20 January 2011

(ಫೇಸ್ ಬುಕ್ಕಿನ ಗೋಡೆಯ ಮೇಲೆ ಸಚಿವ ಸುರೇಶಕುಮಾರ್ ರವರ ಪುಟದಲ್ಲಿ ಬರೆದದ್ದು)

ಅತಿರೇಕಕ್ಕೂ ಒಂದು ಮಿತಿಯಿದೆ ಸಾರ್..."ಮುಖ್ಯಮಂತ್ರಿ" ಅನ್ನುವುದು ಸಂವಿಧಾನ ಬದ್ಧವಾದ ಹುದ್ದೆಯೊಂದಷ್ಟೇ.ಶ್ರೀಸಾಮಾನ್ಯನಂತೆ ಮುಖ್ಯಮಂತ್ರಿ ಪದವಿ ಹೊತ್ತವನೂ ಈ ನೆಲದ ಕಾನೂನಿಗೆ ಹೊರತಲ್ಲ.ಹೀಗಿರುವಾಗ ಮಣ್ಣು ತಿನ್ನುವ ಕೆಲಸ ಮಾಡಿರುವ ಪುರಾವೆ ಇದ್ದಂತೆಯೂ ನಿಮ್ಮ ಸರಕಾರದ ಮುಖ್ಯಮಂತ್ರಿಯನ್ನ ಕಾನೂನು ಕ್ರಮದಿಂದ ಬಚಾಯಿಸುವ ಪ್ರಯತ್ನಕ್ಕೆ ಲಜ್ಜೆಗೆಟ್ಟು ಇಳಿಯುತ್ತಿದ್ದೀರಲ್ಲ...ನೈತಿಕತೆ ಅನ್ನೋದು ಏನಾದರೂ ಉಳಿದಿದೆಯೇ ನಿಮ್ಮೆಲ್ಲರಲ್ಲಿ? ಅಷ್ಟಕ್ಕೂ ಮುಖ್ಯಮಂತ್ರಿಗಳಿಗೇನು ಕೊಂಬಿದೆಯ?

17 January 2011

" "

ಮಾಸಿದ ತುಟಿಗಳೂ ತುಸು ಅರಳುತ್ತವೆ...
ಬಾಡಿದ ಕಂಗಳೂ ಕ್ಷಣಕಾಲ ಮಿನುಗಿ ಹೊಳೆಯುತ್ತವೆ,
ನಿನ್ನೊಂದಿಗೆ ಕಳೆದ ದಿನಗಳು ಸ್ಮೃತಿಯಿಂದೀಚೆ ಬಂದಾಗ/
ಜಟಿಲವಾಗಿದ್ದ ಜೀವನದ ದಿನಗಳೆಲ್ಲ ಉಲ್ಲಾಸಮಯವಾಗಿಸಲು ನೀ ನನ್ನೆಡೆಗೆ ಬರಬೇಕಾಯ್ತು...
ಅರ್ಥ ಕಾಣದೆ ಅರ್ಧದಲ್ಲೆ ನಿಂತಿದ್ದ ನಾಳಿನ ಹುಡುಕಾಟ ಮತ್ತೆ ಚಾಲನೆಗೊಳ್ಳಲು
ನೀ ನನ್ನ ಕೈ ಹಿಡಿಯಬೇಕಾಯ್ತು//


ಆಂತರ್ಯದ ಒರತೆಗೆ ಹರಿಯಲೊಂದು ತೊರೆ...
ಮನದ ಭಾವದಲೆಗಳಿಗೆ ಬಂದಾಗೆಲ್ಲ ನೆರೆ,
ಈಜಿ ದಡ ಮುಟ್ಟಲು ನನಗೆ ಬೇಕಿದ್ದುದ್ದು ನಿನ್ನೆದೆಯ ದಂಡೆ/
ರೆಪ್ಪೆ ಮುಚ್ಚಿದ್ದರೂ ನಿನ್ನದೇ ಹುಡುಕಾಟ...
ತೆರೆದ ರೆಪ್ಪೆಯೊಳಗಿನ ದೃಷ್ಟಿಗೂ,
ನಿನ್ನ ಕಾಣುವ ಕಾತರದ ಮಿಡುಕಾಟ//


ನೋವಿರದ ಎದೆಯಿಂದ ಚೂರು ಒಲವ ಸೆಲೆ...
ಕಣ್ರೆಪ್ಪೆಯಲ್ಲಿ ಕಾದಿರುಸುವ ಭರವಸೆ ಹೊತ್ತ ಪ್ರೀತಿಸುವ ಮನದಲ್ಲಿ ತುಸು ನೆಲೆ,
ಇವಿಷ್ಟೇ ಬೇಕಾಗಿದ್ದದ್ದು ನನಗೆ...
ಆದರೆ ಅದು ನಿನ್ನಲ್ಲಿ ಅನ್ನುವ ಪೂರ್ವ ಷರತ್ತಿನ್ನೊಂದಿಗೆ...!/
ಪ್ರಮಾದವಾದ ನಿವೇದನೆಗೆ ನಿರಾಕರಣೆಯ ಕಹಿಯ ನಿರೀಕ್ಷೆ ಇದ್ದಿರಲಿಲ್ಲ...
ಒಪ್ಪಿಕೊಳ್ಳಲಾಗದಿದ್ದರೆ ಕೊನೆಪಕ್ಷ ನೀನು ಸುಮ್ಮನಾದರೂ ಇರಬಹುದಿತ್ತು,
ಏನೊಂದನ್ನೂ ಅನ್ನದೆ//


ಮದರಂಗಿಯಲ್ಲಿ ಅದ್ದಿ ತೆಗೆದ ಮುಂಜಾವಿನ ಸೂರ್ಯ....
ಕಡುಗಪ್ಪು ಕಾಡಿಗೆಯಲ್ಲೆ ಚುಕ್ಕಿಯಂತಾದ ನಸುನಗುವ ಚಂದ್ರ,
ಇರುಳ ಬರದಲ್ಲೂ ಮಿನುಮಿನುಗೊ ತಾರೆಗಳ ಹಿಂಡು...
ಇವೆಲ್ಲ ನನಗೆ ನಿಜಕ್ಕೂ ಸುಂದರವೆನಿಸೋಕೆ ನೀ ನನ್ನ ಜೊತೆಗಿರಬೇಕು/
ಒಂಟಿ ಬಾಳಲ್ಲಿ ಕಟ್ಟುಪಾಡುಗಳಿರೋಲ್ಲ ಅಂತಾರೆ....
ಆದರೆ ನನ್ನ ಸಂದಿಗ್ಧವೆ ಬೇರೆ,
ಬಾಳ ಇರುಳಲ್ಲಿ ಶಶಿಯಾಗಿ ನೀನೊಮ್ಮೆ ಬಂದ ಮೇಲೆ ರೆಪ್ಪೆ ಮುಚ್ಚಿಕೊಂಡೆ ನಾನು....
ಕಾಣಲಾಗದಂತೆ ಇನ್ನೊಂದು ಮಿನುಗು ತಾರೆ//


ಬಿಟ್ಟು ಬಾಳಲಾಗದ ಅನಿವಾರ್ಯತೆ...
ಜೊತೆಯಿರದೆ ಬಾಳಲೆ ಬೇಕಾದ ಕಟುವಾಸ್ತವ,
ನನಗೆ ಹುಟ್ಟಿನಿಂದ ಬಂದ ವಿಧಿಯ ಬಳುವಳಿ/
ನನ್ನ ಕಣ್ಣ ಹೊಳಪಲ್ಲಿ ನಿನ್ನ ಬಿಂಬ ಇರುವ ತನಕ...
ನನ್ನ ಉಸಿರ ತುಂಬಿ ನಿನ್ನ ಹೆಸರು ಬರುವ ತನಕ,
ನಾನು ಈ ದರಿದ್ರ ಪ್ರಪಂಚದ ಅತ್ಯಂತ ಸಿರಿವಂತ//


ನಿನ್ನ ನೆನಪುಗಳ ಹೊಳಪಲ್ಲಿ ಹಚ್ಚಗೆ...
ನೀ ಕೊಡಮಾಡಿದ್ದ ಸಂತಸದ ದಿನಗಳ ಮರುಕಳಿಕೆಯಲ್ಲಿ ಬೆಚ್ಚಗೆ,
ಕೊನೆಯವರೆಗೂ ಹೀಗೆ ಇರುತೀನಿ....ನಿನ್ನದೆ ಕನಸಲ್ಲಿ ಬಾಳ ಕಳೆಯುತೀನಿ/
ನಿನ್ನ ಸುಖ ಸಂಭ್ರಮದ ಮುಂದೆ ಉಳಿದದ್ದೆಲ್ಲ ಗೌಣ...
ಇದು ನನಗೂ ನನ್ನ ಸುಖ ಸಂತಸಕ್ಕೂ ಸೇರಿ ಅನ್ವಯಿಸುವ ಮಾತು...!//

ಇಲ್ಲದಿದ್ದರೂ ನಿನ್ನ ಕಣ್ಣಲಿ ನನಗೆ ಆ ಅರ್ಹತೆ...
ರಾಧೆಯೆಂದಾದರೂ ಕರಿ,
ಸೀತೆಯೆಂದಾದರೂ ಸರಿ...
ರಾಮನಾಗಲೂ ತಯಾರು ನಾ ...
ಕೃಷ್ಣನೂ ಆದೇನು ನಿನಗಾಗಿ/
ಯಾವ ರೂಪದಲ್ಲಿ ನೀ ಬಂದರೂ ಸರಿಯೇ...
ಯಾವ ನಾಮದಲಿ ಕರೆದರೂ ಸರಿಯೆ...
ನಿನ್ನ ಕರೆಯ ಹಿಂದಿನ ಒಲವ ಹೊರತು ಇನ್ನೇನನ್ನೂ ನಾನರಿಯೆ//


ನಿನ್ನ ನೆನಪು ಕಾಡುವಾಗ,
ನನ್ನೆದೆಯ ಶ್ರುತಿಗೆ ಬಾನೂ ತನ್ನ ದನಿ ಬೆರೆಸುವಾಗ...
ಮಳೆಯಲ್ಲಿ ತೋಯಲು ನಾನಿಷ್ಟಪಡುತ್ತೇನೆ ;
ಸುರಿ ಮಳೆಯಲ್ಲಿ ನೆನೆವ ನನ್ನ ಕಣ್ಣೀರು ಇನ್ಯಾರಿಗೂ ಕಾಣಬಾರದದಲ್ಲ?!/
ನನ್ನ ದುಃಖ ಕೇವಲ ನನ್ನದು...
ಗಿರಿಯ ನೆತ್ತಿಯ ಸೋಕಿದ ಮೋಡಕ್ಕೆ ಹನಿಯಾಗಿ ಅದೆ ಗಿರಿಯ ಪಾದ ತಾಕುವ ತವಕ,
ಬಹುಷಃ ನಿನ್ನ ಮುಂದೆ ನಾನೂರುತ್ತಿರುವ ಮಂಡಿಗೆ
;ಯಾಚಿಸುತ್ತಿರುವ ಒಲವ ಭಿಕ್ಷೆಗೆ ಅದೊಂದು ಮಾತ್ರ ಹತ್ತಿರದ ಹೋಲಿಕೆ//


ಮತ್ತೊಮ್ಮೆ ಏನೊಂದನ್ನೂ ಆಶಿಸಲಾರೆ...
ಒಂದೆಮ್ಮೆ ನೀ ನನಗೆ ಸಿಗಬಹುದಿತ್ತು,
ನಾ ನಿನ್ನೊಳಗೆ ಸೇರಿ ಹೋಗಬಹುದಿತ್ತು/
ಕನಸಲಾದರೂ ಸರಿ
;ಕೆಲಮಟ್ಟಿಗಾದರೂ ನಾವಿಬ್ಬರೂ ಒಬ್ಬರೊಬ್ಬರ ನನಸಾಗಬಹುದಿತ್ತು...!//


ಸಿಗದ ಸಂಭ್ರಮದ ಹಿಂದೆ ಭ್ರಾಂತ...
ಕಾಯುತ್ತಲೇ ಇರುವ ಹಣೆ ಬರಹ ನನ್ನದು,
ಸಿಗಲಾರದ ನಿನ್ನ ಒಲವಿಗೆ ಕಾತರಿಸುತ/
ಜೀವನ ಪೂರ್ತಿ ಒಂಟಿತನದ ಸೂತಕ ಸೋಕಿರುವಾಗ...
ಯಾವ ಜಾತಕ ತಾನೇ ಏನು ಮಾಡೀತು?
ಸಂತಸ ಮರಳಿ ಬಾಳಲಿ ಹೇಗೆ ಮೂಡೀತು?//

ಕವಿಯಾದ ಕರ್ಮಕ್ಕೆ ಸಂಭ್ರಮಿಸಲೊ..
ಏನೂ ಯೋಗ್ಯತೆಯಿಲ್ಲದ ನನ್ನಂತವನನ್ನೇ ಕವಿಯಾಗಿಸಿದ/
ನಿನ್ನ ನಡುವಳಿಕೆಗೆ ಬೇಸರಿಸಿ ಪರಿತಪಿಸಲೊ....
ಗೊತ್ತಾಗುತ್ತಿಲ್ಲ!//

12 January 2011

ನೋವಿಗೊಂದು ಹೆಸರುಬೇಕ?

ಕದಡಿದ ಮನದ ಕೊಳದಲ್ಲಿ ಒಲವಿನ ಅಲೆಗಳು ಏಳುತ್ತಿಲ್ಲ...
ಇನ್ನೊಂದು ಹುಸಿ ಕಲ್ಲನೆಸೆದು ಹೊಸ ಅಲೆಗಳ ಗುಚ್ಛವನೆಬ್ಬಿಸಲು,
ನನ್ನ ಮನಸೂ ಕೇಳುತ್ತಿಲ್ಲ/
ಹಗಲಿಗೂ ಇರುಳಿಗೂ ಎಡೆಬಿಡದ ಜೂಟಾಟ...
ಕಾಲದ ಅರಿವಿಲ್ಲದ ನನಗೆ ಕತ್ತಲೆಗೂ ಬೆಳಕಿಗೂ ವ್ಯತ್ಯಾಸ ಅರಿವಾಗದಿರೋದು,
ಮಾತ್ರ ದುರಂತ//


ನೀನಿಷ್ಟು ಸ್ವಾರ್ಥಿಯಾಗಿರಲಿಲ್ಲ...
ನನಗೆ ಗೊತ್ತಿರುವ ನಿನ್ನ ನಿಲುವುಗಳು ಇಷ್ಟೊಂದು ಸಂಕುಚಿತವಾಗಿರಲೂ ಇಲ್ಲ,
ಅದೆಷ್ಟು ಬದಲಾಗಿ ಬಿಟ್ಟೆ...!
ಸಣ್ಣದೊಂದು ಸುಳಿವನ್ನೂ ಕೊಡದೆ?/
ನಿಲ್ಲದೆ ಮನದ ದಡಕ್ಕೆ ಒಂದರ ಹಿಂದೊಂದು ಅಪ್ಪಳಿಸುವ....
ಭಾವದಲೆಗಳು ಮರಳುವಾಗ,
ಎದೆಯಲ್ಲಿ ಉಳಿಸಿ ಹೋಗಿದ್ದು ಕೇವಲ ನಿನ್ನ ನೆನಪಿನ ಪಸೆಯನ್ನ/
ನನ್ನೆಲ್ಲ ಮನಸಿನ ಮಾತುಗಳಿಗೆ ಅಂಟಿದೆ...
ವೇದನೆಯ ಬೇನೆ,
ನಿನಗೂ ಗೊತ್ತು ಇದಕ್ಕೆಲ್ಲ ಕಾರಣ ನೀನೆ//


ಸಾಗಿ ಬಂದ ಹಾದಿಯಲ್ಲಿ ಹರಡಿ ಚಲ್ಲಿದ್ದ ಹೂವುಗಳೆ...
ಮುಳ್ಳುಗಳಾಗಿ ಬದಲಾದ ವಿಸ್ಮಯ ವಾಸ್ತವವನ್ನು ಅರಗಿಸಿಕೊಳ್ಳಲಾಗದಷ್ಟು ನೊಂದಿದ್ದೇನೆ...
ಬೆಂಕಿಯ ಸುಳಿವಿರದಿದ್ದರೂ,
ನೋವಿನುರಿಯಲ್ಲಿ ಬೆಂದಿದ್ದೇನೆ//


ಎಡವಿ ಬಿದ್ದರೂ ಸರಿ...
ತಡವಿ ಮುಳ್ಳ ಅಂಚನು,
ನೆತ್ತರಲಿ ತೊಯ್ದರೂ ಸರಿ/
ಇದು ಆಯ್ಕೆ ಅಲ್ಲ ಅನಿವಾರ್ಯತೆ...
ನಿನ್ನ ತಿರಸ್ಕಾರದ ಸಂಗಡ,
ಬಾಳಲೆ ಬೇಕಾದ ಭೀಕರ ಕಥೆ//


ಬೇಡದಿದ್ದರೂ ಬಾಳಲೇಬೇಕು...
ನೋವ ನದಿಯಲಿ ತಳ್ಳಿಬಿಟ್ಟ ಮೇಲೆ,
ಒಂದೋ ಮುಳುಗಿ ಸಾಯಬೇಕು..
ಇಲ್ಲವೆ ಈಜಿ ದಡ ಮುಟ್ಟಬೇಕು/
ಕನಸುಗಳೆಲ್ಲ ಕಮರಿದ ಕಾರಿರುಳ ಬಾಳ ದಾರಿಯಲ್ಲಿ...
ಇನ್ನುಮುಂದೆ ಅನಿವಾರ್ಯ ಒಂಟಿ ಪಯಣ,
ನಿನ್ನೊಲವಿನ ಊರುಗೋಲಿಲ್ಲ...
ನಿನ್ನ ನಗುವಿನ ಮಿಣುಕು ಬೆಳಕಿಲ್ಲ//


ಅದೇನೆ ಇರಲಿ ನನ್ನ ಸಂಕಟ...
ನಿನ್ನ ಮುಂದಿನ ಸಂಭ್ರಮಗಳಿಗೆ ಸಂತಸಗಳೆಲ್ಲ ಸಾಲುಗಟ್ಟಿ ಸಹಿ ಹಾಕಲಿ,
ನಿನ್ನ ನೋವುಗಳೇನಾದರೂ ಚೂರುಪಾರು ಉಳಿದಿದ್ದಲ್ಲಿ...
ಅವೂ ಕೂಡ ದಿಕ್ಕು ಬದಲಿಸಿ ಕೇವಲ ನನ್ನನ್ನೇ ತಾಕಲಿ/
ನಿನ್ನ ನಲಿವಿಗಾಗಿ ಬೇಕಿದ್ದರೆ ನಾ ನೂರು ನೋವುಣ್ಣುವೇನು....
ಸಾವಿರ ಕಿರುಕುಳಗಳನ್ನೂ ಹಲ್ಲು ಕಚ್ಚಿ ಸಹಿಸಿಯೇನು,
ಇನ್ನು ನಿನ್ನ ಅಗಲಿಕೆಯೇನು ಮಹಾ?//


ಹಾಗೆ ನೋಡಿದರೆ ಕಳೆದ ವರ್ಷವೆ ನೀ ನನ್ನ ಕೊಂದಿದ್ದೆ...
ನೆನ್ನೆ ಹೊಡೆದದ್ದು,
ಉಸಿರಿಲ್ಲದಿದ್ದರೂ ಜೀವಂತ ಕಾಣುತ್ತಿದ್ದ ಹೆಣಕ್ಕೆ ಕೊನೆಯ ಕಾಡತೂಸನ್ನಷ್ಟೇ/
ಮುಗಿಸಿ ಬಿಟ್ಟಾಗ ನಿನ್ನೆಲ್ಲ ಮಾತು...
ಉಳಿದಿದ್ದು ಕೇವಲ ನನ್ನ ಕಣ್ಣಂಚಿನ ಹನಿ,
ಎದೆ ಹೊರಡಿಸಿದ ನಿಟ್ಟುಸಿರ ದನಿ//


ನೀನೆ ಎಲ್ಲ ಹೇಳಿಯಾದ ಮೇಲೆ ಹೇಳಲು ಇನ್ನೇನು ತಾನೆ ಉಳಿದಿದೆ?
ಸಂಕಟ ಬಚ್ಚಿಟ್ಟು ತುಟಿಯಂಚಲಿ ಮುಗುಳ್ನಗುವ ಚಿಮ್ಮಿಸುವ ಕಲೆಯೀಗ ಕರಗತವಾಗಿದೆ/
ಕೃತಕ ಆನಂದದ ಮುಖವಾಡದ ಮುಂದೆ,
ಅಸಲಿ ದುಃಖದ ಬತ್ತಲು ಮುಚ್ಚಿ ಹೋಗಿ...
ಸೋಗಿಗೆ ಶರಣಾಗತವಾಗಿದೆ//

09 January 2011

ಹೇಳಲಾರೆ..ಸುಮ್ಮನೂ ಇರಲಾರೆ...

ಅದೆಷ್ಟೇ ಬಯಸಿದರೂ ನನ್ನ ಮನಸು ಕನಸಿನಲ್ಲೂ ನಿನ್ನ ದ್ವೇಷಿಸಲಾರದು...
ನೀನಿಲ್ಲದ ನನಸಿನಲ್ಲಿ ಒಂಟಿಯಾಗಿದ್ದರೂ ಸರಿ,
ಇನ್ಯಾರೊಂದಿಗೂ ಸೇರಿ ಮೈಲಿಗೆಯಾಗಲಾರದು/
ಸಾಲದು ನಿನ್ನ ಉಪೇಕ್ಷೆ...ಇನ್ನಷ್ಟು ನಿಂದಿಸು ನನ್ನ....ತೀರಲಿ ಎಲ್ಲ ಸುಪ್ತ ಅಪೇಕ್ಷೆ...
ನಿರಾಸೆಗೊಳಿಸು...ಇನ್ನಷ್ಟು ನನ್ನ ಕಾಯಿಸು...ನೋಯಿಸು,
ಮನದಣಿಯೆ ದೂಷಿಸು...ಇದೆ ನನ್ನೊಳಗೆ ಇನ್ನಷ್ಟು ನೋವುಣ್ಣುವ ನಿರೀಕ್ಷೆ//


ಕಲ್ಲೆದೆಯನ್ನೂ ಕರಗಿಸುವಂತಹ ಕವಿತೆಯ ಗೀಚಬೇಕು...
ನಿನ್ನೆಡೆಗಿನ ನನ್ನ ಒಲವ ಆಳ ಕಂಡು ಸ್ವತಹ ನಿನ್ನ ಹೃದಯವೆ ನಾಚಬೇಕು,
ಅದೇ ಅವಕಾಶ ಬಳಸಿಕೊಂಡು ನಿನ್ನ ಪ್ರೀತಿ ಖಜಾನೆಯನೆಲ್ಲ ನಾ ದೋಚಬೇಕು/
ಹೂಂ.
ಎಷ್ಟೊಂದಿವೆ ಕನಸುಗಳು...
ನೀ ಮರಳಿ ಬರಬೇಕಷ್ಟೆ//


ಸುಕ್ಕುಗಟ್ಟಿದ ಹಿಡಿಯಷ್ಟು ಕನಸುಗಳಿಗೆ ಕಡೆಯ ಉಸಿರು ಮಣಿಯುವ ಮುನ್ನ...
ಬಂದು ಒಂದೇ ಒಂದು ಬಾರಿ ಕೈ ತಾಕಿಸು,
ಒಲವು ಉಳಿದಾದರೂ ಉಳಿಯಲಿ ದಯವಿಟ್ಟು ನಿನ್ನ ಬಿಸಿಯುಸಿರನೊಮ್ಮೆ ನನ್ನೆದೆಗೆ ಸೋಕಿಸು/
ಮತ್ತದೇ ಮತ್ತಿನ ಮಾತು...
ನಿನ್ನ ನೆನಪಿನ ಆಳದಲ್ಲಿ ಕರಗಿ ಹೋಗಿರುವಾಗ ನಾನು,
ಹಾಗೆಯೆ ಸ್ಥಿರವಾಗಿ ನಿಂತು ಹೋಗಬಾರದೆ ಈ ಹೊತ್ತು......?!//


ಸುಮ್ಮನೆ ಸುಳ್ಳು ಹೇಳಿದರೇನು ಸುಖ?
ಹೌದು ನಾ ನಿನ್ನ ಮನಸಾರೆ ದ್ವೇಷಿಸುತ್ತೇನೆ...
ಆದರೆ ಇದರ ಹಿಂದಿನ ಸತ್ಯ ಗೊತ್ತ?,
ಅದಕ್ಕೂ ನೂರುಪಟ್ಟು ಹೆಚ್ಚು...
ಜೀವ ಬಿಟ್ಟು ಕೇವಲ ನಿನ್ನನ್ನಷ್ಟೆ ಪ್ರೀತಿಸುತ್ತೇನೆ//


ಸಂಕಟ ಬಚ್ಚಿಟ್ಟು ತುಟಿಯಂಚಲಿ...
ಮುಗುಳ್ನಗುವ ಚಿಮ್ಮಿಸುವ ಕಲೆಯೀಗ ಕರಗತವಾಗಿದೆ,
ಕೃತಕ ಆನಂದದ ಮುಖವಾಡದ ಮುಂದೆ...
ಅಸಲಿ ದುಃಖದ ಬತ್ತಲು ಮುಚ್ಚಿ ಹೋಗಿ...
ಸೋಗಿಗೆ ಶರಣಾಗತವಾಗಿದೆ/
ಸಿಕ್ಕ ಸಿಕ್ಕಲ್ಲೆಲ್ಲ ಅಲೆದಾಡುವ ಹುಚ್ಚುಮನಕ್ಕೆ...
ಕಡೆಗೆ ನೆಲೆಸಲು ಮನಸಾಗೋದು ಕೇವಲ ನಿನ್ನ ಕನಸಲ್ಲಿ,
ಸ್ವಪ್ನವನ್ನೆಲ್ಲ ವಾಸ್ತವದ ರಂಗಿನಲ್ಲಿ...
ಮಿಂಚಿಸುವ ಆಸೆ ಮೂಡುವುದು ನಿನ್ನ ನನಸಲ್ಲಿ//


ಧೂಳು ಮುಚ್ಚಿದ್ದ ನನ್ನ ಮನೆ ಕಿಡಕಿಯ ಗಾಜಿನ ಮೇಲೆ...
ಕಿರುಬೆರಳಲ್ಲಿ ನೀ ಬರೆದಿದ್ದ ನಿನ್ನದೆ ಹೆಸರು,
ಇನ್ನೂ ಅಳಿಸಿಹೋಗದಂತೆ ಕಾಪಿಟ್ಟು ಕೊಂಡಿದ್ಧೇನೆ/
ಅದರ ಸನಿಹದಲ್ಲೆ ನಿನ್ನ ಹೆಸರಿಗೆ ನಾನೊತ್ತಿದ್ದ....
ಮುತ್ತಿನ ಕುರುಹಾಗಿ ನನ್ನ ತುಟಿಗುರುತುಗಳೊಂದಿಗೆ,
ಸಾಕ್ಷಿ ಹಾಗೆ ಇನ್ನೂ ಉಳಿದಿರುವುದೆ ವಿಸ್ಮಯ//

07 January 2011

ಕುಡಿಯಾಸೆಯ ಕನಸುಗಳು...

ಕನ್ನಡಿಯನ್ನೆ ಇಟ್ಟುಕೊಳ್ಳದ ನನಗೆ ಅದರ ಕೊರತೆಯೆಂದೂ ಕಾಡಿಲ್ಲ...
ಮನಸೊಳಗೆ ಅಚ್ಚೊತ್ತಿರುವ ನಿನ್ನ ಚಿತ್ರದಲ್ಲಿ,
ಫಳಫಳಿಸುವ ಕಣ್ಣುಗಳಿರುವಾಗ ಅದೇ ಸಾಕಲ್ಲ ನನ್ನ ಪ್ರತಿಬಿಂಬಿಸಲು/
ಧೂಳು ಮುಚ್ಚಿದ್ದ ನನ್ನ ಮನೆ ಕಿಡಕಿಯ ಗಾಜಿನ ಮೇಲೆ ಕಿರುಬೆರಳಲ್ಲಿ...
ನೀ ಬರೆದಿದ್ದ ನಿನ್ನದೆ ಹೆಸರು ಇನ್ನೂ ಅಳಿಸಿಹೋಗದಂತೆ ಕಾಪಿಟ್ಟು ಕೊಂಡಿದ್ಧೇನೆ,
ಅದರ ಸನಿಹದಲ್ಲೆ ನಿನ್ನ ಹೆಸರಿಗೆ ನಾನೊತ್ತಿದ್ದ ಮುತ್ತಿನ ಕುರುಹಾಗಿ...
ನನ್ನ ತುಟಿಗುರುತುಗಳೊಂದಿಗೆ ಸಾಕ್ಷಿ ಹಾಗೆ ಇನ್ನೂ ಉಳಿದಿರುವುದೆ ವಿಸ್ಮಯ//

ಅಕಸ್ಮಾತ್ ನೀ ಮರಳಿ ಬಂದರೆ ಮನೆ ಬಾಗಿಲು ಮುಚ್ಚಿರಬಾರದು....
ಎಂದು ನನ್ನ ಮನೆಗೆ ನಾನು ಬಾಗಿಲನ್ನೆ ಇಡಿಸಿಲ್ಲ,
ನಿನ್ನ ಬೆರಳುಗಳ ಹೊರತು ನನ್ನ ಹೃದಯದ...
ವೀಣೆಯ ತಂತಿಯನ್ನ ಇನ್ಯಾರೂ ಮಿಡಿಸಿಲ್ಲ/
ಮರೆತ ಮಾತುಗಳನ್ನೆಲ್ಲ ಒಂದೊಂದಾಗಿ ಅಕ್ಷರಗಳಲ್ಲಿ ಪೋಣಿಸಿ....
ನಿನ್ನ ನೆನಪಿನಲ್ಲಿ ಕಣ್ಣುಗಳುದುರಿಸಿದ ಹನಿಗಳ ಮುತ್ತುಗಳನ್ನೂ ಅದರೊಂದಿಗೆ ಸೇರಿಸಿ,
ನಾ ಕಟ್ಟಿರುವ ಅಂದದ ಮಾಲೆ...
ಇನ್ನೂ ಅಂದವಾಗಿ ಕಂಗೊಳಿಸೀತು ನಿನ್ನ ಮೇಲೆ//

ಕತ್ತಲಲ್ಲಿ ಬೆಳಕಿನ ತಲಾಶು ಮಾಡುವ....
ಹುಂಬ ಪ್ರಯತ್ನಕ್ಕೆ ಆಶಾಕಿರಣ ಮುಂದೊಮ್ಮೆ ಸಿಕ್ಕರೆ,
ನೀನನ್ನ ನಕ್ಕು ತಬ್ಬಿ ಹರಿಸಬಹುದಾದ ಅಕ್ಕರೆ/
ಶೇಷಪ್ಪ ಅಯ್ಯರನ ಕಾಲದಲ್ಲಿ
'ಯಾವುದೆ ಉದ್ದೇಶವಿಲ್ಲದೆ,ಅಮಿಷಗಳಿಲ್ಲದೆ,ನಿಷ್ಕಾರಣವಾಗಿ ಚಿಗುರೊಡೆಯುವುದೆ ನಿಜವಾದ ಒಲವು ;
ಒಂದುವೇಳೆ ಉದ್ದೇಶ ಸಾಧನೆಗೆ ಅಮಿಶದೊಂದಿಗೆ ಖಾಸಾ ಕಾರಣವಿದ್ದು ಹುಟ್ಟಿದ್ದರೆ ಅದು ಒಲವಲ್ಲ ಕೇವಲ ಭ್ರಮೆ',
ಎಂದು ಶೇಕ್ಸ್ ಪಿಯರ್ ಹೇಳಿದ್ದ ಮಾತು...
ಅಕ್ಷರಶಃ ಈ ಕಾಲಕ್ಕೂ ನಿಜ,
ಉದಾಹಾರಣೆಗೆ ನನ್ನನ್ನೆ ತೆಗೆದುಕೊ//
ಏನಾದರು ಕೇಳಿದರೆ ಕೊಡುವ ಭಗವಂತನೊಬ್ಬ....
ಈ ಜಗತ್ತಿಗೆ ಬೇಕಾಗಿದ್ದ,
ನಿತ್ಯ ನಿನ್ನ ಸೇರುವ ನನ್ನ ಪ್ರಾರ್ಥನೆಗೆ ತಥಾಸ್ತು ಎನ್ನಲಾದರೂ...
ಅಂತವನೊಬ್ಬ ಖಂಡಿತವಾಗಿ ಈ ಭೂಮಿಯಲ್ಲಿರಬೇಕಿತ್ತು/
ಗೊತ್ತಿಲ್ಲ ನಿನ್ನ ಸಾಂಗತ್ಯ ನನಗ್ಯಾಕೆ ಇಷ್ಟ?
ನೀ ಜೊತೆಗಿಲ್ಲದ ನೋವು ಸಹಿಸೋಕೆ ಅದೇಕೆ ಬಲು ಕಷ್ಟ?,
ಬಹುಷಃ ಇದೆ ಏನೊ ಒಲವು//

ಗಂಡಸರ ಎಲ್ಲಾ ಬುದ್ದಿಯೂ ಸೊಂಟದ ಕೆಳಗೆ...
ಎರಡು ತೊಡೆಗಳ ನಡುವೆ ಇದೆ ಎಂದು ನಂಬಿದೆ ಈ ಜಗತ್ತು,
ನಾನೂ ಆ ಸಾಲಿನ ಒಬ್ಬ ಸದಸ್ಯ ಎಂದು ನೀನಂದುಕೊಂಡಿದ್ದರೆ...
ಕ್ಷಮಿಸು ನಿನ್ನ ಎಣಿಕೆ ತಪ್ಪು/
ನಿನ್ನ ಬಾಳಲ್ಲಿ ನೀ ಭೇಟಿಯಾಗಿ...
ಮನಸಲ್ಲೂ ಒಂಚೂರು ಜಾಗ ಕೊಟ್ಟ ಮೊದಲನೆ ವ್ಯಕ್ತಿ ನಾನಾಗಿಲ್ಲದಿರಬಹುದು,
ಅನ್ನುವ ವಿವೇಕ ನನಗಿದೆ....
ಆದರೆ ಕಡೆಯವನಂತೂ ಖಂಡಿತ ನಾನಾಗಿಯೆ ತೀರುತ್ತೇನೆ ಎಂಬ ತೀರದ ವಿಶ್ವಾಸ ನನ್ನದು//

‎"ಸೂಳೆಮಕ್ಕಳಿಗೆ ಸಿಗೋದು ಕುದುರೆತಟ್ಟು...
ಕುದುರೆತಟ್ಟಿರೋದೆ ಸೂಳೆಮಕ್ಕಳಿಗಾಗಿ" ಎಂಬ ಗಾದೆಯ ಮೇಲೆ ನನಗೆ ಅಚಲ ವಿಶ್ವಾಸವಿದೆ,
ಒಳ್ಳೆಯದಕ್ಕೆ ಯಾವಾಗಲೂ ಒಳ್ಳೆಯದೆ ಜೋಡಿ...
ಕೆಟ್ಟದಕ್ಕೆ ಕೆಟ್ಟದು ಎಂಬ ಅರ್ಥ ಈ ಗಾದೆಯದ್ದು....
ಇದಕ್ಕೆ ನಾವಿಬ್ಬರು ಪರಸ್ಪರ ಭೇಟಿಯಾಗಿರೋದೆ ಸಾಕ್ಷಿ/
ಹುಚ್ಚನೆನ್ನಲಿ...ಮರುಳನೆಂದಾದರೂ ಕರೆಯಲಿ....
ಕೃಷ್ಣಪಕ್ಷದ ಕೊನೆಯ ದಿನದಲ್ಲೂ,
ಪೂರ್ಣಚಂದ್ರನ ನಿರೀಕ್ಷಿಸುವ ನನ್ನ ಕಾತರಕ್ಕೆ...
ಯಾರು ಎಲ್ಲಿ ಬಡಿದು ಕೊಂಡಾದರೂ ನಗಲಿ...ನೀ ಬರುವ ತನಕ,
ನಿನ್ನ ಕಾಯೋದೆ ನನ್ನ ಕಾಯಕ//

ನೀ ಶಶಿಯಾದರೆ ನಾನಾಗುವೆ ನಿನ್ನ ಹಿಂಬಾಲಿಸುವ ರಾತ್ರಿ,
ಅಮಾವಾಸ್ಯೆಯ ಕಾಳಿರುಳಲ್ಲೂ ನಿನಗಾಗಿ ಪ್ರಾಣ ಒತ್ತೆ ಇಟ್ಟಾದರೂ ನಾ....
ಬೆಳದಿಂಗಳ ತರೋದು ಖಾತ್ರಿ/
ಮುಕ್ತ ಮನಸ್ಸಿನ ಸುಪ್ತ ಕೋರಿಕೆಗಳನ್ನೆಲ್ಲ ಈಡೇರಿಸಲು...
ಬರುವ ನಿನ್ನ ಆಗಮನದ ಕಾತರದ ನಿರೀಕ್ಷೆಯಲ್ಲಿ,
ನನ್ನ ಮನಸೆಲ್ಲ ಪ್ರಪ್ಫುಲ್ಲಿತವಾಗಿದೆ//

ಸೂಕ್ತ ತಾವಿನ ಹುಡುಕಾಟದಲ್ಲಿರುವ ನನ್ನ ಒಲವಿಗೆ....
ಸಿಕ್ಕ ಮೊದಲ ಹಾಗು ಕೊನೆಯ ನಿಲುದಾಣ ನಿನ್ನೆದೆ,
ಸೂಕ್ಷ್ಮ ಮನಸಿನ ನವಿರು ಭಾವಗಳಿಗೆ ಬಣ್ಣ ಹಚ್ಚಿ ಸಿಂಗರಿಸುವ ಉಮೇದಿದೆ ನನಗೆ...
ಆದರೆ ನೀ ಮುಂದೊಮ್ಮೆ ಮರಳಿ ಬರುವುದಾದರೆ ಮಾತ್ರ/
ಎದೆಯ ಗುಡಿಸಿಲ ಬಾಗಿಲಲಿ ಬಿಟ್ಟ,
ರಂಗೋಲಿಯ ಪ್ರತಿಯೊಂದು ರೇಖೆಗಳಿಗೂ...
ನಿನ್ನ ಹೆಜ್ಜೆ ತಾಕಿ ತಣಿಯುವ ಕಾತರವಿದೆ//

06 January 2011

ಬೂಟಾಟಿಕೆ ಬಿಡಿ..

ಕೆಲಸವಿಲ್ಲದ ಆಚಾರಿ ಮಗುವಿನ ಮುಕುಳಿ ಕೆತ್ತಿದಂತೆ ಮಾಡಬೇಕಾದ ತುರ್ತು ಕೆಲಸಗಳತ್ತ ಜಾಣ ಕುರುಡರಾಗಿ ಕೆಲಸಕ್ಕೆಬಾರದ ಉತ್ಸವ,ಅಡ್ಡ ಪಲ್ಲಕ್ಕಿ ಉತ್ಸವಗಳಲ್ಲಿ ಮಗ್ನರಾಗಿರುವ ಹಿಂದೂ ಧಾರ್ಮಿಕ ಮಠಗಳ ಗುರುಗಳು,ಹಿಂದೂ ಮೂಲಭೂತವಾದಿ ಸಂಘಟನೆಗಳ ಚುಕ್ಕಾಣಿ ಹಿಡಿದವರು,ಹಿಂದೂವಾದವನ್ನೆ ಬೆಣ್ಣೆ-ಬ್ರೆಡ್ ಮಾಡಿಕೊಂಡಿರುವ ರಾಜಕೀಯ ನೇತಾರರೂ ಗಮನಿಸಲೆ ಬೇಕಾದ ಸಂಗತಿಯೊಂದು ಇಲ್ಲಿದೆ.


ಮೇಲ್ನೋಟಕ್ಕೆ ಬೂಟಾಟಿಕೆಯಂತೆ ಗೋಚರವಾಗುವ ಈ ಮೂರೂ ವರ್ಗದ ಮಂದಿಯ ಕಾಳಜಿಯ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಲು ಇದೀಗ ಸಕಾಲ.ದಿ ೩೧ ದಶಂಬರ ೨೦೧೦ ರ 'ಡೆಖ್ಖನ್ ಹೆರಾಲ್ಡ್' ಸಂಚಿಕೆಯ ಪುಟ ಸಂಖ್ಯೆ ೭ ರಲ್ಲಿ "Nayar-Hurley like marriages not valid india: DELHI HC" ಎಂಬ ಶಿರೋನಾಮೆಯಲ್ಲಿ ಪ್ರಕಟವಾಗಿದ್ದ ಸುದ್ದಿಯಂತೆ ಭಾರತೀಯ ಸಂವಿಧಾನ ಬದ್ದವಾದ 'ಹಿಂದೂ ವಿವಾಹ ಸಂಹಿತೆ'ಯಲ್ಲಿ ಹುಟ್ಟು ಹಿಂದೂ ಧರ್ಮೀಯನೊಬ್ಬ/ಳು ಒಂದುವೇಳೆ ಅನ್ಯ ಧರ್ಮದಲ್ಲಿ ಜನಿಸಿದವರನ್ನು ವಿವಾಹವಾದರೆ ಅದನ್ನು ಈ ನೆಲದ ಕಾನೂನು ಒಪ್ಪಿಕೊಳ್ಳದು,ಕಾನೂನಿನ ದೃಷ್ಟಿಯಲ್ಲಿ ಅದು ಅನೈತಿಕ! (ಇಲ್ಲಿ ಒಂದು ಒಂದೇ ಒಂದು ಸಮಾಧಾನದ ಸಂಗತಿಯೆಂದರೆ ವಿವಾಹ ನೋಂದಣಿಯಾದರೆ ಪರವಾಗಿಲ್ಲವಂತೆ,ಆದರೆ ಅದು ಯಾವುದಾದರೂ ಒಂದು ಧರ್ಮದ ಆಧಾರಕ್ಕೆ ಒಳಪಟ್ಟಿರುತ್ತದೆ!) ಹಾಗು ಅಂತಹ ಅಕ್ರಮ ವಿವಾಹಗಳಿಗೆ ಕಾನೂನಿನ ಪ್ರಕಾರ ಸಮ್ಮತಿಯೇ ಇಲ್ಲದಿರುವುದರಿಂದ ವಿಚ್ಚೇದನದ ಪ್ರಶ್ನೆಯೆ ಉಧ್ಭವಿಸುವುದಿಲ್ಲ?! ತಮಾಷೆಯೆಂದರೆ ಹಿಂದೂಗಳ ಹೊರತು ಇನ್ಯಾವುದೆ ಮತೀಯರಿಗೂ ನಮ್ಮ ನೆಲದಲ್ಲಿ ಈ ನಿರ್ಬಂಧವಿಲ್ಲ.ಹೀಗಾಗಿ ನಮ್ಮ ನ್ಯಾಯಾಲಯಗಳೂ ಕೂಡ ಇದಕ್ಕೆ ಬದ್ಧ.

ಅಂದರೆ,ಒಂದೊಮ್ಮೆ ಪ್ರೀತಿಸಿ ಒಂದು ಜೋಡಿ ಪರಸ್ಪರರ ಧರ್ಮಕ್ಕೆ ಮತಾಂತರಗೊಳ್ಳದೆ ಸ್ವ-ಇಚ್ಛೆಯಿಂದ ವಿವಾಹವಾಗಿ ಸುಖವಾಗಿರೋದು ಅಥವಾ ಮುಂದೊಮ್ಮೆ ಸಂಬಂಧದಲ್ಲಿ ವಿರಸ ತೋರಿ ಬಂದಲ್ಲಿ ವಿವಾಹ ವಿಚ್ಚೇದನ ಬಯಸೋದು ಇವೆರಡೂ ಕಾನೂನು ಬಾಹಿರ ಕೃತ್ಯಗಳು! ಇನ್ನಾದರೂ ಸಮುದಾಯವನ್ನು ಸಾಬರ-ಕ್ರಿಸ್ತುವರ ವಿರುದ್ದ ವಿನಾಕಾರಣ ಛೂಬಿಡುವ ಪ್ರವೃತ್ತಿ ತ್ಯಜಿಸಿ :ಈಗಿನಂತೆ ಕೂಗುಮಾರಿಗಳಾಗಿಯೆ ಇರುವ ಬದಲು so called ಹಿಂದೂ ಧಾರ್ಮಿಕ ಮುಖಂಡರು-ಮಠಾಧೀಶರು ಈ ಕಾನೂನು ಸೂಕ್ಷ್ಮವನ್ನು ಪರಿಹರಿಸುವ ಅಸಲು ಪ್ರಾಮಾಣಿಕತೆ ಒಳಗೊಂಡ ಕಾಳಜಿ ತೋರುತ್ತಾರೆಯೆ? ಸಮುದಾಯದ ಸಮನ್ವಯತೆಗಳಿಗೆ ಆದ್ಯತೆ ಕೊಡುತ್ತಾರೆಯೆ? ಇಲ್ಲ ಎಂದಿನಂತೆ ಬೊಜ್ಜು ತುಂಬಿದ ಡೊಳ್ಳು ಹೊಟ್ಟೆ ಬಿಟ್ಟುಕೊಂಡು ಬಫೂನ್ಗಳಂತೆ ಪಳಯುಳಿಕೆಗಳಾಗಿಯೆ ಉಳಿಯುತ್ತಾರೊ? ಎಲ್ಲ ಅವರವರಿಗೆ ಬಿಟ್ಟದ್ದು.

04 January 2011

ನಲ್ಮೆಯ ಓದು ನಿಮದಾಗಲಿ.

ಗೆಳೆಯರೆ

ಇವತ್ತಿನ 'ಪ್ರಜಾವಾಣಿ'ಯ ಸಂಪಾದಕೀಯ ಪುಟ 'ಅಭಿಮತ'ದಲ್ಲಿ ಪ್ರಕಟವಾಗಿರುವ ಡಾ,ಯೂ ಆರ್ ಅನಂತಮೂರ್ತಿಯವರ 'ಅನುಸಂಧಾನ' ಅಂಕಣ ಬರಹವನ್ನ ಸಾಧ್ಯವಾದರೆ ತಪ್ಪದೆ ಓದಿ.ಅವರ ವಿಚಾರಧಾರೆಯನ್ನು ಒಪ್ಪದಿರುವವರಲ್ಲಿ ನಾನೂ ಒಬ್ಬ; ಆದರೆ ಕೆಲವೊಮ್ಮೆ ಅವರ ಬರಹದ ಶೈಲಿ,ಅದು ಹಚ್ಚುವ ಚಿಂತನೆ,ಒಂದು ವಿಷಯದ ಕುರಿತ ಅವರ ಪ್ರಬಲ ವಕಾಲತ್ತು ಎಂತವರನ್ನೂ ;ಅವರ ವಾದಕ್ಕೆ ಒಪ್ಪಿಸಿ ಬಿಡುತ್ತದೆ ಹಾಗು ಸನ್ಮೋಹಿತಗೊಳಿಸುತ್ತದೆ.ಒಂದು ಒಳ್ಳೆಯ ಬರಹ ಓದುವ ಖುಷಿಯನ್ನ ಖಂಡಿತ ಕಳೆದುಕೊಳ್ಳಬೇಡಿ...ನಲ್ಮೆಯ ಓದು ನಿಮದಾಗಲಿ.

...( http://prajavani.net/Content/Jan52011/editpage20110104221076.asp ಕೊಂಡಿ ಕೃಪೆ : ರವೀಂದ್ರ ಭಟ್ಟ)

03 January 2011

ಒಂದಷ್ಟು ಕನವರಿಕೆಗಳು...

ಮೌನ ಕರೆಯೊಂದರ ಸುಪ್ತ ನಿರೀಕ್ಷೆ...
ಒಂದು ಚೂರಾದರೂ ಒಲವು ನಿನ್ನಿಂದ ಸಿಕ್ಕೀತು ಎಂಬ ಅದಮ್ಯ ಅಪೇಕ್ಷೆ,
ನನ್ನಲ್ಲಿ ಇನ್ನೂ ಚೈತನ್ಯ ಉಳಿಸಿದೆ/
ಹಳೆಯ ಹಾಡಿನಂತೆ...
ಹುಟ್ಟೂರಲ್ಲಿ ಹಿಂದೆಂದೋ ಎಡವಿ ನಡೆದ ಹಾದಿಯ ಮರೆಯಲಾಗದ ಜಾಡಿನಂತೆ,
ಯವ್ವನ ಉಕ್ಕುತ್ತಿರುವ ಆರಂಭದ ದಿನಗಳಲ್ಲಿ ಹುಚ್ಚು ಹುಚ್ಚು ಅಲೆದ ಬೀದಿಯಂತೆ...
ನಿನ್ನ ನೆನಪಿನ ಊರಲ್ಲಿ ನಡೆವಾಗ ನಾನು ಸಂತೃಪ್ತ//


ಜುಳುಜುಳು ನಾದಗೈಯುವ ತುಂಗೆಯ ದಡದಲ್ಲಿ ಬೆಳದಿಂಗಳ ರಾತ್ರಿಯಲ್ಲಿ.....
ಕೂತು ಹರಿವ ನೀರಲಿ ಇಳಿಬಿಟ್ಟಿದ್ದ ಒದ್ದೆ ಕಾಲ್ಬೆರಳಲಿ....
ದಡದ ಮರಳ ಮೇಲೆ ನಾ ಬರೆದ ನಿನ್ನ ಹೆಸರಿಗೆ ನಿನ್ನದೆ ಪರಿಮಳವಿತ್ತು...
ಜೊತೆಗೆ ನನ್ನೆದೆಯ ತುಂಬಾ ನಿನ್ನದೆ ನಿರೀಕ್ಷೆಯ ತಳಮಳವಿತ್ತು,
ಕನಸಲೂ ಬೆವರಿದ ಭಾವಗಳು...
ಬಿಸಿಯುಸಿರು ಬಿಡುತ್ತ ಬೆದರುತ್ತಲೆ,
ನೆನ್ನೆಗಳ ಕಿವಿಗಳಲ್ಲಿ ಉಸುರಿದ್ದು ಕೇವಲ ನಿನ್ನ ಹೆಸರು/
ಮುಚ್ಚಿಡಲಾಗದೆ ಬಟಾಬಯಲಾಗುವ ಗುಟ್ಟು....
ಮೈಲಿಗೆಯಾಗಿಸದ ನೋವಿಲ್ಲದ ಮುಟ್ಟು:ನೀನು...
ವಿಚಿತ್ರವೆನಿಸಿದರೂ ಮುಂದಿನ ಹೋಲಿಕೆ,
ಕೀವಾದಾಗ ಹೊಸದೆ ಸುಖದ ನೋವುಕ್ಕಿಸುವ ಕಜ್ಜಿಯ ಮಾಲಿಕೆ....
ಇವೆಲ್ಲವನ್ನೂ ನಿವಾಳಿಸಿ ಎಸಿಯಬೇಕು...
ಎದೆಗೆ ತಿವಿದು ನೀ ನುಂಟುಮಾಡಿದ ಯಾತನೆಯ ಮುಂದು//

ಹೊಸ ವರ್ಷವಂತೆ...
ಅದೇನೂ ಸಂಭ್ರಮವಂತೆ...
ನನಗಂತೂ ಅರ್ಥವೆ ಆಗಲಿಲ್ಲ...
ನನ್ನೆಲ್ಲ ಸುಖ ಸಂಚಿತ ಖಾತೆ ನಿನ್ನೆದೆಯಲ್ಲಿ ತೆರೆದು,
ಆಸೆಗಳನ್ನೆಲ್ಲ ಅಲ್ಲೆ ದೀರ್ಘಾವಧಿ ಮುದ್ದಾಂ ಇಟ್ಟಿರುವಾಗ ನನಗೆಲ್ಲಿಯ ಹುಸಿ ಸಂಭ್ರಮ?/
ನನ್ನೆಲ್ಲ ನಿರೀಕ್ಷೆಗಳ ಗಜಗಾಮಿನಿ ಜಾಡು ಮರೆಯದೆ...
ನಿನ್ನೆದೆಯತ್ತಲೆ ಮೌನವಾಗಿ ಸದ್ದಿರದ ಹೆಜ್ಜೆಯಿಡುತ್ತ ಸಾಗುವಾಗ,,,
ಇನ್ನುಳಿದವರೆಡೆ ಆಕರ್ಷಿತನಾಗುವ ಅಡ್ಡ ಹಾದಿಯತ್ತ,
ನುಗ್ಗೀತಾದರೂ ಹೇಗೆ ನನ್ನ ಮನಸು?//

ನಿನ್ನದೆ ಕನಸಿನ ಅರೆ ಮಂಪರಲ್ಲಿ ನೆನ್ನಿನಿರುಳು ನಾ ಮಲಗಿದ್ದಾಗ...
ಸ್ವಪ್ನದ ಭಾವಗಳಿಗೆ ಸ್ಪಂದಿಸುತ್ತಾ ಮಗ್ಗುಲಾಗಿ ಕೈ ಚಾಚಿ...
ನಿನ್ನ ತಬ್ಬಿ ಹಿಡಿದು ನಿನ್ನಧರಗಳಿಗೆ ಗಾಢವಾಗಿ ಮುತ್ತಿಟ್ಟೆ,
ಆದರೆ ನಿನ್ನ ಪ್ರತಿಸ್ಪಂದನೆ ಇಲ್ಲದೆ ಗೊಂದಲವಾಗಿ ನಿದ್ದೆ ಬಿಟ್ಟೆದ್ದು ಕಣ್ತೆರೆದಾಗ...
ಅದು ಕೇವಲ ದಿಂಬು ಎಂಬ ಭೀಕರ ವಾಸ್ತವ ಅಣಗಿಸುತ್ತಿತ್ತು/
ಬಾಳಲ್ಲಿ ಮತ್ತೆ ನೀ ನನಗೆ ಸಿಗಲೆ ಬೇಕ?
ಹಿಂದಿನಂತೆ ಪುನಃ ಪುನಃ ನಾವು ಸಂಧಿಸಲೆ ಬೇಕ?
ಮಾತನಾಡಲೆ ಬೇಕ?
ಆಡದ ನುಡಿಗಳಿಗೂ ಅರ್ಥಪೂರ್ಣ ಚೌಕಟ್ಟು ಹಾಕುವ...
ಈ ಆಪ್ತ ಮೌನವೇ ಸಾಕ?//

ಅಚಲ ಅದಮ್ಯ ನಿರೀಕ್ಷೆಯೊಂದೆ...
ಇಲ್ಲಿಯವರೆಗೆ ನನ್ನನು ಜೀವಂತವಾಗಿಟ್ಟಿರುವುದು,
ನಿನ್ನ ಹೆಜ್ಜೆಗಳ ಸಪ್ಪಳದ ಸಲುವಾಗಿಯೆ....
ನಾ ಹಗಲಿರುಳೂ ನನ್ನ ಮನೆ ಬಾಗಿಲ ತೆರೆದಿಟ್ಟಿರುವುದು/
ಮುಗಿದೀತಾದರೂ ಹೇಗೆ ಬಾಳ ಕಾದಂಬರಿ...
ಇನ್ನೂ ಅಂತಿಮ ಅಧ್ಯಾಯ ಬರೆದಿಲ್ಲ....
ಬರವಣಿಗೆ ಅರ್ಧಕ್ಕೆ ನಿಂತಿದೆ ನೀ ಮರಳಿ ಬರುವೆಯೂ,
ಇಲ್ಲವೋ ಇನ್ನೂ ಖಚಿತವಿಲ್ಲ//