21 July 2013

ಕೆಲವು ಭಾವಗಳು ಮಾತಿಗಿಂತ ಮೌನಗಳಲ್ಲೆ ಅತ್ಯಾಪ್ತ....

ಹೇಳಲಾಗದ ಹಲವು ಪಿಸುಮಾತುಗಳು
ಎದೆಯಾಳದ ಮೌನದಲ್ಲಿ ಹಾಗೆಯೆ ಉಳಿದು ಹೋಗಿ....
ಹಿಡಿತ ಮೀರಿದ ಕಂಬನಿಯ
ಅವ್ಯಕ್ತ ಧಾರೆಗಳಾಗಿ ಆಗಾಗ ಕಾಡುತ್ತವೆ,
ಕಣ್ಣ ಖಜಾನೆಗೆ ಬಿದ್ದ
ತುಂಬಲಾಗದ ತೂತಿನಿಂದ ಹೊರ ಸುರಿದದ್ದು....
ಕೇವಲ ನೋವಿನ ಹನಿಗಳ ಸಿರಿ ಸಂಪತ್ತು/
ಸದಾ ನೆನಪುಗಳ ಕಿರುಬೆರಳ ಆಸರೆಯಲ್ಲಿ
ಅಪರಿಚಿತ ಹಾದಿಯುದ್ದ ಹೆಜ್ಜೆ ಹಾಕುವಾಗ....
ನೀನೂ ಸಹ ಅಪ್ರತ್ಯಕ್ಷವಾಗಿ ಜೊತೆಯಾಗಿರುವಾಗ
ನನಗೆ ಅಂತ ಆತಂಕವೇನಿಲ್ಲ,
ಮತ್ತೆ ಹೊರಟಲ್ಲಿಗೆ
ಮರಳಿ ಬರುವ ಹಾದಿಯಂಚಿನಲ್ಲಿ....
ಕೈ ಬೀಸುತ್ತ ಹಾಗೆಯೆ ಹೋಗುವಾಗಿನಂತೆ
ನೀ ನಿಂತಿರಲಿ ಅನ್ನುವ ಮನದ ದುರಾಸೆಗೆ ಮದ್ದಿಲ್ಲ.//


ದಿನದ ತುಂಬಿದ ತೊರೆ
ನಿತ್ಯ ನೋವಿನ ನೆರೆ ಹೊತ್ತೆ ಸೊಕ್ಕಿ ಹರಿಯುವಾಗ....
ಹುಟ್ಟಿದ ಹೊಸ ಹಗಲಿನ ಹೆಗಲಿನ ಮೇಲೂ
ನಾಳೆಯ ದಡವನ್ನ ಮುಟ್ಟಿಸುವ ಘನ ಹೊಣೆಯಿದೆ,
ಜೋರು ಮಳೆಯ ಹಿನ್ನೆಲೆ ಸಂಗೀತದ ಜೊತೆಗೆ
ಸ್ವಪ್ನಗಳ ಸಾದೃಶ್ಯವಿಲ್ಲದಿರುತ್ತಿದ್ದರೆ
ಕಳೆದಿರುಳು ಇಷ್ಟೊಂದು ಆಪ್ತವಾಗುತ್ತಿರಲಿಲ್ಲ/
ಕಾರಣವಿಲ್ಲದೆ ಹುಟ್ಟುವ ಕನಸಿನ ಚುಂಗು ಹಿಡಿದು
ಆಶಾವಾದ ಹೊತ್ತು ಸಾಗುವ ಮನಸಿಗೆ....
ನಿರೀಕ್ಷೆಯ ಹೋಗಿ ಮುಟ್ಟುವ ಗುರಿಯಿದೆ,
ಕೂಡಿಟ್ಟ ಕನಸುಗಳನ್ನೆಲ್ಲ ಮುಕ್ತವಾಗಿಸಿ
ಮನ ಬಂಧನದಿಂದಾಚೆಗೆ ಒಂದೊಂದಾಗಿ ಹಾರಿ ಬಿಟ್ಟಾಗ....
ಅರಳೆಯ ಪುಂಜದಂತೆ ಅವು ಸ್ವಚ್ಛಂದವಾಗಿ ತೇಲುವುದನ್ನ
ಕಾಣುವುದೆ ಒಂದು ವಿಮುಕ್ತ ಸುಖ.//


ಮೌನವನ್ನೆ ಹೊದ್ದ ಭೂಮಿಯ ಮೇಲೆ
ವಾಚಾಳಿ ಮೋಡದ ಕೀಟಲೆಯ ದಾಳಿ....
ಸುರಿಯುತ್ತಿರೋ ಪ್ರತಿ ಹನಿ ಮಳೆ,
ಗಾಳಿಗಿಂತ ನೀರಿನ ತೂಕ ಜಾಸ್ತಿ
ಆದರೂ ಒಲವಲ್ಲಿ ಹೃದಯ ಹಗುರಾಗಿ ತೇಲುವಂತಾದಾಗ....
ಮೋಡದೊಳಗಿನ ಘನ ಹನಿಗಳೂ
ಆಗಿ ಹೋಗುತಾವೆ ಮರುತನೆದೆಯ ಆಸ್ತಿ/
ಕಾತರದ ಕರೆಗಾಗಿ ಆತರಿಸುವ
ಮನದ ಮೂಲೆಯಲ್ಲಿ....
ಮೌನದ ಸಾಮ್ರಾಜ್ಯ ಚಿರವಾಗಿ ಮನೆ ಮಾಡಿದೆ,
ಮೋಹಕ ಸ್ವಪ್ನಗಳಿಗೆ ರಹದಾರಿಯಾಗುವ
ಕತ್ತಲ ದಾರಿಯ ಹೊರಳಲ್ಲಿ....
ಅನಾಥ ಕನಸೊಂದು
ಯಾರೋ ಆಪ್ತರ ಹಾದಿಯನ್ನೆ ಹಗಲಿರುಳೂ ಕಾಯುತ್ತಿದೆ.//


ಗಾಳಿಗೆ ತೊನರಿ ಕಟ್ಟಕಡೆಯ ಹನಿಯನ್ನುದುರಿಸಿ
ಚಿಂತಾಮುಕ್ತವಾದ ಹಸಿರೆಲೆಯ ಹೃದಯಕ್ಕೆ....
ಆ ನೀರಹನಿಯ ತಂಪು ತುಸು ದಾಟಿದೆ,
ಕವನದ ಕಚ್ಚಾ ಸಾಲುಗಳಲ್ಲಿ
ಕಳೆದು ಹೋಗುವ ಮಧುರಭಾವಗಳಿಗೆ ಮನ ಮಿಡಿದಾಗಲೆಲ್ಲ....
ಒಂಥರಾ ಮಳೆಯಲ್ಲಿ ಬೆತ್ತಲೆ ತೋಯ್ದಂತ ಆಹ್ಲಾದ ಉಕ್ಕುತ್ತದೆ/
ನೋವಿನ ಹನಿಗಳೆಲ್ಲ
ನಯನಗಳಲ್ಲಿ ಮಡುಗಟ್ಟಿ....
ಮನಸೊಳಗೆ ಮುದುಡಿದಾಗ ಸ್ವಪ್ನ ಸುಮಗಳ ಬುಟ್ಟಿ
ಸಂಕಟ ಮಾತ್ರ ಬಾಳಿನುದ್ದ ಗಟ್ಟಿ,
ಕರಗಿ ಕರಗಿ ನೀರಾಗಿ ಮನದ ದುಗುಡವೆಲ್ಲ
ಹರಿದು ಹೋದ ಮೇಲೂ....
ನೋವಿನ ಕೊನೆ ಹನಿ ಮನ ಮರದ ಕೊಂಬೆಯಿಂದ
ಇನ್ನೂ ಎಡೆಬಿಡದೆ ತೊಟ್ಟಿಕ್ಕುತ್ತಿದೆ.//

No comments: