08 March 2022

ಅವನ ಜೊತೆ ಅವಳ ಕಥೆ - ೭

ಅವಳ ಜೊತೆ ಅವನ ಕಥೆ.....


ಊರಿನ ಅಂಗಡಿ ಬೀದಿಯ ಮರ್ತಪ್ಪಯ್ಯನ ಅಂಗಡಿಯಿಂದ ಕಳೆದ ಹಂಗಾಮಿಗೆ ಮಾರಿದ್ದ ಚೀಸ್ˌ ಉಪ್ಪು ಬೆರೆಸಿದ ಗಿಣ್ಣು ಗಟ್ಟಿˌ ತುಪ್ಪ ಹಾಗೂ ಬೆಣ್ಣೆಯ ಬಾಬ್ತು ಹತ್ತು ರೂಪಾಯಿ ವಸೂಲಿ ಮಾಡೋದಿತ್ತು. ಈ ಬಾರಿ ತೋಟದ ಮನೆಯಲ್ಲಿ ತಯಾರಾಗಿದ್ದ ಪೂರ್ತಿ ಹೈನೋತ್ಪನ್ನಗಳನ್ನ ಮರ್ತಪ್ಪಯ್ಯನೆ ಕೊಂಡಿದ್ದ. ಇತ್ತೀಚೆಗೆ ಹೊಸ ಊರುಗಳಿಗೂ ತನ್ನ ಸಗಟು ವ್ಯಾಪಾರದ ಉದ್ಯಮ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದ ಮರ್ತಪ್ಪಯ್ಯ ಹೈನೋತ್ಪನಗಳ ಜೊತೆ ಮೇಪಲ್ ಸಕ್ಕರೆˌ ಜೇನುತುಪ್ಪˌ ಆಲಿವ್ ಎಣ್ಣೆˌ ಸೋಪುಗಳುˌ ಮೇಣದ ಬತ್ತಿಗಳುˌ ದೀಪದ ಬತ್ತಿಗಳುˌ ಲಾವಂಚದ ಬೇರಿನ ಕತ್ತಗಳುˌ ಮನೆಯಲ್ಲೆ ಕ್ರೋಷಾ ಹಾಕಿ ಅವಳು ನೇಯ್ದಿಟ್ಟಿದ್ದ ಉಣ್ಣೆಯ ಕಿವಿಗಾಪು ಸಹಿತವಾದ ಬೆಚ್ಚನೆ ಟೊಪ್ಪಿಗಳುˌ ಕೈಗವಸುಗಳು ಹಾಗೂ ಕಾಲ್ಚೀಲಗಳನ್ನೂ ಇವನಿಂದ ಎರಡು ಮೂರು ಭೇಟಿಗಳಲ್ಲಿ ಪಡೆದಿದ್ದ. ಅವೆಲ್ಲವನ್ನೂ ಅವನು ಪಶ್ಚಿಮದ ದೆಸೆಯಲ್ಲಿ ಹೊಸತಾಗಿ ಆರಂಭವಾದ ಊರುಗಳ ಗ್ರಾಹಕರಿಗೆ ಪೂರೈಸಿ ದಳ್ಳಾಳಿ ದರದಲ್ಲಿಯೆ ನೂರಾರು ರೂಪಾಯಿ ಲಾಭ ಸಂಪಾದನೆ ಮಾಡಿಬಿಟ್ಟಿದ್ದ.

ಆದರೆ ಆರಂಭದಲ್ಲಿ ಪೂರ್ತಿ ಹಣ ಪಾವತಿಸಿ ಸರಕುಗಳನ್ನ ಒಮ್ಮೆಲೆ ಖರೀದಿಸಲು ಬಂಡವಾಳ ಹೂಡುವಷ್ಟು ಕಳೆದ ಸಲ ಅವನ ವ್ಯಾಪಾರ ಚೆನ್ನಾಗೇನೂ ನಡೆದಿರಲಿಲ್ಲ. ಅವನು ಕಳೆದ ಸಾಲಿನಲ್ಲಿ ಇತರ ರೈತರಿಂದ ಖರೀದಿಸಿದ್ದ ಕೆಲವು ತೋಟದುತ್ಪನ್ನಗಳ ಗುಣಮಟ್ಟ ನಿರೀಕ್ಷೆಗೂ ಮೀರಿ ಕಳಪೆಯಾಗಿದ್ದುದೆ ಅದಕ್ಕೆ ಕಾರಣವಾಗಿತ್ತು. ಖರೀದಿದಾರರು ಇವನು ಹೇಳಿದ್ದ ಬೆಲೆ ಪಾವತಿಸಿ ಆ ಮೂರನೆ ದರ್ಜೆಯ ಸರಕನ್ನ ಖರೀದಿಸಲು ಸುತಾರಂ ಒಪ್ಪಿರಲಿಲ್ಲ. ಈಗ ಇಷ್ಟು ದೂರ ಮೈಲುಗಟ್ಟಲೆ ಪಶ್ಚಿಮದ ಊರುಗಳಿಗೆ ಸರಕನ್ನ ಸಾಗಿಸಿಯಾದ ಮೇಲೆ ಹಾಗೆಲ್ಲಾ ಅದನ್ನ ಮರಳಿ ಕೊಂಡೊಯ್ಯುವ ಹಾಗೂ ಇರಲಿಲ್ಲ. ಅವುಗಳಲ್ಲಿ ಕೆಲವು ವಸ್ತುಗಳಂತೂ ತೀರ ವಾರೊಪ್ಪತ್ತಿನಲ್ಲಿ ಬಳಸದಿದ್ದರೆ ಕೆಡುವ ಆಹಾರ ಪದಾರ್ಥಗಳೂ ಆಗಿದ್ದುದು ಅವನ ಸಂಕಟವನ್ನ ಮತ್ತಷ್ಟು ಹೆಚ್ಚಿಸಿತ್ತು.

ಹೀಗಾಗಿ ಹೂಡಿದ ಬಂಡವಾಳಕ್ಕೆ ಚೂರು ಮೋಸವಾದರೂನು ಬಂದಷ್ಟು ಬರಲಿ ನಷ್ಟ ಕಡಿಮೆಯಾಗಲಿ ಅನ್ನುವ ಧೋರಣೆಗೆ ಜೋತು ಬಿದ್ದ ಮರ್ತಪ್ಪಯ್ಯ ದಕ್ಕಿದ ಬೆಲೆಗೆ ಸರಕುಗಳನ್ನ ಮಾರಾಟ ಮಾಡಿ ಸಂಭವನೀಯ ಭಾರಿ ನಷ್ಟಕ್ಕೊಳಗಾಗುವ ಸಂಕಟದಿಂದ ಹೇಗೋ ಪಾರಾಗಿದ್ದ. ಇವನ ತೋಟದ ಮೂಲದ ಸರಕುಗಳ ಹೊರತು ಮಿಕ್ಕೆಲ್ಲರದೂ ಕಳಪೆ ದರ್ಜೆಯ ಉತ್ಪನ್ನಗಳಾಗಿತ್ತು ಅನ್ನುವ ಅಂಶವನ್ನ ಅಂತಹ ಸೋಲಿನ ಸಮಯದಲ್ಲೂ ಮರ್ತಪ್ಪಯ್ಯನ ಹಟ್ಟು ವ್ಯಾಪಾರಿ ಬುದ್ಧಿ ಗುರುತಿಸಿತ್ತು. ಹೀಗಾಗಿ ಈ ಸಾರಿ ಮುಂಗಡವಾಗಿ ಬಾಯಿ ಮಾತಿನ ಒಪ್ಪಂದ ಮಾಡಿಕೊಂಡು ಈ ಇವನ ಎಲ್ಲಾ ತಯಾರಿಕೆಗಳನ್ನೂ  ಸೂಕ್ತ ಬೆಲೆ ಕೊಟ್ಟು ಖರೀದಿಸಲು ಅವನು ತಯ್ಯಾರಾದ. ಮರ್ತಪ್ಪಯ್ಯನ ಕಳೆದ ಹಂಗಾಮಿನ ನಷ್ಟದ ವ್ಯವಹಾರದ ಅರಿವಿದ್ದ ಇವನೂ ಸಹ ಒಂದು ನಂಬಿಕೆಯ ಮೇಲೆ ಕೇವಲ ಕನಿಷ್ಠ ಮುಂಗಡದ ಮೇಲೆ ಊರಿಟ್ಟ ಮಾಂಸ ಮೀನು ಮೊಟ್ಟೆ ಹಾಗೂ ಚರ್ಮದ ಹೊರತು ಬಾಕಿ ಇನ್ನುಳಿದ ತನ್ನ ಸಕಲ ಉತ್ಪನ್ನಗಳನ್ನೂ ಅವನಿಗೆ ವಿಕ್ರಯಿಸಲು ಒಪ್ಪಿಸಿದ್ದ.

ಮಾಂಸದ ಉತ್ಪನ್ನಗಳನ್ನ ಅವನು ಕಳೆದ ಮೂರು ವರ್ಷಗಳಿಂದಲೂ ಕಸಾಯಿ ಕುಬೇರಣ್ಣನಿಗೆ ಮಾರುತ್ತಿದ್ದನಾಗಿˌ ಅದನ್ನ ತಪ್ಪಿಸಿ ಬೇರೆಯವರಿಗೆ ಕೊಡುವಂತೆ ಇರಲಿಲ್ಲ. ಅಲ್ಲದೆ ತನ್ನ ಎಲ್ಲಾ ಮೊಟ್ಟೆಗಳನ್ನ ಒಂದೆ ಬುಟ್ಟಿಯಲ್ಲಿಡೋದು ಅಷ್ಟು ಜಾಣತನವೂ ಆಗಿರೋದಿಲ್ಲವಲ್ಲ. ಧಾನ್ಯˌ ಹಣ್ಣು ಹಾಗೂ ತರಕಾರಿಗಳನ್ನ ಅವನೆಂದೂ ಪಟ್ಟಣಕ್ಕೆ ತಂದು ಮಾರಿದವನಲ್ಲ. ಶೆಟ್ಟರ ಅಂಗಡಿಯ ಸಹೋದರರು ಒಕ್ಕಣೆಯ ಸಮಯ ತೋಟದ ಮನೆಯ ಕಣಕ್ಕೆ ತಾವೆ ನೇರ ಭೇಟಿ ಕೊಟ್ಟು ಹಣ ಪಾವತಿಸಿ ಸಾಗಿಸಿ ಬಿಡುತ್ತಿದ್ದರು. ಹೀಗಾಗಿ ಅವುಗಳನ್ನೂ ಸಹ ಮರ್ತಪ್ಪಯ್ಯನಿಗೆ ಮಾರುವ ಸಂಭವವಿರಲಿಲ್ಲ. ಟೊಮೇಟೋ ಹಾಗೂ ಹಣ್ಣುಗಳನ್ನ ನೇರವಾಗಿ ಕಿತ್ತು ಮಾರುವ ಬದಲು ಅದನ್ನ ಮೊರಬ್ಬˌ ಉಪ್ಪಿನಕಾಯಿ ಮಾಡಿ ಮಾರಿದರೆ ಹೆಚ್ಚು ಬಾಳಿಕೆ ಬರುವ ಕಾರಣ ಲಾಭದಾಯಕ ಎಂದೂˌ ದಯವಿಟ್ಟು ಮುಂದಿನ ಹಂಗಾಮಿನಿಂದ ಅವನ್ನ ತಯಾರಿಸಿ ತನಗೆ ಕೊಡುವಂತೆಯೂˌ ಪಶ್ಚಿಮದಲ್ಲಿ ಅವಕ್ಕೆ ಭಾರಿ ಬೇಡಿಕೆಯಿದೆಯಂತಲೂ ಮರ್ತಪ್ಪಯ್ಯ ವಿನಂತಿಸಿದ್ದ. ಈ ಚಳಿಗಾಲದ ನಂತರ ವಸಂತದಲ್ಲಿ ಅದರ ಶ್ರೀಕಾರವನ್ನೂ ಹಾಡುವ ಉತ್ಸಾಹದಲ್ಲಿ ಅವನಿದ್ದ.

ಈ ಬಾಕಿಯೆಲ್ಲ ಸೇರಿದರೆ ಸುಮಾರು ನೂರಿಪ್ಪತ್ತು ರೂಪಾಯಿ ಬಾಯಿ ಮರ್ತಪ್ಪಯ್ಯನೊಬ್ಬನಿಂದಲೆ ವಸೂಲಿಯಾಗಬೇಕಿದ್ದುದುˌ ಅವನಿಂದ ಇಪ್ಪತ್ತೈದು ರೂಪಾಯಿಯ ಕಂತಾದರೂ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದ. ಇನ್ನುಳಿದಂತೆ ಅವನ ಅಂಗಡಿಯಲ್ಲೆ ಮನೆಗೆ ಅಗತ್ಯವಾದ ಉಣ್ಣೆ ಉಂಡೆˌ ಚಹಾ ಪುಡಿˌ ಬಿಳಿ ಸಕ್ಕರೆˌ ಜೋಳದ ಹಿಟ್ಟುˌ ಅಕ್ಕಿ ಹಿಟ್ಟುˌ ರಾಗಿ ಹಿಟ್ಟುˌ ಚುಮಣಿ ಎಣ್ಣೆˌ ಉಪ್ಪುˌ ಹಲ್ಲುಪುಡಿˌ ಕಾಳು ಮೆಣಸುˌ ಲವಂಗˌ ಏಲಕ್ಕಿˌ ಜಾಯಿಕಾಯಿˌ ಚಕ್ಕೆˌ ಒಣಮೆಣಸು ಹೀಗೆ ಪೂರ್ವದಿಂದ ಅಮದಾಗುವ ವಸ್ತುಗಳನ್ನ ಖರೀದಿಸುವವನಿದ್ದುˌ ಅದರ ದರ ಎರಡರಿಂದ ಎರಡೂವರೆ ರೂಪಾಯಿಗಳಾದರೂ ಆಗಲಿದ್ದವು.

ಜೊತೆಗೆ ಕುಬೇರಣ್ಣ ಕೊಡಬೇಕಿದ್ದ ಹಣ ಹದಿನೈದು ರೂಪಾಯಿಯೂ ಈ ಬಾಬ್ತಿಗೆ ಸೇರಿದರೆ ಒಟ್ಟು ವಸೂಲಾಗುವ ನಲವತ್ತು ರೂಪಾಯಿಗಳಲ್ಲಿ ಮಠದ ವಾರ್ಷಿಕ ವಂತಿಗೆಯ ಬಾಬ್ತು ಎಂಟಾಣೆ ಕೊಟ್ಟುˌ ರಾಜನಿಗೆ ಮೂರು ಕಾಸಿನ ಬೆಂಡು ಬತ್ತಾಸು ಖರೀದಿಸಿˌ ಹನ್ನೆರಡಾಣೆಯ ಬೂಸಾ ಹಿಂಡಿ ಖರೀದಿಸಿ ಅವೆಲ್ಲವನ್ನೂ ಬರುವ ವಾರ ತೋಟಕ್ಕೆ ತಂದು ಕೊಡುವ ಜವಬ್ದಾರಿಯನ್ನು ಗೋಪಿಗೆ ವಹಿಸಿˌ ಬ್ಯಾಂಕಿಗೆ ಮೂವತ್ತು ರೂಪಾಯಿ ಹಣ ಉಳಿತಾಯಕ್ಕೆ ಕಟ್ಟಿ ಗೋಪಿಗೆ ಅಗತ್ಯವಿದ್ದ ಒಂದು ರೂಪಾಯಿ ಕೊಟ್ಟು, ಬಾಕಿ ಎಂಟೂ ಚಿಲ್ಲರೆ ರೂಪಾಯಿಗಳನ್ನ ತುರ್ತು ಅಗತ್ಯಗಳಿಗೆ ಮನೆಗೊಯ್ಯಲು ನಿರ್ಧರಿಸಿದ್ದ.

ಅಂಗಡಿ ಅಂಗಡಿ ಅಲೆದು ಬರಬೇಕಿದ್ದ ಬಾಕಿಗಳೆಲ್ಲವನ್ನೂ ವಸೂಲು ಮಾಡುವಾಗ ಮಧ್ಯಾಹ್ನದ ಎರಡು ಘಂಟೆಯ ಮೇಲಾಗಿತ್ತು. ನೇರ ಬ್ಯಾಂಕಿಗೆ ನಡೆದವನೆ ಮೂವತ್ತು ರೂಪಾಯಿ ಕಟ್ಟಿದ್ದಕ್ಕೆ ಬ್ಯಾಂಕಿನ ಗುಮಾಸ್ತೆ ಠಸ್ಸೆ ಒತ್ತಿಕೊಟ್ಟ ರಸೀದಿಯನ್ನ ಜೇಬಿಗಿಳಿಸಿ ನೇರ ಮನೆಯತ್ತ ಹಜ್ಜೆ ಹಾಕಿದವನಿಗೆ ಆಶ್ಚರ್ಯ ಕಾದಿತ್ತು. ಅವನು ಸೂರಿನ ಸಂದಿನಿಂದ ಸುರಿದ ಹಿಮದ ಕಾರಣ ಮಾಡಿದ ಮರಮತ್ತು ಅಷ್ಟಾಗಿ ಸರಿಯಾಗಿರಲಿಲ್ಲವೆಂದು ಕಾಣುತ್ತದೆˌ ಕಸುಬುದಾರ ಬಡಗಿಯಂತೆ ಗೋಪಿ ಮನೆಗೆ ಹೋಗಿ ಉಳಿ ಕಿಸೋಳಿ ಮೊಳೆ ಸುತ್ತಿಗೆಗಳನ್ನ ತಂದು ಹೆರದು ಕೆರೆದು ಇವನಿಗೆ ಕಂಡಿದ್ದˌ ಹಾಗೂ ಕಾಣದಿದ್ದ ಛಾವಣಿಯ ತೂತುಗಳನ್ನೆಲ್ಲಾ ಚತುರತೆಯಿಂದ ಟಾರು ಕಾಗದ ಹೊಡೆದು ಬಿರುಕುಗಳಿಗೆ ಜೇನು ಮೇಣ ಬೆರೆಸಿದ ಡಾಮಾರಿನ ಅಂಟು ತುಂಬಿ ಕಾಣದಂತೆ ಮರೆಸಿದ್ದ.

ಈ ಇಡಿ ಚಳಿಗಾಲದ ಹಂಗಾಮಿನಲ್ಲಿ ಮನೆಗೆ ಇನ್ಯಾವ ಮರಮತ್ತಿನ ಅವಶ್ಯಕತೆಯೂ ಇರದಂತೆ ಅವನ ಕೆಲಸದ ಜಾಣ್ಮೆ ಎದ್ದು ಕಾಣುತ್ತಿತ್ತು. ಆದರೆ ನೆಲ ಮಹಡಿಯ ಗೋಡೆಗಳ ಸಂದು ಗೊಂದುಗಳಲ್ಲಿ ಹೊಸ ಬಿರುಕು ಮೂಡಿವೆಯೆಂದೂ ಮುಂದಿನ ಒಂದು ವಾರ ಇದನ್ನೆ ಆದ್ಯತೆಯನ್ನಾಗಿಸಿಕೊಂಡು ತಾನು ಅವನ್ನ ಸರಿಪಡಿಸುತ್ತೇನೆಂದೂ ಗೋಪಿ ಹೇಳಿದ ಮಾತು ಕೇಳಿ ಅವನಿಗೆ ನೆಮ್ಮದಿಯೆನಿಸಿತು. ಹೀಗಾದರೂ ಸರಿ ಅವನು ಮರಳಿ ಜಡ ಬಿಟ್ಟು ಕೆಲಸಗಳತ್ತ ಹೊರಳಿಕೊಳ್ಳಲಿˌ ಬಾಬಯ್ಯನ ಜೊತೆಯ ಅವನ ಕೋಳಿ ಜಗಳ ಈ ಮೂಲಕವಾದರೂ ಕಡಿಮೆಯಾಗಲಿ ಎಂದು ಆಶಿಸಿದ ಆತ ಗೊಂಬೆ ತಯಾರಿಕೆಗೆ ಬಂಡವಾಳ ಹೂಡಲು ಗೋಪಿ ಕೇಳಿದ್ದ ರೂಪಾಯಿಗೆ ಮತ್ತೊಂದು ರೂಪಾಯಿ ಸೇರಿಸಿ ಅವನ ಜೇಬಿಗೆ ಹಾಕಿ ಗೋಪಿಯ ಬೆನ್ತಟ್ಟಿದ. ಇವನ ಕಾಳಜಿ ಕಂಡ ಗೋಪಿಗೂ ಕಣ್ತುಂಬಿ ಬಂತು. ಮತ್ತೆ ಚಿಗುರಿ ನುರಿತ ಕೆಲಸಗಾರನಾಗುವ ಕನಸು ಅವನ ನೀಲಿ ಕಣ್ಗಳಲ್ಲೂ ಹೊಳೆದಂತಾಯಿತು.

ಹೊರಗೆ ಮೆಲ್ಲಗೆ ಚಳಿಯ ಪ್ರಕೋಪ ಹೆಚ್ಚುತ್ತಿತ್ತು. ಸುಲ್ತಾನನಿಗೆ ಮೇವು ನೀರು ಮತ್ತೊಮ್ಮೆ ಇರಿಸಿದ ಇಬ್ಬರೂ ಬಾಬಯ್ಯನ ಮನೆ ಕಡೆಗೆ ಹೆಜ್ಜೆ ಹಾಕಿದರು. ಬಿಸಿ ಬಿಸಿ ಊಟ ತಯಾರಾಗಿತ್ತುˌ ಇವನು ಅವಳು ಕಟ್ಟಿಕೊಟ್ಟಿದ್ದ ಬುತ್ತಿಯನ್ನೂ ಜೊತೆಗೆ ಬಿಚ್ಚಿದ.


*********


ಅವಳ ಕೈ ರುಚಿಯೆ ಬೇರೆ ಎನಿಸಿದರೆˌ ಗೋಪಿ ಮನೆಯ ಅಡುಗೆಯ ಸ್ವಾದವೆ ವಿಭಿನ್ನ. ಇಬ್ಬರ ತಲೆಮಾರುಗಳ ಹಿನ್ನೆಲೆ ಪ್ರಾದೇಶಿಕವಾರು ಭಿನ್ನವಾಗಿದ್ದುದೆ ಅದಕ್ಕೆ ನೇರ ಕಾರಣ ಅಂದರೂ ತಪ್ಪಿಲ್ಲ. ಅವರ ಹಿರಿಯರು ವಲಸಿಗರಾಗಿ ಬರುವ ಮೊದಲು ನೆಲೆಸಿದ್ದ ವಿದೇಶದ ವಿಭಿನ್ನ ಪ್ರದೇಶಗಳ ಸೊಗಡು ಅವರ ಪಾಕಶಾಸ್ತ್ರವನ್ನೂ ಸಹಜವಾಗಿ ಪ್ರಭಾವಿಸಿತ್ತು. ಹೀಗಾಗಿ ಒಂದೆ ಬಗೆಯ ಖಾದ್ಯಗಳನ್ನ ಅವರಿಬ್ಬರ ಅಡುಗೆ ಮನೆಗಳಲ್ಲಿ ತಯಾರಿಸಿದ್ದರೂ ಬಳಸುವ ಖಾದ್ಯತೈಲˌ ಮಸಾಲೆ ಹಾಗೂ ಉಪ್ಪು ಹುಳಿ ಖಾರದ ಪ್ರಮಾಣದಲ್ಲಾಗುತ್ತಿದ್ದ ಚೂರುಪಾರು ವ್ಯತ್ಯಾಸದ ಕಾರಣ ಸಹಜವಾಗಿ ರುಚಿ ಬದಲಾಗಿ ಅಡುಗೆಯ ವೈವಿಧ್ಯತೆ ಚಪ್ಪರಿಸಿ ಮೆಲ್ಲುವವರ ರುಚಿಮೊಗ್ಗುಗಳಿಗೆ ಅರಿವಿಗೆ ಖಂಡಿತವಾಗಿ ಬರುತ್ತಿತ್ತು. ಗೋಪಿಯ ಹೆಂಡತಿ ಬುತ್ತಿಯಲ್ಲಿ ಚಳಿಗೆ ಮರಗಟ್ಟಿ ಕಲ್ಲಾಗಿದ್ದ ರೊಟ್ಟಿ ಹಾಗೂ ಇನ್ನಿತರ ಮೇಲೋಗರಗಳನ್ನ ಬಿಸಿ ಮಾಡಿ ತಿನ್ನಲು ಸಹನೀಯವಾಗಿಸಿದಳು.

ಚಳಿಯ ಹೊಡೆತಕ್ಕೆ ಜರ್ಜರಿತರಾಗಿದ್ದ ನಾಲ್ವರೂ ಚೂರು ದೇಹದ ಉಷ್ಣತೆ ಹೆಚ್ಚಿಸಿಕೊಳ್ಳಲು ಕಟು ರುಚಿಯ ದ್ರಾಕ್ಷಾರಸವನ್ನೂ ಊಟದೊಂದಿಗೆ ಸೇವಿಸಿದರು. ಬೆಂದ ಬಾತುˌ ಬೇಕನ್ˌ ರೈ ರೊಟ್ಟಿˌ ಎಮ್ಮೆ ಮಾಂಸದ ಸೂಪು ಹಾಗೂ ಹುರಿದ ಊರಿಟ್ಟ ಮೀನನ್ನ ಒಳಗೊಂಡ ಊಟ ರುಚಿಕರವಾಗಿತ್ತು. ಊಟ ಮುಗಿಸಿದ ಮರುಕ್ಷಣವೆ ಅವನು ಮತ್ತೆ ಮನೆಯತ್ತ ಮುಖ ಮಾಡಿ ಹೊರಡಲೆ ಬೇಕಿತ್ತು. ಸಾಧ್ಯವಾದಷ್ಟು ಬೇಗ ಬೆಳಕಿರುವಾಗಲೆ ಹೊರಟಷ್ಟೂ ಒಳ್ಳೆಯದೆ. ಆಗಲೆ ಸಮಯ ಮೂರೂವರೆಯ ಸಮೀಪವಾಗಿದ್ದು ಚಳಿಗಾಲದ ರಾತ್ರಿ ಸಂಜೆ ಐದರ ಹೊತ್ತಿಗೆಲ್ಲಾ ಇಳಯನ್ನ ಆವರಿಸಿಕೊಳ್ಳಲು ಮಸಲತ್ತು ಮಾಡುತ್ತಿದೆಯೇನೋ ಅನ್ನುವಂತೆ ಉತ್ತರದ ಸುಳಿಗಾಳಿ ಹುಯ್ಯಲಿಡುತ್ತಾ ನಿಧಾನವಾಗಿ ಮತ್ತೆ ಬೀಸಲು ಹವಣಿಸುತ್ತಿತ್ತು.

ಚಳಿಗಾಳಿಯ ಪ್ರಕೋಪ ಪಟ್ಟಣಿಗರನ್ನೂ ಕಾಡಿಸಿ ಕೆಂಗೆಡೆಸದೆ ಇರಲಿಲ್ಲ. ಅವರ ನೆಲೆಗಳು ಸುದೂರದ ತೋಟದ ಮನೆಗಳ ಅವಾಸಗಳಂತೆ ಪರಸ್ಪರ ಮೈಲುಗಟ್ಟಲೆ ದೂರವಿಲ್ಲದೆ ಕೆಲವೆ ಗಜಗಳಷ್ಟು ದೂರ ಮನೆಗಳಿರುವುದರಿಂದ ತೀರಾ ಕಷ್ಟದ ಸಂದರ್ಭಗಳು ಎದುರಾದಲ್ಲಿ ಕಷ್ಟ ನಷ್ಟ ವಿಚಾರಿಸಿ ಧೈರ್ಯ ಹೇಳಲುˌ ಸಹಾಯಕ್ಕೆ ಧಾವಿಸಲು ನೆರೆಕರೆ ಸಮೀಪದಲ್ಲೆ ಇರುತ್ತಿದ್ದರು. ಹೀಗಾಗಿ ಹಳ್ಳಿಗ ರೈತಾಪಿಗಳಂತೆ ವಿಪರೀತ ಸನ್ನಿವೇಶಗಳಲ್ಲಿ ತೀರಾ ಕೆಂಗೆಟ್ಟು ಸಹಾಯ ಹಸ್ತಗಳಿಲ್ಲದೆ ಹತಾಶರಾಗುವ ಪರಿಸ್ಥಿತಿ ಅವರಿಗೆ ಮುಖಾಮುಖಿಯಾಗುವ ಸಂಭವ ಇರುತ್ತಿರಲಿಲ್ಲ ಅಷ್ಟೆ.

ಊಟ ಮುಗಿಸಿ ಚಳಿಗೆ ಮದ್ದಿನಂತೆ ಒಂದು ತಂಬಾಕಿನ ಚುಟ್ಟಾವನ್ನ ಗೋಪಿಯೊಂದಿಗೆ ಹಂಚಿಕೊಂಡು ಅವನು ಸೇದಿ ಮುಗಿಸಿದ. ಮೈ ಮನ ಚೂರು ಹಗುರಾದಂತೆˌ ಗೋಪಿಯ ಜೊತೆ ಪಟ್ಟಣದ ಸುತ್ತಮತ್ತಲಾಗುತ್ತಿರುವ ಹೊಸ ಹೊಸ ಬೆಳವಣಿಗೆಗಳ ವರದಿಯೊಪ್ಪಿಸುತ್ತಿದ್ದ ಗೋಪಿಯ ಮಾತುಗಳನ್ನ ಮೌನವಾಗಿ ಆಲಿಸುತ್ತಾ ಜೊತೆಜೊತೆಗೆ ಹೆಜ್ಜೆ ಹಾಕುತ್ತಾ ಸಾಗಿದ. ಅವನ ಕೆಲವು ವರದಿಗಳು ಇವನಿಗೂ ಹೊಸತಾಗಿದ್ದವು. ಕೆಲವಂತೂ ಅವನಿಗೆ ಸರಿಯಾಗಿ ಅರ್ಥವಾಗದ್ದುˌ ಇವನಿಗೂ ಸರಿಯಾಗಿ ಅರ್ಥ ಮಾಡಿಸುತ್ತಾ ವಿವರಿಸಲು ಗೋಪಿಯೂ ಸಹ ಸೋತಿದ್ದ. ಜೊತೆಗೆ ಸ್ಥಳಿಯ ಭಾಷೆಯನ್ನ ಇನ್ನೂ ಕೂಡ ಸ್ಪಷ್ಟವಾಗಿ ಕಲಿತಿರದ ಅವನ ಸೋಮಾರಿತನ ಗ್ರಹಿಕೆ ಸರಿಯಾಗಿದ್ದರೂ ಮನವರಿಕೆ ಮಾಡಿಸಿಕೊಡಲು ಅವನು ಸೋಲಲು ನೇರ ಕಾರಣವಾಗಿತ್ತು.

ಸುಲ್ತಾನನ ಶೀತದ ಬಾಧೆ ಹಿಡಿತಕ್ಕೆ ಬಂದಿತ್ತು. ಇಬ್ಬರೂ ಸೇರಿ ಮತ್ತೊಂದು ಸುತ್ತು ಗೊಟ್ಟ ಎತ್ತಿ ಅವನ ಬಾಯಿ ಕಳಿಸಿ ಔಷಧವನ್ನ ಸುರಿದರು. ಮದ್ದಿನ ಕಹಿ ಮರೆಸಲು ಚೂರು ಮುದ್ದಿಸಿ ಅವನ ಇಷ್ಟದ ಕ್ಯಾರೆಟ್ ಬೂಸಾ ಓಟ್ಸ್ ಹಾಗೂ ಹುರುಳಿ ಬೆರೆಸಿ ಬೇಯಿಸಿದ ಮಿಶ್ರಣವನ್ನ ಅವನ ಬಾಯಿ ಚೀಲದಲ್ಲಿ ಹಾದಿಯಲ್ಲಿ ಮೆಲ್ಲಲು ಕಟ್ಟಿˌ ಚಳಿಗೆ ಹೊದೆಸಿದ್ದ ದಪ್ಪ ಮಂದರಿ ತೆಗೆದ. ಅಗ್ಗಿಷ್ಟಿಕೆಯ ಉರಿ ಆರಿಸಿ ಬೆನ್ನಿಗೆ ಜೀನು ಏರಿಸಿ ಕಟ್ಟುತ್ತಿದ್ದಂತೆ ಕುದುರೆಗೂ ಮರಳಿ ಮನೆಗೆ ಹೊರಡುವ ಹೊತ್ತಾಗಿದೆ ಅನ್ನುವುದು ಅರಿವಾಗಿ ಬಾಲದ ಕುಚ್ಚನ್ನ ಆಡಿಸುತ್ತಾ ಕೆನೆತದ ಜೊತೆಗೆ ತನಗಾದ ಖುಷಿಯನ್ನ ಅದು ಪ್ರಕಟಿಸಿತು.

ಹಾಡಿಯಲ್ಲಿ ಕಂಡಿದ್ದ ಕಲ್ಲಿದ್ದಲ ಖಜಾನೆಯ ದೆಸೆಯಿಂದ ಪಟ್ಟಣದಲ್ಲಿ ಅವನಿಗೆ ಕಲ್ಲಿದ್ದಲು ಖರೀದಿಸುವ ಅಗತ್ಯ ಅವನಿಗೆ ಬಂದಿರಲಿಲ್ಲ. ಹೀಗಾಗಿ ಬೆನ್ನ ಚೀಲದಲ್ಲಿ ಉಳಿದ ಜಾಗದಲ್ಲಿ ಕೊಂಡ ಅನೇಕ ಸಾಮಾನುಗಳನ್ನ ತುಂಬಲು ಸಾಧ್ಯವಾಯಿತು. ಉಳಿದಂತೆ ಬಿಟ್ಟು ಮುನ್ನಡೆಯುವ ತೀರಾ ಖಾಲಿಯಾಗಿರದ ಸಾಮಾನುಗಳನ್ನ ಗೋಪಿಯೆ ತಂದು ತೋಟದ ಮನೆಗೆ ಮುಟ್ಟಿಸುತ್ತಾನೆˌ ಹೀಗಾಗಿ ಚಿಂತಿಸುವ ಅಗತ್ಯವಿರಲಿಲ್ಲˌ ಕುದುರೆಯ ಮೂಗುದಾರ ಹಿಡಿದು ಮುನ್ನಡೆಸಿದವ ಬೀದಿಗೆ ಬಂದದ್ದೆ ಅದರ ಬೆನ್ನೇರಿ ಕುಳಿತು  ಎಡಗೈಯಲ್ಲಿ ಲಗಾಮು ಎಳೆದು ಹಗೂರ ಸಡಿಲ ಬಿಡುತ್ತಾ ಬಲಗೈಯನ್ನ ಗೋಪಿಯೆಡೆಗೆ ವಿದಾಯದ ಗುರುತಾಗಿ ಬೀಸುತ್ತಾ ಮನೆಯ ದಿಕ್ಕಿನತ್ತ ವೇಗವಾಗಿ ಸುಲ್ತಾನನ್ನ ಓಡಿಸಿಕೊಂಡು ಹಿಮದ ಗಾಳಿ ಕವಿಸಿದ್ದ ತೆರೆಯೊಳಗೆ ಮರೆಯಾಗಿ ಹೋದ.

ಚಳಿ ಹಾಗೂ ಕತ್ತಲು ಪೈಪೋಟಿಯ ಮೇಲೆ ಸುತ್ತಲೂ ಆವರಿಸಲು ಹೊಂಚು ಹಾಕುತ್ತಿರುವಂತಿತ್ತು ವಾತಾವರಣ. ಥಂಡಿಗಾಳಿ ಬೆಳಗ್ಗಿನಂತೆಯೆ ಮೂಳೆ ಕೊರೆಸುವಂತಿದ್ದು ಹಾಕಿಕೊಂಡಿದ್ದ ಬೆಚ್ಚನೆ ಧಿರಿಸನ ಮೇಲೆ ಹೊದ್ದುಕೊಂಡಿದ್ದ ಬೆಚ್ಚನೆ ದಪ್ಪ ಕಂಬಳಿಯನ್ನೂ ತೂರಿ ಒಳ ಹೊಕ್ಕು ಕಾಡಲು ಹವಣಿಸುತ್ತಿತ್ತು. ಸುಲ್ತಾನನ ಓಟ ವೇಗವನ್ನ ಹೆಚ್ಚಿಸಿಕೊಳ್ಳುತ್ತಿದ್ದ ಹಾಗೆ ಚಳಿಗಾಳಿಯೂ ತೆರೆದ ಮುಖ ಹಾಗೂ ಮೂಗಿಗೆ ತಣ್ಣಗೆ ಅಡರುತ್ತಿತ್ತು. ಕುದುರೆ ಒಂದೆ ಲಯದಲ್ಲಿ ಓಡುತ್ತಲಿರುವಾಗ ಅವನ ಮನೋವ್ಯಾಪಾರವೂ ಕೊಂಚ ಬಾಲ್ಯದ ದಿನಗಳತ್ತ ಹಿಮ್ಮುಖ ಓಡಿ ನಿಂತಿತು.

ಗೋಪಿ ಕೊಟ್ಟ ವರದಿಯಂತೆ ಈ ಊರಿಗೆ ಹೊಸ ಹೊಸ ವಲಸೆಗಾರರು ಸದ್ಯದಲ್ಲಿಯೆ ಲಗ್ಗೆ ಇಡಲಿಕ್ಕಿದ್ದಾರಂತೆ. ಅವರ ವಸತಿ ಸೌಕರ್ಯಗಳಿಗೆ ಸೂಕ್ತ ಸ್ಥಳ ಗುರುತಿಸಿ ಅವರಿಗೆ ಮನೆ ಕಟ್ಟಿಕೊಳ್ಳಲು ನಿವೇಶನಗಳನ್ನ ಮಂಜೂರು ಮಾಡತಕ್ಕದ್ದು ಎನ್ನುವ ಆದೇಶ ಮೇಲಿನಿಂದ ರಾಜಧಾನಿಯವರು ಕಳಿಸಿಯಾಗಿದೆಯಂತೆ. ಪಟ್ಟಣದ ಆಡಳಿತದ ಚುಕ್ಕಾಣಿ ಹಿಡಿದ ಶರೀಫನ ಕಛೇರಿಯ ಕಂದಾಯದ ಅಧಿಕಾರಿಗಳು ಈ ನಿಟ್ಟಿನಲ್ಲಿ ಇವನ ತೋಟದತ್ತ ಸಾಗುವ ಹಾದಿಯ ದಿಕ್ಕಿನಲ್ಲಿಯೆ ಹೊಸ ವಿಸ್ತರಣವನ್ನು ಕಲ್ಪಿಸಲು ನಿರ್ಧರಿಸಿ ಸುಮಾರು ನೂರು ಹಕ್ಟೇರ್ ಕಾಡಂಚಿನ ಭೂಮಿಯನ್ನೆ ಬರಲಿರುವ ವಲಸಿಗರಿಗೆ ನಿವೇಶನವಾಗಿ ಹಂಚಲು ಗುರುತಿಸಿದ್ದಾರಂತೆ.

ಇದರರ್ಥ ಇಷ್ಟೆ ಕ್ರಮೇಣ ಈ ಭಾಗ ಜನನಿಬಿಡವಾಗಲಿದೆ. ಅವರ ನಿವೇಶನವಾಗಲು ಹಾಗೂ ಮಂಜೂರಾದ ನಿವೇಶನದಲ್ಲಿ ಕಟ್ಟುವ ಮನೆಯ ಮೋಪಾಗಲು ಈಗ ಯಾರಪ್ಪನ ಅಪ್ಪಣೆಗೂ ಕಾಯದೆ ಬೆಳೆದು ನಿಂತಿರುವ ಅರಣ್ಯದಂಚಿನ ಬೃಹತ್ ಪೈನ್ˌಮೇಪಲ್ ಹಾಗೂ ಓಕ್ ಮರಗಳೆಲ್ಲ ಗರಗಸದ ಹಲ್ಲುಗಳಿಗೆ ಸಿಕ್ಕಿ ಹಾಕಿಕೊಂಡು ಕೊನೆಯುಸಿರೆಳೆಯಲಿವೆ. ತಮ್ಮ ಕಾರ್ಯಚಟುವಟಿಕೆಗಳಿಂದ ಕಾಡನ್ನ ಸಮೃದ್ಧವಾಗಿಸಿ ಅರಣ್ಯದ ಅರಳುವಿಕೆಗೆ ಬೀಜ ಪ್ರಸರಣದ ಪ್ರಮುಖ ಕೊಂಡಿಯಾಗಿ ಈಗ ಅದನ್ನೆ ತಮ್ಮ ಅವಾಸವಾಗಿಸಿಕೊಂಡಿರುವ ವನ್ಯ ಖಗ ಮೃಗಗಳೆಲ್ಲ ತಮ್ಮ ನೈಸರ್ಗಿಕ ನೆಲೆ ಕಳೆದುಕೊಂಡು ನಿರಾಶ್ರಿತರಾಗಿ ಗುಳೆ ಬರುವವವರ ಒತ್ತಡ ಕಿರುಕುಳ ತಾಳಲಾರದೆ ತಾವೆ ಸ್ವತಃ ನಿರಾಶ್ರಿತರಾಗಿ ಸ್ಥಳಾಂತರಗೊಳ್ಳುವ ದುಸ್ಥಿತಿಗೆ ಸದ್ಯದಲ್ಲಿಯೆ ಒಳಗಾಗಲಿಕ್ಕಿವೆ.

ಸರಕಾರದ ಉದ್ದೇಶ ಜನಸಂಖ್ಯೆಯನ್ನ ಹೆಚ್ಚಿಸುವುದೆ ಆಗಿರುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಸಹಜವಾಗಿ ಅದರ ವಲಸೆ ನೀತಿಗಳು ಆ ನವನಾಡಿನತ್ತ ತಾವಿರುವ ನೆಲದಲ್ಲಿ ಬರಕತ್ತಾಗದೆ ಭರವಸೆ ಕಳೆದುಕೊಂಡು ಹೊಸ ಅವಕಾಶಗಳಿಗಾಗಿ ಕಾತರಿಸಿ ಕಾಯುತ್ತಿರುವ ವಲಸಿಗರನ್ನ ಪ್ರೋತ್ಸಾಹಿಸುವಂತೆಯೆ ರೂಪುಗೊಂಡಿವೆ. ಅದರ ಆಸರೆಯಲ್ಲಿ ಹೊಸ ಬದುಕನ್ನ ಕಟ್ಟಿಕೊಳ್ಳಲು ಸಾಗರದ ಅಲೆಗಳಂತೆ ನುಗ್ಗಿ ಬರುತ್ತಿರುವ ಜನ ಪ್ರವಾಹಕ್ಕೆ ಪೂರಕವಾಗಿರುವ ಸರಕಾರಿ ನೀತಿಗಳು ಸ್ಥಳಿಯ ಬುಡಕಟ್ಟಿನವರ ಹಾಗೂ ಸ್ಥಳಿಯ ವನ ಜೊತೆಗೆ ವನ್ಯಮೃಗಗಳಿಗೆ ಮಾರಕವಾಯಿತು.



*********


ಹಾದಿ ಸಾಗುವ ಪಯಣದುದ್ದ ಇವನ ಮನಸಿನಲ್ಲಿದ್ದುದು ಒಂದೆ ಗುರಿ. ಆದಷ್ಟು ಬೇಗ ಮನೆಯನ್ನ ಹೋಗಿ ಮುಟ್ಟಬೇಕು. ಪಟ್ಟಣದ ಹೊರ ವಲಯ ದಾಟಿದ ಕೂಡಲೆ ನಾಟಕೀಯವಾಗಿ ಪರಿಸರದ ಭೀಭತ್ಸತೆ ಬಾಯಿ ಕಳೆದು ನಿಂತಿರುವ ಭಾವ ಸಾಕಾರವಾದಂತೆನಿಸಿತು. ಚಳಿಗಾಳಿಯ ಅರ್ಭಟ ಏಕಾಏಕಿ ಏರಿದಂತನಿಸ ಹತ್ತಿತು. 

ಸಹಜವಾಗಿ ಸಂಜೆಯ ನಂತರ ಶೀತ ಮಾರುತಗಳ ಪ್ರಕೋಪ ಹೆಚ್ಚಿ ಹಗಲಲ್ಲಿ ಇಳಿದು ಕೊಂಚ ಹಿಡಿತಕ್ಕೆ ಬರುವುದು ಹೊಸತೇನಲ್ಲ. ಅವನ ಆಲೋಚನಾ ಲಹರಿ ಥಟ್ಟನೆ ಕಡಿದು ಬೀಳುವಂತೆ ಸುಲ್ತಾನನ ಕಾಲು ಇದ್ದಕ್ಕಿದ್ದಂತೆ ಮುಗ್ಗುರಿಸಿತು. ಕೊರಕೊಲೊಂದರಲ್ಲಿ ಅವನ ಮುಂದಿನ ಎಡಗಾಲು ಹೊಕ್ಕು ಕುದುರೆ ಎಡವಿ ಬಿತ್ತು. ವೇಗ ಹಿಡೀತದಲ್ಲಿದ್ದುದರಿಂದ ಕಾಲು ಮೂಳೆಯೇನೂ ಮುರಿದಿರುವ ಸಂಭವವಿರಲಿಲ್ಲ. ಅಂತೆಯೆ ಕುದುರೆಯ ಕುತ್ತಿಗೆಗೆ ಅಪ್ಪಳಿಸಿದ ತನ್ನ ಮುಖಕ್ಕೂ ಅಂತಹ ಹಾನಿಯೇನೂ ಆಗಿರಲಿಲ್ಲ. ಒಂದೊಮ್ಮೆ ಪಟ್ಟಣದಿಂದ ಹೊರಟಿದ್ದ ವೇಗದಲ್ಲೆ ಓಡಿ ಬರುವಾಗ ಎಲ್ಲಾದರೂ ಅಪ್ಪಿತಪ್ಪಿ ಮುಗ್ಗರಿಸಿ ಬಿದ್ದಿದ್ದರೆ ಇಬ್ಬರಿಗೂ ಅತೀವ ನೋವಾಗುವಂತೆ ಸುಲ್ತಾನನ ಕಾಲಿನದ್ದೂˌ ಅವನ ಮೂಗಿನದ್ದೂ ಮೂಳೆ ಮುರಿಯವ ಸಾಧ್ಯತೆಯನ್ನ ತಳ್ಳಿ ಹಾಕುವಂತಿರಲಿಲ್ಲ.

ಸಣ್ಣದರಲ್ಲೆ ಸಂಭವನೀಯ ಭೀಕರ ಅಫಘಾತ ತಪ್ಪಿ ಹೋದದ್ದಕ್ಕೆ ಅವನು ನಿಟ್ಟುಸಿರು ಬಿಡತ್ತಾ ಅಶ್ವವನ್ನ ಮೃದು ಮಾತುಗಳಿಂದ ಹುರಿದುಂಬಿಸಿ ಕುತ್ತಿಗೆ ಬೆನ್ನು ಸವರುತ್ತಾ ಪುಸಲಾಯಿಸಿ ಗುಂಡಿಯಿಂದ ಮೇಲೆಬ್ಬಿಸಿದ. ಕೊಂಚ ದೂರ ಅವರಿಬ್ಬರೂ ಜೊತೆಜೊತೆಯಾಗಿಯೆ ನಡೆದರು. ಹುಯ್ಯಲಿಡುವ ಸುಳಿಗಾಳಿಯ ಪ್ರಕೋಪಕ್ಕೆ ತನ್ನ ಹೆಜ್ಜೆಯ ಸದ್ದು ತನಗೆ ಕೇಳುವುದೆ ಅಸಾಧ್ಯವಾಗಿತ್ತು. ಪಟ್ಟಣದ ಕಡೆಗೆ ವಲಸೆ ಹೆಚ್ಚುವ ಸೂಚನೆ ಕೊಟ್ಟಿದ್ದ ಗೋಪಿ ಹೇಳಿದ್ದ ಇನ್ನೂ ಅನೇಕ ಹೊಸ ಹೊಸ ವಾರ್ತೆಗಳ ಬಗ್ಗೆ ಮನಸೊಳಗೆ ಮಂಥನ ನಡೆಸುತ್ತಾ ಅವನು ಒಂದು ಕೈಯಲ್ಲಿ ಕುದುರೆಯ ಮೂಗುದಾರ ಹಿಡಿದಂತೆಯ ಮುನ್ನಡೆಯುತ್ತಿದ್ದˌ.

ಪೂರ್ವದಿಂದ ಇಲ್ಲಿಗೆ ಸಂಪರ್ಕ ಕ್ರಾಂತಿ ತರಲಿರುವ ರೈಲು ದಾರಿಯ ಸಮಾನಾಂತರವಾಗಿ ಕಂಭ ಹೂಡಿ ತಂತಿ ಎಳೆದು ಅದೇನೂ ತುರ್ತು ಸಮಾಚಾರ ಹರಡುವ ತಂತಿ ಸೇವೆಯನ್ನ ರಾಜಧಾನಿಯಿಂದ ಆಳುವ ಮಂದಿ ಈ ಪಟ್ಟಣಕ್ಕೂ ವಿಸ್ತರಿಸಲಿದ್ದಾರಂತೆ. ಅದರ ಮೂಲಕ ಕ್ಷಣಾರ್ಧದಲ್ಲಿ ದೂರದ ಒಂದು ಪ್ರದೇಶದಿಂದ ಕಳಿಸಿದ ಸುದ್ದಿಯನ್ನ ಇನ್ಯಾವುದೋ ಮೈಲಿಗಟ್ಟಲೆ ಅಂತರದಲ್ಲಿರುವವರು ಕೂಡಲೆ ಪಡೆದು ಓದಬಹುದಂತೆ! ಅಲ್ಲಿಗೆ ಪತ್ರ ಬರೆದು ಅದನ್ನ ಹೊತ್ತು ಕುದುರೆ ಮೇಲೇರಿ ವಾರಗಟ್ಟಲೆ ಊರೂರಿಗೆ ಪಯಣಿಸಿ ಅವುಗಳನ್ನ ತಲುಪಿಸಿ ಬರುವ ಸದ್ಯದ ಸುತ್ತುಬಳಸಿನ ಸೇವೆ ಮರೆಗೆ ಸರಿದ ಹಾಗೆಯೆ! ಅದರಲ್ಲೂ ಈಗಿರುವ ಅಂಚೆ ಸೇವೆ ಕೇವಲ ನಗರ ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿವೆ. ಹೊರವಲಯದಲ್ಲಿ ಮೈಲುಗಟ್ಟಲೆ ದೂರದಲ್ಲಿ ನೆಲೆಯಾಗಿರವ ತೋಟದ ಮನೆಯ ರೈತಾಪಿಗಳಿಗೆ ಯಾವ ಅಂಚೆ ಸೇವೆಯೂ ಇರಲಿಲ್ಲ. ಒಂದು ಅಂದಾಜಿನ ಮೇಲೆ ಅವರೆ ಪಟ್ಟಣಗಳಿಗೆ ಬಂದಾಗ ಅಂಚೆ ಕಛೇರಿಯನ್ನ ಎಡತಾಕಿ ತಮ್ಮ ಹೆಸರಿಗೇನಾದರೂ ಪತ್ರ ಬಂದಿದೆಯೆ ಎಂದು ವಿಚಾರಿಸಿ ಪಡೆದುಕೊಳ್ಳಬೇಕಾಗಿತ್ತು.

ಕೆಲವೊಮ್ಮೆ ಹೀಗೆಲ್ಲಾ ಊರೂರಿನ ಸುದ್ದಿ ಮತ್ತೊಂದೂರಿನ ಮತ್ತೊಬ್ಬರಿಗೆ ಹೋಗಿ ಮುಟ್ಟುವಾಗ ಎರಡೆರಡು ಮೂರು ಮೂರು ತಿಂಗಳ ಅವಧಿಯೆ ಕಳೆದು ಹೋಗಿರುತ್ತಿದ್ದವು. ಆ ಪತ್ರದಲ್ಲಿ ಬರೆದ ಸುದ್ದಿಯೂ ಸಹ ಆಗ ಸಹಜವಾಗಿ ಹಳೆಯದಾಗಿರುತ್ತಿತ್ತು. ಹೀಗಿರುವ ಪರಿಸ್ಥಿತಿ ಏಕಾಏಕಿ ಬದಲಾಗೋದೇನು ಸಾಧಾರಣ ವಿಷಯವೆ? ಎಂದಾತ ತರ್ಕಿಸಿದ. ಮಧ್ಯಾಹ್ನ ಬ್ಯಾಂಕಿನ ಕೆಲಸ ಮುಗಿಸಿ ಗೋಪಿಯ ಮನೆಗೆ ಊಟಕ್ಕೆ ಹೋಗುವ ಮೊದಲು ಅವನೂ ಅಂಚೆ ಕಛೇರಿಗೆ ಹೋಗಿದ್ದ. ನಾಲ್ಕು ಪತ್ರಗಳುˌ ಚಂದಾದಾರಿಕೆಯಿದ್ದ ರಾಜಧಾನಿಯಿಂದ ಪ್ರಕಟವಾಗಿದ್ದ ನಿಯತಕಾಲಿಕೆಗಳ ಆರು ಪ್ರತಿಗಳು ಇವನ ಹಾದಿ ಕಾಯುತ್ತಾ ಅಲ್ಲಿನ ತಿಜೋರಿಯಲ್ಲ ಭದ್ರವಾಗಿ ಬಿದ್ದಿದ್ದವು. ಸುಮಾರು ಎರಡು ತಿಂಗಳುಗಳಿಂದ ಅವು ಅವನ ಹಾದಿ ಕಾಯಲು ಅಲ್ಲಿಗೆ ಬಂದು ಮುಟ್ಟಿದ್ದವೇನೋ. ಚಳಿಗಾಲದಲ್ಲಿ ಪಟ್ಟಣದತ್ತ ರೈತಾಪಿಗಳು ತಲೆಯಿಟ್ಟು ಮಲಗುವುದೆ ಅಪರೂಪವಾಗಿರುವಾಗ ಇಂತಹ ನಿರೀಕ್ಷಿತ ನಿಧಾನಗಳೆಲ್ಲ ಆಗುವುದರಲ್ಲಿ ಆಶ್ಚರ್ಯ ಪಡುವಂತದ್ದೇನೂ ಇಲ್ಲ. ಅದರಲ್ಲೂ ಈ ಸಾಲಿನ ಚಳಿಯ ಅಬ್ಬರದ ಸಮಯದಲ್ಲಿ ಇವನಂತೆ ಪಟ್ಟಣದ ಪಯಣ ಮಾಡುವ ಧೈರ್ಯವನ್ನ ಅಳ್ಳೆದೆಯವರೇನೂ ಮಾಡುತ್ತಿರಲಿಲ್ಲ ಅಂತ ಇಟ್ಕೊಳಿ.

ಇದೂ ಸಾಲದು ಅಂತ ಪಟ್ಟಣದಲ್ಲಿ ಒಂದು ರೇಡಿಯೋ ಕಟ್ಟೆಯನ್ನ ಸರಕಾರದ ವತಿಯಿಂದ ಕಟ್ಟಲಿದ್ದಾರಂತೆ! ಸದ್ಯ ರಾಜಧಾನಿಯ ಸಮೀಪದ ನಗರಗಳಲ್ಲಿ ಮಾತ್ರ ಇರುವ ವಿದ್ಯುತ್ ಅನ್ನುವ ಅದ್ಭುತ ಶಕ್ತಿಯನ್ನ ಈ ಪಟ್ಟಣದ ಸಾರ್ವಜನಿಕರ ಬಳಕೆಗೂ ತಂದು ಮುಟ್ಟಿಸಿ ಅದರ ಮೂಲಕವೆ ರೇಡಿಯೋ ಅನ್ನುವ ಹೊಸ ಅನ್ವೇಷಣೆಯನ್ನೂ ಸಾರ್ವಜನಿಕ ಸೇವೆಗೆ ಅರ್ಪಿಸಲು ಆ ರೇಡಿಯೋ ಕಟ್ಟೆಯನ್ನ ನಿರ್ಮಾಣ ಮಾಡೋದಂತೆ! ರಾಜಧಾನಿಯಲ್ಲಿ ಕೂತು ಮಾತನಾಡುವವರ ಮಾತುಗಳು ಗಾಳಿಯ ಅಲೆಗಳ ಮೂಲಕವೆ ತೇಲಿ ಬಂದು ಆ ರೇಡಿಯೋ ಯಂತ್ರದ ಮೂಲಕ ಕೇಳುಗರೆಲ್ಲರಿಗೂ ಕ್ಷಣಾರ್ಧದಲ್ಲಿ ಕೇಳುವ ಅದ್ಭುತಗಳೂ ಇನ್ನೇನು ಘಟಿಸಲಿವೆಯಂತೆ. ಇವೆಲ್ಲವನ್ನೂ ದೂರದೂರಿನಿಂದ ಪ್ರಕಟವಾಗಿ ಅಂಚೆಯಲ್ಲಿ ಬಂದ ವೃತ್ತ ಪತ್ರಿಕೆಯಲ್ಲಿ ಬರೆದಿದ್ದನ್ನ ಓದಿ ಮಠದ ಗುರುಗಳು ತನ್ನ ಶಿಷ್ಯರೊಂದಿಗೆ ಚರ್ಚಿಸುವಾಗ ಅಲ್ಲಿಯೆ ಏನೋ ಕೆಲಸ ಮಾಡುತ್ತಿದ್ದ ಗೋಪಿ ಕೇಳಿಸಿಕೊಂಡಿದ್ದ.

ಬೇಡದೆ ಬರುತ್ತಿರುವ ಅಥವಾ ಸರಕಾರ ತರುತ್ತಿರುವˌ ನೇರವಾಗಿ ಹೇಳಬೇಕೆಂದರೆ ತಂದು ಹೇರುತ್ತಿರುವ ಈ ಬದಲಾವಣೆಯ ಹೊಸಗಾಳಿ ಆಹ್ಲಾದಮಯವೊ? ಇಲ್ಲಾ ಅಪಾಯಕಾರಿಯೋ? ಅನ್ನುವ ನಿಶ್ಕರ್ಷೆಗೆ ಬರಲಾಗದ ಅವನು ಬಂದದ್ದೆಲ್ಲಾ ಬರಲಿ ಗೋವಿಂದನ ದಯವೊಂದಿರಲಿ ಎನ್ನುವ ವೇದಾಂತಕ್ಕೆ ಜೋತು ಬಿದ್ದಿದ್ದ. ಒಂದು ವೇಳೆ ತಾನು ಬಯಸದಿದ್ದರೂ ಸಹ ಆಗುವ ಆಗುತ್ತಿರುವ ಆಗಲಿರುವ ಬದಲಾವಣೆಗಳನ್ನ ತಡೆದು ನಿಲ್ಲಿಸಿಲಾಗಲಿˌ ನಿರ್ದಿಷ್ಟವಾಗಿ ನಿರ್ದೇಶಿಸಲಾಗಲಿ ತನ್ನಿಂದ ಸಾಧ್ಯವಿಲ್ಲ. ಹೀಗಾಗಿ ತನ್ನ ಕೈ ಮೀರಿದ ವಿಷಯಗಳಲ್ಲಿ ಕುತೂಹಲ ಹೊತ್ತು ಭಾಗಿಯಾಗುವುದರ ಹೊರತು ಬೇರೆ ಇನ್ಯಾವ ಆಯ್ಕೆಗಳೂ ಅವನಿಗಿದ್ದಿರಲಿಲ್ಲ. ಬಹುಶಃ ಅಭಿವೃದ್ಧಿಯೆಂದರೆ ಅದೆ ಇರಬಹುದು.

ವಲಸೆಯ ಹೆಚ್ಚಳದ ಕುರಿತು ಸಹ ಅವನ ಅಭಿಪ್ರಾಯ ವಿಭಿನ್ನವಾಗಿತ್ತು. ಗಿಜಗುಡುವ ಜನಜಂಗುಳಿ ಗೊಂದಲˌ ಕಾಯಿಲೆಯ ಸೋಂಕುˌ ಅರಾಜಕತೆˌ ಅಸಮಾನತೆˌ ಕೊಳಕುˌ ಅಪರಾಧ ಚಟುವಟಿಕೆಗಳನ್ನ ಹೆಚ್ಚಿಸುತ್ತವೆ ಅನ್ನುವುದು ಅವನ ಖಚಿತ ಅಭಿಪ್ರಾಯವಾಗಿತ್ತು. ಹೀಗಾಗಿಯೆ ಅನಿವಾರ್ಯ ಸಂದರ್ಭಗಳನ್ನ ಹೊರತು ಪಡಿಸಿ ಪಟ್ಟಣ ವಾಸದ ನಿರ್ಬಂಧಗಳನ್ನ ತಪ್ಪಿಸಿಕೊಳ್ಳಲು ಅವನು ಆದ್ಯತೆ ನೀಡುತ್ತಿದ್ದ. ತೋಟದ ಮನೆಯಲ್ಲಿ ಕೃಷಿ ಚಟುವಟಿಕೆಗಳ ಮಧ್ಯದ ಬಾಳ್ವೆಯಲ್ಲಿ ಸಿಗುತ್ತಿದ್ದ ಮನಃಶಾಂತಿ ಅವನಿಗೆ ಪಟ್ಟಣದ ಗದ್ದಲದ ಗಲಾಟೆಯ ಬದುಕಿನಲ್ಲಿ ಎಂದೂ ಕಂಡು ಬಂದದ್ದಿಲ್ಲ. ಅದಾಗಲೆ ಕನಿಷ್ಠ ಒಂದು ಮೈಲಿಯನ್ನಾದರೂ ನಡೆದು ಕಾಲೂ ದಣಿದಿತ್ತಾಗಿ ಮರಳಿ ಸುಲ್ತಾನನ ಬೆನ್ನೇರಿದ. ಆರಂಭಿಕ ಅಫಘಾತದಿಂದಾಗಿದ್ದ ಅಘಾತದಿಂದ ಚೇತರಿಸಕೊಂಡಿದ್ದ ಕುದುರೆಯೂ ತಕರಾರಿಲ್ಲದೆ ಮುಂದಡಿಯಿಡುತ್ತಾ ಮನೆಯತ್ತ ಓಡ ತೊಡಗಿತು.

ಕೂತು ಕೂತು ಚಳಿಗೆ ಜೋಮು ಹಿಡಿದಿದ್ದ ಮೈ ಮನಸ್ಸಿಗೆ ಈ ನಡಿಗೆ ಸ್ವಲ್ಪ ಚೈತನ್ಯ ತುಂಬಿತ್ತು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆಯಿತು ಅನ್ನುವ ಹಾಗೆˌ ಒಂದೈದು ಮೈಲಿ ದೂರ ಚಲಿಸಿದ್ದರೋ ಇಲ್ಲವೋˌ ಮನೆಯಿಂದ ಕೇವಲ ಹನ್ನೆರಡೋ ಹದಿ ಮೂರೋ ಮೈಲು ದೂರದ ಅಂತರ ಉಳಿದಿರುವಂತೆ ಇದ್ದಕ್ಕಿದ್ದಂತೆ ಉತ್ತರದ ದಿಕ್ಕಿನಿಂದ ಒಕ್ಕರಿಸಿ ಬಂದು ಬೀಸಿದ ಕಾರ್ಮೋಡದ ಹಿಮಪಾತದ ಹೊಡೆತವನ್ನ ಮೀರಿ ಮತ್ತಷ್ಟು ಮುಂದುವರೆಯುವುದೆ ಅಸಾಧ್ಯವಾಯಿತು. ಪುಣ್ಯಕ್ಕೆ ಅವರಿಬ್ಬರೂ ಆಗಲೆ ರೈಲು ಹಾದಿಯ ಕಾರ್ಮಿಕರು ನೆಲೆಸಿದ್ದ ಸದ್ಯ ಬೀಗ ಬಿದ್ದಿದ್ದ ಕ್ಯಾಂಪಿನ ಮನೆಗೆ ಹೆಚ್ಚೆಂದರೆ ಸಾವಿರ ಗಜ ದೂರದಲ್ಲಿದ್ದರು.


*********



ಮುಳುಗುವವರಿಗೆ ಹುಲ್ಲಿನಾಸರೆ  ಅನ್ನುವಂತೆ ಕೂಡಲೆ ಅದರತ್ತ ಸುಲ್ತಾನನ್ನ ದೌಡಾಯಿಸಿದ ಅವನು ಇನ್ನೇನು ಹಿಮ ಮಳೆಯ ಅರ್ಭಟ ಹೆಚ್ಚಿ ನಡುನಡುವೆ ಸಿಡಿಲು ಹೊಡೆಯುವ ಭಯಂಕರ ವಿದ್ಯಾಮಾನಗಳು ಘಟಿಸುವ ಮುನ್ನವೆ ಆ ಮನೆಯ ಅಂಗಳಕ್ಕೆ ಬಂದು ಮುಟ್ಟಿದ್ದರು. ಯೋಚಿಸಲು ಹಚ್ಚು ಸಮಯವಿರಲಿಲ್ಲ. ಬೆನ್ನಿಗೆ ಕಟ್ಟಿಕೊಂಡಿದ್ದ ಕೈ ಕೊಡಲಿಯಿಂದ ಬೀಗ ಹಾಕಿ ಬಿಗಿದಿದ್ದ ಹಗ್ಗದ ಹುರಿಯನ್ನ ಕಡಿದವನೆ ಕುದುರೆಯನ್ನೂ ಒಳಗೆಳೆದುಕೊಂಡು ಬಾಗಿಲನ್ನ ಮುಚ್ಚಿ ಹಿಮ ಮಳೆಯ ಮಾರಕ ಪ್ರಕೋಪದಿಂದ ಪಾರಾದ.

ಹೊರಗೆ ಹುಯ್ಯಲಿಡುವ ಗಾಳಿಯ ಜೊತೆಜೊತೆಗೆ ಚಚ್ಚಿ ಬಿಸಾಡುವಂತೆ ಹಿಮದ ಮಳೆ ಸುರಿಯುತ್ತಿದ್ದ ರಣ ಭೀಕರ ಸದ್ದು ಕಿವಿಗಪ್ಪಳಿಸುತ್ತಿತ್ತು. ಹೊರಗೆ ಮಳೆˌ ಒಳಗೆ ಗವ್ವೆನ್ನುವ ಭೀಕರ ಕತ್ತಲು. ಅದರಲ್ಲೆ ತಡಕಾಡಿ ಅಗ್ಗಿಷ್ಟಿಕೆಯಿರುವ ಮನೆಯ ಮೂಲೆಯನ್ನ ಹುಡುಕಿದ. ಅವನ ಅದೃಷ್ಟಕ್ಕೆ ಚಕಮಕಿ ಕಲ್ಲುಗಳು ಅಲ್ಲೆ ಬಿದ್ದುಕೊಂಡಿದ್ದವು. ಚೆನ್ನಾಗಿ ಅವನ್ನ ನೆಲಕ್ಕೆ ಉಜ್ಜಾಡಿದವನೆ ಅವುಗಳಿಂದ ಕಿಡಿಯೆಬ್ಬಿಸಿದ. ರೈಲು ಕೂಲಿಗಳ ಕ್ಯಾಂಪಿನಲ್ಲಿ ಕಲ್ಲಿದ್ದಲಿಗೆ ಬರವೆ? ಅಗ್ಗಿಷ್ಟಿಕೆಯ ಒಡಲ ಒಲೆಗೆ ತುಂಬಿದ್ದ ಒಣ ಪುರಳೆಗಳಿಗೆ ಕಲ್ಲು ಗಟ್ಟಿಸಿ ಕಿಡಿ ಹಾರಿಸಿ ಬೆಂಕಿ ಊದಿ ಉರಿಯೆಬ್ಬಿಸಿದವ ಕಲ್ಲಿದ್ದಲನ್ನೂ ಜೊತೆಗೆ ತುಂಬಿದ. ಕ್ರಮೇಣ ಉರಿ ಹೆಚ್ಚಿತು. ಅಗ್ಗಿಷ್ಟಿಕೆಯ ಚಿಮಣಿ ಕೊಳವೆಯಿಂದ ಒಳ ನುಗ್ಗಿ ಬರಲು ಹವಣಿಸುತ್ತಿದ್ದ ಸುಳಿಗಾಳಿಯೂ ಸಹ ಊದು ಕೊಳವೆಯಲ್ಲಿ ಗಾಳಿ ಊದಿದಂತಾಗಿಸಿ ಬೆಂಕಿಯ ಉರಿಯನ್ನ ಹೆಚ್ಚಿಸುವಲ್ಲಿ ಸಹಕರಿಸಿತು. ಅರ್ಧ ತಾಸಿನಲ್ಲಿ ಮನೆಯ ಹಜಾರ ಅಗ್ಗಿಷ್ಟಿಕೆಯ ಉರಿಯಿಂದೆದ್ದ ಬೆಳಕಿನಿಂದ ಬೆಳಗಿ ಹಾಗೂ ಶಾಖದಿಂದ ಬೆಚ್ಚಗಾಗಿ ಹೊರಗಿನ ಚಳಿಯ ಭೀಕರತೆಯ ಹೊತ್ತಿನಲ್ಲಿ ಸ್ವಲ್ಪ ಮಟ್ಟಿಗಾದರೂ ಸುಖಾನುಭವ ನೀಡಲಾರಂಭಿಸಿತು.

ಅಗ್ಗಿಷ್ಟಿಕೆಯ ಹತ್ತಿರವೆ ಕುದುರೆಯನ್ನೂ ನಿಲ್ಲಿಸಿಕೊಂಡು ಅದರ ಬೆನ್ನ ಮೇಲೆ ಹೊದೆಸುವ ಮುನ್ನ ದಪ್ಪನೆ ಮಂದರಿಯನ್ನ ಬೆಂಕಿಯುರಿಯ ಶಾಖಕ್ಕೆ ಹಿಡಿದು ಬೆಚ್ಚಗಾಗಿಸುವಾಗ ಶಾಖದ ಉರಿಗೆ ಚಟಪಟಿಸುತ್ತಾ ನಾಲ್ಕಾರು ರಕ್ತ ಹೀರುವ ಉಣ್ಣೆಗಳು ಬೆಂಕಿಗೆ ಬಿದ್ದವು. ಹಳ್ಳಿಯ ಲಾಯದಲ್ಲಿ ಇದ್ದಿರದ ಈ ಉಣ್ಣೆ ಅದೆಲ್ಲಿ ಇವನ ಬೆನ್ನೇರಿತಪ್ಪ! ಎಂದು ಅಚ್ಚರಿಗೊಳಗಾದ ಆತˌ ಬಹುಶಃ ಹಟ್ಟಿ ಹಟ್ಟಿ ಅಲಿಯುವ ಪಾಪಮ್ಮನೋˌ ಇಲ್ಲವೆ ಗಾಡಿನ ಕಮ್ಮಾರಸಾಲೆಯಲ್ಲೋ ಕುದುರೆಯ ಮೈ ವಾಸನೆ ಢಾಳವಾಗಿದ್ದ ತನ್ನ ಮೇಲು ಹೊದಿಕೆಯನ್ನೇರಿ ಅವು ಅಲ್ಲಿಯ ತನಕ ಪಯಣಿಸಬಹುದೇನೋ ಎಂದು ಊಹಿಸಿದ. ಸರಿಯಾಗಿ ಕೊಡವಿ ಬೆಂಕಿಯಲ್ಲಿ ಉಣ್ಣೆಗಳನ್ನೆಲ್ಲಾ ಕೊಂದುˌ ಕುದುರೆಯ ಮೈಯನ್ನ ಬ್ರೆಷ್ಷಿನಿಂದ ತಿಕ್ಕಿ ಒರೆಸಿ ಮೈಗಂಟಿಕೊಂಡಿರಬಹುದಾದ ಅಳಿದುಳಿದ ಆ ಕ್ರಿಮಿಕೀಟಗಳನ್ನ ತೆಗೆದು ಅನಂತರವಷ್ಟೆ ಬೆಚ್ಚಗಾಗಿದ್ದ ಮಂದರಿಯನ್ನ ಅವನು ಸುಲ್ತಾನನ ಬೆನ್ನಿಗೆ ಹೊದೆಸಿದ. ಅಪ್ಪಿತಪ್ಪಿ ಅವೇನಾದರೂ ಹಳ್ಳಿಮನೆಯ ಲಾಯಕ್ಕೂ ಬಂದಿದ್ದರೆ ಅಲ್ಲಿ ತಮ್ಮ ಸಂತಾನಭಿವೃದ್ಧಿ ಮಾಡಿಕೊಂಡು ಇನ್ನುಳಿದ ಜಾನುವಾರುಗಳ ಬಾಳನ್ನೂ ನರಕವಾಗಿಸುವ ಸಾಧ್ಯತೆಯನ್ನ ಯೋಚಿಸಿಯೆ ಹೌಹಾರಿದನವನು.

ಚಳಿಯ ಹೊಡೆತಕ್ಕೆ ಚಹಾದ ಔಷಧ ಅಗತ್ಯವೆನಿಸಿತು. ಬೆನ್ನ ಚೀಲದಲ್ಲಿ ಚಹಾಪುಡಿಯೇನೋ ಇತ್ತುˌ ಬೆರೆಸಲು ಖರೀದಿಸಿ ತಂದಿರುವ ಬಿಳಿ ಸಕ್ಕರೆಯೂ ಈಗಿತ್ತು. ಆದರೆ ಹಿಮ ಕಾಯಿಸಿ ಕುದಿಸಲು ಕೈ ಪಾತ್ರೆಯೊಂದು ಮಾತ್ರ ಸಮೀಪದಲ್ಲಿ ಕಂಡು ಬರಲಿಲ್ಲ. ಪುರುಳೆಗಳ ಸಣ್ಣ ಸೂಟೆ ಮಾಡಿಕೊಂಡು ಅಲ್ಲೆ ಎಲ್ಲಾದರೂ ಬಿದ್ದಿರುವ ಪಾತ್ರೆ ಪಗಡವನ್ನ ಹುಡುಕುತ್ತಾ ಹೊರಟ. ಅಷ್ಟೊಂದು ಜನರಿದ್ದ ಕಾರ್ಮಿಕರ ಕ್ಯಾಂಪಿನಲ್ಲಿ ಒಂದಾದರೂ ಮಡಿಕೆ ಕುಡಿಕೆ ಇರಲೆಬೇಕಲ್ಲ?

ಮಂದ ಬೆಳಕುˌ ಸರಿಯಾಗಿ ಕಾಣದ ಒಳಾವರಣದ ಕೋಣೆಗಳತ್ತ ಮೆಟ್ಟಿಲನ್ನೇರಿ ಹೋದವನಿಗೆ ನಾಲ್ಕನೆ ಹೆಜ್ಜೆಯಿಡುವಷ್ಟರಲ್ಲೆ ಎಡಕ್ಕೆ ಕೆಳಗಿಳಿದ ಮೆಟ್ಟಿಲ ಸಾಲು ಕಾಣಿಸಿತು. ಬಹುಶಃ ಅಡುಗೆಮನೆಯಿರಬಹದೇನೋ!  ಎಂದು ಅಂದಾಜಿಸುತ್ತಾ ಅಡಿಯಿಟ್ಟವನಿಗೆ ಅದು ದಾಸ್ತಾನು ಕೋಣೆ ಅನ್ನುವುದು ಖಚಿತವಾಯಿತು. ಗೋಡೆಯ ಜಂತಿಗೆ ಹೊಡೆದ ಅರೆಯಲ್ಲಿ ಮೇಣದಬತ್ತಿಗಳ ಕಂಡˌ ಒಂದೆರಡನ್ನ ಹೊತ್ತಿಸಿಕೊಂಡು ಇನ್ನೇನು ಆರಿ ಹೋಗಲಿದ್ದ ಸೂಟೆಯ ಬೆಳಕಿಲ್ಲದೆ ಕತ್ತಲಲ್ಲಿ ಕುರುಡನಂತೆ ತಡಕಾಡುವ ಕರ್ಮಾಂತರದಿಂದ ಪಾರಾದ. ಈಗ ಕೋಣೆಯೊಳಗಿನ ಆವರಣ ಸ್ಪಷ್ಟವಾಗಿ ಗೋಚರಿವಷ್ಟು ಬೆಳಕು ಮೇಣದಬತ್ತಿಯ ಉರಿ ಸೂಸುತ್ತಿತ್ತು. ಯಾವುದಕ್ಕೂ ಇರಲಿ ಎಂದು ಇನ್ನೆರಡು ಮೊಂಬತ್ತಿಗಳನ್ನ ಜೇಬಿಗಿಳಿಸಿಕೊಂಡ.

ದಾಸ್ತಾನು ಕೋಣೆಯ ತುಂಬಾ ಪಿಪಾಯಿಗಳನ್ನ ಜೋಡಿಸಿಡಲಾಗಿತ್ತು. ಸುಮಾರು ಹತ್ತಡಿ ಉದ್ದ ಇಪ್ಪತ್ತಡಿ ಅಗಲದ ನೆಲಮಾಳಿಗೆಯಂತಹ ರಚನೆ ಅದಾಗಿತ್ತು. ನೆಲಕ್ಕೆ ಥಂಡಿ ಏರದಂತೆ ಪೈನ್ ಹಲಗೆ ಹೊದಿಸಿದ್ದರು. ಒಂದೊಂದೆ ಪೀಪಾಯಿಯ ಬಾಯಿ ಸರಿಸಿ ನೋಡಿದರೆˌ ಒಂದರಲ್ಲಿ ಉಪ್ಪುನೀರಿಗೆ ಹಾಕಿಟ್ಟ ಸಿಗಡಿˌ ಇನ್ನೊಂದರಲ್ಲಿ ಉಪ್ಪುನೀರಲ್ಲಿದ್ದ ಸರೋವರದ ಮೀನುˌ ಮತ್ತೊಂದರಲ್ಲಿ ಓಟ್ಸ್ ಹಿಟ್ಟಿನ ದಾಸ್ತಾನುˌ ಮತ್ತೊಂದರಲ್ಲಿ ಖಾದ್ಯ ತೈಲದ ಭಂಡಾರ ಹೀಗೆ ಆಹಾರ ಸಾಮಗ್ರಿಗಳ ಸಂಗ್ರಹ ಕಾಣಿಸಿತು. ಗುತ್ತಿಗೆದಾರ ತನ್ನ ಅಣತಿಯಂತೆ ದುಡಿಯುವ ಕಾರ್ಮಿಕರ ವಸತಿಯೊಳಗೆ ಊಟದ ಏರ್ಪಾಡಿಗೆ ಅವನ್ನೆಲ್ಲ ಅಲ್ಲಿಗೆ ತಂದಿರಿಸದ್ದ. ಪ್ರತಿ ಬಟವಡೆಯ ದಿನ ಅದನ್ನ ರೇಷನ್ ರೂಪದಲ್ಲಿ ಕಾರ್ಮಿಕರಿಗೆ ಕನಿಷ್ಠ ದರಕ್ಕೆ ಮಾರಲಾಗುತ್ತಿತ್ತು. ಕಾರ್ಮಿಕರ ಹೆಂಗಸರು ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳುತ್ತಿದ್ದುದರಿಂದ ಅವರ ಸಂಸಾರದ ಗಾತ್ರಕ್ಕನುಗುಣವಾಗಿ ಹಿಟ್ಟುˌ ಎಣ್ಣೆˌ ಬೇಳೆˌ ತರಕಾರಿˌ ಮೀನುˌ ಮಾಂಸˌ ದ್ರಾಕ್ಷಾರಸˌ ಮೆಣಸುˌ ಉಪ್ಪುˌ ಚಹಾಪುಡಿˌ ರಸ್ಕುˌ ಗರಿಗರಿ ಬಿಸ್ಕೇಟು ಮುಂತಾದ ಅಂಗಡಿಯ ತಿಂಡಿಗಳನ್ನೂ ಸಹ ಕೊಂಡುಕೊಂಡು ಮನೆವಾರ್ತೆಯನ್ನ ನಿಭಾಯಿಸುತ್ತಿದ್ದರು. ಆಹಾರ ಸಾಮಗ್ರಿಗಳ ಖರೀದಿಗೆ ದೂರದ ಪೇಟೆಗೆ ಹೋಗುವ ಅನಿವಾರ್ಯತೆ ಕಾರ್ಮಿಕರಿಗೆ ಈ ಮೂಲಕ ತಪ್ಪುತ್ತಿತ್ತಾದರೆˌ ಕೊಡುತ್ತಿದ್ದ ಸಂಬಳದಲ್ಲಿ ಕೆಲ ಕಾಸು ಮರಳಿ ಸುತ್ತಿ ಬಳಸಿ ಬಂದು ಗುತ್ತಿಗೆದಾರನ ಬಕ್ಕಣಕ್ಕೆ ಸೇರುತ್ತಿತ್ತು. ಕೆಲಸದ ನಡುವೆ ಆಹಾರದ ಕೊರತೆಯ ಕಾರಣ ಯಾವೊಬ್ಬ ಕಾರ್ಮಿಕನೂ ದುಡಿಮೆಯಿಂದ ತಪ್ಪಿಸಿಕೊಳ್ಳಕೂಡದು ಅನ್ನುವ ದೂರದೃಷ್ಟಿಯಿಂದ ಗುತ್ತಿಗೆದಾರ ಈ ವ್ಯವಸ್ಥೆ ಕಲ್ಪಿಸಿದ್ದ.

ಇದರ ಹಂಚಿಕೆ ಕೆಲಸಕ್ಕೆ ತನ್ನ ನಿಷ್ಠಾವಂತ ಭಂಟನೊಬ್ಬನನ್ನ ಅವನು ನೇಮಿಸಿಯೂ ಇದ್ದ. ಅವನು ಅನಾಗರಿಕ ಕಾರ್ಮಿಕರ ಒರಟುತನದ ನಡುವಳಿಕೆಯನ್ನ ನಿಭಾಯಿಸಿಕೊಂಡು ಅಚ್ಚುಕಟ್ಟಾಗಿ ತನಗೆ ಯಜಮಾನರು ಒಪ್ಪಿಸಿದ್ದ ಜವಬ್ದಾರಿಯನ್ನ ನಿರ್ವಹಿಸಿಕೊಂಡು ಹೋಗುತ್ತಿದ್ದ. ಈ ಹಂಗಾಮಿನ ಭೀಕರ ಚಳಿಗಾಲದ ಎಚ್ಚರಿಕೆಯನ್ನ ಉಳಿದೆಲ್ಲ ವಲಸೆ ಬಂದವರಂತೆ ಹಗುರವಾಗಿ ಪರಿಗಣಿಸಿದ್ದ ಗುತ್ತಿಗೆದಾರ ಕಾರ್ಮಿಕರೆಲ್ಲ ಚಳಿಗಾಳಿಯ ಸರಣಿಗೆ ಹೆದರಿ ಶೀತ ಪ್ರಕೋಪವನ್ನ ತಾಳಲಾರದೆ ವಸಂತಕ್ಕೆ ಬರುತ್ತೇವೆ ಎಂದು ಹೇಳಿ ಪೇರಿ ಕಿತ್ತು ಪೂರ್ವಕ್ಕೆ ಮರಳಿ ದೌಡಾಯಿಸುವ ಒಂದು ವಾರಕ್ಕೆ ಮೊದಲಷ್ಟೆ ಸುಮಾರು ಎರಡು ತಿಂಗಳಿಗೆ ಸಾಕಾಗುವಷ್ಟು ಸಕಲ ದಿನಸಿ ದಾಸ್ತಾನುಗಳನ್ನೂ ತಂದು ಆ ಕೋಣೆಯನ್ನ ಸರಕಿನಿಂದ ತುಂಬಿ ತುಳುಕಿಸಿದ್ದ. ಈಗ ಏಕಾಏಕಿ ಅದನ್ನ ಬಳಸುವವರೆ ಇಲ್ಲದೆ ಸಕಲ ಸರಕೂ ಸುಮ್ಮನೆ ಕೊಳೆಯುತ್ತಾ ಬಿದ್ದಿತ್ತು. ಆ ಪರಿ -೩೦ರ ಹತ್ತಿರದ ಪ್ರಕಾಂಡ ತಂಪಿನ ವಾತಾವರಣ ಇರದಿದ್ದ ಪಕ್ಷದಲ್ಲಿ ಅದರಲ್ಲಿ ಬಹುತೇಕ ಸಾಮಾನು ಸರಂಜಾಮುಗಳು ಕೆಟ್ಟು ಹೋಗಲಿದ್ದವು. ಇನ್ನೂ ಬಹುತೇಕ ಮೂರು ತಿಂಗಳಾದರೂ ಅದೆ ಪ್ರಕಾರದ ಹಿಮಪಾತವಾಗಲಿದ್ದುˌ ಆ ತನಕ ಅವುಗಳು ಸುರಕ್ಷಿತ ಅಂದುಕೊಳ್ಳಬಹುದಾಗಿತ್ತು ಅಷ್ಟೆ. ಹೇಗೂ ಹಾಳಾಗುವ ಆಹಾರ ಖಾದ್ಯ ಪದಾರ್ಥ. ಯಾರಾದರೂ ಬಳಸಿ ಉಪಯೋಗಿಸಿದರೆ ಗುತ್ತಿಗೆದಾರನಿಗೆ ಅದರಿಂದಾಗುತ್ತಿದ್ದ ನಷ್ಟ ಅಷ್ಟರಲ್ಲೆ ಇತ್ತು. ಹೀಗಾಗಿ ಒಂದೊಂದರದ್ದೆ ಗುಣಮಟ್ಟ ಪರೀಕ್ಷಿಸಿ ತೃಪ್ತನಾದ.




https://youtu.be/w6YeOoQmvCY

https://youtu.be/hnCfBq4M05k

https://youtu.be/KWqWICCBH6k

https://youtu.be/5NaKuyjjhFY

No comments: