31 December 2010

ಸಾಕು...

ಕಣ್ಣಿಗೆ ಯಾವ ಕಡಿವಾಣವೂ ಇಲ್ಲ.
ನೋಟಕೆ ತಡೆ ಹಾಕುವ ಕೋಟೆಯನ್ನು ಯಾರೂ ಕಟ್ಟಿಲ್ಲ/
ದೃಷ್ಠಿ ನಿನ್ನತ್ತ ಅದಾಗಿಯೆ ಅದು ನೆಟ್ಟು,
ನಿನ್ನಲ್ಲೆ ನೆಲೆಸಿದರೆ ಅದು ನನ್ನ ತಪ್ಪು ಹೇಗಾಗುತ್ತೆ?//

ಆದರೂ ಇದರಲ್ಲಿ ನನ್ನದೂ ಒಂಚೂರು ತಪ್ಪಿದೆ...
ನಿನ್ನ ಕನಸಿನ ಕೋಟೆಗೆ ಸೆರೆಯಾಗುವೆನೆಂಬ ಅರಿವಿದ್ದರೂ ನಾ ಲಗ್ಗೆ ಹಾಕಬಾರದಿತ್ತು/
ನಿನ್ನ ಒಲವ ತಿಳಿಗೊಳದಿಂದ ಹೊರ ಬಂದರೆ ಉಸಿರು ಸಿಗದೆ ಒದ್ದಾಡ ಬೇಕೆಂಬ ಅರಿವಿದ್ದರೂ ಸಹ,
ದೂರಮಾಡುವ ಗಾಳದ ಮೊನೆ ಕಚ್ಚಬಾರದಿತ್ತು//


ಸುತ್ತಲಿನ ಸೌಂದರ್ಯಕ್ಕೆ ಸೊಬಗು ಸಿಗೋದು ನೀ ನನ್ನ ಉಸಿರು ತಾಕುವಷ್ಟು ಹತ್ತಿರವಿದ್ದರೆ...
ಕಳೆದುಕೊಂಡರೂ ವಿಷಾದವೆನಿಸದೆ ವಿಚಿತ್ರ ಸಂಭ್ರಮವಾಗೋದು...
ನನಗೆ ಅರಿವಿಲ್ಲದಂತೆ ನೀ ನನ್ನ ಮನಸ ಕದ್ದರೆ/
ಟನ್ನಿನಷ್ಟು ಬೇಕಿಲ್ಲ.ಕ್ವಿಂಟಾಲ್ ನಷ್ಟನ್ನೂ ನಾ ಕೇಳ್ತಿಲ್ಲ...
ಕಿಲೋ ಸಹ ಬೇಡ...ಗ್ರಾಮ್ನಷ್ಟರ ಆಸೆಯೂ ಇಲ್ಲ,
...ಔನ್ಸ್ ಸಿಕ್ಕರೂ ಸಾಕು...
ಕೊಡುತೀಯ ಒಲವ? ಮೊಗೆದು ಮನಸ ಚಟಾಕು?!//

30 December 2010

ಭ್ರಮೆಯೂ ಇರಬಹುದೆ...?

ಅಮೂಲ್ಯವಾದದ್ದು ನಾನೇನಾದರೂ ಇಲ್ಲಿಯವರೆಗೆ ಗಳಿಸಿದ್ದೆ ಹೌದಾದರೆ,
ಅದು ಕೆಲಕಾಲವಾದರೂ ನನಗೆ ಸಿಕ್ಕ ನಿನ್ನ ಸಾಂಗತ್ಯ...
ನಿನ್ನ ಪ್ರೀತಿ ಎಂದು ಎದೆಯುಬ್ಬಿಸಿ ಹೇಳಬಲ್ಲೆ,
ಬರದಿದ್ದರೂ...
ಸಂತಸಗಳ ಹೊತ್ತು ತರದಿದ್ದರೂ ನಿನ್ನ ನೆನಪೆ ಸಾಕು...
ಅದೆ ನನ್ನ ಪಾಲಿಗೆ ಸಿರಿ...
ಅದರ ಕಾವಲಿಗೆ ಏನನ್ನಾದರೂ ಮಾಡಬಲ್ಲೆ ಎಲ್ಲಾ ಎಲ್ಲೆಯನೂ ಮೀರಿ/
ಸ್ಪಷ್ಟವಾಗಿ ಗೊತ್ತು ಮತ್ತೆ ನೀ ಮರಳಿ ಬರುವುದಿಲ್ಲ...
ನನ್ನ ಕಾಯುವಿಕೆಯಂತೂ ಸಂತಸದಲ್ಲಿ ಕೊನೆಗೊಳ್ಳುವುದಿಲ್ಲ,
ಹೀಗಿದ್ದರೂ ನನ್ನ ನಿರೀಕ್ಷೆಗೆ ಕೊನೆಯಿಲ್ಲ...
ಬದುಕಿನಲ್ಲದಿದ್ದರೂ ಸಾವಿನ ನಂತರವಾದರೂ...
ನಿನ್ನಾತ್ಮದಲ್ಲಿ ನಾನು ವಿಲೀನವಾಗುವುದರಲ್ಲಿ ಸಂಶಯವಿಲ್ಲ//


ಸುತ್ತಲಿನ ಸದ್ದಿಗೆಲ್ಲ ನಾ ಕಿವುಡ...
ನಿನ್ನ ಮುಖದ ನಸು ನಗುವ ಹೊರತು ಇನ್ನೆಲ್ಲದಕ್ಕೂ ಕುರುಡ....
ನಿನ್ನ ನಾಮ ಜಪದ ನೆಪವಿಲ್ಲದಿದ್ದರೆ ಪೂರ್ತಿ ಮೂಕ,
ಆದರೂ ಅದೇ ನನಗೆ ಪರಮ ಸುಖ..
ಇಂದಿಗೆ ನೀ ನನ್ನ ದೂರವಾಗಿಸಿ ಆ ದರಿದ್ರ ದೇಶ ಸೇರಿ ಹೋಗಿ ಒಂದು ಸಂವತ್ಸರ/
ಒಂದು ಮಾಸದ ಮೇಲೆರಡು ದಿನ ಕಳೆಯಿತು...
ಆದರೂ ನಿನ್ನ ಮೇಲು ಮೇಲಿಂದ ಹೀಗೆಳೆಯುವಂತೆ ನಟಿಸುತ್ತಲೇ....
ನನ್ನೊಳಗಿನ ಒಲವ ಭೂಮಿಯಲ್ಲಿ ಇನ್ನಷ್ಟು ಪ್ರೀತಿಯ ಬೀಜ ಮೊಳೆಯಿತು,
ಈ ಇಷ್ಟೂ ದಿನಗಳಲ್ಲಿ ಕಳೆದು ಕೊಂಡದ್ದಕ್ಕಿಂತ....
ಪಡೆದು ಕೊಂಡದ್ದೆ ಹೆಚ್ಚು ಅನ್ನುವುದು ನನ್ನ ಭಾವನೆ...
ಇದು ಭ್ರಮೆಯೂ ಇರಬಹುದು//

29 December 2010

ತೀರದ ತೃಷ್ಣಾ...

ಒಂಟಿತನದ ಶೂಲಕ್ಕೇರಿ...
ನಿರ್ಜೀವ ಭಾವಗಳ ಸಾಂಗತ್ಯದಲ್ಲಿ ಮೆರವಣಿಗೆ ಹೊರಟ ,
ನನ್ನೆಲ್ಲ ನೋವಿನ ಶಿಲುಬೆ ಹೊತ್ತ ನನ್ನ ಮನಸಿನ ಭಾರ ಇಳಿಸಲು ನೀ ಬಂದೇ ಬರುವೆ...
ಎಂಬ ಚೂರು ಆಸೆ ಇನ್ನೂ ಜೀವಂತವಾಗಿದೆ ಎದೆಯೊಳಗೆ/
ಮರೆತ ನೋವುಗಳನ್ನೆಲ್ಲಾ ಒಂದೊಮ್ಮೆ ನೀನೆ ಮರೆಯಾಗಿಸಿದ್ದೆ,
ಮರಳಿ ಮತ್ತದರಲ್ಲಿ ನಾ ಸೆರೆಯಾಗುವಂತೆ ಮಾಡಿದ್ದೂ ಕೂಡ...
ನೀನೆ ಎನ್ನುವುದು ಮಾತ್ರ ನನ್ನ ಬದುಕಿನ ಕ್ರೂರ ವ್ಯಂಗ್ಯ//

ಮುಗಿಯದ ಮೌನರಾಗದ ನಡುವೆ...
ಬಿಕ್ಕಳಿಕೆಯ ತಾಳ ಹಾಕುತ್ತ,
ರೋಧನೆಯ ನನ್ನ ಗಾಯನ ನಿರಂತರ ನಿನ್ನ ನೆನಪಿನಲ್ಲಿ ಜಾರಿಯಲ್ಲಿರುತ್ತದೆ/
ಹರಿವ ಯಾತನೆಯ ನದಿತೀರದಲ್ಲಿ ...
ನನ್ನದೂ ಒಂದು ನೋವಿನ ಧಾರೆ ಅದಕ್ಕೆ ಕೂಡಿಸುತ್ತ ಕೂತಿರುವ ನನ್ನ ವಿಹ್ವಲ ಚಿತ್ರ,
ನಿನ್ನ ಮನೆಗೋಡೆಯ ಮೇಲೆ ಆಲಂಕಾರಿಕ ಚಿತ್ರವಾಗಿ ತೂಗು ಹಾಕಿದ್ದೀಯಂತಲ್ಲ?...
ಇಷ್ಟೇಕೆ ನಿಷ್ಕರುಣೆ ನಿನಗೆ ನನ್ನಮೇಲೆ?//

ವಾಚಕರವಾಣಿಗೆ ನನ್ನ ಚೊಚ್ಚಲ ಪತ್ರ...!

ಮಾನ್ಯ ಸಂಪಾದಕರೆ...


ಇಂದಿನ ಪ್ರಜಾವಾಣಿಯ ಸಂಚಿಕೆಯಲ್ಲಿ (೨೮ ದಶಂಬರ ೨೦೧೦) " ಇಂಡಿಯಾ ಎನ್ನುವುದೆ ದಾಸ್ಯ"ಎಂಬ ಶಿರೋನಾಮೆಯಲ್ಲಿದ್ದ ವರದಿ ಪ್ರಕಟವಾಗಿದೆ.ಹಿರಿಯರೂ ಪ್ರಾಜ್ಞರೂ ಆದ ಡಾ ಚಿದಾನಂದಮೂರ್ತಿಗಳು ಮ್ಯಾನ್ಮಾರ್,ಶ್ರೀಲಂಕಗಳ ಮೇಲ್ಪಂಕ್ತಿ ಅನುಸರಿಸಿ ನಾವು ಅಂದರೆ ಭಾರತೀಯರೂ ವಸಾಹತುಶಾಹಿ ಕುರುಹಾದ 'ಇಂಡಿಯಾ'ವೆಂಬ ಹೆಸರಿನ ಕುರೂಪವನ್ನು ಹೋಗಲಾಡಿಸಿ 'ಭಾರತ'ವೆಂದು ದೇಶದ ಮರು ನಾಮಕರಣ ಮಾಡಿ ಸುರೂಪಗೊಳಿಸ ಬೇಕೆಂಬ ಆಶಯ ಮಂಡಿಸುತ್ತಾರೆ.ಅವರ ಈ ಆಗ್ರಹ ಅಪೇಕ್ಷಣೀಯವೆ ಆದರೂ ಈಗ ಅದರ ತುರ್ತು ಅಗತ್ಯ ಎಷ್ಟಿದೆ ಎಂಬುದು ಅವರೂ ಸೇರಿ ಎಲ್ಲರೂ ಯೋಚಿಸಬೇಕಾದ ಸಂಗತಿ.ಬಹುಸಂಖ್ಯಾತ ಉತ್ತರ ಭಾರತೀಯರು 'ಹಿಂದುಸ್ತಾನ್ 'ಎಂದು ಕರೆಯುವ ಈ ದೇಶ ಬಹಳ ಕಡಿಮೆ ಸಂಖ್ಯೆಯಲ್ಲಿರುವ ದಕ್ಷಿಣ ಭಾರತೀಯರಿಗಷ್ಟೇ "ಭಾರತ"ವಾಗುಳಿದಿದೆ ಎನ್ನುವುದು ಇಂದಿನ ವಾಸ್ತವ.ಜಾಯಮಾನ ಬದಲಾಗದೆ ಬರಿ ನಾಮವನ್ನಷ್ಟೆ ಬದಲು ಮಾಡುವ ತುರ್ತು ಸದ್ಯಕ್ಕಂತೂ ಇದೆ ಎಂದೆನಿಸುತ್ತಿಲ್ಲ.ಆದರೂ ಈ ಸಂಗತಿಯತ್ತ ಗಮನ ಸೆಳೆದ ಡಾ ಚಿದಾನಂದಮೂರ್ತಿಗಳ ಕಳಕಳಿ ಗಿಟ್ಟಿಸುವ ಮೆಚ್ಚುಗೆ ಮುಂದೆ ಅವರೇ ಆಡಿದ ಧರ್ಮಾಂಧ ಹೇಳಿಕೆಯಿಂದ ಮೌಲ್ಯ ಕಳೆದು ಕೊಂಡು ಗಟಾರ ಸೇರಿ ಹೋಗಿದೆ!


"ಅಲ್ಪ ಸಂಖಾಯತರ ಸಮುದಾಯದ ಹಬ್ಬಗಳನ್ನು ರಾಷ್ಟ್ರೀಯ ಹಬ್ಬ ಎಂಬಂತೆ ಆಚರಣೆ ಮಾಡುವುದು ಸರಿಯಲ್ಲ.ಭಾನುವಾರವೆ ವಾರದರಜೆ ನೀಡಬೇಕೆಂಬ ನಿಯಮ ಕೂಡ ಬದಲಾಗಬೇಕು" ಎಂದು ಅವರು ಮಾತು ಮುಂದುವರಿಸಿದರು ಎಂದು ವರದಿಯಾಗಿದೆ.ಜಾತ್ಯತೀತ ನಿಲುವಿನ ನಮ್ಮ ರಾಷ್ಟ್ರೀಯ ನೀತಿಯ ಮೆರಗು ಹೆಚ್ಚಿಸುವ ಅಲ್ಪಸಂಖ್ಯಾತ ಸಮುದಾಯಗಳ ಹಬ್ಬಗಳ ರಾಷ್ಟ್ರೀಯ ಆಚರಣೆ ಚಿದಾನಂದಮೂರ್ತಿಗಳ ಕಣ್ಣಿಗೆ ದುರಾಚಾರದಂತೆ ಕಾಣಲು ಅದೇನು ಪಾಪ ಮಾಡಿತ್ತು? ಅಲ್ಲದೆ ಸಿಖ್,ಬೌದ್ಧ ಧಮ್ಮ,ಜೈನ ಧರ್ಮಗಳಂತಹ ವೈದಿಕತೆಯ ಉಪಕವಲುಗಳಿಗಿಂತ ಇಸ್ಲಾಂ ಹಾಗು ಕ್ರೈಸ್ತ ರೂಪಿ ಪಶ್ಚಿಮದ ಧರ್ಮಗಳೆ ಅವರ ಮನಶಾಂತಿಗೆ ಕೊಳ್ಳಿಯಿಟ್ಟಿರುವುದು ಅವರ ಈ ಅಸಹನೆಪೂರಿತ ಹೇಳಿಕೆ ಮುಖಕ್ಕೆ ರಾಚಿದಂತೆ ಸ್ಪಷ್ಟಪಡಿಸಿದೆ.ಈ ಬಗೆಯ ಅಕಾರಣ ದ್ವೇಷದ ನಿಲುವು ಅವರ ವಯಸ್ಸಿಗೆ ಹಾಗು ಘನತೆಗೆ ಶೋಭಿಸುವುದಿಲ್ಲ.ಇನ್ನಾದರೂ ವಸ್ತುಸ್ಥಿತಿಯ ಉದಾತ್ತತೆ ಒಪ್ಪಿಕೊಂಡು ಇರಲಾಗದಿದ್ದಲ್ಲಿ ಕನಿಷ್ಠ ತಮ್ಮ ಹರಕು ಬಾಯಿಗೆ ಬೀಗ ಜಡಿದುಕೊಂಡಾದರೂ ಅವರು ಮಾನ ಉಳಿಸಿಕೊಳ್ಳುವುದು ಲೇಸು,ತುಂಬಿದ ಕೊಡ ಯಾವಾಗಲೂ ತುಳುಕ ಬಾರದು!

ಇನ್ನು ಭಾನುವಾರ ವಾರದ ರಜೆಯಾಗಿರುವ ಕುರಿತು.ಶುಕ್ರವಾರದಂದೆ ಜುಮ್ಮಾದ ಹೆಸರಿನಲ್ಲಿ ವಾರದ ರಜೆ ಕಡ್ಡಾಯಗೊಳಿಸಿರುವ ಕಟ್ಟರ್ ಇಸ್ಲಾಮಿ ರಾಷ್ಟ್ರಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ರಾಷ್ಟ್ರಗಳಲ್ಲೂ ಭಾನುವಾರದ ರಜಾ ಪದ್ದತಿಯೆ ಚಾಲ್ತಿಯಲ್ಲಿದೆ.ಇದು ಕ್ರೈಸ್ತ ನಂಬಿಕೆಗಳ ಅನುಸಾರ ರೂಪಿತವಾಗಿರುವ ಬಗ್ಗೆ ಏನೂ ಸಂಶಯವಿಲ್ಲವಾದರೂ ಈ ಬಗೆಗಿನ ಚರ್ಚೆಯೆ ಇದೀಗ ಅಪ್ರಸ್ತುತ.ಅಲ್ಲದೆ ಈ ವಾರಾಂತ್ಯದ ರಜಾ ಪದ್ದತಿಯಲ್ಲಿ ಹುಳುಕೇನೂ ಇಲ್ಲ.ಕೇವಲ ಗೊಡ್ಡು ಧಾರ್ಮಿಕತೆಯ ಚುಂಗು ಹಿಡಿದು ಹುಣ್ಣಿಮೆ,ಅಮಾವಾಸ್ಯೆ,ಏಕಾದಶಿಗಳಂದು ಸಾರ್ವತ್ರಿಕ ರಜೆ ಸಾರುವುದು ಎಷ್ಟು ಕಾರ್ಯಸಾಧುವಲ್ಲವೋ,ಅಷ್ಟೆ ಹಾಸ್ಯಾಸ್ಪದವೂ ಹೌದು.ಇಂತಹ ಚಿಲ್ಲರೆ ಸಲಹೆ ಸೂಚನೆ ಕೊಡುವುದನ್ನು ಬಿಟ್ಟು ಡಾ ಚಿದಾನಂದಮೂರ್ತಿಗಳು ನಿಜವಾದ 'ನಾಡೋಜ'ರಾಗೋದು ಯಾವಾಗ?

28 December 2010

ತೀರದ ನಿರೀಕ್ಷೆ...

ಜೊತೆಜೊತೆಯಲೆ ಅಲೆವ ಅಲೆಗಳಿಗೂ ಸುಳಿವು ಕೊಡದಂತೆ ಮರೆಯಾಗುತ್ತೇನೆ,
ಸಂಗಡವೆ ಅದುರುವ ಎಲೆಗಳಿಗೂ ಚೂರೂ ಸುದ್ದಿ ಸಿಗದಂತೆ ಜಾರಿ ಹೋಗುತ್ತೇನೆ/
ನೀನೆ ಮನದಾಳದಿಂದ ಬಯಸಿದಂತೆ...
ನಿನ್ನಿಂದ ದೂರವಾಗಿದ್ದು....ಮಣ್ಣಲ್ಲಿ ಮಣ್ಣಾಗಿ ಕರಗುತ್ತೇನೆ,
ನಿನ್ನ ನೆನಪುಗಳೊಂದೆ ನನಗೆ ಶಾಶ್ವತ.....
ಕಡೆಯುಸಿರು ಕಳೆದ ನಂತರವೂ ನನ್ನೊಂದಿಗೆ ಅದೊಂದೆ ಇರೋದು ನಿಶ್ಚಿತ//

ಬಲಿಯುತ್ತದೆ...ನಲಿಯುತ್ತದೆ,
ಮತ್ತೆ ನಗುವರಳಿಸುತ್ತ ಒಲಿಯುತ್ತದೆ ಈ ಹೆಪ್ಪುಗಟ್ಟಿದ ಬಾಳು....
ಒಂದೊಮ್ಮೆ ನೀ ಮರಳಿ ಬಂದರೆ/
ಹೃದಯದ ಕೊನೆಯಲ್ಲೊಂದು...
ಆಸೆಯ ಮೊನೆಯಾಗಿ ಚುಚ್ಚುತ್ತಲೆ...
ಸಂತಸದ ನೆತ್ತರ ಬಿಸಿಬುಗ್ಗೆ ಚಿಮ್ಮಿಸುತ್ತದೆ,
ಎಂದಾದರೊಮ್ಮೆ..
ಮರೆತಾದರೂ ನೀ ಮರಳಿ ಬಂದು ಮನದೊಳಗೆ ನಿಂತರೆ//

ಭಯವಿದೆ...

ಬಲಿಯುತ್ತಿರುವ ರಾತ್ರಿಯಲ್ಲಿ ಗರ್ಭಪಾತವಾದ...
ನನ್ನ ಕನಸಿನ ಪಿಂಡದ ಮುಖ,
ನಿನ್ನ ಸುಂದರ ನೆನಪುಗಳನ್ನೆ ಹೋಲುತ್ತಿದ್ದುದು ಕೇವಲ ಆಕಸ್ಮಿಕವಾಗಿರಲಿಕ್ಕಿಲ್ಲ/
ನಿನ್ನ ನಸುನಗೆಯ ಶೂಲಕ್ಕೆ ನನ್ನ ಏರಿಸಿದಂತೆ,
ತುಸು ಮುಂಜಾನೆ ಬಿದ್ದ ಮರು ಸ್ವಪ್ನವೂ ಕೂಡ ಬಹುಷಃ ಸುಳ್ಳಾಗಲಿಕ್ಕಿಲ್ಲ//

27 December 2010

ಕನಸು ಬಾಡದಿರಲಿ...

ಬಾಳಿನ ರೀಲು ಮತ್ತೆ ಹಿಂದೋಡುವಂತಿದ್ದರೆ,
ಮತ್ತೆ ನಿನ್ನ ಮುಗುಳ್ನಗುವಿನ ಪರಿಚಯ ಹೊಸತಾಗಿ ಆಗುತ್ತಿತ್ತು/
ಮರಳಿ ನೀ ನನ್ನ ಬಾಳಲಿ ಬರುತ್ತಿದ್ದೆ,
ನಿನ್ನೊಳಗೆ ನಾನು ನೂರು ಭರವಸೆಗಳನ್ನ ಹುಟ್ಟಿಸುತ್ತಿದ್ದೆ//

ನನ್ನೆಲ್ಲ ಕನಸುಗಳ ಮನೆಗೆ ಹಸಿರು ತೋರಣ ಕಟ್ಟಿ,
ಅಲ್ಲಿ ಕತ್ತಲು ಸುಳಿಯದಂತೆ ನಿನ್ನ ಹೊಳೆವ ಕಂಗಳ ದೀಪವ ನೀ ಹಚ್ಚುತ್ತಿದ್ದೆ...
ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವ?/
ಬಹುಷಃ ಅಂತೆಯೆ ಆದರೆ ಇವೇ ಸವಕಲು ಪದಗಳ ಬಳಸಿ...
ಮನದ ತುಮುಲಗಳನ್ನೆಲ್ಲ ತಿಳಿಸಿ.
ಮತ್ತೆ ನಿನ್ನ ಕೈಸೆರೆಯಾಗುವ ಸುಖದ ಕಲ್ಪನೆಯಲ್ಲಿ ರೋಮಾಂಚಿತನಾಗುತ್ತೇನೆ//