31 July 2020

ಮರುಕ ಹುಟ್ಟಿಸುವ ಮಲೆನಾಡಿನ ಮರುಳ ಮರಳ ಕಥೆ.

ಈ ವರ್ಷ ಮಲೆನಾಡಿನಲ್ಲಾಗಲಿ ಕರಾವಳಿಯಲ್ಲಾಗಲಿ ವಾಡಿಕೆ ಮಳೆಯಲ್ಲಿ ಶೇಕಡಾ ಮೂವತ್ತು ಅಂದರೆ ಮೂರರಲ್ಲೊಂದು ಭಾಗದಷ್ಟೂ ಮಳೆ ಹನಿದಿರದಿದ್ದರೂ ತುಂಗಾˌ ಭದ್ರಾˌ ಸೀತೆˌ ವಾರಾಹಿˌ ಕಾವೇರಿ ಹಾಗೂ ನೇತ್ರಾವತಿಯಲ್ಲಿ ಭರಪೂರ ನೀರು ಹರಿದು ಹೋಗಿದ್ದು ಅಣೆಕಟ್ಟೆಗಳೆಲ್ಲ ತಮ್ಮ ಗರಿಷ್ಠ ಮಟ್ಟಕ್ಕೆ ತಲುಪಿ ಕೆಲವೆಡೆ ಕ್ರೆಸ್ಟ್ ಗೇಟ್ ತೆಗೆದು ನೀರು ಹೊರ ಬಿಟ್ಟ ಪವಾಡಗಳೂ ನಡೆದು ಹೋಗಾಗಿದೆ!🤨

ಅದ್ಹೆಂಗೆ ಹೀಗಾಗಿದೆ? ಅನ್ನುವ ಪ್ರಶ್ನೆ ನಿಮಗಿದ್ದರೆˌ ಕ್ಷಮಿಸಿ ನಿಮ್ಮಷ್ಟು ಬೋಳುಬೆಪ್ಪರೋ ಅಥವಾ ಜಾಣಕುರುಡರೋ ಮತ್ತೊಬ್ಬರಿರಲಿಕ್ಕಿಲ್ಲ. ಅಲ್ರಿ ಮನಸೋ ಇಚ್ಛೆ ಇರೋ ಬರೋ ಹೊಳೆಗಳಂಚಿಂದ ಅಪರಾ ತಪರಾ ಮರಳು ದೋಚಿದರೆ ಇನ್ನೆಂತ ಆಗ್ತದೆ ಮತ್ತೆ?😬

ಮನುಷ್ಯನ ಮಿತಿ ಮೀರಿದ ದುರಾಸೆ ಹಾಗೂ ಧನ ದಾಹಕ್ಕೆ ಬಲಿಯಾದದ್ದು ಸಮೃದ್ಧ ಮರಳ ದಂಡೆ ಹೊಂದಿದ್ದ ಹೊಳೆಗಳಂಚಿನ ಹೊಯಿಗೆ ದಿಬ್ಬಗಳು. ಮೊದಲೆಲ್ಲ ಗಂಧ ಕಳ್ಳಸಾಗಣಿಕೆ ಮಾಡಿ ಊರು ಮನೆಯಲ್ಲಿ ಸಂಭಾವಿತರಂತೆ ಸೋಗು ಹಾಕಿಕೊಂಡು ಬದುಕುತ್ತಿದ್ದ ಬಸ್ಟ್ಯಾಂಡ್ ಮೂರು ಮಾರ್ಕಿನ ಬೀಡಿ - ಹಾಫ್ ಕ್ವಾಟ್ರು ರಮ್ಮಿನ ಗಿರಾಕಿಗಳೆಲ್ಲ ಈಗ ಸುಲಭವಾಗಿ ದೋಚಲು ಸಾಧ್ಯವಿರುವ ಮರಳನ್ನ ದೋಚಿ ಬೆಂಗಳೂರಿಗೆ ಸ್ಮಂಗ್ಲಿಂಗ್ ಮಾಡಿಕೊಂಡು ದುಂಡಗಾಗ್ತಿವೆ. ದಯವಿಟ್ಟು ಇನ್ಯಾರೂ ಮಲೆನಾಡಿಗರು ಮುಗ್ಧರು ಹಳ್ಳಿಗರು ವಿಶಾಲ ಹೃದಯದವರು ಅಂತೆಲ್ಲ ಬೊಗಳೆ ಹೊಡೆದು ತೇಪೆ ಹಾಕಬೇಡಿ. ಯಾವಾಗ ಹೋಂ ಸ್ಟೇಯಂತ ಆತಿಥ್ಯವನ್ನೆ ಹಣ ಗಬರುವ ಮಾರ್ಗವಾಗಿಸುವತ್ತ ಮಲೆನಾಡಿಗ ಹೊರಳಿದರೋ ಅವತ್ತೆ ಅವರ ಮುಗ್ಧತೆಯಲ್ಲಿ ಮಲೆ ಹತ್ತಿ ಹೋಗ್ಯಾಗಿದೆ.🤧

ಉದಾಹರಣೆಗೆ ತೀರ್ಥಹಳ್ಳಿಯಿಂದ ಶಿವಮೊಗ್ಗದ ತನಕ ಹರಿವ ತುಂಗಾ ತಟವನ್ನೆ ತಗೊಳ್ಳಿˌ ಹೆಚ್ಚಂದ್ರೆ ಎಪ್ಪತ್ತು ಕಿಲೋಮೀಟರ್ ಹರಿವಿನ ಪಾತ್ರವಿರೋ ಅಲ್ಲೀಗ ಹದಿನಾಲ್ಕು ಲೀಗಲ್ ಹಾಗೂ ಅದರ ದುಪ್ಪಟ್ಟು ಅಕ್ರಮ ಮರಳು ಕ್ವಾರಿಗಳು ತಲೆಯೆತ್ತಿ ಲೂಟಿ ನಿರಂತರವಾಗಿದೆ. ಅಧಿಕಾರಿ ವರ್ಗ ಹಾಗೂ ರಾಜಕಾರಣಿಗಳ ದುಷ್ಟಕೂಟದ ಮಿಲಾಖತ್ ಇರೋ ಈ ದಂಧೆ ಕೋಟ್ಯಾಂತರ ರೂಪಾಯಿ ವಾಹಿವಾಟಿನದಾಗಿದ್ದುˌ ಹತ್ತು ಹನ್ನೆರಡು ಸಾವಿರಕ್ಕೆ ಸ್ಥಳಿಯವಾಗಿ ತೆಗೆಯಲಾಗುವ ಲೋಡು ಮರಳಿಗೆ ಬೆಂಗಳೂರಲ್ಲಿ ಅದರ ಎಂಟು ಪಟ್ಟು ಬೆಲೆ ಕಟ್ಟಲಾಗ್ತಿದೆ ಅಂದ್ರೆ ಕೊಳ್ಳೆ ಹೊಡೆಯಲಾಗುತ್ತಿರೋ ಮರಳಿನ ಹಾಗೂ ಹಡಬೆ ದುಡ್ಡಿನ ಪ್ರಮಾಣ ಊಹಿಸಿ ಒಂದು ಕ್ಷಣ.😉

ಇದಕ್ಕೆ ಆಳುವ ಅಧಿಕಾರಿ ಹಾಗೂ ರಾಜಕೀಯ ನಾಲಾಯಕರನ್ನ ದೂರಿ ಪ್ರಯೋಜನವಿಲ್ಲ. ಊರಿನ ದೇವಸ್ಥಾನˌ ಜಾತ್ರೆˌ ಕ್ರಿಕೆಟ್ ಪಂದ್ಯಾವಳಿˌ ಮಾರಿ ಜಾತ್ರೆˌ ಯುವಕ ಸಂಘದ ಕ್ರೀಡಾಕೂಟˌ ಗಣಪತಿ ಕೂರ್ಸದುˌ ಕಬಡಿ ಪಂದ್ಯಾವಳಿ ಮುಂತಾದ ತರತರದ ಹೆಸರಿನ ಚಂದಾ ಪುಸ್ತಕಗಳಿಗೆ ಕಣ್ಣುಮುಚ್ಚಿ ಸಾವಿರಾರು ರೂಪಾಯಿಯ ಮೂಳೆ ಎಸೆದು ಸ್ಥಳಿಯ ಆಶಾಢಭೂತಿ ಯುವಕರನ್ನ ಬುಕ್ ಮಾಡಿಕೊಂಡಿರೋ ಅವರ ತಪ್ಪೇನಿದೆ ಇದರಲ್ಲಿ? ಅವರ ಎಂಜಲು ದುಡ್ಡಿಗೆ ಸ್ಥಳಿಯರೆ ತಮ್ಮನ್ನ ತಾವು ಮಾರಿಕೊಳ್ಳಕ್ಕೆ ತಯಾರಾಗಿರೋವಾಗ? ಜೊತೆಗೆ ಇವಕ್ಕೂ ಅಷ್ಟಿಷ್ಟು ಪುಗ್ಸಟ್ಟೆ ಮರಳು ದೋಚಲು ಮುಕ್ತ ಅವಕಾಶ ಬೇರೆ ಇರ್ತದಲ್ಲ. ಕೋಟಿ ಕೊಳ್ಳೆ ಹೊಡೆಯುವವರಿಗೆ ಸಾವಿರಾರು ರೂಪಾಯಿಯ ಚಂದಾ ಕೊಡೋದೇನೂ ದೊಡ್ ವಿಷ್ಯ ಅಲ್ಲ ಬಿಡಿ.🤪

ಹೀಗಾಗೆˌ ಅಂತರ್ಜಲ ವೃದ್ಧಿಸುವ ನೈಸರ್ಗಿಕ ಫಿಲ್ಟರ್ ಆಗಿದ್ದˌ ಮೀನುˌ ಆಮೆˌ ಮೊಸಳೆ ಹಾಗೂ ಹಾವುಗಳ ಹೆರಿಗೆ ಮನೆಯಾಗಿದ್ದ ಮರಳ ದಂಡೆಗಳು ರಾತ್ರೋರಾತ್ರಿ ಮಾಯವಾಗ್ತಿವೆ. ಹೀಗಾಗಿ ಇಂಗಲಾರದ ಅಲ್ಪ ಮಳೆಯ ನೀರೂ ಸಹ ಇಕ್ಕೆಲ ದಡಗಳ ಮೆಕ್ಕಲು ಮಣ್ಣನ್ನ ಕೊರೆಯುತ್ತಾ ಅಣೆಕಟ್ಟುಗಳ ಕೆಸರಿನ ಸಿಲ್ಟು ಹೆಚ್ಚಿಸ್ತಾ ತುಂಬಿದ ಹಾಗೆ ಕಾಣೋ ಅಣೆಕಟ್ಟೆಗಳಿಂದ ತುಂಬಿ ತುಳುಕಿ ಸಮುದ್ರಮುಖಿಯಾಗ್ತಿವೆ. ನಿಧಾನವಾಗಿ ಮಲೆನಾಡು ಬರಿದಾಗಿ ಬಯಲು ಸೀಮೆಯಾಗ್ತಿದೆ.😖

ಮೊದಲು ನೂರಿನ್ನೂರು ಅಡಿಗೆ ನೀರು ಸಿಗ್ತಿದ್ದ ಹೊಳೆ ಬದಿ ಬಾವಿಗಳಲ್ಲೂ ಈಗ ಸಾವಿರ ಅಡಿ ಕೊರೆದರೆ ಮಾತ್ರ ನೀರು ಅನ್ನೋ ದುರಾವಸ್ಥೆಗೆ ಬಂದಾಗಿದೆ. ಹಣದ ದುರಾಸೆ ಮಲೆನಾಡಿಗರ ಮನಸು ಕೆಡಿಸಿದೆ. ನಿಸರ್ಗದ ಸ್ಥಿರತೆ ಯಾರಿಗೂ ಬೇಕಾಗೆ ಇಲ್ಲ ಅನ್ನೋ ಹಂಗಾಗಿದೆ.😎

13 July 2020

ಸುಗಂಧ.....

ಸುಗಂಧ....

ಅಳಿಸಿ ಹೋಗದ ಬಣ್ಣದ ಶಾಯಿಯಲ್ಲಿ ಬರೆದ ಅಕ್ಷರಗಳೆಲ್ಲ
ಅರಿವಿಗೆ ಸಹ ಬಾರದಂತೆ ಮಾಸಿ ಹೋದ ಹಾಗೆˌ
ಆಗಿದ್ದರೂ ಇದು ಮೌನದ ಹಾಯಿದೋಣಿಯ ಮೇಲಿನ ಏಕಾಂಗಿ ಪಯಣ
ತೆಪ್ಪದ ಮೂಲೆಯಲ್ಲಿ ಹೋದವಳಂದಿರಿಸಿದ ನೆನಪಿನ ಹಲಸು ಅಂಟಿಸುವ ಸೌಗಂಧದ ಮೇಣದ ಕಥೆಯೆ ಹೀಗೆ./
ದಟ್ಟ ಅನುಭವದ ಬಾಳೂ ಸಹ ಕೆಲವೊಮ್ಮೆ ದಟ್ಟದರಿದ್ರವನ್ನಿಸುತ ಹೋಗಿˌ
ನೆನ್ನೆಯ ನೆನಪುಗಳ ಕೂಸನ್ನ ಮಲಗಿಸಿದ ತೊಟ್ಟಿಲ ಜೋಲಿಯನ್ನೆ ಅಪ್ಯಾಯಮಾನವಾಗಿ ಇಂದಿನ ಕೈಗಳು ಸಹ ತೂಗಿ ತೂಗಿ.//

ನೀರ ಮೇಲೆ ಅವಳ ಹೆಜ್ಜೆ
ಉಳಿಸದೆ ಹೋದ ಗುರುತುಗಳೆಲ್ಲ ಮನಸಲಿ ಗಾಢವಾಗಿ ಉಳಿದು ಭಾವಲೋಕ ತುಂಬಾ ವಜ್ಜೆˌ
ನೀಲಿ ಜಲದ ಮೇಲೆ ತೇಲಿ ಕನಸುಗಳೆಲ್ಲ ಕರಗಿದಂತೆ
ಕಲ್ಲಾಗಿ ಕ್ಷಣ ನಾನು ನಾವಿಬ್ಬರೂ ಅಂದು ಕೂಡಿದ್ದ ಸ್ಥಳದಲ್ಲೆ ಮೌನವಾಗಿ ನಿಂತೆ./
ಹರಿವ ನದಿಯ ಜಲದ ಕನ್ನಡಿ
ಪ್ರತಿಬಿಂಬಿಸಿತೆ ಸೋತ ಮನದೊಳಗೆ ಮೂಡಿದ ಶೋಕದ ಮುನ್ನುಡಿˌ
ಕಣ್ಣ ಭಿತ್ತಿಯ ಮೇಲೆ ತೂಗಿದ ಕನಸುಗಳ ಬಿಂಬ
ನೋವನೆ ಬಡಿದೆಬ್ಬಿಸಿದ್ದು ಸುಳ್ಳಲ್ಲ ವಿಷಾದದೆದೆಯ ತುಂಬಾ.//

ಹುಣ್ಣಿಮೆ ಹುಟ್ಟಿಸುತ್ತಿದ್ದ ಖುಷಿಗಳೆಲ್ಲ ಈಗ ಕನಸು
ಕಾರ್ಗತ್ತಲ ಅಮಾವಾಸ್ಯೆ ನಿತ್ಯಸತ್ಯ ನನಸುˌ
ವಯಸ್ಸು ಮೀರಿ ಪ್ರೌಢವಾದ ಮಗು ಮನ
ಏಕಾಂತದಲ್ಲಿ ದೈನ್ಯತೆ ಉಕ್ಕಿಬಂದಾಗ ಅನಾಥ ಭಾವದಲ್ಲಿ ಆಗುತ್ತಿರುತ್ತದೆ ವಿಪರೀತ ದೀನ./
ಮಹಲ ಕೊಳದಲ್ಲಿ ನಳನಳಿಸಿ ತೇಲುವ ಕಮಲದ ಪತ್ರೆಯ ಮೇಲಷ್ಟೇ ಅಲ್ಲ
ಗುಡಿಸಲ ಹಿತ್ತಲ ನಿಶ್ಪಾಪಿ ಕೆಸುವಿನ ಎಲೆಯ ಮೇಲೂ ಮಳೆಯ ಹನಿ ನಿಂತಾಗ ಹೊಳೆವ ಮುತ್ತಾಗುತ್ತದೆˌ
ಹೊರ ಸಿರಿಯ ಹೊತ್ತವರ ಹೆಗಲ ಮೇಲೆ ತಲೆ ಆನಿಸಿ ಕಳೆವ ಕ್ಷಣಗಳಷ್ಟೆ ಅಲ್ಲವಲ್ಲ
ಮಾನಸ ಶ್ರೀಮಂತಿಕೆಯ ಮಡಿಲನ್ನ ನೆಮ್ಮದಿಯ ತಲೆದಿಂಬಾಗಿಸಿ ಮಾಡುವ ನಿದ್ದೆಯಲ್ಲೂ ಸಹ ನಿರಾಳತೆಯ ಸ್ಪಪ್ನ ಹೊಳೆವ ನತ್ತಾಗುತ್ತದೆ.//

- 😇

ಕಳ್ಳ ಖದೀಮರಿದ್ದಾರೆ ಎಚ್ಚರ.

ಪಶ್ಟಿಮಘಟ್ಟದ ಸೆರಗು ಕರಾವಳಿ ಹಾಗೂ ನೆರಿಗೆ ಮಲೆನಾಡಿನ ಪ್ರಾಕೃತಿಕ ಸಿರಿಯನ್ನ ದರೋಡೆ ಮಾಡಿರುವ ಕುಕೃತ್ಯಕ್ಕೆ ವಿವಿಧ ಸ್ತರಗಳ ಸರಕಾರಗಳನ್ನ ದೂರುವುದು ಹಾಗೂ ಅದರ ಕುರಿತು ಆಗಿರುವ - ಆಗುತ್ತಿರುವ - ಮುಂದಾಗಲಿರುವ ದೌರ್ಜನ್ಯಗಳನ್ನ ಪಟ್ಟಿ ಮಾಡಿಕೊಂಡು ಆಳುವ ಅಧಮರನ್ನ ಬೈದಾಡುವುದು ತಪ್ಪೇನಲ್ಲ.

ಹಾಗಂತˌ ಒಮ್ಮೆ ಎದೆ ಮುಟ್ಟಿಕೊಂಡು ನಮ್ಮ ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಬಾಕಿ ಇನ್ಯಾರಿಗಲ್ಲದಿದ್ದರೂ ನಿಮಗಷ್ಟೆ ಕೇಳಿಸುವಂತೆ ನೀವು ನೀವೆ ನಿಮ್ಮ ನಿಮಗೆ ಒಂದುಕ್ಷಣ ನಿಜವಾದ ಪ್ರಾಮಾಣಿಕತೆಯಿಂದ ಹೇಳಿ.

ಅರ್ಧ ಎಕರೆ ಅಡಿಕೆ ತೋಟದಂಚಿಗೆ ಆರೆಕರೆ ಕಾಡಿಗೆ ಬೇಲಿ ಸುತ್ತಿ ಅಲ್ಲೂ ಸಸಿ ನೆಟ್ಟು ತೋಟ ವಿಸ್ತರಿಸಿದˌ ಕಾಲೆಕರೆ ಕಾಫಿ ಎಸ್ಟೇಟಿನ ಪಕ್ಕದ ಕೆಲವಾರು ಎಕರೆ ಕಾಡನ್ನ ಕಬಳಿಸಿ ಅಲ್ಲೂ ಕಾಫಿ - ಏಲಕ್ಕಿ ಹಾಕಿ ತಮ್ಮ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಂಡˌ ಮೂರೆಕರೆ ಗದ್ದೆಯ ಸುತ್ತಮುತ್ತಲ ನೂರೆಕರೆ ಕಾನು ಗುಡ್ಡಕ್ಕೆ ಲಗ್ಗೆಯಿಟ್ಟು ಅದನ್ನೂ ತನ್ನ ಬೇಲಿಯೊಳಗೆ ಎಳೆದುಕೊಂಡ ಮಲೆನಾಡು - ಕರಾವಳಿಯ "ಮುಗ್ಧ"(?) ರೈತಾಪಿ ಬೆಳೆಗಾರರ ತಪ್ಪೇನಿಲ್ವ?!


ವಸಾಹತುಶಾಹಿ ಮನಸ್ಥಿತಿˌ ವ್ಯಕ್ತಿ ಪೂಜಕ ವ್ಯಕ್ತಿತ್ವ ಹಾಗೂ ಗುಲಾಮಗಿರಿಗೆ ಸುಶುಪ್ತ ಸಮ್ಮತಿ ನಮ್ಮ "ಭಾರತೀಯ ತಳಿ"ಯ ಹೋಮೋಸೇಪಿಯನ್ ವರ್ಗದ ಪ್ರಮುಖ ಹಾಗೂ ಅನುವಂಶೀಯ ಸಮಸ್ಯೆ.

ಹೀಗಾಗಿಯೆˌ ಆಗುವ ನ್ಯಾಯ - ಅನ್ಯಾಯಗಳನ್ನ ಈ ಮಾನದಂಡಗಳನುಸಾರವೆ ಅಳೆದು ನಮ್ಮ ಮೇಲೆ ನಾವು ನಾವೆ ಹೇರಿಕೊಳ್ಳುತ್ತಿರುತ್ತೇವೆ. ಅದರ ಅಡ್ಡˌ ನೇರˌ ಬಳಸು ಹೀಗೆ ಥರಾವರಿ ಪರಿಣಾಮಗಳಿಂದ ಬಯಸಿ ಬಯಸಿ ಎನ್ನುವಂತೆ ನಿರಂತರ ನರಳುತ್ತಲೂ ಇರುತ್ತೇವೆ. ಈ ಸ್ವಯಂ ಬಂಧನದ ಸ್ವ ಲಿಖಿತ ಲಕ್ಷ್ಮಣ ರೇಖೆಗಳನ್ನ ದಾಟದೆ ಜನ್ಮಜನ್ಮಾಂತರಕ್ಕೂ ನಮಗೆ ಮುಕ್ತಿ ಮರೀಚಿಕೆ.

ಬಿಳಿಯರು ಸಾಹೇಬರುಗಳೆಲ್ಲ ಭಾರತ ತೊರೆದರು ನಿಜ. ಆದರೆˌ ಈ ನಕಲಿ ತಳಿಯ ಕರಿಯ ಸಾಹೇಬರುಗಳೆಲ್ಲ ಸೇರಿ ದೇಶ ದೋಚುವಲ್ಲಿ ತೋರುತ್ತಿರುವ ಅಟ್ಟಹಾಸದ ಮುಂದೆ ಹೋಲಿಸಿದರೆ ಪಾಪˌ ೧೯೦ವರ್ಷಗಳ ಕಾಲ ಯುರೋಪಿಯನ್ನರು ಇಲ್ಲಿ ಆಡಿದ್ದ ಆಟ ತೃಣಕ್ಕೂ ಸಮನಲ್ಲ!


ವಿವೇಕದ ನುಡಿ. ಯಾವಾಗ ಒಬ್ಬ ದುರುಳ ಹಾಗೂ ಧೂರ್ತ ಆಡಳಿತಗಾರ ತನ್ನ ಪ್ರಜೆಗಳ ಅಭಿವೃದ್ಧಿ ಸಾಧಿಸುವುದಲ್ಲಿ ವಿಫಲನಾಗುತ್ತಾನೋˌ ಆಗಾಗ ಅಂತಹ ಅಧಮ ಅಧಿಕಾರಸ್ಥ ದೇಶದ ಐತಿಹಾಸಿಕ ಉನ್ನತಿಯ ಹರುಕು ಬಾವುಟವನ್ನ ಎತ್ತೆತ್ತಿ ಬೀಸುತ್ತಾ ಜನರ ಗಮನವನ್ನ "ಬೋಳು ಮಂಡೆ ಮುಂಡೆಯ ಹಳೆ ತುರುಬಿನತ್ತ" ಸೆಳೆದುˌ ತನ್ನ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಾನೆ. ಸಾಲದ್ದಕ್ಕೆˌ ಧರ್ಮ - ಜಾತಿ - ಭಾಷೆ ಹಾಗೂ ಪ್ರಾದೇಶಿಕತೆಯ ಈಟಿ ಭರ್ಜಿ ಖಡ್ಗ ಹಾಗೂ ಗದೆಗಳನ್ನ ತನ್ನ ಮೂರ್ಖ ಪ್ರಜೆಗಳ ಕೈಗಳಿಗೆ ತಲುಪಿಸಿ ಪರಸ್ಪರ ಕಚ್ಚಾಡುತ್ತಾ ಅದರಲ್ಲೆ ಮಗ್ನರಾಗಿರಲು ಮೇಲಿಂದ ಮೇಲೆ ಮಾತಿನ ಪ್ರಚೋದನೆ ಕೊಟ್ಟು ಬಹಿರಂಗವಾಗಿ ಪರಸ್ಪರರ ಮೇಲೆ ಛೂ ಬಿಟ್ಟುˌ ಅವರ ಜಗಳದ ಲಾಭ ಪಡೆದು ಪ್ರಾಕೃತಿಕ ಸಿರಿಯನ್ನ ಕಾನೂನುಬದ್ಧವಾಗಿಯೆ ಸೂರೆ ಮಾಡುತ್ತಾ ದರೋಡೆ ಮಾಡುವವರಿಗೆ ಅನುಕೂಲ ಮಾಡಿಕೊಡುವಂತೆ ಕಾಯಿದೆಗಳನ್ನ ತಿದ್ದಿಸುತ್ತಾ ಇಡಿ ದೇಶವನ್ನˌ ಅದರ ಸಮಸ್ತ ಜನಸಂಖ್ಯೆಯ ಸಮೇತ ಹಾಳು ಗುಂಡಿಗೆ ನೂಕಲು ಹವಣಿಸುತ್ತಲೆ ಇರುತ್ತಾನೆ.

ಟರ್ಕಿ ಚೀನಾ ಮಾತ್ರವಲ್ಲ ಇವತ್ತಿನ ದಿನಮಾನಗಳಲ್ಲಿ ಭಾರತದಲ್ಲೂ ಇದನ್ನೆ ಮಾಡ್ತಾ ಇದ್ದಾರೆ. ಅವರನ್ನ ಹಾಡಿ ಹೊಗಳಿ ಸುಳ್ಳು ಪಳ್ಳು ಕಥೆಗಳನ್ನ ಕಟ್ಟಿ ನಿರಂತರ ಬಹುಪರಾಕ್ ಹಾಕುತ್ತಾ ಅವರ ವೈಫಲ್ಯದ ತೂತುಗಳಿಗೆ ತೇಪೆ ಹಾಕಲು ಅವರವರ ಆಸ್ಥಾನ ಭಟ್ಟಂಗಿಗಳಂತೂ ಸದಾ ಸಿದ್ಧವಾಗಿ ಇದ್ದೆ ಇರ್ತಾರೆ.