15 November 2008

ಶಾಲೆಯ ಆದಿನಗಳು....

ಶಾಲೆಗೆ ಸೇರಿದ್ದ ಆರಂಭದ ದಿನಗಳಲ್ಲಿ ನನ್ನ ಬುದ್ದಿಮಟ್ಟ ವಿಶೇಷವೆಂದು ಯಾರಿಗೂ ಅನಿಸಿರಲಿಲ್ಲ.ಅದರಲ್ಲಿ ಏನಾದರೂ ವಿಶೇಷವಿದ್ದಿರಬಹುದು ಎಂದು ನನಗೂ ಅನಿಸಿರಲಿಲ್ಲ.ಆದರೆ ಬರುಬರುತ್ತಾ ಓದಿನ ವಿಷಯದಲ್ಲಿ ನನ್ನ ಸಾಮರ್ಥ್ಯ ಇನ್ನುಳಿದವರಿಗಿಂತ ಸ್ವಲ್ಪ ಹೆಚ್ಚೇ ಇರುವುದು ನನಗೆ ಅರಿವಾದಂತೆ ನನ್ನ ಶಿಕ್ಷಕರಿಗೂ ಅರಿವಾಗಿತ್ತು.ಆದರೆ ಪ್ರೋತ್ಸಾಹದ ವಿಷಯದಲ್ಲಿ ಮಾತ್ರ ನಾನು ನಿರಾಶ್ರಿತನಾದೆ.ಕಾರಣಗಳನ್ನು ಉಹಿಸುವ ಧ್ರಾಷ್ತ್ಯಕ್ಕೆ ಇಳಿಯಲಾರೆ,ಆದರೆ ಹಣವಂತರಾಗಿದ್ದ ಅಲ್ಪ ಮಟ್ಟದ ಬುದ್ದಿವಂತರ ನಂತರದ ಸ್ಥಾನ ನನ್ನದಾಗಿತ್ತು ಎಂಬುದಷ್ಟೇ ನನ್ನ ನೋವಿಗೆ ಕಾರಣ.ಈಗ ನನಗಿರುವ ನ್ಯಾಯಪರತೆಯ ಅರಿವಿನ ಪರಿಧಿಯಲ್ಲೇ ಹೇಳುವದಾದರೆ ಅಷ್ಟು ಅಸಡ್ಡೆ ಹಾಗು ಎರಡನೇ ದರ್ಜೆಯ ಆದರಕ್ಕೆ ಖಂಡಿತಾ ನಾನು ಅರ್ಹನಾಗಿರಲಿಲ್ಲ.ಅಲ್ಲದೆ ತಾರತಮ್ಯದ ಮೂಲಕ ಮಕ್ಕಳ ಎಳೆ ಮನಸಸಿನಲ್ಲಿ ಖೇದದ ಬೀಜ ಬಿತ್ತಿ ಆ ವಯಸಿನಲ್ಲಿಯೇ ಅವರನ್ನು ಸಿನಿಕರನ್ನಗಿಸುವ ತಮ್ಮ ನಡುವಳಿಕೆಗಳ ಬಗ್ಗೆ ಶಿಕ್ಷಕರಿಗೂ ಅರಿವಿಲ್ಲದಿರುವುದು ವಿಷಾದದ ಸಂಗತಿ.

ನನ್ನ ಹೆತ್ತಮ್ಮನಿಗೆ ಅದೇನೋ ದುರಾಸೆ,ಮಗ ಒಂದು ಖಾಸಗಿ ಶಾಲೆಯಲ್ಲಿ ಕಲಿತರೆ ಮಾತ್ರ ಉತ್ತಮ ನಾಗರೀಕನಾಗಬಲ್ಲ ಎಂಬ ಗೊಡ್ಡು ಭ್ರಮೆ.ಹೀಗಾಗಿ ಊರಿನಲ್ಲಿದ್ದ ಪ್ರತಿಷ್ಠಿತ ಶಾಲೆಯೊಂದಕ್ಕೆ ಸೇರಿಸಲ್ಪಟ್ಟೆ.ಅವರೇನೋ ಪಿಗ್ಮಿ ಸಂಗ್ರಹ ಮಾಡಿ,ಹೂವಿನಂಗಡಿಗೆ ಹೂ ಕಟ್ಟಿಕೊಟ್ಟು ನಾಲ್ಕಾರು ಕಾಸು ಸಂಪಾದಿಸಿ ಶಾಲೆಗೂ ಕಳಿಸುವ ನಿರ್ಧಾರ ಮಾಡಿದ್ಧರು ನಿಜ ಆದರೆ ವಾಸ್ತವದಲ್ಲಿ ಅವರ ದುಡಿಮೆಯಲ್ಲಿ ಅವರದ್ದೇ ಆದ ಇತರ ಖರ್ಚುಗಳೆಲ್ಲ ಕಳೆದ ನಂತರ ನನ್ನ ಶಾಲೆಯ ಫೀಸಿಗೆ ಸಾಕಷ್ಟು ಹಣ ಉಳಿಯುತ್ತಿರಲಿಲ್ಲ.ಹೀಗಾಗಿ ಪ್ರತಿ ತಿಂಗಳ ಕೊನೆಯಲ್ಲಿ ನನ್ನೊಬ್ಬನ ಹೊರತು ಇನ್ನೆಲ್ಲರೂ ತಮ್ಮ ಫೀಸ್ ಕೊಟ್ಟಿರುತ್ತಿದ್ದು ನಾನೊಬ್ಬ ಮಾತ್ರ ಅಪರಾಧಿ ಪ್ರಜ್ಞೆಯಿಂದ ನರಳುತ್ತಿದ್ದೆ.ಮೇಲಾಗಿ ಡೈರಿಯಲ್ಲಿ ಅಮ್ಮನಿಗೆ ಕರೆ,ಸಕಾಲದಲ್ಲಿ ಹಣ ಸಂದಾಯವಾಗದ ಬಗ್ಗೆ ನನಗೆ ತರಗತಿಯಲ್ಲಿ ಸದಾ ಕರಕರೆ.ಹೀಗಾಗಿ ಶಿಕ್ಷಕರ ದ್ರಷ್ಟಿ ನನ್ನ ಪ್ರತಿಭೆಯನ್ನು ಗುರುತಿಸುವ ಹೊರತು ಅವರಿಗೆ ತಿಳಿಯದಂತೆ ಭರ್ತ್ಸನೆಗಳಿಂದ ಕಮರಿಸುವುದರತ್ತಲೇ ಸಾಗಿತು.ಈ ಎಲ್ಲ ಹಿಂಸೆಯಿಂದ ಮುಕ್ತಿ ದೊರಕಿದ್ದು ನಾನು ಐದನೇ ತರಗತಿಗೆ ಸೇರಲು ಚಿಕ್ಕಮ್ಮನೂರಾದ ಕಾರ್ಕಳಕ್ಕೆ ಕಾಲಿಟ್ಟಾಗ.

ಆದರೆ ಅದೊಂದು ಬೆಂಕಿಯಿಂದ ಬಾಣಲೆಗೆ ಬಿದ್ದ ಅನುಭವದಂತಾಗಿದ್ದು ಮಾತ್ರ ಬೇರೆಯದೇ ಕಥೆ. ನನ್ನ ಅಪ್ಪ ಅಮ್ಮನಲ್ಲಿದ್ದ ಸಮರಸದ ಕೊರತೆಯಿಂದ ಅವರಿಬ್ಬರೂ ಯಾವಾಗಲೂ ಒಂದಾಗಿರುತ್ತಿದ್ದುದು ಕಡಿಮೆ.ಒಂದು ವೇಳೆ ಹಿರಿಯರ ರಾಜಿ-ಕಬೂಲಿಯಿಂದ ಜೊತೆಯಾದರೂ ಆ ಅಂಕ ಆದಷ್ಟು ಬೇಗ ಸರಿದು ಮತ್ತೊಂದು ರಾಜಿಗೆ ವೇದಿಕೆ ಸಿದ್ಧವಾಗುವ ತನಕ ಬೇರೆಯಾಗಿರುತ್ತಿದ್ದರು.ಅಮ್ಮ ತವರಿನಲ್ಲೇ ಬಿಡಾರ ಹೂಡಿರುತ್ತಿದ್ದರಿಂದ ನಾನು ಅಲ್ಲೇ ಉಳಿಯಬೇಕಾಗುತ್ತಿತ್ತು.ಹೀಗಾಗಿ ನನ್ನ ಹೆತ್ತವರ ಬಗ್ಗೆ ಕುಟುಂಬದಲ್ಲಿ ಅಂತಹ ಆದರವೇನೂ ಇರಲಿಲ್ಲ.ದುರದ್ರಸ್ತಕ್ಕೆ ಅದಕ್ಕೆ ಬಲಿಯಾದವರು ಮಾತ್ರ ನಾವು ಮಕ್ಕಳು.ಅದೆಕರಣಕ್ಕೆ ಚಿಕ್ಕಮ್ಮ ಊರಿಗೆ ಕರೆಸಿಕೊಂಡರೂ ಮನೆಯಲ್ಲಿ ಇರಗೊಡದೆ ಹಾಸ್ಟೆಲ್ಳಿಗೆ ಸೇರಿಸಿ ಬಿಟ್ಟರು.ಕೂಗಳತೆಯ ದೂರದಲ್ಲಿದ್ದರೂ ಮನೆಗೆ ಬಾರದಂತ ವಾತಾವರಣ.ಬಹುಷಃ ಆಗಿನಿಂದಲೇ ಒಂಟಿತನಕ್ಕೆ ನಾನು ಹೊರಳಿಕೊಂಡೆ ದೈಹಿಕವಾಗಿಯೂ...ಮಾನಸಿಕವಾಗಿಯೂ.

No comments: