನಡೆಸಿದ ಹಾಸ್ಯಾಸ್ಪದ ನಿರಶನಕ್ಕೆ ಬೆರಳೆಣಿಕೆಯಷ್ಟು ಜನರೂ ಬಂದು ಭಾಗವಹಿಸದೆ ಜನ ಬೆಂಬಲ ಇಲ್ಲದ ಆ ಪ್ರಹಸನ "ನ್ಯಾಯ ಸಿಗುವವರೆಗೂ"(?) ಎನ್ನುವ ಘೋಷಣೆಯ ಬ್ಯಾನರನ್ನ ಐದನೆ ದಿನಕ್ಕೆ ಅಬ್ಬೇಪಾರಿಯಂತೆ ಅಲ್ಲಿಯೇ ಬಿಟ್ಟು ಎದ್ದೋಡಿ ಬರುವಂತಾದ ಅದರ ಮುಖಂಡರಿಗೆ ಆದ ಮುಖಭಂಗದ ಅಡ್ಡ ಪರಿಣಾಮ ಇದು ಅಷ್ಟೇ.



ಇಂತಹ ಹೊತ್ತಿನಲ್ಲಿ ಸಾಬರು ಅಪ್ಪಿತಪ್ಪಿಯೂ ಇಂತಹ ದುಸ್ಸಾಹಸಕ್ಕೆ ಕೈ ಹಾಕಲಾರರು ಎನ್ನುವುದು ಮೆದುಳಿದ್ದ ಎಲ್ಲರಿಗೂ ಅರ್ಥವಾಗುವ ಸರಳ ಸತ್ಯ. ಇನ್ನು ಬಿಜೆಪಿಯವರು ಬಾಯಿಪಾಠ ಮಾಡಿಸಿದ ದಿನಕ್ಕೊಂದು ಸುಳ್ಳನ್ನ ಮಾತು ಕಲಿತ ಗಿಳಿಯಂತೆ ಆಡಿ ಆಡಿ ಹೈರಾಣಾಗಿ ಹೋಗಿರುವ ಭಂಡ ಅಪ್ಪ ಕೃಷ್ಣಮೂರ್ತಿಗೆ ಜೀವನಾಧಾರವಾಗಿದ್ದ ಅಂಗಡಿಯನ್ನೆ ಅದೆ ದ್ವೇಷದ ಅಧ್ವಾರ್ಯುಗಳು ಊರೊಟ್ಟಿಗೆ ಹಚ್ಚಿದ ಬೆಂಕಿ ಅಪೋಷನ ತೆಗೆದು ಕೊಂಡಿರುವುದು ವಿಪರ್ಯಾಸ ಹಾಗೂ ವ್ಯಂಗ್ಯ. 'ಕಳ್ಳನ ಹೆಂಡತಿ ಯಾವತ್ತೂ ಮುಂಡೆ' ಅನ್ನುವ ಗಾದೆಗೆ ಅತ್ಯುತ್ತಮ ಉದಾಹರಣೆ ಇದು.




ಬದುಕಿದ್ದಾಗ ನಿಜವಾಗಿಯೂ ಆಗಿರದಿದ್ದ ಮಾನಭಂಗ ಹಾಗೂ ಅತ್ಯಾಚಾರವನ್ನ ಸತ್ತ ನಂತರ ನಂದಿತಾಳ ಮೇಲೆ ಬಿಜೆಪಿಯ ಆರಗ ಜ್ಞಾನೇಂದ್ರ, ಸಂದೇಶ ಜವಳಿ, ಸಂಸದೆ ಶೋಭಕ್ಕ ಎಂಬ ಚಿಲ್ಲರೆ ಬುದ್ಧಿಯ ಹೆಂಗಸು, ಸಂಸದೆಯ ಅಪ್ಪ(?) ಎಂದು ಹೇಳಿಕೊಂಡು ತಿರುಗುವ ಬೂಸಿಯ. ನಂದಿತಾಳ ಚಿಕ್ಕಪ್ಪ ಭಜರಂಗದಳದ ಸಂತೋಷನೆನ್ನುವ ಹಡಬೆ, ಬಾಳೆಬೈಲು ರಾಘವೇಂದ್ರನೆನ್ನುವ ಬಚ್ಚಾಲಿ ಹಾಗೂ ಸ್ವತಃ ನಂದಿತಾಳ ಅಪ್ಪ ನಿರಂತರವಾಗಿ ಮಾಧ್ಯಮಗಳಲ್ಲಿ ಸರದಿಯಂತೆ ಮಾಡಿ ಮುಗಿಸಿದ್ದರು.



ಈಗ ಇದನ್ನ ಮಾಡಿಸಿದ ಪುಣ್ಯಾತ್ಮನೆ ಇಂದು ಮುಂಜಾನೆ ಪತ್ರಿಕಾಗೋಷ್ಠಿ ಕರೆದು ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಕೆರೆದೇ ಕೆರೆದ. ಆದರೆ ಇಂತಹ ಮಗುವನ್ನ ತಾನೆ ಚಿವುಟಿ, ತಾನೆ ತೊಟ್ಟಿಲು ತೂಗುವ ಮೊಸಳೆ ಕಣ್ಣೀರಿನ ಮಂದಿಯ ಆಟಾಟೋಪಗಳನ್ನ ಅರವತ್ತರ ದಶಕದಲ್ಲಿಯೆ ವಜ್ರಮುನಿಯ ನಟನೆಯಲ್ಲಿ ತೆರೆಯ ಮೇಲೆಯೇ ನೋಡಿ ನೋಡಿ ಬೇಸತ್ತಿರುವ ತೀರ್ಥಹಳ್ಳಿಯ ಮಂದಿ ಇಂದಿನ ಹಗಲುವೇಷವನ್ನ ನೋಡಿ ಕ್ಯಾಕರಿಸಿದರೆ ಹೊರತು ಕ್ಯಾರೆ? ಎನ್ನಲಿಲ್ಲ. ಒಂದೊಮ್ಮೆ ಪೊಲೀಸರು ಸರಿಯಾಗಿ ಸಕ್ರಿಯರಾದದ್ದು ಹೌದೇ ಆದರೆ, ಎಲ್ಲಕ್ಕೂ ಮೊದಲು ಈ ಗಡವನನ್ನೆ ಮುಕಳಿ ಮೇಲೆ ಒದ್ದು ಗೂಂಡಾ ಕಾಯಿದೆಯ ಮೇಲೆ ಒಳಗೆ ತಳ್ಳಿಯಾರು ಎನ್ನುವ ಭೀತಿಯೂ ಸ್ವತಃ ಆತನಿಗಿದ್ದೇ ಇದೆ ಹಾಗೂ ಆ ಒಳ ಭೀತಿಯೆ ಈಗ ಇಂತಹ ದುಷ್ಕೃತ್ಯವನ್ನ ಆತನಿಂದ ಆಗ ಮಾಡಿಸಿದೆ. ಹೀಗಾದರೂ ಸಾಬರ ಮೇಲೆ ಮತ್ತೊಂದು ಗೂಬೆ ಕೂರಿಸುವ ಬಿಜೆಪಿಯ ಹುಟ್ಟು ಗೂಬೆಗಳನ್ನ ಮೊದಲು ಒದ್ದು ಮುಲಾಜಿಲ್ಲದೆ ಒಳಗೆ ಹಾಕದಿದ್ದರೆ ಮುಂದಿನ ಚುನಾವಣೆಯವರೆಗೂ ಹೀಗೆ ದಿನಕ್ಕೊಬ್ಬರ ಮನೆಯನ್ನ ಸುಟ್ಟಾರಿವರು.




ಎಂದೂ ನೇರವಾಗದ ಅದರ ಬಾಲ......




ವೇಷ ಬದಲಾದರೆ ಜಾತಿ ಬದಲಾದೀತೆ?
ಮೂರು ನಾಮ ಎಳೆದು ಅವರನ್ನ ನೀನು ಮತ್ತೆ ಹಿಂದಿರುಗಿದೆ ಅಂದರು/
ಭಾಷೆ ಬದಲಾದರೆ ಅಮಿಷದ ದೋಷ ಕಳೆದೀತೆ?
ಒಟ್ಟೆ ಒಟ್ಟೆ ಬಟ್ಟೆ ಟೋಪಿಯ ಮಂಡೆಗೆ ಹಾಕಿ
ಇನ್ನು ನೀನು ಪರಮ ಸತ್ಯ ನಂಬಿದವ ವಿಶ್ವಾಸಿ ಅಂತ ತಲೆ ಮೇಲೆ ಕೈ ಎಳೆದು ಬಂದರು//



ಬೀದಿಗೊಂದು ಜಾತಿ ಸಂಘ ಹಾದಿಗೊಬ್ಬ ಜಗದ್ಗುರು,
ತಾಗುವ ಕೊಳಚೆಯಲ್ಲ ಕಾಣಬಾರದೂ ಅಂತ ಕಾವಿಯನ್ನ ಇವರೆಲ್ಲ ಹಾಕಿ ಕೊಂಡೌರು/
ನೆಟ್ಟಗೆ ನಾಲ್ಕಕ್ಷರ ಕಲಿಯದವ ಇಂದು ಸ್ವರ್ಗ ನರಕದ ಕಥೆಗಳ ಹೇಳಿ ಸುಲಭವಾಗಿ ಹೊಟ್ಟೆ ಹೊರೆಯುತ್ತಾನೆ,
ನಾಲ್ಕು ಮನೆಯ ಅನ್ನವನ್ನ ನಿತ್ಯ ಕಂಠ ಮಟ್ಟ ತಿಂದು ತೇಗಿ .........
ಮೈಕು ಸಿಕ್ಕೊಡನೆ ಮೀಸೆ ಇಲ್ಲದ ತನ್ನ ಮುಖದ ಉದ್ದ ಗಡ್ಡವನ್ನೇ ನೇವರಿಸುತ್ತಾ ದ್ವೇಷವನ್ನೇ ದೊಡ್ಡ ದೊಂಡೆಯಲ್ಲಿ ಮೊರೆಯುತ್ತಾನೆ//




ಧರ್ಮದ ಹೆಸರಲ್ಲಿ ನಮ್ಮನಮ್ಮ ನಡುವೆಯೇ ತಂದಿಟ್ಟು ತಮ್ಮ ಮನೆಗೆ ಅಕ್ಕಿ ಹೊಂಚುವ ವಂಚಕರಿವರು ಹುಷಾರು,
ಕಾವಿ ಮಾತ್ರವಲ್ಲ ಉದ್ದಾನುದ್ದ ಕೊಕ್ಕರೆ ಬಿಳಿ ನಿಲುವಂಗಿಯನ್ನೂ ಹಾಕಿಕೊಂಡ ಆ ಪರಮಾತ್ಮನ ಪುಕ್ಸಟ್ಟೆ ಏಜೆಂಟರು/
ಇವರ ಜೊತೆ ದುಡಿದು ತಿನ್ನುವ ನಮ್ಮಂತವರಿಗೆಂತ ಇದೆ ಹೇಳಿ ಕರಾರು?,
ಇಂತವರ ದೊಂಬರಾಟಗಳನ್ನ ನೋಡಿ ಮನಸಾರ ನಕ್ಕು ಹಗುರಾಗೋಣ....
ನಡೆಯಲಿ ಇನ್ನಷ್ಟು ದಿನ ಇಂತಹ ಅಲ್ಪರ ಕಾರುಬಾರು//




ಅದ್ಯಾರೋ ಪತ್ರಿಕೆಗಳ ಜಾಹಿರಾ....ಥೂಗಳಲ್ಲಿ ಅದೆಂಥದ್ದನ್ನೋ ಅನುಭವಿಸಿದರಂತೆ,
ಇಲ್ಲಿನ ತಾರತಮ್ಯವ ಪ್ರತಿಭಟಿಸಿ ಅದೆಲ್ಲೋ ಹೋಗಿ ಸಾಮೂಹಿಕವಾಗಿ ತಲೆ ಬೋಳಿಸಿಕೊಂಡು ಸಂಘಕ್ಕೆ ಶರಣಾದರಂತೆ/
ಸರಕಾರಿ ಸವಲತ್ತಿನ ವಿಚಾರ ಬಂದಾಗ ಮಾತ್ರ ಇವರಿಗೆಲ್ಲ ತಾವು ದಲಿತರೋ? ಇಲ್ಲಾ ಹೊಸ ಕಡೆ ಹೋಗಿ ಬಲಿತರೋ? ಅನ್ನೋದು ತಕ್ಷಣ ನೆನಪಾಗುತ್ತೆ....
ಒಟ್ಟಿನಲ್ಲಿ ನಮ್ಮ ಸುತ್ತಮುತ್ತಲೆಲ್ಲ ಇಂತಹ ಸಮಯಸಾಧಕ ಎಡಬಿಡಂಗಿಗಳದ್ದೇ ಸಂತೆ//

ಮನ ಆಶಾಢಭೂತಿ........




ಬಾಡದ ಹೂಗಳೆಲ್ಲ ಚಿಟ್ಟೆ ಕಂಡ ಕನಸುಗಳಾಗಿ,
ಮೂಡದ ನಿರೀಕ್ಷೆ ಸೂರ್ಯರೆಲ್ಲ ಬಾನ ಮನದ ನವಿರು ಮುನಿಸುಗಳಾಗಿ.....
ಇಳೆಯ ತಬ್ಬಿದ ಇಬ್ಬನಿಯಂತಿವೆ/
ಜಾರುವ ತಾರೆಗಳೆಲ್ಲ ಭುವಿಯೆದೆಯ ಹಿತವಾಗಿ ತಾಗಿ,
ಕಟ್ಟಿದ ಮೋಡಗಳೂ ಸಹ ಮುಂದೊಮ್ಮೆ ಮಾಗಿ......
ಬರಡು ನೆಲದಲ್ಲೂ ನಿರೀಕ್ಷೆ ಹಸಿರ ಮತ್ತೆ ಹುಟ್ಟಿಸುವಂತಿವೆ//



ಕಲ್ಲಾಗಿ ಕಾದವಳು ಹಣ್ಣ ಹೊತ್ತು ದಾರಿ ನೋಡಿದವಳು ಕಡೆಗೂ ಅವನ ಕಂಡರು,
ಬಂದೆಯಾ ರಾಮನೆಂದರು/
ಯಮುನೆ ದಡದಲ್ಲಿ ಕಾದು ಕೂತವಳು ಕಾಲ ಮರೆತು ಸಭೆಯಲ್ಲಿ ಬೆತ್ತಳಾದವಳು,
ಇಬ್ಬರೂ ಕಡೆಯವರೆಗೂ ಕಾಯುತ್ತಲೇ ಇದ್ದರು.....
ಅವನು ಕಡೆಗೂ ಬರಲೇ ಇಲ್ಲ ಬಂದು ಅವರ ನಿರೀಕ್ಷೆಯಂತೆ ಕೂಡಲೇ ಇಲ್ಲ//



ಬಿಟ್ಟು ಬಂದ ಕಾಡ ನೆನೆದು ಇರುವ ನಾಡಿನಲ್ಲಿ ನಲುಗಿದಂತೆ ನಟಿಸುವೆ.....
ನಾನು ಮಾತ್ರ ಇಲ್ಲಿ ಎಲ್ಲಾ ಖುಷಿಗಳ ಸೂರೆ ಹೊಡೆಯುತ್ತಾ,
ಅದೆಲ್ಲೋ ಕಾನನದಂಚಿನ ಪ್ರಗತಿಯನ್ನ ನಖಶಿಖಾಂತ ದೊಡ್ಡ ದೊಂಡೆಯಲ್ಲಿ ಪ್ರತಿಭಟಿಸುವೆ/
ನನ್ನ ಹೋರಾಟದ ಹಾರಾಟಗಳೆಲ್ಲಾ ವಾಸ್ತವದಲ್ಲಿ ಬರಿ ತೋರಿಕೆ.....
ಇದಕ್ಕೆಲ್ಲ ಮೂಲ ಸದಾ ಪ್ರಚಾರಕ್ಕಾಗಿ ಹಪಹಪಿಸುವ ನನ್ನ ಒಳಮನದ ತುರಿಕೆ,
ಸೋತ ಪ್ರಕೃತಿಯೇನೂ ನನ್ನ ಸ್ವಂತವಲ್ಲ
ಹಳ್ಳಿಗಳು ಹಾಳಾದರೆ ಹಾಳಾಗಲಿ ಬಿಡಿ! ನನಗೇನು ಹೇಳಿ?
ಬೆಳೆದರೆ ಬೆಳೆಯಲಿ ಬಿಡಿ ಅಲ್ಲಿ ಕಂಡವರ ಸೂರಿನ ಮೇಲೆ ಎಳೆ ಗರಿಕೆ//

18 December 2014

ಇದುವೇ ಜೀವನ.......

ನೆನಪಿನ ನೋವಲ್ಲಿ ಮನ ತುಂಬಿ ಬಂದಾಗ
ಸುರಿಯೋದೆ ಕಂಬನಿಯು ಹೌದೆ?
ಈಡೇರದ ಆಸೆಗಳೆ ಎಲ್ಲರ
ನಿತ್ಯ ಕನಸಾಗಿ ಕಾಡುತಿರಬೌದೆ/
ಮಾರುಕಟ್ಟೆ ಇಲ್ಲಿಲ್ಲ ನಮ್ಮ ನೋವಿಗೆ
ಹೇಳಿಕೊಳ್ಳಬಾರದು ಯಾರಿಗೂ ಎದೆಯಾಳದ ಬಾಧೆ,
ಸಂಕಟ ಅದೆಷ್ಟೇ ಒಳಗೆ ಹುದುಗಿದ್ದರೂ
ಕಡೆಯವರೆಗೂ ಹಲ್ಲು ಕಚ್ಚಿಕೊಂಡಿರಲಿಲ್ಲವೇ ಹೇಳದೆ ರಾಧೆ?//

ಅನ್ಯರಿಂದ ಚಿಲ್ಲರೆ ನಿರೀಕ್ಷೆಗಳ ಖಂಡಿತಾ ಇಟ್ಟುಕೊಳ್ಳಬೇಡಿ,
ಅತಿಯಾಗಿ ನಂಬುವವರೆಲ್ಲ ಹೋಗುತಾರೆ ಬೇಕಂತಲೇ ಬದುಕ ಕಾಡಿ/
ಇನ್ನೊಬ್ಬರ ಎಲ್ಲಾದರೂ ಆಕಾಶಕ್ಕಿಂತ ಹೆಚ್ಚು ಹಚ್ಚಿಕೊಂಡೀರ ನೋಡಿ,
ಆದೀತು ಅದೊಂತರಾ ನಾವೇ ಕೊಟ್ಟು ನಮಗೇನೆ ಹಾಕಿಸಿಕೊಳ್ಳುವ ಕೈಕೋಳದ ಬೇಡಿ//

ಬದುಕಿದು ಬಿಟ್ಟೂ ಬಿಡದೆ ನಿರಂತರ ನೆರೆಯುವ ಸಂತೆ,
ನೋವು ಮಾತ್ರ ಖಾತ್ರಿ ಇಲ್ಲಿ ಜೊತೆಗೆ ಉಚಿತವಿದೆ ಚಿಂತೆ/
ಅಂಟಿಯೂ ಅಂಟದಂತೆ ಆಗಿ ಹೊಳೆಯಬೇಕು ಕೆಸುವಿನೆಲೆಯ ಮೇಲಿನ ಕಿರು ಹನಿ,
ಯಾವತ್ತೂ ಬತ್ತಿ ಹೋಗಬಾರದೆಂದೂ ಇಲ್ಲಿ ಭರವಸೆಯ ಒಳ ಧ್ವನಿ//

17 December 2014

ಇದು ಎಂದಿಗೂ ಮುಗಿಯದ ದಾಳಿ, ಇದರೊಂದಿಗೇ ಎಲ್ಲರೂ ಹೊಂದಿಕೊಂಡು ಬಾಳಿ........










ಪೇಷಾವರದ ಹೇಷಾರವ ನೆನ್ನೆ ಸಂಜೆ ಮುಗಿದಿದೆಯಂತೆ,
ಅಲ್ಲಿ ಅದಾದ ಮೇಲೆ ಕವಿದದ್ದು ಬರಿ ಮೂಕ ಎಳೆ ಮನಗಳ ನರಳಿಕೆಗಳಂತೆ,
ಒಟ್ಟು ಒಟ್ಟಾದದ್ದು ನೂರಾ ಮೂವತ್ತೆರಡು ಹೆಣಗಳ ಸಂತೆ!
ಆದರೆ ಅವುಗಳನ್ನ ಹೆತ್ತ ಮಾತೃ ಒಡಲಿಗೆ ಮಾತ್ರ
ಅವು ಶವಗಳು ಅಂತ ಅನ್ನಿಸುತ್ತಿಲ್ಲವಂತೆ/
ಹೀಗಂತ ಟಿವಿಯಲ್ಲೊಂದು ಸುದ್ದಿ ಮಾರುವ ಧ್ವನಿ
ಭಾವಪೂರ್ಣವಾಗಿ ಅತ್ಯುತ್ಸಾಹದಿಂದ ಊಳಿಡುತ್ತಿತ್ತು,
ಹಿನ್ನೆಲೆಯಲ್ಲಿ ಅದ್ಯಾವುದೋ ಅಮ್ಮ ಹಿಂದಿರುಗಿ ಬರಲಾಗದ ಶಾಲೆಗೆ ಹೋದ
ತನ್ನ ಎಳೆ ಕಂದನ ಶವವ ಅಪ್ಪಿ ಹಿಡಿದು ಕೊನೆ ಮೊದಲಿಲ್ಲದಂತೆ ಗೋಳಿಡುತ್ತಿತ್ತು//



ಉರಿವ ಮನೆಯಲ್ಲೂ ಗಳ ಹಿರಿಯುತ್ತಾ ಅಂದನೊಬ್ಬ
ನೇರ ಸಂದರ್ಶನದಲ್ಲಿ ಅದ್ಯಾವನೋ ಅಲ್ಲಿನ ಸೇನಾಧಿಕಾರಿ,
ಬೇರೆ ಇನ್ನೇನಲ್ಲ ನೋಡಿ ಇದು ನಿಮ್ಮವರ ಪಿತೂರಿ!/
ಅರ್ರರೆ ನೋವಿನ ಇಂಥಾ ಕ್ಷಣದಲ್ಲೂ ಸುಳ್ಳನ್ನಾಡಿ ಸುಖಿಸುವ
ವಿಕೃತಿ ಮೆರೆಯುವ ಎಂಥಾ ನರ ರಾಕ್ಷಸರೆಲ್ಲಾ ಈ ಭೂಮಿ ಮೇಲೆ ಇರುತ್ತಾರ್ರಿ?
ವೇದನೆಯ ಹೊತ್ತಲ್ಲೂ ದ್ವೇಷದ ಜ್ವಾಲೆಗೆ ಬಿಡದೆ ತುಪ್ಪ ಎರಿತಾರ್ರಿ!,
ಅರೆ ನಮಗೂನು ನಿಮ್ಮ ಅಯೋಗ್ಯತೆಯ ಅಸಲಿಯತ್ತು ಗೊತ್ತೂರಿ
ಆ ಬಿನ ಲಾಡೆನನ ಲಾಡಿ ನಿಮ್ಮ ಸೊಂಟಕ್ಕೆ ಬಿಡಲಾಗದಂತೆ ಬಿಗಿದಿತ್ತಲ್ರಿ?!//



ನಮ್ಮೂರೇನು ಭಾರಿ ಸುರಕ್ಷಿತ ಅಲ್ಲ ಬಿಡಿ,
ಇಲ್ಲೂ ಇದೇ ನೆಪ ಮಾಡಿಕೊಂಡು ಹಚ್ಚೋವ್ರಿದಾರೆ ಪಾಪದವರ ನಡುವೆ ಕಾದಾಟದ ಕಿಡಿ.
ತೀರ್ಥಹಳ್ಳಿಯಿಂದ ನವಡೆಳ್ಳಿಯವರೆಗೂ ಇದಾರೆ ಇಂತಾ ಕ್ರಿಮಿಗಳು
ಮನೆ ಮನ ಒಡೆದು ತಾವೆ ಇಟ್ಟ ಬೆಂಕಿಯಲ್ಲಿ ಚಳಿಕಾಯಿಸಿಕೊಳ್ಳುವ ಮಹಾ ಪರಾಕ್ರಮಿಗಳು/
ತೂತುತೂತು ಟೋಪಿ ಹಾಕಿಕೊಂಡವರೇನು ಅಸಲಲ್ಲ ನೋಡಿ,
ಡಿಸೆಂಬರ್ ಆರನ್ನ ಊರೆ ಮರೆತರೂ ಇವರು ಮಾತ್ರ ಬಿಡದೆ ಹಿಡುಕೊಂಡು ಅಂತಾರೆ
'ಎಲ್ಲಾದರೂ ಉಂಟೆ!' ನೀವ್ಯಾರೂ ಅದನ್ನ ಮರೀಬೇಡಿ!!
ಒಟ್ಟಿನಲ್ಲಿ ಶಾಂತಿ ನೆಮ್ಮದಿ ನಮಗ್ಯಾರಿಗೂ ನಸೀಬಿಲ್ಲ!
ಇಲ್ಲಿ ಪರ ಕೊಲ್ಲಲ್ ನಮ್ಮನ್ನ ನಾವೆ ನಂಬಿದ ಹರನೂ ಬಂದು ಕಾಯಲೊಲ್ಲ?!//

16 December 2014

ದೇವರಿಗಾಗಿ ಸುಮ್ಮನಾಗೋ ಮಾರಾಯ! ದೇವರು ನನಗೂ ಇದ್ದಾನೆ?!




ಬಾನ ಚಪ್ಪರದಡಿಗೆ ನನ್ನದೂ ಒಂದು ನಾಡು.
ಕಂಡವರ ಕೊಲ್ಲುವ ಮನಸತ್ತ ಮಂದಿಯ ದೂರದಿಂದಲೇ ಕಂಡು ಹೌಹಾರುವವರ ಬೀಡು/
ನಮ್ಮದೇನಿದ್ದರೂ ಇಲ್ಲದ ಭೂತವನ್ನ ಕಲ್ಪಿಸಿಕೊಂಡು ನಮ್ಮ ನಮ್ಮ ಮನೆಗೆ ನಾವೇ ಕಿಚ್ಚಿಟ್ಟು ಕಚ್ಚಾಡುವ ಖಯಾಲಿ!
ಈ ಧರ್ಮದ ಅಫೀಮು ನುಂಗಿ ನಶೆಯಲ್ಲಿ ಕಂಡವರ ಮಕ್ಕಳ ಕೊಲ್ಲುವ.....
ನಮ್ಮ ದಯವಿಲ್ಲದ ದಾಯಾದಿಗಳಂತಹ ಹೀನ ಕಸುಬು ನಮಗ್ಯಾಕೆ ಹೇಳಿ?!//



ಧರ್ಮ ನಮ್ಮದೂ ಇದೆ ಅದರ ನಶೆ ಆಗಾಗ ನಮಗೂ ಏರುತ್ತದೆ,
ಆಗ ಮಾತ್ರ ಭಂಡರಂತೆ ಅವರ ಕ್ರಮವನ್ನ ನಾವು ಹೀಯ್ಯಾಳಿಸುತ್ತೇವೆ....
ನಮ್ಮ ಮನೆ ದೇವರನ್ನ ಅವರೂ ಮನಸೋ ಇಚ್ಛೆ ಟೀಕಿಸಿ ದ್ವೇಷದ ವಿಷ ಕಾರುತ್ತಾರೆ/
ಆದರೂ ನಾವು ಶಾಲೆಗೆ ಹೋದ ಮಕ್ಕಳ ಜೀವದ ಮೇಲೆರಗುವುದಿಲ್ಲ,
ಕಣ್ಣಲ್ಲಿ ರಕ್ತ ಬತ್ತಿದ ರಕ್ಕಸರಂತೆ ನೇರ ಆ ಎಳೆಯರ ಕಣ್ಣಿಗೆ ಗುಂಡಿಡುವುದಿಲ್ಲ//



ನಮ್ಮದದೇನಿದ್ದರೂ ಬರಿ ಕೋಳಿ ಜಗಳ,
ಮಸೀದಿಯೊಳಗೆ ಸೂಕರನ ಕೊಳೆತ ಮಾಂಸ ಎಸೀತೀವಿ....
ದೇಗುಲದೊಳಗೆ ಗೋ ಮಾಂಸವ ಕಂಡು ಹಿಂದೆಂದೂ ಇಲ್ಲದಂತೆ ಹೌಹಾರುತ್ತೀವಿ/
ಆಮೇಲೆ ಇದ್ದೇ ಇದೆ ಎಲ್ಲರಿಗೂ ಸದಾವಕಾಶ!
ಮೊಂಡು ಕತ್ತಿ ಕೊಡಲಿಗಳಿಗೆಲ್ಲ ಹೋಗಿ ಊರ ಮೇಯುತ್ತವೆ.....
ಮೈಕುಗಳು ಮೊರೆಯುತ್ತವೆ ಮನೆ ಮನಗಳು ಮುರಿಯುತ್ತವೆ,
ಹೀಗಿದ್ದರೂ ಪಕ್ಕದ ನಾಡಿನವರಷ್ಟು ಕ್ರೂರಿಗಳಲ್ಲ ನಾವು!
ಅಷ್ಟಕ್ಕೂ ಅವರದ್ದು ಶಾಂತಿ ಪ್ರಿಯತೆ ಸಾರುವ ಧರ್ಮ....!!
ಇನ್ನು ನಾವೋ ಹುಟ್ಟು ಶಾಂತಿ ಪ್ರಿಯರು?!//

14 December 2014

ಅರಿಕೆ ಮಾತ್ರವಿದು ಬಿನ್ನಹವಲ್ಲ......



ಬರೆಯದೆ ಹಗುರಾಗುವ ಬಗೆ ನನಗರಿವಿಲ್ಲ,
ಹಾಗಂತ ಬರೆಯುವ ಬಗೆಯನ್ನೂ ನಾನರಿತಿಲ್ಲ/
ಅನ್ನಿಸಿದ್ದನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯ ಕೊಡುವ ಅಕ್ಷರ ಒಂದೇ ನನ್ನ ಅನುಗಾಲದ ಭರವಸೆ,
ಇಲ್ಲ ನನಗೆ ಇನ್ನೊಬ್ಬರು ಇದನ್ನ ಓದಿ ಮೆಚ್ಚಲಿ ಎನ್ನುವ ಚಿಲ್ಲರೆ ಆಸೆ//

ಹಾಡುವ ಹಕ್ಕಿಗೆಲ್ಲಿದೆ ಹಾಡಿನ ಹಂಗು?,
ಕುಣಿವ ನವಿಲಿಗೇನು ಕೆಂಬೂತಕ್ಕೂ ಇರದು ತಾಳದ ಗುಂಗು/
ಅನ್ನಿಸಿದಾಗ ಅಂದು ಬಿಡಬೇಕು ಭಾವನೆಗಳ ಅನಿರ್ದಿಷ್ಟಾವಧಿಗೆ ಮುಂದೂಡುವುದು ಸಲ್ಲ,
ನಾಳೆ ಮತ್ತೆ ಕಾಲ ಸಿಗುವುದೋ ಇಲ್ಲವೋ?
ಯಾವನು ಬಲ್ಲ?//

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಸೋತ ಮನ ಬರೆದ ನಾಲ್ಕೆ ನಾಲ್ಕು ಸಾಲು,
ಓದಿದ ಎಲ್ಲರೂ ಅದನ್ನ ಕವಿತೆ ಎಂದರು ನನ್ನದೇನಿಲ್ಲ ಈ ಹಿಕಮತ್ತಿನಲ್ಲಿ ಪಾಲು/
ನಾನೊ ನನ್ನೊಳಗೆ ಅಂತರ್ಮುಖಿ,
ಹೊಗಳಿಕೆ ತೆಗಳಿಕೆಗಳೆರಡಕ್ಕೂ ಕಿವುಡ....
ಹೀಗಾಗಿಯೇ ನಿತ್ಯ ಸುಖಿ//

ಈ ನೆನಪುಗಳೆ ಹಾಗೆ.....



ಮೋಡವ ಕೆಣಕಿ ಗಾಳಿ ಬೀಸಿದಾಗ ಮಳೆ,
ಭೂಮಿಯ ಬಾನು ಮೋಹಿಸುವ ಹೊತ್ತು ಎಲ್ಲೆಲ್ಲೂ ನೆಂದ ನೆಲ ಕಳೆಕಳೆ/
ಮೊದಲ ಹನಿ ಅದ್ಯಾವ ಚಿಪ್ಪಿನಲ್ಲಾಯಿತು ಮುತ್ತು?,
ಅದಿಲ್ಲಿ ಮುಗಿಲಿನ ಮನದಾಳದ ಹೊರತು ಇನ್ಯಾರಿಗೆ ತಾನೇ ಗೊತ್ತು!//

ಬೇಟೆಯ ಮೈ ಬಣ್ಣವ ಮೋಹಿಸಲು ನಾ ರಾಮನಲ್ಲ,
ಕಂಡಕಂಡವರ ಬೆನ್ನು ಹತ್ತುವ ಶ್ಯಾಮನಾಗುವುದೂ ಇಲ್ಲ/
ಸಾಕು ಸಿಕ್ಕಿದ್ದ ನಿನ್ನೊಲುಮೆಯ ಕ್ಷಣಿಕ ಸುಖ ನನಗೆ,
ಇದಕ್ಕಿಂತಾ ಇನ್ನೇನು ಬೇಕು ಹೇಳು?.....
ಕಳೆಯೋಕೆ ಈ ಸುಡು ಬಾಳ ಬೇಗೆ//

ಬತ್ತದ ತುಂಗೆಯ ಹಾಗೆ ಭಾವಗಳು ಮನದೊಳಗೆ,
ಇವನ್ನ ಹೇಳಿಕೊಳ್ಳದೆ ಎದೆಯೊಳಗೆ ಒತ್ತಿ ಬಚ್ಚಿಟ್ಟುಕೊಳ್ಳುವುದಾದರೂ ಹೇಗೆ/
ಹಾಗಂತಲೇ ಕವಿತೆಯ ನೆಪದಲ್ಲಿ ಸಾರ್ವಜನಿಕವಾಗಿ ನಿತ್ಯ ಬೆತ್ತಲಾಗುತ್ತೀನಿ,
ಸಾಧ್ಯವಾದಷ್ಟು ಇತರರಿಗೆ ಬೆಳಕ ತೋರಿ ಮತ್ತದೇ ದೀಪದಡಿಯ ನಿರಂತರ ಕತ್ತಲಾಗುತ್ತೀನಿ//

06 November 2014

ಕಂಡವರ ಮನೆಯ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಂಡು ಚಳಿ ಕಾಯಿಸುವ ಕ'ಮಲ' ಪಕ್ಷದ ಭಂಡ ಪೀಡೆಗಳು.......








ಇದೊಂದು ಸರಳ ಪ್ರಕರಣ. ಸೊಕ್ಕು ಹೆಚ್ಚಾಗಿ ಬಾಲಕಿಯನ್ನ ಕಾಮದಾಟಕ್ಕೆ ಬಳಸಿಕೊಂಡ ಆರೋಪ ಹೊತ್ತವರನ್ನ ತಕ್ಷಣ ಒದ್ದು ಒಳಗೆ ಹಾಕಿದ್ದರೆ ಪ್ರಕರಣ ಇಷ್ಟು ವಿಕೋಪದ ಪರಿಸ್ಥಿತಿಗೆ ಹೋಗುತ್ತಿರಲಿಲ್ಲ. ಅದು ಬಿಟ್ಟು ಸುಳ್ಳು ಸುಳ್ಳೇ type ಮಾಡಿದ death note ಸೃಷ್ಟಿಸಿ ನಾಟಕ ಶುರುಮಾಡಿದ ನಂತರ ಬಿಜೆಪಿ ಪುಂಡು ಪೋಕರಿಗಳಿಗೆ ವಿಧ್ವಂಸಕ ಕಾರ್ಯಗಳನ್ನ ಎಸಗಲಿಕ್ಕೆ ಮುಕ್ತ ಪರವಾನಗಿ ದೊರೆತಂತಾಗಿ ವಿಕೋಪದ ಹಂತ ದಾಟಿ ಪ್ರಕೋಪಕ್ಕೆ ಹೋಗಿದೆ.

ಹಾಗಂತ ಇದು ಬಿಜೆಪಿ ಪುಂಡರ ಪ್ರಲಾಪದಂತೆ ಅತ್ಯಾಚಾರದ ಪ್ರಕರಣ ಅಲ್ಲವೇ ಅಲ್ಲ. ಮೊದಲನೆಯದಾಗಿ ಇದು ಒಂದು ಎಳೆಯರ ಪ್ರೇಮ ಪ್ರಕರಣ,

ಎರಡನೆಯದಾಗಿ ಮೊನ್ನೆ ಅದೊಮ್ಮೆ ಆಗಿದ್ದರೂ ಅದು ಸಮ್ಮತಿಯ sex ಹೊರತು ಬಲವಂತದ ಅತ್ಯಾಚಾರ ಅಲ್ಲ.

ಮೂರನೆಯದಾಗಿ ಇದರಲ್ಲಿ ಶಾಮೀಲಾದ ಆರೋಪ ಹೊತ್ತ ಎಲ್ಲರೂ ಮುಸಲ್ಮಾನರಲ್ಲ ಒಬ್ಬ ಸಾಬ, ಒಬ್ಬ ಬ್ಯಾರಿ ( ನಂದಿತಾಳ ಪ್ರೇಮಿ.) ಹಾಗೂ ಒಬ್ಬ ಹಿಂದೂ ಹುಡುಗ.

ಕೊನೆಯದಾಗಿ ಪರಿಸ್ಥಿತಿ ಶಾಂತವಾಗುವ ತನಕ ಈ ಮೂವರನ್ನ ವಶಕ್ಕೆ ಪಡೆದು ಅನಂತರ ಬೇಕಿದ್ದರೆ ಜಾಮೀನು ಮಂಜೂರು ಮಾಡಿದ್ದರೆ ಸಾಕಿತ್ತು.

ಇದು ಬಿಟ್ಟು "ದಿನಕ್ಕೊಂದು ಕಥೆ" ಹೊಡೆಯುತ್ತಿರುವ ಪೊಲೀಸ್ ಹಾಗೂ ಬಿಜೆಪಿ ಪುಂಡರು ಊರಿನ ಸ್ವಾಸ್ಥ್ಯವನ್ನ ಬೇಕಂತಲೇ ಹಾಳುಗೆಡವುತ್ತಿದ್ದಾರೆ. ಇಲ್ಲೀಗ ಹುಡುಗಿಯೊಬ್ಬಳಿಗೆ ಅತ್ಯಾಚಾರ ಘಟಿಸಿ ಆಕೆ ವಿಷ ಕುಡಿದು ಸತ್ತಳು ಅನ್ನೋದಕ್ಕಿಂತ ಅವಳು "ಹಿಂದೂ" ಹುಡುಗಿ, ಅವರು "ಮುಸ್ಲಿಂ" ಹುಡುಗರು ( ವಾಸ್ತವದಲ್ಲಿ ಇಬ್ಬರು ಮಾತ್ರ.) ಅನ್ನೋದಷ್ಟೇ ಮುಖ್ಯವಾಗುತ್ತಿದೆ.

ಇದನ್ನೇ ನೆಪ ಮಾಡಿಕೊಂಡು ಈಗ ತೀರ್ಥಹಳ್ಳಿಯ ವ್ಯಾಪಾರ ವಲಯದಲ್ಲಿ ಪ್ರಬಲರಾಗುತ್ತಿರುವ "ನ್ಯಾಷನಲ್ ಸಮೂಹ"ದ ಬ್ಯಾರಿಗಳನ್ನ ಹಣಿಯಲು ಬಿಜೆಪಿಯವರು ಹೊರಟಿದ್ದಾರೆ. ಏಕೆಂದರೆ ಅವರ ಮೆರೆದಾಟದಿಂದ ಹೆಚ್ಚು ಹಾನಿಯಾಗಿರೋದು ಕೊಂಕಣಿಗಳ, ಬಂಟರ ಹಾಗೂ ಬ್ರಾಹ್ಮಣರ ವ್ಯಾಪಾರಿ ಹಿತಾಸಕ್ತಿಗೆ. ಇವರೆಲ್ಲರೂ ಸಾಂಪ್ರದಾಯಿಕ ಬಿಜೆಪಿ ಬೆಂಬಲಿಗರು ಅನ್ನೋದಿಲ್ಲಿ ಗಮನಾರ್ಹ.

ಮೊದಲು ಪೊಲೀಸರು ಕಥೆ ಹೊಡೆಯುವುದನ್ನ ಬಿಟ್ಟು ಸೂಕ್ತ ಕ್ರಮ ಕೈಗೊಂಡು ಆರೋಪಿಗಳನ್ನ ಅದರಲ್ಲೂ ಅವಳ ಭಂಡ ಅಪ್ಪನನ್ನು ವಶಕ್ಕೆ ಪಡೆಯಲಿ. ವಾಸ್ತವದಲ್ಲಿ ಅವರಿಬ್ಬರೂ ಆನಂದಗಿರಿಗುಡ್ದದ ಸಮೀಪ ತುಂಗಾ ಮಹಾವಿದ್ಯಾಲಯದ ಕ್ಯಾಂಟೀನಿನ ಹತ್ತಿರದ ದಿಬ್ಬದಲ್ಲಿ ಮಾತಾಡುತ್ತಾ ಕುಳಿತಿದ್ದಾಗ 'ನೈತಿಕ ಪೊಲೀಸ್' ಗೂಂಡಾಗಳ ಕೈಗೆ ಸಿಕ್ಕಿ ಬಿದ್ದಿದ್ದರು. ಅಲ್ಲಿ ಅವರಿಬ್ಬರ ಧರ್ಮವನ್ನೆ ನೆಪ ಮಾಡಿಕೊಂಡ ಅವರು ಹುಡುಗನ ಮೇಲೆ ಹಲ್ಲೆ ನಡೆಸಿದ್ದಾರೆ. ಅನಂತರ ಅವಳ ಅಪ್ಪನನ್ನ ಅವಳಿಂದಲೆ ನಂಬರ್ ಪಡೆದು ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಅವಳು ಯಾವ ಕಟ್ಟಿಗೆ ಹೆರಕುತ್ತಿದ್ದ ಅಜ್ಜಿಗೂ ಸಿಕ್ಕಿಲ್ಲ ಅವಳ ಮೈ ಕೆಸರೂ ಆಗಿರಲಿಲ್ಲ. ಅದೆಲ್ಲ ಬಿಜೆಪಿಯ ಅದ್ಭುತ ಕಥಾಕೋರರು ಸೃಷ್ಟಿಸಿ ತೇಲಿ ಬಿಟ್ಟ ಅಡುಗೂಲಜ್ಜಿ ಕಥೆ. ಚಂದಾಮಾಮದಲ್ಲಿ ಅದಕ್ಕಿಂತ ಚಂದದ ಕಥೆಗಳು ಬರುತ್ತಿದ್ದವು ಅಂತ ನೆನಪು. ಇಷ್ಟಾಗಿ ಆಮೇಲೆ ಅಕ್ಕ ಪಕ್ಕದ ಜಿಲ್ಲೆಗಳಿಂದ ಬಂದು ಇಲ್ಲಿ ಗಲಭೆ ಎಬ್ಬಿಸುತ್ತಿರುವ ಬಿಜೆಪಿ ಪುಂಡರ ಮುಕುಳಿ ಮೇಲೆ ಒದ್ದು ಒಳಗೆ ಹಾಕಿ ಒಬ್ಬೊಬ್ಬರ ಮೇಲೂ ಗೂಂಡಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಿ. ಆಗ ಎಲ್ಲಾ ಸರಿಯಾಗಿ ತೀರ್ಥಹಳ್ಳಿ ಮೊದಲಿನಂತಾಗುತ್ತದೆ.

ನಂದಿತ ಅಪ್ಪನ ನಡುವಳಿಕೆ ಸಂಶಯಾಸ್ಪದ. ಆತ ಸ್ಪಷ್ಟವಾಗಿ ಸುಳ್ಳು ಹೇಳುತ್ತಿದ್ದಾನೆ. ಇನ್ನು ಯಾರೋ ಮತಿವಿಕಲನ ಬಡಬಡಿಕೆಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಮತಿಗೆಟ್ಟಂತೆ share ಮಾಡುತ್ತಿದ್ದಾರೆ. ನನಗೆ ತಿಳಿದ ಮಟ್ಟಿಗೆ ಅದು ಶುದ್ಧ ಸುಳ್ಳು. ಇಬ್ರಾಹಿಂ ಶರೀಫ್ ದುಡ್ಡು ಮಾಡಿದ್ದು ರಸ್ತೆ ಕಾಮಗಾರಿ ಗುತ್ತಿಗೆಯಲ್ಲಿಯೇ ಹೊರತು ಆ ಬೇವಕೂಫ ಬಡಬಡಿಸಿದಂತೆ ಕಳ್ಳಸಾಗಣಿಕೆಯಿಂದಲ್ಲ. ಹಾಗಂದವನ ಆಲೋಚನೆಗಳು ಅದೆಲ್ಲಿಂದ ಕಳ್ಳಸಾಗಣೆಯಾದವು ಅನ್ನೋದು ಮೊದಲು ತನಿಖೆಯಾಗಬೇಕು. ಈ ವಿಚಾರಗಳು ಅಲ್ಲದೇ ಇನ್ನೂ ಒಂದು ಖಚಿತ ಮಾಹಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಕ್ಕಿದೆ.

ಮೊನ್ನೆ ನಂದಿತಾ ಮನೆಗೆ ಕರೆತಂದ ಅಪ್ಪ ಹೊಡೆದ ನಂತರ ಅವಮಾನಿತಳಾಗಿ ನಡು ರಾತ್ರೆ ಎದ್ದು ಫಿನಾಯಲ್ ಕುಡಿದು ಮೆಗ್ಗಾನ್ ಆಸ್ಪತ್ರೆಗೆ ಸೇರಿದ್ದಾಗ ನ್ಯಾಷನಲ್ ಶರೀಫರ ಮದ್ಯಸ್ಥಿಕೆಯಲ್ಲಿ ಚಿಕಿತ್ಸಾ ವೆಚ್ಚದ ಹೆಸರಿನಲ್ಲಿ ಐದು ಲಕ್ಷ ರೂಪಾಯಿಗೆ ಅವಳ ಅಪ್ಪ ಹಣ ಪಡೆದು ಸುಮ್ಮನಾಗಲು ಒಪ್ಪಿದ್ದ. ತಮ್ಮಿಂದ ಯಾವ ತಪ್ಪಾಗಿರದಿದ್ದರೂ ಆರ್ಥಿಕವಾಗಿ ಈಗಾಗಲೆ ತಮ್ಮ ಬಂಡವಾಳವನ್ನ ವಿವಿಧ ಉದ್ದಿಮೆಗಳಲ್ಲಿ ಸ್ಥಳಿಯವಾಗಿ ತೊಡಗಿಸಿರುವ ಶರೀಫ್ ತನ್ನ ವ್ಯಾಪಾರಿ ಹಿತಾಸಕ್ತಿಗೆ ಸುಖಾಸುಮ್ಮನೆ ಒದಗಬಹುದಾದ ಧಕ್ಕೆಯಿಂದ ತಪ್ಪಿಸಿಕೊಳ್ಳಲು ಬ್ಯಾರಿ ಸಮುದಾಯದ ಜಮಾತ್ ಮುಖಂಡರಾಗಿ ಅನಿವಾರ್ಯವಾಗಿ ಇದಕ್ಕೆ ಒಪ್ಪಿಕೊಂಡಿದ್ದರು.

ಆದರೆ ನಂದಿತಾಳ ಸಾವು ಈ ಎಲ್ಲಾ ಲೆಖ್ಕಾಚಾರಗಳನ್ನೂ ತಲೆ ಕೆಳಗಾಗಿಸಿತು. ಪರಿಸ್ಥಿತಿಯ ಲಾಭ ಪಡೆದ ಬಿಜೆಪಿಯ ಸಮಯಸಾಧಕ ರಾಜಕಾರಣಿ ಜ್ಞಾನೇಂದ್ರರು ಹೆಣೆದ ಕುತಂತ್ರದ ಫಲ ಪರ ಜಿಲ್ಲೆಗಳಿಂದ ತೀರ್ಥಹಳ್ಳಿಗೆ ಸಂಬಂಧವೇ ಇಲ್ಲದ ಬಿಜೆಪಿ ಪುಂಡರು, ಗೂಂಡಾಗಳು ಜಿಲ್ಲೆಗೆ ಧಾವಿಸಿ ಬಂದರು. ಸಾಮೂಹಿಕ ಅತ್ಯಾಚಾರ ಹಾಗೂ ಅದರಿಂದ ನೊಂದು ಆತ್ಮಹತ್ಯೆ ಎನ್ನುವ ಕಥೆ ಕಟ್ಟಲಾಯಿತು. ಮೊದಲು ಒಪ್ಪಿದ್ದ ಹಣ ಕೈ ಸೇರದೆ ಹತಾಶನಾಗಿದ್ದ ನಂದಿತಾಳ ಅಪ್ಪ ಕೂಡಾ ನಿರ್ಲಜ್ಜನಾಗಿ ಇದಕ್ಕೆ ಸಾಥ್ ಕೊಟ್ಟ.

ಸುತ್ತಲ ಯಾವ ಊರು ಹೊತ್ತಿ ಉರಿದರೂ ಇಲ್ಲಿಯವರೆಗೆ ಕೋಮು ದ್ವೇಷದ ಕಿಡಿ ತೀರ್ಥಹಳ್ಳಿಯನ್ನ ಮುಟ್ಟಿರಲಿಲ್ಲ. ಈಗ ಈ ಊರಲ್ಲೂ ಗಲಾಟೆ ಮಾಡಿಸಿ ಬಿಜೆಪಿ ಗೂಂಡಾಗಳಿಗೆ ತೃಪ್ತಿಯಾಗಿರಬಹುದು. ಸದ್ಯ ಕಾರ್ಕಳ ಒಂದು ಈತನಕ ಕೋಮು ಗಲಭೆಗೆ ಈ ವಲಯದಲ್ಲಿ ಬಲಿಯಾಗಿಲ್ಲ. ಈ ಹರಾಮಿಗಳು ಅಲ್ಲಿನ ಜನರ ನೆಮ್ಮದಿಗೆ ಯಾವಾಗ ಕಿಚ್ಚಿಡುತ್ತಾರೋ ಗೊತ್ತಿಲ್ಲ. ಇವರ ರಾಜಕೀಯದ ತೆವಲಿಗಷ್ಟು ಬೆಂಕಿ ಹಾಕ.

ಪರಿಸ್ಥಿತಿಯನ್ನ ವಿವೇಚಿಸಿ, ಬೇಕಾಬಿಟ್ಟಿ ವದಂತಿ ಹರಡಬೇಡಿ grow up yourself. ಅದೆಲ್ಲಾ ಬಿಜೆಪಿ ತಂತ್ರ. ರೇಪ್ case ಹಾಕೋದೆ ಆದರೆ ಮೊದಲು ಅವರ ಅಧಿನಾಯಕ 'ಬೂಸಿಯ'ನ ಮೇಲೆ ಹಾಕಬೇಕು. ಅಲ್ಲಿ ಸಂತ್ರಸ್ತರು ಶೋಭಕ್ಕ ಹಾಗೂ ನೊಂದವರು ಭಾರತಿಯಕ್ಕ?! ಹೇಳಿಕೇಳಿ ಅದು ನೀಲಿಚಿತ್ರ ರಸಿಕರ, ಹಾಗೆ ಸದನದಲ್ಲಿ ಹಾಡುಹಗಲೆ ನೋಡಿ ಕಲಿತಿದ್ದನ್ನ ನಟ್ಟ ನಡುರಾತ್ರಿ ಕಂಡವರ ಮನೆಯಲ್ಲಿ ಮಾಡಿ ನಲಿವ ಜೀವರಾಜ್, ಹಾಲಪ್ಪ ಹಾಗೂ ಕಾರ್ತಿಕರಂತಹ ಅನರ್ಘ್ಯ ರತ್ನಗಳಿರುವ ಕುಲಗೆಟ್ಟ ಪಕ್ಷ.

ಇನ್ನು ಸ್ಥಳಿಯ ಶಾಸಕರಾದ ಕಿಮ್ಮನೆ ರತ್ನಾಕರ ಇವತ್ತು ದೇವರಿಗೆ ಹುಯಿಲು ಕೊಟ್ಟಿರೋದು ಸ್ಥಳಿಯ ಆಚರಣೆಗೆ ಅನುಸಾರವಾಗಿಯೆ ಇದೆ. ಕಾನೂನಿಗೆ ಹೆದರದ ಭಂಡರು ಇವತ್ತಿಗೂ ಅಲ್ಲಿ ಮಾರಿ, ಜಕಣಿ, ಭೂತ ಹಾಗೂ ಊರ ದೇವರು ರಾಮೇಶ್ವರನ ಕಾರಣಕ್ಕೆ ಹೆದರಿ ಸಾಯುತ್ತಾರೆ. ಅದಕ್ಕೆ ತಕ್ಕಂತೆ ಕಿಮ್ಮನೆ ವರ್ತಿಸಿದ್ದಾರೆಯೆ ಹೊರತು ಇದರಲ್ಲಿ ವಿಶೇಷವೇನೂ ಇಲ್ಲ. ಪ್ರಕರಣ ಘಟಿಸಿದ ಆರಂಭದಲ್ಲಿಯೇ ಅದಕ್ಕೆ ಷರಾ ಬರೆದು ಹಾಸ್ಯಾಸ್ಪದವಾಗಿ ಅಂತಿಮ ತೀರ್ಪು ಕೊಟ್ಟಂತೆಯೆ ವರದಿ ಮಾಡಿದ ೨೪*೭ ಪೀಡೆಗಳ ಬಗ್ಗೆ ಆದಷ್ಟು ಕಡಿಮೆ ಮಾತನಾಡುವುದು ಸಮಾಜದ ಸ್ವಾಸ್ಥ್ಯಕ್ಕೇನೆ ಬಹಳ ಒಳ್ಳೆಯದು.

ಇದು ಕೊಲೆ ಅಲ್ಲವೇ ಅಲ್ಲ ಆತ್ಮಹತ್ಯೆ. ಇನ್ನು ಸಾಮೂಹಿಕ ಅತ್ತಲಾಗಿರಲಿ ಒಬ್ಬನಿಂದಲೂ ನಂದಿತಾಳ ಕನ್ಯತ್ವ ಹರಣವಾಗಿಲ್ಲ ( ಮಣಿಪಾಲ ಆಸ್ಪತ್ರೆಯ ವೈದ್ಯರು ಕೊಟ್ಟಿರುವ ಚಿಕಿತ್ಸಾ ಹಾಗೂ ಪರಿಕ್ಷಾ ವರದಿಯನ್ನ ಗಮನಿಸಿ.). ಹಾಗೊಮ್ಮೆ ಪ್ರಕರಣದಲ್ಲಿ ಯಾರನ್ನಾದರೂ BOOK ಮಾಡಬೇಕಿದ್ದರೂ ಮೊತ್ತಮೊದಲಿಗೆ ಅವಳಪ್ಪನನ್ನೇ BOOK ಮಾಡಬೇಕು. ಏಕೆಂದರೆ ಅವಳು ಅಸ್ವಸ್ಥ್ಯಳಾದದ್ದು ಮನೆಯಲ್ಲಿ. ಹಾಗೂ ವೈದ್ಯರಿಗೆ ಈ ಬಗ್ಗೆ ರಾತ್ರೆ ಉಂಡ ಆಹಾರದಲ್ಲಿ ವಿಷವಾಗಿದೆ ( ಅದೆ ಆಹಾರ ಉಂಡ ಆ ಭಂಡನಿಗೇಕೆ ವಿಷ ಪ್ರಕೋಪ ಕಾಡಲಿಲ್ಲವೋ ನಾಕಾಣೆ!.) ಅಂತಲೆ ಸುಳ್ಳು ಸುಳ್ಳೇ ಹೇಳಿ ಚಿಕಿತ್ಸೆಯ ಹಾದಿ ತಪ್ಪಿಸಿದ ಪುಂಡನವ. ಮೊದಲೆ ಫಿನಾಯಲ್ ಸೇವನೆ ಬಗ್ಗೆ ಗೊತ್ತಿದ್ದರೆ ಎನಿಮಾ ಕೊಟ್ಟು ಮುಂದಿನ ಸೂಕ್ತ ಚಿಕಿತ್ಸೆಯನ್ನಾದರೂ ಕೊಡಲು ಅವರು ಹೋದ ಮೂರೂ ಆಸ್ಪತ್ರೆಗಳ ವೈದ್ಯರಿಗೆ ಖಂಡಿತಾ ಸಾಧ್ಯವಾಗುತ್ತಿತ್ತು. ಆಗ ಸಾವಿನ ಸಾಧ್ಯತೆ ಗಣನೀಯವಾಗಿ ತಪ್ಪುತ್ತಿತ್ತು.

 ಬಾಲಕಿ ಸಾವಿನ ಮೊದಲು ಯಾರಲ್ಲೂ ಯಾವ ಹೇಳಿಕೆಯನ್ನೇ ಕೊಟ್ಟಿಲ್ಲ. ಸರಣಿ ಹೃದಯಾಘಾತದಿಂತ ಆಕೆ ಸತ್ತ ನಂತರ ಅನಿವಾರ್ಯವಾಗಿ ಅವಳಪ್ಪ ಪೊಲೀಸ್ ದೂರು ದಾಖಲಿಸಿದ ನಂತರವಷ್ಟೆ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದೆ. ಅವಳಪ್ಪ ಹೇಳುತ್ತಿರುವ ಅವಳ ಮರಣ ಪೂರ್ವ ಹೇಳಿಕೆಯ ಕಥೆಗಳು ಯಾವ ಕಾಗಕ್ಕ ಗೂಬಕ್ಕರ ಕಥೆಗಳಿಗೂ ಕಡಿಮೆ ಇಲ್ಲ. ತನ್ನ ಸ್ವಂತ ಮಗಳ ಸಾವನ್ನೆ ಪ್ರಹಸನವಾಗಿಸಿ ಸಾವಿನ ನಂತರ ಅವಳ ಮಾನಭಂಗದ ಕಥೆ ಕಟ್ಟಿದ ಹರಾಮಿ ಅಪ್ಪನೆನ್ನುವ ಪ್ರಾಣಿಗೆ ನಾಚಿಕೆಯಾಗಬೇಕು. ಸಾಮಾನ್ಯ ಜ್ಞಾನ ಇರುವವರಿಗೆ ಈ ಸರಳ ಸತ್ಯ ಅರ್ಥವಾಗುತ್ತದೆ. ಇನ್ನೂ ಕಥೆ ಹೊಡೆಯುವ ರೋಗಿಷ್ಟರಿಗೆ ತೀರ್ಥಹಳ್ಳಿ ಇರಲಿ ಬಹುಷಃ ಜಗತ್ತಿನ ಇನ್ಯಾವ ಊರಿನಲ್ಲೂ ಮದ್ದು ಸಿಗಲಾರದು.

02 November 2014

ನೀರ ಮೇಲೆ ಅವಳ ಹೆಜ್ಜೆ....





( ಭಾಗ - ೪.)


ಅವನಿಗೇನೆ ಅರಿವಿಲ್ಲದಂತೆ ಅವ ಯಾಂತ್ರಿಕವಾಗಿ ರೈಲೇರಿದ, ಏರಿದ ಅನ್ನುವುದಕ್ಕಿಂತ ಹೊರಗೆ ತುಂಬಿದ್ದ ಗಲಾಟೆಯ ಜನಜಂಗುಳಿ ದೂಡುತ್ತಲೇ ಅವನನ್ನು ಒಳಗೆ ತರುಬಿತು. ಯಾವುದೋ ಹೊರಗಿನ ಒತ್ತಡಕ್ಕೆ ಒಳಗಾಗಿ ಅದರ ಇಚ್ಛಾನುಸಾರ ವರ್ತಿಸುವ ತೊಗಲುಬೊಂಬೆಯಂತಾಗಿದ್ದ ಆ ಹೊತ್ತಿನಲ್ಲವನು. ಇಡಿ ಬೋಗಿ ಕಿಕ್ಕಿರಿದು ತುಂಬಿತ್ತು. ರೈಲು ಬೆಂಗಳೂರಿನ ದಿಕ್ಕಿನಿಂದ ಧಾವಿಸುವಾಗಲೆ ಹೆಣಕ್ಕೆ ಕಾದು ನಿಂತ ಹದ್ದುಗಳಂತೆ ಒಂದಷ್ಟು ಮಂದಿ ಸನ್ಮಾನ್ಯ ಪ್ರಯಾಣಿಕರು ಅದರ ಮೇಲೆರಗಲು ಹೊಂಚು ಹಾಕುತ್ತಾ ತಂಗುಗಟ್ಟೆಯ ಮೇಲೆ ಕಾದಿದ್ದರು. ಕೆಲವು ಭಂಡ ಸಾಹಸಿಗಳು ಹಳಿ ದಾಟಿ ಅತ್ತಲಿಂದಲೂ ಬಂದು ನಿಲ್ಲುವ ರೈಲಿನ ಮೇಲೆ ಮುಗಿ ಬೀಳಲು ಟೊಂಕ ಕಟ್ಟಿ ನಿಂತಿದ್ದರು. ಒಟ್ಟಿನಲ್ಲಿ ಬಂದು ಮುಟ್ಟಿದ ಪ್ರಯಾಣಿಕರೊಬ್ಬರೂ ಹೊರಗಿಳಿಯುವ ಮುಂದೆಯೆ ಅವರನ್ನೆಲ್ಲ ದೂಡಿಕೊಂಡು ಒಳ ನುಗ್ಗುವವರ ಸಂಖ್ಯೆ ಅಲ್ಲಿನ ಸ್ಥಳ ಸಾಮರ್ಥ್ಯಕ್ಕಿಂತಲೂ ದುಪ್ಪಟ್ಟಾಗಿದ್ದು ಕೂತು ಕೊಳ್ಳುವುದಕ್ಕಿರಲಿ ನಿಲ್ಲಲಿಕ್ಕೂ ಸಹ ಚೂರು ಎಡೆ ಸಿಕ್ಕರೆ ಅದೆ ಅವರ ಅಜ್ಜಿ ಮಾಡಿದ ಪುಣ್ಯ ಅನ್ನುವ ತುರ್ತು ಪರಿಸ್ಥಿತಿ ಅಲ್ಲಿತ್ತು.


ಅದು ಹೇಗೋ ಪ್ರಯಾಸ ಪಟ್ಟು ಒಳ ನುಗ್ಗಿದವನಿಗೆ ಬಾಗಿಲ ಬಳಿ ಕೊಂಚ ನಿಲ್ಲಲು ಎಡೆ ಮಾತ್ರ ಸಿಕ್ಕಿತು. ಅಲ್ಲಿ ನಿಂತೆ ಆತ ಕಾಣದ ನಾಳೆಗೆ ಭಯ ಪಟ್ಟು ಮುಂದಿನ ಬಾಳಿನ ಅನಿಶ್ಚಿತತೆಯ ಬಗ್ಗೆ ಚಿಂತಿಸ ತೊಡಗಿದ. ಬೆಂಗಳೂರಿನಲ್ಲಿ ಹೋಗಿ ಎಲ್ಲಿರಬೇಕು ಅನ್ನುವ ಪ್ರಶ್ನೆಗೆ ಅವನೆ ಒಂದು ತಕ್ಷಣದ ಉತ್ತರ ಕಂಡುಕೊಂಡಿದ್ದ, ಅವನೊಂದಿಗೆ ಹೈಸ್ಕೂಲಿನಲ್ಲಿ ಓದುತ್ತಿದ್ದ ಒಬ್ಬ ಓದಿನಲ್ಲಿ ಆಸಕ್ತಿ ತೋರದೆ ಬೆಂಗಳೂರಿಗೆ ಹೋಗಿ ಅಲ್ಲಿ ತನ್ನ ಅಣ್ಣನ ಜೊತೆ ಏನೋ ಕೆಲಸ ಮಾಡಿಕೊಂಡು ಇದ್ದಾನೆ ಎನ್ನುವ ಸುಳಿವವನಿಗಿತ್ತು. ಹರಸಾಹಸ ಮಾಡಿ ತನ್ನ ಬುದ್ಧಿ ಮತ್ತೆಯನ್ನೆಲ್ಲಾ ಉಪಯೋಗಿಸಿ ಅವನ ಅಮ್ಮನಿಂದ ಅವನ ವಿಳಾಸವನ್ನಿವ ಸಂಪಾದಿಸಿದ್ದ. ಆಕೆಗೆ ವಿಳಾಸ ಕೊಡಲು ಮನಸ್ಸಿರಲಿಲ್ಲ ಹೇಗಾದರೂ ಮಾಡಿ ಅದನ್ನ ಗಿಟ್ಟಿಸದೆ ಇವನಿಗೆ ಅನ್ಯಮಾರ್ಗವೆ ಇರಲಿಲ್ಲ! ಸಾವಿರ ಸುಳ್ಳಿನ ಮಾಲೆ ಹಣೆದು ಕಡೆಗೂ ಆ ವಿಳಾಸವನ್ನ ಗೆದ್ದುಕೊಳ್ಳುವಷ್ಟರಲ್ಲಿ ಅವನಿಗೆ ಸಾಕು ಬೇಕಾಗಿತ್ತು. ಇದೆಲ್ಲವನ್ನೂ ಕೇವಲ ಮೂರು ದಿನಗಳಲ್ಲಿ ಅವನು ಸಾಧಿಸಿದ್ದ!

ಒಂದು ಸುದೀರ್ಘ ಶ್ವಾಸವನ್ನ ಎಳೆದುಕೊಂಡ ರೈಲು ಚೂರೆಚೂರು ಹಿಂದೆ ತಳ್ಳಿದಂತಾಗಿ ಮುಂದೆ ಮೆಲ್ಲಗೆ ಹಳಿಯ ಮೇಲೆ ತೆವಳ ತೊಡಗಿತು. ಅಲ್ಲಿಯವರೆಗೆ ಸ್ವಗತದ ಸರೋವರದಲ್ಲಿ ಮೂಗಿನ ಮಟ್ಟ ಮುಳುಗಿದ್ದ ಅವನಿಗೆ ಇದರಿಂದ ಒಮ್ಮೆಲೆ ಅಘಾತವಾದಂತಾಗಿ ವಾಸ್ತವಕ್ಕೆ ದೊಪ್ಪನೆ ಎಸೆದಂತಾಯಿತು. ನೋಡಿದರೆ ರೈಲು ಮೆಲ್ಲನೆ ವೇಗ ಹೆಚ್ಚಿಸಿಕೊಳ್ಳುತ್ತಿದೆ! ಒಮ್ಮೆಲೆ ಮನೆಗೆ ಮರಳುವ ಹಂಬಲ ಕಾಡಿ ಹಾಗೆಯೆ ಹೊರ ಹಾರಿ ಮನೆಯ ಹಾದಿ ಹಿಡಿಯಲ? ಅನ್ನುವ ಆಲೋಚನೆಯೂ ಸುಳಿದು ಹೋಯಿತು. ಹಾಗೊಮ್ಮೆ ಹೋದರೆ ಅಲ್ಲಿ ಆರತಿ ಹಿಡಿದು ತನ್ನನ್ನ ಸ್ವಾಗತಿಸುವವರ್ಯಾರಾದರೂ ಇದ್ದಾರ? ಎಂದು ಯೋಚಿಸಿದಾಗ ಮಾತ್ರ ಮತ್ತೆ ಅನಾಥ ಭಾವವೆ ಮನೆ ಮಾಡಿ ದೋಭಿಯ ನಾಯಿಯಂತಾದೆ ನಾನು ಎಂದವನಿಗನ್ನಿಸಿತು. ವಿಷಾದದ ನಗೆಯೊಂದು ಮೂಡಿದಷ್ಟೆ ಬೇಗ ತುಟಿಯಂಚಿನಲ್ಲಿ ಅಸ್ತಂಗತವೂ ಆಯ್ತು.

.....


ಹಾಗೆ ನೋಡಿದರೆ ಅವನಿಗೆ ಅವನವರೆಂದು ಹೇಳಿಕೊಳ್ಳಲು ಎಲ್ಲಾ ಸಂಬಂಧಿಕರೂ ಇದ್ದರು. ಆದರೆ "ಕೇವಲ" ಹೇಳಿಕೊಳ್ಳಲು ಮಾತ್ರ. ಯಾರೊಬ್ಬರಿಗೂ ಅವನ ಅಭ್ಯುದಯದ ಬಗ್ಗೆ ಆಸಕ್ತಿ ಇರಲೇ ಇಲ್ಲ. ತಂದೆಯ ಒಡ ಹುಟ್ಟಿದವರೆಲ್ಲ ತೀರಾ ಬಡವರಾಗಿದ್ದು ಹಳ್ಳಿಗರಾಗಿದ್ದರಿಂದ ಅವರಿಂದ ಏನೊಂದನ್ನೂ ನಿರೀಕ್ಷಿಸುವಂತಿರಲಿಲ್ಲ. ಹೆಚ್ಚೆಂದರೆ ಅವರಿಗೆ ಸಾಧ್ಯವಿದ್ದರೆ ಇವನೇ ಏನನ್ನಾದರೂ ಕೊಡಬಹುದಾಗಿತ್ತು ಅಷ್ಟೆ. ಆದರೆ ತಾಯಿಯ ಒಡ ಹುಟ್ಟಿದವರ್ಯಾರೂ ಆರ್ಥಿಕವಾಗಿ ಸೋತವರಾಗಿರಲಿಲ್ಲ. ಆದರೆ ಸ್ವಾರ್ಥದಲ್ಲಿ ಉನ್ಮತ್ತರಾಗಿದ್ದರಿಂದ ಅವರಿಂದಲೂ ಮೂರು ಕಾಸಿನ ಪ್ರಯೋಜನ ಅವನಿಗೆ ಇದ್ದಿರಲೇ ಇಲ್ಲ. ಹಾಗಂತ ಅವರಲ್ಲಿ ಔದಾರ್ಯಕ್ಕೇನೂ ಕೊರತೆ ಇರಲಿಲ್ಲ. ಇವನ ಹೊರತು ಇನ್ನಿತರ ಮನೆಯ ಮೊಮ್ಮಕ್ಕಳ ಬೇಡಿಕೆಗಳನ್ನೆಲ್ಲ ಅವರೆಲ್ಲ ಸಾಮರ್ಥ್ಯಾನುಸಾರ ಪೂರೈಸುವುದಿತ್ತು. ಆದರೆ ತಮಗೆ ಏನೊಂದೂ ಸಹಾಯ ಮಾಡುವ ಸ್ಥಿತಿಯಲ್ಲಿ ಇದ್ದಿಲ್ಲದ ಈ ಅಕ್ಕನ ಮಗನ ಮಗನ ಬಗ್ಗೆ ಅವರಿಗೆ ಸಹಜವಾಗಿ ಅಸಡ್ಡೆ ಇತ್ತು. ತಮಗೆ ಏನೊಂದೂ ತಿರುಗಿ ದೊರೆಯದಲ್ಲಿ ಪುಕ್ಕಟೆ ಕೃಪೆ ತೋರಲು ಅವರ್ಯಾರೂ ಸುತಾರಾಂ ತಯ್ಯಾರಿರಲಿಲ್ಲ.


ಅದರೆ ಇವನನ್ನ ತಮ್ಮ ಕೆಲಸಗಳಿಗೆ ಉಪಯೋಗಿಸಿಕೊಳ್ಳ ಬೇಕಾದ ಸಂದರ್ಭಗಳಲ್ಲಿ ಮಾತ್ರ ಅವರಿಗೆ ಸಂಬಂಧ ನೆನಪಾಗುತ್ತಿತ್ತು. ಅಂತಹ ಹೊತ್ತಿನಲ್ಲಿ ಇವನ ಎರವಲು ಸೇವೆಯನ್ನ ಉಪಯೋಗಿಸಿಕೊಳ್ಳಲು ಅವರ್ಯಾರೂ ಮರು ಆಲೋಚಿಸುತ್ತಲೇ ಇರಲಿಲ್ಲ. ಅವರ ಪಾಲಿಗೆ ಇವನೊಬ್ಬ ಅಗ್ಗದ ಸೇವಕನಾಗಿದ್ದ. ಒಂಥರಾ ಸಂಬಳ ಕೇಳದ ಜೀತದಾಳು. ಇದೆಲ್ಲಾ ಅವನಿಗೆ ಬಾಲ್ಯದಲ್ಲಿ ಅರ್ಥವಾಗುತ್ತಲೆ ಇರಲಿಲ್ಲ. ಯಾರು ಏನೆ ಹೇಳಿದರೂ ಸಹ ಮುಗ್ಧವಾಗಿ ನಂಬುತ್ತಿದ್ದನವ. ಅಲ್ಲದೆ ಯಾರೊಬ್ಬರೂ ತನಗೆ ವಂಚಿಸರು ಎನ್ನುವ ಕುರುಡು ನಂಬಿಕೆಯೊಂದು ಬೇರೆ ಅವನಲ್ಲಿತ್ತು. ಕೊಂಚ ಹೊಗಳಿಕೆಗೆ ಮರಳಾಗುವ ಅವನ ಬಲಹೀನತೆಯನ್ನ ಅವಶ್ಯಕತೆ ಬಿದ್ದಗಲೆಲ್ಲಾ ಧಾರಾಳವಾಗಿ ಅವರೆಲ್ಲ ಉಪಯೋಗಿಸಿಕೊಳ್ಳುತ್ತಿದ್ದರು.


ಅವನನ್ನ ಒಂಬತ್ತನೆ ವಯಸ್ಸಿನಲ್ಲಿ ಅವನ ತಾಯಿಯ ಒಡ ಹುಟ್ಟಿದವಳೆ ಓದಿಸುವ ನೆಪ ಮಾಡಿ ತನ್ನೂರಿಗೆ ಕರೆದೊಯ್ದಿದ್ದಳು. ಅಲ್ಲಿ ತನ್ನ ಮನೆ ಕೆಲಸಕ್ಕೆ ತಿಂಗಳಾನುಗಟ್ಟಲೆ ಉಪಯೋಗಿಸಿಕೊಂಡು ಆಮೇಲೆ ತನ್ನ ಅವಶ್ಯಕತೆ ತೀರಿದ ಮೇಲೆ ವಿದ್ಯಾರ್ಥಿ ನಿಲಯವೊಂದಕ್ಕೆ ಉಪಾಯವಾಗಿ ಸಾಗ ಹಾಕಿ ತನ್ನ ಹೊಣೆಯಿಂದ ಪಾರಾಗಿದ್ದಳು. ಕರೆದು ಕೊಂಡು ಹೋಗುವಂತೆ ಇವನೇನೂ ಆಶಿಸಿರಲಿಲ್ಲ, ಅವಳ ಮನೆಯಲ್ಲಿ ಮಗುವನ್ನ ನೋಡಿಕೊಳ್ಳಲಿಕ್ಕೆ ಒಂದು ಜನ ಸಿಗದೆ ಪರದಾಡುತ್ತಿದ್ದವಳು ಸುಲಭವಾಗಿ ತನ್ನೂರಿಗೆ ಸೆಳೆದೊಯ್ದಿದ್ದಳು. ಮಗು ನೋಡಿಕೊಳ್ಳುವ ಜೊತೆಗೆ ಮನೆಯ ಸಕಲೆಂಟು ಕೆಲಸಗಳನ್ನೂ ಆತ ಬೇಸರವಿಲ್ಲದೆ ಮಾಡುತ್ತಿದ್ದ. ಆದರೆ ಅವಳ ಗಂಡನಿಗೆ ಇವ ಅಲ್ಲಿರೋದು ಇಷ್ಟವಿರಲಿಲ್ಲ. ಹಾಗಂತ ಕರೆ ತಂದಾಗಿತ್ತು ಸೂಕ್ತ ಕಾರಣ ಕೊಡದೆ ವಾಪಾಸು ಕಳಿಸುವ ಹಾಗೂ ಇರಲಿಲ್ಲ.


ಅವನ ಇಚ್ಛೆಗೆ ವಿರುದ್ಧವಾಗಿ ಮೊದಲಿಗೆ ವಿಧ್ಯಾರ್ಥಿ ನಿಲಯಕ್ಕೆ ಸೇರಿಸಿ ಪಾರಾಗಿದ್ದವರು ಮೂರು ವರ್ಷಗಳ ನಂತರ ಅಷ್ಟೆ ಅಸ್ಥೆಯಿಂದ ದೂರದೂರೊಂದರ ಇನ್ನೊಂದು ಉಚಿತ ವಸತಿ ಶಾಲೆಗೆ ಸಾಗ ಹಾಕಿ ಶಾಶ್ವತವಾಗಿ ತಮ್ಮ ಹೊಣೆಗಾರಿಕೆಯಿಂದ ಹೆಗಲು ಕೊಡವಿಕೊಂಡು ಸಲೀಸಾಗಿ ಪಾರಾಗಿದ್ದರು. ಅಲ್ಲಿಂದೀಚೆಗೆ ಅವನ ಬದುಕು ಸೂತ್ರ ತಪ್ಪಿದ ಪಟದಂತಾಗಿ ಹೋಗಿತ್ತು. ಹೆತ್ತವರಿಗೆ ಇವನೊಬ್ಬ ಬದುಕಿದ್ದಾನೆ ಅಂತಲೆ ನೆನಪಿರಲಿಲ್ಲ. ತಮ್ಮ ಸ್ವಾರ್ಥಕ್ಕೆ ಕರೆದು ಕೊಂಡು ಹೋದವರಿಗೆ ತಮ್ಮ ಕೆಲಸ ತೀರಿದ ಮೇಲೆ ಇವ 'ಹೊಳೆ ದಾಟಿಸಿದ ಅಂಬಿಗ'ನಾಗಿದ್ದ, ಹೆಚ್ಚಿನ ಹೊಣೆ ಹೊರಲು ಅವರೂ ಸಹ ಸಿದ್ಧರಿರಲಿಲ್ಲ.

.......


ಶಿವಮೊಗ್ಗ ನಿಲ್ದಾಣ ಬಿಟ್ಟು ಹೊರಟ ರೈಲು ನಡುಗುವಂತೆ ತುಂಗಾ ಸೇತುವೆಯ ಮೇಲೆ ಸಾಗುತ್ತಿದ್ದಾಗ ಬಿಸಿಲಿಗೆ ಬತ್ತಿದ್ದರೂ ಅಲ್ಲಲ್ಲಿ ಕೊರಕಲಲ್ಲಿ ಹರಿಯುತ್ತಿದ್ದ ಹೊಳೆ ಕಣ್ಣಿಗೆ ಬಿದ್ದಾಗ ಖುಷಿಯೊಂದು ತಕ್ಷಣ ಆವರಿಸಿ ಅವ ಭಾವುಕನಾದ. ಇದೇ ಹೊಳೆ ಅವನೂರು ದಾಟಿ ಇಲ್ಲಿಗೆ ಬರುತ್ತಿತ್ತಲ್ಲ, ಅಲ್ಲಿ ಮೈತುಂಬಿ ಹರಿಯುತ್ತಿದ್ದವಳು ಇಲ್ಲಿ ಕೊರಕಲುಗಳ ನಡು ಕಡು ಕಷ್ಟದಿಂದ ಪಾರಾಗಿ ಮುಂದುವರೆಯುತ್ತಿದ್ದ ಹಾಗೆ ಅವನ ಕಣ್ಣಿಗೆ ಕಂಡಿತು. ಅನೇಕ ಬೇಸರದ ಸಂಜೆಗಳನ್ನ ತುಂಗೆಯ ತಟದಲ್ಲಿ ಒಂಟಿಯಾಗಿ ಕೂತು ಅವನು ಕಳೆದಿದ್ದ. ಅವಳೊಂದಿಗೆ ತನ್ನ ಅನೇಕ ನೋವುಗಳನ್ನ ರಹಸ್ಯಗಳನ್ನ ನಸು ಸಂಜೆಯಲ್ಲಿ ಹೇಳಿ ಹಂಚಿಕೊಂಡು ಹಗುರಾಗಿದ್ದ. ಆಕೆ ತನ್ನನ್ನ ಹರಿಯುತ್ತಲೆ ಆಲಿಸುತ್ತಾಳೆ ಎನ್ನುವ ಭ್ರಮೆ ಅವನಲ್ಲಿತ್ತು. ಸಂಕಟದ ಸಂಜೆಗಳಲ್ಲಿ ಅವಳ ಸಾನಿಧ್ಯದಲ್ಲಿ ಮನಸಿನ ಭಾರಗಳನ್ನೆಲ್ಲ ಹೇಳಿಕೊಂಡು ಇಳಿಸಿ ಹಗುರಾಗುವಾಗ ಅವಳೊಬ್ಬ ಆತ್ಮೀಯ ಗೆಳತಿಯಂತೆ ಭಾಸವಾಗಿದ್ದಳು. ಎಂದೆಂದೂ ತನ್ನ ದೂರದ, ತನ್ನ ಎಂದೂ ತಿರಸ್ಕರಿಸದ ನಿಷ್ಕಾಮಿ ಸಖಿ ಅವಳಂತ ಆತ ಬಗೆದಿದ್ದ.


ಈಗ ತನ್ನನ್ನ ಬೀಳ್ಕೊಡುವ ಮನಸಿಲ್ಲದೆ ತುಂಗೆ ನೋವಿನಲ್ಲಿ ಸೋತು ಸೊರಗಿದ್ದಾಳೆ ಅಂತನ್ನಿಸಿತವನಿಗೆ. ತುಂಗೆಯೊಂದಿಗೆ ಒಂದು ಅವ್ಯಕ್ತ ಭಾವನಾತ್ಮಕ ನಂಟನ್ನ ಬೆಳೆಸಿಕೊಂಡಿದ್ದ ಫಲ ಅದು. ಇನ್ನು ಮತ್ಯಾವಾಗ ಮರಳಿ ಅವಳ ದಡದ ಮರಳಲ್ಲಿ ಕೂತು ಕೊಳ್ಳೋದು? ಹರಿವ ಅವಳ ನಿಶ್ಚಲ ಎದೆಯಲ್ಲಿ ಮತ್ತೆಂದು ತಾನು ಬೆತ್ತಲೆ ಕಾಲುಗಳನ್ನ ಇಳಿಬಿಟ್ಟು ತನ್ನ ಒಂಟಿತನದ ನೋವನೆಲ್ಲ ಕ್ಷಣ ಕಾಲವಾದರೂ ಮರೆಯೋದು? ಎನ್ನುವ ಉತ್ತರಗಾಣದ ಪ್ರಶ್ನೆಗಳ ಅಲೆಗಳು ಮನದ ಪಾತ್ರದಲ್ಲಿ ಏಳುತ್ತಿದ್ದಂತೆ ಅವನಿಗೇನೆ ಅರಿವಿಲ್ಲದಂತೆ ಕಣ್ಣು ತುಂಬಿ ಬಂತು. ಸುಮ್ಮನೆ ಮೂಕ ಪಶುವಿನಂತೆ ಕಣ್ಣೀರು ಹಾಕಿದ.

ಅದೆಷ್ಟು ಹೊತ್ತು ಹಾಗೆಯೆ ನಿಂತಿದ್ದನೋ ಅವನಿಗರಿವಿರಲಿಲ್ಲ. ನಿಂತೂ ನಿಂತೂ ಕಾಲು ಬಚ್ಚಿತ್ತು, ಅಲ್ಲಸಲ್ಲದ್ದನ್ನ ವಿನಾಕಾರಣ ಮತ್ತೆ ಮತ್ತೆ ಆಲೋಚಿಸಿ ಅವನ ಮಂಡೆಯೂ ಬಳಲಿತ್ತು. ಹಾಗೆ ಅಕ್ಕ ಪಕ್ಕ ಅಲ್ಲೆ ನೆಲದ ಮೇಲೆ ಕೂತವರತ್ತ ಆರ್ತ ದೃಷ್ಟಿ ಬೀರಿ ಅವರ ಕೃಪೆಯಿಂದ ಸಿಕ್ಕಿದ ತುಣುಕು ಎಡೆಯಲ್ಲಿ ಕಷ್ಟದಿಂದ ತಾನೂ ಅಂಡೂರಿದ. ಕೇವಲ ಹೆಸರು ಮಾತ್ರ ಕೇಳಿ ಗೊತ್ತಿದ್ದ ಊರುಗಳೆಲ್ಲ ಒಂದೊಂದಾಗಿ ಹಿಂದಾಗುತ್ತಿದ್ದವು. ಹೆಸರೂ ಸಹ ಕೇಳಿ ಗೊತ್ತಿಲ್ಲದ ಅನೇಕ ನಿಲ್ದಾಣಗಳಲ್ಲಿ ಆಗಾಗ ನಿಂತು ರೈಲುಬಂಡಿ ಮುಂದೋಡುತ್ತಿತ್ತು.

ರೈಲು ಮತ್ತವನ ಮನಸಿನ ಚಲನೆಯಲ್ಲೊಂದು ಸಾಮ್ಯತೆ ಇತ್ತು. ತಾದ್ಯಾತ್ಮನಾಗಿ ಆಲೋಚಿಸುತ್ತಿದ್ದ ಅವನ ಮನದ ಬಂಡಿ ಹಿಂದಿರುಗಿ ನೆನ್ನೆಗಳತ್ತ ಓಡುತ್ತಿತ್ತು. ಆದರೆ ಅವ ಕುಳಿತ ಬಂಡಿ ಮಾತ್ರ ಹೊಸ ಕನಸುಗಳ ಬೆನ್ನು ಹತ್ತಿದ ನಾಳೆಗಳತ್ತ ದೌಡಾಯಿಸುತ್ತಾ ಮುಂದೋಡುತ್ತಿತ್ತು. ಹೊರಗೆ ಸೂರ್ಯ ಮುಪ್ಪಾಗುತ್ತಿದ್ದ. ಅನಿರೀಕ್ಷಿತಗಳಿಗೆ ಅನಿವಾರ್ಯವಾಗಿ ತೆರೆದುಕೊಳ್ಳಲು ಅವನೂ ಹೆದರು ಹೆದರುತ್ತಲೇ ತಯಾರಾಗುತ್ತಿದ್ದ. ಅದ್ಯಾವುದೋ ಒಂದು ಜಂಕ್ಷನ್ನಿನಲ್ಲಿ ರೈಲು ಒಮ್ಮೆಲೆ ನಿಂತಾಗ ಅಲ್ಲಿನ ಗೌಜಿ ಗದ್ದಲಕ್ಕೆ ಬೆಚ್ಚಿ ವಾಸ್ತವಕ್ಕವನು ಮರಳಿದ. ರೈಲಿಳಿಯುವವರ ಭರಾಟೆ. ಅದೂ ಇದು ಮಾರುವವರ ಗಲಾಟೆ ಗದ್ದಲ, ಏರಲು ಕಾತರದಿಂದ ಕಾಯುತ್ತಿರುವವರ ಅವಸರ ಇವೆಲ್ಲದರ ನಡುವೆ ಇವನ ನೋವು ಅನಾಥ ಕೂಸಿನಂತಿತ್ತು. ಇಳಿಯುವವರು ಇಳಿಯುತ್ತಿದ್ದರು ಏರುವವರು ಏರುತ್ತಿದ್ದರು ಬೀಡಿ ಸೇದುವವರು ಸೇದುತ್ತಿದ್ದರು. ಒಟ್ಟಿನಲ್ಲಿ ಅಲ್ಯಾರಿಗೂ ಇವನೊಬ್ಬ ಲಕ್ಷ್ಯ ಕೊಡಬೇಕಾದ ವಿಶೇಷ ವ್ಯಕ್ತಿಯೇನೂ ಆಗಿರಲಿಲ್ಲ. ಅಲ್ಲಿ ನೆರೆದ ಯಾರಿಗೂ ಅವನ ನೋವು ಕಾಣುತ್ತಿರಲಿಲ್ಲ. ಜಗತ್ತು ಅದರ ಪಾಡಿಗದು ಓಡುತ್ತಿತ್ತು. ಇವ ಇವನ ಲೋಕದ ಝಂಜಡದಲ್ಲಿಯೆ ಮುಳುಗಿ ಹೋಗಿದ್ದ.


( ಮುಂದಿದೆ.)

19 October 2014

ಪುಸ್ತಕದೊಳಗೆ - ೨೨





"ಶಕುಂತಳಾ"


ಲೇಖಕರು; ಡಾ ಗುರುಪ್ರಸಾದ್ ಕಾಗಿನೆಲೆ,

ಪ್ರಕಾಶಕರು; ಛಂದ ಪುಸ್ತಕ  ( ಮೊದಲ ಎರಡು ಮುದ್ರಣ.)

ಪ್ರಕಟಣೆ; ೨೦೦೭.


ಕ್ರಯ; ರೂಪಾಯಿ ಅರವತ್ತು.


"ಅತ್ತಿ ಒಳಗೆ ಕತ್ತಲು ಕೋಣೆಯಲ್ಲಿ ಸೊಟ್ಟಬಾಯಿ ಮಾಡಿಕೊಂಡು ಕೂತಿತ್ತು. ಅನಂತು  ಮನೆಗೆ ಬಂದವನೇ ಒಳಗೆ ಕೂತಿರುವಾಕೆಯನ್ನು ಅನಾಮತ್ತಾಗಿ ಹೊತ್ತು ತಂದು ಹೊರಗೆ ಚಾಪೆಯಲ್ಲಿ ಕೂಡಿಸಿದ.
‘ಮೆಲ್ಗ್ವೋ, ತೊಮ್ಮ...’ ಅಂತು.

ಅತ್ತಿ ಬಾಯಿ ಸೊಟ್ಟ ಕಾಣಿಸಿತು, ಅನಂತೂಗೆ. ಮಾತು ತೊದಲು ಅನ್ನಿಸಿತು.

‘ಇದ್ಯಾಕೇ, ಹೆಂಗೆಂಗೋ ಆಡ್ತೀ. ಹುಷಾರಿದೀಯೋ ಇಲ್ವೋ’ ಕೇಳಿದ.

‘ನ್ವಂಗೇನಾದ್ವದ್ವೋ’ ಅಂತು, ಅತ್ತಿ ನಗುತ್ತಾ. ಬಾಯಿ ಇನ್ನೂ ಸೊಟ್ಟ ಆಯಿತು.

ಒಳಗಿಂದ ಬಂದಳು ರುಕ್ಮಿಣಿ. ‘ನಿನ್ನೆ ರಾತ್ರಿ ಆ ಗುಲ್ಪಾವಟಿ ತಿನ್ನೋಕ ಆ...ಅ ಅಂತ ಬಾಯ್ಕಳೀತು ನೋಡ್ರಿ. ಮೊದ್ಲೇ ಕಣ್ಣೂ ಕಾಣೋ ಹಂಗಿಲ್ಲ. ಆಗಿಂದಾನೇ ಬಿಟ್ಟ್ಬಾಯಿ ಹಂಗೇ ಬಿಟ್ಕೊಂಡೇ ಕೂತಿತ್ತು.

ಮುಂಜಾನಿಂದ ಏನೂ ತಿಂದಿಲ್ಲ. ಏನಾರ ಹೇಳಿದ್ರೆ ಹಾರಾಡ್ತಾಳೇ. ನಂಗಂತು ಸಾಕಾಗ್‍ಹೋತಪಾ, ಈಕಿ ಕಾಲ್ದಾಗ. ಆಕಡೀಯಿಂದ ಈ ಕಡಿಗೀ, ಹೊತ್ತು ಹೊತ್ತು ಕೂಡ್ಸೀನಿ. ಮ್ಯಾಲ ಹೊಟ್ಟೀ ಬ್ಯಾರೆ ಸರೀ ಇಲ್ಲ. ಬೆಳಗ್ನಿಂದ ಮೂರು ಪ್ಯಾಕೀಟು ಕೊಟ್ಟಾಳ, ಕೆಳಗ ಬಟ್ಟೀ ಕಟ್ತೀನಿ ಅಂದ್ರ ಒಲ್ಲೆ ಅಂತಾಳ. ಅಲ್ಲ, ಮಾಡಣಂತೆ, ಸರಿ. ಸ್ವಲ್ಪಾದ್ರೂ ಅನ್ಸರ್ಸಬೇಕಾ ಇಲ್ಲಾ’.  ಸುಮ್ಮನೇ ಕೈಯಲ್ಲಿ ಹೂಬತ್ತಿ ಹೊಸೆಯುತ್ತಾ ಕೂತಿತ್ತು, ಅತ್ತಿ. ಬತ್ತಿಗೆ ಹಚ್ಚೋ ಬಿಳೀಪುಡಿಯಾದ ಅಕ್ಕಿಹಿಟ್ಟನ್ನ ಇನ್ನೊಂದು ಹಿತ್ತಾಳೆ ಹರಿವಾಣದಲ್ಲಿ ಪಕ್ಕಕ್ಕೆ ಇಟ್ಟುಕೊಂಡು ಕೂತಿತ್ತು.

ಈ ಮನೆಯಲ್ಲಿ ಅಕ್ಕಿಹಿಟ್ಟನ್ನು ಬಿಟ್ಟು ಬೇರೆ ಯಾವುದೇ ಬಿಳೀಪುಡಿಗಳನ್ನು ತಾನು ಬದುಕಿರುವವರೆಗೂ ತರಬಾರದೆಂದು ಹಠಹಿಡಿದಿತ್ತು. ಹೀಗಾಗಿ ಮನೆಯ ಸೋಪಿನಪುಡಿ, ಪಾತ್ರೆ ಉಜ್ಜುವ ಪುಡಿ ಎಲ್ಲವೂ ಏನಾದರೂ ಬಣ್ಣದ್ದೇ ಆಗಿರಬೇಕಿತ್ತು. ದೇವರಪಾತ್ರೆಗಳನ್ನು ಸಬೀನಾಪುಡಿ ಹಾಕಿ ತೊಳೆದರೆ ಲಕಲಕ ಹೊಳೆಯುತ್ತದೆ ಎಂದು ರುಕ್ಮಿಣಿ ಏನು ಹೇಳಿದರೂ ಅದು ನಡೆದಿರಲಿಲ್ಲ. ಈಗ ಕಳೆದ ನಾಲ್ಕು ವರ್ಷಗಳಿಂದ ಏನೇನೂ ಕಣ್ಣು ಕಾಣದಂತಾದ ಮೇಲೆ ಅನಂತೂ ಮಗಳಿಗೆ ಕುಟಿಕರ ಪೌಡರ್ ತಂದಿದ್ದ.

‘ಆಸ್ಪತ್ರೇಗೆ ಕರ್ಕೊಂಡು ಹೋಗ್ತೀರೇನು’?, ಕೇಳಿದಳು, ರುಕ್ಮಿಣಿ.

‘ಸ್ವಲ್ಪ ತಡಿ, ನೋಡಣ’ ಏನೋ ಯೋಚಿಸಿದ, ಅನಂತು.

‘ಆ ಪಂಡಿತಂಗಾರೂ ಕೊಂಚ ಮನಿಕಡಿ ಬಂದ್‍ನಡೀ ಅಂತ, ಹೇಳ್ರೀ, ಸತ್‍ಗಿತ್ತೀತು, ಮುದ್ಕೀ.’ ರುಕ್ಮಿಣಿ ಬಡಬಡಿಸಿದಳು.

‘ಇಲ್ಲ ತಗೋಳೇ, ಸಾಯೂಂತದೇನಾಗದ, ಈಗ. ಎಂತದೋ ವಾಯು ಅನ್ನಿಸ್ತದೆ. ಒಂಚೂರು ಆ ತೈಲ ಹಚ್ಲೇನೇ, ಏ ಅತ್ತೀ’ ಕೇಳಿದ, ಅನಂತು.

ಸುಮ್ಮನೆ ಧ್ವನಿ ಬಂದ ಕಡೆ ನೋಡಿತು, ಕುರುಡು ಮುದುಕಿ. ಆ ಸತ್ತ ಪಾಪೆಗಳು ತುಳಸಿಕಟ್ಟೆಯ ಕಡೆ ದೃಷ್ಟಿಸುತ್ತಿದ್ದವು. ಅಲ್ಲಿ ಅನಂತೂ ಮಗ ಆನಂದ ಒಬ್ಬನೇ ಚೆಂಡನ್ನು ನೆಲಕ್ಕೆ ಬಡೀತಿದ್ದ. ‘ನೂರ ಇಪ್ಪತ್ನಾಕು... ನೂರ ಇಪ್ಪತ್ತೈದು....’

‘ವವಗೆ... ವವಗೆ’ ಅಂತು, ಅತ್ತಿ. ಬಲಗೈ ತೋರುಬೆರಳನ್ನ ಎತ್ತಿ ತೋರಿಸಿತು. ನಿನ್ನೆ ತನಕ ಈ ಮಾತುಗಳೆಲ್ಲಾ ಅರ್ಥವಾಗುತ್ತ್ತಿದ್ದವು, ಅನ್ನಿಸಿತು, ಅನಂತೂಗೆ. ಮತ್ತೆ ಎತ್ತಿ ಒಳಗೆ ಕೋಣೆಯಲ್ಲಿ ಕೂರಿಸಿದ. ‘ ಬ್ವಾಗ್ಗ್ಲ್‍ಯು’ ಅಂತು, ಪ್ರಯಾಸಪಟ್ಟು. ಬಾಗಿಲನ್ನು ಮುಂದೆ ಮಾಡಿಕೊಂಡು ಹೋದ.

‘ಅನನ್ತ.....ಊ’ ಕೂಗಿತು, ಒಳಗಿಂದ. ಅನಂತು ಮತ್ತೆ ಕೋಣೆಯೊಳಗೆ ಹೋದ. ‘ಏನು’ ಅಂದ. ಕೈ ಮುಟ್ಟಿ ವಾಪಸ್ಸು ಕಳಿಸಿತು. ಅನಂತು ಹೊರಗೆ ಹೋಗಿ ‘ಏ ಆನಂದ, ಒಳಗ್ ಹೋಗು, ಅತ್ತಿ ಕರೀತಿಯಾಳೆ’ ಅಂದ.

‘ನೂರಾ ಎಪ್ಪತ್ತೈದು.... ನೂರಾ ಎಪ್ಪತಾರು...’ ಅನ್ನುತ್ತಾ ಒಳಗೆ ಹೋದ, ಆನಂದ. ದಿನಪತ್ರಿಕೆಯಲ್ಲಿ ಸುತ್ತಿದ್ದ ಒಂದು ಪಾಕೀಟನ್ನು ಹೊರಗೆ ತಂದು ಕಾಂಪೌಂಡಿನಾಚೆಯ ಗುಂಡಿಗೆ ಎಸೆದ. ಎಂಟಾಣೆಯನ್ನು ಜೇಬಿಗೆ ಸೇರಿಸಿದ.

ಮೂರು ವರ್ಷದ ಹಿಂದೆ ಅತ್ತಿಯ ಕಾಲಿನ ಕೀಲುಗಳೆಲ್ಲಾ ಬಿಡಿಸದಂತಾದಾಗ, ಹೀಗೆ ಪಾಕೀಟು ಕೊಡಲು ಶುರುಮಾಡಿದ್ದಳು, ದಿನ ಮುಂಜಾನೆ. ಅತ್ತಿಗೆ ಅರಳುಮರಳು ಅಂದವರಿಗೆಲ್ಲ ಈ ವಿಷಯದ ಬಗ್ಗೆ ಆಶ್ಚರ್ಯವಾಗುತ್ತಿತ್ತು. ಗಡಿಯಾರದಂತೆ ಲೆಕ್ಕ ಹಿಡಿದ ಹಾಗೆ ದಿನಾ ಒಂದು ಪಾಕೀಟು ಕೊಡುತ್ತಿದ್ದಳು. ಈಗ ನಿನ್ನೆಯಿಂದ ಜಾಸ್ತಿಯಾಗಿದೆ ಅನ್ನುವುದು ರುಕ್ಮಿಣಿ ಹೇಳಿದಮೇಲೆ ಅನಂತೂಗೆ ಗೊತ್ತಾಗಿದ್ದು. ಆನಂದ ಮೊದಲೊಂದು ದಿನ ಕುತೂಹಲಕ್ಕೆಂದು ಬಿಚ್ಚಿನೋಡಿ, ಮತ್ತೆ ಅತ್ತಿಯ ಕೋಣೆಯಕಡೆ ಹೋಗುವುದಿಲ್ಲವೆಂದು ಹಟ ಹಿಡಿದಿದ್ದ. ಅತ್ತಿ ದಿನಾ ನಾಲ್ಕಾಣೆ ಕೊಡುತ್ತಿದ್ದಳು. ಈಗ ಕಳೆದವರ್ಷದಿಂದ ಎಂಟಾಣೆ ಕೊಡುತ್ತಿದ್ದಳು.
‘ಹೋಗಿ, ಕೈಕಾಲು ತೊಳ್ಕೋ.. ಸೂಳೇಮಗನೇ’ ಅನಂತೂ ಮಗನಿಗೆ ಬೈದ. ‘ಇನ್ನೂರ ಆರು... ಇನ್ನೂರ ಏಳು’ ಅನ್ನುತ್ತಾ ಮತ್ತೆ ಕೈಯಿಂದ ಕೈಗೆ ಚೆಂಡನ್ನು ಬದಲಾಯಿಸುತ್ತಾ ಮುಂದಿನ ಅಂಗಳದಲ್ಲಿ ಕೈತೊಳೆದ, ಆನಂದ.


‘ರುಕ್ಮಿಣೀ... ಕೊಂಚ ಮುಂಬಾಗಿಲು ಹಾಕ್ಕೋ. ಅತ್ತಿ ಒಳಗದಾಳ. ನಾನ್ಕೊಂಚ ಪಂಡಿತನ್‍ಹತ್ರ ಹೋಗ್ಬರ್ತೀನಿ’ ಅಂತಂದು, ಹೊರಗೆ ಹೋದ, ಅನಂತು.

ಕೋಣೆಯ ಕತ್ತಲಿನಲ್ಲಿ ಬುಟ್ಟಿಯಲ್ಲಿಟ್ಟಿದ್ದ ಹತ್ತಿಯನ್ನು ಹಿಂಜಿ, ಹಿಂಜಿ ಹಾಕುತ್ತಿತ್ತು, ಮುದುಕಿ. ಹತ್ತಿಯ ಬೀಜಗಳು ಪಕ್ಕದ ಕುಟ್ಟಣಿಕೆಯನ್ನು ಸೇರಿದವು. ಪಟಪಟ ಕುಟ್ಟಿ, ಬಾಯಿಗೆ ಹಾಕಿಕೊಂಡಿತು. ನುಂಗಲಾಗಲಿಲ್ಲ. ಮೇಲ್ಕೆಮ್ಮು ಬಂತು. ಮತ್ತೆ ಸುತ್ತ ನೋಡಿತು. ಕಣ್ಣು ಕಿರಿದು ಮಾಡಿದಾಗ, ಏನೋ ಪೂರಾ ಕಪ್ಪು ಕೊಂಚ ಕಂದಾಯಿತು. ಪಾಪೆಗಳು ಹಿಗ್ಗಿದವು. ಸೊಟಗಾಯಿಯ ಜೊಲ್ಲನ್ನು ಒರೆಸಿಕೊಳ್ಳಲು ಕೈ ತೆಗೆದಾಗ, ತಲೆಯ ಮೇಲೆ ಹೊದ್ದಿದ್ದ ಸೀರೆ ಕೆಳಗೆ ಬಿದ್ದು, ಬೋಡು ತಲೆ, ಜೋತುಮೊಲೆ ಹೊರಬಿದ್ದವು. ಮತ್ತೆ ಹೊದ್ದಿಕೊಂಡಿತು. ‘ಇ.. ಹಿಹಿ’ ಎಂದು ಹೊರಗಿಂದ ನಗು ಕೇಳಿಸಿತು. ‘ಇನ್ನೂರ ಮೂವತ್ತಾರು... ಇನ್ನೂರಾ ಮೂವತ್ತೇಳು’ ಚೆಂಡು ಪುಟಿದೇಳುತ್ತಿತ್ತು.


‘ನಾನು ಕೊಂಚ ಗುಡೀಕಡಿ ಹೋಗ್ಬರ್ತೀನಿ. ಆ ನಂದೀ ಬಂದ್ರ ಅತ್ತೀಗ ಕೊಂಚ ಗಂಜೀ ಮಾಡಕ್ಕೆ ಹೇಳಾತ’ ರುಕ್ಮಿಣಿ ಹೇಳಿ ಹೊರಗೆ ಹೊರಟಳು.

‘ಹ್ವರಹಾಹೋ ಝಿನ, ಹ್ವರಹಾಹೋ ಝಿನ’ ಅತ್ತಿ ಕೂಗಿತು. ಕೇಳಿ ನಕ್ಕಳು, ರುಕ್ಮಿಣಿ. ಇರಲಿ ಅಂದು ಬಚ್ಚಲುಮನೆಗೆ ಹೋಗಿಬಂದಳು. ಹೊರಬಂದು, ‘ನನಗೆಂತದೇ? ಸರಿಹೋತು, ನಾನು ಕೂತರೆ, ಈ ವಯಸ್ನಾಗೆ..... ಸರಿ, ನೀ ಕಾಳಜಿ ಮಾಡ್ಬೇಡೇ ಅತ್ತಿ,’ ಅಂದಳು. ಅತ್ತಿ ಮತ್ತೆ ‘ಹ್ವರಹಾಹೋ ಝಿನ... ಹ್ವರಹಾಹೋ ಝಿನ’ ಅಂತ ಬಡಬಡಿಸಿದಾಗ ‘ಸರಿ ಬಿಡೇ. ನಂಗೆ ಇನ್ನೂ ಎರಡು ದಿನ ಅದ.’ ಅಂದಳು, ಸಮಾಧಾನಕ್ಕಾಗಿ. ಅತ್ತಿ ಸಮಾಧಾನದಿಂದ ಕೂತುಕೊಂಡಿತು.

‘ಯಾರ್ಗೆ ಹೊರಗೋ ಎಂತದೋ, ಊರವ್ರ ಹೊರಗಿನ ಲೆಕ್ಕ ಎಲ್ಲಾ ಬೇಕು, ಮುಂಜಾನೆ ತಿಂದದ್ದು ಹತ್ತಕ್ಕೆ ನೆನಪಿರಲ್ಲ. ನನ್ನ ಹತ್ತು ವರ್ಷದ ಹಿಂದಿನ ದಿನಗಳು ನೆನಪಿರ್ತಾವೆ.’ ನಗುವುದನ್ನು ಬಿಟ್ಟೂ ಬೇರೇನೂ ಮಾಡಲಾಗಲಿಲ್ಲ.

........


‘ಅತ್ತಿ, ನಿಂಗ ಅತ್ತಿ ಅಂತ ಯಾಕ ಕರೀತಾರೇ? ನೀ ಯಾರಿಗ ಅತ್ತಿ? ಅಪ್ಪಗಾ, ಅಮ್ಮಗ?’ ಆನಂದ ಕೇಳಿದ್ದ.

‘ಅಯ್ಯೋ, ಹ್ವಾಗೋ, ನಾ ನಿಮ್ಮಜ್ಜಗ ಅತ್ತಿ. ನಿಮ್ಮಪ್ಪನ ಅಪ್ಪ ನಮ್ಮಮಗ ಕಕ್ಕ ಆಗ್ಬಕು. ಎಲ್ರೂ ಹ್ವಾದ್ರೂ. ನಾ ಒಬ್ಬಾಕಿ ಉಳ್ದೀನಿ, ಇನ್ನು. ಎಲ್ಲ ತಿನ್ನ ಅನ್ನದಾಗದ, ತಿಳೀತ’ ಅತ್ತಿ ಹೂಬತ್ತಿ ಹೊಸೆಯುತ್ತ ಹೇಳಿತ್ತು.

‘ಅತ್ತಿ, ನಿಂಗ ಎಷ್ಟೇ ವಯಸ್ಸು?’

‘ಈಗೆಷ್ಟು ಇಸ್ವೀನೋ ಅಷ್ಟೇ ವಯಸ್ಸು ನೋಡು, ನಂಗ.’

‘ಅಂದ್ರೆ ನಿಂಗ ಈಗ ಮೂರು ವರ್ಷನೇನೆ? ನಾನೇ ನಿಂಗಿಂತ ಹತ್ತು ವರ್ಷ ದೊಡ್ಡಾತ ಆದ್ನಲ’

‘ಎಂತಾ ಮೂರೋ ಮಾರಾಯ? ನಂಗೀಗ ಐವತ್ತಾರಾಯ್ತು ಮೊನ್ನೆ ಶ್ರಾವಣಕ್ಕ, ನಿಮ್ಮಮ್ಮ ಅದಾಳಲ, ಶಕ್ಕು, ಆಕೀನೂ ನಾನೂ ಒಂದ ದಿನ ಹುಟ್ಟಿದಾವ. ನೋಡ್ದೋರೆಲ್ಲ ನಮ್ಮನ್ನ ಅವ್ಳೀಜವ್ಳಿ ಅಂತಿದ್ರು.’

‘ನಮ್ಮಮ್ಮ ಶಕ್ಕು ಅಲ್ಲತ್ತೀ. ರುಕ್ಮಿಣಿ.’

‘ನಿಮ್ಮಪ್ಪ ನಾರಾಯಣ ಹೌದೋ ಅಲ್ಲೋ’

‘ಅಲ್ಲ, ನಮ್ಮಪ್ಪ ಅನಂತು’

‘ಹೌದೌದು, ನಿಮ್ಮಪ್ಪ ಅನಂತ. ನಿನ್ ಹೆಸರು ಹನುಮಂತು. ನಿಂಗೀಗ ಇಪ್ಪತ್ತಾರೇ ವಯಸ್ಸು, ಹೌದೋ ಅಲ್ಲೋ’ ನಕ್ಕು ಕೇಳಿತ್ತು, ಅತ್ತಿ. ಮತ್ತೆ ಕರೆದು ಹೇಳಿತು. ‘ನಾನ್ಹೇಳ್ತೀನಿ, ಕೇಳು. ನಿಮ್ಮಪ್ಪ ನಾರಾಯಣ. ಭಾರಿ ಶೋಕಿವಾಲ. ನಿಮ್ಮಮ್ಮ ಶಕ್ಕೂಗೆ ವಯಸ್ಸಲ್ಲದ ವಯಸ್ಸಲ್ಲಿ ಬಸುರುಮಾಡಿದಾತ, ತಿಳ್ಕೋ. ನಿಮ್ಮಪ್ಪಗ ಕೇಳ್ಬೇಡ, ಆದ್ರ’  ಎಂದು ಗುಟ್ಟಿನಲ್ಲಿ ಹೇಳಿತು.

‘ನಾನು ಆನಂದ, ಅಜ್ಜಿ’

‘ನೀನು ಆನಂದಾನ ಆಗು, ಸಂತೋಷಾನಾರ ಆಗು. ಒಟ್ಟು ನೀನು ನಾರಾಯಣನ ಮಗ. ಯಾಕಂದ್ರ ಶಕ್ಕೂಗ ಐವತ್ತಾರಾದರ ನಿಂಗೆ ಹನ್ನೆರಡಾಗಬೇಕು ಹೌದೊ ಅಲ್ಲೋ’ ಅಂತ ಮತ್ತೆ ಹತ್ತಿಗೆ ಕೈ ಹಾಕಿತು. ಮತ್ತೆ ಕಣ್ಣೂ ಕಿರಿದು ಮಾಡಿ ನೋಡಿ ‘ನಿಮ್ಮಪ್ಪ ಎಲ್ಲೋ’ ಅಂತು.

‘ಅಪ್ಪ ಮನೇಲಿಲ್ಲ.’

‘ತಗಿಯೋ, ಸುಳ್ಳ ಹೇಳ್ಬೇಡ. ನಾಣಿ ಈ ಸಮಯದಾಗ ಎಲ್ಲೂ ಹೋಗಲ್ಲ. ಶಕ್ಕೂಗ ಬಹುಳದಾಗ ಸಮಯ,  ಈಗ ಮೊನ್ನೆ ನಂಗೂ ಶಕ್ಕೂಗು  ನಿಂತಿದ್ದು, ವರ್ಷದ ಕೆಳಗ. ನೀ ಹುಟ್ಟಿದಮೇಲೆ ಆಕಿ ಹೊರಗ ಕೂರ್ಲಿಲ್ಲ. ನಾ ಹೇಳಿದ್ದೆ, ಶಕ್ಕೂಗ. ಇದೇ ಕೊನೀದಂತ.’

‘ಅತ್ತೀ, ನೀ ಯಂತದ್‍ಹೇಳ್ತೀಯೇ. ನಾ ಆನಂದಾನೇ.’

‘ಹ್ವಾಗೋ, ರಂಡೀಮಗನ, ನೀ ಎಲ್ಲ ಶಕ್ಕೂ ಹಂಗ ಹರಾಮೀ.’

‘ಏ ಅತ್ತೀ... ಮನ್ಸಿಗೆ ಬಂದಹಂಗ ಮಾತಾಡ್ಬೇಡ್ವೇ........ ಅಯ್ಯಯ್ಯಾ.. ಇಸ್ಸೀ.. ಅತ್ತಿ ಇಸ್ಸಿ ಮಾಡ್ಕಂತೇ... ಅಮ್ಮ ಹೇಳಿದ್ರೆ ನಿಂಗ ಅರ್ಥ ಆಗಲ್ಲ. ನಡೀ ಬಚ್ಚಲಗ’

‘ಎಂತಾ ಇಸ್ಸೀನೋ. ಅದು ಮಡ್ನೀರೋ. ಎಲ್ಲೋ ಕೊಂಚ ತೆಳಗ್ ಬಿದ್ದದಷ್ಟೇ.’
........

‘ಪಂಡಿತ್ ಡಿಸ್ಪೆನ್ಸರಿ’ಯ ಕೆಳಗೆ ‘ಇಲ್ಲಿ  ಪೋಲಿಯೋ ಲಸಿಕೆ ಕೊಡಲಾಗುವುದು’ ಅನ್ನುವುದನ್ನೇ ನೋಡುತ್ತ ಅತ್ತಿಗೆ ಚಿಕ್ಕಂದಿನಲ್ಲಿ ಪೋಲಿಯೋ ಲಸಿಕೆ ಕೊಡಿಸಿದ್ದರೋ ಇಲ್ಲವೋ ಎಂದು ಯೋಚಿಸುತ್ತಾ ಒಳಗೆ ಹೋದ, ಅನಂತು.

‘ಬಾರಪಾ, ಬಾ, ಅನಂತು. ಏನ್ಸಮಾಚಾರ. ಎಲ್ಲಾ ಆರಾಮೇನು’ ಕೇಳಿದ, ಪಂಡಿತ.

‘ಆರಾಮಿದ್ದರ ನಿನ್‍ಬಳಿ ಯಾಕ್‍ಬರಣ, ಹೇಳಪ್ಪ. ನಾವೆಲ್ಲಾ ಆರಾಮೇ ನೋಡು. ನಮ್ಮತ್ತಿ ಅದಾಳಲ. ಆಕಿ, ನಿನ್ನಿ ರಾತ್ರಿ ಎಂತದೋ ತಿನ್ನಕ ಅಂತ ಬಾಯ್ಕಳ್ದಿದ್ದು ಹಂಗೇ ಸೊಟ್ಟಕ್ಕೇ ಮಾಡ್ಕೊಂಡು ಕೂತಿಯಾಳೆ. ಏನೂ ಅನ್ನ, ನೀರೂ ಹೋಗೋ ಹಂಗಿಲ್ಲಪ. ಮುದ್ಕೀ ಸತ್‍ಗಿತ್ತಾಳೋ ಏನಂತ. ಕೊಂಚ ಗಾಬ್ರಿ ಆತು. ಅದಕ್ಕೇ ಹಿಂಗೇ ಬಂದೆ. ಕೊಂಚ ಮನೀಕಡೀ ಬಂದು ನೋಡಕ್ಕಾಗತ್ತೇನಪ.’

‘ಸೊಲ್ಪ ಬಿಜಿಯಾಗಿದ್ನಲಪ. ಮುಂಜಾನಿಂದ ರಶ್ಶು. ಈಗ ಕೊಂಚ ಕಾಫಿ ಕುಡ್ಯಾಣ ಅಂತ ಕೂತಿದ್ದೆ. ಇರ್ಲಿ, ತಗ ಬರೂಣ. ಈ ಸೀಜನ್‍ದಾಗ ಏನ್ ಕಾಯ್ಲೇ ಬೀಳ್ತಾರಪ, ಜನ. ಈ ಬೀದೀಗ ನಾ ಡಿಸ್ಪೆನ್ಸರಿ ತೆಗ್ದಿದ್ದಕ್ಕ, ಜನ ಬಚಾವ್, ಏನಂತೀ’ ಪಂಡಿತ ತನ್ನ ಬ್ಯಾಗ್ ಹಿಡಿದ. ‘ಅಂದಹಾಗೆ, ನಂದಿನೀ ಹೆಂಗದಾಳಪ,’ ಕೇಳಿದ,

ಅನಂತೂ ‘ಪರವಾಗಿಲ್ಲಪ’ ಅಂದ.
ಹೊರಗೆ ಬರುತ್ತಾ ‘ಈ ಬೋರ್ಡ್ ನೋಡ್ದ್ಯನು, ಅನಂತೂ. ಈ ಕಡೀಂದ ನೋಡಿದ್ರ, ಂಒS ಅಂತ ಕಾಣ್ಬಕು,  ಆ ಕಡೀಂದ ನೋಡಿದ್ರ ಊಒS ಅಂತ ಕಾಣ್ಬಕು, ಹಂಗ ಬರ್ಸೀನಿ. ಎರಡೂ ಪದ್ಧತೀನ ನಂಬೋವರೂ ಬರ್ಬಕು. ಆ ಆರ್ಟಿಸ್ಟು ಚಲೋ ತಲೀ ಇರಾವ, ನೋಡು’ ಅಂದು ಮುಂದಿನ ಬಾಗಿಲನ್ನು ಎಳೆದ.

ಪಂಡಿತನ ಕ್ಲಿನಿಕ್ಕಿನ ನಾಲ್ಕು ಬೀದಿಗಳಾಚೆಯೇ ಅನಂತೂನ ಮನೆ.

‘ಏ ಹೋಗೋ, ಆನಂದ, ಹೋಗೋ ಒಳಗಿಂದ ಕೊಂಚ ಸೋಪು ತಾರೋ. ಎಂತೆಂತವ್ರನ್ನೋ ಮುಟ್ಟಿದ್ ಈ ಕೈನಾಗ ಅತ್ತೀನ ಮುಟ್ಟೋಕಾಗ್ತದನು? ಆದಷ್ಟು ಬ್ರಾಮಿನ್ಸನ ಮಾತ್ರ ನೋಡ್ಬಕು ಅಂತಲೇ ಪ್ರಯತ್ನ ಮಾಡ್ತೀನಿ. ಆದ್ರೇ ಏನ್ಮಾಡ್ತೀ ಅನಂತೂ. ಆ ಕುಂಬಾರಗೇರಿಯವ್ರು ಬಂದ್ರೆ ಇಲ್ಲ ಅಂತ ಹೇಳೂದು ಭಾಳ ಕಷ್ಟನಪ. ಈ ಕೆಲಸದ್ ಜತೀಗೂ ಧರ್ಮ ಕರ್ಮ ಉಳಿಸ್ಕೊಂಡು ಹೋಗ್ತಿದ್ದ ನಮ್ಮಪ್ಪ ಅಂದ್ರ, ಆತ ಮಹಾಜೀವ ಬಿಡು, ಏನಂತೀ’ ಕೇಳಿದ.

‘ಹೌದ್‍ಹೌದು ಬಿಡು.’ ಅನಂತು ತಲೆಯಾಡಿಸಿದ.

ಒಳಗೆ ಪಡಸಾಲೆಗೆ ಅಂಟಿಕೊಂಡಂತೇ ಇದ್ದ ಒಂದು ಸಣ್ಣ ಕೋಣೆಯಲ್ಲಿ ಅತ್ತಿ ಕೂತಿತ್ತು. ಆ ಕೋಣೆಯಲ್ಲಿ ಕಿಟಕಿಗಳು ಯಾವುದೂ ಇರಲಿಲ್ಲ. ಗೋಡೆಯ ಮೇಲೆ ಸ್ವಾದಿಮಠದ ಪಟವಿತ್ತು. ಒಂದು ಜೀರೋ ಕ್ಯಾಂಡಲ್ ಬಲ್ಬು ಉರೀತಿತ್ತು. ಒಳಗೆ ಬಂದ ಪಂಡಿತ ‘ಏನೇ ಅತ್ತಿ.. ಹೆಂಗಿದೀಯೇ... ನಾನ್ಕಣೇ ಪಂಡಿತ, ಡಾಕ್ಟ್ರು.. ನಿನ್ನ ನೋಡ್ಕೊಂಡು ಹೋಗಣ ಅಂತ ಬಂದೀನಿ. ನಿನ್ನ ಮುಟ್ಬೌದೋ ಇಲ್ಲೋ, ಹೇಳು. ನಿಂಗೆ ಬೇಜಾರಾದ್ರೆ, ಬೇಕಾರ ಮಡ್ನೀರ್ ಹಿಡ್ಸಿ ಸ್ನಾನಾ ಮಾಡೇ ನೋಡಣ. ಇಲ್ಲಾಂದ್ರ, ನಿಮ್ಮನೇಲಿ ದಾಬಳಿ ಇದ್ರ ಕೊಡ್ರೇ.. ಎಲ್ಹೋದ್ರು. ಮನಿ ಹೆಂಗಸ್ರೆಲ್ಲ.... ಏನೇ ಅತ್ತಿ, ಸ್ಮಾರ್ತ ಡಾಕ್ಟರಿಗೆ ಮನೀ ದಾಬಳಿ ಉಡಿಸ್ತೀಯೇನೇ?’ ಅಂದ. ಸುಮ್ಮನೆ ಕೂತಿದ್ದ ಅತ್ತಿಯನ್ನು ನೋಡುತ್ತ ತನ್ನ ಬ್ಯಾಗಿನಿಂದ ಇಂಜಕ್ಷನ್ ಸಿರಿಂಜು, ಸ್ಟೆಥೋಸ್ಕೋಪು ತೆಗೆದ ‘ಏನತ್ತೀ.... ನಾನು ಪಂಡಿತ... ಕಿವಿ ಕೇಳ್ತದೆ, ತಾನೇ’ ಎಂದು ಗಂಟಲು ಹರಿಯುವ ಹಾಗೆ ಕಿರುಚಿದ.


ಕಣ್ಣು ಬಿಟ್ಟು ನೋಡಿತು, ಮುದುಕಿ. ‘ಕ್ವೂಕ್ವೂಬ್ಯಾಡ್ವೋ’ ಅಂತು. ಕಟಬಾಯಲ್ಲಿ ಜೊಲ್ಲು ಸುರಿಯುತ್ತಿತ್ತು. ಬಾಯಿ ಇನ್ನೂ ಸೊಟ್ಟ ಆಯಿತು.

‘ಇದು ಸ್ಟ್ರೋಕಪ, ಅನಂತೂ’ ಅಂತಂದವನೇ ಅತ್ತಿಯನ್ನು ಮುಟ್ಟದೇ ತನ್ನ ಬ್ಯಾಗನ್ನು ಮುಚ್ಚಿದ. ‘ಸುಮ್ನೆ ಆಕೀನ ಮುಟ್ಟಿ ಮಡೀ ಯಾಕ ಹಾಳ್ಮಾಡ್ಬೇಕಪ? ಬುದ್ಧಿ ಸ್ವಾಧೀನದಾಗ ಇದೇ ಹೌದೋ ಅಲ್ಲೋ?’ ಕೇಳಿದ.

`ಮೊದಲು ಹೆಂಗಿತ್ತೋ ಅದೇ ರೀತಿ ಅದಪ್ಪ’

‘ಇದು ಖಂಡಿತಾ ಸ್ಟ್ರೋಕಪ್ಪ. ಈಗ ಮುಖಕ್ಕೆ ಮಾತ್ರ ಹೊಡೆದದೆ, ಮುಗೀತು ಕತಿ ಇನ್ನು. ಅತ್ತೀ ಹತ್ರ ಏನಾರ ಭಾರೀ ಆಸ್ತೀ ಇದ್ರ ವಿಲ್ ಬರೀಯಕ್ಕ ಹೇಳ್ಬಿಡಪ್ಪ. ಹೆಚ್ಚೂ ಅಂದ್ರ ಇನ್ನು ನಾಲ್ಕ್ದಿನ ಅಷ್ಟೇ. ನೋಡು ಬರ್ಕಾ ನಾ ಹೇಳಿದ್ದನ್ನ, ತಾರೀಖು ಹಾಕಿ. ಭಾಳ ಮಂದೀನ ನೋಡಿದೀನಪ ನಾನು. ಮದ್ಲು ಬಾಯಿಂದ ಶುರೂ ಆಗದು ಆಮೇಲೆ, ಕೈಕಾಲು, ಸೊಂಟ, .. ನಂತರ ಮುಗೀತಂಕ’

‘ಅತ್ತೀಗೆಂತದೋ ಆಸ್ತಿ ಪಂಡಿತ. ಆಕಿ ಮನೀ ಮುಂದ ಜಗಲೀ ಮುಂದ ಕೂರ್ತಿದ್ದೇ ನಮ್ಮಾಸ್ತಿ ನೋಡಪ. ದಿನಾ ಹೂಬತ್ತಿ ಮಾಡ್ತಿದ್ದೇ ಪುಕ್ಕಟೇ ಆಸ್ತಿ ಅಷ್ಟೆ. ಹಿಂದಿಲ್ಲ, ಮುಂದಿಲ್ಲ, ಆಕೀಗ. ಈ ಮನ್ಯಾಗ ಸುಮಾರು ಮೂವತ್ತುವರ್ಷದಿಂದ ಅದಾಳ’ ಮತ್ತೆ ಪಂಡಿತನತ್ತ ನೋಡಿ ‘ಕೊಂಚ ಈಚೀಕಡೀ ಬತ್ರ್ಯೇನಪ’ ಅಂತ ಕರಕೊಂಡು ಹೋದ.

‘ಏ ರುಕ್ಮಿಣೀ, ಕೊಂಚ ಕಾಫೀ ಮಾಡೇ’ ಅಂದು ಪಂಡಿತನ ಕಡೆ ತಿರುಗಿ ‘ಹಂಗಾರ, ಮುಗೀತಂತೀಯನು, ಅತ್ತೀ ಕಥಿ?’

‘ನಾ ಹೇಳಿದ್ಮೇಲೆ ಬರ್ಕೋ, ಹೇಳಿದ್ನಲ್ಲ ಆಗೇ'

‘ಹಂಗಲ್ಲಪ, ಏನಾರ ಮಾಡಕ್ಕಾಗತ್ತ ನೋಡ್ಬೇಕಿತ್ತೋ, ಪಂಡಿತ. ಏನಾರ ಕೊಂಚ ಸ್ಟ್ರಾಂಗಾಗಿರೋ ಇಂಜಕ್ಷನ್ನೋ ಏನಾರ ಕೊಟ್ನೋಡಕ್ಕಾಗ್ತದನು?’

‘ಏ ಹೋಗ್ಲೀ ಬಿಡೋ ಅನಂತೂ. ಆಕಿಗ ಎಷ್ಟೀಗ ವಯಸ್ಸು?’ ಪಂಡಿತ ಕಾಫಿ ಕುಡಿಯುತ್ತಾ ಕೇಳಿದ. ಹೊರಗಿನಿಂದ ಬಂದ ನಂದಿನಿಯನ್ನು ನೋಡಿದ ತಕ್ಷಣ ಪಂಡಿತ  ‘ಏನೇ ನಂದೂ ಹೆಂಗದೆ ನಿನ್ತುರಿಕಿ?’ ಎಂದ. ಉತ್ತರ ಕೊಡದೇ ಒಳಗೋಡಿದಳು. ನಂತರ ಅನಂತೂನ ಕಡೆ ತಿರುಗಿ ‘ನಿಮ್ ನಂದೂಗ ಗಂಡ್ಗಿಂಡು ನೋಡ್ತ್ಯೋ ಹೆಂಗೆ’ ವಿಷಯಾಂತರ ಮಾಡಲು ಪ್ರಯತ್ನಿಸಿದ.

‘ನೋಡಣೋ, ಪಂಡಿತ... ಅದಲ್ಲ ವಿಷಯ.. ಸರ್ಕಾರಿ ಪಿಂಚಣಿ ಲೆಕ್ಕದ್ ಪ್ರಕಾರ ಆಕೀಗ ಎಂಭತ್ತಾರು ವರ್ಷ. ಆಕೀಗ ಅವ್ಳಾಕಿ ಅನ್ನೋರು ಯಾರೂ ಇಲ್ಲದಿರೋದರಿಂದ ಇನ್ನೂ ಪಿಂಚಣಿ ಬರ್ತಾ ಇದ. ಆಕೀಗೆಂತ ಖರ್ಚೋ. ನಂಗೂ ರಿಟೈರಾದಮ್ಯಾಲ ಕೊಂಚ ಕೈಗ ಬಂದದಪ್ಪ. ಆಕೀ ಹೋದ್ರ ಆಕಿ ಜತಗ ಅದೂ ಹೋಗ್ತದನೋ ಅಂತ ನಂಗೆ ಅನುಮಾನ. ಯಾರ್ನಾರ ಕೇಳ್ಬಕು, ಗುಮಾಸ್ತರನ್ನ. ಮತ್ತ, ಮುದ್ಕಿ ಅದರ ಪಾಡಿಗದದ. ಈ ಮನೀ ಒಂದು ಆಕಿ ಹೆಸರಾಗ ಇತ್ತು. ಈಗ ಒಂದು ಹತ್ತು ವರ್ಷದ ತಳಗೆ ಅರಳುಮರುಳು ಜಾಸ್ತಿ ಆತಂತ ಇದ್ದಕ್ಕಿದ್ದಂಗೆ ಒಂದಿನ ನಂಗೆ ಬರ್ಕೊಡ್ತೀನಿ ಅಂದ್ಲು. ನಾ ಬೇಡ ಅನ್ಲೇನಪ. ಅಷ್ಟಾಗೂ ಈ ಮನೇ ನನ್ಹೆಸ್ರಿಗಾದ್ಮೇಲೆ ಬೇಕಾದಷ್ಟು ಕೆಲ್ಸ ಮಾಡ್ಸಿದ್ದೀನಿ. ಮತ್ತ ಆಕೀಗೇನು ಕಮ್ಮಿ ಮಾಡಿಲ್ಲ. ಈಗ ನಾಲ್ಕು ವರ್ಷದಿಂದ ಮನೇಯವರೆಲ್ರೂ ಉಚ್ಚಿ ಹೇಲು ಬಳ್ದಿದೀವಿ’  ಅಂದು ತಡವರಿಸಿ,


‘ಪಂಡಿತ, ಹಿಂಗಂತೀನಂತ ಬೇಸರ ಮಾಡ್ಕೋಬೇಡಪ. ಆಸ್ಪತ್ರೇಗೇನಾರ ಸೇರ್ಸಿದ್ರೆ ಏನಾರ ಸುಧಾರಿಸಬೌದೇನು?’

‘ರೊಕ್ಕ ಕಳೀಬೇಕಂತೀಯೇನು?’

‘ಇಲ್ಲೋ’

‘ಅನಂತೂ, ಇದು ನಿನ್ನೇ ನೀನು ಚಿಕಿತ್ಸೆ ಮಾಡ್ಕೋತಿದೀಯಪಾ. ಸುಮ್ನೆ ಅತ್ತಿ ಮನ್ಯಾಗ ಸಾಯ್ಲಿ ಬಿಡು, ಮುದ್ಕಿ. ನೀನು ಇದುವರ್ಗೂ ಏನೋ ಮಾಡಿಲ್ಲ ಅಂತ ಹೇಳಿ, ಈಗ ಎಲ್ಲ ಮಾಡಕ್ಕ ಹೋಗ್ಬೇಡಪ್ಪ. ಸಾಯೂಮುನ್ನ ಆಕೀ ನೆಮ್ದಿಯಿಂದ ಸಾಯೂಕಾರ ಬಿಡು’

‘ಹಂಗಂತೀಯ’

ಅತ್ತಿ ಒಳಗೆ ಒಂದೇ ಸಮನೆ ಹೂಬತ್ತಿ ಹೊಸೆಯುತ್ತಲೇ ಕೂತಿತ್ತು. ‘ಏ ಶಕ್ಕೂ’ ಕೂಗಿತು.

‘ಏ ಆನಂದ’ ಕೂಗಿದ, ಅನಂತು. ಪಂಡಿತನ ಕಡೆ ತಿರುಗಿ, ‘ಶಕ್ಕು, ಸುಬ್ಬಣ್ಣ, ರುಕ್ಮಿಣೀ ಎಲ್ಲರೂ ಆನಂದನೇ’ ಅಂದು ನಕ್ಕ. ಆನಂದ ಒಳಗಿಂದ ಇನ್ನೊಂದು ಪಾಕೀಟು ಹಿಡಿದು ಹೊರಗೆ ತೊಟ್ಟಿಯಲ್ಲಿ ಹಾಕಿ ಬಂದ.

‘ಈ ಶಕ್ಕೂ ಅಂದ್ರೆ ಯಾರೋ, ಮಾರಾಯ?’ ಪಂಡಿತ ಕೇಳಿದ.

‘ಆಕಿ ಅವ್ಳೀಜವ್ಳೀನೋ, ನಿಂಗೊತ್ತಿಲ್ಲನು’ ಅಂದ. ಇಬ್ಬರೂ ನಕ್ಕರು
........


‘ಏ ಅತ್ತೀ, ನಿಂಗೆಷ್ಟೇ ವಯಸ್ಸು?’

‘ನಾ ಹೇಳ್ಲಿಲ್ಲೆನೇ, ಈಗ ಎಷ್ಟು ಇಸ್ವೀನೋ ಅಷ್ಟೇ ವಯಸ್ಸು ನಂಗೆ’

‘ಹಂಗಾರ ಇನ್ನಾರು ವರ್ಷಕ್ಕೆ ನಿಂಗೆ ನೂರಾಗ್ತದೇನೆ?’

‘ಇಲ್ಲೇ ನಂಗೆ, ಅರವತ್ನಾಕು. ಆ ಶಕ್ಕು ಇದ್ಲಲ್ಲ, ನಿಮ್ಮವ್ವ. ಆಕೀನೂ ನಾನೂ ಅವ್ಳೀಜವ್ಳೀ. ಇದ್ದಕ್ಕಿದ್ದಂಗೆ ಹೋಗದು ಅಂದ್ರೇನೇ? ಋಷಿಪಂಚಮಿ ಉದ್ಯಾಪ್ನಿ ಮಾಡ್ಕಂಡು ಇನ್ನೂ ಮೂರ್ವರ್ಶ ಆಗಿತ್ತು, ನೋಡವ್ವ, ಹೋಗೇ ಬಿಟ್ಳು. ಒಳ್ಳೇ ಮುತ್ತೈದೆ. ಆ ನಾರಾಯಣಂಗೆ ಆ ನಾರಾಯಣಾನೇ ಕಾಪಾಡ್ಬಕು. ಇಷ್ಟರ ಜತೀಗ ಸಾಯೂಕಾಲಕ್ಕ ಗರತೀ ಏನೂ ಆದ್ಲು ಅನ್ನೂಹಂಗ ಈಗ ಆತಗ ಕೈಕೂಸು ಬ್ಯಾರೆ. ಆ ಭಗವಂತನೇ ಗತಿ. ನೀನೂ ದೊಡ್ಡಾಕಿ ಆಗ್ತಾ ಅದಿ. ಆ ಕೂಸನ್ನ, ನಾರಾಯಣನ್ನ ಸರೀಗ ನೋಡ್ಕಬಕು’

‘ಅತ್ತೀ, ಈ ಶಕ್ಕೂ ಯಾರೇ? ಯಾವಾಗ್ಲೂ ಹೇಳ್ತಾನೇ ಇರ್ತೀಯಲ್ಲೇ? ಅಮ್ಮಗ ಕೇಳಿದ್ರ, ಆ ಶಕ್ಕೂ ಹೋಗಿ ಮೂವತ್ತು ವರ್ಷದ ಹತ್ರ ಆತು ಅಂತಾಳ. ಆಕೀನೂ ನೋಡೀಲ್ವಂತ’

‘ಯಾರೇ ಅಮ್ಮ’

‘ನಮ್ಮಮ್ಮನೇ!’

‘ಅದೇ ಶಕ್ಕೂ’

‘ಅಲ್ವೇ ರುಕ್ಮಿಣೀ’

‘ನೀ ಹುಟ್ಟಿದ್ದು ನೆಹರೂ ಇದ್ದಾಗ, ತೊಟ್ಲಿಗೆ ಹಾಕ್ದಾಗ ಊರಾಗಿನ ಮಂದೀಗೆಲ್ಲ ಊಟಾ ಹಾಕಿದ್ದ, ನಿಮ್ಮಪ್ಪ ನಾರಾಯಣ. ಶಕ್ಕೂಗ ಹೇಳಿದ್ದೆ, ಆ ನಾರಾಯಣ ಹರಾಮಿದಾನೆ. ವಯಸ್ಸಲ್ಲದ ವಯಸ್ಸಲ್ಲಿ ಏನಾರ ಹೆಚ್ಚುಕಮ್ಮಿ ಮಾಡ್ಕೋತೀಯಂತ. ಆತ ತಲೀಗ ಹಚ್ತಿದ್ದ ಎಣ್ಣೀ ಏನು, ಹಾಕ್ತಿದ್ದ ಕೋಟು, ಮೈಸೂರಮಂದಿ ರೀತಿ ಪ್ಯಾಟ ಬ್ಯಾರೆ, ಮಹಾರಾಜ ಇದ್ದಂಗಿದ್ದ. ನಾ ಅಂದ್ಕೊಂಡ್‍ಹಂಗೇ ಆತು. ನಿನ್ನ ಹೆತ್ಲು, ಹುಚ್ಚೇ ಹಿಡೀತು. ನೋಡು ಆಕೀಗ. ನಂತರ ಆರೇ ತಿಂಗ್ಳಾಗ ಸತ್ಲು. ಎಲ್ಲಾ ಅವ್ರವ್ರ ಹಣೀಬರ. ಪಾಪ ನಾರಾಯಣ ಎತ್ಲಿದಾನೋ..... ಅದ್ಸರಿ, ನೀ ಎಂದು ಬಂದೆ, ಊರಾಗಿಂದ. ನಾರಾಯಣ ಆರಾಮಿದಾನೋ ಇಲ್ಲೋ?’

‘ಯಾವ್ ನೆಹರೂನೇ.. ನಾ ಹುಟ್ಟಿದ್ದು ನೆಹರೂ ಮಗಳ್ ಸತ್ತಾಗಂತೆ. ಅಮ್ಮ ಹೇಳ್ತಿದ್ಲು’

‘ಶಕ್ಕೂಗೇನ್ ಗೊತ್ತೇ?’

‘ಶಕ್ಕೂ ಅಲ್ಲೇ ರುಕ್ಮಿಣೀ. ಸರ್ಸರಿ.. ನಾನ್ ಹೊರಗ್ ಹೋಗ್ತೀನಿ... ನಿಂಗೇನಾರ ಬೇಕನು?’

‘ಇಲ್ಲ ನಿಮ್ಮಪ್ಪ ಅನಂತೂನ ಕರಿ... ಕೊಂಚ ಬಚ್ಚಲಿಗ ಹೋಗ್ಬೇಕು... ಹಂಗೇ ರುಕ್ಮಿಣೀಗೂ ಹೇಳು ನಂಗ ಜಳಕ ಮಾಡೂದಿದ, ಅಂತ.’

‘ಹಾ ಹಂಗೆ, ನಮ್ಮಪ್ಪ ಯಾರು?’ ಇದ್ದಕ್ಕಿದ್ದಂತೆ ಅತ್ತಿಯ ಮಾತಿನ ವರಸೆ ಸರಿಹೋಗಿದೆ ಅನ್ನಿಸಿದಾಗ ನಂದಿನಿ ಕೇಳಿದ್ದಳು.

‘ಅನಂತು’

‘ಅಮ್ಮ’

‘ರುಕ್ಮಿಣಿ, ಯಾಕೇ ನಂದು, ನನ್ನ ಪರೀಕ್ಷೆ ಮಾಡ್ತಿದೀ ಏನು? ನಾಳೆ ಪಕ್ಕಕ್ಕೊಬ್ಬ ಬರ್ಲೀ ಆಗೀ ಆಟ ಎಲ್ಲ ಮುಗೀತು, ಅಂತಿಳ್ಕ.. ನಂಗೀಗ ಹೊಟ್ಟಿ ಭಾರಿ ಹಸಿದಿದೆ... ಬಚ್ಚಲಿಗ ಇಳ್ಸಕ್ಕೆ ಅಮ್ಮಗ ಹೇಳು... ಜಳಕ ಆಗಿ ಪಾರಣೆಮಾಡ್ಬಕು.’

‘ಏ ಅತ್ತಿ... ಎಂತದೇ. ಇಂದು ಏಕಾದಶೀನೇ... ನಿಂದು ಈಗಷ್ಟೇ ಜಳಕ ಆತಲ್ಲೇ’ ಕಿಲಕಿಲ ನಕ್ಕಳು, ನಂದಿನಿ.

‘ನಗು, ನಗು, ನಿನಗೆ ಈಗ ನಗೋ ವಯಸ್ಸು ಗೊತ್ತಲ.. ಹೆಣ್ಣುಮಕ್ಕಳಿಗೆ ನಗೋ ವಯಸ್ಸು ಮುಗೀಯೋದ್ರಾಗ, ಲಗ್ನ ಆಗ್ಬಿಡ್ಬೆಕು’

‘ಹೋಗತ್ತೀ’

‘ಏ ಶಕ್ಕೂ.....’ ಮತ್ತೆ ಕೂಗಿದಳು, ಅತ್ತಿ.
.........


ಏನಾದರೂ ಆಗಲೀ, ಅತ್ತಿಯನ್ನು ಒಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿಯೇ ಬಿಡುವ ಎಂದು ಅನಂತು ದೃಢನಿರ್ಧಾರ ಮಾಡಿದ್ದು, ಅತ್ತೀಗೆ ಒಂದುವಾರವಾದರೂ ಏನೂ ಗುಣವಾಗದೇ ಹೋದದ್ದಕ್ಕೆ. ಆಕೆಯ ಬಾಯಿ ಇನ್ನೂ ಸೊಟ್ಟಕ್ಕೇ ಉಳಿದಿತ್ತು. ಆದರೆ ಪಂಡಿತ ಹೇಳಿದಹಾಗೆ, ಸ್ಟ್ರೋಕು ಕೈಕಾಲುಗಳಿಗೇನೂ ಹೊಡೆಯಲಿಲ್ಲ. ಹಾಗೆಂದು ಹೋಗಿ ಪಂಡಿತನನ್ನು ಕೇಳಿದಾಗ ಆತ ‘ಆಕೀಗ ಮದ್ಲ ಕೈಕಾಲು ಸ್ವಾಧೀನ ಇದ್ದಿದ್ದ್ರಲ್ವ ಅವಕ್ಕ ಸ್ಟ್ರೋಕ್ ಹೊಡಿಯೂದು. ಕೀಲುಗಳೆಲ್ಲಾ ಗಂಟು ಹಿಡಿದು ಹೋಗ್ಯಾವಪ್ಪ. ರ್ಯುಮಾಟಿಸಮ್, ದಿನಾ ಪಾಯಕಾನಿ ಪಾಕೀಟಲ್ಲಿ ಕೊಡೂ ಅಷ್ಟು ಶಕ್ತೀ ಅದೋ ಅಲ್ಲೋ ಮುದುಕೀಗ. ಅದಕ್ಕೆ ಸಂತೋಷಪಡು.’ ಎಂದಿದ್ದ.


ಇಷ್ಟರಮಧ್ಯೆ ಹಿಂದಿನ ಬೀದಿಯ ಸೀನಣ್ಣನ ಮೊಮ್ಮಗ ಕೆಎಂಸೀಯಲ್ಲಿ ಪೀಜಿ ಮಾಡುತ್ತಿದ್ದವನು ಅಜ್ಜನ ವೈದಿಕಕ್ಕಂತ ಊರಿಗೆ ಬಂದಿದ್ದ. ಹ್ಯಾಗಾದರೂ ಆಗಲೀ, ಒಮ್ಮೆ ನೋಡಿಹೋಗು ಎಂದಿದ್ದಕ್ಕೆ, ಬಂದುನೋಡಿದ. ಆತ ಅತ್ತೀನ ನೋಡಿದವನೇ ‘ಇದು ಸ್ಟ್ರೋಕು, ಪಾಕು ಎಂತದೂ ಅಲ್ಲ. ಬಿಟ್ಟಬಾಯಿ ಬಿಟ್ಟಂಗೆ ಕೂತಿಯಾಳೆ ಅಂದ್ರೆ ದವಡೆಮೂಳೆ ಜಾರಿದೆ, ಅಂತರ್ಥ. ಅನಂತಮಾವ. ಯಾರಾರ ಮೂಳೆಡಾಕ್ಟರ ಹತ್ರ ತೋರಿಸಿದ್ರೆ ಒಮ್ಮೆಗೇ ಸರಿಮಾಡ್ತಾರೆ. ನಾನು ಬರಕೊಡ್ತಿದ್ದೆ, ಆದ್ರೆ ನಂಗೆ ಈ ಊರಲ್ಲಿ ಯಾರೂ ಗುರ್ತಿಲ್ಲ.’ ಎಂದು ಹೇಳಿಹೋಗಿದ್ದ. ಇದನ್ನು ಕೆಳಿದ ಮೇಲೆ, ಏನಿಲ್ಲದಿದ್ದರೂ ಕಡೆಯಪಕ್ಷ ಸರಕಾರಿ ಆಸ್ಪತ್ರೆಗಾದರೂ ಅತ್ತಿಯನ್ನು ಕರಕೊಂಡು ಹೋಗುವಾ ಎಂದು ನಿರ್ಧರಿಸಿದ್ದ. ಹೋಗುವ ಮುನ್ನ ಸೀನಣ್ಣನ ಮೊಮ್ಮಗ ‘ಆಕಿ, ನೋಡೋಕೇನು ಇನ್ನೂ ಸುಂದರಿಯಾಗಲ್ಲ. ಜಗಿಯೋಕೆ ಹಲ್ಲಂತೂ ಮೊದಲೇ ಇಲ್ಲ. ಮಾತೊಂದು ಸ್ಪಷ್ಟವಾಗಿ ಆಡಬಹುದೇನೋ, ಸರಿಮಾಡ್ಸಿದ್ರೆ. ಈಗ ತಿನ್ನೋಕಿಂತ ಚೆನ್ನಾಗಿ ತಿನ್ನಬಹುದು. ನಾನೇ ಮಾಡ್ತಾಇದ್ದೆ. ಆದ್ರೆ ವಯಸ್ಸಾಗಿದೆ ನೋಡಿ. ಸುಮ್ನೇ ರಿಸ್ಕಂತ. ಅದ್ಸರಿ, ಈಗ ಯಾಕ ಆಕೀನ ಸುಂದರೀ ಮಾಡಕ್ಕ ಹೊರಟೀರಿ. ಏನು ಭಾರೀ ಆಸ್ತಿ ಬಿಡ್ತಾಳನು?. ಆಸ್ತಿ ಇರ್ಲಿ, ಬಿಡ್ಲಿ. ಇದ್ರಿಂದ ಏಕ್‍ದಮ್ ಸಾಯೂದಂತೂ ಇಲ್ಲ ನೋಡಿ ಈಕಿ’ ಎಂದು ಹೇಳಿಹೋಗಿದ್ದ. ಅನಂತೂಗೆ ಪಂಡಿತ ಹೇಳಿದ್ದ ‘ನಿನಗಾ ನೀನು ಚಿಕಿತ್ಸೆ ಮಾಡ್ಕೋತಿದೀಯಪ’ ಅನ್ನೋದು ಹೆಚ್ಚು ಆಪ್ಯಾಯಮಾನವೆನಿಸಿತ್ತು.


ಏನಾದರೂ ಆಗಲಿ, ಹೋಗೇಬಿಡೋಣ ಎಂದು ನಿರ್ಧರಿಸಿದ. ಪಕ್ಕದ ಮನೆಯ ಶೆಟ್ಟರು ಕಾರು ಕಳಿಸಿಕೊಡುವುದಾಗಿ ಹೇಳಿದ್ದರು. ಅತ್ತಿಗೆ ಒಂದು ಮಾತು ಕೇಳಿಬಿಡೋಣವೆಂದು ಹಿಂದಿನ ದಿನ ಕೇಳಿದ್ದ. ಸುಮ್ಮನೇ ತಲೆಯಾಡಿಸಿತ್ತು. ಅದು ಸ್ವಾಭಾವಿಕ ನಡುಕವೋ, ಹೌದೋ, ಅಲ್ಲವೋ ಅನ್ನುವುದು ಗೊತ್ತಾಗದೇ ಸುಮ್ಮನಾಗಿದ್ದ.


ಕೆಳಗೆ ಬಟ್ಟೆಕಟ್ಟಿ, ದೊಡ್ಡ ಹದಿನೆಂಟು ಮೊಳದ ಸೀರೆ ಉಡಿಸಿ ಮೇಲೆ ಶಾಲು ಹೊದೆಸಿದಳು, ರುಕ್ಮಿಣಿ. ಬೋಳುತಲೆ ಕಾಣಿಸದಹಾಗೆ ಸೀರೆಯ ಸೆರಗು ಹೊದಿಸಿದಮೇಲೆ ನಂದಿನಿ ಬಂದು ‘ಎಷ್ಟು ಚಂದ ಕಾಣಿಸ್ತೀಯಲ್ಲೇ, ಅತ್ತಿ’ ಎಂದು ಕೆನ್ನೆ ಸವರಿ ಹೋದಳು. ಅನಂತು ಮತ್ತು ಅತನ ನೆರೆಯಾತ ನಾಣಿ ಇಬ್ಬರೂ ಸೇರಿ, ಅನಾಮತ್ತಾಗಿ ಅತ್ತಿಯನ್ನು ಎತ್ತಿ ಹಿಂದಿನ ಸೀಟಿನಲ್ಲಿ ಕೂರಿಸಿದರು. ನಾಣಿ ಬರಲಾಗದ್ದರಿಂದ, ಡ್ರೈವರನ ಜತೆ ಅನಂತೂ ಒಬ್ಬನೇ  ಅತ್ತಿಯೊಂದಿಗೆ ಆಸ್ಪತ್ರೆಗೆ ಹೋದ.


ಓಪಿಡಿಯ ಗುಮಾಸ್ತ ‘ಬಾಯಿ ಸೊಟ್ಟ ಆಗಿದೆ’ ಎಂದುದಕ್ಕೆ ಎಲುಬು ಮತ್ತು ಕೀಲು ವಿಭಾಗಕ್ಕೆ ಚೀಟಿ ಬರೆಯಲು ಒಪ್ಪಲಿಲ್ಲ. ಅತ್ತಿಯ ಮುಖವನ್ನು ನೋಡಿ ‘ಇದು ಸ್ಟ್ರೋಕೇ’ ಎಂದು ಆತನೂ ಹೇಳಿ, ‘ಮೊದಲು ಫಿಸಿಷಿಯನ್ ಹತ್ತಿರ ತೋರಿಸಿ.. ಆಮೇಲೆ ನಾವು ಬೈಸಿಕೋಬೇಕಾಗುತ್ತೆ’ ಎಂದು ಗಲಾಟೆಮಾಡಿದ. ಅನಂತೂ ನಮ್ಮನೆ ಹಿಂದಿನ ಪೀಜೀ ಡಾಕ್ಟರು ನೋಡಿ ಹೇಳಿದ್ದಾರೆ ಎಂದು ಹೇಳಿದರೂ, ಏನೂ ಉಪಯೋಗವಾಗಲಿಲ್ಲ. ಉದ್ದನೆಯ ಸಾಲಿನಲ್ಲಿ ಅತ್ತಿಯನ್ನು ಗಾಲಿಕುರ್ಚಿಯ ಮೇಲೆ ಕೂಡಿಸಿ, ತಾನೂ ಕೂತ. ಸುತ್ತಲ ಜನಗಳು, ಫಿನಾಯಿಲ್ ವಾಸನೆ ತುಂಬಿದ ಆಸ್ಪತ್ರೆಯ ಗಾಳಿ, ಕೂತಿದ್ದ ಕುರ್ಚಿ ಇವೆಲ್ಲಾ ಅತ್ತಿಯನ್ನು ಯಾವುದೋ ಹೊಸಪ್ರಪಂಚಕ್ಕೆ ಕರೆದುಕೊಂಡು ಬಂದ ಹಾಗೆ ಅನ್ನಿಸಿತ್ತು. ತನ್ನ ಕೋಣೆ ಹಾಗೂ ಜಗುಲಿಯನ್ನು ಬಿಟ್ಟು ಹೊರಗೆ ಬಂದೇ ಆಕೆ ಇಪ್ಪತ್ತು ವರ್ಷವಾಗಿತ್ತೇನೋ. ಬಾಯನ್ನು ಸೊಟ್ಟಮಾಡಿಕೊಂಡೇ ಸುತ್ತ ಆಸಕ್ತಿಯಿಂದ ನೋಡುತ್ತಿದ್ದಳು.
ಸುಮಾರು ಎರಡು ಘಂಟೆ ಕಾದ ಮೇಲೆ, ಯಾರೋ ಒಬ್ಬ ಡಾಕ್ಟರು ಅತ್ತಿಯ ಮುಖವನ್ನು ಒಂದು ಸೆಕಂಡಿಗಿಂತಲೂ ಕಡಿಮೆ ನೋಡಿ, ಕೈಯಿಂದಲೂ ಮುಟ್ಟದೇ ‘ಇದು ಜಾ ಡಿಸ್‍ಲೊಕೇಟ್ ಆಗಿದೇರಿ. ಯಾರ್ರೀ ನಿಮ್ಮನ್ನು ಇಲ್ಲಿಗೆ ಕಳಿಸಿದ್ದು?’ ಎಂದು, ಇನ್ನೊಂದು ವಿಭಾಗಕ್ಕೆ ಕಳಿಸಿದ.

ಅಲ್ಲಿ ಎಲುಬು ಕೀಲು, ವೈದ್ಯ ಅತ್ತಿಯನ್ನು ತಳ್ಳುಗಾಡಿಯಲ್ಲಿಯೇ ಕೂರಿಸಿ ಅನಂತೂ ಬಳಿ ಇನ್ನೊಂದಿಷ್ಟು ಮಾಹಿತಿ ಪಡೆಯಲು ಆರಂಭಿಸಿದ.

‘ಹೆಸರು?’

‘ಅತ್ತಿ’

‘ಅತ್ತಿ ಅಂದರೆ ಏನ್ರೀ? ನಿಜವಾದ ಹೆಸರು?’

‘ನಿಜವಾದ ಹೆಸರು ಕುಂತೀಬಾಯಿ’

‘ಅದೆಂತಾ ಹೆಸರ್ರೀ? ಇರ್ಲಿ ಬಿಡಿ. ಈಗ ನೋಡಿ, ಈ ದವಡೆಯ ಮೂಳೆ ಒಂದುಕಡೆ ಜಾರಿದೆ. ಅದನ್ನು ಸರಿ ಮಾಡ್ಬೌದು, ವಯಸ್ಸಾಗಿದೆ ನೋಡಿ, ಸ್ವಲ್ಪ ರಿಸ್ಕು. ಮೇಲಾಗಿ ಮೂಳೆಗಳು ಸವೆದಿರ್ತಾವೆ. ಆ ಪ್ರೆಶರ್ ಹಾಕಿ ಎಳೆದಾಗ, ಸಣ್ಣಕ್ಕೆ ಮುರಿದ್ರೂ ಮುರೀಬಹುದು. ಹಾಗೆ ಮುರಿದ್ರೂ ಏನ್ತೊಂದ್ರೆ ಇ¯್ಲ. ಸ್ವಲ್ಪದಿನ ನೋಯುತ್ತೆ, ಅಷ್ಟೇ. ಆದರೆ, ಕೀಲುಗಳೆಲ್ಲಾ ಸಡಿಲವಾಗಿರೋದರಿಂದ ಮತ್ತೆ ಈ ರೀತಿ ಜಾರಿಕೋಬಹುದು. ಒಂದೇ ಕಡೆ ಜಾರಿರೋದ್ರಿಂದ ಬಾಯಿ ಒಂದು ಕಡೆ ಮಾತ್ರ ಸೊಟ್ಟ ಆಗಿದೆ. ಎರಡೂ ಕಡೆ ಜಾರಿದ್ರೆ ಬಿಟ್ಟ ಬಾಯಿ ಬಿಟ್ಟ ಹಾಗೆ ಇರಬಹುದು. ಅಂದರೆ, ಬಾಯಿ ಮುಚ್ಚಕ್ಕೇ ಆಗಲ್ಲ. ಆಗ ಸರಿಮಾಡೋದು ಕಷ್ಟ. ಮಾಡಕ್ಕಾಗಲ್ಲ ಅಂತಲ್ಲ, ಆದರೆ ಸ್ವಲ್ಪ ಕಷ್ಟ. ಬರೀ ಹಂಗೇ ಬರ್ಲಿಲ್ಲ ಅಂದ್ರೆ ಸೊಲ್ಪ ಮಬ್ಬು ಬರೋಕೆ ಏನಾರ ಔಷಧೀ ಕೊಡಬೇಕಾಗುತ್ತೆ. ಆಗ ಅದರ ಕಾಂಪ್ಲಿಕೇಶನ್ಸ್ ಬೇರೆ ಇರುತ್ತೆ. ಏನಂತೀರ, ಮಾಡೋಣವಾ, ಇಲ್ಲಾ ಬೇಡ ಅಂತ ನಿಮಗನಿಸಿದ್ರೆ ಬೇಡ, ಬೇಕಾದರೆ. ಅದು ಸರಿ ಅಜ್ಜೀಗೆ ವಯಸ್ಸೆಷ್ಟು?’ ಎಂದು ಉದ್ದಕ್ಕೂ ಪ್ರವರ ಒಪ್ಪಿಸಿದಮೇಲೆ ವಯಸ್ಸು ಕೇಳಿದ.

ಅಲ್ಲಿಯವರೆಗೂ ಸುಮ್ಮನಿದ್ದ ಅತ್ತಿ ‘ವೈವತ್ತಾವು’ ಎಂದಳು.

‘ಏನು?’ ಅಂದ ಡಾಕ್ಟರು.

‘ಎಂಭತ್ತಾರೋ, ಎಂಭತ್ತೇಳೋ ಇರಬಹುದು ಅನ್ನಿಸುತ್ತೆ.’ ಅಂದ ಅನಂತು.

‘ಸರಿ ಹಾಗಾದರೆ, ನಾನು ಇನ್ನೂ ಒಂದು ಹೇಳಬೇಕು. ಇದನ್ನು ಈಗ ಹೀಗೇ ಬಿಟ್ಟರೆ ಕಾಲಕ್ರಮೇಣ ಸರಿಹೋದರೂ ಹೋಗಬಹುದು. ಏನ್ರೀ, ನೀವು ಈ ಫಾರಂಗೆ ಒಂದು ಸೈನ್ ಹಾಕ್ರಿ. ನೀವೇನು ಹೆದರಬೇಡ್ರೀ ಅಜ್ಜಿ. ನಾನು ನೋಡ್ಕೋತೀನಿ’ ಎಂದು ಅತ್ತಿಯ ಬಾಯೊಳಗೆ ಬೆರಳಿಡಲು ಹೋದ.


ಆಗ ಇದ್ದಕ್ಕಿದ್ದಂತೆ ಅತ್ತಿ ‘ಆಆಆಆಅ....’ ಎಂದು ಆಕಳಿಸಿದಹಾಗೆ ಮಾಡಿದವಳೇ ಬಾಯಿತುಂಬಾ ಆದಷ್ಟು ಸ್ಪಷ್ಟವಾಗಿ ‘ಶಕ್ಕೂ’ ಎಂದು ಜೋರಾಗಿ ಕೂಗಿದಳು. ಕೈಯೆತ್ತಿ ಕಿಟಕಿಯಿಂದಾಚೆ ಅನಂತೂಗೆ ತೋರುಬೆರಳಿನಲ್ಲಿ ಏನೋ ತೋರಿಸಿದಳು. ಏನೇನೂ ಕಾಣಿಸದ ಅಜ್ಜಿಗೆ ಏನು ಕಾಣಿಸಿರಬಹುದು ಇಲ್ಲಿ, ಎಂದು ಅನಂತೂ ಕಿಟಕಿಯ ಹೊರಗೆ ನೋಡಿದ. ಅತ್ತಿಯ ಬಾಯೊಳಗೆ ‘ಟಳ್’ ಎಂದು ಶಬ್ದವಾಯಿತು.

ಹೊರಗಡೆ ಮಧ್ಯವಯಸ್ಕ ಹೆಂಗಸೊಬ್ಬಳು ತನ್ನ ತುಂಬುಹೊಟ್ಟೆಯನ್ನು ಹೊತ್ತು ನಡೆದಿದ್ದಳು.
ಅತ್ತಿ ಸುಮ್ಮನೆ ಶೂನ್ಯದಲ್ಲಿ ನೋಡುತ್ತಾ ‘ಶಕ್ಕೂ, ಶಕ್ಕೂ’ ಎಂದು ಕೂಗಹತ್ತಿದಳು. ಅತ್ತಿಗೆ ಕಿಟಕಿಯಾಚೆಗಿನ ಬಸುರಿಹೆಂಗಸು ಕಾಣಲು ಸಾಧ್ಯವಿಲ್ಲ. ಏನು ನೋಡಿದಳೋ ಏನೋ, ಅಂದುಕೊಂಡ, ಅನಂತು.
ಡಾಕ್ಟರು ‘ನಾನು ಹೇಳಲಿಲ್ಲವ, ಕೆಲವೊಮ್ಮೆ ಅದಾಗದೇ ಸರಿಹೋಗಬಹುದು, ಎಂದು’ ಅಂದ ಅನಂತು ಕಡೆ ತಿರುಗಿ.

......


ಅತ್ತಿ ನಕ್ಕಿತು. ಬಾಯಿ ಸೊಟ್ಟವಾಗಿರಲಿಲ್ಲ. ನಂದಿನಿಯ ಬಳಿ ‘ಹೋಗಿ, ಒಂದು ಕನ್ನಡಿ ತಗಂಬಾರೇ’ ಅಂತು.
ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾ ನಕ್ಕು ‘ಹ್ಯಾಗಿದ್ಯೇ ಶಕ್ಕೂ’ ಅಂತು.

ನಂದಿ ನಕ್ಕು ‘ಇದೆಂತದತ್ತೀ. ಕನ್ನಡೀಲಿ ಮುಖ ನೋಡ್ಕೊಂಡು ಶಕ್ಕೂ ಅನ್ನಕ ಶುರೂಮಾಡ್ದೀ ಈಗ’ ಅಂದಳು. ಏನೋ ಪರೀಕ್ಷೆಮಾಡುವಂತೆ ‘ಅತ್ತೀ, ಕನ್ನಡಿಯಾಗಿರೋರು ಯಾರು?’ ಅಂದಳು.

‘ಶಕ್ಕು’ ಅಂತು, ಅತ್ತಿ.

‘ಕನ್ನಡಿಯ ಹೊರ್ಗಿರೋ ಮುಖಾ ಯಾರದ್ದು’ ಅಂದಳು.

‘ನಂದೇ’

‘ಅಂದರೆ’

‘ನಾನೇ ಕುಂತೀ’

‘ಶಕ್ಕು, ಕುಂತಿ ಅವ್ಳೀಜವ್ಳೀ ಅಲ್ಲಾ’

‘ಹೌದೇ’

‘ಎಷ್ಟು ಅವ್ಳೀಜವ್ಳೀನೇ’?.

‘ಒಂದೇಜೀವ ಅನ್ನೋಷ್ಟು’. ಅಂತು, ಅತ್ತಿ. ಸತ್ತ ಕಣ್ಣುಗಳಿಂದಲೂ ನೀರು ಬರುತ್ತದೆ ಎಂದು ನಂದಿನಿಗೆ ಆಗ ಗೊತ್ತಾಯಿತು."

- ಡಾ ಗುರುಪ್ರಸಾದ್ ಕಾಗಿನೆಲೆ.



ಸದ್ಯದ ಸಮಕಾಲೀನ ಕನ್ನಡ ಕಥೆಗಾರರಲ್ಲಿ ಡಾ ಗುರುಪ್ರಸಾದ ಕಾಗಿನೆಲೆಯವರದ್ದು ಒಂದು ಪ್ರಮುಖವಾದ ಹೆಸರು.  ೨೦೦೩ರಲ್ಲಿ ಅಂಕಿತ ಪುಸ್ತಕದ ಸಹಯೋಗದಲ್ಲಿ ವಿಜಯ ಕರ್ನಾಟಕ ನಡೆಸಿದ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆಗೆ ಪಾತ್ರವಾದ 'ಆಲ್'ಮೋಸ್ಟ್... ಒಂದು ಕಥೆ'ಯ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಗಮನ ಸೆಳೆದ ಗುರುಪ್ರಸಾದ್ ಪ್ರವೃತ್ತಿಯಿಂದ ಕಥೆಗಾರರಾದರೂ ವೃತ್ತಿಯಿಂದ ವೈದ್ಯರು. ಬಳ್ಳಾರಿಯ ಸರಕಾರಿ ವಿಜಯನಗರ ವೈದ್ಯಕೀಯ ಸಂಸ್ಥೆಯಲ್ಲಿ ತಮ್ಮ ವೈದ್ಯಕೀಯ ಪದವಿ ಹಾಗೂ ಸ್ನಾತಕ ಪದವಿಯನ್ನ ಪೂರೈಸಿದ ಅವರು ಸದ್ಯ ತುರ್ತು ಚಿಕಿತ್ಸಾ ವಿಭಾಗದ ತಜ್ಞ ವೈದ್ಯರಾಗಿ ರಾಚೆಸ್ಟರ್'ನ ನಾರ್ತ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಅವರು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ದೂರದ ಮಿನ್ನಿಸೋಟಾದಿಂದಲೆ ಬರವಣಿಗೆಯ ಜಗತ್ತಿನ ನಂಟನ್ನ ತಮ್ಮ ಕಥೆಗಳ ಮೂಲಕ ಸಾಧಿಸಿರುವ ಅವರು ತಮ್ಮ ಪ್ರತಿ ಕಥೆಯಲ್ಲಿಯೂ ನಿತ್ಯ ಜೀವನದ ಸತ್ಯ ದರ್ಶನವನ್ನ ಮಾಡಿಸುತ್ತಲೆ ಅದಕ್ಕೊಂದು ಹೊಸ ಹೊಳಹು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎನ್ನಿಸುತ್ತದೆ.


'ಛಂದ ಪುಸ್ತಕ'ದ್ದೆ ಆದ ಪ್ರಕಟಣೆಯಾಗಿದ್ದ 'ನಿರ್ಗುಣ' ಎನ್ನುವ ತಮ್ಮ ಕಥಾ ಸಂಗ್ರಹದ ಮೂಲಕ ಅವರು ಕನ್ನಡ ಸಾರಸ್ವತ ಲೋಕದಲ್ಲಿ ಅಡಿಯಿಟ್ಟಿದ್ದರು. ಅನಂತರ ಅವರ 'ವೈದ್ಯ, ಮತ್ತೊಬ್ಬ' ಅದೆ ಪ್ರಕಾಶನದಿಂದ ೨೦೦೫ರಲ್ಲಿ ಪ್ರಕಟವಾಗಿತ್ತು. ಅದರ ನಂತರ ಅವರು ಸಂಪಾದಿಸಿದ್ದ 'ಆಚೀಚಿನ ಕಥೆಗಳು' ಬೆಳಕು ಕಂಡಿದ್ದವು. ಅನಂತರ ೨೦೦೭ರಲ್ಲಿ ಪ್ರಕಟವಾದ 'ಶಕುಂತಲ' ಅವರ ಮೂರನೆ ಕೃತಿ ಒಂದು ಕಥಾ ಸಂಕಲನ. ಇಲ್ಲಿರುವ ಹತ್ತು ಕಥೆಗಳೂ ಸಹ ಓದುಗರನ್ನ ಅಮ್ಮಸಂದ್ರದಿಂದ ಅಲಬಾಮದವರೆಗೆ ಮುಲಾಜಿಲ್ಲದೆ ಕರೆದುಕೊಂಡು ಹೋಗುತ್ತಾ 'ಹೌದಲ್ಲಾ, ನಮ್ಮ ಸುತ್ತಲೇ ನಿತ್ಯ ಘಟಿಸುವ ಇಂತಹ ಘಟನೆಗಳು ನನಗ್ಯಾಕೆ ಕಾಡಲಿಲ್ಲ?' ಅನ್ನಿಸುವಂತೆ ಮಾಡುತ್ತವೆ. ಕೆಲವು ಪ್ರಾಕ್ಟಿಕಲ್ ಹಾಸ್ಯಗಳು ಪೋಲಿ ನಗುವನ್ನೂ ತುಟಿಯಂಚಿನಲ್ಲಿ ಮೂಡಿಸುತ್ತವೆ. ಸಂಕಲನದ 'ಮೂರು ಕಥೆಗಳಿಗೆ ಈ ಗುಣವಿದೆ. 'ಅಲಾಬಾಮಾದ ಅಪಾನ ವಾಯು' 'ಬೀಜ' ಹಾಗೂ 'ಶಕುಂತಲ' ಕಥೆಗಳಿಗಳಲ್ಲಿ ಅದನ್ನ ಗಮನಿಸಬಹುದು. ಒಟ್ಟಾರೆ ಎಲ್ಲಾ ಕಥೆಗಳೂ ಒಂದೊಂದು ಬಗೆಯಲ್ಲಿ ಓದುಗರ ಮನವನ್ನ ಆವರಿಸಿಕೊಳ್ಳುತ್ತವೆ.

ಪುಸ್ತಕದ ಬೆನ್ನುಡಿಯಲ್ಲಿ ವಿವೇಕ ಶಾನುಭಾಗರು ಹೇಳುವಂತೆ "'ಶಕುಂತಳಾ' ವಸ್ತು ಮತ್ತು ರಚನೆಯಲ್ಲಿ ಸ್ಪಷ್ಟವಾಗಿ ಹೊಸತನ್ನು ಶೋಧಿಸುವ ಕಥೆ. ಅಂತೆಯೆ ಜೀವದ ಅವ್ಯಕ್ತ ಹಂಬಲಗಳು, ಕೈಮೀರಿ ಹೋದ ಭೂತಕಾಲ, ಬಿಟ್ಟು ಬಂದ ಹಾದಿಗಳು ಮತ್ತು ವರ್ತಮಾನದಲ್ಲಿ ಎಲ್ಲವನ್ನೂ ಏಕತ್ರ ಹಿಡಿಯುವ ಸಂಕಟಗಳನ್ನು ಈ ಕಥೆ ಸಮರ್ಥವಾಗಿ ಹೇಳುತ್ತದೆ. ಅವ್ಯಕ್ತತೆ ಮತ್ತು ಅಮೂರ್ತತೆಯನ್ನ ಹೇಳ್:ಅಲು ಅಗತ್ಯವಾದ ರೀತಿಯಲ್ಲಿ ಕಥೆಯ ನಿರ್ವಹಣೆ ಇದೆ. ಎಷ್ಟನ್ನು ಹೇಳಬೇಕು, ಎಷ್ಟನ್ನು ಸೂಚಿಸಬೇಕು, ಎಷ್ಟನ್ನು ಮುಚ್ಚಿಡಬೇಕು ಎನ್ನುವ ಕಲೆಗಾರಿಕೆ ಇಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ."


ಕಥೆಯಷ್ಟೆ ಅಲ್ಲದೆ 'ಬಿಳಿಯ ಛಾದರ' ಹಾಗೂ 'ಗುಣ' ಎನ್ನುವ ಕಾದಂಬರಿಯನ್ನು ಸಹ ಗುರುಪ್ರಸಾದ್ ಬರೆದಿದ್ದಾರೆ. 'ಬೇರು ಸೂರು' ಎನ್ನುವ ಕೃತಿಯನ್ನ ಇತ್ತೀಚೆಗೆ ಸಂಪಾದಿಸಿದ್ದರೆ. ಪತ್ನಿ ಪದ್ಮ ಹಾಗೂ ಮಕ್ಕಳಾದ ಪ್ರಭವ, ಪ್ರಣಿತಾ ಜೊತೆ ಅಮೇರಿಕೆಯ ವಾಸಿಯಾಗಿದ್ದರೂ ಕನ್ನಡದ ತಾಯಿಬೇರಿಗೆ ಬರಹದ ನೀರೆರೆಯುತ್ತಲೆ ಗುರುಪ್ರಸಾದ್ ಒಟ್ಟಾರೆ ಇತ್ತೀಚಿನ ಕಥೆಗಾರರಲ್ಲಿಯೆ ಗಮನಾರ್ಹರು.

18 October 2014

ಭೋಪರಾಕು ಹಾಕುವ ಬರದಲ್ಲಿ ಮೆದುಳನ್ನ ಅಡವಿಟ್ಟವರ ಪ್ರಲಾಪಗಳೂ, ನಿಜವಾದ ಆರ್ಥಿಕ ಎಡವಟ್ಟಿನ ಆಲಾಪಗಳೂ.......







( ಹಿಂದಿನ ಲೇಖನಕ್ಕೆ ರಾಘವೇಂದ್ರ, ಗೋಪಿನಾಥ್ ಹಾಗೂ ಪ್ರಕಾಶ್ ಎತ್ತಿದ್ದ ಪ್ರಶ್ನೆಗಳಿಗೆ ನನ್ನ ಗ್ರಹಿಕೆಯಲ್ಲಿ ಬರೆದ ಮಾರುತ್ತರ.)

ಮೊದಲಿಗೆ ವಿರಾಮದಲ್ಲಿ ಉತ್ತರಿಸುತ್ತಿರೋದರಿಂದ ಆಗಿರುವ ತಡಕ್ಕಾಗಿ ಕ್ಷಮೆ ಕೇಳುತ್ತೇನೆ.

ರಾಘವೇಂದ್ರ ಪ್ರಕಾರ ಸರ್ವ ವಿಧದಿಂದಲೂ ಅಮೇರಿಕಾ ಸಂಪನ್ನ ರಾಷ್ಟ್ರ ಹಾಗೂ ಶ್ರೀಮಂತ ನೆಲ. ಆದರೆ ಅವರ ಭೋಪರಕಿನ ಆಲಾಪದ ಆಳದಲ್ಲಿ ಅಡಗಿರುವ ಮಾಹಿತಿಯ ಕೊರತೆಯನ್ನ ಕ್ಷಮಿಸೋಣ. ಅಮೇರಿಕ ಇಂದು ಅವರಂದಂತೆ ಶ್ರೀಮಂತ ನಾಡು ನಿಜ ಆದರೆ ಅದು ಕೇವಲ ಹಣ ಹಾಗೂ ತೋಳ್ಬಲದ ವಿಷಯದಲ್ಲಿ ಮಾತ್ರ. ಉಳಿದಂತೆ ಅವರೆ ಪ್ರಸ್ತಾಪಿಸಿರುವ ತಂತ್ರಜ್ಞಾನ, ಬೌದ್ಧಿಕ ಮಾಹಿತಿಯಲ್ಲಿ ಭಾರತದ ಸನಿಹಕ್ಕೂ ಅವರು ಸುಳಿಯಲಾರರು ಅನ್ನುವುದು ಅವರ ಮಾಹಿತಿಗೆ. ತಂತ್ರಜ್ಞಾನದ ಉನ್ನತ ಪರಿಕರಗಳ ಮಿತಿಮೀರಿದ ಉಪಯೋಗ ಮಾಡುತ್ತಿದ್ದಾರೆ ಅಂದಕ್ಷಣ ಅವರು ಪರಮ ಬುದ್ಧಿವಂತರು ಅಂತೇನಲ್ಲ. ಅದರೆ ಅಂತಹ ಪರಿಕರ, ಅವುಗಳಿಗೆ ರೂಪಿಸಲಾಗುವ ತಂತ್ರ ಕೌಶಲ್ಯದ ಅನ್ವೇಷಣೆಗಳ ಹಾಗೂ ನಿರ್ವಹಣೆಯಲ್ಲಿ ಏಷಿಯಾ ಮೂಲದ, ಅದರಲ್ಲಿಯೂ ಭಾರತೀಯ ಸಂಜಾತರ ಪಾತ್ರ ಹಿರಿದು. ಅದರಲ್ಲಿ ಮೂಲ ಅಮೇರಿಕನ್ನರ ಪಾತ್ರ ನಗಣ್ಯ ಅನ್ನುವಷ್ಟು ಕಿರಿದು ಅನ್ನುವ ಸಾಮಾನ್ಯ ಜ್ಞಾನ ಇದ್ದಿದ್ದರೆ ಬಹುಷಃ ಅವರು ಈ ಬಗ್ಗೆ ಪ್ರಶ್ನೆ ಎತ್ತಿ ನಗೆಪಾಟಲಿಗೆ ಈಡಾಗುತ್ತಿರಲಿಲ್ಲ. ಆ ಬಗ್ಗೆ ಅವರಿಗೆ ಸಂದೇಹಗಳಿದ್ದಲ್ಲಿ ಉದಾಹರಣೆಗೆ ಕೆಲವೆ ಕೆಲವು ಇಂಟೆಲ್, ನಾಸಾ, ಆಪಲ್ ಹಾಗೂ ಮೈಕ್ರೋಸಾಫ್ಟ್'ಗಳಂತಹ ಸಂಸ್ಥೆಗಳ ಮೆದುಳುಗಳಾಗಿ ದುಡಿಯುತ್ತಿರುವ ಒಟ್ಟಾರೆ ಸಿಬ್ಬಂದಿಗಳ ಮೂಲ ದೇಶವನ್ನ ಪತ್ತೆ ಮಾಡಿದರೆ ಸಾಕು. ಅವರ ಭ್ರಮೆಯ ಪೊರೆ ಕಳಚಬಹುದು.

ಇನ್ನು ಅವರ ಬೌದ್ಧಿಕ ಮಾಹಿತಿಗೆ ಹೋಲಿಸಿದಾಗ ಭಾರತೀಯ ಮೆದುಳಿನ ಕಾಲು ಭಾಗಕ್ಕೂ ಅಮೇರಿಕನ್ ಮೆದುಳು ಸರಿಗಟ್ಟಲಾಗದು ಎನ್ನುವುದು ಅವರ ಮಾಹಿತಿಗೆ. ಸಮಕಾಲೀನ ವಿಷಯಗಳಾದ ಎರಡೂ ನಾಡಿಗೆ ಸಂಬಂಧಿಸಿದ ಚರಿತ್ರೆ, ಕ್ರೀಡೆ, ಸಾಮಾನ್ಯ ಜ್ಞಾನ, ರಾಜಕೀಯ, ವಿಜ್ಞಾನ ಹಾಗೂ ಸಿನೆಮ ಈ ಕುರಿತು ಒಬ್ಬ ಅಮೇರಿಕನ್ ಹಾಗೂ ಒಬ್ಬ ಭಾರತೀಯನ ನಡುವೆ ಪಪೋಟಿ ಯಾರಾದರೂ ನಡೆಸಿದಲ್ಲಿ ಅಂತಿಮ ಗೆಲುವು ಭಾರತೀಯನದೆ ಆಗಿರುತ್ತದೆ. ಅನೌಪಚಾರಿಕವಾಗಿ ನಡೆದ ಅಂತಹ ಒಂದು ಪೈಪೋಟಿಯಲ್ಲಿ ಗೆದ್ದ ಭಾರತೀಯ ನಾನಾಗಿದ್ದೆ ಅನ್ನುವುದು ಅವರ ಮಾಹಿತಿಗೆ. ಭಾರತದ ಸಂಗತಿಗಳ ಕುರಿತು ಅತ್ತಲಾಗಿರಲಿ ಸ್ವತಃ ಅಮೇರಿಕನ್ ಸಂಗತಿಗಳ ಬಗ್ಗೆಯೆ ಅವರಲ್ಲಿ ಪರಿಪೂರ್ಣ ಮಾಹಿತಿಗಳಿಲ್ಲ ಅನ್ನೋದು ರಾಘವೇಂದ್ರರ ಮಾಹಿತಿಗೆ. ಅವರ ಇಂಗ್ಲೀಷ್ ಮೇಲಿನ ಹಿಡಿತ ಇಂಗ್ಲೀಷ್ ಮಾತೃಭಾಷೆಯಲ್ಲದ ನಮ್ಮಕ್ಕಿಂತ ಅತ್ತತ್ತ.

ಹೌದು, ನಾವು ಭಾರತೀಯರು ಅಮೇರಿಕನ್ನರಿಗಿಂತ ಹೋಲಿಕೆಯಲ್ಲಿ ಹೆಚ್ಚು ನ್ಯಾಯ ಪರರು. ಹೀಗಾಗಿ ವ್ಯಥಾ ನಮ್ಮ ತೋಳ್ಬಲವನ್ನ ಯಾರೊಬ್ಬರ ಮೇಲೂ ಪ್ರಯೋಗಿಸೆವು. ಇದು ಇತಿಹಾಸದಿಂದಲೂ ಹರಿದು ಬಂದ ನಮ್ಮೊಳಗಿನ ಮೂಲಗುಣ. ಇನ್ನು ನಮ್ಮಲ್ಲೆಲ್ಲಿದೆ ಹಣ? ಇರುವ ನಾಲ್ಕು ಕಾಸನ್ನ ಇದೆ ಆಳುವ ಮಂದಿ ಯುರೋಪಿನ ಬ್ಯಾಂಕುಗಳಲ್ಲಿ ಕೂಡಿ ಹಾಕಿಟ್ಟುಕೊಂಡಿದ್ದಾರಲ್ಲ! ಜಗತ್ತಿನ ಎರಡನೆ ಜನ ಸಂಖ್ಯಾ ಬಾಹುಳ್ಯ ಇರುವ ನಮ್ಮಲ್ಲಿ ಆರ್ಥಿಕ ಬಡತನ ಹೆಚ್ಚಿರೋದು ಆಶ್ಚರ್ಯ ಪಡುವಂತದ್ದೇನಲ್ಲ. ಅದು ಸಹಜ ಸಹ. ಅದೊಂದೆ ಕಾರಣಕ್ಕೆ ನಾವು ಅವರ ಅಡಿಯಾಳಿನಂತೆ ದ್ವಿ ಪಕ್ಷೀಯ ಒಪ್ಪಂದದ ಮುಖವಾಡದ ಹೆಸರಿನಲ್ಲಿ ಅವರು ಹೇರುವ ದಬ್ಬಾಳಿಕೆಯ ಶರತ್ತುಗಳಿಗೆ ಮರು ಮಾತಿಲ್ಲದೆ ಮಿಸುಕಾಡದೆ ಶರಣಾಗತಿ ಸೂಚಿಸುವ ಯಾವ ಅಗತ್ಯವೂ ಇಲ್ಲ. ಹಾಗೆ ನೋಡಿದರೆ ಅಲ್ಲಿನ ನೆಲದಲ್ಲಿ ನಮ್ಮ ಹೂಡಿಕೆಗೆ ಇದು ಸಕಾಲ. ನಮ್ಮ ಜಿಡಿಪಿ ಸದ್ಯ ಸ್ಥಿರವಾಗಿದೆ ಹಾಗೂ ದೃಢವಾಗಿದೆ.

ಅಮೇರಿಕಾದ ಟ್ರೆಜರಿ ಬಾಂಡ್'ಗಳನ್ನ ಚೀನಾ ಬಹುತೇಕ ಖರೀದಿಸಿ ಅವರ ಪ್ರತಿರೋಧಕ್ಕೆ ಕಡಿವಾಣ ಹಾಕಿರುವಂತೆ ಭಾರತಕ್ಕೂ ಮಾಡಲಿಕ್ಕೆ ಸಾಧ್ಯವಿದೆ. ವಿಶ್ವ ಬ್ಯಾಂಕಿಗೆ ಪ್ರತಿಸ್ಪರ್ಧಿಯಾಗಿ ಪರ್ಯಾಯವಾದ ಏಷ್ಯಾ ಕೇಂದ್ರೀಯ ಬ್ಯಾಂಕ್ ಸ್ಥಾಪಿಸುವ ಚೀನಾ ಪ್ರಯತ್ನಕ್ಕೆ ಸಮ್ಮತಿ ಇಲ್ಲದಿದ್ದರೂ ಏನೊಂದನ್ನೂ ಮಾಡಲಾಗದೆ ಅಸಹಾಯಕತೆಯಿಂದ ಮೈ ಪರಚಿಕೊಳ್ಳುವ ಅಮೇರಿಕೆಯನ್ನ ನಾವೂ ಹಾಗೆ ಪಳಗಿಸದೆ ಗತ್ಯಂತರವೆ ಇಲ್ಲ. ಅಂದ ಹಾಗೆ ಚೀನಾದ ಈ ಮುನ್ನೋಟದ ಮೂವತ್ತು ದಶ ಲಕ್ಷ ಕೋಟಿ ಡಾಲರ್ ಯೋಜನೆಗೆ ಚೀನಾ ಹಾಗೂ ಸಿಂಗಪುರದ ನಂತರ ಭಾರತವೆ ಅತಿ ಹೆಚ್ಚಿನ ದೇಣಿಗೆ ನೀಡುತ್ತಿರುವ ಪಾಲುದಾರ ಎನ್ನುವುದು ನಿಮ್ಮ ಗಮನಕ್ಕೆ. ಇದು ಆರ್ಥಿಕ ಬಲಾಢ್ಯತೆಯ ಹೋಲಿಕೆಯಲ್ಲಿ ನಮ್ಮ ಯೋಗ್ಯತೆ ಅನ್ನುವುದು ರಾಘವೇಂದ್ರರಿಗೆ ಅರಿವಿದ್ದಿದ್ದರೆ ಅವರು ಗಾಳಿಯಲ್ಲಿ ನಾನು ಕೈ ಬೀಸುತ್ತಿದ್ದೇನೆ ಅನ್ನುವ ಹಗುರ ಧಾಟಿಯ ಮಾತನ್ನ ಆಡುತ್ತಲೇ ಇರಲಿಲ್ಲ. ಅಂಕಿ ಅಂಶಗಳ ಬಗ್ಗೆ ಆಸಕ್ತಿ ಇದ್ದಲ್ಲಿ ಅಂತರ್ಜಾಲದಲ್ಲಿ ಅವು ಲಭ್ಯವಿವೆ. ಹುಡುಕಿ ಕೊಂಡು ಅವರು ಅದನ್ನ ಓದಿ ಅರ್ಥ ಮಾಡಿಕೊಳ್ಳಬಹುದು.

ಅಮೇರಿಕಾದಂತೆ ನಮ್ಮದೂ ಸಹ ಸ್ವಾತಂತ್ರ್ಯ ಸರ್ವಭೌಮ ದೇಶ ಅನ್ನುವುದು ರಾಘವೇಂದ್ರರ ಘನ ಗಮನಕ್ಕೆ. ಇನ್ನು ಪ್ರಜಾ ಪ್ರಭುತ್ವ ಅವರಿಗಿಂತ ಹೆಚ್ಚಿನ ಸ್ಥಿರತೆಯಲ್ಲಿ ನಮ್ಮಲ್ಲಿಯೂ ಬೇರು ಬಿಟ್ಟಿದೆ. ಮತದಾರರ ಸಂಖ್ಯೆಯ ಹೋಲಿಕೆಯಲ್ಲಿ ನಾವು ಅವರಿಗಿಂತ ಹೆಚ್ಚು ಸಬಲರು. ಒಕ್ಕೂಟ ವ್ಯವಸ್ಥೆಯಲ್ಲಿಯೂ ನಾವು ಅವರನ್ನು ಸರಿಗಟ್ಟುತ್ತಿದ್ದೇವೆ, ನಮ್ಮ ಯಾವೊಬ್ಬ ಪ್ರಧಾನಿ ಅಥವಾ ರಾಷ್ಟ್ರಾಧ್ಯಕ್ಷರು ಕಾಲಾನುಕಾಲಕ್ಕೆ ರಾಷ್ಟ್ರದ ಜನತೆಯನ್ನ ಹಾಡಹಗಲೆ ಯಾಮಾರಿಸುವ ಸುಳ್ಳು ಹೇಳಿ ಕಟ್ಟು ಕಥೆಯೊಂದರ ಆಧಾರದಲ್ಲಿ ಕಂಡ ಕಂಡ ದೇಶಗಳ ಮೇಲೆ ತೋಳೇರಿಸಿಕೊಂಡು ಹೋದ ಉದಾಹರಣೆ ನಮ್ಮಲ್ಲಿ ಭೂತಗನ್ನಡಿ ಹಾಕಿಕೊಂಡು ಹುಡುಕಿದರೂ ಒಂದೂ ಸಿಗುವುದಿಲ್ಲ. ಇದು ನಮ್ಮ ಹಾಗೂ ಅವರಲ್ಲಿ ಪ್ರಜಾಪ್ರಭುತ್ವ ನೆಲೆಗೊಂಡ ಬಗೆ ಅನ್ನುವುದು ರಾಘವೇಂದ್ರ ಗಮನಕ್ಕೆ ಯಾಕೆ ಬರಲಿಲ್ಲವೋ ನಾ ಕಾಣೆ.

ಕೃಷಿ ಅನ್ವೇಷಣೆ ಹಾಗೂ ಔಷಧದ ಪ್ರಯೋಗಗಳಲ್ಲಿ ಭಾರತವನ್ನ ಬೇಕಾ ಬಿಟ್ಟಿಯಾಗಿ ಅಮೇರಿಕಾ ಕಳೆದೆರಡೂವರೆ ದಶಕಗಳಿಂದ ಬಳಸಿಕೊಳ್ಳುತ್ತಿರುವ ವಿಷಯವೇನಾದರೂ ರಾಘವೇಂದ್ರ ಗಮನಿಸಿದ್ದಾರ? ತಳಿ ಪರಿವರ್ತಿತ ಹಣ್ಣು ತರಕಾರಿಗಳ ಉತ್ಪಾದನೆಗೆ ತಡೆ ಒಡ್ಡಲಿಕ್ಕೆ ತಮ್ಮ ನೆಲದಲ್ಲಿ ಮಾತ್ರ ಬಿಗು ಕಾನೂನುಗಳನ್ನ ಹೇರಿ ನಮ್ಮ ನೆಲದ ತಳಿ ಶುದ್ಧತೆಗೆ ಇವರು ಇಟ್ಟ ಬೆಂಕಿಯ ಉರಿ ಇನ್ನೂ ಇವರ ದಪ್ಪ ಚರ್ಮಕ್ಕೆ ತಗಲಲಿಲ್ಲವ? ಬಹುಷಃ ಗ್ರಾಮೀಣ ಬದುಕಿನ ಒಳ ಹೊರಗನ್ನ ಅರಿಯದೆ ದೂರದ ದೆಲ್ಲಿಯಲ್ಲಿ ಕೂತು ಕೆಲವೆ ಕೆಲವು ಸಿರಿವಂತರ ಜೇಬು ತುಂಬಿಸುವ ಜನ ಸಾಮಾನ್ಯ ವಿರೋಧಿ ಕಾನೂನುಗಳನ್ನ ರೂಪಿಸುತ್ತಾ ಕಂಡವರ ಕಾಸಿಗೆ ಬಸಿರಾಗುವ ಖದೀಮ ರಾಜಕಾರಣಿಗಳ ಬಣ್ಣ ಬಣ್ಣದ ಮಾತುಗಳು ನಿಮಗೆಲ್ಲ ಸವಿ ರಾಗದಂತೆ ಕೇಳಿಸೀತು ಆದರೆ ಹಳ್ಳಿಯ ಬಡ ರೈತಾಪಿಗಳಿಗಲ್ಲ.

ಗ್ಯಾಟ್ ಹಾಗೂ ಡೆಂಕನ್ ಒಪ್ಪಂದಗಳಿಂದ ಈಗಾಗಲೆ ಆದ ಹಾನಿಯನ್ನ ಪರಿಗಣಿಸಿ ಹೇಳುವುದಾದರೆ ಅದರ ನೀತಿ ನಿರೂಪಣೆಯಿಂದಾದ ದೂರಗಾಮಿ ದುಶ್ಪರಿಣಾಮಗಳನ್ನೆ ವಿರೋಧಿಸಿ ಅಧಿಕಾರಕ್ಕೆ ಬಂದ ಸರಕಾರ ಇದು. ಈಗ ಲಜ್ಜೆಗೆಟ್ಟ ಇವರೂ ಸಹ ಅದನ್ನೇ ಮುಂದುವರಿಸಿ ಬಹಿರಂಗದಲ್ಲಿ ಭರವಸೆಗಳ ಟೋಪಿ ತೊಡಿಸಿ ಅಂತರಂಗದಲ್ಲಿ ನಯವಾಗಿ ನಮ್ಮ ಕತ್ತು ಕುಯ್ಯುವುದಾದರೆ ಇವರು ಪಟ್ಟಕ್ಕೇರಿ ನಮಗೆ ಬಂದ ಭಾಗ್ಯವೇನು? ಅಮೇರಿಕಾದೊಂದಿಗೆ ಆದ ಇತ್ತೀಚಿನ ದ್ವಿ ಪಕ್ಷೀಯ ಒಪ್ಪಂದಗಳಲ್ಲಿ ಈ ಹಿಂದಿನ ಉಳಿದೆಲ್ಲ ಒಪ್ಪಂದಗಳಂತೆಯೆ ನಮ್ಮ ಯಾವುದೆ ಸ್ವ ಹಿತಾಸಕ್ತಿಯನ್ನ ಕಾಪಾಡುವ, ಅವರ ಕಡೆಯಿಂದ ನಮ್ಮ ನೆಲದ ಪ್ರಾಕೃತಿಕ ಸ್ಥಿರತೆಯನ್ನ ಕುಲಗೆಡಿಸಬಹುದಾದ ಯಾವುದೇ ಸಾಧ್ಯತೆಗಳನ್ನ ಪ್ರತಿಬಂಧಿಸುವ, ಹಾಗೊಂದು ವೇಳೆ ಅವರ ಉತ್ಪಾದನೆ ಹಾಗೂ ಸಂಶೋಧನೆಗಳಿಂದ ನಮ್ಮ ನೆಲ, ಜಲ ಹಾಗೂ ಜನಕ್ಕೆ ಹಾನಿಯಾದದ್ದೇ ಆದರೆ ಅದರ ಕೂಲಂಕಷ ತನಿಖೆಯನ್ನ ನಮ್ಮ ನೆಲದ ಕಾನೂನಿನ ಪ್ರಕಾರ ನಡೆಸಲು. ಒಂದು ವೇಳೆ ಅವರ ಅಪರಾಧ ಸಾಬೀತಾದರೆ ಅಮೇರಿಕನ್ನರನ್ನ ಭಾರತೀಯ ದಂಡ ಸಂಹಿತೆಯ ಪ್ರಕಾರ ಶಿಕ್ಷಿಸಲು ಯಾವುದೇ ಅವಕಾಶಗಳು ನಮಗಿಲ್ಲವೇ ಇಲ್ಲ. ಈ ದ್ವಿ ಪಕ್ಷೀಯ ಒಪ್ಪಂದದ ಎಲ್ಲಾ ಒಪ್ಪುತಪ್ಪುಗಳು ಅಮೇರಿಕನ್ ನ್ಯಾಯಾಂಗ ವ್ಯವಸ್ಥೆಯ ವ್ಯಾಪ್ತಿಗೆ ಮಾತ್ರ ಒಳ ಪಡುತ್ತವೆ!

ನಮ್ಮ ಆರ್ಥಿಕ ಯೋಜನಾ ಸಮಿತಿ ಹಾಗೂ ವಿದೇಶ ನೀತಿ ನಿರೂಪಣಾ ಸಮಿತಿ ಸರಿಯಾದ ಸಲಹೆಗಳನ್ನ ಕೊಟ್ಟಿದ್ದರೆ ಈ ಅನರ್ಥಕಾರಿ ಒಪ್ಪಂದ ಏರ್ಪಡುತ್ತಲೇ ಇರಲಿಲ್ಲ ಅಥವಾ ಅವರು ಕೊಟ್ಟಿರಬಹುದಾದ ವಿವೇಕದ ಸಲಹೆಗಳನ್ನ ಘನ ಸರ್ವಾಧಿಕಾರಿಗಳ ಸರಕಾರ ಪರಿಗಣಿಸಿದ್ದರೆ ಬಹುಷಃ ದ್ವಿ ಪಕ್ಷೀಯ ಒಪ್ಪಂದದ ಫಲಶ್ರುತಿ ಈಗಿದ್ದಂತೆ ಖಂಡಿತಾ ಇದ್ದಿರುತ್ತಿರಲಿಲ್ಲ. ತನ್ನ ಸಂಪುಟ ಸಹುದ್ಯೋಗಿಗಳ ದೊಂಡೆಯನ್ನ ಒತ್ತಿಡುವಲ್ಲಿ ಯಶಸ್ವಿಯಾಗಿರುವ ಮಾನ್ಯ ಪ್ರಧಾನಿಗಳು ಇಲ್ಲಿಯೂ ಅದೆ ತಂತ್ರವನ್ನ ಅನುಸರಿಸಿ ಅವುಗಳೆಲ್ಲದರ ಬಾಯಿ ಮುಚ್ಚಿಸಿದ್ದಾರೆ ಅನ್ನುವುದನ್ನ ಪ್ರತ್ಯೇಕವಾಗಿ ಹೇಳಬೇಕ? ಅವರ ನೀತಿ ನಿಲುವುಗಳಿಗೆ ವಿರೋಧ ವ್ಯಕ್ತ ಪಡಿಸುವ ಯಾರೊಬ್ಬರಿಗೂ ಉಳಿಗಾಲವಿಲ್ಲ ಅನ್ನುವುದು ಎರಡು ತಿಂಗಳ ಹಿಂದೆ ವಿನಾ ಕಾರಣ ವಜಾ ಆದ ಎಂಆರ್'ಪಿಎಲ್ ನಿರ್ದೇಶಕ ಮಂಡಳಿಯ ನಾಲ್ವರು ಸದಸ್ಯರಿಗಾದ ಗತಿ, ಬಿಎಸ್'ಎನ್'ಎಲ್ ಆಡಳಿತ ಮಂಡಳಿಯ ಆರು ಸದಸ್ಯರಿಗೆ ಒದಗಿದ ಅಧಿಕಾರ ಚ್ಯುತಿಯ ಫಲಶ್ರುತಿಯ ಅರಿವಿದ್ದಿದ್ದರೆ ಬಹುಷಃ ರಾಘವೇಂದ್ರ ಕೇವಲ ವಾದಕ್ಕೊಂದು ವಾದ ಮಾಡಲು ಎಳಸುತ್ತಿರಲಿಲ್ಲವೇನೋ.

ಕಪ್ಪು ಹಣದ ಹೂಡಿಕೆದಾರರ ಪಟ್ಟಿಯ ಬಹಿರಂಗ ಮಾಡುವ ಹಾಗೂ ಆ ಹೂಡಿಕೆಯ ಕಡೆಯ ಪೈಸೆಯನ್ನೂ ಮರಳಿ ಖಜಾನೆಗೆ ತಂದು ಕೊಡುವ ಭರವಸೆಯ ಬೂಸಿ ಬಿಡುತ್ತಲೆ ಅಧಿಕಾರಕ್ಕೆ ಬಂದ ಸರಕಾರವಲ್ಲವ ಇದು? ಮೊನ್ನೆ ಇದೆ ಸರಕಾರದ ಸಚಿವೆ ಮೀನಾಕ್ಷಿ ಲೇಖಿ ಕಾಳಧನವನ್ನ ಮರಳಿ ಮಣ್ಣಿಗೆ ಕಾನೂನಾತ್ಮಕವಾಗಿಯೆ ತರದಿರಲು, ಪಟ್ಟಿ ಬಹಿರಂಗ ಪಡಿಸದಿರಲು ಸರಕಾರದ ಅಸಹಾಯಕತೆಯನ್ನ ಪ್ರಕಟಿಸಲು ಪದಗಳಿಗಾಗಿ ತಡಕಾಡುತ್ತಾ 'ಬ್ಬೆಬ್ಬೆಬ್ಬೆ' ಗುಡುತ್ತಿದ್ದರೆ, ವಕೀಲ ಹಾಗೂ ವಿದೇಶಿ ನೀತಿ ನಿರೂಪಣಾ ತಜ್ಞ ಆರ್ಯಮಾನ್ ಸುಂದರಂ ನೇರ ಸಂದರ್ಶನದಲ್ಲಿ ಅವರ ಮುಖದ ನೀರಿಳಿಸುತ್ತಿದ್ದರು. ಹಿಂದೆಲ್ಲ ಟಿವಿ ಶೋಗಳಲ್ಲಿ ಗಂಟಲು ಹರಕೊಂಡು ಈ ಬಗ್ಗೆ ಒಂದೆ ಉಸುರಿನಲ್ಲಿ ಕಿರುಚುತ್ತಿದ್ದ ಈ ಮಹಿಳಾ ಸಚಿವರಿಗೆ ಪ್ರಧಾನಿ ಹಾಕಿದ ಮೂಗುದಾರದ ಪ್ರಭಾವ ಅಲ್ಲಿ ಎದ್ದು ಕಾಣುತ್ತಿತ್ತು.

ನಾನು ಮತದಾರನಾಗಿರುವ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಸದ್ಯ ಕೇಂದ್ರದಲ್ಲಿ ಗೊಬ್ಬರದ ಮಂತ್ರಿಯಾಗಿರುವ ಘನಂದಾರಿ ನಾಯಕರೊಬ್ಬರು ತಮ್ಮ ಎದುರಾಳಿಯನ್ನ ವಿರೋಧಿಸಿ ಪ್ರಚಾರ ಮಾಡುವಾಗ, ನಿ'ರಾಧಾರ' ಕಾರ್ಡನ್ನ ಅಧಿಕಾರಕ್ಕೆ ಬಂದ ಕೂಡಲೆ ರದ್ದು ಪಡಿಸಿಯೆ ತೀರುವುದಾಗಿ ಅಬ್ಬರಿಸಿ ಬೊಬ್ಬರಿಯುತ್ತಾ ಗೆದ್ದು ಬಂದಿದ್ದರು. ಈಗ ಅದೆ ಆಧಾರವನ್ನ ಸಬ್ಸಿಡಿ ಯೋಜನೆಗಳೊಂದಿಗೆ ಥಳಕು ಹಾಕಿ ನಿಧಾನವಾಗಿ ಎಲ್ಲಾ ಸಬ್ಸಿಡಿಗಳಿಗೆ ಕೊಕ್ಕೆ ಹಾಕಿ ಸಿರಿವಂತ ಉದ್ಯಮಿಗಳ ಜೋಳಿಗೆಗೆ ಇಡಿ ದೇಶದ ಶ್ರೀಸಾಮಾನ್ಯ ಗ್ರಾಹಕರ ಹೊಟ್ಟೆ ಹಾಗೂ ಹಣೆ ಬರಹವನ್ನು ಹಾಕಲು ಕಾತರರಾಗಿರುವ ಮಾನ್ಯ ಪ್ರಧಾನಿಗಳ ಗೋಮುಖ ವ್ಯಾಘ್ರತೆಯ ಮುಂದೆ ಇವರ ಪುಂಗಿ ಬಂದ್ ಆಗಿದೆ!

ಜನಾರ್ಧನ ಪೂಜಾರಿಯವರ 'ಸಾಲಮೇಳ'ದ ಆಶಯಕ್ಕೂ 'ಜನಧನ' ಯೋಜನೆಯ ಆಶಯಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಅವರಿವರು ಹೇಳಿದ್ದಕ್ಕೆ ಹಿತ್ತಾಳೆ ಕಿವಿಯಾಗದೆ ಗೋಪಿನಾಥರು ಸ್ವಲ್ಪ ತಮ್ಮ ತಲೆಯನ್ನೂ ಸಹ ಓಡಿಸಿ ತರ್ಕಬದ್ಧವಾಗಿ ಚಿಂತಿಸಿದ್ದರೆ ದೇಶದ ಚಿನ್ನ ಅಡವಿಟ್ಟು ವಿಶ್ವಬ್ಯಾಂಕ್ ಹಾಗೂ ಯುರೋಪಿಯನ್ ಒಕ್ಕೂಟದಿಂದ ಚಂದ್ರಶೇಖರ್ ಸರಕಾರ 'ಓಡಿ' ಹೊತ್ತು ತರುವುದಕ್ಕೂ, ಸಾಲಮೇಳಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಅವರಿಗೆ ಸ್ಪಷ್ಟವಾಗುತ್ತಿತ್ತು. ಬೋಪೋರ್ಸ್ ಹಗರಣ, ಆಗ ಅಧಿಕಾರದಲ್ಲಿದ್ದ ರಾಜಕಾರಣಿಗಳ ಕಪ್ಪು ಹಣ ಮಾಡುವ ಕಡು ದಾಹ ಹಾಗೂ ನಮ್ಮ ವ್ಯವಸ್ಥೆಗೆ ಯಶಸ್ವಿಯಾಗಿ ಭ್ರಷ್ಟ ರಾಜಕಾರಣಿಗಳು ಕೊರೆದ ಸುರಂಗ ಇದಕ್ಕೆ ಕಾರಣವಾಗಿತ್ತೆ ಹೊರತು ಕೊಟ್ಟ ಸಾಲ ಪೂರ್ತಿ ಮರು ವಸೂಲಾಗದ ಕಾರಣಕ್ಕೆ ದೊಡ್ಡ ಬ್ಯಾಂಕ್'ಗಳೊಂದಿಗೆ ವಿಲೀನವಾಗಿ ಮತ್ತೆ ಚಿಗಿತುಕೊಂಡ ದಕ್ಷಿಣ ಭಾರತ ಮೂಲದ ಮೂರು ಬ್ಯಾಂಕುಗಳಿಗಾದ ಕಿಂಚಿತ್ ನಷ್ಟ ಇದಕ್ಕೆ ಕಾರಣವಲ್ಲ ಎನ್ನುವುದು ಅವರ ಮಾಹಿತಿಗೆ. ಇನ್ನು ಸಾಲಮೇಳದಿಂದ ಮಾತ್ರ ದೇಶ ಹತ್ತು ವರ್ಷ ಪ್ರಗತಿಯ ಹಾದಿಯಲ್ಲಿ ಹಿಂದೆ ಸರಿದಿತ್ತು ಅನ್ನುವುದು ಹಾಸ್ಯಾಸ್ಪದ ವಾದ. ಸಾಲ ಮೇಳದಿಂದ ಹಣಕಾಸಿನ ವಿಷಯದಲ್ಲಿ ಕೆಲವು ಕೋಟಿ ನಷ್ಟವಾಗಿದ್ದರೂ ದೇಶದ ಶ್ರೀಸಾಮಾನ್ಯ ಪ್ರಜ್ಞಾವಂತನಾದ. ಆದ ನಷ್ಟದ ಬಾಬ್ತು ಈಗೆಲ್ಲ ಛದ್ಮವೇಷ ತೊಟ್ಟ ನಾಯಕರು ಬೀದಿ ಗುಡಿಸಿದ್ದನ್ನ ಪ್ರಚಾರ ಮಾಡಲಿಕ್ಕಂತ ಆಳುವ ಸರಕಾರಗಳು ಅವರಪ್ಪನ ಮನೆಯ ಸಂಪಾದನೆಯಂತೆ ಸುರಿಯುವ ತೆರಿಗೆದಾರರ ಸುಡಿಮೆಯಿಂದ ಹುಟ್ಟಿದ ಜಾಹಿರಾ....ಥೂ ದರಕ್ಕಿಂತ ಅತ್ಯಲ್ಪ ಅನ್ನೋದು ಗೋಪಿನಾಥರ ಗಮನಕ್ಕೆ.

ಉತ್ಪಾದನಾ ಕ್ಷೇತ್ರದಲ್ಲಿ ನಾವು ಹಿಂದಿರೋದು ನಿಜ, ಆದರೆ ಅದು ಆಂತರಿಕವಾಗಲ್ಲ. ಅಮೇರಿಕಾದ ನೆಲದಲ್ಲೂ ನಮ್ಮ ಸರಕುಗಳ ಉತ್ಪಾದನೆಗೆ ವೇದಿಕೆ ಸಿದ್ಧವಾದರೆ ಅಲ್ಲಿನ ಅಗತ್ಯಗಳ ಗುಣಮಟ್ಟದ ಸರಕು ಸರಂಜಾಮುಗಳನ್ನ ಉತ್ಪಾದಿಸಿ ಅಲ್ಲಿನ ಮಾರುಕಟ್ಟೆಗಳಿಗೆ ಪೂರೈಸುವುದಕ್ಕೆ ಹೆಚ್ಚಿನ ಕಷ್ಟವೇನೂ ನಮ್ಮ ಉತ್ಪಾದಕರಿಗಾಗಲಾರದು. ಆದರೆ ನಮಗೆ ಮೊದಲು ಸಿಗ ಬೇಕಾಗೋದು ಅಲ್ಲಿನ ನೆಲದಲ್ಲಿ ಉತ್ಪಾದನೆಗಾಗಿನ ಕೊಡು ಕೊಳ್ಳುವಿಕೆಯ ಮುಕ್ತ ಅನುಮತಿ ಮಾತ್ರ.

ಪ್ರಕಾಶ್ ಕೊನೆಯದಾಗಿ ಇಲ್ಲಿ ರಾಜಕೀಯ ಮಾಡುವ ಮಂದಿಯಲ್ಲಿ ಹಿತವರನ್ನ ಹುಡುಕ ಹೊರಡುವುದೆ ಪರಮ ಮೂರ್ಖತನ. ಕೊಟ್ಟ ಮಾತಿಗೆ ತಪ್ಪುವುದರಲ್ಲಿ ಅದ್ವಿತೀಯರಾದ, ತಮ್ಮ ಆರ್ಥಿಕ ಹಾಗೂ ವಯಕ್ತಿಕ ಹಿತಾಸಕ್ತಿಗಳ ಪ್ರಶ್ನೆ ಉದ್ಭವಿಸಿದಾಗ ಪಕ್ಷಾತೀತವಾಗಿ ಒಂದಾಗಿ ಏಕರಾಗದಲ್ಲಿ ಹಾಡುವ ಈ ರಾಜಕಾರಣಿಗಳನ್ನ ಸದಾ ಎಚ್ಚರದ ಕಣ್ಣಿಂದ ಗಮನಿಸಿ ಅವರ ತಪ್ಪುಗಳನ್ನ ಹೆಕ್ಕಿ ತೋರಿಸಿ ಶ್ರೀಸಾಮಾನ್ಯರನ್ನ ಸಾವಧಾನಿಸುವ ಮಾಹಿತಿ ಯಾವುದೆ ಸಿಕ್ಕರೂ ನಮ್ಮ ನಿಮ್ಮಂತವರು ಅದನ್ನ ಆದಷ್ಟು ಹರಡಿ ಜನ ಜಾಗೃತಿ ಮೂಡಿಸಿಕೊಳ್ಳಬೇಕೆ ವಿನಃ ಕುರುಡಾಗಿ ಯಾರೋ ಮೋಡಿಯ ಮಾತನ್ನ ಆಡುವ ಮುಖವಾಡದ ರಾಜಕಾರಣಿಯ ಬಣ್ಣದ ಮಾತಿಗೆ ತನ್ಮಯರಾಗಿ ತಲೆಯಾಡಿಸುವುದಲ್ಲ. ಹೀಗಾದಾಗ ಮಾತ್ರ ಸ್ವಲ್ಪ ನಮ್ಮ ನಿಮ್ಮ ಭವಿಷ್ಯ ಸುಧಾರಿಸಿತೇನೋ.

ನೀರ ಮೇಲೆ ಅವಳ ಹೆಜ್ಜೆ....





( ಭಾಗ - ೩.)

ಶಿವಮೊಗ್ಗದಲ್ಲವತ್ತು ವಿಪರೀತ ಸೆಕೆ. ಜನವರಿ ತಿಂಗಳ ಕೊನೆಯ ವಾರ ಆರಂಭವಾಗಲಿಕ್ಕೆ ಇನ್ನೊಂದು ಇರುಳು ಮಾತ್ರ ಬಾಕಿ ಉಳಿದಿತ್ತು. ರಾತ್ರಿ ಅದೆಷ್ಟು ಚಳಿ ಕೊರೆಯುತ್ತದೋ ಅದನ್ನ ಮೀರಿಸುವಂತೆ ಹಗಲಲ್ಲಿ ಸೂರ್ಯ ಕ್ರೂರವಾಗಿ ಸುಡುತ್ತಿದ್ದ. ಕಳೆದ ಶತಮಾನದ ಕಟ್ಟ ಕಡೆಯ ವರ್ಷ ಆರಂಭವಾಗಿ ಕೇವಲ ಇಪ್ಪತ್ತಮೂರು ದಿನ ಮಾತ್ರ ಕಳೆದಿತ್ತು. ಇವನಿಗೆ ಹೊಸ ಅವಕಾಶದ ಬಾಗಿಲನ್ನ ತಟ್ಟುವ ಗಟ್ಟಿ ನಿರ್ಧಾರ ತೆಗೆದು ಕೊಳ್ಳಲಿಕ್ಕೆ ಒದಗಿ ಬಂದದ್ದು ಅವೆ ಇಪ್ಪತ್ತಮೂರು ದಿನಗಳಲ್ಲಿ ಮನದೊಳಗೆ ಎದ್ದು ಕಾಡಿಸಿದ ಅವನದೆ ಆಂತರಿಕ ತುಮುಲಗಳು. ಊರು ಬಿಟ್ಟು ತೊಲಗುವುದು ಅಂತ ಆತ ಕಷ್ಟದಲ್ಲಿ ನಿರ್ಧರಿಸಿದ್ದ ಆದರೆ ಎಲ್ಲಿಗೆ? ಅನ್ನುವುದು ಮಾತ್ರ ಅವನಿಗೆ ಇನ್ನೂ ಸ್ಪಷ್ಟವಿರಲಿಲ್ಲ. ಚಿಕ್ಕಂದಿನಲ್ಲಿ ಊರು ಬಿಟ್ಟು ಸರ್ಕಸ್ಸಿನವರ ಜೊತೆ ಓಡಿ ಹೋದವರ, ಮನೆ ಬಿಟ್ಟು ಜಾತ್ರೆಗೆ ಬಂದು ಟೆಂಟು ಹಾಕಿರುತ್ತಿದ್ದ ನಾಟಕದ ಕಂಪನಿಯವರ ಜೊತೆ ಪರಾರಿಯಾಗಿದ್ದವರ, ಹೆತ್ತವರ ಮೇಲೆ ಮುನಿಸಿಕೊಂಡು ಕಲ್ಲು ಲಾರಿ ಹತ್ತಿ ಮಹಾನಗರಕ್ಕೆ ಹೋಗಿ ಅಲ್ಲಿ ಹೋಟೆಲಿನ ಲೋಟ ತೊಳೆದು ಓದಿ ಮುಂದೆ ಬಂದು ಈಗ ಊರಿಗೆ ಮರಳಿ ಮೆರೆಯುತ್ತಿರುವವರ ರಂಗು ರಂಗಿನ ಕಥೆಗಳನ್ನ ಹಿರಿಯರ ಬಾಯಿಯಲ್ಲಿ ಕೇಳಿ ಅವ ಬಾಯಿ ಬಾಯಿ ಬಿಟ್ಟಿದ್ದ.

ಈ ಮಾತುಗಳನ್ನೆಲ್ಲ ಆಲಿಸುತ್ತಿದ್ದಾಗ ಅವನೆದೆಯಲ್ಲಿ ರೂಪುಗೊಳ್ಳುತ್ತಿದ್ದ ತರ್ಕದ ಪ್ರಕಾರ ಮಹಾನಗರಗಳಲ್ಲಿ ಸುಖ ಸಮೃದ್ಧಿ ತುಂಬಿ ತುಳುಕುತ್ತಿದೆ. ಇಲ್ಲಿನವರ್ಯಾರಾದರೂ ಹೀಗೆ ಹೇಳದೆ ಕೇಳದೆ ಓಡಿ ಬಂದು ತಮ್ಮ ಊರನ್ನ ಉದ್ಧಾರ ಮಾಡಲಿ(?) ಅಂತಾನೆ ಅಲ್ಲಿನವರು ಹಾರ ತುರಾಯಿ ಹಿಡಿದು ಹಾಗೆ ಅಲ್ಲಿ ಬಂದು ಇಳಿಯುವ ಪುಣ್ಯಾತ್ಮರನ್ನ ಸದಾ ಕಾದುಕೊಂಡೆ ಇರುತ್ತಾರೆ! ಆದರೆ ಬುದ್ದಿ ಸ್ವಲ್ಪ ಸ್ವಲ್ಪವೆ ಬಲಿಯುತ್ತಾ ಹೋದ ಹಾಗೆ ಈ ತರ್ಕಕ್ಕೆ ಅಷ್ಟೇನೂ ಬುಡ ಭದ್ರವಿಲ್ಲ ಎನ್ನುವುದು ನಿಧಾನವಾಗಿ ಆತನ ಅರಿವಿಗೆ ಬರತೊಡಗಿತು.

ಅವನಿದ್ದ ಊರಿಗೆ, ಊರಿನ ಮಂದಿಗೆ ಅದೇಕೋ ಬೆಂಗಳೂರಿಗಿಂತ ಬೊಂಬಾಯಿಯ ಸೆಳೆತವೆ ಹೆಚ್ಚು. ವಯಸ್ಸಿಗೆ ಬಂದು ಮೀಸೆ ಚಿಗುರಿದ ಕುದಿ ರಕ್ತದ ಅವನೂರಿನ ತರುಣರು ಮಾತೆತ್ತಿದರೆ ಸಾಕು ಬೊಂಬಾಯಿಗೆ ಓಡಿ ಹೋಗುತ್ತಿದ್ದರು! ಅವರು ವಾಸ್ತವದಲ್ಲಿ ಅದ್ಯಾವುದೋ ಗೂಡ್ಸ್ ಲಾರಿಯಲ್ಲಿ ಡ್ರೈವರಣ್ಣಂದಿರನ್ನ ಕಾಡಿ ಬೇಡಿ ಪರದಾಡಿಕೊಂಡು ಬರಿಗಾಲಿನಲ್ಲಿಯೇ ಅಲ್ಲಿಗೆ ಹೋಗಿ ಸೇರಿ ಹೈರಾಣಾಗಿರುತ್ತಿದ್ದರೂ ಸಹ, ಅದ್ಯಾಕೋ ಊರಿನ ಜನ ಮಾತ್ರ ಮುಲಾಜಿಲ್ಲದೆ ಅಂತವರನ್ನ 'ಓಡಿ' ಹೋದವರು ಅಂತಲೆ ಕರೆಯುತ್ತಿದ್ದದ್ದು ಏಕೆ? ಅಂತ ಅವನಿಗೆ ಕೊನೆಗೂ ಅರ್ಥವಾಗಲೆ ಇಲ್ಲ!



ಹೀಗೆ ಊರು ಬಿಟ್ಟು ಓಡಿ ಹೋದ ಹೈದರು ಅಲ್ಲಿ ಅದೇನನ್ನು ಮಾಡುತ್ತಿದ್ದರೋ, ಅದ್ಯಾವ ಗಣಿಯನ್ನ ಆಳಕ್ಕೆ ಅಗೆದು ಸಿರಿಯನ್ನ ಮೇಲೆ ಹೊತ್ತು ತರುತ್ತಿದ್ದರೋ ಏನೋ? ವರ್ಷಕ್ಕೊ ಎರಡು ವರ್ಷಕ್ಕೋ ಒಂದು ಸಾರಿ ಜಗಮಗಿಸುವ ಅಂಗಿ ಹಾಕಿ ಕೊಂಡು, ಮೈ ತುಂಬ ಸೆಂಟು ಸುರಿದು ಕೊಂಡು, ಮೂಗಿನ ಮೇಲೊಂದು ಕೂಲಿಂಗ್ ಗ್ಲಾಸ್ ಏರಿಸಿಕೊಂಡು, ಕೈಗೊಂದು ಬಂಗಾರದ ಬಣ್ಣದ ವಾಚು ಕಟ್ಟಿಕೊಂಡು ಅದೂವರೆಗೆ ನಿರರ್ಗಳವಾಗಿ ಮಾತನಾಡುತ್ತಿದ್ದ ತಮ್ಮ ಮಾತೃಭಾಷೆಯನ್ನ ಸರಾಗವಾಗಿ ಮಾತನಾಡಲಿಕ್ಕೂ ಪರದಾಡುತ್ತಾ(?), ಸಾಲದ್ದಕ್ಕೆ ಈಗ ಮಧ್ಯೆ ಮಧ್ಯೆ ಧಾರಾಳ ಹಿಂದಿ ಪದಗಳನ್ನ ಅದರೊಂದಿಗೆ ಬೆರೆಸಿ ಎದುರು ಸಿಕ್ಕವರನ್ನ ವಿಚಾರಿಸಿಕೊಳ್ಳುತ್ತಾ ಎಲ್ಲರನ್ನೂ ದಂಗು ಬಡಿಸುತ್ತಿದ್ದರು.


ಹೀಗೆ ಕಂಡವರ ಹೊಟ್ಟೆಯನ್ನ ಉರಿಸುವಂತೆ ಎರಡು ಮೂರು ವಾರ ಅಂಗೈ ಅಗಲದ ಊರಿನಲ್ಲಿ ಮೆರೆದಾಡಿ, ಮುರಿದು ಬೀಳುವಷ್ಟು ಮುದಿಯಾಗಿರುತ್ತಿದ್ದ ತಮ್ಮ ಮನೆಯನ್ನ ಚೂರು ಪಾರು ರಿಪೇರಿ ಮಾಡಿಸಿ, ಅದಕ್ಕಿಷ್ಟು ಸುಣ್ಣ ಬಣ್ಣ ಹೊಡೆಸಿ ಹೆತ್ತವರ ಕೈಗೆ ಒಂದಷ್ಟು ನೋಟಿನ ಪುಡಿಕೆ ತುರುಕಿ ಮತ್ತೆ ಬೊಂಬಾಯಿಗೆ ಪರಾರಿ ಆಗುತ್ತಿದ್ದವರು ಮತ್ತೆ ತಮ್ಮ ಡ್ಯಾಗರ್ ಕಟ್ ಮೀಸೆಯ ಅಲಂಕಾರದ ಮುಖಾರವಿಂದವನ್ನ ತೋರಿಸುತ್ತಾ ಭುಜ ಹಾರಿಸುತ್ತಾ ಮಾತನಾಡುವ ತಮ್ಮ 'ಬೊಂಬಾಯಿ ಸ್ಟೈಲ್'ನಿಂದ ಇಲ್ಲಿನ ಹೆಣ್ಣು ಹೆತ್ತವರ ಕಣ್ಮಣಿಗಳಾಗುವಷ್ಟರಲ್ಲಿ ಇನ್ನೆರಡು ವರ್ಷ ನೋಡು ನೋಡುತ್ತಲೆ ಜಾರಿ ಹೋಗಿರುತ್ತಿತ್ತು!


ಅದರೆ ಅವರ ಯಶಸ್ಸಿನ ಏಣಿ ಇವ ಆಗೆಲ್ಲಾ ಅಂದು ಕೊಂಡಷ್ಟು ನೇರವಾಗೇನೂ ಇರುತ್ತಿರಲಿಲ್ಲ ಅನ್ನುವುದು ಸ್ವತಃ ಇವನ ಅರಿವಿಗೆ ಬರುವುದಕ್ಕೆ ಹೆಚ್ಚು ಕಾಲವೇನೂ ಬೇಕಾಗಿರಲಿಲ್ಲ. ಹಾಗೆ ಹೋಗಿ ಅಲ್ಲಿ ಕಾಸು ಮಾಡುವ ಕಸುಬನ್ನ ಹುಡುಕಿಕೊಳ್ಳುತ್ತಿದ್ದ ಕೆಲವರು ಬಾಳಿನಲ್ಲಿ ಮುಂಬಡ್ತಿ ಎನ್ನುವಂತೆ ಬೊಂಬಾಯಿಯಿಂದ ಏಕಾಏಕಿ ದುಬಾಯಿಗೆ ಹಾರುತ್ತಿದ್ದರು. ಅವರ ಈ ಉನ್ನತಿಯ ವಿಷಯ ಅಲ್ಲಿಂದ ವಿದೇಶಿ ಮೊಹರು ಹೊತ್ತ ದೊಡ್ಡ ಲಕೋಟೆಯೊಂದರಲ್ಲಿ ಅಡಗಿರುತ್ತಿದ್ದ ಅವರ ಕೈ ಬರಹದ ಕಾಗದ ಓದಿ ತಿಳಿದುಕೊಂಡ ಅವನ ಊರು ಮನೆಯವರು ಆಶ್ಚರ್ಯ ಚಕಿತರಾಗಿ, ಅವನ ಮನೆಯವರ ಮೇಲೆ ಅದೇನೆ ಹೊಟ್ಟೆಕಿಚ್ಚು ಹುಟ್ಟಿ ಅಸೂಯೆ ಮೂಗಿನ ಮಟ್ಟಕ್ಕೆ ಬಂದು ಮುಳುಗಿಸುತ್ತಿದ್ದರೂ ಸಹ ಅದನ್ನೊಂದನ್ನೂ ಹೊರಗೆ ಮಾತ್ರ ಕಿಂಚಿತ್ತೂ ತೋರಿಸಿಕೊಳ್ಳದೆ ದೇಶಾವರಿ ನಗೆ ನಗುತ್ತಾ ಅವರ ಭಾಗ್ಯವನ್ನ ಕೇಳುವವರಿಗೆ ಬೇಸರ ಬರುವಷ್ಟು ಕೊಂಡಾಡುತ್ತಿದ್ದರು!


ಆದರೆ ಎಲ್ಲರ ಕಥೆಯೂ ಹೀಗೆನೆ ಸುಖಾಂತ್ಯವಾಗುತ್ತದೆ ಅನ್ನುವ ಯಾವ ಭರವಸೆಯೂ ಇರಲಿಲ್ಲ. ಬೊಂಬಾಯಿ ಮಾರ್ಗವಾಗಿ ದುಬಾಯಿ ಸೇರಿದ ಅನೇಕರು ಐದಾರು ವರ್ಷ ಅಲ್ಲಿಯೆ ಗಾಣದೆತ್ತಿನಂತೆ ದುಡಿದು, ತಕ್ಕಮಟ್ಟಿಗೆ ದುಡ್ಡು ದುಗ್ಗಾಣಿ ಮಾಡಿಕೊಂಡು ಅಲ್ಲಿಂದ ಮರಳಿ ಬಂದವರೆ ಒಂದು ಮಜಭೂತಾದ ಮನೆ ಕಟ್ಟಿಸಿ '....ನಿಲಯ' '....ಮಂಜಿಲ್' ಇಲ್ಲವೆ '....ವಿಲ್ಲಾ' ಎನ್ನುವ ಊರಿನ ಗಮಾರರಿಗೆ ಚೂರೂ ಅರ್ಥವಾಗದ ಚಿತ್ರ ವಿಚಿತ್ರ ಹೆಸರನ್ನ ಅವುಗಳಿಗೆ ಇಟ್ಟು, ಬರಿ ನಡುಗೆಯಲ್ಲಿ ಕ್ರಮಿಸಿದರೂ ಹತ್ತು ನಿಮಿಷದಲ್ಲಿ ಅಳೆದು ಮುಗಿಸಬಹುದಾದ ತಮ್ಮ ಕುಗ್ರಾಮದಲ್ಲೂ ಆ ಕಟ್ಟಿಸಿ ಮೆರೆಸುವ ಮನೆಯ ಮುಂದೆ ನಿಲ್ಲಿಸಿ ಡೌಲು ಹೊಡೆಯಲು ತಮ್ಮದೆ ಆದ ಒಂದು ಪುಟ್ಟ ಸೆಕೆಂಡ್ ಹ್ಯಾಂಡ್ ಕಾರನ್ನ ಖರೀದಿಸಿಟ್ಟು, ಊರೊಳಗೆ ಅದೂ ಇದೂ ವ್ಯವಹಾರಗಳಲ್ಲಿ ಅಲ್ಲಿಂದ ಗಳಿಸಿ ತಂದದ್ದನ್ನ ಸುರಿದು ಮಿಕ್ಕುಳಿದ ಬಾಳಿನ ನಾಳೆಗಳನ್ನ ತಕ್ಕ ಮಟ್ಟಿಗಾದರೂ ಸುಖ ಸಮೃದ್ಧಿಯಲ್ಲಿಯೆ ಕಳೆಯುತ್ತಿದ್ದರು.


ಆದರೆ ಇನ್ನೂ ಕೆಲವರು ಅವರಷ್ಟು ಪಡೆದು ಬಂದಿರುತ್ತಿರಲಿಲ್ಲ. ಬೊಂಬಾಯಿಯಲ್ಲಿ ದುಡಿದು ದಣಿದು ನಾಲ್ಕು ಕಾಸನ್ನ ಉಳಿಸಿ ಕೂಡಿಟ್ಟು ಕೊಳ್ಳಲಾಗದಂತೆ ಅಗ್ಗದ ಚಿಲ್ಲರೆ ಶೋಕಿಗಳಿಗೆ ಬಿದ್ದು ಹಾಳಾಗಿರುತ್ತಿದ್ದ ಇವರು. ಮತ್ತೆ ಹೋದ ಹಾಗೆಯೆ ಮರಳಿ ಮಣ್ಣಿಗೆ ಬರಿಗೈಯಾಗಿಯೆ ಬಂದು ಸೇರುತ್ತಿದ್ದರು. ಹೋಗುವಾಗ ಓಡಿ ಹೋಗಿದ್ದವರು ಮರಳಿ ಬರುವಾಗ ಮಾತ್ರ ಅಸಹಾಯಕರಂತೆ ಕಾಲೆಳೆದುಕೊಂಡು ನಡೆದು ಕೊಂಡೆ ಬಂದಿರುತ್ತಿದ್ದರು!.

ಇಂತವರಲ್ಲೂ ಎರಡು ವಿಧದ ಮಂದಿ ಇರುವುದನ್ನ ಅವನು ಬಾಲ್ಯದುದ್ದ ಕಂಡಿದ್ದ. ಮೊದಲನೆ ವರ್ಗದವರು ಅಲ್ಲಿಗೆ ತಮ್ಮ ಪ್ರಯತ್ನವನ್ನ ಕೊನೆಗೂ ಬಿಟ್ಟು ಕೈ ಚೆಲ್ಲಿ ಬರುವಾಗ ಕೊಂಡು ತಂದಿದ್ದ ಪುಡಿಗಾಸು ಕರಗುವವರೆಗೆ ಸಿಗರೇಟನ್ನೆ ಸೇದುತ್ತಾ, ವಿಲಾಯತಿ ಮದ್ಯವನ್ನೆ ಗುಟುಕರಿಸುತ್ತಾ ಊರಿನ ಕಿಂಚಿತ್ ಕೆಲಸಕ್ಕೂ ಮೈ ಬಗ್ಗದೆ ಸೋಮಾರಿಗಳಾಗಿ ಓಡಾಡಿ ಕೊಂಡಿರುತ್ತಿದ್ದವರಾಗಿರುತ್ತಿದ್ದರು. ಅವರ ಪಾಲಿಗೆ ಬೊಂಬಾಯಿಯಲ್ಲಿದ್ದ ತಾವು ಚಿಲ್ಲರೆ ಪಲ್ಲರೆ ಕೆಲಸಗಳನ್ನ ಮಾಡುವುದೆಂದರೆ ಪರಮ ಅವಮಾನ.


ಆದರೆ ಕೊನೆ ಕೊನೆಗೆ ತೂತು ಕಿಸೆಯಲ್ಲಿದ್ದ ಕೊನೆಯ ದಮ್ಮಡಿಯೂ ಖಾಲಿಯಾಗಿ. ಕೈ ಬರಿದಾದ ನಂತರ ಅಂತವರನ್ನ ಅಡ್ಡ ಲುಂಗಿ ಉಟ್ಟು ಮೂರು ಮಾರ್ಕಿನ ಮೋಟು ಬೀಡಿಯನ್ನೆ ಬರಗೆಟ್ಟವರಂತೆ ಅಡಿಗಡಿಗೆ ಸೇಯುತ್ತಾ, ಕತ್ತಲಾದರೆ ಸಾಕು ಸಿಕ್ಕ ಕಂಟ್ರಿ ಸಾರಾಯಿ ಪಾಕೇಟಿನಲ್ಲಿಯೆ ಸುಖ ಕಾಣುತ್ತಾ, ಬಸ್'ಸ್ಟ್ಯಾಂಡಿನಲ್ಲಿ ಪೋಲಿ ತಿರುಗುತ್ತಾ, ತಮ್ಮ ಬೊಂಬಾಯಿ ಬಡಾಯಿ ಹೊಡೆಯುತ್ತಾ ಕಾಲ ಹಾಕುತ್ತಿದ್ದದ್ದನ್ನ ಕಾಣಬಹುದಾಗಿತ್ತು. ಊರಿನಲ್ಲಿ ಮೈ ಬಗ್ಗಿಸಿ ದುಡಿಯದೆ ಕೂಳಿಗೆ ಮಾತ್ರ ದಂಡವಾದ ಅಂತವರ ಬಗ್ಗೆ ಯಾರೊಬ್ಬರಿಗೂ ಒಂಚೂರೂ ಆಸಕ್ತಿ ಇರುತ್ತಿರಲಿಲ್ಲ. ಬೆನ್ನ ಹಿಂದಿನಿಂದ ಅವರನ್ನ ಗೇಲಿ ಮಾಡುತ್ತಾ, ಅವರ ಬೊಂಬಾಯಿ ಬಡಾಯಿಯನ್ನ ಲೇವಡಿ ಮಾಡಿ ಕಿರಿಯರಿಗೆ 'ಯಾರಂತೆ ಆಗ ಬಾರದು' ಅನ್ನುವುದಕ್ಕೆ ಓಡಾಡುವ ಉದಾಹರಣೆಗಳಾದ ಅವರನ್ನೆ ತೋರುತ್ತಾ ಇಡಿ ಊರು ಅದು ಹೇಗೋ ಅಂತವರನ್ನ ಸಹಿಸಿಕೊಂಡಿರುತ್ತಿತ್ತು.


ಅದರೆ ಎರಡನೆ ವರ್ಗದವರದ್ದು ಸ್ವಲ್ಪ ವಿಚಿತ್ರ ಕೇಸು. ಬೊಂಬಾಯಿಯಲ್ಲಿ ಒಮ್ಮೆ ಫೇಲಾಗಿದ್ದರೇನು ಮಹಾ? ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಪ್ಲಿಮೆಂಟರಿ ಕಟ್ಟುವ 'ಮರಳಿ ಯತ್ನವ ಮಾಡು' ತರಹದ ಛಲ ಹೊತ್ತ ತ್ರಿವಿಕ್ರಮನ ಗೋತ್ರದವರಿವರು. ಅಲ್ಲಿ ದುಡಿದು ಕಳೆದ ಹಣದ ದುಪ್ಪಟ್ಟನ್ನ ಮುಂದೆ ಬೆಂಗಳೂರಿನಲ್ಲಿ ಸಂಪಾದಿಸಿ ತೋರಿಸುತ್ತೇವೆ ಎಂದು ಮನೆಯವರ ಮುಂದೆ ಬೂಸಿ ಹೊಡೆದು ಶತಾಯಗತಾಯ ಅವರನ್ನ ನಂಬಿಸಿ. ಅಮ್ಮ-ಅಕ್ಕ-ತಂಗಿ-ಹೆಂಡಿರ ಮೈಮೇಲೆ ಕಷ್ಟದಲ್ಲಿ ಉಳಿದಿದ್ದ ಚೂರು ಪಾರು ಚಿನ್ನವನ್ನ ಮಾರವಾಡಿಯ ತಿಜೋರಿಯಲ್ಲಿ ಬಡ್ಡಿ ಚಕ್ರಬಡ್ದಿಗಳ ಸುಳಿಗೆ ಸಿಕ್ಕು ಮುಂದೆಂದೂ ಅವು ತಿರುಗಿ ಬಾರದಂತೆ ಅಡ ಇರಿಸಿ, ಅದರಲ್ಲಿ ಎತ್ತಿದ ಎಂದೆಂದಿಗೂ ಹಿಂದಿರುಗಿಸಲಾಗದ ಸಾಲವನ್ನ ಬಂಡವಾಳವಾಗಿರಿಸಿಕೊಂಡು ಮತ್ತೆ ಬೆಂಗಳೂರಿನಲ್ಲಿಯೋ, ಇಲ್ಲವೆ ಇನ್ನೊಂದು ಊರಿನಲ್ಲಿಯೋ ಪುನಃ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದವರು. ಇಂತವರು ಮುಂದೆ ಅಲ್ಲಿಯೂ ಬರ್ಕತ್ತಾಗದೆ ಸರಿಯಾಗಿ ಕೈ ಸುಟ್ಟುಕೊಂಡು ಬೇರೆ ಇನ್ನೇನೂ ದಿಕ್ಕು ತೋಚದೆ ಮತ್ತೆ ಮನೆಯವನ್ನೆ ದೋಚುವ ದೂರಾಲೋಚನೆಯಿಂದ ಮರಳಿ ಊರಿಗೆ ವಕ್ಕರಿಸಿ ಮೇಲಿನ ವರ್ಗದ ತಮ್ಮ ಹಳೆಯರ ಗೆಳೆಯರ ಕೂಟವನ್ನ ಸೇರಿಕೊಳ್ಳುತ್ತಿದ್ದರು.


ಇವನ ದುರಾದೃಷ್ಟಕ್ಕೆ ಇವನ ಅಪ್ಪ ಈ ಕಡೆಯ ಸಾಲಿನ ವ್ಯಕ್ತಿಗಳಲ್ಲೊಬ್ಬನಾಗಿದ್ದ. ನೆಟ್ಟಗೆ ಬೇಸಾಯ ಮಾಡಿಕೊಂಡಿದ್ದರೆ, ಯೋಜಿಸಿ ಬೆಳೆಯನ್ನ ಬಿತ್ತುತ್ತಿದ್ದರೆ ಮನೆಯಲ್ಲಿಯೆ ಸುಖ ಸಮೃದ್ಧಿ ಕಾಣಬಹುದಾದಷ್ಟು ಜಮೀನು ಪಿತ್ರಾರ್ಜಿತವಾಗಿ ತನಗೆ ಬಂದಿದ್ದರೂ ಸಹ ಅದನ್ನೆ ಭೂ ಬ್ಯಾಂಕಿಗೆ ಅಡ ಹಾಕಿ. ಬಂದ ಹಣದಲ್ಲಿ ಬೊಂಬಾಯಿಗೆ ಹೋಗಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಭೂಪನಾತ. ಪಡೆದ ಬ್ಯಾಂಕಿನ ಸಾಲ ಮರಳಿಸುವ ನಿಯತ್ತು ಚೂರೂ ಇಲ್ಲದ ಕಾರಣಕ್ಕೆ ಮೇಲಿಂದ ಮೇಲೆ ನೋಟೀಸು ಕೊಟ್ಟು ಹೈರಾಣಾದ ಬ್ಯಾಂಕು ಈಗ ಒತ್ತೆ ಇಟ್ಟ ಕೃಷಿ ಭೂಮಿಯ ಜಪ್ತಿನ ವಿನಃ ಇನ್ಯಾವುದೆ ಮರು ವಸೂಲಾತಿಗೆ ಅನ್ಯ ಮಾರ್ಗವಿಲ್ಲ ಅನ್ನುವ ದೈನೇಸಿ ಸ್ಥಿತಿಗೆ ಬಂದು ಮುಟ್ಟಿತ್ತು. ಇದೀಗ ಬೊಂಬಾಯಿಯಲ್ಲಿ ಪಾಪರ್ ಆಗಿ ಬೆಂಗಳೂರಿನ ಹಾದಿ ಹಿಡಿದು ಅಲ್ಲೂ ಬರಿಗೈ ಆಗಿ ತನ್ನ ಕಟ್ಟಿಕೊಂಡವಳನ್ನ ಹಾಗೂ ಮಗನನ್ನ ಬಿಟ್ಟು ಹೋಗಿದ್ದ ಹೆಂಡತಿಯ ತವರು ಮನೆಯಲ್ಲಿಯೆ ಬಂಡು ನಾಚಿಕೆ ಬಿಟ್ಟು ಝಾಂಡಾ ಊರಿ ಅಲ್ಲಿಯೆ ಶಾಶ್ವತವಾಗಿ ಭಂಡತನದಿಂದ ನೆಲೆಸಿದ್ದನಾತ.


ಆದರೆ ಇವನ ಯವ್ವನ ಚಿಗುರುವ ಕಾಲಕ್ಕೆ ಊರವರ ಮನಸ್ಥಿತಿಯಲ್ಲಿ ತುಸು ಬದಲಾವಣೆಯಾಗಿತ್ತು. ಬೊಂಬಾಯಿಯ ತಳುಕಿಗಿಂತ ಬೆಂಗಳೂರಿನ ಬಳುಕು ಹೆಚ್ಚು ಆಪ್ತ ಅಂತಂದುಕೊಳ್ಳುವ ಹೊಸ ಪೀಳಿಗೆ ಕಣ್ಣುಬಿಟ್ಟಿತ್ತು ಹಾಗೂ ಇವನೂ ಅಂತವರಲ್ಲೊಬ್ಬನಾಗಿದ್ದ. ಹಾಗಂತ ಈ ಎಲ್ಲಾ ಕಿರಿಕಿರಿಯನ್ನ ಇನ್ನು ಸಹಿಸಲಾರೆ ಅನ್ನುವ ಹಂತದಲ್ಲಿ ಊರು ಬಿಡುವ ನಿರ್ಧಾರಕ್ಕೆ ಬಂದಿದ್ದ ಅವ ಏನೂ ಅಸಲಲ್ಲ. ಐವತ್ತು ರೂಪಾಯಿ ಕಿಸೆಯಲ್ಲಿದ್ದುದ್ದರಿಂದ ಊರು ಬಿಟ್ಟವ ಬೆಂಗಳೂರಿನ ದಿಕ್ಕಿಗೆ ಹೊರಟಿದ್ದ. ಒಂದುವೇಳೆ ಐವತ್ತರ ಜಾಗದಲ್ಲಿ ನೂರಿದ್ದಿದ್ದರೆ ಬಹುಷಃ ಬೊಂಬಾಯಿಯ ದಾರಿ ಹಿಡಿಯುತ್ತಿದ್ದ ಸಾಧ್ಯತೆಗಳೂ ಇಲ್ಲದಿರಲಿಲ್ಲ!.


ಅದರೆ ನಾಳಿನ ಭವ್ಯ ಭವಿಷ್ಯ, ಮುಂದುವರೆಸಬೇಕಾದ ಓದು, ಗಳಿಸಿಯೇ ತೀರಬೇಕಾದ ವ್ಯಕ್ತಿತ್ವದ ಹೊಸ ಛಾಪು ಹಾಗೂ ಇವೆಲ್ಲವನ್ನೂ ಮೀರಿದ ಇನ್ನೊಂದು ಆಕರ್ಷಣೆ ಅವನನ್ನ ಬೆಂಗಳೂರಿನತ್ತ ಸೂಜಿಗಲ್ಲಿನಂತೆ ಸೆಳೆದಿತ್ತು. ಹೌದು, ಇವನ ಚಿತ್ತ ದೋಚಿದ್ದವಳು ಅಲ್ಲಿದ್ದಳು. ಇವನ ಪ್ರಕಾರ ಇವನ ಬರುವಿಕೆಗಂತಲೆ ಅಶೋಕವನದ ಸೀತೆಯಂತೆ ಕಾದಿದ್ದಳು!

( ಮುಂದಿದೆ.)

17 October 2014

ಪುಸ್ತಕದೊಳಗೆ - ೨೧








"ತುಳುವರ ಮೂಲತಾನ, ಆದಿ ಅಲಡೆ"

( ಪರಂಪರೆ ಮತ್ತು ಪರಿವರ್ತನೆ.)

ಲೇಖಕರು; ಡಾ ಇಂದಿರಾ ಹೆಗ್ಗಡೆ,

ಪ್ರಕಾಶಕರು; ನವಕರ್ನಾಟಕ  ( ಮೊದಲ ಮುದ್ರಣ.)

ಪ್ರಕಟಣೆ; ೨೦೧೨.


ಕ್ರಯ; ರೂಪಾಯಿ ಮುನ್ನೂರು.




"ಆದಿ ಮೂಲತಾನ ‘ಆದಿ ಆಲಡೆ’


‘ಆದಿಶೇಷ, ಆದಿನಾಥ, ಆದಿನಾರಾಯಣ, ಆದಿ ದೇವ, ಆದಿ ದೈವ, ಆದಿ ಪುರುಷ, ಆದಿ ಬುದ್ಧ' - ಮುಂತಾದ ‘ಆದಿ’ಗಳ ಕಲ್ಪನೆಗಳನ್ನು ನಾವು ಜೈನ, ಬೌದ್ಧ, ವೈದಿಕ ಪುರಾಣಗಳಲ್ಲಿ ನೋಡುತ್ತೇವೆ. “ಆದಿ ದೈವ ರೆಕ್ಕೆಸಿರಿ, ಆದಿ ಆಲಡೆ, ಆದಿ ಮೂಲತಾನ, ಮೂಲದ ಮೈಸಂದಾಯ’ ಮುಂತಾದ ‘ಆದಿ’ ನಂಬಿಕೆಗಳು ತುಳುವರ ಜನಪದ ಸಂಸ್ಕೃತಿಯ ಭಾಗವಾಗಿದೆ.

“ವಿಶ್ವವು ಮೊದಲು ನೀರಿನಿಂದ ತುಂಬಿತ್ತು. ಸುಮಾರು 2300 ಬಿಲಿಯ ವರ್ಷಗಳ ಹಿಂದೆ ನೀರಿನಲ್ಲಿ ಜೀವ ವಿಕಾಸ ಆಯಿತು. ಜಲಜಂತುಗಳು, ಪಾಚಿ ಮುಂತಾದುವು ನೀರಿನಲ್ಲಿ ಸೃಷ್ಟಿಯಾಯಿತು. ಇಲ್ಲಿ ವಿಕಾಸವಾದ ಜೀವರೂಪವು 1000 ಬಿಲಿಯನ್ ವರ್ಷಗಳ ಕಾಲ ಉಳಿಯಿತು” ಎಂಬುದು ಜೀವಶಾಸ್ತ್ರಜ್ಞರ ಶೋಧ. ವಿಕಾಸಕ್ರಿಯೆಯಲ್ಲಿ ಜೀವಸೃಷ್ಟಿಯು ಹಲವಾರು ಹಂತಗಳನ್ನು ದಾಟಿ ಪೆತಕಾಸ್ > ಚಿಂಪಾಂಜಿ > ಎಂತ್ರಾಪಿಕ್ - ಹೀಗೆ ಮಾನವನ ಹುಟ್ಟು ಆಯಿತು. ಮುಂದೆ ಬೆಳೆದುದು ಮಾನವ ರೂಪ. ಆಗಲೂ ಮಾನವ ಹೋಮೋಜೀನಿಯಸ್ ಆಗಿ ಇದ್ದ. ‘40,000 ವರ್ಷಗಳ ಹಿಂದೆ ಮಾನವನ ವಿಕಾಸ ಆಯಿತು’ ಎನ್ನುತ್ತದೆ ಮಾನವಶಾಸ್ತ್ರ.

ಕರ್ನಾಟಕದ ಕರಾವಳಿ ಭಾಗವಾಗಿರುವ ತುಳುನಾಡಿನಲ್ಲಿ ಅನೇಕ ಆದಿಮಾನವ ನೆಲೆಗಳಿವೆ ಎಂಬುದನ್ನು ಪುರಾತತ್ವಕಾರರು ಪತ್ತೆ ಹಚ್ಚಿದ್ದಾರೆ. ಆದಿಮಾನವರು ತಮ್ಮ ಅಲೆಮಾರಿ ಜೀವನವನ್ನು ಅಂತ್ಯಗೊಳಿಸಿ ಸಾಮಾಜಿಕ ವಿಕಾಸದ ನಾಲ್ಕನೆಯ ಹಂತದ ಉತ್ತರಾರ್ಧವನ್ನು ಪ್ರವೇಶಿಸಿದಾಗ ಮಾತ್ರ ಒಂದು ಸ್ಥಳದಲ್ಲಿ ನೆಲೆಯೂರಿ ವಾಸಿಸುವುದು ಸಾಧ್ಯವಾಯಿತು. ಈ ಸಾಮಾಜಿಕ ವಿಕಾಸದ ನಾಲ್ಕನೆ ಹಂತದ ಉತ್ತರಾರ್ಧಕ್ಕೆ ‘ಭೂ ಸಾಗುವಳಿ’ ಹಂತವೆಂದು ಕರೆಯುತ್ತಾರೆ. ಈ ಹಂತದಲ್ಲಿ ಗ್ರಾಮಗಳು ಉಗಮಗೊಂಡವು. ಭೂಸಾಗುವಳಿ ಹಂತವು ಮಾನವನ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟವಾಗಿದ್ದು ಮಾನವ ಸಂಸ್ಕೃತಿಯ ದಿಕ್ಕನ್ನೇ ಬದಲಾಯಿಸಿತು ಎನ್ನಬಹುದು - ಸಮಾಜಶಾಸ್ತ್ರಜ್ಞರ ಈ ವಿಶ್ಲೇಷಣೆ ತುಳುನಾಡಿನ ಮೂಲತಾನಗಳ ಅಧ್ಯಯನದಲ್ಲಿ ಮಹತ್ವ ಪಡೆಯುತ್ತದೆ.


‘...ತುಳುನಾಡಿನಲ್ಲಿ ಭೂ ಪ್ರಕೃತಿಯೇ ಮಾನವ ಪ್ರಕೃತಿಯನ್ನು - ಸಂಸ್ಕೃತಿ ಇತಿಹಾಸ ಗಳನ್ನು ನಿರ್ಧರಿಸಿದೆ. ತಾನೊಡ್ಡಿರುವ ದುರ್ಗಮವಾದ ಮೇರೆಗಳ ಮೂಲಕ ಜನರನ್ನು ‘ಸ್ಥಾನ ಬದ್ಧತೆ'ಯಲ್ಲಿರಿಸಿ, ಅತ್ಯಂತ ಪ್ರಾಚೀನ ಸಂಪ್ರದಾಯ ವೈಶಿಷ್ಟ್ಯಗಳನ್ನೂ ಭಾಷಾ ಲಕ್ಷಣಗಳನ್ನೂ ಕಾಯ್ದಿರಿಸಿಕೊಳ್ಳಲು ಸಹಾಯಕವಾಗಿದೆ ... ಮಾನವಶಾಸ್ತ್ರದ ಹಲವಾರು ಸಿದ್ಧಾಂತಗಳು ಸ್ಥಳ ನಾಮಗಳ ಬೆಳವಣಿಗೆ ಅಥವಾ ಚರಿತ್ರೆಯಿಂದ ದೃಢೀಕರಿಸಲ್ಪಟ್ಟಿವೆ. ಉದಾಹರಣೆಗೆ ಮಾನವನು ಮೂಲತಃ ಅಲೆಮಾರಿಯಾಗಿದ್ದು, ಕ್ರಮೇಣ ತಾತ್ಪೂರ್ತಿಕ ನೆಲೆಯನ್ನು ಕಂಡುಕೊಂಡದ್ದು, ನಂತರ ವ್ಯವಸಾಯದ ಕಲೆಯನ್ನು ಕಲಿತುಕೊಂಡು, ಪ್ರಕೃತಿಯನ್ನು ತನ್ನ ಉದ್ದೇಶಕ್ಕೆ ಸ್ವಾರ್ಥಕ್ಕೆ ತಕ್ಕಂತೆ ಬಳಸಿಕೊಂಡದ್ದು, ಜೀವನಾವಶ್ಯಕ ವಸ್ತುಗಳ ಪೂರೈಕೆಯಾದ ಮೇಲೆ, ತನ್ನ ವಿರಾಮಕಾಲದಲ್ಲಿ ದೇವರು-ಧರ್ಮ-ಮಾನವ ಸಂಬಂಧ ಮುಂತಾದ ಅಮೂರ್ತ ಹಾಗೂ ತಾತ್ವಿಕ ವಿಷಯಗಳ ಮೇಲೆ ವಿಚಾರ ಮಾಡಹತ್ತಿದ್ದು; ಈಚೆಗೆ ಆ ಮೂಲಕ ಸಂಸ್ಕøತಿ-ನಾಗರಿಕತೆ-ವಿಜ್ಞಾನದ ಬೆಳವಣಿಗೆಗೆ ಹಾದಿ ಮಾಡಿಕೊಟ್ಟಿದ್ದು - ಇವೇ ಮುಂತಾದ ಕೆಲವು ಘಟನೆಗಳನ್ನು ನಾವು ಸ್ಥಳನಾಮ ವರ್ಗೀಕರಣದಲ್ಲಿ ಗುರುತಿಸಬಲ್ಲೆವು’.


ಕೋಟಿ ಚೆನ್ನಯರ ಸಂಧಿಯಲ್ಲ್ಲಿ ಮಾನವನ ವಿಕಾಸದ ಕಲ್ಪನೆ ಹೀಗಿದೆ:

``ಪ್ರಳಯ ಆದ ಮೇಲೆ ಕತ್ತಿನವರೆಗೆ ನೀರಿಗೆ ಇಳಿದ ‘ಸೂರ್ಯನರಯನ’ ದೇವರು ‘ಸುತ್ಯ’ ಇಟ್ಟು ದೇವರು ದೈವಗಳನ್ನು ನಿರ್ಮಿಸುತ್ತಾರೆ. ತನ್ನ ಎಡದಿಕ್ಕಿನಲ್ಲಿ ಬೆರ್ಮೆರ್ ಬಲದಿಕ್ಕಿನಲ್ಲಿ ಅಣ್ಣ ತಂಗಿ ಕೇಂಜವ ಹಕ್ಕಿಗಳನ್ನು ನಿರ್ಮಿಸುತ್ತಾರೆ. ಪರಿಚಾರಕ ವರ್ಗದೊಂದಿಗೆ ‘ಬೆರ್ಮೆ’ರ ಜನನವಾಗುತ್ತದೆ. ಹೀಗೆ ಸಂತಸದಲ್ಲಿ ಇರುವಾಗ ಇದುವರೆಗೆ ಕಾಯದ ಬಿಸಿಲು ಕಾದು ಕುಂಕುಮ ಪನಿಮಳೆ ಬಂದು ಪ್ರಳಯವಾಗುತ್ತದೆ. ಆಗ ‘ಸೂರ್ಯ ನರಯನ’ ದೇವರು ಪುನರಪಿ ಸೃಷ್ಟಿಕಾರ್ಯಕ್ಕೆ ತೊಡಗುತ್ತಾರೆ. ತನ್ನ ಎಡದಲ್ಲಿ, ಬೆರ್ಮೆರ ಬಲದಲ್ಲಿ ಅಣ್ಣ ತಂಗಿ ಜೊತೆ ಕೇಂಜವ ಹಕ್ಕಿಗಳನ್ನು ನಿರ್ಮಿಸುತ್ತಾರೆ. ಹಕ್ಕಿಗಳಿಗೆ ಕೂರಲು ಮೇಯಲು ತನ್ನ ಅಂಗಳದಲ್ಲಿ ಜಾಗ ನೀಡುತ್ತಾರೆ. ಅಣ್ಣ ತಂಗಿ ಹಕ್ಕಿಗಳು ನರಯನ (ಸೂರ್ಯ) ದೇವರ ಅನುಮತಿ ಪಡೆದು ಗಂಡ ಹೆಂಡಿರಾಗಿ ಎರಡು ಮೊಟ್ಟೆಗಳನ್ನು ಇಡುತ್ತವೆ. ಹೇಳಿದ ಹರಕೆಯಂತೆ ಒಂದು ಮೊಟ್ಟೆಯನ್ನು ನರಯನ ದೇವರಿಗೆ ಅರ್ಪಿಸುತ್ತಾರೆ. ನರಯನ ದೇವರು ಜಳಕಕ್ಕೆ ಹೊರಟವರು ಮೊಟ್ಟೆಯನ್ನು ತನ್ನ ತಲೆದಿಂಬಿನಡಿ ಇಡುತ್ತಾರೆ. ಆ ಮೊಟ್ಟೆಗೆ “ಅಣಿನಾಗೆ, ಮಣಿನಾಗೆ” ದೃಷ್ಟಿ ಹಾಕುತ್ತಾರೆ. ಪಾತಾಳದಲ್ಲಿ ‘ಕೊಡಿ’ (ಬಾಲ) ಊರಿ ಆಕಾಶಕ್ಕೆ ಹೆಡೆ ತೂಗುತ್ತಾ ಮೊಟ್ಟೆಗೆ ‘ಕೊಕ್ಕು’ ಹಾಕುವಾಗ ಊರಿದ ಬಾಲ ಸರಿದು ಮೊಟ್ಟೆಗೆ ಬಾಯಿಯ ಹಲ್ಲು ತಾಗಿ ಮೊಟ್ಟೆ ಒಡೆದು ‘ಬೀನ’ ಹಾರುತ್ತದೆ. ಆಕಾಶ ಗಡಿಗೆ, ಪಾತಾಳ ಗಡಿಗೆ ಬೀಳುತ್ತದೆ. ಜಂಬೂರಿ ಕುಮಾರನ (ಜಂಬೂ ದ್ವೀಪ?) ಮಡಿಲಿಗೆ ವಜ್ರ ಮಾಣಿಕ್ಯದ ‘ಮುತ್ತು ಪರೆಲ್’ ಆಗಿ ಬೀಳುತ್ತದೆ. ಆತ ಅದನ್ನು ಬಲದ ಕಿವಿಗೆ ಇಡುತ್ತಾನೆ. ಸವಾರಿಯಿಂದ ಬಂದು ಸೂರ್ಯನರಯನ ದೇವರು ಮೊಟ್ಟೆ ಎಲ್ಲಿ ಎಂದು ನೋಡುವಾಗ ‘ಜಂಬೂರಿ ಕುಮಾರನ’ ಕಿವಿಯ ನೀಲಿಯ ಹೊಳಪು ಆಕಾಶ-ಪಾತಾಳಕ್ಕೂ ಮಿಂಚುತ್ತದೆ. ಸೂರ್ಯ ನರಯಣ ನೋಡುವಾಗ ಅಲ್ಲಿಂದ ಮೊಟ್ಟೆ ಮಣ್ಣಮುದ್ದೆಯಾಗಿ ಆಕಾಶ ಗಡಿಯಿಂದ ಪಾತಾಳ ಗಡಿಗೆ ತೆಂಗಿನಕಾಯಿಯಷ್ಟು ದಪ್ಪ ಮಣ್ಣಿನ ಮುದ್ದೆ ಆಗಿ ಏಕ ಸಮುದ್ರಕ್ಕೆ ಬೀಳುತ್ತದೆ. ‘ಸಪ್ತಗಿರಿ ಚಂದವನ್ನು ಮೀರಿತು. ತೆಂಕಲಲ್ಲಿ ‘ಸೇಬಿನಾಡಾ’(?) ನದಿಯಾಯಿತು. ಬಡಗಲಲ್ಲಿ ‘ಬಡರುಸು’ ಬಯಲು ನಿರ್ಮಿಸಿದರು. ಮೂಡಲಲ್ಲಿ ಗಟ್ಟ ಪಡುವಲಲ್ಲಿ ಸಮುದ್ರ ಮಧ್ಯೆ ಮಣ್ಣಿನ ‘ಕುದುರು’ ಬೆಳೆಯಿತು. ಕುದುರಿನಲ್ಲಿ ನಾಗರು, ಬೆರ್ಮೆರು, ಹುಲ್ಲು ಪೆÇದೆ, ಒಬ್ಬ ವಿಶ್ವಕರ್ಮನನ್ನು ಹಾಗೂ ‘ಬಾಲೆ ಬ್ರಹ್ಮಚಾರಿ’ಯನ್ನೂ ನಿರ್ಮಿಸಿದರು. ವಿಶ್ವಕರ್ಮನಿಗೆ ಬೇಕಾದ ಸಲಕರಣೆ ಕೊಟ್ಟು ದೇವರ ದೇವಸ್ಥಾನ, ಬೆರ್ಮೆರ ಯಮಗುಂಡ ಕಟ್ಟಲು ಹೇಳುತ್ತಾರೆ. ಬಲ್ಲಿದನಿಗೆ ಮಹಡಿ ಮನೆ ಬಡವನಿಗೆ ಕೋಲು ಮನೆ, ಭೂತಗಳಿಗೆ ಗುಡಿಮಾಡ ಕಟ್ಟುವೆವು ಎನ್ನುತ್ತಾರೆ ವಿಶ್ವಕರ್ಮರು. ಅವರು ಕಟ್ಟಿದ ‘ಕಂಚಿ ಕಡಗಿನ’ ಅರಮನೆಯಲ್ಲಿ ಲೋಕಬಾರಿ ಅರಸು, ಅವರ ಮಗ ಏಕಸಾಲರು ಹುಟ್ಟುತ್ತಾರೆ. ಮಣ್ಣ ಪಕಲೋರಿ ಅರಮನೆಯಲ್ಲಿ ಗಿಂಡೆ ಗಿಳಿ ದೆಯ್ಯಾರು ಹುಟ್ಟುತ್ತಾರೆ.’


ಪಂಜುರ್ಲಿ ಪಾಡ್ದನದಲ್ಲಿ ಸೃಷ್ಟಿಯ ಉಗಮದ ಕಲ್ಪನೆ ಇದೆ. ಪಾಡ್ದನದ ಪ್ರಕಾರ ದೇವರ ಸೃಷ್ಟಿಯಲ್ಲಿ ಅಣ್ಣ-ತಂಗಿ ಪಂಜುರ್ಲಿ ಜನಿಸುತ್ತಾರೆ. ಅವರನ್ನು ಗಟ್ಟ ಇಳಿಯಲು ಸುಬ್ರಾಯ ಬಿಡುವುದಿಲ್ಲ. (ತುಳುನಾಡು ನಾಗಲೋಕ ಎಂಬ ನಂಬಿಕೆ ಇದೆ.) ಪಂಜುರ್ಲಿ ಜೋಡಿ ಹೊಸ ನೆಲೆಯ ಅನ್ವೇಷಕರು ಎಂಬ ಸೂಚನೆ ಇದು. ಇಳಿದ ಜೋಡಿಗಳು ದೇವರ ಸಲಹೆಯಂತೆ ಅಣ್ಣ-ತಂಗಿ ಪಂಜುರ್ಲಿ ಗಂಡ-ಹೆಂಡಿರಾಗಿ ಸೃಷ್ಟಿಕಾರ್ಯದಲ್ಲಿ ತೊಡಗುತ್ತವೆ. ಪಾಡ್ದನದ ಆರಂಭ ಹೀಗಿದೆ:

“ಓ ಹಿರಿಯ ದೇವನ (ಲೆಕ್ಕದ) ದೇವಪುರದೊಳಗೆ |
ಆಳಿಕೊಂಡು ಮೆರೆಯುತ್ತಾ ಇದ್ದಾರೆ |
ದೇವ ಕನ್ಯಾ ಕುಮಾರ |
ಆ ಕಾಲದಲ್ಲಿ ಕೇಳಬೇಕು |
ಮೂಡಲು ಮುಟ್ಟುವ ಮುಗಿಲೆಡೆಯಲ್ಲಿ ಉದಯವಾದರು|
ಬೆಳಕಿಗೆ ಸೂರ್ಯ ದೇವರು |
ಪಡುವಣ ರತ್ನಬಾನಲ್ಲಿ ಓಲಗವಾಗುತ್ತಾರೆ ಓ ಚಂದ್ರ ನಾರಾಯಿನ ದೇವರೋ |
ಉದಯಕ್ಕೆ ಸೂರ್ಯ ಕಂತಿಗೆ ಚಂದ್ರ |
ತೆಂಕಿಗೆ ಸೆಲಿಯೇಂದ್ರ |
ಬಡಗಿಗೆ ಬಾಲ್ಯನ ಕುಮಾರ |
ನಾಲ್‍ಂದ ಲೋಕೊಡು (ನಾಲ್ಕು ದಿಕ್ಕು?) ನಾಲ್ಕು ಗುಂಡದೇವರು |
ಮೂರು ಲೋಕದಲ್ಲಿ ಮೂರು ತಾನ ಭೂತಗಳು |
ಕಲ್ಲಿನಲ್ಲಿ ನಾಗ ಪುಂಚದಲ್ಲಿ ಸರ್ಪ |
ಸಾವಿರ ಕಲ್ಲಿನ ಅಸುರರು |
ದೇವರ ಕಲ್ಲಿನ ಬೆರ್ಮರು |
ಉದ್ಭವವಾದ ಕಾಲದಲ್ಲಿ |
ಪಾತಾಳದೆಡೆಯಲ್ಲಿ ಉದ್ಭವವಾದರು |
ಪಂಚ ಕೋಟಿ ನಾಗ ಪರುಶುರಾಮ |
ಮುನಿಕಾರರು ಮುನಿತನದ ಈಶ್ವರ |
ಮೇಲಕ್ಕೆ ಮೊಗವೆತ್ತಿದರೆ ಬಾನಿನಲ್ಲಿ |
‘ಜಂಬಿ’ ಎನ್ನುವ ತಾರೆ ಉದಿಸಲಿಲ್ಲ | ಕೆಳಗೆ ನೋಡೋಣವೆಂದರೆ ಭೂಮಿಯಲ್ಲಿ ಹುಲ್ಲು ಹುಟ್ಟಿ ಬಂದಿಲ್ಲ | ಆಗಂದರು ಬಾನು ಹಿಡಿಯಬೇಕು ಭೂಮಿ ತಿರುಗಿಸಬೇಕು|
ಭೂಮಿ ಹಿಡಿಯಬೇಕು ಬಾನು ತಿರುಗಿಸಬೇಕು |
ಬಲಗೈ ತಟ್ಟಿದರು ಸ್ವಾಮಿ ಬಾನು ನೇರ್ಪುಗೊಳಿಸಿದರು|
ಎಡಗೈ ತಟ್ಟಿದರು ಸ್ವಾಮಿ ಭೂಮಿ ನೇರ್ಪುಗೊಳಿಸಿದರು |
ಬಾನು ಮುಮ್ಮಡಿ ಭೂಮಿ ಇಮ್ಮಡಿ |
ಬಾನಿಗೆ ಮೂರು ಬಾರಿ ಭೂಮಿ ಸುತ್ತಿತು |
ಜಂಬಿ ತಾರಗೆ ಉದಿಸಿತು |
ಬಾನಿನಲ್ಲಿ ಮೇಲಾಗಿ ಹುಟ್ಟಿಕೊಂಡಿತು ತಾಲವ ಎಂಬ ಸಿಡಿಲು |
ಕುಂಕುಮ ಹನಿಧಾರೆ ಮಳೆ ಬಂತು |
ಭೂಮಿಯಲ್ಲಿ ಮೊಳೆತು ಹುಟ್ಟಿಕೊಂಡಿತು ಗರಿಕೆ ಹುಲ್ಲು ಚೊಚ್ಚಲ ಗಿಡ |
ಬೆಳೆಯಲ್ಲಿ ಮೇಲಾಗಿ ಹುಟ್ಟಿಕೊಂಡಿತು|
ಅತಿಕಾರೆ ಎಂಬ ಸತ್ಯದ ಬೆಳೆ |
ಬಾಳೆಯಲ್ಲಿ ಶ್ರೇಷ್ಠ ಬಾಳೆ |
‘ಆದಾಳೆ ಬೋದಾಳ’ ಗಿಡ ಬಾಳೆ |
ನಟ್ಟಿಕಾಯಿಯಲಿ ಮೇಲಾಗಿ ಹುಟ್ಟಿಕೊಂಡಿತು |
ರಾಜಗಿರಿ ಕೆಂಪು ಹರಿವೆ |
ಗೋವಿನಲ್ಲಿ ಮೇಲಾಗಿ ಹುಟ್ಟಿಕೊಂಡಿತು ಕಾಶಿಗೆ ಹೋದ ಕಪಿಲೆ ದನ |
ನಾಣ್ಯದಲ್ಲಿ ಮೇಲಾಗಿ ಹುಟ್ಟಿಕೊಂಡಿತು |
ಇಕ್ಕೇರಿ ಚಕ್ರ ನಾಣ್ಯ |
ನಾಣ್ಯದಲ್ಲಿ ಮೇಲಾಗಿ ಹುಟ್ಟಿಕೊಂಡಿತು |
ಕುರ್ಜತ್ ನಾಣ್ಯ ಬಂಗಾರ”



ಮೇಲಿನ ವಸ್ತುಗಳ ಬಗ್ಗೆ ಜನಪದರಲ್ಲಿ ಚರ್ಚಿಸಿದಾಗ ಅವರಿಂದ ಬಂದ ವಿವರಣೆ ಹೀಗಿದೆ: ‘ಅತಿಕಾರೆ’ ಭತ್ತದ ಒಂದು ಜಾತಿ. ದೆಯ್ಯೊಲೆ ನಲಿಕೆಯಲ್ಲಿ ಇದು ಅಗತ್ಯ ಬೇಕು. ಕಂಬುಲ ಗದ್ದೆಯಲ್ಲಿ ಅತಿಕಾರೆ ಬಿತ್ತುವುದು ಪದ್ಧತಿ. ಅದರ ಅನ್ನ ಆರೋಗ್ಯಕ್ಕೆ ಒಳ್ಳೆಯದು. ಅದು ಸತ್ಯದ ಬೆಳೆ. ಬೂದು ಬಾಳೆ ತಿನ್ನಲೂ ಸರಿ, ಪಲ್ಯಕ್ಕೂ ಸರಿ. ಇದು ಹೊಟ್ಟೆಯ ಕಾಯಿಲೆಗೆ ರಾಮಬಾಣ. ಇದನ್ನು ರಾಗಿಯೊಂದಿಗೆ ಬೆರೆಸಿ ‘ಮನ್ನಿ’ ಮಾಡಿ ಮಕ್ಕಳಿಗೆ ತಿನ್ನಲು ಕೊಟ್ಟರೆ ಹೊಟ್ಟೆಯ ಕಾಯಿಲೆ ಗುಣವಾಗುತ್ತದೆ. ತುಳುಜನರ ಸಾವಿನಲ್ಲೂ ಬೂದುಬಾಳೆಯ ಕಾಯಿಯ ಮತ್ತು ಬಾಳೆದಿಂಡಿನ ಪಲ್ಯ ಅಗತ್ಯ ಬೇಕು. ಹೆಣ ಮೀಯಿಸಿದ ಮೇಲೆ ಇದರ ಎಲೆಯ ಮೇಲೆ ಮಲಗಿಸಬೇಕು. ಬೂದಾಳೆ ಬಾಳೆಯ ಎಲ್ಲ ಭಾಗಗಳೂ ವಿಶೇಷವಾಗಿ ಪುರುಷರ ಮೂತ್ರ ಸಂಬಂಧಿ ಕಾಯಿಲೆಗಳನ್ನು ಗುಣ ಪಡಿಸುತ್ತವೆ. ರಾಜಗಿರಿ ಕೆಂಪು ಹರಿವೆ ಔಷಧೀಯ ಗುಣ ಇರುವ ಸೊಪ್ಪು. ಮೊಳಕೆ ಹಾಕಿದ 20 ದಿನಗಳಲ್ಲಿ ಈ ಸೊಪ್ಪನ್ನು ಅಡುಗೆಗೆ ಉಪಯೋಗಿಸಬಹುದು. ಹೀಗೆ ದೇವರ ಸೃಷ್ಟಿಯೊಂದಿಗೆ ಜನರ ಆರೋಗ್ಯ ಮತ್ತು ರುಚಿಯ ದೃಷ್ಟಿಯಿಂದ ಶ್ರೇಷ್ಠ ಜೀವನಾವಶ್ಯಕ ಬೆಳೆಗಳು ಹುಟ್ಟುತ್ತವೆ.


ಸೃಷ್ಟಿ ಆದ ಮೇಲೆ ಗಟ್ಟದ ಮೇಲೆ ಈಜಾ ನಗರದಲ್ಲಿ ಕರ್ಮಿನ ಶಾಲೆಯಲ್ಲಿ ಬೆತ್ತದ ಮಲೆಯಲ್ಲಿ ಬೇಲೂರ ಪದವಿನಲ್ಲಿ ಅಣಿಕಲ್ಲಿನ ಡೆಂಬಿಯಲ್ಲಿ, ನೀರ ಹರಿವಿನಲ್ಲಿ, ನೆಕ್ಕರೆಯ ಪೆದೆಯಲ್ಲಿ, ಸರೊಲಿನ ಸಂಪಿನಲ್ಲಿ ಪಂಜುರ್ಲಿ(ಹಂದಿ) ಜೋಡಿ ಮರಿಗಳು ಅಣ್ಣ-ತಂಗಿಯರಾಗಿ ಹುಟ್ಟಿ ಮುಂದೆ ಗಂಡ-ಹೆಂಡತಿಯರಾಗುತ್ತವೆ. ಈ ಜೋಡಿಗಳನ್ನು ಗಟ್ಟದ ಕೆಳಗೆ ಇಳಿಯಲು ಸುಬ್ರಾಯದೇವರು ಬಿಡುವುದಿಲ್ಲ. ಈ ಜೋಡಿಗಳು ಹುಟ್ಟುವುದು ನೀರಿನಲ್ಲಿ. ಪ್ರಾಣಿಜೀವ ಹುಟ್ಟಿ ವಿಕಾಸವಾಗುವ ಹಂತವನ್ನು ಇದು ಸಂಕೇತಿಸುತ್ತದೆ.
ಗಟ್ಟದ ಮೇಲೆ ನಿಂತು ಪರಶುರಾಮ ಕಡಲಿಗೆ ಪರಶು ಎಸೆದು ತುಳುನಾಡನ್ನು ಹಾಗೂ ಕರಾವಳಿಯ ಕೆಲವು ಭಾಗಗಳನ್ನು ಸೃಷ್ಟಿಸಿದ ಎಂಬುದು ವೈದಿಕ ಮೂಲದ ಪೌರಾಣಿಕ ಕಥೆ. ಮೇಲಿನ ಪಾಡ್ದನಗಳ ಕಥೆಗೆ ವೈದಿಕ ಹೊಳಹು ನೀಡಿ ಪರಶುರಾಮ ಕತೆ ಕಲ್ಪಿತವಾಗಿದ್ದಿರಬಹುದಾದ ಸೂಚನೆ ಇಲ್ಲಿದೆ.


ಈಶ್ವರನು ಸಾಕುವ ಹಂದಿ ಮರಿಗಳು ಪಂಜುರ್ಲಿ ಭೂತ ಆಗುವ ಪಾಡ್ದನಗಳಿವೆ. 'ಈ ಪಾಡ್ದನದಲ್ಲಿ ಈಶ್ವರನು ಒಬ್ಬ ದೇವರಿಗಿಂತ ಹೆಚ್ಚಾಗಿ ಒಬ್ಬ ಬೇಸಾಯಗಾರನ ರೀತಿಯಲ್ಲಿ ಚಿತ್ರಿತವಾಗಿದ್ದಾನೆ. ಈಶ್ವರನನ್ನು ಬೇಸಾಯಗಾರನನ್ನಾಗಿ ಚಿತ್ರಿಸಿದ ಸಂದರ್ಭಗಳು ತುಳು ಜನಪದ ಸಾಹಿತ್ಯದಲ್ಲಿ ಸಾಕಷ್ಟು ಇವೆ.'


ಕೊರಗರು ಇಲ್ಲಿಯ ಮೂಲನಿವಾಸಿಗಳು ಎಂದು ಅನೇಕ ವಿದ್ವಾಂಸರು ಬರೆಯುತ್ತಾರೆ. ಕೊರಗರು ಮಾತ್ರ ಮೂಲನಿವಾಸಿಗಳು ಎಂಬ ವಾದವನ್ನು ಒಪ್ಪಲಾಗುವುದಿಲ್ಲ. ಅವರೂ ಇಲ್ಲಿಯ ಅನೇಕ ಬುಡಗಟ್ಟುಗಳಂತೆ ಆದಿಜನಾಂಗವಾಗಿರಬಹುದು. ಕೊರಗರು ಇಂದಿಗೂ ಹೆಚ್ಚಿನ (ಉಡುಗೆಯ ಹೊರತಾಗಿ) ಬದಲಾವಣೆಗಳಿಗೆ ಒಳಗಾಗಿಲ್ಲ. ನಾವಡರು ಸಂಗ್ರಹಿಸಿದ ಕೊರಗರ ಒಂದು ಪಾಡ್ದನದಲ್ಲಿ ಸೃಷ್ಟಿಯ ವಿವರಣೆ ಇದೆ:

ಯುಗ ಮಗಚಿ ಭೂಮಿಯಲ್ಲಿ ನೀರು ಆವರಿಸಿದ ಕಾಲದಲ್ಲಿ ಮನುಷ್ಯ ಕುಲವೇ ನಾಶವಾಗುತ್ತದೆ. ದೈವ ದೇವರಿಗೆ ನೀರು ನೈವೇದ್ಯ ಇಲ್ಲವಾಗುತ್ತದೆ. ಆಗ ಹೊನ್ನ ಮದ್ದಲೆಯಲ್ಲಿ ತೇಲಿ ಬಂದ ಕೊರಗರ ಬತ್ತಲೆ ಅಣ್ಣ ತಂಗಿಯರನ್ನು ಕಂಡು ‘ನೀವ್ಯಾರು’ ಎಂದು ಕೇಳುತ್ತಾರೆ ಮೇಲಿನ ಲೋಕದ ನಾರಾಯಣ ಸ್ವಾಮಿ. “ನಾವು ಅಣ್ಣ ತಂಗಿ” ಎಂದ ಅವರ ರೂಪ ಪರಿವರ್ತನೆ ಮಾಡಿ ಗಂಡ ಹೆಂಡತಿಯರನ್ನಾಗಿ ಮಾಡುತ್ತಾರೆ. “ಭೂಮಿಯಲ್ಲಿ ನರಲೋಕವೇ ಇಲ್ಲವಾಗಿದೆ. ನೀವಿನ್ನು ಕೆಳಗಿನ ಏಳು ಲೋಕಕ್ಕೆ ಹೋಗಿ ನರಮನುಷ್ಯರ ನೂರೊಂದು ಕುಲವನ್ನು ಹಡೆದು ಹಾಕಬೇಕು. ನಿಮ್ಮಿಂದ ಅಲ್ಲಿ ಮತ್ತೆ ಸಂತಾನ ಆಗಬೇಕು ಎನ್ನುತ್ತಾರೆ.

ನಾರಾಯಣ ಸ್ವಾಮಿಯ ಅಪ್ಪಣೆಯಂತೆ ಕೊರಗ ಕೊರಗರು ನೂರೊಂದು ಕುಲವನ್ನು ಪಡೆದರು.

“......ಮನುಷ್ಯ ಸೃಷ್ಟಿ ಏನೋ ಆಯಿತು. ಆದರೇನು? ಹುಟ್ಟಿದ ನರರಿಗೆ ಅನ್ನ ಆಹಾರವಿಲ್ಲ. ಹುಟ್ಟ್ ಚಿತ್ತೇರಿಗೆ ನೀರು ನೈವೇದ್ಯ ಇಲ್ಲವಾಗಿದೆ. ಅದಕ್ಕಾಗಿ ಸ್ವರ್ಗದಲ್ಲಿರುವ ‘ನೆಲು ಸಂಕ್ರ ಗಂಡ’ನನ್ನು ತರುವಂತೆ ಹರಿಕಾರ ನಿಂಗನಿಗೆ ಕಳುಹಿಸುತ್ತಾರೆ. ಹರಿಕಾರ ನಿಂಗ ದೇವೇಂದ್ರನ ಬಳಿಗೆ ಹೋಗಿ ನೆಲು ಸಂಕ್ರ ಗಂಡನನ್ನು ಕೊಡುವಂತೆ ಭಿನ್ನವಿಸಿದ. ಆಗ ದೇವೇಂದ್ರ ಸ್ವಾಮಿ ನೆಲು ಸಂಕ್ರ ಗಂಡನನ್ನು ಕರೆಸಿದರು...... ಭೂಮಿಗೆ ‘ನೆಲು, ಸಂಕ್ರಗಂಡ’ವನ್ನು, ‘ಹೊನು ಬಸವಯ್ಯ’ನನ್ನು ‘ಮಾದಾರ ಚೆನ್ನ’ನನ್ನು ಕಳುಹಿಸುತ್ತಾರೆ. ಮುಂದೆ ನಾರಾಯಣಸ್ವಾಮಿ ಭೂಮಿಯ ಸೌಳನ್ನೆಲ್ಲ ಸೆಳೆದು ಮಾಡಿದರು. ಗದ್ದೆ ಬಯಲು ಹೊಳೆ ಹಳ್ಳ ಎಲ್ಲ ಮಾಡಿದರು. ಹೊನ್ನು ಬಸವಯ್ಯನನ್ನು ಕಟ್ಟಿ ಮಾದಾರ ಚೆನ್ನ ಬಯಲನ್ನೆಲ್ಲ ಹೂಡಿ ಹದ ಮಾಡಿದನು. ನೆಲು ಸಂಕ್ರಗಂಡವÀನ್ನು ಬಿತ್ತಿದರು. ಬಿತ್ತಿದ ಬೆಳೆ ಹುಟ್ಟಿದ ನರರಿಗೆ ಅನ್ನ ಆಹಾರವಾಯಿತು. ಹುಟ್ಟ್ ಚಿತ್ತೇರಿಗೆ ನೈವೇದ್ಯ ಆಯಿತು. ದೈವ ದೇವರಿಗೆ ಸಂತೋಷವಾಯಿತು. ನರ ಮನುಷ್ಯರಿಗೆ ಸಂತೋಷವಾಯಿತು.’


ಈ ಹಾಡಿನಲ್ಲಿ ಮಾನವನ ಹುಟ್ಟು ಹಾಗೂ ಆತ ಕೃಷಿಗೆ ತೊಡಗಿದ ಬಗ್ಗೆ ಸೂಚನೆ ಇದೆ. ಸಂಸ್ಕøತಿಯ ಮೊದಲರೂಪವೇ ಕೃಷಿ. ಸಂಸ್ಕೃತಿ - ಬೇಸಾಯ. ‘ನೆಲು’ (ಭತ್ತ) ಮತ್ತು ‘ಸಂಕ್ರಗಂಡ’ (ಜೋಳ) ಮಾನವರ ಆಹಾರ. ಜನಪದ ನಂಬಿಕೆಯಂತೆ ಬಸವ ಮಳೆಯನ್ನು ಸಂಕೇತಿಸುತ್ತಾನೆ.

ಪಾಡ್ದನಗಳ ಪ್ರಕಾರ ಸೂರ್ಯ ಮತ್ತು ನಾಗಬಿರ್ಮೆರೊಂದಿಗೆ ವಿಶ್ವ ಸೃಷ್ಟಿ ಆಗಿದೆ. ಸೂರ್ಯ ಮತ್ತು ನೀರು ಅಂದರೆ ನಾಗ ಬಿರ್ಮೆ. ಸೂರ್ಯ ಮತ್ತು ನಾಗ ಬಿರ್ಮೆರ್ ಒಟ್ಟಿಗೆ ನೀರಿನಲ್ಲಿ ಹುಟ್ಟುವ ವಿವರಗಳುಳ್ಳ ಪಾಡ್ದನಗಳು ಮುಂದಿನ ಪುಟಗಳಲ್ಲಿ ಬರಲಿವೆ. ನಾಗ ರೂಪಿಣಿ ರೆಕ್ಕೆಸಿರಿ ದೈವ “ನೀರಿನಲ್ಲಿ ನೆಗಳೆ’ ಆಗಿ ಹುಟ್ಟಿದವಳು. ಸಿರಿಗಳು ನೀರಿನಲ್ಲಿ ಕನ್ಯೆಯರಾಗಿ ಉದಿಸಿದವರು. (ನೀರ್‍ಡ್ ಕನ್ಯೆಲು ಉದ್ಯ ಬೆಂದೆರ್) ‘ನೀರು ಸರ್ಪರೂಪ’ ಎನ್ನುವ ಶಂಬಾರವರು ಈ ಬಗ್ಗೆ ವಿವರವಾಗಿ ಚರ್ಚಿಸುತ್ತಾರೆ.
ಪಾಡ್ದನದಲ್ಲಿ ಪಾತ್ರಗಳು ಸೂರ್ಯನನ್ನು ದೇವರೆನ್ನುತ್ತವೆ, ‘ನರಯನ’ ಎನ್ನುತ್ತವೆ. ಕೆಲವೊಂದು ಕಡೆ ಬೆರ್ಮರನ್ನು ‘ನರಯನ’ ಎನ್ನುತ್ತವೆ, ದೇವರು ಎನ್ನುತ್ತವೆ. ನೊಂದಾಗ ದೂರು ಕೊಡುವುದು ಸೂರ್ಯನಿಗೆ; ಬೆರ್ಮೆರಿಗೆ. ಬೇಡುವುದು ಸೂರ್ಯನನ್ನು ಮತ್ತು ಬೆರ್ಮೆರನ್ನು. ಸತ್ಯ ಪರೀಕ್ಷೆಗೆ ಕರೆಯುವುದು ಬೆರ್ಮರನ್ನು. ಸಿರಿಯು ಅಯೋನಿಜೆಯಾಗಿ ಉಲ್ಲಾಯ ಬೆರ್ಮೆರ ಸನ್ನಿಧಿಯಲ್ಲಿ ಉದ್ಭವ ಆದವಳು. ಅಬ್ಬಗ ದಾರಗರು ಸತ್ತು ದುಂಬಿಯಾಗಿ ಹಾರಿ ಹೋಗುವುದು ಸೂರ್ಯದೇವರ ಬಳಿಗೆ. ಬೆರ್ಮರ್ ಹಾಗೂ ಸೂರ್ಯನಾರಾಯಣ ‘ನರಯನ’ ಎಂಬ ಹೆಸರನ್ನೂ ಹೊಂದಿರುತ್ತಾರೆ. ಕೆಲವೊಂದು ಮೂಲತಾನಗಳಲ್ಲಿ ಸೂರ್ಯನ ಆರಾಧನೆ ಅವಜ್ಞೆಗೆ ಒಳಗಾಗಿದ್ದರೂ ಇನ್ನೂ ಉಳಿದು ಬಂದಿದೆ.


“ಈಜಿಪ್ಟನಲ್ಲಿ ಸರ್ಪವು ಸೂರ್ಯನನ್ನು ಪ್ರತಿನಿಧಿಸುತ್ತಿತ್ತು. ಅಲ್ಲಿ ‘ರಾ’ ಎಂಬ ಹೆಸರಿನಿಂದ ಸೂರ್ಯನನ್ನು ಆರಾಧಿಸುತ್ತಿದ್ದರು. ಈಜಿಪ್ಟನ ‘ಸೋಲಾರ್ ಸರ್‍ಪೆಂಟ್’ ಹೆಡೆಯು ಕಿರಣಗಳನ್ನು ಬೀರುತ್ತವೆ. ಪಶ್ಚಿಮ ಬ್ರಿಟನ್ನಿನಲ್ಲಿ ಕ್ರೈಸ್ತಪೂರ್ವ ಸಂಪ್ರದಾಯದಲ್ಲಿ ಇಂತಹ ನಂಬಿಕೆ ಇತ್ತು. ತುಳುನಾಡಿನ ಜನಪದ ಸಂಸ್ಕೃತಿಯಲ್ಲಿ ಅಂದಿನ ಈಜಿಪ್ಟ್ ಸಂಸ್ಕೃತಿಯ ಸಾಮ್ಯತೆಗಳನ್ನು ಕಾಣಬಹುದು. ನಾರಾಯಣ ಮತ್ತು ಬೆರ್ಮರ ಕಲ್ಪನೆಯಲ್ಲಿ ಸೂರ್ಯ ಮತ್ತು ಬೆರ್ಮರ (ಸರ್ಪ) ಏಕತ್ವವನ್ನು ಕಾಣಬಹುದು. ತುಳುನಾಡಿನ ಭತ್ತದ ಕೃಷಿ ನಾಗಬೆರ್ಮರ ಅಧೀನ. ಅನೇಕ ಗದ್ದೆಗಳು ಅದರಲ್ಲೂ ವಿಶೇಷವಾಗಿ ಬಾಕಿಮಾರುಗಳ ಸಾಗುವಳಿಗೆ ಮೊದಲು ನಾಗಬೆರ್ಮರ ಮತ್ತು ಸಂಬಂಧಪಟ್ಟ ದೈವಗಳ ಉಪಾಸನೆ ಆಗಬೇಕು. ಆ ರೀತಿ ಆಗದಿದ್ದರೆ ಅನಾಹುತ ಆಗುತ್ತದೆ ಎಂಬುದು ನಂಬಿಕೆ. ಪಳ್ಳಿ ದಿಡಂಬೆಟ್ಟುನಲ್ಲಿ ಕೆಲವು ತೊಂದರೆಗಳಿಂದಾಗಿ `ಗದ್ದೆ ಕೋರಿದ ಮೇಲೆ ಉಪಾಸನೆ ಮಾಡುತ್ತೇವೆ’ ಎಂದು ಕೈಮುಗಿದು ಗದ್ದೆ ಕೋರಲು ಆರಂಭಿಸಿದುದನ್ನು ಅರ್ಧಕ್ಕೆ ನಿಲ್ಲಿಸುವ ಸಂದರ್ಭ ನನ್ನ ತಂದೆ ರಾಜು ಸೆಟ್ಟಿಯವರಿಗೆ ಒದಗಿ ಬಂದಿತ್ತು. ಮುಂದೆ ಉಪಾಸನೆ ಮುಗಿಸಿ ಗದ್ದೆ ‘ಕೋರಿ’ದರಂತೆ.


ಕಂಬುಲ ಆದ ಮೇಲೆ ಕಂಬುಲ ಗದ್ದೆಯಲ್ಲಿ ಕುರುಂಟು ಎಳೆಯುವ ಕೆಲಸ ಇರುತ್ತದೆ. ಈ ಕೆಲಸವನ್ನು ನಾಗ ಬೆರ್ಮೆರ್ (ಸಂಕಪಾಲೆ ಸರ್ಪ) ಮಾಡುತ್ತದೆ ಎಂಬ ನಂಬಿಕೆ ಇದೆ. ಬಂಟ್ವಾಳದ ‘ಅನಂತಾಡಿ’ ಎನ್ನುವುದು ಅನಂತನ ಅಡಿ ಅರ್ಥಾತ್ /ಸರ್ಪನ ಕ್ಷೇತ್ರ ಎಂಬ ಅರ್ಥದಿಂದ ಬಂದ ಪದ. ‘ಅನಂತನಾಥ ಹಾಗೂ ಯಕ್ಷಿಣಿ ಹಾವಿನ ಪರ್ಯಾಯ ನಾಮಗಳು.’ “ಸೃಷ್ಟಿಯು ಪ್ರಾರಂಭವಾದುದು ಆದಿಮಾತೆಯಿಂದ ಅಥವಾ ಆದಿಶೇಷನಿಂದ.” ಈ ಮಾತಿಗೆ ಈಜಿಪ್ಟ್ ಗ್ರೀಕ್ ಮೂಲದ ಪವಾಡ ಕಥೆಗಳ ಹಾಗೂ ಇತರ ಮೂಲಗಳ ದೃಷ್ಟಾಂತ ನೀಡಿ ಶಂಬಾರವರು ಪ್ರತಿಪಾದಿಸುತ್ತಾರೆ. ಅನಂತಾಡಿ ಕೂಡಾ ಮೂಲತಾನದ ಕ್ಷೇತ್ರ. ಇಲ್ಲಿ ಸ್ಥಳೀಯ ಉಪಾಸನಾ ಪದ್ಧತಿಯ ಉಲ್ಲಾಲ್ತಿಯು ಮುಖ್ಯ ದೇವತೆ. ಉಲ್ಲಾಲ್ತಿಯ ಕಂಬುಲ ಮುಗಿದು ‘ಬಿತ್ತನೆ ಮಾಡಿ ಕೆನೆಗಟ್ಟಿದ ಕಂಬುಲ ಗದ್ದೆಯ ಒಡಲಲ್ಲಿ ‘ಸಂಕಪಾಲೆ’ ಸರ್ಪ ಸಂಕಮಲೆ ಬೆಟ್ಟದಿಂದ (ಅನಂತನ ಬೆಟ್ಟ) ಇಳಿದು ಸರಿದು ಹೋಗುತ್ತಿತ್ತು. ಅದು ಸರಿದು ಹೋದ ದಾರಿಯಲ್ಲಿ ಭತ್ತದ ಬೀಜ ಮೊಳಕೆ ಒಡೆಯಲು ತೊಡಕಾಗುವ ನೀರು, ಇಳಿಯುತ್ತಿತ್ತು’ ಎಂದು ತಾವೇ ನೋಡಿದಂತೆ ಹೇಳುತ್ತಾರೆ. ಈ ರೀತಿಯ ಕಥೆಯನ್ನು ಇನ್ನೂ ಕೆಲವು ಕಂಬುಲ ಗದ್ದೆಗಳ ಬಗ್ಗೆ ಆಯಾ ಊರವರು ಹೇಳುತ್ತಾರೆ.


ಕೇರಳದ ತಿರುವಾಂಕೂರು ಅನಂತಪದ್ಮನಾಭ ದೇವಾಲಯದ ಒಳಭಾಗದಲ್ಲಿ, ಹಳೆಯ ಅರಮನೆಯ ಬಳಿ ಹಸಿರು ಸಿರಿಯ ನಾಗ ಬನ ಇದೆ. ಇದು ತಿರುವಾಂಕೂರು ರಾಜ ಕುಟುಂಬದ (ಮಾತೃವಂಶೀಯ) ಮೂಲತಾನದ ಕ್ಷೇತ್ರ, ನಾಗ ಉಪಾಸನೆಯ ಕ್ಷೇತ್ರ. ಈ ನಾಗ ಕಾವು/ಬನದ ಒಳಗೆ ಮಾತೃವಂಶೀಯ ಅರಸು ಕುಟುಂಬಕ್ಕೆ ಮಾತ್ರ ಪ್ರವೇಶ. ಅರಸು ಕುಟುಂಬದವರು ದಿನಾ ಬೆಳಗ್ಗೆ ಇಲ್ಲಿ ಮೂಲಸ್ಥಾನದ ಅನಂತನ (ನಾಗನ) ಉಪಾಸನೆ ಮುಗಿಸಿದ ಮೇಲೆ ದೇವಸ್ಥಾನದ ಒಳಗೆ ಪ್ರವೇಶಿಸಿ ಅನಂತ ಪದ್ಮನಾಭನ ಪೂಜೆ ನಡೆಸುವ ಪದ್ಧತಿ ಮುಂದುವರಿದಿದೆ. ಮೂಲತಃ ಅನಂತನ ಕ್ಷೇತ್ರವಾಗಿದ್ದ ಅನಂತನ ಮೇಲೆ ‘ಪದ್ಮನಾಭ’ ಪವಡಿಸಿದ್ದು ಅನಂತರದ ಬೆಳವಣಿಗೆ. ಸ್ಥಳೀಯ ಭಕ್ತರು ಮಾತ್ರ ಈಗಲೂ ‘ಅಮ್ಮಾ, ದೇವಿ, ನಾರಯಣೀ, ಭಗವತಿ’ ಎಂದು ‘ಅನಂತ ಪದ್ಮನಾಭ’ನ ಮುಂದೆ ನಿಂತು ಕೈಮುಗಿಯುವುದನ್ನು ಈಗಲೂ ಕಾಣಬಹುದು.


ನಾಗ ಕೃಷಿಯ ಪ್ರೇಷಕ ದೈವವಾಗಿ ಚೀನಾ ಮತ್ತು ಈಜಿಪ್ಟ್ ನಾಗರಿಕತೆಯಲ್ಲಿ ಕೂಡಾ ಇದೆ.
ಯಾವುದೇ ನಂಬಿಕೆಯು ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ವಿಶ್ವದ ಎಲ್ಲೆಡೆ ಸರಿಸುಮಾರು ಸಮಾನ ನಂಬಿಕೆಗಳು ಇದ್ದುದನ್ನು, ಇರುವುದನ್ನು ಇಂದಿನ ಅಧ್ಯಯನಗಳು ತೆರೆದಿಡುತ್ತವೆ. ಹೆಡೆ ಅರಳಿಸಿ, ಮುಚ್ಚುವ ಸರ್ಪವೆ ಸೃಷ್ಟಿಯ ವಿಸ್ಮಯ! ಇಂತಹ ಅಲೌಕಿಕ ಶಕ್ತಿಯನ್ನು ಕಂಡು ದೇವರೆಂದು ಬಗೆದು ಆತನಿಗೆ ಮಾನವ ಶರಣಾದುದರಲ್ಲಿ ಆಶ್ಚರ್ಯವಿಲ್ಲ.

“ಅತಿಮಾನುಷರೂಪ ಆಕಾರವುಳ್ಳವಾಗಿ ಕಂಡಾಗ ಈ ನಾಗಗಳನ್ನು ದೇವತಾಸ್ವರೂಪದಲ್ಲಿ ಕಂಡು ಪೂಜಿಸುವ ಭಾವವು ಉಕ್ಕೇರಿ ಬರುವುದು ಸಹಜವಾಗಿದೆ. ಕಾಡಿನಲ್ಲಿ ವಾಸವಾಗಿ ಇರಬೇಕಾದ ಆ ಪುರಾತನ ಯುಗದಲ್ಲಿ ಸುತ್ತಮುತ್ತಲು ನಾಗಗಳೇ ಕಂಡಾಗ ಕನಸು ಸಹ ನಾಗರವೆ ಕಾಣಬಲ್ಲವು. ನೀರಿನೊಡನೆ ಸಂಬಂಧÀವಾದ ಈ ಪ್ರಾಣಿಗಳ ಮೂಲಕ ಭೋರ್ಗರೆಯುತ್ತಾ ಹೊರಟ ನದಿಗಳೂ ಹಾವಿನಂತೆ ಎನಿಸಿದ್ದು ಕಾಣುತ್ತದೆ. ಹಾವಿನಂತೆ ಕಾಣುವ ಕೋಲ್ಮಿಂಚುಗಳೊಡನೆ ಬರುವ ಸೋನೆಮಳೆಗೆ ನಾಗಗಳೇ ಕಾರಣವೆಂಬ ನಂಬುಗೆಯುಂಟಾಗಿರುವುದು ಅಸ್ವಾಭಾವಿಕ ವೇನಲ್ಲ. ರಭಸದಿಂದ ಹೊರಟ ಚಕ್ರಾಕಾರದ ಸುಂಟರಗಾಳಿ, ಕಾಡಿನಲ್ಲಿ ಗಾಳಿಯೊಡನೆ ಹಬ್ಬುತ್ತ ಹೊರಟ ಕಾಳ್ಗಿಚ್ಚು, ಬೆಂಕಿ ಇದೂ ಸರ್ಪವೇ. ಮಾನವರ ದೇಹದಲ್ಲಿ ‘ಆಹಾರವನ್ನು ಸುಟ್ಟು ಬಿಡುವ ಕ್ಷುಧ್ರಾಗ್ನಿ’ಯನ್ನು ಸರ್ಪ, ಕಾಲಸರ್ಪ, ಘಟಸರ್ಪ ಎಂದು ಕಂಡವರೂ ಉಂಟು. ‘ಕ್ಷುದಮಿತ್ ವಧಂ’. ಹಸಿವನ್ನು-ಜಠರಾಗ್ನಿಯನ್ನು-ವೈಶ್ವಾನರನ್ನು ಮೃತ್ಯುರೂಪದಲ್ಲಿ ಕಾಣುವಲ್ಲಿ ಇದನ್ನು ಸರ್ಪವೆಂದೇ ಭಾವಿಸಲಾಗಿರುವುದಾಗಿ ಬಗೆಯಲು ಅವಕಾಶವಿದೆ. ಅಗ್ನಿಯು (ನಾಗನು) ಸೃಜನಕ್ಕೆ ಕಾರಣವಿರುವಂತೆ ಅದು ಮೃತ್ಯು ದೇವತೆಯೆಂದೂ ಬಗೆಯಲಾಗಿದೆ. ‘ನಾಗವು’ ಮೃತ್ಯುದೇವತೆ ಎಂದರೆ ನೈಸರ್ಗಿಕ ಮೃತ್ಯುವಲ್ಲ ಮತ್ತೆ ! ಅಪಮೃತ್ಯು, ಆಕಸ್ಮಿಕ ಮೃತ್ಯುರೂಪ; ಆಪತ್ಕಾರೀ ವಿಪತ್ತುಗಳ ಸಾಕ್ಷಾತ್ ಪ್ರತಿಮೆ ಹಾವುಗಳು! ಈ ಕಾರಣದಿಂದಲೇ ಅವುಗಳ ಬಗ್ಗೆ ಎಂದೆಂದೂ ಭಯ!”


ಚೈನಾ, ಜಪಾನ್, ಕಾಂಬೋಡಿಯಾ - ಮುಂತಾದ ದೇಶದ ನಂಬಿಕೆಗಳಲ್ಲೂ ಸೃಷ್ಟಿಯ ಆದಿಯಲ್ಲಿ ನೀರು ಮಾತ್ರ ಇತ್ತು. ಕಾಂಬೋಡಿಯಾ ರಾಜಕುಮಾರ ವಾಸಯೋಗ್ಯ ಭೂಮಿಯನ್ನು ಅರಸುತ್ತಾ ತನ್ನ ಸಹಚರರೊಂದಿಗೆ ಹೋಗುತ್ತಿದ್ದಾಗ ಸೇವಕಿಯರ ಮಧ್ಯೆ ಇದ್ದ ಸ್ಪುರದ್ರೂಪಿ ಕನ್ಯೆಯನ್ನು ಕಂಡು ಮೋಹಗೊಳ್ಳುತ್ತಾನೆ. ಈ ಕನ್ಯೆ ನಾಗರಾಜ ಶೇಷನ ಮಗಳು ವಾಸುಕಿ. ಆಕೆಯೂ ರಾಜಕುಮಾರನನ್ನು ಮದುವೆಯಾಗಲು ಇಚ್ಚಿಸುತ್ತಾಳೆ. ಭೂಮಿ ಮತ್ತು ನೀರಿನ ಒಡೆಯನಾಗಿದ್ದ ಶೇಷ ಈ ಮದುವೆಗೆ ಅನುಮತಿ ಇತ್ತು, ನದಿಯ ನೀರನ್ನು ಕುಡಿದು ಅವರ ವ್ಯವಸಾಯಕ್ಕಾಗಿ ಭೂಮಿಯನ್ನು ತೆರವುಗೊಳಿಸುತ್ತಾನೆ. ಭೂಮಿಯಿಂದ ನೀರನ್ನು ಸರ್ಪ ಹೀರಿದ ಬಗ್ಗೆ ಜಪಾನಿ ಕಥೆಯಿದೆ.


ಮೂಲತಾನಗಳ ನಾಗಬಿರ್ಮೆರ್ ಭೂತಗಳ ಅಧಿದೇವತೆ ಆಗಿದ್ದರೂ ಭೂತಗಳ ಪ್ರಸರಣ ಪಾಡ್ದನಗಳಲ್ಲಿ ದೈವಗಳು, ಬೂ/ಭೂತಗಳು ಘಟ್ಟದಿಂದ ಇಳಿದು ಬರುತ್ತವೆ. ಅವುಗಳನ್ನು ತಡೆಯುವುದು ಸರ್ಪ ಅಂದರೆ ಸುಬ್ರಹ್ಮಣ್ಯ. ಭೂತಗಳು ಘಟ್ಟ ಇಳಿದು ಬರುವುದು ವಾಸ್ತವಕ್ಕೆ ಹೆಚ್ಚು ಹತ್ತಿರವಾಗುತ್ತದೆ. ಘಟ್ಟದ ಕೆಳಭಾಗದಲ್ಲಿ ಹಾವುಗಳು ಹೆಚ್ಚಾಗಿ ಇದ್ದುದನ್ನು ಇದು ಸೂಚಿಸುತ್ತದೆ. ಮಾನವ ವಾಸಕ್ಕಾಗಿ ಘಟ್ಟ ಇಳಿದು ಕಾಡು ಕಡಿಯಲು ಆರಂಭಿಸಿದಾಗ ಹಾವುಗಳು ಮಾನವರನ್ನು ಕಚ್ಚಿರಬೇಕು. ಅದೇ ಸುಬ್ರಹ್ಮಣ್ಯನ ಪ್ರತಿಭಟನೆ. ಹೀಗೆ ಸೃಷ್ಟಿಯ ಕಲ್ಪನೆಯ ವಿಕಾಸವನ್ನು ಜನಪದ ಹಾಡುಗಳು, ತುಳು ಪಾಡ್ದನಗಳು ನಮ್ಮ ಮುಂದೆ ತೆರೆದಿಡುತ್ತವೆ. ಈ ಸೃಷ್ಟಿ ಬೆರ್ಮೆರ ಸೃಷ್ಟಿ ಎಂಬುದಾಗಿ ಪಾಡ್ದನಗಳೂ ಹೇಳುತ್ತವೆ.


ವೈದಿಕದಲ್ಲಿ ಸೃಷ್ಟಿಯ ಕಲ್ಪನೆ ಹೀಗಿದೆ:

ಸೃಷ್ಟೇಷು ಪ್ರಲಯಾದೂಧ್ರ್ವಂ ನಾಸೀತ್ಕಿಂಚಿದ್ದಿ ಜೋಕ್ತಮಾಃ
ಬ್ರಹ್ಮ ಸಂಜ್ಞ ಮಭೂದೇಕಂ ಜ್ಯೋತಿರ್ವೈಸರ್ವಕಾರಕಮ್
(ಮಹಾಪದ್ಮ ಪುರಾಣ ಅ.2-3)

“ಪ್ರಳಯವುಂಟಾದ ಮೇಲೆ ಸ್ಪಷ್ಟವಾದ ವಸ್ತುಗಳಲ್ಲಿ ಯಾವುದೂ ಇರಲಿಲ್ಲ. ಸರ್ವಕ್ಕೂ ಕಾರಣವಾದ ಜ್ಯೋತಿಸ್ವರೂಪವಾದ ಬ್ರಹ್ಮಸ್ವರೂಪವು ಮಾತ್ರ ಇತ್ತು. ಮರುಸೃಷ್ಟಿಯಲ್ಲಿ ಬ್ರಹ್ಮನು ತನ್ನಲ್ಲಿ ಇರುವ ವಿಕಾರಗಳನ್ನೆಲ್ಲ ತಿಳಿದು ಸೃಷ್ಟಿಗೆ ಪ್ರಾರಂಭ ಮಾಡಿದನು.” ಇಲ್ಲಿ ಪಂಚಭೂತಗಳಿಂದ ಆದ ಮೊಟ್ಟೆಯಿಂದ ವಿಷ್ಣು ಹುಟ್ಟುತ್ತಾನೆ.


“ನಾಸ ದಾಸಿನ್ನೋ ಸದಾಸೀತ್ತದಾನೀನಂ ನಾಸಿ ದ್ರಜೋ
ನೋ ಯೋಮಾ ಪಠೋಯತ್
ಕಿಮಾರೀವಃ ಕುಹಕಸ್ಯ ರರ್ಮನ್ನಂಭಃ ಕಿಮಾಸಿದಂ
ಗಹನಂ ಗಭೀರಮ್ (ಋಗ್ವೇದ, ಅ.8.ಆ.7.ವ.17,ಮ.1)


(ಆಗ ಅಸತ್ ಇರಲಿಲ್ಲ ಸತ್ ಕೂಡಾ ಇರಲಿಲ್ಲ, ರಜವೂ ಇರಲಿಲ್ಲ, ಆಕಾಶವೂ ಇರಲಿಲ್ಲ. ಏನೂ ಇರಲಿಲ್ಲ. ಆ ವರ್ಷಕಾಲದಲ್ಲಿ ಎಲ್ಲವನ್ನೂ ಆವರಿಸುವಂತಹ ಜಲಕಣಗಳಿದ್ದುವೋ ಏನೊ?)


ಜನಪದರ ನಂಬಿಕೆಯ “ನೀರು ಮತ್ತು ಸರ್ಪ” - ಇವುಗಳ ಪ್ರಭಾವವು ವೈದಿಕ ಸಾಹಿತ್ಯದ ಮೇಲಾಗಿರುವುದನ್ನು ಇಲ್ಲಿ ಕಾಣಬಹುದು. ತುಳು ಜನಪದ ಧರ್ಮದಲ್ಲಿ ಜೀವವಿಕಾಸದ ಪ್ರಕ್ರಿಯೆ ಸೂರ್ಯನಿಂದ ನೀರಿನಲ್ಲಿ ಆರಂಭವಾಗುತ್ತದೆ. ನಾಗಬಿರ್ಮೆರ್ ಉಭಯಲಿಂಗಿ. ಇದು ಕಲ್ಪನೆ ಆಗಿದ್ದರೂ ವಾಸ್ತವಕ್ಕೆ ಹೆಚ್ಚು ಹತ್ತಿರವಾಗುತ್ತದೆ ಎಂಬ ಅಂಶವನ್ನು ಮುಂದಿನ ಅಧ್ಯಾಯದ ‘ಬಿ/ಬೆರ್ಮೆರ ಉದಿಪನೆ’ಯಲ್ಲಿ ಗಮನಿಸಲಿರುವಿರಿ.


ಮೂಲತಾನ ಆದಿ ಆಲಡೆಯ ಪರಿಕಲ್ಪನೆ

‘ಮೂಲತಃ ಅಲೆಮಾರಿಯಾಗಿದ್ದ ಮಾನವ ಜೀವನಾವಶ್ಯಕ ವಸ್ತುಗಳನ್ನೂ ಅವುಗಳಲ್ಲೂ ಮುಖ್ಯವಾಗಿ ನೀರನ್ನು, ನೀರಿನ ಮೂಲವನ್ನು, ಆಶ್ರಯವನ್ನು ಹುಡುಕುತ್ತ, ನೀರು ಕಂಡಲ್ಲಿ ನೆಲೆನಿಂತು ಆ ನೀರಿನ ಗಾತ್ರ ಸ್ವರೂಪಗಳನ್ನು ಮತ್ತು ಆ ಪÀರಿಸರದ ಭೂಸನ್ನಿವೇಶವನ್ನು ದೃಷ್ಟಿಯಲ್ಲಿರಿಸಿಕೊಂಡು ಒಂದು ಅಂಕಿತ (ನಾಮ)ವನ್ನು ಆ ಸ್ಥಳಕ್ಕಿತ್ತು ಗುರುತಿಸಿದ.’ ಇಲ್ಲೂ ತುಳುವರ ಮೂಲತಾನಗಳು ಹೆಚ್ಚಾಗಿ ಭತ್ತದ ಗದ್ದೆಯ ಬಳಿ ಇವೆ.


“ಬೆಳುವಾಯಿ ಸಮೀಪದ ದರೆಗುಡ್ಡೆ ಮತ್ತು ಬೈಲೂರು ಸಮೀಪದ ಕಣಂಜಾರು ಬೆಟ್ಟ ಪ್ರದೇಶಗಳಲ್ಲಿ ಹೆಬ್ಬಂಡೆ ವಾಸ್ತವ್ಯದ ಕುರುಹುಗಳಿವೆ. ಇಲ್ಲಿ ಬೃಹತ್ ಶಿಲಾಯುಗಕ್ಕೂ ಹಿಂದಿನ ಕಾಲದ ಮಾನವ ವಾಸವಾಗಿದ್ದಿರಬಹುದು. ಸಾವಿರಾರು ವರುಷಗಳ ಘನಘೋರ ವರ್ಷಧಾರೆಯಿಂದ ಇಲ್ಲಿಯ ಕುರುಹುಗಳು ಹಾಳಾಗಿವೆ” ದರೆಗುಡ್ಡೆ, ಕಣಂಜಾರು ಎರಡು ಕ್ಷೇತ್ರಗಳು ಪ್ರಸಿದ್ಧ ಆಲಡೆ ಮೂಲತಾನ. ಕದ್ರಿಯ ಬೆಟ್ಟದ ಮೇಲೂ ಪಾಂಡವರ ಗುಹೆಗಳೆಂಬ ‘ಮುರಕಲ್ಲ' ಗುಹೆಗಳಿವೆ. ಕದ್ರಿಯೂ ಅನೇಕ ತುಳು ಕುಟುಂಬಗಳ ಮೂಲಸ್ಥಾನ.


ಆದಿ ಆಲಡೆ ಮೂಲತಾನ ಎಂಬ ಪದವೆ ತುಳುವರ ಆದಿಮ ಜೀವನ ಆರಂಭವಾದ ನೆಲೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಬೆರ್ಮೆರೆ ತಾನ ಬೆಟ್ಟದ ಮೇಲಿದ್ದರೂ ಸುತ್ತ ನೀರಿನ ಆಸರೆ ಇರುತ್ತದೆ. ನೀರಿನ ಆಸರೆ ಇರದ ಜಾಗದಲ್ಲಿ ಪುರಾತನ ನಾಗಬೆರ್ಮೆರ ಕ್ಷೇತ್ರ ಇಲ್ಲ. ಹಾವು ಹರಿದಾಡುತ್ತಿರುವ ಇಲ್ಲಿಯ ಭೂಮಿ ಫಲವತ್ತಾದ ಭತ್ತದ ಖಣಜಗಳು. ಹಿಂದೆ ಇಲ್ಲಿ ಸುಗ್ಗಿಯ ಬೆಳೆಯವರೆಗೆ ಭೂಮಿಯ ಮೇಲ್ಭಾಗದಲ್ಲಿ ನೀರು ಇತ್ತು ಎನ್ನುತ್ತಾರೆ. ಆ ಕಾಲದಲ್ಲಿ ಸುಗ್ಗಿಯ ಬೆಳೆ ಮಾತ್ರ ತೆಗೆಯುತ್ತಿದ್ದರು. ಅನಂತಾಡಿ ಭಾಗದಲ್ಲಿ ಎಲ್ಲಿ ಬಾವಿ, ಕೆರೆ ತೋಡಿದರೂ ಮರದ ಕಾಂಡಗಳು ಸಿಗುತ್ತವೆ ಎನ್ನುತ್ತಾರೆ ಇಲ್ಲಿಯ ಕೃಷಿಕರು. ಕಾಸರಗೋಡಿನ ಕುಳೂರು ಬೈಲಿನಲ್ಲೂ ಈಗಲೂ ಸುಗ್ಗಿ ಮತ್ತು ಕೊಳಕೆ ಬೆಳೆÉ ಮಾತ್ರ ತೆಗೆಯುತ್ತಾರೆ. ಎಣೆಲ್ ಕಾಲಕ್ಕೆ ಬೈಲು ನೀರು ತುಂಬಿ ಸಾಗರದಂತೆ ಕಾಣುತ್ತದೆ.


ಧರ್ಮಸ್ಥಳದಲ್ಲಿ (ಕುಡುಮ) ದೈವಗಳ ಉಗಮದ ಬಗ್ಗೆ ಕಥೆ ಇದೆ:

ಇಲ್ಲಿ ದೇವಸ್ಥಾನದ ಹತ್ತಿರದಲ್ಲಿ ಪೂರ್ವಕ್ಕೆ ಆಲಡ್ಕ ಬನ ಇದೆ. ಈಗಲೂ ಬನ ಮೂಲ ಸ್ವರೂಪದಲ್ಲಿ ಇದೆ. ಸ್ಥಳೀಯರ ಪ್ರಕಾರ ಧರ್ಮದೈವಗಳು ಮೊದಲು ಬಂದುದು ಆಲಡ್ಕ ಬನಕ್ಕೆ. ಬನದ ಬಳಿ ಇದ್ದ ವ್ಯಕ್ತಿಯಲ್ಲಿ ‘ಅಸರ್’ (ಬಾಯಾರಿಕೆ) ಕೇಳಿದಾಗ ಆತ ಎಳನೀರು ತರಲು ಹೋಗುತ್ತಾನೆ. ಎಳನೀರು ಹಿಡಿದು ಮರಳಿ ಬರುವಷ್ಟರಲ್ಲಿ ನಾಲ್ಕು ಧರ್ಮದೈವಗಳು ಭೂಮಿಯಿಂದ ಒಂದು ಹಾರೆ ಮಣ್ಣು ತೆಗೆಯುತ್ತಾರೆ. ನೀರು ಚಿಮ್ಮುತ್ತದೆ. ಧರ್ಮ ದೇವತೆಗಳು ನೀರು ಕುಡಿಯುತ್ತಾರೆ. ಮುಂದೆ ಎಳನೀರು ತಂದವನನ್ನು ‘ಆಜ್ರಿ ಬಂಟ’ ಎಂದು ಕರೆಯುತ್ತವೆ. ಈತನ ಮನೆಯ ಚಾವಡಿಯಲ್ಲಿ ತಾವು ನೆಲೆಯಾಗುವುದಾಗಿ ಹೇಳುತ್ತವೆ. ಕೆಲ ಕಾಲಾನಂತರ ಜೈನ ಬೀಡಿಗೆ ಹೋಗಿ ಅಲ್ಲಿ ನೆಲೆಯಾಗುತ್ತವೆ” - ಈ ಕಥೆಯು ಆದಿಮ ಮಾನವ ಒಂದೆಡೆ ನೆಲೆಯಾಗಲು ನೀರಿನಾಶ್ರಯ ಹುಡುಕಿ ಹೋಗುವುದು - ನಾಲ್ಕು ಧರ್ಮದೈವಗಳು ವಾಸದ ನೆಲೆ ಅರಸಿ ಬರುವುದು, ಇಲ್ಲಿಯ ಭೂಮಿಯಿಂದ ನೀರು ಚಿಮ್ಮಿಸುವುದು, ಇಲ್ಲಿಯೇ ನೆಲೆಯಾಗುವುದು, ಮುಂದೆ ಬೆಳೆದ ಜೈನ ಧರ್ಮ- ಹೀಗೆ ಮಾನವ ಒಂದೆಡೆ ನೆಲೆಯಾಗುವ ಹಾಗೂ ವಿಕಾಸದ ಹಂತಗಳನ್ನು ಸೂಚಿಸುತ್ತದೆ. ಇಂತಹ ಅನೇಕ ಕಥೆಗಳು ತುಳುನಾಡಿನಲ್ಲಿ ಇವೆ.


ಅಬ್ರಾಹ್ಮಣ ವರ್ಗದವರಲ್ಲಿ ಅತ್ಯಂತ ಮೇಲ್ವರ್ಗದವರೆಂದು ಗುರುತಿಸಿರುವ ಬಂಟರು/ ಜೈನರು ಹಾಗೂ ಅತ್ಯಂತ ಕೆಳವರ್ಗದವರೆಂದು ಗುರುತಿಸಿರುವ ಕೊರಗರವರೆಗೆ - ಮಾತೃಮೂಲ ಸಂಪ್ರದಾಯದ ಎಲ್ಲರಿಗೂ ‘ಆದಿ ಆಲಡೆ ಮೂಲತಾನ’ ಎಂಬುದು ಇದೆ. ಮೂಲತಾನ ಎಂಬುದು ‘ನಮ್ಮ ಹಿರಿಯರು ಬಾಳಿ ಬದುಕಿದ ಸ್ಥಳ ಇರಬೇಕು. ಮೂಲತಾನ ಎಂದರೆ ಅದೇ ಅರ್ಥ ಅಲ್ಲವೇ? ಆದಿಯಲ್ಲಿ ನಮ್ಮ ಹಿರಿಯರು ಇಲ್ಲಿ ನೆಲೆಸಿದ್ದಿರಬೇಕು’ ಎಂದು ವಿಶ್ವಾಸದಿಂದ ನಮ್ಮನ್ನೇ ಕೇಳುತ್ತಾರೆ. ‘ಆಲಡೆ’ ಅಂದರೆ ಏನು ಎಂದು ಕೇಳಿದರೆ ಆದಿ ಮೂಲತಾನ ಎನ್ನುತ್ತಾರೆ. ಆಲಡೆ ಇದ್ದು ಮತ್ತೊಂದು ಮೂಲತಾನವೂ ಇರುವವರು ಇದ್ದಾರೆ. ಆದರೆ ಆಲಡೆ ಇಲ್ಲದೆ ಮೂಲತಾನ ಇದ್ದವರು ಕಂಡುಬಂದಿಲ್ಲ.


ಮಾತೃಮೂಲ ವಂಶದವರು ಮೂಲದ ಮನೆ ಬಿಟ್ಟು, ಮೂಲದ ದೇವರನ್ನು ಬಿಟ್ಟು ಎಲ್ಲಿಗೇ ಹೋದರೂ ಅವರು ತಮ್ಮ ಮೂಲವನ್ನು, ಮೂಲತಾನದ ಆಲಡೆಯನ್ನು ಮರೆಯುವಂತಿಲ್ಲ. ಒಂದು ವೇಳೆ ಒಂದು ತಲೆಮಾರು ನಿರ್ಲಕ್ಷಿದರೂ ಮತ್ತೊಂದು ತಲೆಮಾರಿಗಾದರೂ ಅದರ ದೋಷ ತಟ್ಟುತ್ತದೆ ಎಂಬುದು ನಂಬಿಕೆ.


ಸಿರಿ ಪಾಡ್ದನದಲ್ಲಿ ಕುಲ ಬೆರ್ಮೆರ್ ಅವಜ್ಞೆಗೆ ಒಳಗಾದ ಮೂಲತಾನದ ಬಗ್ಗೆ ತನ್ನ ಸಂತಾನ ‘ಬೆರ್ಮಮಾಲವ’ನನ್ನು ಎಚ್ಚರಿಸಲು ಬ್ರಾಹ್ಮಣ ‘ಒರು’ವಾಗಿ ಬಂದು ಕೇಳುತ್ತಾರೆ:

ಬಿರ್ಮೆರ್: “ನಿನ್ನ ಆದಿ ಎಲ್ಲಿಯಪ್ಪಾ ಆಲಡೆ ಎಲ್ಲಿಯಪ್ಪಾ,
ನಿನಗೆ ದೇವರು ಯಾರು, ಬೆರ್ಮರು ಯಾರು ಎಂದು ಹೇಳು...”
ಬೆರ್ಮಮಾಲವ : “ನಾರಾಯಿಣ, ಬೆರಮಣಾ ಕೇಳಿದಿರಾ
ನನಗೆ ದೇವರು ಯಾರು ಬೆರ್ಮರು ಯಾರು,
ಬೆರ್ಮೆರ್ ಯಾರು ಎಂದು ಗೊತ್ತಿಲ್ಲ
ಆದಿ ಎಲ್ಲಿ ಆಲಡೆ ಎಲ್ಲಿ ಒಂದೂ ಗೊತ್ತಿಲ್ಲ.
ಬೆರ್ಮೆರ್ ಯಾರು ಎಂದು ನಾನು ತಿಳಿದಿಲ್ಲ
ಬೆರ್ಮೆರ್ : ನಿನಗೆ ಗೊತ್ತಿರದಿದ್ದರೆ ಯಾರಾದರೂ ಹೇಳಿದ್ದು ಕೇಳಿಲ್ಲವೆ? ನಿನ್ನ ಕಿವಿಯಲ್ಲೂ ಕೇಳಿಲ್ಲವೆ?
ಬೆರ್ಮಮಾಲವ : ಓ ಬೆರಮ್ಮಣ್ಣ್ಣಾ ದೇವೆರ್ ಯಾರು ಬೆರ್ಮೆರ್
ಯಾರೆಂದು ಇಂದು ನನಗಾದರೂ ಗೊತ್ತಾಗದೆ ಹೋಯಿತು.
ಬೆರ್ಮೆರ್ : ಇಂದು ನಿನಗೆ ಗೊತ್ತಿಲ್ಲವಾದರೆ ಹೋಗಲಿ,
ನಿನ್ನ ಆದಿ ಆಲಡೆಗೆ, ದೇವರ ಬೆರ್ಮೆರ,
  ಸಾವಿರಾರು ಭೂತಗಳ, ನೂರಾರು ಗಂಡ ಗಣಗಳ
ಬಡಗು ಲೋಕನಾಡು, ಅವಜ್ಞೆಗೆ ಒಳಗಾಗಿ ತುಂಬೆ ನೆಕ್ಕಿ ಮೂಡಿದೆ.''
ಹೀಗೆ ಬಿರ್ಮೆರ್ ಮಾನವ ರೂಪದಲ್ಲಿ ಬಿರ್ಮಾಳುವನ ಮನೆಗೆ ಬಂದು “ಮೂಲತಾನ ಆದಿ ಆಲಡೆ’ಯನ್ನು ಮರೆತ ಬಗ್ಗೆ ನೆನಪಿಸುತ್ತಾರೆ.



ಆದಿ ಆಲಡೆ ತುಳುವರ ಆದಿ ಮೂಲತಾನ
‘ಆದಿಶೇಷ, ಆದಿನಾಥ, ಆದಿನಾರಾಯಣ ಇತ್ಯಾದಿ ಸಂಕೇತಗಳೊಳಗಿನ ಆದಿ ಎಂಬ ಮಾತು ಈ ನಾಗವು ಸೃಜನಶಕ್ತಿಯ ಪ್ರತೀಕವಾಗಿರುವುದು ಗಮನಕ್ಕೆ ಬರುತ್ತದೆ.’ ತುಳುವರೂ ‘ಆದಿ ಆಲಡೆ’ ಎಂಬ ಪವಿತ್ರ ಕ್ಷೇತ್ರ ನಾಗಪರಿವಾರಗಳ ವಾಸ ಕ್ಷೇತ್ರ. ಇದು ತುಳುವರ ‘ಆದಿ ಮೂಲಸ್ಥಾನ’ ಎಂಬುದು ನಂಬಿಕೆ.


‘ನಾಗನಡೆ ಪೋಯೆರ್ ಮೂಲ ಕೇಂಡೆರ್, ಕುಮಾರನೆಡೆ ಪೋಯೆರ್ ಆಲಡೆ ಕೇಂಡೆರ್’ (ನಾಗನಲ್ಲಿಗೆ ಹೋದರು ಮೂಲ ಕೇಳಿದರು, ಕುಮಾರನಲ್ಲಿಗೆ ಹೋದರು ಆಲಡೆ ಕೇಳಿದರು). ಇದು ಕುಮಾರ ಪಾತ್ರಿ ಹೇಳುವ ನುಡಿಗಟ್ಟು. ಈ ಪ್ರಕಾರ ಮೂಲತಾನ ನಾಗನಿಗೆ ಸಂಬಂಧಿಸಿದ್ದು. ಆಲಡೆ ಕುಮಾರನಿಗೆ ಸಂಬಂಧಿಸಿದ್ದು, ಸಿರಿ-ಕುಮಾರರು ಬೆರ್ಮೆರ್ ಪರಿವಾರಗಳ ಸಂತಾನ. ಆಲಡೆ ಎಂದರೆ ಸಿರಿ ಕುಮಾರರು ಇರಲೇಬೇಕೆಂದಿಲ್ಲ. ಪಂಚದೈವಗಳು ಇರುವ ಜಾಗ ಆದಿ ಆಲಡೆ ಮೂಲತಾನ. ಸಿರಿ ಆಲಡೆಗಳು ಮಾತ್ರ ಆಲಡೆ ಎನ್ನುವುದು ಎಂಬ ನಂಬಿಕೆ ಬರುವಂತೆ ಸಿರಿ ಆಲಡೆಗಳು ಪ್ರಸಿದ್ಧಿ ಪಡೆದಿವೆ. ಆದರೆ ವಾಸ್ತವವಾಗಿ ಸಿರಿ ಆಲಡೆಯು ಆದಿ ಮೂಲತಾನವೇ. ಅಲ್ಲೂ ನಾಗನೇ ಪ್ರಧಾನ. ಆದರೆ ಇಂತಹ ಜಾಗದಲ್ಲಿ ವೈದಿಕರ ಪ್ರವೇಶ ಆದಾಗ ಆಚರಣೆಗಳಲ್ಲಿ ಪರಿವರ್ತನೆ ಆಗಿವೆ. ಭೂತ ಶಕ್ತಿ ನಾಗಬಿರ್ಮೆರ (ಉಲ್ಲಾಯ) ಗುಂಡವು ಬ್ರಹ್ಮಲಿಂಗೇಶ್ವರ ಅಥವಾ ದುರ್ಗೆ ಎನ್ನುವ ಹೆಸರಲ್ಲಿ ಆಗಮ ಸಂಪ್ರದಾಯಕ್ಕೆ ಪರಿವರ್ತನೆಯಾಗುತ್ತಿದೆ. ಆಗ ‘ನಾಗ’ ಕ್ಷೇತ್ರದ ಹೊರಗೆ ಬನದಲ್ಲಿ ಮಾತ್ರ ಉಳಿಯುತ್ತಾನೆ.
“ತುಳುವರಲ್ಲಿ ಕುಟುಂಬದ ಆದಿಮೂಲವನ್ನು ಆಲಡೆಯೆನ್ನುತ್ತಾರೆ. ಪ್ರತಿ ಕುಟುಂಬಕ್ಕೂ ಮುಖ್ಯವಾಗಿರುವ ಮೂಲಸ್ಥಾನದಲ್ಲಿ ಐದು ದೈವಗಳ ಒಂದು ಸಂಕೀರ್ಣ ಆರಾಧನೆಯನ್ನು ಕಾಣಬಹುದು. ಬೆರ್ಮೆರ್/ಬ್ರಹ್ಮ, ಲೆಕ್ಕಸಿರಿ/ರಕ್ತೇಶ್ವರಿ, ಮಯಿಸಂದಾಯ/ ಕ್ಷೇತ್ರಪಾಲ, ನಂದಿಗೋಣ/ನಂದಿ ಮತ್ತು ನಾಗ. ಆಲಡೆಯ ಈ ದೈವಗಳಿಗೆಲ್ಲ ಬೆರ್ಮೆರ್ ಅಧಿದೇವತೆ. ಹಾಗಾಗಿ ಆಲಡೆಯನ್ನು ಬ್ರಹ್ಮಸ್ಥಾನ/ಮೂಲಸ್ಥಾನ/ಬ್ರಹ್ಮ ಆಲಡೆಯೆನ್ನುವುದು.’


ಮೂಲತಾನ ಆದಿ ಆಲಡೆ ಎನ್ನುವುದು ತುಳುವರ ಕುಟುಂಬದ ಅಥವಾ ಬುಡಕಟ್ಟಿನ ಮೂಲ ಮಾನವರು ನೆಲೆನಿಂತು ವ್ಯವಸಾಯ ಆರಂಭಿಸಿದ ಆದಿ ಸ್ಥಳ ಎನ್ನುವುದಕ್ಕೆ ಆಧಾರ ಸಿಗುತ್ತದೆ. ಅವರ ಕೃಷಿ ಕ್ಷೇತ್ರದ ಪರಿಧಿಯಲ್ಲಿ ಇರುವ ಕಾಡಿನಲ್ಲಿ ‘ನಾಗಬೆರ್ಮೆರ್’ ದೈವವಾಗಿ ಆರಾಧನೆ ಪಡೆದಿರುವನೆಂಬುದಕ್ಕೆ ಈಗ ಇರುವ ಕುರುಹುಗಳು ಸಾಕಾಗುತ್ತವೆ. ಹೀಗೆ ಬೇರೆ ಬೇರೆ ಗುಂಪುಗಳಾಗಿ ನೆಲೆಯಾದ ಪ್ರದೇಶದಲ್ಲಿ “ಆದಿ ಆಲಡೆ ಮೂಲತಾನ” ಗಳಿವೆ. ಇವು ದೈವಗಳು ನೆಲೆಯಾದ ಪವಿತ್ರ ಕ್ಷೇತ್ರವಾಗಿದೆ. ಉಪಾಸನಾ ಆಚರಣೆಗಳ ಕೇಂದ್ರಸ್ಥಳವಾಗಿವೆ. “ಮೂಲಸ್ಥಾನದ ಕಲ್ಪನೆಯಲ್ಲಿ ಭಿನ್ನತೆಯಿದ್ದರೂ ಮೂಲಸ್ಥಾನವು ಒಂದು ಕುಟುಂಬವು ಆದಿಯಲ್ಲಿ ನೆಲೆಸಿದ ನೆಲೆ ಎಂಬುದು ಖಚಿತ. ಒಟ್ಟಿನಲ್ಲಿ ಅದು ಒಂದು ಕುಟುಂಬದ ರಾಜಕೀಯ ಧಾರ್ಮಿಕ ಕೇಂದ್ರಸ್ಥಾನ ಎನ್ನಬಹುದು. ಒಂದು ಕುಟುಂಬವು ಯಾವುದೋ ಅಲೌಕಿಕ ಕಾರಣಗಳಿಂದಾಗಿ ಕ್ಲೇಶಕ್ಕೊಳಪಟ್ಟಾಗ ಅವರ ಸದಸ್ಯರು ಮೂಲಸ್ಥಾನಕ್ಕೆ ತೆರಳಿ, ತಾವು ಬದುಕಿನಲ್ಲಿ ಏನು ತಪ್ಪು ಮಾಡಿದ್ದೇವೆ ಎಂದು ಬೆರ್ಮ ಆಳುವರು ಸಿರಿಪಾಡ್ದನದಲ್ಲಿ ಕೇಳಿದಂತೆ ಕೇಳುತ್ತಾರೆ.”14. ಕ್ಲಾಸ್ ಅವರು “ಅರಮನೆಯ ವಿವರದಲ್ಲಿ ಬಳಸುವ ಪದಗಳನ್ನೇ ಈ ಆಲಡೆಯ ವಿಷಯದಲ್ಲಿ ಬಳಸಲಾಗಿದೆ. ಈ ಗುಡಿಗಳು ಜನ ದೂರವಾದ ಬಂಜರುಭೂಮಿಗಳಲ್ಲಿ ಕಾಡಿನ ಸಮೀಪ ಇರುವುದು ಗಮನಾರ್ಹ ಸಂಗತಿ. ಇದು ಸಾಮಾನ್ಯವಾಗಿ ಪವಿತ್ರಸ್ಥಾನವಾಗಿರುವ ಮೂಲಸ್ಥಾನ” ಎಂದೂ ಬರೆಯುತ್ತಾರೆ. ನಾಗಬೆರ್ಮೆರನ್ನು ಅಥವಾ ಬರೇ ನಾಗನನ್ನು ಕಾಡು ಇಲ್ಲದೆ ನಂಬುವ ಪದ್ಧತಿ ತುಳುನಾಡಿನಲ್ಲಿ ಇಲ್ಲ. ‘ನಾಗಬನ’ ‘ದೇವೆರೆ ಗುಡ್ಡೆ’ ಎಂಬುದು ರೂಢಿ ಪದ. ‘ನಾಗಕಟ್ಟೆ’, ‘ನಾಗದೇವಸ್ಥಾನ-ದೈವಸ್ಥಾನ’ ಎನ್ನುವ ರೂಢಿ ಇಲ್ಲ.


ಕೋಟಿ ಚೆನ್ನಯರ ಪಾಡ್ದನದಲ್ಲಿ ನಲ್ವತ್ತೆಂಟು ಆದಿಮೂಲಸ್ಥಾನಗಳು ನಿರೂಪಿತ ವಾಗಿವೆ. ಸಿರಿ ಪಾಡ್ದನದಲ್ಲಿ ಮತ್ತು ಉಡುಪಿಯ ಉತ್ತರ ಭಾಗದ ಚಿಕ್ಕು ಕಥೆಯಲ್ಲಿ 66 ಮೂಲತಾನಗಳ ಹೆಸರು ಬರುತ್ತವೆ. ನಮ್ಮ ಮಾಹಿತಿ ಸಂಗ್ರಹ ಕಾಲಕ್ಕೆ ಅನೇಕ ಮೂಲತಾನಗಳು ಕಾಣುತ್ತಿವೆ. 20ನೆಯ ಶತಮಾನದ ಕೊನೆಯ ದಶಕಗಳಲ್ಲಿ ಆದಿ ಮೂಲತಾನದಿಂದ ಮಣ್ಣು ತಂದು ಹೊಸದಾಗಿ ಮಾಡಿದ ಮೂಲತಾನಗಳು ಇವೆ. ಈ ವಿವರಗಳು ಮುಂದೆ ಬರಲಿವೆ. “ಕೋಟಿ ಚೆನ್ನಯರು ಬದುಕಿನಲ್ಲಿ ಮಾಡಿದ ಪಾಪಕ್ಕೆ ಬಡಗು ಗಂಗೆಯಲ್ಲಿ ಸ್ನಾನ ಮಾಡಿ ಬರಬೇಕು ಎಂದು ಕೋಟಿ ಚೆನ್ನಯರ ಕುಲ ಬೆರ್ಮೆರ್ ‘ಕೆಮ್ಲಾಜೆ ಬೆರ್ಮೆರ್’ ಮಾಯದ ಕೋಟಿ ಚೆನ್ನಯರಿಗೆ ಆದೇಶಿಸುತ್ತಾರೆ. ಆಗ ಇವರು ನಲ್ವತ್ತೆಂಟು ಆದಿಮೂಲ ಸ್ಥಾನಗಳನ್ನು ಸಂದರ್ಶಿಸುತ್ತಾರೆ. ಅದರಂತೆ “ಗುತ್ತು-ಬಲ್ಲಾಳರಿಗೆ ಕೈಮಾಡ-ಪೂಮಾಡ, ನೆಲೆಯುಪ್ಪರಿಗೆ ಪೂಕಾರೆ, ಮೆರ್ವ ಮಾಡಿಸಿ . . . ನಲ್ವತ್ತೆಂಟು ಆದಿಮೂಲ ಆಲಡೆಗಳನ್ನು ನೋಡಿ ಬಂದರು . . .”


ಆರಂಭದಲ್ಲಿ ಕರಾವಳಿಯ ನಲ್ವತ್ತೆಂಟು ಅಥವಾ ಅರವತ್ತಾರು ಕಡೆ ಮಾನವ ಶಾಶ್ವತವಾಗಿ ನೆಲೆಯನ್ನು ಕಲ್ಪಿಸಿರಬೇಕು.
ತುಳುನಾಡ ಸಿರಿಯ ಮಗಳು ಸೊನ್ನೆ ಪುಷ್ಪವತಿಯಾಗಿ, ಫಲವತಿಯಾಗಬೇಕೆಂದು ಸೊನ್ನೆಯ ಅಜ್ಜಯ್ಯ ಮಂಜು ಪೆರ್ಗಡೆ ಹೀಗೆ ಹರಕೆ ಹೇಳುತ್ತಾರೆ. “ನಾನು ಸತ್ಯವನ್ನು ನಂಬಿರುವುದು ನಿಜವಾದರೆ ನಮ್ಮ ಸೊನ್ನೆ ಮೈನೆರೆಯಬೇಕು, ಗರ್ಭವತಿಯಾಗಿ ಮಕ್ಕಳನ್ನು ಹೆರಬೇಕು. ಸೊನ್ನೆ ಹೆತ್ತ ಕೂಡಲೇ ಮುಜಲೊಟ್ಟು ಬೆರ್ಮರಿಗೆ ಗುಂಡ ಕಟ್ಟಿಸುತ್ತೇನೆ. ನಿಮ್ಮ ‘ಸ್ಥಾನಮೂಲ’ ಉದ್ಧಾರ ಮಾಡಿಸುತ್ತೇನೆ... ಮೂಲದ ಮೈಸಂದಾಯ, ನಂದಿಗೋನಗೆ ಆಲಡೆ ಕಟ್ಟಿಸಿ ಹುರುಳಿ ಕಾಯಿ ಹರಕೆ ಕೊಡುತ್ತೇನೆ”


ಕಾಡ್ದೆರ್ಲು/ನಂದಿಗೋನ ಪಾಡ್ದನದಲ್ಲಿ ನಂದಿಗೋನನಿಗೆ ಆದಿಗೆ ಹೋಗಲು ಅಬ್ಬಗ ದಾರಗರು ಸೂಚಿಸುತ್ತಾರೆ. “ಆದಿಗೆ (ಆದಿಮೂಲಕ್ಕೆ) ಹೋಗು ಮಾಯ ಆಗು, ನಂದಿಗೋನ ರೂಪದಲ್ಲಿ ನರಪುರಿಗಳಲ್ಲಿ ನ್ಯಾಯ ನೆಲೆಸುವಂತೆ ಮಾಡು.” (‘ಅಕುಲು ಶಾಪ ವರ ಒಂಜ ಕೊರ್ತೆರ್ ಯೇ ಆದಿಗ್ ಪೋಯೆಲ ಮಾಯನೆ ಆಲ ಆದಿಡ್ ಈ ನಂದಿಗೋನೆಲಾ ಆದ್ ನರ ಪುರಿಕ್‍ಲೆಡ್ ನ್ಯಾಯ ಪನ್‍ಲಾ’ (ಹೇಳಿದವರು ಎಂಕಮ ಹೆಂಗ್ಸು ಕೊಲ್ಲೂರು ಮುಲ್ಕಿ, ಪ್ರಾಯ 65)


ಕೊರಗ ತನಿಯ ಪಾಡ್ದನದಲ್ಲಿ ಅನಾಥ ಬಾಲಕನನ್ನು ಮನೆಗೆ ತಾಯಿ ಕರೆಯುವಾಗ ಮಗಳು ಮಂಜಕ್ಕೆ ಕೇಳುತ್ತಾಳೆ: “ಆತನ ಮೂಲ ಯಾವುದು ಬಳಿ ಯಾವುದು ತಿಳಿದು ಸೇರಿಸಿಕೊಳ್ಳಿ” ಎಂದು. ‘ಆಯನ ಬರಿ ಬಾಂದ್ರ ಕೇನೊಡು ಆಯೆನೆ ಮೂಲ ಕೇನೊಡು’ ಆಗ ಬೈರಕ್ಕ ಬೈದೆದಿ ಕೇಳುತ್ತಾರೆ: ನೀನು ಯಾವ ಮೂಲದವ ಯಾವ ಬಳಿಯವ” ಎಂದು. (ಈ ದಾವಿನ ಬರಿನಾಯೆ ಮಗಾ ದಾವಿನ ಮೂಲದಾಯೆ) ಅದಕ್ಕೆ ಕೊರಗ ತನಿಯನ ಉತ್ತರ: “ನನಗೆ ಸಾಲ ಎಂದರೆ ಅಬ್ಬೆ, ಕದ್ರಿ ಕಾಂತಣ ದೇವರ, ಮೂಲ ಎನ್ಸೂರ, ಬಳಿ ಸೋಮನತ್ತ” (“ಎಂಕ್ ಸಾಲ ಪನ್ನಾಗ ಅಪ್ಪೆರೆ, ಕದ್ರ ಕಾಂತಣ ದೇವೆರ್ನ, ಮೂಲ ಎನ್ಸೂರ ಮೂಲೊ, ಬರಿ ಪನ್ನಾಗ ‘ಸೋಮನತ್ತ ಬರಿತಾಯೆ’”) (ಅನಂತಾಡಿಯ ವಿಶ್ವನಾಥ (ನಲ್ಕೆ) ಹೇಳಿದ ಕೊರಗ ಪಾಡ್ದನದಲ್ಲಿ ಮೂಲ ‘ಬಾಗೆಟ್ಟು ಬನ್ನಾಲೆ’ ಎನ್ನುತ್ತಾನೆ.)


ಸಿರಿ ಪಾಡ್ದನದಲ್ಲಿ ಸಿರಿ ದೇಶಾಂತರ ಹೋಗುವಾಗ ‘ಮೂಲದ ಮಯಿಸಂದಾಯಗ್ ಕದ್ಕೆ ದಿಂಜಾವೊಂದು ಉಪ್ಪುಲೆ’ (ಮೂಲದ ನಂದಿಗೋನನಿಗೆ ಗರಿಕೆ ಹುಲ್ಲು ಹಾಕುತ್ತಾ ಇರಿ) ಎಂದು ಮುಂಡಾಲ ವರ್ಗದವರಿಗೆ ಸಾಪ(ವರ) ನೀಡುತ್ತಾಳೆ.
“ಈ ಮೂಲಸ್ಥಾನದಲ್ಲಿ ಬೆರ್ಮರು ಆಲಡೆಯೊಂದಿಗೆ ಪ್ರದೇಶದ ರಕ್ಷಕ ದೈವ, ಕ್ಷೇತ್ರಪಾಲ, ಫಲ ಶಕ್ತಿಯ ದೈವ ನಾಗ, ಕುಲಲಾಂಛನ ದೈವಗಳಾದ ನಂದಿಗೋಣ, ಪಂಜುರ್ಲಿ ಹಾಗೂ ಹೆಣ್ಣುದೈವಗಳಾದ ರಕ್ತೇಶ್ವರಿ, (ತು.ಲೆಕ್ಕಿಸಿರಿ) ಚಿಕ್ಕು, ಅಬ್ಬೆ ಅಥವಾ ಅಬ್ಬಗ-ದಾರಗ ಹಾಗೂ ಇನ್ನಿತರ ಕ್ಷುದ್ರದೈವಗಳ ಗುಡಿಗÀಳಿರುತ್ತವೆ. ಸಾಮಾನ್ಯವಾಗಿ ಸಿರಿ ದೈವಾವೇಶದÀ ಮತಾಚರಣೆಯು ಇಲ್ಲಿಯೇ ನಡೆಯುತ್ತದೆ. ವಾರ್ಷಿಕ ಹಬ್ಬ ಜಾತ್ರೆಗಳ ಸಂದರ್ಭಗಳಲ್ಲಿ ತಮ್ಮನ್ನು ಪ್ರತಿನಿಧಿಸಲು ಮನೆಯಿಂದ ಒಬ್ಬನನ್ನಾದರೂ ಮೂಲತಾನಕ್ಕೆ ಕಳುಹಿಸಿಕೊಡುತ್ತಾರೆ. ಹಾಗೆ ಹೋಗÀದಿದ್ದಲ್ಲಿ ಕುಟುಂಬದ ಭೂತಗಳು ಹಾಗೂ ಅವುಗಳ ಅಂಕೆಯೊಳಗಿರುವ ಕುಟುಂಬದ ಪೂರ್ವಜರ ಪ್ರೇತಾತ್ಮಗಳು (ಸೈತಿನಕುಲು) ಸಂತಾನ ಹೀನತೆ, ಕುಟುಂಬ ಕಲಹಗಳನ್ನು ತಂದು ಹಾಕಿ ಮನುಷ್ಯರನ್ನು ಗೋಳು ಹೊಯ್ಯಿಸಿ ಸೇಡು ತೀರಿಸಿಕೊಳ್ಳುತ್ತವೆ ಎಂಬ ನಂಬಿಕೆಯಿದೆ. ``ಮೂಲಸ್ಥಾನದ ಕಲ್ಪನೆಯಲ್ಲಿ ಭಿನ್ನತೆ ಯಿದ್ದರೂ ಮೂಲಸ್ಥಾನವು ಒಂದು ಕುಟುಂಬವು ಆದಿಯಲ್ಲಿ ನೆಲೆಸಿದ ನೆಲೆ ಎಂಬುದು ಖಚಿತ. ಒಟ್ಟಿನಲ್ಲಿ ಅದು ಒಂದು ಕುಟುಂಬದ ರಾಜಕೀಯ ಧಾರ್ಮಿಕ ಕೇಂದ್ರಸ್ಥಾನ ಎನ್ನಬಹುದು. ಒಂದು ಕುಟುಂಬವು ಯಾವುದೋ ಅಲೌಕಿಕ ಕಾರಣಗಳಿಂದಾಗಿ ಕ್ಲೇಶಕ್ಕೊಳಪಟ್ಟಾಗ ಅವರ ಸದಸ್ಯರು ಮೂಲಸ್ಥಾನಕ್ಕೆ ತೆರಳಿ, ತಾವು ಬದುಕಿನಲ್ಲಿ ಏನು ತಪ್ಪು ಮಾಡಿದ್ದೇವೆ ಎಂದು ಬೆರ್ಮ ಆಳ್ವÀರು ಸಿರಿಪಾಡ್ದನದಲ್ಲಿ ಕೇಳಿದಂತೆ ಕೇಳುತ್ತಾರೆ.”19 ಹೀಗೆ ಮೂಲತಾನ ಆದಿ ಆಲದೆ ತುಳು ಜನಪದ ಧರ್ಮದ ದೈವ ಸಂಕೀರ್ಣವಾಗಿದೆ.


ಹುಟ್ಟಿನ ಚಿತ್ತಾರಿ/ಚಿತ್ತೇರಿ ಪರಿಕಲ್ಪನೆ


ತುಳುವರು “ಮೂಲತಾನ” ಎಂದು ಕರೆಯುವ ಜನಪದ ಪರಂಪರೆಯ ಆರಾಧನಾ ಕೇಂದ್ರವನ್ನು ಕುಂದಾಪುರದ ಜನರು “ಹುಟ್ಟಿನ ಚಿತ್ತಾರಿ/ಚಿತ್ತೇರಿ”ಎಂದು ಕರೆಯುತ್ತಾರೆ. ಬಂಟ್ವಾಳ ತಾಲೂಕಿನ ಅನಂತಾಡಿಯಲ್ಲಿ ಮೂಲತಾನದಲ್ಲಿ ಇರುವ ಉಲ್ಲಾಲ್ತಿ ದೈವ ಸಂಕೀರ್ಣವನ್ನು ‘ಚಿತ್ತರಿಗೆ' ಎನ್ನುತ್ತಾರೆ. ‘ಚಿತ್ತಾರಿ’ ಹಾಡು ಎನ್ನುವುದು ನಾಗಮಂಡಲದಲ್ಲಿ ನಾಗÀನಿಗೆ ಹಾಡುವ ಸ್ತುತಿ ಹಾಡು. “ಸಂಸ್ಕøತದಲ್ಲಿ ಚಿತೆ ಎಂದರೆ ಹೆಣವನ್ನು ಸುಟ್ಟು ಬೂದಿಯನ್ನು ರಾಶಿ ಮಾಡುವುದು ಎಂದು ಅರ್ಥ. ಅದಕ್ಕೆ ಸಂಬಂಧಿಸಿದ್ದು ಚೈತ್ಯ. ಸತ್ತವರ ಚೇತನಗಳು ಮನೆ ಮಾಡಿಕೊಂಡಿರುವುದು ಎನ್ನುವುದು ಪ್ರಾಚೀನ ಕಲ್ಪನೆ.”

ತುಳುವರ ಮೂಲತಾನವೂ ‘ಹುಟ್ಟು ಸಾವಿನ’ ಕ್ಷೇತ್ರ. ಇಲ್ಲಿ ಫಲವಂತಿಕೆಯ ಉಪಾಸನೆಯೂ ನಡೆಯುತ್ತಿದೆ. ಅಲ್ಲಿರುವ ಚೈತ್ಯದ ಉಪಾಸನೆಯೂ ನಡೆಯುತ್ತಿದೆ. ತುಳು ಭಾಷೆಯಲ್ಲಿ ಚೈತ್ಯವನ್ನು ‘ಮುಡಿಂಜ’ ಎನ್ನುತ್ತಾರೆ. ಚಿತ್ರಬೈಲು, ಚಿತ್ತರಿಗೆ (ಅನಂತಾಡಿ ಉಲ್ಲಾಲ್ತಿಯ ಮೂಲಕ್ಷೇತ್ರ) ಚೈತ್ಯ ಮೂಲದಿಂದ ಬಂದ ಹೆಸರುಗಳು.


“ಸಿರಿ ಹಾಗೂ ಬೆರ್ಮರ ಆರಾಧನೆಯ ಪ್ರಮುಖ ಕೇಂದ್ರಗಳಲ್ಲಿ ಹಿರಿಯಡ್ಕ ಒಂದು. ಆದರೆ ಪಾಡ್ದನದ ಯಾವ ಭಾಗದಲ್ಲೂ ಈ ಹೆಸರು ಉಲ್ಲೇಖವಿಲ್ಲದಿರುವುದು ಕುತೂಹಲದಾಯಕ ಅಂಶ. ಆದರೆ ಇಲ್ಲಿ ಬೆರ್ಮರ (ಬ್ರಹ್ಮ) ಆರಾಧನೆ ನಡೆಯುತ್ತಿದೆ. ಪ್ರತಿ ಸೋಮವಾರ ನಡೆವ ದರ್ಶನದಲ್ಲಿ ಪಾತ್ರಿ ಮೈದುಂಬಿ ದೈವವಾಣಿಯನ್ನು ನುಡಿಯುವುದು ಇದೆ. ಇಲ್ಲಿನ ಬೆರ್ಮರ ಗುಡಿ ಅತ್ಯಂತ ಪ್ರಾಚೀನ ಗುಡಿಗಳಲ್ಲಿ ಒಂದು ಎನ್ನಲಾಗಿದೆ. ಪೆರಿಯಡ್ಕ ಪದದ ಪೆರಿಯ ಎಂಬ ಪದವು ಹಳೆಯ ಪ್ರಾಚೀನ (ಹಿರಿದು) ಅಡಕ (ಎಂದರೆ ಹೂಳಿಡುವ ಪ್ರದೇಶ). ಅಪಾಯಕಾರಿ ಮಲಿನ ಪ್ರದೇಶ, ಅರಣ್ಯ ಪ್ರದೇಶ ವನ್ಯಭೂಮಿ ಎಂದರ್ಥ. 18ನೆಯ ಶತಮಾನದ ಹಿಂದೆ ಈ ದೇವಾಲಯಕ್ಕೆ ಹೊಂದಿಕೊಂಡಂತೆ ಯಾವುದೇ ಪೇಟೆ ಪಟ್ಟಣ ಇರಲಿಲ್ಲ. ಬ್ರಾಹ್ಮಣನೊಬ್ಬನ ಮನೆ ಹಾಗೂ ಅಂಗಡಿ ಮಾತ್ರ ಅಲ್ಲಿ ಇತ್ತು ಎನ್ನಲಾಗಿದೆ.''

ಬುಖನಾನ್ ಪ್ರಕಾರ ‘ಒಂದು ಅಂಗಡಿ ಮಾತ್ರ ಇತ್ತು ಮತ್ತು ಒಂದು ದೊಡ್ಡ ಶಕ್ತಿ ದೇವಸ್ಥಾನ ಇತ್ತು. ಅಲ್ಲಿ ಒಬ್ಬನೇ ಬ್ರಾಹ್ಮಣ ಅರ್ಚಕನಾಗಿ ಕೆಲಸ ಮಾಡುತ್ತಿದ್ದ, ಹೀಗಾಗಿ ಅಲ್ಲಿ ರಕ್ತಾಹಾರ ಇರಲಿಲ್ಲ’. ಆದರೆ ಹಿರಿಯಡ್ಕ ಆಲಡೆಯ ಬಾಗಿಲ ಪ್ರವೇಶದ್ವಾರದ ಬಳಿ ‘ಪಟ್ಣಶೆಟ್ಟಿ’ ಮನೆ ಇದೆ. ‘ಪಟ್ಣಶೆಟ್ಟಿ’ ವ್ಯಾಪಾರಿಗಳ ಮೇಲ್ವಿಚಾರಕ. ಹೀಗಾಗಿ ಇಲ್ಲಿ ಪಟ್ಟಣ ಇದ್ದಿರಬೇಕು. ‘ಪಟ್ಣ’ ಇದ್ದಲ್ಲಿ ಮಾತ್ರ ‘ಪಟ್ಣಶೆಟ್ಟಿ’ ಮನೆ ಇರುತ್ತದೆ ಎನ್ನುವುದು ಐತಿಹಾಸಿಕ ಸತ್ಯ.


ಆಲಡೆ ಪದದ ವ್ಯುತ್ಪತ್ತಿ


ತುಳು ನಿಘಂಟು: ಆಲ=ಸ್ಥಳನಾಮ ಘಟಕ; ಆಲ=ಆಲಡೆ, ಬ್ರಹ್ಮಸ್ಥಾನ; ಆಲಂದ= ಆಲಡೆ, ಬ್ರಹ್ಮಸ್ಥಾನ, ಆಲ=ಪಂಚದೈವಗಳು ನೆಲೆಗೊಂಡಿರುವ ಸ್ಥಳ. ಬ್ರಹ್ಮ, ನಾಗ, ರಕ್ತೇಶ್ವರಿ, ನಂದಿಗೋಣ, ಮೊದಲಾದ ದೈವಗಳ ಗುಡಿಗಳ ಸಂಕೀರ್ಣ. ತುಳು ನಿಘಂಟು ಆಲಡೆಯ ಪ್ರಸ್ತುತ ಧಾರ್ಮಿಕ ಸ್ವರೂಪವನ್ನು ವಿವರಿಸುತ್ತದೆ.

ಕನ್ನಡ ನಿಘಂಟು: ಆಲ ಆಂದರೆ ಹಾಲು ಮರಗಳಲ್ಲಿ ಒಂದು. ನಿಗ್ರೋಧ ವಟವೃಕ್ಷ ಇತ್ಯಾದಿ. ಆಲ: ವಿಷಪ್ರಾಣಿಗಳು ಬಿಡುವ ದ್ರವ. ಆಲದ+ಎಡೆ=ವಿಷದ ಹಾವುಗಳ ಎಡೆ, ವಿಷ ಪ್ರಾಣಿಗಳ ಕ್ಷೇತ್ರ.

ಆಲಡೆಯ ನೀರ್‍ಗುಂಡಿಗಳು
ಆದಿ ಆಲಡೆಗಳ ಕ್ಷೇತ್ರಗಳಲ್ಲಿ ಆಲದ ಗುಂಡಿ, ಆಲಗುಂಡಿ, ಆಲದ ಮಜಲು, ಬೆರ್ಮೆರೆ ಕಂಡ, ಬೆರ್ಮೆರೆ ಕೆರೆ, ಬೆರ್ಮೆರೆ ಕೆದು, ಬೆರ್ಮೆರೆ ಗುಂಡಿ, ಬೆರ್ಮೆರೆ ಮಡು. ಸಿರಿ ಗುಂಡಿ, ಸಿರಿ ಕೆರೆ, ಉಮೆ ಗುಂಡಿ, ಕುದ್ರೆ ಗುಂಡಿ, ಉರ್ಮಿಕಟ್ಟ - ಹೀಗೆ ನೀರಿನ ಮೂಲಗಳು ಇವೆ. ಇಂತಹ ಗುಂಡಿಗಳು ಬೆರ್ಮರ ಕ್ಷೇತ್ರದ ಬಳಿಯ ನದಿಯಲ್ಲಿ, ತೊರೆಯಲ್ಲಿ ಕೂಡಾ ಇರುತ್ತವೆ. ಸಿರಿ ತನ್ನ ಮಗು ಸೊನ್ನೆಗೆ ಜನ್ಮ ನೀಡುವುದು ‘ಸನ್ನೆ ಗುರಿ’ಯಲ್ಲಿ. ಇದು ನೀರು ಹರಿದು ಹೋಗುವ ಇಳಿಜಾರದ ಗುಡ್ಡದ ಮೇಲೆ ಇಂದಿಗೂ ಇರುವ ಕೆಸರು ತುಂಬಿದ ಸಣ್ಣ ಕೆರೆ. ಕಾಡಿನÀ ಮಧ್ಯೆ ಇದ್ದ, ಈಗಲೂ ಹೆಚ್ಚಿನ ಕಡೆ ಕಾಡಿನಲ್ಲಿ ಇರುವ ಬೆರ್ಮೆರ ಆಲಡೆ ಕ್ಷೇತ್ರಗಳಲ್ಲಿ ಬೇಸಗೆಯಲ್ಲೂ ಅಂತರ್ಜಲ ಅಧಿಕ. ಈ ಆಲಡೆ ಬನಗಳ ಕಾಲ ನಿರ್ಣಯ ಮಾಡಲು ಇಲ್ಲಿ ಉತ್ಖನನ ಮಾಡಬೇಕಷ್ಟೆ. 2011ರಲ್ಲಿ ಕಾರ್ಕಳ ತಾಲೂಕಿನ ನಿಟ್ಟೆ ಸಮೀಪದ ಕಲ್ಯ ನಾಗಬ್ರಹ್ಮಸ್ಥಾನದಲ್ಲಿ 12-13ನೇ ಶತಮಾನಕ್ಕೆ ಸೇರಿದ ಕೆಲವು ಶಿಲ್ಪಗಳು ಪತ್ತೆಯಾಗಿವೆ ಎಂದ ವರದಿಯಾಗಿದೆ. ಬೇಸಗೆಯ ತಿಂಗಳುಗಳಲ್ಲಿ ನಡೆಯುವ ಬೆರ್ಮೆರೆ ಕ್ಷೇತ್ರದ ವಾರ್ಷಿಕ ಆಚರಣೆಯ ದಿನ ಬನದ ಒಳಗೆ ಕೆಲವೇ ಅಡಿಗಳಷ್ಟು ಅಗೆದರೆ ಅಡುಗೆಗೆ ಯೋಗ್ಯವಾದ ನೀರು ದೊರಕುತ್ತದೆ. ಅದೇ ನೀರನ್ನು ಬೇಸಿಗೆಯಲ್ಲಿ ನಡೆಯುವ ವಾರ್ಷಿಕ ಸಾರ್ವಜನಿಕ ಅನ್ನ ಸಮಾರಾಧನೆಯ ಅಡುಗೆಗೆ ಉಪಯೋಗಿಸುತ್ತಾರೆ. ಬೇರೆ ನೀರು ಉಪಯೋಗಿಸಬಾರದು ಎಂಬ ನಂಬಿಕೆ ಇದೆ.


ತುಳುನಾಡಿನಲ್ಲಿ ‘ನಾಗ ಬೀದಿ’ ಎಂದು ಕೆಲವು ಸ್ಥಳಗಳನ್ನು ಗುರುತಿಸುತ್ತಾರೆ. ನಾಗ ಬೀದಿಗಳಲ್ಲಿ ಎರಡು ವಿಧ. ಒಂದು ‘ಸ್ಥಿರ ಬೀದಿ’, ಇನ್ನೊಂದು ‘ಚರ ಬೀದಿ’. ಸಾಮಾನ್ಯವಾಗಿ ನಾಗ ಬೀದಿಗಳಲ್ಲಿ ನಾಗ ಸಂಚಾರ ಇರುತ್ತದೆ. ಹೀಗಾಗಿ ಅಲ್ಲಿ ಮನೆ ಕಟ್ಟಬಾರದು ಎಂಬ ನಿಷೇಧ ಇದೆ. ‘ಸ್ಥಿರ ಬೀದಿ’ಯ ಅರ್ಥ ಆ ಭೂಮಿಯಡಿಯಲ್ಲಿ ನೀರಿನ ನಿಕ್ಷೇಪ ಇದೆ ಎಂದು. ಚರ ಬೀದಿಯಲ್ಲಿ ಆ ಭೂಮಿಯಡಿಯಲ್ಲಿ ಅಂಕು ಡೊಂಕಾಗಿ ನೀರು ಹರಿಯುತ್ತದೆ. ನಾಗನೇ ನೀರು ಆಗಿ ನೀರೆ ನಾಗನಾಗಿ ಕಾಶ್ಮೀರ ಸಂಸ್ಕøತಿಯಲ್ಲಿ ಕಾಣಬರುತ್ತದೆ.  ಹೀಗಾಗಿ ನಾಗಭೂಮಿಯಾದ ಇಲ್ಲಿ, ನೀಲನಾಗ, ಶೇಷನಾಗ, ಶೂಕ್ರನಾಗ, ಅನಂತನಾಗ-ಇತ್ಯಾದಿ ಸ್ಥಳನಾಮಗಳು ಇವೆ. ‘ನೀಲ’ ಎನ್ನುವುದು ನದಿಯ ಹೆಸರು. ಅನಿಲ್ ಭಟ್ ಅವರ ಪ್ರಕಾರ ಇದು ಜೀಲಮ್ ನದಿಯ ಮೂಲ ಹೆಸರು. ಕಾಶ್ಮೀರಿ ಭಾಷೆಯಲ್ಲಿ ನಾಗ ಅಂದರೆ ನೀರಿನ ಸೆಲೆ. ಅನಂತ್ ನಾಗ ಎಂದರೆ ಜಲಮೂಲ ಅನಂತವಾಗಿರುವ ಸ್ಥಳ. ‘ನಾಗಿನಿ’ ಸರೋವರ ಕಡು ಆಳವಾಗಿ ಇರುವ ಕಾರಣ ಅದು ನೀಲಿಯಾಗಿದೆ. ‘ಸಲಕ್ ನಾಗ’, ‘ಮಲಿಕ್ ನಾಗ’, ‘ನಾಗ್ ಬಾಲ್’ - ಇತ್ಯಾದಿ (ಪವಿತ್ರ) ಸರೋವರಗಳು ನಾಗನ ಹೆಸರಿನಲ್ಲಿವೆ. ಏಳು ಶಿಖರಗಳ ಪರ್ವತದ ಹೆಸರೂ ‘ಶೇಷನಾಗ.’ ಅದರ ಬುಡದಲ್ಲಿಯೇ ಶೇಷನಾಗ ಸರೋವರ ಇದೆ. ಇಲ್ಲಿಗೆ ನೀರು ಸಮುದ್ರ ಮಟ್ಟದಿಂದ 3658 ಮೀಟರ್ ಮೇಲಿನಿಂದ ಹರಿದು ಬರುತ್ತದೆ. ಹೀಗೆ ನಾಗಭೂಮಿ ಎಂದು ಪುರಾಣದಲ್ಲಿ ಮಾತ್ರವಲ್ಲ ಇತಿಹಾಸ ಪೂರ್ವದಿಂದಲೂ ಹೆಸರು ಪಡೆದ ಕಾಶ್ಮೀರವು, ಶಂಬಾರವರ ಶೋಧದಂತೆ ‘ನೀರೇ ನಾಗ’ ಆಗಿ ನೀರಿನ ಝರಿಗಳ ಭೂಮಿಯಾಗಿ, ನಾಗ ಭೂಮಿಯೆನಿಸಿದೆ. ನಾಗನು ಇಲ್ಲಿಯ ನಾಗಾಬುಡಗಟ್ಟು ಜನಾಂಗಗಳ ಉಪಾಸನಾ ದೇವತೆ. ಇದು ನಾಗಬುಡಗಟ್ಟು ಜನಾಂಗದ ಭೂಮಿಯಾಗಿತ್ತು. ಕ್ರಿ. ಪೂರ್ವ 250ರ ಸುಮಾರಿಗೆ ನಾಗ ಬುಡಗಟ್ಟು ಜನಾಂಗದ ‘ಅರವಾಲೊ’ ಎನ್ನುವ ಕಾಶ್ಮೀರದ ಅರಸನನ್ನು ಅಶೋಕ ಬೌದ್ಧ ಮತಕ್ಕೆ ಮತಾಂತರಿಸುತ್ತಾನೆ. ಇಲ್ಲಿ ನಾಗÀನ ಸಾಂಕೇತಿಕ ಚಿಹ್ನೆಯು ನೇಗಿಲು.


ಆದಿ ಆಲಡೆಯ ಮೂಲ ಪರಿಸರ

ಆದಿ ಆಲಡೆಯ ಮೂಲ ಪರಿಸರ ದಟ್ಟವಾದ ಕಾಡು. ಅನೇಕ ಕಡೆ ಇಳಿಜಾರದ ಕಾಡು, ಆಲಡೆಯ ಕ್ಷೇತ್ರದ ಬಳಿ ನದಿ/ತೊರೆ ಹರಿದರೂ, ಸಾಮಾನ್ಯವಾಗಿ ಈ ಕ್ಷೇತ್ರ ಸಮತಟ್ಟಾಗಿರುತ್ತದೆ. (ತುಳು: ಪಡಿಲ್) ಹೆಬ್ರಿ ಬೀಡಿನ ಬಲ್ಲೆಯ ಆಲಡೆ ಮೂಲತಾನವನ್ನು ಸೀತಾನದಿ ಸವರಿಕೊಂಡು ಹೋಗುತ್ತಿದೆ. ನಾಗಶಿಲ್ಪಗಳನ್ನು ನೀರು ಸವರಿಕೊಂಡು ಹೋದರೆ ಶಿಲ್ಪಗಳು ಕಿತ್ತು ಹೋಗಬಹುದು ಎಂದು ಕೆಲವು ವರ್ಷಗಳ ಹಿಂದೆ ಸ್ವಲ್ಪ ಈಚೆ ಮುರಕಲ್ಲಿನ ಎತ್ತರದ ಕಟ್ಟೆ ಕಟ್ಟಿ, ನಾಗಶಿಲ್ಪಗಳನ್ನು ಮರು ಪ್ರತಿಷ್ಠಾಪಿಸಿದ್ದಾರೆ. ಸಾಮಾನ್ಯವಾಗಿ ನದಿ ಹೊಳೆಗಳ ದಡಗಳಲ್ಲಿ ಇರುವ ಕಾಡಿನಲ್ಲಿ ಆಲಡೆ ಇರುತ್ತದೆ. ಓಣಿಯಾಯಿ ಗುತ್ತು ಆಲಡೆ, ಚಿತ್ರಬೈಲು ಆಲಡೆ, ಅರಸಮ್ಮನ ಕಾನು, ಕಂಡೇವು ಆಲಡೆ (ಕಾಡು), ಕಟ್ಲಬೀಡು ಆಲಡೆ - ಇವೆಲ್ಲ ಕಾಡೇ ಆಗಿ ಇವೆ.


‘ತುಳುನಾಡಿನ ಜಲವಾಚಕಗಳಲ್ಲಿ ಅಧಿಕ ಸಂಖ್ಯೆಯಲ್ಲಿ ತಲೆದೋರುವ ಜಲವಾಚಕಗಳೆಂದರೆ: ಆಲ್, ಬೆ(ಬೊ)ಳ್ ಮುಂತಾದುವು. ಇವೆಲ್ಲ ನೀರಿನ ಅಧಿಕ್ಯವನ್ನು ಜಲಾನಯನ ಪ್ರದೇಶವನ್ನೂ ಸೂಚಿಸುವ ಅಪ್ಪಟ ದೇಶೀಯ ಪದಗಳು; ಅಷ್ಟೇ ಪ್ರಾಚೀನ ವಾದವು ಕೂಡಾ.... ‘ಆಲ್’ ಎಂಬುದು ಕನ್ನಡದಲ್ಲಿ ಪ್ರಯೋಗದಲ್ಲಿ ಇಲ್ಲವಾದರೂ ಉಳಿದ ಸಹೋದರ ಭಾಷೆಗಳನ್ನು ನೋಡಿದರೆ, ಅಥವಾ ದ್ರವ ವಾಚಕವಾದ ಸಾಧಿತ ಪದಗಳಿಂದ ಇದು ಜಲಾರ್ಥಕವಾಗಿರುವುದನ್ನು ಕಂಡುಕೊಳ್ಳಬಹುದು.”


ರಘುಪತಿ ಭಟ್ಟರು ಕೆಲವು ಉದಾಹರಣೆಗಳನ್ನು ವಿವರಿಸಿ “ಪ್ರಾಯಶಃ ಇದೇ ‘ಆಲ್’-ಸಂಬಂಧಿಸಿದ ಪದಗಳಾಗಿರಬೇಕು - ಆಲುಪ, ಆಳ್ವ, ಅನೂಪ (ಸಂ.`ಜಲಭರಿತವಾದ ಭೂಮಿ’) ಆಳುಪ ಮುಂತಾದ ರೂಪಗಳು” ಎನ್ನುತ್ತಾರೆ. “ಆಲಂಪುರ ಹಳೆಯ ಹೈದರಾಬಾದ್ ಸಂಸ್ಥಾನದ ರಾಯಚೂರು ಜಿಲ್ಲೆಯ ನಂದಿಕೋಟಕೂರು ತಾಲೂಕಿನಲ್ಲಿದ್ದ ಊರು. ಇಲ್ಲಿ ನವಬ್ರಹ್ಮೇಶ್ವರ ಮಂದಿರ ಸಮೂಹವೇ ಇಲ್ಲಿಯ ಪ್ರಮುಖ ಮಂದಿರ... ಇಲ್ಲಿಯ ಮಧ್ಯಭಾಗದಲ್ಲಿರುವ ಬಾಲಬ್ರಹ್ಮೇಶ್ವರನ ಮಂದಿರವು ಪ್ರಮುಖವಾಗಿದೆ. ಉಳಿದ ಅಷ್ಟ ಶಿವಮಂದಿರಗಳೆಂದರೆ ‘ಕುಮಾರ ಬ್ರಹ್ಮ, ಅರ್ಕ ಬ್ರಹ್ಮ, ವೀರ ಬ್ರಹ್ಮ, ವಿಶ್ವ ಬ್ರಹ್ಮ, ತಾರಕ ಬ್ರಹ್ಮ, ಗರುಡ ಬ್ರಹ್ಮ, ಸ್ವರ್ಗ ಬ್ರಹ್ಮ, ಮತ್ತು ಪದ್ಮ ಬ್ರಹ್ಮ.’ ಬಾಲ ಬ್ರಹ್ಮೇಶ್ವರನನ್ನು ಬರಿಯ ಬ್ರಹ್ಮೇಶ್ವರ ಎಂದೂ ಕರೆಯಲಾಗುತ್ತದೆ. ಈ ಶಿವ ಮಂದಿರದಿಂದಾಗಿ ಆಲಂಪುರಕ್ಕೆ ಬ್ರಹ್ಮೇಶ್ವರ ಕ್ಷೇತ್ರ ಅಥವಾ ನವಬ್ರಹ್ಮೇಶ್ವರ ಕ್ಷೇತ್ರ ಎಂಬ ಮತ್ತೊಂದು ಅಭಿದಾನವೂ ಪ್ರಾಪ್ತವಾಗಿದೆ.”26


ತುಳುವರ ಮಹತ್ವದ ಧಾರ್ಮಿಕ ಮತ್ತು ಸಾಂಸ್ಕøತಿಕ ಘಟಕವಾಗಿರುವ ಆಲಡೆಯೂ ಬ್ರಹ್ಮಕ್ಷೇತ್ರ. ಈ ಬ್ರಹ್ಮನೆನ್ನುವುದು ವೇದಗಳ ಬ್ರಹ್ಮನ್‍ಗೆ ಪ್ರೇರಣೆ ಆಗಿರಬೇಕು ಎನ್ನುವುದು ನನ್ನ ಊಹೆ. ಕ್ಷೇತ್ರದ ಬಳಿ ಸಮೀಪ ‘ಬೀಡು’ ಎನ್ನುವ ಆಲಡೆ ಮನೆಗಳಿವೆ. ಇಲ್ಲಿ ಪಟ್ಟಾಭಿಷೇಕ ಆಗುವ ಪದ್ಧತಿ ಇದೆ. ಈ ಪಟ್ಟಾಭಿಷೇಕದಲ್ಲಿ ಅಜಲಿನ ಎಲ್ಲಾ ಜಾತಿಗಳು ಹಾಜರಿರುತ್ತಾರೆ. ಹೀಗೆ ಈ ಕ್ಷೇತ್ರ ಆಳುವ ಎಡೆಯೂ ಆಗಿದೆ. ಮಾನವ ಶಾಸ್ತಜ್ಞರ ಪ್ರಕಾರ ಬುಡಗಟ್ಟು ಒಂದು ರಾಜಕೀಯ ಘಟಕವೂ ಆಗಿದೆ. ಬೀಡು ಎಂಬುದು ಆಲಡೆಯ ರಾಜಕೀಯ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಗಳನ್ನು ನಿರ್ದೇಶಿಸುವ ನಾಯಕನ ಮನೆ. ಆಲಡೆ ಮನೆಯ ಆಳುವ ವ್ಯಕ್ತಿಯ ಪಟ್ಟಾಭಿಷೇಕದಲ್ಲಿ ಪಡೆಯುವ ಹೆಸರು ಅರ್ಥಾತ್ ಪಟ್ಟದ ಆಳುವ ನಾಮ ಪರಂಪರೆಯಿಂದ ಬದಲಾಗದೆ ಮುಂದುವರಿದಿದೆ ಎಂಬ ಗ್ರಹಿಕೆ ಇದೆ. ಈ ಹೆಸರನ್ನು ‘ಆ/ಅಲಯದ ಪುದರ್’ ಎನ್ನುತ್ತಾರೆ. ನೀರು ಇರುವ ಎಡೆಯನ್ನು ಜನರು ವಾಸದ ಎಡೆಯನ್ನಾಗಿ ಆರಿಸಿದ, ಯಾವುದೇ ಬುಡಗಟ್ಟುಗಳ ಆಳ್ವಿಕೆಯಲ್ಲೂ ಆಳುವ ನಾಯಕ ಇರುತ್ತಾನೆ.


ಮುಂದೆ ಬದಲಾದ ರಾಜಕೀಯ ಸ್ಥಿತ್ಯಂತರಗಳಿಂದಾಗಿ ಬೀಡುಗಳ ರಾಜಕೀಯ ಅಧಿಕಾರ ಕಳೆದುಹೋಗಿದ್ದರೂ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಧಿಕಾರಕ್ಕೆ ಚ್ಯುತಿ ಬಂದಿಲ್ಲ. ಇಲ್ಲಿ ಇಂದಿಗೂ ಕೆಲವು ಆಲಡೆಗಳಲ್ಲಿ ನಡೆಯುವ ಸಾಂಪ್ರದಾಯಿಕ ಆರಾಧನೆ, ‘ಅಂಕ’, ‘ಅಂಬೊಡಿ’ ಆಚರಣೆ ಮೇಲಿನ ಮಾತಿಗೆ ಆಧಾರವಾಗುತ್ತದೆ. (ಈ ವಿವರಗಳು ಮುಂದೆ ಬರಲಿವೆ.) ಅನಂತಾಡಿ ನಾಗಬೆರ್ಮರ ಬನದ ಬಳಿ ಇರುವ ನಾಲ್ಕು ಕಂಬುಲ ಗದ್ದೆಗಳಲ್ಲಿ ಒಂದನ್ನು ‘ದಂಡೆತ್ತಿ ಮಾರ್’ (ದಂಡ್+ಎತ್ತಿ+ಮಾರ್= ದಂಡು ಬಂದು ಸೇರಿದ ಗದ್ದೆ) ಎಂದು ಕರೆಯುತ್ತಾರೆ. ಇಂತಹ ಶಕ್ತ್ಯಾಲಯಗಳ ವಾರ್ಷಿಕ ಆರಾಧನೆಯ ಮರುದಿನ-ಕೊನೆಯ ಆಚರಣೆಯಾಗಿ-ಕೋಳಿ ಅಂಕ ನಡೆಯಬೇಕೆಂಬ ವಿಧಿ ಇದೆ. ಕೋಳಿಯ ರಕ್ತ ಆ ಕ್ಷೇತ್ರಕ್ಕೆ ಬೀಳಬೇಕು ಎಂಬುದು ನಂಬಿಕೆ. ಈ ರಕ್ತಾಹಾರ ಶಕ್ತಿ ದೈವಗಳ ಪ್ರೀತ್ಯರ್ಥ ಎನ್ನಲಾಗುತ್ತಿದ್ದರೂ ಮೂಲತಃ ಈ ಪ್ರದೇಶ ಅಂಕದ ಪ್ರದೇಶ ಎಂಬುದನ್ನು ಈ ಆಚರಣೆ ಸೂಚಿಸುತ್ತದೆ. ಇದಕ್ಕೆ ಬೆಳ್ತಂಗಡಿಯ ನಿಡಿಗಲ್ಲಿನ ಶಾಸನವು ಈ ಮಾತನ್ನು ಸಾಕ್ಷೀಕರಿಸುತ್ತದೆ.


ಹೀಗೆ ಆದಿಮಾನವ ಮೂಲತಃ ವ್ಯವಸಾಯ ಯೋಗ್ಯ ಕ್ಷೇತ್ರವನ್ನು ಆರಿಸಿ ನೆಲೆ ನಿಲ್ಲುವಾಗ ಸಹಜವಾಗಿ ತನ್ನ ಬುಡಗಟ್ಟಿನೊಂದಿಗೆ ನೆಲೆ ನಿಲ್ಲುತ್ತಾನೆ. ಮೂಲತಾನ ಆದಿ ಆಲಡೆಗಳ ಬಳಿ ವ್ಯವಸಾಯಯೋಗ್ಯ ಪ್ರದೇಶವಿದೆ. ಹೆಚ್ಚಿನ ಕಡೆ ಬನದ ಸುತ್ತ ಭತ್ತ ಬೆಳೆಯುತ್ತಿದೆ. ಹೀಗಾಗಿ ಮಾನವ ಮೊದಲು ನೆಲೆ ನಿಂತ ಪ್ರದೇಶ ಎರಡೂ ಅರ್ಥದಲ್ಲೂ-ಆಳುವ ಎಡೆ ಮತ್ತು ವಿಷದ ಹಾವುಗಳ ನೆಲೆ - ಆಲಡೆ ಎಂದು ಗುರುತಿಸಿಕೊಂಡಿರಬಹುದು. ‘ಆದಿ ಆಲಡೆ’ ‘ಆದಿ ದೈವ ರೆಕ್ಕೆಸಿರಿ’ ‘ಮೂಲದ ಮಯಿಸಂದಾಯೆ’ (ನಂದಿಗೋನ) ‘ಮೂಲದ ನಾಗೆ’ ‘ಮೂಲದ ಕುಮಾರೆ’ ಎಂಬ ಮೂಲ ಹೆಸರುಗಳು ಈಗಲೂ ಉಳಿದು ಬಂದಿವೆÉ. ಆಲಡೆ ಮೂಲತಾನದಲ್ಲಿ ನೆಲೆಯಾದ ಗುಂಪುಗಳಿಗೆ ಒಬ್ಬೊಬ್ಬ ನಾಯಕ ಇದ್ದೇ ಇರುತ್ತಾನೆ. ಆತನೇ ಆಳುವವ. ಆತ ಆಳುವ ಜಾಗವೇ ಆಲಡೆ ಆಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆಲಡೆಯಲ್ಲಿ ಇರುವ ಶಕ್ತಿಯೇ ನಾಗಬೆರ್ಮೆರ್ ಮತ್ತು ಪರಿವಾರ ಶಕ್ತಿಗಳು. ತುಳುನಾಡಿನ ಎಲ್ಲಾ ದೈವಗಳು ಆಲಡೆ ಮೂಲತಾನದ ನಾಗಬೆರ್ಮೆರ ಪರಿವಾರ ಶಕ್ತಿಗಳು ಅಥವಾ ಭೂತಗಳು. ಮೂಲತಾನ ನೀರಿನ ಮೂಲದ ಪ್ರದೇಶ. ಆದುದರಿಂದ ಸಹಜವಾಗಿ ಇಲ್ಲಿ ಹಾವುಗಳು ಇರುತ್ತವೆ. ಈ ಹಾವುಗಳಿಗೆÉ ಕೈಮುಗಿದು ಅದನ್ನೇ ನಂಬಿ ಆರಾಧಿಸಲು ಆತ ಪ್ರಾರಂಭಿಸಿದ. ಅವನ ಸಂತಾನದವರಿಗೆ ‘ನಮ್ಮ ಮೂಲತಾನ’ ಎನ್ನುವ ನಂಬಿಕೆ ಉಳಿದು ಈ ಪ್ರದೇಶಕ್ಕೆ ಮಹತ್ವ ಬಂತು. “ ಪಾತಾಲೊದ ‘ಪನಿನಾಗೆರ್’ ಭೂಮಿ ತುಂಬೊಂದು (ಹೊತ್ತುಕೊಂಡು) ಉಲ್ಲೆರ್ (ಇದ್ದಾರೆ)” ಎನ್ನುತ್ತದೆ ರೂಢಿ ಮಾತು. ಮುಂದಿನ ಪುಟಗಳಲ್ಲಿ ನಾಗನಿಗೂ ಕೃಷಿಗೂ ಇರುವ ನಂಟನ್ನು ಇಲ್ಲಿಯ ಆಚರಣೆಗಳು ಸಂಕೇತಿಸುವುದನ್ನು ಕಾಣಬಹುದು.


ತುಳುನಾಡಿನಲ್ಲಿ ಪುರಾತನ ಪಟ್ಟದ ಹೆಸರನ್ನು ‘ಆ/ಅಲಯದ ಪುದರ್’ ಎಂದು ತುಳು ಸಂಪ್ರದಾಯದಲ್ಲಿ ಹೇಳುತ್ತಾರೆ. ಪಟ್ಟ ಆಗುವವನಿಗೆ ಹುಟ್ಟುವಾಗ ಇಟ್ಟ ಹೆಸರಿನ ಬದಲಿಗೆ ‘ಆ/ಅಲಯದ ಪುದರ್’ ಹಾಕುವುದು ಪಟ್ಟಾಭಿಷೇಕದ ಒಂದು ವಿಧಿ. ಈ ರೀತಿ ಹೊಸ ಅಧಿಕಾರ ಹಿಡಿಯುವವನಿಗೆ ಆ ಮನೆಯ ಹಳೆಯ ಹೆಸರು ನೀಡುವ ವಿಧಿಯನ್ನು ‘ಪರಪು ಲೆಪ್ಪುನು’ ಎನ್ನುತ್ತಾರೆ.


‘ಬೆರ್ಮೆರ ಗುಂಡ ಗದ್ದುಗೆಯ ಬಳಿ, ಬಲಿ ನೇಮ ಪಡೆಯುವ ದೈವಗಳು ನಾವು’ ಎನ್ನುವ ನುಡಿಗಟ್ಟಿನ ಪ್ರಕಾರ ‘ಗದ್ದುಗೆ’ ಸಿಂಹಾಸನವೂ ಆಗುತ್ತದೆ, ಸಮಾಧಿಯೂ ಆಗುತ್ತದೆ. ಆಚರಣೆಯಲ್ಲೂ ಈ ತತ್ವ ಮುಂದುವರೆಯುತ್ತಿದೆ. ಹಾವು ಹುಟ್ಟು-ಸಾವುಗಳ ನಿಯಂತ್ರಕ ಎಂಬ ಸಾರ್ವತ್ರಿಕ ನಂಬಿಕೆ ಇದೆ. ಕ್ರೈಸ್ತಧರ್ಮಪೂರ್ವದಲ್ಲಿ ಇಡಿಯ ವಿಶ್ವದಲ್ಲಿ ಈ ನಂಬಿಕೆ ಇತ್ತು.


‘......ಸ್ಥಳನಾಮ ಮೂಲವನ್ನು ಕಂಡು ಹುಡುಕುವುದರೊಂದಿಗೆ, ಅಲ್ಲಿ ಮೊತ್ತ ಮೊದಲು ನೆಲೆಸಿದ್ದಿರಬಹುದಾದ ನಿವಾಸಿಗಳ ಮೂಲವನ್ನೂ ಅವರ ಸಾಂಸ್ಕøತಿಕ ನೆಲೆಗಟ್ಟನ್ನೂ ಪ್ರಕೃತಿ ಹಾಗೂ ಅವರ ನಡುವಣ ಸಂಬಂಧವು ಹೇಗೆ ಅವರಿಂದ ನಮಗೆ ಅನೂಚಾನವಾಗಿ ಹರಿದು ಬಂದಿರುವ ಸಂಸ್ಕøತಿಯನ್ನು ರೂಪಿಸಿದೆ ಎಂಬುದನ್ನು ಪತ್ತೆ ಹಚ್ಚಬಹುದು. ಶೋಧಕನಿಗೆ ಸ್ಥಳನಾಮಗಳು ಕೇವಲ ನಾಮಗಳಾಗದೆ ಸಾಂಸ್ಕøತಿಕ ಘಟಕಗಳಾಗುತ್ತವೆ; ಸಂಸ್ಕøತಿಯ ವಾಹಕಗಳಾಗಿ ಕಾಣಿಸುತ್ತವೆ.'


ಆದಿಕಾಲದಿಂದ ತುಳುವರ ಹಿರಿಯರು ನಂಬಿರುವಂತಹ ಆಲಡೆಯ ಬಗ್ಗೆ ಭಯ ಮಿಶ್ರಿತ ಭಕ್ತಿ ಎಲ್ಲ ತುಳುವರಲ್ಲಿ ಇದೆ. ಒಂದೊಂದು ತುಳುವ (ಕುಲ) ಬಳಿಯವರಿಗೆ ಒಂದೊಂದು ಆಲಡೆ ಇದೆ. ಒಂದಕ್ಕಿಂತ ಹೆಚ್ಚು ಕುಲದವರಿಗೆ ಒಂದೇ ಆಲಡೆ ಇರುವುದನ್ನೂ ಕಾಣಬಹುದು. ಆದರೆ ಎಲ್ಲಾ ಆಲಡೆಗಳಲ್ಲಿ ನಾಗ-ಬಿರ್ಮೆರ್ ಮತ್ತು ಪರಿವಾರ ದೈವಗಳು ಇರುತ್ತವೆ. ಈ ವಿವರಗಳು ಮುಂದೆ ಬರಲಿವೆ. ಆಲಡೆಗಳಲ್ಲಿ ಸಿರಿ ಇದ್ದರೆ ‘ಸಿರಿ ಆಲಡೆ’ ಎನ್ನುತ್ತಾರೆ. ತುಳುನಾಡ ಸಿರಿಯ ಕಥಾನಕದ ವ್ಯಾಪ್ತಿಗೆ ಒಳಪಡದ ಹಾವಿನ ರೂಪದಲ್ಲಿ ‘ಕಡ್ಯ’ (ಘಟ) ಸಿರಿಗಳ ಮೂಲ ಬಿಂಬಗಳು ಇವೆ. ಇವು ಕೂಡಾ ಇತ್ತೀಚಿನ ವರ್ಷಗಳಲ್ಲಿ `ಜೋಡಿ ಸಿರಿಗಳು’ ಆಗಿ ಪರಿವರ್ತನೆಯಾಗುತ್ತಿವೆ.


ಕುಟುಂಬದಿಂದ ಯಾವುದೇ ಕಾರಣದಿಂದ ಬಹಿಷ್ಕಾರಕ್ಕೆ ಒಳಗಾದವರು, ಅಥವಾ ಆಧುನಿಕತೆಯ ಪ್ರಭಾವದಿಂದ ಆಲಡೆ ಮೂಲತಾನದ ಬಗ್ಗೆ ನಿರಾಸಕ್ತಿ ಇರುವವರು, ವೈಚಾರಿಕ ಮನೋಭಾವದವರು, ತಮ್ಮ ಮುಂದಿನ ಸಂತತಿಯವರಿಗೆ ಆಲಡೆ ಮೂಲತಾನ ತಿಳಿಸುವುದಿಲ್ಲ. ಆ ಸಂತತಿಯವರು ಕೆಲವು ತಲೆಮಾರಿನ ನಂತÀರ ಮೂಲ ಹುಡುಕಲು ಹರಸಾಹಸ ಪಡುತ್ತಾರೆ. ಇಂತವರು ‘ಅಷ್ಟಮಂಗಳ ಪ್ರಶ್ನೆ’ಯ ಮೂಲಕ ಮೂಲ ಶೋಧಿಸುತ್ತಿರುವುದನ್ನು ತುಳುನಾಡಿನಲ್ಲಿ ಈಗಲೂ ಕಾಣಬಹುದು. ಮೂಲ ಹುಡುಕುವ ಕೆಲಸವನ್ನು ಸ್ಥಾನಿಕ ಬ್ರಾಹ್ಮಣರೂ ಮಾಡುತ್ತಾರೆ.


ಮೂಲತಾನಗಳ ಚಲನೆ

ಮೂಲತಾನಗಳ ಬೇರು ಕಡಿದುಕೊಂಡವರು ಮತ್ತೆ ಹುಡುಕಿ ತೆಗೆಯುವುದರಲ್ಲಿ ಯಶಸ್ವಿಯಾಗುವುದು ಸುಲಭವಲ್ಲ. ವಂಶದ/ಬಳಿಯ ಬೇರು ಹಿಡಿದು ಮೂಲ ಶೋಧಿಸಲು ಅವಕಾಶ ಇದ್ದರೂ ಒಂದು ಬಳಿಯವರಿಗೆ ಎರಡು ಮೂಲತಾನಗಳು ಮಂಗಳೂರು ತಾಲೂಕಿನಲ್ಲಿಯೇ ಇವೆ. ಇವು ಎರಡೂ ಸಿರಿ ಆಲಡೆಗಳು ಆಗಿರುವುದು ಇನ್ನೂ ಅಚ್ಚರಿಯ ಸಂಗತಿ. ಹಾಗೆಯೇ ಬೇರೆ ಬೇರೆ ಬರಿ/ಬಳಿಗೆ ಸೇರಿದವರು ಒಂದೇ ಆಲಡೆ ಮೂಲತಾನವನ್ನು ತಮ್ಮ ‘ಮೂಲತಾನ’ ಎಂದು ಪರಿಗಣಿಸುತ್ತಾರೆ.
ಪುರಾತನ ಪದ್ಧತಿಯಂತೆ ಆಲಡೆ ಮೂಲತಾನ ಬದಲಾಗುವುದಿಲ್ಲ. ಮೂಲತಾನ ಗಳಿಂದ ಕಾರಣಾಂತರದಿಂದ ಬೇರೆಯಾದ ಕುಟುಂಬಗಳು ತಾವು ನೆಲೆನಿಂತ ಜಾಗದಲ್ಲಿ ನಾಗಬನವನ್ನು ನಿರ್ಮಿಸುವ ಪದ್ಧತಿ ಇಲ್ಲ. ಅದರಲ್ಲೂ ನಾಗಬ್ರಹ್ಮಸ್ಥಾನ ನಿರ್ಮಿಸುವ ಆಲೋಚನೆಯೇ ತಪ್ಪು. ಆದರೂ 21ನೆಯ ಶತಮಾನದಲ್ಲಿ ಒಂದೆರಡು ಕಡೆ ಬ್ರಹ್ಮಸ್ಥಾನಗಳು ನಿರ್ಮಾಣವಾಗಿವೆ. ಆದರೆ ಅದು ವಿವಾದಗಳಿಂದಾಗಿ ಆದುದು. ಆದರೂ ಇಲ್ಲಿಯೂ ಗೊಂದಲಕ್ಕೆ ಆ ಕುಟುಂಬದವರು ಒಳಗಾಗಿದ್ದಾರೆ.


ಆದಿ ಆಲಡೆ ಮತ್ತು ಮೂಲತಾನ ಬೇರೆ ಬೇರೆ ಎಂಬ ಅಭಿಪ್ರಾಯ ಕೂಡಾ ಕೆಲವರಲ್ಲಿ ಇದೆ. ಆದಿ ಆಲಡೆ ನಾಗಬಿರ್ಮೆರಿಗೆ. ಮೂಲತಾನ ನಾಗನಿಗೆ ಎಂಬ ವಿವರಣೆಯೂ ಅವರಲ್ಲಿದೆ. “ನಾಗನೆಡೆ ಪೋಯೆ ಮೂಲ ಕೇಂಡೆ, ಕುಮಾರನೆಡೆ ಪೋಯೆ ಆಲಡೆ ಕೇಂಡೆ” (ನಾಗನೆಡೆ ಹೋದ ಮೂಲ ಕೇಳಿದ, ಕುಮಾರನೆಡೆ ಹೋದ ಆಲಡೆ ಕೇಳಿದ) ಎಂಬ ಕುಮಾರನ ನುಡಿಯ ಪ್ರಭಾವ ಬೀರಿರಬೇಕು. ವಾಸ್ತವವಾಗಿ ಆದಿ ಆಲಡೆ ಮತ್ತು ಮೂಲತಾನದಲ್ಲಿ ವ್ಯತ್ಯಾಸ ಏನೂ ಇರಬಾರದು. ಅರ್ಥದ ದೃಷ್ಟಿಯಿಂದಲೂ ಎರಡೂ ಒಂದೇ. ಆದರೂ ಕೆಲವರಿಗೆ ಮೂಲತಾನ ಬೇರೆ ಆಲಡೆ ಬೇರೆ. ಬಿರ್ಮೆರ್ ಇದ್ದಲ್ಲಿ ಆದಿ ಆಲಡೆ ಎಂದೂ, ಬಿರ್ಮೆರ್ ಇಲ್ಲದೆ ಬರೇ ನಾಗಶಿಲ್ಪಗಳು ಇದ್ದಲ್ಲಿ ಮೂಲತಾನ ಎಂದೂ ‘ಮೂಲದ’ ಬನ ಎಂದೂ ನನಗೆ ಕೆಲವು ವಕ್ತøಗಳು ಹೇಳಿದರು.


ನಾನು 2006ರ ನಾಗರಪಂಚಮಿಯಂದು ಹಳೆಯಂಗಡಿ ಪರಿಸರದಲ್ಲಿ ಇರುವ ಬಂಗರ ಮೂಲತಾನ, ಸುವರ್ಣ ಮೂಲತಾನ, ಕದಿಕೆ ತಿಗಳಾಯ ಬ್ರಹ್ಮಸ್ಥಾನ, ಕದಿಕೆ ಸಾಲಿಯನ ಮೂಲಸ್ಥಾನ, ಪುತ್ರನ್ ಮೂಲಸ್ಥಾನ - ಈ ಎಲ್ಲಾ ಮೂಲತಾನಗಳಿಗೆ ಭೇಟಿ ನೀಡಿ ಜನರಲ್ಲಿ ಚರ್ಚಿಸಿದ್ದೇನೆ. ಈ ಮೂಲಸ್ಥಾನಗಳಲ್ಲಿ ಕದಿಕೆ ತಿಗಲಾಯ ಮತ್ತು ಬಂಗರ ಮೂಲತಾನ ಮೀನುಗಾರರದು. ಪುತ್ರನ್ ಮೀನುಗಾರರ, ಬಿಲ್ಲವರ ಮತ್ತು ಸಪಲಿಗರ ಮೂಲತಾನ ಒಂದೇ. ಇವರು ಮಾತ್ರವಲ್ಲದೆ ಶೆಟ್ಟಿಗಾರರೂ (ದೇವಾಂಗ), ಇಲ್ಲಿ ನಾಗನಿಗೆ ತನು ಎರೆಯುತ್ತಾರೆ.


ಮೂಲತಾನ ಮತ್ತು ಆದಿ ಆಲಡೆ ಎನ್ನುವುದು ಬೇರೆ ಬೇರೆ ಎಂಬ ಗೊಂದಲ ಕೆಲವರಲ್ಲಿ ಉಂಟಾಗಲು ಕಾರಣ ಇದೆ. ಆಲಡೆ ಮೂಲತಾನದ ಪರಂಪರೆಯ ಮನೆಯಿಂದ ವಲಸೆ ಹೋಗಿ ನೆಲೆಸಿದವರಿಗೆ ‘ಆಲಡೆ ಮೂಲತಾನ’ ಪರಂಪರೆಯ ಮನೆಯ ಬಳಿ ಇರುವುದೇ ಆಗಿರುತ್ತದೆ. ಆದರೆ ಹೊಸನೆಲೆಯ ನಾಗಬನ ‘ಜಾಗದ (ಸ್ಥಳದ)ಬನ’ ಆಗಿರುತ್ತದೆ. ಆಗ ಜಾಗದ ಬನಕ್ಕೂ ಉಪಾಸನೆ ಮಾಡಬೇಕಾಗುತ್ತದೆ. ಮತ್ತೆ ಕ್ರಮೇಣ ಅಲ್ಲಿಂದ ವಲಸೆ ಹೋಗುವ ಶಾಖೆ ಈ ಮನೆಯನ್ನು ‘ಮೂಲತಾನ’ ಎಂದು ಅದಕ್ಕಿಂತ ಪೂರ್ವದ ಪರಂಪರೆಯ ಆಲಡೆ ಮೂಲತಾನವನ್ನು ‘ಆಲಡೆ ಮನೆ’ಯೆಂದೂ ಕರೆಯುವುದನ್ನು ಕಾಣಬಹುದು.


ಅಪರೂಪಕ್ಕೆ ತಮ್ಮ ಮೂಲತಾನದ ಆದಿ ಆಲಡೆಯ ಆಡಳಿತ ವರ್ಗದವರಲ್ಲಿ ಭಿನ್ನಾಭಿಪ್ರಾಯ ಬಂದಾಗ ಮೂಲ ಆಲಡೆಯ ಮಣ್ಣನ್ನು ತೆಗೆದುಕೊಂಡು ಹೋಗಿ ತಾವು ನೆಲೆಸಿದಲ್ಲಿ ನಾಗಬನ ನಿರ್ಮಿಸಿ ನಾಗನನ್ನು ಪೂಜಿಸುವ ಉದಾಹರಣೆ ಇದೆ. ಅವರ ಪ್ರಕಾರ ಈ ಹೊಸ ತಾನವೂ ‘ಮೂಲತಾನ’. ಆದರೆ ಅವರು ಮೂಲತಃ ಎಲ್ಲಿಂದ ಮಣ್ಣು ತಂದಿದ್ದೇವೆ ಅದು ‘ಆದಿ ಆಲಡೆ ಮೂಲತಾನ’.
ಮೂಲಬನದ ಪ್ರತಿಕೃತಿ ನಿರ್ಮಿಸಿದವರಲ್ಲಿ ನನ್ನ ಗಮನಕ್ಕೆ ಬಂದವರು ಹೆಚ್ಚಾಗಿ ಮೊಗವೀರರು. ಹಳೆಯಂಗಡಿಯ ಕದಿಕೆಯಲ್ಲಿ ಇರುವ ಮೊಗವೀರ ಜಾತಿಯ ಸಾಲಿಯಾನ ಬಳಿಯವರ ಮೂಲತಾನ, ಕದಿಕೆಯಲ್ಲಿರುವ ತಿಗಲಾಯ ಮೂಲತಾನ. ಇವು ಉತ್ತರ ಭಾಗದಿಂದ ಇಲ್ಲಿಗೆ ಬಂದ ಮೂಲ ತಾನಗಳು. ಪ್ರಾರಂಭದಲ್ಲಿ ಇಲ್ಲಿ ನಾಗಶಿಲ್ಪ ಮಾತ್ರ ಇತ್ತು ಎನ್ನುತ್ತಾರೆ. ಮುಂದೆ ಕೆಲವು ದೈವಗಳು ಸೇರ್ಪಡೆಯಾದುವು. ಮತ್ತೆ ಆದ ಅಷ್ಟಮಂಗಳ ಪ್ರಶ್ನೆಯಲ್ಲಿ ಬಿರ್ಮೆರ್ ಗುಂಡವೂ ಬಂತು. ಸಾಲಿಯಾನ ಮೂಲತಾನದಲ್ಲಿ ಇದುವರೆಗೆÉ ಬಿರ್ಮೆರ ಗುಂಡ ಆಗಿಲ್ಲ. ಆದರೆ ಲೆಕ್ಕೆಸಿರಿ ಸೇರಿ ಇತರ ದೈವಗಳಿವೆ. ಪುತ್ರನ್ ಮೂಲತಾನದ (ಬ್ರಹ್ಮಸ್ಥಾನ) ಜಾಗ ಬ್ರಾಹ್ಮಣ ಪುರೋಹಿತರ ಆಸ್ತಿ. ಪುರೋಹಿತರೊಂದಿಗೆ ಆದ ಭಿನ್ನಾಭಿಪ್ರಾಯದಿಂದಾಗಿ ಕೆಲವರು ಇಲ್ಲಿಯ ಮಣ್ಣು ಕೊಂಡು ಹೋಗಿ ಬೇರೆ ಮೂಲತಾನ ಮಾಡಿದರು. ಆದರೆ ಅದು ಯಶಸ್ಸು ಆಗಲಿಲ್ಲ. ಪುತ್ರನ್ ಕುಟುಂಬದ ಇತರ ಸದಸ್ಯರು ಬ್ರಾಹ್ಮಣರ ಒಡೆತನದ ಮೂಲತಾನಗಳಿಗೆ ಹೋಗಿ ಹರಕೆ ಸಲ್ಲಿಸುತ್ತಿದ್ದಾರೆ.


ಅಷ್ಟಮಂಗಳ ಪ್ರಶ್ನೆ ಇಡುವುದು ತುಳುನಾಡಿನ ಪದ್ಧತಿ. (ಬ್ರಹ್ಮಸ್ಥಾನ ಕಟ್ಟಬೇಕೆಂಬ ಆಶಯ ಇರುವವರು ಅಷ್ಟಮಂಗಳ ಪ್ರಶ್ನೆ ಇಡುತ್ತಾರೆ. ಯಾವುದೇ ಮನೆಯ ಸುಪರ್ದಿಯಲ್ಲಿ ಇರುವ ನಾಗಬನ ಬ್ರಹ್ಮಸ್ಥಾನವಾದರೆ ಕುಟುಂಬದ ಪ್ರತಿಷ್ಠೆಯು ಹೆಚ್ಚುತ್ತದೆ.) ಪ್ರಶ್ನೆಯಲ್ಲಿ ಬ್ರಹ್ಮಸ್ಥಾನ ಕಟ್ಟಲು ಸಲಹೆ ಸಿಗುತ್ತದೆ. ಕೆಲವು ಬ್ರಹ್ಮಸ್ಥಾನಗಳು ಅರ್ಚಕ ಹಾಗೂ ಆಡಳಿತವರ್ಗಕ್ಕೆ ಆದಾಯ ತರುವ ಮೂಲವೂ ಆಗುತ್ತದೆ. ಸಾಂಸ್ಕøತಿಕವಾಗಿ ಹಿಂದುಳಿದ ವರ್ಗಗಳು ಮೇಲ್ವರ್ಗಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ತೋರಿಸಲು ನಾಗ ಬ್ರಹ್ಮಸ್ಥಾನಗಳು ನೆರವಾಗುತ್ತವೆ. ಹೀಗಾಗಿ, ‘ನಾಗ ಬನÀಗಳು’ ‘ನಾಗ ಬ್ರಹ್ಮಸ್ಥಾನ’ಗಳಾಗುತ್ತಿವೆ.


ಬಂಟ್ವಾಳ ತಾಲೂಕಿನ ಕುಂದರನ್ನ ವಂಶದ ಅನಂತಾಡಿ ನೇಲ್ಯವು ಮುಂದಿನ ಸಂತತಿಯ ಕಾಲದಲ್ಲಿ ವ್ಯಾಜ್ಯಕ್ಕೆ ಬಿತ್ತು. ನೇಲ್ಯ ತೊರೆದು ಅನಂತಾಡಿ ಬಾಳಿಕೆಗೆ ಬಂದ ಹಿರಿ ಪಾಲಿನವರು ಅನಂತಾಡಿಯಿಂದ ಬರುವಾಗ ತಮ್ಮ ಕುಲದೈವ ನಾಗಬಿರ್ಮೆರನ್ನು ಸಂಕೇತಿಸುತ್ತಿದ್ದ ಮಣ್ಣಿನ ಮೂರು ‘ಮುರ್ಲಿ’ (ಸಿರಿ ಕುಂಭ)ಯನ್ನು ಬರ್ಕೆಗೆ ತಂದು ಅದಕ್ಕೆ ಬೇರೆಯೇ ಗುಡಿ ಕಟ್ಟಿ ಗುಡಿಯೊಳಗೆ ‘ಮುರ್ಲಿ’ಯನ್ನು ಪ್ರತಿಷ್ಠಾಪಿಸಿ ಆರಾಧಿಸಿ ಕೊಂಡು ಬಂದಿದ್ದಾರೆ. ಕಾಲಕ್ರಮೇಣ ಮುರುಳಿ ಇದ್ದ ಮುಳಿಹುಲ್ಲಿನ ಗುಡಿಗೆ ತೆಂಗಿನಮರ ಉರುಳಿ, ಗುಡಿ ಬಿದ್ದು ಹೋಯಿತು. ‘ಮುರ್ಲಿ’ ಒಡೆಯಿತು. ಗುಡಿಯನ್ನು ಪುನಃರಚಿಸುವಾಗ ಹೆಂಚಿನ ಮಾಡು ಮಾಡಿದ್ದಾರೆ. ಮಣ್ಣಿನ ‘ಮುರ್ಲಿ’ಯ ಬದಲಿಗೆ ‘ಕಂಚು’ನಲ್ಲಿ ಮುರ್ಲಿ ರಚಿಸಿದ್ದಾರೆ. ಕಂಚಿನ ಮುರ್ಲಿಯಲ್ಲಿ ಸ್ತ್ರೀಯ ಉಬ್ಬು ಶಿಲ್ಪ ಇದೆ. ಈ ಮುರ್ಲಿ ಸಿರಿಗಳನ್ನು ಈ ಭಾಗದಲ್ಲಿ ತುಳುಭಾಷೆಯಲ್ಲಿ ‘ಮೂರ್ಲು ದೈವ’ ಎಂದು ಕರೆಯುತ್ತಾರೆ.


ಈ ಸಿರಿ ಕುಂಭಗಳನ್ನು ಮೂರ್ಲು/ಮುರುಳಿ/ಮುರಿ/ಕಡ್ಯ/ಕಂದೆಲ್/ಕುಂಭ/ಕಲಶ ಎಂದೆಲ್ಲ ಕರೆಯುತ್ತಾರೆ. ಮಣ್ಣಿನ ‘ಕಡ್ಯ’ಕ್ಕೆ ಬಳೆಯಂತೆ ಕಾಲಿರುತ್ತದೆ. ಉದ್ದ ಕತ್ತು ಇದೆ. ಅದರ ಮೇಲೆ ನಾಗನ ಉಬ್ಬು ಶಿಲ್ಪ ಇದೆ. ತುಳುನಾಡಿನ ಜನರು ಈ ರೀತಿ ಮಣ್ಣಿನ ಸಿರಿಗಿಂಡೆಯಲ್ಲಿ ನಾಗನ ಉಬ್ಬು ಶಿಲ್ಪ ಮಾಡಿ ಪೂಜಿಸುತ್ತಿದ್ದುದು ಹೆಚ್ಚಾಗಿ ಕಾಣಬರುತ್ತದೆ.


ಮೂರ್ಲು ದೈವಗಳಿಗೆ ಅನಂತಾಡಿ ಬಾಳಿಕೆಯ ಕುಂದರನ್ನ ವಂಶದ ಹಿರಿಯ ಪುರುಷ ಅರ್ಚನೆ ಕೈಂಕರ್ಯಗಳನ್ನು ನಡೆಸುತ್ತಾರೆ. ಇವರು ನೇಲ್ಯದಲ್ಲಿ ವಾಸಿಸುತ್ತಿದ್ದಾಗ ಒಂದು ತಲೆಮಾರಿನ ಅರ್ಚಕರಿಂದ ಏನೋ ಲೋಪವಾಗಿ ಮೂರು ಮೂರ್ಲು ದೈವಗಳು ಒಂದೊಂದಾಗಿ ಎದ್ದು ಹೋದುವಂತೆ. ಹಾಗೆ ಹೋದ ಮೂರು ದೈವಗಳೇ ಅನಂತಾಡಿ ಚಿತ್ತರಿಗೆಯಲ್ಲಿ ಈಗ ಇರುವ ದೈವಗಳು (ಶಿಲ್ಪಗಳು) ಎಂಬುದು ನಂಬಿಕೆ. ನೇಲ್ಯದ ಯಜಮಾನರು ತಮ್ಮ ಹಿರಿಯರಿಂದಾದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಸಿದಾಗ ಮೂರು ಮೂರ್ಲು ದೈವಗಳು ನೇಲ್ಯಕ್ಕೆ ಮರಳಿ ಬರಲು ಸಮ್ಮತಿಸಿದವಂತೆ.

ಈ ನಾಗಬ್ರಹ್ಮ ಮೂಲತಾನ ಮೂಲತಃ ‘ಮನ್ಸ’ ಎಂಬ ಪರಿಶಿಷ್ಟ ಜಾತಿಗೆ ಸೇರಿದ್ದು ಎಂದು ನಂಬಲಾಗಿದೆ. ಜೊತೆಗೆ ಕುಂದರನ್ನ ವಂಶದ ಅನಂತಾಡಿ ಮೂಲಕುಟುಂಬದ ಆದಿ ಮೂಲತಾನ ಆಲಡೆಯೂ ಇದೇ ಆಗಿದೆ. ನಾಗಬನಗಳ ಪರಿವರ್ತನೆ ಮೂಲತಾನಗಳು ನೆಲೆಯಾಗಿ ಪರಿವರ್ತನೆಗೊಳ್ಳುತ್ತಿರುವ ಈ ದಶಕದಲ್ಲಿ ಹಳೆಯ ಮೂಲತಾನಗಳ ಶಿಲ್ಪಗಳು ಸ್ಥಳಾಂತರಗೊಳ್ಳುತ್ತವೆ. ಹೀಗೆ ಸ್ಥಳಾಂತರಗೊಂಡಲ್ಲಿ ಗುಡಿಗಳು ಆಧುನಿಕ ಸ್ವರೂಪ ಪಡೆಯುತ್ತಿವೆ. ಕೆಲವು ಆಲಡೆಗಳ ಸ್ಥಳಗಳು ಮಾರಾಟವಾಗಿವೆ. ಸಿರಿ ಆಲಡೆಗಳ ಬ್ರಹ್ಮಸ್ಥಾನಗಳ ಆಡಳಿತ ಇರುವುದು ಬಂಟರು ಮತ್ತು ಜೈನರ ಮನೆಗಳಲ್ಲಿ. ಜೈನರು ಮತ್ತೆ ಬಂಟರಾದುದರಿಂದ, ಅಥವಾ ಬಂಟರ ಒಂದು ಶಾಖೆ ಮಾತ್ರ ಜೈನರಾದುದರಿಂದ ನಿಸ್ಸಂತತಿಯಾದ ಕೆಲವು ಜೈನರು ತಮ್ಮ ಆಡಳಿತಕ್ಕೆ ಒಳಪಟ್ಟ ಆರಾಧನಾ ಸ್ಥಳಗಳನ್ನು ಆಸ್ತಿಯೊಂದಿಗೆ ಮಾರಾಟ ಮಾಡಿದ್ದು ಹೆಚ್ಚಾಗಿ ಬಂಟರಿಗೆ. ಹಾಗೆ ಖರೀದಿಸಿದ ಜಾಗದಲ್ಲಿ ಇದ್ದ ಬಿರ್ಮೆರ್ ತಾನಗಳನ್ನು ಖರೀದಿಸಿದವರು ಆಲಡೆಯನ್ನು ಪರಂಪರೆಯಲ್ಲಿ ಇದ್ದಂತೆ ನಡೆಸಿಕೊಂಡು ಹೋಗುತ್ತಾರೆ. ಆದರೆ ಅದು ಅವರ ಮೂಲತಾನ ಆಗುವುದಿಲ್ಲ. ಅವರ ‘ಮೂಲ ತಾನ’ ತಲೆ ತಲೆಮಾರುಗಳಿಂದ ಬಂದಿರುವುದೇ ಆಗಿರುತ್ತದೆ.


ಉದಾಹರಣೆಗೆ ಕಾರ್ಕಳ ಕೊಟ್ರೊಟ್ಟು ಮನೆಯ ಒಂದು ಶಾಖೆ ಚಿತ್ರಬೈಲಿನಲ್ಲಿ ಜೈನರಿಂದ ಭೂಮಿ ಖರೀದಿಸಿದಾಗ ಕಾಡಿನಲ್ಲಿ ಇದ್ದ ಬಿರ್ಮೆರ್ ತಾನವನ್ನು ಆಧುನಿಕ ಬ್ರಹ್ಮಸ್ಥಾನವನ್ನಾಗಿಸಿದರು. ಅವರ ಮೂಲತಾನ ಕೊಟ್ರೊಟ್ಟು. ಈಗಲೂ ಇವರು ಸಂತಾನ ಅಭಿವೃದ್ಧಿ ಮತ್ತು ಇತರ ಕಾರ್ಯಗಳಿಗೆ ತಮ್ಮ ಮೂಲ ಬಿರ್ಮೆರ್ ತಾನಕ್ಕೆ ಹೋಗುತ್ತಾರೆ. ನಡ್ವಾಲ್ ಲೋಕನಾಥೇಶ್ವರ ಸಿರಿ ಆಲಡೆಯಲ್ಲಿ ಸಿರಿ ದರ್ಶನಕ್ಕೆ ನಿಲ್ಲುವವರು ಕೂಡಾ ಹೆಚ್ಚಿನವರು ತಮ್ಮ ಆಲಡೆ ಮೂಲ ತಾನ ಕವತಾರು, ಪಾಂಗಾಳ ಎನ್ನುತ್ತಾರೆ.
ಪಾಂಗಾಳ ಸಿರಿ ಆಲಡೆಯ ಕ್ಷೇತ್ರದ ಆಸ್ತಿ ಗೌಡ ಸಾರಸ್ವತ ಬ್ರಾಹ್ಮಣರಿಗೆ ಸೇರಿದಾಗ ಅದರ ಮೂಲತಾನದ ಬಂಟರು ಕೋರ್ಟಿನಲ್ಲಿ ವ್ಯಾಜ್ಯ ನಡೆಸಿದರು. ಆಲಡೆಯ ಜಾಗ ಗೌಡ ಸಾರಸ್ವತರಿಗೆ ಸೇರಿದುದರಿಂದ ಕೋರ್ಟು ಬಂಟರ ಮನೆತನದವರಿಗೆ ಆಲಡೆಯ ‘ಪೂಜಾ ಭಂಡಾರ’ವನ್ನು ಆದಿ ಆಲಡೆಯಿಂದ ಪಡೆದು ಹೊಸ ಆದಿ ಆಲಡೆ ನಿರ್ಮಿಸಲು ಆದೇಶಿಸಿತು. ಆದರೂ ಗೌಡ ಸಾರಸ್ವತರ ಆಡಳಿತದಲ್ಲಿಯ ಆಲಡೆ ತಾನದಲ್ಲಿ ದೂರದ ಊರಿನ ಕೆಲವರು ಉಪಾಸನೆಯನ್ನು ಮುಂದುವರಿಸಿದ್ದಾರೆ. ಈಗ ಪಾಂಗಾಳದಲ್ಲಿ ಎರಡು ಆಲಡೆಗಳಿವೆ.


ಆಲಡೆ ಭೂಮಿ ಯಾರ ಹೆಸರಲ್ಲಿ ಇದೆ ಎಂಬುದನ್ನು ಪರಂಪರೆ, ನಂಬಿಕೆ, ಗಮನಿಸುವುದಿಲ್ಲ. ಉದಾಹರಣೆಗೆ ಉಡುಪಿ ತಾಲೂಕಿನ ಮುಗೆರ್ಲು ಎಂಬ ಪರಿಶಿಷ್ಟ ವರ್ಗ ಆರಾಧಿಸುವ ಮೂಲತಾನ ‘ಮೂಲ್ದೊಟ್ಟು’ ‘ನಾಗ ಬೆರ್ಮರೆ’ ಕಾಡು ಬ್ರಾಹ್ಮಣರ ಆಸ್ತಿ. ಆಲಡೆ ಮೂಲತಾನ ಮುಗೆರ್ಲು ಜನಾಂಗದ್ದು. ಆಲಡೆ ಮನೆ ಬಂಟರದ್ದು. ಮುಲ್ಕಿ ಬಳಿಯ ಕವತಾರು ಮೂಲ ಬ್ರಹ್ಮಸ್ಥಾನದ ಕಾಡು ನಾಯಕ ಜನಾಂಗದ ಆಸ್ತಿ. ಆದರೆ ಹಲವು ಜಾತಿಗಳ ವಂಶದವರಿಗೆ ಇದು ಆದಿ ಮೂಲತಾನ. ಕಾರ್ಕಳ ತಾಲೂಕಿನ ಮುನಿಯಾಲದ ಮೂಲ ಬ್ರಹ್ಮಸ್ಥಾನ ರಕ್ಷಿತ ಅರಣ್ಯ ಪ್ರದೇಶ. ಹೀಗೆ ಅನೇಕ ಸ್ಥಳಗಳಿವೆ. ಅದರಲ್ಲೂ ಪರಿಶಿಷ್ಟರ ಮೂಲತಾನಗಳ ಭೂಮಿಯ ಒಡೆಯರು ಹೆಚ್ಚಾಗಿ ಬಂಟರು ಮತ್ತು ಜೈನರು. ಮೂಲ ಆಲಡೆ ಮೂಲತಾನÀದಿಂದ ಮಣ್ಣು ತಂದು ಹೊಸ ನೆಲೆಯಲ್ಲಿ ಮೂಲ ತಾನ ಅಥವಾ ಬ್ರಹ್ಮಸ್ಥಾನ ಸ್ಥಾಪಿಸಿದರೂ ಇಲ್ಲಿಯ ಅನೇಕ ಕುಟುಂಬಗಳು ಆದಿ ಮೂಲದ ಆಲಡೆಗೆ ಹರಕೆ ಹಾಕುವುದನ್ನು ತಪ್ಪಿಸುವುದಿಲ್ಲ.


ಮೂಲತಾನದ ಬಗ್ಗೆ ಎದುರಾಗುವ ಗೊಂದಲವನ್ನು ಅರ್ಥಮಾಡಿಕೊಳ್ಳಲು ಉದಾಹರಣೆಯಾಗಿ ನನ್ನ ಮನೆ ಎಳತ್ತೂರು ಗುತ್ತನ್ನು ತೆಗೆದುಕೊಳ್ಳೋಣ. ಎಳತ್ತೂರು ಗುತ್ತು ಸಾಲಿಯನ್ನ ಬಳಿಯ/ಕುಟುಂಬದವರ ಮನೆ. ಎಳತ್ತೂರು ಗುತ್ತಿನ ಆದಿ ಆಲಡೆ ಮೂಲತಾನ ಕಬತಾರ್. ಗುತ್ತಿನಲ್ಲಿ ಎರಡು ನಾಗಬನಗಳಿವೆ. ಒಂದು ಆದಿ ಬನ. ಎರಡನೆಯದು ಹರಕೆಯ ಬನ. ಆದಿ ಬನ ನಿರಂತರ ನೀರು ಹರಿಯುವ ತೋಡಿನ ಬಳಿ ಇದೆ. ಹರಕೆಯ ಬನ ಮನೆಯ ಹಿಂಭಾಗದಲ್ಲಿ ಇದೆ. ಸುಮಾರು 2000 ಇಸವಿಯವರೆಗೆ ಇಲ್ಲಿ ನಾಗರಪಂಚಮಿ ಗಮನ ಸೆಳೆಯುವ ಆಚರಣೆ ಆಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಎಳತ್ತೂರು ಗುತ್ತಿನ ನಾಗಬನ ‘ಮೂಲತಾನ’ ಎಂದು ಸುಮಾರು ಕುಟುಂಬ ಸದಸ್ಯರು ದೂರದಿಂದ ನಾಗರಪಂಚಮಿಗೆ ತನು ಎರೆಯಲು ಬರುತ್ತಿದ್ದಾರೆ. ದೂರದಿಂದ ಬರುವ ಜನರಿಗೆ ಅನುಕೂಲವಾಗಲೆಂದು ಸುಮಾರು 200 ಮಂದಿಗೆ ಊಟದ ವ್ಯವಸ್ಥೆ ಇಲ್ಲಿ ಆಗುತ್ತ್ತದೆ. ನಾವು ಗುತ್ತಿನಲ್ಲಿ ಬೇರು ಉಳಿಸಿಕೊಂಡವರು ಇಲ್ಲಿಯ ಆದಿ ಬನವನ್ನು ಮೂಲತಾನ ಎಂದು ಹೇಳುವುದಿಲ್ಲ. ಇಲ್ಲಿ ಆಲಡೆ ಮೂಲತಾನದಲ್ಲಿ ಇರಬೇಕಾದ ಪಂಚದೈವಗಳಾಗಲೀ, ಆಚರಣೆಗಳಾಗಲೀ ಇಲ್ಲ. ಇದೂ ಆದಿಯ ‘ಜಾಗದ ಬನ’ ಇರಬೇಕು. ಈಗ ಇಲ್ಲಿ ಇರುವ ಕುಟುಂಬ ಕೂಡಾ ಇಲ್ಲಿಗೆ ಬೇರೆ ಕಡೆಯಿಂದ ಬಂದವರು ಎಂಬ ಹೇಳಿಕೆ ಇದೆ. ಹೀಗೆ ಒಂದು ಮನೆಯಿಂದ ದೂರ ಹೋದವರಿಗೆ ಹಳೆ ಮನೆಯ ಬನ ಮೂಲತಾನ ಬನವಾಗಬಹುದು.


ಕಂಡಿಗೆ ಬೀಡು, ದೇಂದೊಟ್ಟು ಆಲಡೆಯಂತಹ ಪ್ರಸಿದ್ಧ ಆಲಡೆಗಳಲ್ಲಿ ಸಿರಿ ದರ್ಶನಕ್ಕೆ ನಿಂತ ಕೆಲವು ಮಹಿಳೆಯರು ಆಲಡೆ ಜಾತ್ರೆಯ ಮರುದಿನ ಆ ಪ್ರದೇಶದ ನಾಗಬನದಲ್ಲಿ ತನು ಎರೆಯದೆ ಬೇರೆ ಪ್ರದೇಶದ ತಮ್ಮ ಮೂಲ ನಾಗಬನಗಳಿಗೆ ಹೋಗಿ ತನು ಎರೆಯುವುದು ಇದೆ. ಅನೇಕ ಮೂಲತಾನ ಆದಿ ಆಲಡೆಯ ಬ್ರಹ್ಮಸ್ಥಾನಗಳಿಗೆ ಟಿಪ್ಪು ಸರಕಾರದಿಂದ ಮತ್ತು ಬ್ರಿಟಿಷ್ ಸರಕಾರದಿಂದ ‘ತಸ್ತೀಕು’ ಬರುತ್ತಿತ್ತು. ಕೆಲವರು ಈಗಲೂ ತಸ್ತೀಕು ಪಡೆಯುತ್ತಿದ್ದಾರೆ. ತಸ್ತೀಕು ಈ ಬನಗಳ ಐತಿಹಾಸಿಕತೆಯನ್ನು ತಿಳಿಯಲು ಸಾಧ್ಯವಾಗುತ್ತದೆ.


ಆಲದ ಬೆರ್ಮೆರ್


ಆಲಡೆಯಲ್ಲಿ ಇರುವ ಬೆರ್ಮರ್ ಆಲದ ಬೆರ್ಮೆರ್. ಸಾಂತೂರಿನ ಮೂಲತಾನ ಆಲಡೆಯನ್ನು ‘ಆಲದ ಬೆರ್ಮೆರ್’ ಎಂದು ಕರೆಯುವುದು ವಾಡಿಕೆ. “ಕ್ರಿ.ಶ.1403ರ ಶಾಸನವು ‘ಬ್ರಹ್ಮರಾಲ’ ಎಂದು ಉಲ್ಲೇಖಿಸುತ್ತದೆ.30 ಶಾಸನಗಳಲ್ಲಿ ಬೆರ್ಮೆ ಅಥವಾ ಬೆರ್ಮೆರ್ ಪದ ಬಳಕೆಯಾಗಿಲ್ಲ. ಬ್ರಹ್ಮ ಎಂದು ಬಳಕೆಯಾಗಿದೆ. ಬೆರ್ಮೆರೆ ಎನ್ನುವುದು ದ್ರಾವಿಡ ಪದ. ಸಂಸ್ಕøತದ ‘ಬ್ರಹ್ಮ’ ಪದದ ಅಪಭ್ರಂಶ ಅಲ್ಲ. ‘ಬೆ/ಬಿರ್ಮೆರೆ ಆಲ’ ಶಿಷ್ಟಭಾಷೆಯಲ್ಲಿ ಬ್ರಹ್ಮರಾಲ ಆಗಿದೆ. ಸಾಂತೂರು ಪರಾಡಿ ಆಲದ ಬಿರ್ಮೆರ ತಾನದಲ್ಲಿ 12 ವರ್ಷಕ್ಕೊಮ್ಮೆ ಸುತ್ತಲಿನ ಗ್ರಾಮಾಡಳಿತದ ಮನೆಗಳಿಂದ ಚಾವಡಿದೈವಗಳ ಭಂಡಾರ ಬಂದು ನೇಮ-ಕೋಲಗಳ ಆಚರಣೆ ನಡೆಯುವ ಕ್ಷೇತ್ರವೇ ‘ಆಲದ ಬಿರ್ಮೆರೆ ತಾನ’.31 ಇಲ್ಲಿ ‘ಆಲ ಮಜಲು’ ಗದ್ದೆ ಇದೆ. ‘ಆಲದ ಗುಂಡಿ’ ಇದೆ.
ಆದಿ ಆಲಡೆಯ ದೈವ ಸಂಕೀರ್ಣವನ್ನು ತುಳುವರ ಕುಲದೈವಗಳ ಸಂಕೀರ್ಣ. ಅವುಗಳಲ್ಲಿ ಪ್ರಧಾನವಾದುದು ನಾಗಬೆರ್ಮೆರ್. ಕಾಲಾಂತರದಲ್ಲಿ ನಾಗ ಬೇರೆ, ಬೆರ್ಮೆರ್ ಬೇರೆ ಎಂಬಂತೆ ರೂಢಿ ಬೆಳೆಯಿತು. ಈಗಲೂ ಪರಿಶಿಷ್ಟ ವರ್ಗದವರು ಆರಾಧಿಸುವ ಸ್ಥಳಗಳಲ್ಲಿ ಬೆರ್ಮೆರ್ ಎಂಬುದು ನಾಗನೇ ವಿನಃ ಬೇರೆ ದೈವವಲ್ಲ. 1001 ಹೆಡೆ ಇರುವ ಸಂಕಪಾಲ ಆತ. ಆತನ ವರ್ಣನೆ ಮುಂದೆ ಬರಲಿದೆ. ನಾಗ ಬನಗಳ ಪೌರೋಹಿತ್ಯವನ್ನು ಬ್ರಾಹ್ಮಣರು ವಹಿಸಿಕೊಂಡ ಪರಿಣಾಮವಾಗಿ ‘ನಾಗ’ ವೈದಿಕ ದೇವರ ಸಾಲಿಗೆ ಸೇರಿದ. ನಾಗನಿಂದ ಬೇರೆಯಾಗಿ ‘ಬೆರ್ಮೆರ್’ ಭೂತ ಆದ. ಇದಕ್ಕೆ ಕಾರಣ ಸ್ಪಷ್ಟವಾಗಿದೆ. ತುಳು ಪಾಡ್ದನಗಳು ಬಿರ್ಮೆರೆ ದೈವಕ್ಕೆ ರೌದ್ರತೆಯನ್ನು ಕಲ್ಪಿಸಿವೆ. ಜನಪದರ ನಾಗಾರಾಧನೆಯನ್ನು ವೈದಿಕ, ಬೌದ್ಧ, ಜೈನ ಧರ್ಮಗಳು ತಮ್ಮ ಧರ್ಮದೊಳಗೆ ಸ್ವೀಕರಿಸಿದ ಪರಿಣಾಮವಾಗಿ ಭಾರತದ ಎಲ್ಲೆಡೆ ಸಂಸ್ಕøತ ಮಂತ್ರಗಳ ಮೂಲಕ ಆಗಮ ಸಂಪ್ರದಾಯದಲ್ಲಿ ನಾಗನನ್ನು ಆರಾಧಿಸುವ ಪದ್ಧತಿ ಆರಂಭವಾಗಿತ್ತು. ತುಳುನಾಡಿಗೆ ಬ್ರಾಹ್ಮಣ ಅರ್ಚಕರು ಬಂದಾಗ ಸ್ಥಳೀಯ ಸಂಪ್ರದಾಯದ ನಾಗಬೆರ್ಮರ ಕೋಲಗಳು ಹಾಗೂ ಆಚರಣೆಗಳು ಅವರಿಂದ ತುಚ್ಛೀಕರಣಕ್ಕೆ ಒಳಗಾಗಿರಬೇಕು. ಆದರೂ ನಾಗಬೆರ್ಮರ ಬಗ್ಗೆ ಜನರಿಗೆ ಇದ್ದ ನಂಬಿಕೆಯನ್ನು ಹೋಗಲಾಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬೆರ್ಮರನ್ನು ನಾಗನಿಂದ ಪ್ರತ್ಯೇಕಿಸಿ ಅದನ್ನು ‘ಭೂತ ಶಕ್ತಿ’ ಎಂದು ವ್ಯಾಖ್ಯಾನಿಸಿರುವ ಸಾಧ್ಯತೆ ಹೆಚ್ಚು.


ಶಾಸನಗಳಲ್ಲಿ ಮೂಲತಾನ


ತುಳುವರ ಕುಲದೈವ ಆದ ಬಿರ್ಮೆರ ಮೂಲತಾನಗಳ ಬಗ್ಗೆ ಶಾಸನಗಳಲ್ಲಿ ಉಲ್ಲೇಖಗಳು ಬಹಳ ಕಡಿಮೆ ಇದೆ. ಆಳುಪ ರಾಣಿ ಬಲ್ಲಮಹಾದೇವಿಯ ಕ್ರಿ.ಶ.1255ರ ಶಾಸನದಲ್ಲಿ ‘.... ಮೂಲಸ್ಥಾನ ಮಾರ್ಕಂಡೇಶ್ವರ ದೇವರ ಕಲ್ಲು . . . ’ ಎಂಬ ಉಲ್ಲೇಖ ಇದೆ.


ಕದ್ರಿಯ ಶಾಸನ “ಮಂಗಳೂರು ರಾಜ್ಯಕ್ಕೆ ಆದಿಸ್ಥಾನವಾದ ಕದಿರೆಯ ಸ್ಥಾನಿಕರು” ಎನ್ನುತ್ತದೆ. ಕದ್ರಿಯಲ್ಲಿ ಪಂಚದೈವಗಳ ನೆಲೆ ಇದೆ, ಪೂಕರೆ ಕಂಬುಲ ಇದೆ.  ಹೀಗೆ ನೀರಿನ ನೀರಿನ ಝರಿಗಳ ಕ್ಷೇತ್ರಗಳೇ ನಾಗಕ್ಷೇತ್ರವಾಗಿ, ನಾಗಬಿರ್ಮೆರ ಕ್ಷೇತ್ರವಾಗಿ ಉಪಾಸನೆಗೊಳ್ಳುತ್ತಿರುವ ತುಳುವರ ಮೂಲತಾನ ಆದಿ ಆಲಡೆಯ ಕುಲ ಬೆರ್ಮೆರ್ ಮತ್ತು ಪರಿವಾರ ದೈವಗಳ ಪರಿಕಲ್ಪನೆ, ಪರಂಪರೆ ಮತ್ತು ಪರಿವರ್ತನೆಯ ಆಯಾಮಗಳನ್ನು ಮುಂದಿನ ಅಧ್ಯಾಯಗಳಲ್ಲಿ ನೋಡೋಣ.


- ಡಾ ಇಂದಿರಾ ಹೆಗ್ಗಡೆ.


ಕನ್ನಡದ ಸಂಶೋಧನಾ ಕಕ್ಷೇತ್ರದಲ್ಲಿ ನ ಒಂದು ಪ್ರಮುಖ ಹೆಸರು ಡಾ ಇಂದಿರಾ ಹೆಗ್ಗಡೆಯವರದ್ದು. ತುಳುನಾಡಿನ ಕುರಿತು ಅವರ ಮೂಲಾನ್ವೇಷಣೆ ಹಾಗೂ ಮಾಹಿತಿ ಸಂಗ್ರಹ ಅಗಾಧವಾದದ್ದು. ಸೃಜನಶೀಲ ಹಾಗೂ ಸಂಶೋಧನಾ ಎರಡೂ ಕ್ಷೇತ್ರದ ಬರವಣಿಗೆಯಲ್ಲಿ ಕೈ ಆಡಿಸಿರುವ ಅವರದ್ದು ಮೂಲತಃ ಅನ್ವೇಷಕ ಮನಸ್ಸು. ಅದು ಅವರನ್ನ ವೈವಾಹಿಕ ಜೀವನಕ್ಕೆ ಅಡಿಯಿಟ್ಟ ಬಹಳಷ್ಟು ವರ್ಷಗಳ ನಂತರ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆಯುವತ್ತ ಮುನ್ನಡೆಸಿ ಇದೀಗ ಸಂಶೋಧನೆಗಾಗಿ ಡಿ'ಲಿಟ್ ಪಡೆವವರೆಗೆ ತಂದು ಮುಟ್ಟಿಸಿದೆ. ಅವರ ಈವರೆಗಿನ ಅನೇಕ ಸಂಶೋಧನಾ ಪ್ರಬಂಧಗಳಂತೆಯೆ "ತುಳುವರ ಮೂಲತಾನ, ಆದಿ ಅಲಡೆ" ಕೂಡ ಅಪೂರ್ವವಾದ ಮಾಹಿತಿಗಳ ಕಣಜವಾಗಿದ್ದು, ಅದರ ಸಂಗ್ರಹಕ್ಕಾಗಿ ಅವರು ನಡೆಸಿದ ಕ್ಷೇತ್ರ ಕಾರ್ಯ ಓದುಗರಲ್ಲಿ ಬೆರಗು ಹುಟ್ಟಿಸುತ್ತದೆ.

ತುಳುನಾಡು ಅಂದರೆ ಉತ್ತರದ ಕಾಸರಕೋಡದಿಂದ ದಕ್ಷಿಣದ ಕಾಸರಗೋಡಿನ ತುದಿಯ ತನಕ ವ್ಯಾಪಿಸಿರುವ ಕರ್ನಾಟಕದ ಕರಾವಳಿ ಭಾಗದ ಭೂಭಾಗ. ಅಲ್ಲಿನ ಸಾಂಸ್ಕೃತಿಕ ಬದುಕು ಹಾಗೂ ಆಚರಣೆ ಕರ್ನಾಟಕದ ಮುಖ ಭೂಭಾಗದಿಂದ ವಿಭಿನ್ನವಾಗಿದ್ದರೆ ನೆರೆಯ ಕೇರಳಕ್ಕೆ ಅತ್ಯಂತ ನಿಕಟ. ಋಷಿ ಮೂಲದ ಗೋತ್ರಗಳನ್ನ ಹೊಂದಿರುವ ಬ್ರಾಹ್ಮಣರನ್ನು ಹೊರತು ಪಡಿಸಿ ಅಲ್ಲಿನ ಉಳಿದೆಲ್ಲ ಬಹುಸಂಖ್ಯಾತ ಶೂದ್ರ ವರ್ಗ ಪ್ರಕೃತಿ ಮೂಲದ ನೆಲ್ಲ, ಜಲ, ಸಸ್ಯಗಳನ್ನ ತಮ್ಮ ಗೋತ್ರಗಳನ್ನಾಗಿ ಗುರುತಿಸಿಕೊಳ್ಳುತ್ತಾರೆ. ಪ್ರತಿ ಗೋತ್ರವೂ ತನ್ನದೆ ಆದ ಪ್ರಾಕೃತಿಕ ವೈಶಿಷ್ಟ್ಯವನ್ನು ಹೊಂದಿದ್ದು ಮಾತೃ ಮೂಲದ ಆಅಚರಣೆಗಳಿಗೆ ಪ್ರಾಮುಖ್ಯತೆ ಕೊಡುವಂತಿರುತ್ತವೆ. ಪ್ರತಿ ಗೋತ್ರ ಅಥವಾ ಬಳಿಗೂ ತಮ್ಮದೆ ಆದ ಒಂದು ಆದಿನೆಲೆ ಅಥವಾ ಮೂಲಸ್ಥಾನ ಅಂತ ಇರುತ್ತದೆ. ಅಲ್ಲಿನ ನಾಗಬರ್ಮೆರ್ ( ವೈದಿಕರ ಚತುರ್ಮುಖ ಬ್ರಹ್ಮ ಅಲ್ಲ.) ಅವರ ಕುಲದೇವರಾಗಿರುತ್ತಾರೆ. ಪ್ರತಿಯೊಬ್ಬ ತುಳುವನಿಗೂ ಹೀಗೊಂದು ಆದಿ ನೆಲೆ ಹಾಗೂ ಕುಲದೈವ ಇದ್ದೇ ಇರುತ್ತದೆ. ಅದರ ಬಗ್ಗೆ ಆಸಕ್ತಿಕರವಾಗಿ ಈ ಪುಸ್ತಕದಲ್ಲಿ ಮಾಹಿತಿಯನ್ನ ನೀಡಲಾಗಿದೆ.

ಮೋಹಿನಿಯ ಸೇಡು, ಪುರುಷರೇ ನಿಮಗೆ ನೂರು ನಮನಗಳು, ಬದಿ ಇವು ಅವರ ಸೃಜನಶೀಲ ಸಾಹಿತ್ಯದ ಕಥಾ ಸಂಗ್ರಹಗಳು. ಅಮಾಯಕಿ, ಒಡಲುರಿ, ಮಂಥನ ಇವು ಅವರ ಲೇಖನಿಯಿಂದ ಮೂಡಿ ಬಂದ ಕಾದಂಬರಿಗಳು. ಬಂಟರು – ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು, ತುಳುವೆರೆ ಅಟಿಲ ಅರಗಣೆ (ತುಳು), ಚೇಳಾರು ಗುತ್ತು ಮಂಜನ್ನಾಯ್ಗೆರ್ - ಸಾಂಸ್ಕøತಿಕ ಶೋಧ, ತುಳುವರ ಮೂಲತಾನ ಆದಿ ಆಲಡೆ : ಪರಂಪರೆ ಮತ್ತು ಪರಿವರ್ತನೆ ಇವು ಅವರ ಸಂಶೋಧನಾ ಪ್ರಬಂಧಗಳು ಇದರಲ್ಲಿ ಕೊನೆಯ ಕೃತಿ ಅವರ ಡಿ'ಲಿಟ್ ಸಂಶೋಧನಾ ಪ್ರಬಂಧವೂ ಹೌದು.

ಸದ್ಯ ಅವರ ಬರವಣಿಗೆ ಪ್ರವಾಸ ಕಥನ, ಸಿರಿಬಾರಿ ಲೋಕದಲ್ಲಿ ಸಿರಿಗಳು, ಬಂಟರು – ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ (ಇಂಗ್ಲಿಷ್ ಆವೃತ್ತಿ), ಜಾನಪದ : ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಸಂಧಿ ಪಾಡ್ದನಗಳ ರಚನೆಯತ್ತ ಸಾಗಿದೆ. ಇದಷ್ಟೇ ಅಲ್ಲದೆ 'ಕಾವ್ಯಗಳ ಪುಟದಿಂದ ನೀನೆದ್ದು ನಿಲ್ಲು' ಎನ್ನುವ ಕವನ ಸಂಕಲನವನ್ನೂ ಅವರು ಹೊರತಂದಿದ್ದಾರೆ. ಒಟ್ಟಿನಲ್ಲಿ ಕನ್ನಡದ ಬರಹ ಪ್ರಪಂಚಕ್ಕೆ ಡಾ ಇಂದಿರಾ ಹೆಗ್ಗಡೆಯವರು ಸಲ್ಲಿಸಿರುವ ಸೇವೆ ಅನನ್ಯ. ಅದಕ್ಕಾಗಿ ಅವರಿಗೆ ಕೇರಳ ಸಾಹಿತ್ಯ ಪ್ರಶಸ್ತಿಯ ಸಹಿತ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನ ಹುಡುಕಿಕೊಂಡು ಬಂದಿವೆ. ಸದ್ಯ ಸುರತ್ಕಲ್ಲಿನಲ್ಲಿ ಪತಿ ನಿವೃತ್ತ ಸೈನಿಕ ಸೀತಾರಾಮ ಹೆಗ್ಗಡೆಯವರೊಂದಿಗೆ ಅವರ ಬಾಳ್ವೆಯ ಯಾನ ಸಾಗುತ್ತಿದೆ. ಇತಿಹಾಸದತ್ತ ಕುತೂಹಲದ ಕಣ್ಣು ಬೀರುವ ಆಸಕ್ತರಿಗೆ "ತುಳುವರ ಮೂಲತಾನ, ಆದಿ ಅಲಡೆ" ಇದೊಂದು ಒಳ್ಳೆಯ ಒಳಗಿಂಡಿ.