07 July 2013

ಮೌನದ ತೂಕ ಯಾವತ್ತೂ ಮಾತಿಗಿಂತ ಮಿಗಿಲು.

ಬತ್ತಲೆ ಪಾದಗಳಲ್ಲಿ-ಕತ್ತಲೆ ಹಾದಿಯಲ್ಲಿ
ಅಂಡಲೆಯುವ ನಾನು ಎಂದಾದರೂ....
ನೀನಿರುವಲ್ಲಿ ಹೋಗಿ ಮುಟ್ಟುತೀನ?
ನಿನ್ನೆದೆ ಮನೆಯ ತಲೆ ಬಾಗಿಲ ಕದವನ್ನ
ಕಾತರದ ಕೈಗಳಿಂದ ತಟ್ಟುತ್ತೀನ?,
ಗುರಿ ತಪ್ಪಿರಲಿಲ್ಲ
ನನ್ನ ನೆನಪುಗಳಲ್ಲಿದ್ದ ಹಾದಿಯ ಗುರುತು ಕೂಡ ಅಷ್ಟಾಗಿ ತಪ್ಪಾಗಿರಲಿಲ್ಲ....
ಆದರೂ ನಿನ್ನೆದೆಯ ಗಮ್ಯವನ್ನ ಕಡೆಗೂ ನನಗೆ ಸೇರಲಾಗಲೆ ಇಲ್ಲ/
ಕಪ್ಪು ಕಣ್ಣಿನ ಕೊಳದಲ್ಲಿ ಉಕ್ಕಿದ ಹನಿಯ ಸೆಲೆಗಳೆಲ್ಲ
ಸಂತಸದ್ದೆ ಆಗಿರಲಿ ಅನ್ನೋದು ಸುಂದರ ಕನಸು.....
ಆದರದರಲ್ಲಿ ಬಹುಪಾಲು
ಸಂಕಟದ್ದೆ ಆಗಿರೋದು ಮಾತ್ರ ವಾಸ್ತವದ ವ್ಯಂಗ್ಯ ನನಸು//


ಮೌನದ ಚಿಪ್ಪಿನಲ್ಲಿ ಅನಿವಾರ್ಯವಾಗಿ ಸಿಲುಕಿ
ನಲುಗುವ ಮಾತುಗಳೆಲ್ಲ ಮುತ್ತಾಗುತಾವೆ....
ನಿನ್ನ ನೆನಪಿನ ತಂಗಾಳಿ ಹೊತ್ತು ತರುವ
ಇಂತಹ ಸುಮಧುರ ಗೀತೆಗಳ ಸಾಂಗತ್ಯವೂ ಇಲ್ಲದಿದ್ದಿದ್ದರೆ
ಈಗಲೆ ಅರೆಜೀವವಾಗಿರುವ ನಾನು ಅದೆಂದೋ ಇಲ್ಲವಾಗಿರುತ್ತಿದ್ದೆ,
ಮತ್ತಿರದ ಹೊತ್ತಲೂ ತೇಲುವ ವಿಸ್ಮಯಕ್ಕೆ
ಒಲವ ನಶೆ ಎನ್ನಬಹುದು/
ಮೋಡದಲ್ಲಿ ತಲೆ ಮರೆಸಿಕೊಂಡಿದ್ದ ಬಾನಿನೊಡೆಯನನ್ನ
ಮತ್ತೆ ನೋಡುವಾಗ ಆಗುವ ಅವ್ಯಕ್ತ ಆನಂದದಂತೆಯೆ....
ದುಗುಡದ ಮೋಡ ಮುಸುಗಿದ
ಮನದ ಬಾನಲಿ ನಿನ್ನ ನೆನಪ ಪಾತ್ರ,
ಕರೆದು ಕರೆದು ಸಾಕಾಗಿ ಮೌನವಾದ ಹೊತ್ತಲೂ
ನಿನ್ನ ನೆನಪಿನಾ ಪರಿಮಳವೆ ಆವರಿಸಿ....
ಕಾಡುತಿದೆ ನನ್ನ ಸುತ್ತಲೂ//


ತೇಲುವ ಮೋಡದ ಅಂತರಾಳದೊಳಗೆ
ಬೆಚ್ಚಗೆ ಹುದುಗಿದ ಹನಿಯೆದೆಯಲ್ಲೋ....
ನೆಲದೆಡೆಗೆ ಸ್ನೇಹವ ಮೀರಿದ ಸೆಳೆತವಿದೆ,
ಮನಸಿನ ಮೂಲೆಯಲ್ಲಿ ಮಿಡುಕಾಡುತ್ತಿರುವ
ಕನಸಿನ ಕಳವಳಕ್ಕೆ....
ನನಸಿನಲ್ಲಿ ನೆಮ್ಮದಿ ಸಿಗುವ ಸಂಶಯ
ನಿಜದಲ್ಲೂ ಸಾಬೀತಾಗುತ್ತಿದೆ/
ಶಾಂತ ಸಾಗರದ ಒಡಲೊಳಗೂ
ಅಶಾಂತಿಯ ಅಲೆಗಳು ಸುಪ್ತವಾಗಿ ಆಗಾಗ ಏಳುತ್ತಿರುತ್ತವೆ....
ಯಾಕೆ ಇವೆಲ್ಲ ರಗಳೆ?
ಹನಿ ಪಾಷಣವನ್ನ ಅಂದೆ ನೀ ಕೊಟ್ಟಿದ್ದರೂ ಸಾಕಿತ್ತು,
ಇರುತ್ತಿರಲಿಲ್ಲ ಪರೋಕ್ಷವಾಗಿಯೂ
ನನ್ನ ಈ ನಿರಂತರ ಕಿರುಕುಳ ನಿನಗೀ ವೇಳೆ.//


ಹದವರಿತು ಬಿದ್ದರೆ ಪ್ರತಿಯೊಂದು ಮಳೆಹನಿಗಳೂ
ನೆಲದೊಡಲಲ್ಲಿ ಹುದುಗಿದ ಕನಸಿನ ಬೀಜಗಳನ್ನ....
ಮತ್ತೆ ಮೊಳಕೆಯೊಡೆಸಬಲ್ಲವು,
ಅನಗತ್ಯ ಸೊಕ್ಕಿ ಸುರಿದರೆ ಮಾತ್ರ
ಮಧುರಭಾವಗಳೆಲ್ಲ ಮುಲಾಜಿಲ್ಲದೆ....
ಕೊಚ್ಚಿ ಹೋಗೋದು ಮಾತ್ರ ಖಾತ್ರಿ/
ಗಾಬರಿಯ ಚಿನ್ಹೆ ಮುಖದ ಮೇಲಿಲ್ಲ ನಿಜ
ಆದರೆ ಮನದೊಳಗಿನ ಅನುಕ್ಷಣದ ಆತಂಕದ ಗಾಬರಿಯನ್ನ....
ನಿನ್ನ ಹೊರತು ಇನ್ಯಾರ ಎದುರೂ ಸಹ
ನಾನು ವ್ಯಕ್ತ ಪಡಿಸಲಾರೆ,
ಕಣ್ಣು ಕನವರಿಸುವ ಕನಸುಗಳೆಲ್ಲ ಸಾಕಾರವಾಗುವಂತಿದ್ದರೆ
ಬದುಕಿನ ಪ್ರತಿ ಪುಟಗಳೂ....
ಮುತ್ತಿನ ಮಣಿಗಳಂತಹ ಅಕ್ಷರಗಳಿಂದಲೆ ಬರೆದಿರಲಾಗುತ್ತಿತ್ತು.//

No comments: