25 July 2013

ರೋಡೆ ಇಲ್ಲ!, ಇಳಿ ಅಂದ್ರೆ ರಾಧಿಕ ಇಳಿಯೋದಾದ್ರೂ ಎಲ್ಲಿಗಣ್ಣಾ?!



ಕೆರೆಗಳ ಊರಾಗಿದ್ದ ಬೆಂಗಳೂರಿಗೆ ಮತ್ತೆ ಆಳುವ ಮಂದಿಯ ಕೃಪೆಯಿಂದ ಹಳೆಯ ಕಳೆ ಬಂದೈತೆ. ಬಿದ್ದ ಹನಿ ಮಳೆಗೂ ಊರೆಲ್ಲ ಕೆರೆಗಳೆ ಲಕಲಕಿಸುತ್ತೈತೆ. ಕಾರಿನಡಿಗೆ ನಾಯಿ ಕುನ್ನಿ ಬಂದರೆ ಅಯ್ಯೋ ಅನಿಸೋದತ್ಲಾಗಿರಲಿ ಇಲ್ಲಿ ಹಡಗಿನಂತ ಕಾರೊಳಗೆ ಕೂತವನದ್ದೂ ರೋಡಿಗಿಳಿದ ಕೂಡ್ಲೆ ನಾಯಿ ಪಾಡಾಗ್ತೈತಣ್ಣೋ. ಇನ್ನು ಸುಡುಗಾಡು ಬೈಕು ಬಿಡೋರಂತೂ ಆಳುವವರನ್ನ ನಿತ್ಯ "ಮಾತೃಭಾಷೆ"ಯಿಂದಲೆ ಸಿಕ್ಕಸಿಕ್ಕ ಸಿಗ್ನಲ್ನಲ್ಲಿ ಬೈದು ಮುಂದೆ ಸಿಗುವ ಗುಂಡಿಯನ್ನ ಹಾರಕ್ಕೆ ತಮ್ಮ ತಮ್ಮ ಗುಂಡಿಗೆಯನ್ನ ಗಟ್ಟಿ ಮಾಡ್ಕೊಳ್ಳದು ಕಾಣಕ್ ಸಿಗ್ತೈತೆ.


ಇಧಾನಸೌಧದಲ್ಲಿ ರಣ್ಣ, ರಪ್ಪ, ರಯ್ಯ ಯಾರು ಬಂದು ಕುಂತ್ರೂ ನಾವು ನೀವು ದಿನನಿತ್ಯ ಗುಂಡಿಯಿಂದ ಗುಂಡಿಗೆ ಹಾರೋ ತಾಪತ್ರಯ ತಪ್ತೈತೇನಣ್ಣೋ? ಅವ್ರುಗೇನು ಬೇರೆ ಕೇಮೆ ಹೇಳಿ, ಬೇಕಾದಾಗ ಬೇಕಾದ್ ಕಡೆ ಒಂಟೋಗಕ್ಕೆ ಇನ್ನೂ ತನ್ನ ಇಮಾನದ ಡ್ರೈವರ್-ಕ್ಲೀನರ್ ಗಳಿಗೆಲ್ಲ ಸಂಬ್ಳಾ ಕೊಡಕಾಯ್ದೆ ಇದ್ರೂ ಅದೇ ಇಮಾನದ ಚಂದುಳ್ಳಿ ವೇಟರ್ ಗಳ ಜ್ಯೊತೆ ಗೋವಾ ಟ್ರಿಪ್ಪಾಕ್ಕೊಂಡು, ಅವ್ರ ಸೊಂಟ ಸವರ್ ಕೊಂಡ್ ಹೊಸವರ್ಸದ ಒಸಾ ಒಸಾ ಕ್ಯಾಲೆಂಡರ್ ಪೊಟೋ ಹೊಡ್ಸಾದ್ರಲ್ಲೆ ಸ್ಯಾನೆ ಬಿಜಿಯಾಗಿರೋ ಮಲ್ಯ ಸಾಹೆಬ್ರ ಕಂಪಿಣಿ ಬಿಟ್ಟಿರೋ ಎಲಿಕಾಪ್ಟರ್ ಐಯ್ತೆ. ಅಂಗೂ ರಸ್ತೆ ಮ್ಯಾಲೆೋಗ್ಲೇ ಬೇಕಾಯ್ತದೆ ಅನ್ನೋ ದರಿದ್ರ ಬಂದ್ರೆ ಅದ್ಯಾರೋ ಬೀದರ್ ಕಡೆಯ ಕಳ್ಳನನ್ನ "ಮಕ್ಕಳ ಪಕ್ಸ"ದ ಪಕ್ಕ ಬದ್ಮಾಸ್ ಸಾಸ್ಕಾ "ನೈಸಾ"ಗಿ ಕಾಸಿನ "ಏಣಿ" ಮೇಲೆ ನಿಂತೆ ಮಾಡಿಸ್ ಕೊಟ್ಟಿರೋ ಸಿಮೆಂಟ್ ರೋಡಯ್ತೆ. ಇಂಗಾಗಿ ಈ "ತೆನೆ ಒತ್ತ ರೈತ ಮಹಿಳೆ"ಯ ಪಕ್ಸ ಇರ್ಲಿ, ನೀರೆಲ್ಲ ಸೀದೋಗಿರೋ "ಗರಟದ ಪಕ್ಸ"ದವ್ರೆ ಬರ್ಲಿ, ಎಲ್ರೂ "ರೋಡ್ ಮಾಡ್ಕೊಡ್ರಣ್ಣೋ" ಅಂದೇಟಿಗೆ ರಸ್ತೆ ಮೇಲೆ ನಡೆಯೊ ನಮ್ಮ ನಿಂಮ್ಮಂತವ್ರ ಕಿವಿಗೆ ತಂದ್ ಮಡ್ಗಾದು "ಕಮಲ"ದ ಊವನ್ನೆಯ. ಗೆದ್ ಮೇಲೆ ಕೊಡಾದು ತಮ್ಮ ಎಡ "ಕೈ"ನೇಯ. ಎಲೆಕ್ಸನ್ ಆದ್ ಮ್ಯಾಕೆ ತಮ್ಮ ಭವ್ಯ ಭವಿಸ್ಯಕ್ಕೆ ಚೂರೆ ಚೂರು ಉಳಿತಾಯ ಮಾಡ್ಕಳಾದ್ರಲ್ಲಿ ಅವ್ರೆಲ್ಲ ಸ್ಯಾನೆ ಬಿಜಿ ಆಗವ್ರೆ.


ಇನ್ನು "ಕೈ" ಪಾರ್ಟಿ ಸರ್ಕಾರದ ನಮ್ ಸಿದ್ರಾಮಣ್ಣನೋ. ಈಗ ಮಾಡಿರೋ ರೂಪಾಯಿಗೊಂದ್ ಕೇಜಿ ಅಕ್ಕಿಯ "ಅನ್ನಭಾಗ್ಯ" ಕೊಟ್ಟು ತಿಂಗ್ಳಾ ತಿಂಗ್ಳಾ ಅಕ್ಕಿ ತಗೊಳಕ್ಕೆ ಹೋಗವ್ರಿಗೆ ಸ್ಯಾನೆ ಚಿಲ್ರೆ ಪ್ರಾಬ್ಲಂ ಆಗಿ ತಲೆ ಕೆಟ್ ಹೋಗಿ, "ಈ ಕೇಮೆನೆ ಬ್ಯಾಡ ಕಣ್ಲಾ ಬುಡತ್ಲಾಗೆ" ಅಂತ ಈಗ ರೇಸನ್ ಕಾರ್ಡ್ ಜೊತೆಗೆ ತಮ್ ತಮ್ಮ ಕ್ರೆಡಿಟ್ ಕಾರ್ಡುನ್ನೂ ಹೊತ್ಕಂಡೆ ಸೊಸೈಟಿಗೆ ಓಗೋ ಅಂಗ್ ಮಾಡೈತೆ. ಇದೂ ಸಾಲ್ದು ಅಮ್ತಾ ಆಲು ಕರ್ದು ಸೊಸೈಟಿಗೆ ಆಕೋವ್ರಿಗೆ ನಾಕ್ ನಾಕ್ ರೂಪಾಯಿ ಪ್ರೋತ್ಸಾಹ ಧನ ಕೊಟ್ಟು, ಆ ಆಸೆಗೆ ಅವ್ರು- ಅದೇ ನಂ ಅಳ್ಳಿ ರೈತ್ರು ಎರ್ರಾಬಿರ್ರಿ ದನಿನ್ ಕೆಚ್ಲು ಇಂಡಿ ಇಪ್ಪೆ ಮಾಡಿ ತಂದ್ ಸೊಸೈಟಿಲಿ ಸುರ್ಯೋ ಆಲನ್ನ ಊರ್ ತುಂಬ ಮಕ್ಳಿಗೆ ಪುಕ್ಸಟ್ಟೆ ಕುಡ್ಸೋ "ಆಲು ಭಾಗ್ಯ" ಮಾಡೆ ಬುಡ್ತೀನಿ ಅಮ್ತಾ ಟೊಂಕ ಕಟ್ಕಂಡು ನಿಂತಯ್ತೆ. ಅಂಗೆ ಅದೆ ಮಕ್ಳ ಅಲ್ಕಾ ಅಪ್ಪಂದ್ರುಗೆ ಒಂದು "ಅಲ್ಕೋ ಆಲು ಭಾಗ್ಯ"ನೂ ಮಾಡಿಸಿಕೊಟ್ರೆ ಈಯಪ್ಪನ್ ಗಂಟೇನಾದ್ರೂ ಸವೀತೈತಾ ಅಂತ!


ಅದೆಲ್ಲ ಆಳಾಗಿ ಓಗ್ಲಿ ಒಂದೀಟು ಕೇಂದ್ರ ಸರ್ಕಾರನಾರೂ ಕಣ್ ಬಿಟ್ ನೋಡ್ತೈತಾ ಅಂತ ತಿಥಿ ಮನೆ ಮುಂದೆ ಬರಗೆಟ್ಟು ಕೂತ ಕಾಗೆ ತರ ಬಾಯ್ ಬಾಯ್ ಬುಟ್ಕೊಂಡು ಕಾದ್ರೆ ಆ ಒಟ್ಟೆ ತುಂಬಿದ್ ಜನ್ಗೊಳು ದಿನಕೊಂದೀಟು ರೇಟ್ ಜಾಸ್ತಿ ಮಾಡಿ ಇದೇ "ಪೆಟ್ರೋಲು ಭಾಗ್ಯ" ಕಣ್ರಯ್ಯ ಅಂತ ನಮ್ಮೆಲ್ರ ಕಿವಿ ಮೇಲೆ ನಿತ್ಯ ಒಸಾ ಒಸಾ ಊ ಇಡ್ತವ್ರೆ. ಇತ್ಲಾಗೆ ರೋಡೂ ಇಲ್ಲ- ಅತ್ಲಾಗೆ ಇರೋಬರೋ ಕಾಸೆಲ್ಲ ಪೆಟ್ರೋಲಿಗೆ ಖರ್ಚಾಗಿ ವಾರಕ್ಕೊಂದಪ ಬಾಡೂ ಇಲ್ಲ. ನಮುಗ್ ಬಂದ ದುರ್ಗತಿ ಯಾರ್ಗೂ ಬರ್ಬಾರ್ದಪ್ಪ ಸಿವ್ನೇ. ಯಣ್ಣೋ ಸಿದ್ರಾಮಣ್ಣೊ "ಹುಂಡಿ" ಹಂಚಾದು ಆಮ್ಯಾಕೆ, ಮೊದ್ಲು "ಗುಂಡಿ" ಮುಚ್ಸಿ ಪುಣ್ಯಾ ಕಟ್ಕೊಳ್ಳಣ್ಣೊ.

No comments: