05 October 2014

ಅಂತರಂಗದ ಕಪಟವೂ ಬಾಹ್ಯದ ಬೃಹನ್ನಾಟಕವೂ.... ಹೀಗೆ ಆದರೆ ಭಾರತ ಖಂಡಿತ ಸ್ವಚ್ಛವಾಗುತ್ತದೆ ಆದರೆ ಆರ್ಥಿಕವಾಗಿ ಹಾಗೂ ವೈಚಾರಿಕವಾಗಿ!

ಯಾವುದೆ ಒಂದು ಸಂಗತಿ ಅಥವಾ ವ್ಯಕ್ತಿಯ ಬಗ್ಗೆ ಸಹಜವಾಗಿ ಮೂಡುವ ನೈಜ ಅಭಿಪ್ರಾಯ ಅಥವಾ ಅವರ ಬಗ್ಗೆ ಅಭಿಪ್ರಾಯ ರೂಪಿಸುವುದರ ನಡುವೆ ಅಗಾಧವಾದ ವ್ಯತ್ಯಾಸವಿದೆ. ಈಗ ದೃಶ್ಯ ಮಾಧ್ಯಮಗಳ ಅಟ್ಟಹಾಸ ಮಿತಿ ಮೀರಿರುವ ದಿನಮಾನದಲ್ಲಿ ನಮ್ಮ ಮಾನ್ಯ ಪ್ರಧಾನಿಗಳ ಪ್ರಭಾವಳಿಯನ್ನ ತಾರಾಮಾರ ಹೆಚ್ಚಿಸುವುದರಲ್ಲಿ 'ಕಾಸಿಗಾಗಿ ಸುದ್ದಿ ಮಾರುವ' ಬಹುತೇಕ ಟಿವಿ ವಾಹಿನಿಗಳು ನಿರತವಾಗಿರೋದು ಬಹಿರಂಗ ಸತ್ಯ. ಅವರ ಪ್ರಭಾವ ಹೆಚ್ಚಿದಷ್ಟೂ ಅದರ ಮೇಲೆ ಬಂಡವಾಳ ಹೂಡಿರುವ ಭಂಡರ ತಿಜೋರಿ ಮುಂದೆ ತುಂಬಿಯೆ ತುಂಬುತ್ತದೆ.


ಈ ನಡುವೆ ಪ್ರಧಾನಿಯ ಅಧಿಕೃತ ಪ್ರವಾಸಗಳನ್ನ ಜನತೆಗೆ ಮುಟ್ಟಿಸುವ ಮಾಧ್ಯಮಗಳ ಮಂದಿಯನ್ನ ಸರಕಾರಿ ವೆಚ್ಚದಲ್ಲಿ ನಿಗದಿತ ದೇಶಗಳಿಗೆ ಕರೆದೊಯ್ಯುವ ಪದ್ದತಿಯನ್ನ ನೂತನ ಪ್ರಧಾನಿಗಳು ಅಧಿಕಾರಕ್ಕೆ ಏರಿದ ನಂತರ ಕೇಂದ್ರ ಸರಕಾರ ಕೈ ಬಿಟ್ಟಿದೆ. ಹಾಗಂತ ಪತ್ರಕರ್ತರು ಅಲ್ಲಿಗೆ ಹೋಗಲಿಲ್ಲವ? ಹೋದರು ಬಾರಿ ಬಾರಿಗೂ ಹೋದರು. ಭೂತಾನ್ ಹಾಗೂ ನೇಪಾಳಕ್ಕೆ ಅದಾನಿ ಕಂಪನಿ ಪ್ರಾಯೋಜಿಸಿದ ವಿಮಾನ ಹಾಗೂ ವಸತಿಯ ಹಂಗಿನಲ್ಲಿ, ಬ್ರಿಕ್ಸ್, ಜಪಾನ್ ಹಾಗೂ ಅಮೇರಿಕೆಗೆ ರಿಲಯನ್ಸ್ ಕಂಪನಿಯ ಪ್ರಾಯೋಜಕತ್ವದಲ್ಲಿ! ಅವರ ಆತಿಥ್ಯ ಹಾಗೂ ಉಡುಗೊರೆಯ ಹಂಗಿನಲ್ಲಿ ಬಿದ್ದವರು ಅದಿನ್ನೆಂತಾ ವರದಿಗಾರಿಕೆ ಮಾಡಿಯಾರು ಎನ್ನುವುದು ಅವರ ವರದಿಯನ್ನ ಅನುಸರಿಸಿದವರ ಗ್ರಹಿಕೆಗೆ ಬಿಟ್ಟ ವಿಚಾರ. ಪ್ರಧಾನಿಯವರ ಯೋಚನೆ ಬಹಳ ಸರಳ ಅತ್ತ 'ನೋಡಿ ನಾವು ಸರಕಾರದ ಹಣ ಉಳಿಸಿದೆವು!' ಅಂತ ಬೀಗುವುದು. ಇತ್ತ ಅವರನ್ನ ಮೆರೆಸುತ್ತಿರುವವರ ಎಂಜಲು ತಿಂದ ಇವರು ಪತ್ರಕರ್ತರು ಎಂಬ ಆರೋಪ ಹೊತ್ತ ಬಿಕನಾಸಿಗಳು ದ್ವಿಪಕ್ಷೀಯ ಒಪ್ಪಂದದ ಹೆಸರಿನಲ್ಲಿ ಆದ ಅನಾಹುತಗಳನ್ನೆಲ್ಲ ತಿಪ್ಪೆ ಸಾರಿಸಿ ಸುಮ್ಮನಾಗುವುದು. ಒಂದೆ ಕಲ್ಲಿಗೆ ಎರಡು ಹಕ್ಕಿಯನ್ನ ಹೊಡೆದಂತಾಯ್ತು.


ಇನ್ನು ಅಮೇರಿಕಾದ ಜೊತೆಗಿನ ದ್ವಿಪಕ್ಷೀಯ ವ್ಯಾಪಾರಿ ಒಪ್ಪಂದಗಳ ಕುರಿತ ವಿಷಯದ ಬಗ್ಗೆ, ಇದು ನಿಜಾರ್ಥದಲ್ಲಿ "ದ್ವಿಪಕ್ಷೀಯ" ಹೂಡಿಕೆ ಆಗಬೇಕೆ ಹೊರತು ಈ ಕೊಡು-ಕೊಳ್ಳುವಿಕೆಯಲ್ಲಿ ಅವರು ಮಾತ್ರ ಕೊಟ್ಟು ನಾವು ಕೊಳ್ಳುವ ಈರಭದ್ರರಾಗುವ ಅಗತ್ಯವಿರಲಿಲ್ಲ. ದುರಾದೃಷ್ಟಕ್ಕೆ ಈಗ ಆಗುತ್ತಿರೋದು ಅದೆ. ಸದ್ಯದ ಅಮೇರಿಕಾ ಭೇಟಿಯಲ್ಲಿ ಪ್ರಧಾನಿ ಎಸಗಿ ಬಂದ ದೊಡ್ಡ ಪ್ರಮಾದವೊಂದರ ಬೆಲೆಯನ್ನ ಸದ್ಯದಲ್ಲಿಯೆ ಬಡ ಭಾರತೀಯರು ಹೊರಲಿದ್ದಾರೆ. ಜೆನೆರಿಕ್ ಔಷಧಿಗಳ ಅನ್ವೇಷಣೆ ಹಾಗೂ ಉತ್ಪಾದನೆಯಲ್ಲಿ ಭಾರೆತೀಯ ಪೇಟೆಂಟ್'ಗಳಿಗೆ ಈ ಒಪ್ಪಂದದ ಪ್ರಕಾರ ಇನ್ನು ಮುಂದೆ ಯಾವುದೆ ಅವಕಾಶವಿರುವುದಿಲ್ಲ. ಇದರ ಅರ್ಥ ಔಷಧಿ ಉತ್ಪಾದನೆಯ ಹಕ್ಕುಸಾಮ್ಯ ಭಾರತೀಯ ಮಾರುಕಟ್ಟೆಗಳ ಪಾಲಿಗೆ ಅಮೇರಿಕನ್ ಮರ್ಜಿಯನ್ನ ಅನುಸರಿಸಬೇಕಾಗುತ್ತದೆ. ಅನಗತ್ಯವಾದ ಈ ಬೌದ್ಧಿಕ ಗುಲಾಮಗಿರಿ ಹಾಗೂ ಕೊಳ್ಳುವ ಅವಲಂಬನೆ ಭಾರತೀಯ ಮೂಲದ ಕೆಲವೆ ಕೆಲವು ಅಮೇರಿಕನ್ ಕಂಪನಿಗಳ ತಿಜೋರಿ ತುಂಬಿಸುತ್ತವೆ. ಅಗ್ಗದ ಉತ್ಪಾದನೆಯ ಔಷಧಿಗಳನ್ನ ತನ್ನ ನೆಲದಲ್ಲಿಯೆ ಉತ್ಪಾದಿಸಲು ಅವಕಾಶವಿದ್ದರೂ ಅನ್ವೇಷಣೆಗೆ ಮೂಲದಲ್ಲಿಯೆ ಭಾರತದ ಹರಿವ ನೀರಿಗೆ ಅಮೇರಿಕನ್ ದೊಣೆ ನಾಯಕರ ಒಪ್ಪಿಗೆ ಖಡ್ಡಾಯವಾಗುವುದರಿಂದ ನಿರ್ಬಂಧ ಬೀಳುವ ಕಾರಣ ಭಾರತೀಯ ಗ್ರಾಹಕರು ಅತಿ ಹೆಚ್ಚಿನ ಬೆಲೆಗೆ ಅವನ್ನ ಖರೀದಿಸಿ ದಿವಾಳಿ ಏಳಬೇಕಾಗುತ್ತದೆ. ಇದರ ದೂರಗಾಮಿ ಪರಿಣಾಮಗಳಂತೂ ಇನ್ನೂ ಭೀಕರ.


ಇನ್ನು ಸದರಿ ಪ್ರವಾಸದಲ್ಲಿ ನಮ್ಮ ದೇಶದಲ್ಲಿ ಅಮೇರಿಕನ್ ಹೂಡಿಕೆಗಳನ್ನ ಮುಕ್ತವಾಗಿರಸಲಾಗಿದೆಯೆ ಹೊರತು ಅವರ ನೆಲದಲ್ಲಿ ನಮ್ಮ ಹೂಡಿಕೆಯ ಬಗ್ಗೆ ಯಾವುದೆ ಸುಳಿವಿಲ್ಲ. ಆದ ಒಪ್ಪಂದದ ನಿಗೂಢತೆಯನ್ನ ಪರಿಶೀಲಿಸಿದಾಗ ಇದು ಶೇಕಡ ಇಪ್ಪತ್ತನ್ನೂ ಮೀರಿಲ್ಲ ಅನ್ನುವುದೊಂದು ದುರಂತ. ನಮ್ಮ ಆಹಾರೋತ್ಪನ್ನಗಳು ( ಬಹುತೇಕ ಭಾರತೀಯ ಅಮೇರಿಕನ್ನರೆ ಅವುಗಳಿಗೆ ಅಲ್ಲಿ ಗ್ರಾಹಕರು.), ಭಾರತೀಯ ವಸ್ತ್ರಗಳು ಹಾಗೂ ಕೆಲವು ಆಯುರ್ವೇದಿಕ್ ಔಷಧಿಗಳನ್ನ ಇದು ಒಳಗೊಂಡಿದೆ ಅಷ್ಟೆ ಆದರೆ ಇದರ ರಫ್ತು ನೀತಿ ನಿಯಮಾವಳಿಗಳು ಅತ್ಯಂತ ಕಠಿಣವಾಗಿವೆ. ಈ ಒಪ್ಪಂದದ ಪ್ರಕಾರ ಬಾಕಿ ಎಂಬತ್ತರಷ್ಟು ಹೂಡಿಕೆ ಅಮೇರಿಕಾದಿಂದ ಆಗುತ್ತಿದೆ ಹಾಗೂ ಈ ಹೂಡಿಕೆಯಿಂದಾಗುವ ಅಮದಿನ ಮೇಲೆ ಯಾವುದೆ ಕಠಿಣ ನಿಯಮಗಳನ್ನ ಅನ್ವಯಿಸಿಯೆ ಇಲ್ಲ!


ಭಾರತದ ರಕ್ಷಣಾ ಕ್ಷೇತ್ರದ ಮೇಲೆ ಅಮೇರಿಕನ್ ಸಮರೋತ್ಪನ್ನಗಳ ಏಕಸಾಮ್ಯವಾಗುವಂತೆ ನಿಯಮಗಳನ್ನ ರೂಪಿಸಲಾಗಿದೆ. ಏಕ ಪಕ್ಷೀಯವಾಗಿ ಹೇರಿಕೆಯಾದಂತಿರುವ ಇದರನ್ವಯ ದೇಶೀಯವಾಗಿ ನಾವು ಇದೂವರೆಗೂ ತಯಾರಿಸುತ್ತಿದ್ದ ಅನೇಕ ಸ್ಥಳಿಯ ಆಯುಧಗಳನ್ನ ಇನ್ನು ಮುಂದೆ ಖಡ್ಡಾಯವಾಗಿ ಉತ್ಪಾದಿಸುವಂತಿಲ್ಲ! ನಮ್ಮ ಯುದ್ದೋಪಕರಣಗಳ ಬೇಡಿಕೆಯನ್ನ ಪೂರೈಸುವ ಜವಾಬ್ದಾರಿ ಅಮೇರಿಕಾ ವಹಿಸಿಕೊಂಡಾಗಿದೆ. ತಮಾಷೆ ಎಂದರೆ ಇದೆ ಅಮೇರಿಕಾ ಸೌದಿಗೆ ಇವೆ ಯುದ್ದೋಪಕರಣಗಳನ್ನ ಮಾರುತ್ತದೆ. ಪಾಕಿಸ್ತಾನಕ್ಕೆ ಹಣದ ಅನುದಾನ ಕೊಟ್ಟಂತೆ ಮಾಡಿ ಅವರು ಅದೆ ಹಣದಿಂದ ತನ್ನ ಯುದ್ದೋಪಕರಣಗಳನ್ನ ಖರೀದಿಸುವಂತೆ ಒಡಂಬಡಿಕೆ ಮಾಡಿಕೊಳ್ಳುತ್ತದೆ. ಇವೆರಡೂ ದೇಶಗಳು ಅಮೇರಿಕಾದಿಂದ ಖರೀದಿಸಿದ ಶಸ್ತ್ರಾಸ್ತ್ರಗಳು ಉಗ್ರಗಾಮಿಗಳಿಗೆ ಎಟುಕುತ್ತವೆ. ಗಡಿಯಲ್ಲಿ ಜಪ್ತಾಗುವ ಎಲ್ಲಾ ಕಲೆಶ್ನಿಕೋವ್ ಹಾಗೂ ಗ್ರನೇಡುಗಳ ಮೇಲೆ "ಇದು ಅಮೇರಿಕನ್ ಸೈನ್ಯದ ಆಸ್ತಿ!" ಎನ್ನುವ ಠಸ್ಸೆಯನ್ನ ಇದುವರೆಗೂ ನೋಡುತ್ತಾ ಇದ್ದ ನಮ್ಮ ಸೈನಿಕರು ಅವುಗಳಿಗೆ ಎದುರು ಜವಾಬು ಕೊಡುತ್ತಾ ತಮ್ಮ ಎದೆಯೊಡ್ಡುತ್ತಿದ್ದವರು, ಇನ್ನು ಮುಂದೆ ಅದೆ ಅಮೇರಿಕನ್ ಶಸ್ತ್ರಾಸ್ತ್ರಗಳನ್ನ ಹೊತ್ತು ಅವರೊಂದಿಗೆ ಕಾದಾಡಬೇಕಂತೆ!


ಇನ್ನು ಅಮೇರಿಕೆಗೆ ಸಾಗುವ ಮೊದಲೆ ಮಾನ್ಯ ಪ್ರಧಾನಿಗಳು ಮಾಡಿಕೊಂಡ ವಿದೇಶಾಂಗ ನೀತಿಯ ಎಡವಟ್ಟುಗಳು ಅನೇಕ. ಬಲಾಢ್ಯ ಚೀನಾವನ್ನ ಅನಗತ್ಯವಾಗಿ ಜಪಾನಿನಲ್ಲಿ ಕೆಣಕಿದ್ದು ಪ್ರಮಾದ. ಅವರಷ್ಟೆ ಕುತಂತ್ರದಿಂದ ಅವರನ್ನ ಎದುರಿಸಬೇಕಿತ್ತೆ ಹೊರತು ಅವರನ್ನ ಬಹಿರಂಗವಾಗಿ ಪ್ರಚೋದಿಸಿ ಅಲ್ಲ. ಅಷ್ಟಕ್ಕೂ ವಿದೇಶಾಂಗ ಸಚಿವೆಯನ್ನ ತನ್ನೊಂದಿಗೆ ಕರೆದೊಯ್ಯದೆ ತಮಗಿಂತ ಮೊದಲೆ ಅಲ್ಲಿಗೆ ಅಟ್ಟಿ ತನಗಿಂತ ಮೊದಲು ಆಕೆ ಇಲ್ಲಿಗೆ ಮರಳಿ ಬಂದು ತಮ್ಮನ್ನ ಆಹ್ವಾನಿಸುವಂತೆ ಮಾಡಿದ್ದು ಸರ್ವಾಧಿಕಾರದ ಲಕ್ಷಣ. ದೇಶದ ಆಂತರಿಕ ಹುಳುಕನ್ನ ಜಾಗತಿಕವಾಗಿ ಅಲ್ಲಿ ಪ್ರದರ್ಶಿಸಿದಂತಾದದ್ದು ಮಾತ್ರ ದುರಂತ. ಇದೆ ಚಾಳಿಯನ್ನ ಪ್ರಧಾನಿಗಳು ನೇಪಾಳ ಹಾಗೂ ಭೂತಾನಿನಲ್ಲೂ ಅನುಸರಿಸಿದ್ದರು.


ಇನ್ನು "ಸ್ವಚ್ಛ ಭಾರತ ಅಭಿಯಾನ" ಎಂಬ ಹಾಸ್ಯಾಸ್ಪದ ಪ್ರಹಸನದ ಕುರಿತು ಹೇಳುವುದೆ ವ್ಯರ್ಥ. ಇಂತಹ ಯಾವುದೆ ಕರೆ ತೋರಿಕೆಗಿಂತ ಹೆಚ್ಚು ಆತ್ಮಗತವಾಗಬೇಕು ಹಾಗೂ ಈ ಆತ್ಮ ಸಮರ್ಪಣೆ ಯಾವತ್ತೂ ಖರ್ಚಿಲ್ಲದ ಸೇವೆಯಾಗಿರ ಬೇಕಾದದ್ದು ಅಪೇಕ್ಷಣೀಯ. ಒಪ್ಪೊತ್ತಿನ ಶಾಸ್ತ್ರೀಜಿಯವರ ಕರೆ ಅಂತಹದ್ದು. ಅಲ್ಲಿ ಸರಕಾರ ನಯಾಪೈಸೆ ಖರ್ಚು ಮಾಡಿರಲಿಲ್ಲ. ಕೇವಲ ಅವರ ಬಹಿರಂಗ ಕರೆ ಮಾತ್ರ ಹೊರಟಿತ್ತು, ದೇಶ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಆದರೆ ಇಂದಿನ ಅಭಿಯಾನಕ್ಕೆ ಘನ ಸರಕಾರ ಅಧಿಕೃತವಾಗಿಯೆ ೧೬೭ ಕೋಟಿ ರೂಪಾಯಿಗಳನ್ನ ಪ್ರಚಾರಾಂದೋಲನದ ನೆಪದಲ್ಲಿ ಸುರಿದಿದೆ! ದೇಶದಾದ್ಯಂತ ಟಿವಿ ಹಾಗೂ ಸಿನೆಮಾ ಮಂದಿರಗಳ ಸೈಡ್ ರೀಲ್'ಗಳಲ್ಲಿ ತೋರಿಸುತ್ತಿರುವ ಇದರ ಜಾಹಿರಾತಿನ ಖರ್ಚು ಪ್ರತ್ಯೇಕ ಅದರ ಅನುದಾನ ಇನ್ನಷ್ಟೆ ಅಂದಾಜಿಸಬೇಕಾಗಿದೆ!.


ಹಾಗಂತ ಈ ಕರೆ ಸಾರ್ಥಕವಾಯಿತ? ಇಲ್ಲ. ಮೂಲಭೂತ ಸಿದ್ಧತೆಗಳಾದ ಬೀದಿಗೊಂದು ಕಸದ ತೊಟ್ಟಿ ಅಳವಡಿಕೆ, ಅಗತ್ಯ ಸಂಖ್ಯೆಯ ಪೌರಕಾರ್ಮಿಕರ ನೇರ ನೇಮಕ, ಸಂಗ್ರಹಿತ ಕಸದ ಸುಧಾರಿತ ವಿಲೇವಾರಿಯ ಕುರಿತು ಯಾವುದೆ ಖಚಿತ ಯೋಜನೆಯನ್ನೆ ರೂಪಿಸದೆ ಕೇವಲ ಮೇಕಪ್ ಹಚ್ಚಿಕೊಂಡು ಹತ್ತು ನಿಮಿಷ ರಸ್ತೆ ಗುಡಿಸಿದ ನಾಟಕವಾಡಿದ ಪ್ರಧಾನಿ ಅದೇನನ್ನ ಸಾಧಿಸಿದರೋ ಮೆದುಳಿದ್ದವರಿಗೆ ಅರ್ಥವಾಗಿರಲಾರದು. ಪೂರ್ವ ಸಿದ್ಧತೆಯೆ ಇಲ್ಲದ ಈ ಅಗ್ಗದ ನಾಟಕಗಳಿಂದ, ಅದಕ್ಕೆ ಅಂಧರಂತೆ ಭೋಪರಾಕು ಹಾಕುವುದರಿಂದ ಭಾರತ ಖಂಡಿತ ಸ್ವಚ್ಛವಾಗಲಾರದು.


ನಿರಾಧಾರವಾದ 'ಆಧಾರ್ ಕಾರ್ಡ್'ನ್ನ ವಿರೋಧಿಸಿಕೊಂಡೆ ಗದ್ದುಗೆಗೇರಿದ ಎಕ್ಕಡದ ನಾಲಗೆಯ ಈ ಆಳುವ ಸರಕಾರ ಈಗ ಅದೆ ದುಷ್ಟ ಯೋಜನೆಯನ್ನ ಆಲಂಗಿಸಿ ನಮ್ಮೆಲ್ಲರ ವಯಕ್ತಿಕ ಮಾಹಿತಿಗಳನ್ನ ಅಮೇರಿಕೆಯ ಆಡಳಿತಕ್ಕೆ ಅಲ್ಲಿನ ವ್ಯಾಪಾರಿ ಹಿತಾಸಕ್ತಿಗಳಿಗೆ ಅಡ ಹಾಕ ಹೊರಟಿದೆ. ಮುಂದೆ ಇದರ ವಿಶ್ಲೇಷಣೆಗೆ ಇಳಿಯುವ ಅಲ್ಲಿನ ಸರಕಾರ ಹಾಗೂ ವ್ಯಾಪಾರಿ ಕಂಪನಿಗಳು ಹೀಗೆ ಮುಂದುವರೆದಲ್ಲಿ ನಾವು ಉಣ್ಣುವ ಊಟ, ತೊಡುವ ದಿರಿಸು ಹಾಗೂ ನೋಡುವ ನೋಟಗಳನ್ನೂ ನಿರ್ದೇಶಿಸಲಿಕ್ಕಿವೆ. ಅಲ್ಲಿಗೆ ಈಗಾಗಲೆ ಬೆಳೆಬೆಳೆಯುತ್ತಾ ಅರೆ ಅಮೇರಿಕನ್ನರಾಗಿರುವ ನಮ್ಮ ಭಾರತೀಯ ಕೂಸುಗಳು ಪೂರ್ತಿ ಅಮೇರಿಕನ್ ಗುಲಾಮಗಿರಿಗೆ ಹಂತ ಹಂತವಾಗಿ ಇಳಿಯುವುದು ನಿಸ್ಸಂಶಯ.


ಹಾಗಂತ ಪ್ರಧಾನಿಯವರು ಏನನ್ನು ಸಾಧಿಸಲೆ ಇಲ್ಲವ? ಎಂದರೆ ಉತ್ತರ ಇಲ್ಲ, ಸಾಧಿಸಿದ್ದಾರೆ. ದಶಕಗಳಿಂದ ಬೀಡು ಬಿಟ್ಟಿದ್ದ "ಅಂತರ್ರಾಷ್ಟ್ರೀಯ ಕಾಶ್ಮೀರ ಶಾಂತಿ ಪರಿಪಾಲನ ನಿಗಾ ಸಮಿತಿ" ಎಂಬ ಬಿಳಿ ಆನೆಯನ್ನ ನಿಷ್ಠುರವಾಗಿ ದೆಹಲಿಯಿಂದ ಗಂಟು ಮೂಟೆ ಕಟ್ಟಿಸಿದ್ದಾರೆ. ಪೆಟ್ರೋಲ್ ಅಮದಿಗಾಗಿ ಇದ್ದ ಕೆಲವೆ ದೇಶಗಳ ಮೇಲಿನ ಅವಲಂಬನೆಯನ್ನ ಒತ್ತಡಗಳ ನಡುವೆಯೂ ಇನ್ನಿತರ ದೇಶಗಳಿಗೆ ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ತೈಲ ಬೆಲೆಗಳು ಸಣ್ಣ ಮಟ್ಟದಲ್ಲಾದರೂ ದೇಶೀಯವಾಗಿ ತಗ್ಗಿವೆ.



No comments: