22 March 2025

"ಹೆಸರೆ ಇಲ್ಲದವರೂರಿನಲ್ಲೊಂದು ಕೊಲೆಯಾದ ಕಥೆ" ೨

"ಹೆಸರೆ ಇಲ್ಲದವರೂರಿನಲ್ಲೊಂದು ಕೊಲೆಯಾದ ಕಥೆ"


ನನ್ನ ವೃತ್ತಿಯ ಆರಂಭದ ದಿನ ರಾಜ್ಯದ ಮುಖ್ಯಮಂತ್ರಿ ಕೆಲಿನ್ ಹಜಾ಼ನ್ ಪುಲೋಂಗ್ ರಾಜಧಾನಿ ಬಿಟ್ಟು ಆಗಲೆ ಎರಡು ವಾರಗಳ ಮೇಲಾಗಿತ್ತು. ಸ್ವತಂತ್ರ ಚಳುವಳಿ ಹಿನ್ನೆಲೆಯ ಪಕ್ಷದಿಂದಲೆ ರಾಜಕೀಯ ಜೀವನ ಆರಂಭಿಸಿ ಸಂಸತ್ತಿನ ಸಭಾಪತಿಯಂತಹ ಉನ್ನತ ಹುದ್ದೆಯವರೆಗೂ ಮೇಲೇರಿದ್ದರೂˌ ಭರಪೂರ ಅಧಿಕಾರಗಳನ್ನು ಅದೆ ಪಕ್ಷದ ಮೂಲಕ ಅನುಭವಿಸಿದ್ದರೂ. ಮುಂದೆ ಅವಕಾಶವಾದಿಯಾಗಿ ಪಕ್ಷದ ಮೆಲೆ ಹಿಡಿತ ಸಾಧಿಸಿದ್ದ ಕುಟುಂಬದ ಸೊಸೆ ಪಕ್ಷದೊಳಗೆ ಪ್ರಬಲವಾದ ಹಿನ್ನೆಲೆಯಲ್ಲಿ ಅವರ ವಿದೇಶಿ ಜನ್ಮಸ್ಥಳದ ಕುಂಟು ನೆಪ ತೆಗೆದು ತನ್ನ ಇನ್ನಿಬ್ಬರು ಮಹತ್ವಾಕ್ಷಾಂಶಿ ಮಿತ್ರರೊಂದಿಗೆ ಪಕ್ಷ ಒಡೆದು ಹೊಸ ರಾಜಕೀಯ ಪಕ್ಷ ಕಟ್ಟಿದ್ದ ಭೂಪನೀತ. ಕಾಲಾಂತರದಲ್ಲಿ ಆ ಪಕ್ಷವನ್ನೂ ಒಡೆದು ತನ್ನ ಗುಂಪಿನೊಂದಿಗೆ ಹೊರ ಬಂದು ಹೊಸ ಚಿನ್ಹೆಯೊಂದಿಗೆ ಸ್ಪರ್ಧಿಸಿ ರಾಜ್ಯದಲ್ಲಿ ಕಳೆದ ಮೂರು ಅವಧಿಗಳಿಂದ ನಿರಂತರವಾಗಿ ಅಧಿಕಾರದಲ್ಲಿದ್ದ.



ಪ್ರಾದೇಶಿಕ ಪಕ್ಷದ ಸರ್ವೋಚ್ಛ ನಾಯಕ ತಾನೆ ಆಗಿದ್ದರಿಂದ ದೆಹಲಿಯ ನಾಯಕರ ಅಂಕೆಯಿಲ್ಲದೆˌ ಸ್ಥಳಿಯ ಕಾರ್ಯಕರ್ತ ದೆವ್ವಗಳ ಕಾಟವೂ ಇಲ್ಲದೆ ಸಂಸಾರ ಸಮೇತನಾಗಿ ಕೂತುಣ್ಣುತ್ತಾ ರಾಜ್ಯದ ಖಜಾನೆಯನ್ನ ನಿರಂತರವಾಗಿ ದೋಚುತ್ತಿರುವ ಕೌಟುಂಬಿಕ ರಾಜಕಾರಣಿ ರತ್ನರಲ್ಲೆ ಅಗ್ರಣಿಗಳಲ್ಲೊಬ್ಬ ಈ ಪುಲೋಂಗ್. ವಯೋ ಸಹಜವಾಗಿಯೋ ಇಲ್ಲಾ ಕರ್ಮಫಲಾನುಸಾರವಾಗಿಯೋ ಹೃದಯದಲ್ಲಿ ರಕ್ತಪರಿಚಲನೆಯ ಗಂಭೀರ ಸಮಸ್ಯೆಯಿಂದ ನರಳಿˌ ಬೈಪಾಸ್ ಶಸ್ತ್ರಕ್ರಿಯೆ ಮಾಡಿಸಿಕೊಂಡು ಮುಂಬೈಯ ಪಂಚತಾರಾ ದರ್ಜೆಯ ಐಶಾರಾಮಿ ಆಸ್ಪತ್ರೆಯ ತೀವೃ ನಿಗಾ ಘಟಕದಲ್ಲಿ ಮುಲುಕಾಡುತ್ತಾ ಮಲಗಿಕೊಂಡಿದ್ದ ಕಾಲದಲ್ಲಿ ನಾನು ಹೊಸ ನೇಮಕಾತಿಯ ಛಾರ್ಜ್ ತೆಗೆದುಕೊಂಡಿದ್ದೆ.


ಮುಖ್ಯಮಂತ್ರಿ ತಾನು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೂ ಸಹ ಅಧಿಕಾರ ಹಸ್ತಾಂತರಿಸದೆˌ ತತ್ಕಾಲಿಕ ವ್ಯವಸ್ಥೆಯಾಗಿ ತನ್ನ ನಂಬಿಕಸ್ಥ ಬಂಟ ಗುಡ್ಡಗಾಡು ಖಾತೆಯ ಮಂತ್ರಿ ಕರ್ಲೂಕಿ ಮುವ್ರಿ ಬೋಯ್ ಅನ್ನೋ ಬೆನ್ನುಮೂಳೆಯಿಲ್ಲದ ಗುಲಾಮನೊಬ್ಬನನ್ನ ಇಲ್ಲಿ ಪ್ರಭಾರಿಯಂತೆ ಒಂದು ತಿಂಗಳು ಮೇಲುಸ್ತುವರಿ ನಡೆಸಲು ನೇಮಿಸಿದ್ದ. ಅದೇನೆ ವಿಧೇಯನಾಗಿದ್ದರೂ ಕೂಡ ಅವನೆಲ್ಲಾದರೂ ಪರಿಸ್ಥಿತಿಯ ಲಾಭ ಪಡೆದು ಬಂಡಾಯ ಹೂಡಿದರೆ ಕಷ್ಟ ಅಂತಂದು ತನ್ನ ರಾಜಕೀಯ ಉತ್ತರಾಧಿಕಾರಿ ಎಂದೆ ಗುರುತಿಸಲ್ಪಟ್ಟಿದ್ದ ಹಿರಿಯ ಮಗ ಫ್ರಾನ್ಸಿಸ್ ಕೆಲೀನ್ ಪುಲೋಂಗ್ ಸಮ್ಮತಿಯಿಲ್ಲದೆ ಯಾವುದೆ ಆಡಳಿತಾತ್ಮಕ ನಿರ್ಧಾರಗಳನ್ನ ಕೈಗೊಳ್ಳದಂತೆ ನಿರ್ಬಂಧಿಸಿದ್ದ. ಅನುಭವದಲ್ಲೂ - ಪ್ರಾಯದಲ್ಲೂ ಇನ್ನೂ ಎಳಸಾಗಿದ್ದ ಈ ಇಮ್ಮಡಿ ಪುಲೋಂಗ್ ಸಿಕ್ಕಿದ್ದೆ ಛಾನ್ಸು ಅಂತ ಕಂಡಕಂಡವರ ಮೇಲೆ ಯಾವೊಂದು ಸಾಂವಿಧಾನಿಕ ಹುದ್ದೆ ಇಲ್ಲದಿರುವಾಗಲೂ ದಬ್ಬಾಳಿಕೆ ನಡೆಸುತ್ತಾ ಇದ್ದ ಹೊತ್ತಿನಲ್ಲಿˌ ಈ ನಾಗೇಶ್ವರ ರಾವುಗಳಂತಹ ಸರಕಾರಿ ಅಧಿಕಾರಿಗಳು ಆಪತ್ತಿನಲ್ಲಿಯೂ ಅವಕಾಶವನ್ನ ಅರಸಿಕೊಂಡು ಆದಷ್ಟು ಕೊಳ್ಳೆ ಹೊಡೆದುಕೊಂಡು ಆರಾಮಾಗಿದ್ದರು.



ಈಗ ಚಿಕಿತ್ಸೆ ಮುಗಿದು ಚೇತರಿಸಿಕೊಂಡ ಮುಖ್ಯಮಂತ್ರಿ ಮರಳಿ ಮನೆಗೆ ಬರೋ ಕಾಲ ಎದುರಾಗಿ ಇಂತಹ ಹೆಗ್ಗಣಗಳಿಗೆ ತಮ್ಮ ಸುಗ್ಗಿ ಕಾಲ ಮುಗಿದ ವೇದನೆಯಲ್ಲಿ ಸಹಜವಾಗಿ ಹಳಹಳಿಸುವಂತೆ ಆಗಿತ್ತು. ಮೂಲಭೂತವಾಗಿ ಕೊಳೆತ ಮೆದುಳಿನವನಾಗಿದ್ದ ನಾಗೇಶ್ವರ ರಾವು ತನ್ನ ವಿಕೃತ ಚಿಂತನೆಯಂತೆ ಮುಖ್ಯಮಂತ್ರಿಯನ್ನ ದೇಸಿ ತಳಿಯ ನಾಯಿ ಅಂದಿದ್ದರೆˌ ರಾಜ್ಯದ ಅಧಿಕಾರಿಯಾಗಿದ್ದು ಸದ್ಯ ಐಎಎಸ್ ದರ್ಜೆಗೆ ಮೇಲೇರಿಸಲ್ಪಟ್ಟಿದ್ದ ಮುಖ್ಯ ಕಾರ್ಯದರ್ಶಿ ಮುಕ್ತಿಪ್ರಸಾದ ಸರ್ಮಾನನ್ನ ಮುದಿಯ ಅಂತ ವಾಡಿಕೆಯಂತೆ ಮೊದಲಿಸಿದ್ದ. ನೇರ ಕೇಂದ್ರ ಸೇವೆಯ ಐಎಎಸ್ ಮುಗಿಸಿದ ತಾನು ಆ ಸ್ಥಳಿಯ ನೇಮಕಾತಿಯಿಂದ ಮೇಲೇರಿ ಬಂದು ನಿವೃತ್ತಿಯಂಚಿನಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ "ಎರಡನೆ ದರ್ಜೆಯ ಐಎಎಸ್" ಅಸ್ಸಾಮಿ ಸರ್ಮನಂತಹ ನಿಶ್ಕೃಷ್ಟ ಜೀವಿಯ ಮುಂದೆ ಕೈ ಕಟ್ಟಿ ನಿಲ್ಲಬೇಕಿರುವ ಘೋರ ವಿಧಿ ವಿಲಾಸ ತನ್ನಂತಹ "ಏ ವನ್ ದರ್ಜೆಯ ಐಎಎಸ್" ಮುಗಿಸಿರೋವವನಿಗೆ ಆಗುತ್ತಿರುವ ಬಹಿರಂಗದ ಅಪಮಾನ ಅನ್ನುವ ಮುಳ್ಳೊಂದು ಅವನ ಮನದೊಳಗೆ ಮುರಿದುಳಿದು ಕೀವು ಕಟ್ಟಿಸಿತ್ತು ಬೇರೆ. ಹೀಗಾಗಿ ಔಷಧಿಗೆ ಬೇಕೆನ್ನುವಷ್ಟು ತೆಲುಗೂ ಬಾರದವರ ಮುಂದೆ ಧಾರಾಳವಾಗಿ ಹೀಗೆ ಓತಪ್ರೋತವಾಗಿ ನಾಲಗೆ ಹರಿಯ ಬಿಟ್ಟು ತನ್ನ ಹತಾಶೆಯನ್ನ ಕಾರಿಕೊಳ್ಳುತ್ತಿದ್ದ.



ಹದಿನಾರು ವರ್ಷಗಳಿಂದ ಜಹಗೀರಿನಂತೆ ಅಂಧಾ ದರಬಾರು ನಡಿಸಿದ್ದರೂ ಕನಿಷ್ಠ ರಾಜಧಾನಿ ಶಿಲ್ಲಾಂಗಿನಲ್ಲಾದರೂ ಒಂದು ಸುಸಜ್ಜಿತ ಆಸ್ಪತ್ರೆ ಕಟ್ಟಿಸಬೇಕೆಂದೆ ಮುಖ್ಯಮಂತ್ರಿ ಕಲೀನನಿಗೆ ಅನ್ನಿಸಿರಲೆ ಇಲ್ಲ! ಹಾಗೊಮ್ಮೆ ಅನ್ನಿಸಿದ್ದರೆ ಯಕಶ್ಚಿತ್ ಬೈಪಾಸ್ ಸರ್ಜರಿಗೆ ಮುಂಬೈವರೆಗೆ ಹೋಗುವ ಅವಶ್ಯಕತೆಯೆ ಬೀಳುತ್ತಿರಲಿಲ್ಲ ಅಂತ ಇಟ್ಕಳಿ. ತೀವೃ ಆರೋಗ್ಯ ಬಾಧೆಗಳಿಗೆ ಒಂದಾ ಪಕ್ಕದ ಅಸ್ಸಾಂನ ಗುವಾಹಟಿಯಲ್ಲಿರುವ ಇದ್ದುದರಲ್ಲಿ ಉತ್ತಮ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡುˌ ಅಗತ್ಯ ಬಿದ್ದಲ್ಲಿ ಸಮೀಪದ ಕೊಲ್ಕೊತಾಗೆ ಹೋಗುವ ಅಭ್ಯಾಸಕ್ಕೆ ಜನ ಕಟ್ಟು ಬಿದ್ದಿದ್ದರು. ರಾಜಧಾನಿಯಲ್ಲೆ ಪರಿಸ್ಥಿತಿ ಇಷ್ಟು ಶೋಚನೀಯವಾಗಿರೋವಾಗ ಬಾಂಗ್ಲಾ ಗಡಿಯಂಚಿನ ದುರ್ಗಮ ಪ್ರದೇಶಗಳ ಜನತೆಯ ಗಂಭೀರ ಆರೋಗ್ಯ ಸಮಸ್ಯೆಗಳ ಸಂಗತಿ ಚಿಂತಾಜನಕವಾಗಿತ್ತು. ಒಟ್ಟಿನಲ್ಲಿˌ ರಾಜ್ಯದ ಆರೋಗ್ಯ ವ್ಯವಸ್ಥೆಯೆ ತೀವೃ ನಿಗಾ ಘಟಕದಲ್ಲಿದ್ದಂತಿತ್ತು. ಹೀಗಾಗಿ ಹೋಬಳಿಗಳಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ಅಷ್ಟೇನೂ ನಂಬಿಕೆ ಹುಟ್ಟದ ಬುಡಕಟ್ಟಿನ ಪ್ರಜೆಗಳು ತಮ್ಮ ಸಾಂಪ್ರದಾಯಿಕ ನಾಟಿ ಔಷಧಿಯ ಚಿಕಿತ್ಸೆಗಳನ್ನೆ ಅವಲಂಬಿಸಿಕೊಂಡಿದ್ದರು. ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಕನಿಷ್ಠ ಮಟ್ಟದಲ್ಲಿದ್ದದು - ನಾಗರೀಕತೆಯ ಕರಾಳ ಚರಿತೆ ಅವರತ್ತಲೂ ಇನ್ನೂ ತನ್ನ ತೋಳು ಚಾಚದಿದ್ದುದು - ಅಭಿವೃದ್ಧಿಯ ಮಾರಕ ಹೊಡೆತದ ಬಿಸಿ ಇನ್ನೂ ಅವರ ಅವಾಸ ಹೊಕ್ಕಿರದಿದ್ದುದುˌ ಹೀಗೆ ನಾನಾ ಕಾರಣಗಳಿಂದ ಕ್ಯಾನ್ಸರ್ - ಏಡ್ಸ್ - ಸಕ್ಕರೆ ಕಾಯಿಲೆ - ಹೃದ್ರೋಗಗಳಂತಹ ಪೀಡೆಗಳಿನ್ನೂ ಅವರಲ್ಲಿ ಸಾಂಕ್ರಾಮಿಕವಾಗಿರದಿದ್ದುದು ಅವರ ಪೂರ್ವಜನ್ಮದ ಪುಣ್ಯವಾಗಿತ್ತು. ಇನ್ನುಳಿದ ಋತುಮಾನಗಳನುಸಾರ ಬರುವ ಸೀಕುಗಳಿಗೆ ಅವರದ್ದೆ ಆದ ಗಾಂವಟಿ ಮದ್ದುಗಳನ್ನ ಅರೆದು ಗುಣ ಪಡಿಸಿಕೊಳ್ಳುವ ನಾಟಿ ಚಿಕಿತ್ಸೆಗಳು ಇದ್ದೆ ಇದ್ದವು.


ಕ್ಯಾಬಿನ್ನಿಗೆ ಬಂದು ಕುಕ್ಕರು ಬಡಿದುˌ ವೃತ್ತಿ ಬದುಕಿನ ಮೊದಲನೆ ಕ್ಯಾಬಿನೆಟ್ ಮೀಟಿಂಗಿನಲ್ಲಿ ಹೇಗೆ ವರ್ತಿಸಬೇಕೆಂದು ಲೆಕ್ಕ ಹಾಕುತ್ತಾ ಕೂತಿದ್ದ ವೇಳೆ ಎದುರಿನ ಮೇಜಿನಲ್ಲಿದ್ದ ಫೋನು ಕಿರುಚಿಕೊಳ್ಳಲಾರಂಭಿಸಿತು. ಕರೆ ನನಗೆ ಆಗಿರೋದರಿಂದ ಮೊದಲು ಉತ್ತರಿಸಿದ ಆಪ್ತ ಕಾರ್ಯದರ್ಶಿ ಕರೆಯನ್ನ ಇಂಟರಕಾಮಿನಲ್ಲಿ ವರ್ಗಾಯಿಸಿರುತ್ತಾನೆ ಅಂದುಕೊಂಡು ಕ್ರೆಡಲ್ ಎತ್ತಿ "ಹಲೋ" ಅಂದೆ. "ಸರಿಗಾ ವಿನಂಡಿ ಬಾಬು. ಅಪ್ಪುಡು ಚಪ್ಪೇದಿ ನಾಕಿ ಮರೆಚಿಪೋಯಿಂದಿ.  ನುವ್ವೊಕ್ಕ ಆಫೀನಸಿನಿಂಚಿ ಬಂಡಿ ಪೋಂದಂವೆಚ್ಚು ಕಾದ? ಆ ಜೋನಂಗಿ ಜಾಗಿಲವಾಡಿ ವಂಡಿ ಉಂಟದಿ. ಅದಿಕೋಸಂ ಕೊತ್ತ ಬಂಡಿ ಕೊನುಗೊಲಾರಂಟ. ಅಂದುವಲನೆ ಪಾತದಿ ಮೀಕಿ ಅಲಾಟ್ ಚೇಸ್ತಾ ಏಮಿ?" ಅಂದ. "ಅಲಾಗೆ ಸಾರ್" ಅಂದು ಫೋನಿಟ್ಟೆ. ಕಛೇರಿಯಲ್ಲಿ ವಿಚಾರಿಸಿದಾಗ ಆ ವಿದೇಶಿ ಬ್ರಾಂಡಿನ ಕಾರನ್ನ ತರಿಸಿಕೊಂಡು ಇನ್ನೂ ಸರಿಯಾಗಿ ಒಂದೂವರೆ ವರ್ಷಗಳೂ ಆಗಿಲ್ಲ ಅನ್ನುವ ವಿಚಾರ ತಿಳಿದುಬಂತು. ಹಾಗಿದ್ದರೆ ಅದು ಕಳಪೆ ಗುಣಮಟ್ಟದ್ದೂ ಆಗಿರಲಿಕ್ಕಿಲ್ಲ - ಅಷ್ಟು ಹಳೆಯ ವಾಹನವೂ ಆಗಿರಲ್ಲ ಅನ್ನುವ ಅರಿವಾಯಿತು. ಮುಖ್ಯಮಂತ್ರಿಗಳ ಉಪಯೋಗದಲ್ಲಿದ್ದ ಕಾರೆಂದರೆ ಕೇಳಬೇಕೆ? ಐಶಾರಾಮಿಯೆ ಆಗಿರುತ್ತದೆˌ


ಹಾಗಿದ್ದರೂˌ ಶಸ್ತ್ರಚಿಕಿತ್ಸೆಯ ನಂತರ ದೇಹಾರೋಗ್ಯದ ಪರಿಸ್ಥಿತಿ ತುಂಬಾ ನಾಜೂಕಿನದಾಗಿದೆಯಂತೆ! ಹೆಚ್ಚು ಕುಲುಕಾಡುವ ಕಾರಿನಲ್ಲಿ ಅಡ್ಡಾಡಬೇಡಿ ಅಂತ ವೈದ್ಯರು ಮುನ್ನೆಚ್ಚರಿಕೆ ಇತ್ತಿದ್ದಾರಂತೆ. ಹೀಗಾಗಿ ಹಳೆ ಕಾರಿನ ಬದಲು ಅದಕ್ಕಿಂತ ಸುಸಜ್ಜಿತವಾದ ಮತ್ತೊಂದು ಕಾರನ್ನ ಮಾನ್ಯ ಮುಖ್ಯಮಂತ್ರಿಗಳ ವಯಕ್ತಿಕ ಬಳಕೆಗಂತಲೆ ನವ ದೆಹಲಿಯಿಂದ ವಿಶೇಷವಾಗಿ ತರಿಸಲಾಗಿದೆಯಂತೆ. ಈಗ ಕೆಲಸಕ್ಕೆ ಬಾರದ ಆ ಹಳೆಯ ಕಾರನ್ನ ಈ ಕಾರಣದಿಂದ ಇನ್ನೂ ವಾಹನ ಹಂಚಿಕೆ ಮಾಡಿರದ ನನಗೆ ಹಂಚಿಕೆ ಮಾಡಲಾಗುತ್ತಿತ್ತು ಅಷ್ಟೆ. ಕೇವಲ ಅಂಬಾಸಡರ್ ಕಾರಿಗೆ ಮಾರು ಹೋಗಿ ಜಿಲ್ಲಾಧಿಕಾರಿಯಾಗುವ ಕನಸು ಕಟ್ಟಿದ್ದವನಿಗೆ ಇದು ನಿಜವಾದ ಶಾಕ್ ಆಗಿತ್ತು.







ಕಳೆದೊಂದು ತಿಂಗಳಿಂದ ಶಿಲ್ಲಾಂಗ್ ಹಾಗೂ ರಾಜಧಾನಿಯ ಹೊರ ವಲಯಗಳಲ್ಲೆಲ್ಲಾ ಭರ್ಜರಿ ಮಳೆ. ಇಲ್ಲಿನ ಮುಂಗಾರಿನ ಹೊಡೆತ ಹೆಚ್ಚೂ-ಕಡಿಮೆ ಹುಟ್ಟೂರು ತೀರ್ಥಹಳ್ಳಿ-ಇದ್ದೂರು ಕಾರ್ಕಳˌ ಮಂಗಳೂರುಗಳಲ್ಲಿ ಇವತ್ತಿಗೆ ಮೂರು ದಶಕಗಳ ಹಿಂದೆ ಭೋರ್ಗರೆದು ಬಿರಿದ ಬಾನಿನಿಂದ ಮುಸಲಧಾರೆ ಸುರಿಯುತ್ತಿದ್ದಂತೆಯೆ ಇದ್ದವು. ಬಾಲ್ಯದ ಹಲವಾರು ಸಿಹಿ-ಕಹಿ ನೆನಪುಗಳು ಬಾಲ್ಕನಿಯ ಕುರ್ಚಿಯಲ್ಲಿ ರಾತ್ರಿ ಉಂಡಾದ ಮೇಲೆ ಕತ್ತಲಾಗಿಸಿಕೊಂಡೆ ದೀಪವಾರಿಸಿ ಕೂತುˌ ಮಳೆ ಹನಿಗಳ ತಾಳಕ್ಕೆ ಶೃತಿಬದ್ಧವಾಗಿರುತ್ತಿದ್ದ ಜೀರುಂಡೆಗಳ ಏಕತಾರಿ ಗಾಯನವನ್ನ ಆಲಿಸುತ್ತಾ ಬಿಟ್ಟೂ ಬಿಟ್ಟೂ ಬಂದೆರಗುತ್ತಿದ್ದ ಇರಚಲು ಮಳೆಯನ್ನ ಆಸ್ವಾದಿಸುವಾಗ ನೆನಪಾಗಿˌ ಚಿಕ್ಕಂದಿನ ಆ ಸುಖದ ಸಮಯಕ್ಕೆ ನನ್ನ ಹಿಡಿತ ಮೀರಿ ಮನಸ್ಸು ಜಾರಿ ಹೋಗುತ್ತಿತ್ತು. ಕೆಲವೊಮ್ಮೆ ಈ ತನಕ ಬದುಕಲ್ಲಿ ನಡೆದ ಸುಖ-ದುಃಖಗಳ ಏನೇನನ್ನೋ ನೆನಪಿಸಿಕೊಂಡು ಒಬ್ಬೊಬ್ಬನೆ ಮುಗುಳ್ನಕ್ಕು - ಮನಸಾರೆ ಅತ್ತು ದಣಿದ ಮನಸಿನ ಭಾರ ಹೊತ್ತು ಆ ಆರಾಮ ಕುರ್ಚಿಯಲ್ಲಿಯೆ ಮುದುಡಿ ಮಲಗಿ ರಾತ್ರಿಯನ್ನ ಬೆಳಗಾಗಿಸಿದ್ದೂ ಇದೆ.




ಅದೆಂತದ್ದೆ ಝ಼ಡಿಮಳೆ ಧುಮ್ಮಿಕ್ಕುತ್ತಿದ್ದರೂ ಸಹ ರೈನ್ ಕೋಟು ತೊಟ್ಟಾದರೂ ನಿತ್ಯ ವೃತದಂತೆ ಆರೂವರೆಯಿಂದ ಎಂಟೂವರೆಯತನಕ ಕನಿಷ್ಠ ಹತ್ತು ಕಿಲೋಮೀಟರುಗಳಾದರೂ ಜಾಗಿಂಗ್ ಮಾಡುವ ಕಟ್ಟುನಿಟ್ಟಿನ ಅಭ್ಯಾಸ ಇದ್ದುದರಿಂದ ಮುಂಜಾನೆ ಆರಕ್ಕೆಲ್ಲ ಬಿಸಿ ಕಾಫಿ ತಂದು ಕೊಡಬೇಕು ಅನ್ನೋ ತಾಕೀತು ಮಾಡಿದ್ದ ಕಾರಣˌ ಗೊಣಗಿಕೊಳ್ಳುತ್ತಿದ್ದನಾದರೂ ಲಾಂಪಾರ್ಗ್ ಬೆಳಗ್ಯೆ ಐದೂವರೆಗೆ ಹತ್ತಿರದ ಮಿಥುನ್ ಸಾಕಿದವರ ಮನೆಯಿಂದ ಹಾಲು ಕ್ಯಾನಿನಲ್ಲಿ ಹೊಯ್ಯಿಸಿಕೊಂಡು ಗಮ್ ಬೂಟು ತೊಟ್ಟು ಅಡುಗೆ ಮನೆಯಲ್ಲಿ ಹಾಜರಿ ಹಾಕುತ್ತಿದ್ದ. ತನ್ನ ಮನೆಯ ಕೆಲಸಗಳನ್ನೆಲ್ಲ ಮಾಡಿ ಮುಗಿಸಿಟ್ಟು ನಾನು ಜಾಗಿಂಗ್-ವಾಯುವಿಹಾರ ಮುಗಿಸಿ ಕ್ವಾಟರ್ಸಿಗೆ ಹಿಂದಿರುಗುವಾಗ ಮಾರ್ಟೀನಾ ಅವನ ಜೊತೆಯಾಗಿರುತ್ತಿದ್ದಳು. ಮತ್ತೆ ಅವರಿಬ್ಬರು ಕೂಡಿ ಲಾಂಪಾರ್ಗ್ ಅನ್ನೋ ಆ "ಹೈದ್ರಾಬಾದ್ ರಿಟರ್ನ್ಡ್ ಶೆಫ್" ಕುದಿಯುವ ನೀರಿಗಷ್ಟು ಹುರಿದಿರದ ರವೆ ಸುರಿದು ಮುದ್ದೆಗಟ್ಟುವ ಅದಕ್ಕಿಷ್ಟು ಬೇವಿನ ಸೊಪ್ಪು-ಹಸಿಮೆಣಸು-ಈರುಳ್ಳಿ ಕೊಚ್ಚಿ ಹಾಕಿˌ ಮೇಲೊಂದಷ್ಟು ಎಣ್ಣೆ-ಅರಿಷಿಣದ ಪುಡಿ ಸುರಿದು ಅರೆಬರೆ ಬೇಯಿಸಿ. ಅತ್ತಲಾಗೆ ಗಂಜಿಯೂ ಅನ್ನಲಾಗದ - ಇತ್ತಲಾಗೆ ಉಪ್ಪಿಟ್ಟಿನ ಲಕ್ಷಣ ದೂರದೂರದ ತನಕವೂ ಗೋಚರಿಸದ ಅದೆಂತದೋ ಒಂದನ್ನ "ಉಪ್ಮಾ" ಅಂತ ಅವರೆ ಹೆಸರಿಟ್ಟು ಊಟದ ಮೇಜಿನ ಮೇಲೆ ತಂದಿರಿಸಿ ತಿನ್ನಲು ಪೀಡಿಸುತ್ತಿದ್ದರು.



"ಮಾರಾಯ ನೀನು ತುಂಬಾ ಚೆನ್ನಾಗಿ ಮೇಘಾಲಯದ ಶೈಲಿಯ ಮೀನು-ಕೋಳಿ-ಬಾತುಕೋಳಿ-ಹಂದಿ ಪದಾರ್ಥ ಮಾಡ್ತೀಯ. ಅದೆ ಸಾಕಪ್ಪ! ಸೂಪರ್ ಆಗಿರುತ್ತೆ." ಅಂತ ಸೂಕ್ಷ್ಮವಾಗಿ ನಿನಗೆ ಬಾರದ ಅಡುಗೆ ಮಾಡಲು ಹೋಗಿ ನನ್ನ ಹೊಟ್ಟೆ ಕೆಡಿಸಬೇಡಿ ದಂಪತಿಗಳಿಬ್ಬರು ಅನ್ನೋ ಸೂಚನೆ ಇತ್ತಿದ್ದರೂ ಅವರ ಬಡ್ಡ ಮಂಡೆಗಳಿಗೆ ಈ ಸೂಕ್ಷ್ಮ ಹೊಕ್ಕಿರದೆ ಪರಿಸ್ಥಿತಿ ಇನಿತೂ ಕೂಡ ಸುಧಾರಿಸಿರಲಿಲ್ಲ. "ದಯವಿಟ್ಟುˌ ಮಧ್ಯಾಹ್ನದೂಟಕ್ಕೆ ಶುದ್ಧ ಸಸ್ಯಾಹಾರಿ ಖಾದ್ಯಗಳ ಜೊತೆ ಒಂದು ಮುಷ್ಠಿ ಅನ್ನ ಮತ್ತು ಲೋಟ ಮಜ್ಜಿಗೆಯ ವ್ಯವಸ್ಥೆ ಮಾಡಿ - ರಾತ್ರಿಗೆ ಒಂದೈದಾರು ಜೋಳದ್ದೋ ರಾಗಿಯದ್ದೋ ರೊಟ್ಟಿ ಮತ್ತೆ ಹುರಿದ ಮೀನುˌ ಹಂದಿ ಅಥವಾ ಬಾತುಕೋಳಿ ಯಾವುದಾದರೊಂದು ಮಾಂಸದ ಗಟ್ಟಿ ಗಸಿ ಮಾಡಿ ಒಂದ್ಲೋಟ ಮಜ್ಜಿಗೆ ಉಪ್ಪಿನಕಾಯಿ ಸಹಿತ ಬಡಿಸಿದ್ರೆ ಸಾಕ್ರಯ್ಯ ನಿಮ್ಮ ದಮ್ಮಯ್ಯ!" ಅಂತ ಆ ನಳಪಾಕ ನಿರತ ದಂಪತಿಗಳ ಕಾಲೊಂದನ್ನ ಗಟ್ಟಿಯಾಗಿ ಹಿಡಿದಿರಲಿಲ್ಲ ಇಷ್ಟೆ. ಜಾತಿಯ ಬಗ್ಗೆ ನಂಬಿಕೆ ಕಳೆದುಕೊಂಡು ಬಹುಕಾಲವಾಗಿದ್ದ ನನಗೆ ತಿನ್ನೋ ಆಹಾರದಲ್ಲಿ ಇದು ಸಸ್ಯಾಹಾರ ಉಚ್ಛ - ಅದು ಮಾಂಸಾಹಾರ ನೀಚ ಅನ್ನುವ ಕೇಮೆಯಿಲ್ಲದ ಬೇಧ-ಭಾವ ಮಾಡುವ ಬುದ್ಧಿಯೆ ಇರಲಿಲ್ಲ. "ನೋಡಪ್ಪˌ ನಳ ಮಹರಾಜˌ ನಾನು ಹಾವು-ಹಲ್ಲಿ-ದನ-ಎಮ್ಮೆ-ಮನುಷ್ಯ-ನಾಯಿ-ನರಿ-ಬೆಕ್ಕುಗಳನ್ನ ಬಿಟ್ಟು ಬಿಸಿಬಿಸಿಯಾಗಿ ಬೇಯಿಸಿ ಹಾಕಿದರೆ ಏನನ್ನಾದರೂ ತಿನ್ನಕ್ಕೆ ತಯ್ಯಾರ್. ನನ್ನೂರಿನಂತೆ ಇಲ್ಲೂ ಸೊಪ್ಪು-ಸದೆˌ ಬಸಳೆˌ ಸೌತೆˌ ಹರಿವೆˌ ಕಳಲೆˌ ತಿಮಿರೆˌ ನುಗ್ಗೆˌ ಹಾಗಲ ಎಲ್ಲಾ ಧಾರಾಳವಾಗಿ ಸಿಗುತ್ತಲ್ಲ ಮಧ್ಯಾಹ್ನ ಅದರಲ್ಲೊಂದರ ಸಾರು-ಒಂದು ಪಲ್ಯ ಮಾಡು ಸಾಕು. ಮೀನು ಮತ್ತೆ ಬಾತುಕೋಳಿ ನನ್ನ ಇಷ್ಟದ ಮಾಂಸಾಹಾರಗಳು. ದಿನ ಬದಲಿಸಿ ಅಕ್ಕಿ-ರಾಗಿ-ಜೋಳ-ಗೋಧಿ ಅಂತ ರಾತ್ರಿಯೂಟಕ್ಕೆ ನಿತ್ಯಕ್ಕೊಂದು ಧಾನ್ಯದ ರೊಟ್ಟಿ ಮಾಡು. ಮೇಲೋಗರಕ್ಕೆ ನಿನಗಿಷ್ಟವಾದ ನಾ ತಿನ್ನೋ ಯಾವುದಾದರೊಂದು ತಾಜಾ ಮಾಂಸ ಬೇಯಿಸು. ಇನ್ನುಳಿದಂತೆ ದಿನಾ ಊಟದ ಮೆನು ಕೇಳುವ ಯಾವ ಅವಶ್ಯಕತೆಯೂ ಇಲ್ಲ." ಅಂತ ತಾಕೀತು ಮಾಡಿದ್ದೆ.




ತರಬೇತಿ ಮುಗಿಸಿ ಹೊಸ ಜವಬ್ದಾರಿ ವಹಿಸಿಕೊಂಡು ಅಧಿಕಾರಿಗಳ ಸಾಲಿನಲ್ಲಿ ನಾನೂ ಒಬ್ಬನಾಗಿ ಹೋಗಲುˌ ಒಬ್ಬಂಟಿಯಾಗಿ ಮೇಘಾಲಯದ ದಿಕ್ಕಿನತ್ತ ಹೊರಟ ಹೊಸತರಲ್ಲಿ 'ಮುಂದೆ ಹೊಸ ಜಾಗದಲ್ಲಿ ಹೊಟ್ಟೆಪಾಡು ಹೇಗೋ ಏನೋ! ಅಲ್ಲಿ ತಲುಪಿಯಾದ ಮೇಲೆ ಮನೆ ಹೊಂದಿಸಿಕೊಂಡಾದ ಮೇಲೆ ಅಡುಗೆ ನಾನೆ ಮಾಡಿಕೊಳ್ಳೋಕೆ ಸಮಯವಿಲ್ಲದಿದ್ದರೆˌ ಮನೆ ಗುಡಿಸಿ ಒರೆಸಲು ಹಾಗೂ ಅಡುಗೆಯನ್ನ ಮಾಡಲು ಯಾರನ್ನಾದರೂ ತಿಂಗಳ ಸಂಬಳದ ಮೇಲೆ ನೇಮಿಸಿಕೊಳ್ಳೋಣ' ಅಂತ ಮನಸೊಳಗೆ ಯೋಜಿಸಿಕೊಂಡಿದ್ದೆ. ಅರಿವು ಮೂಡುವ ಪ್ರಾಯದುದ್ದ ವಿದ್ಯಾರ್ಥಿ ನಿಲಯಗಳ ಖಾಯಂ ಅತಿಥಿಯಾಗಿದ್ದ ಕಾರಣ ಅಡುಗೆ ಮಾಡಿಕೊಳ್ಳುವ ಸ್ವಯಂಪಾಕದ ಪ್ರಾವೀಣ್ಯತೆ ತಕ್ಕಮಟ್ಟಿಗೆ ಅಭ್ಯಾಸವಾಗಿದೆ. ಹೀಗಾಗಿ ಉಪವಾಸವಂತೂ ಬೀಳಲಾರೆ! ಅಡುಗೆ ಸರಂಜಾಮು ಸಲಕರಣೆಗಳನ್ನ ಹಾಗೂ ಅಗತ್ಯ ದಿನಸಿಯನ್ನ ಮೊದಲಿಗೆ ಹೊಂದಿಸಿಕೊಳ್ಳೋದರಲ್ಲಷ್ಟೆ ಹಾಳು ಹೊಟ್ಟೆಯ ಜವಬ್ದಾರಿ ಮುಗಿದು ಹೋಗುತ್ತದೆ. ಚಹಾ-ಕಾಫಿ-ಶರಬತ್ತುಗಳ ಹೊರತು ಅದು ಅದೆಷ್ಟೆ ವೈಭವಿಕರಿಸಲಾಗಿರುವ "ಶುದ್ಧ ಸಸ್ಯಾಹಾರ"ವಾಗಿದ್ದರೂ - ರುಚಿ'ಕಟ್ಟಾದ' ಮಾಂಸಾಹಾರ ಖಾದ್ಯಗಳ ಲೋಭ ಒಡ್ಡಿದರೂ ಹೊರಗಡೆಯ ಆಹಾರಕ್ಕೆ ಬಾಯಿ ಜೊಲ್ಲು ಸುರಿಸದೆ ಒಲ್ಲೆ ಅನ್ನುವುದು ನನ್ನ ಪುರ್ವಜನ್ಮದ ಸುಕೃತ. ಅದರಲ್ಲೂ ಈಶಾನ್ಯದ ರಾಜ್ಯˌ ಅಲ್ಲಿನವರು ಖಾದ್ಯಗಳ ತಯಾರಿಯಲ್ಲಿ ಅದಿನ್ನೆಂತಾ ಎಣ್ಣೆಗಳನ್ನ ಬಳಸುತ್ತಾರೋ ಅನ್ನೋ ಆತಂಕ ಬೇರೆ ಇತ್ತು.




ಮನಸಿನಾಳದ ಪೂರ್ವಗ್ರಹದ ಕಾರಣ ಇಂತಹ ಅನುಮಾನಗಳು ಎದೆಯೊಳಗೆ ಹೊಗೆಯಾಡುತ್ತಿದ್ದುದು ನಿಜವಾದರೂˌ ನನ್ನ ಅನುಮಾನ ಪೂರ್ತಿ ಸುಳ್ಳಲ್ಲ ಅನ್ನುವುದನ್ನ ಒಂದೆರಡು ಬಾರಿ ಈ "ಹೈದ್ರಾಬಾದ್ ರಿಟರ್ನ್ಡ್ ಶೆಫ್" ಲಾಂಪಾರ್ಗ್ ನಿರೂಪಿಸಿಬಿಟ್ಟಿದ್ದ. ಹೇಳಿ-ಕೇಳಿ ತೆಲುಗರ ಹೃದಯನಗರಿ ಹೈದರಾಬಾದಿನಲ್ಲಿ ದಕ್ಷಿಣದ ಅಡುಗೆ ಕಲಿತ ಕಲಿ ಬೇರೆ ಈತ! "ಗುಂಟೂರು ಖಾರಂ" ಮೆಲ್ಲುವ ತಿಗಳರ ಬಾಯಿರುಚಿಯಂತೆ ಸಮಸ್ತ ದಕ್ಷಿಣ ಭಾರತೀಯರೂ ಯಮಖಾರ ಪ್ರಿಯರು ಅನ್ನುವ ಭ್ರಮೆ ಅವನಿಗಿತ್ತು. ಪರಿಣಾಮವಾಗಿˌ ತನ್ನ ಪಾಕ ವೈವಿಧ್ಯಕ್ಕೆ ಧಾರಾಳವಾಗಿ ಖಾರ ಸುರಿದು ಆಹಾರದ ರುಚಿಯ ಜೊತೆಜೊತೆಗೆ ನನ್ನ ಹೊಟ್ಟೆಯನ್ನೂ ಕೆಡಿಸಿ ಕೆರ ಹಿಡಿಸಿ ಬಿಡುತ್ತಿದ್ದ. ಎಲ್ಲಾ ದಕ್ಷಿಣ ಭಾರತೀಯರಿಗೂ ಖಾರ ಆಪ್ತವಲ್ಲ ಕಣಪ್ಪ ಭೀಮಸೇನˌ ಈಗ ಹಾಕುತ್ತಿರೋ ಖಾರದ ಪ್ರಮಾಣದಲ್ಲಿ ಕಾಲುಭಾಗಕ್ಕಿಂತ ಕಡಿಮೆ ಹಾಕು ಸಾಕು ಅಂದರೆ ನನ್ನನ್ನ ನಂಬಲೊಲ್ಲ! ಕಡೆಗೂ ಅವನಿಗಿರುವ ಈ ದುರಭ್ಯಾಸ ಬಿಡಿಸಲು ನನ್ನ ಹೆಣ ಬಿದ್ದು ಹೋಯಿತು.




ಇನ್ನೊಂದು ಪ್ರಕರಣದಲ್ಲಿˌ ಇವನು ಮಾಡುತ್ತಿದ್ದ ದೋಷದ ಪ್ರಮುಖ ದೋಷವೆಂದರೆ ಒಂಥರಾ ಮುಗ್ಗಲು ಬಂದ ಒಂಥರಾ ಅಡ್ಡ ವಾಸನೆ ಅದರಿಂದ ಹೊಮ್ಮುತ್ತಿದ್ದುದು. ಅದ್ಯಾಕೆ ಅಂತ ಒಂದು ಸಲ ಪತ್ತೆದಾರಿಕೆ ಮಾಡಿ ಕಾರಣ ಕಂಡು ಹಿಡಿದು ಗರ ಬಡಿದವನಂತಾದೆ. ದಕ್ಷಿಣದ ಜಾತಿ ಪದ್ಧತಿ ಹಾಗೂ ಅದರ ಹಿನ್ನೆಲೆಯ ಆಹಾರ ಸಂಸ್ಕೃತಿಯ ಬಗ್ಗೆ ಪ್ರಾಥಮಿಕ ಕಲ್ಪನೆಯೂ ಇಲ್ಲದ ಅವˌ ಬಂದ ಹೊಸತರಲ್ಲೊಂದು ದಿನ ಸಹಜವಾಗಿ ಅಲ್ಲಿನ ಪ್ರಮುಖ ಖಾದ್ಯ ಹಂದಿ ಸಾರು 'ದೋಹ್ ನ್ಹಿಯೋಂಗ್' ಮಾಡಿ ರಾತ್ರಿಯೂಟಕ್ಕೆ ಬಡಿಸಿದ. ವಿಭಿನ್ನ ರುಚಿಯ ಅದು ಇಷ್ಟವಾಗಿ 'ಚೆನ್ನಾಗಿದೆಯಪ್ಪ' ಅಂತ ಪ್ರಶಂಸಿದ್ದೆ. ಅದನ್ನೆ ತಪ್ಪಾಗಿ ಗ್ರಹಿಸಿದ್ದ ಅವನುˌ ಅಲ್ಲಿನ ಚಳಿಯ ವಾತಾವರಣಕ್ಕೆ ಸರಿಯಾಗಿ ಹುದುಗು ಬಾರದಿದ್ದ ದೋಸೆ ಹಿಟ್ಟಿನ ಸಂಪಣವನ್ನ ಕಾವಲಿಗೆ ಎರೆಯುವ ಮುನ್ನˌ ಅಮೇರಿಕಾದ ಪ್ಯಾನ್ ಕೇಕಿಗೆ ಮಾಡುವಂತೆ ಎಣ್ಣೆಯ ಬದಲು ಹಂದಿ ಮಾಂಸ ಹದ ಹಾಕುವಾಗ ಕ್ಯೂಬುಗಳಾಗಿ ಕತ್ತರಿಸಿಟ್ಟಿರುತ್ತಿದ್ದ ಹಂದಿಯ ಕೊಬ್ಬನ್ನ ಉಜ್ಜುಜ್ಜಿ ದೋಸೆ ಮಾಡುತ್ತಿದ್ದˌ ಸಾಲದ್ದಕ್ಕೆ ದಾವಣಗೆರೆ ಬೆಣ್ಣೆ ದೋಸೆಯ ಮೇಲೆ ಬೆಣ್ಣೆಮುದ್ದೆಯ ಹೆಸರಿನಲ್ಲಿ ಡಾಲ್ಡಾ ಸುರಿಯುವಂತೆ ಅದೆ ಹಂದಿ ಕೊಬ್ಬನ್ನ ಚಿಕ್ಕದಾಗಿ ಹೆಚ್ಚಿಕೊಂಡು ಟಾಪಿಂಗ್ ಮಾಡಿ ದೋಸೆ ಬೇಯಿಸುತ್ತಿದ್ದ! ಕರಗಿ ದೋಸೆಯೊಳಗೆ ಅಂತರ್ಗತವಾಗುತ್ತಿದ್ದ ಅದರ ದುರ್ವಾಸನೆಗೆ ಹೊಟ್ಟೆ ತೊಳೆಸುತ್ತಿತ್ತು. 'ಅಯ್ಯಾ ಪುಣ್ಯಾತ್ಮ ತುಸು ದುಬಾರಿಯಾದರೂ ಅಡ್ಡಿಯಿಲ್ಲ ಕೃಷ್ಣದಾಸನಿಂದ ಬಜಾರಿನಿಂದ ತೆಂಗಿನೆಣ್ಣೆ ತರಿಸಿಯೆ ಅಡುಗೆ ಮಾಡಿ ಬಡಿಸ ತಕ್ಕದ್ದು ಅಂತ ತಾಕೀತು ಮಾಡಿ ಪಾರಾದೆ. ಅಂದಿನಿಂದ ಅವನ ದೋಷಾ ಕೊಂಚಮಟ್ಟಿಗೆ ದೋಷಮುಕ್ತವಾಯಿತು. ತನ್ನ ಕೈ ರುಚಿಯ ಹಂದಿ ಗಸಿಯನ್ನ ಇಷ್ಟಪಟ್ಟು ಹೊಗಳಿದ್ದ ಈ "ಮದ್ರಾಸಿ ಶಾಬ್" ಅದೆ ಹಂದಿಯ ಕೊಬ್ಬನ್ನ ರುಚಿ ಹೆಚ್ಚಿಸಲು ದೋಸೆಗೆ ಸವರಿದ್ದ ನವ ಪಾಕಾನ್ವೇಷಣೆಯಂತಹ ಕ್ಷುಲ್ಲಕ ಕಾರಣಕ್ಕೆ ಮೈಮೇಲೆ ದೇವರು ಬಂದಂತೆ ಎಗರಿದ್ದು ಅವನನ್ನ ಗೊಂದಲದ ಮಡುವಿಗೆ ದೂಡಿತ್ತು. ಅವನ ತರ್ಕದ ಪ್ರಕಾರ "ಏಕಂ ಸತ್ ವಿಪ್ರಾ ಬಹುಧಾ ವದಂತಿ" ಅನ್ನುವಂತೆ ಹಂದಿ ತಿನ್ನೋದೆ ಉಂಟಂತೆˌ ಅದರ ಸಾರಾದರೇನು? ಛರ್ಬಿಯಾದರೇನು? ಅನ್ನುವ ವಾದ ಸರಣಿ ಇದ್ದಂತಿತ್ತು.



ಮತ್ತೊಂದು ರಾತ್ರಿˌ ಹಸಿದು ಊಟದ ಮೇಜಿನೆದುರು ಕೂತವನ ಮುಂದೆ ಹಬೆಯಾಡುವ ಮಾಂಸದ ಸೂಪು ಹಾಗೂ ಜೋಳದ ರೊಟ್ಟಿಯ ಜೊತೆಗೆ ನಂಚಿಕೊಳ್ಳಲು ಅದೆಂತದ್ದೋ ದೊಡ್ಡ ದೊಡ್ಡ ಮಾಂಸದ ತುಂಡುಗಳು ಸಾರಿನಲ್ಲಿ ಮುಳುಗಿದ್ದ ಬೌಲನ್ನು ತಂದಿಟ್ಟ. ಸೂಪಿನ ಬೌಲಿನಲ್ಲಿದ್ದ ಮೂಳೆಯ ಗಾತ್ರದಿಂದ ಅನುಮಾನಿತನಾಗಿˌ 'ಏನಯ್ಯ ಇದು?' ಅಂದರೆ ಸಂಪೂರ್ಣ ಹಲ್ಕಿರಿದುಕೊಂಡು "ಮಿಥುನ್ ಮುಖ್ಬಾಂಗ್ ಶಾಬ್" ಅಂತನ್ನುತ್ತಾ ಶಭಾಸ್ಗಿರಿ ನಿರೀಕ್ಷಿಸುತ್ತಾ ನಿಂತ. ಬದುಕಿದೆಯ ಬಡಜೀವವೆ ಅಂತ ತಕ್ಷಣ ಬಾಯಿಗಿಡುವ ಮುನ್ನವೆ ಬಣ್ಣ ಬಯಲಾದದ್ದಕ್ಕೆ ಖುಷಿ ಪಟ್ಟು "ಲೇಯ್ ನಾನು ದನ ತಿನ್ನಲ್ಲ ಅಂತ ಹೇಳಿರಲಿಲ್ವ? ನಿನ್ ಸುಳಿ ಸುಡ!" ಅಂತ ಅಯಾಚಿತವಾಗಿ ಕನ್ನಡದಲ್ಲೆ ಉಗಿದು ಉಪ್ಪಿನಕಾಯಿ ಹಾಕಿದಾಗ ಅರ್ಥವಾಗದೆ ಪಿಳಿಪಿಳಿ ಕಣ್ಣು ಬಿಟ್ಟ. ಅರ್ಥ ಮಾಡಿಸುವಂತೆ ಹೇಳಿದಾಗˌ ನಾನು ದನ-ಎಮ್ಮೆಯ ಬೀಫ್ ತಿನ್ನಲ್ಲ ಎಂದಿದ್ದೆನೆ ಹೊರತು ಮಿಥುನ್ ತಿನ್ನಲಾರೆ ಅಂದಿರಲಿಲ್ಲವಲ್ಲ ಅಂತ ನನ್ನ ವಾಕ್ ದೋಷವನ್ನ ನನಗೆ ಪುನಃ ನೆನಪಿಸಿ ತಿವಿದ. ಹೌದಲ್ಲ! ನಾನು ಬೀಫ್ ತಿನ್ನಲ್ಲ ಮಡಿ ಅಂದಿದ್ದೆನೆ ಹೊರತು ಮಿಥುನ್ ಮಾಂಸ ತಿನ್ನಲ್ಲ ಅಂದಿರಲಿಲ್ಲವಲ್ಲ! ಈ ಭಾಷಾ ಪಂಡಿತನ ಪ್ರಕಾರ ನಮ್ಮೂರ ದನದ ಬಾದರಾಯಣ ಕಜಿ಼ನ್ ದೂರದ ಮೇಘಾಲಯದ ಮಿಥುನ್ ಎನ್ನುವ ದಾಯಾದಿಯ ಮಾಂಸವಾಗಲಿ ಕೊಬ್ಬಾಗಲಿ "ಬೀಫ್" ಶ್ರೇಣಿಯಲ್ಲಿ ಬರುತ್ತಿರಲಿಲ್ಲ! ಕಡೆಗೂ ಆ ರಾತ್ರಿ ನನ್ನ ರೊಟ್ಟಿಯೂಟ ಲಿಂಬೆಹಣ್ಣಿನ ಉಪ್ಪಿನಕಾಯಿ ಜೊತೆಗೆ ಸಂಪನ್ನಗೊಂಡಿತು. ಹೀಗೆ ಅವನನ್ನಷ್ಟಷ್ಟೆ ತಿದ್ದುತ್ತಾ ನನ್ನ ದಾರಿಗವರಿಬ್ಬರನ್ನೂ ತೆಗೆದುಕೊಳ್ಳುತ್ತಾ ನನ್ನ ಸನ್ಯಾಸಿಯ ಸಂಸಾರವನ್ನ ಮೇಘಾಲಯದ ರಾಜಧಾನಿಯಲ್ಲಿ ಆರಂಭಿಸಿದ್ದೆ.





ಈ "ಹೈದ್ರಾಬಾದ್ ರಿಟರ್ನ್ಡ್ ಮಾಸ್ಟರ್ ಶೆಫ್" ಲಾಂಪಾರ್ಗ್ ಮಹಾಶಯನಿಗೆ ನನ್ನೊಳಗೆ ಅಂತರ್ಗತವಾಗಿದ್ದ ಸಹಜ ಬಾಣಸಿಗನ ಚಾಕ್ಯತೆಯನ್ನ ಕೊಂಚ ಮಟ್ಟಿಗಾದರೂ ಧಾರೆ ಎರೆದು ಮಾಸ್ಟರ್ ಅಲ್ಲದಿದ್ದರೂ "ಮಿಸ್ಟರ್ ಶೆಫ್"ನನ್ನಾಗಿಯಾದರೂ ರೂಪಾಂತರಿಸಲು ಪಣ ತೊಡಲು ಇಂತಹ ಕೆಲವೊಂದು ಅಡುಗೆಮನೆಯ ಅಘಾತಕಾರಿ ಘಟನೆಗಳು ಕಾರಣವಾದವು. ನಾನಂತೂ ಇಲ್ಲಿಗೆ ನಾಲ್ಕಾರು ದಿನಗಳ ಅತಿಥಿ. ಆದರೆ ಲಾಂಪಾರ್ಗ್ ಕುಟುಂಬ ಈ ಬಂಗಲೆಯ ಪಾಲಿಗೆ ಖಾಯಂ ಅತಿಥೇಯರು. ಹೀಗಾಗಿ ಮುಂದೊಮ್ಮೆ ಬರಬಹುದಾದ ನಿವಾಸಿ ಅಧಿಕಾರಿಗಳ ಹೊಟ್ಟೆಯ ಯೋಗ-ಕ್ಷೇಮದ ಹಿತದೃಷ್ಟಿಯಿಂದ ಲೋಕೋದ್ಧಾರ ನಿರತನಾಗಿ ಲಾಂಪಾರ್ಗ್ ಪಾಕ ವೈವಿಧ್ಯಗಳಿಂದ ಅವರ ಸಂಭಾವ್ಯ ತಿಥಿಯಾಗುವುದನ್ನ ತಪ್ಪಿಸುವ ಪಣ ತೊಟ್ಟುˌ ಅವನನ್ನ ಬಿಡುವಿನ ಸಮಯ ಸಿಕ್ಕಾಗಲೆಲ್ಲ ಅವನದ್ದೆ ಅಡುಗೆ ಮನೆ ಸಾಮ್ರಾಜ್ಯಕ್ಕೆ ಲಗ್ಗೆಯಿಟ್ಟು "ಸರಿಯಾದ" ದಕ್ಷಿಣ ಭಾರತೀಯ ಖಾದ್ಯಗಳ ಬಗೆಗಳ ಕ್ಲಾಸ್ ತೆಗೆದುಕೊಳ್ಳತೊಡಗಿದೆ.



ಉಪ್ಪಿಟಿನ ರವೆಯನ್ನ ಹದವಾಗಿ ಘಮ್ಮೆನ್ನುವಂತೆ ಹುರಿಯುವ ಪೂರ್ವ ಪ್ರಾಥಮಿಕ ಪಾಠದಿಂದ ಆರಂಭವಾದ ಲಾಂಪಾರ್ಗ್ - ಮಾರ್ಟೀನಾ ದಂಪತಿಗಳ ಪಾಕಶಾಸ್ತ್ರ ಪ್ರಾವಿಣ್ಯತೆಯ ಅಂಗನವಾಡಿ ಕಲಿಕೆˌ ಮುಂದೆ ಚಿತ್ರಾನ್ನಕ್ಕೆ ಸೂಕ್ತ ಬಗೆಯಲ್ಲಿ ಒಗ್ಗರಿಸಿ ಕೊಂಡು ಅನ್ನ ಬೆರೆಸುವುದುˌ ಮೆಂತೆಗಂಜಿಯನ್ನ ನಾಲಗೆಗೆ ಒಪ್ಪುವಂತೆ ತಯಾರಿಸುವುದುˌ ಮಲೆನಾಡು ಕಡುಬು ಹಾಗೂ ಕಾಯಿಚಟ್ನಿ ತಯಾರಿಸುವುದು. ಉದ್ದಿನ ದೋಸೆ - ಇಡ್ಲಿಯ ಹಿಟ್ಟಿಗೆ ಹಾಕಬೇಕಾದ ಧಾನ್ಯಗಳ ಸೂಕ್ತ ಪರಿಮಾಣ - ಪರಿಮಳ ಹೆಚ್ಚಿಸಲು ಅದಕ್ಕೆ ಹಾಕಬೇಕಾದ ಮೆಂತೆ - ಗರಿಗಟ್ಟಲು ಹಾಕಲೆಬೇಕಾದ ಹಳೆಯನ್ನ - ಕಡೆಯುವಾಗಲೆ ರುಚಿಗೆ ತಕ್ಕಷ್ಟು ಉಪ್ಪನ್ನ ಹಾಕಿ ಅಡುಗೆ ಮನೆಯ ಬೆಚ್ಚನೆ ಸ್ಥಳದಲ್ಲಿ ದಪ್ಪ ಗೋಣಿಚೀಲದಲ್ಲಿ ಸಂಪಣದ ಪಾತ್ರೆ ಸುತ್ತಿಟ್ಟು ಎಂಥಾ ಚಳಿಯಲ್ಲೂ ಹುದುಗು ಬರಿಸುವ ತಂತ್ರˌ ಶಂಕರಪೋಳಿˌ ಕೋಡುಬಳೆˌ ಗೋಧಿ ಹಿಟ್ಟಿನ ಊಬ್ಬುಪೂರಿˌ ಸತ್ಯನಾರಾಯಣ ಕಥೆಯ ಸಪಾತಭಕ್ಷ್ಯˌ ಪುಳಿಯೊಗರೆˌ ಬೀಟ್ರೂಟಿನ ಹಲ್ವಾˌ ಕಾಶಿ ಹಲ್ವಾˌ ಕಡಲೆಬೇಳೆ ಪಾಯಸˌ ಹಯಗ್ರೀವ ಮಡ್ಡಿˌ ಕೊಬ್ರಿ ಮಿಠಾಯಿˌ ರವೆ ಜಾಮೂನುˌˌ ಮೊಟ್ಟೆ ದೋಸೆಗೆ ಈರುಳ್ಳಿ-ಟೊಮ್ಯಾಟೋ-ಹಸಿಮೆಣಸು-ಅರಿಶಿಣ-ಉಪ್ಪು ಬೆರೆಸಿ ಕಾದ ಕಾವಲಿಗೆ ಸುರಿಯುವ ಮೊದಲು ಚೆನ್ನಾಗಿ ಚಿಕ್ಕದಾಗಿ ಹೆಚ್ಚಿಕೊಂಡ ಒಂದು ಬೆಳ್ಳುಳ್ಳಿಯನ್ನ ಕಾವಲಿಯ ಮೇಲೆ ಹರಡಿ ಘಮ ಬರಸಿ ಅದರ ಮೇಲೆ ಮೊಟ್ಟೆಯ ಲೋಳೆ ಮಿಶ್ರಣ ಸುರಿದು ಆಮ್ಲೇಟಿನ ರುಚಿ ಹೆಚ್ಚಿಸುವ ರಹಸ್ಯˌ ತುಳುನಾಡು ಶೈಲಿಯ ರವೆಯಲ್ಲಿ ಹೊರಳಿಸಿ ಮೀನು ಹುರಿಯುವ ಟೆಕ್ನಿಕ್ˌ ತುಳುನಾಡು ಶೈಲಿಯ ಹೆಸರು ಒಗ್ಗರಿಸಿದ್ದು - ಬನ್ಸು - ಖಾರ ಬಜಿಲ್ - ಕಡಲೆ ಉಪ್ಕರಿ - ನೀರುದೋಸೆ - ಶಿರ - ಅಕ್ಕಿರೊಟ್ಟಿ - ಬೇಳೆತೊವ್ವೆ - ಟೊಮ್ಯಾಟೋ ಸಾರು - ಟೊಮ್ಯಾಟೋ ಹಾಕದ ದೇವಸ್ಥಾನದ ತಿಳಿಸಾರು - ಸುವರ್ಣಗೆಡ್ಡೆ ಪದಾರ್ಥ - ನುಗ್ಗೆ ಆಲುಗೆಡ್ಡೆ ಸಾರು - ಹುಳಿ ಖಾರ ಎರಡೂ ಹೆಚ್ಚು ಹಾಕಿದ ಬಾಯಲ್ಲಿ ನೀರೂರುವಂತಹ ಮೀನುಸಾರು - ಕೋಳಿ ಗಸಿ - ಕುರಿ ಸುಕ್ಕ - ಪುಂಡಿ ಕಡಲೆಗಸಿ ಮಾಡುವ ವಿಧಾನˌ ನಮ್ಮ ಜೀಗುಜ್ಜೆಯನ್ನ ಹೋಲುವ ಅವರ ನೀರುಗುಜ್ಜೆಯ ರವಾಫ್ರೈ - ಅಲ್ಲಿಯೂ ಲಭ್ಯವಿದ್ದ ಎಳೆಗುಜ್ಜೆಯ ಕಡಲೆ ಸುಕ್ಕಾˌˌ ಕೊಡವರ ಶೈಲಿಯ ಪಂದಿಕರಿ -ಕರಂಬಟ್ಟು - ಪಾತ್ತಿರಿˌ ಮಲಯಾಳಿಗಳ ಶೈಲಿಯ ಅಡೈ - ಪಾಲ್ ಪಾಯಸಂ - ಮೀನ್ ವೆರ್ತದು - ಪಣಂಪೂರಿ - ಕಾಯಿಚಿಪ್ಪಿನಲ್ಲಿ ಪುಟ್ಟು ಮುಂತಾದ ನನಗರಿವಿದ್ದ ಒಂದಷ್ಟು ಅಡುಗೆಯ ವಿದ್ಯೆಯನ್ನ ನಿಷ್ಕಾಮಕರ್ಮದಿಂದ ಧಾರೆ ಎರೆದು ತಕ್ಕ ಮಟ್ಟಿಗೆ ಆ ನಳ"ಪಾತಕ" ದಂಪತಿಗಳನ್ನ ಆದಿಮಾನವರಿಂದ ನಾಗರೀಕರನ್ನಾಗಿಸಿದೆ.



ಒಂದೊಂದೆ ಅಡುಗೆಗಳನ್ನ ಮಾಡಿದಾಗಲೂˌ ಅವುಗಳ ರುಚಿಗೆ ಮಾರು ಹೋಗಿ ಬೆರಗಾದ ಮಾರ್ಟೀನ. ಮುಂದೆ ಅವೆಲ್ಲಾ ಮರೆತು ಹೋಗದಂತೆ ತಯಾರಿಕೆಯ ವಿಧಾನಗಳನ್ನೆಲ್ಲ ಸಾವಧಾನದಿಂದ ಕೇಳಿ ತಿಳಿದುಕೊಂಡು ಮೋಟು ನೋಟು ಪುಸ್ತಕವೊಂದರಲ್ಲಿ ಅವನ್ನೆಲ್ಲಾ ವಿವರವಾಗಿ ಬರೆದುಕೊಂಡಳು. ನಾನೂ ಅವಳ ಎಲ್ಲಾ ವಿದ್ಯಾರ್ಥಿ ಸಹಜ ಕುತೂಹಲಗಳಿಗೆ ತಾಳ್ಮೆಯಿಂದಲೆ ಉತ್ತರಿಸುತ್ತಾ ಚಹಾ ಕಾಯಿಸುವ "ಸರಿಯಾದ" ವಿಧಾನವನ್ನೂ ಜೊತೆಜೊತೆಯಲ್ಲೆ ಬೋಧಿಸಿ ಇನ್ನೂ "ಅಡುಗೆಯಲ್ಲಿ ಆದಿಮಾನವ"ನಾಗಿದ್ದ ಒಡ್ಡ ಲಾಂಪಾರ್ಗನನ್ನು ನನ್ನ ಕೈಲಾದಷ್ಟು ತಿದ್ದಿದೆ. ಜೊತೆಗೆ ಗುರು ದಕ್ಷಿಣೆಯಾಗಿ ಖಾಸಿ - ಗ್ಹಾರೋಗಳ ವಿಶೇಷ ಖಾದ್ಯಗಳನ್ನ ಅವರಿಬ್ಬರಿಂದಲೂ ಆಗೀಗ ಕೇಳಿ ಕಲಿತೆ. ಈ ಪರಸ್ಪರ ಕಲಿಕೆಯ ಹಂತದಲ್ಲಿ ಅವರ ನಾಲ್ಕು ವರ್ಷದ ಕೂಸು ಕ್ರಿಸ್ಟೀನಾ ಹಾಗೂ ಅವಳ ಆರು ವರ್ಷದ ಅಣ್ಣ ಐಸಾಕ್ ನನ್ನ ಬಿಟ್ಟಿರಲಾರದಷ್ಟು ಅಂಟಿಕೊಳ್ಳುವಂತಹ ಗೆಳೆಯರಾದರು. ದಕ್ಷಿಣದ ಸಿಹಿ ತಿಂಡಿಗಳನ್ನ ತಯಾರು ಮಾಡಿದಾಗ ಮಕ್ಕಳು ಖುಷಿ ಪಟ್ಟು ತಿಂದು "ಶಾಹೆಬ್ ಅಂಕಲ್" ಅನ್ನಲು ತೊಡಗಿದವು. ಅಂಕಲ್ ಅಲ್ಲ "ಶಾಹೆಬ್ ಮಾಮ" ಅಂತ ತಿದ್ದಲು ಸಾಕಷ್ಟು ಪ್ರಯಾಸವಾದರೂˌ ಆಗಾಗ ಅವುಗಳ ಫೇವರೆಟ್ ಶಿರಾ - ಬಾಸುಂದಿ - ಬನ್ಸ್ - ಜಾಮೂನು - ಕ್ಯಾರೆಟ್ ಹಲ್ವಾ - ಸಪಾತ ಭಕ್ಷ್ಯ ತಿನ್ನುತ್ತಾ ತಿನ್ನುತ್ತಾ "ಹೊಟ್ಟೆಯ ದಾರಿಯಾಗಿ ಮನಸನು ಮುಟ್ಟಿ" ನನ್ನ ದಾರಿಗೆ ಅವುಗಳನ್ನ ಎಳೆದುಕೊಳ್ಳಲು ಹೆಚ್ಟು ಶ್ರಮವಾಗಲಿಲ್ಲ.


ಅಡುಗೆ ಮಾಡುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಬಹುಶಃ ಅಪ್ಪನಿಂದ ವಂಶಪಾರಂಪರ್ಯವಾಗಿ ಬಂದ ಏಕೈಕ ವಿದ್ಯೆ ಅಡುಗೆ ತಯಾರಿ. ಬೇರೆ ಇನ್ನೇನೆ ಆಕ್ಷೇಪಗಳಿದ್ದರೂ ಸಹ ನಮ್ಮಪ್ಪ ಒಳ್ಳೆಯ ಬಾಣಸಿಗನಾಗಿದ್ದ. ಇನ್ನು ವಿದ್ಯಾರ್ಥಿ ನಿಲಯಗಳ ಸಾಮೂಹಿಕ ಅಡುಗೆ ಮನೆಗಳಲ್ಲೂ ಅಷ್ಟಿಷ್ಟು ಕಲಿತದ್ದು ಕರಗತವಾಗಿ ಹೋಗಿದೆ. ಅದರಲ್ಲಿ ಅರೆಬರೆ ವಿದ್ಯೆಗಳನ್ನಾದರೂ ಲಾಂಪಾರ್ಗ್ ಧಾರೆ ಎರಿಸಿಕೊಂಡು ಧನ್ಯನಾದ. ಇನ್ನುಮೇಲವನು ಹೈದ್ರಾಬಾದ್ ರಿಟರ್ನ್ಡ್ ಶೆಫ್ ಅನ್ನೋ ಬೋರ್ಡು ಹಾಕಿಕೊಳ್ಳುವ ಅಗತ್ಯವೇನೂ ಉಳಿದಿರಲಿಲ್ಲ.


ಅವತ್ತು ಬೆಳಗ್ಯೆ ಲಾಂಪಾರ್ಗನ ಕೈ ಚಳಕದ ಬಾತುಮೊಟ್ಟೆಯ ಡಬಲ್ ಆಮ್ಲೇಟ್ - ಮೊಲದ ಮಾಂಸದ ಸೂಪು - ಖಡಕ್ ಚಹಾ ಕುಡಿದು ಕಛೇರಿಗೆ ಅವಸರವಸರವಾಗಿ ಬರುವಾಗಲೆ ಗಡಿಯಾರದ ಚಿಕ್ಕಮುಳ್ಳು ಒಂಬತ್ತನ್ನ ದಾಟಿ ಚೂರೆ ಚೂರು ಮುಂದು ಸರಿದಿದ್ದರೆˌ ದೊಡ್ಡದ್ದು ಇನ್ನೂ ಒಂಬತ್ತರ ಮೇಲೆಯೆ ನಿಂತು ಆಕಳಿಸುತ್ತಿತ್ತು. ಕ್ಯಾಬಿನೆಟ್ ಮೀಟಿಂಗ್ ಇರುವ ಕಾರಣ ಸಿಬ್ಬಂದಿಗಳು ಬಹುಬೇಗ ಬಂದಿರುತ್ತಾರೆ ಅನ್ನುವ ನಿರೀಕ್ಷೆಯಲ್ಲಿ ಊರಿಂದ ಮೊದಲು ನಾನು ಬಂದಿದ್ದರೆ - ಕಸ ಹೊಡೆಯುವ ಬೆಂಜ಼ಮಿನ್ ಹೊರತು ಮತ್ತೊಂದು ಹುಳ ಅಲ್ಲಿ ಕಾಣ ಸಿಗಲಿಲ್ಲ. ನನಗೋ ಇದು ಮೊತ್ತ ಮೊದಲ ಸಂಪುಟ ಸಭೆಯ ಅನುಭವ. ಉಳಿದವರಿಗೆಲ್ಲ ಅದೆಷ್ಟನೆಯದೋ! ಅನ್ನುವ ಜ್ಞಾನೋದಯವಾಗಿ ನನ್ನ ಛೇಂಬರ್ರಿನ ಆಸನದಲ್ಲಿ ಕುಕ್ಕರಿಸಿ ಸುಧಾರಿಸಿಕೊಂಡೆ. ಗುರುತು ಹಾಕಿಕೊಟ್ಟಿದ್ದ ಕಡತಗಳನ್ನೆಲ್ಲ ಅದೆಲ್ಲೆಂಲಿಂದಾನೋ ಹುಡುಕಿ ತಯ್ಯಾರಾಗಿಟ್ಟುಕೊಂಡಿದ್ದ ಕಾರಣ ಸ್ವಲ್ಪ ನಿರಾಳನೂ ಆಗಿದ್ದೆ. ಅದನ್ನ ಹೊರತು ಪಡಿಸಿ ಮತ್ತಿನ್ಯಾವ ತಾಕೀತನ್ನೂ ನನ್ನ ಮೇಲಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಇತ್ತಲೆ ನಾಗ ಮಾಡಿರದಿದ್ದರಿಂದ ಮುಂದೇನು ಮಾಡಬೇಕೆಂಬ ಸ್ಪಷ್ಟತೆ ನನಗಿರಲಿಲ್ಲ. ಸಚಿವಾಲಯದ ಸಂಪುಟ ಸಭೆ ನಡೆಯುವ ಮೀಟಿಂಗ್ ಹಾಲಿಗೆ ಹನ್ನೊಂದರ ಹೊತ್ತಿಗೆ ಹೋಗಿ ಮುಟ್ಟಿದ್ದರೆ ಸಾಕಿತ್ತು ಅಷ್ಟೆ.


ಮೊದಲ ಸಲ ಮುಖ್ಯಮಂತ್ರಿಗಳನ್ನ ಎದುರುಗೊಳ್ಳುವ ಸಂದರ್ಭವಾಗಿದ್ದರಿಂದ ಅಷ್ಟಿಷ್ಟು ಉದ್ವೇಗವಿದ್ದರೂˌ ಒಬ್ಬ ಪಳಗಿದ ಆಡಳಿತ ಸೇವೆಯ ಅಧಿಕಾರಿಯಂತೆ ಮುಖದಲ್ಲಿ ತೃಣ ಮಾತ್ರವೂ ಅದನ್ನ ತೋರಿಸಿಕೊಳ್ಳದಂತೆ ಗಾಂಭೀರ್ಯದ ಸೋಗು ಹಾಕಿಕೊಂಡು ಕೂತಿದ್ದೆ. ತನ್ನ ಕಛೇರಿಗೆ ಹೋಗುವ ದಾರಿಯಲ್ಲಿ ನಾಗೇಶ್ವರ ರಾವ್ ನನ್ನ ಛೇಂಬರಿಗೂ ಇಣುಕಿ "ಮೀಟಿಂಗುಲಪೈ ಸಿದ್ಧಂಗಾ ಉನ್ನಾರವುನಂಡಿ? ಪದಗೊಂಡು ಗಂಟಾಲುಕು ದೊರಗಾ ಅಕ್ಕಡ ಸೆಕ್ರೆಟಿಯೇಟುಕಿ ರಂಡಿ" ಅಂತ ಒಂದೆ ಉಸುರಿಗೆ ಒದರಿದ ಅವನಿಗೆ "ಔನು ಸಾರ್" "ಅಲಗೆ ರಾವುಗಾರು" ಅಂತ ಚುಟುಕಾಗಿ ಮಾರುತ್ತರಿಸಿ ಎದ್ದು ನಿಂತ ಶಾಸ್ತ್ರ ಮಾಡಿ ಮತ್ತೆ ಕೂತಲ್ಲೆ ಕುಕ್ಕರ ಬಡಿದೆ.


ನನ್ನ ಆಪ್ತ ಕಾರ್ಯದರ್ಶಿಯನ್ನ ಒಳ ಕರೆಯಲು ಕರೆಘಂಟೆ ಒತ್ತಿದರೆˌ ಆಗಷ್ಟೆ ಕಛೇರಿ ತಲುಪಿದ್ದ ದ್ವಿತಿಯ ದರ್ಜೆಯ ಗುಮಾಸ್ತ ಅದೆ ಅವತಾರದಲ್ಲಿ ಓಡೋಡಿ ಬಂದು ಇನ್ನೂ ಅವರು ಬಂದಿಲ್ಲವೆಂದು ತಿಳಿಸಿ ಕೃತಾರ್ಥನಾದ. ಮೀಟಿಂಗು ಇರುವ ದಿನವೂ ಹೀಗೆ ಮದುವೆ ಮನೆಗೆ ಬೀಗರೂಟಕ್ಕೆ ಬರುವ ನೆಂಟರಂತೆ ಒಬ್ಬೊಬ್ಬರಾಗಿ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಹಾಕುವ ಹೊತ್ತಿಗೆ ಹತ್ತೂವರೆಯಾಗಿ ಹೋಗಿತ್ತು. ಇಂತಹ ಜೋಭದ್ರಗೇಡಿಗಳ ಈ ಪರಿಯ ಬೇಜವಬ್ದಾರ ಸೋಮಾರಿತನ! ಅದೂ ಮುಖ್ಯಮಂತ್ರಿಗಳ ಸಭೆ ಕರೆದಿರುವಂತಹ ತಲೆಬಿಸಿಯ ದಿನದಂದೆ ಕಂಡು ಮೈಯುರಿದು ಹೋಯಿತು. ಇರಲಿˌ ಈ ಸಂಪುಟ ಸಭೆಯೊಂದು ಮುಗಿಯಲಿ ಆಮೇಲೆ ಈ ಭಂಡಮುಂಡೆಗಂಡರೆಲ್ಲರ ರಿವಿಟ್ ಬಿಗಿ ಮಾಡ್ತೀನಿ ಅಂತ ಕ್ಷುದ್ರವಾಗಿದ್ದ ಮನಸಿನೊಳಗೆ ನಿರ್ಧರಿಸಿˌ ಫೈಲುಗಳ ಹೊರೆ ಹೊತ್ತು ಸಚಿವಾಲಯಕ್ಕೆ ಬರಲು "ಲೇಟ್ ಲತೀಫ್" ಆಪ್ತ ಕಾರ್ಯದರ್ಶಿಗೆ ತುಸು ಒರಟಾಗಿಯೆ ಆಜ್ಞಾಪಿಸಿ ಕೂಗಳತೆಯ ದೂರದಲ್ಲಿದ್ದ ಸಚಿವಾಲಯದತ್ತ ಬಿರುಸಿನ ಹೆಜ್ಜೆ ಹಾಕಿದೆ.





ಹನ್ನೊಂದಕ್ಕೆ ಇನ್ನೂ ಹತ್ತು ನಿಮಿಷ ಮುಂಚಿತವಾಗಿಯೆ ನಾನು ನನ್ನ ಬಾಸ್ ನಾಗೇಶ್ವರ ರಾವುರೆದುರು ಸೆಕ್ರೆಟಿಯೆಟ್ ಸೆನೆಟ್ ಹಾಲಿನೆದುರು ಹಾಜರಿದ್ದೆ. "ಅದೆಲಾ ಬಾಬು ಪೂಲಗುತ್ತಿ ತೀಸೆ ಲೇಖ ವಚ್ಯಾರಂಡಿ? ಮುದಟಿಸಾರಿ ಮುಖ್ಯಮಂತ್ರಿಗಾರಿನಿ ಕಲುಸುಕುಂಟ ಪೋತುನ್ನಾರು ಪೂಲಿಚ್ಯಾಕ ಎಲಾ ಮರಿ?" ಅಂತಂದು ಆಕ್ಷೇಪಣೆಯ ಧ್ವನಿಯಲ್ಲಿ ತಕರಾರು ತೆಗೆದು ನಾಗ ನನ್ನನ್ನ ಬೆಚ್ಚಿ ಬೀಳಿಸಿದ. ಮುಖ್ಯಮಂತ್ರಿಗಳೊಂದಿಗೆ ನನ್ನ ಮೊದಲ ಭೇಟಿಯೇನೋ ಹೌದಿದು. ಆದರೆˌ ಅವರ ರಾಜ್ಯಕ್ಕೆ ಅಧಿಕಾರಿಯಾಗಿ ನಾಗರಿಕ ಸೇವೆಯ ನೆಪದಿಂದ ಆಗಮಿಸಿದ ನನ್ನಂತವರನ್ನು ಸ್ಥಳಿಯರಾದ ಅವರು ಹೂಗುಚ್ಛ ಕೊಟ್ಟು ಸ್ವಾಗತಿಸಿ ಒಳ ಬಿಟ್ಟುಕೊಳ್ಳಬೇಕೋ? ಅಥವಾˌ ನಾನೆ ಅವರ ಜೀತಕ್ಕೆ ಬೀಳಲು ತಯ್ಯಾರಾಗಿ ಬಂದಿದೀನಿ ಅಂತ ಸೂಚನೆ ಕೊಡುವಂತೆ ಹೂಗುಚ್ಛವನ್ನ ಅವರಿಗಿಂತ ಮುಂಚೆ ಅವರಿಗಿತ್ತು ಅಧಿಕಾರಸ್ಥರಾಗಿರುವ ಅವರಿಗೆ ಬೆಣ್ಣೆ ಹಚ್ಚಬೇಕೆ? ಅನ್ನುವ ಗೊಂದಲಕ್ಕೆ ಬಿದ್ದೆ. ಸೇವಾ ಶಿಷ್ಟಾಚಾರದ ನಿಯಮಗಳ ಕಲಿಕೆಯಲ್ಲೆಲ್ಲೂ ನನಗೆ ಈ "ರಾಜಕಾರಣಿಗಳ ಭೇಟಿಗೆ ಹೋಗುವಾಗ ಸ್ವಂತ ಖರ್ಚಿನಲ್ಲಿ ದುಬಾರಿ ಹೂಗುಚ್ಛವನ್ನು ಕೊಂಡೊಯ್ದು ಕೊಟ್ಟು ಹಲ್ಕಿರಿಯತಕ್ಕದ್ದು." ಅನ್ನುವ ಯಾವ ಸೂಚನೆಯನ್ನೂ ಸಹ ಕೊಡಲಾಗಿರಲಿಲ್ಲ. ಹೀಗಾಗಿˌ ಆರಾಮವಾಗಿ ಕೆಲಸದ ಫೈಲುಗಳನ್ನಷ್ಟೆ ಹೊತ್ತಿಸಿಕೊಂಡು ಬರುವ ಕರ್ತವ್ಯಪರತೆಯಿಂದ ಕೈ ಬೀಸಿಕೊಂಡು ಬಂದಿದ್ದೆ.




"ತೀಸ್ಕೊಂಡಿ. ತದುಪರಿಸಾರಿ ಅದೆ ಪರಿಸ್ಥಿತಿಲು ಮರಚಿಪೋಕುಂಡ ಕೊನ್ನಿ ನಿರ್ವಹಣ ನಿಯಮಾಲನು ಅನುಸರಿಚಂಡಿ." ಎಂದು ಒಂದು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದ ಹೂಗುಚ್ಛವೊಂದನ್ನ ನನ್ನ ಕೈಗೆ ಡಿಸಿ ನಾಗ ದಾಟಿಸಿದ. ಅವನ ಬಾಸ್ ಸರ್ಮಾ ಇತ್ತಿದ್ದ ನಿರ್ದೇಶನದಂತೆ ಅಂತಹ ಒಂದು ಡಝ಼ನ್ನಿಗೂ ಅಧಿಕ ಹೂಗುಚ್ಛಗಳನ್ನವ ತರಿಸಿ ರಾಸಿ ಒಟ್ಟಿದ್ದ. ಬಹುಶಃ ಯಾವುದಕ್ಕೂ ಕೊಸರಿಗಿರಲಿ ಅಂತ ಒಂದೆರಡು ಹೆಚ್ಚುವರಿ ಗುಚ್ಛಗಳನ್ನೆ ತರಿಸಿರಬೇಕು. ಅದರಲ್ಲೊಂದು ಹೀಗೆ ನನ್ನ ಕೈದಾಟಿತ್ತು. 




ಈ ಈಶಾನ್ಯದ ರಾಜ್ಯಗಳಲ್ಲಿ ಹಾಗೆ ನೋಡಿದರೆ ಶಾಲಾ ಹಾಗೂ ಕಛೇರಿ ಅವಧಿಗಳಲ್ಲಿ ಈಗಿರುವ ಕಾಲಾವಧಿ ಮಿತಿ ದೋಷಪೂರ್ಣವಾಗಿದೆ ಅನ್ನೋದೆ ನನ್ನ ಖಚಿತ ಅಭಿಪ್ರಾಯ. ನನಗನಿಸುವಂತೆ ಭಾರತದಂತಹ ವಿಶಾಲ ದೇಶದಲ್ಲಿ ಏಕರೂಪದ "ಇಂಡಿಯನ್ ಸ್ಟ್ಯಾಂಡರ್ಡ್ ಟೈಂ" ಅನುಸರಿಸೋದೆ ತಪ್ಪು. ಇಲ್ಲಿ ಪೂರ್ವಕ್ಕೊಂದು - ಮಧ್ಯಕ್ಕೊಂದು - ಪಶ್ಚಿಮಕ್ಕೊಂದು ಹೀಗೆ ಕನಿಷ್ಠ ಮೂರು ಟೈಂ ಜೋ಼ನ್ಗಳನ್ನಾದರೂ ಅನುಷ್ಠಾನಗೊಳಿಸೋದು ಸೂಕ್ತ. ಈ ಪ್ರಮಾಣಿಕೃತ ಸಮಯ ನಿಗದಿಯು ಸ್ಥಳಿಯ ಸೂರ್ಯೋದಯದ ಹಾಗೂ ಸೂರ್ಯಾಸ್ತದ ಸಮಯಕ್ಕೆ ಪೂರಕವಾಗಿರಬೇಕು. ಆಗ ಮಾತ್ರˌ ಖಂಡಿತವಾಗಿ ವಿದ್ಯಾರ್ಥಿಗಳಿಂದಾಗಲಿ - ಕಾರ್ಮಿಕರಿಂದಾಗಲಿ - ಉದ್ಯೋಗಿಗಳಿಂದಾಗಲಿ ಈಗಿನದಕ್ಕಿಂತ ಹೆಚ್ಚು ದಕ್ಷತೆ ಹಾಗೂ ಫಲವತ್ತ ಫಲಿತಾಂಶಗಳನ್ನ ನಿರೀಕ್ಷಿಸಬಹುದು. ಅಂಡಮಾನ್ - ನಿಕೋಬಾರ್ ದ್ವೀಪ ಸಮುಚ್ಛಯವೂ ಸೇರಿˌ ಪೂರ್ವ ಕರಾವಳಿಯ ಚೆನ್ನೈ-ವಿಶಾಖಪಟ್ಟಣ-ಭುವನೇಶ್ವರ-ಕೊಲ್ಕತಾ ಮಹಾನಗರಗಳ ಸಹಿತ ಸಿಕ್ಕಿಂ ಕೂಡ ಸೇರಿದ ಈಶಾನ್ಯದ ಮತ್ತುಳಿದ ಏಳು ರಾಜ್ಯಗಳಲ್ಲಿ ಬೆಂಗಳೂರಿನ ನಾಲ್ಕು ಘಂಟೆಯ ಚುಮುಚುಮು ಮುಂಜಾವಿನಲ್ಲಿಯೆ ನಿಚ್ಚಳ ಬೆಳಕಾಗಿರುತ್ತದೆ. ಬೆಂಗಳೂರಿನ ಬಹುತೇಕರು ಸಾಮಾನ್ಯವಾಗಿ ತಮ್ಮ ಕಣ್ಣ ಪಿಸಿರು ಜಾರಿಸುತ್ತಾ ಬೆಳಗಿನ ಕಾಫಿ ಹೀರುವ ಏಳು ಘಂಟೆಯ ಹೊತ್ತಿಗೆ ಪೂರ್ವೋತ್ತರದ  ರಾಜ್ಯಗಳ ಮಂದಿಯ ಜೈವಿಕ ಗಡಿಯಾರದಲ್ಲಿ ಬೆಳಗಿನ ಅವಧಿ ಜಾರಿ ಮಧ್ಯಾಹ್ನ ಮುಖ ಮಾಡಲು ಕಾತರಿಸುತ್ತಿರುತ್ತದೆ. ಹೀಗಾಗಿ ಹತ್ತರ ಹೊತ್ತಿಗೆ ಇಲ್ಲಿ ಬೆಂಗಳೂರಿನ ನಡು ಮಧ್ಯಾಹ್ನದ ವಾತಾವರಣ ಕವಿದು ದೈಹಿಕ ಗಡಿಯಾರ ಆ ಸಮಯದ ಮೂರು ತಾಸು ಮುಂದಿರಬೇಕಾದ ವಾಸ್ತವವನ್ನ ಒಪ್ಪಿಕೊಳ್ಳುವಂತೆ ಒಳಗೊಳಗೆ ಒತ್ತಡ ಹಾಕುತ್ತಲೆ ಇರುತ್ತದೆ. ಸಹಜವಾಗಿ ಸಂಜೆ ನಾಲ್ಕಕ್ಕೆಲ್ಲ ಮುಸ್ಸಂಜೆಯ ಮಬ್ಬು ಆವರಿಸಿˌ ಗಡಿಯಾರದ ಮುಳ್ಳು ಏಳು ಮುಟ್ಟುವ ಹೊತ್ತಿಗೆಲ್ಲ ಶಿಲ್ಲಾಂಗಿನ ದೈನಿಕ ವ್ಯವಹಾರಗಳು ಸ್ಥಬ್ಧವಾಗಲಾರಂಭಿಸಿˌ ಮತ್ತೊಂದು ತಾಸು ಕಳೆಯುವುದರೊಳಗೆ ಅಲ್ಲಿನ ಪೇಟೆಬೀದಿಗಳು ನಿರ್ಜನವಾಗಿ ಮಂದಿ ಮನೆ ಸೇರಿಕೊಂಡು ಇರುಳಿನೂಟ ಉಂಡು ಬೆಚ್ಚಗೆ ಹೊದ್ದು ಮಲಗಲಾರಂಭಿಸುತ್ತಾರೆ.



ಇಂತಿಪ್ಪ ಸಾವಕಾಶದ ಹೊತ್ತಲ್ಲೂ ಸಚಿವಾಲಯದಲ್ಲಿ ಸಂಪುಟ ಸಭೆ ಇದ್ದ ಸಮಯದಲ್ಲೂ ಆಡಿಸಿಕೊಂಡು ಬಂದ ನನ್ನ ಕಛೇರಿ ಸಿಬ್ಬಂದಿಯ ಬೇಜವಬ್ದಾರ ನಡೆ ನನ್ನಲ್ಲಿ ರೇಜಿಗೆ ಹುಟ್ಟಿಸಿದ್ದು ಇದೆ ಕಾರಣದಿಂದ. ಕ್ರಮೇಣ ಕಿರಿ-ಮರಿ-ಹಿರಿ-ಕಿರಿಕಿರಿ ಸಂಪುಟ ದರ್ಜೆಯ ಸಚಿವರಾಗಿರುವಂತಹ ರಾಜಕಾರಣಿಗಳ ಆಪ್ತ ಸಹಾಯಕ - ಭದ್ರತಾ ಸಿಬ್ಬಂದಿ ಸಹಿತದ ದಂಡು ಒಬ್ಬೊಬ್ಬರಾಗಿ ಬಂದು ಸಚಿವಾಲಯದ ಪಡಸಾಲೆಯಲ್ಲಿ ನೆರೆಯ ತೊಡಗಿತು. ಸರ್ಮಾ ಸೂಚನೆಯಂತೆ ಅವರೆಲ್ಲರಿಗೂ ಲಘು ಉಪಹಾರ ಹಾಗೂ ಚಹಾ ಸೇವೆಯ ವ್ಯವಸ್ಥೆಯನ್ನು ನಾಗೇಶ್ವರ ರಾವು ಆಪ್ತ ಸಿಬ್ಬಂದಿ ಪಡೆ ಮಾಡಿತ್ತು. ಅವರೆಲ್ಲ ಮೆಲುಕು ಹಾಕುವಂತೆ ಸಿಂಗಾಡ-ಚೆಟ್ನಿ-ಸಾಕಿನ್ ಘಟ್ಹಾ-ಚಹಾ ಮೇಯ್ದು ಮೆಲುಕು ಹಾಕಿ ತಯಾರಾಗುವ ಹೊತ್ತಿಗೆಲ್ಲˌˌ ನಾವೆಲ್ಲ ಚಿಕಿತ್ಸೆ ಮುಗಿಸಿ ಚೇತರಿಸಿಕೊಂಡು ಮರಳಿ ಬಂದಿರುವ ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರಲು ಕಾತರದಿಂದ ನೆರೆದಿದ್ದರೂ ಸಹˌ ಮುಖ್ಯಮಂತ್ರಿ ಎಂಬ ಜೋಭದ್ರ ಬಹುಶಃ ಆರಾಮಾಗಿ ಮಧ್ಯಾಹ್ನದ ಭರ್ಜರಿ ಭೋಜನವನ್ನೂ ಮನೆಯಲ್ಲಿ ತೀರಿಸಿಕೊಂಡು ಹನ್ನೆರಡರ ಸುಮಾರಿಗೆ ಗಾಲಿಕುರ್ಚಿಯಲ್ಲಿ ಸಚಿವಾಲಯದ ಪೋರ್ಟಿಕೋದಲ್ಲಿ ಬಂದಿಳಿದ. ಶಿಷ್ಟಾಚಾರ ಪ್ರಕಟಿಸುತ್ತಾ ನೆರೆದಿದ್ದ  ಎಲ್ಲರ ಅಭಿವಂದನೆ ಸ್ವೀಕರಿಸುತ್ತಾ ಒಕ್ಕೈ ನಮಸ್ಕಾರ ಮಾಡುತ್ತಾ ಗಾಲಿಕುರ್ಚಿ ನೂಕಿಸಿಕೊಂಡು ನೇರ ಸಭಾಗೃಹ ಹೊಕ್ಕ. ಇಲ್ಲಿ ತಡವಾಗಿ ಬರೋದು ಬಹುಶಃ ಅಡಿಯಿಂದ ಮುಡಿಯವರೆಗೆ ಪ್ರತಿಯೊಬ್ಬರ ದುರಭ್ಯಾಸ. "ಯಥಾ ರಾಜ ತಥಾ ಪ್ರಜಾ". ಈ ಮುಖ್ಯಮಂತ್ರಿಯಲ್ಲಿಲ್ಲದ ಸಮಯ ಪಾಲನೆಯ ಶಿಸ್ತು ನನ್ನ ಕಛೇರಿಯ ಕೆಳಹಂತದ ಸಿಬ್ಬಂದಿಗಳಿಂದ ನಿರೀಕ್ಷಿಸೋದು ಮೂರ್ಖತನ ಅಂತ ಅಂದಾಜಿಸಿದೆ.



ಚಿಕಿತ್ಸೆ ಮುಗಿಸಿ ತುಸು ಕಳೆಗುಂದಿದಂತಿದ್ದರೂ ಸಹ ಯಶಸ್ವಿಯಾಗಿ ಮರಳಿ ಬಂದಿರುವ ಮುಖ್ಯಮಂತ್ರಿಗಳನ್ನ ಒಬ್ಬೊಬ್ಬರಾಗಿ ಅಭಿನಂದಿಸಲು ಮುಗಿ ಬಿದ್ದರು. ರಾಜಕಾರಣಿಗಳ "ನಾಯಿ ನಿಷ್ಠಾ ಪ್ರದರ್ಶನ" ಮುಗಿದ ನಂತರ ಅಧಿಕಾರಿ ವರ್ಗದವರ ಓಲೈಕೆಯ ಬೃಹನ್ನಾಟಕ ಆರಂಭವಾಯಿತು. ನನ್ನ ಬಾಸು ನಾಗೇಶ್ವರ ರಾವುವಂತೂ ತಾನು ಕೂತಲ್ಲಿ ನಿಂತಲ್ಲಿ ಬಾಯ್ತುಂಬ ತಿರಸ್ಕಾರದಿಂದ ಜರಿಯುವ ಈ "ಜೋನಂಗಿ ಜಾಗಿಲವಾಡು" ಮುಂದೆ ತನ್ನ ಹಲ್ಲು ಸೆಟ್ಟು ಪೂರ್ತಿ ಪ್ರದರ್ಶನವಾಗುವಂತೆ ನಗುನಗುತ್ತಾ ಧೂರ್ತ ಲಕ್ಷಣವಾದ ಅತಿವಿನಯ ತೋರಿಸುತ್ತಾ ನಿಂತಿದ್ದ. ಎಡಗಣ್ಣ ಹುಬ್ಬು ಹಾರಿಸಿ ಆಜ್ಞಾಪಿಸಿದರೆ ಸಾಕು ಈಗ ಅದೆ "ಕುಕ್ಕಲನು ತಿನೆ ಕುಕ್ಕ"ನ ಮುಂದೆ ತಾನೆ ಸಾಕಿದ ಕುಕ್ಕನಾಗಿ ಕಾಲಿಡಿ ನೆಕ್ಕುತ್ತಾ ಕುಂಯ್ ಕುಂಯ್ಗುಡುತ್ತಾ ಬೊಗಳಿಕೊಂಡಿರಲೂ ತಯ್ಯಾರಾಗಿರುವನಂತೆ ಆ ಕ್ಷಣ ನನ್ನ ಕಣ್ಣಿಗವನು ಕಂಗೊಳಿಸಿದ. 



"ಕಮ್ ಯಂಗ್ ಮ್ಯಾನ್ˌ ಲೆಟ್ ಮಿ ಇಂಟ್ರಡ್ಯೂಜ಼್ ಯು ಟು ಅವರ್ ಹಾನರೆಬಲ್ ಸಿಎಂ ಸಾರ್!" ಅಂತ ನನ್ನನ್ನು ಮುಂದಕ್ಕೆ ಕರೆದುˌ ಅದೆ ಪ್ರಥಮ ಬಾರಿಗೆ ತನ್ನ ಆಂಗ್ಲೋಚ್ಛಾರಣೆಯ ಉದ್ಗಾರದಿಂದ ನನ್ನನ್ನವ ಬೆಚ್ಚಿ ಬೀಳಿಸಿದ. ಶಿಷ್ಟಾಚಾರದಂತೆ ಮುಂದೆ ಬಂದು "ಹಲೋ" ಹೇಳಿದವನ ಪ್ರವರವನ್ನೂ ಮುಖ್ಯಮಂತ್ರಿಗಳಿಗೆ ತಾನೆ ಒಪ್ಪಿಸಿˌ ಕೊಟ್ಟಿರುವ ಪ್ರೊಬೆಷನರಿ ಪೋಸ್ಟಿಂಗ್ ಬಗ್ಗೆಯೂ ಮಾಹಿತಿ ನೀಡಿತು ಈ ನಾಗೇಶ್ವರ ರಾವು ಎಂಬ ನರಿ. 



ಮೊದಲಿಗೆ ನಿರ್ಲ್ಯಕ್ಷದಿಂದಲೇನೋ ಎಂಬಂತೆ ನನ್ನತ್ತ ತಿರುಗಿದ ಮುಖ್ಯಮಂತ್ರಿಗಳಿಗೆ "ಸ್ಪೀಡಿ ರಿಕವರಿ ಸಾರ್ˌ ಜೆಮ್ ನೋ ಕ್ಹೋಯ್ˌ ಲಾಹ್." ಅಂತˌ ಅಂದರೆ "ಬೇಗ ಚೇತರಿಸಿಕೊಳ್ಳಿ ಸಾರ್ˌ ಆದಷ್ಟು ಶೀಘ್ರ ಗುಣಮುಖರಾಗಿರಿ." ಎಂದು ಖಾಸಿಯಲ್ಲೆ ಅಭಿವಂದಿಸಿದ ತಕ್ಷಣ ಅವರ ನೋಟದಲ್ಲಿದ್ದ ಈ ಹಿಂದಿನ ಅಸಡ್ಡೆ ತಕ್ಷಣಕ್ಕೆ ಮಾಯವಾಗಿ ಮುಖದಲ್ಲಿ ಮುಗುಳ್ನಗೆ ಮೂಡಿ ಬಂತು. "ಯೂ ಸಮ್ಲಾ ಉಬಾಲ ತ್ರೇಯ್ ಬಾˌ ನಗ ಸ್ನಾಗೆವಂಗು ಈ ಕ." ಅಂದರೆ "ಅಭಿನಂದನೆಗಳು ಯುವ ಅಧಿಕಾರಿಗಳೆˌ ನಾನಿದನ್ನ ಮೆಚ್ಚಿದೆ." ಅಂತ ಮುಖ್ಯಮಂತ್ರಿ ಪುಲೋಂಗ್ ಬಹಿರಂಗವಾಗಿಯೆ ಎಲ್ಲರೆದುರು ಹೊಸತಾಗಿ ರಾಜ್ಯಕ್ಕೆ ಬಂದ ಯುವ ಅಧಿಕಾರಿಯಾಗಿದ್ದವನನ್ನ ಮೆಚ್ಚಿ ಪ್ರಶಂಸಿದ. 



ಬಂದ ತಿಂಗಳೊಳಗೆ ಈವರೆಗೂ ಖಾಸಿಯ ಗಂಧ-ಗಾಳಿಯೂ ಇಲ್ಲದ ದಕ್ಷಿಣ ಭಾರತೀಯ ಯುವ ಅಧಿಕಾರಿಯೊಬ್ಬ ಈ ಮಟ್ಟಿಗೆ ಖಾಸಿ ಮಾತನಾಡಲು ಕಲಿತದ್ದರ ಬಗ್ಗೆ ಮುಖ್ಯ ಕಾರ್ಯದರ್ಶಿ ಮುಕ್ತಿಪ್ರಸಾದ ಸರ್ಮಾ ಸಹ  ಸಖೇದಾಶ್ಚರ್ಯ ಮುಖದಲ್ಲಿ ಪ್ರಕಟಿಸಿಕೊಂಡು ಪಕ್ಕದ ಕುರ್ಚಿಯಿಂದ ನನ್ನತ್ತ ದಿಟ್ಟಿಸಿದ. ಬಂದು ಎರಡು ದಶಕಗಳಾದರೂ ನೆಟ್ಟಗೆ ನಾಲ್ಕು ಪದ ಖಾಸಿ ಕಲಿಯಲಾಗಿರದಿದ್ದ ನನ್ನ ಬಾಸ್ ಇನ್ನೇನು ಈ ತಿಂಗಳಿನಲ್ಲಿಯೆ ಕಾರ್ಯದರ್ಶಿ ಹುದ್ದೆಗೆ ಭಡ್ತಿ ನಿರೀಕ್ಷಿಸುತ್ತಿದ್ದ ನಾಗೇಶ್ವರ ರಾವು ಬೆಪ್ಪನಾಗುವ ಸರದಿಯಲ್ಲಿ ಈಗಿದ್ದ. ಕೇವಲ ಹಿಂದೊಂದು - ಮುಂದೊಂದು ಮಾಡಿಕೊಂಡುˌ ಮಾಡಬೇಕಾದ ಅಧಿಕಾರ ವ್ಯಾಪ್ತಿಯ ಕರ್ತವ್ಯಗಳಲ್ಲಿ ಕೆಲಸ ಕದಿಯುತ್ತಾ ಮೈಗಳ್ಳನಾಗಿದ್ದುಕೊಂಡುˌ ಬೇಕಾಬಿಟ್ಟಿಯಾಗಿ "ಆರ್ಡರ್ಲಿ" ಸೇವೆಯನ್ನ ದುರುಪಯೋಗ ಪಡಿಸಿಕೊಳ್ಳುತ್ತಾ - ಸರಕಾರಿ ಸಂಬಳದಲ್ಲಿ ಮನಸೋ ಇಚ್ಛೆ ಮೇಯ್ದು ಕೊಂಡಿರೋದನ್ನೆ "ಕರ್ತವ್ಯ ನಿಷ್ಠೆ" ಅಂದುಕೊಂಡಿದ್ದ ನಾಗೇಶ್ವರ ರಾವುಗಳಂತಹ ಹಳೆಯ ಹೆಗ್ಗಣಗಳಿಗೆˌ ತಾವು ಅನ್ನದಗಳು ಸಂಪಾದಿಸುವ ನೆಲದ ಭಾಷೆಯನ್ನ ಕಲಿತು ಮಾತನಾಡುವುದು ಅಲ್ಲಿಗೆ ನಾವು ಮಾಡುವ ಉಪಕಾರವೇನಲ್ಲ. ಬದಲಿಗೆ ನಾವು ಆ ನೆಲಕ್ಕೆ ತೋರಿಸಬೇಕಾದ ಕನಿಷ್ಠ ನಿಷ್ಠೆ - ಅದು ನಿತ್ಯದ ಅನ್ನಕ್ಕೆ ದಾರಿಯಾಗಿರುವ ಕೆಲಸಕ್ಕೆ ಸಲ್ಲಿಸುವ ಪ್ರಾಥಮಿಕ ಮರ್ಯಾದೆ ಅನ್ನುವ ಸ್ವಯ ಇದ್ದಂತಿರಲಿಲ್ಲ.






ಈಗಾಗಲೆ ವ್ಯಥಾ ಕಾಲಯಾಪನೆಯಿಂದ ಸಂಪುಟಸಭೆ ಆರಂಭವಾಲು ಬಹಳ ತಡವಾಗಿತ್ತು. ಆದರೂ ಅಭಿವಂದನೆ-ಯೋಗಕ್ಷೇಮ ಕುಶಲ ವಿಚಾರಣೆ-ಬಾಯುಪಚಾರ-ಪರಿಚಯದ ಶಾಸ್ತ್ರಗಳೆಲ್ಲ ಮುಗಿಯಲು ಇನ್ನೂ ಕಾಲು ತಾಸು ತಗುಲಿತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿˌ ಸಂಪುಟ ಸಚಿವರು ಹಾಗೂ ಅಗತ್ಯ ಅಧಿಕಾರಿ ವರ್ಗದ ಹೊರತು ಸಂಪುಟ ಸಭೆಗೆ ಸಂಬಂಧಿಸಿರದ ಮರಿ-ಕಿರಿ-ಕಿರಿಕಿರಿ ಪುಢಾರಿಗಳನ್ನೆಲ್ಲ ಹೊರಗೆ ಓಡಿಸಿ ಎಂದು ವಿಧಾನ ಸಭೆಯ ಭದ್ರತಾ ಸಿಬ್ಬಂದಿಗಳಾದ ಮಾರ್ಷೆಲ್ಗಳಿಗೆ ಸೂಚನೆ ಕೊಡಲು ಮುಖ್ಯ ಕಾರ್ಯದರ್ಶಿ ಸರ್ಮಾ ತಮ್ಮ ಬೆರಳ ನಿಲುಕಿನಲ್ಲಿದ್ದ ಗುಂಡಿಯನ್ನು ಸುದೀರ್ಘವಾಗಿ ಅದುಮಿ ಅಲರಾಂ ಕಿರ್ರೆನಿಸಿ ತಮಗಾಗುತ್ತಿರೋ ಕಿರಿಕಿರಿಯನ್ನ ಆ ಮೂಲಕ ವ್ಯಕ್ತ ಪಡಿಸಿದರು. ಕ್ಷಣಾರ್ಧದಲ್ಲಿ ಜೊಳ್ಳುಗಳೆಲ್ಲ ಜಾಗ ಖಾಲಿ ಮಾಡಿˌ ಗಟ್ಟಿ ಕಾಳುಗಳಷ್ಟೆ ಸಭಾಮಂದಿರದೊಳಗೆ ಉಳಿದು ಹೋದವು.


ಅಧಿಕೃತವಾಗಿ ಸಭೆ ಆರಂಭವಾಯಿತು. ತನ್ನ ಅನುಪಸ್ಥಿತಿಯಲ್ಲಿ ರಾಜ್ಯದ ದೈನಂದಿನ ಆಗುಹೋಗುಗಳ ನಿರ್ವಹಣೆಯ ಬಗ್ಗೆˌ ಬಹುಶಃ ಸರ್ಮಾ ನೆನ್ನೆ ಅವರ ಗೃಹ ಕಛೇರಿಗೆ ಭೇಟಿ ಇತ್ತಿದ್ದಾಗಲೆ ಮುಖ್ಯಮಂತ್ರಿಗಳಿಗೆ ವಿಷದವಾಗಿ ವಿವರಿಸಿರಬಹುದುˌ ಹೀಗಾಗಿ ಇನ್ನೊಂದು ತಿಂಗಳಲ್ಲಿ ಮಂಡಿಸಬೇಕಿರುವ ರಾಜ್ಯ ಅಯವ್ಯಯದ ಕುರಿತು - ಕಳೆದ ವರ್ಷದ ಅಯವ್ಯಯದ ಅನುಷ್ಠಾನಗಳ ಬಗ್ಗೆ - ರಾಜ್ಯದಲ್ಲಿ ಕಳೆದೆರಡು ತಿಂಗಳಲ್ಲಿ ನಡೆದಿದ್ದ ಗುರುತರ ಅಪರಾಧ ಪ್ರಕರಣಗಳ ಪ್ರಸಕ್ತ ತನಿಖೆಯ ಹಂತದ ವಿವರ - ರಾಜ್ಯದ ಕಳೆದೊಂದು ತಿಂಗಳ ಆಡಳಿತ ನಿರ್ವಹಣಾ ಖರ್ಚುವೆಚ್ಚದ ತಪಶೀಲು - ತುರ್ತು ಪರಿಸ್ಥಿತಿಗಳಲ್ಲಿ ಬಳಸಬೇಕಾದ ವಿಪತ್ತು ನಿರ್ವಹಣಾ ನಿಧಿಯಿಂದಾದ ದುಡ್ಡಿನ ಬಳಕೆ - ಎಲ್ಲಕ್ಕೂ ಮುಖ್ಯವಾಗಿ ತಾನಿರದಾಗ "ಬೇಡದ ಸರಕಾರಿ ನೆಂಟನಾಗಿ" ಬಂದು ರಾಜಭವನದಲ್ಲಿ ಒಕ್ಕರಿಸಿ ಝಾಂಡಾ ಊರಿಕೊಂಡುˌ ಬರಿ ರಾಜ್ಯ ಸರಕಾರಕ್ಕೂ - ಕೇಂದ್ರ ಸರಕಾರಕ್ಕೂ ಮಧ್ಯ ವಿವಾದಗಳನ್ನ ತಂದಿಡೋದನ್ನೆ - ಅಪನಂಬಿಕೆಯ ಕಂದರ ಆದಷ್ಟು ಆಳ ಅಗಲ ಮಾಡೋದನ್ನೆ ತನ್ನ ಪೂರ್ಣಾವಧಿ ಕಸುಬು ಮಾಡಿಕೊಂಡಿರುವ; ಬಂದು ಕೂತುಕೊಂಡಲ್ಲೆ ಮುಕುಳಿಯಲ್ಲಿ ಬೇರು ಇಳಿಸಿಕೊಂಡಿರೋ ಗವರ್"ನರಿ" ಮಾಡಿರೋ ಆಡಳಿತದಲ್ಲಿನ ಹಸ್ತಕ್ಷೇಪದ ಕಿರಿಕಿರಿ. ಮತ್ತವನ ಕಿತಾಪತಿಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಸ್ಥಳಿಯ ರಾಜಕೀಯದ ಬಗ್ಗೆ - ಅಲ್ಲಿನ ಪಕ್ಷ ರಾಜಕರಣದ ಕುರಿತು ಮೇಲ್ನೋಟದ ಜ್ಞಾನ ಮಾತ್ರವಿದ್ದ ನಾನು ಬಾಯಿ ಮುಚ್ಚಿಕೊಂಡು ಕಿವಿಗಳೆರಡನ್ನ ಸಾವಕಾಶವಾಗಿ ತೆರೆದಿಟ್ಟುಕೊಂಡು ಸಭೆಯ ಮಾತುಕತೆಗಳನ್ನ ಆಲಿಸುತ್ತಾ ಆದಷ್ಟು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ತನ್ನ ಮಂತ್ರಿಗಳ ಜೊತೆಗೆ ಮಾತನಾಡುವಾಗ ಖಾಸಿ-ಗ್ಹಾರೋ ಬೆರಕೆ ಭಾಷೆ ಬಳಸುತ್ತಿದ್ದ ಮುಖ್ಯಮಂತ್ರಿ ಅದೆ ಸರ್ಮಾ ಜೊತೆ ತುಸು ಅಸ್ಸಾಮಿ ಬೆರೆಸಿರೋ ಖಾಸಿಯಲ್ಲಿ ಸಂಭಾಷಿಸುತ್ತಿದ್ದ. ನಾಗೇಶ್ವರ ರಾವು ಮತ್ತಿತರ ಅಧಿಕಾರಿಗಳಿಂದ ಏನಾದರೂ ವಿವರಣೆ ಪಡೆಯಬೇಕಿದ್ದಲ್ಲಿ ಮಾತ್ರ ಅವರತ್ತ ತಿರುಗಿ ಹರುಕು ಮುರುಕು ಹಿಂದಿಗೆ ಧಾರಾಳವಾಗಿ ಸತ್ತ"ಕುರು" ಶೈಲಿಯ 'ಬಟ್ಲರ್ಇಂಗ್ಲೀಷ್' ಬಳಸಿ ವ್ಯವಹರಿಸುತ್ತಿದ್ದ. ಇವೆಲ್ಲ ಅತಿ ಸಹಜವೆನ್ನುವಂತೆ ಸಭೆ ಸಾಗಿತು.



ಹಿಂದಿನ ಬಜೆಟ್ಟಿನಲ್ಲಿ ನಾಲ್ಕರಿಂದ ಹನ್ನೊಂದಾಗಿಸಿ ಏಳು ಹೊಸ ಜಿಲ್ಲೆಗಳನ್ನ ರಚಿಸುವ ಪ್ರಸ್ತಾವನೆಯನ್ನ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಆ ಪ್ರಸ್ತಾವನೆಗೆ ಕುಂಟು ನೆಪ ತೆಗೆದಿದ್ದ ರಾಜ್ಯಪಾಲನೆಂಬ ಬ್ರೋಕರ್ˌ ಹೇಗಾದರೂ ಸರಿ ವಿರೋಧ ಪಕ್ಷದವರ ಹಿಡಿತದಲ್ಲಿರೋ ರಾಜ್ಯ ಸರಕಾರಕ್ಕೆ ಕಿರುಕುಳ ಕೊಡಲೆ ಬೇಕೆಂದು ನಿರ್ಧರಿಸಿದವನಂತೆ ಅದನ್ನ ಅಂಡಿನಡಿ ಹಾಕಿಕೊಂಡು ಸಹಿ ಜ಼ಡಿಯದೆ ಸತಾಯಿಸುತ್ತಿದ್ದ. ರಾಜ್ಯಪಾಲನ ಅನುಮತಿ ಸಿಗದ ಹೊರತುˌ ಸಾಂವಿಧಾನಿಕ ಸರಕಾರಿ ಪ್ರಮುಖನ ಸಮ್ಮತಿ ಇಲ್ಲದ ಕಾರಣˌ ಹೊಸ ಜಿಲ್ಲೆಗಳ ಸರಕಾರಿ ಕಛೇರಿಗಳ ನಿರ್ಮಾಣದಂತಹ - ಅದಕ್ಕೆ ಬೇಕಾದ ಪೀಠೋಪಕರಣಗಳನ್ನ ಖರೀದಿಸುವ - ಆಡಳಿತದ ಅನುಕೂಲಕ್ಕಾಗಿ ಕಲ್ಪಿಸಬೇಕಿದ್ದ ಮೂಲಭೂತ ಸೌಕರ್ಯಗಳಿಗೆ ಪ್ರಸ್ತಾವಿಸಲಾಗಿದ್ದ ನಿಧಿಯನ್ನ ಉಪಯೋಗಿಸುವಂತಿರಲಿಲ್ಲ. ಅಂದರೆˌ ಸರಳ ಭಾಷೆಯಲ್ಲಿ ವಿವರಿಸಬೇಕಂತಿದ್ದರೆ ಅದಕ್ಕಾಗಿ ಬಿಡುಗಡೆ ಮಾಡಲಾಗಿದ್ಧ ಅನುದಾನದ ಚಿಕ್ಕಾಸು ಕೂಡ ಖರ್ಚಾಗದೆ ಪುನಃ ಕೇಂದ್ರಾನುದಾನದ ಖಾತೆಗೆ ಮರಳಿ ಹೋಗುತ್ತಿತ್ತುˌ ಹೀಗೆ "ಖರ್ಚಾಗಿರದ" ಕಾರಣ ಮುಂದೊಡ್ಡಿ ಹಿಂದಿರುಗಿ ಹೋಗುವ ನೂರಾರು ಕೋಟಿ ರೂಪಾಯಿ ಹಣದಲ್ಲಿ ತಮ್ಮ ಪಾಲಿನ ಕಮಿಷನ್ ಕೊಳ್ಳೆ ಹೊಡೆಯಲುˌ ಸ್ಥಳಿಯ ರಾಜಕಾರಣಿಗಳಿಗಾಗಲಿ ಅಥವಾ ಅಧಿಕಾರಿ ವರ್ಗಕ್ಕಾಗಲಿ ಸಾಧ್ಯವಾಗುತ್ತಿರಲಿಲ್ಲ! ಮುಂದಿನ ವಿಧಾನಸಭಾ ಚುನಾವಣೆಗೆ ಕೇವಲ ಒಂದೂವರೆ ವರ್ಷವಷ್ಟೆ ಬಾಕಿ ಉಳಿದಿದ್ದ ಈ ಕಿರು ಅವಧಿಯಲ್ಲಿ ತಮ್ಮ ಸರಕಾರಿ ಖಜಾನೆಯ ಕೊಳ್ಳೆಗೆ ಹೀಗೆಲ್ಲ ವಿಘ್ನ ಎದುರಾಗಿರೋದು ಅವರನ್ನೆಲ್ಲ ಹತಾಶೆಗೆ ದೂಡಿತ್ತು. ಹೇಗಾದರೂ ಸರಿˌ ಇನ್ನೆರಡು ತಿಂಗಳೊಳಗೆ ಇದಕ್ಕೆ ಮದ್ದರೆಯಲೆ ಬೇಕು. ಕಾನೂನು ಕ್ರಮ ಅನುಸರಿಸಿ ರಾಜ್ಯಪಾಲನ ಅಧಿಕಾರ ಮೊಟಕುಗೊಳಿಸಲು ಸಾಧ್ಯವೆ? ರಾಜ್ಯಪಾಲ ಆಡಿಸುವ ಕಡ್ಡಿಯನ್ನ ಕಡೆಗಣಿಸಿ ಅನುದಾನವನ್ನ ಉಳಿಸಿಕೊಳ್ಳೋದು ಹೇಗೆ ಅನ್ನುವುದರ ಬಗ್ಗೆ ಗಂಭೀರವಾಗಿ ಚಿಂತಿಸಲು ಮುಖ್ಯಮಂತ್ರಿ ಪುಲೋಂಗ್ ನಿಷ್ಠುರವಾಗಿ ಸರ್ಮಾನಿಗೆ ಆದೇಶವಿತ್ತ.



ಇನ್ನುˌ ಖಜಾನೆಯಲ್ಲಿ ಸಾಕಷ್ಟು ತೆರಿಗೆ ಸಂಗ್ರಹವಾಗಿರದಿದ್ದರೂ ಸಹ ಪ್ರಸ್ತಾವಿತ ಏಳೂ ಹೊಸ ಜಿಲ್ಲೆಗಳನ್ನ "ಬರಪೀಡಿತ" ಎಂದು ಘೋಷಿಸಿ ಅದಕ್ಕೆ ಪರಿಹಾರವನ್ನಾಗಿ ಕೋಟ್ಯಂತರ ರೂಪಾಯಿಗಳ ಅನುದಾನವನ್ನ ಬೇರೆ ಊರಿಂದ ಮುಂದೆ ಘೋಷಿಸಿದ್ದರು. ಭಾರತದಲ್ಲೆ ಅತ್ಯಧಿಕ ಮಳೆ ಸುರಿಯುವ ರಾಜ್ಯವಾಗಿರುವ ಮೇಘಾಲಯಕ್ಕೆ "ಮೋಡಗಳ ಬಾಣಂತಿ ಕೋಣೆ" ಅನ್ನೋ ಅಡ್ಡ ಹೆಸರು ಬೇರೆ ಇದೆ. ಆದರೆ ಇಲ್ಲಿನ ಅಡ್ಡದಿಡ್ಡಿಯಾಗಿರುವ ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ನೆಲದ ಮೇಲೆ ಭೋರ್ಗರೆದು ಸುರಿವ ನೀರನ್ನ ಕೂಡಿಟ್ಟು ಬಳಸಲು ಯಾವ ಸೂಕ್ತ ವ್ಯವಸ್ಥೆಯೂ ಇಲ್ಲ. ತಮಾಷೆಯೆಂದರೆˌ ಭಾರತದಲ್ಲೆ ಅತಿ ಹೆಚ್ಚು ಮಳೆ ಪ್ರಮಾಣ ದಾಖಲಾಗುವ ಚಿರಾಪುಂಜಿಯೂ ಸೇರಿ ಅದನ್ನ ಒಳಗೊಂಡಿರೋ ಪೂರ್ವ ಖಾಸಿ ಜಿಲ್ಲೆಯೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ರಾರಾಜಿಸುತ್ತಿತ್ತು! ಸುರಿವ ಮಳೆಯೆಲ್ಲ ಹಾಗೆ ವ್ಯರ್ಥವಾಗಿ ಇಳಿದು ಕೊರಕಲು ಕಣಿವೆಗಳಲ್ಲಿ ಹರಿದು ಪಕ್ಕದ ಬಾಂಗ್ಲಾದೇಶದಲ್ಲಿ ಪ್ರವಾಹ ಉಕ್ಕಿಸಿಕೊಂಡು ಹರಿದು ಬಂಗಾಳಕೊಲ್ಲಿ ಪಾಲಾಗುತ್ತಿತ್ತು. ಮಳೆಯ ವಿಚಾರದಲ್ಲಿ ಚಿರಾಪುಂಜಿಯ ನಂತರದ ಸ್ಥಾನದಲ್ಲಿದ್ದ ಆಗುಂಬೆಯಿರುವ ತೀರ್ಥಹಳ್ಳಿ ತಾಲೂಕಿನಿಂದ ಬಂದ ನನ್ನಂತವನಿಗೆ ಇದು ವಿಸ್ಮಯದ ಸಂಗತಿಯಾಗಿತ್ತು. ಹಾಗೆ ನೋಡಿದರೆˌ ದೇಶದಲ್ಲೆ ಅತಿಯಾದ ಮಳೆ ಬೀಳುವ ವಿಷಯದಲ್ಲಿ "ಬೆಳ್ಳಿ ಪದಕ" ವಿಜೇತವೆಂಬ ಸ್ಥಾನ ಮಾನಗೆಟ್ಟುˌ ಆಗುಂಬೆ ಬದಲಿಗೆ ಪಕ್ಕದ ಹೊಸನಗರ ತಾಲೂಕಿನ ಹುಲಿಕಲ್ ಏರಿ ದಶಕದ ಮೇಲಾಗಿದೆ. ಅವ್ಯಾಹತವಾಗಿ ಅಭಿವೃದ್ಧಿಯ ಹೆಸರಿನಲ್ಲಿ ನಡೆದಿರುವ ಪಶ್ಚಿಮಘಟ್ಟಗಳ ವನಸಿರಿಯ ನಿರಂತರ ಕೊಳ್ಳೆಯ ಕಾರಣ ವಾರಾಹಿ-ಮಾಲತಿ ಅವಳಿ ನದಿಗಳು ಹುಟ್ಟುವˌ ಸೀತಾ ನದಿಯ ಪ್ರವಾಹ ಹತ್ತಿರದಲ್ಲೆ ಹರಿದು ಹೋಗುವ ಆಗುಂಬೆಯೂ ಸಹ ಬೇಸಿಗೆಯಲ್ಲಿ ಬಾಯಾರಿ ತ್ರಾಹಿ ತ್ರಾಹಿ ಅನ್ನುವ ಸ್ಥಿತಿ ತಲುಪಿದೆ. ಕರ್ನಾಟಕ ಸರಕಾರವು ಕಳೆದೊಂದು ದಶಕದಿಂದ ಆಗುಂಬೆಯನ್ನೂ ಒಳಗೊಂಡಿರುವ ತೀರ್ಥಹಳ್ಳಿಯನ್ನೂ ಸಹ "ಬರಪೀಡಿತ ತಾಲೂಕು"ಗಳ ಪಟ್ಟಿಯಲ್ಲಿ ಸೇರಿಸಿರೋದು ಮತೀಯ ರಾಜಕರಣದ ಮಲೆತ ಮನಸ್ಥಿತಿಯಲ್ಲಿ ಮೈಮರೆತು ಮಾನಸಿಕ ಅಸ್ವಸ್ಥತೆಯ ಉತ್ತುಂಗಕ್ಕೇರಿರುವ ನಗೆ ನಾಚಿಕೆ ಬಿಟ್ಟು ತಾನರಳಲು ಕೆಸರನ್ನ ಹಬ್ಬಿಸುವುದನ್ನೆ ಕುಲಕಸುಬು ಮಾಡಿಕೊಂಡಿರೋ ನೀಚ ರಾಜಕೀಯ ಪಕ್ಷವೊಂದರ ಬಾಲಬುಡುಕರಾಗಿರೋ ಮಲೆನಾಡಿಗರಿಗೆ ನಾಚಿಕೆಗೇಡಿನ ವಿಷಯ.



ಇದನ್ನೆಲ್ಲ ಕಂಡು ನೋಡಿ ಅನುಭವಿಸಿಯೆ ಇಲ್ಲಿಗೆ ಕಾಲಿಟ್ಟಿದ್ದವನಿಗೆ ಚಿರಾಪುಂಜಿಯೂ ಬರಪೀಡಿತವಾಗಿರೋದನ್ನ ಕಂಡು ವಿಚಿತ್ರ ತೃಪ್ತಿಯಾಯಿತು! ಸದ್ಯ  ನಮ್ಮ ತೀರ್ಥಹಳ್ಳಿಯಷ್ಟೆ ಅಲ್ಲˌ ಈ ವಿಷಯದಲ್ಲಿ ಮೇಘಾಲಯವೂ ಏನೂ ಕಡಿಮೆ ಕೆಟ್ಟಿಲ್ಲ ಅನ್ನೋ ಒಳ ಮನಸಿನ ವಿಕೃತಿ ಹುಟ್ಟಿಸಿರೋ ತೃಪ್ತ ಭಾವದಿಂದ ಒಂದೊಂದಾಗಿ ವಿಷಯ ಪ್ರಸ್ತಾವಿಸಿ ಸಂಬಂಧ ಪಟ್ಟ ಇಲಾಖಾ ಕಾರ್ಯದರ್ಶಿಗಳಿಂದ ವಿವರ ಪಡೆದುˌ ಕಡತಗಳಲ್ಲಿ ತನ್ನ ಸಹಿ ಜ಼ಡಿದು ವಿಲೇವಾರಿ ಮಾಡೋದನ್ನೆ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಕಡೆಯದಾಗಿ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರ ಪ್ರಸ್ತಾವವಾಯಿತು. ಗೃಹ ಕಾರ್ಯದರ್ಶಿಗಳಿಂದ ವಿವರಣೆ ಪಡೆಯುತ್ತಿದ್ದಂತೆ ಏಕಾಏಕಿ ಪುಲೋಂಗ್ ತೀವೃ ಮುನಿಸಿನಿಂದ ಕೋಪದ ಧ್ವನಿಯಲ್ಲಿ ತನ್ನ ಎಣ್ಣೆ ಸುರಿವ ಪುಟ್ಟ ಕಣ್ಣುಗಳೆರಡು ಆಳದೆಲ್ಲೆಲ್ಲೋ ಹೂತು ಹೋದಂತಿದ್ದ-ಮೂಗೆ ನಾಪತ್ತೆಯಾದಂತಿರೋ ಮುಖಾರವಿಂದದ ತುಂಬಾ ಅಸಹನೆಯನ್ನ ಪ್ರಕಟಿಸುತ್ತಾˌ ಅವರ ಸಮಜಾಯಷಿಗಳಿಗೆಲ್ಲಾ ಅಸಮ್ಮತಿಯ ಧಾಟಿಯಲ್ಲಿ ಹರುಕು ಮುರುಕು ಹಿಂದಿಯಲ್ಲಿ ಉಗಿದು ಉಪ್ಪಿನಕಾಯಿ ಹಾಕಲಾರಂಭಿಸಿದ! ನಾಟಕೀಯವಾಗಿ ಹೀಗೆ ಸನ್ನಿವೇಶ ಬದಲಾದದ್ದೆˌ ಏನೇನೋ ತುರ್ತಿನ ಕ್ರಮದ ನಿರ್ದೇಶನಗಳನ್ನ ದಯಪಾಲಿಸಿˌ ಸಭೆಯ ಅಜೆಂಡಾದಲ್ಲಿ ಕಟ್ಟಕಡೆಯದಾಗಿದ್ದ ಅಧಿಕಾರಿಗಳ ಭಡ್ತಿಯ ವಿಷಯ ಮಂಡನೆಯನ್ನ ಮುಂದೂಡಿ ಮುಖ್ಯಮಂತ್ರಿ ಅಸಮಧಾನದ ಮೋರೆ ಹೊತ್ತು ಸಂಪುಟಸಭೆಯನ್ನ ಮೊಟಕುಗೊಳಿಸಿ ಮನಯತ್ತ ಹೊರಟ.



ಏಕೆ ಹೀಗೆ ತರಾತುರಿಯಲ್ಲಿ ಸಭೆ ಮುಗಿಯಿತು ಅನ್ನುವ ವಿಷಯ ಅರಿವಾಗದೆ ತಲೆ ಕೆರೆದುಕೊಳ್ಳುವ ಸರದಿ ಈಗ ನನ್ನದಾಗಿತ್ತು. ತನ್ನ ಭಡ್ತಿಯ ವಿಚಾರ ಇವತ್ತು ಇತ್ಯರ್ಥವಾಗಲಿದೆ ಎಂದು ಭಾವಿಸಿದ್ದ ಇತ್ತಲೆ ನಾಗ ಮತ್ತವನ ನಾಲ್ವರು ಬ್ಯಾಚ್ಮೇಟ್ ಸಹುದ್ಯೋಗಿ ಅಧಿಕಾರಿಗಳಿಗೆ ಈ ಪ್ರಹಸನದಿಂದ ಸಿಕ್ಕಾಪಟ್ಟೆ ನಿರಾಸೆಯಾಯಿತು. ಆದರೂ ದೇವರೊಂದಿಗೆ ಸೇರಿ ಪೂಜಾರಿಯೂ ಒಲಿದು ವರ ದಯಪಾಲಿಸುವ ತನಕ ತಾಳಿಕೊಳ್ಳದೆ ವಿಧಿ ಇಲ್ಲದಾಗಿರೋದರಿಂದˌ ಅದೆಷ್ಟೆ ಅತೃಪ್ತಿಯಾದರೂ ಮುಚ್ಚಿಕೊಂಡು ಬಲವಂತದ ಕೃತಕ ಮುಗುಳುನಗುವನ್ನ ಮುಖಾರವಿಂದದ ಮೇಲಂಟಿಸಿಕೊಂಡು ಮುಚ್ಚಿಕೊಂಡು ಅವರೆಲ್ಲರೂ ಸುಮ್ಮನಾದರು. ಅಂತೂ ಇಂತೂ ವೃತ್ತಿ ಬದುಕಿನ ಮೊತ್ತಮೊದಲ ಸಂಪುಟಸಭೆಯ ಅನುಭವ ಗಳಿಸಿˌ ಹೊರಗೆ ಕಾದುಕೊಂಡು ನಿಂತಿದ್ದ ನನ್ನ ಆಪ್ತ ಕಾರ್ಯದರ್ಶಿಗೆ ನಮ್ಮ ಕಛೇರಿಯಿಂದ ತರಿಸಲಾಗಿದ್ದ ಕಡತಗಳನ್ನೆಲ್ಲ ಜತನದಿಂದ ಹಿಂದೆ ಹೊರೆಸಿಕೊಂಡು ಬರಲು ಆಜ್ಞಾಪಿಸಿ ಮರಳಿ ನನ್ನ ಕಛೇರಿಗೆ ಹಿಂದಿರುಗಿ ಬಂದು ಕುರ್ಚಿಯಲ್ಲಿ ಕುಸಿದು ಕುಕ್ಕರಬಡಿದೆ.







ಇಂದಿನ ಸಂಪುಟಸಭೆಯಲ್ಲಿ ಒಬ್ಬ ಅಧಿಕಾರಿಯಾಗಿ ನನ್ನದೇನೂ ಪ್ರಾಮುಖ್ಯತೆ ಇಲ್ಲದಿದ್ದುದರಿಂದ ಸಭೆಯಲ್ಲಿ ನಾನು ಇದ್ದೆನೋ? ಇರಲಿಲ್ಲವೋ! ಎಂಬಂತೆ ಹಾಜರಿದ್ದು ಹೊರಬಂದಿದ್ದೆನಾದರೂˌ ಶಿಸ್ತಿನ ಶಿಷ್ಟಾಚಾರದೊಂದಿಗೆ ಶುರುವಾಗಿ ತಕ್ಕಮಟ್ಟಿಗೆ ಅಚ್ಚುಕಟ್ಟಾಗಿಯೆ ಸರಿಸುಮಾರು ಒಂದೂವರೆ ತಾಸಿನ ತನಕ ನಡೆದಿದ್ದ ಕ್ಯಾಬಿನೆಟ್ ಮೀಟಿಂಗ್ ಇದ್ದಕ್ಕಿದ್ದಂತೆ ಗಂಭೀರ ಸ್ವರೂಪ ಪಡೆದು ದಢೀರನೆ ಮೊಟಕುಗೊಂಡು ಅನಪೇಕ್ಷಿತ ರೀತಿಯಲ್ಲಿ ಕೊನೆಗೊಂಡದ್ದಾದರೂ ಅದ್ಯಾಕೆ? ಅನ್ನುವ ಪುಕುಳಿ-ಬಾಯಿ ಅರ್ಥವಾಗದೆ ಗೊಂದಲದಲ್ಲಿ ನಾನಿದ್ದೆ. ಹೊರಗೆ ಬಿಟ್ಟು ಬಿಟ್ಟು ಮಳೆ ಜಿನುಗುತ್ತಿದ್ದರೂ ಸಹˌ ಒಂಥರಾ ಸೆಖೆಯ ವಾತಾವರಣ ಆವರಿಸಿಕೊಂಡಂತಿತ್ತು. ಬಹುಶಃ ಒಂದೂವರೆ ಫರ್ಲಾಂಗ್ ದೂರದ ಸಚಿವಾಲಯದಿಂದ ನನ್ನ ಕಛೇರಿ ನಡುವಿನ ದೂರವನ್ನ ನಡೆದುಕೊಂಡೆ ಕ್ರಮಿಸಿ ಬಂದಿದ್ದರಿಂದಲಿದ್ದಿರಲಿಕ್ಕೂ ಸಾಕು; ನನಗಷ್ಟೆ ಸೆಖೆಯ ಧಗೆ ಅನುಭವಕ್ಕೆ ಬರುತ್ತಿರೋದು. ದೂರ ನಿಯಂತ್ರಕದಿಂದ ಹವಾನಿಯಂತ್ರಕದ ಶೀತಲತೆಯ ಮಟ್ಟವನ್ನ ಮತ್ತೆರಡು ಡಿಗ್ರಿ ಕೂತಲ್ಲಿಯೆ ಕುಗ್ಗಿಸಿ ನನ್ನ ತಿರುಗು ಕುರ್ಚಿಯ ಹೆಡ್ ರೆಸ್ಟಿಗೆ ತಲೆಯಾನಿಸಿ ಸೂರು ದಿಟ್ಟಿಸುತ್ತಾ ಆಲೋಚಿಸಲಾರಂಭಿಸಿದೆ. ಎರಡು ಟನ್ನಿನ ಏಸಿ ಅಳವಡಿಸಿದ್ದರೂ ಸಹ ಎರಡೆರಡು ಫ್ಯಾನುಗಳು ಹಾಸ್ಯಾಸ್ಪದವಾಗಿ ಸೂರಿಗೆ ನೇಣು ಹಾಕಿಕೊಂಡು ನೇತಾಡುತ್ತಿದ್ದದ್ದನ್ನ ಕಂಡು ನಗು ಬಂತು.




ಹಾಗೆ ನೋಡಿದರೆˌ ಆದಾಯ ಕ್ರೋಢಿಕರಣದ ದೃಷ್ಟಿಯಿಂದ ಅಷ್ಟಿಷ್ಟು ಆಧುನಿಕ ಹಾಗೂ ನವ ಉದ್ದಿಮೆಗಳಿಗೆ ಮುಕ್ತವಾಗಿರುವ ಅಸ್ಸಾಂ ಹೊರತು ಪಡಿಸಿˌ ಈ ಈಶಾನ್ಯ ಭಾರತದ ರಾಜ್ಯಗಳಿಂದ ಕೇಂದ್ರದ ಖಜಾನೆಗೆ ಸಲ್ಲುವ ಕಪ್ಪ ನಗಣ್ಯ ಅನ್ನುವ ಮೊತ್ತಗಳಲ್ಲಿದೆ. ಬದಲಿಗೆ ಭಾರತ ಸರಕಾರವೆ ವಿವಿಧ ಅನುದಾನಗಳನ್ನ ಒದಗಿಸುವ ನೆಪದಲ್ಲಿ ಸಿಕ್ಕಿಂ ಸಹಿತವಾದ ಉಳಿದ ಎಂಟು ರಾಜ್ಯಗಳ ಅಗತ್ಯಗಳಿಗೆ ಅನುಸಾರವಾಗಿ ಅವುಗಳ ಆರ್ಥಿಕ ಆರೋಗ್ಯದ ಹಿತದ ಕಾಳಜಿ ವಹಿಸಿದೆ ಎಂದರೂ ತಪ್ಪಿಲ್ಲ. ಅದರಲ್ಲೂ ಸಿಕ್ಕಿಂ ರಾಜ್ಯವನ್ನ ವಿಶೇಷ ವಿನಾಯತಿ ಕೊಟ್ಟು ಆದಾಯ ತೆರಿಗೆ ವ್ಯಾಪ್ತಿಯಿಂದಲೂ ಹೊರಗಿಟ್ಟುˌ ಅಲ್ಲಿಂದ ಸಂಗ್ರಹವಾಗಬಹುದಾದ ನಾಲ್ಕಾಣೆ ತೆರಿಗೆಯಿಂದಲೂ ಸ್ಥಳಿಯರನ್ನ ವಿಮೋಚಿತರನ್ನಾಗಿರಿಸಲಾಗಿದೆ. ಭಾರತ ಸರಕಾರ ಅಲ್ಲಿನ ಎಂಟೂ ರಾಜ್ಯಗಳಿಗೆ ಒದಗಿಸುವ ಆರ್ಥಿಕ ಅನುದಾನದ ದೊಡ್ಡಪಾಲು ಸಲ್ಲುವುದು ಅಸ್ಸಾಂ ರಾಜ್ಯಕ್ಕೆˌ ಅಸ್ಸಾಮಿಗೆ ಸಂದಾಯವಾಗುವ ಮೊತ್ತದ ಮೂರರಲ್ಲಿ ಎರಡು ಭಾಗ ಪಡೆಯುವ ಅರುಣಾಚಲ ಪ್ರದೇಶ ಹಾಗೂ ಅರ್ಧದಷ್ಟು ಪಡೆಯುವ ಮೇಘಾಲಯ ಕ್ರಮವಾಗಿ ಮುಂದಿನೆರಡು ಸ್ಥಾನಗಳಲ್ಲಿ ರಾರಾಜಿಸುತ್ತಿವೆ. ಇದು ಮೂರು ಕಾಸು ತೆರಿಗೆಯನ್ನೂ ನ್ಯಾಯವಾಗಿ ಸಂಗ್ರಹಿಸದ ರಾಜ್ಯಗಳ ಆರು ಕಾಸಿನ ಅನುದಾನದ ಆದಾಯದಿಂದಲೆ ಸ್ಥಳಿಯ ಆರ್ಥಿಕತೆಯ ಬೆನ್ನೆಲುಬು ನೆಟ್ಟಗೆ ನಿಂತಿರುವ ಕಥೆ.



ಕರ್ನಾಟಕ ರಾಜ್ಯದ ಬೆಂಗಳೂರು ಮಹಾನಗರ ಪಾಲಿಕೆಯೊಂದೆ ಸರಿಸುಮಾರು ಹದಿನೆಂಟು ಸಾವಿರ ಕೋಟಿ ವಾರ್ಷಿಕ ಬಜೆ಼ಟ್ ಮಂಡಿಸುವಾಗˌ ಹೆಚ್ಚು-ಕಡಿಮೆ ಅದೆ ಗಾತ್ರದ ಬಜೆ಼ಟ್ ಹೊಂದಿರುವ ಮೇಘಾಲಯ ಅಧಿಕಾರಿ ವರ್ಗದವರಲ್ಲಿˌ ಅದರಲ್ಲೂ ವಿಶೇಷವಾಗಿ ಹೊರರಾಜ್ಯಗಳ ಮೂಲದ ಉನ್ನತಾಧಿಕಾರಿಗಳಿಗೆ ಹೇಳಿಕೊಳ್ಳುವಂತಹ ರೋಮಾಂಚನವನ್ನೇನನ್ನೂ ಮೂಡಿಸುತ್ತಿರಲಿಲ್ಲ. ಇಲ್ಲಿನ ಎಂಟೂ ರಾಜ್ಯಗಳ ಕೇಡರಿನಲ್ಲಿ ಬಂದು ಅಧಿಕಾರ ವಹಿಸಿಕೊಳ್ಳುವ ಪ್ರತಿಯೊಬ್ಬ ಕೇಂದ್ರ ಆಡಳಿತ ಸೇವೆಯ ಅಧಿಕಾರಿಯೂ ತನ್ನ ಎರಡೂ ಚಿಲ್ಲರೆ ವರ್ಷಗಳ ಪ್ರೊಬೆಷನರಿ ಅವಧಿ ಹಾಗೂ ಆರಂಭದ ಪದನಾಮದಿಂದೊದಗುವ ಹುದ್ದೆಯಲ್ಲೂ ಬಹುತೇಕ ಅಷ್ಟೆ ಅವಧಿಯ ಅಧಿಕಾರ ಚಲಾಯಿಸಿ ಆದಷ್ಟು ಬೇಗ ತನ್ನ ಮಾತೃ ರಾಜ್ಯಕ್ಕೆ ಎರವಲು ಸೇವೆಯ ಮೇಲೆ ಹೋಗುವ ಅವಕಾಶವನ್ನೆ ಹಸಿದ ಹಿಂಸೃ ಮೃಗದಂತೆ ಹೊಂಚು ಹಾಕುತ್ತಾ ಕಾಯುತ್ತಿರುತ್ತಾನೆ. ಅದರಲ್ಲೂˌ ತನ್ನ ಸಂಗಾತಿಯಾದ ಗಂಡನೋ/ಹೆಂಡತಿಯೋ ಇನ್ಯಾವುದಾದರೂ ದೊಡ್ಡ ರಾಜ್ಯಗಳ ಕೇಡರಿನಲ್ಲಿ ಅಧಿಕಾರಸ್ಥರಾಗಿದ್ದರೆˌ ನಿಗದಿತ ಅವಧಿಯ ಸ್ಥಳಿಯ ಸೇವೆಯ ನಂತರ ಅದನ್ನೆ ನೆಪ ಮಾಡಿಕೊಂಡು ಬೇರೆ ರಾಜ್ಯಗಳಿಗೆ ಬದಲಾಯಿಸಿಕೊಂಡು ವರ್ಗವಾಗುವುದು ಅಂತವರಿಗೆ ಅತಿ ಸುಲಭವಾಗುತ್ತದೆ.




ಹಾಗಂತˌ ಐದು ವರ್ಷಗಳ ನಂತರ ಹೀಗೆ ತವರಿಗೆ ಹೋಗಿದ್ದ ತಂಗಿಯಾಗಲಿ/ತವರಿಗೆ ಹೋದ ತಮ್ಮನಾಗಲಿ ಇಲ್ಲಿನ ಹೆಸರಲ್ಲಿ ಅಲ್ಲ್ಯಾವುದೋ ಒಂದು "ಸಮೃದ್ಧ ರಾಜ್ಯ"ದ ಅನ್ನವುಂಡು ಒಂದೆರಡು ದಶಕಗಳ ಸೇವೆ ಮುಗಿಸಿ ಮರಳಿ ಮಣ್ಣಿಗೆ ಖುಷಿ ಖುಷಿಯಾಗಿ ಬಂದು ದೇಶಸೇವೆ ಮಾಡ್ತಾರೆ ಅಂತ ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು! ಎರವಲು ಸೇವೆಯ ಗರಿಷ್ಠ ಅವಧಿ ಮುಗಿದ ನಂತರ ಸೇವಾ ಹಿರಿತನದ ಆಧಾರದ ಮೇಲೆ ಮಾತೃ ರಾಜ್ಯದ ಕೇಡರಿನಡಿ ಅವರು ಬಂದು ಗೇಯಬೇಕಾದರೆ ಹಣಕಾಸು ಕಾರ್ಯದರ್ಶಿ-ರಾಜ್ಯ ಪೊಲೀಸ್ ವರಿಷ್ಠ-ಕಂದಾಯ ಕಾರ್ಯದರ್ಶಿ-ಕೃಷಿ ಕಾರ್ಯದರ್ಶಿ-ಕೈಗಾರಿಕಾ ಕಾರ್ಯದರ್ಶಿ-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ-ಸಹ ಮುಖ್ಯ ಕಾರ್ಯದರ್ಶಿ-ಮುಖ್ಯಕಾರ್ಯದರ್ಶಿಯಂತಹ ಉನ್ನತ ಹುದ್ದೆಗಳು ದೊರಕುವಂತಿದ್ದ ಪಕ್ಷದಲ್ಲಿ ಮಾತ್ರ ಅದಕ್ಕೆ ಅಧಿಕಾರಿ ವರ್ಗ ಆದ್ಯತೆ ನೀಡುತ್ತದೆ. ಇಲ್ಲದಿದ್ದಲ್ಲಿˌ ಕೇಂದ್ರ ಸರಕಾರಿ ಎರವಲು ಸೇವೆಯ ಪಿಳ್ಳೆನೆವ ಹೂಡಿಕೊಂಡು ನೇರ ರಾಷ್ಟ್ರ ರಾಜಧಾನಿಗೋ ಇಲ್ಲವೆ ಕೇಂದ್ರ-ರಾಜ್ಯಗಳ ನಡುವಿನ ಕೊಂಡಿಯಾದ ಅನೇಕ ಆಯೋಗ-ಮಂಡಳಿಗಳ ಆಯಕಟ್ಟಿನ ಸ್ಥಾನ-ಮಾನಗಳಿಗೋ ಹೇಗಾದರೂ ಸರಿ ಕಾಡಿ-ಬೇಡಿ-ಖರೀದಿಸಿ ಗಿಟ್ಟಿಸಿ ಅಮರಿಕೊಂಡು ಬೆಂಗಳೂರು-ಹೈದರಾಬಾದು-ಅಹಮದಾಬಾದು-ಲಕ್ನೋ-ಪಾಟ್ನಾ-ಕೊಲ್ಕತಾ-ಮುಂಬೈ-ಪಣಜಿ-ಚೆನ್ನೈಗಳಂತಹ ಸಿರಿವಂತ ರಾಜ್ಯಗಳ ರಾಜಧಾನಿಗಳಿಗೆ ಪದನಾಮದ ಹುದ್ದೆ ಹೊಂದಿ ಮತ್ತಷ್ಟು ಸಮೃದ್ಧವಾಗಿ ಹೊಟ್ಟೆ ಬಿರಿಯುವಂತೆ ಮೇಯಲು ಮರು ವಲಸೆ ಹೋಗುವುದಂತೂ ಇದ್ದೆ ಇದೆ.



ಅಷ್ಟರಲ್ಲಿˌ ದೇಹಕ್ಕೆ ವಯಸ್ಸಾಗಿ ಪ್ರಾಯ ಸಂದ ಕಾರಣ; ಸೇವಾ ನಿವೃತ್ತಿ ಸಿಕ್ಕಿˌ ಕೇಂದ್ರದ ಇನ್ಯಾವುದಾದರೂ ಯೋಜನಾ ಅನುಷ್ಠಾನದ ಆಯಕಟ್ಟಿನ ಸ್ಥಾನಮಾನಗಳಲ್ಲಿ ಮತ್ತೊಂದು ದಶಕ ಮೆರೆದಾಡಿˌ ಕಾಸು ಕೊಳ್ಳೆ ಹೊಡೆಯುವ ಸದಾವಕಾಶವಂತೂ ಇದ್ದೆ ಇರುತ್ತದೆ. ಈ ಎಲ್ಲಾ ಕಾರಣಗಳಿಂದ ಸಣ್ಣ-ಪುಟ್ಟ ರಾಜ್ಯಗಳ ಕೇಡರ್ ಗಳಿಸುವ ಕೇಂದ್ರ ಆಡಳಿತ ಸೇವೆಯ ಅಧಿಕಾರಿಗಳ ಜೀವನವೆನ್ನೋದು ಅದೃಷ್ಟ ಕೆಟ್ಟು ಅನಿರೀಕ್ಷಿತ ಅಡೆತಡೆಗಳು ಎದುರಾಗದ ಹೊರತು ಒಂಥರಾ ಸುಖದ ಸುಪ್ಪೊತ್ತಿಗೆಯಲ್ಲದೆ ಮತ್ತಿನ್ನೇನೂ ಆಗಿರಲ್ಲ. ಒಟ್ಟಿನಲ್ಲಿ 'ಹುಟ್ಟಿದರೆ ಸಣ್ಣ ರಾಜ್ಯಗಳ ಕೇಡರಿನ ಅಧಿಕಾರಿಗಳಾಗುವ ಹುಟ್ಟು ಮಚ್ಚೆ ಹೊತ್ತು ಹುಟ್ಟಬೇಕು' ಅನ್ನುವ ಪೂರ್ ಜೋಕೊಂದು ಅಧಿಕಾರಿ ವರ್ಗದಲ್ಲಿ ಚಾಲ್ತಿಯಲ್ಲಿದೆ. ಈ ಸಣ್ಣ ರಾಜ್ಯಗಳ ಕೇಡರ್ ಅನ್ನೋದೊಂತರಾˌ ಚಿನ್ನದ ಮೊಟ್ಟೆ ಇಡುವ ಕೋಳಿ. ಕಡಿಮೆ ಜವಾಬ್ದಾರಿ-ದೊಡ್ಡ ಸಂಬಳ-ಐಶಾರಾಮದ ಬದುಕು-ಕೊಳ್ಳೆ ಹೊಡೆಯಲೊಂದಷ್ಟು ಹಡಬಿಟ್ಟಿ ಜನರ ಕಾಸು. ಇಂತವರ ಬಾಳು ದಷ್ಟಪುಷ್ಟವಾಗಿ ಬೆಳಗಲು ಇನ್ನೇನು ತಾನೆ ಅಪ್ಪಂತ ಕಾರಣ ಬೇಕು?




ಕೇಂದ್ರ ಸರಕಾರ ಸಿಕ್ಕಿಂ ಸಹಿತ ಈಶಾನ್ಯದ ಏಳೂ ರಾಜ್ಯಗಳ ಹಿತಾಸಕ್ತಿ ಕಾಪಾಡುವ ಹಿತದೃಷ್ಟಿಯಿಂದ ಐದು ದಶಕಗಳ ಹಿಂದೆಯೆˌ ಆ ರಾಜ್ಯಗಳನ್ನ ರಚಿಸುವಾಗ "ಈಶಾನ್ಯ ರಾಜ್ಯಗಳ ಪರಿಷತ್ತು" ಅನ್ನುವ ಆ ರಾಜ್ಯಗಳನ್ನ ಕೇಂದ್ರದೊಂದಿಗೆ ಆಡಳಿತಾತ್ಮಕವಾಗಿ ಬೆಸೆಯುವ ಸಾಂವಿಧಾನಿಕ ಸಂಸ್ಥೆಯೊಂದನ್ನ ರಚಿಸಿದೆ. ನಮ್ಮ ಶಿಲ್ಲಾಂಗಿನಲ್ಲೆˌ ನನ್ನ ಕಛೇರಿಯಿಂದ ಕೂಗಳತೆಯ ದೂರದಲ್ಲಿ ಅದರ ಮುಖ್ಯ ಕಛೇರಿ ಇದೆ. ಈ ಎಂಟೂ ರಾಜ್ಯಗಳ ರಾಜಕೀಯ ರಗಳೆಗಳನ್ನ ಪರಿಶೀಲಿಸಿ ಬಗೆಹರಿಸುವ-ಎಂಟೂ ರಾಜ್ಯಗಳ ಆರ್ಥಿಕ ಅಭ್ಯುದಯಕ್ಕೆ ಒತ್ತು ಕೊಟ್ಟು ಸೂಕ್ತ ಯೋಜನೆಗಳನ್ನ ರೂಪಿಸಿ ಅದಕ್ಕೆ ಬೇಕಿರುವ ಬಂಡವಾಳವನ್ನ ಕೇಂದ್ರ ಸರಕಾರದ ಅನುದಾನವನ್ನಾಗಿ ದಯಪಾಲಿಸೋದು ಕೇಂದ್ರ ಗೃಹಮಂತ್ರಿಯ ಅಧ್ಯಕ್ಷತೆಯಲ್ಲಿ ನಡೆಯುವ ಈ ಪರಿಷತ್ತಿನ ಮೂಲ ಜವಬ್ದಾರಿ. ವಾಸ್ತವದಲ್ಲಿ ಇದೊಂತರ ಈ ವಲಯಕ್ಕೂ ದೆಹಲಿಗೂ ನಡುವಿನ ಸ್ನೇಹ ಸೇತುವೆಯಂತಹ ಕೊಂಡಿಯಾಗಬೇಕಿತ್ತು. 



ಜೊತೆಗೆ ಆಂತರಿಕ ಭದ್ರತೆಯ ಬಗ್ಗೆಯೂ ಈ ಪರಿಷತ್ತು ತಲೆಕೆಡಿಸಿಕೊಳ್ಳುವುದರಿಂದ ಆಗಾಗ ಸಂಬಂಧಪಟ್ಟ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನಾಗಲಿ-ಅರಕ್ಷಕ ಅಧೀಕ್ಷಕರನ್ನಾಗಲಿ ಸ್ಥಳಿಯ ರಾಜ್ಯ ಸರಕಾರಗಳ ಘನ ಗಮನಕ್ಕೂ ತಾರದೆ ಸೂಚನೆ ನೀಡಿ ಶಿಲ್ಲಾಂಗಿನ ಕೇಂದ್ರ ಕಛೇರಿಗೆ ಕರೆಸಿಕೊಂಡು ವಿವರಣೆ ಪಡೆಯುವ ಅಧಿಕಾರ ಈ ಪರಿಷತ್ತಿನ ಮುಖ್ಯಾಧಿಕಾರಿಯಾಗಿರೋ ಭಾರತೀಯ ಆಡಳಿತ ಸೇವೆಯ ಅಧಿಕಾರಿ ವರ್ಗಗಳಿಗಿದೆ. ಪರಿಸ್ಥಿತಿಯ ವ್ಯಂಗ್ಯವೇನೆಂದರೆˌ ಕೇಂದ್ರದ ಎರವಲು ಸೇವೆಗೆ ನಿಯುಕ್ತನಾಗಿ ಹೋಗಿ ಅಲ್ಲಿಂದ ಇದೆ ಕೌನ್ಸಿಲ್ಲಿಗೆ "ಹೋದೆಯ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ" ಎಂಬಂತೆ ಹೀಗೆ ಹೋಗಿ ಹಾಗೆ ಮರು ನಿಯುಕ್ತರಾಗಿ ಬರುವ ಇದೆ ರಾಜ್ಯದ ಕೇಡರಿನ ಅಧಿಕಾರಿಗಳುˌ ಕೇಂದ್ರ ಸರಕಾರದ ಕುಮ್ಮಕ್ಕಿನಿಂದ ತಮ್ಮದೆ ಮಾತೃ ರಾಜ್ಯಗಳ ಸರಕಾರಗಳಿಗೆ ನಾನಾ ವಿಧದ ಸಂಕಷ್ಟ ತಂದಿಟ್ಟು "ಕುಲಕ್ಕೆ ಮೂಲ ಕೊಡಲಿ ಕಾವು"ಗಳಂತೆ ಪೀಡಿಸುವ ಕಳ್ಳಾಟ ಆಡುವುದೂ ಇದೆ.



ಇದೆಲ್ಲ ಸಾಲದು ಅಂತˌ ರಾಜಭವನಗಳೆಂಬ ಸರಕಾರಿ ಪಂಚತಾರಾ ರೆಸಾರ್ಟುಗಳಲ್ಲಿˌ ಕೇಂದ್ರದ ಆಡಳಿತ ಪಕ್ಷದ ಗಂಜಿಕೇಂದ್ರದ ಗಿರಾಕಿಗಳಾಗಿ ಅಗತ್ಯವೆ ಇಲ್ಲದಿದ್ದರೂ ಸಹ; ಆದಷ್ಟು ಕಾಲ ಜನರ ಕಾಸಲ್ಲಿ ಮೋಜು-ಮಸ್ತಿ ಮಾಡಲು ಅದೆಲ್ಲಿಂದಲೋ ಬಂದು ಒಕ್ಕರಿಸುವ ರಾಜ್ಯಪಾಲನೆಂಬ ಪೀಡೆಯನ್ನ ಕುಡಿಸಿ-ತಿನ್ನಿಸಿ-ಕೊಬ್ಬಿಸಿˌ ಮತ್ತವನಿಂದಲೆ ಸಮಯ ಸಿಕ್ಕಾಗಲೆಲ್ಲಾ ತಿವಿಸಿಕೊಳ್ಳುವ ಹಿಂಸೆ ಬೇರೆ. ಹೀಗೆˌ ಇಂತಹ ರಾಜ್ಯಗಳ ಮುನಸಿಪಾಲಿಟಿ ಮಟ್ಟದ ಸರಕಾರಗಳನ್ನ ಮುನ್ನಡೆಸುವುದು-ಇಲ್ಲಿಗೆ ಒದಗಿ ಬರುವ ಅನುದಾನಗಳಲ್ಲಿ ಹೊಂಚು ಹಾಕಿ ಸಕಲೆಂಟು ಹಿಂಸೆ ಅನುಭವಿಸಿಯೂ ಕಾಸು ಕೊಳ್ಳೆ ಹೊಡೆಯುವುದು ಸ್ಥಳಿಯ ರಾಜಕಾರಣಕ್ಕೆ ಎದುರಾಗುವ ಒಂದು ದೊಡ್ಡ ಸವಾಲು. ಅವನ್ನ ಸಾಧಿಸಲು ಶಕ್ತರಾದ ಜಗಭಂಡರಷ್ಟೆ ಇಂತಲ್ಲಿ ರಾಜಕಾರಣ ಮಾಡಿ ಯಶಸ್ವಿ ಆಡಳಿತಗಾರರಾಗಲು ಸಾಧ್ಯ.






ಮೇಲ್ನೊಟಕ್ಕೆ ಇನ್ಯಾವುದೆ ಸಂಗತಿಗಳಿಗೆ ಥಳುಕು ಹಾಕದೆ ನೋಡಿದರೆˌ ಜನ ನಿಬಿಡತೆಯ ಹೋಲಿಕೆಯಲ್ಲಿ ಹಾಗೂ ಭೂ ವ್ಯಾಪ್ತಿಯ ಗಾತ್ರದಲ್ಲಿ ಸಾಕಷ್ಟು ವಿಶಾಲವಾಗಿರುವ ದಕ್ಷಿಣ ಹಾಗೂ ಉತ್ತರ ಭಾರತದ ಪ್ರಮುಖ ನಗರಗಳ ಜನಸಂಖ್ಯೆಯ ಮುಂದೆ ನಗಣ್ಯವೆನ್ನುವಂತಿರುವ - ದೇಶದ ಆದಾಯದ ಖಾತೆಗೆ ಕನಿಷ್ಠ ಕಾಣಿಕೆ ಸಲ್ಲುವ - ಭೂ ವ್ಯಾಪ್ತಿಯ ಗಾತ್ರದಲ್ಲೂ ಕಿರಿದಾಗಿರುವ ಈಶಾನ್ಯದ ಚಿಲ್ಟಾರಿ-ಪುಲ್ಟಾರಿ ರಾಜ್ಯಗಳು ದೇಶದ ಆರ್ಥಿಕತೆಗೆ ಒಂಥರಾ ಹೊರೆ ಅನ್ನಿಸಬಹುದು. ದಕ್ಷಿಣದ ಕೇರಳ-ಗೋವಾ-ಪಾಂಡಿಚೆರಿˌ ಉತ್ತರದ ಹರಿಯಾಣ-ಪಂಜಾಬ್ˌ ಪೂರ್ವೋತ್ತರದ ಎಂಟು ತಥಾಕಥಿತ "ರಾಜ್ಯ"ಗಳಿಗಿಂತ ಗಾತ್ರದಲ್ಲಿ ಗುಜರಾತಿನ ಕಛ್ "ಜಿಲ್ಲೆ"ಯೊಂದೆ ಹೆಚ್ಚು ವಿಸ್ತಾರವಾಗಿದೆ. ಹಾಗಂತ ಗಾತ್ರದಲ್ಲಿ ನಗಣ್ಯ - ಆದಾಯ ಅಲ್ಪ ಅನ್ನುವ ರೊಳ್ಳೆ ತೆಗೆದು ಇವ್ಯಾವುವನ್ನೂ ಕಡೆಗಣಿಸುವಂತಿಲ್ಲ. ಹೊರ ನೋಟಕ್ಕೆ ಕಾಣಿಸುವಷ್ಟು ಇಲ್ಲಿನ ವಿಷಯ ಸರಳವಾಗಿಲ್ಲ. ಭಾರತದ ಇನ್ನಿತರ ಭೂಭಾಗವನ್ನು "ಮೈನ್ ಲ್ಯಾಂಡ್" ಅಂದರೆ ಮುಖ್ಯಭೂಮಿ ಅಂತಲೆ ಕರೆಯುವˌ ಈ ಪ್ರತ್ಯೇಕತೆಯ ಸುಶುಪ್ತ ಮನಸ್ಥಿತಿ ಹೊಂದಿರುವವರದ್ದೆ ಬಹುಸಂಖ್ಯೆಯಿರುವ ಪೂರ್ವೋತ್ತರದ ಚಿಕ್ಕ-ಪುಟ್ಟ ರಾಜ್ಯಗಳನ್ನ ಅದೆಷ್ಟೆ ಕಷ್ಟವಾದರೂ "ಸಾಕುವುದು" ಈ ಮೈನ್ ಲ್ಯಾಂಡ್ ಭಾರತೀಯರಿಗೆ ಅನಿವಾರ್ಯ ಕರ್ಮ. ದೇಶದ ಭದ್ರತೆಯ ದೀರ್ಘಕಾಲೀನ ಆಯುರಾರೋಗ್ಯದ ಸ್ಥಿರತೆಯನ್ನ ಕಾಪಾಡಿಕೊಳ್ಳಲು ಹಾಗೂ ದೇಶದ ಇನ್ನುಳಿದ ಭಾಗಗಳನ್ನ ಪರಕೀಯ ಪ್ರಭಾವದಿಂದ ಮುಕ್ತವಾಗಿಟ್ಟುಕೊಳ್ಳಲು ಈ ಕಿರು ರಾಜ್ಯಗಳು ಯಾವುದೆ ಕಿಡಿಗೇಡಿ ವಿದೇಶಿ ಶಕ್ತಿಗಳ ಕೈಗೊಂಬೆಗಳಾಗದಂತೆ ನಮ್ಮ ಬೆರಳ ಇಷಾರೆಯಲ್ಲೆ ಅವುಗಳ ಹಣೆಬರಹ ನಿರ್ಧಾರವಾಗುವಂತಹ ವಾತಾವರಣ "ನಿರ್ಮಿಸುವುದು" ಅವರಿಗಿಂತ ನಮ್ಮ ಹಿತದೃಷ್ಟಿಗೇನೆ ಹೆಚ್ಚು ಪೂರಕ. 



ಹಾಗೇನಾದರೂˌ ಆ ರಾಜ್ಯಗಳನ್ನ ಪರಪುಟ್ಟರಂತೆ ಕಂಡು-ಅವುಗಳ ಅಭಿವೃದ್ಧಿಗೆ ದೇಣಿಗೆ ನೀಡದೆ ಕಡೆಗಣಿಸಿದರೆ; ಪರಿಸ್ಥಿತಿ ಎಲ್ಲಾದರೂ ಹದಗೆಟ್ಟು ತಾರತಮ್ಯದ ನೆಪ ಒಡ್ಡಿ ಭಾರತೀಯ ಗಣರಾಜ್ಯದಿಂದ ಬೇರ್ಪಟ್ಟು ಅವೇನಾದರೂ ಸ್ವತಂತ್ರಗೊಂಡರೆˌ ಭಾರತ ವಿರೋಧಿಗಳಾದ ಪ್ರಬಲ ವಿದೇಶಿ ಸರಕಾರಗಳು ಆರ್ಥಿಕ-ಸಾಮರಿಕ-ಸಾಮಾಜಿಕ ಸಹಾಯ ಹಸ್ತ ಚಾಚುವ ಪಿಳ್ಳೆನೆವ ಹೂಡಿಕೊಂಡು ಅಲ್ಲಿ ಶಾಶ್ವತವಾಗಿ ತಮ್ಮ ಝ಼ಂಡಾ ಊರಿ ಭಾರತದ ಹಿತಕ್ಕೆ ಶಾಶ್ವತವಾಗಿ ಚುಚ್ಚುವ ಮಗ್ಗುಲ ಕಾಸರ್ಕನ ಮುಳ್ಳಾಗುತ್ತವೆ. ಹಾಗೆ ನೀಡಲಾಗುವ ಅನುದಾನಗಳು ಸಹ ಪುಕ್ಕಟೆಯಾಗಿರದೆˌ ಈಗ ಸಹಾಯ ಮಾಡುವ ಸೋಗು ಹಾಕಿಕೊಂಡು ಬಂದಿದ್ದರೂ ಉಪಾಯವಾಗಿ ಅಮೇರಿಕಾ ಉಕ್ರೇನನ್ನ "ಸರಿಯಾದ" ಸಮಯ ಸಾಧಿಸಿಕೊಂಡು 'ಇತ್ತ ದರಿˌ ಅತ್ತ ಪಿಲಿ' ಅನ್ನುವ ಅಯೋಮಯ ಸ್ಥಿತಿಗೆ ದೂಡಿ ಪೀಡಿಸಿ ಮನಸೋಇಚ್ಛೆ ಸುಲಿಯಲು ಹೊರಟಿರುವಂತೆˌ ಕಾಲಾಂತರದಲ್ಲಿ ಆ ನೆಲದ ನೈಸರ್ಗಿಕ ಸಿರಿ ಸಂಪತ್ತನ್ನ ತಮ್ಮ ಕೈಲಾದಷ್ಟು ದೋಚುವ ಲೆಕ್ಕಾಚಾರದ ದೂರದೃಷ್ಟಿಯನ್ನೆ ಹೊಂದಿರುತ್ತವೆ. ಹಡಬಿಟ್ಟಿ ದುಡ್ಡೆಂದರೆ ಹೊಂಚು ಹಾಕಿ ಹೊಡೆಯಲು ಬಾಯಿ ಕಳೆದುಕೊಂಡಿರೋ ಅಲ್ಲಿನ ಸ್ಥಳಿಯ ರಾಜಕಾರಣಿಗಳೂ ಸಹˌ ಹಾಗೇನಾದರೂ ಆದಲ್ಲಿ ರಾತ್ರೋರಾತ್ರಿ ಭಾರತ ವಿರೋಧಿಗಳಾಗಿ ಪಾತ್ರಾಂತರವಾಗಿ ತಮ್ಮ ಆ ನವ ನಿರ್ಮಿತ ದೇಶವನ್ನ ತಕರಾರಿಲ್ಲದೆ ಹೀಗೆ ಹಡಬಿಟ್ಟಿ ಹಣ ಸುರಿಯಲು ಕಾದುಕೊಂಡಿರೋ ಪರಕೀಯರಿಗೆ ನಿರ್ಲಜ್ಜರಾಗಿ ತಲೆ ಹಿಡಿಯಲು ಸಹ ಹೇಸರು. ಹೀಗಾಗಿˌ ತಮ್ಮ ಸ್ವಂತಿಕೆಯಿಂದ ಮೇಲೇರಲು ಕಷ್ಟಸಾಧ್ಯವಾಗಿರುವ ಈಶಾನ್ಯದ ಕಿರು ರಾಜ್ಯಗಳನ್ನ ಸಾಕುವ ಅನಿವಾರ್ಯತೆ ಭಾರತ ಸರಕಾರಕ್ಕಿದ್ದೇಯಿದೆ. ನಾವೆಲ್ಲಾದರೂ ನಿರ್ಲ್ಯಕ್ಷಿಸಿ ಕೈ ಬಿಟ್ಟರೆ ನಮಗಾಗದವರು ಕೈ ಹಿಡಿಯಲು ಕಾತರರಾಗಿರುವ ಅಯೋಮಯದ ಪರಿಸ್ಥಿತಿ ಇರೋವಾಗˌ ಸ್ವಲ್ಪ ದುಡ್ಡು ಖರ್ಚಾದರೂ ಸರಿ ಇದೊಂಥರದ "ಅನುದಾನ"ದ ಹೆಸರಿನ ಸಿಹಿ ಸುಳ್ಳನ್ನ ನಮಗೆ ನಾವೆ ಹೇಳಿಕೊಳ್ಳುತ್ತಾ  ಸರಕಾರಿ ಪ್ರಾಯೋಜಿತ "ಹಫ್ತಾ" ಸಂದಾಯ ಮಾಡಿಯಾದರೂ ಸರಿ ನಾವು ಆ ಭೂಭಾಗವನ್ನ ಹಿಡಿದಿಟ್ಟುಕೊಳ್ಳದೆ ವಿಧಿಯಿಲ್ಲದಿರುವ ವಿಪರೀತ ಪರಿಸ್ಥಿತಿ.




ಈ ಮುಖ್ಯ ಕಾರಣದಿಂದˌ ಪ್ರವಾಸೋದ್ಯಮ ಹೊರತು ಅಂತಹ ಹೇಳಿಕೊಳ್ಳುವ ಸ್ವಂತದ ಆದಾಯ ಹುಟ್ಟದ ಬಹುತೇಕ ಕೃಷಿ ಪ್ರಧಾನ ಆರ್ಥಿಕತೆಯಲ್ಲೆ ನಡೆಯುತ್ತಿರುವ ಕಡು ಭ್ರಷ್ಟರನ್ನೆ ಒಳಗೊಂಡಿರುವ-ಸ್ಥಳಿಯ ವಂಶಪಾರಂಪರ್ಯ ರಾಜಕಾರಣದ ಬಲಿಪಶುವಾಗಿರುವ ಈ ಎಂಟು ರಾಜ್ಯಗಳನ್ನˌ ಕಟ್ಟಿ ಹಾಕಿಕೊಂಡು ಸಾಕುವ ವಿದೇಶಿ ತಳಿ ಶ್ವಾನಗಳಿಗೆ ನಾಲ್ಕಾಣೆ ಲಾಭವಿಲ್ಲದ ಹೊರತಾಗಿಯೂ ಕೇವಲ ಶೋಕಿಯ ಕಾರಣಕ್ಕೆ ದುಬಾರಿ ದರದ ಪೆಡಿಗ್ರಿ ತಂದು ಸುರಿದು ಸಾಕುವಂತೆˌ ಮನಸಿಲ್ಲದಿದ್ದರೂನು ಭಾರತ "ಅನುದಾನದ ಹೊಳೆ" ಹರಿಸಿ ಕಾಪಿಟ್ಟುಕೊಳ್ಳಲೆಬೇಕು. ಅಲ್ಲಿನ ಆಳುವವರ ಅಂಧಾದುಂಧಿ ಖರ್ಚಿನ ಶೋಕಿಯನ್ನ ನೋಡಿಯೂ ನೋಡಿರದಂತೆ ಕಡೆಗಣಿಸಬೇಕು. ಉದಾಹರಣೆಗೆˌ ತಮ್ಮ ತಮ್ಮ ಸರಕಾರಗಳಿರುವಲ್ಲಿ ಅತ್ಯಂತ ಬೇಜವಬ್ದಾರರಾಗಿ ವರ್ತಿಸುತ್ತಿದ್ದರೂ ಸಹ ಅರುಣಾಚಲ ಪ್ರದೇಶದ ಪೆಮಾ ಖಂಡು-ಮಣಿಪುರದ ಬಿರೇನ್ ಸಿಂಗ್-ಅಸ್ಸಾಮಿನ ಹಿಮಂತ ಬಿಸ್ವಾ ಸರ್ಮನ ಕರ್ಮಕಾಂಡಗಳು ದಿನಕ್ಕೊಂದರಂತೆ ಬಟಾಬಯಲಾಗುತ್ತಿದ್ದರೂ ಕೇಂದ್ರ ಸರಕಾರ ರಾಜಕೀಯ ಕಾರಣಗಳಿಂದ ಮೂರೂ ಮುಚ್ಚಿಕೊಂಡು ಸೂಕ್ತ ಕ್ರಮಗಳನ್ನ ಕೈಗೊಳ್ಳದೆ ಸುಮ್ಮನಿರೋದನ್ನ ಗಮನಿಸಬಹುದು. ಇದು ಅಲ್ಲಿನವರಿಗಿಂತ ನಮಗೆ ಹೆಚ್ಚು ತುರ್ತು. ಮೇಘಾಲಯವೂ ಅಂತಹ ರಾಜ್ಯಗಳ ಪರಿಭಾಷೆಗೆ ಒಳಪಟ್ಟಿದೆ. ಇದರ ಫಲಶ್ರುತಿಯಾಗಿ ಭಾರತದ ಅನುದಾನವನ್ನ ಕೊಳ್ಳೆ ಹೊಡೆದೆ ಕೊಬ್ಬಿರುವ ಸ್ಥಳಿಯ ಪುಢಾರಿಗಳಿಗೂ ಹಾಗೂ ಆ ಅನುದಾನವನ್ನ ಅವರಿಗೆ ತಲುಪಿಸಲು ಸರಕಾರಿ ಸೇವೆಯ ಸೋಗಿನಲ್ಲಿ ದಳ್ಳಾಳಿ ಕಸುಬು ಮಾಡುವ ಅಧಿಕಾರಿ ವರ್ಗಕ್ಕೆ ನಿರಂತರವಾಗಿ ಹಬ್ಬವೋ ಹಬ್ಬˌ ಪರಿಸ್ಥಿತಿಯ ವ್ಯಂಗ್ಯವೇನೆಂದರೆ ವಿಧಿ ವಿಪರೀತಕ್ಕೆ ಬಲಿಪಶುವಾದ ನಾನೂ ಇಂದು ಒಂದಿಲ್ಲೊಂದು ರೂಪದಲ್ಲಿ ಈ ಕೊಳ್ಳೆಕೋರರ ಮಂದೆಯ ಮಧ್ಯದಲ್ಲಿ ಬಂದು ನಿಂತಿದ್ದೇನೆ! ನಿಷ್ಠುರ ನುಡಿಗಳಲ್ಲಿ ಹೇಳಬೇಕಂತಿದ್ದರೆˌ ದೇಶದ ಈಶಾನ್ಯ ಭಾಗದಲ್ಲಿರುವ ಈ ಅಷ್ಟ ರಾಜ್ಯಗಳ ಸಮೂಹ ಒಂಥರಾ ಭಾರತದ ಸೆರಗಲ್ಲಿ ಕಟ್ಟಿಕೊಂಡ ನಿಗಿನಿಗಿ ಕೆಂಡ. ಕಟ್ಟಿಕೊಳ್ಳದೆ ವಿಧಿಯಿಲ್ಲ. ಎತ್ತಿ ಅತ್ತಲಾಗೆ ಎಸೆದು ಸುಡು ಶಾಖದಿಂದ ಪಾರಾಗುವಂತೆಯೂ ಇಲ್ಲ.



ತನ್ನ ಭಡ್ತಿಯ ವಿಚಾರ ಇತ್ಯರ್ಥವಾಗದೆಲೆ ಮುಗಿದ ಮೀಟಿಂಗ್ ಬಗ್ಗೆ ವಿಪರೀತ ಅಸಮಧಾನಗೊಂಡು ದುಸುಮುಸು ಗುಡುತ್ತಲೆ ನಾಗ ಮತ್ತವನ ಸಮಾನ ಮನಸ್ಕ ಸಹುದ್ಯೋಗಿಗಳು ತಮ್ಮ ಮುಂದಿನ ಹೆಜ್ಜೆಗಳ ರೂಪುರೇಷೆಯನ್ನ ಚರ್ಚಿಸಲು ಒಂದಾಗಿ ಅವನ ಕಛೇರಿ ಹೊಕ್ಕು ಬಾಗಿಲು ಝ಼ಡಿದುಕೊಂಡರು. ನ್ಯಾಯವಾಗಿ ನೋಡಿದರೆˌ ಸಚಿವ ಸಂಪುಟ ಸಭೆಯ ನಿರ್ಣಯಗಳ ಅನುಷ್ಠಾನದ ಬಗ್ಗೆ ಆದ್ಯತೆ ನೀಡಿ ಕೂತು ಚರ್ಚಿಸಬೇಕಿರೋ ಹೊತ್ತಿನಲ್ಲಿˌ ಕಛೇರಿಯ ಸಮಯದಲ್ಲೆ ಸರಕಾರಿ ಸವಲತ್ತುಗಳನ್ನ ಬಳಸಿಕೊಂಡೆ ಸಂಜೆ ಹೊತ್ತಿಗೆ "ಆಫಿಸರ್ಸ್ ರಿಕ್ರಿಯೇಷನ್ ಕ್ಲಬ್"ನಲ್ಲಿ ನಡೆಸಬೇಕಿರೋ ಚರ್ಚಾಕೂಟವನ್ನ ಈಗಲೆ ಇಲ್ಲೆ ಏರ್ಪಡಿಸಿಕೊಂಡು ತಮಗಾಗಿರುವ ನಿರಾಸೆಯನ್ನ ಪ್ರಕಟವಾಗಿ ತೋರಿಸುವಲ್ಲಿ ಅವರಿಗ್ಯಾವ ನಗೆ ನಾಚಿಕೆಯೂ ಇರಲಿಲ್ಲ. ಸರಕಾರಿ ವೆಚ್ಚದಲ್ಲಿ ಹನಿಮೂನು ಟ್ರಿಪ್ಪಿಗೆ ಬಂದಂತಾಡುತ್ತಿದ್ದ ಈ ಉನ್ನತಾಧಿಕಾರಿ ವರ್ಗಕ್ಕೆ ಆಡಳಿತದ ಹಿತಾಸಕ್ತಿಗಿಂತˌ ತಮ್ಮ ತಮ್ಮ ವಯಕ್ತಿಕ ಹಿತಾಸಕ್ತಿಯೆ ಸದಾ ಮುಖ್ಯವಾಗುತ್ತಿದ್ದುದು ದುರದೃಷ್ಟಕರ. ಒಟ್ಟಿನಲ್ಲಿˌ ಯಾರದ್ದೋ ದುಡ್ಡಿನಲ್ಲಿ ಇವರೆಲ್ಲರ ಯಲ್ಲಮ್ಮನ ಜಾತ್ರೆ ಆ ಕಾಲದಿಂದ ಅನೂಚಾನವಾಗಿ ವಿಜೃಂಭಣೆಯಿಂದಲೆ ನಡೆದುಕೊಂಡು ಬರುತ್ತಿತ್ತು. ಬಾಳಿನಲ್ಲಿ ಭಾರತೀಯ ಆಡಳಿತ ಸೇವೆಗಳ ಬಗ್ಗೆ ಅಪಾರ ಆದರ್ಶ ಹೊತ್ತು ನಿಯುಕ್ತಿಯಾಗಿ ಇಂತವರಿದ್ದಲ್ಲಿ ಬರುವ ಕಿರಿಯ ಅಧಿಕಾರಿಗಳನ್ನೂ ಸಹ ಆದಷ್ಟು ಬೇಗ ಸಿನಿಕರನ್ನಾಗಿಸಿˌ ಅವರ ಬಾಳ ಧ್ಯೇಯೋದ್ದೇಶಗಳನ್ನೂ ಸಹ ದಾರಿ ತಪ್ಪಿಸಲು ಇಂತಹ ಮೈಗಳ್ಳ ಪರಪುಟ್ಟ ಅಧಿಕಾರಿಗಳು ಯಶಸ್ವಿಯಾಗುತ್ತಿದ್ದರು. ಕಾಲಾಂತರದಲ್ಲಿ ಇಂತವರಿಂದ ಪದೆ ಪದೆ ಕಚ್ಚಿಸಿಕೊಂಡ ಕಿರಿಯ ಶ್ರೇಣಿಯ ಅಧಿಕಾರಿಗಳು ಸಹಜವಾಗಿ ತಾವು ಸೇವಾ ಹಿರಿತನಕ್ಕೇರುವಾಗ ಸಂಪೂರ್ಣವಾಗಿ ಜ಼ಡ್ಡುಗಟ್ಟಿ ಹೋಗಿ ಜೋಂಬಿಗಳಾಗಿ ಪರಿವರ್ತಿತರಾಗುತ್ತಿದ್ದರು.



ತಮ್ಮ ಭಡ್ತಿಯ ಗಂಭೀರ ವಿಷಯವನ್ನ ಘನಘೋರವಾಗಿ ಚರ್ಚಿಸಲು ನೆರೆದಿದ್ದ ಕಾಗೆಗಳ ಗುಂಪಿಗೆ ಮುಖ್ಯಕಾರ್ಯದರ್ಶಿ ಸರ್ಮಾನ ಒಂದು ಗಂಭೀರ ಕರೆ ಕಲ್ಲೆಸೆಯಿತು. ಉಳಿದ ಮೂವರು ಎದ್ದೆನೋ ಬಿದ್ದೆನೋ ಅಂತ ತಮ್ಮ ತಮ್ಮ ಕಛೇರಿಗಳತ್ತ ಓಡಿ ತಲೆಮರೆಸಿಕೊಂಡರೆˌ ಇತ್ತ ಈ ಇತ್ತಲೆ ನಾಗ ಮತ್ತೆ ಬ್ಲೇಜ಼ರ್ ಏರಿಸಿಕೊಂಡು ಕಟ್ಟಿಕೊಂಡಿದ್ದ ಟೈ ಮತ್ತೆ ಸರಿಪಡಿಸಿಕೊಂಡು ಅವಸರವಸರವಾಗಿ ಮತ್ತೆ ಸೆಕ್ರೆಟೆಯೆಟ್ ಕಡೆಗೆ ಸಾಗಲು ಕಾರೇರಿದ. ಕೂ ಹಾಕಿದರೆ ಕೇಳುವಷ್ಟು ದೂರದಲ್ಲಿದ್ದ ನಡೆದೆ ಕ್ಷಣಾರ್ಧದಲ್ಲಿ ಮುಟ್ಟ ಬಹುದಾಗಿದ್ದ ಕಟ್ಟಡಕ್ಕೆ ಹೋಗಲೂ ಸಹ "ಲೆವೆಲ್" ತೋರಿಸುತ್ತಾ ಕಾರಿನ ಸುಖತೂಲಿಕಾತಲ್ಪದ ರಥವೇರಿ ತೇಲಿಕೊಂಡು ಸಾಗುವ ಅವನ ತಿರುಪೆ ಶೋಕಿ ಕಂಡು ಒಳಗೊಳಗೆ ನಗು ಬಂತು. ಹೋಗುವಾಗˌ ಪಡಸಾಲೆಯಲ್ಲಿ ಎದುರಾದ ನನ್ನನ್ನ ನೋಡಿ "ಬಾಬು ನೇನು ತಿರುಗಿ ವಚ್ಚಿನಪ್ಪುಡು ಮೀಕು ಅಫೀಷಿಯಲ್ಗಾ ಬಂಡಿ ಅಲಾಟ್ ಚೇಸ್ತಾನಂಡಿ. ಮೀ ಪಿಎಸ್ನಿ ಪಂಪಿ ರಾವಾಲ್ಸುಂದಿ ಚೆಸುವುಲೇಮುಂದೋ ಚೇಯಕ ಚೆಪ್ಪಂಡಿ. ಕೊತ್ತ ಡ್ರೈವರ್ನಿ ಬಂಡಿತೋ ಪಂಪಿಸ್ತಾ. ಏಮಿ?" ಅಂದು "ಅಲಾಗೆಂಡಿ" ಅನ್ನುವುದನ್ನು ಕೇಳಿಸಿಯೂಕೊಳ್ಳದೆ ತನ್ನ ಪಿಎಸ್ ಜೊತೆ ಮುಂದೆ ಸಾಗಿ ಹೋದ.


ಮುಖ್ಯಮಂತ್ರಿ ಉಪಯೋಗಿಸಿದˌ ಅದೂ ಕಳೆದ ವರ್ಷವಷ್ಚೆ ಕೊಂಡು ಹೆಚ್ಚೆಂದರೆ ಏಳೋ-ಎಂಟೋ ತಿಂಗಳಷ್ಟೆ ಅವರ ಪೋರ್ಟಿಕೋದಿಂದವರನ್ನ ಹೊತ್ತು ಸಾಗಿದ ಆಧುನಿಕ ಕಾರು ಇನ್ನೇನು ನನ್ನದಾಗಲಿತ್ತು! ಪ್ರೊಟೋಕಾಲಿನ ಪ್ರಕಾರ ಅದರ ಮೇಲಿದ್ದ ಜುಟ್ಟಿನಂತಹ ಸೈರನ್ ಬಳಸಲು ನನ್ನ ಅಧಿಕಾರದ ದರ್ಜೆಗೆ ಅನುಮತಿ ಇತ್ತೋ-ಇಲ್ಲವೋ ಗೊತ್ತಿರಲಿಲ್ಲ. ಗಾಡಿ ಕೈಗೆ ಬಂದಾಗ ನೋಡಿಕೊಂಡರಾಯಿತು ಅಂತಂದುಕೊಂಡು ಸುಮ್ಮನಾದೆ. ಅಲ್ಲಾˌ ಬಹಳಷ್ಟು ಹಿರಿಯ ದರ್ಜೆಯ ಅಧಿಕಾರಿಗಳು ಸರದಿಯಲ್ಲಿರುವಾಗಲೂ ಇಷ್ಟು ದುಬಾರಿ ಕಾರನ್ನ ಸಿಬ್ಬಂದಿ ಹಾಗೂ ಶಿಷ್ಟಾಚಾರ ವಿಭಾಗಕ್ಕೆ ಶಿಫಾರಸ್ಸು ಮಾಡಿ ನನ್ನಂತಹ ಪ್ರೊಬೆಷನರಿ ಕಿರಿಯ ಅಧಿಕಾರಿಗೆ ಮಂಜೂರು ಮಾಡಿಸುತ್ತಿರುವ ಮಜುಕೂರು ಏನಂತ ಇನ್ನೂ ಅರ್ಥವಾಗಿರಲಿಲ್ಲ. ಸೂಕ್ತ ಕಾಗದ ಪತ್ರಗಳಿಗೆ ನನ್ನ ಸಹಿ ಪಡೆದು ಕಾರನ್ನ ಮಂಜೂರು ಮಾಡಿಸಲು ಜಿಲ್ಲಾಧಿಕಾರಿಗಳ ಕಛೇರಿಯತ್ತ ನನ್ನ ಆಪ್ತಸಹಾಯಕ ತೆರಳಿದ ನಂತರˌ ಸಂಪುಟ ಸಭೆಗೆ ಕೊಂಡು ಹೋಗಿ ಹಿಂದೆ ತರಿಸಲಾಗಿದ್ದ ಕಡತಗಳನ್ನ ನನ್ನ ಕಛೇರಿಯೊಳಗೆ ತರಿಸಿ ಒಂದೊಂದಾಗಿ ಕಣ್ಣಾಡಿಸುತ್ತಾ ಕೂತುಕೊಂಡೆ. ಗೋಡೆಯ ಮೇಲೆ ತೂಗು ಹಾಕಿದ್ದ ಗಡಿಯಾರ ಸಮಯ ಮೂರೂವರೆಯಾಗಿದ್ದನ್ನ ಖಚಿತ ಪಡಿಸುತ್ತಿತ್ತು. ಈ ಗಡಿಬಿಡಿಯಲ್ಲಿ ಮಧ್ಯಾಹ್ನದ ಊಟ ಮಾಡೋದೆ ಮರೆತು ಹೋಗಿತ್ತು. ಲಾಂಪಾರ್ಗ್ ಹೊತ್ತು ತಂದು ಕಛೇರಿಯಲ್ಲಿರಿಸಿ ಹೋಗಿದ್ದ ಮಧ್ಯಾಹ್ನದ ಊಟ ತುಂಬಿದ್ದ ಟಿಫಿನ್ ಡಬ್ಬಿ ನನ್ನನ್ನ ಕಂಡು ಅಣಕಿಸಿದಂತಾಯಿತು. ಮೀಟಿಂಗಿನ ಮುಂಚಿನ ಸಾಕಿನ್ ಘ್ಹಟ್ಟಾ - ಸಿಂಗಾಡ - ಚಹಾ ಸಮಾರಾಧನೆಯಿಂದ ಹೊಟ್ಟೆ ಹಸಿವೆ ಮರೆತು ಹೋದಂತಾಗಿತ್ತು. ಅಕ್ಕಿಯ ಕಣಕದೊಳಗೆ ಕರಿ ಎಳ್ಳಿನ ಹೂರಣ ತುಂಬಿ ಮಾಡಿದ್ದ ಸಿಹಿ-ಹುಳಿ ರುಚಿಯ ಬೇಕರಿಯ ದಿಲ್ ಪಸಂದಿನಂತಹ ಸಾಕಿನ್ ಘ್ಹಟ್ಟಾದ ಎರಡು ತುಂಡು ಜ಼ಮಾಯಿಸಿ ತಿಂದು ಹೊಟ್ಟೆಗೆ ಮಧ್ಯಾಹ್ನದೂಟದ ಹಸಿವೆಯೆ ಮರೆತು ಹೋಗಿತ್ತು ಬಹುಶಃ.


06 March 2025

"ಹೆಸರೆ ಇಲ್ಲದವರೂರಿನಲ್ಲೊಂದು ಕೊಲೆಯಾದ ಕಥೆ"

"ಹೆಸರೆ ಇಲ್ಲದವರೂರಿನಲ್ಲೊಂದು ಕೊಲೆಯಾದ ಕಥೆ"


ಚಿಕ್ಕಂದಿನಿಂದಲೂ ಅಪರೂಪಕ್ಕೆ ಅಲ್ಲಿಲ್ಲಿ ಸರಕಾರಿ ಅಂಬಾಸಡರ್ ಕಾರಿನಲ್ಲಿ ಓಡಾಡುವ ಜಿಲ್ಲಾಧಿಕಾರಿಗಳನ್ನ ಕಾಣುವಾಗ ನನ್ನೊಳಗೆ ಒಂಥರಾ ಆಕರ್ಷಣೆ ಹುಟ್ಟುತ್ತಿತ್ತು. ಕನಿಷ್ಠ ಬಾಗಿಲುಗಳಿಗೂ ಗತಿಯಿಲ್ಲದ ಹಸಿರು ರಂಗಿನ ಟಾರ್ಪಾಲ್ ಟಾಪಿನ ಒರಟು ಜೀಪಿನಲ್ಲಿ ಅವರೆದುರು ವಿನೀತರಾಗಿ ಹೋಗಿ ನಿಲ್ಲುವ ತಹಶಿಲ್ದಾರರಾಗಲಿ - ಅಂತಹದ್ದೆ ಜೀಪಾಗಿದ್ದರೂ ಬಿಳಿಯ ಗಟ್ಟಿಮುಟ್ಟು ಲೋಹದ ಟಾಪು ಹಾಗೂ ಬಾಗಿಲುಗಳಿದ್ದ ಜೀಪಿನಲ್ಲೆ ಬರುತ್ತಿದ್ದ ಉಪ ವಿಭಾಗಧಿಕಾರಿಗಳಾಗಲಿ ಅಂತಹ ಯಾವೊಂದು ಕುತೂಹಲವನ್ನೂ ಕೆರಳಿಸುತ್ತಿರಲಿಲ್ಲ. 


ಆಗೆಲ್ಲ ನನ್ನದು ಶಾಲೆ ಬಿಟ್ಟು ನಿತ್ಯ ಸಾಯಂಕಾಲ ಸಂಜೆ ಪತ್ರಿಕೆಗಳನ್ನ ಜಿಲ್ಲಾಧಿಕಾರಿ ಕಛೇರಿಯಿಂದ ಹಿಡಿದು ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿˌ ಜಿಲ್ಲಾ ನ್ಯಾಯಾಲಯˌ ಜಿಲ್ಲಾ ಅಭಿವೃದ್ಧಿ ಸಹಕಾರಿ ಬ್ಯಾಂಕು ಹೀಗೆ ಸಾಲಾಗಿ ಎಲ್ಲಾ ಕಡೆಯೂ ದೊಗಳೆ ಖಾಕಿ ಚಡ್ಡಿ ಹಾಕಿಕೊಂಡು ಲಡಕಾಸಿ ಸೈಕಲ್ ತುಳಿದುಕೊಂಡು ತೇಲಾಡುತ್ತಾ ಹೋಗಿ ಹಾಕುವ ಕಾಯಕ. ಅಂತಹ ಸನ್ನಿವೇಶದಲ್ಲಿ ಆಗಷ್ಟೆ ತೊಳೆದಿಟ್ಟಂತಿರುತ್ತಿದ್ದ ಕೊಕ್ಕರೆ ಬಿಳಿ ಅಂಬಾಸಡರಣಿಯಲ್ಲಿ ಕಿಟಕಿಯ ಗಾಜುಗಳಿಗೂ ತೆಳು ನೈಲಾನಿನ ಪರದೆ ಇಟ್ಟುಕೊಂಡಿರುತ್ತಿದ್ದ - ಕಾರೊಳಗೆ ಒಂದಲ್ಲ ಅಂತ ಮೂರ್ಮೂರು ಪುಟ್ಟ ನೀಲಿ ಸೀಲಿಂಗ್ ಫ್ಯಾನುಗಳನ್ನ ಸಿಕ್ಕಿಸಿಕೊಂಡಿರುತ್ತಿದ್ದ ಕರ್ಕಶ ಜೀಪಿನ ಸದ್ದಿನ ಮಧ್ಯೆ ನಯ ನಾಜೂಕಿನಲ್ಲಿ ಹೌದೋ ಅಲ್ಲವೋ ಅನ್ನುವಷ್ಟು ಶಬ್ದ ಹೊರಡಿಸುತ್ತಾ ಬರುವ ಅಂಬಾಸಡರಿನ ಒಡಲಿನಿಂದ ಆಸನಗಳ ಬಿಳಿ ತಲೆ ಒರಗುಗಳಿಂದೀಚೆ ಕಛೇರಿಯ ಪೇದೆ ಇಳಿದು ಬಂದು ತೆಗೆಯುತ್ತಿದ್ದ ಹಾಗೆˌ ಬಾಗಿಲಿನಿಂದೀಚೆ ಠಾಕು ಠೀಕಾಗಿ ಇಳಿದು ಟಕ್ ಟಿಕ್ ಷೂ ಸದ್ದೇಳಿಸುತ್ತಾ ಸಾಗುತ್ತಿದ್ದ ಜಿಲ್ಲಾಧಿಕಾರಿಗಳನ್ನ ಕಾಣುವಾಗˌ ನಾನೂ ಹೀಗಾಗಬೇಕು ಅನ್ನಿಸುತ್ತಿದ್ದುದು ಅದೆಷ್ಟು ಸಲವೋ!



ಶಿವಮೊಗ್ಗದ ಹಳೆ ಸೇತುವೆ ಕೆಳಗಿನ ತುಂಗೆ ಹರಿದು ಹೋದಷ್ಟೆ ವೇಗವಾಗಿ ಕಾಲವೂ ಸರಿದು ಹೋಗಿˌ ಓದಿನ ನಿರಂತರತೆಗೆ ಒದಗಿ ಬಂದ ನಾನಾ ವಿಧಗಳ ಅಡೆತಡೆಗಳನ್ನೆಲ್ಲ ದಾಟಿ ಏಗಿ ಕೊಂಡು ಲೋಕದ ಕಣ್ಣಿಗೊಂದು ವೈದ್ಯಕೀಯ ಪದವಿ ರಾಚಿದರೂˌ ನನ್ನೊಳಗಿನ "ಜಿಲ್ಲಾಧಿಕಾರಿ"ಯಾಗುವ ದಾಹ ಕಿಂಚಿತ್ತೂ ಇಳಿದಿರಲಿಲ್ಲ. ಆದರೆ ಜಿಲ್ಲಾಧಿಕಾರಿಯಷ್ಟೆ ಅಲ್ಲ ಅದಕ್ಕಿಂತ ಆಕರ್ಷಕವಾದ ಸರಕಾರಿ ಹುದ್ದೆಗಳು ಇನ್ನೂ ಅನೇಕ ಇವೆ ಅನ್ನುವ ಜ್ಞಾನೋದಯ ಶಿವಮೊಗ್ಗವೆಂಬ ಬಾವಿಯ ಕಪ್ಪೆಯಾಗಿದ್ದವನಿಗೆ ಬೆಂಗಳೂರೆಂಬ ಸಮುದ್ರ ಕಂಡ ಮೇಲಾಗಿತ್ತು.


ಪರಿಶ್ರಮದ ಫಲವಾಗಿ ಕಡೆಗೂ ಭಾರತ ಆಡಳಿತ ಸೇವೆಯನ್ನ ಸೇರಲು ಮತ್ನಾಲ್ಕು ವರ್ಷಗಳು ಹಿಡಿದವು. ಪ್ರಾಯ ಚಿಕ್ಕದಾದರೂ ಸಹˌ ಜವಬ್ದಾರಿ ದೊಡ್ಡದಾಗಿತ್ತು. ಸಿಗುತ್ತಿದ್ದ ಸಾರ್ವಜನಿಕ ಗೌರವ ವ್ಯಕ್ತಿಯಾದ ನನಗಲ್ಲ - ಅದು ಆ ಹುದ್ದೆಯಿಂದ ಆದ ಕೃಪೆ ಅಂತ ಬಹುಬೇಗ ಅರಿತುಕೊಂಡೆ. ಮೌಖಿಕ ಸಂದರ್ಶನದಲ್ಲೂ ಉತ್ತೀರ್ಣನಾದ ಮೇಲೆ ಕೇರಳ-ಮೇಘಾಲಯ-ಪಶ್ಚಿಮ ಬಂಗಾಳ-ಗುಜರಾತ್ ರಾಜ್ಯಗಳ ಸೇವೆಯ ಆಯ್ಕೆ ಇತ್ತು. ಅದ್ಯಾಕೋ ನಿರ್ದಿಷ್ಟ ಕಾರಣಗಳಿಲ್ಲದೆ ಮೇಘಾಲಯದ ಕೇಡರ್ ಆಯ್ದುಕೊಂಡು ಮಸ್ಸೂರಿಯ ತರಬೇತಿ ಅವಧಿಯ ನಂತರ ಅಧಿಕಾರ ಹಂಚಿಕೆಗಾಗಿ ನೇರ ಶಿಲ್ಲಾಂಗಿನ ಹಾದಿ ಹಿಡಿದೆ. 


ಪೂರ್ವ ಖಾಸಿ ಜಿಲ್ಲೆಯ ಉಪ ವಿಭಾಗಧಿಕಾರಿಯಾಗಿ ಮೊದಲ ಹುದ್ದೆ ದೊರಕಿತ್ತು. ಅರಿಯದೂರು - ಅರ್ಥವಾಗದ ಭಾಷೆ - ಅಪರಿಚಿತ ಮುಖಚರ್ಯೆಯ ಮಂದಿಯ ಮಧ್ಯೆ ಅಧಿಕಾರಿಯಾಗಿ ವೃತ್ತಿ ಬದುಕಿನ ಶುರುವಾದ ತಿಂಗಳು ಅಲ್ಲಿ ಜ಼ಡಿಮಳೆಯ ಮಾನ್ಸೂನಿನ ಅಗೋಸ್ತಿನ ಆರಂಭದ ದಿನಗಳು. ಮೇಘಾಲಯದಷ್ಟೆ ಮಳೆ ಕಾಣುವ ಮಲೆನಾಡಿನವನಾಗಿದ್ದವನಿಗೆ ಅಲ್ಲಿನ ಮಳೆಯೇನೂ ರೇಜಿಗೆ ಹುಟ್ಟಿಸಲಿಲ್ಲ. ಹಂಚಿಕೆಯಾಗಿದ್ದ ಭೂತಬಂಗಲೆಯಷ್ಟು ವಿಶಾಲವಾದ ಸರಕಾರಿ ಬಂಗಲೆಯೂ ಅಂತಹ ವಿಶಾಲ ಕೋಣೆಗಳ ವಿದ್ಯಾರ್ಥಿ ನಿಲಯಗಳಲ್ಲೆ ಬಹುಪಾಲು ವಿದ್ಯಾರ್ಥಿ ಜೀವನ ಕಳೆದಿದ್ದವನಿಗೆ ಭಯವನ್ನೂ ಸಹ ಹುಟ್ಟಿಸಲಿಲ್ಲ. ಒಬ್ಬಂಟಿಯಾಗಿದ್ದವನ ಸೇವೆಗೆ ಅಡುಗೆಯವನೂ ಸೇರಿ ಮೂರು ಮಂದಿ ಸರಕಾರಿ ಆಳುಗಳು ಅಲ್ಲಿದ್ದರೂ ಭಾಷೆ ಬಾರದೆ ಪರಸ್ಪರ ಕೈ ಸನ್ನೆ ಬಾಯ್ಸನ್ನೆಯಲ್ಲೆ ಸಂವಹನ ನಡೆಸುವ ಅನಿವಾರ್ಯತೆ ಬೇರೆ ಇತ್ತು.


ಆದಷ್ಟು ಬೇಗ ಖರ್ಚಿಗೆ ಸಾಕಾಗುವಷ್ಟು ಖಾಸಿ ಹಾಗೂ ಗ್ಹಾರೋದಲ್ಲಿ ವ್ಯವಹರಿಸೋದನ್ನ ಕಲಿಯದೆ ವಿಧಿಯಿರಲಿಲ್ಲ. ಸ್ಥಳಿಯ ಶಿಕ್ಷಕರ್ಯಾರಾದರೂ ಈ ನಿಟ್ಟಿನಲ್ಲಿ ಮನೆಪಾಠ ಕೊಟ್ಟು ಸಹಕರಿಸಬಹುದೆ ಅಂತ ಕಛೇರಿಯಲ್ಲಿ ಆಪ್ತ ಕಾರ್ಯದರ್ಶಿಗೆ ಕೋರಿಕೊಂಡಿದ್ದೆ. ದೂರದ "ಮದ್ರಾಸಿ"ನಿಂದ ಬಂದ ಮದರಾಸಿ ಅಧಿಕಾರಿ ಸ್ಥಳಿಯ ಭಾಷೆ ಕಲಿಯಲು ಇಷ್ಟು ಉತ್ಸುಕನಾಗಿರೋದನ್ನ ಕಂಡು ಉತ್ತೇಜಿತನಾದ ಆತನೂ ಆದಷ್ಟು ಶೀಘ್ರವಾಗಿ ಅದಕ್ಕೊಂದು ವ್ಯವಸ್ಥೆ ಮಾಡುವುದಾಗಿ ಹೇಳಿ ಹರ್ಷವನ್ನ ಮುಚ್ಚಿಡಲಾಗದಂತೆ ತನ್ನ ಕಣ್ಣುಗಳೆರಡು ಅದೆಲ್ಲೋ ಆಳದಲ್ಲಿ ಮುಚ್ಚಿ ಹೋಗಿದ್ದಂತ ಮುಖದಲ್ಲಿ ವ್ಯಕ್ತಪಡಿಸಿದ್ದು ಕಂಡಿತು.

***********


ತರಬೇತಿಯ ಅವಧಿಯಲ್ಲಿ ಚೂರುಪಾರು ಖಾಸಿ ಕಲಿಸಿಕೊಟ್ಟದ್ದು ಹೌದಾದರೂ ಸ್ಥಳಿಯರ ಭಾಷಾ ಬಳಕೆಯ ಮುಂದೆ ಅಲ್ಲಿನ ಕಲಿಕೆ ಮೂರು ಕಾಸಿಗೂ ಉಪಯೋಗಕ್ಕೆ ಬರಲಿಲ್ಲ. ಕಛೇರಿಯಲ್ಲಾಗಲಿ ಮನೆಯಲ್ಲಾಗಲಿ ಸಿಬ್ಬಂದಿಗಳೊಡನೆ ಸಂವಹಿಸುವಾಗ ಕೆಲವೊಮ್ಮೆ ನರಳಿದಂತೆ ಅವರಾಡುತ್ತಿದ್ದ "ಬಟ್ಲರ್ ಇಂಗ್ಲೀಷ್"ಗೆ ಕಿರಿಕಿರಿ ಹುಟ್ಟಿ ಅಪ್ರಚೋದಿತವಾಗಿ ಕನ್ನಡದಲ್ಲೆ ಉತ್ತರಿಸಿ ಬಿಡುತ್ತಿದ್ದೆ. ನನ್ನ "ಮದ್ರಾಸಿ" ಭಾಷೆ ಅರ್ಥವಾಗದೆ ಮುಖದಲ್ಲಿ ಇದೆಯೋ ಇಲ್ಲವೋ ಅನ್ನುವಷ್ಟು ಸಣ್ಣದಾಗಿರುತ್ತಿದ್ದ ಅವರ ಕಣ್ಣುಗಳನ್ನ ಪಿಳಿಪಿಳಿ ಬಿಟ್ಟು ಕಕ್ಕಾಬಿಕ್ಕಿಯಾಗುವ ಸರದಿ ಆಗ ಅವರದ್ದಾಗಿರುತ್ತಿತ್ತು.


ಇಡಿ ಮೇಘಾಲಯವೆ ಗುಡ್ಡಗಾಡು ರಾಜ್ಯ. ಅಲ್ಲಿನ ಜನಸಂಖ್ಯೆಯ ನೂರಕ್ಕೆ ನೂರರಷ್ಟು ಮಂದಿ ಬುಡಕಟ್ಟು ಜನಾಂಗೀಯರು. ಇರೋ ನಾಲ್ಕೆ ನಾಲ್ಕು ಜಿಲ್ಲೆಗಳೂ ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಳ್ಳುವ ಕಾರಣ ಗುಡ್ಡಗಾಡು ಆಡಳಿತದ ವಿಶೇಷಧಿಕಾರಗಳು ಅಧಿಕಾರಿಗಳಿಗೆ ಇವೆ. ಪೊಲೀಸ್ ಸೇವೆಯಲ್ಲಿ ಖಾಸಿ - ಗ್ಹಾರೋ ಬುಡಕಟ್ಟಿನವರಿಗೆ ಪ್ರಾತಿನಿಧ್ಯ ಅತಿಯಾಗಿ ನೀಡಿದ್ದ ಹೊತ್ತಿಗೆ ಆಡಳಿತ ಸೇವೆಯ ನಿರ್ಣಾಯಕ ಹುದ್ದೆಗಳಲ್ಲಿ ಸ್ಥಳಿಯರ ಪಾತ್ರ ಬಹುತೇಕ ಇಲ್ಲವೆ ಇಲ್ಲ ಅನ್ನುವಷ್ಟು ನಗಣ್ಯ. ಹೀಗಾಗಿ ಗುಂಪುಗಾರಿಕೆ - ಸ್ವ ಬುಡಕಟ್ಟಿನ ಪರ ವಿಶೇಷ ಕಾಳಜಿ ವಹಿಸುವ ಆರೋಪಗಳು ಏಳುವ ಅಪರಾಧ ಪ್ರಕರಣಗಳಲ್ಲಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರೋ ನಾಗರೀಕ ಸೇವಾ ಅಧಿಕಾರಿಗಳನ್ನೆ ತನಿಖಾಧಿಕಾರಿಗಳನ್ನಾಗಿ ತತ್ಕಾಲಿಕ ಹೆಚ್ಟುವರಿ ಜವಬ್ದಾರಿ ವಹಿಸೋದು ಅಲ್ಲಿನ ಕ್ರಮ. ಬೇರೆ ರಾಜ್ಯಗಳ ಹಿನ್ನೆಲೆಯ ಈ ಸ್ಥಳಿಯರಲ್ಲದ ಅಧಿಕಾರಿಗಳು ನಿರ್ಮಮವಾಗಿ ತಮ್ಮ ಕರ್ತವ್ಯ ನಿರ್ವಹಿಸಿಯಾರು ಅನ್ನೋ ಆಶಯದಿಂದ ಮಾಡುವ ಈ ವ್ಯವಸ್ಥೆಯೇನು ಅಂದುಕೊಂಡಷ್ಟು ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತದೆ ಅಂತೇನಲ್ಲ.


ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಗುವಂತೆ ಗುರತರ ಅಪರಾಧ ಪ್ರಕರಣಗಳಲ್ಲಿ ಸ್ಥಳಿಯನಲ್ಲ ಅನ್ನುವ ಏಕೈಕ ವೈಶಿಷ್ಟ್ಯದ ಲಾಭ ಪಡೆದುಕೊಳ್ಳುವ ಹೊರಗಿನೂರ ಅಧಿಕಾರಿಗಳು ಇತ್ತಂಡಗಳನ್ನೂ ಸುಲಿದು ಬ್ರಹ್ಮಾಂಡ ಭ್ರಷ್ಟಾಚಾರವೆಸಗಿˌ ದೇಶದ ಆಂತರಿಕ ಭದ್ರತೆ - ಮಾದಕದ್ರವ್ಯ ಕಳ್ಳ ಸಾಗಣೆ - ಅಕ್ರಮ ಶಸ್ತ್ರಾಸ್ತ್ರ ವ್ಯಾಪಾರದಂತಹ ಪ್ರಕರಣಗಳ ವಿಚಾರಣಾ ಮೇಲುಸ್ತುವರಿಯಲ್ಲಿ ಸಾಕು ಸಾಕೆನ್ನುವಷ್ಟು ಹಣವನ್ನ ಕೊಳ್ಳೆ ಹೊಡೆಯುವುದೂ ಇದೆ. ವ್ಯವಸ್ಥೆಯ ಹುಳುಕು ಹೀಗಿದ್ದರೂ ಸಹ ಹೋಲಿಕೆಯಲ್ಲಿ ಅದು ಹೆಚ್ಚು ನಿಶ್ಪಕ್ಷಪಾತಿ ಅನ್ನುವ ಭ್ರಮೆಯಲ್ಲಿ ಇದೆ ಕ್ರಮವನ್ನ ಪ್ರತಿಯೊಬ್ಬರೂ ನಂಬಿ ಅನುಸರಿಸುತ್ತಿದ್ದರು.


ಪ್ರೊಬೆಷನರಿ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನನಗೂ ಹೀಗೊಂದು ಹೆಚ್ಚುವರಿ ವ್ಯಾಪ್ತಿ ಮೀರಿದ ಅಧಿಕಾರ ಚಲಾಯಿಸುವ ಅವಕಾಶ ಬಂದರೂ ಆಶ್ಚರ್ಯ ಪಡುವಂತಿರಲಿಲ್ಲ. ಮಲೆನಾಡಿನ ಮಲತಂಗಿಯಂತಿದ್ದ ಮೇಘಾಲಯದ ವಾತಾವರಣ ತೀರ್ಥಹಳ್ಳಿಯಂತಹ ಏರುತಗ್ಗಿನ ಭೂಲಕ್ಷಣದ ಊರಿಂದ ಬಂದ ನನಗೆ ಮೊದಲ ದಿನದಿಂದಲೆ ಪರಕೀಯ ಭಾವನೆ ಹುಟ್ಟಿಸಲಿಲ್ಲ. ನಮ್ಮೂರ ಕಾಡುಗಳಲ್ಲಿ ಕಾಡುಪ್ರಾಣಿಗಳೂ ಇದ್ದಾವೆˌ ಆದರೆ ಇಲ್ಲಿನ ಚೈನೀಸುಗಳ ಒಡಹುಟ್ಟಿದಂತಿರೋ ಸಣ್ಣ ಕಣ್ಗಳ ಚಿಂಗ್ ಚಾಂಗ್ ತಳಿಯ ಸ್ಥಳಿಯರು ಅಳಿಯದಿರೋ ಕಾಡಿನಲ್ಲಿ ಒಂದೆ ಒಂದು ವನ್ಯಜೀವಿಯನ್ನೂ ಉಳಿಸಿರದೆ ಕಬಳಿಸಿ ತಿಂದು ತೇಗಿಯಾಗಿದೆ ಅನ್ನುವ ಒಂದೆ ಒಂದು ಪ್ರಮುಖ ವ್ಯತ್ಯಾಸದ ಹೊರತುˌ ಬಾಕಿ ಉಳಿದಂತೆ ಇದು ಮಲೆನಾಡಿನ ಪಡಿಯಚ್ಚಿನಂತೆಯೆ ಭಾಸವಾಯಿತು.


ರಾಜ್ಯದ ರಾಜಧಾನಿಯಲ್ಲೆ ಕರ್ತವ್ಯ ನಿರ್ವಹಿಸಲು ಆರಂಭಿಸಿದ್ದ ಕಾರಣದಿಂದ ಸಹಜವಾಗಿ ಅಲ್ಲಿನ ಸಾಮಾಜಿಕ ವೈವಿಧ್ಯತೆಯ ಕುರಿತು ನಾನು ಆರಂಭಿಕ ಅಜ್ಞಾನಿಯಾಗಿದ್ದೆ. ಆದರದನ್ನ ತೋರಿಸಿಕೊಳ್ಳದೆ ಎದುರಿರುವ ಸ್ಥಳಿಯ ಕೈ ಕೆಳಗಿನ ಅಧಿಕಾರಿಗಳಿಗಳ ಕೈಗೆ ನನ್ನ ಜುಟ್ಟು ಸಿಗದಂತೆ ನನ್ನ ಹುದ್ದೆಯ ಘನತೆಯನ್ನ ಕಾಪಾಡಿಕೊಳ್ಳಲು ಹೆಣಗಾಡುತ್ತಲೆ ನನ್ನ ವೃತ್ತಿ ಬದುಕು ಕಣ್ತೆರೆದಿತ್ತು. ನನ್ನ ಮೇಲಾಧಿಕಾರಿ ಜಿಲ್ಲಾಧಿಕಾರಿಯಾಗಿದ್ದ ನಾಗೇಶ್ವರ ರಾವು ಕಡಪದಿಂದ ಅಲ್ಲಿಗೆ ಬಂದಿದ್ದ ತೆಲುಗು ಬಿಡ್ಡ. ಮೈತುಂಬಾ ಭ್ರಷ್ಟಾಚಾರದ ಬೆರಣಿ ತಟ್ಟಿಸಿಕೊಂಡಿದ್ದ ಆಸಾಮಿ ಹೆಸರಿಗೆ ತಕ್ಕಂತೆ ಹೆಡೆಯಾಡಿಸುವ ನಾಗೇಶ್ವರನೆ ಆಗಿದ್ದˌ ಆದರೆ ಎರಡು ತಲೆಯ ನಾಗ.


ಎದುರಾಗೋವಾಗ ಯಾವತ್ತೂ ಸ್ಥಳಿಯ ರಾಜಕಾರಣಿಗಳ ಹಾಗೂ ಕಛೇರಿಯ ಕೆಳ ವರ್ಗಗಳ ಸಿಬ್ಬಂದಿಗಳ ಜೊತೆಗೆ ನಗುಮೊಗದಿಂದಲೆ ವ್ಯವಹರಿಸುತ್ತಿದ್ದ ರಾವು ಒಳಗೊಳಗೆ ಭಯಂಕರ ಜನಾಂಗೀಯ ದ್ವೇಷಿಯಾಗಿದ್ದ. ಮೇಘಾಲಯದ ಬುಡಕಟ್ಟಿನವರನ್ನ ಚೀನಾದವರೆಂದೆ ಪರಿಭಾವಿಸಿಕೊಂಡಿದ್ದ ನಾಗೇಶ್ವರನ ಸೀಳು ನಾಲಗೆ ಖಾಸಗಿಯಾಗಿ ನಮ್ಮಂತಹ ಹೊರಗಿನˌ ಅದರಲ್ಲೂ ದಕ್ಷಿಣ ಭಾರತೀಯರ ಜೊತೆಗಿನ ಸಂವಾದದಲ್ಲಿ ಸ್ಥಳಿಯರ ಬಗ್ಗೆ ಧಾರಾಳವಾಗಿ ವಿಷ ಕಕ್ಕುತ್ತಿತ್ತು. "ಚೂಡಂಡಿ ಬಾಬು ಆಕಳಿಸ್ತೆ ಕುಕ್ಕಲನು ತಿನೆ ಈ ಕುಕ್ಕಲನು ಇರುವೈ ಸಂವತ್ಸರನನಿಂಚಿ ದಗ್ಗರಗಾ ಚೂಸ್ತುನ್ನˌ ಇಂಕ ಮುರಿಕಿ ವಾಳ್ಳಪೈ ಮೀಕು ತೆಲಯನಿ ಸಂಗತಿಲು ಚಾಲ ಉನ್ನಾಯಿ. ಏಮೈನ ಜಾಗ್ರತಗ ಉಂಡಂಡಿ" ಅಂತ ಪುಗಸಟ್ಟೆ ಜ್ಞಾನವನ್ನ ಅವಕಾಶ ಸಿಕ್ಕಾಗಲೆಲ್ಲಾ ದಯಪಾಲಿಸುತ್ತಿತ್ತು ಪ್ರಾಣಿ.



ನಾಗೇಶ್ವರ ರಾವಿಗೆ ಈ ಪರಿ ಈಶಾನ್ಯ ಭಾರತೀಯರೊಂದಿಗೆ ಅಸಮಧಾನ ಏರ್ಪಡಲು ಮೂಲ ಕಾರಣ ಏನಿರಬಹುದು ಅನ್ನೋ ಪ್ರಶ್ನೆ ಕಡೆಗೂ ಬಗೆಹರಿಯದ ಒಗಟಾಗಿಯೆ ಉಳಿಯಿತು. ಡೆಪ್ಯುಟೇಷನ್ ಮೇಲೆ ಕೇಂದ್ರ ಸೇವೆಯ ನೆಪದಲ್ಲಿ ಡೆಲ್ಲಿಗೆ ವರ್ಗಾವಣೆ ಪಡೆದು ಶಾಶ್ವತವಾಗಿ ಶಿಲ್ಲಾಂಗ್ ಬಿಟ್ಟು ಹೋಗುವವರೆಗೂ ಅವನ ಅಸಹನೆಯ ಮಟ್ಟವಂತೂ ಚೂರೂ ಇಳಿದಿರೋದು ಕಾಣ ಸಿಗಲಿಲ್ಲ. ನನ್ನ ವೃತ್ತಿ ಬದುಕಿನಲ್ಲಂತೂ ಆ ಪರಿ ರೇಜಿಗೆಗೊಳ್ಳಲು ಅವರು ಅರ್ಹರು ಅಂತ ನನಗಂತೂ ಯಾವತ್ತೂ ಅನಿಸಲಿಲ್ಲ. ಸರಳವಾಗಿ ಹೇಳಬೇಕೆಂದರೆ ಇಲ್ಲಿ ಜನಾಂಗೀಯ ದ್ವೇಷಿಯೂ - ಹುಟ್ಟೂರಲ್ಲಿ ಜಾತಿ ತಾರತಮ್ಯಕೋರನೂ ಆಗಿದ್ದ ನಾಗೇಶ್ವರ ರಾವು ಮಾನಸಿಕವಾಗಿ ಒಳಗೊಳಗೆ ಕೊಳೆತಿದ್ದ ಅಷ್ಟೆ.


*********ˌ


ಭಾರತದ ಈಶಾನ್ಯ ರಾಜ್ಯಗಳಲ್ಲಿ ನಾಯಿ ಮಾಂಸದ ಭಕ್ಷಣೆಯ ಚಪಲ ಚಿತ್ತ ಬುಡಕಟ್ಟುಗಳು ಇರೋದು ನಿಜವಾದರೂ ಮೇಘಾಲಯ ಹಾಗೂ ತ್ರಿಪುರ ಸಂಪೂರ್ಣವಾಗಿ ಇದಕ್ಕೆ ಹೊರತು. ಅವಿಭಜಿತ ಬಂಗಾಳದ ವಿಸ್ತರಿತ ಭಾಗವಾಗಿದ್ದ ತ್ರಿಪುರದ ಪಾಳೆಪಟ್ಟಿನಲ್ಲಿ ಅದೆ ಕಾರಣಕ್ಕೆ ಇಂದೂ ಉಳಿದು ಬಂದಿರುವ ಬಂಗಾಳಿ ಸಂಸ್ಕೃತಿಯ ಕಾರಣ ಅದು ನಿಶಿದ್ಧವಾಗಿದ್ದರೆˌ ಮೇಘಾಲಯದ ಬುಡಕಟ್ಟಿನವರೆಂದೂ ನಾಯಿ ಮಾಂಸ ಭಕ್ಷಣೆಯನ್ನ ರೂಢಿಸಿಕೊಳ್ಳುವ ಗೋಜಿಗೆ ಹೋಗಲೆ ಇಲ್ಲ. ಬ್ರಿಟಿಷರ ಕಾಲದ ಈಶಾನ್ಯ ಪ್ರದೇಶದ ರಾಜಧಾನಿ ಇದೆ ಶಿಲ್ಲಾಂಗ್ ಆಗಿತ್ತು. ಇದು ಆ ಪ್ರದೇಶದ ನೈಋತ್ಯ ಭಾಗ. ಪೂರ್ವ ಹಾಗೂ ಆಗ್ನೇಯ ದಿಕ್ಕಿನವರ ಆಚಾರ - ವಿಚಾರˌ ಆಹಾರ ಪದ್ಧತಿಗಳಿಂದ ಇವರದ್ದು ಸಂಪೂರ್ಣವಾಗಿ ವಿಭಿನ್ನ. ಪ್ರದೇಶವಾರು ವಿಭಜನೆಯಾದ ಅಸ್ಸಾಂ ನೂತನವಾಗಿ ಏಳು ವಿಭಿನ್ನ ರಾಜ್ಯಗಳಾಗಿ ಎಪ್ಪತ್ತರ ದಶಕದಲ್ಲಿ ಮೇಲ್ದರ್ಜೆಗೇರಿದಾಗ ಅದರ ಪಾರಂಪಾರಿಕ ರಾಜಧಾನಿಯಾಗಿದ್ದ ಶಿಲ್ಲಾಂಗ್ ನಾಲ್ಕು ಜಿಲ್ಲೆಗಳ ರಾಜ್ಯ ಮೇಘಾಲಯದ ಪಾಲಾಗಿತ್ತು.



ಕನಿಷ್ಠ ಈ ಸರಳ ಸಂಗತಿಯನ್ನೂ ಅರಿಯದ ನಾಗೇಶ್ವರ ರಾವುಗಳಂತಹ ಜಂತುಗಳು ಇಪ್ಪತ್ತಲ್ಲ ಇನ್ನೂರು ವರ್ಷ ಒಂದೆ ಸ್ಥಳದಲ್ಲಿ ಝ಼ಂಡಾ ಊರಿಕೊಂಡಿದ್ದರೂ "ಮಾನವ"ರಾಗೋದು ದೂರದ ಮಾತು. ಸಮಯ ದೊರೆತಾಗಲೆಲ್ಲ ಸ್ಥಳಿಯರನ್ನ ಮನಸ್ಪೂರ್ತಿಯಾಗಿ ಹೀಯ್ಯಾಳಿಸುವ ಚಾಳಿಯಿದ್ದ ಆ ಮೇಲಧಿಕಾರಿಯೆಂಬ ಪ್ರಾಣಿ "ಈ ಕುಕ್ಕಲನು ತಿನೆ...." ಮಂತ್ರವನ್ನ ತಪ್ಪದೆ ಪಠಿಸುವಾಗ "ಅಟ್ಲ ಲೇದಂಡಿ ರಾವುಗಾರುˌ ಈ ಈಶಾನ್ಯಮುಲ ಪ್ರಜಲಂತ ಒಕೆ ಮಾದರಿ ಸಂಸ್ಕಾರವಂತುಲು ಕಾದು. ಅನ್ನಂ ತಪ್ಪ ವಾಟಿ ಮಧ್ಯಲೋ ತಿನೆ ಆಹಾರಂಲೋ ಚಾಲ ತೇಡಲುನ್ನಾಯಿ. ಇಕ್ಕಡ ಈ ಮನಿಷುಲು ಅವು ಮರಿ ಪಂದಿ ಮಾಂಸಲನು ಬಾಗ ಇಷ್ಟಪಡಿ ತಿನ್ತಾರು ತಪ್ಪˌ ಕುಕ್ಕಲನು ಎಪ್ಪಡಕಿ ಕಾನಿ ತಿನಲೇರಂಡಿ." ಅಂತ ತಿದ್ದಬೇಕೆಂದು ಅನಿಸುತ್ತಿದ್ದರೂ. ಎಲ್ಲಿ ನನ್ನ ಈ ತಿದ್ದುಪಡಿಯನ್ನ ವಯಕ್ತಿಕ ಅವಮಾನವನ್ನಾಗಿ ಪರಿಗಣಿಸುವ ಈ ಇತ್ತಲೆ ನಾಗ ಅವಕಾಶ ನೋಡಿಕೊಂಡು ನನ್ನನ್ನೆ ಎಲ್ಲಿ ಕಚ್ಚಿಯಾನೋ ಎಂಬ ವಾಸ್ತವದರಿವಿರುವ ಕಾರಣ ಕಷ್ಟಪಟ್ಟು ಬಾಯಿ ಮುಚ್ಚಿಕೊಂಡು ಸುಮ್ಮನಾಗುತ್ತಿದ್ದೆ.



ಮೇಘಾಲಯದ ಒಟ್ಟು ಜನಸಂಖ್ಯೆಯಲ್ಲಿ ಸರಿಸುಮಾರು ತೊಂಬತ್ತರಷ್ಟು ಮಂದಿ ಖಾಸಿ ಹಾಗೂ ಗ್ಹಾರೋ ಬುಡಕಟ್ಟಿನವರೆ ಆಗಿದ್ದರೂˌ ಹಜೋ಼ಂಗ್-ಕೋಛ್-ರಬಾ಼ದಂತಹ ಅಲ್ಪಸಂಖ್ಯಾಂತರ ಬುಡಕಟ್ಟುಗಳೂ ಸಹ ಅಲ್ಲಿವೆ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇಖಡಾ ಐವತ್ತರಷ್ಟು ಮಂದಿ ಖಾಸಿಗಳೆ. ಅವರಿಗಿಂತ ಚೂರು ಕಡಿಮೆ ಸಂಖ್ಯೆಯಲ್ಲಿ ಗ್ಹಾರೋಗಳಿದ್ದಾರೆ. ಬ್ರಿಟಿಷರ ಕಾಲದಲ್ಲಿ ಕ್ರೈಸ್ತ ಮಿಷನರಿಗಳಿಗೆ ಮುಕ್ತ ಅವಕಾಶಗಳನ್ನ ಒದಗಿಸಿದ್ದ ಕಾರಣ ಧಾರ್ಮಿಕ ಮತಾಂತರ ನಿರಾತಂಕವಾಗಿ ನಡೆದು ರಾಜ್ಯದ ಮುಕ್ಕಾಲುವಾಸಿ ಮಂದಿ ಕ್ರೈಸ್ತರಾಗಿ ಮತಾಂತರಿತವಾಗಿದ್ದಾರೆ. ಇನ್ನುಳಿದವರಲ್ಲಿ ಅರ್ಧದಷ್ಟು ಮಂದಿ ಬಂಗಾಳಿ ಸಂಸ್ಕೃತಿ ಪ್ರಭಾವದಿಂದ ಕಾಳಿಯನ್ನ ಆರಾಧಿಸೋ ಹಿಂದೂಗಳು. ಅಳಿದುಳಿಯುವ ಹನ್ನೆರಡು ಶೇಖಡಾ ಮಂದಿಯಲ್ಲಿ ವಿಭಜನೆಯ ಕಾಲಕ್ಕೆ ಬಾಂಗ್ಲಾದಿಂದ ಇತ್ತ ವಲಸೆ ಬಂದ ಸಾಬರು ಹಾಗೂ ಹಳೆಯ ಬುಡಕಟ್ಟು ಸಂಸ್ಕಾರಗಳಿಗೆ ಮಾತ್ರ ಬದ್ಧವಾಗಿರುವವರು ಇದ್ದಾರೆ.


ಬುಡಕಟ್ಟು ಯಾವುದಾದರೂನು ಕ್ರೈಸ್ತರಾಗಿ ಮತಾಂತರಿತರಾದ ನಂತರವೂ ಸಹ ಹಳೆಯ ಬುಡಕಟ್ಟು ಆಚರಣೆಗಳನ್ನ ಬಿಟ್ಟುಕೊಡದೆˌ ಅವುಗಳ ಸಂಪ್ರದಾಯಗಳನ್ನೂ ಸಹ ಪಾಲಿಸಿಕೊಂಡು ಬಾಳುವ ವಿಚಿತ್ರ ಧಾರ್ಮಿಕ ಸಂಸ್ಕಾರ ಇಲ್ಲಿನವರದ್ದು. ಪಾರಿವಾಳದ ಮಾಂಸˌ ಬಾತುಕೋಳಿ ಮಾಂಸˌ ಕೋಳಿ ಮಾಂಸ ಹಾಗೂ ಹಂದಿ ಮಾಂಸದ ಖಾದ್ಯಗಳು ಸಾಂಕ್ರಾಮಿಕವಾಗಿರುವ ಇವರ ಅಡುಗೆಮನೆಯಲ್ಲಿ ದನದ ಹೋಲಿಕೆಯ ಮಿಥುನ್ ಮಾಂಸದ ಬಳಕೆಯೂ ಅಷ್ಟೆ ಪ್ರಚಲಿತದಲ್ಲಿದೆ. ಇನ್ನುಳಿದ ಈಶಾನ್ಯ ರಾಜ್ಯಗಳ ಜನರಂತೆ ಸಸ್ಯಾಹಾರಕ್ಕಿಂತ ಜಾಸ್ತಿ ಮಾಂಸಾಹಾರ ತಿನ್ನುವ ಇಲ್ಲಿನ ಸ್ಥಳಿಯ ಜನಾಂಗೀಯರು ನಾಗಾಲ್ಯಾಂಡ್-ಮಣಿಪುರ-ಮಿಜೋರಾಂಗಳ ಬುಡಕಟ್ಟುಗಳು ಇಷ್ಟ ಪಟ್ಟು ಸೇವಿಸುವ ನಾಯಿ ಮಾಂಸವನ್ನ ಇನ್ನುಳಿದ ಭಾರತೀಯರು ಅಸಹ್ಯಿಸುವಂತೆಯೆ ತಿರಸ್ಕಾರದ ದೃಷ್ಟಿಯಿಂದ ನೋಡುತ್ತಾರೆ. ಅವರ ಪ್ರಕಾರ ನೆಚ್ಚಿನ ಸಾಕುಪ್ರಾಣಿ ನಾಯಿಮಾಂಸವನ್ನ ಮೆಲ್ಲೋದು ಮನುಷ್ಯನ ಹೆಣ ತಿನ್ನೋದಕ್ಕಿಂತಲೂ ಹೀನಾಯ. ಇದನ್ನ ಹೊರತುಪಡಿಸಿˌ ಮಾಂಸಹಾರಿ ಅನ್ನುವ ಕಾರಣಕ್ಕೋ ಏನೋˌ ರಾಜ್ಯದ ಘೋಷಿತ ನಾಡ ಪ್ರಾಣಿ ಚುಕ್ಕಿ ಚಿರತೆಯೊಂದನ್ನ ಬಿಟ್ಟು ಬಾಕಿಯುಳಿದ ಮೊಲ-ಚಿಗರೆ-ನರಿ-ಅಳಿಲು-ಕಾನುಕುರಿ-ಕಾಡುಹಂದಿ-ಮುಂಗುಸಿ-ಮೀನು-ಮೊಸಳೆ-ಆಮೆ-ಹಾವು-ಉಡ ಎನ್ನುವ ಯಾವೊಂದು ಬೇಧಭಾವಗಳನ್ನೂ ತೋರದೆ ಎಲ್ಲವನ್ನೂ ಒಂದು ಹಂತಕ್ಕೆ ನುಣ್ಣಗೆ ಕೊಂದು ತಿಂದು ಅವುಗಳ ಕುಲಕ್ಕೆ ಎರವಾಗಿದ್ದರು. ಅವರ ಜಿಹ್ವಾ ಚಾಪಲ್ಯಕ್ಕೆ ಬಲಿಯಾಗದೆ ಹಾಗೂ ಹೀಗೂ ಪ್ರಾಣ ಉಳಿಸಿಕೊಂಡಿರುತ್ತಿದ್ದ ಅಳಿದುಳಿದ ಈ ಪ್ರಭೇದದ ಜೀವಿಗಳುˌ ನಾಳೆ ಹೇಗೋ? ಏನೋ! ಅನ್ನುವ ಅಸ್ಥಿರತೆಯ ಚಿಂತೆಯಲ್ಲೆ ಹೇಗೋ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಭಾವದಲ್ಲಿ ಕಾಲ ಹಾಕುತ್ತಿದ್ದವು.



ಇದ್ಯಾವುದರ ಕನಿಷ್ಠ ಅರಿವೂ ಕೂಡ ಇರದ ನಾಗೇಶ್ವರ ರಾವುಗಳಂತಹ ಸಂಕುಚಿತ ಮನಸ್ಸಿನ ಅಧಿಕಾರಿಯೊಬ್ಬ ರಾಜ್ಯದ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯ ಹಂತದವರೆಗೂ ಭಡ್ತಿಯಾಗಿ ಅಲ್ಲಿ ಎರಡು ದಶಕಗಳ ಕಾಲ ಸಂಸಾರವಂದಿಗನಾಗಿ ಬಾಳಿದ್ದೆ ಆಶ್ಚರ್ಯ. ಅವನ ಈ ಮಾನಸಿಕ ವಿಕೃತಿ ಆಡಳಿತದ ನಿರ್ಧಾರಗಳಲ್ಲಿ ಅದೆಷ್ಟು ಬಾರಿ ಪಕ್ಷಪಾತಿ ತೀರ್ಮಾನಗಳಿಗೆ ಕಾರಣವಾಗಿರಬಹುದು ಅನ್ನೋದನ್ನ ನೆನೆದರೇನೆ ಹೆದರಿಕೆ ಹುಟ್ಟುತ್ತಿತ್ತು. 


ಭಯಂಕರ ಜಾತಿವಾದಿಯಾಗಿದ್ದ ಅವನ ಗುಣಲಕ್ಷಣಗಳನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಲು ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಅವನಿಗಿಂತ ಮೇಲ್ಜಾತಿಯವನಾಗಿದ್ದ ಕಾರಣ ಅವನನ್ನ ಸರ್ ಎನ್ನದೆ "ರಾವುಗಾರು" ಎನ್ನುವಷ್ಟು ಸಲುಗೆಯನ್ನ ನನಗವನು ಪರಿಚಯವಾದ ಆರಂಭದಲ್ಲೆ ದಯಪಾಲಿಸಿದ್ದ. "ಕನ್ನಡವಾಳ್ಳು ಉಂಡೊಚ್ಚುಗಾನಿˌ ಅದೆಟ್ಲಾಂಡಿ ಇಂತ ಬಾಗ ಮಾ ತೆಲುಗುಲೋ ಮಾಟ್ಲಾಡ್ತಾರು ಮೀರು!" ಅಂತ ನನ್ನ ಭಾಷಾ ಶೀಘ್ರ ಗ್ರಹಿಕೆಯ ಗುಣವನ್ನ ಹಾಡಿ ಹೊಗಳುತ್ತಿದ್ದ. ಆರಂಭದಲ್ಲಿ ಅವರ ಮನೆಗೆ ಆಹ್ವಾನದ ಮೇರೆಗೆ ಒಂದೆರಡು ರಾತ್ರಿಯೂಟಕ್ಕೆ ಅತಿಥಿಯಾಗಿ ಅವನ ಸರಕಾರಿ ನಿವಾಸಕ್ಕೆ ಹೋಗಿದ್ದೆನಾದರೂˌ ಅವನ ದಢೂತಿ ಹೆಂಡತಿˌ ಚೆಲ್ಲು ಚೆಲ್ಲಾಗಿ ವರ್ತಿಸುವ ಇಬ್ಬರು ಹೆಣ್ಣು ಮಕ್ಕಳ ಸಾಂಗತ್ಯ ಏಕೋ ಹಿತವೆನಿಸುತ್ತಿರಲಿಲ್ಲವಾದ ಕಾರಣ ಅನಂತರದ ಆಹ್ವಾನಗಳನ್ನ ಬೇರೆ ಕೆಲಸದ ನೆಪ ಒಡ್ಡಿ ತಪ್ಪಿಸಿಕೊಳ್ಳಲಾರಂಭಿಸಿದೆ. 


ಆಹ್ವಾನ ಮನ್ನಿಸಿ ಹೋಗಿದ್ದ ಆರಂಭದಲ್ಲೊಂದು ಬಾರಿ ಊಟಕ್ಕೂ ಮೊದಲು ಲಾನಿನಲ್ಲಿ ಆರಾಮವಾಗಿ ಕೂತು ಶಿವಾಸ್ ರೀಗಲ್ ಬಾಟಲು ತೆರೆದುˌ ಕುಡಿತದ ಅಭ್ಯಾಸವಿಲ್ಲದ ನನ್ನನ್ನಷ್ಟು ಕಿಚಾಯಿಸಿ - ಒತ್ತಾಯದಿಂದ ಬದುಕಲ್ಲೆ ಮೊದಲ ಬಾಟಲಿ ಬಿಯರ್ ಕುಡಿಯುವಂತೆ ಮಾಡಿ ತನ್ನ ಪ್ರವರ ಪುರಾಣವನ್ನ ತೆಗೆದು ತಲೆ ಚಿಟ್ಟು ಹಿಡಿಸುವಂತೆ ಮಾಡಿದ್ದ. ಅವನ ಬಡತನದ ಬಾಲ್ಯˌ ಕಡಪ ಜಿಲ್ಲೆಯಲ್ಲಿನ ಕುಗ್ರಾಮವೊಂದರಲ್ಲಿ ಕಳೆದಿದ್ದ ಕಳಪೆ ದರ್ಜೆಯ ಜೀವನದ ದಿನಗಳು ಇವೆಲ್ಲವನ್ನೂ ಭಾವುಕವಾಗಿ ಹೇಳಿಕೊಂಡುˌ ಅದೆಷ್ಟೋ ದಿನಗಳ ಕಾಲ ಯಾರೊಂದಿಗೂ ಹೇಳಲಾಗದೆ ಎದೆಯೊಳಗೆ ಉಳಿಸಿಕೊಂಡಿದ್ದ ಸಂಕಟದ ಹೊರೆಯನ್ನ ಕೆಳಗಿರಿಸಿ ನಿಸೂರಾಗಿದ್ದ. ತಕ್ಕಮಟ್ಟಿಗೆ ಬೆಂಗಳೂರಲ್ಲಿ ಕಲಿತಿದ್ದ ತೆಲುಗನ್ನ ಬಳಸಲು ಸಮರ್ಥನಾಗಿದ್ದ ಕಾರಣ ನನ್ನ ಮೇಲವನಿಗೆ ವಿಶೇಷ ವಿಶ್ವಾಸ ಮೂಡಿತ್ತು. ಮೇಲಧಿಕಾರಿ ಅನ್ನುವ ಮುಲಾಜಿಗೆ ಒಳಪಟ್ಟ ನನಗೂ ಅವನ ಬಡಿವಾರಗಳನ್ನ ಸಹಿಸಿಕೊಳ್ಳದೆ ವಿಧಿಯಿರಲಿಲ್ಲ.


**********


ಪ್ರೊಬೆಷನರಿ ಅವಧಿಯ ಕಿರಿಯ ಅಧಿಕಾರಿಯಾಗಿದ್ದರೂ ಸಹ ಹಂಚಿಕೆಯಾಗಿದ್ದ ನನ್ನ ಸರಕಾರಿ ನಿವಾಸ ದಕ್ಷಿಣ ಭಾರತದ ಯಾವೊಬ್ಬ ಹಿರಿಯ ಆಡಳಿತ ಸೇವೆಯ ಅಧಿಕಾರಿಯ ವಸತಿಗೆ ಕಡಿಮೆ ಇಲ್ಲದಷ್ಟು ವಿಶಾಲ ಹಾಗೂ ಭವ್ಯವಾಗಿತ್ತು. ಬ್ರಿಟಿಷರ ಕಾಲದ ಬಂಗಲೆ. ಶಿಲ್ಲಾಂಗ್ ಪ್ರದೇಶದ ರಾಜಧಾನಿಯಾಗಿದ್ದ ಕಾಲದಲ್ಲಿ ತಮ್ಮ ಐಶಾರಾಮಕ್ಕೆ ಕೊರತೆಯಾಗದಂತೆ ವೈಭವೋಪೇತ ಬಂಗಲೆಗಳನ್ನಷ್ಟು ಕಟ್ಟಿಸಿದ್ದ ಬ್ರಿಟಿಷರುˌ ಒಂದೊಮ್ಮೆ ಹೋಗುವಾಗ ಹೊತ್ತೊಯ್ಯಲು ಸಾಧ್ಯವಿದ್ದಿದ್ದರೆ ಖಂಡಿತವಾಗಿ ಇವೆಲ್ಲವನ್ನೂ ಮರೆಯದೆ ಬುಡ ಸಹಿತ ಕಿತ್ತಾದರೂ ಸರಿ ಹಡಗಿನಲ್ಲಿ ಹೇರಿಕೊಂಡೆ ದೇಶ ಬಿಡುತ್ತಿದ್ದರೇನೊ! ತಾವಿಲ್ಲಿ ಸೂರ್ಯ-ಚಂದ್ರರಿರುವ ತನಕ ಅಜರಾಮರ ಅಂತಂದುಕೊಂಡೆ ಕಟ್ಟಿಸಿದ್ದ ಹಾಗಿವೆ ಅವೆಲ್ಲ. ಮುಖ್ಯ ಕಟ್ಟಡದಾಚೆಯ ಕೆಲಸಗಾರರ ವಸತಿಗಳೆ ಮಹಾನಗರಗಳ ಮಾನದಂಡದಲ್ಲಿ ಕಿರುಗಾತ್ರದ ಬಂಗಲೆಗಳಂತಿವೆ ಅಂದರೆ ಊಹಿಸಿ. ಬಂಗಲೆ ಅಂದರೆ ಸಾಕುˌ ಎದುರಿಗೊಂದು ವಿಶಾಲ ಪೋರ್ಟಿಕೋ-ಕಣ್ಣು ಹಾಯಿಸಿದಷ್ಟು ದೂರದ ಹಸಿರಿನ ಲಾನಂಗಳ-ಅದರ ಅಂಚಿನಲ್ಲೊಂದು ನೀಲ ನೀರ ಈಜುಕೊಳ ಇವೆಲ್ಲ ಆ ಬಂಗಲೆಯ ಅಂಕಣದೊಳಗಿವೆ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ.


ಇಂತಿಪ್ಪ ಬಂಗಲೆಯೊಂದರಲ್ಲಿ ನನ್ನ ಠಿಕಾಣಿ. ಪಶ್ಚಿಮ ಮೂಲೆಯಲ್ಲಿದ್ದ ಇತ್ತೀಚಿನ ದಿನಗಳಲ್ಲಿ ಅದಕ್ಕೆ ಹೊಂದಿಕೊಂಡಂತೆ ಮೊಸಾಯಕ್ ಹಾಕಿಸಿದ್ದ ಶವರ್-ಬಾತ್ ಟಬ್-ಅತ್ಯಾಧುನಿಕ ಕಾಮೋಡ್ ಅಂಟಿಕೊಂಡಿದ್ದ ರೆಡ್ ಆಕ್ಸೈಡಿನ ನೆಲದ ಮೇಲೆ ಬರ್ಮಾ ಟೀಕಿನ ಹಲಗೆಗನ್ನ ಜೋಡಿಸಿ ಅದರ ಮೇಲೆ ಹಾಸುಗಂಬಳಿಯನ್ನ ಠಾಕು ಹೊಡೆದಿದ್ದ ಆ ವಿಶಾಲ ಕೋಣೆ ಯಲ್ಲಿ ನಾನು ನನ್ನ ಹಡಪ ಬಿಚ್ಚಿ ಅದನ್ನೆ ನನ್ನ ಮೊಕ್ಕಾಂ ಆಗಿಸಿಕೊಂಡೆ. ಬ್ರಿಟಿಷರ ಕಾಲದ ಮಾಸ್ಟರ್ ಬೆಡ್ರೂಮೋ ಇಲ್ಲಾ ಮಿನಿ ಬಾಲ್ರೂಮೋ ಆಗಿದ್ದಿರಬಹುದಾದ ಆ ಹಾಲಿಗಿಂತ ವಿಶಾಲವಾಗಿದ್ದ ಕೋಣೆಯ ಹೊರಗೋಡೆಗೆ ಅಂಟಿಕೊಂಡಂತೆ ಮೂವರು ದಢೂತಿಗಳು ಅಗಲಿಸಿ ಹೊರಳಾಡುವಷ್ಟು ದೊಡ್ಡ ಬರ್ಮಾ ತೇಗದ ಮಂಚವಿತ್ತು. ಅದರೆದುರಿಗೊಂದು ದೊಡ್ಡ ಹಳೆಯ ಕಾಲದ ಮೇಜು ಹಾಗೂ ಅದಕ್ಕೆರಡು ದೊಡ್ಡ ಕುರ್ಚಿಗಳಿದ್ದವು. ಮಂಚದ ಎರಡೂ ಪಕ್ಕಗಳಲ್ಲಿ ಕೈಗೆಟುಕುವಂತೆ ರಾತ್ರಿಯ ಮಂದ ದೀಪಗಳು-ಕೋಣೆಯ ನಡು ಮಧ್ಯಕ್ಕೆ ತೂಗು ಬಿಟ್ಟಿದ್ದ ದೀಪದ ಗೊಂಚಲು-ನಾಲ್ಕು ಗೋಡೆಗಳಾಗೂ ನಾಲ್ಕು ಮಂದ್ರ ದೀಪಗಳು ಇದ್ದ ಆ ಕೋಣೆಯನ್ನ ಹಿಂದೆ ಈ ಮನೆಯಲ್ಲಿ ವಾಸವಿದ್ದ ದೆಹಲಿಯ ದೊರೆ ಮಗನಂತಹ ಆಹಾರ ಕಾರ್ಯದರ್ಶಿ ಒಂದಲ್ಲ ಅಂತ ಎರಡೆರಡು ಹವಾನಿಯಂತ್ರಕಗಳನ್ನ ಅಳವಡಿಸಿ ವಾತಾನುಕೂಲಿಯಾಗಿಸಿದ್ದ. 



ಹೀಗಾಗಿ ಹಳೆಯ ಕಾಲದ ಬಾಗಿಲುಗಳಷ್ಟೆ ಎತ್ತರವಾಗಿದ್ದ ತೇಗದ ಫ್ರೇಮಿನ ಕಿಟಕಿಗಳನ್ನ ಬಾಗಿಲು ತೆಗೆಯಲಾಗದಂತೆ ಸೀಲ್ ಮಾಡಿಸಿದ್ದ. ಶುದ್ಧ ನೈಸರ್ಗಿಕ ಗಾಳಿಯ ಉಸಿರೆಳೆದುಕೊಳ್ಳಬೇಕಂತಿದ್ದರೆ ಒಂದಾ ಕೋಣೆಯ ಎರಡೂ ಹೊರ ಅಂಚಿಗೆ ಚಾಚಿಕೊಂಡಿದ್ದ ಬಿಸಿಲು ಮಚ್ಚೆಗೆ ಹೋಗಿ ಅಲ್ಲಿದ್ದ ಕುರ್ಚಿಯ ಮೇಲೆ ಕುಕ್ಕರಿಸಬೇಕಿದೆ. ಅಥವಾˌ ಕೋಣೆಯ ಹೊರಗಿನ ಹಜಾರಕ್ಕೆ ಮರಳಬೇಕು. ಒಟ್ಟಿನಲ್ಲಿ ಅಲ್ಲಿರುವ ಅವಧಿಯಲ್ಲಿ ಹಿರಿ-ಕಿರಿ-ಮರಿಗಳನ್ನುವ ಯಾವುದೆ ಬೇಧಭಾವವಿಲ್ಲದೆ ಸಕಲ ಇಲಾಖೆಗಳ ಸರಕಾರಿ ಬಿಳಿಯಾನೆಗಳೂ ಜನರ ದೋಚಿದ ತೆರಿಗೆಯ ಸುಲಿಗೆಯ ಬಲದಲ್ಲಿ ಸಕುಟುಂಬಿಕರಾಗಿ ಭರ್ಜರಿ ಮೋಜು ಉಡಾಯಿಸಿಕೊಂಡು ಕಾಲ ಹಾಕುವುದರಲ್ಲಿ ನಿಸ್ಸೀಮರಾಗಿದ್ದರು. 



ಆದರಿನ್ನೂ ಬ್ರಹ್ಮಚರ್ಯ ಪರ್ವದಲ್ಲಿದ್ದ ನನಗೆ ಆ ಬಂಗಲೆಯ ವಿಪರೀತ ವೈಶಾಲ್ಯವೆ ಉಸಿರುಗಟ್ಟಿಸುವಂತಿದ್ದುˌ ಇದ್ದುದರಲ್ಲಿ "ಸಣ್ಣದಾಗಿದ್ದ" ಕೋಣೆಯನ್ನ ನನ್ನದಾಗಿಸಿಕೊಂಡು ಉಳಿದಂತೆ ಬಂಗಲೆಯ ಬೇರೆ ಭಾಗಗಳನ್ನ ಬೀಗ ತೆರಿಸಿಯೂ ನೋಡದೆ ನಿರ್ಲ್ಯಕ್ಷಿಸಿ ವಸತಿ ಹೂಡಿದೆ. ಗ್ಹಾರೋ ಬುಡಕಟ್ಟಿನ ಲಾಂಪಾರ್ಗ್ ಹಾಗೂ ಮಾರ್ಟೀನಾ ದಂಪತಿಗಳು ನನ್ನ ಬಾಣಸಿಗರಾಗಿದ್ದರೆˌ ಖಾಸಿಗಳಾಗಿದ್ದ ಶೆಲ್ಡನ್ ಹಾಗೂ ಲಿಂಡಾ ಸ್ವಚ್ಛತೆಯ ಸಿಬ್ಬಂದಿಗಳಾಗಿದ್ದರು. ಹಿಂದೂಗಳಾಗಿದ್ದ ಪೂರ್ಣಿಮಾ ಮತ್ತವಳ ತಂಗಿ ಕ್ರಿಸ್ಟಿನಾ ತೋಟದ ಮಾಲಿಗಳಾಗಿದ್ದರು. ಹೊರಗಿನ ತರಕಾರಿ-ದಿನಸಿ ಸಾಮಾನು ಸರಂಜಾಮು ತಂದುಕೊಡಲು ಅಸ್ಸಾಮಿ ಕೃಷ್ಣದಾಸ್ ಇದ್ದ.



ಬೆಳಗ್ಯೆ ಹಾಸಿಗೆ ಬಿಟ್ಟೆದ್ದಲ್ಲಿಂದ ಜಾಗಿಂಗ್-ವಾಕಿಂಗ್-ತಿಂಡಿ-ಊಟ-ಕಛೇರಿ ಕೆಲಸ-ಕ್ಷೇತ್ರಕಾರ್ಯ ಅಂತ ಬೆಳಗ್ಗಿನಿಂದ ರಾತ್ರಿಯವರೆಗೂ ಹೊರಗಡೆಯೆ ಇರುತ್ತಿದ್ದ ನಾನುˌ ಲಘು ವ್ಯಾಯಾಮ-ಸ್ನಾನ-ರಾತ್ರಿ ನಿದ್ರೆಯ ಹೊರತು ಆ ಬಂಗಲೆಯೊಳಗೆ ಉಳಿಯುತ್ತಿದ್ದುದೆ ಅಪರೂಪ. ಸರಕಾರಿ ರಜೆಯ ದಿನಗಳಲ್ಲೂ ಸಹ ಒಂದಿಲ್ಲೊಂದು ತುರ್ತು ಕರೆಗಳಿಗೆ ಓಡಬೇಕಿದ್ದ ಕಿರಿಯ ದರ್ಜೆಯ ಹಿರಿಯ ಹುದ್ದೆಯ ಅಧಿಕಾರಿಯಾಗಿದ್ದ ಕಾರಣ ಆ ಮನೆಯ ಐಶಾರಾಮಗಳೆಲ್ಲಾ ಸದಾ ಅಲ್ಲಿಯೆ ಇರುವ ಬಹುತೇಕ ಆ ನೌಕರ-ಚಾಕರ ವರ್ಗಗಳಿಗೆ ಮೀಸಲಿಟ್ಟಂತಿತ್ತು. ಅವರ ಸುಖ ಸಮೃದ್ಧತೆಯನ್ನ ಕಂಡಾಗˌ ಎಲಾ ಇವರ! ಇಲ್ಲಿ ನಾನು ಯಜಮಾನಿಕೆ ಮಾಡ್ತಿದ್ದೆನ? ಇಲ್ಲಾ ನನ್ನ ಹೆಸರಲ್ಲಿ ಇವರೆಲ್ಲರ ಯಜಮಾನಿಕೆ ನಡೆಯುತ್ತಿದೆಯ ಅಂತ ನನಗೆ ನಾನೆ ಹೇಳಿಕೊಳ್ತಿದ್ದೆ.


ನನ್ನ ಊಟ ತಿಂಡಿಯ ವಯಕ್ತಿಕ ಖರ್ಚಿನ ಹೊರತು ಬಾಕಿ ಎಲ್ಲವನ್ನೂ ಸರಕಾರ ನೋಡಿಕೊಳ್ತಿತ್ತು. ಅದರಂತೆ ಖರ್ಚುವೆಚ್ಚದ ಓಚರಿಗೆ ನನ್ನ ಸಹಿ ಬಿದ್ದರೆ ಸಾಕಿತ್ತು ಅಷ್ಟೆ.  ನಾನಿಲ್ಲಿಗೆ ಬರುವ ಮೊದಲೂ ಹೀಗೆಯೆ ಇದ್ದ ಈ ವ್ಯವಸ್ಥೆ ನಾನಿಲ್ಲಿಂದ ಹೊರಟ ನಂತರವೂ ಹೀಗೆಯೆ ಮುಂದುವರೆಯಲಿಕ್ಕಿತ್ತು. ಈ ಐಎಎಸ್ ತಳಿಗಳಲ್ಲಿ ಎರಡು ಬಗೆ. ಮೊದಲನೆಯವರದ್ದು ನೇರವಾಗಿ ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಿ ನೇರವಾಗಿ ಉನ್ನತಾಧಿಕಾರಿಗಳಾಗುತ್ತಿರುವವರದ್ದು - ಎರಡನೆಯದಾಗಿ ಸ್ಥಳಿಯ ರಾಜ್ಯಗಳ ಸೇವಾಧಿಕಾರದಲ್ಲೆ ಇದ್ದು ನಾಲ್ಕಾರು ಮುಂಭಡ್ತಿಗಳಾದ ನಂತರ ಐಎಎಸ್ ದರ್ಜೆಗೆ ರಾಜ್ಯಾಡಳಿತದ ಶಿಫಾರಸ್ಸಿನಂತೆ ಉನ್ನತೀಕರಿಸಲ್ಪಟ್ಟವರು. ಈ ಎರಡನೆ ವರ್ಗದವರ ಬಗ್ಗೆ "ದ್ವಿತಿಯ ದರ್ಜೆ"ಯ ಪ್ರಜೆಗಳು ಅನ್ನೋ ತಾತ್ಸಾರದ ಭಾವನೆ ಮೊದಲನೆ ವರ್ಗದ ಆಡಳಿತ ಸೇವೆಯ ಅಧಿಕಾರಿಗಳಲ್ಲಿ ಜನ್ಮಜಾತವಾಗಿವೆ. ಸಾಲದ್ದಕ್ಕೆ ಐಪಿಎಸ್ - ಐಎಫ್ಎಸ್ - ಐಆರ್ಎಸ್ ಅಧಿಕಾರಿ ವರ್ಗದ ಬಗ್ಗೆಯೂ ಈ ಬಗೆಯ ವರ್ಗ ತಾರತಮ್ಯದ ಅಸಡ್ಡೆ ಐಎಎಸ್ಸಿನವರ ವಲಯದಲ್ಲಿ ಧಾರಾಳವಾಗಿವೆ. ತಾವು ಮಾತ್ರ ನೇರ ಸ್ವರ್ಗದಿಂದಿಳಿದು ಬಂದಿರುವ ಅಮೃತ ಸ್ತನ ಪಾನ ಮಾಡಿದವರು! ಉಳಿದವರೆಲ್ಲ ತಮಗಿಂತ ಹೀನ ಕನಿಷ್ಠ ಕ್ರಿಮಿಗಳು ಅನ್ನೋ ಈ ಆಳವಾದ ಮಾನಸಿಕ ವ್ಯಾಧಿಯ ಬಗ್ಗೆ ಹೇಳಿ ಪ್ರಯೋಜನವಿಲ್ಲ.


ಈ ಲಾಂಪಾರ್ಗ್ ಹೈದರಾಬಾದಿನ ಯಾವುದೋ ಸಾಬರ ರೆಸ್ಟೋರೆಂಟಿನಲ್ಲಿ ಅದ್ಯಾವ್ದೋ ಓಬಿರಾಯನ ಕಾಲದಲ್ಲಿ ಬಾಣಸಿಗನಾಗಿದ್ದನಂತೆ. ಹೀಗಾಗಿ ಅಷ್ಟಿಷ್ಟು ದಕ್ಷಿಣ ಭಾರತೀಯ ಖಾದ್ಯಗಳ ಹೆಸರುಗಳನ್ನ ಬಾಯಿಪಾಠ ಮಾಡಿಕೊಂಡಿದ್ದ. ಸಾಬರ ಹೊಟೆಲ್ಲಿನ ಅಡುಗೆಯವನೆ ಆಗಿದ್ದನೋ ಇಲ್ಲಾ ಟೇಬಲ್ ಒರೆಸುವ ಕ್ಲೀನರ್ರೆ ಆಗಿದ್ದನೋ! ಅಂತೂ ಉಪ್ಮಾ-ರೈಸ್ ಬಾತ್-ಇಡ್ಲಿ-ದೋಶೆ-ಪೆಸರಿಟ್ಟು ಅಂತ ಮಾರ್ಟೀನಾ ಮಾಡಿ ಕೊಡುತ್ತಿದ್ದ ದಿನಕ್ಕೊಂದು ಖಾದ್ಯ ವೈವಿಧ್ಯಗಳಿಗೆ ಕೆಲವೊಮ್ಮೆ ತಿನ್ನಲು ಕೂತಾದ ಮೇಲೆ ಅವುಗಳ ಯೋಗ್ಯತಾನುಸಾರ ಗುಣಮಟ್ಟ ಪರೀಕ್ಷಿಸಿ ನಾನೆ ಹೆಸರಿಡಬೇಕಾದ ಪರಿಸ್ಥಿತಿ ಅಲ್ಲಿತ್ತು.


ಅಂತಹˌ ದೋಷಗಳೆ ತುಂಬಿದ್ದ ದೋಸೆ ಚಟ್ನಿಯೆಂದು ಹೆಸರಿಡಲಾಗಿದ್ದ ಅದೆನನ್ನೋ ತಿಂದು "ಕೈಶಾ ಹೈಂ ಶಾಬ್" ಅನ್ನೋ ಅವನ ಹಲ್ಕಿರಿತದ ಪ್ರಶಂಸಾ ಅಪೇಕ್ಷಿತ ಪ್ರಶ್ನೆಗೆˌ ಅವನಿಗರ್ಥವಾಗದ ಕನ್ನಡದಲ್ಲಿ ಅವನಷ್ಟಲ್ಲದಿದ್ದರೂ ಚೂರು ಹಲ್ಕಿರಿದುಕೊಂಡು ಭಾವಕ್ಕೂ ಭಾಷೆಗೂ ಸಂಬಂಧವೆ ಇಲ್ಲದಂತೆ ಕಸ್ತೂರಿ ಕನ್ನಡದಲ್ಲಿ "ಅದಿನ್ನೆಂತೆಂತಾ ಕರ್ಮಾಂತರ ಮಾಡಿ ತಿನ್ನೀಸ್ತೀಯಯ್ಯೋ! ನಿನ್ ಮನೆ ಕಾಯ್ಹೋಗ." ಅಂತ ಮುಖಸ್ತುತಿ ಮಾಡಿ ಆ "ದೋಷ"ದ ದೋಷಾರೋಪಣ ಪಟ್ಟಿಯನ್ನ ಅವನ ಮುಂದೆಯೆ ಒದರಿ ಅಂದು ಕಛೇರಿಗೆ ಬಂದು ಕುರ್ಚಿಯಲ್ಲಿ ಅಂಡೂರಿ ಕೂತು ಸುಧಾರಿಸಿಕೊಳ್ತಿದ್ದೆನಷ್ಟೆˌ ಸೆಕ್ರೆಟರಿಯೇಟಿನಿಂದ ರಾವು ಬಂದು ಕಾಣಲು ಕರೆ ಕಳಿಸಿದ್ದನ್ನ ಪೇದೆ ಹೇಳಿದ. ಆಗಲೆ ಎರಡು ಸಾರಿ ಕರೆ ಮಾಡಿದ್ದನಂತೆ. ಏನೋ ಮುಖ್ಯ ವಿಷಯವೆ ಇರಬೇಕೆಂದರಿತು ಓಡೋಡಿ ಕಣ್ಣಳತೆ ದೂರದಲ್ಲಿದ್ದ ಅವನ ಕಛೇರಿಗೆ ಅಡಿಯಿಟ್ಟೆ. ಆಪ್ತಸಹಾಯಕ ಹೋಗಿ ಉಸುರಿದ್ದೆ ಒಳಗಿನ ಛೇಂಬರಿನಿಂದ ಬುಲಾವು ಬಂತು. "ಚೂಡಂಡಿ ಬಾಬು ರೇಪು ಆ ಜೋನಂಗಿ ಜಾಗಿಲವಾಡು ಮುಂಬೈನಿಂಚಿ ವಸ್ತುಂದಂಟˌ ಎಳ್ಳುಂಡಿ ಆ ಮುಸಲವಾಡು ಕ್ಯಾಬಿನೆಟ್ ಮೀಟಿಂಗ್ ಪೆಟ್ಟಿಂದಿ. ಮೀರು ಕೂಡ ರಾಂಡಿ. ಕೊನ್ನಿ ಪನಿಲುನ್ನಾಯಿ. ಪಾಟು ನಾ ಪಿ ಎಸ್ ಚೆಪ್ಪಿನಟ್ಟು ಫೈಲ್ಸ್ ಕಲಿಗಿ ರಾವಾಲಿ ಗುರ್ತು ಪಟ್ಕೋಂಡಿ" ಅಂದು ಎಂದಿನಂತೆ ಉಭಯಕುಶಲೋಪರಿ ಸಾಂಪ್ರತದ ಸರಸವಾಡದೆ ವಿಪರೀತ ಒತ್ತಡದಲ್ಲಿರುವವನಂತೆ ಮತ್ತೆ ಕಡತವೊಂದರೊಳಗೆ ತಲೆ ತೂರಿಸಿದ.


ಅದು ಸರಿ ಯಾರದು "ಜೋನಂಗಿ ಕುಕ್ಕ"ವಾಡು! ಅದ್ಯಾವುದೋ ಲೋಕಲ್ ಬ್ರೀಡ್ ನಾಯಿ ನಾಳೆ ಬರೋದಕ್ಕೂ - ಅದ್ಯಾವನೋ "ಮುಸಲ"ವಾಡು ನಾಳಿದ್ದು ಕ್ಯಾಬಿನೆಟ್ ಮೀಟಿಂಗ್ ಕರೆಯೋದಕ್ಕೂ ಏನು ಸಂಬಂಧ ಅಂತ ಕ್ಷಣಕಾಲ ಅರಿವಾಗದೆ ತಲೆ ಕೆರೆದುಕೊಂಡೆ. ಆದರೆ ಕ್ಯಾಬಿನ್ನಿನ ಹೊರಗೆ ಬಂದಾಗ "ಸರ್ ಪ್ಲೀಸ್ ಮೇಕ್ ಶ್ಯೂರ್ ಯು ಪುಟ್ ಅಪ್ ದೀಸ್ ಫೈಲ್ಸ್ ಬಿಫೋರ್ ಸಿಎಂ ಆನ್ ಕ್ಯಾಬಿನೆಟ್ ಮೀಟಿಂಗ್ ಡೇ ಆಫ್ಟರ್ ಟುಮಾರೋ!" ಅಂತ ನಾಗೇಶ್ವರನ ಸ್ಥಳಿಯ ಪಿಎಸ್ ತರಬೇಕಿದ್ದ ಕಡತಗಳ ಪಟ್ಟಿ ಕೊಟ್ಟಾಗ ನನ್ನ ಮಂಡೆಯೊಳಗಿನ ಟ್ಯೂಬ್ ಲೈಟ್ ಫಕ್ಕನೆ ಹೊತ್ತಿಕೊಂಡಿತು. ಅಯ್ಯೋ ಈ ನಾಗೇಶ್ವರನ ಮೆದುಳಲ್ಲಿರೋ ವೃಷಭಾವತಿ ತೀರ್ಥವನ್ನ ಮರೆತೆ ಬಿಟ್ಟಿದ್ದೆನಲ್ಲ! ಅಂತ ನನ್ನ ಅಜ್ಞಾನಕ್ಕೆ ನಾನೆ ಹಳಹಳಿಸಿ ಮರುಗಿದೆ.


( ಸಶೇಷ.)

06 August 2024

ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚಃ.

"ಅದ್ವೈತ* ಸಿದ್ಧಾಂತ ಜಗತ್ತಿನ ಪ್ರಾಚೀನತಮ ಅದ್ವಯ ( non-dualistic ) ಸಿದ್ಧಾಂತಗಳಲ್ಲಿ ಪ್ರಮುಖವಾದದ್ದು. 'ಅದ್ವೈತ' ಎಂದೊಡನೆ ಶ್ರೀ ಆದಿ ಶಂಕರಾಚಾರ್ಯರ ಹೆಸರು ಪ್ರಸ್ತಾಪಿಸಲ್ಪಡುತ್ತದೆ. ಅದ್ವೈತ ಸಿದ್ಧಾಂತಕ್ಕೆ ಒಂದು ತಾತ್ತ್ವಿಕ ನೆಲೆಗಟ್ಟನ್ನು ಒದಗಿಸಿ ಕೊಟ್ಟು, ಅದನ್ನು ದರ್ಶನದ ಮಟ್ಟಕ್ಕೆ ಕೊಂಡಯ್ದು ಪ್ರಚುರ ಪಡಿಸಿದವರು ಆದಿ ಶಂಕರರು. ಹಾಗೆಂದು ಶಂಕರರ ಮೊದಲು ಅದ್ವೈತ ಸಿದ್ಧಾಂತವಿರಲಿಲ್ಲವೆಂದಲ್ಲ. ಶಂಕರರು ಗೌಡಪಾದರ ಪರಂಪರೆಗೆ ಸೇರಿದ ಗೋವಿಂದ ಭಗವತ್ಪಾದರ ಶಿಷ್ಯರು. ಹಾಗಾಗಿ ಶಂಕರರಿಗಿಂತಲೂ ಮೊದಲು ಅದ್ವೈತ ಸಿದ್ಧಾಂತವು ಉದಯಿಸಿತ್ತೆಂದೂ, ಈ ಪರಂಪರೆಯಲ್ಲಿ ಅನೇಕ ಆಚಾರ್ಯರುಗಳು ಆಗಿಹೋಗಿದ್ದರೆಂದೂ ಹೇಳಬಹುದಾಗಿದೆ. 'ಅದ್ವೈತ'ವೆಂದರೆ ಎರಡಿಲ್ಲದ್ದು. ಅಂದರೆ 'ಒಂದೆ' ಆಗಿರುವುದು. ಜೀವಿಯಲ್ಲಿರುವ ಆತ್ಮನೂ, ಪರಮ ಸತ್ಯವಾದ ಬ್ರಹ್ಮ ಚೈತನ್ಯವೂ ಒಂದೆ ಆಗಿರುವುದೆಂದು ಅದರ ಸಾರ. ಈ ರೀತಿಯ ಭೇದವನ್ನು ತಿರಸ್ಕರಿಸಿರುವ ಕಾರಣ ಈ ಸಿದ್ಧಾಂತವನ್ನು ಅಭೇದ ಸಿದ್ಧಾಂತವೆಂದೂ ಕರೆಯಲಾಗುತ್ತದೆ.



ಅದ್ವೈತ ದರ್ಶನ ಇತಿಹಾಸ
ಪೀಠಿಕೆ :-
ಅದ್ವೈತ ದರ್ಶನ ೧ ( ಚರ್ಚೆ )

ಅದ್ವೈತ ಸಿದ್ಧಾಂತವು, ಪ್ರಸಿದ್ಧಿ ಮತ್ತು ಜನಪ್ರಿಯತೆ ಪಡೆದ ದರ್ಶನ. ಅದ್ವೈತವೆಂದರೆ ಎರಡಿಲ್ಲದ್ದು - ಒಂದದೆ ಎಂದು ಅರ್ಥ. ಸುಮಾರು ಕ್ರಿ.ಪೂ. ೮೦೦ -೩೦೦ ವರ್ಷಗಳ ಹಿಂದಿನ ಉಪನಿತ್ತುಗಳಲ್ಲಿ ಅದ್ವೈತ ಪರ ವಾಕ್ಯಗಳು ಸಾಕಷ್ಟಿವೆ. ಉದಾಹರಣೆಗೆ: "ಸರ್ವಂ ಖಲ್ವಿದಂ ಬ್ರಹ್ಮ" ; "ಆತ್ಮೈವೇದ ಸರ್ವಂ" ; "ಅಯಮಾತ್ಮಾಬ್ರಹ್ಮ;" ; "ಬ್ರಹ್ಮ"ವೇದ ಬ್ರಹ್ಮೈವ ಭವತಿ" ; ಇತ್ಯಾದಿ. ಇವುಗಳ ಆಧಾರದಿಂದ, ಒಂದು ವ್ಯವಸ್ಥಿತವಾದ ದರ್ಶನವನ್ನು ರೂಪಿಸುವ ಕೆಲಸ ಆಗಿರಲಿಲ್ಲ. ಸುಮಾರು ಕ್ರಿ. ಶ. ೫೦೦ ರ ರಲ್ಲಿ ಬದುಕಿರಬಹುದಾದ , ಗೌಡಪಾದ ಮುನಿಗಳು, ಮಾಂಡೂಕ್ಯ ಕಾರಿಕೆಯ ಮೂಲಕ ಮೊಟ್ಟ ಮೊದಲಿಗೆ ಅದ್ವೈತ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಮತ್ತು ದೃಢವಾಗಿ ಪ್ರತಿಪಾದಿಸಿದರು. ಗೌಡಪಾದರ ಶಿಷ್ಯರು ಗುರು ಗೋವಿಂದ ಭಗವತ್ಪಾದರು. ಅವರ ಶಿಷ್ಯರು ಶ್ರೀ ಶಂಕರರು. ಗೋವಿಂದ ಭಗವತ್ಪಾದರು "ರಸತಂತ್ರ"ವೆಂಬ ರಸಾಯನ ಶಾಸ್ತ್ರದ ಗ್ರಂಥವನ್ನು ಮಾತ್ರ ರಚಿಸಿದ್ದಾಗಿ ತಿಳಿದು ಬರುತ್ತದೆ.


ಶ್ರೀಶಂಕರಾಚಾರ್ಯರು ( ಕ್ರಿಶ.೭೮೮ - ೮೨೦. ) ಒಬ್ಬ ಅದ್ಭುತ ವ್ಯಕ್ತಿ . ಕೇರಳದ ಕಾಲಡಿಯಲ್ಲಿ ಜನಿಸಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತವನ್ನು ಸುತ್ತಿ ತಮ್ಮ ತರ್ಕ ಶಕ್ತಿಯಿಂದ ಪ್ರತಿವಾದಿಗಳನ್ನು ಸೋಲಿಸಿ, ಅದ್ವೈತದ ಧ್ವಜವನ್ನು ಎತ್ತಿ ಹಿಡಿದವರು. ಅವರು ಬದುಕಿದ್ದು ಕೇವಲ ೩೨ ವರ್ಷಗಳ ಕಾಲ ಮಾತ್ರವಾದರೂ, ಪ್ರತಿಯೊಂದು ಕ್ಷಣವನ್ನೂ, ಸಾರ್ಥಕ ಪಡಿಸಿಕೊಂಡವರು.


ಅವರ ಬಗೆಗೆ ಜನಶ್ರುತಿ ಹೀಗಿದೆ :

ಅಷ್ಟವರ್ಷೇ ಚತುರ್ವೇದೀ 
ದ್ವಾದಶೇ ಸರ್ವಶಾಸ್ತ್ರ ವಿತ್ |
ಷೋಡಶೇ ಕೃತವಾನ್ ಭಾಷ್ಯಂ 
ದ್ವಾತ್ರಿಂಶೇ ಮುನಿರಭ್ಯಗಾತ್ ||


ಅಂದರೆ:-
ಎಂಟು ವರ್ಷಕ್ಕೆ ನಾಲ್ಕು ವೇದಗಳನ್ನು ಕಲಿತವರು, 
ಹನ್ನೆರಡನೇ ವರ್ಷಕ್ಕೆ ಸರ್ವಶಾಸ್ತ್ರಗಳನ್ನು ತಿಳಿದವರು, 
ಹದಿನಾರನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು 
ಮೂವತ್ತೆರಡನೇ ವರ್ಷದಲ್ಲಿ ಅಭ್ಯಗತರು- 
ಎಂದರೆ ಹೊರಟು ಹೋದರು.


ಅವರ ಅತ್ಯಂತ ಪ್ರಸಿದ್ಧವಾದ ಕೃತಿ ಬ್ರಹ್ಮ ಸೂತ್ರ ಭಾಷ್ಯ. ತಾರ್ಕಿಕ ಸಮಂಜಸತೆ, ಉಜ್ವಲ ದಾರ್ಶನಿಕ ಪ್ರತಿಭೆ, ಮನೋಹರ ಶೈಲಿಗಳ ಸಂಗಮ ಅದು. ಅದೊಂದು ಅಮೋಘ ಕೃತಿ. ಹಾಗೆಯೆ ಉಪನಿಷತ್ತು ಮತ್ತು ಭಗವದ್ಗೀತೆಗಳ ಮೇಲಿನ ಅವರ ಭಾಷ್ಯಗಳೂ ಅದರ ಸರಳ ನಿರೂಪಣೆ, ಅಸಾಧಾರಣ ತರ್ಕಕ್ಕೆ ಪ್ರಸಿದ್ಧಿ ಮತ್ತು ಜನಪ್ರಿಯತೆ ಪಡೆದಿದೆ. ಈ ಮೇಲಿನ ಮೂರು ವಿಷಯಕ್ಕೆ ಪ್ರಸ್ಥಾನತ್ರಯವೆಂದು ಹೆಸರು. ಅವರು ಪ್ರಸ್ಥಾನತ್ರಯದ ಮೊದಲ ಭಾಷ್ಯಕಾರರೆಂದು ಹೆಸರು ಪಡೆದಿದ್ದಾರೆ. ಅಲ್ಲದೆ ಅವರು "ಆತ್ಮ ಬೋಧೆ," ಮೊದಲಾದ ಅನೇಕ ಗ್ರಂಥಗಳನ್ನೂ ಸ್ತೋತ್ರಗಳನ್ನೂ ರಚಿಸಿದ್ದಾರೆ. ಅವರ ಶಿಷ್ಯರಾದ ಮಂಡನ ಮಿಶ್ರರು ಅವರ ಸಮಕಾಲೀನರಾದ ಮತ್ತೊಬ್ಬ ಅದ್ವೈತಿ. ಅವರು ಸುರೇಶ್ವರಾಚಾರ್ಯರೆಂದೂ - ವಾರ್ತಿಕಕಾರರೆಂದೂ ಪ್ರಸಿದ್ಧಿ. ಶಂಕರ ಭಾಷ್ಯಕ್ಕೆ ಟೀಕೆ - ವಾರ್ತಿಕವನ್ನು ಬರೆದಿದ್ದಾರೆ. 


ಶಂಕರರ ಇನ್ನೊಬ್ಬ ಶಿಷ್ಯರಾದ ಪದ್ಮಪಾದರು ಬ್ರಹ್ಮಸೂತ್ರ ಭಾಷ್ಯದ ಮೇಲೆ ಪಂಚಪಾದಿಕಾ ಎಂಬ ವ್ಯಾಖ್ಯಾನವನ್ನು ರಚಿಸಿದˌ ಶಂಕರ ಪೂರ್ವ ಯುಗ ಸಂಪಾದಿಸಿ ನಂತರ ಬಂದ ವಿದ್ಯಾರಣ್ಯರ "ಪಂಚದರ್ಶಿ" ಅತ್ಯಂತ ಜನಪ್ರಿಯ ಕೃತಿ. ಅದ್ವೈತ ದರ್ಶನವನ್ನು ಶಂಕರ ಪೂರ್ವ ಯುಗ ; ಶಂಕರ ಯುಗ ; ಶಂಕರೋತ್ತರ ಯುಗವೆಂದು ವಿಂಗಡಿಸುತ್ತಾರೆ. ಗೌಡಪಾದ ಮುನಿಗಳು ಮತ್ತು ಗೋವಿಂದಪಾದ ಭಗವತ್ಪಾದರು ಬುನಾದಿ ಹಾಕಿದ ದರ್ಶನವನ್ನು ಶಂಕರರು ಉತ್ತುಂಗ ಸ್ಥಿತಿಗೆ ತಲುಪಿಸಿ ಸ್ಪಷ್ಟರೂಪ ಕೊಟ್ಟರು. ನಂತರದ ಯುಗದಲ್ಲಿ ಶಂಕರರ ಅಭಿಪ್ರಾಯದ ಬಗೆಗೆ ವಾದ ವಿವಾದ ಭಿನ್ನಾಭಿಪಾಯಗಳ ಕೃತಿಗಳು ಉದಯಿಸಿದವು.



ಗೌಡಪಾದರು - ಗೌಡಪಾದ ಕಾರಿಕೆಯ ಸಾರಾಂಶ :


ಗೌಡಪಾದರ ಮಾಂಡೂಕ್ಯ ಕಾರಿಕೆ ಅದ್ವೈತ ದರ್ಶನದ ಗ್ರಂಥ; ೧೧೨ ಶ್ಲೋಕಗಳ ಪುಟ್ಟ ಗ್ರಂಥ. ಮಾಂಡೂಕ್ಯೋಪನಿಷತ್ತಿನ ಹನ್ನೆರಡು ( ೧೨ ) ವಾಕ್ಯಗಳ ವ್ಯಾಖ್ಯಾನ ಎನ್ನಬಹುದು. 


ಈ ಗ್ರಂಥದಲ್ಲಿ ನಾಲ್ಕು ಅಧ್ಯಾಯಗಳಿವೆ ಅವು : 

೧)ಆಗಮ ಪ್ರಕರಣ 
೨) ವೈತಥ್ಯ ಪ್ರಕರಣ 
೩) ಅದ್ವೈತ ಪ್ರಕರಣ 
೪ ) ಅಲಾತ ಶಾಂತಿ ಪ್ರಕರಣ.

ಈ ಪ್ರಕರಣಗಳಲ್ಲಿ ಮುಖ್ಯವಾಗಿ ಈ ಕೆಳಗಿನ ವಿಚಾರಗಳನ್ನು ಮಂಡಿಸಲಾಗಿದೆ:


ಅವಸ್ಥಾತ್ರಯ ವಿಚಾರ :-
ಜಾಗ್ರತ್ (ಎಚ್ಚರ), ಸ್ವಪ್ನ (ಕನಸು), ಸುಷುಪ್ತಿ (ಗಾಢ ನಿದ್ದೆ) ಇವು ಮೂರು ಅವಸ್ಥಾತ್ರಯಗಳು.  ಎಚ್ಚರದ, ಕನಸಿನ, ಪೂರ್ಣನಿದ್ರೆಯ ಸ್ಥಿತಿಗಳು. ಕನಸಿನಲ್ಲಿರುವಾಗ - ಕನಸು - ಅನುಭವ ಸತ್ಯವಾಗಿರುತ್ತದೆ. ಆಗ ಎಚ್ಚರ ಸುಳ್ಳು ; ಎಚ್ಚರವಾಗಿದ್ದಾಗ ಕನಸು ಸುಳ್ಳು ; ಇವೆರಡೂ ನಿದ್ದೆಯಲ್ಲಿ ಇಲ್ಲವೆ ಇಲ್ಲ. ಸತ್ಯಕ್ಕೆ ಅನುಭವವೆ ಆಧಾರವಾದ್ದರಿಂದ, ಕನಸಿನಲ್ಲಿ ಕಂಡದ್ದು ಮತ್ತು ಎಚ್ಚರದಲ್ಲಿ ಕಂಡದ್ದು ಸಮನಾಗಿದೆ ( ಮಿಥ್ಯೆ - ಸುಳ್ಳು. ). ಸತ್ಯವು ತ್ರಿಕಾಲಾಭಾದಿತವಾಗಿರಬೇಕು ( ಈ ಮೂರು ಕಾಲಗಳಲ್ಲಿ ಆಭಾದಿತ -ಭಾದಿತವಾಗಬಾರದು - ಮಿಥ್ಯೆಯಾಗಬಾರದು. )ˌ ಆತ್ಮನಿಗಿಂತ ಭಿನ್ನವಾದುದು ( ಬೇರೆಯಾದುದು. ) ಯಾವುದೂ ಇಲ್ಲ. ಆತ್ಮನಿಗಿಂತ ಬೇರೆಯಾಗಿರುವುದೇನಿದ್ದರೂ ಅದು ಮಿಥ್ಯೆ ( ಏನೊಂದು ಅತ್ಮನಿಗಿಂತ ಬೇರೆಯಾಗಿರಲು ಸಾಧ್ಯವಿಲ್ಲ, ಭಗವದ್ಗೀತೆಯ ಸಾರ. ). ಆದ್ದರಿಂದ ಮಿಥ್ಯೆಯು ನಮ್ಮ ಅಂತಃಕರಣದ ಜಗತ್ತಿಗೆ ಹೊರತು ಎಚ್ಚರದ ಕಾಣಿಸುವ ಜಗತ್ತಿಗೆ ಅಲ್ಲ.



ಅಜಾತಿ ವಾದ:-

ಗೌಡಪಾದರ ಇನ್ನೊಂದು ಪ್ರಸಿದ್ಧ ಸಿದ್ಧಾಂತವೆಂದರೆ, ಅಜಾತಿವಾದ. ಅಜಾತಿ ಎಂದರೆ ಅನುತ್ಪತ್ತಿ . ಹುಟ್ಟದೆ ಇರುವುದು; ಅಸ್ತಿತ್ವವು ( ಇದೆ ಎಂಬುದು. ) ಆತ್ಮಕ್ಕೆ ಮಾತ್ರ ಇರೋ ಗುಣ. ಹಾಗಾಗಿ ಯಾವುದೂ - ಯಾವ ಭಾವವೂ ಹುಟ್ಟಿಲ್ಲ. ಯಾವ ಜೀವವೂ ಹುಟ್ಟುವುದಿಲ್ಲ. ಇವನ ಜನ್ಮಕ್ಕೆ ಕಾರಣವೆ ಇಲ್ಲ. ಯಾವದೂ ಹುಟ್ಟುವುದೆ ಇಲ್ಲ. ಬ್ರಹ್ಮಕ್ಕೆ ಜನ್ಮ - ಮರಣ ಮೊದಲಾದ ಯಾವ ಬದಲಾವಣೆಗಳೂ ಇಲ್ಲ.


ಸೃಷ್ಟಿಗೆ ನಾನಾ ಕಾರಣಗಳನ್ನು ಹೇಳುತ್ತಾರೆ. ಆದರೆ ಈಶ್ವರನಿಗೆ ಸೃಷ್ಟಿಸುವ ಇಚ್ಛೆಯಾದರೂ ಎಲ್ಲಿಂದ ಬಂತು?  ಸತ್ಕಾರ್ಯವಾದಂತೆ ಕಾರ್ಯವು ಕಾರಣದಲ್ಲಿ ಇರುತ್ತದೆ. ಆದ್ದರಿಂದ ಹುಟ್ಟಿರುವುದು ಮತ್ತೆ ಹುಟ್ಟಲು ಸಾಧ್ಯವಿಲ್ಲ. ಇಲ್ಲದಿರುವುದು ( ಅಂತಃಕರಣದ ಜಗತ್ತು.) ಹುಟ್ಟುವುದಾದರೂ ಹೇಗೆ? ( ನಾಸತೋ ವಿದ್ಯತೇ ಭಾವೋ ನಾಭಾವೋವಿದ್ಯತೇ ಸತಃ : ಗೀತೆ). ಬೌದ್ಧರು ಹೇಳುವಂತೆ ಇದು ಶೂನ್ಯವೂ ಅಲ್ಲ. ಇಲ್ಲದಿರುವುದು ಹುಟ್ಟುವುದಿಲ್ಲ. ಆದರೆ ಮಾಂಡೂಕೋಪನಿಷತ್ತಿನಲ್ಲಿ ಹೇಳಿದ ನಾಲ್ಕು ಪಾದಗಳನ್ನು ಗೌಡಪಾದರು ಒಪ್ಪುತ್ತಾರೆ. ಅವು - ವಿಶ್ವ, ತೈಜಸ, ಪ್ರಾಜ್ಞ ಹಾಗೂ ತುರೀಯ.


ಹೊರ ಜಗತ್ತಿ ಜ್ಞಾನವುಳ್ಳವನು ವಿಶ್ವ.
ನೋಡುವವನುˌ ಅಂತರ್ವಿಷಯ ಜ್ಞಾನವುಳ್ಳವನು - ತೈಜಸ ( ಅರಿಯುವವನು ).
ಜ್ಞಾನ ಘನನು ಪ್ರಾಜ್ಞ, 
ಹೃದಯ ಸಾಕ್ಷಿ ಅಂದರೆ ಆತ್ಮಸಾಕ್ಷಿಗನುಗುಣವಾಗಿರುವ ನಡೆಯ ಇವರು ಕ್ರಮವಾಗಿ ಸ್ಥೂಲ, ಸೂಕ್ಷ್ಮ ಆನಂದಗಳನ್ನು ಸಹ ಅನುಭವಿಸುತ್ತಾರೆ.
ಈ ಮೂರೂ ಸ್ಥಿತಿಗೆ ಮೀರಿದ್ದು ತುರೀಯ ಅವಸ್ಥೆ; ಅದು ಆತ್ಮನ ಶುದ್ಧ ರೂಪ. ಅದ್ವೈತವು ಅಲ್ಲಿ ತಾನೆ ತಾನಾಗಿರುತ್ತದೆ.



ಸಾಧನೆ:-

ಬ್ರಹ್ಮವನ್ನು ಸಾಧಿಸಲು, ಪ್ರಣವ ಅಥವಾ ಓಂ ಕಾರ ಉಪಾಸನೆಯು ಪರಮ ಸಾಧನ; ಇದು ಸಾಮಾನ್ಯರಿಗೆ ( ಸಾಧನೆಗೆ. ) ಅಗತ್ಯ. ಓಂ ಕಾರವು ಪರಾಪರ ಬ್ರಹ್ಮ ರೂಪಿಯಾಗಿದೆ. ಓಂ ಕಾರ ಅ-ಉ-ಮˌಗಳಿಂದ ಆಗಿದೆ ; ಅವು ಕ್ರಮವಾಗಿ, ವಿಶ್ವ - ತೈಜಸ - ಪ್ರಾಜ್ಞರನ್ನು ತುರೀಯಕ್ಕೆ ಒಯ್ಯುತ್ತದೆ. ಅ ಕಾರದಿಂದ ವೈಶ್ವಾನರನಾಗುತ್ತಾರೆ. ; ಈ ಜಗತ್ತನ್ನು ನೋಡುವವನು - ಅನುಭವಿಸುವವನು ( ಇದು ಎಚ್ಚರ. ) ಉ ಕಾರದಿಂದ ತೈಜಸ ನಾಗುತ್ತಾರೆ. - ಅವರೆ ಮುಂದೆ ಹಿರಣ್ಯಗರ್ಭನಾಗುವರು ; ( ಆಂತರಿಕ ದೈವ ) ಸೂಕ್ಷ್ಮ ಜಗತ್ತು ; ( ಸ್ವಪ್ನ.). ಮ ಕಾರದಿಂದ ಈಶ್ವರನಾಗುತ್ತಾರೆ ; ಪ್ರಾಜ್ಞ ; ಆತ್ಮ ಸ್ವರೂಪ ; ( ಸುಷುಪ್ತಿಯಲ್ಲಿ.). ಓಂ ಕಾರದ ಅ ಮಾತ್ರೆ ( ಅಕ್ಷರವಿಲ್ಲದ ಕೊನೆಯ ಉಚ್ಛಾರ.). ತುರೀಯ ಅವಸ್ಥೆ.



ಅಸ್ಪರ್ಶ ಯೋಗ:-

ಅಸ್ಪರ್ಶಯೋಗವೆಂದರೆ - ಜ್ಞಾನಯೋಗ.
ಇಂದ್ರಿಯಗಳಿಗೂ, ವಿಷಯಗಳಿಗೂ ( ಮಾತ್ರವೆ ಸ್ಪರ್ಶ) ಆಗುವ ಸಂಯೋಗ ಅಥವಾ ಸಂಪರ್ಕ. ಅದರಿಂದಲೆ ಸುಖ - ದುಃಖ ಅನುಭವವಾಗುವುದು. ಅದನ್ನು ದೂರಮಾಡುವುದು ಇಲ್ಲಿನ ಯೋಗ. ಆಗ ಪರಮಾತ್ಮ ತತ್ವವೇ ಅಸ್ಪರ್ಶ ಎನಿಸಿಕೊಳ್ಳುವುದು.


ಮನಸೆ ದ್ವೈತಕ್ಕೆಲ್ಲಾ ಕಾರಣ ; ( ನಾನಾ ವಸ್ತುಗಳು - ಬೇಧಗಳು). ವಿವೇಕ, ಅಭ್ಯಾಸ ವೈರಾಗ್ಯಗಳಿಂದ ಮನೋರಾಹಿತ್ಯ ಹೊಂದಿದರೆ, ನಾನಾತ್ವವೆಲ್ಲ ನಶಿಸಿ ಹೋಗಿ ; ಪರಮಾತ್ವ ತತ್ವದಲ್ಲಿ ನೆಲೆ ನಿಲ್ಲುತ್ತದೆ. ಆದರೆ ಇದರಲ್ಲಿ ಅಡಚಣೆಗಳು. : ಅವೆ ಲಯ, ವಿಕ್ಷೇಪ, ಕಷಾಯ, ರಸಾಸ್ವಾದ.


ನಿದ್ರೆಗೆ ಒಳಗಾಗುವುದೆಂದರೆ ಲಯ.
ಸುಖಲೋಲುಪ ವಿಷಯಗಳತ್ತ ಮನಸ್ಸು ಓಡುವುದು - ವಿಕ್ಷೇಪ.
ಆಸೆಯು ( ಕಾಮವಾಸನೆˌ ಮೋಹ ಇತ್ಯಾದಿ. ) ಬೀಜ ರೂಪದಲ್ಲಿರುವುದು - - ಕಷಾಯ.
ಸಮಾಧಿಯ ಸುಖ ಅನುಭವಿಸುವುದು: ರಸಾಸ್ವಾದ.
ಇವನ್ನು ನಿವಾರಿಸಿಕೊಂಡು ದೃಢತೆಯಿಂದ ಮುಂದುವರಿದರೆ ಅದೆ: ತುರೀಯ. ಅದರಲ್ಲೆ ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ. ಅದೆ ಪರಮ ಮೋಕ್ಷ.
ಅದು ಆತ್ಮನ ಸಹಜ ಸ್ಥಿತಿ. ಅದಕ್ಕೆ ಮರಣವಾಗಬೇಕಿಲ್ಲ. ಜೀವಂತ ಇರುವಾಗಲೆ ಮುಕ್ತಿ ಸಾಧ್ಯ. ಇದು ಗೌಡಪಾದರ ಪ್ರತಿಪಾದನೆ.



ಬೌದ್ಧರ ಪ್ರಭಾವ : ಕೆಲವರು ಗೌಡಪಾದರ ಮೇಲೆ ಬೌದ್ಧರ ಪ್ರಭಾವವಾಗಿದೆ ಎಂದು ಹೇಳುತ್ತಾರೆ. ಅವರ ( ಬೌದ್ಧರ. ) ವಿಜ್ಞಾನವಾದ ಶೂನ್ಯವಾದದ ಪ್ರಭಾವವಿದೆಯೆಂದು ಅಥವಾ ಬೌದ್ಧರದ್ದೆ ಅಗಿದ್ದಿರಬಹುದೆ? ಎಂದು ಹೇಳವವರಿದ್ದಾರೆ. ಆದರೆ ಬೌದ್ಧ ದರ್ಶನವೂ ಉಪನಿಷತ್ತಿನಿಂದ ಪ್ರಭಾವಿತವಾಗಿದೆ ಎಂಬುದದರಲ್ಲಿ ಸಂಶಯವಿಲ್ಲ, ಹಾಗಾಗಿ ಉಪನಿಷತ್ತುಗಳಿಗೆ ವಿರೋಧವಿಲ್ಲದ, ಬೌದ್ಧ ದರ್ಶನ ತತ್ವಗಳು ಅದ್ವೈತ ದರ್ಶನದಲ್ಲಿ ಬರುವ ಸಾಧ್ಯತೆ ಇದೆ. ಪಾರಭಾಷಿಕ ಪದಗಳು ಒಂದೆ ಆದುದರಿಂದ ಸಾಮ್ಯತೆ ಸಹಜ. ಅಲ್ಲದೆ ಉಪನಿಷತ್ತುಗಳಿಗೆ ವಿರೋಧವಲ್ಲದ ಬೌದ್ಧ ಮತದತತ್ವಗಳನ್ನು ಒಪ್ಪಿಕೊಳ್ಳುವುದರಲ್ಲಿ, ಅವರ ವಿಶಾಲ ಮನೋಭಾವ - ಔದಾರ್ಯತೆ ಕಾಣುವುದು; ( ಅದು ಇತರರಲ್ಲಿ ಕಾಣಲಾರದು.).



"ಶ್ರೀಶಂಕರರ ಯುಗ"

ಅದ್ವೈತದ ವಿಕಾಸ : ಗೌಡಪಾದರ "ಮಾಂಡೂಕ್ಯಕಾರಿಕೆ"ಯಲ್ಲಿನ ಅದ್ವೈತದ ಸಿದ್ಧಾಂತದ, ರೂಪರೇಷೆಗಳನ್ನು  ವಿಕಸಿತಗೊಳಿಸಿದವರು ಶ್ರೀ ಶಂಕರರು. ಉಪನಿಷತ್ತು, ಬ್ರಹ್ಮ ಸೂತ್ರ, ಭಗವದ್ಗೀತೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅವುಗಳಿಗೆ ಸಮ್ಮತವಾದುದು ಅದ್ವೈತ ಸಿದ್ಧಾಂತವೆಂದು ಅತ್ಯಂತ ಕೌಶಲದಿಂದ ನಿರೂಪಿಸಿದರು. ಅವು ಪ್ರಸ್ಥಾನತ್ರಯವೆಂದು ಪ್ರಸಿದ್ಧವಾಗಿದೆ.


ಬೌದ್ಧ ಮತ್ತು ಇತರ ವೈದಿಕ ದರ್ಶನಗಳಲ್ಲಿರುವ ದೋಷಗಳನ್ನ ಎತ್ತಿ ತೋರಿಸಿ, ವೇದಾಂತವೆ ಪರಿಪೂರ್ಣ ದರ್ಶನವೆಂದು ಸಾಧಿಸಿದರು. ಸ್ವಮತ ಸ್ಥಾಪನೆ, ಪರಮತ ಖಂಡನೆಗಳಲ್ಲಿ ಅವರಂಥ ನಿಪುಣರನ್ನು ಕಾಣುವುದು ಕಷ್ಟ. ಯಾರೆ ಆಗಲಿ ಅವರ ಧೀಮಂತ ವ್ಯಕ್ತಿತ್ವಕ್ಕೆ ತಲೆಬಾಗುವುದು ಸಹಜ. ಅವರ ವೇದಾಂತವನ್ನೆಲ್ಲಾ ಒಂದು ವಾಕ್ಯದಲ್ಲಿ ಸಂಗ್ರಹಿಸಬಹುದು. ( ವ+ಓ = ವೋ- ವಓ. ) ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋಬ್ರಹೈವನಾಪರಃ : ( ಈ ವಾಕ್ಯವು ಆದಿಶಂಕರರು ಹೇಳಿದ್ದಲ್ಲ - ಅವರ ಅನುಯಾಯಿಗಳು ಹೇಳಿದ್ದು ಅನ್ನುವ ವಾದವೂ ಇದೆ.) ಬ್ರಹ್ಮವು ಸತ್ಯ ಜಗತ್ತು ಮಿಥ್ಯ; ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ ಎಂಬುದೆ ಆ ಪ್ರಸಿದ್ಧ ಉಕ್ತಿಯ ಮೂಲಸಾರ. ಸತ್,ಚಿತ್,ಆನಂದ ಸ್ವರೂಪಿಯಾದುದು ಬ್ರಹ್ಮ. ನಮ್ಮ ಕಣ್ಣಿಗೆ ಕಾಣುವ ಅನುಭವಕ್ಕೆ ಎಟುಕುವ, ಈ ಪ್ರಪಂಚವೆಲ್ಲಾ ಮಿಥ್ಯೆ. ಅಂದರೆ ಅದು ಬ್ರಹ್ಮದ ತೋರಿಕೆ. ನೀರ ಮೇಲಿನ ಗುಳ್ಳೆಗೆ ನೀರನ್ನು ಬಿಟ್ಟು ಬೇರೆ ಅಸ್ತಿತ್ವವಿಲ್ಲದಂತೆ ಈ ಪ್ರಪಂಚಕ್ಕೆ ಪ್ರತ್ಯೇಕವಾದ ಸ್ವತಂತ್ರವಾದ ಅಸ್ತಿತ್ವವಿಲ್ಲ ( ಬ್ರಹ್ಮವನ್ನು ಬಿಟ್ಟು. ). ಅರಿವಿನ ಕಣ್ಣಿನಿಂದ ನೋಡಿದರೆ ಇರುವುದೆಲ್ಲಾ ಬ್ರಹ್ಮವೆಂದು ತಿಳಿಯುತ್ತದೆ. ಜಗತ್ತು ಕೇವಲ ಮಾಯಾ ಕಲ್ಪಿತ ( ಅಂತಹಕರಣದ ಜಗತ್ತು - ಬುದ್ದಿ ಮನಸ್ಸು ಮತ್ತು ಅಹಂಕಾರದಿಂದ ತಿಳಿಯುವ ನಮ್ಮ ಜಗತ್ತು.). ಜೀವಿಗಳೂ ಅಷ್ಟೆ, ಅವು ಅನಾದಿಯಿಂದ ಅಜ್ಞಾನದ ಮುಸುಕಿನಲ್ಲಿರುತ್ತವೆ. ಜೀವಿಗಳ ಹಾಗೂ ಜೀವ ಜಗತ್ತುಗಳ ನಡುವಿನ ಬೇಧಕ್ಕೆˌ ಜೀವ - ಜಗತ್ತು - ಬ್ರಹ್ಮಗಳ ಬೇಧಕ್ಕೆ ಮಾನಸಿಕ ಅಜ್ಞಾನವೆ ಮೂಲ ಕಾರಣ.



ಈ ಅಜ್ಞಾನದ ಆವರಣವನ್ನು ಕಿತ್ತೆಸೆದರೆ ಸಾಕು, ಬೇಧವೆಲ್ಲಾ ಅಳಿದುಹೋಗಿ, ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ. ಅದೆ ಮೋಕ್ಷ; ಅದೆ ಪರಮ ಪುರುಷಾರ್ಥ. ಇದು ಶಾಂಕರ ಸಿದ್ಧಾಂತದ ಸಾರಾಂಶ. ತ್ರಿವಿಧ ಸತ್ತೆಗಳು ಜೀವ, ಜಗತ್ತುˌ ಬ್ರಹ್ಮಗಳನ್ನರಿಯಲು ಸತ್ಯವನ್ನು ಅರಿಯುವ ಮಾರ್ಗವಾಗಿದೆ ಮತ್ತು ಕೈವಲ್ಯವೆನ್ನುವ ಅನುಭವದ ಸಂಗತಿಯಲ್ಲಿ ಮೂರು ಬಗೆ. 


ಮೀಮಾಂಸಕರೆ ಸ್ವತಃ ಕೊಡುವ ಪ್ರಮಾಣೀಕೃತ ವಾದವನ್ನು ಇವರು ಒಪ್ಪುತ್ತಾರೆ. ಅಂದರೆ ನಮ್ಮ ಅನುಭವಕ್ಕೆ ಬಂದ ಜ್ಞಾನವನ್ನು ಯತಾರ್ಥವೆಂದೆ ತಿಳಿಯಬೇಕು. 

ಆದರೆ ಈ ಸತ್ಯ ಮೂರು ಬಗೆ, 
೧. ಪಾರಮಾರ್ಥಿಕ ಸತ್ಯ
೨. ವ್ಯಾವಹಾರಿಕ ಸತ್ಯ 
೩.ಪ್ರಾತಿಭಾಸಿಕ ಸತ್ಯ.
ಪಾರಮಾರ್ಥಿಕ ಸತ್ಯ. 

*ಪಾರಮಾರ್ಥಿಕ ಸತ್ಯ*

ತ್ರಿಕಾಲಾಬಾದ್ಯಂ ಸತ್ಯಂ; ಮೂರೂ ಕಾಲಗಳಲ್ಲಿˌ ಅಂದರೆ ಭೂತ, ವರ್ತಮಾನ, ಭವಿಷ್ಯತ್ - ಈ ಮೂರೂ ಕಾಲಗಳಲ್ಲಿ ಬಾಧಿತವಾಗದಿರುವುದು ಅಥವಾ ಯಾವುದೆ ಬದಲಾವಣೆಯಾಗದಿರುವುದು ಪಾರಮಾಥಿಕ ಸತ್ಯ. ಯದ್ ರೂಪೇಣ ಯನ್ನಿಶ್ಚಿತಂ ತದ್ರೂಪಂ ನವ್ಯಭಿಚರತಿ ತತ್ಸತ್ಯಂ. ( ತೈತ್ತರೀಯ ೨-೧ ಶಾಂಕರ ಭಾಷ್ಯ. ) ಅಂದರೆ ವಸ್ತುವು ಯಾವ ರೂಪದಲ್ಲಿರುವುದೆಂದು ನಿಶ್ಚತವಾಗಿದೆಯೊ, ಆ ರೂಪದಲ್ಲಿ ಬದಲಾವಣೆಯಾಗುವುದಿಲ್ಲ. ಅದು ಸತ್ಯ. ಆ ಸತ್ಯವನ್ನು ಅಲ್ಲಗಳೆಯಲು ಬರುವುದಿಲ್ಲ. ಇದಕ್ಕೆ ಪಾರಮಾರ್ಥಿಕ ಸತ್ಯವೆಂದು ಹೆಸರು. ಅದಕ್ಕೆ ಅರ್ಹವಾದುದು ಬ್ರಹ್ಮವೊಂದೇ ( ಪರಬ್ರಹ್ಮ. ) ಎಂದರೆ ಸತ್ಯವು ಯಾವಾಗಲೂ ಒಂದೆ ಬಗೆಯಲ್ಲಿ ಇರುತ್ತದೆ. ಇದು ತಾತ್ವಿಕ.


ವ್ಯವಹಾರಿಕ ಸತ್ಯ.
ಸ್ವಲ್ಪ ಕಾಲ ಇದ್ದು ನಂತರ ಬದಲಾಗುವುದು ಈ ಪ್ರಪಂಚ ಮತ್ತು ಈ ಪ್ರಾಪಂಚಿಕ ಪದಾರ್ಥಗಳು ಆ ಬಗೆಯವು. ಇದು ಐದು ಅಂಶಗಳನ್ನು ಹೊಂದಿದೆ.
ಅಸ್ತಿ ( ಇರುತ್ತದೆ. ) ;
ಭಾತಿ ( ಬೆಳಗುತ್ತದೆ - ಕಾಣುತ್ತದೆ.) ;
ಪ್ರಿಯಂ ( ಆನಂದದಾಯಕ. ) ;
ನಾಮ ( ಹೆಸರಿದೆ.) ;
ರೂಪ ( ಆಕಾರವಿದೆ.) ;
ಇವುಗಳಲ್ಲಿ ಅಸ್ತಿ , ಭಾತಿ, ಪ್ರಿಯಂಗಳೆಂಬವು, ಬ್ರಹ್ಮಕ್ಕೆ ಸೇರಿದವು, ನಾಮ - ರೂಪಗಳು ತೋರಿಕೆಯವು. ಅವು ತ್ರಿಕಾಲಾಬಾಧಿತವಾಗಿರುವುದಿಲ್ಲ. (®ತ್ರಿಕಾಲದಲ್ಲೂ ಇರುವುವೂ ಸಹ ಅಲ್ಲ.). ಹುಟ್ಟು ಸಾವುಗಳುಂಟು.


ಪ್ರಾತಿಭಾಸಿಕ ಸತ್ಯ


ಇನ್ನೂ ಕೆಳಗಿನ ಹಂತದ ಸತ್ಯ. ನಂಬಿರುವವರೆಗೆ ಮಾತ್ರ ಸತ್ಯವಾಗಿ ಗೋಚರಿಸುತ್ತದೆ. ಒಂದು ಕ್ಷಣವಾದರೂ ಇದೆಯೆಂದು ಗೋಚರಿಸಿದರೆ, ಅದು ಅನುಭವಕ್ಕೆ ಬಂದರೆ, ಅದನ್ನು ಇಲ್ಲವೆನ್ನುವಂತಿಲ್ಲ. ಉದಾ : ಹಗ್ಗವನ್ನು ಹಾವೆಂದು ತಿಳಿಯುವುದು,; ಕನಸು ಕೂಡಾ ಈ ವರ್ಗಕ್ಕೆ ಸೇರಿದ್ದು.


ಅಸತ್ಯ

ಪಾರಮಾರ್ಥಿಕ, ವ್ಯವಹಾರಿಕ, ಪ್ರಾಪಂಚಿಕ ಇವು ಮೂರೂ ಸತ್ಯಗಳಾದರೆ, ಅಸತ್ಯವೆಂದರೆ ಇಲ್ಲದಿರುವುದು , ಅಸಂಭವನೀಯ ; ಉದಾ : ಬಂಜೆಯ ಮಗ ; ಬಾನಿನ ಹೂ ; ಇತ್ಯಾದಿ. ಒಂದೆ ಒಂದು ಕ್ಷಣವಾದರೂ, ನಮಗೆ ಇದರ ಅನುಭವ ಆಗುವುದಿಲ್ಲ. ಅಸತ್ಯವೆಂದರೆ ಇರಲಾರದ್ದು. ತ್ರಿಕಾಲದಲ್ಲೂ ಇರಲಾರದ್ದು ಇವನ್ನು ತುಚ್ಛ - ಅಲೀಕ ಎನ್ನಲಾಗಿದೆ.

ಮಿಥ್ಯೆ 


ಜಗತ್ತು ಮಿಥ್ಯೆ ಎಂದರೆ ಮೇಲಿನ ಬಗೆಯ ಅಸತ್ಯವಲ್ಲ . ಜಗತ್ತು ತ್ರಿಕಾಲದಲ್ಲೂ ಒಂದೆ ರೀತಿಯಾಗಿ ಇರುವುದಿಲ್ಲ . ಮತ್ತು ಪಾರಮಾಥಿಕ ಸತ್ಯಕ್ಕೆ ಹೋಲಿಸಿದಾಗ ಮಿಥ್ಯೆ ; ಜಗತ್ತು ಇಂದ್ರಿಯ ಮನಸ್ಸುಗಳಿಗೆ ಸತ್ಯವೆಂದು ಅನುಭವಕ್ಕೆ ಬರುತ್ತೆ - ವಿಚಾರದಿಂದ ಅದು ಮಿಥ್ಯೆಯೆಂದು ತಿಳಿದು ಬರುತ್ತೆ ; ಇದನ್ನು ಶಾಂಕರ ವೇದಾಂತದಲ್ಲಿ ಅನಿರ್ವಚನೀಯ ವಿವರಿಸಲುಬಾರದ್ದು - ಮಿಥ್ಯೆ , ಎಂಬುದಾಗಿ ಹೇಳುತ್ತಾರೆ ; ಹೀಗೆ ಮಿಥ್ಯೆಯು ಅನಿರ್ವಚನೀಯವಾಗಿದ್ದು - ಅಸತ್ಯವು ಅಸಂಭವನೀಯವಾಗಿರುವುದು. ಎರಡು ಬಗೆಯಲ್ಲಿ ಎನ್ನಬಹುದು.


*ಆತ್ಮ - ಬ್ರಹ್ಮ*


ಆತ್ಮದ ಅಸ್ತಿತ್ವವು ( ಇದೆ ಎನ್ನುವುದು ) ಸ್ವಯಂ ಸಿದ್ಧ ಎನ್ನುವುದು ಅದ್ವೈತದ ಅಭಿಪ್ರಾಯ. ಇದೆಯೋ - ಇಲ್ಲವೋ ಎಂಬ ಪ್ರಶ್ನೆಗೆ ಇಲ್ಲಿ ಅವಕಾಶವೆ ಇಲ್ಲ. ಏಕೆಂದರೆ "ನಾನು ಇದ್ದೇನೆ" ಎಂದು ಪ್ರತಿಯೊಬ್ಬರೂ ತಿಳಿಯುತ್ತಾರೆ. ಇದು ಆತ್ಮದ ಅಸ್ತಿತ್ವಕ್ಕೆ ಸಾಕ್ಷಿ . ( 'ನಾನು ಇಲ್ಲ' ಎಂಬುದು ಸಾಧ್ಯವಿಲ್ಲ. ) ಅದು ( "ನಾನು ಇದ್ದೇನೆ" ಎಂಬುದು. ) ನಮ್ಮ ತಿಳಿವಿಗೆಲ್ಲಾ ಆಧಾರಭೂತವಾದುದು.


ಚರ್ಚೆಗೆ ಮೊದಲು ಆತ್ಮವು ಇದೆಯೋ ಇಲ್ಲವೋ ಅದು ಸಿದ್ಧವಾಗಬೇಕು ( ರುಜುವಾತಾಗಬೇಕು.). ಆದರೆ ಅದ್ವೈತದಲ್ಲಿ ಅದಕ್ಕೆ ಅವಕಾಶವಿಲ್ಲ. - ಏಕೆಂದರೆ ನಾನು ಇಲ್ಲ - ಆತ್ಮವು ಇಲ್ಲ ಎಂದು ನಿರಾಕರಿಸಲು ಸಾಧ್ಯವೆ ಇಲ್ಲ.
ಆಗಂತುಕ ( ಹೊರಗಿನಿಂದ ಬಂದಂತ. ) ವಸ್ತುವನ್ನು ನಿರಾಕರಿಸಬಹುದು. ಆದರೆ ಅದರ ಸ್ವರೂಪವನ್ನು ನಿರಾಕರಿಸಲು ಆಗುವುದಿಲ್ಲ. ಉದಾ : ಬೆಂಕಿಯನ್ನು ನಿರಾಕರಿಸಬಹುದು ( ಭ್ರಮೆ ಎಂದು.) ; ಆದರೆ ಅದರ ಉಷ್ಣತೆಯನ್ನು ನಿರಾಕರಿಸಲು ಬರುವುದಿಲ್ಲ. ಆದ್ದರಿಂದ ನಾನು ಇದ್ದೇನೆ ಎಂಬ ಅನುಭವವನ್ನು ನಿರಾಕರಿಸಲು ಬಾರದು. ಆ ಕಾರಣ ಆತ್ಮವು ಸ್ವಯಂ ಸಿದ್ಧವಾದುದು.



ಆದ್ದರಿಂದ ಚರ್ಚಿಸ ಬೇಕಾದದ್ದು ಆತ್ಮದ ಅಸ್ತಿತ್ವದ ಬಗೆಗಲ್ಲ - ಅದರ ಸ್ವರೂಪದ ಬಗೆಗೆ. ಚಾರ್ವಾಕರು ಮುಂತಾದವರು ಇಂದ್ರಿಯ, ಮನಸ್ಸುಗಳನ್ನೆ ಆತ್ಮ ಎಂದು ಭಾವಿಸಿದರೂ, ಆತ್ಮ ಅವುಗಳಿಗಿಂತ ಭಿನ್ನವಾದುದು. ಅದನ್ನು ಜಡವೆಂದಾಗಲಿ ( ಇಂದ್ರಿಯಗಳಂತೆ ) ಅವುಗಳಿಂದ ಹುಟ್ಟಿದ್ದೆಂದಾಗಲಿ ತಿಳಿಯುವುದು ಸರಿಯಲ್ಲ. ಅದು ( ಆತ್ಮ.) ಚೈತನ್ಯ ಸ್ವರೂಪಿ. ಜಾಗ್ರತ್, ಸ್ವಪ್ನˌ ಸುಷುಪ್ತಿಗಳೆಂಬ ಮೂರು ಅವಸ್ಥೆಗೂ ಇರುವುದು. ಈ ಅವಸ್ಥೆಗಳನ್ನು ಪರಿಶೀಲಿಸಿದರೆ, "ನಾನು ಇದ್ದೇನೆ" ಎಂಬ ಅನುಭವ, ಈ ಮೂರೂ ಅವಸ್ಥೆಗೂ ಇರುವುದು.



ಜ್ಞಾನ ಸ್ವರೂಪಿ


ಆತ್ಮವು ಜ್ಞಾನ ಸ್ವರೂಪಿ. ಜ್ಞಾನವು ಎರಡು ಬಗೆ. ನಿತ್ಯ, ಅನಿತ್ಯ ಎಂದು ; ಯಾವುದೆ ವಿಷಯಕ್ಕೆ ( ಪಂಚೇಂದ್ರಿಯಗಳಿಗೆ ) ಸಂಬಂಧಿಸಿದ ಜ್ಞಾನವು ಅನಿತ್ಯವಾದುದು. ಜ್ಞಾನಕ್ಕೆ ವಿಷಯಗಳಿರುವಾಗ ( ಗುಣ ) ಮಾತ್ರ ಆ ಜ್ಞಾನ ಇರುತ್ತದೆ - ಇಲ್ಲವಾದರೆ ಇಲ್ಲ. ಮೂಗಿಗೆ ಗ್ರಹಣ ಶಕ್ತಿ ಇದ್ದರೆ ಪರಿಮಳ ಇರುತ್ತದೆ - ಇಲ್ಲದಿದ್ದರೆ ಪರಿಮಳವಿಲ್ಲ. ಆದರೆ ಶುದ್ಧ ಜ್ಞಾನವು ಯಾವಾಗಲೂ ಇರುತ್ತದೆ.



*ಅಖಂಡ ಆನಂದ ರೂಪಿ*


ಆತ್ಮವು ಆನಂದ ರೂಪಿಯಾದುದು, ಅಲ್ಲಿ ದುಃಖದ ಸೋಂಕು ಇಲ್ಲ. ವಿಷಯ ( ಇಂದ್ರಿಯ. ) ಸಂಪರ್ಕದಿಂದ ಸುಖ - ದುಃಖ ಉಂಟಾಗುತ್ತದೆ. ಶುದ್ಧ ಚೈತನ್ಯಕ್ಕೆ ವಿಷಯ ಸಂಪರ್ಕವಿಲ್ಲದಿರುವಾಗ, ಸುಖ ದುಃಖಗಳಿಗೆ ಮೀರಿದ ಸ್ಥಿತಿ ಇರುತ್ತದೆ. ಇದು ಆನಂದ. ಆತ್ಮವು ಕರ್ತೃವಾಗಲಿ ಭೋಕ್ತೃವಾಗಲಿ ಆಗಲಾರದ್ದು. ಏಕೆಂದರೆ ಅದು ಕ್ರಿಯೆಗೆ ಆಶ್ರಯವಾಗಿದೆ. ಕಾರಣ ಅದರಲ್ಲಿ ಬದಲಾವಣೆ ಇಲ್ಲ. ಬದಲಾವಣೆ ಇದ್ದರೆ ಅನಿತ್ಯವಾಗುವುದು. ಆತ್ಮವೆಂಬ ಈ ಚೈತನ್ಯವು ಸಮಸ್ತ ಪ್ರಪಂಚವನ್ನೂ ವ್ಯಾಪಿಸಿದೆ. ಅದು  ಅಖಂಡ - ಅದ್ವಯ ; ಇದು ಬಿಟ್ಟರೆ ಮತ್ತಾವದೂ ಪಾರಮಾರ್ಥಿಕ ಸತ್ಯವಲ್ಲ.



ಆತ್ಮ - ಬ್ರಹ್ಮ


ಆತ್ಮದ ಅಸ್ತಿತ್ವವು ಸಿದ್ಧವಾದ ಮೇಲೆ. ಬ್ರಹ್ಮ ತತ್ವದ ಸಿದ್ಧಿಯೂ ಆಯಿತು. ಏಕೆಂದರೆ ಆತ್ಮವೆ ಬ್ರಹ್ಮ. ( ಸರ್ವಸ್ಯ, ಆತ್ಮತ್ವಾಚ್ಚ , ಬ್ರಹ್ಮಾಸ್ತಿತ್ವ ಪ್ರಸಿದ್ಧಿಃ : ಶಂಕರ ಭಾಷ್ಯ-೧.೧.೧. )


*ಬ್ರಹ್ಮ ಮತ್ತು ಈಶ್ವರ*


*ನಿರ್ಗುಣ ಬ್ರಹ್ಮ :* ಉಪನಿಷತ್ತುಗಳಲ್ಲಿ ಬ್ರಹ್ಮದ ತತ್ವವನ್ನು ಎರಡು ರೀತಿಯಲ್ಲಿ ಮಾಡಿದೆ. ಕೆಲವೆಡೆ ಬ್ರಹ್ಮವನ್ನು - 'ನೇತಿ', 'ನೇತಿ' ,ಎಂದು ; ( ಹೀಗಲ್ಲ , ಇದಲ್ಲ, ಎಂದು. ) ಭಾಷೆಯೆಲ್ಲಾ ದ್ವೈತಮಯವಾದ್ದರಿಂದ, ಅವು ಬ್ರಹ್ಮ ತತ್ವವನ್ನು ವಿವರಿಸಲಾರವು. ಗುರೋಸ್ತು ಮೌನಂ ವ್ಯಾಖಾನಂ, ಎಂಬಂತೆ ಮೌನದಿಂದಲೆ ಬ್ರಹ್ಮವನ್ನು ತಿಳಿಸಬೇಕಾಗುತ್ತದೆ. ಇದು "ಹೌದು", ಎನ್ನುವುದಕ್ಕಿಂತ "ಇದಲ್ಲ ", ಎಂಬುದೆ ಸರಿ ಎಂಬುದು. ಕೆಲವೆಡೆ ಬ್ರಹ್ಮವನ್ನು ಸಚ್ಚಿದಾನಂದ ರೂಪ ಎನ್ನಲಾಗಿದೆ. ಮತ್ತೆ ಕೆಲವೆಡೆ ಇದು ಎಲ್ಲವನ್ನೂ ಮೀರಿದ್ದು - ನಿರ್ಗುಣ ಬ್ರಹ್ಮವೆಂದು ಕರೆಯಲಾಗಿದೆ. 

ಇನ್ನೊಂದು ಸಗುಣ ಬ್ರಹ್ಮ.

ಸಗುಣ ಬ್ರಹ್ಮ

ಇನ್ನೊಂದು ಸಗುಣ ಬ್ರಹ್ಮದ ಸ್ವರೂಪವರ್ಣನೆ. ಬ್ರಹ್ಮಸೂತ್ರದ ಜನ್ಮಾದ್ಯಸ್ಯ ಯತಃ ( ೧.೧.೨ ) ಜಗತ್ತಿನ ಸೃಷ್ಟಿ , ಸ್ಥಿತಿˌ ಲಯಗಳಿಗೆ ಕಾರಣವಾದ ಬ್ರಹ್ಮ. ಈ ಸಗುಣ ಬ್ರಹ್ಮವನ್ನೆ ಈಶ್ವರನೆಂದು ಕರೆಯುವರು. ಬ್ರಹ್ಮವು ಸಗುಣವೂ ನಿರ್ಗುಣವೂ ಆಗಿದೆಯೆ ಎಂಬ ಪ್ರಶ್ನೆ ಏಳುತ್ತದೆ. ಅದ್ವೈತ ವೇದಾಂತವು ಬ್ರಹ್ಮವು ನಿರ್ಗುಣವೆಂದೆ ಹೇಳುತ್ತದೆ.


ನಿರ್ಗುಣ ಬ್ರಹ್ಮವನ್ನು "ಪರಬ್ರಹ್ಮ"ವೆಂದೂ ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣವಾದ ಬ್ರಹ್ಮವನ್ನು "ಅಪರಬ್ರಹ್ಮ"ವೆಂದೂ ಕರೆಯಲಾಗಿದೆ. ಅದು ನಾಮ, ರೂಪ, ಬೇಧಗಳಿಂದ ಕೂಡಿದ ಈಶ್ವರ. "ಪರಬ್ರಹ್ಮ"ವು ಉಪಾದಿಗಳಿಂದ ( ನಾಮ, ರೂಪ - ಇತ್ಯಾದಿ. ) ದೂರವಾದದ್ದು. ಹಾಗಾಗಿ, ಸೋಪಾಧಿಕ ಬ್ರಹ್ಮ, ನಿರುಪಾಧಿಕ ಬ್ರಹ್ಮವೆಂದು ಕರೆದಿದೆ. 'ಆದರೆ ಇವುಗಳಲ್ಲಿ ಬೇಧವಿಲ್ಲ' ;. ಅದೆ ಇದಾಗಿ ತೋರುವುದು. ನಿರ್ಗುಣಮಪಿಸದ್ ಬ್ರಹ್ಮ, ನಾಮ, ರೂಪ ಗತೈಃ ಗುಣೈಃ ಸಗುಣಂ, ಉಪಾಸನಾರ್ಥಂ ತತ್ರ ತತ್ರ ಉಪದಿಶ್ಯತೇ ( ಶಂ.ಭಾ.೧.೨.೧೪.), ಈಶ್ವರನ ಉಪಾಸನೆಯಿಂದ ಚಿತ್ತ ಶುದ್ಧಿಯಾಗಿ ಜ್ಞಾನ ಮಾರ್ಗ ಅನುಸರಿಸಲು ಮತ್ತು ಕೊನೆಯ ಮೆಟ್ಟಿಲಾದ ಪರಬ್ರಹ್ಮವನ್ನು ಪಡೆಯಬಹುದು. ಕರ್ಮಫಲವನ್ನು ವಿವರಿಸಲು, ಈಶ್ವರನನ್ನು ಒಪ್ಪಬೇಕಾಗುವುದು. - ಎಂದು ಶ್ರೀಶಂಕರರು ವಾದಿಸುತ್ತಾರೆ.


*ಈಶ್ವರ ( ಸೃಷ್ಟಿಕರ್ತ)*


ಕಾರ್ಯಕಾರಣ ವಾದದ ಬಲದಿಂದ ಜಗತ್ತಿಗೆ ಕಾರಣವೊಂದಿದೆ ಎಂದು ಸಿದ್ಧಪಡಿಸಬಹುದು. ಆದರೆ ಈಶ್ವರನೆ ಕಾರಣವೆಂಬುದನ್ನು ಸಿದ್ಧಪಡಿಸಲಾಗದು. ( ಬ್ರ.ಸೂ. ಜನ್ಮಾದ್ಯಸ್ಯ ಯತಃ ಕ್ಕೆ ಭಾಷ್ಯ. ) ಈಶ್ವರನೆ ಸೃಷ್ಟಿಕರ್ತನೆಂಬುದಕ್ಕೆ ಶ್ರುತಿಯೆ ಆಧಾರ. ಅದರಂತೆ ಈಶ್ವರನು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣ ; ಕರ್ಮಫಲದಾತ ; ಶಿಷ್ಟ ರಕ್ಷಕ ದುಷ್ಟ ಶಿಕ್ಷಕ ; ಭಕ್ತಿ ಪ್ರೀತ ವರದಾತ ; ವೇದ ರಕ್ಷಕ ( ಪುನರುಜ್ಜೀವಕಾರಕ. ) ; ಆದರೆ ಕರ್ಮದ ಸೋಂಕಿಲ್ಲ. ಮಾಯೆ ಅವನ ಶಕ್ತಿ. ಆದರೆ ಮಾಯಾತೀತ ; ಜಗತ್ತಿನ ಸೃಷ್ಟಿ ಅವನ ಲೀಲೆ, ಮಾಯೆ. ( ಕಾರಣ ಜಗತ್ತನ್ನು ಏಕೆ ಸೃಷ್ಟಿಸಿದ? ಅನ್ನುವುದಕ್ಕೆ ಉತ್ತರವಿಲ್ಲ. ) ಅಥವಾ ಮಾಯೆ; ಜೀವಿಯು ಬ್ರಹ್ಮವನ್ನು ಜಗತ್ತನಿಂದಲೆ ತಿಳಿಯಬೇಕು, ಹೇಗೆಂದರೆ, ಮಡಿಕೆಯನ್ನು ಬಿಟ್ಟು ಮಣ್ಣಿನ ಸ್ವರೂಪ ಜೀವನಿಗೆ ಗೊತ್ತಿಲ್ಲವಾದ್ದರಿಂದ ಮಡಿಕೆಯಿಂದಲೆ ಮಣ್ಣನ್ನು ಅರಿಯಲು ಸಾಧ್ಯ. ( ಆದರಿದು ಶಂಕರರ ಅಭಿಪ್ರಾಯವಲ್ಲ. ); ಅವನು ಅದರ ಸೂತ್ರಧಾರಿ - ಪಾತ್ರಧಾರಿ - ಪ್ರೇಕ್ಷಕ. : ನಂತರದಲ್ಲಿ ಅದ್ವೈತದ ಈ ಈಶ್ವರನ ಅಸ್ತಿತ್ವವಾದದಿಂದ ಬೇರೆ ಬೇರೆ ವಾದಗಳು ಪಂಥಗಳು ಹೊರಟವು / ಹುಟ್ಟಿದವು. ಅವಿದ್ಯೆ ( ಮಾಯೆ ) ,
ಈಶ್ವರ, - ನಿರ್ಗುಣ ಬ್ರಹ್ಮದಿಂದ, ಜೀವ, ಜಗತ್ತು ತರ್ಕಕ್ಕೆ ನಿಲುಕದ ಪ್ರಶ್ನೆಯಾಗಿಯೆ ಉಳಿದಿದೆ. ಅವಿದ್ಯೆ ದೂರವಾದ ನಂತರ ಸಾಕ್ಷಾತ್ಕಾರ. ನಂತರ ಈ ಪ್ರಶ್ನೆಗಳಿಗೆ ಅರ್ಥವಿಲ್ಲ. ಆದ್ದರಿಂದ ಜಗತ್ತಿನ ಮಾಯೆ ಅನಿರ್ವಚನೀಯ.


ಮಾಯಾವಾದ

ಮಾಯಾವಾದವು ಅದ್ವೈತದ ಪ್ರಮುಖ ಸಿದ್ಧಾಂತಗಳಲ್ಲೊಂದು. ಅದ್ವೈತದ ಅಡಿಗಲ್ಲೆಂದರೆ ತಪ್ಪಲ್ಲ . ಜಗನ್ಮಿಥ್ಯಾ ತತ್ವವು ಮಾಯಾವಾದವನ್ನು ಆಧರಿಸಿದೆ. ಅದ್ವೈತದಲ್ಲಿ , ಬ್ರಹ್ಮ - ಈಶ್ವರ, ಬ್ರಹ್ಮ - ಜಗತ್ತು , ಬ್ರಹ್ಮ - ಜೀವ, ಈ ಸಂಬಂಧಗಳನ್ನು ವಿವರಿಸುವಲ್ಲಿ ಮಾಯೆಯ ಕಲ್ಪನೆ ಅಗತ್ಯ. ಹಾಗಾಗಿ ಅದ್ವೈತಿಗಳನ್ನು ಮಾಯಾವಾದಿಗಳೆಂದು ಕರೆಯುತ್ತಾರೆ. ಮಾಯಾ ಶಬ್ದವು ವೇದ ಉಪನಿಷತ್ತುಗಳಲ್ಲಿಯೂ ಉಪಯೋಗಿಸಲ್ಪಟ್ಟಿದೆ. ಅದನ್ನು ಪ್ರಪಂಚದ ವಿವರಣೆಯ ಪ್ರಮುಖ ಸಿದ್ಧಾಂತವಾಗಿ ಅದ್ವೈತ ನಿರೂಪಿಸಿದೆ.

*ಅದ್ವೈತ ವೇದಾಂತದಲ್ಲಿ ಮಾಯೆ*


ಅವಿದ್ಯೆ, ಅಜ್ಞಾನˌ ಅಧ್ಯಾಸˌ ಅದ್ಯಾರೋಪˌ ಅನಿರ್ವಚನೀಯˌ  ವಿವರ್ತˌ ಭ್ರಾಂತಿ, ಭ್ರಮೆˌ ನಾಮ ರೂಪ, ಅವ್ಯಕ್ತ, ಅಕ್ಷರˌ ಬೀಜ ಶಕ್ತಿˌ ಮೂಲ ಪ್ರಕೃತಿ ಇತ್ಯಾದಿ ಪದಗಳನ್ನು ಹೆಚ್ಚಾಗಿ ಪರಕೀಯ ( ಒಂದೇ ಅರ್ಥದ.) ಪದಗಳಂತೆ ಬಳಸುತ್ತಾರೆ.

*ಮಾಯೆ : ಶಂಕರ ಮತ*

೧. ಸಾಂಖ್ಯರ ಪ್ರಕೃತಿಯಂತೆ ಜಡ ; ಸಾಂಖ್ಯರು ಪುರುಷ ( ಜೀವ )ನನ್ನು ಚೈತನ್ಯವೆಂದರೆ - ಇಲ್ಲಿ ಬ್ರಹ್ಮ ಚೈತನ್ಯ. ಸಾಂಖ್ಯರಲ್ಲಿ ಪ್ರಕೃತಿ ಸ್ವತಂತ್ರ ಅಸ್ತಿತ್ವ ಉಳ್ಳದ್ದು. ಆದರೆ ಇಲ್ಲಿ ಮಾಯೆ ಪ್ರಪಂಚಕ್ಕೆ ಕಾರಣವಾದರೂ, ಸ್ವತಂತ್ರವಲ್ಲ. ಅದ್ವೈತದಲ್ಲಿ ಸಾಂಖ್ಯರಂತೆ ಅಂತಿಮ ಸತ್ಯತೆಯೂ ಅದಕ್ಕಿಲ್ಲ.


೨. ಮಾಯೆಯು ಬ್ರಹ್ಮನ ಶಕ್ತಿ. ಅದು ಬ್ರಹ್ಮದಿಂದ ಬೇರೆಯಲ್ಲ ( ಅನನ್ಯ. ) ; ಬೆಂಕಿಯ ಸುಡುವ ಸ್ವಭಾವವಿದ್ದಂತೆ. ಇದು ಬ್ರಹ್ಮ ಸ್ವರೂಪವೂ ಅಲ್ಲ.


೩. ಮಾಯೆಯು ಅನಾದಿಯಾಗಿದೆ ( ಆದಿ ಇಲ್ಲದ್ದು ಅದರ ಆರಂಭ ಯಾವಾಗ ಹೇಗೆ ಆಯಿತು ಎಂದು ಹೇಳಲು ಸಾದ್ಯವಿಲ್ಲ. )

೪ . ಮಾಯೆಯು ಪಾರಮಾರ್ಥಿಕ ಸತ್ಯವಲ್ಲ. ಭಾವ ರೂಪವಾದುದು. ಅದಕ್ಕೆ ಎರಡು ಶಕ್ತಿ ಇದೆ. ಆವರಣ ಮತ್ತು ವಿಕ್ಷೇಪ. ಆವರಣವು ಬ್ರಹ್ಮವನ್ನು ಮರೆಮಾಡುತ್ತದೆ. ವಿಕ್ಷೇಪವು ಬ್ರಹ್ಮವು ಜೀವನಾಗಿ ಕಾಣುವಂತೆ ಮಾಡುತ್ತದೆ. ಇಲ್ಲದ್ದನ್ನು ಇದೆ ಎಂದು ತೋರಿಸುವುದು. ( ಉದಾ : ಹಗ್ಗವನ್ನು ಹಾವಾಗಿ ಕಾಣುವಂತೆ ಮಾಡುವುದು. ) ಶೋಕ ಮೋಹ ಇತ್ಯಾದಿ.


೫ . ಮಾಯೆಯು ಅನಿರ್ವಚನೀಯವಾದುದು. - ವಿವರಿಸಲು ಬಾರದ್ದು. ಎರಡು ರೂಪದ್ದು ಅಲ್ಲ. ಇದು ಪಾರಮಾರ್ಥಿಕ ಸತ್ಯವಲ್ಲ. ಆದುದರಿಂದ ಇದೆ ಎನ್ನುವಂತಿಲ್ಲ. ಇದು ಪ್ರಪಂಚವನ್ನು ತೋರಿಸುತ್ತಿರುವ ಕಾರಣ ಇಲ್ಲವೆಂದು ಹೇಳುವ ಹಾಗಿಲ್ಲ. ಜ್ಞಾನವಾದ ನಂತರ ಕಾಣದಿರುವುದರಿಂದ ನಿಜವಲ್ಲ.


೬ . ಮಾಯೆಯು ವ್ಯವಹಾರಿಕ ಸತ್ಯವಾಗಿದೆ. ಅಧ್ಯಾಸ ರೂಪವಾಗಿರುವುದರಿಂದ, 'ವಿವರ್ತ' ( ತೋರಿಕೆ. ) ವಾಗಿದೆ. ಹಗ್ಗದಲ್ಲಿ ಹಾವು ತೋರಿದಂತೆ. ಭ್ರಾಂತಿರೂಪವಾಗಿದೆ.


೭ . ಬ್ರಹ್ಮ ಜ್ಞಾನವಾದ ಕೂಡಲೆ ಇದು ನಿವಾರಣೆಯಾಗುತ್ತದೆ. ಬೆಳಕಿನಿಂದ ಕತ್ತಲೆ ಹೋದಂತೆ.


೮ . ಇದಕ್ಕೆ ಬ್ರಹ್ಮವು ಆಶ್ರಯವೂ ಹೌದು ವಿಷಯವೂ ಹೌದು. ಇಂದ್ರಜಾಲ ಮಾಡುವವನು ತನ್ನ ಇಂದ್ರ ಜಾಲಕ್ಕೆ ವಶನಾಗದಿರುವಂತೆ.

ವಿವರ್ತ ವಾದ.


ಇದು ಅದ್ವೈತ ವೇದಾಂತಕ್ಕೆ ಸಮ್ಮತವಾದ ಕಾರ್ಯಕಾರಣ ವಾದ. ಕಾರ್ಯವು ಕಾರಣದಿಂದ ಬೇರೆಯಲ್ಲ. ಉದಾ : ಕಾರ್ಯವಾದ ಮಡಕೆಯಲ್ಲಿ ಕಾರಣವಾದ ಮಣ್ಣು ಇದೆ. ಮಣ್ಣೆ ಮಡಿಕೆಯಾಗಿದೆ. ಆದರೆ ವಿವರ್ತದಲ್ಲಿ ತೋರಿಕೆಯ ಬದಲಾವಣೆಯಾಗುವುದು. ಉದಾ : ನೀರು ಗುಳ್ಳೆಯಾಗುವುದು. ಕಪ್ಪೆ ಚಿಪ್ಪು ಬೆಳ್ಳಿಯಾಗಿ ತೋರುವುದು - ವಿವರ್ತ. ಕಾರಣವು ನಿಜವಾಗಿ ಬದಲಾವಣೆಯಾಗದೆ ತೋರಿಕೆಯ ಬದಲಾವಣೆಯಗುವುದು ( ಕಾರ್ಯ ). ದೇವದತ್ತನು ಮಲಗಿದ್ದರೂ, ಕುಳಿತಿದ್ದರೂ ದೆವದತ್ತನೆ ಯಜ್ಞದತ್ತನಾಗುವುದಿಲ್ಲ. ಹಾಗೆˌ
ಆದ್ದರಿಂದ, ಹಾಗೆಯೆ ಪ್ರಪಂಚವಾಗಿ ಕಾಣುವುದೂ ಬ್ರಹ್ಮವೆ ಹೊರತು ಬೇರೆಯಲ್ಲ ಎಂಬುದು ಅದ್ವೈತ ದರ್ಶನ.


ಜಗತ್ತು

ಜಗತ್ತು ಪಾರಮಾರ್ಥಿಕ ದೃಷ್ಟಿಯಿಂದ ಬಾಧಿತವಾಗಿ ಅಸತ್ಯ ( ಮಿಥ್ಯೆ. ) ಎಂಬುದು ತೀರ್ಮಾನವಾಗಿದ್ದರೂ, ವ್ಯವಹಾರಿಕ ಸತ್ಯವನ್ನು ( ಸತ್ಯವೆಂದು. ) ಹೊಂದಿರುವುದರಿಂದ, ವಾಸ್ತವವಾದುದು. ಅದು ( ಜಗತ್ತು. ) ಬ್ರಹ್ಮದ ನೆಲೆಯಿಂದ ತೋರಿಕೆಯಾದರೂ ಜೀವದ ( ಜೀವ-ನ ನೆಲೆಯಿಂದ. ) ಸತ್ಯ.
ಜಗತ್ತಿಗೆ ಬ್ರಹ್ಮವೆ ಕಾರಣ. ಇದು ಶ್ರುತಿ ( ವೇದ. ) ಸಮ್ಮತ. ಕೆಲವರು ( ನ್ಯಾಯ.) ಈಶ್ವರ ನಿಮಿತ್ತ ಕಾರಣ ಮಾತ್ರ ಎನ್ನುತ್ತಾರೆ ( ಮಡಕೆಗೆ ಕುಂಬಾರನಿದ್ದಂತೆ.).
ಆದರೆ ವೇದಾಂತವುˌ ಈಶ್ವರನು ನಿಮಿತ್ತ ಕಾರಣವೂ ಹೌದು ; ಉಪಾದಾನ ಕಾರಣವೂ ಹೌದು ಎನ್ನುತ್ತದೆ ( ಮಡಕೆಗೆ ಮಣ್ಣು ಇದ್ದಂತೆ.). ಈಶ್ವರನು ಜಗತ್ತನ್ನು ಉಂಟುಮಾಡುವುದು ತನ್ನಿಂದಲೆ. ಮಾಯೆ ಎಂಬ ಉಪಾದಿಯಿಂದಲೆ ಈಶ್ವರನು ಜಗತ್ತನ್ನು ಉಂಟುಮಾಡುತ್ತಾನೆ. ಅವನು ಚೇತನನೂ ಹೌದು ; ಅವನು ತನ್ನ ಇಚ್ಛೆಯಿಂದಲೆ - ಅವನೆ ಮಾಯೆಯ ಉಪಾದಿಯಿಂದ ಜಗತ್ತಾಗಿ ತೋರುತ್ತಾನೆ. ಚೈತನ್ಯದಿಂದ ಜಡವಾದ ಚೇತನ ಹೇಗೆ ಉಂಟಾಗುವುದೆಂದರೆ, ಅದು ತಪ್ಪಲ್ಲ, ಪುರುಷನಲ್ಲಿ ಉಗುರು ಇದ್ದಂತೆ - ಒಟ್ಟಿನಲ್ಲಿ ಅನಿರ್ವಚನೀಯ.


ಸೃಷ್ಟಿ

ಜಗತ್ತಿನ ಸೃಷ್ಟಿ ಹೇಗೆ? ತಮೋಗುಣವು ಪ್ರಧಾನವಾದ ವಿಕ್ಷೇಪ ಶಕ್ತಿಯಿಂದ ( ಮಾಯೆಯಿಂದ ) ಕೂಡಿದ ಚೈತನ್ಯದಿಂದ, ಆಕಾಶವು ಮೊದಲು ಹುಟ್ಟಿತು; ಆಕಾಶದಿಂದ ವಾಯು; ವಾಯುವಿನಿಂದ ಅಗ್ನಿ; ಅಗ್ನಿಯಿಂದ ಜಲ ; ಜಲದಿಂದ ಪೃಥ್ವಿ. ; - ಅದರಿಂದ ತನ್ಮಾತ್ರೆಗಳು ; ಈ ಸೂಕ್ಕ್ಮವಾದ ತನ್ಮಾತ್ರೆಗಳಿಂದ ಸೂಕ್ಷ್ಮ ಶರೀರ ; ಸ್ಥೂಲ ಭೂತಗಳು ಹುಟ್ಟುತ್ತವೆ - ( ಪಂಚೀಕರಣ ವಿಧಾನ. )


*ಜೀವ - ಈಶ್ವರ*


ಜೀವನಿಗೆ ಸ್ಥೂಲˌ ಸೂಕ್ಷ್ಮ , ಕಾರಣಗಳೆಂಬ ಮೂರು ಶರೀರಗಳು. ಜಾಗ್ರತ್ , ಸ್ವಪ್ನ , ಸುಷುಪ್ತಿಗಳೆಂಬ ಮೂರು ಅವಸ್ಥೆಗಳು ; ಅನ್ನಮಯˌ ಪ್ರಾಣಮಯˌ ಮನೋಮಯˌ ವಿಜ್ಞಾನಮಯ, ಆನಂದಮಯ ; ಎಂಬ ಐದು ಕೋಶಗಳು. ( ಒಂದರಿಂದ ಇನ್ನೊಂದು ಉನ್ನತ ಸ್ಥಿತಿ,) ; ವಿಶ್ವ, ತೈಜಸ, ಪ್ರಾಜ್ಞ ಎಂಬ ದೇವತೆಗಳ ಹೆಸರುಗಳು ಜೀವನಿಗೆ - ಜಾಗ್ರತ್, ಸ್ವಪ್ನ, ಸುಷುಪ್ತಿಯನ್ನು ಆಧರಿಸಿ ಈ ಹೆಸರುಗಳು ಇವೆ. ಅದೆ ರೀತಿಯಲ್ಲಿ ಈಶ್ವರನಿಗೂ ವೈಶ್ವಾನರ ( ಕಾಣುವ ಜಗತ್ತು. ), ಸೂತ್ರಾತ್ಮ ( ಸ್ವಪ್ನದ ಈಶ್ವರ - ದೇವತೆ.) ; ಹಿರಣ್ಯ ಗರ್ಭ ( ಸುಷುಪ್ತಿಯ ಈಶ್ವರ ಅಥವಾ ಸಮಾಧಿಯ ಈಶ್ವರ.) ಎಂಬ ಹೆಸರುಗಳಿವೆ.


ಅಂತಃಕರಣ ಮತ್ತು ಸಾಕ್ಷಿ


ಅಂತಃಕರಣವು ಜಡವಾಗಿದೆ ( ಸ್ವತಃ ಚೈತನ್ಯವಲ್ಲ.). ತೇಜಸ್ಸಿನ ಅಂಶವು ಪ್ರಧಾನವಾಗಿದೆ. ಇದು ಚಂಚಲವೂ ಕ್ರಿಯಾಶೀಲವೂ ಆಗಿದೆ. ಇದರ ಕ್ರಿಯೆಗಳೆ ವೃತ್ತಿಗಳು. ಗಾಢ ನಿದ್ದೆ, ಮೂರ್ಛೆಗಳನ್ನು ಬಿಟ್ಟರೆ, ಅದು ಸದಾ ವೃತ್ತಿಯುಳ್ಳದ್ದೆ ಆಗಿರುತ್ತದೆ. ಇದನ್ನೆ ನಾವು ಜ್ಞಾನವೆಂದು ಕರೆಯುವುದು ಇವೆ ವೃತ್ತಿಗಳನ್ನು.


ಸಾಕ್ಷಿ : ಅಂತಃಕರಣ ಜಡವಾದುದರಿಂದ ವೃತ್ತಿಗಳು ಹುಟ್ಟಲು ಚೈತನ್ಯಬೇಕು. ಜೀವನಲ್ಲಿರುವ ಚೈತನ್ಯಾಂಶವೆ, ಸಾಕ್ಷಿ ಎನಿಸಿಕೊಳ್ಳುತ್ತದೆ. ಕಾರಣ ಇದು ಅಂತಃಕರಣದಲ್ಲಿ ( ಮನಸ್ಸು , ಬುದ್ಧಿ , ಅಹಂಕಾರ , ಚಿತ್ತ . ಇವು ಒಟ್ಟು ಅಂತಃಕರಣ ಎನ್ನಿಸಿಕೊಳ್ಳುತ್ತದೆ. ) ನೇರವಾಗಿ ಭಾಗಿಯಾಗುವುದಿಲ್ಲ. ನಾಟಕ ರಂಗದಲ್ಲಿರುವ ದೀಪದಂತೆ ( ಸಾಕ್ಷಿ. ) ಇರುತ್ತದೆ.


ವ್ಯವಹಾರದಲ್ಲಿ ನಾನು ಎಂಬ ತಿಳಿವುˌ ಅಹಂಕಾರ ( ಇದು ಜಂಬವಲ್ಲ - ನಾನು ಎಂಬ ತತ್ವ. ) ವೆಂಬ ಅಂತಃಕರಣ ತತ್ವ. ಅದು ಸಚೇತನವಾಗಿ ತೋರುವುದು - ಸಾಕ್ಷಿ ಚೇತನದಿಂದ, ಈ ಸಾಕ್ಷಿಯೆ ಆತ್ಮ. ಬೆಂಕಿಯ ಕಾರಣದಿಂದ ಕಬ್ಬಿಣವು ಕೆಂಪಾಗಿ ಕಾಣುವಂತೆ ಅಂತಃಕರಣ ಚೇತನವಾಗಿ ತೋರುವುದು.


 *ಜೀವಾತ್ಮ*

ಜೀವಾತ್ಮನು ಅಜರನೂˌ ಅಮರನೂ, ಸರ್ವವ್ಯಾಪಿಯೂ, ಬ್ರಹ್ಮ ಸ್ವರೂಪಿಯೂ ಆಗಿದ್ದಾನೆ. ಅವನಿಗೆ ಪಾರಮಾರ್ಥಿಕವಾಗಿ ಬಂಧ - ಮೋಕ್ಷಗಳಿಲ್ಲ. ಅವನಿಗೆ ಸ್ವರ್ಗ- ನರಕಗಳಿಲ್ಲ. ಅವನು ಅವನಲ್ಲಿ ( ತನ್ನಲ್ಲಿ. ) ಇಲ್ಲದ ಗುಣಧರ್ಮಗಳನ್ನು ತನ್ನಲ್ಲಿ ಆರೋಪಿಸಿಕೊಂಡು ( ಅವಿದ್ಯೆ - ಅಜ್ಞಾನ. ), ವ್ಯವಹರಿಸಲು ಅಧ್ಯಾಸವೆ ( ಅಜ್ಞಾನ-ಮಾಯೆ. ) ಕಾರಣ. ಆಕಾಶವು ಮಡಕೆ ಕುಡಿಕೆಗಳಲ್ಲಿ ಬೇರೆ ಬೇರೆ ಕಾಣುವಂತೆ, ಒಂದೆ ಚೈತನ್ಯವು ( ಬ್ರಹ್ಮವು. ) ಉಪಾದಿಗಳ ಕಾರಣದಿಂದ ಬೇರೆ ಬೇರೆಯಾಗಿತೋರುವುದು. ಹಾಗಾಗಿ ಬೇಧವು ಪಾರಮಾರ್ಥಿಕ ಸತ್ಯವಲ್ಲ. ತತ್ವಮಸಿ - ತತ್- ತ್ವಂ- ಅಸಿ ಎಂಬ ಶ್ರತಿ ವಾಕ್ಯಗಳು ( ಅದು= ಬ್ರಹ್ಮವು, ತ್ವಂ = ನೀನು, ಅಸಿ-ಆಗಿದ್ದೀಯೆ.) ಅಬೇಧವನ್ನು ಸಾರುತ್ತವೆ.



*ಬಂಧ - ಮೋಕ್ಷ*

ಪಾಮಾರ್ಥಿಕವಾಗಿ ( ತಾತ್ವಿಕವಾಗಿ - ಮೂಲತಃ.) ಜೀವ ಬ್ರಹ್ಮರಿಗೆ ಬೇಧವಿಲ್ಲ. ಆದರೆˌ ವ್ಯಾವಹಾರಿಕವಾಗಿ ಬೇಧವಿದೆ. ಸುಖ - ದುಃಖ ; ಹುಟ್ಟು - ಸಾವು ; ಕರ್ಮ - ಪುನರ್ಜನ್ಮ ; ಸ್ವರ್ಗ- ನರಕಗಳಿವೆ ; ಇವಕ್ಕೆಲ್ಲಾ ಅವಿದ್ಯೆಯೂ ಕಾರಣ ನಿತ್ಯ-ಶುದ್ಧ-ಬುದ್ಧ-ಮುಕ್ತ ಸ್ವಭಾವದ ಚೈತನ್ಯವು, ಅವಿದ್ಯೆಯ ಪರಿಣಾಮವಾಗಿ ಸಂಸಾರದಲ್ಲಿ ಸಿಲುಕಿಕೊಳ್ಳುವುದೆ ಬಂಧವೆನಿಸಿಕೊಳ್ಳುತ್ತದೆ. ಇದು ಅನಾದಿಯಾದುದು. ಯಾವಾಗ ಪ್ರಾರಂಭವಾಯಿತು? ಯಾಕೆ ಪ್ರಾರಂಭವಾಯಿತು? ಎನ್ನುವುದು ಬಗೆಹರಿಯದ ಸಮಸ್ಯೆ. ಇದು ಭಗವಂತನ ಲೀಲೆ ಎಂಬುದಾಗಿ ತಿಳಿಯಬಹುದು.


ಪಾಮಾರ್ಥಿಕವಾಗಿ ಜೀವ ಬ್ರಹ್ಮರಿಗೆ ಬೇಧವಿಲ್ಲ . ವ್ಯಾವಹಾರಿಕವಾಗಿ ಉಂಟು ; ಮೋಕ್ಷವೂ ಉಂಟು. ಜೀವನಿಗೆ ತಾನು ಬ್ರಹ್ಮವೆಂದು ಅರಿವಾಗುವುದೆ ಮೋಕ್ಷ . "ಬ್ರಹ್ಮಾವಗತಿ"ಯೆ ಮೋಕ್ಷ . "ಅವಗತಿ", ಎಂದರೆ ಸಾಕ್ಷಾನುಭವ. :ಉದಾ : ಬೇಡರ ನಡುವೆ ಬೆಳೆದ ರಾಜಕುಮಾರ. ತಾನು ಬೇಡನಲ್ಲ - ರಾಜಕುಮಾರ ಎಂದು ತಿಳಿದಂತೆ.


ಬೇರೆಯವರಿಂದ ಕೇಳಿ ತಿಳಿದರೆ ಅದು ಪರೋಕ್ಷ ಜ್ಞಾನ ; ತಾನೆ ಅನುಭವಿಸಿದರೆ ಅದು ಅಪರೋಕ್ಷಾನುಭೂತಿ ; ಸಾಕ್ಷಾತ್ಕಾರ ; ಅದೆ ಮೋಕ್ಷ .


ಮೋಕ್ಷವನ್ನು ಗಳಿಸಿಕೊಳ್ಳಲು ಎಲ್ಲಿಗೂ ಹೋಗಬೇಕಾಗಿಲ್ಲ. ಅದು ಎಲ್ಲೆಲ್ಲಿಯೂ ಇದೆ. ಆಕಾಶದಂತೆ. ಬಂಧಕ್ಕೆ ಕಾರಣವಾದ ಅಜ್ಞಾನ ನಿವಾರಣೆಯಾದರೆ ಸಾಕು. ಹಾಗಾಗಿ ಜ್ಞಾನದಿಂದಲೆ ಮೋಕ್ಷ. ಇಲ್ಲಿ ಜ್ಞಾನವು ಮೋಕ್ಷವನ್ನು ಹುಟ್ಟಿಸಲಾರದು ಅಜ್ಞಾನವನ್ನು ಕಳೆಯುತ್ತದೆ ಅಷ್ಟೆ. ಬೆಳಕಿಗೆ ಅಡ್ಡಲಾದ ಪರದೆಯನ್ನು ಸರಿಸಿದಂತೆ. ಬ್ರಹ್ಮವನ್ನು ಅರಿತರೆ ಸಾಕು ಅವನೆ ಬ್ರಹ್ಮವಾಗುತ್ತಾನೆ. ( ಬ್ರಹ್ಮವಿದ್ ಬ್ರಹ್ಮೈವ ಭವತಿ.)


*ಕರ್ಮ-ಉಪಾಸನೆ-ಭಕ್ತಿ ಸಂಪಾದಿಸಿ*


ಅದ್ವೈತವು ಜ್ಞಾನದಿಂದಲೆ ಮೋಕ್ಷವೆಂದು ಒತ್ತಿ ಹೇಳುತ್ತದೆ. ಕರ್ಮದಿಂದ ಮೋಕ್ಷವಿಲ್ಲವೆಂದು ಸಾರುತ್ತದೆ. ಅದು ಕರ್ಮ ವಿರೋಧಿಯೆ?

ಕರ್ಮಕ್ಕೆ ಫಲವಿರುವುದರಿಂದ ಅದು ಕರ್ಮಕ್ಕೆ ವಿರೋಧಿಯಾಗಿದೆ. ಕರ್ಮವು ನಿತ್ಯ - ನೈಮಿತ್ತಿಕ - ಕಾಮ್ಯ - ನಿಷಿದ್ಧ ಎಂದು ನಾಲ್ಕು ಬಗೆ. ಈ ಕರ್ಮಗಳಿಗೆಲ್ಲಾ ಫಲವಿದೆ. ಆದ್ದರಿಂದ ಪುನರ್ಜನ್ಮವಿದೆ. ಕರ್ಮಫಲಗಳು ಅನಿತ್ಯವಾಗಿವೆ. ( ಸ್ವಲ್ಪ ಕಾಲವಿದ್ದು ಹೋಗುವವು. ). ಆದ್ದರಿಂದ ಮೋಕ್ಷವು ಕರ್ಮಫಲವಲ್ಲ. ಮೋಕ್ಷವು ಕರ್ಮಫಲವಾದರೆ ಅದು ಅನಿತ್ಯವಾಗುವುದು.


ಕರ್ಮಯೋಗ


ಕರ್ಮವು ಮೋಕ್ಷಕ್ಕೆ ಸಹಕಾರಿಯಾಗಿದೆ. ಕರ್ಮವು ಬಂಧನಕಾರಿ. ಕರ್ಮಗಳನ್ನು ( ಕೆಲಸಗಳನ್ನು ಸೇರಿ. ) ಮಾಡದೆ ಇರುವುದು ಸಾಧ್ಯವಿಲ್ಲ. ಆದ್ದರಿಂದ ಕರ್ಮ ಬಂಧನದಿಂದ ಬಿಡಿಸಿಕೊಳ್ಳಲು, ಅವನ್ನು ಈಶ್ವರಾರ್ಪಣ ಮಾಡುವುದೊಂದೇ ದಾರಿ/ಮಾರ್ಗ. ಅದೆ ಕರ್ಮಯೋಗ. ಈ ರೀತಿ ಮಾಡುವುದರಿಂದ ಚಿತ್ತ ಶುದ್ಧಿಯಾಗಿ ಜ್ಞಾನೋದಯಕ್ಕೆ ಕಾರಣವಾಗುತ್ತದೆ. ಬ್ರಹ್ಮ ಜ್ಞಾನವಾಗುವವರೆಗೂ ಕರ್ಮವು ಅವಶ್ಯವಾಗಿದೆ.


*ಉಪಾಸನೆ*


ಉಪಾಸನೆ ಎಂದರೆ ಉಪಾಸ್ಯ ( ಧ್ಯಾನ ಮಾಡುವ. ) ವಸ್ತುವಿನ ಕಡೆಗೆ ಏಕಾಗ್ರತೆಯಿಂದ ಮನಸ್ಸನ್ನು ಹರಿಸುವುದು. ಇದಕ್ಕೆ ' ವಿದ್ಯಾ "ಎಂದು ಹೆಸರು. ಉಪಾಸನೆಯು ಜ್ಞಾನದ ಅಪೇಕ್ಷೆಯ ಕರ್ಮ. ಉಪಾಸನೆ ಎಂದರೆ ಉಪಾಸ್ಯ ( ಧ್ಯಾನ ಮಾಡುವ.) ವಸ್ತುವಿನ ಕಡೆಗೆ ಏಕಾಗ್ರತೆಯಿಂದ ಮನಸ್ಸನ್ನು ಹರಿಸುವುದು . ಇದಕ್ಕೆ ವಿದ್ಯಾ ಎಂದು ಹೆಸರು . ಜ್ಞಾನದ ಅಪೇಕ್ಷೆಯ ಕರ್ಮ. ಇದರಿಂದಲೂ ಕೊನೆಗೆ ಜ್ಞಾನವಾಗಿ ಮೋಕ್ಷವಾಗುವುದು ಇಲ್ಲದಿದ್ದರೆ ( ಜ್ಞಾನವಾಗದಿದ್ದರೆ. ) ಹಿರಣ್ಯಗರ್ಭಲೋಕ.


*ಭಕ್ತಿ*


ಭಕ್ತಿಯು ದ್ವೈತವನ್ನು ಆಧರಿಸಿದ್ದು ; ಭಗವಂತನೆ ಬೇರೆˌ ತಾನೆ ಬೇರೆ ಎಂಬ ಭಾವದಿಂದ ದಾಸ್ಯ ; ಸಖ್ಯ ; ವಾತ್ಸಲ್ಯ ; ಮೊದಲಾದ ಭಾವದಿಂದ ಭಗವಂತನ ಭಜನೆ, ಸೇವೆ ಇರಬೇಕು. ಅದ್ವೈತದಲ್ಲಿ ಭಕ್ತಿಗೆ ಸ್ಥಾನವಿಲ್ಲವೆಂಬ ತಪ್ಪು ತಿಳಿವಳಿಯಿದೆ. ಭಕ್ತಿಯಲ್ಲಿ - ನಾನು ಅವನವನು ; ಅವನು ನನ್ನವನು ; ನಾನೆ ಅವನು ; ಎಂಬ ಮೂರು ವಿಧದ ಭಕ್ತಿಗೂ ಅವಕಾಶವಿದೆ. ( ಗೀ..ಭಾ.೧೦-೧೦ ). ಹೀಗೆ ಭಕ್ತಿಯು ಅಂತಿಮವಾಗಿ ಜ್ಞಾನದಲ್ಲಿ ಪರಿಣಮಿಸುವುದರಿಂದ ಭಕ್ತಿಯನ್ನ ಒಪ್ಪಲಾಗಿದೆ. ಆದರೂ ಅಲ್ಲಿ ಅತಿರೇಕ - ಉದ್ರೇಕಗಳಿಗೆ ಅವಕಾಶವಿಲ್ಲ. ಆದರೆ ಭಕ್ತಿಯ ಮಹತ್ವವನ್ನು ಅವಶ್ಯಕತೆಯನ್ನು ಶಂಕರರು ಎತ್ತಿ ಹೇಳಿದ್ದಾರೆ.


*ಜೀವನ್ಮುಕ್ತಿ*

ಅದ್ವೈತವು ಜೀವನ್ಮುಕ್ತಿಯನ್ನು ಪ್ರತಿಪಾದಿಸುತ್ತದೆ. ಮುಕ್ತಿಯು ಜ್ಞಾನದಿಂದ ಪ್ರಾಪ್ತವಾಗುವುದರಿಂದ ಜೀವಂತವಿರುವಾಗಲೆ ಮುಕ್ತಿಯನ್ನು ಪಡೆಯುವುದು ಸಾಧ್ಯ. ಮರಣಾನಂತರವೆ ಮುಕ್ತಿಯೆಂದಿಲ್ಲ. ಶರೀರವೆ ತಾನೆಂಬ ಭಾವನೆಯನ್ನು ಕಳೆದುಕೊಂಡರೆ ಸಾಕು. ಜ್ಞಾನವಾದರೆ ಅಥವಾ ಮುಕ್ತಿಯಾದರೆ ಶರೀರವು ಬಿದ್ದುಹೋಗುವುದಿಲ್ಲ. ಕರ್ಮ ( ಹಿಂದಿನ. ) ಸವೆಯುವವರೆಗೂ ಇರುತ್ತದೆ. ಜೀವನ್ಮುಕ್ತನು ಸಮಾಧಿಯಲ್ಲಿ ಬ್ರಹ್ಮದೊಂದಿಗೆ ಒಂದಾಗುತ್ತಾನೆ. ಉಳಿದ ಸಮಯದಲ್ಲಿ ಇತರರಂತೆಯೆ ಇರುತ್ತಾನೆ. ಆದರೆ ಅವನಿಗೆ ಧರ್ಮ-ಕರ್ಮಗಳ ಬಾಧೆ ಇಲ್ಲ. ಒಳ್ಳೆಯತನ ಸ್ವಾಭಾವಿಕ.


ಅವನಿಗೆ. ಅವನಿಗೆ ಸರ್ವವೂ ಬ್ರಹ್ಮಮಯ ; ಅಲ್ಲಿ ಸ್ವಾರ್ಥ, ದ್ವೇಷ , ಆಸೆಗಳಿಲ್ಲ. ; ಸಮಸ್ತ ಜಗತ್ತು ಒಂದೆ ಕುಟುಂಬ - ಎನ್ನುವುದಕ್ಕಿಂತ ಮೇಲಿನ ಹಂತ ಅವನದು.
ಅವನು ದೇಹಪಾತವಾದ ಮೇಲೆˌ ಬ್ರಹ್ಮದಲ್ಲಿ ಲೀನವಗುತ್ತಾನೆ. ಇದು ವಿದೇಹ ಮುಕ್ತಿ ; ಆನಂದ ಸ್ವರೂಪನಾಗುತ್ತಾನೆ. ಪುನರ್ಜನ್ಮವಿಲ್ಲ . ಅದಕ್ಕಿಂತ ಹೆಚ್ಚಿನ ಸ್ಥಿತಿ ಇಲ್ಲ. ಅದೇ ಜೀವನದ ಪರಮ ಗುರಿ.

ಹೀಗೆ ಅದ್ವೈತವು ಸಕಲ ಜೀವಿಗಳೂ ಸಮಾನರು ಎಂಬ ತತ್ವವನ್ನು ಬೋಧಿಸಿದೆ.