06 August 2024

ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚಃ.

"ಅದ್ವೈತ* ಸಿದ್ಧಾಂತ ಜಗತ್ತಿನ ಪ್ರಾಚೀನತಮ ಅದ್ವಯ ( non-dualistic ) ಸಿದ್ಧಾಂತಗಳಲ್ಲಿ ಪ್ರಮುಖವಾದದ್ದು. 'ಅದ್ವೈತ' ಎಂದೊಡನೆ ಶ್ರೀ ಆದಿ ಶಂಕರಾಚಾರ್ಯರ ಹೆಸರು ಪ್ರಸ್ತಾಪಿಸಲ್ಪಡುತ್ತದೆ. ಅದ್ವೈತ ಸಿದ್ಧಾಂತಕ್ಕೆ ಒಂದು ತಾತ್ತ್ವಿಕ ನೆಲೆಗಟ್ಟನ್ನು ಒದಗಿಸಿ ಕೊಟ್ಟು, ಅದನ್ನು ದರ್ಶನದ ಮಟ್ಟಕ್ಕೆ ಕೊಂಡಯ್ದು ಪ್ರಚುರ ಪಡಿಸಿದವರು ಆದಿ ಶಂಕರರು. ಹಾಗೆಂದು ಶಂಕರರ ಮೊದಲು ಅದ್ವೈತ ಸಿದ್ಧಾಂತವಿರಲಿಲ್ಲವೆಂದಲ್ಲ. ಶಂಕರರು ಗೌಡಪಾದರ ಪರಂಪರೆಗೆ ಸೇರಿದ ಗೋವಿಂದ ಭಗವತ್ಪಾದರ ಶಿಷ್ಯರು. ಹಾಗಾಗಿ ಶಂಕರರಿಗಿಂತಲೂ ಮೊದಲು ಅದ್ವೈತ ಸಿದ್ಧಾಂತವು ಉದಯಿಸಿತ್ತೆಂದೂ, ಈ ಪರಂಪರೆಯಲ್ಲಿ ಅನೇಕ ಆಚಾರ್ಯರುಗಳು ಆಗಿಹೋಗಿದ್ದರೆಂದೂ ಹೇಳಬಹುದಾಗಿದೆ. 'ಅದ್ವೈತ'ವೆಂದರೆ ಎರಡಿಲ್ಲದ್ದು. ಅಂದರೆ 'ಒಂದೆ' ಆಗಿರುವುದು. ಜೀವಿಯಲ್ಲಿರುವ ಆತ್ಮನೂ, ಪರಮ ಸತ್ಯವಾದ ಬ್ರಹ್ಮ ಚೈತನ್ಯವೂ ಒಂದೆ ಆಗಿರುವುದೆಂದು ಅದರ ಸಾರ. ಈ ರೀತಿಯ ಭೇದವನ್ನು ತಿರಸ್ಕರಿಸಿರುವ ಕಾರಣ ಈ ಸಿದ್ಧಾಂತವನ್ನು ಅಭೇದ ಸಿದ್ಧಾಂತವೆಂದೂ ಕರೆಯಲಾಗುತ್ತದೆ.



ಅದ್ವೈತ ದರ್ಶನ ಇತಿಹಾಸ
ಪೀಠಿಕೆ :-
ಅದ್ವೈತ ದರ್ಶನ ೧ ( ಚರ್ಚೆ )

ಅದ್ವೈತ ಸಿದ್ಧಾಂತವು, ಪ್ರಸಿದ್ಧಿ ಮತ್ತು ಜನಪ್ರಿಯತೆ ಪಡೆದ ದರ್ಶನ. ಅದ್ವೈತವೆಂದರೆ ಎರಡಿಲ್ಲದ್ದು - ಒಂದದೆ ಎಂದು ಅರ್ಥ. ಸುಮಾರು ಕ್ರಿ.ಪೂ. ೮೦೦ -೩೦೦ ವರ್ಷಗಳ ಹಿಂದಿನ ಉಪನಿತ್ತುಗಳಲ್ಲಿ ಅದ್ವೈತ ಪರ ವಾಕ್ಯಗಳು ಸಾಕಷ್ಟಿವೆ. ಉದಾಹರಣೆಗೆ: "ಸರ್ವಂ ಖಲ್ವಿದಂ ಬ್ರಹ್ಮ" ; "ಆತ್ಮೈವೇದ ಸರ್ವಂ" ; "ಅಯಮಾತ್ಮಾಬ್ರಹ್ಮ;" ; "ಬ್ರಹ್ಮ"ವೇದ ಬ್ರಹ್ಮೈವ ಭವತಿ" ; ಇತ್ಯಾದಿ. ಇವುಗಳ ಆಧಾರದಿಂದ, ಒಂದು ವ್ಯವಸ್ಥಿತವಾದ ದರ್ಶನವನ್ನು ರೂಪಿಸುವ ಕೆಲಸ ಆಗಿರಲಿಲ್ಲ. ಸುಮಾರು ಕ್ರಿ. ಶ. ೫೦೦ ರ ರಲ್ಲಿ ಬದುಕಿರಬಹುದಾದ , ಗೌಡಪಾದ ಮುನಿಗಳು, ಮಾಂಡೂಕ್ಯ ಕಾರಿಕೆಯ ಮೂಲಕ ಮೊಟ್ಟ ಮೊದಲಿಗೆ ಅದ್ವೈತ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಮತ್ತು ದೃಢವಾಗಿ ಪ್ರತಿಪಾದಿಸಿದರು. ಗೌಡಪಾದರ ಶಿಷ್ಯರು ಗುರು ಗೋವಿಂದ ಭಗವತ್ಪಾದರು. ಅವರ ಶಿಷ್ಯರು ಶ್ರೀ ಶಂಕರರು. ಗೋವಿಂದ ಭಗವತ್ಪಾದರು "ರಸತಂತ್ರ"ವೆಂಬ ರಸಾಯನ ಶಾಸ್ತ್ರದ ಗ್ರಂಥವನ್ನು ಮಾತ್ರ ರಚಿಸಿದ್ದಾಗಿ ತಿಳಿದು ಬರುತ್ತದೆ.


ಶ್ರೀಶಂಕರಾಚಾರ್ಯರು ( ಕ್ರಿಶ.೭೮೮ - ೮೨೦. ) ಒಬ್ಬ ಅದ್ಭುತ ವ್ಯಕ್ತಿ . ಕೇರಳದ ಕಾಲಡಿಯಲ್ಲಿ ಜನಿಸಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತವನ್ನು ಸುತ್ತಿ ತಮ್ಮ ತರ್ಕ ಶಕ್ತಿಯಿಂದ ಪ್ರತಿವಾದಿಗಳನ್ನು ಸೋಲಿಸಿ, ಅದ್ವೈತದ ಧ್ವಜವನ್ನು ಎತ್ತಿ ಹಿಡಿದವರು. ಅವರು ಬದುಕಿದ್ದು ಕೇವಲ ೩೨ ವರ್ಷಗಳ ಕಾಲ ಮಾತ್ರವಾದರೂ, ಪ್ರತಿಯೊಂದು ಕ್ಷಣವನ್ನೂ, ಸಾರ್ಥಕ ಪಡಿಸಿಕೊಂಡವರು.


ಅವರ ಬಗೆಗೆ ಜನಶ್ರುತಿ ಹೀಗಿದೆ :

ಅಷ್ಟವರ್ಷೇ ಚತುರ್ವೇದೀ 
ದ್ವಾದಶೇ ಸರ್ವಶಾಸ್ತ್ರ ವಿತ್ |
ಷೋಡಶೇ ಕೃತವಾನ್ ಭಾಷ್ಯಂ 
ದ್ವಾತ್ರಿಂಶೇ ಮುನಿರಭ್ಯಗಾತ್ ||


ಅಂದರೆ:-
ಎಂಟು ವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತವರು, 
ಹನ್ನೆರಡನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, 
ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು 
ಮೂವತ್ತೆರಡನೇ ವರ್ಷದಲ್ಲಿ ಅಭ್ಯಗತರು- 
ಎಂದರೆ ಹೊರಟು ಹೋದರು.


ಅವರ ಅತ್ಯಂತ ಪ್ರಸಿದ್ಧವಾದ ಕೃತಿ ಬ್ರಹ್ಮ ಸೂತ್ರ ಭಾಷ್ಯ. ತಾರ್ಕಿಕ ಸಮಂಜಸತೆ, ಉಜ್ವಲ ದಾರ್ಶನಿಕ ಪ್ರತಿಭೆ, ಮನೋಹರ ಶೈಲಿಗಳ ಸಂಗಮ ಅದು. ಅದೊಂದು ಅಮೋಘ ಕೃತಿ. ಹಾಗೆಯೆ ಉಪನಿಷತ್ತು ಮತ್ತು ಭಗವದ್ಗೀತೆಗಳ ಮೇಲಿನ ಅವರ ಭಾಷ್ಯಗಳೂ ಅದರ ಸರಳ ನಿರೂಪಣೆ, ಅಸಾಧಾರಣ ತರ್ಕಕ್ಕೆ ಪ್ರಸಿದ್ಧಿ ಮತ್ತು ಜನಪ್ರಿಯತೆ ಪಡೆದಿದೆ. ಈ ಮೇಲಿನ ಮೂರು ವಿಷಯಕ್ಕೆ ಪ್ರಸ್ಥಾನತ್ರಯವೆಂದು ಹೆಸರು. ಅವರು ಪ್ರಸ್ಥಾನತ್ರಯದ ಮೊದಲ ಭಾಷ್ಯಕಾರರೆಂದು ಹೆಸರು ಪಡೆದಿದ್ದಾರೆ. ಅಲ್ಲದೆ ಅವರು "ಆತ್ಮ ಬೋಧೆ," ಮೊದಲಾದ ಅನೇಕ ಗ್ರಂಥಗಳನ್ನೂ ಸ್ತೋತ್ರಗಳನ್ನೂ ರಚಿಸಿದ್ದಾರೆ. ಅವರ ಶಿಷ್ಯರಾದ ಮಂಡನ ಮಿಶ್ರರು ಅವರ ಸಮಕಾಲೀನರಾದ ಮತ್ತೊಬ್ಬ ಅದ್ವೈತಿ. ಅವರು ಸುರೇಶ್ವರಾಚಾರ್ಯರೆಂದೂ - ವಾರ್ತಿಕಕಾರರೆಂದೂ ಪ್ರಸಿದ್ಧಿ. ಶಂಕರ ಭಾಷ್ಯಕ್ಕೆ ಟೀಕೆ - ವಾರ್ತಿಕವನ್ನು ಬರೆದಿದ್ದಾರೆ. 


ಶಂಕರರ ಇನ್ನೊಬ್ಬ ಶಿಷ್ಯರಾದ ಪದ್ಮಪಾದರು ಬ್ರಹ್ಮಸೂತ್ರ ಭಾಷ್ಯದ ಮೇಲೆ ಪಂಚಪಾದಿಕಾ ಎಂಬ ವ್ಯಾಖ್ಯಾನವನ್ನು ರಚಿಸಿದˌ ಶಂಕರ ಪೂರ್ವ ಯುಗ ಸಂಪಾದಿಸಿ ನಂತರ ಬಂದ ವಿದ್ಯಾರಣ್ಯರ "ಪಂಚದರ್ಶಿ" ಅತ್ಯಂತ ಜನಪ್ರಿಯ ಕೃತಿ. ಅದ್ವೈತ ದರ್ಶನವನ್ನು ಶಂಕರ ಪೂರ್ವ ಯುಗ ; ಶಂಕರ ಯುಗ ; ಶಂಕರೋತ್ತರ ಯುಗವೆಂದು ವಿಂಗಡಿಸುತ್ತಾರೆ. ಗೌಡಪಾದ ಮುನಿಗಳು ಮತ್ತು ಗೋವಿಂದಪಾದ ಭಗವತ್ಪಾದರು ಬುನಾದಿ ಹಾಕಿದ ದರ್ಶನವನ್ನು ಶಂಕರರು ಉತ್ತುಂಗ ಸ್ಥಿತಿಗೆ ತಲುಪಿಸಿ ಸ್ಪಷ್ಟರೂಪ ಕೊಟ್ಟರು. ನಂತರದ ಯುಗದಲ್ಲಿ ಶಂಕರರ ಅಭಿಪ್ರಾಯದ ಬಗೆಗೆ ವಾದ ವಿವಾದ ಭಿನ್ನಾಭಿಪಾಯಗಳ ಕೃತಿಗಳು ಉದಯಿಸಿದವು.



ಗೌಡಪಾದರು - ಗೌಡಪಾದ ಕಾರಿಕೆಯ ಸಾರಾಂಶ :


ಗೌಡಪಾದರ ಮಾಂಡೂಕ್ಯ ಕಾರಿಕೆ ಅದ್ವೈತ ದರ್ಶನದ ಗ್ರಂಥ; ೧೧೨ ಶ್ಲೋಕಗಳ ಪುಟ್ಟ ಗ್ರಂಥ. ಮಾಂಡೂಕ್ಯೋಪನಿಷತ್ತಿನ ಹನ್ನೆರಡು ( ೧೨ ) ವಾಕ್ಯಗಳ ವ್ಯಾಖ್ಯಾನ ಎನ್ನಬಹುದು. 


ಈ ಗ್ರಂಥದಲ್ಲಿ ನಾಲ್ಕು ಅಧ್ಯಾಯಗಳಿವೆ ಅವು : 

೧)ಆಗಮ ಪ್ರಕರಣ 
೨) ವೈತಥ್ಯ ಪ್ರಕರಣ 
೩) ಅದ್ವೈತ ಪ್ರಕರಣ 
೪ ) ಅಲಾತ ಶಾಂತಿ ಪ್ರಕರಣ.

ಈ ಪ್ರಕರಣಗಳಲ್ಲಿ ಮುಖ್ಯವಾಗಿ ಈ ಕೆಳಗಿನ ವಿಚಾರಗಳನ್ನು ಮಂಡಿಸಲಾಗಿದೆ:


ಅವಸ್ಥಾತ್ರಯ ವಿಚಾರ :-
ಜಾಗ್ರತ್ (ಎಚ್ಚರ), ಸ್ವಪ್ನ (ಕನಸು), ಸುಷುಪ್ತಿ (ಗಾಢ ನಿದ್ದೆ) ಇವು ಮೂರು ಅವಸ್ಥಾತ್ರಯಗಳು.  ಎಚ್ಚರದ, ಕನಸಿನ, ಪೂರ್ಣನಿದ್ರೆಯ ಸ್ಥಿತಿಗಳು. ಕನಸಿನಲ್ಲಿರುವಾಗ - ಕನಸು - ಅನುಭವ ಸತ್ಯವಾಗಿರುತ್ತದೆ. ಆಗ ಎಚ್ಚರ ಸುಳ್ಳು ; ಎಚ್ಚರವಾಗಿದ್ದಾಗ ಕನಸು ಸುಳ್ಳು ; ಇವೆರಡೂ ನಿದ್ದೆಯಲ್ಲಿ ಇಲ್ಲವೆ ಇಲ್ಲ. ಸತ್ಯಕ್ಕೆ ಅನುಭವವೆ ಆಧಾರವಾದ್ದರಿಂದ, ಕನಸಿನಲ್ಲಿ ಕಂಡದ್ದು ಮತ್ತು ಎಚ್ಚರದಲ್ಲಿ ಕಂಡದ್ದು ಸಮನಾಗಿದೆ ( ಮಿಥ್ಯೆ - ಸುಳ್ಳು. ). ಸತ್ಯವು ತ್ರಿಕಾಲಾಭಾದಿತವಾಗಿರಬೇಕು ( ಈ ಮೂರು ಕಾಲಗಳಲ್ಲಿ ಆಭಾದಿತ -ಭಾದಿತವಾಗಬಾರದು - ಮಿಥ್ಯೆಯಾಗಬಾರದು. )ˌ ಆತ್ಮನಿಗಿಂತ ಭಿನ್ನವಾದುದು ( ಬೇರೆಯಾದುದು. ) ಯಾವುದೂ ಇಲ್ಲ. ಆತ್ಮನಿಗಿಂತ ಬೇರೆಯಾಗಿರುವುದೇನಿದ್ದರೂ ಅದು ಮಿಥ್ಯೆ ( ಏನೊಂದು ಅತ್ಮನಿಗಿಂತ ಬೇರೆಯಾಗಿರಲು ಸಾಧ್ಯವಿಲ್ಲ, ಭಗವದ್ಗೀತೆಯ ಸಾರ. ). ಆದ್ದರಿಂದ ಮಿಥ್ಯೆಯು ನಮ್ಮ ಅಂತಃಕರಣದ ಜಗತ್ತಿಗೆ ಹೊರತು ಎಚ್ಚರದ ಕಾಣಿಸುವ ಜಗತ್ತಿಗೆ ಅಲ್ಲ.



ಅಜಾತಿ ವಾದ:-

ಗೌಡಪಾದರ ಇನ್ನೊಂದು ಪ್ರಸಿದ್ಧ ಸಿದ್ಧಾಂತವೆಂದರೆ, ಅಜಾತಿವಾದ. ಅಜಾತಿ ಎಂದರೆ ಅನುತ್ಪತ್ತಿ . ಹುಟ್ಟದೆ ಇರುವುದು; ಅಸ್ತಿತ್ವವು ( ಇದೆ ಎಂಬುದು. ) ಆತ್ಮಕ್ಕೆ ಮಾತ್ರ ಇರೋ ಗುಣ. ಹಾಗಾಗಿ ಯಾವುದೂ - ಯಾವ ಭಾವವೂ ಹುಟ್ಟಿಲ್ಲ. ಯಾವ ಜೀವವೂ ಹುಟ್ಟುವುದಿಲ್ಲ. ಇವನ ಜನ್ಮಕ್ಕೆ ಕಾರಣವೆ ಇಲ್ಲ. ಯಾವದೂ ಹುಟ್ಟುವುದೆ ಇಲ್ಲ. ಬ್ರಹ್ಮಕ್ಕೆ ಜನ್ಮ - ಮರಣ ಮೊದಲಾದ ಯಾವ ಬದಲಾವಣೆಗಳೂ ಇಲ್ಲ.


ಸೃಷ್ಟಿಗೆ ನಾನಾ ಕಾರಣಗಳನ್ನು ಹೇಳುತ್ತಾರೆ. ಆದರೆ ಈಶ್ವರನಿಗೆ ಸೃಷ್ಟಿಸುವ ಇಚ್ಛೆಯಾದರೂ ಎಲ್ಲಿಂದ ಬಂತು?  ಸತ್ಕಾರ್ಯವಾದಂತೆ ಕಾರ್ಯವು ಕಾರಣದಲ್ಲಿ ಇರುತ್ತದೆ. ಆದ್ದರಿಂದ ಹುಟ್ಟಿರುವುದು ಮತ್ತೆ ಹುಟ್ಟಲು ಸಾಧ್ಯವಿಲ್ಲ. ಇಲ್ಲದಿರುವುದು ( ಅಂತಃಕರಣದ ಜಗತ್ತು.) ಹುಟ್ಟುವುದಾದರೂ ಹೇಗೆ? ( ನಾಸತೋ ವಿದ್ಯತೇ ಭಾವೋ ನಾಭಾವೋವಿದ್ಯತೇ ಸತಃ : ಗೀತೆ). ಬೌದ್ಧರು ಹೇಳುವಂತೆ ಇದು ಶೂನ್ಯವೂ ಅಲ್ಲ. ಇಲ್ಲದಿರುವುದು ಹುಟ್ಟುವುದಿಲ್ಲ. ಆದರೆ ಮಾಂಡೂಕೋಪನಿಷತ್ತಿನಲ್ಲಿ ಹೇಳಿದ ನಾಲ್ಕು ಪಾದಗಳನ್ನು ಗೌಡಪಾದರು ಒಪ್ಪುತ್ತಾರೆ. ಅವು - ವಿಶ್ವ, ತೈಜಸ, ಪ್ರಾಜ್ಞ ಹಾಗೂ ತುರೀಯ.


ಹೊರ ಜಗತ್ತಿ ಜ್ಞಾನವುಳ್ಳವನು ವಿಶ್ವ.
ನೋಡುವವನುˌ ಅಂತರ್ವಿಷಯ ಜ್ಞಾನವುಳ್ಳವನು - ತೈಜಸ ( ಅರಿಯುವವನು ).
ಜ್ಞಾನ ಘನನು ಪ್ರಾಜ್ಞ, 
ಹೃದಯ ಸಾಕ್ಷಿ ಅಂದರೆ ಆತ್ಮಸಾಕ್ಷಿಗನುಗುಣವಾಗಿರುವ ನಡೆಯ ಇವರು ಕ್ರಮವಾಗಿ ಸ್ಥೂಲ, ಸೂಕ್ಷ್ಮ ಆನಂದಗಳನ್ನು ಸಹ ಅನುಭವಿಸುತ್ತಾರೆ.
ಈ ಮೂರೂ ಸ್ಥಿತಿಗೆ ಮೀರಿದ್ದು ತುರೀಯ ಅವಸ್ಥೆ; ಅದು ಆತ್ಮನ ಶುದ್ಧ ರೂಪ. ಅದ್ವೈತವು ಅಲ್ಲಿ ತಾನೆ ತಾನಾಗಿರುತ್ತದೆ.



ಸಾಧನೆ:-

ಬ್ರಹ್ಮವನ್ನು ಸಾಧಿಸಲು, ಪ್ರಣವ ಅಥವಾ ಓಂ ಕಾರ ಉಪಾಸನೆಯು ಪರಮ ಸಾಧನ; ಇದು ಸಾಮಾನ್ಯರಿಗೆ ( ಸಾಧನೆಗೆ. ) ಅಗತ್ಯ. ಓಂ ಕಾರವು ಪರಾಪರ ಬ್ರಹ್ಮ ರೂಪಿಯಾಗಿದೆ. ಓಂ ಕಾರ ಅ-ಉ-ಮˌಗಳಿಂದ ಆಗಿದೆ ; ಅವು ಕ್ರಮವಾಗಿ, ವಿಶ್ವ - ತೈಜಸ - ಪ್ರಾಜ್ಞರನ್ನು ತುರೀಯಕ್ಕೆ ಒಯ್ಯುತ್ತದೆ. ಅ ಕಾರದಿಂದ ವೈಶ್ವಾನರನಾಗುತ್ತಾರೆ. ; ಈ ಜಗತ್ತನ್ನು ನೋಡುವವನು - ಅನುಭವಿಸುವವನು ( ಇದು ಎಚ್ಚರ. ) ಉ ಕಾರದಿಂದ ತೈಜಸ ನಾಗುತ್ತಾರೆ. - ಅವರೆ ಮುಂದೆ ಹಿರಣ್ಯಗರ್ಭನಾಗುವರು ; ( ಆಂತರಿಕ ದೈವ ) ಸೂಕ್ಷ್ಮ ಜಗತ್ತು ; ( ಸ್ವಪ್ನ.). ಮ ಕಾರದಿಂದ ಈಶ್ವರನಾಗುತ್ತಾರೆ ; ಪ್ರಾಜ್ಞ ; ಆತ್ಮ ಸ್ವರೂಪ ; ( ಸುಷುಪ್ತಿಯಲ್ಲಿ.). ಓಂ ಕಾರದ ಅ ಮಾತ್ರೆ ( ಅಕ್ಷರವಿಲ್ಲದ ಕೊನೆಯ ಉಚ್ಛಾರ.). ತುರೀಯ ಅವಸ್ಥೆ.



ಅಸ್ಪರ್ಶ ಯೋಗ:-

ಅಸ್ಪರ್ಶಯೋಗವೆಂದರೆ - ಜ್ಞಾನಯೋಗ.
ಇಂದ್ರಿಯಗಳಿಗೂ, ವಿಷಯಗಳಿಗೂ ( ಮಾತ್ರವೆ ಸ್ಪರ್ಶ) ಆಗುವ ಸಂಯೋಗ ಅಥವಾ ಸಂಪರ್ಕ. ಅದರಿಂದಲೆ ಸುಖ - ದುಃಖ ಅನುಭವವಾಗುವುದು. ಅದನ್ನು ದೂರಮಾಡುವುದು ಇಲ್ಲಿನ ಯೋಗ. ಆಗ ಪರಮಾತ್ಮ ತತ್ವವೇ ಅಸ್ಪರ್ಶ ಎನಿಸಿಕೊಳ್ಳುವುದು.


ಮನಸೆ ದ್ವೈತಕ್ಕೆಲ್ಲಾ ಕಾರಣ ; ( ನಾನಾ ವಸ್ತುಗಳು - ಬೇಧಗಳು). ವಿವೇಕ, ಅಭ್ಯಾಸ ವೈರಾಗ್ಯಗಳಿಂದ ಮನೋರಾಹಿತ್ಯ ಹೊಂದಿದರೆ, ನಾನಾತ್ವವೆಲ್ಲ ನಶಿಸಿ ಹೋಗಿ ; ಪರಮಾತ್ವ ತತ್ವದಲ್ಲಿ ನೆಲೆ ನಿಲ್ಲುತ್ತದೆ. ಆದರೆ ಇದರಲ್ಲಿ ಅಡಚಣೆಗಳು. : ಅವೆ ಲಯ, ವಿಕ್ಷೇಪ, ಕಷಾಯ, ರಸಾಸ್ವಾದ.


ನಿದ್ರೆಗೆ ಒಳಗಾಗುವುದೆಂದರೆ ಲಯ.
ಸುಖಲೋಲುಪ ವಿಷಯಗಳತ್ತ ಮನಸ್ಸು ಓಡುವುದು - ವಿಕ್ಷೇಪ.
ಆಸೆಯು ( ಕಾಮವಾಸನೆˌ ಮೋಹ ಇತ್ಯಾದಿ. ) ಬೀಜ ರೂಪದಲ್ಲಿರುವುದು - - ಕಷಾಯ.
ಸಮಾಧಿಯ ಸುಖ ಅನುಭವಿಸುವುದು: ರಸಾಸ್ವಾದ.
ಇವನ್ನು ನಿವಾರಿಸಿಕೊಂಡು ದೃಢತೆಯಿಂದ ಮುಂದುವರಿದರೆ ಅದೆ: ತುರೀಯ. ಅದರಲ್ಲೆ ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ. ಅದೆ ಪರಮ ಮೋಕ್ಷ.
ಅದು ಆತ್ಮನ ಸಹಜ ಸ್ಥಿತಿ. ಅದಕ್ಕೆ ಮರಣವಾಗಬೇಕಿಲ್ಲ. ಜೀವಂತ ಇರುವಾಗಲೆ ಮುಕ್ತಿ ಸಾಧ್ಯ. ಇದು ಗೌಡಪಾದರ ಪ್ರತಿಪಾದನೆ.



ಬೌದ್ಧರ ಪ್ರಭಾವ : ಕೆಲವರು ಗೌಡಪಾದರ ಮೇಲೆ ಬೌದ್ಧರ ಪ್ರಭಾವವಾಗಿದೆ ಎಂದು ಹೇಳುತ್ತಾರೆ. ಅವರ ( ಬೌದ್ಧರ. ) ವಿಜ್ಞಾನವಾದ ಶೂನ್ಯವಾದದ ಪ್ರಭಾವವಿದೆಯೆಂದು ಅಥವಾ ಬೌದ್ಧರದ್ದೆ ಅಗಿದ್ದಿರಬಹುದೆ? ಎಂದು ಹೇಳವವರಿದ್ದಾರೆ. ಆದರೆ ಬೌದ್ಧ ದರ್ಶನವೂ ಉಪನಿಷತ್ತಿನಿಂದ ಪ್ರಭಾವಿತವಾಗಿದೆ ಎಂಬುದದರಲ್ಲಿ ಸಂಶಯವಿಲ್ಲ, ಹಾಗಾಗಿ ಉಪನಿಷತ್ತುಗಳಿಗೆ ವಿರೋಧವಿಲ್ಲದ, ಬೌದ್ಧ ದರ್ಶನ ತತ್ವಗಳು ಅದ್ವೈತ ದರ್ಶನದಲ್ಲಿ ಬರುವ ಸಾಧ್ಯತೆ ಇದೆ. ಪಾರಭಾಷಿಕ ಪದಗಳು ಒಂದೆ ಆದುದರಿಂದ ಸಾಮ್ಯತೆ ಸಹಜ. ಅಲ್ಲದೆ ಉಪನಿಷತ್ತುಗಳಿಗೆ ವಿರೋಧವಲ್ಲದ ಬೌದ್ಧ ಮತದತತ್ವಗಳನ್ನು ಒಪ್ಪಿಕೊಳ್ಳುವುದರಲ್ಲಿ, ಅವರ ವಿಶಾಲ ಮನೋಭಾವ - ಔದಾರ್ಯತೆ ಕಾಣುವುದು; ( ಅದು ಇತರರಲ್ಲಿ ಕಾಣಲಾರದು.).



"ಶ್ರೀಶಂಕರರ ಯುಗ"

ಅದ್ವೈತದ ವಿಕಾಸ : ಗೌಡಪಾದರ "ಮಾಂಡೂಕ್ಯಕಾರಿಕೆ"ಯಲ್ಲಿನ ಅದ್ವೈತದ ಸಿದ್ಧಾಂತದ, ರೂಪರೇಷೆಗಳನ್ನು  ವಿಕಸಿತಗೊಳಿಸಿದವರು ಶ್ರೀ ಶಂಕರರು. ಉಪನಿಷತ್ತು, ಬ್ರಹ್ಮ ಸೂತ್ರ, ಭಗವದ್ಗೀತೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅವುಗಳಿಗೆ ಸಮ್ಮತವಾದುದು ಅದ್ವೈತ ಸಿದ್ಧಾಂತವೆಂದು ಅತ್ಯಂತ ಕೌಶಲದಿಂದ ನಿರೂಪಿಸಿದರು. ಅವು ಪ್ರಸ್ಥಾನತ್ರಯವೆಂದು ಪ್ರಸಿದ್ಧವಾಗಿದೆ.


ಬೌದ್ಧ ಮತ್ತು ಇತರ ವೈದಿಕ ದರ್ಶನಗಳಲ್ಲಿರುವ ದೋಷಗಳನ್ನ ಎತ್ತಿ ತೋರಿಸಿ, ವೇದಾಂತವೆ ಪರಿಪೂರ್ಣ ದರ್ಶನವೆಂದು ಸಾಧಿಸಿದರು. ಸ್ವಮತ ಸ್ಥಾಪನೆ, ಪರಮತ ಖಂಡನೆಗಳಲ್ಲಿ ಅವರಂಥ ನಿಪುಣರನ್ನು ಕಾಣುವುದು ಕಷ್ಟ. ಯಾರೆ ಆಗಲಿ ಅವರ ಧೀಮಂತ ವ್ಯಕ್ತಿತ್ವಕ್ಕೆ ತಲೆಬಾಗುವುದು ಸಹಜ. ಅವರ ವೇದಾಂತವನ್ನೆಲ್ಲಾ ಒಂದು ವಾಕ್ಯದಲ್ಲಿ ಸಂಗ್ರಹಿಸಬಹುದು. ( ವ+ಓ = ವೋ- ವಓ. ) ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋಬ್ರಹೈವನಾಪರಃ : ( ಈ ವಾಕ್ಯವು ಆದಿಶಂಕರರು ಹೇಳಿದ್ದಲ್ಲ - ಅವರ ಅನುಯಾಯಿಗಳು ಹೇಳಿದ್ದು ಅನ್ನುವ ವಾದವೂ ಇದೆ.) ಬ್ರಹ್ಮವು ಸತ್ಯ ಜಗತ್ತು ಮಿಥ್ಯ; ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ ಎಂಬುದೆ ಆ ಪ್ರಸಿದ್ಧ ಉಕ್ತಿಯ ಮೂಲಸಾರ. ಸತ್,ಚಿತ್,ಆನಂದ ಸ್ವರೂಪಿಯಾದುದು ಬ್ರಹ್ಮ. ನಮ್ಮ ಕಣ್ಣಿಗೆ ಕಾಣುವ ಅನುಭವಕ್ಕೆ ಎಟುಕುವ, ಈ ಪ್ರಪಂಚವೆಲ್ಲಾ ಮಿಥ್ಯೆ. ಅಂದರೆ ಅದು ಬ್ರಹ್ಮದ ತೋರಿಕೆ. ನೀರ ಮೇಲಿನ ಗುಳ್ಳೆಗೆ ನೀರನ್ನು ಬಿಟ್ಟು ಬೇರೆ ಅಸ್ತಿತ್ವವಿಲ್ಲದಂತೆ ಈ ಪ್ರಪಂಚಕ್ಕೆ ಪ್ರತ್ಯೇಕವಾದ ಸ್ವತಂತ್ರವಾದ ಅಸ್ತಿತ್ವವಿಲ್ಲ ( ಬ್ರಹ್ಮವನ್ನು ಬಿಟ್ಟು. ). ಅರಿವಿನ ಕಣ್ಣಿನಿಂದ ನೋಡಿದರೆ ಇರುವುದೆಲ್ಲಾ ಬ್ರಹ್ಮವೆಂದು ತಿಳಿಯುತ್ತದೆ. ಜಗತ್ತು ಕೇವಲ ಮಾಯಾ ಕಲ್ಪಿತ ( ಅಂತಹಕರಣದ ಜಗತ್ತು - ಬುದ್ದಿ ಮನಸ್ಸು ಮತ್ತು ಅಹಂಕಾರದಿಂದ ತಿಳಿಯುವ ನಮ್ಮ ಜಗತ್ತು.). ಜೀವಿಗಳೂ ಅಷ್ಟೆ, ಅವು ಅನಾದಿಯಿಂದ ಅಜ್ಞಾನದ ಮುಸುಕಿನಲ್ಲಿರುತ್ತವೆ. ಜೀವಿಗಳ ಹಾಗೂ ಜೀವ ಜಗತ್ತುಗಳ ನಡುವಿನ ಬೇಧಕ್ಕೆˌ ಜೀವ - ಜಗತ್ತು - ಬ್ರಹ್ಮಗಳ ಬೇಧಕ್ಕೆ ಮಾನಸಿಕ ಅಜ್ಞಾನವೆ ಮೂಲ ಕಾರಣ.



ಈ ಅಜ್ಞಾನದ ಆವರಣವನ್ನು ಕಿತ್ತೆಸೆದರೆ ಸಾಕು, ಬೇಧವೆಲ್ಲಾ ಅಳಿದುಹೋಗಿ, ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ. ಅದೆ ಮೋಕ್ಷ; ಅದೆ ಪರಮ ಪುರುಷಾರ್ಥ. ಇದು ಶಾಂಕರ ಸಿದ್ಧಾಂತದ ಸಾರಾಂಶ. ತ್ರಿವಿಧ ಸತ್ತೆಗಳು ಜೀವ, ಜಗತ್ತುˌ ಬ್ರಹ್ಮಗಳನ್ನರಿಯಲು ಸತ್ಯವನ್ನು ಅರಿಯುವ ಮಾರ್ಗವಾಗಿದೆ ಮತ್ತು ಕೈವಲ್ಯವೆನ್ನುವ ಅನುಭವದ ಸಂಗತಿಯಲ್ಲಿ ಮೂರು ಬಗೆ. 


ಮೀಮಾಂಸಕರೆ ಸ್ವತಃ ಕೊಡುವ ಪ್ರಮಾಣೀಕೃತ ವಾದವನ್ನು ಇವರು ಒಪ್ಪುತ್ತಾರೆ. ಅಂದರೆ ನಮ್ಮ ಅನುಭವಕ್ಕೆ ಬಂದ ಜ್ಞಾನವನ್ನು ಯತಾರ್ಥವೆಂದೆ ತಿಳಿಯಬೇಕು. 

ಆದರೆ ಈ ಸತ್ಯ ಮೂರು ಬಗೆ, 
೧. ಪಾರಮಾರ್ಥಿಕ ಸತ್ಯ
೨. ವ್ಯಾವಹಾರಿಕ ಸತ್ಯ 
೩.ಪ್ರಾತಿಭಾಸಿಕ ಸತ್ಯ.
ಪಾರಮಾರ್ಥಿಕ ಸತ್ಯ. 

*ಪಾರಮಾರ್ಥಿಕ ಸತ್ಯ*

ತ್ರಿಕಾಲಾಬಾದ್ಯಂ ಸತ್ಯಂ; ಮೂರೂ ಕಾಲಗಳಲ್ಲಿˌ ಅಂದರೆ ಭೂತ, ವರ್ತಮಾನ, ಭವಿಷ್ಯತ್ - ಈ ಮೂರೂ ಕಾಲಗಳಲ್ಲಿ ಬಾಧಿತವಾಗದಿರುವುದು ಅಥವಾ ಯಾವುದೆ ಬದಲಾವಣೆಯಾಗದಿರುವುದು ಪಾರಮಾಥಿಕ ಸತ್ಯ. ಯದ್ ರೂಪೇಣ ಯನ್ನಿಶ್ಚಿತಂ ತದ್ರೂಪಂ ನವ್ಯಭಿಚರತಿ ತತ್ಸತ್ಯಂ. ( ತೈತ್ತರೀಯ ೨-೧ ಶಾಂಕರ ಭಾಷ್ಯ. ) ಅಂದರೆ ವಸ್ತುವು ಯಾವ ರೂಪದಲ್ಲಿರುವುದೆಂದು ನಿಶ್ಚತವಾಗಿದೆಯೊ, ಆ ರೂಪದಲ್ಲಿ ಬದಲಾವಣೆಯಾಗುವುದಿಲ್ಲ. ಅದು ಸತ್ಯ. ಆ ಸತ್ಯವನ್ನು ಅಲ್ಲಗಳೆಯಲು ಬರುವುದಿಲ್ಲ. ಇದಕ್ಕೆ ಪಾರಮಾರ್ಥಿಕ ಸತ್ಯವೆಂದು ಹೆಸರು. ಅದಕ್ಕೆ ಅರ್ಹವಾದುದು ಬ್ರಹ್ಮವೊಂದೇ ( ಪರಬ್ರಹ್ಮ. ) ಎಂದರೆ ಸತ್ಯವು ಯಾವಾಗಲೂ ಒಂದೆ ಬಗೆಯಲ್ಲಿ ಇರುತ್ತದೆ. ಇದು ತಾತ್ವಿಕ.


ವ್ಯವಹಾರಿಕ ಸತ್ಯ.
ಸ್ವಲ್ಪ ಕಾಲ ಇದ್ದು ನಂತರ ಬದಲಾಗುವುದು ಈ ಪ್ರಪಂಚ ಮತ್ತು ಈ ಪ್ರಾಪಂಚಿಕ ಪದಾರ್ಥಗಳು ಆ ಬಗೆಯವು. ಇದು ಐದು ಅಂಶಗಳನ್ನು ಹೊಂದಿದೆ.
ಅಸ್ತಿ ( ಇರುತ್ತದೆ. ) ;
ಭಾತಿ ( ಬೆಳಗುತ್ತದೆ - ಕಾಣುತ್ತದೆ.) ;
ಪ್ರಿಯಂ ( ಆನಂದದಾಯಕ. ) ;
ನಾಮ ( ಹೆಸರಿದೆ.) ;
ರೂಪ ( ಆಕಾರವಿದೆ.) ;
ಇವುಗಳಲ್ಲಿ ಅಸ್ತಿ , ಭಾತಿ, ಪ್ರಿಯಂಗಳೆಂಬವು, ಬ್ರಹ್ಮಕ್ಕೆ ಸೇರಿದವು, ನಾಮ - ರೂಪಗಳು ತೋರಿಕೆಯವು. ಅವು ತ್ರಿಕಾಲಾಬಾಧಿತವಾಗಿರುವುದಿಲ್ಲ. (®ತ್ರಿಕಾಲದಲ್ಲೂ ಇರುವುವೂ ಸಹ ಅಲ್ಲ.). ಹುಟ್ಟು ಸಾವುಗಳುಂಟು.


ಪ್ರಾತಿಭಾಸಿಕ ಸತ್ಯ


ಇನ್ನೂ ಕೆಳಗಿನ ಹಂತದ ಸತ್ಯ. ನಂಬಿರುವವರೆಗೆ ಮಾತ್ರ ಸತ್ಯವಾಗಿ ಗೋಚರಿಸುತ್ತದೆ. ಒಂದು ಕ್ಷಣವಾದರೂ ಇದೆಯೆಂದು ಗೋಚರಿಸಿದರೆ, ಅದು ಅನುಭವಕ್ಕೆ ಬಂದರೆ, ಅದನ್ನು ಇಲ್ಲವೆನ್ನುವಂತಿಲ್ಲ. ಉದಾ : ಹಗ್ಗವನ್ನು ಹಾವೆಂದು ತಿಳಿಯುವುದು,; ಕನಸು ಕೂಡಾ ಈ ವರ್ಗಕ್ಕೆ ಸೇರಿದ್ದು.


ಅಸತ್ಯ

ಪಾರಮಾರ್ಥಿಕ, ವ್ಯವಹಾರಿಕ, ಪ್ರಾಪಂಚಿಕ ಇವು ಮೂರೂ ಸತ್ಯಗಳಾದರೆ, ಅಸತ್ಯವೆಂದರೆ ಇಲ್ಲದಿರುವುದು , ಅಸಂಭವನೀಯ ; ಉದಾ : ಬಂಜೆಯ ಮಗ ; ಬಾನಿನ ಹೂ ; ಇತ್ಯಾದಿ. ಒಂದೆ ಒಂದು ಕ್ಷಣವಾದರೂ, ನಮಗೆ ಇದರ ಅನುಭವ ಆಗುವುದಿಲ್ಲ. ಅಸತ್ಯವೆಂದರೆ ಇರಲಾರದ್ದು. ತ್ರಿಕಾಲದಲ್ಲೂ ಇರಲಾರದ್ದು ಇವನ್ನು ತುಚ್ಛ - ಅಲೀಕ ಎನ್ನಲಾಗಿದೆ.

ಮಿಥ್ಯೆ 


ಜಗತ್ತು ಮಿಥ್ಯೆ ಎಂದರೆ ಮೇಲಿನ ಬಗೆಯ ಅಸತ್ಯವಲ್ಲ . ಜಗತ್ತು ತ್ರಿಕಾಲದಲ್ಲೂ ಒಂದೆ ರೀತಿಯಾಗಿ ಇರುವುದಿಲ್ಲ . ಮತ್ತು ಪಾರಮಾಥಿಕ ಸತ್ಯಕ್ಕೆ ಹೋಲಿಸಿದಾಗ ಮಿಥ್ಯೆ ; ಜಗತ್ತು ಇಂದ್ರಿಯ ಮನಸ್ಸುಗಳಿಗೆ ಸತ್ಯವೆಂದು ಅನುಭವಕ್ಕೆ ಬರುತ್ತೆ - ವಿಚಾರದಿಂದ ಅದು ಮಿಥ್ಯೆಯೆಂದು ತಿಳಿದು ಬರುತ್ತೆ ; ಇದನ್ನು ಶಾಂಕರ ವೇದಾಂತದಲ್ಲಿ ಅನಿರ್ವಚನೀಯ ವಿವರಿಸಲುಬಾರದ್ದು - ಮಿಥ್ಯೆ , ಎಂಬುದಾಗಿ ಹೇಳುತ್ತಾರೆ ; ಹೀಗೆ ಮಿಥ್ಯೆಯು ಅನಿರ್ವಚನೀಯವಾಗಿದ್ದು - ಅಸತ್ಯವು ಅಸಂಭವನೀಯವಾಗಿರುವುದು. ಎರಡು ಬಗೆಯಲ್ಲಿ ಎನ್ನಬಹುದು.


*ಆತ್ಮ - ಬ್ರಹ್ಮ*


ಆತ್ಮದ ಅಸ್ತಿತ್ವವು ( ಇದೆ ಎನ್ನುವುದು ) ಸ್ವಯಂ ಸಿದ್ಧ ಎನ್ನುವುದು ಅದ್ವೈತದ ಅಭಿಪ್ರಾಯ. ಇದೆಯೋ - ಇಲ್ಲವೋ ಎಂಬ ಪ್ರಶ್ನೆಗೆ ಇಲ್ಲಿ ಅವಕಾಶವೆ ಇಲ್ಲ. ಏಕೆಂದರೆ "ನಾನು ಇದ್ದೇನೆ" ಎಂದು ಪ್ರತಿಯೊಬ್ಬರೂ ತಿಳಿಯುತ್ತಾರೆ. ಇದು ಆತ್ಮದ ಅಸ್ತಿತ್ವಕ್ಕೆ ಸಾಕ್ಷಿ . ( 'ನಾನು ಇಲ್ಲ' ಎಂಬುದು ಸಾಧ್ಯವಿಲ್ಲ. ) ಅದು ( "ನಾನು ಇದ್ದೇನೆ" ಎಂಬುದು. ) ನಮ್ಮ ತಿಳಿವಿಗೆಲ್ಲಾ ಆಧಾರಭೂತವಾದುದು.


ಚರ್ಚೆಗೆ ಮೊದಲು ಆತ್ಮವು ಇದೆಯೋ ಇಲ್ಲವೋ ಅದು ಸಿದ್ಧವಾಗಬೇಕು ( ರುಜುವಾತಾಗಬೇಕು.). ಆದರೆ ಅದ್ವೈತದಲ್ಲಿ ಅದಕ್ಕೆ ಅವಕಾಶವಿಲ್ಲ. - ಏಕೆಂದರೆ ನಾನು ಇಲ್ಲ - ಆತ್ಮವು ಇಲ್ಲ ಎಂದು ನಿರಾಕರಿಸಲು ಸಾಧ್ಯವೆ ಇಲ್ಲ.
ಆಗಂತುಕ ( ಹೊರಗಿನಿಂದ ಬಂದಂತ. ) ವಸ್ತುವನ್ನು ನಿರಾಕರಿಸಬಹುದು. ಆದರೆ ಅದರ ಸ್ವರೂಪವನ್ನು ನಿರಾಕರಿಸಲು ಆಗುವುದಿಲ್ಲ. ಉದಾ : ಬೆಂಕಿಯನ್ನು ನಿರಾಕರಿಸಬಹುದು ( ಭ್ರಮೆ ಎಂದು.) ; ಆದರೆ ಅದರ ಉಷ್ಣತೆಯನ್ನು ನಿರಾಕರಿಸಲು ಬರುವುದಿಲ್ಲ. ಆದ್ದರಿಂದ ನಾನು ಇದ್ದೇನೆ ಎಂಬ ಅನುಭವವನ್ನು ನಿರಾಕರಿಸಲು ಬಾರದು. ಆ ಕಾರಣ ಆತ್ಮವು ಸ್ವಯಂ ಸಿದ್ಧವಾದುದು.



ಆದ್ದರಿಂದ ಚರ್ಚಿಸ ಬೇಕಾದದ್ದು ಆತ್ಮದ ಅಸ್ತಿತ್ವದ ಬಗೆಗಲ್ಲ - ಅದರ ಸ್ವರೂಪದ ಬಗೆಗೆ. ಚಾರ್ವಾಕರು ಮುಂತಾದವರು ಇಂದ್ರಿಯ, ಮನಸ್ಸುಗಳನ್ನೆ ಆತ್ಮ ಎಂದು ಭಾವಿಸಿದರೂ, ಆತ್ಮ ಅವುಗಳಿಗಿಂತ ಭಿನ್ನವಾದುದು. ಅದನ್ನು ಜಡವೆಂದಾಗಲಿ ( ಇಂದ್ರಿಯಗಳಂತೆ ) ಅವುಗಳಿಂದ ಹುಟ್ಟಿದ್ದೆಂದಾಗಲಿ ತಿಳಿಯುವುದು ಸರಿಯಲ್ಲ. ಅದು ( ಆತ್ಮ.) ಚೈತನ್ಯ ಸ್ವರೂಪಿ. ಜಾಗ್ರತ್, ಸ್ವಪ್ನˌ ಸುಷುಪ್ತಿಗಳೆಂಬ ಮೂರು ಅವಸ್ಥೆಗೂ ಇರುವುದು. ಈ ಅವಸ್ಥೆಗಳನ್ನು ಪರಿಶೀಲಿಸಿದರೆ, "ನಾನು ಇದ್ದೇನೆ" ಎಂಬ ಅನುಭವ, ಈ ಮೂರೂ ಅವಸ್ಥೆಗೂ ಇರುವುದು.



ಜ್ಞಾನ ಸ್ವರೂಪಿ


ಆತ್ಮವು ಜ್ಞಾನ ಸ್ವರೂಪಿ. ಜ್ಞಾನವು ಎರಡು ಬಗೆ. ನಿತ್ಯ, ಅನಿತ್ಯ ಎಂದು ; ಯಾವುದೆ ವಿಷಯಕ್ಕೆ ( ಪಂಚೇಂದ್ರಿಯಗಳಿಗೆ ) ಸಂಬಂಧಿಸಿದ ಜ್ಞಾನವು ಅನಿತ್ಯವಾದುದು. ಜ್ಞಾನಕ್ಕೆ ವಿಷಯಗಳಿರುವಾಗ ( ಗುಣ ) ಮಾತ್ರ ಆ ಜ್ಞಾನ ಇರುತ್ತದೆ - ಇಲ್ಲವಾದರೆ ಇಲ್ಲ. ಮೂಗಿಗೆ ಗ್ರಹಣ ಶಕ್ತಿ ಇದ್ದರೆ ಪರಿಮಳ ಇರುತ್ತದೆ - ಇಲ್ಲದಿದ್ದರೆ ಪರಿಮಳವಿಲ್ಲ. ಆದರೆ ಶುದ್ಧ ಜ್ಞಾನವು ಯಾವಾಗಲೂ ಇರುತ್ತದೆ.



*ಅಖಂಡ ಆನಂದ ರೂಪಿ*


ಆತ್ಮವು ಆನಂದ ರೂಪಿಯಾದುದು, ಅಲ್ಲಿ ದುಃಖದ ಸೋಂಕು ಇಲ್ಲ. ವಿಷಯ ( ಇಂದ್ರಿಯ. ) ಸಂಪರ್ಕದಿಂದ ಸುಖ - ದುಃಖ ಉಂಟಾಗುತ್ತದೆ. ಶುದ್ಧ ಚೈತನ್ಯಕ್ಕೆ ವಿಷಯ ಸಂಪರ್ಕವಿಲ್ಲದಿರುವಾಗ, ಸುಖ ದುಃಖಗಳಿಗೆ ಮೀರಿದ ಸ್ಥಿತಿ ಇರುತ್ತದೆ. ಇದು ಆನಂದ. ಆತ್ಮವು ಕರ್ತೃವಾಗಲಿ ಭೋಕ್ತೃವಾಗಲಿ ಆಗಲಾರದ್ದು. ಏಕೆಂದರೆ ಅದು ಕ್ರಿಯೆಗೆ ಆಶ್ರಯವಾಗಿದೆ. ಕಾರಣ ಅದರಲ್ಲಿ ಬದಲಾವಣೆ ಇಲ್ಲ. ಬದಲಾವಣೆ ಇದ್ದರೆ ಅನಿತ್ಯವಾಗುವುದು. ಆತ್ಮವೆಂಬ ಈ ಚೈತನ್ಯವು ಸಮಸ್ತ ಪ್ರಪಂಚವನ್ನೂ ವ್ಯಾಪಿಸಿದೆ. ಅದು  ಅಖಂಡ - ಅದ್ವಯ ; ಇದು ಬಿಟ್ಟರೆ ಮತ್ತಾವದೂ ಪಾರಮಾರ್ಥಿಕ ಸತ್ಯವಲ್ಲ.



ಆತ್ಮ - ಬ್ರಹ್ಮ


ಆತ್ಮದ ಅಸ್ತಿತ್ವವು ಸಿದ್ಧವಾದ ಮೇಲೆ. ಬ್ರಹ್ಮ ತತ್ವದ ಸಿದ್ಧಿಯೂ ಆಯಿತು. ಏಕೆಂದರೆ ಆತ್ಮವೆ ಬ್ರಹ್ಮ. ( ಸರ್ವಸ್ಯ, ಆತ್ಮತ್ವಾಚ್ಚ , ಬ್ರಹ್ಮಾಸ್ತಿತ್ವ ಪ್ರಸಿದ್ಧಿಃ : ಶಂಕರ ಭಾಷ್ಯ-೧.೧.೧. )


*ಬ್ರಹ್ಮ ಮತ್ತು ಈಶ್ವರ*


*ನಿರ್ಗುಣ ಬ್ರಹ್ಮ :* ಉಪನಿಷತ್ತುಗಳಲ್ಲಿ ಬ್ರಹ್ಮದ ತತ್ವವನ್ನು ಎರಡು ರೀತಿಯಲ್ಲಿ ಮಾಡಿದೆ. ಕೆಲವೆಡೆ ಬ್ರಹ್ಮವನ್ನು - 'ನೇತಿ', 'ನೇತಿ' ,ಎಂದು ; ( ಹೀಗಲ್ಲ , ಇದಲ್ಲ, ಎಂದು. ) ಭಾಷೆಯೆಲ್ಲಾ ದ್ವೈತಮಯವಾದ್ದರಿಂದ, ಅವು ಬ್ರಹ್ಮ ತತ್ವವನ್ನು ವಿವರಿಸಲಾರವು. ಗುರೋಸ್ತು ಮೌನಂ ವ್ಯಾಖಾನಂ, ಎಂಬಂತೆ ಮೌನದಿಂದಲೆ ಬ್ರಹ್ಮವನ್ನು ತಿಳಿಸಬೇಕಾಗುತ್ತದೆ. ಇದು "ಹೌದು", ಎನ್ನುವುದಕ್ಕಿಂತ "ಇದಲ್ಲ ", ಎಂಬುದೆ ಸರಿ ಎಂಬುದು. ಕೆಲವೆಡೆ ಬ್ರಹ್ಮವನ್ನು ಸಚ್ಚಿದಾನಂದ ರೂಪ ಎನ್ನಲಾಗಿದೆ. ಮತ್ತೆ ಕೆಲವೆಡೆ ಇದು ಎಲ್ಲವನ್ನೂ ಮೀರಿದ್ದು - ನಿರ್ಗುಣ ಬ್ರಹ್ಮವೆಂದು ಕರೆಯಲಾಗಿದೆ. 

ಇನ್ನೊಂದು ಸಗುಣ ಬ್ರಹ್ಮ.

ಸಗುಣ ಬ್ರಹ್ಮ

ಇನ್ನೊಂದು ಸಗುಣ ಬ್ರಹ್ಮದ ಸ್ವರೂಪವರ್ಣನೆ. ಬ್ರಹ್ಮಸೂತ್ರದ ಜನ್ಮಾದ್ಯಸ್ಯ ಯತಃ ( ೧.೧.೨ ) ಜಗತ್ತಿನ ಸೃಷ್ಟಿ , ಸ್ಥಿತಿˌ ಲಯಗಳಿಗೆ ಕಾರಣವಾದ ಬ್ರಹ್ಮ. ಈ ಸಗುಣ ಬ್ರಹ್ಮವನ್ನೆ ಈಶ್ವರನೆಂದು ಕರೆಯುವರು. ಬ್ರಹ್ಮವು ಸಗುಣವೂ ನಿರ್ಗುಣವೂ ಆಗಿದೆಯೆ ಎಂಬ ಪ್ರಶ್ನೆ ಏಳುತ್ತದೆ. ಅದ್ವೈತ ವೇದಾಂತವು ಬ್ರಹ್ಮವು ನಿರ್ಗುಣವೆಂದೆ ಹೇಳುತ್ತದೆ.


ನಿರ್ಗುಣ ಬ್ರಹ್ಮವನ್ನು "ಪರಬ್ರಹ್ಮ"ವೆಂದೂ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣವಾದ ಬ್ರಹ್ಮವನ್ನು "ಅಪರಬ್ರಹ್ಮ"ವೆಂದೂ ಕರೆಯಲಾಗಿದೆ. ಅದು ನಾಮ, ರೂಪ, ಬೇಧಗಳಿಂದ ಕೂಡಿದ ಈಶ್ವರ. "ಪರಬ್ರಹ್ಮ"ವು ಉಪಾದಿಗಳಿಂದ ( ನಾಮ, ರೂಪ - ಇತ್ಯಾದಿ. ) ದೂರವಾದದ್ದು. ಹಾಗಾಗಿ, ಸೋಪಾಧಿಕ ಬ್ರಹ್ಮ, ನಿರುಪಾಧಿಕ ಬ್ರಹ್ಮವೆಂದು ಕರೆದಿದೆ. 'ಆದರೆ ಇವುಗಳಲ್ಲಿ ಬೇಧವಿಲ್ಲ' ;. ಅದೆ ಇದಾಗಿ ತೋರುವುದು. ನಿರ್ಗುಣಮಪಿಸದ್ ಬ್ರಹ್ಮ, ನಾಮ, ರೂಪ ಗತೈಃ ಗುಣೈಃ ಸಗುಣಂ, ಉಪಾಸನಾರ್ಥಂ ತತ್ರ ತತ್ರ ಉಪದಿಶ್ಯತೇ ( ಶಂ.ಭಾ.೧.೨.೧೪.), ಈಶ್ವರನ ಉಪಾಸನೆಯಿಂದ ಚಿತ್ತ ಶುದ್ಧಿಯಾಗಿ ಜ್ಞಾನ ಮಾರ್ಗ ಅನುಸರಿಸಲು ಮತ್ತು ಕೊನೆಯ ಮೆಟ್ಟಿಲಾದ ಪರಬ್ರಹ್ಮವನ್ನು ಪಡೆಯಬಹುದು. ಕರ್ಮಫಲವನ್ನು ವಿವರಿಸಲು, ಈಶ್ವರನನ್ನು ಒಪ್ಪಬೇಕಾಗುವುದು. - ಎಂದು ಶ್ರೀಶಂಕರರು ವಾದಿಸುತ್ತಾರೆ.


*ಈಶ್ವರ ( ಸೃಷ್ಟಿಕರ್ತ)*


ಕಾರ್ಯಕಾರಣ ವಾದದ ಬಲದಿಂದ ಜಗತ್ತಿಗೆ ಕಾರಣವೊಂದಿದೆ ಎಂದು ಸಿದ್ಧಪಡಿಸಬಹುದು. ಆದರೆ ಈಶ್ವರನೆ ಕಾರಣವೆಂಬುದನ್ನು ಸಿದ್ಧಪಡಿಸಲಾಗದು. ( ಬ್ರ.ಸೂ. ಜನ್ಮಾದ್ಯಸ್ಯ ಯತಃ ಕ್ಕೆ ಭಾಷ್ಯ. ) ಈಶ್ವರನೆ ಸೃಷ್ಟಿಕರ್ತನೆಂಬುದಕ್ಕೆ ಶ್ರುತಿಯೆ ಆಧಾರ. ಅದರಂತೆ ಈಶ್ವರನು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣ ; ಕರ್ಮಫಲದಾತ ; ಶಿಷ್ಟ ರಕ್ಷಕ ದುಷ್ಟ ಶಿಕ್ಷಕ ; ಭಕ್ತಿ ಪ್ರೀತ ವರದಾತ ; ವೇದ ರಕ್ಷಕ ( ಪುನರುಜ್ಜೀವಕಾರಕ. ) ; ಆದರೆ ಕರ್ಮದ ಸೋಂಕಿಲ್ಲ. ಮಾಯೆ ಅವನ ಶಕ್ತಿ. ಆದರೆ ಮಾಯಾತೀತ ; ಜಗತ್ತಿನ ಸೃಷ್ಟಿ ಅವನ ಲೀಲೆ, ಮಾಯೆ. ( ಕಾರಣ ಜಗತ್ತನ್ನು ಏಕೆ ಸೃಷ್ಟಿಸಿದ? ಅನ್ನುವುದಕ್ಕೆ ಉತ್ತರವಿಲ್ಲ. ) ಅಥವಾ ಮಾಯೆ; ಜೀವಿಯು ಬ್ರಹ್ಮವನ್ನು ಜಗತ್ತನಿಂದಲೆ ತಿಳಿಯಬೇಕು, ಹೇಗೆಂದರೆ, ಮಡಿಕೆಯನ್ನು ಬಿಟ್ಟು ಮಣ್ಣಿನ ಸ್ವರೂಪ ಜೀವನಿಗೆ ಗೊತ್ತಿಲ್ಲವಾದ್ದರಿಂದ ಮಡಿಕೆಯಿಂದಲೆ ಮಣ್ಣನ್ನು ಅರಿಯಲು ಸಾಧ್ಯ. ( ಆದರಿದು ಶಂಕರರ ಅಭಿಪ್ರಾಯವಲ್ಲ. ); ಅವನು ಅದರ ಸೂತ್ರಧಾರಿ - ಪಾತ್ರಧಾರಿ - ಪ್ರೇಕ್ಷಕ. : ನಂತರದಲ್ಲಿ ಅದ್ವೈತದ ಈ ಈಶ್ವರನ ಅಸ್ತಿತ್ವವಾದದಿಂದ ಬೇರೆ ಬೇರೆ ವಾದಗಳು ಪಂಥಗಳು ಹೊರಟವು / ಹುಟ್ಟಿದವು. ಅವಿದ್ಯೆ ( ಮಾಯೆ ) ,
ಈಶ್ವರ, - ನಿರ್ಗುಣ ಬ್ರಹ್ಮದಿಂದ, ಜೀವ, ಜಗತ್ತು ತರ್ಕಕ್ಕೆ ನಿಲುಕದ ಪ್ರಶ್ನೆಯಾಗಿಯೆ ಉಳಿದಿದೆ. ಅವಿದ್ಯೆ ದೂರವಾದ ನಂತರ ಸಾಕ್ಷಾತ್ಕಾರ. ನಂತರ ಈ ಪ್ರಶ್ನೆಗಳಿಗೆ ಅರ್ಥವಿಲ್ಲ. ಆದ್ದರಿಂದ ಜಗತ್ತಿನ ಮಾಯೆ ಅನಿರ್ವಚನೀಯ.


ಮಾಯಾವಾದ

ಮಾಯಾವಾದವು ಅದ್ವೈತದ ಪ್ರಮುಖ ಸಿದ್ಧಾಂತಗಳಲ್ಲೊಂದು. ಅದ್ವೈತದ ಅಡಿಗಲ್ಲೆಂದರೆ ತಪ್ಪಲ್ಲ . ಜಗನ್ಮಿಥ್ಯಾ ತತ್ವವು ಮಾಯಾವಾದವನ್ನು ಆಧರಿಸಿದೆ. ಅದ್ವೈತದಲ್ಲಿ , ಬ್ರಹ್ಮ - ಈಶ್ವರ, ಬ್ರಹ್ಮ - ಜಗತ್ತು , ಬ್ರಹ್ಮ - ಜೀವ, ಈ ಸಂಬಂಧಗಳನ್ನು ವಿವರಿಸುವಲ್ಲಿ ಮಾಯೆಯ ಕಲ್ಪನೆ ಅಗತ್ಯ. ಹಾಗಾಗಿ ಅದ್ವೈತಿಗಳನ್ನು ಮಾಯಾವಾದಿಗಳೆಂದು ಕರೆಯುತ್ತಾರೆ. ಮಾಯಾ ಶಬ್ದವು ವೇದ ಉಪನಿಷತ್ತುಗಳಲ್ಲಿಯೂ ಉಪಯೋಗಿಸಲ್ಪಟ್ಟಿದೆ. ಅದನ್ನು ಪ್ರಪಂಚದ ವಿವರಣೆಯ ಪ್ರಮುಖ ಸಿದ್ಧಾಂತವಾಗಿ ಅದ್ವೈತ ನಿರೂಪಿಸಿದೆ.

*ಅದ್ವೈತ ವೇದಾಂತದಲ್ಲಿ ಮಾಯೆ*


ಅವಿದ್ಯೆ, ಅಜ್ಞಾನˌ ಅಧ್ಯಾಸˌ ಅದ್ಯಾರೋಪˌ ಅನಿರ್ವಚನೀಯˌ  ವಿವರ್ತˌ ಭ್ರಾಂತಿ, ಭ್ರಮೆˌ ನಾಮ ರೂಪ, ಅವ್ಯಕ್ತ, ಅಕ್ಷರˌ ಬೀಜ ಶಕ್ತಿˌ ಮೂಲ ಪ್ರಕೃತಿ ಇತ್ಯಾದಿ ಪದಗಳನ್ನು ಹೆಚ್ಚಾಗಿ ಪರಕೀಯ ( ಒಂದೇ ಅರ್ಥದ.) ಪದಗಳಂತೆ ಬಳಸುತ್ತಾರೆ.

*ಮಾಯೆ : ಶಂಕರ ಮತ*

೧. ಸಾಂಖ್ಯರ ಪ್ರಕೃತಿಯಂತೆ ಜಡ ; ಸಾಂಖ್ಯರು ಪುರುಷ ( ಜೀವ )ನನ್ನು ಚೈತನ್ಯವೆಂದರೆ - ಇಲ್ಲಿ ಬ್ರಹ್ಮ ಚೈತನ್ಯ. ಸಾಂಖ್ಯರಲ್ಲಿ ಪ್ರಕೃತಿ ಸ್ವತಂತ್ರ ಅಸ್ತಿತ್ವ ಉಳ್ಳದ್ದು. ಆದರೆ ಇಲ್ಲಿ ಮಾಯೆ ಪ್ರಪಂಚಕ್ಕೆ ಕಾರಣವಾದರೂ, ಸ್ವತಂತ್ರವಲ್ಲ. ಅದ್ವೈತದಲ್ಲಿ ಸಾಂಖ್ಯರಂತೆ ಅಂತಿಮ ಸತ್ಯತೆಯೂ ಅದಕ್ಕಿಲ್ಲ.


೨. ಮಾಯೆಯು ಬ್ರಹ್ಮನ ಶಕ್ತಿ. ಅದು ಬ್ರಹ್ಮದಿಂದ ಬೇರೆಯಲ್ಲ ( ಅನನ್ಯ. ) ; ಬೆಂಕಿಯ ಸುಡುವ ಸ್ವಭಾವವಿದ್ದಂತೆ. ಇದು ಬ್ರಹ್ಮ ಸ್ವರೂಪವೂ ಅಲ್ಲ.


೩. ಮಾಯೆಯು ಅನಾದಿಯಾಗಿದೆ ( ಆದಿ ಇಲ್ಲದ್ದು ಅದರ ಆರಂಭ ಯಾವಾಗ ಹೇಗೆ ಆಯಿತು ಎಂದು ಹೇಳಲು ಸಾದ್ಯವಿಲ್ಲ. )

೪ . ಮಾಯೆಯು ಪಾರಮಾರ್ಥಿಕ ಸತ್ಯವಲ್ಲ. ಭಾವ ರೂಪವಾದುದು. ಅದಕ್ಕೆ ಎರಡು ಶಕ್ತಿ ಇದೆ. ಆವರಣ ಮತ್ತು ವಿಕ್ಷೇಪ. ಆವರಣವು ಬ್ರಹ್ಮವನ್ನು ಮರೆಮಾಡುತ್ತದೆ. ವಿಕ್ಷೇಪವು ಬ್ರಹ್ಮವು ಜೀವನಾಗಿ ಕಾಣುವಂತೆ ಮಾಡುತ್ತದೆ. ಇಲ್ಲದ್ದನ್ನು ಇದೆ ಎಂದು ತೋರಿಸುವುದು. ( ಉದಾ : ಹಗ್ಗವನ್ನು ಹಾವಾಗಿ ಕಾಣುವಂತೆ ಮಾಡುವುದು. ) ಶೋಕ ಮೋಹ ಇತ್ಯಾದಿ.


೫ . ಮಾಯೆಯು ಅನಿರ್ವಚನೀಯವಾದುದು. - ವಿವರಿಸಲು ಬಾರದ್ದು. ಎರಡು ರೂಪದ್ದು ಅಲ್ಲ. ಇದು ಪಾರಮಾರ್ಥಿಕ ಸತ್ಯವಲ್ಲ. ಆದುದರಿಂದ ಇದೆ ಎನ್ನುವಂತಿಲ್ಲ. ಇದು ಪ್ರಪಂಚವನ್ನು ತೋರಿಸುತ್ತಿರುವ ಕಾರಣ ಇಲ್ಲವೆಂದು ಹೇಳುವ ಹಾಗಿಲ್ಲ. ಜ್ಞಾನವಾದ ನಂತರ ಕಾಣದಿರುವುದರಿಂದ ನಿಜವಲ್ಲ.


೬ . ಮಾಯೆಯು ವ್ಯವಹಾರಿಕ ಸತ್ಯವಾಗಿದೆ. ಅಧ್ಯಾಸ ರೂಪವಾಗಿರುವುದರಿಂದ, 'ವಿವರ್ತ' ( ತೋರಿಕೆ. ) ವಾಗಿದೆ. ಹಗ್ಗದಲ್ಲಿ ಹಾವು ತೋರಿದಂತೆ. ಭ್ರಾಂತಿರೂಪವಾಗಿದೆ.


೭ . ಬ್ರಹ್ಮ ಜ್ಞಾನವಾದ ಕೂಡಲೆ ಇದು ನಿವಾರಣೆಯಾಗುತ್ತದೆ. ಬೆಳಕಿನಿಂದ ಕತ್ತಲೆ ಹೋದಂತೆ.


೮ . ಇದಕ್ಕೆ ಬ್ರಹ್ಮವು ಆಶ್ರಯವೂ ಹೌದು ವಿಷಯವೂ ಹೌದು. ಇಂದ್ರಜಾಲ ಮಾಡುವವನು ತನ್ನ ಇಂದ್ರ ಜಾಲಕ್ಕೆ ವಶನಾಗದಿರುವಂತೆ.

ವಿವರ್ತ ವಾದ.


ಇದು ಅದ್ವೈತ ವೇದಾಂತಕ್ಕೆ ಸಮ್ಮತವಾದ ಕಾರ್ಯಕಾರಣ ವಾದ. ಕಾರ್ಯವು ಕಾರಣದಿಂದ ಬೇರೆಯಲ್ಲ. ಉದಾ : ಕಾರ್ಯವಾದ ಮಡಕೆಯಲ್ಲಿ ಕಾರಣವಾದ ಮಣ್ಣು ಇದೆ. ಮಣ್ಣೆ ಮಡಿಕೆಯಾಗಿದೆ. ಆದರೆ ವಿವರ್ತದಲ್ಲಿ ತೋರಿಕೆಯ ಬದಲಾವಣೆಯಾಗುವುದು. ಉದಾ : ನೀರು ಗುಳ್ಳೆಯಾಗುವುದು. ಕಪ್ಪೆ ಚಿಪ್ಪು ಬೆಳ್ಳಿಯಾಗಿ ತೋರುವುದು - ವಿವರ್ತ. ಕಾರಣವು ನಿಜವಾಗಿ ಬದಲಾವಣೆಯಾಗದೆ ತೋರಿಕೆಯ ಬದಲಾವಣೆಯಗುವುದು ( ಕಾರ್ಯ ). ದೇವದತ್ತನು ಮಲಗಿದ್ದರೂ, ಕುಳಿತಿದ್ದರೂ ದೆವದತ್ತನೆ ಯಜ್ಞದತ್ತನಾಗುವುದಿಲ್ಲ. ಹಾಗೆˌ
ಆದ್ದರಿಂದ, ಹಾಗೆಯೆ ಪ್ರಪಂಚವಾಗಿ ಕಾಣುವುದೂ ಬ್ರಹ್ಮವೆ ಹೊರತು ಬೇರೆಯಲ್ಲ ಎಂಬುದು ಅದ್ವೈತ ದರ್ಶನ.


ಜಗತ್ತು

ಜಗತ್ತು ಪಾರಮಾರ್ಥಿಕ ದೃಷ್ಟಿಯಿಂದ ಬಾಧಿತವಾಗಿ ಅಸತ್ಯ ( ಮಿಥ್ಯೆ. ) ಎಂಬುದು ತೀರ್ಮಾನವಾಗಿದ್ದರೂ, ವ್ಯವಹಾರಿಕ ಸತ್ಯವನ್ನು ( ಸತ್ಯವೆಂದು. ) ಹೊಂದಿರುವುದರಿಂದ, ವಾಸ್ತವವಾದುದು. ಅದು ( ಜಗತ್ತು. ) ಬ್ರಹ್ಮದ ನೆಲೆಯಿಂದ ತೋರಿಕೆಯಾದರೂ ಜೀವದ ( ಜೀವ-ನ ನೆಲೆಯಿಂದ. ) ಸತ್ಯ.
ಜಗತ್ತಿಗೆ ಬ್ರಹ್ಮವೆ ಕಾರಣ. ಇದು ಶ್ರುತಿ ( ವೇದ. ) ಸಮ್ಮತ. ಕೆಲವರು ( ನ್ಯಾಯ.) ಈಶ್ವರ ನಿಮಿತ್ತ ಕಾರಣ ಮಾತ್ರ ಎನ್ನುತ್ತಾರೆ ( ಮಡಕೆಗೆ ಕುಂಬಾರನಿದ್ದಂತೆ.).
ಆದರೆ ವೇದಾಂತವುˌ ಈಶ್ವರನು ನಿಮಿತ್ತ ಕಾರಣವೂ ಹೌದು ; ಉಪಾದಾನ ಕಾರಣವೂ ಹೌದು ಎನ್ನುತ್ತದೆ ( ಮಡಕೆಗೆ ಮಣ್ಣು ಇದ್ದಂತೆ.). ಈಶ್ವರನು ಜಗತ್ತನ್ನು ಉಂಟುಮಾಡುವುದು ತನ್ನಿಂದಲೆ. ಮಾಯೆ ಎಂಬ ಉಪಾದಿಯಿಂದಲೆ ಈಶ್ವರನು ಜಗತ್ತನ್ನು ಉಂಟುಮಾಡುತ್ತಾನೆ. ಅವನು ಚೇತನನೂ ಹೌದು ; ಅವನು ತನ್ನ ಇಚ್ಛೆಯಿಂದಲೆ - ಅವನೆ ಮಾಯೆಯ ಉಪಾದಿಯಿಂದ ಜಗತ್ತಾಗಿ ತೋರುತ್ತಾನೆ. ಚೈತನ್ಯದಿಂದ ಜಡವಾದ ಚೇತನ ಹೇಗೆ ಉಂಟಾಗುವುದೆಂದರೆ, ಅದು ತಪ್ಪಲ್ಲ, ಪುರುಷನಲ್ಲಿ ಉಗುರು ಇದ್ದಂತೆ - ಒಟ್ಟಿನಲ್ಲಿ ಅನಿರ್ವಚನೀಯ.


ಸೃಷ್ಟಿ

ಜಗತ್ತಿನ ಸೃಷ್ಟಿ ಹೇಗೆ? ತಮೋಗುಣವು ಪ್ರಧಾನವಾದ ವಿಕ್ಷೇಪ ಶಕ್ತಿಯಿಂದ ( ಮಾಯೆಯಿಂದ ) ಕೂಡಿದ ಚೈತನ್ಯದಿಂದ, ಆಕಾಶವು ಮೊದಲು ಹುಟ್ಟಿತು; ಆಕಾಶದಿಂದ ವಾಯು; ವಾಯುವಿನಿಂದ ಅಗ್ನಿ; ಅಗ್ನಿಯಿಂದ ಜಲ ; ಜಲದಿಂದ ಪೃಥ್ವಿ. ; - ಅದರಿಂದ ತನ್ಮಾತ್ರೆಗಳು ; ಈ ಸೂಕ್ಕ್ಮವಾದ ತನ್ಮಾತ್ರೆಗಳಿಂದ ಸೂಕ್ಷ್ಮ ಶರೀರ ; ಸ್ಥೂಲ ಭೂತಗಳು ಹುಟ್ಟುತ್ತವೆ - ( ಪಂಚೀಕರಣ ವಿಧಾನ. )


*ಜೀವ - ಈಶ್ವರ*


ಜೀವನಿಗೆ ಸ್ಥೂಲˌ ಸೂಕ್ಷ್ಮ , ಕಾರಣಗಳೆಂಬ ಮೂರು ಶರೀರಗಳು. ಜಾಗ್ರತ್ , ಸ್ವಪ್ನ , ಸುಷುಪ್ತಿಗಳೆಂಬ ಮೂರು ಅವಸ್ಥೆಗಳು ; ಅನ್ನಮಯˌ ಪ್ರಾಣಮಯˌ ಮನೋಮಯˌ ವಿಜ್ಞಾನಮಯ, ಆನಂದಮಯ ; ಎಂಬ ಐದು ಕೋಶಗಳು. ( ಒಂದರಿಂದ ಇನ್ನೊಂದು ಉನ್ನತ ಸ್ಥಿತಿ,) ; ವಿಶ್ವ, ತೈಜಸ, ಪ್ರಾಜ್ಞ ಎಂಬ ದೇವತೆಗಳ ಹೆಸರುಗಳು ಜೀವನಿಗೆ - ಜಾಗ್ರತ್, ಸ್ವಪ್ನ, ಸುಷುಪ್ತಿಯನ್ನು ಆಧರಿಸಿ ಈ ಹೆಸರುಗಳು ಇವೆ. ಅದೆ ರೀತಿಯಲ್ಲಿ ಈಶ್ವರನಿಗೂ ವೈಶ್ವಾನರ ( ಕಾಣುವ ಜಗತ್ತು. ), ಸೂತ್ರಾತ್ಮ ( ಸ್ವಪ್ನದ ಈಶ್ವರ - ದೇವತೆ.) ; ಹಿರಣ್ಯ ಗರ್ಭ ( ಸುಷುಪ್ತಿಯ ಈಶ್ವರ ಅಥವಾ ಸಮಾಧಿಯ ಈಶ್ವರ.) ಎಂಬ ಹೆಸರುಗಳಿವೆ.


ಅಂತಃಕರಣ ಮತ್ತು ಸಾಕ್ಷಿ


ಅಂತಃಕರಣವು ಜಡವಾಗಿದೆ ( ಸ್ವತಃ ಚೈತನ್ಯವಲ್ಲ.). ತೇಜಸ್ಸಿನ ಅಂಶವು ಪ್ರಧಾನವಾಗಿದೆ. ಇದು ಚಂಚಲವೂ ಕ್ರಿಯಾಶೀಲವೂ ಆಗಿದೆ. ಇದರ ಕ್ರಿಯೆಗಳೆ ವೃತ್ತಿಗಳು. ಗಾಢ ನಿದ್ದೆ, ಮೂರ್ಛೆಗಳನ್ನು ಬಿಟ್ಟರೆ, ಅದು ಸದಾ ವೃತ್ತಿಯುಳ್ಳದ್ದೆ ಆಗಿರುತ್ತದೆ. ಇದನ್ನೆ ನಾವು ಜ್ಞಾನವೆಂದು ಕರೆಯುವುದು ಇವೆ ವೃತ್ತಿಗಳನ್ನು.


ಸಾಕ್ಷಿ : ಅಂತಃಕರಣ ಜಡವಾದುದರಿಂದ ವೃತ್ತಿಗಳು ಹುಟ್ಟಲು ಚೈತನ್ಯಬೇಕು. ಜೀವನಲ್ಲಿರುವ ಚೈತನ್ಯಾಂಶವೆ, ಸಾಕ್ಷಿ ಎನಿಸಿಕೊಳ್ಳುತ್ತದೆ. ಕಾರಣ ಇದು ಅಂತಃಕರಣದಲ್ಲಿ ( ಮನಸ್ಸು , ಬುದ್ಧಿ , ಅಹಂಕಾರ , ಚಿತ್ತ . ಇವು ಒಟ್ಟು ಅಂತಃಕರಣ ಎನ್ನಿಸಿಕೊಳ್ಳುತ್ತದೆ. ) ನೇರವಾಗಿ ಭಾಗಿಯಾಗುವುದಿಲ್ಲ. ನಾಟಕ ರಂಗದಲ್ಲಿರುವ ದೀಪದಂತೆ ( ಸಾಕ್ಷಿ. ) ಇರುತ್ತದೆ.


ವ್ಯವಹಾರದಲ್ಲಿ ನಾನು ಎಂಬ ತಿಳಿವುˌ ಅಹಂಕಾರ ( ಇದು ಜಂಬವಲ್ಲ - ನಾನು ಎಂಬ ತತ್ವ. ) ವೆಂಬ ಅಂತಃಕರಣ ತತ್ವ. ಅದು ಸಚೇತನವಾಗಿ ತೋರುವುದು - ಸಾಕ್ಷಿ ಚೇತನದಿಂದ, ಈ ಸಾಕ್ಷಿಯೆ ಆತ್ಮ. ಬೆಂಕಿಯ ಕಾರಣದಿಂದ ಕಬ್ಬಿಣವು ಕೆಂಪಾಗಿ ಕಾಣುವಂತೆ ಅಂತಃಕರಣ ಚೇತನವಾಗಿ ತೋರುವುದು.


 *ಜೀವಾತ್ಮ*

ಜೀವಾತ್ಮನು ಅಜರನೂˌ ಅಮರನೂ, ಸರ್ವವ್ಯಾಪಿಯೂ, ಬ್ರಹ್ಮ ಸ್ವರೂಪಿಯೂ ಆಗಿದ್ದಾನೆ. ಅವನಿಗೆ ಪಾರಮಾರ್ಥಿಕವಾಗಿ ಬಂಧ - ಮೋಕ್ಷಗಳಿಲ್ಲ. ಅವನಿಗೆ ಸ್ವರ್ಗ- ನರಕಗಳಿಲ್ಲ. ಅವನು ಅವನಲ್ಲಿ ( ತನ್ನಲ್ಲಿ. ) ಇಲ್ಲದ ಗುಣಧರ್ಮಗಳನ್ನು ತನ್ನಲ್ಲಿ ಆರೋಪಿಸಿಕೊಂಡು ( ಅವಿದ್ಯೆ - ಅಜ್ಞಾನ. ), ವ್ಯವಹರಿಸಲು ಅಧ್ಯಾಸವೆ ( ಅಜ್ಞಾನ-ಮಾಯೆ. ) ಕಾರಣ. ಆಕಾಶವು ಮಡಕೆ ಕುಡಿಕೆಗಳಲ್ಲಿ ಬೇರೆ ಬೇರೆ ಕಾಣುವಂತೆ, ಒಂದೆ ಚೈತನ್ಯವು ( ಬ್ರಹ್ಮವು. ) ಉಪಾದಿಗಳ ಕಾರಣದಿಂದ ಬೇರೆ ಬೇರೆಯಾಗಿತೋರುವುದು. ಹಾಗಾಗಿ ಬೇಧವು ಪಾರಮಾರ್ಥಿಕ ಸತ್ಯವಲ್ಲ. ತತ್ವಮಸಿ - ತತ್- ತ್ವಂ- ಅಸಿ ಎಂಬ ಶ್ರತಿ ವಾಕ್ಯಗಳು ( ಅದು= ಬ್ರಹ್ಮವು, ತ್ವಂ = ನೀನು, ಅಸಿ-ಆಗಿದ್ದೀಯೆ.) ಅಬೇಧವನ್ನು ಸಾರುತ್ತವೆ.



*ಬಂಧ - ಮೋಕ್ಷ*

ಪಾಮಾರ್ಥಿಕವಾಗಿ ( ತಾತ್ವಿಕವಾಗಿ - ಮೂಲತಃ.) ಜೀವ ಬ್ರಹ್ಮರಿಗೆ ಬೇಧವಿಲ್ಲ. ಆದರೆˌ ವ್ಯಾವಹಾರಿಕವಾಗಿ ಬೇಧವಿದೆ. ಸುಖ - ದುಃಖ ; ಹುಟ್ಟು - ಸಾವು ; ಕರ್ಮ - ಪುನರ್ಜನ್ಮ ; ಸ್ವರ್ಗ- ನರಕಗಳಿವೆ ; ಇವಕ್ಕೆಲ್ಲಾ ಅವಿದ್ಯೆಯೂ ಕಾರಣ ನಿತ್ಯ-ಶುದ್ಧ-ಬುದ್ಧ-ಮುಕ್ತ ಸ್ವಭಾವದ ಚೈತನ್ಯವು, ಅವಿದ್ಯೆಯ ಪರಿಣಾಮವಾಗಿ ಸಂಸಾರದಲ್ಲಿ ಸಿಲುಕಿಕೊಳ್ಳುವುದೆ ಬಂಧವೆನಿಸಿಕೊಳ್ಳುತ್ತದೆ. ಇದು ಅನಾದಿಯಾದುದು. ಯಾವಾಗ ಪ್ರಾರಂಭವಾಯಿತು? ಯಾಕೆ ಪ್ರಾರಂಭವಾಯಿತು? ಎನ್ನುವುದು ಬಗೆಹರಿಯದ ಸಮಸ್ಯೆ. ಇದು ಭಗವಂತನ ಲೀಲೆ ಎಂಬುದಾಗಿ ತಿಳಿಯಬಹುದು.


ಪಾಮಾರ್ಥಿಕವಾಗಿ ಜೀವ ಬ್ರಹ್ಮರಿಗೆ ಬೇಧವಿಲ್ಲ . ವ್ಯಾವಹಾರಿಕವಾಗಿ ಉಂಟು ; ಮೋಕ್ಷವೂ ಉಂಟು. ಜೀವನಿಗೆ ತಾನು ಬ್ರಹ್ಮವೆಂದು ಅರಿವಾಗುವುದೆ ಮೋಕ್ಷ . "ಬ್ರಹ್ಮಾವಗತಿ"ಯೆ ಮೋಕ್ಷ . "ಅವಗತಿ", ಎಂದರೆ ಸಾಕ್ಷಾನುಭವ. :ಉದಾ : ಬೇಡರ ನಡುವೆ ಬೆಳೆದ ರಾಜಕುಮಾರ. ತಾನು ಬೇಡನಲ್ಲ - ರಾಜಕುಮಾರ ಎಂದು ತಿಳಿದಂತೆ.


ಬೇರೆಯವರಿಂದ ಕೇಳಿ ತಿಳಿದರೆ ಅದು ಪರೋಕ್ಷ ಜ್ಞಾನ ; ತಾನೆ ಅನುಭವಿಸಿದರೆ ಅದು ಅಪರೋಕ್ಷಾನುಭೂತಿ ; ಸಾಕ್ಷಾತ್ಕಾರ ; ಅದೆ ಮೋಕ್ಷ .


ಮೋಕ್ಷವನ್ನು ಗಳಿಸಿಕೊಳ್ಳಲು ಎಲ್ಲಿಗೂ ಹೋಗಬೇಕಾಗಿಲ್ಲ. ಅದು ಎಲ್ಲೆಲ್ಲಿಯೂ ಇದೆ. ಆಕಾಶದಂತೆ. ಬಂಧಕ್ಕೆ ಕಾರಣವಾದ ಅಜ್ಞಾನ ನಿವಾರಣೆಯಾದರೆ ಸಾಕು. ಹಾಗಾಗಿ ಜ್ಞಾನದಿಂದಲೆ ಮೋಕ್ಷ. ಇಲ್ಲಿ ಜ್ಞಾನವು ಮೋಕ್ಷವನ್ನು ಹುಟ್ಟಿಸಲಾರದು ಅಜ್ಞಾನವನ್ನು ಕಳೆಯುತ್ತದೆ ಅಷ್ಟೆ. ಬೆಳಕಿಗೆ ಅಡ್ಡಲಾದ ಪರದೆಯನ್ನು ಸರಿಸಿದಂತೆ. ಬ್ರಹ್ಮವನ್ನು ಅರಿತರೆ ಸಾಕು ಅವನೆ ಬ್ರಹ್ಮವಾಗುತ್ತಾನೆ. ( ಬ್ರಹ್ಮವಿದ್ ಬ್ರಹ್ಮೈವ ಭವತಿ.)


*ಕರ್ಮ-ಉಪಾಸನೆ-ಭಕ್ತಿ ಸಂಪಾದಿಸಿ*


ಅದ್ವೈತವು ಜ್ಞಾನದಿಂದಲೆ ಮೋಕ್ಷವೆಂದು ಒತ್ತಿ ಹೇಳುತ್ತದೆ. ಕರ್ಮದಿಂದ ಮೋಕ್ಷವಿಲ್ಲವೆಂದು ಸಾರುತ್ತದೆ. ಅದು ಕರ್ಮ ವಿರೋಧಿಯೆ?

ಕರ್ಮಕ್ಕೆ ಫಲವಿರುವುದರಿಂದ ಅದು ಕರ್ಮಕ್ಕೆ ವಿರೋಧಿಯಾಗಿದೆ. ಕರ್ಮವು ನಿತ್ಯ - ನೈಮಿತ್ತಿಕ - ಕಾಮ್ಯ - ನಿಷಿದ್ಧ ಎಂದು ನಾಲ್ಕು ಬಗೆ. ಈ ಕರ್ಮಗಳಿಗೆಲ್ಲಾ ಫಲವಿದೆ. ಆದ್ದರಿಂದ ಪುನರ್ಜನ್ಮವಿದೆ. ಕರ್ಮಫಲಗಳು ಅನಿತ್ಯವಾಗಿವೆ. ( ಸ್ವಲ್ಪ ಕಾಲವಿದ್ದು ಹೋಗುವವು. ). ಆದ್ದರಿಂದ ಮೋಕ್ಷವು ಕರ್ಮಫಲವಲ್ಲ. ಮೋಕ್ಷವು ಕರ್ಮಫಲವಾದರೆ ಅದು ಅನಿತ್ಯವಾಗುವುದು.


ಕರ್ಮಯೋಗ


ಕರ್ಮವು ಮೋಕ್ಷಕ್ಕೆ ಸಹಕಾರಿಯಾಗಿದೆ. ಕರ್ಮವು ಬಂಧನಕಾರಿ. ಕರ್ಮಗಳನ್ನು ( ಕೆಲಸಗಳನ್ನು ಸೇರಿ. ) ಮಾಡದೆ ಇರುವುದು ಸಾಧ್ಯವಿಲ್ಲ. ಆದ್ದರಿಂದ ಕರ್ಮ ಬಂಧನದಿಂದ ಬಿಡಿಸಿಕೊಳ್ಳಲು, ಅವನ್ನು ಈಶ್ವರಾರ್ಪಣ ಮಾಡುವುದೊಂದೇ ದಾರಿ/ಮಾರ್ಗ. ಅದೆ ಕರ್ಮಯೋಗ. ಈ ರೀತಿ ಮಾಡುವುದರಿಂದ ಚಿತ್ತ ಶುದ್ಧಿಯಾಗಿ ಜ್ಞಾನೋದಯಕ್ಕೆ ಕಾರಣವಾಗುತ್ತದೆ. ಬ್ರಹ್ಮ ಜ್ಞಾನವಾಗುವವರೆಗೂ ಕರ್ಮವು ಅವಶ್ಯವಾಗಿದೆ.


*ಉಪಾಸನೆ*


ಉಪಾಸನೆ ಎಂದರೆ ಉಪಾಸ್ಯ ( ಧ್ಯಾನ ಮಾಡುವ. ) ವಸ್ತುವಿನ ಕಡೆಗೆ ಏಕಾಗ್ರತೆಯಿಂದ ಮನಸ್ಸನ್ನು ಹರಿಸುವುದು. ಇದಕ್ಕೆ ' ವಿದ್ಯಾ "ಎಂದು ಹೆಸರು. ಉಪಾಸನೆಯು ಜ್ಞಾನದ ಅಪೇಕ್ಷೆಯ ಕರ್ಮ. ಉಪಾಸನೆ ಎಂದರೆ ಉಪಾಸ್ಯ ( ಧ್ಯಾನ ಮಾಡುವ.) ವಸ್ತುವಿನ ಕಡೆಗೆ ಏಕಾಗ್ರತೆಯಿಂದ ಮನಸ್ಸನ್ನು ಹರಿಸುವುದು . ಇದಕ್ಕೆ ವಿದ್ಯಾ ಎಂದು ಹೆಸರು . ಜ್ಞಾನದ ಅಪೇಕ್ಷೆಯ ಕರ್ಮ. ಇದರಿಂದಲೂ ಕೊನೆಗೆ ಜ್ಞಾನವಾಗಿ ಮೋಕ್ಷವಾಗುವುದು ಇಲ್ಲದಿದ್ದರೆ ( ಜ್ಞಾನವಾಗದಿದ್ದರೆ. ) ಹಿರಣ್ಯಗರ್ಭಲೋಕ.


*ಭಕ್ತಿ*


ಭಕ್ತಿಯು ದ್ವೈತವನ್ನು ಆಧರಿಸಿದ್ದು ; ಭಗವಂತನೆ ಬೇರೆˌ ತಾನೆ ಬೇರೆ ಎಂಬ ಭಾವದಿಂದ ದಾಸ್ಯ ; ಸಖ್ಯ ; ವಾತ್ಸಲ್ಯ ; ಮೊದಲಾದ ಭಾವದಿಂದ ಭಗವಂತನ ಭಜನೆ, ಸೇವೆ ಇರಬೇಕು. ಅದ್ವೈತದಲ್ಲಿ ಭಕ್ತಿಗೆ ಸ್ಥಾನವಿಲ್ಲವೆಂಬ ತಪ್ಪು ತಿಳಿವಳಿಯಿದೆ. ಭಕ್ತಿಯಲ್ಲಿ - ನಾನು ಅವನವನು ; ಅವನು ನನ್ನವನು ; ನಾನೆ ಅವನು ; ಎಂಬ ಮೂರು ವಿಧದ ಭಕ್ತಿಗೂ ಅವಕಾಶವಿದೆ. ( ಗೀ..ಭಾ.೧೦-೧೦ ). ಹೀಗೆ ಭಕ್ತಿಯು ಅಂತಿಮವಾಗಿ ಜ್ಞಾನದಲ್ಲಿ ಪರಿಣಮಿಸುವುದರಿಂದ ಭಕ್ತಿಯನ್ನ ಒಪ್ಪಲಾಗಿದೆ. ಆದರೂ ಅಲ್ಲಿ ಅತಿರೇಕ - ಉದ್ರೇಕಗಳಿಗೆ ಅವಕಾಶವಿಲ್ಲ. ಆದರೆ ಭಕ್ತಿಯ ಮಹತ್ವವನ್ನು ಅವಶ್ಯಕತೆಯನ್ನು ಶಂಕರರು ಎತ್ತಿ ಹೇಳಿದ್ದಾರೆ.


*ಜೀವನ್ಮುಕ್ತಿ*

ಅದ್ವೈತವು ಜೀವನ್ಮುಕ್ತಿಯನ್ನು ಪ್ರತಿಪಾದಿಸುತ್ತದೆ. ಮುಕ್ತಿಯು ಜ್ಞಾನದಿಂದ ಪ್ರಾಪ್ತವಾಗುವುದರಿಂದ ಜೀವಂತವಿರುವಾಗಲೆ ಮುಕ್ತಿಯನ್ನು ಪಡೆಯುವುದು ಸಾಧ್ಯ. ಮರಣಾನಂತರವೆ ಮುಕ್ತಿಯೆಂದಿಲ್ಲ. ಶರೀರವೆ ತಾನೆಂಬ ಭಾವನೆಯನ್ನು ಕಳೆದುಕೊಂಡರೆ ಸಾಕು. ಜ್ಞಾನವಾದರೆ ಅಥವಾ ಮುಕ್ತಿಯಾದರೆ ಶರೀರವು ಬಿದ್ದುಹೋಗುವುದಿಲ್ಲ. ಕರ್ಮ ( ಹಿಂದಿನ. ) ಸವೆಯುವವರೆಗೂ ಇರುತ್ತದೆ. ಜೀವನ್ಮುಕ್ತನು ಸಮಾಧಿಯಲ್ಲಿ ಬ್ರಹ್ಮದೊಂದಿಗೆ ಒಂದಾಗುತ್ತಾನೆ. ಉಳಿದ ಸಮಯದಲ್ಲಿ ಇತರರಂತೆಯೆ ಇರುತ್ತಾನೆ. ಆದರೆ ಅವನಿಗೆ ಧರ್ಮ-ಕರ್ಮಗಳ ಬಾಧೆ ಇಲ್ಲ. ಒಳ್ಳೆಯತನ ಸ್ವಾಭಾವಿಕ.


ಅವನಿಗೆ. ಅವನಿಗೆ ಸರ್ವವೂ ಬ್ರಹ್ಮಮಯ ; ಅಲ್ಲಿ ಸ್ವಾರ್ಥ, ದ್ವೇಷ , ಆಸೆಗಳಿಲ್ಲ. ; ಸಮಸ್ತ ಜಗತ್ತು ಒಂದೆ ಕುಟುಂಬ - ಎನ್ನುವುದಕ್ಕಿಂತ ಮೇಲಿನ ಹಂತ ಅವನದು.
ಅವನು ದೇಹಪಾತವಾದ ಮೇಲೆˌ ಬ್ರಹ್ಮದಲ್ಲಿ ಲೀನವಗುತ್ತಾನೆ. ಇದು ವಿದೇಹ ಮುಕ್ತಿ ; ಆನಂದ ಸ್ವರೂಪನಾಗುತ್ತಾನೆ. ಪುನರ್ಜನ್ಮವಿಲ್ಲ . ಅದಕ್ಕಿಂತ ಹೆಚ್ಚಿನ ಸ್ಥಿತಿ ಇಲ್ಲ. ಅದೇ ಜೀವನದ ಪರಮ ಗುರಿ.

ಹೀಗೆ ಅದ್ವೈತವು ಸಕಲ ಜೀವಿಗಳೂ ಸಮಾನರು ಎಂಬ ತತ್ವವನ್ನು ಬೋಧಿಸಿದೆ.