25 November 2022

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨ 👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೨ 👊

ನಮ್ಮ ಇಂದಿನ ಭಾರತದಲ್ಲಿ ಯಾವುದೆ ಊರೊಂದರ ನಿಜ ಹೆಸರು ತಿಳಿದುಕೊಳ್ಳುವ ಆಸಕ್ತಿಯಿರುವವರು ಒಂದೋ ನಮ್ಮನ್ನ ಆಕ್ರಮಿಸಿ ಆಳಿದ ಬ್ರಿಟಿಷರ ಗೆಝೆ಼ಟಿಯರ್ - ಡೈರಿ ನಮೂದುಗಳು - ಆಡಳಿತಾತ್ಮಕ ವರದಿಗಳು - ಸರ್ವೆ ರಿಪೋರ್ಟುಗಳು ಅಥವಾ ಆ ಕಾಲದಲ್ಲಿ ಮತಾಂತರದ ಉದ್ದೇಶದಿಂದ ಭಾರತಕ್ಕೆ ಬಂದಿಳಿದಿದ್ದ ರೋಮನ ಕ್ಯಾಥೋಲಿಕ ಪಾದ್ರಿಗಳ ಹಾಗೂ ಬಾಸೆಲ್ ಮಿಶನರಿಗಳ ದಾಖಲಿತ ದಿನಚರಿ ಹಾಗೂ ಅವರು ರೋಮಿಗೋ - ಮ್ಯೂನಿಚ್ಚಿಗೋ ಬರೆದು ಕಳಿಸಿದ್ದ ಕಾರ್ಯಪ್ರಗತಿಯ ದಾಖಲಾತಿಗಳನ್ನ ಪರಿಶೀಲಿಸಬೇಕು. ಅವುಗಳಲ್ಲೆಲ್ಲ ಸ್ಥಳಿಯವಾಗಿ ಪ್ರಚಲಿತದಲ್ಲಿರುವ ನೈಜ ಸ್ಥಳನಾಮವೆ ನಮೂದಾಗಿರುತ್ತದೆ.

ಇಲ್ಲದಿದ್ದರೆˌ ಸ್ಥಳಿಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಜನಪದ ಸಂಸ್ಕಾರಗಳ ಪರಿ ಗಮನಿಸಬೇಕು. ಕಾಙಂನಗಾಡಿನ ವಿಷಯದಲ್ಲಿ ಇಲ್ಲಿನ ಭೂತದ ಕೋಲ ಇದನ್ನೆ ಅನುಕರಿಸುವ ಮಲಬಾರಿನ ಥಯ್ಯಂಗಿಂತ ವಿಭಿನ್ನ. ಅದರ ನುಡಿಗಳಲ್ಲಿ ತುಳು ಭಾಷೆಗೆ ಪ್ರಾಧಾನ್ಯತೆ ಇದೆಯೆ ಹೊರತು ಹೇರಿಕೆಯ ಮಲಯಾಳಂಗಲ್ಲ. ಇಂದಿಗೂ ಇಲ್ಲಿನ ಜನಮಾನಸದ ಮನರಂಜನೆಯ ಮೂಲವಾಗಿ ಜನಪ್ರಿಯವಾಗಿರುವುದು ತುಳುನಾಡಿನ ಯಕ್ಷಗಾನವೆ ಹೊರತುˌ ಅದರ ನಕಲಿಳಿಸಿ ಆಡುವ ಮಲಯಾಳಿಗಳ ಕಥಕ್ಕಳಿಯಲ್ಲ.

ಅದೂ ಇಲ್ಲಂತಂದರೆˌ ಸ್ಥಳಿಯವಾಗಿ ನ್ಯಾಯದಾನಕ್ಕೆ ಅದೆ ಬ್ರಿಟಿಷರು ಸ್ಥಾಪಿಸಿದ್ದ ನ್ಯಾಯಾಲಯಗಳ ಹೆಸರುಗಳನ್ನ ಗಮನಿಸಬೇಕು. ಬರಗೆಟ್ಟ ರಾಜಕಾರಣಿಗಳ ಒಡೆದಾಳುವ ನೀತಿಯ ಬಲಿಪಶುವಾಗಿರೋ ಇಂದಿನ ಭಾರತದಲ್ಲಿ ಏನೆ ಬದಲಾಗಿದ್ದರೂ ವಸಾಹತುಶಾಹಿ ಕಾಲದ ನ್ಯಾಯಾಲಯಗಳು ತಮ್ಮ ಅಸಲು ಗುರುತು ಬಿಟ್ಟು ಬದಲಾಗಿಲ್ಲ. ಈಗಲೂ ಅದು ಮದ್ರಾಸ್ ಹೈಕೋರ್ಟೆ ಹೊರತು ಚೆನ್ನೈ ಉಚ್ಛ ನ್ಯಾಯಾಲಯವಲ್ಲ. ಊರ ಹೆಸರನ್ನ ಕುಟಿಲ ರಾಜಕಾರಣಿಗಳು ಪ್ರಯಾಗರಾಜˌ ಮುಂಬೈˌ ಕೊಲ್ಕತಾˌ ನವ ದೆಹಲಿ ಅಂತ ಬದಲಿಸಿದ್ದರೂ ನ್ಯಾಯಾಲಯಗಳು ಮಾತ್ರ ಮೊದಲಿನಂತೆ ಅಲಹಾಬಾದ್ˌ ಬಾಂಬೆˌ ಕಲ್ಕತಾˌ ತೀಸ್ ಹಜಾ಼ರಿಯಾಗಿಯೆ ಉಳಿದಿವೆ. ದರಿದ್ರ ರಾಜಕಾರಣಿಗಳ ಚುನಾವಣಾ ಮರು ನಾಮಕರಣ ತಂತ್ರಕ್ಕೆ ಅವು ಬಲಿಯಾಗಿಲ್ಲ. ಒಂದು ಗೆರೆಯನ್ನ ಮುಟ್ಟದೆ ಅದನ್ನ ಸಣ್ಣದು ಮಾಡಬೇಕಿದ್ದರೆ ಅದರ ಪಕ್ಕದಲ್ಲೆ ದೊಡ್ಡ ಗೆರೆಯನೊಂದು ಎಳೆಯಬೇಕೆ ಹೊರತು ಇರೋ ಗೆರೆಯ ಅಳಿಸೋದಲ್ಲ. ಇತ್ತೀಚೆಗೆ ಟಿಪ್ಪೂ ಎಕ್ಸಪ್ರೆಸ್ ರೈಲನ್ನ ಒಡೆಯರ್ ಎಕ್ಸಪ್ರೆಸ್ ಮಾಡಿದ ಕಮಂಗಿ ನಾಲಾಯಕರ ಮುಠ್ಠಾಳತನ ನೆನಪಾಗಿ ಅವನ ತುಟಿಯಂಚಿನಲ್ಲಿ ವ್ಯಂಗ್ಯದ ನಗುವಿನ ಎಳೆಯೊಂದು ಸುಳಿಯಿತು.

ಕಾಙಂಗಾಡಿನದ್ದೂ ಒಂಥರಾ ಅಂತದ್ದೆ ಕಥೆ. ಮೂಲತಃ ಇದು ತುಳುನಾಡಿನ ಭಾಗ. ಸ್ಥಳಿಯರ ವ್ಯಾವಹಾರಿಕ ಭಾಷೆ ತುಳು ಹಾಗೂ ಕನ್ನಡ. ಹಾಗೆ ನೋಡಿದರೆ ಇದಕ್ಕೂ ದಕ್ಷಿಣಕ್ಕಿರುವ ಪಯ್ಯನೂರು ತಾಲೂಕಿನ ಕೆಳಗಿನಂಚಿನವರೆಗೂ ಅದು ತುಳುನಾಡೆ. ನ್ಯಾಯವಾಗಿ ಅಷ್ಟೂ ನೆಲ ಸ್ವತಂತ್ರೋತ್ತರ ಕಾಲದಲ್ಲಿ ಪೂರ್ತಿ ದಕ್ಷಿಣ ಕನ್ನಡ ಜಿಲ್ಲೆಯ ಜೊತೆ ಕನ್ನಡ ನಾಡಿನ ಭಾಗವಾಗಬೇಕಿತ್ತು. ಆದರೆ ಗಡಿ ನಿಗದಿ ಆಯೋಗದಲ್ಲಿದ್ದ ಪಣಿಕ್ಕರನೆಂಬ ಕುಟಿಲ ಮಲಯಾಳಿ ಸದಸ್ಯ ಪೂರ್ಣ ಕಾಸರಗೋಡು ತಾಲೂಕನ್ನ ತೆಗೆದು ಪಕ್ಕದ ಕೇರಳದ ಮಲಬಾರು ಜಿಲ್ಲೆಗೆ ಒತ್ತಾಯದಿಂದ ಸೇರಿಸಿದ! ಅನಂತರ ಮಲಬಾರು ಜಿಲ್ಲೆಯ ವಿಭಜನೆ ನಡೆದು ವಯನಾಡುˌ ಮಲ್ಲಪುರಂˌ ಕೋಳಿಕ್ಕೋಡು, ಪಾಲಕ್ಕಾಡು ಹಾಗೂ ಕಣ್ಣೂರು ಜಿಲ್ಲೆಗಳ ರಚನೆ ಮಾಡಿದಾಗ ಕಾಸರಗೋಡನ್ನ ಕಣ್ಣೂರಿನ ಭಾಗವಾಗಿ ಮುಂದುವರೆಸಲಾಯಿತು. ಮುಂದೆ ಕಾಸರಗೋಡನ್ನೆ ಜಿಲ್ಲೆ ಮಾಡಿ ಕಾಸರಗೋಡು ಹಾಗೂ ಹೊಸದುರ್ಗ ತಾಲೂಕುಗಳ ಸಹಿತ ಪ್ರತ್ಯೇಕಗೊಳಿಸಲಾಯಿತಾದರೂ ಆ ಕಾಲದಿಂದ ಅದರದ್ದೆ ಅವಿಚ್ಛಿನ್ನ ಭಾಗವಾಗಿದ್ದ ಪಯ್ಯನೂರನ್ನ ಪ್ರತ್ಯೇಕ ತಾಲೂಕಾಗಿಸಿ ಕಣ್ಣೂರಲ್ಲೆ ಇರಿಸಲಾಗಿದೆ.

ಇಂದಿಗೂ ಸರಕಾರಿ ಸೇವೆಗಳಲ್ಲಿ ಜಿಲ್ಲಾ ಬೋರ್ಡುಗಳ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ ಗ್ರಾಮೀಣಭಿವೃದ್ಧಿ ಸಂಸ್ಥೆಗಳ ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡ - ಮಲಯಾಳಂ ಎರಡೂ ಭಾಷೆಗಳ ಬಳಕೆ ಕಡ್ಡಾಯವಾಗಿದ್ದರೂ ಅದು ಕೇವಲ ಕಾಗದದ ಮೇಲಿನ ಬರಹವಾಗಿ ಮಾತ್ರ ಉಳಿದಿದೆ. ಕೇರಳ ಸರಕಾರದ ಮಲಯಾಳಂ ವಿಸ್ತರಣ ನೀತಿಯ ಫಲವಾಗಿ ಸರಕಾರಿ ಸಂಬಂಧಿತ ಸಂಘ ಸಂಸ್ಥೆಗಳಲ್ಲೆಲ್ಲಾ ವ್ಯವಸ್ಥಿತವಾಗಿ ದಕ್ಷಿಣದ ತಿರುವಾಂಕೂರು - ಕೊಚ್ಚಿನ್ ಭಾಗದ ಮಲಯಾಳಿ ಭಾಷಿಗ ಉದ್ಯೋಗಿಗಳನ್ನ ತಂದು ತುಂಬಲಾಗಿದೆ. ವರ್ಷಾಂತರಗಳಲ್ಲಿ ಮಾಡಿದ್ದ ಈ ಕುತಂತ್ರ ಫಲ ಕೊಟ್ಟಿದ್ದು ಬಹುತೇಕ ಮೂರು ದಶಕಗಳ ಹಿಂದೆ ಹೀಗೆಲ್ಲ ಇಲ್ಲಿಗೆ ಬಂದು ಕಡೆಗೆ ಇಲ್ಲೆ ನೆಲೆಸಿದ ಮಲಯಾಳಿಗಳ ಮುಂದಿನ ಎರಡನೆ ತಲೆಮಾರು ಇಲ್ಲೆ ಕಣ್ಣು ಬಿಟ್ಟು ಬಹುತೇಕ ಈಗಿಲ್ಲಿ ಕನ್ನಡ ಊಟದೆಲೆಯಂಚಿನ ಉಪ್ಪಿನಂತಾಗಿ ಹೋಗಿದೆ. ಸ್ಥಳಿಯ ಕನ್ನಡಿಗರು ಸರಕಾರಿ ಹಾಗೂ ಖಾಸಗಿ ಸೇವೆಗಳನ್ನ ಪಡೆಯಲು ಮಲಯಾಳಂ ಕಲಿಯುವದು ಹಾಗೂ ಬಳಸುವುದು ಅನಿವಾರ್ಯ ಅನ್ನುವ ಪರಿಸ್ಥಿತಿಯನ್ನ ಸೃಷ್ಟಿ ಮಾಡಲಾಗಿದೆ.
....

ಹೊಸದುರ್ಗ ಕಾಙಂಗಾಡಾದದ್ದೂ ಸಹ ಹೀಗೆಯೆ. ಇವತ್ತು ಇಡಿ ಊರಲ್ಲಿ ಹುಡುಕಾಡಿದರೂ ತಾಲೂಕು ಖಾದಿ ಬೋರ್ಡು ಹಾಗೂ ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯದ ಹೊರತು ಇನ್ನೆಲ್ಲಾ ಜಾಗಗಳಿಂದ ಹೊಸದುರ್ಗ ಅನ್ನುವ ಹೆಸರು ನಾಪತ್ತೆಯಾಗಿ ಕಾಙಂಗಾಡ್ ಅನ್ನುವ ಹೆಸರು ಒಕ್ಕರಿಸಿದೆ. ಸಾಲದ್ದಕ್ಕೆ ಅವೆರಡು ಜಾಗದ ಹೊರತು ಸ್ಥಳಿಯರಿಗೆ ಚಿರ ಪರಿಚಿತವಾಗಿರುವ ಕನ್ನಡ ಲಿಪಿಯೂ ಮಂಗಮಾಯವಾಗಿ ಲಿಪಿಯಿಲ್ಲದ ಮಲಯಾಳಂ ಭಾಷೆಯನ್ನ ಬರೆಯಲು ಮಲಯಾಳಿಗಳು ಅವಲಂಬಿಸಿರುವ ಎರವಲು ತುಳು ಲಿಪಿಯೆ ಎಲ್ಲೆಲ್ಲಿಯೂ ರಾರಾಜಿಸುತ್ತಿದೆ. ದುರದೃಷ್ಟಕ್ಕೆ ಬಹುತೇಕ ಸ್ಥಳಿಯರು ಅದನ್ನರಿಯರು.

ಇಕ್ಕೇರಿಯ "ಕೆಳದಿ ಸಂಸ್ಥಾನ"ದ ನಾಯಕರು ಸ್ಥಾಪಿಸಿದ್ದˌ ಅನಂತರ ಹೈದರಾಲಿ ಅವರಿಂದ ವಶಪಡಿಸಿಕೊಂಡಿದ್ದ ಹೊಸದುರ್ಗ ಕೋಟೆ ಹಾಗೂ ಅದರ ಸುತ್ತಲ ಊರು ಮಲಯಾಳಿಗಳು ಹುಟ್ಟಿಸಿರುವ ಕಾಙನ್ ಎಂಬ ವೀರನ ಹೆಸರಂಟಿಸಿಕೊಂಡು ಕಾಙಂನಗಾಡಾಗಿ ಬದಲಾಗಿ ಹೋಗಿದೆ. ಈ ತಾಲೂಕಿನಲ್ಲಿ ಕನ್ನಡ ಈಗೇನಿದ್ದರೂ ಇಲ್ಲಿರುವ ಅಳಿದುಳಿದ ಕನ್ನಡ ಮಾಧ್ಯಮ ಶಾಲೆಗಳಿಗೆ ಮಾತ್ರ ಸೀಮಿತ. ಮಲಯಾಳಿಗಳು ಕಾಸರಕ್ಕೋಡ್ ( ಕೋಳಿಕ್ಕೋಡಿನ ಅನುಕರಣೆಯಲ್ಲಿ.) ಎಂದೆ ಕರೆದು ಬರೆಯುವ ಕಾಸರಗೋಡು ತಾಲೂಕಿನಲ್ಲಿ ತೀವೃ ನಿಗಾ ಘಟಕದಲ್ಲಿರುವ ಕನ್ನಡ ಹಾಗೂ ತುಳು ಭಾಷೆಗಳು ಹೊಸದುರ್ಗದಲ್ಲಿ ಸತ್ತು ಸುಣ್ಣವಾಗಿ ಶವಾಗಾರಕ್ಕೆ ವರ್ಗಾವಣೆಯಾಗಿ ಮರಣೋತ್ತರ ಪರಿಕ್ಷೆಯ ನಿರೀಕ್ಷೆಯಲ್ಲಿವೆ.
....

ಬದಲಾವಣೆಯೆ ಇಲ್ಲದ ಏಕತಾನತೆಯ ಬದುಕಿಂದ ರೋಸತ್ತು ಗೊತ್ತು ಗುರಿಯಿಲ್ಲದ ಪಯಣವೊಂದನ್ನ ಅವ ಕೈಗೊಂಡಿದ್ದ. ಬದುಕಲ್ಲಿ ಮೇಲು ನೋಟಕ್ಕೆ ಎಲ್ಲಾ ಇದ್ದರೂ ಆಂತರ್ಯದಲ್ಲಿ ಇದ್ದ ಕೊರತೆಗಳು ಅವನನ್ನ ಒಳಗೊಳಗೆ ಜರ್ಜರಿತಗೊಳಿಸಿ ಹೈರಾಣಾಗಿಸಿದ್ದವು. ಇಲ್ಲದ ಇರಬೇಕಿದ್ದವುಗಳನ್ನ ಅರಸಿಕೊಂಡು ಅಂಡೆಲೆಯಲು ಹೊರಟಿದ್ದ ಅಂದರೂ ತಪ್ಪಾಗುತ್ತಿರಲಿಲ್ಲ. ಒಂಥರಾ ಗೊತ್ತು ಗುರಿಯಿರದ ಈ ಪ್ರಯಾಣವನ್ನ ಇಂತದ್ದೆ ಅಳತೆಗೋಲಲ್ಲಿ ಅಳೆಯಲು ಸ್ವತಃ ಅವನಿಗೆ ಕಷ್ಟವಾಗಿತ್ತು.

ಇಂತಲ್ಲಿಗೆ ಇಷ್ಟೆ ದಿನ ಅಂತೇನೂ ನಿಗದಿ ಮಾಡಿಕೊಳ್ಳದೆ ಮನಸಾದೆಡೆಗೆ ಹೋಗಿ ಮನಸಿರುವಷ್ಟು ಕಾಲ ಇದ್ದು ಮನ ನೆಮ್ಮದಿ ಅರಸಲು ಹೊರಟ ಪ್ರಯಾಣವಾಗಿತ್ತಿದು. ಕೆಲಸಕ್ಕೆ ಎರಡು ತಿಂಗಳ ಸುದೀರ್ಘ ರಜೆ ಹಾಕಿದ್ದ. ನೆಮ್ಮದಿ ಅನ್ನೋದನ್ನ ಹುಡುಕಬೇಕಿರೋದು ತನ್ನೊಳಗೋ? ಇಲ್ಲಾ ಇನ್ನೆಲ್ಲೋ ಹೊರಗೊ! ಅನ್ನೊ ಗೊಂದಲ ಕ್ಷಣ ಕಾಲ ಕಾಡಿದರೂ ಇದ್ದಲ್ಲೆ ಇದ್ದರೆ ಕ್ರಮೇಣ ನಿಂತ ನೀರಿನಂತೆ ನಾರಿ ಕೊಳೆತು ಹೋದೇನೆಂಬ ಭಯ ಕಾಡಿದ್ದರಿಂದ ದೇಶ ಬದಲಾದಲಾದರೂ ಮನೋಕ್ಲೇಶ ಕಳೆದೀತೆಂಬ ದೂರದಾಸೆಯಿಂದ ಸಿಕ್ಕ ರೈಲೇರಿ ಬೆಂಗಳೂರು ಬಿಟ್ಟಿದ್ದವ ಒಂದಿಡಿ ರಾತ್ರಿ ಪ್ರಯಾಣಿಸಿ ಕಾಙಂಗಾಡಿಗೆ ಬಂದು ತಲುಪಿದ್ದ. ಇಳಿಯ ಬೇಕಿನಿಸಿತು ಇಳಿದ. ಇರಬೇಕಿಸಿತು ನಾಲ್ಕು ದಿನದಿಂದ ಇದೆ ಕಾಙಂಗಾಡಿನ ಕುಶಾಲನಗರ ಪರಿಸರದಲ್ಲಿದಾನೆ.

( ಇನ್ನೂ ಇದೆ.)

https://youtu.be/Dk40V1W2DkQ




No comments: