25 October 2015

ವಲಿ - ೧೬







ಈ ಯುದ್ಧದಲ್ಲಿ ಮೆಕ್ಕಾದ ಪ್ರಮುಖ ಖುರೈಷಿ ಮುಖಂಡರು ಹಾಗೂ ಯೋಧರು ಹತರಾದರು. ಅಬು ಝಹಲ್ ಅಂತವರಲ್ಲೊಬ್ಬನಾಗಿದ್ದ. ಆತ ಗಾಯಗೊಂಡು ಬಿದ್ದಿದ್ದಾಗ ಆತನ ತಲೆಯನ್ನು ಏಕಾಏಕಿ ಕಡಿದು ಅದನ್ನ ತಂದು ಮಹಮದನ ಕಾಲ ಬುಡದಲ್ಲಿ ಎಸೆಯಲಾಯಿತು. ತನ್ನನ್ನ ಮೆಕ್ಕಾದಿಂದ ಓಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಝಾಹಲ್'ನ ರುಂಡವನ್ನ ಕಾಣುತ್ತಲೆ ಮಹಮತ್ ಉನ್ಮತ್ತನಾದ. "ದೇವರ ಶತ್ರುವಿನ ತಲೆ! ದೇವರೆ! ನೀನಿಲ್ಲದೆ ಬೇರೆ ದೇವರಿಲ್ಲ! ಇಲ್ಲಾ ಇಲ್ಲಾ! ಬೇರೆ ಇನ್ಯಾರೂ ಇಲ್ಲ?!" ಎಂದು ಕಿರುಚಿ ಹೇಳುತ್ತಾ ಆತ ಸಂಭ್ರಮಿಸಿದ. ಆ ತಲೆಯನ್ನು ಕಡಿದು ತಂದಿದ್ದ ಮುಸಲ್ಮಾನ ಯೋಧ ಅಬ್ದುಲ್ಲಾನನ್ನ ತಬ್ಬಿ ಮುತ್ತಿಟ್ಟು "ಈ ತಲೆ ಅರೇಬಿಯಾದ ಯಾವುದೆ ಉತ್ತಮ ತಳಿಯ ಒಂಟೆಯ ತಲೆಗಿಂತ ಹೆಚ್ಚು ಉತ್ಕೃಷ್ಟವೂ ಸಮ್ಮತವೂ ನನ್ನ ಪಾಲಿಗೆ!" ಎಂದು ಅವನನ್ನು ಅಭಿನಂದಿಸಿಸಿದ.


ಇತ್ತ ಖುರೈಷಿ ಪಡೆಯ ಸ್ಥಿತಿ ಚಿಂತಾಜನಕವಾಗಿತ್ತು. ಸತ್ತವರ ಸಂಖ್ಯೆ ಮುಸಲ್ಮಾನರ ಸಾವಿನ ಹೋಲಿಕೆಯಲ್ಲಿ ಹೆಚ್ಚಾಗಿತ್ತು. ಅಬ್ದುಲ್ ಬುಖಾರಿ ಎಂಬ ಬಾಲ್ಯದಿಂದಲೂ ಅನಾಥನಾಗಿದ್ದ ಮಹಮದನ ಬಗ್ಗೆ ಕರುಣೆ ತೋರಿದ್ದ ಆರ್ದ್ರ ಹೃದಯದವನೂ ಸತ್ತು ಬಿದ್ದಿದ್ದ. ತನ್ನ ಕಷ್ಟದ ದಿನಗಳಲ್ಲಿ ತನ್ನತ್ತ ಕರುಣೆಯ ಮಳೆ ಸುರಿಸಿದ್ದ ಆತನನ್ನ ಕೊಲ್ಲ ಕೂಡದು ಎನ್ನುವ ನಿರ್ದೇಶನವನ್ನೇನೋ ಮಹಮದ್ ಮುಸಲ್ಮಾನ ಯೋಧರಿಗೆ ಮೊದಲೆ ಕೊಟ್ಟಿದ್ದ. ಆದರೆ ರಣಾಂಗಣದ ಪರಿಸ್ಥಿತಿ ಅವನ ನಿರೀಕ್ಷೆಗೆ ವಿರುದ್ಧವಾಗಿತ್ತು. ಒಂಟೆಯೊಂದರ ಮೇಲೆ ಕೂತು ಹೋರಾಡುತ್ತಿದ್ದ ಅವನನ್ನು ಹಾಗೂ ಅವನ ಸಂಗಾತಿಯನ್ನ ಮೊದಲಿಗೆ ಹೊಡೆದುರುಳಿಸಲು ಮುಸಲ್ಮಾನನೊಬ್ಬ ಹಿಂಜರಿದ. ಆದರೆ ಮಹಮದನ ಅಪ್ಪಣೆ ಕೇವಲ ಬುಖಾರಿಗೆ ಮಾತ್ರ ಅನ್ವಯವಾಗುತ್ತಿದ್ದುದರಿಂದ ಅವನ ಸಂಗಾತಿಯನ್ನ ಕೊಲ್ಲಲೇನೂ ಅಡ್ಡಿಯಿರಲಿಲ್ಲ. ಅದಕ್ಕಂತ ಆತ ಮುನ್ನುಗಿದಾಗ ಬುಖಾರಿ ಅವನನ್ನು ತಡೆದು 'ಅವನ ತಲೆ ತೆಗೆಯುವುದೆ ಆದರೆ ಅದಕ್ಕೂ ಮೊದಲು ನನ್ನನ್ನ ಕೊಲ್ಲಬೇಕು!' ಎಂದು ಹೇಳಿದ. ಆಗ ಬೇರೆ ಉಪಾಯ ಕಾಣದೆ ಇಬ್ಬರನ್ನೂ ಕಡಿದುರುಳಿಸಲಾಯಿತು.


ಯುದ್ಧ ಮುಗಿದಾದ ಮೇಲೂ ಸೆರೆ ಸಿಕ್ಕವರನ್ನ ಹಿಂಸಿಸಿ ಕೊಂದರು ಮುಸಲ್ಮಾನರು. ಇದು ಯುದ್ಧ ನೀತಿಗೆ ಸಂಪೂರ್ಣ ವಿರುದ್ಧವಾಗಿತ್ತು. ಆದರೆ ಖುರೈಷಿಗಳಿಂದ ತಮಗಾಗಿದ್ದ ಅವಮಾನ ಹಾಗೂ ತೊಂದರೆಗೆ ಹಳೆಯ ವೈರತ್ವವನ್ನ ಮನದೊಳಗೆ ಕಾದಿರಿಸಿಕೊಂಡಿದ್ದ ಮಹಮದನ ಬಂಟರು, ಅದೊಂದಕ್ಕೂ ಬೆಲೆ ಕೊಡದೆ ಅತಿ ಕ್ರೂರವಾಗಿ ಸೆರೆಯಾಳುಗಳ ಅಂಗ ಛೇದ ಮಾಡಿ ಅವರೆಲ್ಲರನ್ನೂ ವಿಕೃತವಾಗಿ ಹಿಂಸಿಸಿ ಕೊನೆಗಾಣಿಸಿದರು. ಹೀಗೆ ಕ್ರೂರವಾಗಿ ಕೊಂದ ಎಲ್ಲರನ್ನೂ ಒಂದೆ ಹಳ್ಳ ತೋಡಿ ಸಾಮೂಹಿಕವಾಗಿ ಹೆಣಗಳನ್ನು ಅದರಲ್ಲಿ ಅಡ್ಡಾದಿಡ್ದಿಯಾಗಿ ಎಸೆದು ದಫನ್ ಮಾಡಲಾಯಿತು. ಅಂತಹ ಹೆಣದ ರಾಶಿಯಲ್ಲಿ ಮಹಮದನ ಪಕ್ಷ ಸೇರಿದ್ದ ಅಬು ಹಥೈಫ್'ನ ತಂದೆ ಓತ್ಬಾನದ್ದೂ ಸಹ ಶವವಿತ್ತು. ತನ್ನ ತಂದೆ ಇಸ್ಲಾಂ ಸ್ವೀಕರಿಸದೆ ಸತ್ತದ್ದಕ್ಕಾಗಿ ಹಥೈಫ್ ವಿಪರೀತ ದುಃಖ ಪಟ್ಟ. ಆಗ ಅವನ್ನನ್ನ ಸಂತೈಸಿದ ಮಹಮದ್ ಅವನ ಇಂದಿನ ದುಸ್ಥಿತಿಗೆ ಅವನನ್ನೆ ಹೊಣೆ ಮಾಡಿ ಇದರಲ್ಲಿ ನಿನ್ನ ತಪ್ಪೇನೂ ಇಲ್ಲ ಎಂದು ಹಥೈಫ್'ನನ್ನು ಸಂತೈಸಿದ.


'ದೇವರನ್ನೂ ಹಾಗೂ ದೇವದೂತನಾದ ನನ್ನನ್ನು ನಂಬಿದ್ದರೆ ನಿಮಗೆ ಇಂತಹ ಹೀನಾಯ ಸಾವು ಬರುತ್ತಿರಲಿಲ್ಲ" ಎಂದು ಪ್ರತಿ ಕಳೆಬರವನ್ನು ಹೊಂಡಕ್ಕೆ ಎಸೆಯುವಾಗಲೂ ಮಹಮದ್ ಉಧ್ಘರಿಸ ಹತ್ತಿದ. ಇದನ್ನು ಕೇಳಿದ ಮುಸಲ್ಮಾನನೊಬ್ಬ 'ಸತ್ತವರ ಬಗ್ಗೆ ಹೀಗೆ ಬಿರು ನುಡಿಯಬಹುದೆ?' ಎಂದು ಪ್ರಶ್ನಿಸಿದ್ದಕ್ಕೆ "ಹೌದು ಖಂಡಿತವಾಗಿಯೂ. ಏಕೆಂದರೆ ಅವರಿಗೆ ಅವರ ಸುಳ್ಳು ದೇವರು ನೀಡಿದ ಆಶ್ವಾಸನೆಗಳೆಲ್ಲಾ ಇಂದು ಸುಳ್ಳಾಗಿವೆ!" ಎಂದು ಮಹಮದ್ ಅಧಿಕಾರಯುತವಾಗಿ ನುಡಿದ.


ಯುದ್ಧ ಮುಗಿದ ಮಾರನೆಯ ದಿನ ಯುದ್ಧದ ಸರಕಿನ ಲೂಟಿಯನ್ನ ಎಲ್ಲರಿಗೂ ಹಂಚಲಾಯಿತು. ನೂರಾ ಹದಿನೈದು ಒಂಟೆಗಳು ಹದಿನಾಲ್ಕು ಕುದುರೆಗಳು, ಅಸಂಖ್ಯ ಬಟ್ಟೆ ಬರೆ ಹಾಗೂ ಶಸ್ತ್ರಾಸ್ತ್ರಗಳು ಈ ಲೂಟಿಯಲ್ಲಿ ಒಳಗೊಂಡಿದ್ದವು. ಹಂಚಿಕೆಯಲ್ಲಿ ವಾದ ವಿವಾದಗಳು ತಲೆದೋರಿ ಭಿನ್ನಾಭಿಪ್ರಾಯ ಹುಟ್ಟಿತು. ಆಗ ಮಹಮದ್ ಮಧ್ಯೆ ಪ್ರವೇಶಿಸಿ ತಾನು ದೇವರ ಮೊರೆ ಹೋಗಿದ್ದು ಈ ಬಗ್ಗೆ ತನಗೆ ದೈವವಾಣಿ ಆಗಿದೆ ಎಂದು ಘೋಷಿಸಿದ. ಆಗ ಅವನಿಗೆ ಸಿಕ್ಕಿದ ಖುರ್ಹಾನಿನ ಸುರಾ ೮/೧, ೮/೪೨ರ ಪ್ರಕಾರ ಅವನು "ಲೂಟಿಯಾದ ಎಲ್ಲಾ ವಸ್ತುಗಳೂ ಸಹ ದೇವರಿಗೆ ಸಂದ ಜಯವಾಗಿದೆ. ಹಾಗೂ ಅವನಿಗೆ ಸಿಕ್ಕಿದ ವಿಜಯದಿಂದಾಗಿದೆ. ಆದ್ದರಿಂದ ಸಕಲವೂ ಈಗ ದೇವರದ್ದೆ. ಅದರಲ್ಲಿ ಐದನೆ ಒಂದು ಭಾಗವನ್ನು ದೇವರಿಗೂ ಅವನ ಪ್ರವಾದಿಗೂ ಕೊಡತಕ್ಕಡ್ಡು. ಉಳಿದದ್ದು ಅದು ಏನೆ ಇದ್ದರೂ ಎಲ್ಲರೂ ಸರಿಸಮವಾಗಿ ಹಂಚಿಕೊಳ್ಳತಕ್ಕದ್ದು" ಎಂದು ಸಾರಿದ.


ಮಹಮದನ ದಂಡಯಾತ್ರೆ ಕೊನೆಗೊಂಡು ಆತ ತನ್ನ ಸೈನ್ಯದೊಡನೆ ಮದೀನದತ್ತ ಚಲಿಸಿದ. ಸೆರೆಯಾಳುಗಳಲ್ಲಿ ಕೆಲವರನ್ನ ಕೈಕಾಲು ಕಟ್ಟಿ ಸುಡು ಬಿಸಿಲಿನಲ್ಲಿಯೆ ಬರಿಗಾಲಿನಲ್ಲಿ ನಡೆಸಿಕೊಂಡು ಒಂಟೆಗಳ ಕಾಲಡಿ ಎಳೆದೊಯ್ಯಲಾಯಿತು. ಹಾದಿ ಮಧ್ಯ ಅಲ್ ಬದಿಲ್ ಎಂಬಲ್ಲಿ ವಿಶ್ರಾಂತಿಗಾಗಿ ತಂಗಲಾಯಿತು. ಇರುಳು ಕಳೆದ ನಂತರ ಮರು ಬೆಳಗ್ಯೆ ಯುದ್ಧಾಪರಾಧಿಗಳ ವಿಚಾರಣೆಗಾಗಿ ಸೆರೆ ಸಿಕ್ಕ ಖುರೈಷಿಗಳನ್ನ ಸಾಲಾಗಿ ಮಹಮದನ ಮುಂದೆ ತಂದು ಮಂಡಿಯ ಮೇಲೆ ನಿಲ್ಲಿಸಲಾಯಿತು. ತನ್ನ ಮುಂದೆ ಕೆಡವಿದ ಪ್ರತಿಯೊಬ್ಬ ಖುರೈಷಿಯ ಮುಖವನ್ನೂ ಮಹ್ಮದ್ ದಿಟ್ಟಿಸಿದ. ಅವನ ತೀಕ್ಷ್ಣ ಕಣ್ಣುಗಳು ಆನ್ ನದರ್ ಎಂಬ ಯುವಕನ ಮೇಲೆ ಬಿತ್ತು. ವಿಕ್ ದಾದ್ ಎನ್ನುವ ಅವನ ಬಂಧುವೆ ರಣಾಂಗಣದಲ್ಲಿ ಕೊಲ್ಲದೆ ಅವನನ್ನ ಸೆರೆ ಹಿಡಿದಿದ್ದ. ಅವನ ಸಾವನ್ನ ಬಯಸದೆ ಮಹಮದನ ಮುಂದೆ 'ನೆದರ್ ನನ್ನ ಸೆರೆಯಾಳು' ಎಂದು ನುಡಿಯುವ ಕ್ಷಣದಲ್ಲಿಯೆ 'ಇವನ ತಲೆ ಕಡಿಯಿರಿ!' ಎಂದು ಮಹಮದ್ ಘರ್ಜಿಸಿದ. ಕತ್ತಿ ಹಿಡಿದು ಇಂತಹ ಆಜ್ಞೆಗಾಗಿಯೆ ಕಾದು ನಿಂತಿದ್ದ ಅಲಿ ಕೂಡಲೆ ಈ ದೈವವಾಣಿಯನ್ನು ನಿಯತ್ತಾಗಿ ನೆರವೇರಿಸಿದ!



ಎರಡು ದಿನ ಇನ್ನೂ ಪಯಣ ಮಾಡ ಬೇಕಿತ್ತವರು. ಆ ನಡುವೆ ಒಕ್ಬಾ ಎನ್ನುವ ಇನ್ನೊರ್ವ ಸೆರೆಯಾಳಿಗೂ ಮಹಮದ ವಾಣಿ ಅದೆ ಅವಸ್ಥೆಯನ್ನ ದಯಪಾಲಿಸಿತು. ಅವನ ಏಕೈಕ ತಪ್ಪು ಇಷ್ಟಾದರೂ ಮಹಮದನ ಏಕ ದೈವವನ್ನೂ - ಅವನ ಪ್ರವಾದಿತ್ವವನ್ನು ಧಿಕ್ಕರಿಸಿದ್ದು ಮಾತ್ರ ಆಗಿತ್ತು! ಆತ ಸಾಯುವ ಮುನ್ನ ಮೆಕ್ಕಾದಲ್ಲಿಯೆ ಉಳಿದಿರುವ ತನ್ನ ಮಗಳ ಗತಿ ಏನು? ಎಂದು ಮಹಮದನ ಮುಂದೆ ಅಂಗಲಾಚಿದ. ಮಹಮದ್ ಅದಕ್ಕೆ ತೀಕ್ಷ್ಣವಾಗಿ "ನರಕದ ಬೆಂಕಿಯ ಜ್ವಾಲೆಗೆ ಆಕೆಯನ್ನ ದೂಡಲಾಗುವುದು!" ಎನ್ನುವುದನ್ನ ಖಚಿತಪಡಿಸಿದ ಎನ್ನುತ್ತಾನೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್.


ಎಲ್ಲಾ ಐವತ್ತು ಸೆರೆಯಾಳುಗಳಿಗೂ ಸಹ ಒಬ್ಬೊಬರಾಗಿ ಸರದಿಯಂತೆ ಇದೆ ಗತಿ ಕಾಣಿಸಲು ಮಹಮದ್ ಮೊದಲು ನಿರ್ಧರಿಸಿದ್ದ ಎನ್ನುತ್ತಾರೆ ಸರ್ ಮ್ಯೂರ್. ಆದರೆ ಮೆಕ್ಕಾದಿಂದ ತನ್ನ ಮಾವ ಅಬು ಲೆಹಾಬನ ಸಂದೇಶವೊಂದು ಬಂದು ಮುಟ್ಟಿದ್ದು, ಮಿತ್ರ ಹಾಗೂ ಮಾವ ಅಬು ಬಕರನ ಔದಾರ್ಯದ ಮಾತಿಗೆ ಒಪ್ಪಿಕೊಂಡದ್ದು ಹಾಗೂ ಅದೆ ಸಮಯದಲ್ಲಿ ತನಗೆ ಬೇಕಾದಂತೆ ಒಂದು ದೈವವಾಣಿಯನ್ನ ಆತ ಬರಿಸಿಕೊಂಡಿದ್ದು ಇವೆಲ್ಲಾ ಸೇರಿ ಆತ ಈ ಮರಣ ದಂಡನೆಯ ಕಠಿಣ ನಿರ್ಧಾರವನ್ನು ಹಿಂತೆಗೆದುಕೊಂಡು ಒತ್ತೆ ಹಣವನ್ನು ಸುಲಿದು ಅವರನ್ನೆಲ್ಲಾ ಹುಡುಕಿಕೊಂಡು ಬರುವ ಮೆಕ್ಕಾದ ದೂತರಿಗೆ ಜೀವಂತವಾಗಿ ಒಪ್ಪಿಸಲು ತಯ್ಯಾರಾದ. ತನಗೆ ಒದಗಿದ ದೈವವಾಣಿಯಂತೆ ತಾನು ಇವರೆಲ್ಲರ ಪ್ರಾಣದಾನ ಮಾಡಲು ನಿರ್ಧರಿಸುತ್ತಿರುವುದಾಗಿ ಆತ ಘೋಷಿಸಿದ. ತನ್ನ ವಿಜಯಿ ಸೈನ್ಯದೊಂದಿಗೆ ಮದೀನಾ ನಗರವನ್ನ ತಲುಪಿದಾಗ ಅವನಿಗಲ್ಲಿನ ನಾಗರೀಕರು ವೀರೋಚಿತ ಸ್ವಾಗತವನ್ನ ಕೋರಿದರು. ಆದರೆ ಆತನಿಗೆ ಆ ಗೆಲುವಿನಲ್ಲೂ ಒಂದು ದುಃಖ ಕಾದಿತ್ತು. ಬಹುಕಾಲದ ಅನಾರೋಗ್ಯದಿಂದ ನರಳುತ್ತಿದ್ದ ಮಗಳು ರೊಕೈಯ್ಯಾ ರೋಗ ಉಲ್ಬಣಗೊಂಡು ತನ್ನ ಪ್ರಾಣವನ್ನ ತ್ಯಜಿಸಿದ್ದಳು.



ಹೊಸ ನಿರ್ಧಾರ ತೆಳೆದಾದ ಮೇಲೆ ಮಹಮದ್ ಹಾಗೂ ಅವನ ಅನುಯಾಯಿಗಳು ಸೆರೆಯಾಳುಗಳನ್ನ ಪ್ರೀತ್ಯಾದರದಿಂದಲೆ ಕಂಡರು. ಅಕ್ಕರೆಯ ಮೂಲಕ ಅವರನ್ನ ಮತಾಂತರಿಸುವ ಒಳ ಉದ್ದೇಶ ಮಹಮದನಿಗಿತ್ತು. ಈ ಉದ್ದೇಶ ಅಂದು ಕೊಂಡಷ್ಟು ಸಫಲವಾಗದಿದ್ದರೂ ಸಹ ಅವರಲ್ಲಿ ಕೆಲವರು ಇಸ್ಲಾಮಿನತ್ತ ವಾಲಲು ನಿರ್ಧರಿಸಿದರು. ಅಂತವರಿಗೆ ಕೂಡಲೆ ಬಿಡುಗಡೆಯ ಭಾಗ್ಯ ಸಿಕ್ಕಿತು. ಆದರೆ ಉಳಿದವರನ್ನ ಮಾತ್ರ ಖುರೈಷಿ ಬಂಧು ಮಿತ್ರರು ಸೂಕ್ತ ಒತ್ತೆ ಹಣ ಪಾವತಿಸಿ ಬಿಡಿಸಿಕೊಂಡು ಹೋಗ ಬೇಕಾಯಿತು!


ಹೀಗಾಗಿ ಬದರ್ ಯುದ್ಧ ಮುಸಲ್ಮಾನ ಚರಿತ್ರೆಯಲ್ಲಿಯೆ ಒಂದು ಅಭೂತಪೂರ್ವವೂ ಹಾಗೂ ಹೆಸರುವಾಸಿಯೂ ಆಗುಳಿಯಿತು.  ಅಲ್ ಮುಬಾರಖಿ ಅದರಲ್ಲಿ ಭಾಗವಹಿಸಿ ಬದುಕುಳಿದು ಬಂದ ಎಲ್ಲಾ ಮುನ್ನೂರು ಮಂದಿಯ ಹೆಸರುಗಳನ್ನ ಜತನದಿಂದ ದಾಖಲಿಸಿರಿಸಿದ. ಪ್ರೊಫೆಸರ್ ಮಾರ್ಗೋಲಿಯತ್ ತಮ್ಮ 'ಮಹಮದ್' ಗ್ರಂಥದಲ್ಲಿ ಬದರ್ ಯುದ್ಧದಲ್ಲಿನ ಮಹಮದನ ಗೆಲುವನ್ನ ಹೀಗೆ ವಿಶ್ಲೇಷಿಸಿದ್ದಾರೆ:


"ಶಿಸ್ತು ಮತ್ತು ದೃಢತೆಗಳೆ ಯುದ್ಧಗಳ ಗೆಲುವಿಗೆ ಮೂಲ ಕಾರಣ. ಅವು ಮಹಮದನ ನೇತೃತ್ವದ ಮುಸಲ್ಮಾನ ಸೈನಿಕರಲ್ಲಿತ್ತು. ಮೆಕ್ಕಾದ ಖುರೈಷಿಗಳಲ್ಲಿ ಅದು ಕಾಣಲಿಲ್ಲ. ದೇವರಿಗಾಗಿ ಹೋರಾಡಿ ಅವನ ಪಥದಲ್ಲಿ ಅವನಿಗೋಸ್ಕರ ಒಂದೊಮ್ಮೆ ಸಾವನ್ನಪ್ಪಿದರೆ ಸ್ವರ್ಗದ ಬಾಗಿಲು ಕಾದುಕೊಂಡು ತೆರೆದಿರುತ್ತದೆ. ಸುಡು ಬಿಸಿಲ ಮರಳುಗಾಡಿನ ಈ ಮರುಭೂಮಿಯ ಕಡು ಬಡತನದ ದುಸ್ತರ ಜೀವನವನ್ನ ನಡೆಸುವುದಕ್ಕಿಂತ, ಆ ಸ್ವರ್ಗದಲ್ಲಿ ಆನಂದವಾಗಿ ಸುಖ ಪಡುವುದೆ ಎಷ್ಟೋ ಮೇಲು! ಎಂದು ಮರುಳ ಮುಸಲ್ಮಾನರು ಭಾವಿಸಿದರು. ಅಲ್ಲಿನ ಅತ್ಯಾಕರ್ಷಕ ಹೂ ತೋಟದಲ್ಲಿ ಅಡ್ಡಾದುತ್ತಾ ಸುಂದರಿಯರ ಸಾಂಗತ್ಯ ಸವಿಯುವ ಪರಮ ಸುಖ ಈ ಬರಡು ಭೂಮಿಯ ಮೇಲೆ ಎಂದಾದರೂ ದೊರಕಲು ಸಾಧ್ಯವೆ?" ಎಂದು ಅವರೆಲ್ಲಾ ತರ್ಕಿಸಿದರು. ಸಾಲದ್ದಕ್ಕೆ ಜೀವದ ಹಂಗು ತೊರೆದು ಯಾರು ಈ ನಿರ್ಣಾಯಕ ಯುದ್ಧದಲ್ಲಿ ಹೋರಾಡುವುದಿಲ್ಲವೋ ಅವರೆಲ್ಲಾ ನರಕದ ತಾಮ್ರವರ್ಣದ ಬಿರು ಬೆಂಕಿಗೆ ಬಿದ್ದು ಸಾಯುವರು ಎಂದು ಬೇರೆ ದೈವವಾಣಿಯನ್ನುದುರಿಸಿ ಮಹಮದ್ ಅವರನ್ನ ಹಿತವಾಗಿ ಮಾನಸಿಕವಾಗಿ ಬೆದರಿಸಿದ್ದ!"



ತನ್ನ ಅಳಿವು ಉಳಿವಿನ ಪ್ರಶ್ನೆಗೆ ಉತ್ತರವಾಗಲಿದ್ದ ಈ ಯುದ್ಧ ಮಹಮದನ ಜೀವನದಲ್ಲಿಯೆ ಅತ್ಯಂತ ಮಹತ್ವ ಪೂರ್ಣ ಹಾಗೂ ಪರಿಣಾಮಕಾರಿಯಾಗಿತ್ತು ಎನ್ನುತ್ತಾರೆ ಮಾರ್ಗೋಲಿಯತ್. ಅವನು ಸಾರುತ್ತಿದ್ದ ತತ್ವಗಳಿಗೆ, ಏಕ ದೈವ ವಾದಕ್ಕೆ, ಸ್ವಯಂ ಘೋಷಿತ ಪ್ರವಾದಿತ್ವಕ್ಕೆ ಸಿಕ್ಕಿದ ಅಧಿಕೃತ ದೈವಿಕ ಮನ್ನಣೆ ಇದೆಂದು ಮಹಮದ್ ಸಾರಿದ. ತಾನು ದೇವರಲ್ಲಿ ಇಟ್ಟ ವಿಶ್ವಾಸ ತನಗೆ ಈ ಬೃಹತ್ ಗೆಲುವಿನ ರೂಪದಲ್ಲಿ ದೊರಕಿದೆ ಎಂದುಾತ ಅಲ್ಲಾಹನ ಮಹಿಮೆಯನ್ನ ಕೊಂಡಾಡಿದ. ಅವನ ಈ ಉಪಕಾರ ಸ್ಮರಣೆಯ ದ್ಯೋತಕವಾಗಿ ಓತಪ್ರೋತವಾಗಿ ಅವನ ಬಾಯಿಯಿಂದ ಸುರಾಗಳ ಮಳೆ ಸುರಿಯಿತು. ಸುರಾ ೮/೪೭, ೮/೪೨, ೫/೨೪, ೮/೫-೮, ೮/೧೨, ೮/೯, ೫೪/೪೫, ೨೨/೧೯, ೮/೪೯, ೮/೧೭ ಇವೆಲ್ಲವೂ ಆ ಸಂದರ್ಭದ ಅಮೂಲ್ಯ ಕೊಡುಗೆಗಳು ಎನ್ನುತ್ತಾನೆ ತನ್ನ 'ಸೀಲ್ಡ್ ನೆಕ್ಟರ್' ಕೃತಿಯಲ್ಲಿ ಇತಿಹಾಸಕಾರ ಅಲ್ ಮುಬಾರಖಿ.



ಇತ್ತ ಮೆಕ್ಕದಲ್ಲಿ ಮಾತ್ರ ಖುರೈಷಿಗಳ ಪರಿಸ್ಥಿತಿ ಹೀನಾಯವಾಗಿತ್ತು. ಅವರ ಸೈನ್ಯದ ಸೋಲು ಸಮುದಾಯದ ಪಾಲಿಗೆ ಅತ್ಯಂತ ಶೋಚನೀಯ ಹಾಗೂ ನಾಚಿಕೆಗೇಡಿನ ಸಂಗತಿಯಾಗಿತ್ತು. ನಾಚಿಕೆಯಿಂದ ಅವರ ಒಳ ಮನ ಹಿಂಡಿ ಹೋಗಿದ್ದರೆ ಸೇಡಿನ ಜ್ವಾಲೆ ಅವರ ಹೃದಯವನ್ನ ಬೇಯುವಂತೆ ಮಾಡಿತ್ತು. ಅವರೆಲ್ಲರ ಎದೆ ಬೆಂಕಿಯ ಬೀಡಾಗಿತ್ತು. ಅವರ ಮುಖಂಡ ಹಾಗೂ ಇದಕ್ಕೆಲ್ಲಾ ಮೂಲ ಕಾರಣನಾಗಿದ್ದ ಅಬು ಸಫ್ಯಾನ ಈ ವೇಳೆ ಒಂದು ಘೋರ ಪ್ರತಿಜ್ಞೆಯನ್ನೆ ಮಾಡಿದ. ತಾನು ಮಹಮದನ ಹುಟ್ಟಡಗಿಸುವವರೆಗೂ ತನ್ನ ದಾಂಪತ್ಯ ಸುಖವನ್ನೆ ತ್ಯಜಿಸುತ್ತಿರುವುದಾಗಿ ಶೋಕ ಸಭೆಯಲ್ಲಿ ಆತ ಘೋಷಿಸಿದ!



ಸರಿಸುಮಾರು ಒಂದು ತಿಂಗಳವರೆಗೆ ಅವರೆಲ್ಲರ ಶೋಕದ ಪರ್ವ ನಿರಂತರವಾಗಿ ಮುಂದುವರೆಯಿತು. ಪ್ರತಿಯೊಂದು ಮನೆಯಲ್ಲೂ ಕಣ್ಣೀರ ಕೋಡಿ ಹರಿಯದ ದಿನವಿರಲಿಲ್ಲ. ಎಲ್ಲೆಡೆ ದುಃಖ ಮಡುಗಟ್ಟಿತ್ತು. ಕಾಲ ಕಳೆದಂತೆ ಅವರ ಸಂಯಮದ ಕಟ್ಟೆ ಒಡೆಯುವ ಹಂತಕ್ಕೆ ಬಂದು ಮುಟ್ಟಿತ್ತು. ಆದರೆ ಈ ಶೋಕದ ಗಾಳಿ ಅಧಿಕೃತವಾಗಿ ಅಬು ಸಫ್ಯಾನನ ಮಎಯನ್ನ ಮಾತ್ರ ಹೊಕ್ಕಿರಲಿಲ್ಲ! ಆತ ತನ್ನ ಹೆಂಡತಿ ಹಿಂದ್'ಳನ್ನ 'ಅಲ್ಲವೆ ಅದ್ಯಾಕೆ ರೋಧಿಸುತ್ತಿಲ್ಲ ನೀನು! ನಿನ್ನ ನಿನ್ನ ತಂದೆ ಓತ್ಬಾ ಹಾಗೂ ಸಹೋದರನ ಹತ್ಯೆಗೆ ಶೋಕ ಆಚರಿಸುವುದಿಲ್ಲವೆ?' ಎಂದು ಆತ ಪ್ರಶ್ನಿಸಲು, ಅವಳು ಇವನ ಪೌರುಷ ಕೆಣಕುವಂತೆ "ಹೆಣ್ಣಾಗಿ ಹಿಂದೆ ಕಣ್ಣೀರು ಮಿಡಿಯುತ್ತಿದ್ದೆ ನಿಜ! ಆದರೆ ಈಗ ಈ ಹಿಂದ್'ಳ ಘನತೆಗೆ ಅದು ಶೋಭಿಸುವುದಿಲ್ಲ. ನೀವೆಲ್ಲರೂ ಒಂದಾಗಿ ಸೇರಿ ಆ ಮಹಮದನ ನಡು ಮುರಿಯುವವರೆಗೂ ನಾನು ಒಂದು ತೊಟ್ಟು ಕಂಬನಿಯನ್ನೂ ಸುರಿಸುವುದಿಲ್ಲ!" ಎಂದು ಬಿಟ್ಟಳು.



ಇತ್ತ ಮೆಕ್ಕಾದ ಶೊಚನೀಯ ಶೊಕಗ್ರಸ್ಥ ಪರಿಸ್ಥಿತಿ ಹೀಗೆ ಸಾಗುತ್ತಿದ್ದರೆ ಅತ್ತ ಮದೀನಾದಲ್ಲಿ ಖುಷಿ ಕಾಲು ಮುರಿದುಕೊಂಡು ಬಿದ್ದಿತ್ತು. ತನ್ನ ವಿಜಯವನ್ನ ಸಹಜವಾಗಿ ತನ್ನ ಬೋಧನೆಯ ಧರ್ಮದ ವಿಜಯವೆಂದು ಮಹಮದ್ ಸಾರಲು ಆರಂಭಿಸಿದ್ದ. ಅದು ಸ್ವಾಭಾವಿಕವೂ ಆಗಿತ್ತು. ಇದರಿಂದ ಆಂತರಿಕವಾಗಿ ಮಹಮದನ ಶಕ್ತಿ ಇಮ್ಮಡಿಸಿತು. ಆದರೆ ಅವನ ಧರ್ಮವನ್ನ ಒಪ್ಪದೆ ಅದರೆಡೆಗೆ ಆರ್ಷಿತರಾಗದಿರುವವರ ಮನದಲ್ಲಿ ಮಾತ್ರ ಇದರಿಂದ ಆತಂಕದ ಕಾರ್ಮೋಡಗಳು ಕವಿದವು. ಅಲ್ಲಾಹನಲ್ಲಿ ಅವಿಶ್ವಾಸ ಇಟ್ಟುಕೊಂಡ ಕಾರಣಕ್ಕೇನೆ ಖುರೈಷಿಗಳು ಅವನ ಪಡೆಯಿಂದ ಸೋತು ಸುಣ್ಣವಾದರು ಎನ್ನುವ ಗಾಳಿಸುದ್ದಿಗೆ ಅವರೆಲ್ಲಾ ತಲ್ಲಣಗೊಂಡರು.



ಅಂತವರಲ್ಲಿ ಮದೀನಾದ ಮುಖಂಡ ಅಬ್ದುಲ್ ಇಬ್ನ್ ಒಬೈ ಕೂಡಾ ಒಬ್ಬನಾಗಿದ್ದ. ಪ್ರಭಾವಿಯಾಗಿದ್ದ ಆತ ಇನ್ನೂ ಇಸ್ಲಾಮಿನತ್ತ ಆಸಕ್ತಿ ಬೆಳೆಸಿಕೊಂಡಿರಲಿಲ್ಲ. ಅವನಂತೆಯೆ ತಟಸ್ಥರಾಗಿದ್ದ ಅದೆಷ್ಟೋ ಮದೀನಾ ನಿವಾಸಿಗಳಿದ್ದರು. ಅವರು ಅತ್ತಲಾಗೆ ತಮ್ಮ ಮೂರ್ತಿ ಪೂಜೆಯ ಅರೆ ವೈದಿಕ ವಿಧಿಗಳನ್ನ ಬಿಡಲೂ ಇಲ್ಲ ಹಾಗಂತ ಮಹಮದನ ಹೊಚ್ಚ ಹೊಸ ಬೋಧನೆಗಳನ್ನ ವಿರೋಧಿಸಲೂ ಇಲ್ಲ. ಆದರೆ ಈ ಬದರ್ ಯುದ್ಧದ ಮುಸಲ್ಮಾನರ ವಿಜಯ ಅವರಲ್ಲಿ ಹೊಸ ಧರ್ಮದ ಬಗ್ಗೆ ಗಮನ ಸೆಳೆಯುವಂತೆ ಮಾಡಿತು.


ಮದೀನಾ ಹಾಗೂ ಅದರ ಆಸುಪಾಸಿನ ಯಹೂದಿಗಳು ಈ ಯುದ್ಧದ ಬಳಿಕ ಮಹಮದನ ಶಕ್ತಿಯನ್ನ ಗೌರವಿಸಲಾರಂಭಿಸಿದರು. ಆದರೆ ಅವನ ಮತಕ್ಕೆ ಸೇರುವ ಮನಸೊಂದನ್ನ ಮಾತ್ರ ಅವರ್ಯಾರೂ ಮಾಡಲಿಲ್ಲ. ಜೊತೆಗೆ ಅವನ ಬೆನ್ನ ಹಿಂದೆ ಹಾಗೂ ಪರೋಕ್ಷವಾಗಿ ಅವನನ್ನೂ ಅವನ ಧರ್ಮವನ್ನೂ ಟೀಕಿಸುವುದನ್ನೂ ಸಹ ನಿಲ್ಲಿಸಲಿಲ್ಲ.  ಮಹಮದನಿಗೂ ಇದರ ಅರಿವಿತ್ತು. ತನ್ನ ಕಾರ್ಯ ಸಾಧನೆಗೆ ಈ ಯಹೂದಿಗಳು ಮಗ್ಗುಲ ಮುಳ್ಳಾಗಿದ್ದಾರೆ ಎಂದೆ ಆತ ಭಾವಿಸಿದ್ದ. ಆದರೆ ತನ್ನ ತೋಳ್ಬಲವನ್ನ ಸಾಬೀತು ಪಡಿಸಿದ ಬದರ್ ಯುದ್ಧದ ನಂತರ ಅವರಲ್ಲಿ ಅನೇಕರು ಮೇಲ್ನೋಟಕ್ಕಾದರೂ ಅವನ ಭಕ್ತರಾಗಿ ಪರಿವರ್ತಿತರಾಗಿದ್ದರು.



ಹೀಗಾಗಿ ಈ ಶರಣಾಗತಿಯ ಆ ಹೊತ್ತಿನ ಉಪಯೋಗವನ್ನ ಸಶಕ್ತವಾಗಿ ಪಡೆದುಕೊಳ್ಳಲು ಅವನು ಮುಂದಾದ. ಅಂತಹ ಕೆಲವರನ್ನ ಆತ ತನ್ನ ಗೂಢಚಾರರಾಗಿ ನೇಮಿಸಿಕೊಂಡ. ಯಹೂದಿ ಸಮಾಜ ಹಾಗೂ ಇನ್ನಿತರ ಅವಿಶ್ವಾಸಿ ಸಮುದಾಯದಲ್ಲಿ ಆಗಾಗ ನುಸುಳಿ ಅವರ ಅಭಿಪ್ರಾಯಗಳನ್ನ ಸಂಗ್ರಹಿಸಿ, ಇಸ್ಲಾಮಿನ ವಿರುದ್ಧ ಅವರೇನಾದರೂ ಪಿತೂರಿ ಹೂಡಿದರೆ ಅದನ್ನ ತಿಳಿಸುವ ಹೊಣೆಗಾರಿಕೆಯನ್ನವರಿಗೆ ವಹಿಸಲಾಯಿತು. ಕೈತುಂಬ ಕಾಸು ತರುವ ಆ ಸುಲಭದ ಚಾಡಿಕೋರತನಕ್ಕೆ ಅವರೂ ಸಹ ಬಲಿ ಬಿದ್ದರು. ಅವರ ಗುಪ್ತ ಮಾಹಿತಿ ಹಾಗೂ ನಿಖರವಾದ ಬಾತ್ಮಿಗಳ ದೆಸೆಯಿಂದ ಮಹಮದನಿಗೆ ಅವಿಶ್ವಾಸಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಸಹಜವಾಗಿ ಸೂಕ್ತವಾದ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಯಿತು.


( ಇನ್ನೂ ಇದೆ.)

No comments: