19 July 2013

ಮನದ ಮೌನದಾಲಾಪ.....

ಎಡೆಬಿಡದೆ ಆಗಿನಿಂದ ಹನಿಯುತ್ತಿರುವ
ಮಳೆಯ ದನಿಯಲ್ಲಿ ವಿವರಿಸಲಾಗದ ಇಂಪಿದೆ....
ನೆಲವ ಮುದ್ದಿಸುವಂತೆ ಸುರಿಯುತ್ತಿರುವ
ಅದರ ಹನಿಹನಿಯಲ್ಲೂ ಬಚ್ಚಿಟ್ಟ ನಿರ್ವಾಜ್ಯ ಒಲವಿನ ತಂಪಿದೆ,
ಕರಗಿದ ಕಪ್ಪು ಮೋಡಗಳು
ಸುರಿಸಿದ್ದು ಸಂಕಟದ ಹನಿಗಳನ್ನೋ....
ಇಲ್ಲಾ ಅವು ಸಂತಸದ್ದೋ?
ಅನ್ನುವ ನಸು ಗೊಂದಲ ತುಸು ಜಾರಿಯಲ್ಲಿದೆ/
ಹೀಗೆ ನಾ ಕೂತು ಮನದ ಆಲಾಪಗಳನ್ನೆಲ್ಲ
ನನ್ನ ಪಾಡಿಗೆ ನಾನೆ....
ಯಾರ ಅನುಮತಿಗೂ ಕಾಯದೆ ಹಾಡುತ್ತಿರುತ್ತೇನೆ,
ನೀನೂ ಯಾರಿಲ್ಲದ ಸಂಜೆಗಳ ಒಂಟಿತನದಲ್ಲಿ
ಇವನ್ನ ಎದೆತುಂಬಿಕೊಳ್ಳುತ್ತಿರು.....
ಹೀಗೆ ಸಮಯ ಸುಮ್ಮನೆ ಸರಿದು ಹೋಗಲಿ.//


ನೆನಪಿನ ನಾವೆಯೇರಿ ಕುಳಿತ ಮೇಲೆ
ನೆಮ್ಮದಿಯ ತೀರವನ್ನ ಹೋಗಿ ಸೇರಿಯೇ ತೀರುವ....
ಖಚಿತ ಆಶಾವಾದ ಖಂಡಿತ ಇರೋದಿಲ್ಲ,
ಒಳಗಿನ ಗುಟ್ಟು ಬಿಟ್ಟು ಕೊಡದೆ
ಅತಿ ಸಹಜವಾಗಿ ಕೊನೆಯ ಕ್ಷಣದವರೆಗೂ....
ನೀನಿತ್ತಿದ್ದ ಒಂದಾಗಿ ನಡೆವ ಅತ್ಯದ್ಭುತ ನಟನೆಗೆ
ನಿನ್ನ ಹೊರತು ಈ ಇಡೀ ಜಗತ್ತಿನಲ್ಲಿ ಇನ್ಯಾರೂ ಸರಿಸಾಟಿಯಾಗಲಾರರು/
ಅದರ ಹನಿ ಅರಿವಿಲ್ಲದೆ ಮೂಕ ಪಶುವಿನಂತೆ
ಅನುಗಾಲ ನಿನ್ನ ನಾ ನಂಬಿದ್ದೆ....
ಈಗಲೂ ಆ ಜೊಳ್ಳು ನಂಬಿಕೆಯ ಆಸರೆಯಲ್ಲಿಯೆ
ಬಾಳು ಇನ್ನೂ ಸವೆಯುತ್ತಿದೆ,
ಕಾಗದದ ದೋಣಿಗಾದರೂ ಕೆಲಕಾಲ
ಒಲವ ಪ್ರವಾಹದಲ್ಲಿ ತೇಲುವ ಭಾಗ್ಯವಿರುತ್ತದೆ....
ಆದರೆ ಪಾಪಿ ನನ್ನದು ಅದಕ್ಕಿಂತ ತುಸು ಕಡಿಮೆ.//


ಮತ್ತರಳಿದ ಬೆಳಕಿನ ಸುಮದ ಸಂಭ್ರಮದಲ್ಲಿ
ಅದೇಕೋ ಬಯಸಿದರೂ ಭಾಗಿಯಾಗಲಾಗುತ್ತಿಲ್ಲ....
ಒಳಗಿನ ಕಾಡುವ ಸಂಕಟವೆ
ಅದಕ್ಕೆ ನೇರ ಕಾರಣ ಅಲ್ಲವಾ?,
ಅಗ್ಗದ ಅಮಿಷಗಳಿಗೆ ಬಲಿಯಾಗದಿರಲು
ಮೌನಿ ಮನಕ್ಕೆ ತನ್ನದೆ ಆದ....
ಖಾಸಾ ಕಾರಣಗಳಿವೆ/
ಕರಗಿದ ಕನಸಿನ ಕುದುರೆಯ ಬೆನ್ನೇರಿ
ಕಣ್ಣೀರಾಗುವ ಮಾಸದ ಮೌನಕ್ಕೆ....
ಸುಮ್ಮನೆ ಸರಿದ ಕಾಲದ
ಯಾವುದೇ ಪರಿವೆಯಿಲ್ಲ,
ತೊಳೆದು ಹೋದ ಕಾಡಿಗೆಯ ಕಪ್ಪು ಕಲೆಗಳು ಮಾತ್ರ
ಸ್ವಪ್ನಗಳ ಸಾವಿನ ಕುರುಹಾಗಿ....
ಕೆನ್ನೆಯ ಮೇಲೆ
ಹಾಗೆಯೆ ಉಳಿದುಕೊಂಡಿವೆ.//


ಪ್ರತಿಬಿಂಬದ ಮೂಲ ಸೆಲೆಯೇ ಮಂಕಾಗಿರುವಾಗ
ಬಾಳು ಒಂದು ಬರ್ಬರ ಕಥೆಯಷ್ಟೆ ಮತ್ತಿನ್ನೇನಿಲ್ಲ....
ಪ್ರಮಾಣಿಸಿ ನೋಡಿ ಬೇಕಾದರೆ
ಪ್ರಾಮಾಣಿಕ ಸ್ಪಂದನಕ್ಕೆ ಸಂಕಟ ಎಂದಿಗೂ ತಪ್ಪದು,
ನಿರೀಕ್ಷೆಗಳು ಅಲ್ಪವಾಗಿದ್ದಾಗಲೆ
ಅದರ ಅಸಲು ಹಕ್ಕುದಾರರಿಗೆ....
ಅದೆಂದೂ ದಕ್ಕದು/
ಕದಡಿದ ಮೌನ ಸರೋವರದಲ್ಲೆದ್ದದ್ದು
ಕೇವಲ ಈಡೇರದ ಮನಸಿನ ಆಸೆಗಳ ರಾಡಿ.....
ತಂತಿ ಹರಿದ ವೀಣೆಗೆ ಮತ್ತದನ್ನ ಸುರಿದು
ನಾದ ಹೊಮ್ಮಿಸಬಹುದು....
ತಂತಿಯೇ ಇಲ್ಲದಂತಾಗ ಮಾತ್ರ
ಕಡೆಯವರೆಗೂ ಮಿಡಿಯುವ ಭಾಗ್ಯವಿಲ್ಲ.//

No comments: