31 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೨.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೨.👊


ಆಶ್ರಮದ ಕಛೇರಿಯಲ್ಲಿ ನಾಲ್ಕು ತಿಂಗಳ ನಂತರದ ತನ್ನ ಕಾರ್ಯನಿಮಿತ್ತ ಕೇರಳದ ಭೇಟಿಯ ದಿನವನ್ನ ಗುರುತು ಹಾಕಿಕೊಂಡುˌ ಅದರ ಕೊನೆಯಲ್ಲಿ ಇಲ್ಲಿಗೆ ಬಂದು ಮೂರುದಿನ ತಂಗಲು ಕೋಣೆ ಕಾಯ್ದಿರಿಸಿದ. ಯಾವುದೆ ಚಿಂತೆಯಿಲ್ಲದೆ ಸುಸೂತ್ರವಾಗಿ ಕೆಲಸ ಆಯಿತು. ಆಶ್ರಮದ ಆವರಣದಲ್ಲಿ ಕೊಂಚ ಅಡ್ಡಾಡಿ ತನ್ನ ಕೋಣೆಯತ್ತ ಮರಳಿ ಹೊರಟ. ಅಲ್ಲಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರ ಅವನಿಗೆ ನಡೆಯಲಿಕ್ಕಿತ್ತು. ಚಳಿಗಾಲವಾದರೂ ಹಗಲಿನ ಸೂರ್ಯ ಮಾತ್ರ ತುಂಬಾ ಪ್ರಬಲನಾಗಿದ್ದ. ಬಿಸಿಲ ಝ಼ಳ ಕಾಡಿಸುವಂತೆಯೆ ಇತ್ತು. ಬಿಸಿಲಿನ ಧವವನ್ನ ಪ್ರತಿಫಲಿಸಿ ನೇರ ಮುಖಕ್ಕೇನೆ ರಾಚುತ್ತಿದ್ದ ಕರಿಕಪ್ಪು ಡಾಮರಿನ ಹಾದಿಯಲ್ಲಿ ಬಿಸಬಿಸ ಹೆಜ್ಜೆ ಹಾಕುತ್ತಾ ಅವನ ಸವಾರಿ ಹಿಂದಿರುಗಿ ಹೊರಟಿತು.

ಹಗಲ ಉರಿ ಬಿಸಿಲುˌ ಇರುಳ ಕೊರೆವ ಚಳಿ ಒಟ್ಟಿನಲ್ಲಿ ಎರಡು ವಿಪರೀತಗಳ ವಿಪರೀತ ಸಂಗಮದಂತಾಗಿತ್ತು ಈ ಹಂಗಾಮಿನ ಚಳಿಗಾಲ. ಅಭಿವೃದ್ಧಿಯ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ನೈಸರ್ಗಿಕ ಹಸಿರ ಸಿರಿಯನ್ನ ದರೋಡೆಕೋರನಂತೆ ದೋಚಲು ಗರಗಸ ಹಿರಿದಿರುವ ಹಾದಿ ತಪ್ಪಿದ ಮಗನಂತಹ ನೀಚ ಮಾನವ ಕುಲಕ್ಕೆ ಪ್ರಕೃತಿ ಮಾತೆ ಸರಿಯಾಗಿ ಬರೆಯಿಟ್ಟು ಬುದ್ಧಿ ಕಲಿಸಲು ನಿರ್ಧರಿಸಿದಂತಿತ್ತು. ಕೋಣೆಗೆ ಆದಷ್ಟು ಬೇಗ ಮುಟ್ಟಿ ಒಂದರೆ ತಾಸು ಸುಧಾರಿಸಿಕೊಂಡು ಕುಶಾಲನಗರದ ಕಡಲ ತೀರಕ್ಕೆ ಅಡ್ಡಾಡಲು ಹೋಗಿ ಬರಲು ನಿರ್ಧರಿಸಿದ್ದ. ಸಂಜೆಗತ್ತಲ ಹಿನ್ನೆಲೆಯಲ್ಲಿ ಬದಲಾಗುವ ಬಾನಿನ ಬಣ್ಣ ಕಡಲಲ್ಲಿ ಕ್ಷಣಕ್ಕೊಂದು ತರ ಕರಗುವ ಹೊತ್ತನ್ನ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯುವ ಉಮೇದಿನಲ್ಲಿ ಅವನಿದ್ದ. ಮುಂದಿನ ಪ್ರಯಾಣದ ತಾಣ ಕನ್ಯಾಕುಮಾರಿ ಎಂದು ನಿರ್ಧರಿಸಿದ್ದ. 


ಹದಿನೆಂಟು ವರ್ಷಗಳ ಹಿಂದೆ ಮೊದಲ ಸಲ ಅವನು ನೊಂದ ಮನಸ ಹೊತ್ತು ಅಮಾಯಕನಂತೆ ಹೋಗಿದ್ದ ಊರು ಭಾರತದ ದಕ್ಷಿಣ ಭೂಶಿರ ಕನ್ಯಾಕುಮಾರಿ. ಅದಾದ ಮೇಲೆ ಪ್ರತಿ ವರ್ಷವೂ ಅಲ್ಲಿಗೆ ತೆರಳಿ ಕನಿಷ್ಠ ವಾರವಾದರೂ ಅಲ್ಲಿನ ವಿವೇಕಾನಂದಪುರಂನಲ್ಲಿ ಉಳಿದು ಬರುವ ಪದ್ಧತಿಯನ್ನಿಟ್ಟುಕೊಂಡಿದ್ದ. ಆದರೆ ಬದಲಾದ ಕೆಲಸದ ಕಾರಣ ಕಳೆದ ಎಂಟು ವರ್ಷಗಳಲ್ಲಿ ನಿರಂತರ ವಾರ್ಷಿಕ  ಭೇಟಿಗಳು ಅವನಿಂದ ಅಸಾಧ್ಯವಾಗಿˌ ಕೇವಲ ಎರಡು ಸಲ ಮಾತ್ರ ಅದೂ ಮೂರ್ನಾಲ್ಕು ದಿನಗಳ ಮಟ್ಟಿಗೆ ಹೋಗಿದ್ದು ಬರಲು ಸಾಧ್ಯವಾಗಿತ್ತು. ಅದರಿಂದ ಏನೋ ಕಳೆದುಕೊಂಡ ಹಳಹಳಿಕೆಯಲ್ಲಿ ವರ್ಷವೂ ಬಳಲುತ್ತಿದ್ದ. ನಾಲ್ಕು ಸಲ ಇವನೆ ಕೆಲಸದ ಒತ್ತಡದಿಂದ ಅಲ್ಲಿಗೆ ಹೋಗಿ ಬರಲಾರದ ಪರಿಸ್ಥಿತಿಯಲ್ಲಿದ್ದಿದ್ದರೆˌ ಈ ಮಧ್ಯೆ ಕಾಡಿದ್ದ ಕರೋನಾದ ಕೃಪೆಯಿಂದ ಮತ್ತೆರಡು ವರ್ಷ ಹೋಗಲಾಗಿರಲಿಲ್ಲ. ಹೀಗಾಗಿ ಈ ಸಲ ಪೂರ್ವಯೋಜನೆ ಹಾಕಿಕೊಂಡಿರದಿದ್ದರೂ ಹೋಗಿ ಬರಲು ನಿರ್ಧರಿಸಿದ್ದ. ಸಂಜೆ ಕುಶಾಲನಗರದಿಂದ ಮರಳಿ ಬಂದ ನಂತರ ಟಿಕೇಟನ್ನ ಮುಂಗಡ ಕಾಯ್ದಿರಿಸಲು ನಿರ್ಧರಿಸಿದ್ದ. 

ರೈಲ್ವೆ ನಿಲ್ದಾಣದ ರಸ್ತೆಗೆ ಇನ್ನೇನು ತಿರುಗಿಕೊಳ್ಳಬೇಕು ಅನ್ನುವಷ್ಟರಲ್ಲಿ "ಡೂ ಯೂ ನೋ ಇಂಗ್ಲಿಷ್?" ಹಿಂದಿಂದ ಒಂದು ಕ್ಷೀಣ ಧ್ವನಿ ಕೇಳಿದಂತಾಗಿ ತಿರುಗಿ ನೋಡಿದ. ಕಾವಿ ಪಂಚೆಯುಟ್ಟುˌ ಕಾವಿ ಜುಬ್ಬ ಹಾಕಿಕೊಂಡು ತಲೆಗೊಂದು ಕಾವಿ ಕರವಸ್ತ್ರದಂತದೊಂದನ್ನ ಕಟ್ಟಿಕೊಂಡಿದ್ದ ಪೇಲವ ಆಕೃತಿಯೊಂದರಿಂದ ಆ ಧ್ವನಿ ಹೊರಟು ಬಂದಿತ್ತು. ನೀಲಿ ಕಣ್ಣುˌ ತಲೆವಸ್ತ್ರದ ನಡುವಿನಿಂದ ಇಣುಕುತ್ತಿದ್ದ ಬಂಗಾರದ ಬಣ್ಣದ  ಕೂದಲು ಹಾಗೂ ತ್ವಜೆಯ ಬಿಳಿಬಣ್ಣ ಆತನ ವಿದೇಶಿ ಮೂಲವನ್ನ ಸಾರಿ ಹೇಳುತ್ತಿದ್ದವು. 

"ಎಸ್ˌ ವಾಟಿಸ್ ಇಟ್?" ಅಂದು ಇವ ಮಾರುತ್ತರಿಸಿದ. "ಐ ಆಮ್ ಎರ್ರಿಕ್ˌ ಐ ನೀಡ್ ಅ ಹೆಲ್ಪ್ ಪ್ಲೀಸ್!" ಅನ್ನುವ ಉತ್ತರ ಬಂತು. "ಯಾ ಟೆಲ್ ಮಿ." ಅಂದ. "ಬೈದ ವೇ ಐ ಅರೈವ್ಡ್ ಫ್ರಂ ಮುಂಬೈ ಬೈ ಟ್ರೈನ್ˌ ಐ ಯಾಮ್ ಇನ್ ಸರ್ಚ್ ಆಫ್ ಆನ್ ಅಕಾಮಿಡೇಶನ್. ಆಸ್ ಐ ಹ್ಯಾವ್ ನೋ ಮನಿ! ಐ ಶುಡ್ ಫೈಂಡ್ ಎನಿ ಚಾರಿಟೇಬಲ್ ಇನ್ಸ್ಟಿಟ್ಯೂಶನ್. ಇಸ್ ದೇರ್ ಎನಿ?" ಅಂದ ಆ ಬಿಳಿಯ.

"ವಿದೌಟ್ ಮನಿ! ಹೌ ಡು ಯು ಮ್ಯಾನೇಜ್?! ವೇರ್ ಆರ್ ಯು ಫ್ರಂ?" ಅಂದನಿವ. "ಐ ಯಾಮ್ ಫ್ರಂ ಯುಎಸ್ಎ! ಮೈನ್ ಇಸ್ ಎ ಬಿಗ್ ಸ್ಟೋರಿ..." ಅಂತ ಅವ ಅವನ ಹಡಪ ಬಿಚ್ಚಲು ತಯಾರಾದ. ಇವನ ಮನಸಲ್ಲಿ ಬಂದ ಪ್ರಶ್ನೆ ಮಾತ್ರ ಒಂದೆˌ ಅದನ್ನೆ ಪ್ರಶ್ನೆಯನ್ನಾಗಿಸಿ "ಡಿಡ್ ಯು ಎಟ್ ಎನಿ ಥಿಂಗ್?" ಅಂದ. "ನೋ ಸರ್ˌ ಐ ನೀಡ್ ಟು ಈಟ್ ಆಸ್ ಐ ಶುಡ್ ಟೇಕ್ ಅ ಶಾಟ್ ಆಫ್ ಇನ್ಸುಲಿನ್!" ಅಂದನವ. ಇವ ಕೈ ಫೋನಿನಲ್ಲಿ ಸಮಯ ನೋಡಿದ. ಹತ್ತಿರದಲ್ಲಿದ್ದುದು ನಿತ್ಯಾನಂದಾಶ್ರಮ. ಊಟದ ಹೊತ್ತಾಗಿ ತಾಸು ಕಳೆದಿದ್ದರೂ ಅಜ್ಜನ ಮನೆಯಲ್ಲಿ ಹಸಿದ ಹೊಟ್ಟೆಯ ಈ ಅಪರಿಚಿತನಿಗೆ ಅನ್ನ ಸಿಗುವ ಖಚಿತತೆಯಂತೂ ಇವನಿಗಿತ್ತು. 


ಆದರೆˌ ವಸತಿ ವ್ಯವಸ್ಥೆ ಅಲ್ಲಾಗಬಹುದೋ? ಇಲ್ಲವೋ? ಅನ್ನುವ ಬಗ್ಗೆ ಮಾತ್ರ ಸಂದೇಹಗಳಿದ್ದವು. ಅವತ್ತು ಆದಿತ್ಯವಾರವಾಗಿರುವ ಕಾರಣ ಆಶ್ರಮದ ಆ ಉಸ್ತುವರಿ ವಹಿಸಿರುವವರು ಮಧ್ಯಾಹ್ನದ ಮೇಲೆ ರಜೆ ಮಾಡುವ ಸಂಭವವಿತ್ತು. ಆದರೂ ಅವನ ಹಣೆಬರಹ ಪ್ರಯತ್ನಿಸುವ ಅಂದಂದುಕೊಂಡು ಬಿಸಿಲಿನಲ್ಲಿ ತನ್ನ ಕೋಣೆಯ ವಿರುದ್ಧ ದಿಕ್ಕಿನಲ್ಲಿದ್ದ ಹೊಸದುರ್ಗ ಕೋಟೆ ಸಮೀಪದ ನಿತ್ಯಾನಂದಾಶ್ರಮದಷ್ಟು ದೂರ ನಡೆಯುವ ಮನಸಿಲ್ಲದಿದ್ದರೂ ಒಬ್ಬನ ಅಸಹಾಯಕತೆ ಅವನನ್ನು ಅತ್ತ ಹೋಗುವಂತೆ ಪ್ರೇರೇಪಿಸಿತು.


ಎರ್ರಿಕ್ ಇಪ್ಪತ್ತೆರಡು ವರ್ಷ ಪ್ರಾಯದ ಅಮೇರಿಕನ್ ನವ ತರುಣ. ಮೂರು ತಲೆಮಾರುಗಳ ಹಿಂದೆ ಹಿಟ್ಲರನ ಹಾಲೋಕಾಸ್ಟ್ ಕಾಲದಲ್ಲಿ ಯುರೋಪಿನ ಅಸ್ಟ್ರಿಯಾದಿಂದ ಮನೆ ಮಠ ತೊರೆದು ಜೀವ ಉಳಿಸಿಕೊಳ್ಳಲು ಅಮೇರಿಕಾ ವಲಸೆಯನ್ನ ಆಯ್ದುಕೊಂಡಿದ್ದ ಯಹೂದಿ ಕುಟುಂಬದವ. ಅದು ಹೇಗೋ ಹಿಂದೂ ಧರ್ಮದ ಆಕರ್ಷಣೆಗೆ ಸಿಲುಕಿದ್ದ. ಹುಟ್ಟು ಹಿಂದೂವಾಗಿರುವ ಇವನಿಗಿಂತ ದೊಡ್ಡದಾಗಿ ಉತ್ತರ ಭಾರತದ ಸಾಧುಗಳು ಹಚ್ಚಿಕೊಳ್ಳುವ ಹಾಗೆ ಹಣೆಯ ತುಂಬಾ ಹಳದಿ ಪಟ್ಟಿ ಬಳಿದುಕೊಂಡು ಹಣೆಯ ಮಧ್ಯ ಉದ್ದಕ್ಕೆ ಕುಂಕುಮ ಬಳಿದುಕೊಂಡಿದ್ದ! ಆ ಸಣ್ಣಪ್ರಾಯದಲ್ಲೆ ಮಧುಮೇಹಿಯಾಗಿದ್ದ ಎರ್ರಿಕ್ಕನ ತಾಯಿಗೆ ಇವನನ್ನೂ ಸೇರಿ ಮೂರು ಮಕ್ಕಳು. ಇವನ ಹಿರಿಯಕ್ಕ ಕ್ಯಾಥೋಲಿಕ್ ಧರ್ಮದತ್ತ ಆಕರ್ಷಿತಳಾಗಿ ಏಸುವಿನ ಪರಮ ಆರಾಧಕಿಯಾಗಿ ನಮ್ಮಲ್ಲಿ ಹಳ್ಳಿಗಳಲ್ಲಿ ಕೆಲವರಿಗೆ ಹಿರಿ ಮರಿ ಕಿರಿ ಹಾಗೂ ಕಿರಿಕಿರಿ ದೇವರು ಮೈಮೇಲೆ ಬಂದು ಉಳಿದವರನ್ನ ಕುರಿ ಮಾಡುವ ಹಾಗೆˌ ಅವಳಿಗೂ ಆಗಾಗ ಆವೇಶ ಬಂದು ಸಾಕ್ಷಾತ್ ದೇವಪುತ್ರ ಏಸುವೆ ಅವಳೊಳಗೆ ಗಣವಾಗಿ ಇಳಿದು ಬರುತ್ತಿದ್ದನಂತೆ!

ಅವಳ ಆ ದೈವಪಾತ್ರಿ ಅವತಾರದ ನಂತರ ಅವರ ಮನೆಯಲ್ಲಿ ಎಲ್ಲರೂ ಕ್ರೈಸ್ತರಾಗಿ ಮತಾಂತರವಾಗಿ ಶನಿವಾರ ಸಬ್ಬತ್ ಮಾಡುವ ತಮ್ಮ ಧಾರ್ಮಿಕಾಚರಣೆಗೆ ತಿಲಾಂಜಲಿಯಿತ್ತುˌ ಸಂಡೆ ಮಾಸ್ ಮಾಡಲು ಕ್ಯಾಥೋಲಿಕ್ ಇಗರ್ಜಿಯ ಭಾನುವಾರದ ಪ್ರಾರ್ಥನಾ ಸಮಾವೇಶಗಳಿಗೆ ಹೋಗ ತೊಡಗಿದರಂತೆ. "ಬಟ್ ಇಟ್ ನೆವರ್ ಇಂಪ್ರೆಸ್ಡ್ ಮಿˌ ಇಟ್ ಟುಕ್ ಟೂ ಸಂಡೇಸ್ ಆಫ್ಟರ್ ಅ ಬ್ಯಾಪ್ಟಿಸಂ ಆಫ್ ಮೈನ್ˌ ಟು ಡಿಸ್ ಓನ್ ದ್ಯಾಟ್ ರಿಲಿಜ಼ನ್ ಆಫ್ ಕ್ರೈಸ್ಟ್ ಯೂ ನೋ" ಅಂದ ಎರ್ರಿಕ್. ಆಗವನಿಗೆ ಇನ್ನೂ ಹತ್ತು ವರ್ಷವಷ್ಟೆ ಪ್ರಾಯವಾಗಿತ್ತಂತೆ. ಅಷ್ಟು ಸಣ್ಣ ವಯಸ್ಸಿಗೆ ಮತಾಂತರವಾಗೋದುˌ ಮತಾಂತರವಾದ ಎರಡೆ ವಾರಕ್ಕೆ ಹೊಸಧರ್ಮ ಹೇವರಿಕೆ ತರಿಸಿ ಅದರಿಂದ ದೂರಾಗೋದು ಇದೆಲ್ಲ ಸಾಧ್ಯವೆ? ಅಂತನ್ನಿಸಿ ಇವನಿಗೆ ಕೆಟ್ಟ ಕುತೂಹಲ ಹುಟ್ಟಿತುˌ ವಿಕ್ರಮನ ಬೆನ್ನೆರಿದ ಬೇತಾಳನಂತೆ ಹಾದಿಯ ಏಕತಾನತೆ ಕಳೆಯಲು ಇವನು ಎರ್ರಿಕ್ಕನ ವಯಕ್ತಿಕ ಬದುಕನ್ನ ಮತ್ತಷ್ಟು ಕೆದಕಿದ.

ಶಾಲೆ ಕಲಿಯುವಲ್ಲಿ ತುಂಬಾ ಹಿಂದುಳಿದ ವಿದ್ಯಾರ್ಥಿ ಅನ್ನುವ ಹಣೆಪಟ್ಟಿಯಿದ್ದ ಎರ್ರಿಕ್ ಗಣಿತದಲ್ಲಿ ಮಾತ್ರ ಆಸಕ್ತನಾಗಿರುತ್ತಿದ್ದನಂತೆ. ಗಣಿತ ಅರ್ಥವಾಗುವಷ್ಟು ಸುಲಭವಾಗಿ ಶಾಲೆಯಲ್ಲಿ ಕಲಿಸುವ ಬೇರೆ ಯಾವೊಂದು ವಿಷಯಗಳೂ ಸಹ  ಸರಿಯಾಗಿ ತಲೆಗೆ ಹತ್ತದೆ ಅನುತ್ತಿರ್ಣನಾಗುತ್ತಿದ್ದನಂತೆ.


( ಇನ್ನೂ ಇದೆ.)


https://youtu.be/qc8ewM4egz8

30 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೧.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೧.👊


ಊರಿನಿಂದ ದೂರವಿದ್ದ ಕಾರಣ ಇರುಳಲ್ಲಿ ಅಪರಿಚಿತರು ಅಪಾಯಕಾರಿಯಾಗಿ ವರ್ತಿಸುವ ಸಾಧ್ಯತೆಯ ಸ್ವ ಅನುಭವವಾದುದರಿಂದಲೂˌ ಆಶ್ರಮದ ಸ್ತ್ರೀ ಭಕ್ತರ ಸುರಕ್ಷತೆಯ ದೃಷ್ಟಿಯಿಂದಲೂ ಕಾಸಗೋಡಿನ ಮೊದಲಿದ್ದ ಆ ಆಶ್ರಮಮದ ಸ್ಥಳವನ್ನ ವಿಕ್ರಯಿಸಲು ನಿರ್ಧರಿಸಿದ ಸ್ವಾಮಿ ರಾಮದಾಸರುˌ ಅದರ ಬದಲಿಗೆ ಕಾಙಂನಗಾಡಿನ ಬಳಿಯಿದ್ದ ಮಾವುಂಗಲ್ಲಿನ ಈಗಿರುವ ಬೆಟ್ಟದಂತಹ ಜಾಗವನ್ನ ಕೊಂಡು ಅಲ್ಲಿಗೆ ಶಾಶ್ವತವಾಗಿ ಆನಂದಾಶ್ರಮವನ್ನ ಸ್ಥಳಾಂತರಿಸಲು ನಿರ್ಧರಿಸಿದರು. ತಾವು ನಂಬಿದ್ದ ಪ್ರಭು ಶ್ರೀರಾಮಚಂದ್ರನ ಮೇಲೆ ಭಾರ ಹಾಕಿ ತೆಗೆದುಕೊಂಡಿದ್ದ ಪಪ್ಪನ ಈ ನಿರ್ಧಾರಕ್ಕೆ ಬೆಂಬಲವಾಗಿ ನಿಂತ ಅವರ ಅಪಾರ ಭಕ್ತ ವರ್ಗವೂ ಸಹ ತಮ್ಮ ಕೈಯಿಂದಾದಷ್ಟು ಕೊಡುಗೆ ಸಲ್ಲಿಸಿ ಇಂದಿನ ಆಶ್ರಮದ ಕಟ್ಟಡ ಮೇಲೇಳಲು ಕೈ ಜೋಡಿಸಿದರು. ಹೀಗೆ ಮಂಜಲಪಾಡಿ ಅಥವಾ ಮಾವುಂಗಲ್ಲಿನಲ್ಲಿ ಆಶ್ರಮ ಹೊಸತಾಗಿ ನಿರ್ಮಾಣವಾಯಿತು.


ಬರಿಯ ಅಧ್ಯಾತ್ಮ ಚಿಂತನೆಗೆ ಮಾತ್ರವಲ್ಲದೆˌ ಆಶ್ರಮದಲ್ಲಿ ಊರವರ ಅಗತ್ಯಗಳನ್ನು ಪರಿಗಣಿಸಿ ವಿದ್ಯಾದಾನಕ್ಕಾಗಿ "ಶ್ರೀಕೃಷ್ಣ ವಿದ್ಯಾಶಾಲಾ" ಅನ್ನುವ ಶಾಲೆಯನ್ನು ೧೯೪೨ರಲ್ಲೂˌ ಅದರ ಬೆನ್ನಿಗೆ ಕೌಶಲ್ಯ ತರಬೇತಿ ಸಂಸ್ಥೆ "ಶ್ರೀಕೃಷ್ಣ ಉದ್ಯೋಗಶಾಲಾ"ವನ್ನೂ ಸಹ ಸ್ಥಾಪಿಸಿದರು. ಇದಷ್ಟೆ ಅಲ್ಲದೆ ೧೯೫೨ರಲ್ಲಿ ಒಂದು ಸಣ್ಣ ಆಸ್ಪತ್ರೆಯನ್ನೂ ಸಹ ಪಪ್ಪ ಆರೋಗ್ಯ ಸೇವೆ ಒದಗಿಸುವ ಹಿತದೃಷ್ಟಿಯಿಂದ ಶುರು ಮಾಡಿದ್ದರು. ದಶಕಗಳ ಕಾಲ ಆಶ್ರಮವೆ ನಡೆಸಿದ ಈ ಸಂಸ್ಥೆಗಳನ್ನು ಕಾಲಾಂತರದಲ್ಲಿ ಸರಕಾರಿ ಮೇಲುಸ್ತುವರಿಗೆ ಹಸ್ತಾಂತರಿಸಲಾಗಿದೆ. ಹೀಗೆ ಸಮಾಜದ ವಿವಿಧ ಸ್ತರಗಳ ಸ್ಥಳಿಯರನ್ನೂ ಒಳಗೊಂಡು ಪಪ್ಪ ಆನಂದಾಶ್ರಮದ ಕಲ್ಪನೆಯನ್ನು ಕಾಙಂನಗಾಡಿನಲ್ಲಿ ಸಾಕಾರಗೊಳಿಸಿದ್ದರು. ಬರುಬರುತ್ತಾ ಹೆಚ್ಚಿದ್ದ ಭಕ್ತರ ಸಂಖ್ಯೆಯನ್ನ ಗಂಭೀರವಾಗಿ ಪರಿಗಣಿಸಿ ಮೂಲ ಕಟ್ಟಡ ಸಾಕಾಗದು ಎಂದೆನೆಸಿ ತಂಗುವವರ ಅನುಕೂಲತೆಗಾಗಿ ಹೊಸ ಕಟ್ಟಡಗಳನ್ನ ನಿರ್ಮಿಸಿದರು. ಆಶ್ರಮದ ಆಗ್ನೇಯ ಮೂಲೆಯಲ್ಲಿ "ಅಯೋಧ್ಯ ವನ"ವೆನ್ನುವ ಆಯುರ್ವೇದ ಮೂಲಿಕಾವನವನ್ನೂˌ ಆಶ್ರಮವಾಸಿಗಳ ಹಾಲು-ಹೈನಿನ ಉಪಯೋಗಕ್ಕಾಗಿ ಗೋಶಾಲೆಯನ್ನೂ ಸಹ ಆರಂಭಿಸಿದರು.

ಈ ಆಶ್ರಮ ಆರಂಭವಾದ ಕೆಲವೆ ದಿನಗಳಲ್ಲಿ ಸ್ವಾಮಿ ರಾಮದಾಸರ ಪೂರ್ವಾಶ್ರಮದ ತಂದೆ ಉಬ್ಬುಸದ ಬಾಧೆಯಿದ್ದ ಬಾಲಕೃಷ್ಣರಾಯರು ಹಾಗೂ ಮಡದಿ ರುಕ್ಮಿಣಿಬಾಯಿ ವಯೋಸಹಜ ಕಾರಣಗಳಿಂದ ಕೊನೆಯುಸಿರೆಳೆದರು. ತಮ್ಮ ಕಡೆಯ ಕಾಲದಲ್ಲಿ ಅವರಿಬ್ಬರೂ ಬಾಕಿ ಇನ್ನುಳಿದ ಸಾಮಾನ್ಯ ಭಕ್ತಾದಿಗಳಂತೆ ಇಲ್ಲಿನ ನಿವಾಸಿಗಳಾಗಿಯೆ ಉಳಿದಿದ್ದರು. ಹೆತ್ತವರು ಹಾಗೂ ಬಾಳಸಂಗಾತಿ ಇಬ್ಬರೂ ಇಲ್ಲವಾಗಿˌ ಅದಾಗಲಾಗಲೆ ವಿರಕ್ತ ಜೀವನ ನಡೆಸುತ್ತಿದ್ದ ಸ್ವಾಮಿ ರಾಮದಾಸರು ನಿಜಾರ್ಥದಲ್ಲಿ ವಿರಕ್ತರೆ ಆದರೆನ್ನಬಹುದು. ಅಲ್ಲಿಗೆ ಅವರ ಇಹ ಬಂಧನದ ಕೊನೆಯ ನಂಟು ನಂಟು ಕಡಿದು ಹೋಯಿತು.

ಸ್ವಾಮಿ ರಾಮದಾಸರಿಗೂ ಪ್ರಾಯ ಸಂದುತ್ತಾ ಬಂದಿತ್ತು. ಅವರ ನಂತರ ಅಷ್ಟೆ ಸಮರ್ಥವಾಗಿ ಆಶ್ರಮವನ್ನ ಮುನ್ನಡೆಸುವವರೊಬ್ಬರ ಅಗತ್ಯವಂತೂ ಇತ್ತು. ಆಗ ಅವರಿಗೆ ಕೈ ಸಹಾಯವಾಗಿ ಒದಗಿ ಬಂದವರು ಅನಂತ ಶಿವನ್ ಎನ್ನುವ ಯುವಕ. ಆರು ವರ್ಷದ ಸಣ್ಣಪ್ರಾಯದಲ್ಲೆ ತನ್ನ ತಾಯಿಯನ್ನ ಕಳೆದುಕೊಂಡಿದ್ದ ಅನಂತ ಶಿವನ್ ಮೂಲತಃ ಅಂತಃರ್ಮುಖಿ. ಯವ್ವನದಾರಂಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರಲ್ಲಿ ಅಧ್ಯಾತ್ಮಿಕ ಸೆಳೆತ ಆರಂಭವಾದ ನಂತರ ಸ್ವಯಂ ನಿವೃತ್ತಿ ಪಡೆದಾಗ ಕಾಙಂನಗಾಡಿನ ಆನಂದಾಶ್ರಮ ಅವರನ್ನ ಸೆಳೆಯಿತು. ತನ್ನ ಇಳಿಗಾಲದಲ್ಲಿದ್ದ ಪಪ್ಪನ ಆಪ್ತ ಸಹಾಯಕರಾಗಿ ಮೊದಲಿಗೆ ಆಶ್ರಮವಾಸಿಯಾಗಿ ಸೇರಿದ ಅನಂತ ಶಿವನ್ ಕ್ರಮೇಣ ಪಪ್ಪನ ಆಶಯದಂತೆ ಆಶ್ರಮವನ್ನು ಮುನ್ನಡೆಸಿದ ಎರಡನೆ ತಲೆಮಾರಿನವರು.

ಈ ನಡುವೆ ಅಮೇರಿಕಾ ಹಾಗೂ ಯುರೋಪು ಪ್ರವಾಸ ಮಾಡಿದ ಸ್ವಾಮಿ ರಾಮದಾಸರುˌ ಅಧ್ಯಾತ್ಮಿಕ ಸಾಧನೆಗಾಗಿ ಹೃಷಿಕೇಶಕ್ಕೆ ಹೋಗಿದ್ದ ಅನಂತ ಶಿವನ್ನರನ್ನು ಹಿಂದೆ ಕರೆಸಿಕೊಂಡರು. ಅಲ್ಲಿಂದ ಮುಂದೆ ಅವರಿಗೂ ದೀಕ್ಷೆ ಕೊಟ್ಟು ಸ್ವಾಮಿ ಸತ್ ಚಿದಾನಂದ ಎಂದು ಅವರನ್ನ ಕರೆದರು. ಅವರೂ ಸಹ ಸ್ವಾಮಿ ರಾಮದಾಸರ ಜೊತೆಗೆ ಸಹಾಯಕರಾಗಿ ಈ ವಿದೇಶಿ ಪರ್ಯಾಟನೆಗೆ ಹೊರಟರು. ಆಶ್ರಮದ ಮುಂದಿನ ನಿರ್ವಹಣೆಯ ವ್ಯವಸ್ಥೆಯಾದ ನೆಮ್ಮದಿಯಲ್ಲಿ ಪಪ್ಪ ಸ್ವಾಮಿ ರಾಮದಾಸರು ೧೯೬೩ರ ಜುಲೈ ೨೫ರಂದು ತಮ್ಮ ಇಹದ ಬಾಳ್ವೆ ಮುಗಿಸಿದರು. ಅವರ ಹುಟ್ಟಿನ ಉದ್ದೇಶ ಈಡೇರಿತ್ತು.

ಅವರ ನಂತರ ಸುಮಾರು ಇಪ್ಪತ್ತಾರು ವರ್ಷಗಳವರೆಗೆ ಮಾತೆ ಕೃಷ್ಣಾಬಾಯಿಯವರು ಆಶ್ರಮದ ಮೇಲುಸ್ತುವರಿ ವಹಿಸುತ್ತಾ ಬದುಕಿದ್ದರು. ಅವರ ನಂತರ ೨೦೦೮ರ ವರೆಗೆ ಸ್ವಾಮಿ ಸತ್ ಚಿದಾನಂದರು ಆಶ್ರಮವನ್ನ ಮುನ್ನಡೆಸಿ ಅವರೂ ಕೊನೆಯುಸಿರೆಳೆದರು. ಅವರೆಲ್ಲರ ಸಮಾಧಿಗಳೂ ಸಹ ಆಶ್ರಮದ ಮುಖ್ಯದ್ವಾರದ ಎಡಭಾಗದಲ್ಲಿದೆ. ದಿನದ ಎಲ್ಲಾ ಅವಧಿಯಲ್ಲೂ ಈ ಸಮಾಧಿಗಳೊಂದರಲ್ಲಿ ರಾಮನಾಮ ಸ್ಮರಣೆ ನಡೆಯುವ ಕ್ರಮವಿದೆ. ಆಶ್ರಮದ ಹಳೆಯ ಕಟ್ಟಡದಲ್ಲಿ ಪಪ್ಪ ಸ್ವಾಮಿ ರಾಮದಾಸರˌ ಮಾತೆ ಕೃಷ್ಣಾಬಾಯಿಯವರ ಹಾಗೂ ಸ್ವಾಮಿ ಸತ್ ಚಿದಾನಂದರ ಚಿತ್ರವನ್ನಿಟ್ಟು ಜಗತ್ತಿನ ಸಂತ ಪರಂಪರೆಯ ಎಲ್ಲರ ಚಿತ್ರಗಳನ್ನೂ ಸಹ ಇಲ್ಲಿನ ಗೋಡೆಗೆ ತೂಗು ಹಾಕಲಾಗಿದೆ. ನಿತ್ಯ ಬೆಳಗ್ಯೆ ಮಧ್ಯಾಹ್ನ ಹಾಗೂ ಸಂಜೆ ಮೂರೂ ಹೊತ್ತು ಅಲ್ಲಿ ಆಶ್ರಮಕ್ಕೆ ಭೇಟಿ ಕೊಡುವ ಭಕ್ತಾದಿಗಳು ಭಕ್ತಿಗೀತೆಗಳನ್ನ ಹಾಡುತ್ತಾರೆ ಹಾಗೂ ರಾಮನಾಮ ಸ್ಮರಣೆ ನಡೆಸುವ ಕ್ರಮವಿದೆ.

ಆಶ್ರಮ ಇಂದು ಸ್ವಾಮೀಜಿ ಹಾಗೂ ಮಾತಾಜಿಯವರ ಉಸ್ತುವರಿಯಲ್ಲಿ ಎಂದಿನಂತೆ ಸೇವಾನಿರತವಾಗಿದೆ. ಜಗತ್ತಿನಾದ್ಯಂತ ಇರುವ ಆಶ್ರಮದ ಭಕ್ತಾದಿಗಳು ಇಲ್ಲಿಗೆ ತಪ್ಪದೆ ಭೇಟಿ ಕೊಡುತ್ತಾರೆ. ಯಾರಾದರೂ ಸಹ ಬಯಸಿದರೆ ಥೇಟ್ ನಿತ್ಯಾನಂದಾಶ್ರಮದಂತೆ ಇಲ್ಲಿಗೆ ಬಂದು ಉಳಿದು ತಮ್ಮೊಳಗಿನ ತಮವನ್ನ ಹೋಗಲಾಡಿಸಿಕೊಳ್ಳಲು ಪ್ರಯತ್ನಿಸಬಹುದು. ಸಾಮಾನ್ಯವಾಗಿ ಭೇಟಿ ನೀಡುವವರಿಗೆ ಮೂರು ದಿನಗಳ ಕಾಲ ಉಳಿಯುವ ವ್ಯವಸ್ಥೆ ಇರುತ್ತದೆ. 

ಆಶ್ರಮದ ಮುಖ್ಯ ಬಾಗಿಲಿನ ಬಗಲಲ್ಲೆ ಪಪ್ಪನ ಸಮಾಧಿ ಸ್ಥಳದಿಂದ ಕೆಳಗಿರುವ ಊಟದ ಮನೆಯಲ್ಲಿ ಮುಂಜಾನೆ ಆರಕ್ಕೆ ಬೆಳಗಿನ ಚಹಾ - ಏಳೂವರೆಗೆ ಕಾಫಿ ಚಹಾ ತಿಂಡಿ - ಮಧ್ಯಾಹ್ನ ಹನ್ನೆರಡೂವರೆಗೆ ಆರತಿ ನಂತರ ಊಟ - ಮಧ್ಯಾಹ್ನ ಮೂರಕ್ಕೆ ಕಾಫಿ ಚಹಾ ಹಾಗೂ ಸಂಜೆ ಆರೂವರೆಗೆ ರಾತ್ರಿಯೂಟವನ್ನ ಒದಗಿಸುವ ವ್ಯವಸ್ಥೆಯಿದೆ. ಊಟಕ್ಕೆ ಶುಚಿ - ರುಚಿಯಾದ ಚಪಾತಿ ಅನ್ನ ಪಲ್ಯ ಮಜ್ಜಿಗೆ ಅಥವಾ ಹಾಲುˌ ಆಗಾಗ ಪಾಯಸ ಅಥವಾ ಶಿರದ ಸಿಹಿತಿಂಡಿ ಜೊತೆಗೆ ಉಪ್ಪಿನಕಾಯಿ ಇರುತ್ತೆ. ಇಲ್ಲಿ ವಸತಿ ಹಾಗೂ ಊಟ ಸಂಪೂರ್ಣ ಉಚಿತ. ಆಶ್ರಮದ ನಿರ್ವಾಹಕರು ಯಾವ ಕಾರಣಕ್ಕೂ - ಯಾರನ್ನೂ ಹಣ ಕೇಳುವುದಿಲ್ಲ. ಭಕ್ತಾದಿಗಳೆ ಬಯಸಿ ಕಾಣಿಕೆಯನ್ನ ಕೊಟ್ಟರೆ ಮಾತ್ರ ನಮ್ರವಾಗಿ ಸ್ವೀಕರಿಸಿ ಆಶ್ರಮದ ಚಟುವಟಿಕೆಗಳ ಖರ್ಚು-ವೆಚ್ಚಕ್ಕಾಗಿ ವ್ಯಯಿಸುತ್ತಾರೆ.

*****

ಅಲ್ಲಿನ ಆತ್ಮೀಯ ಪರಿಸರ ಅವನ ಗಮನ ಸೆಳೆಯಿತು. ಹೋಗುವಾಗಲೆ ಮಧ್ಯಾಹ್ನದ ಆರತಿಯ ಹೊತ್ತಾಗಿತ್ತು. ಕೊಂಡೊಯ್ದಿದ್ದ ಖಾದ್ಯ ಪದಾರ್ಥಗಳ ಹೊರಕಾಣಿಕೆಯನ್ನ ಆಶ್ರಮದ ಕಛೇರಿಗೆ ಮುಟ್ಟಿಸಿ ಅವನು ಮುಖ್ಯ ಕಟ್ಟಡದಲ್ಲಾಗುತ್ತಿದ್ದ ಆರತಿಯನ್ನ ಕಂಡ. ಅಲ್ಲಿಂದ ಊಟದ ಮನೆಗೆ ಹೊಕ್ಕು ಮೃದುವಾದ ಚಪಾತಿˌ ಚೀನಿಕಾಯಿ ಪಲ್ಯˌ ಸುವರ್ಣಗೆಡ್ಡೆ ಸಾರುˌ ಹೂವಂತ ಅನ್ನˌ ಯಾರೋ ಭಕ್ತರು ಮಾಡಿಸಿದ್ದ ಹಾಲು ಪಾಯಸದ ಜೊತೆಗೆ ಉಪ್ಪಿನಕಾಯಿ ಹಾಗೂ ಮಜ್ಜಿಗೆಯಿದ್ದ ಪುಷ್ಕಳವಾದ ಭೋಜನವನ್ನೂ ಸವಿದ. ಆಶ್ರಮದ ಪರಿಸರ ಆಹ್ಲಾದಕರವಾಗಿತ್ತು. ಗೋಶಾಲೆಯ ಕರುಗಳ ಕಲರವˌ ಪ್ರೌಢ ದನಗಳ ಘನ ಗಾಂಭೀರ್ಯ ಒಂಥರಾ ಖುಷಿ ಕೊಟ್ಟಿತವನಿಗೆ.

ತನ್ನ ಮುಂದಿನ ಕಾಙಂನಗಾಡಿನ ಭೇಟಿಯಲ್ಲಿ ಇಲ್ಲಿಗೆ ಬಂದು ತಂಗುವ ನಿರ್ಧಾರ ಮಾಡಿದವನು ಅದರ ವ್ಯವಸ್ಥೆ ಮಾಡಲು ಯೋಚಿಸಿದ. ಇಲ್ಲಿನ ಶಾಂತ ಪರಿಸರದಲ್ಲಿ ಮೂರುದಿನ ಉಳಿಯುವ ಮನಸಾಯಿತವನಿಗೆ.



( ಇನ್ನೂ ಇದೆ.)



https://youtu.be/2Z9Wxbpc7us

29 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೦.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೦.👊


ಈ ಆನಂದಾಶ್ರಮ ಸ್ಥಾಪಿಸುವ ಮೊದಲುˌ ತನ್ನ ಮಡದಿ ಮಗಳನ್ನ ತ್ಯಜಿಸಿ ಸಂಪೂರ್ಣ ವಿರಾಗಿಯಾಗುವ ಮುನ್ನ ಪೂರ್ವಾಶ್ರಮದ ವಿಠ್ಠಲರಾಯರು ಪರಿವ್ರಾಜಕರಾಗಿ ಭಕ್ತಿಮಾರ್ಗದ ಅನ್ವೇಷಣೆಯಲ್ಲಿ ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗೂ ಭಾರತದ ಉದ್ದಗಲ ಸುತ್ತಿದ್ದಾರೆ. ಅದೂ ಸಹ ಕೈಯಲ್ಲಿ ದುಗ್ಗಾಣಿಯನ್ನೂ ಇಟ್ಟುಕೊಳ್ಳದೆ! ಯಾವುದೆ ಐಶಾರಾಮ ಬಯಸದೆ. ಈಗಿನಷ್ಟು ಸಾರಿಗೆ ಸಂಪರ್ಕದ ಅನುಕೂಲವಿದ್ದಿರದಿದ್ದ ಶತಮಾನದ ಹಿಂದೆ ಈ ದೈವಭಕ್ತಿಯಿಂದ ಪರವಶರಾಗಿದ್ದ ಜೀವ ಈ ಗುರಿಯಿಲ್ಲದ ಪಯಣದ ಹಾದಿಯಲ್ಲಿ ಅದೆಂತೆಂತಹ ಕಷ್ಟ-ನಷ್ಟಗಳನ್ನು ಎದುರಿಸಿರಬಹುದೋ ಏನೋ? ಎಂದು ಯೋಚಿಸಿಯೆ ಇವನು ಅಳುಕಿದ.

ವಾಸ್ತವದಲ್ಲಿ ಬಾಲಕೃಷ್ಣರಾಯರದ್ದು ಒಂಬತ್ತು ಗಂಡು ಹಾಗೂ ಮೂರು ಹೆಣ್ಣು ಕೂಸುಗಳಿದ್ದ ತುಂಬು ಸಂಸಾರ. ಅದರಲ್ಲಿ ಅಧ್ಯಾತ್ಮದ ಹಾದಿ ಹಿಡಿದದ್ದು ವಿಠ್ಠಲರಾಯರು ಮಾತ್ರ. ತಮ್ಮ ಕಪಟವಿಲ್ಲದ ವ್ಯಕ್ತಿತ್ವದಿಂದ ಸುಲಭವಾಗಿ ಮೋಸಗಾರರ ಬಲೆಗೆ ಸಿಲುಕಿದ ಅವರು ತಮ್ಮ ಜವಳಿ ಉದ್ಯಮದಲ್ಲಿ ವಿಫಲವಾದರೇನಂತೆ? ಅವರಂದು ಬಿತ್ತಿದ್ದ ಅಧ್ಯಾತ್ಮದ ಹಾದಿಯಲ್ಲಿ ಅವರಿತ್ತಿರುವ ನಾಮ-ಧ್ಯಾನ-ಸೇವಾದ ಮೇಲ್ಪಂಕ್ತಿಯನ್ನ ಅನುಸರಿಸಿ ಶುದ್ಧ ಚಾರಿತ್ರ್ಯದಿಂದ ಬದುಕಲು ಕಲಿಯುತ್ತಿರುವವರ ಸಂಖ್ಯೆ ವಿಫುಲವಾಗಿದೆ. ಇದೊಂದೆ ಸಾಧನೆ ಸಾಕಲ್ಲ ಅವರ ಪ್ರಭಾವಳಿಯನ್ನ ಗ್ರಹಿಸಲು. ಆರರಿಂದ ಅರವತ್ತರವರೆಗೂ ಅನ್ನುತ್ತಾರಲ್ಲ ಹಾಗೆ ಎಲ್ಲಾ ಪ್ರಾಯದವರೂ ಅವರ ಬೋಧನೆಗಳಿಂದ ಪ್ರಭಾವಿತರಾಗಿದ್ದಾರೆ.

ಯಾರಿಗೆ ತಾನೆ ಗೊತ್ತಿತ್ತು ೧೮೮೪ಕ್ಕೆ ಬಾಲಕೃಷ್ಣರಾಯರ ಮಡದಿ ಲಲಿತಾಬಾಯಿಗೆ ಹುಟ್ಟಿದ್ದ ಈ ಆರನೆ ಕೂಸು ಮುಂದೊಂದು ದಿನ ಬಹಳಷ್ಟು ಪಥಭ್ರಷ್ಟರಿಗೆ ಮಾರ್ಗದರ್ಶಕನಾಗುತ್ತಾನಂತ? ಸ್ವಂತ ಬದುಕಿನಲ್ಲಿ ಅವರೆದುರಿಸಿದ ಆ ವೈಫಲ್ಯಗಳ ಸರಣಿಯೆ ಸಾರ್ವತ್ರಿಕ ಬದುಕಿನಲ್ಲಿ ಅಘೋಷಿತ ಗೆಲುವನ್ನವರು ಕೈವಶ ಮಾಡಿಕೊಳ್ಳಲು ಕಾರಣವಾದದ್ದು ಮಾತ್ರ ಕಾಕತಾಳೀಯವಲ್ಲದೆ ಮತ್ತಿನ್ನೇನೂ ಅಲ್ಲ  ಅನಿಸಿತವನಿಗೆ.

ಅವರ ಆರ್ಥಿಕ ನಷ್ಟದ ಕೊನೆಯಲ್ಲಿ ಅವರ ಬಟ್ಟೆಗೆ ಬಣ್ಣ ಹಾಕುವ ಉದ್ಯಮದ ಹಾಗೂ ಜವಳಿಯಂಗಡಿಯ ಸಂಪೂರ್ಣ ಮಾಲಕತ್ವ ವಹಿಸಿಕೊಳ್ಳಲು ಮನಸು ಮಾಡಿದ ಸಹೃದಯಿ ಗೆಳೆಯನ ಕೃಪೆಯಿಂದ ಅವರ ಸಾಲಗಳೆಲ್ಲಾ ತೀರಿˌ ಮಡದಿ ಮಗಳಿಗೂ ಒಂದು ದಿಕ್ಕು ತೋರಿಸಿˌ ಮುಂದಿನ ಅಧ್ಯಾತ್ಮದ ಹಾದಿ ಹುಡುಕುವ ಈ ಆನಂದಾಶ್ರಮದ ಸ್ಥಾಪನೆಗೂ ಅಗತ್ಯವಿರುವಷ್ಟು ಹಣ ಉಳಿಸಲು ಅವರಿಗೆ ಸಾಧ್ಯವಾಯ್ತು.

ಪತ್ನಿಗೆ ತನ್ನ ನಿರ್ಧಾರ ತಿಳಿಸಿ ಅವರ ಜೀವನೋಪಾಯಕ್ಕೆ ಒಂದು ವ್ಯವಸ್ಥೆ ಮಾಡಿದ ವಿಠ್ಠಲರಾಯರು ಕಡೆಗೂ ೧೯೨೨ರ ಡಿಸೆಂಬರ್ ೨೮ರಂದು ಮನೆ ಬಿಟ್ಟು ಇಂದಿನ ತಮಿಳುನಾಡಿನ ಶ್ರೀರಂಗಂ ತಲುಪಿದರು. ಅಲ್ಲಿ ಕಾವೇರಿಯಲ್ಲಿ ಮಿಂದು ಅಂದಿನಿಂದ ಬಣ್ಣಬಣ್ಣದ ವಸ್ತ್ರಗಳನ್ನೂ ತ್ಯಜಿಸಿ ಕೇವಲ ಬಿಳಿಯನ್ನುಟ್ಟುˌ ತನ್ನ ಹೆಸರನ್ನೂ ಕೈಬಿಟ್ಟು ಅಂದಿನಿಂದ ಸಂಪೂರ್ಣವಾಗಿ ಭಗವಂತ ಶ್ರೀರಾಮಚಂದ್ರನ ಸೇವೆಗೆ ತನ್ನನ್ನ ತಾನು ಒಪ್ಪಿಸಿಕೊಂಡು ವಿಠ್ಠಲರಾಯನ ಗುರುತಿನಿಂದ ಬಿಡುಗಡೆಯಾಗಿ ಶಾಶ್ವತವಾಗಿ ಸ್ವಾಮಿ ರಾಮದಾಸರಾಗಿ ತಮ್ಮನ್ನ ಗುರುತಿಸಿಕೊಂಡರು.

*****

ಸ್ವಾಮಿ ರಾಮದಾಸರ ಆರಂಭದ ಶಿಷ್ಯೆಯಾಗಿದ್ದ ಕೃಷ್ಣಾಬಾಯಿಯವರದ್ದು ಇನ್ನೊಂದು ಕಥೆ. ತನ್ನ ಸನ್ಯಾಸ ಸ್ವೀಕಾರದ ನಂತರ ಪರಿವ್ರಾಜನೆ ಮುಗಿಸಿ ಮಂಗಳೂರಿನ ತನ್ನ ಸಹೋದರನ ಮನೆಗೆ ಹಿಂದಿರುಗಿದ ರಾಮದಾಸರು ಅಲ್ಲಿ ತಂಗದೆ ಕದ್ರಿಯಲ್ಲಿರುವ ಪಾಂಡವರ ಗುಹೆಗೆ ಹೋಗಿ ಅಧ್ಯಾತ್ಮ ಸಾಧನೆಗೆ ತೊಡಗಿದರು. ಅಲ್ಲಿದ್ದಷ್ಟೂ ಕಾಲ ಕೇವಲ ದಿನಕ್ಕೆರಡು ಸಲ ಹಾಲು ಹಣ್ಣು ಮಾತ್ರ ಸ್ವೀಕರಿಸುತ್ತಾ ಬೆಳ್ಳಂಬೆಳಗ್ಯೆ ಮೂರೂವರೆಗೆ ಎದ್ದು ಅತಃರ್ಮನನದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುತ್ತಿದ್ದ ಅವರು ಮತ್ತೊಂದು ಸುತ್ತು ತೀರ್ಥಯಾತ್ರೆ ಕೈಗೊಳ್ಳಲು ರಾಮೇಶ್ವರದಿಂದ ಹೊರಟು ಹೃಷಿಕೇಶದವರೆಗೂ ಅನೇಕ ಪುಣ್ಯಕ್ಷೇತ್ರಗಳನ್ನ ಸುತ್ತಿ ಮರಳಿ ಮಂಗಳೂರಿಗೆ ಬಂದವರು ಪುನಃ ಅದೆ ಪಾಂಡವರ ಗುಹೆಯಲ್ಲಿ ಮತ್ತೆರಡು ತಿಂಗಳು ತಂಗಿದರು. "ನಾನು" "ನನ್ನದು" ಅನ್ನುವ ಭಾವದಿಂದ ಸಂಪೂರ್ಣ ವಿಮಖರಾಗಿದ್ದ ಅವರೀಗ ಬೇರೆಯದೆ ಮನಸ್ಥಿತಿಗೆ ಪಕ್ಕಾಗಿದ್ದದ್ದು ಸ್ಪಷ್ಟವಾಗಿತ್ತು.

ಅದರ ಫಲವಾಗಿ ೧೯೨೮ರ ಜೂನ್ ಮೂರಕ್ಕೆ ಮೊದಲೆ ಹೇಳಿದ ಹಾಗೆ ಕಾಸರಗೋಡಿನಲ್ಲಿ ಆರಂಭದಲ್ಲಿದ್ದ ಆನಂದಾಶ್ರಮವನ್ನ ಪ್ರಾರಂಭಿಸಿದ್ದು. ಅಲ್ಲಿಯೆ ಅವರನ್ನ ಮಾತೆ ಕೃಷ್ಣಾಬಾಯಿ ಪ್ರಥಮವಾಗಿ ಅದೆ ವರ್ಷ ಭೇಟಿಯಾಗುವಾಗ ಅವರ ಪ್ರಾಯ ಕೇವಲ ೨೫ ವರ್ಷಗಳು ಮಾತ್ರವಾಗಿತ್ತು. ಅಂದಿನ ಪದ್ಧತಿಯಂತೆ ತನ್ನ ಹನ್ನೆರಡರ ಪ್ರಾಯದಲ್ಲೆ ಬಾಲ್ಯ ವಿವಾಹವಾಗಿದ್ದ ಕೃಷ್ಣಾಬಾಯಿ ಕೇವಲ ಇಪ್ಪತ್ತರ ಪ್ರಾಯದಲ್ಲೆ ಇಬ್ಬರು ಗಂಡು ಮಕ್ಕಳ ತಾಯಿಯೂ ಆಗಿ ಗಂಡನನ್ನೂ ಸಹ ಕಳೆದುಕೊಂಡು ವೈಧವ್ಯವನ್ನ ಅನುಭವಿಸುತ್ತಿದ್ದ ಕಾಲ ಅದು.

ಮುಂಬೈಯಲ್ಲಿ ನೆಲೆಸಿದ್ದ ಕೃಷ್ಣಾಬಾಯಿ ಬದುಕಿನ ಏರುಪೇರುಗಳಿಂದ ವಿಚಲಿತಳಾಗಿ ಒಮ್ಮೆ ವಿಫಲ ಆತ್ಮಹತ್ಯಾ ಯತ್ನವನ್ನೂ ಸಹ ನಡೆಸಿದ್ದರು! ಆದರೂ ಬದುಕುಳಿದ ನಂತರ ಗೃಹಸ್ಥ ಜೀವನದಿಂದ ದೂರಾಗಲು ನಿರ್ಧರಿಸಿ ಧಾರವಾಡದ ತನ್ನ ಸಂಬಂಧಿಕರ ಮನೆಗೆ ಬಂದಿದ್ದಾಗ ಹುಬ್ಬಳ್ಳಿಯಲ್ಲಿ ಸಿದ್ಧಾರೂಢರನ್ನ ಕಂಡು ಅವರಿಂದ ಮಂತ್ರದೀಕ್ಷಿತರಾದರು. ಸ್ವಾಮಿ ರಾಮದಾಸರ ಬಗ್ಗೆ ಕೇಳಿದ್ದ ಅವರು ಕಾಸರಗೋಡಿಗೆ ಬಂದು ಅವರನ್ನ ಭೇಟಿಯಾಗಿ ತನ್ನ ಮನೋಭಿಲಾಶೆಯನ್ನ ತೋಡಿಕೊಂಡರು. ಆದರೆ ಆಗವರಿಗೆ ಆಶ್ರಮವಾಸದ ಅನುಮತಿ ಸಿಗದೆ ಮರಳಿ ಮುಂಬೈಗೆ ಹೋಗುವಂತೆ ರಾಮದಾಸರು ಇತ್ತ ಸೂಚನೆ ಪಾಲಿಸಿದರು.

ಆದರೆ ಅಲ್ಲೂ ಇರಲಾರದೆ ಮರಳಿ ಕಾಸರಗೋಡಿನ ಆನಂದಾಶ್ರಮಕ್ಕೇನೆ ಮರಳಿ ಬಂದರಂತೆ. ಆದರೆ ಕೆಲಕಾಲ ಅಲ್ಲಿ ರಾಮದಾಸರˌ ಅವರ ಅಸ್ತಮಾ ಪೀಡಿತ ತಂದೆ ಹಾಗೂ ಪೂರ್ವಾಶ್ರಮದ ಮಡದಿಯೊಂದಿಗೆ ತಂಗಿದ್ದರೂ ಸಹ ಶಾಶ್ವತ ಸನ್ಯಾಸಿನಿಯಾಗಲು ರಾಮದಾಸರು ಅನುಮತಿಸಲಿಲ್ಲ. ಬದಲಿಗೆ ಅವರ ಪುಟ್ಟ ಮಕ್ಕಳ ಜವಬ್ದಾರಿಯನ್ನ ನೆನಪಿಸಿದ ಗುರುಗಳು ಮರಳಿ ಅವರನ್ನ ಮುಂಬೈಗೇನೆ ಕಳಿಸಿದರಂತೆ. ಒಲ್ಲದ ಮನಸಿನಿಂದ ಮುಂಬೈಗೆ ಮರಳಲಿಚ್ಚಿಸದ ಕೃಷ್ಣಾಬಾಯಿ  ಒಂದು ಸಂಜೆ ಆಶ್ರಮದಿಂದಲೂ ಕಾಣೆಯಾಗಿ ಬಳಿಯ ಕಾಡಿನ ಬೆಟ್ಟದಲ್ಲಿ ಅಳುತ್ತಾ ರಾತ್ರಿ ಕಳೆದರು. ಬೆಳ್ಳಂಬೆಳಗ್ಯೆ ಅವರಿಗೆ ಹಾವೊಂದು ಕಚ್ಚಿ ಪ್ರಾಣಾಪಾಯಕ್ಕೂ ಒಳಗಾದರು. ಈ ವಿಷಯ ತಿಳಿದು ಹೌಹಾರಿದ ರಾಮದಾಸರು ಅವರನ್ನ ಆಶ್ರಮಕ್ಕೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಿ ಉಳಿಸಿಕೊಂಡರು. ಚೇತರಿಕೆಯ ನಂತರ ಅವರ ಸಾಂಸಾರಿಕ ಜವಬ್ದಾರಿಯನ್ನ ನೆನಪಿಸಿದ ಅಧ್ಯಾತ್ಮಿಕ ಗುರುಗಳು ಮೊದಲು ಅದನ್ನ ಪೂರೈಸಿ ಬರುವಂತೆ ನಿರ್ದೇಶನವನ್ನಿತ್ತು ಅವರಿಗೆ ರಾಮನಾಮದ ಮಂತ್ರ ದೀಕ್ಷೆ ಇತ್ತರು.

ಅವರ ಆಜ್ಞೆಯಂತೆ ಮುಂಬೈ ಮರಳಿದ ಕೃಷ್ಣಾಬಾಯಿ ಮಕ್ಕಳಿಬ್ಬರಿಗೂ ತನ್ನ ನಿರ್ಧಾರ ತಿಳಿಸಿˌ ಅವರ ಒಪ್ಪಿಗೆ ಪಡೆದುˌ ಅವರ ದೇಖಾರೇಖಿಯ ಜವಬ್ದಾರಿಯನ್ನ ಸಮೀಪದ ಬಂಧುಗಳಿಗೆ ಒಪ್ಪಿಸಿ ಸನ್ಯಾಸಿನಿಯಾಗಿರುವ ದೃಢ ನಿಶ್ಚಯದೊಂದಿಗೆ ಕಾಸರಗೋಡಿನಲ್ಲಿದ್ದ ಆನಂದಾಶ್ರಮಕ್ಕೆ ಮರಳಿ ಬಂದರು. ಅಲ್ಲಿಂದ ಅವರೂ ಸಹ ಆಶ್ರಮದ ಖಾಯಂ ನಿವಾಸಿಗಳಾಗಿ ಹೋದರು. ಆದರೆ ಸಹಜವಾಗಿ ಒಬ್ಬ ಯುವ ವಿಧವೆ ಹೀಗೆ ಅಜ್ಞಾತ ಗಂಡಸಿನೊಂದಿಗೆ ವಾಸಿಸುವುದು ಆಶ್ರಮದ ಭಕ್ತಾದಿಗಳ ಜೊತೆಜೊತೆಗೆ ಸುತ್ತಮತ್ತಲಿನ ಸ್ಥಳಿಯರ ವದಂತಿಗಳಿಗೆ ಕಾರಣವಾಯ್ತು.

ಆಗ ನಡೆದದ್ದೆ ಈ ದಾಳಿಯ ಪ್ರಕರಣ. ಕೆಲವರ ಪ್ರಕಾರ ಅದನ್ನ ನಡೆಸಿದ್ದು ಆಶ್ರಮದ ಒಬ್ಬ ನೌಕರ. ಮತ್ತೆ ಕೆಲವರನ್ನುವ ಮಾತನ್ನ ನಂಬವದಾದರೆ ಆಶ್ರಮಕ್ಕೆ ಒಂದು ರಾತ್ರಿ ನುಗ್ಗಿದ ಕಳ್ಳರಿಬ್ಬರು ಹರೆಯದ ಕೃಷ್ಣಾಬಾಯಿಯವರನ್ನ ಕೆಡಿಸಲು ನೋಡಿದರುˌ ಗಟ್ಟಿಯಾಗಿ ಆಗವರು ಉಚ್ಛರಿಸಿದ ರಾಮನಾಮ ಸ್ಮರಣೆ ಅವರ ಮಾನ ಉಳಿಸಿತು. ಕಳ್ಳರು ಪರಾರಿಯಾದರು. ಕಾಸರಗೋಡಿನ ಬಂಧ ಹಾಗೆ ಕಳಚಿತು.

( ಇನ್ನೂ ಇದೆ.)

https://youtu.be/D3OL3ayuQuU

28 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೯.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೯.👊

ಮೂಲತಃ ಮಲಯಾಳಿಗಳು ಶ್ರಮಜೀವಿಗಳು. ತಮ್ಮ ಸ್ವಂತ ನೆಲ ಕೇರಳದಲ್ಲಿ ಕೆಲಸಕ್ಕಿಂತ ಹೆಚ್ಚು ಪ್ರತಿಭಟನೆಗಳಲ್ಲಿ ವ್ಯಸ್ತವಾಗಿರುವ ಚಾಳಿಯಿರುವ ಮಲಯಾಳಿಗಳು ಹೊರಗಡೆ ದುಡಿಯಲು ಹೋದಾಗ ಮಾತ್ರ ಮೈ ಮುರಿದು ಕಾಲದ ಪರಿವೆಯಿಲ್ಲದೆ ದುಡಿಯುತ್ತಾರೆ. ಕೇರಳದಲ್ಲಿ ಅವರ ಟ್ರೇಡ್ ಯೂನಿಯನ್ ಕಿತಾಪತಿಗಳಿಗೆ ಹೆದರಿ ಉದ್ಯಮಿಗಳು ತಮ್ಮ ಉತ್ಪಾದನಾ ಕಾರ್ಖಾನೆಗಳನ್ನ ಸ್ಥಾಪಿಸಲು ಹಿಂದೇಟು ಹಾಕುವುದು ಎಷ್ಟು ನಿಜವೋˌ ಪರ ರಾಜ್ಯ ಹಾಗೂ ದೇಶಗಳಲ್ಲಿ ಅನೇಕ ಕಾರ್ಖಾನೆಗಳು ಸ್ಥಾಪನೆಯಾಗಲು ಹಾಗೂ ಯಶಸ್ವಿಯಾಗಿ ಬೆಳೆದುಳಿಯಲು ಇದೆ ಮಲಯಾಳಿಗಳ ಕೊಡುಗೆ ವಿಪರೀತವಾಗಿರೋದು ಕಾಕತಾಳೀಯ. 


ಬೇರೆ ಇನ್ನೇನಲ್ಲದಿದ್ದರೂ ಒಂದು ಸ್ವಂತದ "ಚಾ ಕಡ" ತೆರೆದು ಬದುಕುವ ಕೆಚ್ಚೆದೆ ಅವರಲ್ಲಿದೆ. ಚಂದ್ರಲೋಕಕ್ಕೆ ಕಾಲಿಟ್ಟ ಮೊದಲ ಮಾನವನಿಗೆ ಅಲ್ಲಿ ಮೊಟ್ಟಮೊದಲಿಗೆ ಎದುರಾದದ್ದು ಮಲಯಾಳಿಯ ಚಾ ಅಂಗಡಿ ಅನ್ನುವ ಜೋಕು ಕೇರಳದಲ್ಲೂ ಜನಜನಿತ. ಈ ನಾಯರನಾದರೋ ತೆಕ್ಕು ನಾಡಿನಿಂದ ಬಂದು ವಡಕ್ಕು ನಾಡಿನಲ್ಲೆ ತನ್ನ ಹೊಟೆಲನ್ನ ನಡೆಸುತ್ತಿದ್ದಾನೆ. ಆದರೆ ಬಹುತೇಕ ಮಲಯಾಳಿಗಳು ಏಳು ಸಾಗರ ದಾಟಿ ಹೋಗಿ ದುಡಿಯಲೂ ಸಹ ಹಿಂಜರಿಯರು. ವರ್ಷಗಟ್ಟಲೆ ಒಂಟಿಯಾಗಿ ವಾಸಿಸುತ್ತಾ ಕೇರಳದಲ್ಲಿರುವ ಗಂಡನನ್ನೋ - ಹೆಂಡತಿಯನ್ನೊˌ ಹೆತ್ತವರನ್ನೋ - ಮಕ್ಕಳನ್ನೋ ವರ್ಷದಲ್ಲೋ ಎರಡು ವರ್ಷದಲ್ಲೋ ಹೋಗಿ ಕಂಡು ಬರುವ ಗಾಣದೆತ್ತಿನಂತೆ ಅನವರತ ದುಡಿಯುವ ಮಲಯಾಳಿಗಳ ಹಿಂಡೆ ವಿದೇಶಗಳಲ್ಲಿದೆ.


ಅಂದಹಾಗೆˌ ಕೇರಳದ ಹೊಟೆಲ್ಲುಗಳಲ್ಲಿ ತಿಂಡಿಗಳೊಂದಿಗೆ ಮೇಲೋಗರ ಕೊಡುವ ಕ್ರಮ ಇಲ್ಲ. ನೀವು ಪುಟ್ಟು ಅಥವಾ ಪೂರಿ ಖರೀದಿಸಿದರೆ ಅದಕ್ಕೆ ಕಡಲ ಕರಿಯನ್ನೋ ಅಥವಾ ಮೊಟ್ಟ ಕರಿಯನ್ನೋ ಇಲ್ಲವೆ ಕೋಳಿ - ಬೀಫ್ ಕರಿಯನ್ನೊ ಪ್ರತ್ಯೇಕವಾಗಿ ಕೊಳ್ಳಬೇಕು. ಎರಡಕ್ಕೂ ಬೇರೆ ಬೇರೆ ಕ್ರಯ ವಿಧಿಸಲಾಗುತ್ತೆ. ಉಚಿತವಾಗಿ ಅಲ್ಲಿ ಸಿಗೋದು ಸಸ್ಯಹಾರಿ ಹೊಟೆಲ್ಲುಗಳಲ್ಲಿ ಅಲ್ಲಿನ ಕಡಲತೀರದ ತೇವಾಂಶ ಭರಿತ ಬೆಚ್ಚಗಿನ ವಾತಾವರಣದಲ್ಲಿ ದೇಹವನ್ನ ತಂಪಾಗಿಡುವ ಮೂಲಿಕೆ ಬೆರೆಸಿದ ಕೆಂಪು ವರ್ಣದ ಕುಡಿಯುವ ನೀರು ಹಾಗೂ ಕೆಲವು ಮಾಂಸಾಹಾರಿ ಹೊಟೆಲ್ಲುಗಳಲ್ಲಿ ಈ ನೀರಿನ ಜೊತೆಗೆ ಗ್ರಾಹಕರ ಲಿವರಿನ ಹಿತಾಸಕ್ತಿ ಕಾಪಾಡಲು ಕೊಡುವ ಲಿಂಬೆರಸದ ಶರಬತ್ತು ಮಾತ್ರ.


*****

ಅಂದು ಅವನಿಗೆ ಆನಂದಾಶ್ರಮಕ್ಕೆ ಹೋಗಲಿಕ್ಕಿತ್ತು. ಕಾಙಂನಗಾಡಿನ ಮತ್ತೊಂದು ಪವಿತ್ರ ಸ್ಥಳ ಮಾವುಂಗಲ್ಲಿನಲ್ಲಿರುವ ಆಸ್ತಿಕರ ಆಕರ್ಷಣೆಯ ಕೇಂದ್ರ ಆನಂದಾಶ್ರಮ. ಮಾವುಂಗಲ್ ಹಿಂದೆ ಕಾಙಂನಗಾಡು ಪೇಟೆಯಿಂದ ಮೂರು ಕಿಲೋಮೀಟರ್ ಹೊರಗಿದ್ದ ಗ್ರಾಮ. ಈಗ ಬೆಳೆದ ಪೇಟೆಯ ವಿಸ್ತರಣದಂತಾಗಿ ಹೋಗಿದೆ. ಸ್ವಾಮಿ ರಾಮದಾಸರು ಕಟ್ಟಿರುವ ಆನಂದಾಶ್ರಮ ಅಲ್ಲಿದೆ. 


ಬೇಕಲದಿಂದ ಕೋಟೆ ಸುತ್ತಿ ಕೋಣೆಗೆ ಮರಳಿದವನ ಹೊಟ್ಟೆ ವಿಪರೀತ ಹಸಿಯುತ್ತಿತ್ತು. ಮೂರು ದಿನದ ಕೊಳೆ ಬಟ್ಟೆಗಳನ್ನೆಲ್ಲ ಒಗೆದು ಹಾಕಿ ಸ್ನಾನ ಮುಗಿಸುವಾಗ ಘಂಟೆ ಹತ್ತಾಗಿತ್ತು. ನಾಯರ್ ಕ್ಯಾಂಟೀನಿನ ಇಡಿಯಪ್ಪಂ ಕಡಲ ಕರಿಯ ಜೊತೆ ಚಹಾ ಹೊಟ್ಟೆಗೆ ಹಾಕಿಕೊಂಡು ಪೇಟೆಯತ್ತ ನಡೆದ. ಬಸ್ಟ್ಯಾಂಡಿನ ಮೊಯಿದ್ದಿಯ ಬದ್ರಿಯಾ ಕಲರ್ ಲ್ಯಾಬ್ ತೆರೆದಿತ್ತು. "ಕಾಸರಗೋಡಿಂದ ಬಸ್ಸಲ್ಲಿ ಕಳಿಸಿದಾರಂತೆˌ ಇನ್ನು ಅರ್ಧಘಂಟೆಲಿ ಸಿಗ್ತದೆ ಸಾರ್ ಆಯ್ತ?" ಅಂದ ಮೊಯಿದ್ದಿ ಮೆಮೊರಿ ಕಾರ್ಡನ್ನ ಮರಳಿಸಿದ. "ಆಯ್ತು" ಅಂದವ ಪೇಟೆ ಬೀದಿಯಲ್ಲಿ ಕೊಂಚ ಸುತ್ತು ಹಾಕಿ ಕೊಗ್ಗ ಕಾಮತರ ದಿನಸಿ ಅಂಗಡಿಯಲ್ಲಿ ನಾಲ್ಕು ಕಾಯಿˌ ಮೂರು ಲೀಟರ್ ಕಾಯೆಣ್ಣೆˌ ಎರಡು ಕಿಲೋ ಮಧುರೈ ಆಣಿಬೆಲ್ಲ ಆಶ್ರಮಕ್ಕೆ ಕೊಡಲು ಖರೀದಿಸಿದ. 


ಮರಳಿ ಬರುವಾಗ ಫೊಟೋಗಳು ಬಂದಿದ್ದವು. ಯಥಾಪ್ರಕಾರ ಸ್ಟೂಡಿಯೋದವರು ಉಚಿತವಾಗಿ ಕೊಡುವ ಅಗ್ಗದ ಆಲ್ಬಂನಲ್ಲಿ ಎಲ್ಲಾ ಫೊಟೋಗಳನ್ನ ಲಕೋಟೆಯಿಂದ ತೆಗೆದು ತುಂಬಿಸಿಟ್ಟ. ಫೊಟೋ ಪಾಸಿಟಿವಿಗೆ ಹಾಕಿದ್ದ ರಾಸಾಯನಿಕದ ವಾಸನೆ ಬಹುದಿನಗಳ ನಂತರ ಮೂಗಿಗಡರಿ ಒಂಥರಾ ಖುಷಿಯಾಯಿತು. ಎಲ್ಲಾ ಡಿಜಿಟಲಾಟವಾಗಿರುವ ಈ ಕಾಲಮಾನದಲ್ಲಿ ಅವನೂ ಸಹ ಹೊಸ ಫೊಟೋಗಳನ್ನ ಹಿಂದಿನ ಅನಲಾಗ್ ರೀಲು ಕ್ಯಾಮರಾದ ಕಾಲದಂತೆ ತೊಳೆಸುವುದನ್ನೆ ಬಿಟ್ಟು ಬಿಟ್ಟಿದ್ದ. ಅಲ್ಲವನಿದ್ದ ಅಷ್ಟೂ ಹೊತ್ತುˌ ಹಾಳು ಮೊಬೈಲು ಫೋನು ಬಂದು ತನ್ನಂತವರ ವ್ಯಾಪಾರಕ್ಕೆ ಅದರಿಂದಾದ ನಷ್ಟದ ಕುರಿತು ಮೊಯಿದ್ದಿ ಕೊರೆದೆ ಕೊರೆದ. 


ಈ ನಡುವೆ ಫೊಟೋ ತೆಗೆಸಿಕೊಳ್ಳುವವರು ಹಾಗೂ ತೊಳೆಸಿ ಪ್ರಿಂಟ್ ಹಾಕಿಸಿಕೊಳ್ಳುವವರು ಗಣನೀಯ ಸಂಖ್ಯೆಯಲ್ಲಿ ಕುಸಿದು ಫೊಟೋ ಲ್ಯಾಬ್ ನಡೆಸುವುದುˌ ಅದೂ ಕಾಙಂನಗಾಡಿನಂತಹ ಪುಟ್ಟ ಪಟ್ಟಣದಲ್ಲಿ ಮೊಯಿದ್ದಿಯಂತವರಿಗೆ ನಷ್ಟದ ಬಾಬ್ತಾಗಿ ಪರಿಣಮಿಸಲಾರಂಭಿಸಿತ್ತು. "ಆಗುವ ವ್ಯಾಪಾರ ಅಲ್ಲಲ್ಲಿಗೆ ಸರಿಯಾಗ್ತಿದೆ ಸಾರ್" ಅಂತ ಮೊಯಿದ್ದಿ ಅವಲತ್ತುಕೊಂಡ. ಹೀಗಾಗಿ ಇವನು ಏನೊಂದೂ ಚೌಕಾಸಿ ಮಾಡದೆ ಪರಿತಾಪದಿಂದ ಅವನು ಹೇಳಿದ ಬೆಲೆಗೆ ಮೆಮೊರಿ ಕಾರ್ಡೊಂದನ್ನ ಖರೀದಿಸಿˌ ಬಿಲ್ ಪಾವತಿಸಿ ಅಲ್ಲಿಂದ ಕಾಲ್ಕಿತ್ತ. ಪ್ರಪಂಚ ಅನೇಕ ರಂಗಗಳಲ್ಲಿ ಅನಿರೀಕ್ಷಿತ ಬದಲಾವಣೆ ಕಾಣುತ್ತಿರೋದು ಸತ್ಯ. ನಾವೂ ಸಹ ಅದರ ವೇಗಕ್ಕೆ ನಮ್ಮನ್ನ ಹೊಂದಿಸಿಕೊಂಡು ಬೆಳೆಯದಿದ್ದರೆ ಕೊಳೆಯುವುದು ಖಚಿತ ಅನ್ನುವ ವಾತಾವರಣ ಎಲ್ಲೆಲ್ಲಿಯೂ ಇದೆ. ಇದರ ಬಲಿಪಶುವಾದವರಲ್ಲಿ ಮೊಯಿದ್ದಿ ಮೊದಲನೆಯವನೂ ಅಲ್ಲ. ಬಹುಶಃ ಕೊನೆಯವನೂ ಆಗಿರೊಲ್ಲ.


*****


ಆನಂದಾಶ್ರಮದ ಭಕ್ತರ ಪಾಲಿಗೆ ಪ್ರೀತಿಯ "ಪಪ್ಪ" ಆಗಿರುವ ಸ್ವಾಮಿ ರಾಮದಾಸರು ಮೂಲತಃ ಕಾಙಂನಗಾಡಿನವರೆ. ಆದರೆ ಯವ್ವನದಲ್ಲಿ ಮಂಗಳೂರಿನಲ್ಲಿ ತಮ್ಮದೆ ಸ್ವಂತ ಬಟ್ಟೆ ಅಂಗಡಿ ನಡೆಸಿಕೊಂಡಿದ್ದ ವಿಠ್ಠಲ ರಾವ್ ಎನ್ನುವ ಪೂರ್ವಾಶ್ರಮದ ಹೆಸರಿದ್ದ ಒಬ್ಬ ಗೌಡ ಸಾರಸ್ವತ ಗೃಹಸ್ಥ. ತಮ್ಮ ವ್ಯಾಪಾರದ ಏಳುಬೀಳುಗಳ ನಡುವೆ ವ್ಯವಹಾರದಲ್ಲಿ ಅವರು ಕೊಂಚ ನಷ್ಟವನ್ನ ಅನುಭವಿಸಿದರು. ಅವರನ್ನ ಅಧ್ಯಾತ್ಮದ ಹಾದಿಗೆ ಹೊರಳಿಸಿದವರು ಅವರ ತಂದೆ ಬಾಲಕೃಷ್ಣ ರಾಯರು. ಅವರಿತ್ತ ಮಂತ್ರದೀಕ್ಷೆ "ಶ್ರೀರಾಮ ಜಯರಾಮ ಜಯಜಯ ರಾಮ್ˌ ಶ್ರೀರಾಮ ಜಯರಾಮ ಜಯಜಯ ರಾಮ್" ಅವರನ್ನ ಸಂತತ್ವದ ಕಡೆಗೆ ತಿರುಗಿಸಿತು. ೧೯೨೨ರಲ್ಲಿ ಇದೆ ದಿನ ಡಿಸೆಂಬರ್ ಇಪ್ಪತ್ತೆಂಟರಂದು ಶಾಶ್ವತವಾಗಿ ತಮ್ಮ ಸಂಸಾರವನ್ನ ಮಡದಿ ರುಕ್ಮಾಬಾಯಿ ಹಾಗೂ ಮಗಳು ರಮಾಬಾಯಿಯನ್ನ ತೊರೆದ ವಿಠ್ಠಲರಾಯರು ಸ್ವಾಮಿ ರಾಮದಾಸರಾದ ಆರಂಭದ ಕಥೆ ಇದು. 


ಅನಂತರ ಕ್ರಮೇಣ ತಮ್ಮ ಜೀವನದಲ್ಲಿ ವೈರಾಗ್ಯದತ್ತ ಹೊರಳಿದ ಪಪ್ಪ ರಮಣಮಹರ್ಷಿಯಾದಿಯಾಗಿ ಅನೇಕ ಸಾಧು ಸಂತರ ಸಂಪರ್ಕಕ್ಕೆ ಬಂದರು. ಮೊದಲಿಗೆ ೧೯೨೦ರ ದಶಕದಲ್ಲಿ ಕಾಸರಗೋಡಿನ ಹತ್ತಿರದ ಚಂದ್ರಗಿರಿ ತೀರದಲ್ಲಿ ಜಾಗವನ್ನ ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ ಸರ್ವರನ್ನೂ ಸಮಾನವಾಗಿ ಕಾಣುವ - ಸರ್ವರಿಗೂ ತೆರೆದಿರುವಂತಹ ಅಧ್ಯಾತ್ಮಿಕ ಕೇಂದ್ರವೊಂದನ್ನ ತೆರೆದಿದ್ದರು. ತಾಯಿ ಕೃಷ್ಣಾಬಾಯಿಯವರು ಮುಂಬೈಯಿಂದ ಕಾಸರಗೋಡಿನ ಆಶ್ರಮಕ್ಕೆ ಸ್ಥಳಾಂತರವಾದ ಪಪ್ಪನಿಗೆ ಈ ವಿಷಯದಲ್ಲಿ ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದರು.


ಆದರೆ ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ಆಶ್ರಮದ ದೈನಂದಿನ ವ್ಯವಹಾರಗಳಲ್ಲಿ ಕೃಷ್ಣಾಬಾಯಿಯವರ ಉಪಸ್ಥಿತಿಯನ್ನ ಯಜಮಾನಿಕೆಯೆಂದು ಬಗೆದು ಸಹಿಸದೆ ಅವರ ಮೇಲೆ ಚೂರಿಯಿಂದ ದಾಳಿ ನಡೆಸಿದ್ದ ಎಂದು ಹೇಳಲಾಗುತ್ತದೆ. ಈ ಘಟನೆಯಾದ ನಂತರˌ ಅಲ್ಲಿದ್ದ ಆಶ್ರಮವನ್ನ ಮುಚ್ಚಿ ಈಗಿರುವ ಮಾವಂಗಲ್ಲಿನ ಆಶ್ರಮವನ್ನ ಸ್ಥಾಪಿಸಲಾಯಿತು. ಭಗವಾನ್ ನಿತ್ಯಾನಂದರೂ ಸಹ ಇದರ ಉದ್ಘಾಟನೆಯ ದಿನ ಇಲ್ಲಿಗೆ ಭೇಟಿ ನೀಡಿ ಕೃಷ್ಣಾಬಾಯಿಯವರು ನೀಡಿದ್ದ ಹಾಲು ಹಣ್ಣು ಸೇವಿಸಿ ಹರಸಿದ್ದರಂತೆ. ಪಪ್ಪ ಹಾಗೂ ಕೃಷ್ಣಾಬಾಯಿಯವರ ಪರಿಶ್ರಮದಿಂದ ಆರಂಭವಾದ ಆನಂದಾಶ್ರಮ ಮುಂದಿನ ದಿನಮಾನಗಳಲ್ಲಿ ಸ್ವಾಮಿ ಸತ್ ಚಿದಾನಂದರ ಮಾರ್ಗದರ್ಶನದಲ್ಲಿ ಬೆಳೆದು ಇಂದು ದೇಶದಾದ್ಯಂತ ಅಪಾರ ಭಕ್ತವರ್ಗವನ್ನ ಹೊಂದಿದೆ.


( ಇನ್ನೂ ಇದೆ.)



https://youtu.be/xBlRwO0ILKI

27 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೮.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೮.👊


"ಊಂಚೀ ಘಟಾಕೇ ಛಾಯೋಂ ಕೇ ತಲೇ ಛಿಪ್ ಜಿಏಂ
ಧುಂಧಲೀ ಫಿ಼ಜಾ ಮೈ ಖುಛ್ ಕೋಏ ಖುಛ್ ಪಾಏˌ
ಸಾಂಸೋ ಕೇ ಲಯ್ ಮೈ ಕೋಈ ಐಸಾ ಧುನ್ ಗಾಏ./
ದೇದೇ ಜೋ ದಿಲ್ ಕೋ ದಿಲ್ ಕೀ ಪನಾಹೇಂˌ
ಆಜಾ ಚಲ್ ದೇ ಕಹೀಂ ದೂರ್.//"

ಇವನ ನೆಚ್ಚಿನ ಉದ್ಘೋಷಕ ಯುನೂಸ್ ಖಾನ್ ಉತ್ತರ ಪ್ರದೇಶದ ಬಾರಾಬಂಕಿಯ ಮೂಲೆಯೊಂದರಿಂದ ಪತ್ರ ಬರೆದಿದ್ದ ಅದ್ಯಾರೋ ಅಭಿಮಾನಿಗಾಗಿ "ಹೌಸ್ ನಂಬರ್ ೪೪"ರ ಲತಕ್ಕನ ಧ್ವನಿಯಲ್ಲಿದ್ದ ಹಾಡೊಂದನ್ನ ಹಾಕಿದರು. ಸಾಹಿರ್ ಸರಳವಾದ ರಚನೆ - ಎಸ್ ಡಿ ಬರ್ಮನ್ ಸಂಗೀತ ಅನ್ನೋ ನೆನಪು ಇವನಿಗಾಯಿತು. ಮನದ ವೀಣೆಯ ತಂತಿ ಮೀಟುವಂತಹ ಹಾಡಿದು. ಜೊತೆಜೊತೆಗೆ ಗುನುಗದೆ ಇದನ್ನವ ಕೇಳಿದ್ದೇ ಇಲ್ಲ ಬಹುಶಃ.

ಮುಖಕ್ಕಿಷ್ಟು ನೀರು ಚೋಪಿಕೊಂಡು ಬಂದು ಪರದೆ ಸರಿಸಿ ಕಿಟಕಿಯ ಬಾಗಿಲು ತೆರೆದ ಹಿತವಾದ ತಂಗಾಳಿ ಕೋಣೆಯೊಳಗೆ ತೂರಿಕೊಳ್ಳಲು ಹವಣಿಸಿತು. ಅದರ ಬೆನ್ನೇರಿ ಒಳಗೆ ಬೆಳಗ್ಗಿನಿಂದ ಮಡುಗಟ್ಟಿದ್ದ ವಾಸನೆಗಳಷ್ಟು ತೊಳೆದು ಹೋದಂತಾಯಿತು. ಮನೆಗಂಟಿದ ವಾಸನೆಗಳನ್ನ ತೆಗೆಯಲು ಬೀಸುವ ಗಾಳಿಗೆ ಸಾಧ್ಯˌ ಮನಕ್ಕಂಟಿದ ವಾಸನೆಗಳಿಂದ ಮುಕ್ತಿ ಕೊಡಿಸಲು ಅದಿನ್ಯಾವ ಗಾಳಿಯಲೆಗೂ ಸಾಧ್ಯವಿಲ್ಲವಲ್ಲ!. 


ಒಮ್ಮೆಯಂಟಿದ ಮೇಲೆ ಸಂಬಂಧಗಳ ವಾಸನೆ ತೊಳೆದು ಹೋಗೋದಿಲ್ಲ. ಹಾಗೊಮ್ಮೆ ಅದು ಕಾಲದ ಮಾರುತ ಪ್ರವಾಹಕ್ಕಂಜಿ ಅಳಿಸಿಹೋಯಿತು ಅಂದಿಟ್ಟುಕೊಳ್ಳಿˌ ಆಗ ಆ "ಸಂಬಂಧ"ವೆ ದೊಡ್ಡ ಸುಳ್ಳು ಅನ್ನುವ ಖಾತ್ರಿ ಮನಸಿಗಾಗುತ್ತೆ. ಅದರರ್ಥ ಇಷ್ಟೆ. ಮೇಲ್ನೋಟಕ್ಕೆ ತೋರಿಕೆಯಾಗಿದ್ಧ ಅಂತಹ ಯಾವ ಸಂಬಂಧಗಳೂ ಸಹ ವಾಸ್ತವದಲ್ಲಿ ಮನಸಿನಾಳದಿಂದ ಹುಟ್ಟಿರಲೇ ಇಲ್ಲ. ಹೀಗಾಗಿಯೆ ಅನಿರೀಕ್ಷಿತ ಗರ್ಭಪಾತವಾಗಿ ಅಂತಹ ಸುಳ್ಳು ಸಂಬಂಧಗಳ ಭ್ರೂಣ ಸತ್ತು ಜಾರಿ ಹೋದರೂ ಮನಸಿಗೆ ಬಾಧೆ ತಟ್ಟುವುದಿಲ್ಲ. ತನ್ನ ವಾಸನೆಯನ್ನದು ಮನದ ಕೋಣೆಯೊಳಗೆ ಉಳಿಸಿ ಹೋಗಿರುವುದಿಲ್ಲ.


ಸುಭಾಶ ಕೊಟ್ಟ ಬುತ್ತಿಗಂಟಿನ ನೆನಪಾಗಿ ಬಟ್ಟೆ ಚೀಲದಿಂದ ಅದನ್ನ ಹೊರಗೆ ತೆಗೆದು ಬುತ್ತಿ ಬಿಚ್ಚಿದ. ಮೇಲಿನ ಅರೆಯಲ್ಲಿ ನಿರೀಕ್ಷೆಯಂತೆ ಹರಕೆ ಕೋಳಿಯ ಸಾರಿತ್ತು. ಎರಡನೆಯದರಲ್ಲಿ ಚೂರು ಉಪ್ಪಿನಕಾಯಿಯ ಜೊತೆಗೆ ನಾಲ್ಕಾರು ಪುಂಡಿಗಳಿದ್ದವು. ಕೊನೆಯದರಲ್ಲಿ ಹೆಸರುಬೇಳೆ ಪಾಯಸವಿತ್ತು. ತಿನ್ನುವ ಮೂಡ್ ಇರಲಿಲ್ಲವಾದರೂˌ ವಾತಾವರಣದ ಸೆಕೆಗೆ ಅವೆಲ್ಲ ಬೆಳಗ್ಯೆವರೆಗೂ ಇಟ್ಟರೆ ಅವೆಲ್ಲ ಹಾಗೆಯೆ ಹಳಸಿ ಹೋಗುವ ಸಂಭವವಿತ್ತು. ಆಮೇಲೆ ತಿನ್ನಲಾಗದ ಸ್ಥಿತಿಗವು ಮುಟ್ಠುತ್ತಿದ್ದುದು ಖಾತ್ರಿ.


ಹಿಂದೆ ಅನೇಕ ಸಲ ಅನ್ನಕ್ಕಾಗಿ ಪರದಾಡಿದ ದಿನಗಳೂ ಅವನ ಬಾಳಿನಲ್ಲಿತ್ತು. ಹೀಗಾಗಿ ಅವನ್ನ ಚೆಲ್ಲುವ ಜಾಯಮಾನವಂತೂ ಅವನದಾಗಿರಲಿಲ್ಲ. ಅಷ್ಟಲ್ಲದೆ ಅಪರಿಚಿತನಾದ ತನಗೆ ಆದರದಿಂದ ಕಳಿಸಿಕೊಟ್ಟಿರುವ ಬಡವರ ಮನೆಯ ಪ್ರೀತಿಯ ಕೂಳಿದು ಬೇರೆ. ಉಣ್ಣದೆ ಎಸೆದರದು ಅನ್ನಕ್ಕೆ ಮಾಡುವ ಅವಮಾನ. ಹೀಗಾಗಿ ತಿಂದು ಮುಗಿಸಲು ಕೂತ. ಸಾಮಾನ್ಯವಾಗಿ ಕೋಳಿ ಅವನ ಆಯ್ಕೆಯ ಆಹಾರವಲ್ಲ. ಅವನದನ್ನ ತಿನ್ನುತ್ತಲೂ ಇರಲಿಲ್ಲ. ಇಲ್ಲಿ ಅದನ್ನ ಹಂಚಿಕೊಂಡು ತಿನ್ನಲು ಇನ್ಯಾರೂ ಇಲ್ಲದ ಅನಿವಾರ್ಯತೆ "ಒಂದು ಸಾರಿ ತಿಂದರೆ ಜಾತಿಯೇನೂ ಕೆಡಲ್ಲ ಬಿಡು" ಅನ್ನುವ ಉಢಾಫೆಯಿಂದ ಉಣ್ಣಲನುವಾದ. 

ನಿಜವಾಗಿಯೂ ಸಾರು ಪುಂಡಿ ಸೊಗಸಾಗಿತ್ತು. ಅದಕ್ಕೆ ಹೇಳೋದು ಬಹುಶಃ ಗಂಡಸರು ಮಾಡುವ ಅಡುಗೆ ವಿಜ್ಞಾನˌ ಹೆಂಗಸರ ಅಡುಗೆ ಕಲೆ ಅಂತ ತನಗೆ ತಾನೆ ಅಂದುಕೊಳ್ಳುತ್ತಾ ತಿಂದು ಮುಗಿಸಿದ. ಬೆಳಗ್ಯೆ ಮಾಡಿದ್ದಿರಬಹುದಾಗಿದ್ದ ಪಾಯಸ ಚೂರೆ ಚೂರು ಅಡ್ಡವಾಸನೆಗೆ ತಿರುಗಲಾರಂಭಿಸಿದ್ದರೂ ರುಚಿಗೇನೂ ಕೊರತೆಯಿರಲಿಲ್ಲ. ತಿಂದ ಬುತ್ತಿಯನ್ನ ಸಿಂಕಿನಲ್ಲಿ ತೊಳೆದು ಮೇಜಿನ ಮೇಲೆ ಬೋರಲಿಟ್ಚ. ಮಧ್ಯಾಹ್ನ ತಿಂದದ್ದು ಹಿಂದಿನಿಂದ ಹೊರಬರಲು ಹವಣಿಸುತ್ತಿತ್ತು. ಕಮೋಡಿನ ಮೇಲೆ ಕೂತು ಅದಕ್ಕೊಂದು ಮುಕ್ತಿ ಕಾಣಿಸಿದಾಗ ಅಬ್ಬಬ್ಬಾ ಅನಿಸಿತು. 

"ಝೂಲಾ ಧನಕ್ ಕಾ ಧೀರೇ ಧೀರೇ ಹಮ್ ಝೂಲೇ.
ಅಂಬರ್ ಥೋ ಕ್ಯಾ ಹೈಂ
ತಾರೋಂ ಕೇ ಭೀ ಲಬ್ ಛೂಲೇಂ./
ಮಸ್ತೀ ಮೈ ಝೂಲೇ ಔರ್ ಸಭೀ ಗ಼ಮ್ ಭೂಲೇಂˌ
ದೇಖೇ ನಾ ಪೀಛೇ ಮುಢ್ ಕೇ ನಿಗಾಹೇಂ.
ಆಜಾ ಚಲ್ ದೇ ಕಹೀಂ ದೂರ್.//"

ಹಳೆಯ ಅನೇಕ ನೆನಪಿನ ಪುಟಗಳನ್ನ ಹಾಡಿನ ಲಯ ಮತ್ತೆ ತೆರೆಸಿತು. ಕತ್ತಲೆಯ ಮೌನˌ ಅನಿವಾರ್ಯದ ಏಕಾಂತˌ ಭರಿಸಲಾಗದ ಒಂಟಿತನ ಮನಸಿನಲ್ಲಿ ಮಡುಗಟ್ಟಿದ ಮಾತುಗಳನ್ನ ಅಕ್ಷರ ರೂಪದಲ್ಲಿ ಬರೆದು ಹಗುರಾಗದಿದ್ದರೆ ನಿದ್ರೆ ಮರೀಚಿಕೆಯಾದೀತು ಎಂಬ ಹೆದರಿಕೆ ಹುಟ್ಟಿಸಿತು. ಅನಿಯಮಿತ ದಿನಚರಿ ತೆಗೆದು ತನ್ನನ್ನೀಗ ಮರೆತು ತಾನು ಮಾತ್ರ ಸುಖವಾಗಿರುವ ಆ ದೂರದ ಜೀವಕ್ಕೆ ಆ ಕ್ಷಣದಲ್ಲಿ ಹೇಳ ಬಯಸುವ ಮಾತುಗಳನ್ನೆಲ್ಲಾ ಬರೆದಿಡಲಾರಂಭಿಸಿದ.


ಭಾವನೆಗಳೆಲ್ಲ ಕಟ್ಟೆಯೊಡೆದು ನುಗ್ಗುವ ಪ್ರವಾಹದಂತೆ ಹರಿದು ಬಂದವು. ಕೊನೆಯ ಎರಡು ಸಾಲುಗಳನ್ನ ಬರೆಯವಾಗ ಮಾತ್ರ ಹಿಡಿತ ಮೀರಿ ಕಣ್ಣು ಮಂಜಾದಂತಾಗಿ ಮುಂದಿನ ಬರವಣಿಗೆ ಅಸಾಧ್ಯವಾಯ್ತು. ಕಂಬನಿ ಕಟ್ಟಿದ ಕಣ್ಗಳಲ್ಲಿ ಬರೆದ ಭಾವನಾತ್ಮಕ ಸಾಲುಗಳೆಲ್ಲ ಕಲಸಿಹೋದಂತೆನಿಸಿ ಸುಮ್ಮನೆ ಅದನ್ನ ಮುಚ್ಚಿಟ್ಟು ಅರೆಕ್ಷಣ ಬಿಕ್ಕಳಿಸಿ ಅತ್ತು ಮನವನ್ನ ಹಗೂರ ಮಾಡಿಕೊಳ್ಳಲು ಪ್ರಯತ್ನಿಸಿದ. ಸಂತೈಸಲು ತನಗೆ ತಾನೆ ಆಸರೆ ಹೊರತುˌ ಇನ್ಯಾರೂ ತನಗಿಲ್ಲ ಅನ್ನುವ ವಾಸ್ತವ ಬಡಿದೆಬ್ಬಿಸಿತು. ನೊಂದ ಮನದ ಏಕತಾನದ ಗಮನವನ್ನ ಬೇರೆಡೆ ಸರಿಸಲು ಕೈಫೋನಿನ ರೇಡಿಯೋದಲ್ಲಿ ಮತ್ತೊಂದ್ಯಾವುದೋ ಸ್ಟೇಷನ್ ತಿರುಗಿಸಿದ. ಅಲ್ಲೂ ಲತಕ್ಕ ಆರ್ದ್ರ ಧ್ವನಿಯಲ್ಲಿ ಅದೆ ಗೀತೆಯನ್ನ ಗುನುಗುತ್ತಿರೋದು ಕೇಳಿ ಬೆರಳುಗಳನ್ನ ಮುಂದೋಡಿಸದೆ ನಿಂತ.

"ಫೆಹಲೀ ಹುಈ ಹೈಂ ಸಪ್ನೋಂ ಕೀ ರಾಹೇಂ.
ಆಜಾ ಚಲದೇ ಕಹೀಂ ದೂರ್.
ವಹೀಂ ಮೇರೀ ಮಂಜಿ಼ಲ್.
ವಹೀಂ ತೇರೀ ರಾಹೇಂ.
ಆಜಾ ಚಲದೇ ಕಹೀಂ ದೂರ್."

ದೂರದಲ್ಲಿ ಯಾವುದೋ ಅರಿಯದೊಂದೂರಿಗೆ ಹೊರಡಲಿದ್ದ ರೈಲು ತಾನಿನ್ನು ಏದುಸಿರು ಬಿಟ್ಟು ಓಡುವ ಸೂಚನೆ ಕೊಡಲು ದೀರ್ಘವಾದ ಸೀಟಿ ಊದಿದ್ದು ಕ್ಷೀಣವಾಗಿ ಕೇಳಿ ಬಂತು. ಭಾವದ ಕೊಳವನ್ನ ಕಲುಕಿದ ಆಲೋಚನೆಗಳಿಂದ ಆಯಾಸವಾಗಿದ್ದ ಮನಸಿನೊಂದಿಗೆ ದೀಪವಾರಿಸಿ ಹಾಸಿಗೆಯ ಮೇಲೊರಗಿದ. ಭಾವನೆಗಳು ಬಳಲಿಸಿದ ಮನಸಿಗೆ ನಿದ್ರೆಯ ಔಷಧ ಅತ್ಯವಶ್ಯವಾಗಿ ಬೇಕಿತ್ತು. ದಿಂಬನ್ನ ತಬ್ಬಿ ಮಲಗಿದ್ದಷ್ಟೆ ಗೊತ್ತುˌ ಪುಣ್ಯಕ್ಕೆ ನಿದ್ರೆಗೂ ಅಂದು ಅವನ ಮನಸಿನ ಮನೆಯ ವಿಳಾಸ ಅತಿ ಸುಲಭವಾಗಿ ಸಿಕ್ಕಿತೆನ್ನಬಹುದು.


*****

ಕೋಣೆಯ ಕಿಟಕಿಯಿಂದ ಅನತಿ ದೂರದಲ್ಲಿದ್ದ ಆಲದ ಮರದಲ್ಲಿ ಮನೆ ಮಾಡಿಕೊಂಡಿದ್ದ ಹಿರಿ ಮರಿ ಕಿರಿ ಹಕ್ಕಿಗಳ ಚಿಲಿಪಿಲಿ ಹೊರಗಡೆಯಿಂದ ಕಿರಿಕಿರಿಯಾಗುವಷ್ಟು ಜೋರಾಗಿ ಕೇಳ ತೊಡಗಿದಾಗ ಬೆಳಗಾದ ಸೂಚನೆ ಆಗಷ್ಟೆ ಮೆಲ್ಲನೆ ಎಚ್ಚರವಾದವನಿಗೆ ಸಿಕ್ಕಿತು. ನಿತ್ಯದಂತೆ ಅಲ್ಲಿನಿಂದ ಬೇಕಲದ ಕಡಲತೀರದ ತನಕ ನಡೆದೆ ಹೋಗಿˌ ಮರಳಿ ಬರುವಾಗ ಬಸ್ಸು ಹಿಡಿಯಲು ನಿರ್ಧರಿಸಿದವ ಎದ್ದು ಹಲ್ಲುಜ್ಜಿ ನಿತ್ಯಕರ್ಮಗಳನ್ನ ಮುಗಿಸಿ ಟ್ರಾಕ್ ಸೂಟನ್ನ ಧರಿಸಿ ನಾಯರನ ಚಹಾ ಹೀರಲು ಕೆಳಗಿನ ಕ್ಯಾಂಟೀನಿನತ್ತ ಹೆಜ್ಜೆ ಹಾಕಿದ. 


ಟೇಪ್ ರಿಕಾರ್ಡರಿನಲ್ಲಿ ಏಸುದಾಸ್ˌ ಶ್ರೀಕುಮಾರ್ˌ ಉಣ್ಣಿ ಮೆನೋನ್ ಸರದಿಯಂತೆ "ಚೊಟ್ಟನಿಕ್ಕಾರ ಅಮ್ಮೆ"ಯನ್ನು ಪರಿಪರಿಯಾಗಿ ಸ್ತುತಿಸಿ ಕವಿ ಪೂವಾಂಚಲ್ ಖಾದರ್ ಬರೆದಿರುವ ಭಕ್ತಿಗೀತೆಗಳನ್ನ ಸುಶ್ರಾವ್ಯವಾಗಿ ಹಾಡುತ್ತಿದ್ದರು. 

"ಮಧುರಂ ಕೊರಚ್ಚಿ ಕೇಟ್ಟೋ?ˌ 
ಚೋದಿಕ್ಯಾನ್ ನಾಯರೆˌ 
ವಳರೆ ಶರ್ಕರಂ ಪೋಡಾನ್ ಪಾಡಿಲ್ಲಿಯಾ" 

ಅನ್ನುವ ಅನುಪಲ್ಲವಿಯನ್ನ ತಾನೂ ಅದೆ ಭಕ್ತಿಗೀತೆಗಳ ಧಾಟಿಯ ರಾಗದಲ್ಲಿ ಹಾಡಿ ನಾಯರನ ಮುಖದಲ್ಲಿ ಕುಚೋದ್ಯದ ನಗುವನ್ನೆಬ್ಬಿಸಿದ. ಪದೆ ಪದೆ ಹೇಳದಿದ್ದರೆ ನಾಯರನ ಬರಿ ಸಕ್ಕರೆ ಸುರಿದ "ಸ್ಟ್ರಾಂಗ್ ಚಾಯ" ಕುಡಿಯುವ ಕರ್ಮ ಎದುರಾಗುವುದು ಮಾತ್ರ ಖಾತ್ರಿಯಿತ್ತು.

ಶ್ರಮಜೀವಿ ನಾಯರ ದೂರದ ನಡು ಕೇರಳದಲ್ಲಿದ್ದ ತನ್ನ ಕುಟುಂಬದ ಪೋಷಣೆಗೆ ಕಷ್ಟ ಪಡುತ್ತಿದ್ದ.


( ಇನ್ನೂ ಇದೆ.)



https://youtu.be/J-Yrsi4Svlg

26 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೭.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೭.👊

ಹೊಟೆಲಿನಿಂದ ಹೊರಬಿದ್ದವರು ಬಸ್ಟ್ಯಾಂಡಿನ ವಿರುದ್ಧ ಸಾಲಿನಲ್ಲಿದ್ದ ಪುಟ್ಟಪಥದ ಮೇಲೆ ರೈಲ್ವೆ ನಿಲ್ದಾಣದತ್ತ ಹೆಜ್ಜೆ ಹಾಕಲಾರಂಭಿಸಿದ್ದರು. ಸುಭಾಶನ ಹವಾಯಿಯ ಬಾರು ಹೆಜ್ಜೆಯೊಂದನ್ನ ಕಿತ್ತಿಡುವಾಗ ಹೆಬ್ಬೆಟ್ಟಿನ ಬಳಿ ಕಿತ್ತುಬಂತು. ತಿಂಡಿಯ ಪೊಟ್ಚಣಗಳನ್ನ ಇವನಿಗೆ ದಾಟಿಸಿ ಅವ ಚಪ್ಪಲಿಯ ಬಾರನ್ನ ಮತ್ತೆ ಸವೆದು ಬಿರಿದು ಹೋಗಿದ್ದ ಅಟ್ಟೆಯ ಮುಮ್ಮುಡಿಯ ತೂತಿಗೆ ತನಗಿದು ಹೊಸತೇನಲ್ಲ ಅನ್ನುವ ನಿರ್ಲಿಪ್ತತೆಯಲ್ಲಿ ತೂರ ತೊಡಗಿದ. ಪಾಪ ಅನಿಸಿತವನಿಗೆ. ಮುಂದೆ ನಾಲ್ಕು ಹೆಜ್ಜೆ ಇಡುವಷ್ಟರಲ್ಲಿ ಸಂಜೆಗತ್ತಲ ಹಾವಳಿಯಿಂದ ಪಾರಾಗಲು ಆಗಷ್ಟೆ ಬೋರ್ಡಿನ ದೀಪ ಹೊತ್ತಿಸುತ್ತಿದ್ದ ಚಪ್ಪಲಿಯಂಗಡಿ ಬಾಟಾ ಪಕ್ಕದಲ್ಲೊಂದು ಕಟ್ಟಡದ ಕೆಳ ಮಹಡಿಯಲ್ಲಿ ಕಂಡಿತು. 


ಹಾಗೆಯೆ ಕರೆದರೆ ಅವನ ಆತ್ಮಗೌರವಕ್ಕೆ ಧಕ್ಕೆಯಾಗಬಹುದು ಎಂದು ಗ್ರಹಿಸಿ "ಬಾರಾ ನನಗೊಂದು ಚಪ್ಪಲಿ ತಗೋಬೇಕನ" ಅಂತ ಅವನನ್ನ ಅತ್ತ ತಿರುಗಿಸಿದ. ವಯಸ್ಸಿನಲ್ಲಿ ಕಿರಿಯರಾದರೇನು ಆತ್ಮಗೌರವ ಎಲ್ಲರಿಗೂ ಇದ್ದೆ ಇರುತ್ತೆ. ನಮ್ಮ ಚಿಲ್ಲರೆ ಅಹಂಕಾರಗಳನ್ನ ವಿಜೃಂಭಿಸಿಕೊಳ್ಳಲು ಮಕ್ಕಳದ್ದೆ ಆಗಲಿ ಮನಕ್ಕೆ ಕೀಳರಿಮೆಯ ಭಾವ ದಾಟಿಸಕೂಡದು. ಬೆಣ್ಣೆ ಮಾತುಗಳನ್ನಾಡುತ್ತಲೆ ನಮ್ಮಿಂದಾಗುವ ಸಹಾಯವನ್ನ ಮಾಡಿದಾಗ ಅವರ ಅವಶ್ಯಕತೆಯೂ ಪೂರೈಸೋದರ ಜೊತೆಜೊತೆಗೆ ನಮ್ಮ ಉದ್ದೇಶವನ್ನೂ ಈಡೇರಿಸಿಕೊಳ್ಳಬಹುದು. ಕೇವಲ ಮಕ್ಕಳೊಂದಿಗೆ ಮಾತ್ರ ಅಂತಲ್ಲ ದೀನರು ದಲಿತರು ಭಿಕ್ಷುಕರು ಹೀಗೆ ನಮ್ಮಿಂದ ಸಹಾಯದ ಅಪೇಕ್ಷೆ ಇರುವ ಹಾಗೆಯೆ ಇಲ್ಲದಿರುವ ಯಾರೊಂದಿಗಾದರೂ ಹೀಗೆಯೆ ವರ್ತಿಸಬೇಕು. ಅದೆ ಔದಾರ್ಯವನ್ನ ಮುಕ್ತವಾಗಿ ಪ್ರಕಟಿಸುವ ಸರಳ ಬಗೆ. ಅದನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಅವ ಈಗ ಅದೆ ಬಗೆಯಲ್ಲಿ ವರ್ತಿಸಲಾರಂಭಿಸಿದ್ದ. ಸ್ವತಃ ನಾವೆ ಹೆತ್ತ ಮಕ್ಕಳಾದರೂ ಸರಿ ಹದಿಹರೆಯ ದಾಟಿದ ನಂತರ ನಿಧಾನವಾಗಿ ಅವರನ್ನ ನಮ್ಮ ಸರಿಸಮವಾಗಿ ನಡೆಸಿಕೊಳ್ಳೋದು ವಿವೇಕ. ಆಗ ಅವರಲ್ಲೂ ಸಹ ಒಂದು ಆತ್ಮವಿಶ್ವಾಸದ ಸೆಲೆ ಉಕ್ಕಲು ಅನುವಾಗುತ್ತೆ.


ಚಪ್ಪಲಿ ಅಂಗಡಿಯಲ್ಲಿ ತನಗೊಂದು ಫ್ಲಿಫ್ ಫ್ಲಾಪ್ ಅಗತ್ಯವಿತ್ತು. ಹಾಗೆಯೆ ಸುಭಾಶನಿಗೂ "ಚಪ್ಲಿ ಬೇಕನ? ನೋಡು ತೆಗೋ" ಅಂದ. ಅವ ಅನಿರೀಕ್ಷಿತ ಕೊಡುಗೆಗೆ ವಿಸ್ಮಿತನಾಗಿ ನಾಚಿಕೆಯಿಂದ ಕುಗ್ಗಿ ಹೋದವನಂತೆ "ಬೇಡನಿಯ" ಅಂದ. ಆದರೆ ಕಷ್ಟಪಟ್ಟು ವೈರಾಗ್ಯ ನಟಿಸುತ್ತಾ ಈ ದಾಕ್ಷಿಣ್ಯದ ಮಾತುಗಳನ್ನ ಉಚ್ಛರಿಸುವಾಗ ಅಲ್ಲಿದ್ದ ಹೊಳೆಯುವ ಚಪ್ಪಲಿ ಸಾಲುಗಳಿಂದ ಅವನ ಚಂಚಲಚಿತ್ತ ದೃಷ್ಚಿ ಬೇರೆಡೆ ಹರಿಯಲು ಮಾತ್ರ ವಿಫಲವಾಗಿತ್ತು. "ಇರಲಿ ತೆಗೋ ಅಡ್ಡಿಯಿಲ್ಲ" ಅಂದವನೆ ಅಂಗಡಿಯವನಿಗೆ ಅವನ ಸೈಜಿನ ಒಳ್ಳೆಯ ಸ್ಯಾಂಡೆಕ್ಸ್ ಚಪ್ಪಲಿಯನ್ನ ತೋರಿಸಲು ಹೇಳಿದ. ದಾಕ್ಷಿಣ್ಯದಿಂದಲೆ ನಾಲ್ಕಾರು ಜೊತೆ ಚಪ್ಪಲಿಗಳನ್ನ ಕಾಲಿಗೆ ತೂರಿಸಿ ಇಷ್ಟವಾದದ್ದೊಂದನ್ನ ಖರೀದಿಸುವಾಗ ಅವನ ಮೈ ನಿಜವಾಗಿಯೂ ಅಚ್ಚರಿಯಲ್ಲಿ ನಡುಗುತ್ತಿದ್ದಂತಿತ್ತು. ಉತ್ಕಂಟತೆಯಲ್ಲಿ ಅವನ ಎದೆ ಬಡಿತ ನಗಾರಿಯಂತೆ ಬಡಿದುಕೊಳ್ಳುತ್ತಿತ್ತು ಅನ್ನಿಸುವಂತೆ ನಂಬಲಾರದ ಘಟನೆಗೆ ಸಾಕ್ಷಿಯಾದವನಂತೆ ದೊಡ್ಡ ಕಣ್ಣುಗಳನ್ನ ಬಿಟ್ಟುಕೊಂಡು ನೋಡುತ್ತಿದ್ದ. 


ಅದನ್ನ ನೋಡಿಯೂ ನೋಡದಂತೆ ನಟಿಸುತ್ತಾ ಫ್ಲಿಫ್ ಫ್ಲಾಫ್ ಪರಿಕ್ಷಿಸುತ್ತಿದ್ದವನನ್ನ ಯಾರೋ ತಿವಿದು ಕರೆದಂತಾಯಿತು. ನೋಡಿದರೆ ಸುಭಾಶನೆ. "ಏನ?" ಅಂದರೆ "ಮತ್ತೆಂತದಿಲ್ಲˌ ಶಾಲೆಯಲ್ಲಿ ನಾನು ಈ ಸಾರಿ ಸ್ಕೌಟು ಸೇರಲು ಆಸೆ. ಆದ್ರೆ ಶೂ ಇಲ್ಲದೆ ಸೇರ್ಸಿಕೊಳ್ಳೋದಿಲ್ಲ ಅಂದ್ರು ಟೀಚರು. ನನಗೆ ಚಪ್ಲಿ ಬೇಡ ಬದಲಿಗೆ ಒಂದು ಕಪ್ಪು ಶೂವೆ ತೆಗೊಳ್ಳಲ?" ಅಂತ ಬೇಡಿದ. "ಅಲ್ಲ ಮಾರೆಯ ಸ್ಕೌಟಿಂದ ಬಂದ ಮೇಲೆನೂ ಅದೆ ಶೂ ಹಾಕಿಕೊಂಡು ಊರಲಿಯಕ್ಕಾಗ್ತದೇನ? ಹೂಂˌ ಇರಲಿ ನೀನು ಆ ಚಪ್ಪಲಿನೂ ಇಟ್ಕೊ." "ಜೊತೆಗೊಂದು ಕಪ್ಪು ಶೂಸಹ ತೋರಿಸಿ ಇವನಿಗೆ. ಚೂರು ದೊಡ್ಡ ಸೈಜಾದ್ರೂ ಅಡ್ಡಿಯಿಲ್ಲ. ಬೆಳೆಯುವ ಹುಡುಗ ಜಾಸ್ತಿ ಸಮಯ ಉಪಯೋಗಕ್ಕೆ ಬರ್ತದೆ" ಅಂತ ಇವರ ವಿಚಾರ ವಿನಿಮಯವನ್ನೆ ದಿಟ್ಟಿಸುತ್ತಿದ್ದ ಅಂಗಡಿಯವನಿಗೆ ಅಂದು ತನ್ನ ಆಯ್ಕೆಯಲ್ಲಿ ಮತ್ತೆ ತಾನು ಮಗ್ನನಾದ. 


ಇವನ ಆಯ್ಕೆ ಮುಗಿದಾಗ ಸುಭಾಶನ ವ್ಯಾಪಾರವೂ ಸಂಪನ್ನವಾಗಿತ್ತು. ಆ ಶೂಗೊಂದು ಬಿಳಿ ಸಾಕ್ಸನ್ನೂ ಕೊಡಿಸಿ "ಅಲ್ಲನ ನಿನ್ನ ತಂಗಿಗೆಷ್ಟು ಪ್ರಾಯ?" ಅಂದವನಿಗೆ "ನಾಲ್ಕು" ಅಂತ ಉತ್ತರ ಬಂತು. ಒಂದು ಅಂದಾಜಿನ ಮೇಲೆ ಅವಳಿಗೂ ಒಂದು ಮಕ್ಕಳ ಚಪ್ಪಲಿ ಪ್ಯಾಕ್ ಮಾಡಲು ಹೇಳಿದ. ಒಂದು ವೇಳೆ ಅದೇನಾದರೂ ಸರಿಯಾದ ಗಾತ್ರದಲ್ಲಿರದಿದ್ದರೆ ನಾಳೆ ಬದಲಿಸಿಕೊಡುವ ನಿಬಂಧನೆ ಹಾಕಿ ವ್ಯಾಪಾರ ಮುಗಿಸಿ ಬಿಲ್ ಮೊತ್ತ ಪಾವತಿಗೆ ತನ್ನ ಕಾರ್ಡ್ ನೀಡಿದ. ಮನೆಯಲ್ಲಿ ಒಂದಕ್ಕಿಂದ ಹೆಚ್ಚು ಕಿರಿಯರಿದ್ದರೆ  ಅವರ ನಡುವೆ ಎಂದೂ ಬೇಧಭಾವ ಮಾಡಬಾರದು ಅನ್ನೋದು ಅವನ ನೀತಿ. ಚಪ್ಪಲಿ ವ್ಯಾಪಾರ ಮುಗಿಸಿ ಹೊರಬಂದ ಎಳೆಯನ ಮುಖ ಖುಷಿಯಿಂದ ಮೊರದಗಲವಾಗಿತ್ತು. ಮಾತನಾಡಲು ಬಹುಶಃ ಭಾವಪರವಶನಾಗಿದ್ದ ಅವನಲ್ಲಿ ಪದಗಳಿರಲಿಲ್ಲ. ಅದನ್ನರಿತವನಂತೆ ಹೆಗಲ ಮೇಲೆ ಕೈ ಹಾಕಿಕೊಂಡು ಹಾಗೆಯೆ ಮೌನವಾಗಿ ಅವನೊಂದಿಗೆ ಹೆಜ್ಜೆ ಹಾಕಿದ. 


ಅಲ್ಲೆ ಪಕ್ಕದ ಒಂದು ಜ್ಯೂಸು ಸೆಂಟರಲ್ಲಿ ಮಾರುತ್ತಿದ್ದ ಕುಲ್ಫಿಗಳೆರಡನ್ನ ಖರೀದಿಸಿ ತಿನ್ನುತ್ತಾ ಸಾಗಿದವರಿಗೆ ರೈಲ್ವೆ ಸ್ಟೇಷನ್ನಿನ ರಸ್ತೆ ಎದುರಾಯಿತು. ಅವನ ಕಲೋನಿಗೆ ತಿರುಗುವ ರಸ್ತೆಯಲ್ಲಿ ಸುಭಾಶನನ್ನ ಬೀಳ್ಕೊಂಡು ಅವನಿತ್ತಿದ್ದ ಬುತ್ತಿ ಚೀಲವನ್ನ ಹಿಡಿದುಕೊಂಡು ಇವ ತನ್ನ ಕೋಣೆಯ ದಿಕ್ಕಿನತ್ತ ಹೆಜ್ಜೆ ಹಾಕತೊಡಗಿದ. ಕತ್ತಲೆ ಸಾಕಷ್ಟು ಆವರಿಸಿತ್ತು. ಕ್ಯಾಂಟೀನಿನ ನಾಯರನಿಗೆ "ಇನಿಕ್ಯಿ ಞಾನ್ ಇವಿಡೆ ರಾತ್ರಿ ಭಕ್ಷಣಂ ಕಳಿಕ್ಯಾನಿಲ್ಲ ನಾಯರೆˌ ವಿಶಪ್ಪೊನ್ನೂಂ ಇಲ್ಲಿಯಾˌ ವೇರುಂ ಚಾಯ ಮಾತ್ರಂ ಮದಿ ಕೇಟ್ಟೋ" ಅಂದವನುˌ ನಾಯರನ ಸುಟ್ಟರೂ ಬಿಟ್ಟಗಲದ ಚಾಳಿ ನೆನಪಿಸಿಕೊಂಡು "ಮಧುರಂ ಕೊರಚ್ಚಿ ತನ್ನೆˌ ಒರುಪಾಡು ಶರ್ಕರ ಪೋಡಾನ್ ಪಾಡಿಲ್ಲಿಯಾ" ಅನ್ನಲು ಮರೆಯಲಿಲ್ಲ. ನಾಯರ "ಶರಿ ಮಾಶೆ" ಅಂದವನೆ ಚಹಾದೊಂದಿಗೆ "ಕೂಡೆ ಚುಡ ಚುಡ ಪಣಂಪೂರಿಯೊನ್ನು ಕಳ್ಯಿಕಟ್ಟೆ" ಅಂತ ಬಿಸಿ ಬಿಸಿ ಕರಿದ ಬಾಳೆಹಣ್ಣಿನ ಪಣಂಪೂರಿಯೊದನ್ನ ಮುಂದಿರಿಸಿದಾಗ ಸಣ್ಣಗೆ ಆರಂಭವಾದ ಚಳಿಗೆ ಅದನ್ನ ಬೇಡವೆನ್ನಲು ಮನಸಾಗದೆˌ ಒಂದೊಂದೆ ಹಬೆಯಾಡುವ ಅದರ ತುಂಡುಗಳನ್ನ ಬಾಯಿಗೆಸೆದು ಗುಟುಕು ಗುಟುಕಾಗಿ ಚಹಾ ಹೀರ ತೊಡಗಿದ. 


ಸುಭಾಶನ ಕಣ್ಣಲ್ಲಿ ಚಪ್ಪಲಿ ಖರೀದಿಸಿದಾಗ ಇದ್ದ ಖುಷಿಯ ಬೆಳಕು ಮತ್ತೆ ನೆನಪಾಯಿತು. ಇಷ್ಟು ಎಳೆ ಪ್ರಾಯದಲ್ಲಿ ಅನಾಥನಾದ ಅವನ ಬಗ್ಗೆ ಮರುಗುವ ಹೊರತು ಇವನಿಗೆ ಇನ್ನೇನು ತಾನೆ ಮಾಡಲು ಸಾಧ್ಯವಿತ್ತು? ಕ್ಷಣಕಾಲವಾದರೂ ಅವನ ಜೀವನದ ಖುಷಿ ಹೆಚ್ಚಿಸಿದ ಕಾರಣಕ್ಕೊಂದು ಆತ್ಮ ಸಂತೃಪ್ತ ಭಾವ ಇವನೊಳಗರಳಿತ್ತು. ಚಹಾ ಮುಗಿಸಿ ಚಪ್ಪಲಿ ಹಾಗೂ ಬುತ್ತಿ ಚೀಲ ಹೊತ್ತು ಮಹಡಿ ಹತ್ತಿದ. ತಡವಾಗಿ ಮಧ್ಯಾಹ್ನದ ಊಟ ಮಾಡಿದ್ದಕ್ಕೋ ಇಲ್ಲಾ ಮಸಾಲೆದೋಸೆಯ ಪ್ರಭಾವವೋ ಒಟ್ಟಿನಲ್ಲಿ ಹೊಟ್ಟೆ ಬಹುತೇಕ ತುಂಬಿಹೋಗಿತ್ತು. 


ಗೀಜ಼ರ್ನಿಂದ ಹೊರ ಹರಿದ ಹದ ಬಿಸಿ ನೀರಲ್ಲಿ ಮಿಂದು ಬೆವರು ಮುಕ್ತನಾದವನಿಗೆ ಪಂಡಿತ ಶಿವಕುಮಾರ ಶರ್ಮರ ಸಂತೂರ್ ನಾದದ ಸರಣಿ ಕೈಫೋನಿನಲ್ಲಿ ಹಾಕಿಕೊಂಡು ಚೂರು ಬೆನ್ನುನೋವು ಕಳೆಯಲು ಹಾಸಿಗೆಯ ಮೇಲೆ ಹಾಗೆಯೆ ಅರೆಬತ್ತಲೆ ಅಂಗಾತ ಮಲಗಿದ್ದಷ್ಟೆ ಗೊತ್ತು. ಮರಳಿ. ಎಚ್ಚರವಾದಾಗ ಗಡಿಯಾರ ನಡುರಾತ್ರಿಯ ಹನ್ನೆರಡುವರೆ ತೋರಿಸುತ್ತಿತ್ತು!


*****

ಸಂತೂರು ನಾದ ಮುಗಿದು ಅದೆಷ್ಟೋ ಹೊತ್ತಾಗಿತ್ತು. ವಿವಿಧ ಭಾರತಿಯತ್ತ ಕೈಫೋನಿನ ರೇಡಿಯೋ ತಿರುಗಿಸಿ ಜಿಡ್ಡುಗಟ್ಟಿದ್ದ ಮುಖ ತೊಳೆಯಲು ಎದ್ದ. ಆ ನಿಶ್ಯಬ್ಧ ರಾತ್ರಿಯಲ್ಲೂ ರೇಡಿಯೋದಲ್ಲಿ ಪ್ರಸಾರವಾಗುವ ಹಳೆಯ ಭಾವಪೂರ್ಣ ಗೀತೆಗಳಿಗೆ ಅದರದ್ದೆ ಆದ ಒಂದು ಚುಂಬಕ ಶಕ್ತಿ ಇದೆ. ಅದಕ್ಕವ ಮರುಳಾಗಿದ್ದಾನೆ.

( ಇನ್ನೂ ಇದೆ.)



https://youtu.be/xUNPGuiILXM

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೬.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೬.👊


ಹಾಗಂತ ಹುಟ್ಟುವ ಎಲ್ಲಾ ನಾಯರ್ ಮಕ್ಕಳಿಗೆ ಇದೇನು ಕಡ್ಡಾಯ ಕಟ್ಟಳೆಯೇನಲ್ಲ. ಹಾಗೊಮ್ಮೆ ಸಾಮಾಜಿಕ ಮಾನ್ಯತೆ ದೊರತ ಮೇಲೂ ಸಹ ಸ್ವತಃ ಮಗನಿಗೇನೆ ತನ್ನ ಜೈವಿಕ ತಂದೆಯ ಬಗ್ಗೆ ಗೊಂದಲವಿದ್ದರೆ ಇದ್ಯಾವದನ್ನೂ ಉಪನಾಮವಾಗಿ ಆಯ್ದುಕೊಳ್ಳದೆ ಕೇವಲ ನಾಯರನಾಗೆ ಉಳಿಯುವ ಆಯ್ಕೆಯೂ ಅವನಿಗಿತ್ತು. ಒಂದೊಮ್ಮೆ ವಿಲೋಮ ಸಂಬಂಧದಿಂದ ಹುಟ್ಟಿ ಸಾಮಾಜಿಕ ಬಹಿಷ್ಕಾರ ಎದುರಿಸುತ್ತಿರುವ ಮಕ್ಕಳಾಗಿದ್ದರೆ ಅವರ ಮೂಲ ತರವಾಡಿನ ಗ್ರಾಮದ ಹೆಸರನ್ನೆ ಉಪನಾಮವಾಗಿ ಇಟ್ಟುಕೊಂಡು ಸಾಮಾಜಿಕ ಗೊಂದಲಗಳಿಗೆ ಇತಿಶ್ರಿ ಹಾಡುತ್ತಾರೆ.


ಕೇರಳದ ಹೊರಗಿನವರಿಗೆ ಈ ಪದ್ಧತಿ ಹಾದರದ ಪರಾಕೇಷ್ಟೆಯಂತೆ ಗೋಚರಿಸಿದರೆ ಆಶ್ಚರ್ಯವೇನಿಲ್ಲ. ಅಂದಹಾಗೆ ಇತ್ತೀಚಿನ ಬದಲಾವಣೆಯ ಗಾಳಿ ಬೀಸಿರುವ ಸಮಾಜದಲ್ಲಿ ಈ ಹಳೆಯ ಪದ್ಧತಿಯನ್ನ ಬಹುತೇಕ  ಕೈಬಿಡಲಾಗಿದೆಯಾದರೂˌ ಕೇವಲ ಒಂದೆರಡು ತಲೆಮಾರುಗಳ ಹಿಂದೆ ಇದೆ ಸಾರ್ವತ್ರಿಕವಾಗಿತ್ತು ಅನ್ನುವ ಸತ್ಯವನ್ನ ಮರೆಯಲಾಗದು. ಇಂದಿನ ಕೇರಳಕ್ಕೂ ಸಹ ಈ ಬಗ್ಗೆ ಮಡಿವಂತಕೆಯೇನಿಲ್ಲ ಅಂತ ಇಟ್ಕೊಳ್ಳಿ.

*****

ಒಂದೊಮ್ಮೆ ತಕಳಿ ಶಿವಶಂಕರ ಪಿಳ್ಳೆಯವರದ್ದೋˌ ಇಲ್ಲಾ ಎಂ ಟಿ ವಾಸುದೇವನ್ ನಾಯರರದ್ದೋ ಇಲ್ಲವೆ ಮಾಧವಿ ಕುಟ್ಟಿಯದ್ದೋ ಕಾದಂಬರಿಗಳ ವಿವರಣೆಗಳಲ್ಲಿ ಸಹಜವೆಂಬಂತೆ ವರ್ಣಿಸಲಾಗುವ ಈ ವೈವಾಹಿಕ ಸಂಬಂಧಗಳನ್ನ ಓದಿ ಗೊಂದಲಕ್ಕೀಡಾಗುವ ಮಲಯಾಳಿಯೇತರ ಓದುಗರು ಪಾತ್ರಗಳ ನಡುವಿನ ಸಂಬಂಧಗಳ ಗೊಂದಲದಿಂದ ಕಂಗಾಲಾಗುವುದೂ ಇದೆ. ಆದರೆ ಕರ್ನಾಟಕ ಅಥವಾ ತಮಿಳುನಾಡಿನ ಸಾಮಾಜಿಕ ಪದ್ಧತಿಯ ಪರಿಭಾಷೆಯಲ್ಲಿ ಇದನ್ನ ಅಕ್ರಮ ಸಂಬಂಧವೆಂದು ಪರಿಗಣಿಸುವಂತೆಯೆ ಇಲ್ಲ. ಅಲ್ಲಿನವರ ಪಾಲಿಗದು ಪರಂಪರಾಗತ ವ್ಯವಹಾರ. 

ಕರುನಾಡಿಗೆ ಸೀಮಿತಗೊಳಿಸಿ ಹೇಳುವುದಾದರೆ ನಾಯರುಗಳ ಕುಲವನ್ನ ನಮ್ಮ ಒಕ್ಕಲಿಗ ಗೌಡರಿಗೋ ಇಲ್ಲಾ ತುಳುನಾಡಿನ ಒಕ್ಕಲಿಗ ಬಂಟರಿಗೋ ಹೋಲಿಸಬಹುದು ಅಷ್ಟೆ. ಹಾಗೆ ನೋಡಿದರೆˌ ಪಿತೃಮೂಲದ ಪದ್ಧತಿಯ ದಾಸರಾದ ಗೌಡರಿಗಿಂತ ಮಾತೃಮೂಲದ ಕೌಟುಂಬಿಕ ಬಂಟರು ಈ ವಿಷಯದಲ್ಲಿ ನಾಯರರ ಹತ್ತಿರದ ಸಂಬಂಧಿಗಳು. ಆದರೆ ಬಂಟರ ಹಾಗೂ ನಾಯರುಗಳ ವೈವಾಹಿಕ ಪದ್ಧತಿಯಲ್ಲಿ ಮುಖ್ಯ ವ್ಯತ್ಯಾಸಗಳಿವೆ. ಬಂಟರಲ್ಲಿ ಹೆಣ್ಣಿಗೆ ಗಂಡಸಿಗಿಂತ ಹೆಚ್ಚು ಲೈಂಗಿಕ ಸ್ವಾತಂತ್ರ್ಯವಿದ್ದರೂ ಸಹ "ಸಂಬಂಧಂ" ಪದ್ಧತಿ ತುಳನಾಡಿನಲ್ಲೆ ಯಾವತ್ತೂ ಚಾಲ್ತಿಯಲ್ಲಿರಲಿಲ್ಲ. 


ಸಮಾಜದ ಕಟ್ಟಳೆಗಳನ್ನ ಮೀರಿ ಬೆಳೆವ "ಪ್ರೇಮ ವಿವಾಹದ ಸಂಬಂಧ"ದ ಹೊರತು ಯಾವುದೆ ಬಂಟ ಮಹಿಳೆ ಬ್ರಾಹ್ಮಣ ಪತಿಯನ್ನ ಹೊಂದುವುದಿಲ್ಲ. ಒಂದೊಮ್ಮೆ ಮದುವೆಯಾದ ಗಂಡ ಲೈಂಗಿಕ ಅಸಮರ್ಥನಾಗಿದ್ದರೆ - ಅವರಿಗೆ ಬಹುಕಾಲ ಸಂತಾನವಾಗದಿದ್ದರೆ - ಸತ್ತರೆ ಅಥವಾ ಕಾಣೆಯಾದರೆ ಮಾತ್ರ ಆ ಮಹಿಳೆ ಮರು ಕೂಡಿಕೆ ಮಾಡಿಕೊಳ್ಳಲು ಮುಕ್ತ ಅವಕಾಶವಿದೆ. ಆದರೆ ನಾಯರುಗಳಂತೆ ಒಂದೆ ಸಮಯದಲ್ಲಿ ನಾಲ್ಕಾರು ಗಂಡಂದಿರನ್ನೋ ಅಥವಾ ಹೆಂಡತಿಯರನ್ನೋ ಹೊಂದುವಂತಿಲ್ಲ. ಇರುವವರೆಗೆ ಹೆಣ್ಣಾಗಲಿ ಗಂಡಾಗಲಿ ಏಕವ್ಯಕ್ತಿಯ ಜೊತೆಗಿನ ಲೈಂಗಿಕ ನಿಷ್ಠೆ ತುಳನಾಡಿನ "ಅಳಿಯ ಕಟ್ಟು" ಪದ್ಧತಿಯ ಕಟ್ಟಳೆ. ಇದನ್ನ ಮೀರಿದರೆ ಅದು ಅಕ್ರಮ ಸಂಬಂಧದ ಪರಿಧಿಯಲ್ಲಿ ಬಂದು ಕುಲದಿಂದ ಬಹಿಷ್ಕಾರ ಹಾಕಿಸಿಕೊಳ್ಳುವ ದುರ್ಗತಿ ಎದುರಿಸಲು ಸಿದ್ಧರಾಗಬೇಕು ಅಷ್ಟೆ.

*****

ಬಹುಶಃ ಇದೆಲ್ಲ ಪರಂಪರಾಗತವಾಗಿ ಕೈರಳಿ ಸಮಾಜದಲ್ಲಿ ಅಡಕವಾಗಿದ್ದ ಕಾರಣಕ್ಕೇನೆ ವಯಸ್ಕ ಹಾಗೂ ಲೈಂಗಿಕ ವಿಚಾರಗಳಲ್ಲಿ ಇಲ್ಲಿ ಹೆಚ್ಚಿನ ಮಡಿವಂತಿಕೆ ಇಲ್ಲ. ಲೈಂಗಿಕ ಸಂಬಂಧಿ ವಿಷಯಗಳನ್ನ ಬಾಕಿ ಇನ್ನುಳಿದ ಎಲ್ಲಾ ರಾಜ್ಯಗಳಿಗಿಂತಲೂ ಸುಲಭವಾಗಿ ಮಲಯಾಳಿಗಳು ಮನ್ನಣೆಯಿತ್ತು ಯಾವುದೆ ಮುಜುಗರವಿಲ್ಲದೆ ಮುಖ್ಯಧಾರೆಯಲ್ಲಿ ಒಳಗೊಳ್ಳುವಂತೆ ಮಾಡುತ್ತಾರೆ. ಹೀಗಾಗಿಯೆˌ ಹೆಣ್ಣು ಗಂಡು ಎರಡೂ ಅಲ್ಲದ ಮೂರನೆ ಲಿಂಗದವರನ್ನ ಕೇರಳ ಇನ್ನಿತರ ರಾಜ್ಯಗಳಿಗಿಂತ ಸುಲಭವಾಗಿ ಒಪ್ಪಿಕೊಂಡಿದೆ. ಇಲ್ಲಿ ಪುರುಷರೊಂದಿಗೆ ತೃತಿಯಲಿಂಗಿ ಮಹಿಳೆಯರು ಮದುವೆ ಸಹ ಆಗಿದ್ದಾರೆ ಅದೂ ಯಾವುದೆ ತಂಟೆ ತಕರಾರಿಲ್ಲದೆ. ಲಿಂಗ ಪರಿವರ್ತಿತರು ಪರಸ್ಪರ ಮದುವೆಯಾದದ್ದು ದೇಶದಲ್ಲೆ ಕೇರಳದಲ್ಲೆ ಮೊದಲು. ಇಂದು ಕನಿಷ್ಠ ಅಂತಹ ನೂರು ಜೋಡಿಗಳು ಮುಖ್ಯಧಾರೆಯಲ್ಲಿ ಬೆರತುಕೊಂಡೆ ಆ ತರದ ವೈವಾಹಿಕ ಬಂಧನದಲ್ಲಿ ಬದುಕು ಸವೆಸುತ್ತಿವೆ ಅನ್ನೋದು ಅವನಿಗೆ ಗೊತ್ತು. 


ಇನ್ನು ಸಭ್ಯ ಭಾಷೆಯಲ್ಲಿ ಹೇಳುವುದಾದರೆ ದೇಹದ ವ್ಯಾಪಾರ. ಅದನ್ನೆ ಒರಟಾಗಿ ಹೇಳುವುದಾದರೆ ಸೂಳೆಗಾರಿಕೆ ಮಾಡಿ ಬದುಕುತಿದ್ದ ಹೆಣ್ಣೊಂದು ಮಲಯಾಳಂನ ಅತಿ ಹೆಚ್ಚು ಪ್ರಸಾರ ಕಾಣುತ್ತಿದ್ದ ಪತ್ರಿಕೆಯೊಂದರಲ್ಲಿ ಅಂಕಣಕಾರ್ತಿಯಾಗಿ ತನ್ನ ಜೀವನನುಭವವನ್ನ ಹಂಚಿಕೊಳ್ಳಲು ಇದು ಕೇರಳವಾಗಿದ್ದರಿಂದ ಮಾತ್ರ ಸಾಧ್ಯವಾಗಿತ್ತು. ಲೈಂಗಿಕ ಕಾರ್ಯಕರ್ತೆಗೂ ಒಂದು ಕರಾಳ ನೆನ್ನೆಯಿದೆ. ಅದು ಅವಳ ಆಯ್ಕೆಯ ಬದುಕಾಗಿರಲಿಲ್ಲ ಅನ್ನುವ ಪರಿಪಕ್ವತೆ ಮಲಯಾಳಿಗಳಿಗೆ ಇದ್ದುದರಿಂದಲೆ ಅದು ಸಾಧ್ಯವಾಯ್ತು. 

ಒಟ್ಟಿನಲ್ಲಿ ಕೇರಳದ ಈ ಮುಕ್ತತೆ. ವಿಚಾರ ವಿನಿಮಯಕ್ಕಿರುವ ಸಾರ್ವತ್ರಿಕತೆ. ಹುಸಿ ಸೋಗಿನ ಮಡಿವಂತಿಕೆಯ ಸೋಂಕಿಲ್ಲದ ಅಲ್ಲಿನ ಸಾಮಾಜಿಕತೆ ಅಲ್ಲಿನ ಜನರ ಬದುಕಿನಲ್ಲಿ ಅನಗತ್ಯ ಗೊಂದಲಗಳಲ್ಲಿ ಬಹಳಷ್ಟನ್ನ ಇಲ್ಲವಾಗಿಸಿದೆ ಅನ್ನಲಡ್ಡಿಯಿಲ್ಲ. ಇವರು ಎಷ್ಟು ಧಾರ್ಮಿಕರೋ ಅಷ್ಟೆ ನಿರೀಶ್ವರವಾದಿಗಳು. ಎಷ್ಟು ಕರ್ಮಠರೋ ಅಷ್ಟೆ ಮುಕ್ತ ಸಾಮಾಜಿಕರು. ಹೀಗಾಗಿಯೆ ಕೇರಳ ಹೋಲಿಕೆಯಲ್ಲಿ ಇನ್ನುಳಿದ ಭಾರತೀಯ ರಾಜ್ಯಗಳಿಗಿಂತ ಸಂಪೂರ್ಣ ಭಿನ್ನ.


*****


ಅಂಜಂಜುತ್ತಲೆ ಬಂದ ಸುಭಾಶ ಅವನೊಂದಿಗೆ ಹೊಟೆಲಿನ ಟೇಬಲ್ಲೊಂದರಲ್ಲಿ ಎದುರು ಬದುರಾಗಿ ಕೂತ. ಹೆದರಿದವನಂತೆ ಮುದುಡಿ ಕೂತಿದ್ದವನ್ನ "ಹೆದರಬೇಡನ ಸರಿಯಾಗಿ ಕೂತ್ಕ" ಅಂದ ಇವ. "ಹೆಹೆಹೆ ಹಂಗೇನೂ ಇಲ್ಲಪ್ಪ" ಅಂತ ಸಹಜತೆ ನಟಿಸಿದವ ಇನ್ನಷ್ಟು ಆತ್ಮವಿಶ್ವಾಸದಿಂದ ಕೂರಲು ಯತ್ನಿಸಿದ. ಎರಡು ಮಸಾಲೆದೋಸೆ ಮತ್ತು ಎರಡು ಜಾಮೂನು ಆರ್ಡರ್ ಸರ್ವರಿಗಿತ್ತು ಇವ ಏನೋ ಹೇಳಲು ಅನುವಾಗುತ್ತಿದ್ದ ಎಳೆಯನತ್ತ ದಿಟ್ಟಿಸಿದ. ಅದು ಆ  ಬಟ್ಟೆಯ ಚೀಲದಲ್ಲಿದ್ದ ಮೂರು ಅರೆಗಳ ಬುತ್ತಿಯನ್ನ ಇವನ ಮುಂದು ಮಾಡಿ "ನಿಮಗಂತ ತಂದದ್ದು! ಅಮ್ಮ ಕೊಟ್ರು" ಅಂತ ನಾಚುತ್ತಲೆ ಚೀಲ ಮುಂದೆ ಸರಿಸಿದ. ಅದರಲ್ಲೇನಿರಬಹುದು ಅನ್ನುವ ಕಲ್ಪನೆ ಮನಸಿಗೆ ಬಂದರೂ "ಅದೆಂತದನ?" ಅಂದ. "ನೀವು ಕೋಣೆಗೆ ಹೋದ ನಂತ್ರ ತೆಗ್ದು ನೋಡಿ ಆಯ್ತ? ಈಗ ತೆಗಿಬೇಡಿನಿ" ಅಂತ ಬೇಡಿದ. "ಆಯ್ತು ಮಾರೆಯಾ" ಅಂತ ಇವ ಆ ಚೀಲ ಪಡೆದು ಪಕ್ಕಕ್ಕಿಟ್ಟುಕೊಂಡ.

ದೋಸೆ ಬಂತು. ಸುಭಾಶ ಬಹಳ ಇಷ್ಟ ಪಟ್ಟು ಅವನ ಪಾಲಿಗೆ ಅಮೂಲ್ಯವಾಗಿದ್ದ ಅದನ್ನ ಆಸ್ವಾದಿಸುತ್ತಾ ತಿನ್ನುತ್ತಿರೋದನ್ನ ನೋಡಿ ಅವನಿಗೆ ಅವನದ್ದೆ ಬಾಲ್ಯ ನೆನಪಾಯಿತು. ಆಗವನಿಗೆ ಬಸ್ಟ್ಯಾಂಡಿನ ಕಾರಂತರ ನವಿಲು ಹೊಟೆಲಿನಲ್ಲಿ ಮಸಾಲೆ ದೋಸೆ ಕೊಡಿಸಲು ಡ್ರೈವರ್ ಆಗಿದ್ದ ಅಜ್ಜ ಇದ್ದರು. ಪಾಪ ಇವನಿಗೆ ಯಾರೂ ಇಲ್ಲವಲ್ಲ ಅನಿಸಿ ತನಗೆ ಮಾತ್ರ ಕೇಳುವಂತೆ ಲೊಚಗುಟ್ಟಿದ. ದೋಸೆ ಜಾಮೂನಿನ ನಂತರ ಬಂದ ನೊರೆ ನೊರೆ ಬೈಟೂ ಕಾಫಿ ಸುಭಾಶನಿಗೆ ಬಹಳ ಇಷ್ಟವಾಯ್ತು ಅಂತ ಕಾಣ್ತದೆ. ಅದನ್ನ ನೋಡ್ತ ಜಗತ್ತಿನ ಮಕ್ಕಳೆಲ್ಲರ ಮನಸ್ಥಿತಿ ಈ ಪ್ರಾಯದಲ್ಲಿ ಬಹುತೇಕ ಒಂದೆ ಅನಿಸಿತು ಅವನಿಗೆ. "ಬೇರೆ ಇನ್ನೆಂತಾದ್ರೂ ಬೇಕನ?" ಅಂದರೆ ಆಗಲೆ ಮುಜುಗರದಿಂದ ಮುದ್ದೆಯಾಗಿದ್ದ ಆ ಎಳೆಯ ನಾಚುತ್ತಲೆ "ಬೇಡಯ" ಅಂದ. ಇನ್ನೂ ಮೂರು ಮಸಾಲೆದೋಸೆ ಹಾಗೂ ಮತ್ತೆ ಬಿಸಿ ಬಿಸಿ ಏನಿದೆ? ಬನ್ಸ್.  ಮೂರು ಬನ್ಸ್ ಪಾರ್ಸಲ್ ಮಾಡಲು ಹೇಳಿ ಸರ್ವರಿಗೆ ಟಿಪ್ಸಿಟ್ಟು ಬಿಲ್ ಪಾವತಿಸಿದ.

"ಇದನ್ನ ಮನೆಗೆ ಕೊಂಡು ಹೋಗಿ ಅಮ್ಮನಿಗೆ ಕೊಡು" ಅಂತ ಆ ಕಟ್ಟಿಕೊಟ್ಟ ತಿಂಡಿಯ ಪೊಟ್ಟಣಗಳಿದ್ದ ತೊಟ್ಟೆಯನ್ನ ಅವನಿಗೆ ಕೊಡಹೋದರೆˌ "ಅಯ್ಯಯ್ಯ ಬೇಡನಿಯ! ಅಮ್ಮ ಬೈತಾರೆ" ಅಂದ. "ಎಂತಸ ಆಗಲ್ಲ ತೆಗೊಳ್ಳ" ಅಂತ ಇವ ಒತ್ತಾಯಿಸಿ ಕೊಟ್ಟ.

( ಇನ್ನೂ ಇದೆ.)



https://youtu.be/5GLskRON4gU

25 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೫.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೫.👊

ಇನ್ನೂ ಸ್ಪಷ್ಟವಾಗಿ ಇದನ್ನ ಅರ್ಥ ಮಾಡಿಸಲು ಕೇರಳದ ಮೇಲ್ವರ್ಗದಲ್ಲಾಗುವ ವೈವಾಹಿಕ ಸಂಬಂಧಗಳ ಮೂಲಕ ಇದನ್ನ ಹೆಚ್ಚು ಸುಲಭವಾಗಿ ವಿವರಿಸಲು ಸಾಧ್ಯವಿದೆ. ಕೇರಳದ ಸ್ಥಳಿಯ ಬ್ರಾಹ್ಮಣರನ್ನ ನಂಬೂದರಿಗಳು ಅನ್ನಲಾಗುತ್ತದೆ. ಅವರಿಗೆ ಮಡಿ ಮೈಲಿಗೆ ಶುದ್ಧತೆಯಿದೆಯಾದರೂ ಪುರೋಹಿತಿಕೆಯ ಅಧಿಕಾರವಿಲ್ಲ. ಹೀಗಾಗಿ ದೇಗುಲಗಳಲ್ಲಿ ಕೇವಲ ಮೇಲುಸ್ತುವರಿ ವಹಿಸುವ ಅವರು ಕೇರಳದ ದೇವಸ್ಥಾನಗಳ ಅರ್ಚನೆಗೆ ತುಳುನಾಡಿನ ಶಿವಳ್ಳಿ ಬ್ರಾಹ್ಮಣರನ್ನ ಕರೆಸುತ್ತಾರೆ. ಅವರನ್ನ "ಪೊಟ್ಟಿ" ಎಂದು ಕರೆಯಲಾಗುತ್ತದೆ. ಈ ನಂಬೂದರಿಗಳ ವಿವಾಹ ಸಂಬಂಧವೆ ಒಂದು ಗೊಂದಲದ ಗೂಡು. 

ಸಾಮಾನ್ಯವಾಗಿ ಬ್ರಾಹ್ಮಣ ನಂಬೂದರಿಗಳು ಹಾಗೂ ಕ್ಷತ್ರಿಯ ನಾಯರುಗಳೆ ಇಲ್ಲಿನ ಜಮೀನ್ದಾರರು. ಕಾಲಾಂತರದಲ್ಲಿ ಕಾರಣಾಂತರಗಳಿಂದ ಇವರಲ್ಲಿ ಕೆಲವರು ಇಸ್ಲಾಂ ಹಾಗೂ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರೂ ಸಹ ತಮ್ಮ ಹಳೆಯ ಹಿಂದೂ ಜಾತಿ ಸೂಚಕ ಮನೆತನಗಳ ಹೆಸರನ್ನ ಬಿಟ್ಚಿಲ್ಲ. ಅಷ್ಟೆ ಅಲ್ಲˌ ತಮ್ಮ ಹಿಂದೂ ಮಾತೃಮೂಲದ "ಮರಿಮಕ್ಕತ್ತಾಯ" ಕೌಟುಂಬಿಕ ಪದ್ಧತಿಗೇನೆ ಅಂಟಿಕೊಂಡಿದ್ದಾರೆ. ಮತಾಂತರದಿಂದ ಬದಲಾಗಿರೋದು ಅವರ ಧಾರ್ಮಿಕ ಶ್ರದ್ಧೆ ಮಾತ್ರ. ಆದರೆ ಸಂಸ್ಕಾರ ಮಾತ್ರ ಅದೆ ಹಳೆಯದೆ. ಇದು ಕೇರಳದಿಂದ ಹೊರಗಿನವರಿಗೆ ವಿಚಿತ್ರ ಅನಿಸೀತು. ಆದರೆ ಮಲಯಾಳಿಗಳಿಗಲ್ಲ.


ಇನ್ನು ಪಿತೃಮೂಲದ ಕೌಟುಂಬಿಕ ಪದ್ಧತಿಯನ್ನ ಅನುಸರಿಸುವ ನಂಬೂದರಿಗಳಲ್ಲಿ ಮನೆಯ ಪಿತ್ರಾರ್ಜಿತ ಸೊತ್ತುಗಳ ಮೇಲೆ ಅಧಿಕಾರ ಕೇವಲ ಮನೆಯ ಮುಂದಿನ ತಲೆಮಾರಿನಲ್ಲಿ ಹುಟ್ಟುವ ಮೊದಲ ಗಂಡು ಮಗುವಿಗಿದ್ದುˌ ಅವನ ನಂತರ ಅವನ ಮೊದಲ ಮಗನಿಗೆ ದಾಟುತ್ತದೆ. ಅಂದರೆ ನಂಬೂದರಿಗಳಲ್ಲಿ ಆಸ್ತಿ ವಿಭಜಿಸುವ ಪದ್ಧತಿ ಇಲ್ಲ. ಹೀಗಾಗಿ ಮನೆಯಲ್ಲಿ ಮದುವೆಯಾಗುವ ಅಧಿಕಾರ ಮನೆಯ ಹಿರಿಯ ಮಗನಿಗೆ ಮಾತ್ರ! ಉಳಿದವರಿಗೆ ಮದುವೆಯ ಭಾಗ್ಯವಿಲ್ಲ?!

ಒಂದೊಮ್ಮೆ ನಂಬೂದರಿಯೊಬ್ಬನಿಗೆ ಆರೆಂಟು ಗಂಡು ಮಕ್ಕಳಿದ್ದರೆ? ಅದಕ್ಕೂ ಪರಿಹಾರ ಈ ಕೌಟುಂಬಿಕ ವ್ಯವಸ್ಥೆಯಲ್ಲಿದೆˌ ಅದನ್ನೆ ಮಲಯಾಳಿಗಳು "ಸಂಬಂಧಂ" ಅನ್ನುತ್ತಾರೆ. ಅದರ ಪ್ರಕಾರ ನಂಬೂದರಿಯ ಮೊದಲ ಮಗ ಕೇವಲ ನಂಬೂದರಿ ಮಹಿಳೆಯನ್ನೆ ಮದುವೆಯಾಗುವ ಮೂಲಕ ಕುಲದ "ರಕ್ತ ಶುದ್ಧತೆ"ಯನ್ನ ಕಾಪಾಡಿಕೊಳ್ಳುತ್ತಾನೆ. ಉಳಿದ ಗಂಡು ಮಕ್ಕಳು ಪ್ರಾಪ್ತ ವಯಸ್ಕರಾದ ನಂತರ ತಮ್ಮಿಂದ ಜಾತಿ ವ್ಯವಸ್ಥೆಯಲ್ಲಿ ಒಂದು ಮೆಟ್ಟಿಲು ಕೆಳಗಿರುವ ಶೂದ್ರ ಕ್ಷತ್ರಿಯ ನಾಯರ್ ಕನ್ಯೆಯ ಜೊತೆಗೆ ಒಂದು ಅನುಕೂಲ ಸಿಂಧು ಸಂಬಂಧ ಇಟ್ಟುಕೊಳ್ಳುತ್ತಾನೆ. ಅದರಲ್ಲೂ ಆ ಮನೆಯ ಯಜಮಾನತಿಯಾಗಿರುವ ಹಿರಿಯ ನಾಯರ್ ಕನ್ಯೆಯ ಜೊತೆ ಅವನ ಕೂಡಿಕೆಗೆ ಆದ್ಯತೆ ಕೊಡಲಾಗುತ್ತದೆ. ಹಾಗಂತ ಅದು ತತ್ಕಾಲಿಕ ಸಂಬಂಧವೇನಲ್ಲ. ಆ ದಾಂಪತ್ಯ ಅವರಲ್ಲಿ ಒಬ್ಬರು ಸಾಯುವತನಕವೂ ಸ್ಥಿರವಾಗಿರೋದೂ ಸಹ ಇದೆ. 


ಆದರೆˌ ಕಾರಣಾಂತರದಿಂದ ಆ ಸಂಬಂಧ ಮುರಿದುಬಿದ್ದರೆ ನಾಯರ್ ಮಹಿಳೆ ಮತ್ತೊಂದು ಸಂಬಂಧವನ್ನ ಕೂಡಿಕೊಳ್ಳಲು ಸ್ವತಂತ್ರ್ಯಳು ಹಾಗೂ ಆ ಸಂಬಂಧ ಮತ್ತೆ ನಂಬೂದರಿಯೊಡನೆಯೆ ಆಗಬೇಕು ಅಂತೇನಿಲ್ಲ. ನಾಯರ ಪುರುಷರನ್ನೂ ಆಕೆ ಇಷ್ಟ ಪಡಬಹುದು. ಅವಳು ಮಾತೃಮೂಲ ಪದ್ಧತಿ ಅನುಸರಿಸುವ ಮನೆಯ ಯಜಮಾನತಿಯಾಗಿರೋದರಿಂದ ಹುಟ್ಟುವ ಮಕ್ಕಳಿಗೆ ತಾಯಿ ಮನೆಯೆ ಸ್ಥಿರ - ಸಹೋದರ ಮಾವನೆ ದಿಕ್ಕು. ಹೀಗಾಗಿ ಹುಟ್ಟಿಸುವ ನಾಯರ್ ತಂದೆಯಂದರಿಗೆ ಅವರನ್ನ ಸಾಕಿ ಬೆಳೆಸುವ ಸಾಮಾಜಿಕ ಹೊಣೆ ಇರುವುದಿಲ್ಲ. ತಂದೆಯ ಕುಲಾಚಾರಗಳನ್ನ ಅವರು ಅನುಸರಿಸುವುದೂ ಇಲ್ಲ. ನಂಬೂದರಿಗಳ ಹಿರಿಮಗನೂ ಸಹ ಒಂದು "ಅಧಿಕೃತ" ಜಾತಿಯೊಳಗಿನ ಮದುವೆಯಾಗಿದ್ದರೂ ಸಹ ನಾಯರ್ ಕನ್ಯೆಯರ ಜೊತೆ ಸಂಬಂಧಂ ಪತಿಯಾಗಬಾರದು ಅಂತೇನಿಲ್ಲ. ಆದರೆ ಅಂತಹ ಸಂಬಂಧಗಳಿಗೆ ಸಮಾಜ ತಿರಸ್ಕಾರ ತೋರುತ್ತದಷ್ಟೆ ಅಲ್ಲ ಅದರಿಂದಾಗುವ ಸಂತಾನಗಳು ಆ ಸಾಮಾಜಿಕ ಹೇವರಿಕೆಯ ಹೊರೆಯನ್ನ ಕೊನೆಯತನಕ ಹೊತ್ತೆ ಬಾಳಬೇಕಾಗುವುದೂ ಇದೆ. ಒಂಥರಾ ಸಾಮಾಜಿಕ ಅಮಾನ್ಯತೆ ಅಂತಹ ವಿಲೋಮ ವಿವಾಹಗಳಿಗಿದೆ. 


ಹೀಗೆ ನಾಯರ್ ಹೆಣ್ಣುಗಳು ನಂಬೂದರಿ ಗಂಡುಗಳೊಂದಿಗೆ ಮಾತ್ರ ಸಂಬಂಧ ಇಟ್ಟುಕೊಳ್ಳುತ್ತಾರೆ ಅಂತೇನಿಲ್ಲ. ನಾಯರ್ ಮಹಿಳೆಯರು ಅವರ  ಊರಿನ ಮೇಲೆ ಸಾಗುವ ನಾಯರ್ ಯೋಧರಿಗೂ ಸಹ ತತ್ಕಾಲಿಕ ಸಂಬಂಧಂ ಉಪಪತ್ನಿಯರಾಗಿರೋದೂ ಇತ್ತು. ಈ ವಿಷಯದಲ್ಲಿ ಉದಾರವಾಗಿರುವ ನಾಯರ್ ಸಮಾಜ ಒಬ್ಬ ಮಹಿಳೆ ಹಾಗೂ ಪುರುಷರು ಬಯಸಿದರೆ ಏಕಕಾಲಕ್ಕೆ ಒಂದೆ ಊರಿನಲ್ಲಿ ನಾಲ್ಕಾರು ಸಂಬಂಧಂ ಮದುವೆ ಮಾಡಿ ಲೈಂಗಿಕ ಸಂಬಂಧ ಹೊಂದಲು ಅಡ್ಡಿ ಮಾಡುವುದಿಲ್ಲ. ಒಂದುವೇಳೆ ಆ ಮಹಿಳೆಯ ಒಬ್ಬ ಯೋಧ ಗಂಡ ಅವತ್ತು ಆ ಊರನ್ನ ದಾಟಲಿದ್ದಾನೆ ಅಂದುಕೊಳ್ಳಿˌ ರಾತ್ರಿ ಮಲಗುವ ಕೋಣೆಯನ್ನ ಹೊಕ್ಕುವ ಮೊದಲು ತನ್ನ ಶಸ್ತ್ರವನ್ನ ಬಾಗಿಲಿಗೆ ಒರಗಿಸಿಟ್ಟು ಬಾಗಿಲು ಹಾಕಿಕೊಳ್ಳುತ್ತಾನೆ. ಒಂದೊಮ್ಮೆ ಆ ನಾಯರ್ ಮಹಿಳೆಯ ಮತ್ತೊಬ್ಬ ಯೋಧ ಪತಿಯೂ ಅದೆ ಸಮಯ ಅಲ್ಲಿಗೆ ಬಂದರೆ ಆ ಗುರುತನ್ನ ನೋಡಿ ಅರ್ಥ ಮಾಡಿಕೊಂಡು ಒಂದಾ ಹೊರಗಿನ ಹಜಾರದಲ್ಲಿ ಮಲಗಿ ರಾತ್ರಿ ಕಳೆಯುತ್ತಾನೆ ಅಥವಾ ಅದೆ ಊರಿನಲ್ಲಿರುವ ತನ್ನ ಇನ್ನೊಂದು ಸಂಬಂಧಂ ಹೆಂಡತಿಯ ಮನೆಗೆ ನುಗ್ಗಿ ತನ್ನ ಶಸ್ತ್ರವನ್ನ ಶಯನಗೃಹದ ಹೊರಗಿಟ್ಟು ಒಳಗೆ ಅವಳೊಂದಿಗೆ ಮಲಗುತ್ತಾನೆ. 


ಹೀಗಾಗಿ ಒಟ್ಟೊಟ್ಟಿಗೆ ಒಬ್ಬರಿಗೆ ನಾಲ್ಕರಿಂದ ಆರು "ಸಂಬಂಧಂ ಭರ್ತಾ" ಅಥವಾ "ಸಂಬಂಧಂ ಭಾರ್ಯ" ಇರೋದು ಒಂದು ಕಾಲದಲ್ಲಿ ಇಲ್ಲಿ ಅತಿ ಸಾಮಾನ್ಯ ಸಂಗತಿಯಾಗಿತ್ತು. ಇದು ಕೈರಳಿ ಸಾಮಾಜಿಕತೆಯಲ್ಲಿರುವ ಲೈಂಗಿಕ ಮುಕ್ತತೆಗೆ ಒಂದು ಸ್ಪಷ್ಟ ನಿದರ್ಶನ.

*****

ಇನ್ನುˌ ಇಂತಹ ಸಂಬಂಧಗಳಿಂದ ಹುಟ್ಟುವ ಮಕ್ಕಳಿಗೆ ಆ ಸಂಬಂಧಂ ಪತಿಯರಲೊಬ್ಬ ತಾನು ತಂದೆ ಎಂದು ಘೋಷಿಸಿ ಮಗುವಿಗೆ ಸಾಮಾಜಿಕ ಮಾನ್ಯತೆ ತಂದು ಕೊಡುತ್ತಾನೆ. ಹಾಗೊಮ್ಮೆ ಯಾವ ತಂದೆಯೂ ಮಗುವನ್ನ ತನ್ನದೆಂದು ಒಪ್ಪಿಕೊಳ್ಳದಿದ್ದರೆˌ ಒಂದಾ ಅದು ನಾಯರರಲ್ಲೆ ಕೆಳವರ್ಗವೆಂದು ಪರಿಗಣಿಸಲಾದ ಗಂಡಸಿನ ಸಂತಾನವಾಗಿರಬೇಕು. ಅಥವಾ ತನಗಿಂತ ಕೆಳಜಾತಿಯ ಗಂಡಸನ್ನ ಕೂಡಿ ನಾಯರ್ ಮಹಿಳೆ ಆ ಮಗುವನ್ನ ಹೆತ್ತಿರಬೇಕು. ಈ ಎರಡೂ ಸಾಧ್ಯತೆಗಳನ್ನ ಆಶ್ಚರ್ಯಕರವಾಗಿ ಒಪ್ಪಿಕೊಳ್ಳದೆ "ಅಕ್ರಮ" ಎಂದು ಘೋಷಿಸುವ ನಾಯರ್ ಹಿರಿಯರು ಆ "ಕೆಟ್ಟಿರುವ" ಮಹಿಳೆಯನ್ನೂ ಹಾಗೂ ಅವಳ ಅವಳ ಸಂತಾನವನ್ನೂ ಜಾತಿಯಿಂದ ಬಹಿಷ್ಕಾರ ಹಾಕುತ್ತಾರೆ! 


ಹಾಗೆ ನೆಲೆ ಕಳೆದುಕೊಂಡ ಅನೇಕ ನಾಯರ್ ಮಹಿಳೆಯರು ವಿದೇಶಿ ವ್ಯಾಪಾರಿ ಅರಬರನ್ನೋˌ ಯಹೂದ್ಯರನ್ನೊˌ ಚೀನಿಯರನ್ನೋ ಇಲ್ಲಾ ಯುರೋಪಿಯನ್ ಕ್ರೈಸ್ತರನ್ನೋ ಕಟ್ಟಿಕೊಂಡು ಅವರ ಉಪಪತ್ನಿಯರಾಗಿದ್ದುಕೊಂಡು ಅವಳ ಹಿಂದಿನ ಸಂಬಂಧದಿಂದ ಹುಟ್ಚಿದ ಮಗುವೂ ಸೇರಿ ಮುಂದೆ ಹೊಸ ಕೂಡಿಕೆಯಿಂದಾದ ಮಗುವೂ ಮತಾಂತರವಾಗಿರೋದೂ ಸಹ ಇದೆ. ವಿದೇಶಿ ಧರ್ಮಗಳು ಕೇರಳದ ಸಮಾಜದಲ್ಲಿ ಕಾಲಕ್ರಮೇಣ ಬೆರೆತು ಹೋಗಲು ಇದೂ ಸಹ ಒಂದು ಕಾರಣ.


ಸಂಬಂಧಂನಿಂದ ಹುಟ್ಟುವ ಮಗುವನ್ನಾಗಲಿ ಅಥವಾ ಸಂಬಂಧಂನಿಂದಾದ ಹೆಂಡತಿಯನ್ನಾಗಲಿ ಆ ನಂಬೂದರಿ ತಾನು ಮಡಿ ಮೈಲಿಗೆಯಿಂದ ಶುದ್ಧನಾಗಿರುವ ಹಗಲ ಹೊತ್ತಿನಲ್ಲಿ ಸಾಮಾಜಿಕವಾಗಿ ಮುಟ್ಟದೆ ಅಸ್ಪರ್ಶ್ಯತೆಯ ಆಚರಣೆಯನ್ನೆ ಮಾಡುತ್ತಾನೆ. ಅವನ ಮೋಕೆ ಕೊಂಡಾಟ ಕಾಮದಾಟಗಳೇನಿದ್ದರೂ ರಾತ್ರಿ ಮಲಗುವ ಕೋಣೆಯ ಕತ್ತಲಲ್ಲಿ ಮಾತ್ರ. ಎಲ್ಲರಿಗೂ ಅವರಿಬ್ಬರ ನಡುವಿನ ಸಂಬಂಧ ಸ್ಪಷ್ಟವಾಗಿ ಅರಿವಿದ್ದರೂ ಹಗಲಲ್ಲಿ ಪರಸ್ಪರ ಮುಟ್ಟಿ ಶುದ್ಧತೆ ಕೆಡಿಸಿಕೊಳ್ಳುವುದಿಲ್ಲ! ಹೀಗಾಗಿಯೆ ಒಂದೆ ನಾಯರ್ ತಾಯಿಯ ಹೊಟ್ಟೆಯಿಂದ ಹುಟ್ಟುವ ಮಕ್ಕಳು ಕುರುಪ್ˌ ಮೆನೊನ್ˌ ಪಿಳ್ಳೆˌ ನಾಯನಾರ್ˌ ತಂಬಿˌ ಕಾರ್ತˌ ನಂಬಿಯಾರ್ˌ ಉನ್ನಿತ್ತನ್ˌ ವಳಿಯತ್ತನ್ˌ ಕೈಮಳ್ ಅಥವಾ ಮನ್ನಾದಿಯನ್ ಹೀಗೆ ವಿಭಿನ್ನ ಕುಲನಾಮ ಹೊಂದಿರೋದು ಸರ್ವೆ ಸಾಮಾನ್ಯ. 


ಇವೆಲ್ಲವನ್ನು ಮಾನ್ಯಮಾಡಿ ಒಪ್ಪಿಕೊಂಡೆ ಇಂದಿನ ಕೇರಳ ಉಳಿದು ಬೆಳೆದು ನಿಂತಿದೆ. ಇಲ್ಲಿನವರಿಗೆ ಇದು ಸಹಜ.

( ಇನ್ನೂ ಇದೆ.)

https://youtu.be/Y8lokIRM75U

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೪.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೪.👊


ಭಾರತದ ಭೂಪಟದಲ್ಲಿದ್ದರೂ ಸಹ ತಾನು ಭೂಭಾಗವನ್ನೆ ಹಂಚಿಕೊಳ್ಳದಿರೋ ಅನೇಕ ವಿದೇಶಗಳೊಂದಿಗೆ ಕೇರಳಕ್ಕೆ ಇರುವಷ್ಟು ಹೊಕ್ಕು ಬಳಕೆಯ ಸಂಬಂಧ ಸ್ವತಃ ಭಾರತದ್ದೆ ಇನ್ಯಾವುದೆ ಪ್ರದೇಶಗಳೊಂದಿಗೆ ಕೇರಳಕ್ಕೆ ಇರದಿರುವುದಕ್ಕೂ ಸಹ ಕಾರಣಗಳಿವೆ. ಒಂದು ದೃಷ್ಟಿಯಿಂದ ನೋಡಿದಾಗ ಕೇರಳದ ಪಾಲಿಗಿದು ವರದಾನದಂತೆ ಪರಿಣಮಿಸಿದ್ದರೆˌ ಇನ್ನೊಂದು ದೃಷ್ಟಿಯಿಂದ ತನ್ನದೆ ಈ ಗೆಲುವಿಗೆ ತಾನೆ ಬಲಿಪಶುವಾದ ಕರ್ಮ ಕೇರಳದ್ದು. 


ಮೊದಲಿನಿಂದಲೂ ಸಾಂಸ್ಕೃತಿಕವಾಗಿ ಮಲಯಾಳಿಗಳದ್ದು ಹೊರ ಜಗತ್ತಿಗೆ ಮುಚ್ಚಿದ ಪ್ರಪಂಚ. ದಟ್ಟ ಕಾಡುˌ ಅಡಿಗಡಿಗೆ ಎದುರಾಗುವ ನದಿ ನದ ಜಲಧಾರೆಗಳು ಭಾರತದ ಮುಖ್ಯಭೂಮಿಯ ಇತರ ರಾಜ್ಯಗಳಿಂದ ಇವರನ್ನ ಪ್ರತ್ಯೇಕಿಸಿಟ್ಟಿದ್ದರೆˌ ಪಶ್ಚಿಮಕ್ಕೆ ತೆರೆದುಕೊಂಡ ವಿಶಾಲ ಕಡಲ ತೀರ ಇವರನ್ನ ವಿದೇಶಿಗರ ಪಾಲಿಗೆ ಸದಾ ಬಾಗಿಲು ತೆರೆದಿಟ್ಟ ವಿಶಾಲ ಮನೆಯನ್ನಾಗಿಸಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿˌ ಜಗತ್ತಿನಲ್ಲಿ ಇವತ್ತು ಆಚರಣೆಯಲ್ಲಿರುವ ಸಕಲ ಧಾರ್ಮಿಕ ನಂಬಿಕೆಯವರೂ ಇಂದಿನ ಕೇರಳದಲ್ಲಿದ್ದಾರೆ! 

ಬೆಜೈಂಟೆನ್ ಗ್ರೀಕ್ - ರೋಮನ್ನರ ಕಾಲದಿಂದಲೂ ಕೇರಳದ ಆರ್ಥಿಕ ವ್ಯವಹಾರ ವಿದೇಶಿಯರೊಂದಿಗೆ ಕುದುರಿದೆ. ಅರೆ ಮಲೆಯಾಳಿ - ಅರೆ ಅರಬ ಸಿರಿಯನ್ ಅಥವಾ ಅರೆ ಮಲಯಾಳಿ - ಅರೆ ಚೀನಾ ತಳಿಯ ಸಮುದಾಯಗಳನ್ನ ಬಹುಶಃ ಕೇರಳದಲ್ಲಿ ಮಾತ್ರ ಕಾಣಲು ಸಾಧ್ಯ. ಸ್ವಭಾವತಃ ವ್ಯವಹಾರಸ್ಥನಾದ ಮಲಯಾಳಿ ತನ್ನ ವ್ಯಾಪಾರಿ ಉದ್ದೇಶದಿಂದ ಬೆಳೆಸಿದ ವಿದೇಶಿಗರೊಂದಿಗಿನ ಸಂಬಂಧಗಳು ಕ್ರಮೇಣ ವಾಣಿಜ್ಯ ವ್ಯಾವಹಾರಿಕ ಕಾರಣಗಳನ್ನ ಮೀರಿ ವೈವಾಹಿಕತೆಗೂ ತಿರುಗಿ ಅನೇಕ ಮಿಶ್ರತಳಿ ಮಲಯಾಳಿ ಸಮುದಾಯಗಳು ಕಾಲಾಂತರದಲ್ಲಿ ಇಲ್ಲಿ ಅಸ್ತಿತ್ವಕ್ಕೆ ಬಂದಿವೆ.


ಹೀಗಾಗಿ ಎಂದಿಗೂ ಮಲಯಾಳಿಗಳ ಪಾಲಿಗೆ ಸಂಸ್ಕೃತಿ ಅನ್ನೋದು ಉತ್ತರ ಭಾರತೀಯರಿಂದ ಪ್ರತಿಪಾದಿಸಲಾಗಿರುವಂತೆ ಅಥವಾ ಅದರ ಪ್ರಭಾವಕ್ಕೆ ಸಿಲುಕಿರುವ ನೆರೆಯ ಎರಡು ನಾಡುಗಳಂತೆ ಏಕತ್ರ ವಾದ ಅಂದರೆ ಮೋನೋಲಿಥಿಕ್ ಅಲ್ಲ. ಅದು ಎಲ್ಲಾ ಮಲಯಾಳಿಗಳೂ ಒಂದೆ ಬಗೆಯ ಆಚಾರ ವಿಚಾರ ಆಹಾರ ಜೀವನ ಪದ್ಧತಿಗಳನ್ನ ಮಾತ್ರ ಅನುಸರಿಸಿ ಬಾಳಿ ಕಟ್ಟಿದ ಕೈರಳಿ ಸಮಾಜವಲ್ಲ. ಅದೆಲ್ಲದರಲ್ಲಿ ಮನೆ ಮನೆಗಳ ಮಟ್ಟಿಗೆ ಸಾಕಷ್ಟು ವೈವಿಧ್ಯತೆಯನ್ನ ಉಳಿಸಿಕೊಂಡೂ ಸಹ ಒಂದು ಭಾಷಾ ಸಮುದಾಯವಾಗಿ ಒಂದಾಗಿರೋದಕ್ಕೆ ಕೊಟ್ಟ ಪ್ರಾಮುಖ್ಯತೆಯೆ ಮಲಯಾಳಿಗಳ ಇಂದಿನ ಕೇರಳದ ಸಾಮಾಜಿಕ ವ್ಯವಸ್ಥೆಯನ್ನ ರೂಪಿಸಿದೆ. 

ಉತ್ತರ ಭಾರತೀಯರ ಹಿಂದೂವಾದ ಮಲಯಾಳಿಗಳಿಗೆ ಎಂದೆಂದಿಗೂ "ಮನಸಿಲಾಯಿಲ್ಲ". ಅದು ಅವರಿಗರ್ಥವಾಗದ ಕಾರಣದಿಂದಲೆ ಕೈರಳಿ ಸಮಾಜ ಬಹುಶಃ ಸ್ವಸ್ಥವಾಗಿದೆ. ಆಗಾಗ ಮಲಬಾರು ಪ್ರಾಂತ್ಯದ ಧಾರ್ಮಿಕ ಮತಭ್ರಾಂತ ಪೊನ್ನಾನಿ ಮೂಲದ ಮುಸ್ಲಿಂ ಮೂಲಭೂತವಾದದ ತರದ್ದು ತನ್ನ ಮಾನಸಿಕ ಅಸ್ವಸ್ಥ್ಯತೆಯನ್ನ ಈಗೀಗ ಬರಗೆಟ್ಟ ಇ"ಸ್ಲಂ"ಮಿಕ್ ವಿತಂಡವಾದಗಳ ಮೂಲಕ ಕೇರಳದ ಸಾಮಾಜಿಕತೆಯಲ್ಲಿ ತೂರಿಸಲು ಪರದಾಡುತ್ತಿರೋದು ನಿಜವಾದರೂˌ ಇದಕ್ಕೂ ಏಕರೂಪದ ಹಿಂದೂ - ಹಿಂದುತ್ವಕ್ಕಾದ ದುರ್ಗತಿಯನ್ನೆ ಮಲಯಾಳಿಗಳು ಕರುಣಿಸಲಿದ್ದಾರೆ. 

ಸರಿಯಾದ ಉದಾಹರಣೆಗಳನ್ನ ಕೊಟ್ಟು ಇದನ್ನ ವಿವರಿಸೋದಾದರೆ "ಓಣಂ"ನಷ್ಟು ಸುಲಭವಾದ ವಿಷಯ ಇನ್ನೊಂದಿರಲಿಕ್ಕಿಲ್ಲ. ಈ ಓಣಂ ನಿಜಾರ್ಥದಲ್ಲಿ ಇಲ್ಲಿ ನಾಡ ಹಬ್ಬ. ಮಾವೇಲಿ ಎಂದು ಮಲಯಾಳಿಗಳು ಆದರಿಸಿ ಕರೆಯುವ ಮಹಾಬಲಿಯನ್ನ ಇಲ್ಲಿ ಮತಾತೀತವಾಗಿ ಪ್ರತಿಯೊಬ್ಬರೂ ಓಣಂ ಕಾಲದಲ್ಲಿ ತಮ್ಮ ತಮ್ಮ ಮನೆಗೆ ಆಹ್ವಾನಿಸಿ ಹಬ್ಬ ಮಾಡುತ್ತಾರೆ. 


ಮಾವೇಲಿಯ ಪ್ರತಿನಿಧಿಯಾದ "ಓಣಂ ಪೊಟ್ಟಾನ್" ಅಂದರೆ ಕಿವುಡ ಮೂಕನಾಗಿರೋ ಮಹಾಬಲಿಯ ದೂತ ಹಬ್ಬ ಸಾರಲು ಹಿಂದೂˌ ಮುಸ್ಲಿಂˌ ಕ್ರೈಸ್ತ ಯಹೂದ್ಯ ಅನ್ನುವ ಬೇಧವನ್ನೆಣಿಸದೆ ಪ್ರತಿಯೊಬ್ಬರ ಹಿತ್ತಲನ್ನೂ ಹೊಕ್ಕು ಅವರ ಅಂಗಳಕ್ಕಿಳಿದು ಅವರಿತ್ತ ಪಡಿ ಪಡೆದು ಅದರಿಂದಲೆ ಕೆಲವು ಕಾಳುಗಳನ್ನ ಸಮೃದ್ಧಿಯ ಸಂಕೇತವಾಗಿ ಅವರಿಗೇನೆ ಹಿಂದಿರುಗಿಸಿˌ ಅವನಿತ್ತ ಹೂ ಪ್ರಸಾದವನ್ನ ಅವರೂ ಸ್ವೀಕರಿಸಿ ಒಂದಾಗಿ ಹಬ್ಬದ ಆಚರಣೆ ಆರಂಭವಾಗುತ್ತದೆ. ಹೀಗೆ ಮನೆ ಮನೆಗೂ ಬರುವ ಓಣ ಪೊಟ್ಟಾನ್ನನ್ನ ಕಾಲುದೀಪ ಹೊತ್ತಿಸಿದ ಬೆಳಕಲ್ಲಿ ಕಡುಗಪ್ಫು ಮುಂಗಾರು ಮಳೆ ಮೋಡಗಳ ಕತ್ತಲ ಹಗಲಲ್ಲಿ ಪ್ರತಿಯೊಬ್ಬ ಮಲಯಾಳಿಯೂ ಭಯಭಕ್ತಿಯಿಂದ ಎದುರುಗೊಳ್ಳುತ್ತಾನೆ. 


ಈಗೀಗ ಕೇವಲ ಸಸ್ಯಾಹಾರಿ ಓಣಂ ಸದ್ಯವೆ ಅತಿರಂಜಿತ ಪ್ರಚಾರ ಗಿಟ್ಟಿಸುತ್ತಿರೋದು ಸತ್ಯವಾದರೂ ಅದೆಲ್ಲಾ ವ್ಯಾಪಾರಿ ತಂತ್ರಗಳಷ್ಟೆ. ಮಲೆಯಾಳಿಗಳ ಮನೆ ಮನೆಗಳಲ್ಲಿ ತಯಾರಾಗುವ ಓಣಂ ಸದ್ಯದಲ್ಲಿ ಅವಿಯಿಲ್ - ಅಡೈ ಪ್ರಥಮನ್ - ಒತ್ತೆ ಕೊಳಂಬು - ನೈ ಅಪ್ಪಂ ಇರುವಂತೆಯೆ ಮೀನ್ ವೆವಿಚ್ಚದು - ಕೋಳಿ ಕರಿ - ಆಟ್ಟು ಉಲರ್ತಿಯದು - ಬೀಫ್ ಪಿಡಿ - ಪಂದಿ ಪುಲಿಸ್ಸೆರಿ - ಓಲನ್ - ಕಾಳನ್ - ಪಾಲ್ ಪಾಯಸಂ ಇವೆಲ್ಲವೂ ಇವೆ. ಅವರವರ ಮನೆಯ ಆಹಾರ ಪದ್ಧತಿಯಂತೆ ಅವರವರು ಕೇರಳದಲ್ಲಿ ಬಗೆಬಗೆಯ ಆಹಾರ ವೈವಿಧ್ಯಗಳನ್ನ ಮಾಡಿ ಸಂತೋಷದಿಂದ ಓಣಂ ಆಚರಿಸುತ್ತಾರೆ ಅಂದರೆ ಉತ್ತರ ಭಾರತೀಯರನ್ನ ಬಿಡಿ ಹಿಂದೂ ಹಬ್ಬವೆಂದರೆ ಅಂದು ಸಸ್ಯಾಹಾರ ಮಾತ್ರ ಪ್ರಧಾನ ಎಂದೆ ಬಲವಾಗಿ ನಂಬಿರುವ ಕನ್ನಡಿಗರಿಗೂ ಒಂಥರಾ ಸಾಂಸ್ಕೃತಿಕ ಅಘಾತವಾಗುವುದು ಖಚಿತ.

ಮಲಯಾಳಿಗಳ ಹಾಸ್ಯಪ್ರಜ್ಞೆ ಸಹ ಅದ್ವಿತೀಯ. ಅವರಷ್ಟು ತಮ್ಮವರನ್ನೆˌ ತಮ್ಮನ್ನಾಳುವವರನ್ನೆ ಮಸ್ಕಿರಿ ಮಾಡಿ ವ್ಯಂಗ್ಯ ಹುಟ್ಟಿಸುವವರು ಇಡಿ ಭಾರತದಲ್ಲಿ ಮತ್ತೊಬ್ಬರು ಸಿಗಲಿಕ್ಕಿಲ್ಲ ಬಹುಶಃ. ತಮ್ಮ ಆರಾಧ್ಯ ದೈವ ಮಹಾಬಲಿಯನ್ನ ಪರಿಪರಿಯಾಗಿ ವ್ಯಂಗ್ಯವಾಡಿಕೊಂಡು ತಮಾಷೆ ಮಾಡುತ್ತಾರೆ ಅಂದರೆ ಉತ್ತರ ಭಾರತೀಯರಿಗೆ ಆಶ್ಚರ್ಯವಾಗಬಹುದು. ಸಿನೆಮಾ ನಟರನ್ನಾಗಲಿˌ ರಾಜಕಾರಣಿಗಳನ್ನಾಗಲಿ ಬಿಡದ ಮಲಯಾಳಿ ಮಾಧ್ಯಮಗಳು ಮಾಡುವ ಮಟ್ಟಿಗೇನಾದರೂ ಕೇರಳದ ಹೊರಗೆ ಅಲ್ಲಿನ ನಾಯಕಮಣಿಗಳನ್ನ ಹಾಸ್ಯಾಸ್ಪದವಾಗಿ ಆಡಿಕೊಂಡರೆ ಮರುದಿನ ತಲೆ ಎತ್ತಿಕೊಂಡು ಓಡಾಡಲು ಅವಕಾಶ ಸಿಗೋದು ಅನುಮಾನ. ಮಹಾರಾಷ್ಟ್ರದಲ್ಲಿ ಅದೆ ಮಟ್ಟದಲ್ಲಿ ಶಿವಾಜಿಯ ಕುರಿತು ತಮಾಷೆ ಮಾಡಿದರೆ ಮರಾಠಿಗರು ಖಂಡಿತವಾಗಿ ಸಹಿಸರು.


ಅವನೊಮ್ಮೆ ಅವನ ಮಲಯಾಳಿ ಗೆಳೆಯನ ಮಗುವಿನ ಶಾಲಾ ವಾರ್ಷಿಕೋತ್ಸವ ನೋಡಲು ಹೋಗಿದ್ದ. ಮಿತ್ರನ ಪುಟ್ಟ ಪುತ್ರ ವಿಷ್ಣು ಮಾವೇಲಿ ವೇಷ ತೊಟ್ಟಿದ್ದರೆˌ ಅವನ ಸಹಪಾಠಿ ಉಸ್ಮಾನ್ ಜನಿವಾರ ಧರಿಸಿ ಓಲೆ ಕೊಡೆ ಹಿಡಿದಿದ್ದ ಬ್ರಾಹ್ಮಣ ವಟುವಾಗಿದ್ದ! ಸಂತ ಥಾಮಸರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ಈ ಹಾಸ್ಯಪ್ರಸಂಗದಲ್ಲಿ ಬಲಿಯ ತಲೆ ಮೇಲೆ ಕಾಲಿಟ್ಟ ವಾಮನಮೂರ್ತಿಯ ಅಂಗಾಲಿಗೆ ಮಾವೇಲಿ ಮಂಡೆಯೊಳಗಿಟ್ಟುಕೊಂಡಿದ್ದ ಮುಳ್ಳು ಚುಚ್ಚಿ ಅವ ಲೊಬೊಲೊಬೊ ಹೊಡೆದುಕೊಳ್ತಾ ನೆಗೆನೆಗೆದು ಕುಣಿಯುತ್ತಿದ್ದರೆ ಅದೆ ಮಾವೇಲಿಯ ಪರಮ ಆರಾಧಕರಾದ ಮಲಯಾಳಿ ಪ್ರೇಕ್ಷಕರು ಕೈ ಚಪ್ಪಾಳೆ ತಟ್ಟಿˌ ಸೀಟಿ ಹೊಡೆದು ಗೊಳ್ಳನೆ ನಗುತ್ತಾ ಹಾಸ್ಯ ಪ್ರಸಂಗವನ್ನ ಆಸ್ವಾದಿಸುತ್ತಿದ್ದರು. ನೆನಪಿಡಿˌ ಹಿಂದೂ ಹಾಗೂ ಮುಸಲ್ಮಾನ ಮಕ್ಕಳ ಈ ಪ್ರದರ್ಶನ ನಡೆಯುತ್ತಿದ್ದುದು ಕ್ರೈಸ್ತ ಮಿಷನರಿಗಳು ನಡೆಸುತ್ತಿದ್ದ ಶಾಲೆಯಲ್ಲಿ.


ಇದೆ ತರಹ ವನವಾಸಕ್ಕೆ ಹೊರಟ ಶ್ರೀರಾಮಚಂದ್ರ ಹಾಗೂ ದಶರಥನ ಕಾಲು ಮುಗಿಯಲು ಹೋದಾಗ ಅನ್ನೋ ಪ್ರಸಂಗದಲ್ಲಿ ಇಂತಹ ಹಾಸ್ಯವಿಟ್ಟು ಇದರಷ್ಟಲ್ಲದಿದ್ದರೂ ಇದರ ಹತ್ತರಲ್ಲೊಂದು ಪಟ್ಟು ತಮಾಷೆಯಲ್ಲಿ ತೋರಿಸ ಹೊರಟರೆ ಸಾಕುˌ ಯಾರು ಹೋಗಿ ಕೇಳಿರದಿದ್ದರೂ ಸಹ ತಮಗೆ ತಾವೆ ಧರ್ಮ ರಕ್ಷಣೆಯ ಸುಪಾರಿ ಕೊಟ್ಟುಕೊಂಡಿರುವ ಮೈ ಬಗ್ಗಿಸಿ ದುಡಿಯಲರಿಯದ ಧರ್ಮರಕ್ಷಕ ಬೋರ್ಡು ಹಾಕಿಕೊಂಡು ಭಂಡಾಟ ಮಾಡುವ ದುರುಳ ಸೋಮಾರಿ ಲೋಫರುಗಳು ಬೀದಿಗಿಳಿದು "ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ" ಅಂತ ಬಾಯಿ ಬಾಯಿ ಬಡಿದುಕೊಳ್ತಾ ಅರಾಜಕತೆ ಸೃಷ್ಟಿಸಿರುತ್ತಿದ್ದರು. ಆ ವಿಷಯದಲ್ಲಿ ಕೇರಳದಲ್ಲಿರುವ ಮುಕ್ತತೆ ಆ ಸಮಾಜದ ಪಕ್ವತೆಗೆ ಸಾಕ್ಷಿ.

( ಇನ್ನೂ ಇದೆ.)

https://youtu.be/3-RYN3bqizg

24 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೩.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೩.👊

ಎದ್ದಿರುವ ಅಷ್ಟೂ ಹೊತ್ತು ಎಡೆಬಿಡದೆ ಎಲೆ ಅಡಿಕೆಯನ್ನ ಎಮ್ಮೆ ಮೆಲುಕು ಹಾಕಿದಂತೆ ಹಾಕಿ ಹಾಕಿ ಕರೆಗಟ್ಟಿರುವ ತನ್ನ ಹಲ್ಲುಗಳೆಲ್ಲ ಕಾಣುವ ಹಾಗೆ ಬಾಯಿ ಕಿಸಿದ ನಾಯರ್ "ವರು ವರುˌ ಭಕ್ಷಣಂ ಞಾನ್ ಎಡುತ್ತು ವೆಚ್ಚು" ಅನ್ನುತ್ತಲೆ ಮೂಲೆಯ ಮೇಜಿನ ಮೇಲೆ ಬಾಳೆಎಲೆ ಹಾಸಿದ. ಅನ್ನದ ಮೇಲೆ ಕೋಳಿ ಗಸಿ ಬಡಿಸಲು ಬಂದವನಿಗೆ "ಞಾನ್ ಕೋಳಿ ಕಳಿಕ್ಯಾನಿಲ್ಲಲ್ಲೋ ನಾಯರೆˌ ವೆರುಂ ಮತ್ಸ್ಯಂಗಳ್ ತನ್ನೆ" ಎಂದು ತಡೆದ. ಅಚ್ಚರಿಯಿಂದೆಂಬಂತೆ ನಾಯರ್ "ಅದಾಣೋ!" ಅನ್ನುತ್ತಾ ಕೋಳಿ ಸಾರಿನ ಬೋಗುಣಿಯನ್ನವ ಹಾಗೆಯೆ ಹಿಂದೊಯ್ದ. 
"ಅದೆˌ ಪಕ್ಷೆ ತಾರಾವಿಂಡೆ ಕರಿ ಆಯಿರಂಗಿಲ್ ಒನ್ನುಂ ಕೊಳಪಂಮಿಲ್ಲ. ಇಲ್ಲಂಗಿಲ್ ಆಟ್ಟಿಂಡೆ ಲಿವರ್ ಆನಾಲುಂ ಪ್ರಶ್ನಂ ಇಲ್ಲಿಯಾ. ಅದು ರೆಂಡು ಕರಿಕ್ಕಳ್ ಮಾತ್ರಮಾಣ್ ಞಾನ್ ಇಷ್ಟಂಪೆಟ್ಟು ಕಳಿಕ್ಯುನ್ನದು. ಪಿನ್ನೆ ಏದುಂ ಅಲ್ಲ" ಅಂದ. "ಅದು ಶರಿ" ಅಂತ ಹೆಗಲ ಮೇಲೆ ಇಳಿ ಬಿಟ್ಟುಕೊಂಡಿದ್ದ ಬೈರಾಸಿನಿಂದ ಕೈ ಒರೆಸಿಕೊಳ್ಳುತ್ತಾ ನಾಯರ್ ಮತ್ತೆ ತನ್ನ ಕೊಳಕು ಹಲ್ಲುಬಿಡುತ್ತಾ ನಕ್ಕ. 

ಇವ ಬಾಕಿ ಬಡಿಸಿದ ಖಾದ್ಯಗಳನ್ನ ಒಂದೊಂದಾಗಿ ರುಚಿ ನೋಡುತ್ತಾ "ಉವ್ವ" ಅಂದ. ಕೋಳಿ ಸಾರಿನ ಬದಲಿಗೆ ಬಡಿಸಿದ ಬೂತಾಯಿ ಗಸಿˌ ಹುರಿದ ಬಂಗುಡೆˌ ಬೊಂಡಾಸು ಪುಳಿಮುಂಚಿˌ ಬೇಯಿಸಿದ ಕಡಲೆ ಹಾಕಿದ ಎಳೆಕಾಯಿ ನಾಟ್ಟನ್ ಚಕ್ಕನ್ ಪಲ್ಯˌ ಪಪ್ಪಡಂˌ ನೆಲ್ಲಿ ಉಪ್ಪಡುˌ ಮೋರು ಹಾಗೂ ಕುಚ್ಚಲಕ್ಕಿಯ ಅನ್ನವಿದ್ದ ನಾಯರನ ಪರಮಾಯಿಷಿ ಚೋರು ಹಸಿವಾಗಿದ್ದಕ್ಕೋ ಏನೋ ಸಿಕ್ಕಾಪಟ್ಟೆ ರುಚಿಯೆನಿಸಿ ಭರ್ಜರಿ ತೇಗು ಬರುವಂತೆ ಉಂಡೆದ್ದ. ಮೆಟ್ಟಿಲೇರಿ ಕೋಣೆಗೆ ಹೋಗಿ ಇನ್ನೂ ಬಾಡಿರದ ಬಿಸಿಲಿನಿಂದ ಪಾರಾಗಲು ತಂಪುಗನ್ನಡಕˌ ತುಂಬು ಕೈಯ ಹಸಿರು ಟೀ ಶರ್ಟ್ ಹಾಗೂ ಬರ್ಮುಡಾ ಏರಿಸಿ ಕ್ಯಾಮೆರಾದ ಸೊಂಟಪಟ್ಟಿ ಬಿಗಿದುಕೊಂಡವನೆ ಕುಶಾಲನಗರದ ಬೀಚಿನೆಡೆಗೆ ಹೊರಡಲು ಅನುವಾಗಲು ತೊಡಗಿದ. ಸಂಜೆಯಾದರೆ ಸಾಕು ಹಾವಾಡಿಗನ ಪುಂಗಿ ಹಾವನ್ನ ಆಕರ್ಷಿಸುವಂತೆ ಕಡಲಲೆಗಳ ಆರ್ದ್ರ ಕರೆ ಅವನನ್ನ ತನ್ನತ್ತ ಸೆಳೆಯ ತೊಡಗುತ್ತದೆ.

*****

ಕಡಲತೀರ ಇಂದಷ್ಟು ಹೆಚ್ಚು ಉಗ್ರವಾಗಿರದೆ ನೆನ್ನೆಗಿಂತ ಚೂರು ಶಾಂತವಾಗಿದ್ದಂತ್ತಿತ್ತು. ಬಹುಶಃ ಇಳಿತದ ಕಾಲ ಹತ್ತಿರ ಬರುತ್ತಿದೆಯೇನೋ. ಆಗಲೆ ಇಲ್ಲಿಗೆ ಬಂದು ಐದು ದಿನ ಕಳೆದಿದೆˌ ಸಂಜೆ ಹೋಗಿ ಮುಂದಿನ ಪಯಣದ ಟಿಕೇಟನ್ನ ಕಾಯ್ದಿರಿಸಬೇಕು ಅಂತಂದುಕೊಂಡ. ಆದರೆ ಹೋಗುವುದೆಲ್ಲಿಗೆ ಅನ್ನುವ ಗೊಂದಲ ಬಗೆಹರೆಯಲಿಲ್ಲ. ದಾರಿಯಲ್ಲಿ ನಡೆದು ಬರುತ್ತಿದ್ದಷ್ಟೂ ಉದ್ದಕ್ಕೆ ಅನೇಕ ದಿನನಿತ್ಯದ ಜೀವಂತ ಚಿತ್ರಗಳನ್ನ ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದವು. 


ಯಾರದ್ದೊ ಹಿತ್ತಲಿನಲ್ಲಿ ಹೊತ್ತೊಯ್ಯಲು ಹೊಂಚು ಹಾಕುತ್ತಿದ್ದ ಗಿಡುಗನಿಂದ ಕಾಪಾಡಿಕೊಂಡು ತನ್ನ ಮರಿಗಳನ್ನ ಮೇಯಿಸುತ್ತಿರುವ ತಾಯಿಕೋಳಿˌ ಆಗಷ್ಟೆ ಹೇತ ಅಂಗಿ ಮಾತ್ರ ಹಾಕಿಕೊಂಡಿರುವ ಉಡಿದಾರದ ಪುಟ್ಟನ ಮನೆ ಮುಂದಿನ ನಲ್ಲಿಯಡಿಯ ಕಲ್ಲ ಮೇಲೆ ಕುಕ್ಕರಗಾಲಲ್ಲಿ ಕೂರಿಸಿ ಕುಂಡೆ ತೊಳೆಯುತ್ತಿರುವ ಅವನಮ್ಮˌ ಅಂಗಡಿ ಪಕ್ಕ ಹೊಗೆ ಬಿಡುತ್ತಾ ಬೀಡಿ ಸೇಯುತ್ತಿದ್ದ ಕಾಕ. ಸೈಕಲ್ಲಿನಲ್ಲಿ ಟ್ರಿಪಲ್ ರೈಡ್ ಹೋಗುತ್ತಿರುವ ಚಿಣ್ಣರುˌ ಶಾಲೆಯಿಂದ ಮರಳುವ ಹಾದಿಯಲ್ಲಿ ಗಹನ ಚರ್ಚೆಯಲ್ಲಿ ಮುಳುಗಿದ್ದ ಶಾಲಾ ಚೀಲದ ಹೊರೆ ಹೊತ್ತಿದ್ದ ಮಕ್ಕಳುˌ ಮುಂದಿನ "ಸಮರಂ" ಗೋಡೆ ಬರಹ ಬರೆಯುತ್ತಿರೋ ಪೈಂಟರ್ ಹೀಗೆ ಜೀವಂತಿಕೆಯ ಅಭಿವ್ಯಕ್ತಿಗಳಿಗೇನೂ ಅಲ್ಲಿ ಕೊರತೆಯಿರಲಿಲ್ಲ. ಬೇಕಿದ್ದದ್ಧು ದಿಟ್ಟಿಸಿ ನೋಡುವ ಕಣ್ಗಳಷ್ಟೆ.

ಸುಭಾಶ ಸಂಜೆ ಇವನ ಖಾಯಂ ಠಿಕಾಣಿಗೆ ಬರೋದು ಖಾತ್ರಿಯಿತ್ತು. ಅವನ ಬರುವನ್ನೆ ಕಾಯುತ್ತಾ ಮರಳ ದಿಬ್ಬದ ಅದೆ ಸ್ಥಳದಲ್ಲಿ ಸಮುದ್ರಭಿಮುಖವಾಗಿ ಕುಕ್ಕರಿಸಿದ. ಇನ್ನೇನು ತಾಸಿನಲ್ಲಿ ಈಗ ಇಷ್ಟು ಪ್ರತಾಪ ಬೀರುತ್ತಾ ಉರಿಯುತ್ತಿರುವ ಸೂರ್ಯ ಪಡುಗಡಲಲ್ಲಿ ಮುಚ್ಚಿಕೊಂಡು ಮುಳುಗಿ ನಾಟಕೀಯವಾಗಿ ಆವರಿಸಿಕೊಳ್ಳಲಿರುವ ಕತ್ತಲಿನಲ್ಲಿ ಇರುಳ ರಾಜ್ಯಭಾರ ಮರಳಿ ಆರಂಭವಾಗಲಿತ್ತು. ದೂರದಿಂದ ಸುಭಾಶನ ಸವಾರಿ ಕುಣಕೊಂಡು ಬರುತ್ತಿರೋದು ಕಾಣಿಸಿತು. ಕೈಯಲ್ಲೊಂದು ಗಂಟಿನಂತದ್ದನ್ನ ಹಿಡಿದುಕೊಂಡು ನಡೆಯುತ್ತಿದ್ದಾನೋ ಇಲ್ಲಾ ಇಲ್ಲದ ಕುದುರೆಯನ್ನ ಕಲ್ಪಿಸಿಕೊಂಡು ತಾನೆ ಅದರ ಪರವಾಗಿ ಕೆನೆಯುತ್ತಾ ಸವಾರಿ ಮಾಡಿಕೊಂಡು ಬರುತ್ತಿದ್ದಾನೋ ಅರ್ಥವಾಗಲಿಲ್ಲ. 

ಹತ್ತಿರ ಬಂದವ ಏದುಸಿರು ಬಿಡುತ್ತಾˌ "ಬೇಗ ಬಂದ್ರಿಯಾ!" ಅಂತ ಆಶ್ಚರ್ಯಪೂರ್ವಕವಾಗಿ ಪ್ರಶ್ನಿಸುತ್ತಾ ಪಕ್ಕಕ್ಕೆ ಬಂದು ಕೂತ. ಅವನಿಗೆ ನೆನ್ನೆಯ ತನ್ನ ಫೋಟೊಗಳನ್ನ ನೋಡುವ ಕಾತರ ಇದ್ದಂತಿತ್ತು. ಕ್ಯಾಮರಾದ ಪರದೆಯ ಮೇಲೆ ಒಂದೊಂದಾಗಿ ಕೋಲದ ಹಿನ್ನೆಲೆಯಲ್ಲಿ ತನ್ನ ಮುಖಾರವಿಂದ ಸೆರೆಯಾಗಿದ್ದನ್ನ ಕಾಣುತ್ತಿದ್ದಂತೆ ಹಲ್ಲು ಬಿಟ್ಟು ನಗಾಡಿಕೊಂಡು ಆಸ್ವಾದಿಸಹತ್ತಿದ. ಅವನ ಒಂದೂವರೆ ಕಾಲಿನ ಕಂಭಾಶ್ರಿತ ನಿದ್ರಾ ಭಂಗಿಗಳ ಸರದಿ ಬಂದಾಗ "ಇಶ್ಶೀ ಇದೆಲ್ಲ ಎಂತಯ! ಇಂತದೆಲ್ಲ ತೆಗೆಯದ ನೀವು? ನನ್ ಮರ್ಯಾದೆ ಹೋಯ್ತು ಮಾರ್ರೆ" ಅಂತ ಮುಖ ಹಿಂಡಿಕೊಂಡ. "ಮುಚ್ಚˌ ಭಾರಿ ಮರ್ಯಾದಸ್ತ ಕುಳ ಅಹಹ! ಅಲ್ಲನ ಅಷ್ಟು ಮಾನಸ್ತನಾಗಿದ್ರೆ ಕದ್ದು ಕುಗುರ್ತಾ ಬೆಲ್ಲ ತೂಗಿದ್ದು ಯಾಕನ?" ಅಂತ ಇವ ನಗುನಗುತ್ತಲೆ ದಬಾಯಿಸಿದ. ಆದರೂ ಅವನ ಮುಖದ ಮೇಲಿ ಕಸಿವಿಸಿ ಕಡಿಮೆಯಾಗಲಿಲ್ಲ. 


"ಅಲ್ಲಾ ಅವನ್ನ ಮಾತ್ರ ಯಾರಿಗೂ ತೋರಿಸಬೇಡಿ ಆಯ್ತ! ನಿಮ್ಮ ದಮ್ಮಯ್ಯ?!" ಅಂದ. ಅಲ್ಲಾ ನಾನ್ಯಾರಿಗೆ ತೋರಿಸಿದರೆ ಇವನಿಗೆಂತ ನಷ್ಟ? ನೋಡುವ ತನ್ನ ಇಷ್ಟಮಿತ್ರರಿಗೆ ಇವನ ಪರಿಚಯವೆ ಇಲ್ಲದಿರುವಾಗˌ ಯಾವುದೋ ಸಹಜ ಜೀವನದ ಚಿತ್ರಸರಣಿ ನೋಡುವ ಉಮೇದಿನಲ್ಲಿರೋ ಅವರ್ಯಾಕಾದರೂ ಇವನನ್ನ ಇಲ್ಲಿಯವರೆಗೂ ಹುಡುಕಿಕೊಂಡು ಬಂದು ಕಿಚಾಯಿಸಿ ಈ ಭಾರಿ ಮರ್ಯಾದಸ್ತನ ಮಾನ ಮರ್ಯಾದೆಯನ್ನ ಕಳೆದಾರು? ಅಂತ ಯೋಚಿಸಿ ಗಟ್ಟಿಯಾಗಿ ನಗುಬಂತು. ಅದನ್ನವ ಏನಂತ ಗ್ರಹಿಸಿದನೋ ಏನೋ "ಪ್ಲೀಸ್ ತೋರಿಸಬೇಡಿˌ ಪ್ಲೀಸ್ ಆಯ್ತ" ಅಂತ ಪದೆ ಪದೆ ಬೇಡಿದ. "ಆಯ್ತು ಮಾರಾಯˌ ತೋರ್ಸಲ್ಲ ಚಿಂತೆ ಮಾಡ್ಬೇಡ ಆಯ್ತ" ಅಂದಾಗ ಅದಕ್ಕಷ್ಟು ಸಮಾಧಾನವಾದಂತಾಗಿ ಮಗು ಪ್ಯಾಲಿನಗೆ ಬೀರಿತು.

"ಆಯ್ತಾಯ್ತ್ ಈಗ ನಿಂಗೆ ಫೋಟೋ ಕಾಪಿ ಬೇಕಂತಿದ್ರೆ ಪ್ರಿಂಟ್ ಹಾಕಿಸಬೇಕಲ್ಲ ಮಾರಾಯಾˌ ಬಾ ಪೇಟೆ ಕಡೆಗೆ ಹೋಗಿ ಬರಣ" ಅಂತ ಅಂಡಿಗಂಟಿದ ಮರಳ ಕಣಗಳನ್ನ ಕೊಡವಿಕೊಳ್ಳುತ್ತಾ ಮೇಲೆದ್ದ ಸುಭಾಶನೂ ಕುಣಿಯುತ್ತ ತಯಾರಾದ. ಎಡಗೈಯನ್ನ ಕಿರಿಯನ ಹೆಗಲ ಮೇಲೆ ಹಾಕಿ ತೀರದ ಪಕ್ಕದ ಸಮಾಂತರ ರಸ್ತೆ ಹಿಡಿದು ಅವರಿಬ್ಬರೂ ರೈಲ್ವೆ ಹಳಿ ದಾಟಿ ಸ್ಟೇಷನ್ನಿನ ಮುಖ್ಯದ್ವಾರದಿಂದಾಚೆ ಇರುವ ಹಳೆ ಬಸ್ಟ್ಯಾಂಡಿನ ಹಾದಿ ಹಿಡಿಯಲು ಹೊರಟರು. ದಾರಿಯುದ್ದ ಬೆಂಗಳೂರಿನˌ ಫೊಟೊಗ್ರಫಿಯˌ ರೈಲಿನ ಹೀಗೆ ಮೊದಲದರ ಉತ್ತರ ಸಿಗುವ ಮೊದಲೆ ಕ್ಷಣಕ್ಕೊಂದು ಹೊಸ ಪ್ರಶ್ನೆ ಎಸೆಯುತ್ತಿದ್ದ ಸುಭಾಶನ ಪ್ರಶ್ನಾ ಸರಣಿಗಳಿಗೆ ಸಮಾಧಾನದಿಂದ ಉತ್ತರಿಸುತ್ತಾ ಅವನ ದಾರಿ ಸುಲಭವಾಗಿ ಸವೆಯುತ್ತಿತ್ತು.

ಕಾಙಂನಗಾಡಿಗೊಂದು ಹೊಸ ಬಸ್ ನಿಲ್ದಾಣ ತಯಾರಾಗಿದ್ದರೂ ಹಳೆ ಚಾಳಿ ಬಿಡಲೊಲ್ಲದ ಬಸ್ಸುಗಳೆಲ್ಲ ಒಮ್ಮೆ ಇಕ್ಕಟ್ಟಾದ ಈ ಹಳೆ ನಿಲ್ದಾಣವನ್ನ ಹೊಕ್ಕ ಶಾಸ್ತ್ರ ಮಾಡಿಯೆ ಅಲ್ಲಿಂದ ಒಂದೂವರೆ ಕಿಲೋಮೀಟರು ದೂರದಲ್ಲಿರುವ ಹೊಸ ನಿಲ್ದಾಣದತ್ತ ದೌಡಾಯಿಸುತ್ತಿದ್ದವು. ಆ ಹಳೆ ನಿಲ್ದಾಣದ ಸಂದಿಗೊಂದಿಯ ನಡುವೆ ಇತ್ತು ಮೊಯಿದ್ದಿಯ ಬದ್ರಿಯಾ ಕಲರ್ ಲ್ಯಾಬ್. ಮಿಷನ್ ಕೆಟ್ಟಿದೆ. ಹೀಗಾಗಿˌ ಚಿತ್ರಗಳನ್ನ ಪ್ರಿಂಟ್ ಹಾಕಲು ಸಾಧ್ಯವಿಲ್ಲ. ಬೇಕಿದ್ದರೆ ನಾಳೆ ಕಾಸರಗೋಡಿಂದ ಹಾಕಿಸಿ ತರುವೆ ಅಂತಲೂ ಅಂದ ಮೊಯಿದ್ದಿ. ಬೇರೆ ದಾರಿ ಇರಲಿಲ್ಲ. ಕ್ಯಾಮರಾದ ಮೆಮೊರಿ ಕಾರ್ಡನ್ನ ಅವನಿಗೊಪ್ಪಿಸಿ ಚೂರು ಅಡ್ವಾನ್ಸ್ ಕೊಟ್ಟು ಅವರಿಬ್ಬರ ಸವಾರಿ ಹತ್ತಿರದಲ್ಲಿದ್ದ ಉಡುಪಿ ಶ್ಯಾನುಭೋಗರ "ಮೈಸೂರು ರಿಫ್ರೆಶ್ಮೆಂಟ್" ಕಡೆಗೆ ತಿರುಗಿತು. 

( ಇನ್ನೂ ಇದೆ.)



https://youtu.be/AzTZVLxcwwM

23 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೨.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೨.👊

ಮಲಯಾಳಿಗಳು ತಮ್ಮ ನಾಡಿನಾದ್ಯಂತ ನಿರ್ಮಿಸಿರುವ ಇಂತಹ ವಿಷ್ಣು ದೇವಸ್ಥಾನಗಳ ಮೂಲ ಬಿಂಬವನ್ನ ಕಡುಶರ್ಕರ ಪಾಕದಲ್ಲಿ ಕೆಲವು ಗಿಡಮೂಲಿಕೆಗಳನ್ನ ಬಳಸಿ ನಿರ್ಮಿಸುತ್ತಾರೆ. ಹೀಗಾಗಿ ಆರಾಧನೆಯ ಮೂಲಬಿಂಬಕ್ಕೆ ಅಭಿಷೇಕ ಮಾಡಲು ಅವಕಾಶವಿರೋದಿಲ್ಲ. ಕೇವಲ ಆಯ್ದ ಕೆಲವು ಹೂಗಳಿಂದ ಅಲಂಕಾರವನ್ನು ಮಾತ್ರ ಈ ಮೂಲಬಿಂಬಗಳಿಗೆ ಮಾಡುತ್ತಾರೆ. ಆ ಹೂವುಗಳ ನೈರ್ಮಾಲ್ಯವನ್ನೂ ಸಹ ನವಿಲುಗರಿಗಳ ಕುಂಚದಲ್ಲಿ ಮೃದುವಾಗಿ ಸರಿಸಿ ತೆಗೆಯಲಾಗುತ್ತದೆ. ಅರ್ಚನೆ ಅಭಿಷೇಕ ಹಾಗೂ ನೈವೇದ್ಯಕ್ಕೆ ಅದೆ ದೇವರ ಪ್ರತ್ಯೇಕ ಸ್ವರ್ಣಬಿಂಬವೊಂದನ್ನೂˌ ಉತ್ಸವ ಮೂರ್ತಿಯಾಗಿ ಮತ್ತೊಂದು ಬೆಳ್ಳಿಬಿಂಬವನ್ನೂ ಇಟ್ಟುಕೊಂಡಿರೋದು ಅಲ್ಲಿನ ದೇವಸ್ಥಾನಗಳ ಕ್ರಮ. 


ಕಡುಶರ್ಕರಪಾಕದೊಂದಿಗೆ ಮೂಲಿಕೆಗಳನ್ನ ಬಳಸಿಯೆ ನಿರ್ಮಿಸಲಾಗಿರುವ ತಿರುವನಂತಪುರದ ಶ್ರೀಅನಂತಪದ್ಮನಾಭಸ್ವಾಮಿಯ ಬಿಂಬದಲ್ಲಿ ನೇಪಾಳದ ಗಂಡಕಿ ನದಿಯಿಂದ ತರಿಸಿರುವ ಹನ್ನೆರಡು ಸಾವಿರದ ಎಂಟು ಸಾಲಿಗ್ರಾಮಗಳನ್ನ ಹುದುಗಿಸಿಡಲಾಗಿದೆ. ಯೋಗನಿದ್ರೆಯಲ್ಲಿ ಮಲಗಿದ ಭಂಗಿಯಲ್ಲಿರುವ ಅದಕ್ಕೂ ಅಭಿಷೇಕ ಇಲ್ಲ. ಕೇವಲ ಪುಷ್ಪಾಲಂಕಾರ ಮಾತ್ರ ಮಾಡಿ ಅದನ್ನ ನವಿಲುಗರಿಯ ಪುಚ್ಛದಿಂದ ಸ್ವಚ್ಛಗೊಳಿಸೋದು ಅಲ್ಲಿನ ನಿತ್ಯದ ಕ್ರಮ. ಅಭಿಷೇಕ ಹಾಗೂ ಆರತಿಗೆ ತನ್ನಿಬ್ಬರು ಮಡದಿಯರ ಜೊತೆಗೆ ನಿಂತಿರುವ ವಿಷ್ಣುವಿನ ಸ್ವರ್ಣಪುತ್ಥಳಿ ಅಲ್ಲಿದೆ. ಉತ್ಸವಕ್ಕಾಗಿ ಮಾತ್ರ ಕೂತ ಭಂಗಿಯಲ್ಲಿ ಒಂದು ಬೆಳ್ಳಿಯ ಅನಂತಪದ್ಮನಾಭನನ್ನ ಮಾಡಿಸಿಟ್ಟಿದ್ದಾರೆ. ತಮ್ಮ ಪೂರ್ವಜ ಮಹಾಬಲಿಯನ್ನೆ ದಮನಿಸಿದ ಸುರ ಕುಲದ ಮಹಾವಿಷ್ಣು ಇಂದು ಕೇರಳದ ಮಲಯಾಳಿಗಳ ಕುಲದೈವವಾಗಿರುವುದು ವ್ಯಂಗ್ಯ ವಾಸ್ತವ.


*****


ಇಂತಿಪ್ಪ ದ್ವಂದ್ವದಲ್ಲೆ ಉಳಿದು ಬೆಳೆದಿರುವ ಕೇರಳದ ಸಮಾಜದಲ್ಲಿ ಪ್ರಮುಖವಾಗಿ ಅವನ ಮನ ಸೆಳೆದ ಎರಡಂಶಗಳೆಂದರೆ ಮಲಯಾಳಿಗಳ ಅಕ್ಷರ ಪ್ರೀತಿ ಹಾಗೂ ಅವರಲ್ಲಿನ ಲಿಂಗಾನುಪಾತ. ಪ್ರತಿಯೊಬ್ಬರು ಅಕ್ಷರಸ್ಥರಾಗಬೇಕು ಅನ್ನುವ ಅಲ್ಲಿನವರ ಆಶಯ ಇತ್ತೀಚಿನ ಆಳುವವರ ಕಾರ್ಯತತ್ಪರತೆಯಿಂದ ಸಾಧ್ಯವಾಗಿದ್ದರೂ ಕೂಡˌ ಅದಕ್ಕೆ ಒತ್ತಾಸೆಯನ್ನ ರಾಜಾಳ್ವಿಕೆಯ ಕಾಲದಿಂದಲೂ ಆಳರಸರು ನಿಯತ್ತಾಗಿ ಕೊಡುತ್ತಾ ಬಂದಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಟ್ಟ ಸ್ವಾತಂತ್ರ್ಯಪೂರ್ವ ಭಾರತದ ಕೆಲವೆ ಕೆಲವು ರಾಜ್ಯಗಳಲ್ಲಿ ತಿರುವಾಂಕೂರು-ಕೊಚ್ಚಿನ್ ಜಂಟಿ ಸಂಸ್ಥಾನವೂ ಸಹ ಒಂದು. ಅದೆ ಮೇಲ್ಪಂಕ್ತಿಯನ್ನ ಅನುಸರಿಸಿರುವ ಪ್ರಜಾಪ್ರಭುತ್ವಕಾಲದ ಸ್ವತಂತ್ರ್ಯೋತ್ತರ ಜನಪ್ರತಿನಿಧಿಗಳು ಶಿಕ್ಷಣ ಅದು ಪ್ರಾಥಮಿಕವೆ ಇರಲಿ ಅಥವಾ ಸ್ನಾತಕೋತ್ತರವೆ ಆಗಿರಲಿ ಅದರ ಗುಣಮಟ್ಟ ಕಾಯ್ದುಕೊಳ್ಳಲು ಪರಿಶ್ರಮಿಸಿದ್ದಾರೆ.

ಇನ್ನು ಅಲ್ಲಿನ ಲಿಂಗಾನುಪಾತ. ಇಡಿ ದೇಶದಲ್ಲೆ ಈ ಮಲಯಾಳಿಗಳನ್ನ ಬಿಟ್ಟರೆ ಈಶಾನ್ಯ ರಾಜ್ಯಗಳ ಗುಡ್ಡಗಾಡಿನ ಬುಡಕಟ್ಟಿನವರಲ್ಲಿ ಮಾತ್ರ ಸರಾಸರಿ ಅನುಪಾತದಲ್ಲಿ ಹುಡುಗಿಯರ ಸಂಖ್ಯೆ ಹುಡುಗರಿಗಿಂತ ಹೆಚ್ಚಿದೆ. ಸಂಪೂರ್ಣ ಸಾಕ್ಷರ ರಾಜ್ಯವಾಗಿರುವ ಕೇರಳದಲ್ಲಿ ಇಂದು ಪ್ರತಿ ಸಾವಿರ ಪುರುಷರಿಗೆ ಸಾವಿರದ ನೂರು ಚಿಲ್ಲರೆ ಮಹಿಳೆಯರಿದ್ದಾರೆ! ಇದಕ್ಕೆ ಬಹುಶಃ ಅವರಲ್ಲಿ ಮತಾತೀತವಾಗಿ ಬಹುಪಾಲು ಮಲಯಾಳಿಗಳು ಅನುಸರಿಸುವ ಕೌಟುಂಬಿಕ ಪದ್ಧತಿಯೂ ಸಹ ಕಾರಣವಾಗಿರಬಹುದು.

ತುಳುನಾಡಿನಂತೆ ಅಳಿಯ ಕಟ್ಟು ಪದ್ಧತಿಯನ್ನ ಕೌಟುಂಬಿಕ ವ್ಯವಹಾರಗಳಿಗೆ ಬಳಸುವ ಪದ್ಧತಿ ಕೇರಳದಲ್ಲೂ ಇದೆ. "ಮರಿಮಕ್ಕತ್ತಾಯ" ಅಂತ ಅಲ್ಲಿನವರು ಕರೆಯುವ ಈ ಪದ್ಧತಿಯಲ್ಲಿ ಮನೆಯ ಯಜಮಾನಿಕೆ ಹಿರಿಯ ಹೆಣ್ಣು ಕೂಸಿನದ್ದೆ ಹೊರತು ಅವಳ ಗಂಡನದ್ದಲ್ಲ. ಅವಳ ಹಾಗೂ ಅವಳ ಮಕ್ಕಳ ದೇಖಾರೇಕಿಯ ಜವಬ್ದಾರಿಯೂ ಸಹ ಅವಳ ಗಂಡನಿಗಿರೋದಿಲ್ಲ. ಅವಳ ಹಿರಿಯ ಸಹೋದರನೆ ಮನೆಯ ಹೊರಗಿನ ವ್ಯವಹಾರಗಳನ್ನ ಅವಳ ಹೆಸರಲ್ಲಿ ನಡೆಸುತ್ತಾನೆ. ಅವ ಸತ್ತರೆ ಅವನ ಶವ ಸಂಸ್ಕಾರ ನಡೆಸುವ ಹಕ್ಕು ಸಹ ಅವನ ಮಕ್ಕಳಿಗಿಲ್ಲ. ಅದು ಅವನ ಲಾಲನೆ ಪಾಲನೆಯಲ್ಲಿ ಬೆಳೆಯುವ ಸಹೋದರಳಿಯರ ಬಾಧ್ಯತೆ.


*****


"ತುಮ್ಹಾರೇ ಸಹಾರೇ
ನಿಕಲ್ ಥೋ ಪಡೇ ಹೈಂ.
ಹೈಂ ಮಂಜಿ಼ಲ್ ಕಹಾಂ? 
ಯಹಂ ನಾ ಜಾನೇˌ/
ಜೋ ತುಮ್ ಸಾಥ್ ದೋಗೇ
ಥೋ ಆಏಗೀ ಏಕ್ ದಿನ್ˌ
ಮಂಜಿ಼ಲ್ ಗಲೇ ಸೇ ಲಗಾನೇ!
ಇತನಾ ಥೋ ದಿಲ್ ಕೋ ಯಕೀನ್ ಹೈಂ.
ಹಮೇ ತುಮ್ ಧಗಾ ಥೋ ನಾ ದೋಗೇˌ
ಅಗರ್ ಹಮ್ ಯಹಂ ಪೂಛೇ ಕೇ ದಿಲ್ ಮೈ.
ಬಸಾಕೇ ಭುಲಾ ಥೋ ನಾ ದೋಗೇ!//"


ಎಡೆ ಸಿಕ್ಕರೆ ಸಾಕು ಒಳಗೆ ನುಗ್ಗಿ ಬರಲು ಹವಣಿಸುವ ಬೆಳಕ ಪ್ರವಾಹಕ್ಕೆ ಕಿಟಕಿ ಪರದೆಯ ಬಾಂಧನ್ನ ಬಿಗಿದು ನಡುವೇಗದಲ್ಲಿ ಪಂಖವನ್ನ ಚಾಲನೆಯಲ್ಲಿಟ್ಟು ಹಾಗೆಯೆ ಹಾಡನ್ನ ಕೇಳುತ್ತಲೆ ಅರೆಬತ್ತಲೆಯಾಗಿ ಹಾಸಿಗೆಯ ಮೇಲೆ ಅಡ್ಡಾದ.


ಕಣ್ಣು ಮುಚ್ಚಿ ನಿದ್ರೆಯನ್ನ ಆಹ್ವಾನಿಸಿದರೂ ಅದೇಕೋ ಅದರ ಅಪ್ಪುಗೆ ಅಷ್ಟು ಸುಲಭದಲ್ಲಿ ಸಿಗಲಿಲ್ಲ. ಮೊದಲಿನಿಂದಲೂ ಸಂಬಂಧಗಳನ್ನ ಬೆಳೆಸುವ ಹಾಗೂ ಮುರಿದುಕೊಳ್ಳುವ ವಿಚಾರದಲ್ಲಿ ಕಡು ನಿಷ್ಠುರನಾಗಿದ್ದ ಅವ. ಸುಲಭವಾಗಿ ಯಾರನ್ನೂ ಇಷ್ಟಪಡಲೊಲ್ಲ. ಆದರೆ ಯಾರನ್ನಾದರೂ ಪ್ರೀತಿಸಲಾರಂಭಿಸಿದರೆ ಬಯಸಿದರೂ ಅವರನ್ನ ಬಿಡಲೊಲ್ಲ. ಪ್ರೀತಿ ಹಾಗೂ ಅವಜ್ಞೆ ಎರಡೂ ವಿಪರೀತದ ಹಂತಕ್ಕೆ ಒಯ್ಯುವ ಅವನ ಮನಸ್ಥಿತಿ ಹಾಗೆ ಬೆಳೆದು ಬರಲು ಬಾಲ್ಯದಿಂದ ಅವನನ್ನ ಕಾಡಿ ಕೆಂಗೆಡಿಸಿ ಹಿಪ್ಪೆ ಮಾಡಿ ಹಾಕಿದ್ದ ಒಂಟಿತನವೂ ಪ್ರಮುಖ ಕಾರಣವಾಗಿದ್ದಿರಲಿಕ್ಕೆ ಸಾಕು.


ಈ ಒಂದು ವಿಷಯದಲ್ಲಿ ಅವನು ಒಮ್ಮೆ ಒಲಿದು ಬಂದಾದ ಮೇಲೆ ಕೇವಲ ತನ್ನ ಸಂಗಾತಿಯನ್ನ ಮಾತ್ರ ಬಲವಾಗಿ ನಂಬಿ ಗೂಡನ್ನ ತಾನೆ ಪೂರ್ತಿಯಾಗಿ ಮುಚ್ಚಿ ಒಲವಿನ ತುತ್ತಿಗೆ ಕೇವಲ ಕೊಕ್ಕನಷ್ಟೆ ಹೊರ ಬಿಟ್ಟುಕೊಂಡು ನಾಳೆಯ ನಿರೀಕ್ಷೆಗಳ ತತ್ತಿಗಳಿಗೆ ಕಾವು ಕೊಡಲು ಕೂತ ಮಂಗಟ್ಟೆ ಹಕ್ಕಿಯ ಹಾಗೆ. ಒಂದೊಮ್ಮೆ ಅವನ ಸಂಗಾತಿಗೆ ಇನ್ಯಾರದ್ದೋ ಆಕರ್ಷಣೆಯ ಗುಂಡು ತಗುಲಿ ಅದವನನ್ನ ಮರೆತು ತ್ಯಜಿಸಿ ಹೋದರೆˌ ಸಂಗಾತಿಯ ಬರುವಿಗಾಗಿ ಸದಾ ಕನವರಿಸುತ್ತಾ ಉಪವಾಸ ಉಳಿದು ಹಾಗೆಯೆ ಆ ಒಲವಿನ ಗೂಡೊಳಗೆ ಬಂಧಿಯಾಗಿಯೆ ಸತ್ತಾನೆಯೆ ಹೊರತುˌ ಮರೆ ಸರಿಸಿ ಎಂದೂ ಹೊರಬರಲರಿಯ. ಭಾವನೆಯ ಬೇಲಿ ದಟ್ಟವಾಗಿದ್ದರಷ್ಟೆ ಅವನಿಗೆ ಉತ್ಕಟವಾಗಿ ಸಂಬಂಧದ ನೀಲಿ ಹೂವನ್ನ ಅದರ ಮೇಲೆ ಹಬ್ಬಿಸುತ್ತಾ ಬದುಕುಳಿಯಲು ಸಾಧ್ಯ. ಇದವನ ದೌರ್ಬಲ್ಯ.

"ಜ಼ಮೀನ್ ಸೇ ಹಮೇಂ
ಆಸಮಾನ್ ಪರ್.
ಬಿಠಾ ಕೇ ಗಿರಾ ಥೋ ನಾ ದೋಗೇ?ˌ/
ಅಗರ್ ಹಮ್ ಯಹಂ ಪೂಛೇ 
ಕೇ ದಿಲ್ ಮೈ.
ಬಸಾ ಕೇ ಭುಲಾ ಥೋ ನಾ ದೋಗೇ?//

ಹಾಡು ಮುಗಿದರೂ ಪ್ರಯತ್ನ ಮೀರಿ ಕಣ್ರೆಪ್ಪೆ ತೋಯಿಸಿ ನಾಡಿಯತ್ತ ಹರಿದ ಕಂಬನಿ ನಿಂತಿರಲಿಲ್ಲ. ಹಾಗೆಯೆ ದಣಿದ ಮನಸಿಗೆ ನಿದ್ರೆಯ ಅಮಲು ಹತ್ತಿತು. ದೇಹದ ಸುಸ್ತು ಕಳೆಯಲವನಿಗೊಂದು ನೆಮ್ಮದಿಯ ನಿದಿರೆಯ ಅವಶ್ಯಕತೆಯಿತ್ತು.

ಎಚ್ಚರವಾದಾಗ ಬೆಳಗ್ಯೆ ಪೂರ್ವದ ಕಿಡಕಿಯಿಂದ ಧುಮುಕಲು ಕಾತರಿಸುತ್ತಿದ್ದ ಬಿಸಿಲ ಧಗೆ ಪಶ್ಚಿಮದ ಕಿಟಕಿಯ ಪರದೆಯನ್ನ ಉರಿಸುತ್ತಿದ್ದುದು ಗೋಚರಿಸಿತು. ಘಂಟೆ ಮೂರಾದದ್ದನ್ನ ಕೈಫೋನಿನ ಪರದೆ ಖಾತ್ರಿ ಪಡಿಸಿತು. ಆಲಸ್ಯದಿಂದ ಮಲಗಿದಲ್ಲೆ ಮೈಯಲ್ಲಿದ್ದ ಕೀಲುಗಳಿಂದೆಲ್ಲಾ ಸದ್ದೇಳುವಂತೆ ಸಶಬ್ದವಾಗಿ ಮೈಮುರಿದ. ತಾನಿಂದು ಕೋಣೆಯಲ್ಲೆ ಮಲಗಿರುವುದು ಗೊತ್ತಿರುವ ನಾಯರ್ ಖಂಡಿತವಾಗಿ ತನ್ನ ಪಾಲಿನ ಊಟ ತೆಗೆದಿಟ್ಟು ಕಾದಿರುತ್ತಾರೆ ಅನ್ನುವುದು ನೆನಪಾಗಿ ದೊಡ್ಡದಾಗಿ ಬಾಯಿ ಹರಿದು ಹೋಗುವಂತೆ ಆಕಳಿಸುತ್ತಾ ಮೇಲೆದ್ದು ಸ್ನಾನದ ಕೋಣೆಗೆ ತೆರಳಿ ಮುಖಕ್ಕೆ ನೀರೆರಚಿಕೊಂಡು ಜಿಡ್ಡುಗಟ್ಟಿದ್ದ ಗಲ್ಲ ಹಣೆ ಮೂಗು ಕೆನ್ನೆ ತಿಕ್ಕಿ ತೊಳೆದುಕೊಂಡ. ಹೊರಗಿನ ಧಗೆ ಅಧಿಕವಾಗಿದ್ದಿದ್ದಕ್ಕೋ ಏನೋ ತಣ್ಣೀರ ಮುಖ ಮಾರ್ಜನ ಹಿತಕಾರಿ ಅನಿಸಿತು.

ಬಾಗಿಲನ್ನ ತೆರೆದ ಕೂಡಲೆ ಹೊರಗಿನ ಬಿಸಿಗಾಳಿ ಮುಖಕ್ಕೆ ರಪ್ಪನೆ ರಾಚಿತು. ಬಿಸಿಲಿನ್ನೂ ಬಾಡಿರಲಿಲ್ಲ. ಮೆಟ್ಟಿಲಿಳಿದು ಹೋದವನಿಗೆ ನಿರೀಕ್ಷೆಯಂತೆ ನಾಯರನ ಅಕ್ಕರೆಯ ಭೋಜನ ಕಾದಿತ್ತು. 

( ಇನ್ನೂ ಇದೆ.)



https://youtu.be/245b6zE7IIc

22 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೧.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೧.👊

ಇಷ್ಟಲ್ಲದಿದ್ದರೆ ಇಡಿ ದೇಶವನ್ನೆ ಅದೂ ಹತ್ತು ಹದಿನೈದು ವರ್ಷಗಳಿಂದ ಕೇವಲ ತನ್ನ ಪ್ರಭಾವಳಿಯನ್ನ ಹೆಚ್ಚಿಸಿಕೊಳ್ಳುವ ಪುಂಖಾನುಪುಂಖವಾದ ಹುಸಿ ವದಂತಿಗಳನ್ನ ಹಬ್ಬಿಸಿಯೆ ನಿರಂತರವಾಗಿ ಏಮಾರಿಸಲು ಗಡ್ಡಬಿಟ್ಟ ಒಬ್ಬ ಮಡ್ಡನಿಗೆ ಸಾಧ್ಯವಾಗುತ್ತಿತ್ತಾ ಅಂತ ಯೋಚಿಸಿದವನಿಗೆ ನಗು ಬಂತು.

ನಮ್ಮ ದೇಶದಲ್ಲಿ ಬಾಯಿ ಬಡಾಯಿಕೋರರಿಗೆ ಹಾಗೂ ಛದ್ಮವೇಶಧಾರಿಗಳಿಗೆ ಸಿಗುವಷ್ಟು ಮರ್ಯಾದೆ ಬಹುಶಃ ಇನ್ಯಾವ ಸಭ್ಯಸ್ಥ ಸರಳ ಬದುಕಿನ ನೇರ ನಡೆ ನುಡಿ ಹೊಂದಿರುವವರಿಗೆ ಸಿಗುವುದಿಲ್ಲ ಅನ್ನೋದು ಕರಾಳ ವಾಸ್ತವ. ದೇಶದ ಅಧೋಗತಿಗೂ ಬಹುತೇಕ ಅದೆ ಕಾರಣವೆನ್ನುವ ಸತ್ಯಾಂಶ ಕಣ್ಣಿಗೆ ರಾಚುವಂತೆ ಗೋಚರಿಸುತ್ತಿದ್ದರೂ ಅಯೋಗ್ಯರ ವ್ಯಕ್ತಿಪೂಜೆಗಿಳಿವ ಅತಿಬುದ್ಧಿವಂತರು ತಮ್ಮ ಹುಟ್ಟು ಚಾಳಿಯನ್ನ ಸುಟ್ಟರೂ ಬಿಡಲೊಲ್ಲರು.

ನಿತ್ಯಾನಂದರೇನು ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದವರಲ್ಲ. ಹಾಗಂತ ಅನಕ್ಷರಸ್ಥರೂ ಆಗಿರಲಿಲ್ಲ. ಮಾತೃಭಾಷೆ ಮಲಯಾಳಂ ಜೊತೆಗೆ ಕನ್ನಡˌ ಸ್ವಲ್ಪ ಮಟ್ಟಿಗೆ ಹಿಂದಿ ಹಾಗೂ ಇಂಗ್ಲಿಷ್ ಎರಡನ್ನೂ ಓದಿ ಬರೆಯವಷ್ಟು ಅಕ್ಷರ ಜ್ಞಾನ ಅವರಿಗಿತ್ತು. ಮನೆಭಾಷೆ ಮಲಬಾರಿ ಮಲಯಾಳಂ ಜೊತೆಗೆ ಸರಾಗವಾಗಿ ತುಳುˌ ತುಳುನಾಡಿನ ಧಾಟಿಯ ಕನ್ನಡˌ ಗೋವನಿ ಕೊಂಕಣಿˌ ಗಾಂವಟಿ ಮರಾಠಿˌ ಮುಂಬೈಯಾ ಹಿಂದಿ ಹಾಗೂ ತಕ್ಕ ಮಟ್ಟಿಗೆ ಇಂಗ್ಲೀಷಿನಲ್ಲೂ ಸಂವಹಿಸಲು ಅವರಿಗೆ ಸಾಧ್ಯವಿತ್ತು.

ಇಂದಿನ ಸ್ವಯಂಘೋಷಿತ ದೇವಮಾನವರಂತೆ ಅವರು ಭಕ್ತಾದಿಗಳಲ್ಲಿ ಬೇಧವೆಣಿಸಲಿಲ್ಲˌ ಹೆಸರೆ ಹೇಳಲಂಜುವ ಕಾಙಂನಗಾಡಿನ ಕೊರಗನಿಂದ ಹಿಡಿದುˌ ಮುಂಬೈಯ ಹೊಟೇಲುದ್ಯಮಿˌ ಸೂರತಿನ ಸಿಂಧಿ ವಜ್ರೋದ್ಯಮಿˌ ಆ ಕಾಲದ ದೊಡ್ಡ ಸಾಹುಕಾರ ಲಕ್ಷ್ಮಣ ಸಾ ಖೋಡೆಯವರೆಗೆ ಅವರಿಗೆ ಎಲ್ಲರೂ ಸರಿಸಮಾನರು. ಯಾವುದೆ ತೋರಿಕೆಯ ಆಡಂಬರದಿಂದ ದೂರವಿದ್ದ ಅವರದ್ದು ಕೌಪಿನವೊಂದೆ ಶಾಶ್ವತ ಧಿರಿಸು. ಸುಗಂಧ ಪೂಸಿಕೊಂಡು ಸೌಂದರ್ಯ ಪ್ರಸಾದನಗಳನ್ನ ಬಳಸಿಕೊಂಡು ದೊಡ್ಡಾಟವಾಡುವ ಕಳ್ಳಗುರುಗಳೆಲ್ಲ ಅವರಿಗೆ ಈಡಲ್ಲ. ವಾಸ್ತವದ ಅಧ್ಯಾತ್ಮಿಕತೆಯ ಜಿಜ್ಞಾಸುಗಳು ಹಿಂಬಾಲಿಸಬೇಕಿರೋದು ಅಸಲಿ ಭಗವಾನ್ ನಿತ್ಯಾನಂದರನ್ನೆ ಹೊರತು ಇಂದಿನ ನಕಲಿ ಭಗ"ವಾನರ" ನಿತ್ಯ ಆನಂದಿಗಳನ್ನಂತೂ ಅಲ್ಲವೆ ಅಲ್ಲ.

ತೋರಿಕೆಗೆ ಅವರೆಂದೂ ಢೋಂಗಿ ಇಂದ್ರಜಾಲದ ಕಣ್ಕಟ್ಟು ತೋರಿಸಿ ಜನರನ್ನ ವಂಚಿಸಲಿಲ್ಲ. ನೂರೆಂಟು ಸ್ಕೀಮುಗಳನ್ನ ಹೇಳಿಕೊಂಡು ಬಂದು ಸಂಗ್ರಹಿಸಿದ ದೇಣಿಗೆಯಲ್ಲಿ ಈ ಕಾಲದ ಸತ್ತಕುರುಗಳಂತೆ ಬಿಎಂಡಬ್ಲೂ ಬೈಕು ಖರೀದಿಸಿ ಫೋಸು ಕೊಡಲಿಲ್ಲˌ ಕ್ಯಾರವಾನ್ ಕಾರು ಖರೀದಿಸಿ ಭಾರತದ ಮಣ್ಣು ಉಳಿಸಲು ಅಮೇರಿಕಾದ ಮಣ್ಣಿನಲ್ಲಿ ಜಾಲಿಟ್ರಿಪ್ಪು ಹೊಡೆಯಲಿಲ್ಲ. ಕರಡಿಯಂತೆ ಕೆದರಿದ ಕೂದಲು ಬಿಟ್ಟುಕೊಂಡು ದಿನಕ್ಕೊಂದು ರಂಗುರಂಗಿನ ನೈಟಿ ಹಾಕಿಕೊಂಡು ಬೀದಿ ಬದಿಯ ದೊಂಬರಂತೆ ಅಗ್ಗದ ಜಾದೂ ಮಾಡಿಕೊಂಡು ಜನರ ಮೇಲೆ ಮಂಕು'ಬೂದಿ' ಎರಚಲಿಲ್ಲ. ಮೈಕು ಸಿಕ್ಕ ಕೂಡಲೆ ಲೌಡಿಕದ್ದೆಯ ಕುರುಕುರು ಛೀಗಳಂತೆ ಕನಿಷ್ಠ ಪಕ್ಷ "ಒಂದೆ"ಗೂ "ವಂದೆ"ಗೂ ವ್ಯತ್ಯಾಸವನ್ನರಿಯದೆ ಉದ್ದುದ್ದ ಭಾಷಣ ಚೂಡಿ ಜನರನ್ನ ಏಮಾರಿಸಲಿಲ್ಲ.

ಅದೆಲ್ಲ ಹೋಗಲಿ ತನ್ನನ್ನ ತಾನು ಗುರುವೆಂದೆ ಎಂದೂ ಬೋರ್ಡು ಹಾಕಿಕೊಂಡು ತಿರುಗಲಿಲ್ಲ. ವಾಸ್ತವದಲ್ಲಿ ಜನರಿಂದ ದೂರಕ್ಕೆ ಉಳಿದು ಅಗತ್ಯ ಬಿದ್ದಾಗ ಮಾತ್ರ ಹತ್ತಿರ ಕರೆದು ಅವರ ಸಮಸ್ಯೆಗಳನ್ನ ಆಲಿಸಿದರು. ತನ್ನಿಂದಾಗುವ ಪರಿಹಾರ ಸೂತ್ರವನ್ನ ಬೋಧಿಸಿದರು. ನಿಜವಾದ ಆ ಭಗವಂತ ಈ ಭೂಮಿಯ ಮೇಲೆ ನಡೆದರೆ ಹೇಗಿರಬಹುದೋ ಹಾಗೆ ಬಾಳಿ ತೋರಿಸಿದರು. ಶಿರಡಿಯ ಸಾಯಿಬಾಬಾˌ ಮುಕುಂದೂರು ಸ್ವಾಮಿಗಳುˌ ಹುಬ್ಬಳ್ಳಿಯ ಸಿದ್ಧಾರೂಢರುˌˌ ಶ್ರೀಧರ ಸ್ವಾಮಿಗಳಷ್ಟೆ ಸರಳರು ಪೂಜ್ಯರು ಆಗಿದ್ದವರೆ ಈ ಅವನ ಪಾಲಿನ "ಅಜ್ಜ" ನಿತ್ಯಾನಂದರು.

ಆದರೂ ಅವರಿದ್ದಾಗಲಾಗಲಿˌ ಹೋದ ಮೇಲಾಗಲಿ ಅವರ ಭಕ್ತಾದಿಗಳಾದವರಿಗೆ ಬರವಿಲ್ಲ. ಯಾವುದೆ ಚಿಲ್ಲರೆ ಶೋಕಿ ಮಾಡದೆˌ ಕೇವಲ ಕೌಪೀನ ಮಾತ್ರ ಧರಿಸಿಕೊಂಡಿದ್ದುˌ ಯಾರ ಊಹೆಗೂ ಎಟುಕದೆˌ ನಿತ್ಯ ಪರಿವ್ರಾಜಕರಾಗಿದ್ದುಕೊಂಡು ದೀನ-ದಲಿತರ ಸೇವೆಗೆ ಸಮಾಜವನ್ನ ಹುರಿದುಂಬಿಸಿಕೊಂಡಿದ್ದ ಅವರೆಂದೂ ಇಂದಿನ ತಥಾಕಥಿತ ಗುರೂಜಿಗಳಂತೆ ಧರ್ಮದ ವ್ಯಾಪಾರಕ್ಕೆ ಅಂಗಡಿ ತೆರೆದು ಕೂರಲಿಲ್ಲ.

ಆದರೂˌ ಅವರ ಅಪಾರ ಹಿಂಬಾಲಕರು ಅವರ ಕರ್ಮಭೂಮಿ ಕಾಙಂನಗಾಡಿನಲ್ಲೂˌ ಕೊನೆಯ ಕಾಲ ಕಳೆದ ಸಮಾಧಿ ಸ್ಥಳ ಗಣೇಶಪುರಿಯಲ್ಲೂ ಅವರ ಸ್ಮಾರಕ ಆಶ್ರಮ ತೆರೆದು ಅವರ ಆದರ್ಶದ ಆಶಯಗಳನ್ನ ಅನುಗಾಲವೂ ಜೀವಂತವಾಗಿರಿಸಲು ಶ್ರಮಿಸುತ್ತಿದ್ದಾರೆ. ಕಾಙಂನಗಾಡಿನಲ್ಲಿ ಅವರ ಹೆಸರಿನಲ್ಲಿ ಶಾಲೆ ಹಾಗೂ ಪಾಲಿಟೆಕ್ನಿಕ್ ಕಾಲೇಜೊಂದು ನಡೆಯುತ್ತಿದೆ. ಅದರ ಆದಾಯದಿಂದಲೆ ಆಶ್ರಮದ ಖರ್ಚು ನಿರ್ವಹಿಸುತ್ತಾರೆ. ಇಲ್ಲಿಗೆ ಭೇಟಿ ಕೊಡುವ ಭಕ್ತಾದಿಗಳಿಗೆ ಊಟ - ವಸತಿ ಉಚಿತ. ಯಾರೂ ಯಾವ ಕಾರಣಕ್ಕೂ ಹಣಕ್ಕಾಗಿ ಒತ್ತಾಯಿಸರು. ಭಕ್ತರೆ ತಾವಾಗಿ ದೇಣಿಗೆ ನೀಡಿದರೆ ಮಾತ್ರ ಸ್ವೀಕರಿಸುತ್ತಾರೆ. ಅನ್ನದಾನ ಮಾಡಿಸಿದರೆ ಅದಕ್ಕೆ ಪ್ರೋತ್ಸಾಹಿಸುತ್ತಾರೆ. ಉಳಿದಂತೆ ನಿತ್ಯದ ಪೂಜೆ-ಪುನಸ್ಕಾರಗಳು ಅನೂಚಾನಾಗಿ ನಡೆಯುತ್ತವೆ.

ಗುರುವನ ಸಹ ನಿತ್ಯಾನಂದರದ್ದೆ ಸೃಷ್ಟಿ. ಬಹುಶಃ ಕರಾವಳಿ ಮುಗಿದು ದಕ್ಷಿಣ ಕೊಡಗಿನಂಚಿನ ಮಲೆಸೀಮೆ ಆರಂಭವಾಗುವ ಪಶ್ಚಿಮಘಟ್ಟದ ಪಾದದಲ್ಲಿ ಅದಿದೆ. ಸ್ವಚ್ಛ ಸುಂದರ ಪರಿಸರವಿರುವ ಅಲ್ಲಿ ಆಶ್ರಮವಾಸಿಗಳ ವಸತಿ ಹಾಗೂ  ನಿತ್ಯಾನಂದರ ದೇವಸ್ಥಾನವಿದೆ. ಸದಾ ಎಡಬಿಡದೆ ಸುರಿಯುವ ದೇವಗಂಗೆಯೆಂದೆ ನಂಬಲಾಗಿರುವ ಮಲೆನಾಡಿನಿಂದ ಬೆಟ್ಟದ ಒಡಲು ಸೀಳಿ ಉಕ್ಕಿ ಬರುವ ಅನಂತ ಜಲ ತೀರ್ಥವಿದೆ. ಅದರ ಔಷಧೀಯ ಗುಣಗಳ ಬಗ್ಗೆ ದಂತಕಥೆಗಳಿವೆ. ಮೌನವನ್ನೆ ಹೊದ್ದುಕೊಂಡಂತೆ ಇರುವ ಕೇವಲ ಪ್ರಾಕೃತಿಕ ನಿನಾದಗಳಿಗೆ ಕಿವಿಯಾಗಲು ಹೇಳಿ ಮಾಡಿಸಿದ ಹಸಿರ ಕಣಿವೆಯಂತಹ ಆ ಸ್ಥಳಕ್ಕೆ ಭಕ್ತಾದಿಗಳು ಹಗಲಿನಲ್ಲಿ ಮಾತ್ರ ಭೇಟಿ ಕೊಡಬಹುದು. ಆತ್ಮದ ಅವಲೋಕನಕ್ಕೆ ತಕ್ಕದಾಗಿರುವ ಆ ಜಾಗದಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ. ಅವನ ಈ ಕಾಙಂನಗಾಡಿನ "ಅಜ್ಜನ ಮನೆ"ಯ ಭೇಟಿ ಯಾವುದೆ ನಿರ್ದಿಷ್ಟ ಯೋಜನೆಗಳನ್ನೆ ಹಾಕಿಕೊಳ್ಳದೆ ಹೊರಟಿದ್ದ ಪ್ರವಾಸವನ್ನ ಚಿರಸ್ಮರಣೀಯವಾಗಿಸಿತ್ತು. ಇಂದಿನಿಂದ ಬೇಸರವಾದಾಗಲೆಲ್ಲ ಹೋಗಿದ್ದು ಬರಲೊಂದು ಅಜ್ಜನ ಮನೆ ತನಗೂ ಇದೆ ಅನ್ನುವ ವಿಷಯ ಅವನಿಗೆ ಖಚಿತವಾಯ್ತು.

*****

ಮಲಯಾಳಿಗಳ ಸಾಂಸ್ಕೃತಿಕ ಹಾಗೂ ಧಾರ್ಮಿಕ ಗೊಂದಲ ಅವನಿಗೆ ಆಶ್ಚರ್ಯ ಹುಟ್ಟಿಸುತ್ತದೆ. ಥೇಟ್ ತುಳುನಾಡಿಗರಂತೆ ಅಸುರ ಕುಲ ತಿಲಕ ಬಲಿ ಚಕ್ರವರ್ತಿ ಅಥವಾ ಮಹಾಬಲಿ ತಮ್ಮ ನಾಡನ್ನ ಪೌರಾಣಿಕ ಕಾಲದಲ್ಲಿ ಆಳುತ್ತಿದ್ದ ಅಂತ ಬಲವಾಗಿ ನಂಬುವ ಅವರೆಲ್ಲ ಇಂದಿಗೂ ಅವನ ಸಲುವಾಗಿಯೆ ವರ್ಷಕ್ಕೊಮ್ಮೆ ಓಣಂ ಹಬ್ಬವನ್ನ ಜಾತ್ಯತೀತವಾಗಿ - ಮತಾತೀತವಾಗಿ ಆಚರಿಸುತ್ತಾರೆ. ನಮ್ಮ ತುಳುನಾಡಿನಲ್ಲಿ ಬಲಿಯ ಆಗಮನ ಸಾರಿ ದುಷ್ಟಶಕ್ತಿಗಳ ನಿವಾರಣೆಗೆ ಆಟಿ ಕಳಿಂಙ ತುಳುವರ ಮನೆ ಮನೆಗೂ ಭೇಟಿ ಕೊಡುವ ಹಾಗೆˌ ಕೇರಳದಲ್ಲಿ ಅದೆ ಕೆಲಸವನ್ನ 'ಓಣ ಪೊಟ್ಟಾನ್' ಮನೆ ಮನೆಗೆ ಆಗಮಿಸಿ ಮಾಡುತ್ತಾನೆ. ಅವನನ್ನ ಸಂಭ್ರಮಾದರ ಭಯ ಭಕ್ತಿಯಿಂದ ಎದುರುಗೊಳ್ಳುವ ಅದೆ ಜನ ಮಹಾಬಲಿಯ ದುರ್ದೆಸೆಗೆ ಕಾರಣನಾದವನನ್ನೆ ಪರಮದೈವವಾಗಿಸಿ ಇಂದು ಆರಾಧಿಸುತ್ತಿರೋದು ಹಾಗೂ ತಮ್ಮ ಪೂರ್ತಿ ರಾಜ್ಯವನ್ನೆ ತಿರುವಾಂಕೂರಿನ ರಾಜರು ಅವನಿಗೆ ಅರ್ಪಿಸಿರುವುದು ವಿಸ್ಮಯ.

ಮಹಾಬಲಿಯನ್ನ ಮೂರಡಿ ಜಾಗ ಕೇಳಿದ ವಾಮನ ಪಾತಾಳಕ್ಕೆ ತುಳಿದ ಜಾಗ ಮಾವೇಲಿಕ್ಕರದಲ್ಲಿರುವ ಮಹಾದೇವ ದೇವಸ್ಥಾನದಲ್ಲೆ ಅನ್ನುವ ಐತಿಹ್ಯವನ್ನೂ ಇಟ್ಟುಕೊಂಡಿದ್ದಾರೆ. ಆದರೆ ಈಗ ಅವರ ಆರಾಧ್ಯದೈವಗಳಲ್ಲೆ ಅಗ್ರಗಣ್ಯನಾಗಿರುವುದು ಶ್ರೀಅನಂತಪದ್ಮನಾಭ ಹಾಗೂ ಗುರುವಾಯೂರಪ್ಪನ ರೂಪದಲ್ಲಿರುವ ಬಲಿಯ ಹಗೆ ಮಹಾವಿಷ್ಣು! ಒಂಥರಾ ತಮ್ಮವನನ್ನ ತುಳಿದವನನ್ನೆ ಆರಾಧಿಸುವ "ಸ್ಟಾಕ್ ಹೋಂ ಸಿಂಡ್ರೋಮ್" ಬಲಿಪಶುಗಳವರು.

( ಇನ್ನೂ ಇದೆ.)

https://youtu.be/NGjaYHqBAaw

21 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೦.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೩೦.👊



ಪ್ರತಿದಿನ ಮೂರು ಸಲ ನಿತ್ಯಾನಂದಾಶ್ರಮದ ಗುಹೆಗಳ ಮೇಲಿರುವ ಭಗವಾನ್ ನಿತ್ಯಾನಂದರ ಮೂರ್ತಿಗೆ ಆರತಿ ಎತ್ತಲಾಗುತ್ತದೆ. ಅವನು ಹಿಂದಿನ ದಿನ ಬೆಳಗ್ಗಿನ ಆರತಿಗೆ ಹೋಗಿದ್ದಾಗ ಒಂದು ವಿಚಿತ್ರ ಅವನಲ್ಲಿ ಘಟಿಸಿತು. ಮೆಟ್ಟಲುಗಳ ಹತ್ತಿ ಆ ಪುಟ್ಟ ಬೆಟ್ಟವನ್ನೇರುವವರೆಗೂ ಸರಿಯಾಗಿದ್ದ ಅವನಿಗೆ ಗುಡಿಯ ಮುಂದೆ ಮೂರ್ತಿಗೆ ಕೈಮುಗಿದು ನಿಂತುಕೊಂಡಾಗ ತೀರಾ ನೀಶ್ಯಕ್ತನಾದ ಹಾಗನಿಸಿ ಕಣ್ಣಿಗೆ ಕತ್ತಲೆ ಕವಿದಂತಾಯಿತು. ಆ ಬೆಳಗಿನ ಚಳಿಯಲ್ಲೂ ಮೈ ಬೆವರಿ ಒದ್ದೆಮದ್ದೆಯಾದ ಹಾಗಾದವನಿಗೆ ಹೀಗೆಯೆ ನಿಂತುಕೊಂಡೆ ಇದ್ದರೆ ಕುಸಿದುಬಿದ್ದೇನು ಅನಿಸಿತುˌ ಘಂಟೆˌ ಜಾಗಟೆಗಳ ಗದ್ದಲದ ಮಧ್ಯೆ ಮಂಗಳಾರತಿ ಮಾಡುತ್ತಿದ್ದರು. ಅಲ್ಲಿ ನೆರೆದಿರುವ ಎಲ್ಲರೂ ನಿಂತುಕೊಂಡಿರುವಾಗ ತಾನೊಬ್ಬನೆ ಕೂತರೆ ಸರಿಯಲ್ಲ ಅನ್ನಿಸಿ ಮೆಲ್ಲ ಮೆಲ್ಲನೆ ಹಿಂದಕ್ಕೆ ಸರಿದು ಬೇಲಿ ಗೋಡೆಗೆ ಒರಗಿ ನಿಂತು ಸುಧಾರಿಸಿಕೊಂಡ. ಪೂಜೆ ಮುಗಿದು ಪ್ರಸಾದ ಪಡೆದುˌ ಕೆಳಗಿಳಿದು ಬಂದು ತಿಂಡಿಯನ್ನೂ ತಿಂದಾದ ಮೇಲೂ ಸುಸ್ತಿತ್ತು. 

ಕೋಣೆಗೆ ಹೋಗಿ ಬಳಲಿಕೆಯಿಂದ ಮಲಗಿದ್ದಷ್ಟೆ ಗೊತ್ತುˌ ಎದ್ದಾಗ ಘಂಟೆ ಒಂದಾಗಿತ್ತು. ಮೈಮನ ಹಗೂರಾದ ಭಾವ ಆವರಿಸಿತ್ತು. ಸಣ್ಣಂದಿನಿಂದ ಸರಿಯಾದ ಭಂಗಿಯಲ್ಲಿ ನಡೆಯಲು ಕಲಿಯದ ಕಾರಣಕ್ಕೇನೋ ಬಹುಶಃˌ ಅಥವಾ ದಿನಕ್ಕೆ ಕನಿಷ್ಠ ಇಪ್ಪತ್ತು ಕಿಲೋಮೀಟರು ಹಟಯೋಗಿಯಂತೆ ನಡೆದೆ ಸವೆಸುವ ಕಾರಣಕ್ಕೂ ಇರಬಹುದು ಚೂರು ಉದ್ದವಾಗಿಯೆ ಇರುವ ಅವನಿಗೆ ನಿಧಾನವಾಗಿ ಬೆನ್ನುನೋವಿನ ಬಾಧೆ ಆವರಿಸಿಕೊಳ್ಳಲಾರಂಭಿಸಿತ್ತು. ಈ ಪ್ರಕರಣದ ನಂತರ ಬೆನ್ನುನೋವಿನ ಸೆಳೆತ ತುಂಬಾ ಕಡಿಮೆಯಾಗಿತ್ತು. ಇದು ಆ ಸ್ಥಳದ ಮಹಿಮೆಯೋˌ ಇವನ ಮನಭ್ರಾಂತಿಯೋ ಏನೋ ಒಂದು. ಆದರೆ ಮೊದಲಿದ್ದ ಮಹಾಬಾಧೆ ತುಂಬಾ ಇಳಿದಿತ್ತು ಅನ್ನೋದಂತೂ ಸತ್ಯˌ

ವಾಸ್ತವವಾಗಿˌ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜನರಿಗೆ ಭಗವಾನ್ ನಿತ್ಯಾನಂದರು ಅಪರಿಚಿತರೇನಲ್ಲ. ಇಲ್ಲಿನ ಬಹುತೇಕ ಮಂದಿ ಒಂದಿಲ್ಲೊಂದು ಬಗೆಯಲ್ಲಿ ನಿತ್ಯಾನಂದರ ಆರಾಧಕರೆ. ಈ ಎರಡೂ ಜಿಲ್ಲೆಗಳ ಬಹಳಷ್ಟು ಊರುಗಳಲ್ಲಿ ನಿತ್ಯಾನಂದಾಶ್ರಮಗಳಿವೆ. ಅಲ್ಲೆಲ್ಲಾ ಸ್ವತಃ ನಿತ್ಯಾನಂದರೆ ಭೇಟಿಕೊಟ್ಟು ಕೆಲಕಾಲ ಇದ್ದು ಹೋಗಿರುವ ಐತಿಹ್ಯ ಇದೆ. ಈಗ ಹಣ್ಹಣ್ಣು ಮುದುಕರಾಗಿರುವ ಅನೇಕರು ತಮ್ಮ ಬಾಲ್ಯದಲ್ಲೋ ಅಥವಾ ತಾರುಣ್ಯದಲ್ಲೋ ನಿತ್ಯಾನಂದರನ್ನ ಕಂಡಿದ್ದಾರೆ ಹಾಗೂ ಅವರ ಪ್ರಭಾವಕ್ಕೆ ಒಳಗಾಗಿದ್ದಾರೆ. 


ಕೋಳಿಕ್ಕೋಡಿನ ಕೊಯಿಲಾಂಡಿಯಲ್ಲಿ ಹುಟ್ಟಿ ಕಾಙಂನಗಾಡಿನಲ್ಲಿ ಸಂತರಾಗಿ ಬದುಕಿ ಭಾರತದಾದ್ಯಂತ ಪರಿವ್ರಾಜಕರಾಗಿ ಸಂಚರಿಸಿ ಕೊನೆಗೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿರುವ ಗಣೇಶಪುರಿಯಲ್ಲಿ ಇಹ ಜೀವನ ಮುಗಿಸಿದ ನಿತ್ಯಾನಂದರೆಂದರೆ ಕರಾವಳಿಯ ಮಂದಿಗೆ ಭಯ-ಭಕ್ತಿ ಎರಡೂ ಢಾಳವಾಗಿದೆ. ಇದೆ ಕಾರಣದಿಂದಲೇನೋ ಇವರ ಮನೆಯ ದೇವರ ಕೋಣೆಯಲ್ಲೂ ನಿತ್ಯಾನಂದರ ಭಾವಚಿತ್ರವೊಂದಿತ್ತು. ಸಣ್ಣಂದಿನಲ್ಲಿ ಬೆಳಗ್ಯೆ ಮಿಂದು ಮಣಮಣ ಮಂತ್ರಗಳನ್ನ ಹೇಳುತ್ತಾ ಅಲ್ಲಿರುವ ದೇವಾನುದೇವತೆಗಳನ್ನ ಸ್ತುತಿಸುವಾಗˌ ಸಂಜೆ ಶಾಲೆಯಿಂದ ಬಂದಾದ ಮೇಲೆ ಕೈಕಾಲು ತೊಳೆದು ಭಜನೆ ಕಿರುಚುವಾಗ ಆ ಫೊಟೋದಲ್ಲಿದ್ದ ಕೇವಲ ಲಂಗೋಟಿ ಮಾತ್ರ ಧರಿಸಿ ಅಸಡ್ಡಾಳ ಭಂಗಿಯಲ್ಲಿ ಕೂತಿರುವ ವ್ಯಕ್ತಿ ಯಾರು? ಅವರ ಅಕ್ಕಪಕ್ಕದಲ್ಲಿರುವ ರಾಜಾ ರವಿವರ್ಮ ಸೃಷ್ಟಿಯ ದೇವಾನುದೇವತೆಗಳಂತೆ ಅಪಾರ ಆಭರಣ ತೊಟ್ಟು - ರೇಷ್ಮೆ ವಸ್ತ್ರ ಧರಿಸಿ - ದೊಡ್ಡ ಕಿರೀಟ ಹೊತ್ತು - ಚಿತ್ರವಿಚಿತ್ರ ಆಯುಧ ಪಾಣಿಗಳಾಗಿ ತಲೆಯ ಹಿಂದೆ ಒಂದು ಪ್ರಭಾವಲಯ ಬೀರಿಕೊಂಡು ಅದ್ಯಾವುದೋ ಪ್ರಾಣಿಯನ್ನ ತಮ್ಮ ತಮ್ಮ ವಾಹನವನ್ನಾಗಿ ಇರಿಸಿಕೊಂಡು ಗಡದ್ದಾಗಿ ಮಿಂಚುತ್ತಿರದೆ ಇದ್ಯಾರಪ್ಪ ಹೀಗೆ ಕಡುಗಪ್ಪು ಮೈಯಲ್ಲಿ ಬೋಳು ಮಂಡೆಯೊಂದಿಗೆ ಕೋಮಣ ಮಾತ್ರ ತೊಟ್ಟು ಕೂತುಕೊಂಡಿರೋದು ಅನ್ನುವ ವಿಸ್ಮಯ ಅವನಿಗಾಗುತ್ತಿತ್ತು. 


ಭಜನೆ ಮಾಡುವಾಗ ಆ ಚಿತ್ರದಲ್ಲಿರುವವರು ತನ್ನನ್ನ ಕಂಡು ಕಣ್ಣು ಮಿಟುಕಿಸಿದಂತೆ ಅನ್ನಿಸುತ್ತಿತ್ತವನಿಗೆ. ಕುತೂಹಲ ತಾಳಲಾರದೆ ಶ್ರದ್ಧಾ ಭಕ್ತಿಯಿಂದ ಅವರ ಚಿತ್ರಕ್ಕೆ ನಮಿಸುತ್ತಿದ್ದ ಅಜ್ಜನಿಗೆ ಯಾರಜ್ಜ ಅದು? ಅಂದ. ಉತ್ತರವಾಗಿ ಅವರು "ಅಜ್ಜ" ಅಂದರು. ಓಹೋ ಬಹುಶಃ ನಮ್ಮಜ್ಜನ ಅಜ್ಜ ಇರಬೇಕು! ಅಂದುಕೊಂಡಿದ್ದ. ಹೈಸ್ಕೂಲು ದಾಟುವವರೆಗೂ ಅವರು ನಮ್ಮ ಕುಟುಂಬಸ್ಥರೆ. ನಮ್ಮಜ್ಜನ ಅಜ್ಜ ಅನ್ನುವ ಭಾವ ಅವನಲ್ಲಿತ್ತು. ಆದರೆ ಬೇರೆಯವರ ಅಂಗಡಿ - ಹೊಟೆಲ್ಲುಗಳ ಗಲ್ಲಾಪೆಟ್ಟಿಗೆ ಹಾಗೂ ಬಸ್ಸುಗಳ ಬಾನೆಟ್ ಮೇಲೆ ತೂಗು ಬಿಟ್ಟ ಚಿತ್ರಗಳಲ್ಲೂ ಅವರನ್ನ ಕಂಡಾಗ ಮಾತ್ರ ಚೂರು ಕಕ್ಕಾಬಿಕ್ಕಿಯಾದ. ನಮ್ಮಜ್ಜನ ಅಜ್ಜನ ಫೊಟೋ ನೀವ್ಯಾಕೆ ಹಾಕಿಕೊಂಡಿರೋದು ಅಂತ ಒಂದಿಬ್ಬರನ್ನ ಕೇಳಿ ಗೇಲಿಗೊಳಗಾದ ಮೇಲೆ ಅವರ್ಯಾರು ಅವರ ಹೆಸರೇನು ಅನ್ನುವ ಮರ್ಮ ಮೊದಲಸಲ ಅವನಿಗರಿವಾದದ್ದು. ಆದರೆ ಅವನ ಪಾಲಿಗೆ ಮಾತ್ರ ನಿತ್ಯಾನಂದರು ಯಾವತ್ತಿದ್ದರೂ ಅಜ್ಜನ ಅಜ್ಜ ಕೋಲಜ್ಜನೆ. ಅವರನ್ನ ಅವ ಅಜ್ಜ ಅಂತಲೆ ಕರೆಯೋದು.

ಅವರ ಪರಮ ಭಕ್ತರಾಗಿದ್ದ ಅವನಜ್ಜ ಕಾಙಂನಗಾಡಿನ ಈ ನಿತ್ಯಾನಂದರ ಕರ್ಮಭೂಮಿಗೆ ಬಂದಿರಲಾರರು. ಅವರ ಪರವಾಗಿ ಅವರ ಆಸೆ ಈಡೇರಿಸಲು ಮೊಮ್ಮಗನಾಗಿ ಅವ ಅಲ್ಲಿಗೆ ಬಂದಿದ್ದ. ಒಂಥರಾ ಅಜ್ಜನ ಮನೆಗೆ ಬಂದ ಮನಸ್ಥಿತಿಯಲ್ಲೆ ಇದ್ದ. ಎಲ್ಲರೂ ಬೆಟ್ಟ ಇಳಿದು ಹೋದ ಮೇಲೆ ದೇವಸ್ಥಾನದ ಮೆಟ್ಟಿಲ ಮೇಲೆ ಕೂತು ನಿರ್ಜನವಾಗಿದ್ದ ಗುಡಿಯ ಗರ್ಭಗುಡಿಯಲ್ಲಿದ್ದ ನಿತ್ಯಾನಂದರ ಮೂರ್ತಿಯ ಜೊತೆ ಜೀವಂತ ವ್ಯಕ್ತಿಯೊಬ್ಬರೊಂದಿಗೆ ಸಂಭಾಷಿಸುವಂತೆಯೆ ತುಂಬಾ ಹೊತ್ತು ಮಾತನಾಡಿದ. ತನ್ನ ಕಥೆ ವ್ಯಥೆ ತೋಡಿಕೊಂಡು ಹಗುರಾದ. ನಿಮ್ಮನ್ನ ಕಾಣಲು ಬಂದಿರೋದು ನಾನಾದರೂ ಇದು ಸತ್ತಿರೋ ನನ್ನಜ್ಜನ ಆಸೆ ಈಡೇರಿಸಲು. ಇದರಿಂದೇನಾದರೂ ಪುಣ್ಯ ಸಂಚಯವಾಗೋದಾದರೆ ಅದವರಿಗೆ ಆಗಬೇಕು ಅಂತ ನಿತ್ಯಾನಂದರಿಗೆ ತಾಕೀತು ಮಾಡಿದ. ತನಗೂ ಅವರಿಗೂ ಮರುಜನ್ಮ ಬೇಡ ಮುಕ್ತಿ ಸಾಕು ಅಂತ ಬೇಡಿದ. ಅದೂ ಇದೂ ಕಷ್ಟ ಸುಖ ಹೇಳಿಕೊಂಡ. ಮನಸಿಗೆ ಆಪ್ತರಾದವರೆಲ್ಲರನ್ನೂ ನೆನೆಸಿಕೊಂಡು ಅವರಿಗೆ ಶುಭವಾಗಲಿ ಅಂತ ಹಾರೈಸಿದ. ಒಂಥರಾ ಸ್ವಂತ ಅಜ್ಜನ ಎದುರು ಕೂತು ಮನದಾಳದ ನುಡಿಗಳನ್ನೆಲ್ಲಾ ಹಂಚಿಕೊಳ್ಳುವ ಮೊಮ್ಮಗನ ವರ್ತನೆಯಂತೆಯೆ ಸನ್ನಿವೇಶವಿತ್ತು. ಇದೇನು ತೋರಿಕೆಯ ಭಕ್ತಿಭಾವದಿಂದಾದದ್ದಲ್ಲ ಮನಸಿನಾಳದಿಂದಲೆ ಅವರನ್ನ ಅಜ್ಜ ಅಂತಲೆ ನಂಬಿಕೊಂಡು ಬೆಳೆದಿದ್ದವನಿಗೆ ಈಗ ಏಕಾಏಕಿ ಅಸಹಜ ಭಕ್ತಿ ತೋರಲು ಅಸಾಧ್ಯವಾಗಿತ್ತು. ಅವನ ಹಾಗೂ ಅವರ ಮಧ್ಯ ಮೂಡಬಹುದಾಗಿದ್ದು ಕೇವಲ ವಾತ್ಸಲ್ಯಭರಿತ ಪ್ರೀತಿ ಮಾತ್ರ ಬಿಟ್ಟರೆ ಮತ್ತಿನ್ನೇನೂ ಅಲ್ಲ.


*****

ಸಾಮಾನ್ಯವಾಗಿ ಆತ ಯಾವುದೆ ಸ್ವಯಂಘೋಷಿತ ಢೋಂಗಿ ಸಿದ್ಧಪುರುಷರನ್ನ ಬಡಪಟ್ಟಿಗೆ ನಂಬ. ಇತ್ತೀಚೆಗಂತೂ ತಾನು ಪರಮಹಂಸ ಎಂದು ಬೋರ್ಡು ಹಾಕಿಕೊಳ್ಳುವ ಪರಮಹಿಂಸರˌ ಅವಧೂತತನದ ಓನಾಮ ಗೊತ್ತಿಲ್ಲದಿದ್ದರೂ ಅಲ್ಲಷ್ಟು ಇಲ್ಲಷ್ಟು ಓದಿ ತಿಳಿದ ಸರಕುಗಳನ್ನೆ ಮಾರಿಕೊಂಡು ತನ್ನನ್ನ ತಾನು "ಅವಧೂತ" ಅಂತ ಕರೆದುಕೊಳ್ಳುವ ಖದೀಮ ಅವಭೂತಗಳನ್ನ ಕತ್ತಿನ ಪಟ್ಟಿ ಹಿಡಿದು "ಬಡ್ಡಿಮಗನೆ ಮೊದಲು ಸರಿಯಾಗಿ 'ಅವಧೂತ' ಅಂತ ತಪ್ಪಿಲ್ಲದೆ ಉಚ್ಛರಣೆ ಕಲಿˌ ಆ ಮೇಲೆ ಈ ಅವಧೂರ್ತತನದ ನೌಟಂಕಿ ಮಾಡುವಿಯಂತೆ!" ಅಂತ ತರಡಿಗೆ ಎರಡು ತದುಕಿ ಹೇಳಬೇಕು ಅಂತ ಅವನಿಗೆ ಅನಿಸುವುದಿದೆ. 


ಧರ್ಮ ಅನ್ನುವುದು ಒಂದು ಪ್ರಬಲ ನಶೆ ಅನ್ನುವುದನ್ನ ಅರಿತಿರುವ ಈ ಅತಿಬುದ್ಧಿವಂತರು ಹೀಗೆಲ್ಲಾ ತಾರಾತಿಗಡಿ ಮಾಡಿ ಸಮಾಜಕ್ಕೆ ಮಕಮಲ್ಲಿನ ಟೋಪಿ ತೊಡಿಸಿ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿರೋದು ಮಾತ್ರ ದುರಂತ. ನಿಜವಾಗಿ ಒದೆಯಬೇಕಿರೋದು ಅಂತಹ ಸದಾರಮೆ ನಾಟಕದ ಕಳ್ಳರನ್ನಲ್ಲˌ ಬದಲಿಗೆ ಅಂತಹ ಕಿಲಾಡಿ ಖದೀಮರನ್ನ ನಂಬುವ ಮಡ್ಡಮಂಡೆಯ ಮಳ್ಳರನ್ನ. ಇವರಿಗೆ ಗತಿಯಿಲ್ಲ ಅವರಿಗೆ ಮತಿಯಿಲ್ಲ. ಸರಿಯಾದ ಜೋಡಿ.

( ಇನ್ನೂ ಇದೆ.)


https://youtu.be/FCGj7TEiZEA

20 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೯.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೯.👊


ಮುಂದಿನ ದಿನಮಾನಗಳಲ್ಲಿ ಅಲ್ಲಿಂದಲೂ ಆ ಖೂಳರನ್ನ ಸೋಲಿಸಿ ಅಟ್ಟಾಡಿಸಿದ ಅವರ ಯುರೋಪಿಯನ್ ದಾಯಾದಿಗಳಾದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಖದೀಮರುˌ ಕಡೆಗೆ ಡಚ್ಚರು ಇಂಡೋನೇಷ್ಯಾಕ್ಕೆ ಹೋಗಿ ಮುಟ್ಟಿ ಆ ದ್ವೀಪ ಸಮುಚ್ಛಯವನ್ನ ತಮ್ಮ ವಸಾಹತಾಗಿಸಿಕೊಳ್ಳುವುದನ್ನ ಅನಿವಾರ್ಯಗೊಳಿಸಿದರು. ಹಾಗಂತ ಭಾರತವೇನೂ ಯುರೋಪಿಯನ್ ವಸಾಹತುಕರಣದ ಬಲೆಯಿಂದ ಪಾರಾಗಲಿಲ್ಲˌ ಆದರೆ ದುಷ್ಟರಲ್ಲೆ ಅತಿ ಕಡಿಮೆ ದುರುಳತೆಯಿದ್ದ ಬ್ರಿಟಿಷರ ಪಾಲಾಯಿತು ಅಷ್ಟೆ.

ಶಸ್ತ್ರಗಳಲ್ಲಿ ಆಧುನಿಕರೆನಿಸಿದ್ದ ಹಾಗೂ ಶಿಸ್ತಿನ ಯುದ್ಧತಂತ್ರಗಳನ್ನ ಸೇನೆಯಲ್ಲಿ ಅಳವಡಿಸಿಕೊಂಡು ಹೋರಾಡಿ ಎದುರಾಳಿಗಳನ್ನ ಕಕ್ಕಾಬಿಕ್ಕಿಗೊಳಿಸಿಯೆ ಗೆಲುವನ್ನ ಪ್ರತಿಸಾರಿಯೂ ಖಾತ್ರಿ ಪಡಿಸಿಕೊಳ್ಳುತ್ತಿದ್ದ ಬಲಿಷ್ಠ ಯುರೋಪಿಯನ್ ಶಕ್ತಿಯೊಂದನ್ನ ತನ್ನ ಮುಂದೆ ಮಂಡಿಯೂರಿಸಿದ ಮಾರ್ತಾಂಡ ವರ್ಮನ ಈ ಅಭೂತಪೂರ್ವ ಗೆಲುವು ಬಿಳಿಯರ ದಿಗ್ವಿಜಯ ಯಾತ್ರೆಯ ಕಗ್ಗವಾಗಿರುವ ಯುರೋಪಿಯನ್ ಇತಿ"ಹಾಸ್ಯ""ಅಜ್ಞ"ರ ಸಂಶೋಧನೆಗಳಲ್ಲಿ ಕಾಣಿಸಿಕೊಳ್ಳದಿರಲು ಕಾರಣಗಳಿವೆ. ಆದರೆ ಭಾರತೀಯ ಇತಿಹಾಸ ಸಂಗ್ರಹದಲ್ಲೂ ಈ ಬಗ್ಗೆ ಕೇವಲ ಸೀಮಿತ ವಿವರಣೆಗಳಿರೋದು ದುರಾದೃಷ್ಟಕರ.

ಕೊಚ್ಚಿಯಲ್ಲಿ ಅದಾಗಲೆ ವ್ಯಾಪಾರಿ ಕೋಠಿ ಕಟ್ಟಿಕೊಂಡಿದ್ದ ಡಚ್ ಈಸ್ಟ್ ಇಂಡಿಯಾ ಕಂಪನಿ ಕೊಚ್ಚಿ ಸಂಸ್ಥಾನದ ಆಳರಸನನ್ನ ಕ್ರಮೇಣ ಬೆದರಿಸಿ ತೋಳ್ಬಲದಿಂದ ಕೈಗೊಂಬೆ ಮಾಡಿಕೊಂಡರು. ಅದಾದ ಮೇಲೆ ಅವರ ವಕ್ರದೃಷ್ಟಿ ಪಕ್ಕದ ತಿರುವಾಂಕೂರಿನ ಮೇಲೆ ಬಿತ್ತು. ಎಂದಿನ ಪೊಗರಿನಿಂದ ಅವರು ಹೇರಲು ಹೊರಟ ವ್ಯಾಪಾರಿ ನಿಬಂಧನೆಗಳಿಗೆ ನಾಯರ್ ಕುಲದ ಆಡಳಿತದಲ್ಲಿದ್ದ ತಿರುವಾಂಕೂರು ಸಂಸ್ಥಾನದ ಆಳರಸ ಮಾರ್ತಾಂಡ ವರ್ಮ ಸೊಪ್ಪು ಹಾಕದಿದ್ದಾಗ ಕೆರಳಿದ ಡಚ್ ಅಡ್ಮಿರಲ್ ಎಸ್ಟಾಚುಯಿಸ್ಟ್ ಡೆ ಲೆನಾಯ್
ತಿರುವಾಂಕೂರು ಸಾಮ್ರಾಜ್ಯದ ದಕ್ಷಿಣ ಗಡಿಯಾಗಿದ್ದ ಸಾಂಸ್ಕೃತಿಕವಾಗಿ ಕೇರಳದ ಭಾಗವಾಗಿದ್ದರೂ ಈಗ ರಾಜಕೀಯವಾಗಿ ತಮಿಳುನಾಡಿನ ಭೂಪಟವನ್ನ ಸೇರಿ ಹೋಗಿರುವ ಕೊಳಚ್ಚೆಲ್ಲಿನಿಂದ ನೌಕಾಯುದ್ಧ ಸಾರಿದ.

ತಿರುವಾಂಕೂರಿನವರ ನೌಕಾಬಲವನ್ನ ಕೀಳಂದಾಚಿಸಿದ ಲೆನಾಯ್ ಅತಿಯಾದ ಆತ್ಮವಿಶ್ವಾಸದಿಂದ ದಕ್ಷಿಣದಲ್ಲಿ ಯುದ್ಧ ಆರಂಭಿಸಿದಾಗˌ ಅವನನ್ನ ಎದುರಿಸಲು ದಕ್ಷಿಣದಲ್ಲಿ ಡಚ್ ನೌಕಾಪಡೆಯನ್ನ ಎದುರಿಸಲು ತನ್ನ ದಳಪತಿಗಳಾದ ಆರ್ಮುಗಂ ಪಿಳ್ಳೆ ಹಾಗೂ ಥಾನು ಪಿಳ್ಳೆಯನ್ನ ಛೂ ಬಿಟ್ಟವನೆˌ ತಾನು ಕೊಚ್ಚಿನ್ ಸಾಮ್ರಾಜ್ಯದ ಗಡಿಯೊಳಗಿದ್ದ ಡಚ್ ಠಿಕಾಣಿಗಳನ್ನ ಪುಡಿಗಟ್ಟಲು ನೆಚ್ಚಿನ ಬಂಟನಾಗಿದ್ದ ದಳಪತಿ ಚಂಪಕರಾಮನ್ ಮಾರ್ತಾಂಡ ಪಿಳ್ಳೆಯೊಡನೆ ಭೂ ಮಾರ್ಗವಾಗಿ ಮುನ್ನುಗ್ಗಿ ಬಂದ. ಇವರೊಂದಿಗೆ ಒತ್ತಾಸೆಯಾಗಿ ಪೂರ್ವದ ಘಟ್ಟದಿಂದ ಅದೆ ಕಾಲದಲ್ಲಿ ಇಳಿದು ಬಂದ ಪೊನ್ನಾನ್ ಪಾಂಡ್ಯನ್ ದೇವರ್ ನಾಯಕತ್ವದ ಮಾರವ ಪಡೆ ಕೂಡಾ ಜೊತೆಗೂಡಿತು.

ಈ ಕುಶಲ ಯುದ್ಧತಂತ್ರ ಡಚ್ಚರನ್ನ ಕಂಗಾಲಾಗಿಸಿದ್ದಷ್ಟೆ ಅಲ್ಲˌ ಕೊಚ್ಚಿನ್ನಿನಲ್ಲಿದ್ದ ಐದೂ ಕೋಠಿಗಳಿಂದ ಬೇರು ಕಿತ್ತು ಪರಾರಿಯಾಗಿ ಲೆನಾಯಿಯನ್ನ ಕೂಡಿಕೊಳ್ಳಲು ಕೊಳಚ್ಚೆಲ್ಲಿಗೆ ದೌಡಾಯಿಸಲು ಪ್ರಚೋದಿಸಿತು. ಆದರೆ ಅಲ್ಲಿ ನಡೆದಿದ್ದ ಮೂರು ವಾರಗಳ ರಣಭೀಕರ ಕಾಳಗದಲ್ಲಿ ಡಚ್ಚರು ಸೋತು ಮಾರ್ತಾಂಡ ವರ್ಮನ ಮುಂದೆ ಸಂಪೂರ್ಣವಾಗಿ ಶರಣಾಗಿ ಅವನ ಆದೇಶದಂತೆ ಭಾರತದಿಂದಲೆ ಪೇರಿ ಕಿತ್ತರು. ದಳಪತಿ ಅರ್ಮುಗಂ ಪಿಳ್ಳೆ ಡಚ್ಚರಲ್ಲಿ ಹುಟ್ಟಿಸಿದ್ದ ಆತಂಕ ಅವರನ್ನ ಭಾರತದತ್ತ ಮತ್ತೆಂದೂ ತಿರುಗಿ ನೋಡದಂತೆ  ಮಾಡಿತು. ಬಹುಶಃ ಭಾರತೀಯರ ಯುದ್ಧ ಕೌಶಲ್ಯವನ್ನ ಡಚ್ಚರು ತಪ್ಪಾಗಿ ಅಂದಾಜಿಸಿದ್ದರು. ಎರಡೆರಡು ಕಡೆಗಳಿಂದ ಸಂಘಟಿತ ದಾಳಿಯನ್ನ ಅವರು ನಿರೀಕ್ಷಿಸಿರಲಿಕ್ಕಿಲ್ಲ ಅನಿಸುತ್ತೆ. ಕ್ಷಿಪ್ರ ಕಾರ್ಯಾಚರಣೆಯ ಈ ಯದ್ಧತಂತ್ರ ಫಲ ಕೊಟ್ಟು ಅವರನ್ನ ಇಲ್ಲಿಂದ ಒಕ್ಕಲೇಳಿಸಿತು.

ಇದೆ ಆಕ್ರಮಣದ ಹೊತ್ತಿಗೆ ಡಚ್ಚರಿಗೆ ಆರಂಭಿಕ ಆಶ್ರಯ ಕೊಟ್ಟು ಕಡೆಗೆ ಅವರದ್ದೆ ಕೈಗೊಂಬೆಯಾಗಿದ್ದ ಪೇಲವ ರಾಜನ ಆಳ್ವಿಕೆಯಲ್ಲಿದ್ದ ಪೂರ್ತಿ ಕೊಚ್ಚಿ ಸಾಮ್ರಾಜ್ಯವನ್ನ ಕಬಳಿಸಿ ಅದನ್ನ ತಿರುವಾಂಕೂರಿನಲ್ಲಿ ವಿಲೀನಗೊಳಿಸಿಕೊಳ್ಳುವ ಆರಂಭಿಕ ಯೋಜನೆಯನ್ನ ಮಾರ್ತಾಂಡ ವರ್ಮ ಹಾಕಿಕೊಂಡಿದ್ದರೂ ಸಹ ಕಡೆಗೆ ಡಚ್ ಶರಣಾಗತಿ ಹಾಗೂ ಅವರ ಶಾಶ್ವತ ಸ್ಥಳಾಂತರದ ನಂತರ ಅದನ್ನ ಅನಗತ್ಯವೆಂದು ಬಗೆದು ಭೂ ಯುದ್ಧದಿಂದ ತನ್ನ ಪಡೆಯನ್ನ ಹಿಂದೆ ಕರೆಸಿಕೊಂಡ. ವಾಸ್ತವವಾಗಿˌ ಕೇರಳದ ಮುಂದಿನ ರಾಜಕೀಯ ಸ್ಥಿತ್ಯಂತರಗಳನ್ನ ಇಂದು ಅವಲೋಖಿಸಿದಾಗ ಇದೊಂದು ತಪ್ಪು ನಿರ್ಣಯವಾಗಿತ್ತು ಅನಿಸುತ್ತದೆ.

ಅಂದು ಬಯಸದೆ ತನ್ನನ್ನ ಆವರಿಸಿದ ಕಾಳಗದಿಂದಾದ ರಕ್ತಪಾತದಿಂದ ನೊಂದ ಮಾರ್ತಾಂಡ ವರ್ಮ ಅಧಿಕಾರ ತ್ಯಜಿಸಲು ನಿರ್ಧರಿಸಿದ! ತನ್ನ ಸೊತ್ತೆಲ್ಲವನ್ನೂ ಸಾಮ್ರಾಜ್ಯದ ಸಹಿತ ತಿರುವನಂತಪುರದ ಶ್ರೀಅನಂತಪದ್ಮನಾಭಸ್ವಾಮಿಗೆ ಅರ್ಪಿಸಿದ. ಅದ ನಂತರ ತಾನು ಕೇವಲ "ಅನಂತಪದ್ಮನಾಭ ದಾಸ"ನೆಂದು ಕರೆಸಿಕೊಂಡು ಮಲಗಿದ ಭಂಗಿಯಲ್ಲಿರುವ ಆ ಮಹಾವಿಷ್ಣುವಿನ ಪ್ರತಿನಿಧಿಯಾಗಿ ಮಾತ್ರ ತನ್ನನ್ನ ಗುರುತಿಸಿಕೊಂಡುˌ ಭಗವಂತನ ರಾಜ್ಯವಾದ ಆ ತಿರುವಾಂಕೂರು ಸಂಸ್ಥಾನವನ್ನ ದೇವರ ಪರವಾಗಿ ಆಳಲು ಆರಂಭಿಸಿದ. ಅವನ ಮುಂದಿನ ಪೀಳಿಗೆಯವರೂ ನಿಯತ್ತಿನಿಂದ ಇದೆ ನೀತಿಯನ್ನ ಪಾಲಿಸಿ ಪಟ್ಟಾಭಿಷೇಕದ ಬದಲು ಹಿರಣ್ಯಗರ್ಭ ಸಂಸ್ಕಾರದ ವಿಧಿಯನ್ನ ಅನುಸರಿಸುತ್ತಾ ಸದಾಕಾಲಕ್ಕೂ ಸಹ ತಲೆಮಾರುಗಳವರೆಗೂ ಈಗಲೂ "ಪದ್ಮನಾಭದಾಸ"ರಾಗಿಯೆ ಉಳಿದಿದ್ದಾರೆ.

*****

ವಾಸ್ಕೊ-ಡ-ಗಾಮ ಭಾರತದಲ್ಲಿ ತನ್ನ ಮೊದಲ ಹೆಜ್ಜೆಯೂರಿದ್ದ ಕೊಯಿಲಾಂಡಿಯಲ್ಲೆ ಸ್ವತಂತ್ರ್ಯ ಪೂರ್ವದ ೧೮೯೭ರಲ್ಲಿ ಹುಟ್ಟಿದ್ದ ಅನಾಥ ಶಿಶುವೆ ಭಗವಾನ್ ನಿತ್ಯಾನಂದರು. ಹೆತ್ತ ತಂದೆ ತಾಯಿ ಯಾರೆಂದೆ ಗೊತ್ತಿಲ್ಲದ ಆ ಮಗುವನ್ನ ರೈತಾಪಿ ದಂಪತಿಗಳಾಗಿದ್ದ ಉಣ್ಣಿಯಮ್ಮ ಹಾಗೂ ಚಾತು ನಾಯರ್ ದಂಪತಿ ತಮ್ಮ ದತ್ತು ಪುತ್ರನನ್ನಾಗಿ ಸ್ವೀಕರಿಸಿದರು. ಅದಾಗಲೆ ಮನೆ ತುಂಬಾ ಮಕ್ಕಳಿದ್ದರೂ ಇವರನ್ನೂ ಸ್ವಂತ ಮಗನಾಗಿಯೆ ಪರಿಗಣಿಸಿ ರಾಮನ್ ಅನ್ನುವ ಹೆಸರಿಟ್ಟು ಪಾಲಿಸಿದರು. ದುರದೃಷ್ಟವಶಾತ್ ಆರಂಭದಲ್ಲಿ ಇನ್ನೂ ಮೂರುವರ್ಷಗಳ ಪ್ರಾಯವಾಗಿದ್ದಾಗಲೆ ತಮ್ಮ ಸಾಕು ತಂದೆಯನ್ನೂ ಹಾಗೂ ಆರರ ಪ್ರಾಯದಲ್ಲಿ ತಾಯಿಯನ್ನೂ ಕಳೆದುಕೊಂಡು ರಾಮನ್ ಮತ್ತೊಮ್ಮೆ ಅನಾಥನಾದ. ಸಾಯುವ ಮುನ್ನ ಉಣ್ಣಿಯಮ್ಮ ತಾವು ಗೇಣಿಗೆ ಗದ್ದೆಯನ್ನ ಹಿಡಿದಿದ್ದ ವಕೀಲ ಈಶ್ವರ ಅಯ್ಯರ್ರ ಮಡಿಲಿಗೆ ಈ ನತದೃಷ್ಟ ಮಗುವಿನ ಲಾಲನೆ ಪಾಲನೆಯ ಹೊಣೆಯನ್ನೊಪ್ಪಿಸಿ ಕಣ್ಮುಚ್ಚಿದ್ದರಂತೆ.

ಬೆಳೆಯುತ್ತಿದ್ದಂತೆ ಅಧ್ಯಾತ್ಮದತ್ತ ಹೊರಳಿದ ರಾಮನ್ ತನ್ನ ಹದಿಹರೆಯದಲ್ಲೆ ಕೇವಲ ಕೌಪಿನವೊಂದನ್ನಷ್ಟೆ ಉಟ್ಟು ದೇಶಾಂತರ ಹೊರಟ. ಹಿಮಾಲಯದವರೆಗೂ ಅಂಡಲೆದು ಪಡೆದ ಅಧ್ಯಾತ್ಮಿಕ ಸಾಧನೆಯ ನಂತರ ಕಾಙಂನಗಾಡಿನ ಹೊಸದುರ್ಗ ಕೋಟೆಯ ಪರಿಸರದಲ್ಲಿ ನೆಲೆ ನಿಂತ. ಅಲ್ಲಿ ಸ್ವತಃ ತಾನೆ ಮೇಲೆ ಗುಳಿಗನ ನೆಲೆಯಿದ್ಧ ಪುಟ್ಚ ಬೆಟ್ಚವೊಂದರ ಒಡಲಾಳದಲ್ಲಿದ್ದ ಮುರಕ್ಕಲ್ಲುಗಳಲ್ಲಿ ನಲವತ್ತಮೂರು ಗುಹೆಗಳನ್ನ ಕೊರೆದ. ಅದೆ ಇಂದು ಅಲ್ಲಿರುವ ಶ್ರೀನಿತ್ಯಾನಂದಾಶ್ರಮ. ಆ ಗುಹೆಗಳೆ ಧ್ಯಾನಸ್ಥಾನ.

ಅಲ್ಲಿಂದ ಘಟ್ಟದ ದಿಕ್ಕಿನಲ್ಲಿ ಐದು ಕಿಲೋಮೀಟರುಗಳಾಚೆ ಆಗ ಅಲ್ಲಿ ವಾಸವಿದ್ದ ಕೊರಗರ ಮನ ಒಲಿಸಿ ಪಡೆದ ಜಾಗದಲ್ಲಿ ಪ್ರಕೃತಿಯ ಮಡಿಲ ಮಧ್ಯೆ ಅವರೆ ನಿರ್ಮಿಸಿರುವ ಗುರುವನ ಆ ಊರಿನಲ್ಲಿರುವ ಮತ್ತೊಂದು ಅದ್ಭುತ. ದೇವಗಂಗೆಯನ್ನೆ ಅಲ್ಲಿಗೆ ಗುರುಗಳು ಇಳಿಸಿದ್ದಾರೆ ಎಂದು ನಂಬಲಾಗುವ ಗೋಮುಖ ತೀರ್ಥವೊಂದಲ್ಲಿದೆ. ಮಲೆಯ ಆಳದಿಂದ ಉಕ್ಕಿಬರುವ ಆ ನೀರಿನಲ್ಲೇನೋ ಸೊಗಸಿದೆ. ಆ ನೀರಲ್ಲಿ ಮಿಂದರೆ ಮೈ ಮನ ಹಗುರಾಗುವ ಭಾವ ಆವರಿಸುತ್ತದೆ. ಮಿಂದವರಿಗೆ ಹೊಸ ಸುಗಂಧ ಹೊತ್ತ ಅನುಭವವಾಗುತ್ತದೆ. ಇವನೂ ಅಲ್ಲಿಗೆ ಹೋದಾಗ ಆ ಅಕ್ಷಯ ಜಲದಲ್ಲಿ ಮಿಂದು ಉಲ್ಲಸಿತನಾದ. ಆ ಪರಿಸರದ ಹಸಿರು ಆಹ್ಲಾದಕರವಾಗಿತ್ತು.

( ಇನ್ನೂ ಇದೆ.)

https://youtu.be/nqiAwAlP1NM

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೮.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೮.👊







"ವೀರ್ - ಝಾರಾ" ಮೂಲಕ ಯಶ್ ಛೋಪ್ರಾ ಸಿನೆಮಾ ಬಳಗದಲ್ಲಿ ಮೊದಲಿನಿಂದಲೂ ಇದ್ದ ಮದನ್ ಮೋಹನಸಾಬರ ಮಗ ಸಂಜೀವ ಕೋಹ್ಲಿ ಯಶಸ್ವಿಯಾಗಿ ಅವರಪ್ಪನ ಆ ಅಮೂಲ್ಯ ರತ್ನದಂತಹ ಹಾಡುಗಳನ್ನ ಹೊಸತಾಗಿ ಸಿನೆಮಾವೊಂದರಲ್ಲಿ ಅಳವಡಿಸಿ ಗೆದ್ದಿದ್ದರು. ಅದೂ ಸಹ ಸರಿಸುಮಾರು ಸಂಯೋಜನೆಯಾದ ದಿನಕ್ಕಿಂತ ಮೂವತ್ತು ವರ್ಷಗಳ ನಂತರ. ಇದಕ್ಕಿಂತ ಒಳ್ಳೆಯ ಸಕಾಲಿಕ ಉದಾಹರಣೆಯನ್ನ ಕೊಟ್ಟು ಅವರ ಸಂಗೀತದ ಸಮೃದ್ಧಿಯನ್ನ ವಿವರಿಸಲು ಅವನಿಂದಂತೂ ಸಾಧ್ಯವಿಲ್ಲ. ಅಷ್ಟು ಕಾಲಾತೀತ ಹಾಡುಗಳವರವು.


ಎಲ್ಲಿಯ ಅರವತ್ತರ ದಶಕದ ಮದನ ಮೋಹನ್ ಗೀತೆಗಳು? ಅದೆಲ್ಲಿಯ ತೊಂಬತ್ತರ ದಶಕದಲ್ಲಿ ನಿಧಾನವಾಗಿ ಹೊರ ಪ್ರಪಂಚಕ್ಕೆ ಕಣ್ತೆರೆಯತ್ತಿದ್ದ ಪ್ರಸಾದಪುರವೆನ್ನುವ ಪುಟ್ಟ ಊರಿನ ಯಕಶ್ಚಿತ್ ಇವನು? ಒಟ್ಟಿನಲ್ಲಿ ತನ್ನ ಪ್ರಾಯಕ್ಕಿಂತ ಕನಿಷ್ಠ ಕಾಲು ಶತಮಾನ ಹಿಂದಿನ ಹಿಂದಿ ಹಾಡುಗಳ ಮನಮೋಹಕತೆಗೆ ಮದನ್ ಮೋಹನ್ ಸಾಬರ ಮಾಧುರ್ಯಭರಿತ ಹಾಡುಗಳ ಮೂಲಕ ಇವನ ಅರಿವಿನ ಕಣ್ಣುಗಳು ಮೆಲ್ಲಗೆ ತೆರೆದುಕೊಳ್ಳಲಾರಂಭಿಸಿತ್ತು. ದೇಹ ಹೊಸತಾಗಿದ್ದರೂ ಮನಸು ಮಾತ್ರ ಪುರಾತನ ಕಾಲದಲ್ಲಿದ್ದ ವಿಚಿತ್ರ ಮನಸ್ಥಿತಿಯಲ್ಲಿ ಅಂದೂ ಇದ್ದˌ ಇಂದೂ ಇದ್ದಾನೆ.


ಕೆ ಪಿ ಸೈಗಲ್ˌ ಸರ್ದಾರ್ ಮಲಿಕ್ˌ ಹೇಮಂತಕುಮಾರ್ˌ ಚಿತ್ರಗುಪ್ತˌ ಸಿ ರಾಮಚಂದ್ರˌ ಖಯ್ಯಾಂˌ ರವಿˌ ಜೈದೇವ್ˌ ವಸಂತ ದೇಸಾಯಿˌ ಸಚಿನದೇವ ಬರ್ಮನ್ˌ ನೌಷಾದ್ˌ ಶಂಕರ್ - ಜೈಕಿಶನ್ˌ ರವೀಂದ್ರ ಜೈನ್ˌ ಒ ಪಿ ನಯ್ಯರ್ˌ ಮದನಮೋಹನ ಸಾಬ್ ಇವರದ್ದೆಲ್ಲಾ ಸಹ ಬೇರೆಯೆ ಕೌಶಲ್ಯದ ಸಂಗೀತ. ಒಬ್ಬೊಬ್ಬರದೂ ವಿಭಿನ್ನ ಶೈಲಿ. ಅದನ್ನ ನಿರಂತರವಾಗಿ ಕೇಳುವ ಹವ್ಯಾಸವಿಲ್ಲದಿದ್ದರೆ ಗ್ರಹಿಸೋದು ಕಷ್ಟ. ಗ್ರಹಿಕೆಯ ಪರಿಧಿ ವಿಸ್ತರಿಸಿದ ಮದನಮೋಹನ ಸಾಬರ ಹಾಡುಗಳಿಗೆ ಅವನು ಎಷ್ಟು ಋಣಿಯಾಗಿದ್ದರೂ ಸಾಲದು. ಸಿನೆಮಾ ಸಂಗೀತದ ವಿಷಯದಲ್ಲಿ ಅವನ ಆಸಕ್ತಿ ಇನ್ನಷ್ಟು ಆಳವಾಗಿಸಿದ್ದು ಅವರ ಗೀತೆಗಳ ಲಾಲಿತ್ಯವಲ್ಲದೆ ಮತ್ತಿನ್ನೇನೂ ಅಲ್ಲ.

ಬೆಳೆದು ನಿಂತ ಮೇಲೆ ಇಷ್ಟವಾಗಬೇಕಿದ್ದ ಹಾಡುಗಳು ಎಳವೆಯಲ್ಲೆ ಆಪ್ತವೆನಿಸೋದು ಒಂದು ವಿಶೇಷ ಗುಣವೋ ಇಲ್ಲಾ ಅದೊಂದು ಮಾನಸಿಕ ಊನವೋ ಅವನಿಗೆ ಖಚಿತವಿಲ್ಲ. ಆದರೆ ಅವನ ಸಮಕಾಲೀನವಲ್ಲದ ಆ ಹಳೆಯ ಸೊಗಡಿನ ಅರ್ಥಗರ್ಭಿತ ಹಾಡುಗಳನ್ನ ಆಲಿಸುವಾಗಲೆಲ್ಲಾ ಪೂರ್ವಜನ್ಮದ ಪ್ರತಿಧ್ವನಿಯೊಂದು ಮನಸಿನಾಳದಿಂದ ಅನುರಣಿಸಿ ಬರುವ ಭಾವದಲ್ಲಿ ಹುದುಗಿ ಹೋಗುತ್ತಿದ್ದ. ಅವುಗಳ ಭಾವ ಲಹರಿಗೆ ಸಹಜವಾಗಿ ಅವನ ಮನದ ಭಾವತರಂಗಗಳು ಅನುರಣಿಸುತ್ತಿದ್ದವು. ಒಂಥರಾ ಮಧುರ ಪ್ರಚೋದನೆಯನ್ನ ಮೌನದಲ್ಲವು ಅವನೊಳಗೆ ಹುಟ್ಟಿಸುತ್ತಿದ್ದವು.


*****

ಹುಟ್ಟಾ ಪುಂಡನೆಂದೆ ಮನೆ ಮಂದಿಯೆಲ್ಲಾ ತೀರ್ಮಾನಿಸಿದ್ದ ಕಾರಣˌ ಅಷ್ಟೆಲ್ಲಾ ಹಾಡಿನ ಹುಚ್ಚಿದ್ದರೂ ಸಹ ಮನೆಯ ಅಮೂಲ್ಯ ವಸ್ತುಗಳೆಂದೆ ಪರಿಗಣಿತವಾಗಿದ್ದ ರೇಡಿಯೋವನ್ನಾಗಲಿˌ ಕಾಯಿಲ್ ಇರುವ ವಿದ್ಯುತ್ ಸ್ಟವನ್ನಾಗಲಿˌ ಟೂ ಇನ್ ವನ್ನನ್ನಾಗಲಿˌ ಅದರ ಹಿಂದೆ ಹಿಂದೆಯೆ ತರಲಾಗಿದ್ದ ಡಯನೋರಾ ಟಿವಿˌ ಸುಮಿತ್ ಮಿಕ್ಸರ್ˌ ರ್ಯಾಲಿ ಟೇಬಲ್ ಫ್ಯಾನು ಅಥವಾ ಮಾವಂದಿರು ಬಿಟ್ಟು ಹೋಗಿದ್ದ ಹರ್ಕ್ಯುಲಸ್ ಸೈಕಲ್ಲನ್ನಾಗಲಿ ಇದ್ಯಾವುದನ್ನೂ ಮುಟ್ಟಲು ಅಥವಾ ಚಲಾಯಿಸಲು ಅವನಿಗೆ ಅನುಮತಿ ಇರಲಿಲ್ಲ. ಇದರಲ್ಲಿ ಯಾವುದೆ ವಸ್ತುವನ್ನ ಇವನು ಮುಟ್ಟಿದರೆ ಸಾಕು ಅವು ಕೂಡಲೆ ಕೆಟ್ಟು ಬಿಡುತ್ತವೆ ಅಂತ ಮನೆಮಂದಿಯೆಲ್ಲ ಬಲವಾಗಿ ನಂಬಿದ್ದಷ್ಟೆ ಅಲ್ಲದೆ ಇವನನ್ನೂ ನಂಬಿಸಿಬಿಟ್ಟಿದ್ದರು! ಹೀಗಾಗಿ ಕದ್ದುಮುಚ್ಚಿ ಯಾರೂ ನೋಡದ ಹೊತ್ತಲ್ಲಿ ಮಾತ್ರ ವಯೋಸಹಜ ಪ್ರಚೋದನೆಗೊಳಗಾಗಿ ಅವುಗಳನ್ನ ಮುಟ್ಟಿಯೋ ಇಲ್ಲಾ ಸವರಿಯೋ ತೃಪ್ತಿ ಪಟ್ಟುಕೊಳ್ಳೋದಷ್ಟೆ ಅವನಿಗೆ ಸಾಧ್ಯವಾಗುತ್ತಿದ್ದುದು. ಹಾಗೆ ಕಳ್ಳತನದಲ್ಲಿ ಮುಟ್ಟಿದವುಗಳು ಬಹುಶಃ ತನ್ನ ಸ್ಪರ್ಷದಿಂದ ಕೆಟ್ಟು ಹೋಗಿರಬಹುದುˌ ಮನೆಯವರಿಗೆ ಈ ವಿಷಯ ಗೊತ್ತಾದರೆ ತನ್ನ ಪರಿಸ್ಥಿತಿ ಹದಗೆಡಬಹುದು ಅನ್ನುವ ಭೀತಿಯಿಂದಲೆ ಅವುಗಳನ್ನ ಮನೆಯ ಹಿರಿಯರ್ಯಾರಾದರೂ ಮರಳಿ ಚಲಾಯಿಸುವವರೆಗೆ ಮಳ್ಳನಂತೆ ಕಾಯುತ್ತಿದ್ದ. ಯಾವುದೆ ತಕರಾರಿಲ್ಲದೆ ಎಂದಿನಂತೆ ಅವು ಚಾಲನೆಗೊಂಡಾಗ ದೊಡ್ಡ ಗಂಡಾಂತರವೊಂದರಿಂದ ಪಾರಾದ ಒಂದು ನೆಮ್ಮದಿಯ ನಿಟ್ಟುಸಿರು ಅರಿವಿಲ್ಲದಂತೆಯೆ ಅವನಿಂದ ಹೊರಹೊಮ್ಮುತ್ತಿತ್ತು.

ಅವರೆಲ್ಲರ ಆ ಗಟ್ಟಿ ನಿಲುವು ಪೂರ್ತಿ ಸುಳ್ಳೇನೂ ಆಗಿರಲಿಲ್ಲ. ದೀಪಾವಳಿಯ ಒಂದು ದಿನ ಪಟಾಕಿ ಹಚ್ಚಲು ಸುರುಸುರುಬತ್ತಿಯೊಂದನ್ನ ಉರಿಸಿ ತರಲು ವಿದ್ಯುತ್ ಒಲೆ ಹಚ್ಚಿ ಅದರ ಕಾಯಿಲ್ ಕೆಂಡದಂತೆ ಕೆಂಪಾದಾಗ ನೇರವಾಗಿ ಆ ಸುರುಸುರುಬತ್ತಿಯನ್ನ ಅದಕ್ಕಿಟ್ಟಿದ್ದ! ಹೊಡೆದ ವಿದ್ಯುದಘಾತ ಎತ್ತಿ ಅಡುಗೆ ಕೋಣೆಯ ಮತ್ತೊಂದು ಮೂಲೆಗೆ ಹೋಗಿ ಬೀಳುವಂತೆ ಬಿಸಾಡಿತು ನೋಡಿ! ಕೆಟ್ಟ ಮೇಲೆ ಬುದ್ಧಿ ತಾನೆ ತಾನಾಗಿ ಬಂತವನಿಗೆ. ಮುಟ್ಟಬಾರದು ಅಂತ ಹೇಳಿದ ಮೇಲೂ ಕದ್ದುಮುಚ್ಚಿ ಮಾಡಿದ್ದ ಅಪರಾಧ ಅದಾಗಿದ್ದರಿಂದ ಯಾರೊಂದಿಗೂ ಆದ ನೋವನ್ನ ಹೇಳಿಕೊಳ್ಳುವಂತೆಯೂ ಇರಲಿಲ್ಲ. ಅವಡುಗಚ್ಚಿಕೊಂಡು ಆದ ಸಂಕಟವನ್ನ ಕಮಕ್-ಕಿಮಕ್ ಅನ್ನದೆ ಸಹಿಸಿಕೊಂಡ. 

ಆದರೂ ಒಂಥರಾ ಕೈಕಟ್ಟಿದಂತಹ ಈ ಕಠಿಣ ನಿರ್ಬಂಧಗಳು ಅವನಿಗೆ ಚೂರೆಚೂರೂ ಇಷ್ಟವಾಗುತ್ತಿರಲಿಲ್ಲ. ಬೇರೆ ಇನ್ಯಾವ ವಸ್ತುಗಳಲ್ಲೂ ಅವನಿಗೆ ಆಸಕ್ತಿ ಮೊಳೆತಿರಲಿಲ್ಲ. ಆದರೆ ತಾನೂ ರೇಡಿಯೋ ಕಿವಿ ಹಿಂಡಿ ಧಾರವಾಡˌ ಮಂಗಳೂರುˌ ಬೆಂಗಳೂರುˌ ಭದ್ರಾವತಿ ಅಂತ ಅದನ್ನ ಸರ್ಕೀಟು ಹೊರಡಿಸಬೇಕು ಅನ್ನುವ ಆಸೆ ಅವನಿಗೂ ಇತ್ತು. ಆದರೆ ಅದಕ್ಕೆ ಮುಕ್ತ ಅವಕಾಶವಿರಲಿಲ್ಲ ಅಷ್ಟೆ. ಅವನ ಆಸಕ್ತಿಯಿದ್ದದ್ದೂ ಸೀಮಿತ ವಸ್ತುಗಳ ಮೇಲೆ ಮಾತ್ರ. ಮುಖ್ಯವಾಗಿ ರೇಡಿಯೋ ಹಾಗೂ ಸೈಕಲ್. ಅದರಲ್ಲೂ ಉಪಯೋಗಿಸುವವರಿಲ್ಲದೆ ಸೈಕಲ್ ಮಾರಿದ ನಂತರ ಆ ಮನೆಯಲ್ಲಿ ರೇಡಿಯೋ ಒಂದೆ ಅಲ್ಲುಳಿದಿದ್ದ ಅವನ ಪಾಲಿನ ಕಣ್ಮಣಿ. 


ಕದ್ದುಮುಚ್ಚಿಯಷ್ಟೆ ಚೂರುಪಾರು ಮುಟ್ಟಿಯೋ ಸವರಿಯೋ ಆಗಾಗ ಅವಕಾಶ ಸಿಕ್ಕಾಗಲೆಲ್ಲಾ ತನ್ನ ಮನದಾಸೆಯನ್ನ ಈಡೇರಿಸಿಕೊಳ್ಳಲು ಸೆಣೆಸುತ್ತಿದ್ದ. ಅಪ್ಪಿತಪ್ಪಿ ಈ ಕ್ರೈಮು ಅವನ ಚಿಕ್ಕಮ್ಮಂದಿರ ಗೃಧ್ರ ದೃಷ್ಟಿಗೇನಾದರೂ ರೆಡ್ ಹ್ಯಾಂಡಾಗಿ ಸಿಕ್ಕಿ ಹಾಕಿಕೊಂಡು ಬಿಟ್ಟರೆ ದೊಡ್ಡ ಪ್ರಹಸನವೆ ನಡೆದುˌ ಯಾವ ನ್ಯಾಯವಾದ ವಿಚಾರಣೆಯನ್ನೂ ನಡೆಸದೆ ಸರ್ವಾನಮತದಿಂದ ಅಪರಾಧಿಯೆಂದು ತೀರ್ಮಾನಿಸಲಾಗುತ್ತಿದ್ದ ಅವನನ್ನ ಮುಲಾಜಿಲ್ಲದೆ ಮನೆಮಂದಿಯೆಲ್ಲ ತಮ್ಮ ತಮ್ಮ ಮೊನಚು ಮಾತಿನಿಂದಲೆ ಶೂಲಕ್ಕೇರಿಸಿ ತಲೆಯನ್ನ ಮೊಟಕಿ ಮೊಟಕಿಯೆ ಬುದ್ಧಿ ಕಲಿಸಲು ಹವಣಿಸುವುದು ಖಾತ್ರಿಯಿತ್ತು.


*****

ಕಾಲಾಂತರದಲ್ಲಿ ತನ್ನ ಭವಿಷ್ಯ ಬದಲಾದಂತೆಯೆˌ ಕೇರಳ ಜೊತೆಜೊತೆಗೆ ಭಾರತದ ಭವಿಷ್ಯವನ್ನೂ ಸಹ ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಒಂದೊಮ್ಮೆ ಕೇರಳದ ದಕ್ಷಿಣ ತೀರ ಕುಲಚೆಲ್ಲಿನಲ್ಲಿ ಬರೊಬ್ಬರಿ ಇಪ್ಪತ್ತೊಂದು ದಿನ ನಡೆದ ನಿರ್ಣಾಯಕ ಯುದ್ಧದಲ್ಲಿ ಅಂದಿನ ಜಾಗತಿಕ ನೌಕಾದಳಗಳಲ್ಲೆ ಅತ್ಯಾಧುನಿಕವೆನಿಸಿದ್ದ ಡಚ್ ಈಸ್ಟ್ ಇಂಡಿಯಾ ಕಂಪನಿಯ ಸೇನೆಯನ್ನ ಆಗ ತಿರುವಾಂಕೂರನ್ನ ಆಳುತ್ತಿದ್ದ ರಾಜ ಮಾರ್ತಾಂಡ ವರ್ಮ ನಿರ್ಣಾಯಕವಾಗಿ ಮಣಿಸಿ ಕೇರಳದಿಂದ ಶಾಶ್ವತವಾಗಿ ನೆಲೆ ಕಿತ್ತು ಅವರು ಸಿಲೋನಿಗೆ ಪಲಾಯನ ಮಾಡುವಂತೆ ಮಾಡಿರದಿರುತ್ತಿದ್ದರೆ ಬಹುಶಃ ಭಾರತ ಇಂದು ಬ್ರಿಟಿಷ್ ವಸಾಹತಾಗಿರದೆ ಡಚ್ ವಸಾಹತಾಗಿರುತ್ತಿತ್ತು. ಹಾಗೂˌ ನಾವು ಭಾರತೀಯರೆಲ್ಲ ಇಂದು ಇಂಗ್ಲೀಷಿನ ಮೋಹಕ್ಕೆ ಮರುಳಾದಂತೆ ಬಹುಶಃ ಡಚ್ ಭಾಷೆಯ ಮೋಹದ ಗೀಳಿಗೆ ಸಿಕ್ಕುಹಾಕಿಕೊಂಡು ಮಾತು ಮಾತಿನ ನಡುವೆ ಇಂಗ್ಲಿಷ್ ಬಳಸುವಂತೆ ಡಚ್ ಬಳಸುವ ಎಲ್ಲಾ ಅಪಾಯಗಳೂ ಇದ್ದವು. 

೧೭೪೧ರ ಅಗೋಸ್ತು ತಿಂಗಳಿನ ಮುಂಗಾರು ಮಳೆಯ ಕಾಲದಲ್ಲಿ ಡಚ್ಚರ ಹೆಡೆಮುರಿ ಕಟ್ಟಿ ಮಾರ್ತಾಂಡ ವರ್ಮ ಅವರನ್ನ ಸಿಲೋನಿಗೆ ಅಟ್ಟಿದ್ದˌ ಅವನ ಬೆದರಿಕೆ ಹೇಗಿತ್ತೆಂದರೆ ಮತ್ತೆಂದೂ ಡಚ್ಚರು ಭಾರತದತ್ತ ತಿರುಗಿ ನೋಡಲಿಲ್ಲ.

( ಇನ್ನೂ ಇದೆ.)


https://youtu.be/zqDSHFG9Xm8

19 December 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೭.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨೭.👊




ಆದರೂ ಬೆಳ್ಳಂಬೆಳಗ್ಯೆಯೆ ತನ್ನ ಮೇಲಾದ ಆ ಬಲವಂತದ ಔಷಧ ಪ್ರಾಶನದ ದೌರ್ಜನ್ಯದ ವಿರುದ್ಧ ಇನ್ನೂ ಪಿಸುರು ಕೂಡ ತೆಗೆಯದ ಒಂದೆ ಕಣ್ಣಿನಲ್ಲಿ ಕಣ್ಣೀರು ಹಾಕುತ್ತಿದ್ದಂತೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ "ಭೂಲೆ ಬಿಸರೆ ಗೀತ್" ಮಾಲಿಕೆಯಲ್ಲಿ "ಲಗ್ ಜಾ ಗಲೇ...." ಹರಿದು ಬಂತು ನೋಡಿ ಅವನಿಗೆ ಅರಿವಿಲ್ಲದಂತೆ ಅವನ ಭಾವದ ಕಟ್ಟೆ ಒಡೆದು ಹರಿಯಲು ತಯಾರಾಗಿ ಬಿಟ್ಟಂತಾಯಿತು. ಮಲಗುವ ಕೋಣೆಯಲ್ಲಿದ್ದ ರೇಡಿಯೋದಿಂದ ಸುಸ್ಪಷ್ಟವಾಗಿ ಕೇಳುತ್ತಿದ್ದ ಆ ಗಂಧರ್ವ ರಾಗವನ್ನ ಆಲಿಸುತ್ತಾ ಕಲ್ಲಾದವನಂತೆ ಕಡೆಯುವ ಕಲ್ಲಿನ ಪಕ್ಕದ ಮಣೆಯ ಮೇಲೆಯೆ ಗೋಡೆಗೊರಗಿ ಕುಕ್ಕರಿಸಿದ. 

ರೇಡಿಯೋದ ಸಕಲೆಂಟು ಗಲಭೆಗಳ ಮಧ್ಯೆ ಅಷ್ಟಿಷ್ಟು ಕೇಳುತ್ತಿದ್ದ ಹಾಡು ಅಷ್ಟು ಬೇಗ ಮುಗಿದಾಗ ಮೊದಲಬಾರಿಗೆ ಹಾಡೊಂದು ಬಹಳ ಬೇಗ ಮುಗಿದ ಕಾರಣಕ್ಕೆ ತೀವೃ ನಿರಾಸೆ ಅನುಭವಿಸಿದ. ಕಣ್ಣಿಂದ ಕಂಬನಿ ಹರಿಯುತ್ತಿತ್ತು. ಅದನ್ನ ನೋಡಿದ ಎಲ್ಲರೂ ಔಷಧಿ ಕುಡಿಸಿದ್ದಕ್ಕೆ ನಾಟಕ ಮಾಡ್ತಿದ್ದಾನೆ ಅನ್ನೋ ತೀರ್ಪು ಕೊಟ್ಟರು. ಆದರೆ ಗರ ಬಡಿದಂತೆ ಕೂತು ಕಣ್ಣೀರಿಡಲು ವಿವರಿಸಲಾಗದ ಕಾರಣವೂ ಒಂದಿರಬಹುದುˌ ಸಂಕಟಕ್ಕಷ್ಟೆ ಅಲ್ಲ ಸಂತಸ ಹೆಚ್ಚಾದಾಗಲೂ ಬರೋದು ಕೇವಲ ಕಣ್ಣೀರೆ ಅನ್ನುವ ಕಲ್ಪನೆ ಸ್ವತಃ ಅವನಿಗೇನೆ ಅರಿವಿದ್ದಿರದ ಪ್ರಾಯ ಅದು. ಆ ಮಾನಸಿಕ ಸ್ಥಿತಿಯನ್ನ ಸರಿಯಾದ ಪದಗಳಲ್ಲಿ ಹಿಡಿದು ಅರ್ಥಪೂರ್ಣ ವಾಕ್ಯವಾಗಿಸಿ ವಿವರಿಸಿ ಹೇಳುವಷ್ಟು ವ್ಯಾಕರಣ ಬದ್ಧ ಕನ್ನಡವೂ ಅವನಿಗಿನ್ನೂ ಬರುತ್ತಿರಲಿಲ್ಲ. 

ಒಂದು ವೇಳೆ ಆದ ಆ ದೈವೀಕ ಅನುಭವವನ್ನು ಬರಿಮಾತಿನಲ್ಲೇನಾದರೂ ಅವನು ವಿವರಿಸಲು ಶಕ್ತನಾಗಿದ್ದರೆˌ ತಾವು ಸರಿಯಾಗಿ ಕೇಳದೆ ಕಳೆದೆ ಹೋದ ಆ ಅಮೂಲ್ಯ ಹಾಡನ್ನ ಕೇಳದೆ ಹೋಗಿ ತಮಗಾದ ತುಂಬಲಾರದ ನಷ್ಟಕ್ಕೆ ಮನೆ-ಮಂದಿಯೆಲ್ಲಾ ಅಪಾರ ದುಃಖ ಪಡೋದು ಖಾತ್ರಿಯಿತ್ತು! ಅನ್ನುವಷ್ಟರ ಮಟ್ಟಿಗೆ ಅದರ ಆಲಾಪನೆಯ ಮೋಡಿಗೆ ಅವನು ಸಿಕ್ಕಿಹಾಕಿಕೊಂಡು ಬಿಟ್ಟಿದ್ದ. ಹಾಡಿನ ಮುಕ್ತಾಯದಲ್ಲಿ ಗದ್ದಲದ ಮಧ್ಯೆ ಮಧ್ಯೆ ಉದ್ಘೋಷಕಿ ಮಂಗೇಷ್ಕರ್... ಅಲಿ ಖಾನ್ˌ ಮದನ್ ಮೋಹನ್ ಅಂದದ್ದು ಮೊತ್ತಮೊದಲ ಸಲ ಕೇಳಿಸಿಕೊಂಡ. ಅಂದು ಆ ಹಾಡನ್ನ ಮೊತ್ತಮೊದಲ ಸಲ ಕೇಳಿಸಿಕೊಂಡು ಆದ ಅನುಭೂತಿಯನ್ನ ಇಂದು ಅಷ್ಟೆ ಜೀವಂತವಾಗಿ ವಿವರಿಸಲು ಅವನಲ್ಲಿ ಸೂಕ್ತ ಪದಗಳಿಲ್ಲ.

ಬೆಳೆಯುತ್ತಾ ಸಂಗೀತದಾಸಕ್ತಿಯೂ ಹೆಚ್ಚಿ ಒಂದು ಪಾಕೆಟ್ ರೇಡಿಯೋವನ್ನ ರಜೆಯ ಹೊತ್ತಲ್ಲಿ ಮನೆ ಮನೆಗೆ ಪೇಪರ್ ಹಾಕಿ ಸಂಪಾದಿಸಿದ್ದ ತನ್ನದೆ ದುಡಿಮೆಯಿಂದ ಖರೀದಿಸಿದ. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಂತೂ ತಂಪಾದ ರಾತ್ರಿ ಹಾಗೂ ಬೆಳ್ಳಂಬೆಳಗ್ಯೆ ಮಾತ್ರ ಸುಸ್ಪಷ್ಟವಾಗಿ ಅದರಿಂದ ಪ್ರಸಾರವಾಗುತ್ತಿದ್ದ ಮುಂಬೈ ವಿವಿಧಭಾರತಿ ಹಾಗೂ ಸಿಲೋನು ಕೇಂದ್ರಗಳಿಂದ ಪ್ರಸಾರವಾಗುತ್ತಿದ್ದ ಹಳೆಯ ಹಿಂದಿ ಚಿತ್ರಗೀತೆಗಳನ್ನ ಅದಕ್ಕೊಂದು ಕಿವಿಗಾಪು ಸಿಕ್ಕಿಸಿಕೊಂಡು ಕೇಳುವ ಚಟ ಹತ್ತಿಸಿಕೊಂಡ.

ಆಗಿದ್ದ ಏಕೈಕ ದೆಹಲಿ ದೂರದರ್ಶನದ ಕಾರ್ಯಕ್ರಮಗಳನ್ನ ನೋಡಿಯೋ - ಹಿಂದಿ ಸಿನೆಮಾಗಳನ್ನ ವೀಕ್ಷಿಸಿಯೋ - ಇಲ್ಲಾ ಥರೇವಾರಿ ಹಿಂದಿ ಹಾಡುಗಳನ್ನ ಆಲಿಸಿಯೋ - ಅಥವಾ ಶಾಲೆಯಲ್ಲಿ ಹಿಂದಿಯೂ ಒಂದು ಭಾಷೆಯಾಗಿ ಕಲಿಸಲಾರಂಭಿಸಿದ್ದ ಕಾರಣದಿಂದಲೋ ಹರುಕು ಮುರುಕು ಹಿಂದಿ ಅರ್ಥವಾಗುತ್ತಿತ್ತು.  ಭಾವಪೂರ್ಣವಾಗಿರುವ ಸಾಹಿತ್ಯವಿರುವ - ಲಾಲಿತ್ಯಪೂರ್ಣವಾದ ಸರಳವೆನಿಸುವ ರಾಗ ಸಂಯೋಜಿಸಲಾಗಿರುವ ಹಾಗೂ ಸುಶ್ರಾವ್ಯವಾಗಿ ಗಾಯಕರು ಹಾಡಿ ಜೀವ ತುಂಬಿರುವ ಚಿತ್ರಗೀತೆಗಳಿಗೆ ಅವನಿಗೇನೆ ಅರಿವಾಗದಂತೆ ಅವನ ಮನ ಸೋಲಲಾರಂಭಿಸಿದ್ದ ಕಾಲ ಅದಾಗಿತ್ತು. ಚಿತ್ರಗೀತೆಗಳು ಪ್ರಸಾರವಾದ ನಂತರ ಯಾರ ಸಂಗೀತ? ಯಾರು ಬರೆದ ಹಾಡದು? ಹಾಡಿದ್ದವರ್ಯಾರು? ಅನ್ನುವ ಮಾಹಿತಿಯನ್ನ ಗಮನವಿಟ್ಟು ಆಲಿಸುವ ಪ್ರವೃತ್ತಿ ಬೆಳೆಸಿಕೊಂಡ. ಈಗಿನ ಏಳು ತಿಂಗಳಿಗೆ ಅಕಾಲಿಕವಾಗಿ ಹುಟ್ಟಿರೋ ಎಫ್ ಎಂ ವಾಹಿನಿಗಳ ಆರ್ ಜೆಗಳಂತಲ್ಲದೆˌ ಆಗಿನ ಕಾರ್ಯಕ್ರಮ ನಿರೂಪಕರೂ ಸಹ ಸ್ಪಷ್ಟವಾಗಿ ಇವೆಲ್ಲ ವಿವರಗಳ ಸಹಿತ ಕೆಲವೊಮ್ಮೆ ಆ ಚಿತ್ರ ತಯಾರಾದ ವರ್ಷˌ ನಿರ್ದೇಶಕರ ಹೆಸರು ಹಾಗೂ ಅದರಲ್ಲಿ ಅಭಿನಯಿಸಿದ್ದ ನಟ - ನಟಿಯರ ಹೆಸರನ್ನೂ ಉದ್ಘೋಷಿಸುವ ಕ್ರಮವಿತ್ತು. ಅವರ ಕೃಪೆಯಿಂದ ಇವನಿಗೆ ಮದನ ಮೋಹನ ಸಾಹೇಬರ ಹಾಡುಗಳು ಒಂದೊಂದಾಗಿ ಪರಿಚಯವಾಗುತ್ತಾ ಬಂದವು.

"ಆಪ್ ಕೇ ನಜ಼ರೋನೆ ಸಮಜಾ಼" 
"ನಾ ತುಮ್ ಬೇವಫಾ ಹೋ"
"ವಹಂ ಭೂಲೀ ದಾಸ್ತಾನ್"
"ತೇರೀ ಆಂಖೋನ್ ಕೇ ಸಿವಾ"
"ಹೈಂ ತೇರಾ ಸಾಥ್ ಮೇರೀ ವಫಾ"
"ತೂ ಜಹಾ ಜಹಾ ಚಲೇಗಾ ಮೇರಾ ಸಾಯಾ"
"ರುಖೇ ರುಖೇ ಸೇ ಕದಮ್"
"ನೈನಾ ಭರಸೇ ರಿಮಜಿಮ್ ರಿಮಜಿಮ್"
"ದಿಲ್ ಡೂಂಢ್ ಥಾ ಹೈಂ"
"ಭೈಯಾ ನಾ ಧರೋ"
"ದೋ ದಿಲ್ ಟೂಠೇ ದೋ ದಿಲ್ ಹಾರೇ"
"ಜಾನಾ ಥಾ ಹಮ್ ಸೇ ದೂರ್"
"ಮಿಲೋ ನಾ ತುಮ್ ಥೋ ಹಮ್ ಗಬರಾಏ"
"ಯೂಂ ಹಸರತೋಂಕೇ ಧಾಗ್"
"ತುಮ್ ಜೋ ಮಿಲಗಏ ಹೋ"
"ಅಗರ್ ಮುಝ್ ಸೇ ಮೊಹಬ್ಬತ್ ಹೈಂ"
"ಹೋಕೇ ಮಜಬೂರ್ ಮುಝೇ"
"ಫಿರ್ ವಹೀಂ ಶಾಮ್"
"ಕರ್ ಚಲೇಂ ಹಮ್ ಫಿದಾ" ಹೀಗೆ ಸಕಲ ಭಾವಾಭಿವ್ಯಕ್ತಿಗಳಿಗೂ ಹೊಂದಿಸಿ ಅವರು ಸಂಯೋಜಿಸಿದ ಗೀತೆಗಳನ್ನ ಆಗಾಗ ಆಲಿಸುವ ಸಂದರ್ಭ ದೊರೆತಾಗಲೆಲ್ಲ ಅದೇನೋ ಅರಿವಿಲ್ಲದ ಸುಖ ಮನಸಿನ ಮನೆಯ ಕದ ತಟ್ಟಿದಂತಾಗುವ ನೆಮ್ಮದಿಯನ್ನ ಅನುಭವಿಸಿದ್ದನವನು. ಹಾಡಿನ ಮೊದಲಿಗೋ ಇಲ್ಲಾ ಕೊನೆಗೋ ಅವರ ಹೆಸರನ್ನ ಉದ್ಘೋಷಿಸಿದಾಗ ಅದು ಅಲ್ಲಿ ಹೇಳುವ ಮೊದಲೆ ತಾನು ಊಹಿಸಿದ್ದಕ್ಕೆ ಒಂಥರಾ ಪುಳಕವಾಗುತ್ತಿತ್ತು.

ರೇಡಿಯೋದ ಕಾರ್ಯಕ್ರಮಗಳ ಕೃಪೆಯಿಂದಲೆ ಅವರು ಬಾಗ್ದಾದಲ್ಲಿ ಹುಟ್ಟಿದ್ದ ಭಾರತೀಯˌ ತಾನು ಹುಟ್ಟೋಕೆ ಏಳು ವರ್ಷಗಳ ಮೊದಲೆ ಇಲ್ಲವಾಗಿದ್ದಾರೆˌ ಅವರ ಸಂಯೋಜನೆಯ ಮನಮೋಹಕ ಶೈಲಿಗೆ ಹಾಗೂ ಅವರ ಹಾಡುಗಳಲ್ಲಿನ ಅರ್ಥಪೂರ್ಣ ಸಾಹಿತ್ಯಕ್ಕೆ ಅವರನ್ನ "ಗಜ಼ಲ್ ಕಾ ಬಾದಶಾಹ್" ಅನ್ನುತ್ತಾರೆ ಅನ್ನುವ ಹೊಸ ಹೊಸ ಮಾಹಿತಿಗಳು ಅವನಿಗೆ ಸಿಗುತ್ತಾ ಹೋದವು. ಜೀವನದಲ್ಲಿ ಒಂದೆ ಒಂದು ಸಲವಾದರೂ ಅವರನ್ನ ಭೇಟಿಯಾಗಿ ತನ್ನ ಅಭಿಮಾನವನ್ನ ಹೇಳಿಕೊಳ್ಳಬೇಕು ಅನ್ನುವ ಆಸೆ ಈಡೇರಲಾಗದ ನಿರಾಸೆಯಿಂದ ಹಳಹಳಿಸಿದ. ತಾನು ಅವರ ಅಭಿಮಾನಿ ಎಂದು ಎದೆತಟ್ಟಿ ಹೇಳಿಕೊಳ್ಳಲು ಅವನು ಹೆಮ್ಮೆ ಪಡುವಂತಹ ಕಾಲ ಕೂಡ ಇತ್ತೀಚೆಗಷ್ಟೆ ಬಂದಿತ್ತು.

ಅವನು ಶಾಶ್ವತವಾಗಿ ಈ ಮಹಾನಗರಿಯ ಮಡಿಲಲ್ಲಿ ಸೇರಿ ಹೋಗಿ ಅದಾಗಲೆ ಐದು ವರ್ಷಗಳು ಸರಿದಿದ್ದವು. ಆಗಿನ್ನೂ ಚುಮುಚುಮು ಚಳಿ ಬೆಂಗಳೂರಲ್ಲಿ ಆರಂಭವಾಗಿತ್ತಷ್ಟೆˌ ಆ ತಂಪು ಹೊತ್ತಿನಲ್ಲಿ ತೆರೆಕಂಡಿದ್ದ ಚಿತ್ರ "ವೀರ್ - ಝಾ಼ರಾ"ದಲ್ಲಿ ಅವರ ಸಂಗೀತ ಸಂಯೋಜನೆ ಇತ್ತು ಅನ್ನೋದಷ್ಟೆ ಸಾಕಿತ್ತು ಅವನ ಕುತೂಹಲಕ್ಕೆ ಕೊಂಬು ಮೂಡಿಸಲು. ಅದಾಗಲೆ ಬಿಡುಗಡೆಯಾಗಿದ್ದ ಧ್ವನಿಸುರುಳಿ ಕೇಳಿ ಅದೆಷ್ಟೋ ಸಲ ಹಾಡುಗಳನ್ನ ಮನದಣಿಯೆ ಕೇಳಿ ಖುಷಿ ಪಟ್ಟಿದ್ದ. 

ಮದನ ಮೋಹನ ಸಾಬರು ಕಾಲವಾದ ಮೂರು ದಶಕಗಳ ನಂತರ ಉಪಯೋಗಿಸಲಾದ ಅವರ ಆತನಕ ಕೇಳಿರದಿದ್ದ ಹಾಡುಗಳನ್ನ ಕೇಳಿಯೆ ನಿರ್ದೇಶಕ ಯಶ್ ಛೋಪ್ರಾ ಸಿನೆಮಾದ ಕಥಾಹಂದರ ಹೊಲೆದರು ಅನ್ನುವ ಮಾಹಿತಿ ಸಿನೆಮಾ ಪತ್ರಿಕೆಯೊಂದರಲ್ಲಿ ಓದಿ ಒಂಥರಾ ಆಸಕ್ತಿ ಹುಟ್ಟಿತ್ತು. ಸಿನೆಮಾ ನೋಡಿ ಸಂಭ್ರಮಿಸಿದನಾದರೂˌ ಧ್ವನಿಸುರುಳಿಯಲ್ಲಿದ್ದ ಎರಡು ಹಾಡುಗಳು ಚಿತ್ರದಲ್ಲಿ ಕಾಣೆಯಾಗಿದ್ದಕ್ಕೆ ಬಹಳ ಬೇಜಾರಾದ. ಮೂವತ್ತು ವರ್ಷ ಹಳೆಯ ರಾಗಸಂಯೋಜನೆಗಳೂ ಸಹ ಕೊಂಚವೂ ಹಳೆಯದೆನಿಸದಷ್ಟು ಸಕಾಲಿಕವಾಗಿದ್ದವು. ಆ ಸಾಲಿನ ಸಿನೆಮಾ ಸಂಗೀತಕ್ಕಾಗಿನ ಹಲವಾರು ಪ್ರಶಸ್ತಿಗಳನ್ನ "ವೀರ್ - ಝಾ಼ರಾ" ಗೆದ್ದುಕೊಂಡಿದ್ದು ಅವನಿಗೆ ಯಾವ ಅಚ್ಚರಿಯನ್ನೂ ಹುಟ್ಟಿಸಲಿಲ್ಲ. 


ಶ್ರದ್ಧೆಯಿಟ್ಟು ಹೃದಯಾಂತರಾಳದಿಂದ ಹುಟ್ಟುವ ರಾಗಗಳು ಯಾವತ್ತಿಗೂ ಅಮರ ಅನ್ನುವುದಕ್ಕೆ ಇದೆ ತಕ್ಕ ಉದಾಹರಣೆ. ಯಾವುದೆ ಕೆಲಸಕ್ಕೂ ಅನ್ವಯಿಸಿ ಹೇಳಬಹುದಾದ ಈ ಮಾತುಗಳುˌ ಸಂಗೀತಕ್ಕೆ ಹೆಚ್ಚು ಹೊಂದಿಕೊಳ್ಳುತ್ತದೆ.

( ಇನ್ನೂ ಇದೆ.)



https://youtu.be/VZiL9sPXA-Q