09 September 2010

ಪಂಚರ್ ಟೈರಿನ ರಿಸ್ಕೀ ಪಯಣ...

ಉತ್ತಮ ಚಿತ್ರವೊಂದಕ್ಕೆ ಬೇಕಾದುದು ಬಿಗಿಯಾದ ಚಿತ್ರಕಥೆಯೆ ಹೊರತು ಕಥೆಯಲ್ಲ! ಎಂಬ ವಾದವೊಂದಿದೆ.ಹೊಸ ಹುಮ್ಮಸ್ಸಿನ,socalled ಫಾರ್ಮುಲಗಳಿಗೆ ಜೋತು ಬೀಳದ ಚಿತ್ರಗಳದ್ದೆಲ್ಲ ಅದೆ ಮೂಲ ಮಂತ್ರ.'ಪಂಚರಂಗಿ'ಯ ಮೂಲಕ ಯೋಗರಾಜ ಭಟ್ಟರು ಪಠಿಸುತ್ತಿರೋದೂ ಕೂಡ ಅದನ್ನೆ.ಇಲ್ಲಿ ಕಥೆಯ ಹಂಗಿಲ್ಲ,ಎಲ್ಲವನ್ನೂ-ಎಲ್ಲರನ್ನೂ ಲೇವಡಿ ಮಾಡುವ ಮಾತಿನ ದಭದಭೆಯಿದೆ.ಚಿತ್ರ ಕಥೆ ಸಶಕ್ತವಾಗಿದೆ.ಸಿರಿಲ್ಯಾಕ್ ಮಾಡಲ್ ದಿಗಂತ-ತುಂಡುಚಡ್ಡಿ ತೊಟ್ಟ ನಿಧಿ ಸುಬ್ಬಯ್ಯ ಭಟ್ಟರ ತಾಳಕ್ಕೆ ತಕ್ಕ ಹೆಜ್ಜೆ ಹಾಕಿದ್ದರೆ,ಅವರ ಲೇಖನಿಯ ವ್ಯಂಗ್ಯದ ಮೊನಚಿಗೆ ರಾಜು ತಾಳಿಕೋಟೆ-ಸುಧಾಕರರ ನಾಲಗೆ ಸಾಣೆ ಹಿಡಿದಿದೆ.ಪಡ್ಡೆಗಳ ಪರ್ಫೆಕ್ಟ್ ಸ್ಲಾಂಗ್ ಆಗಲು ಲಾಯಕ್ಕಾಗಿರುವ ವಿಚಿತ್ರ ಹಾಡು'ಗಳು' ಇವೆಲ್ಲವನ್ನೂ ಸೇರಿಸಿ ತುಂಬಾ ಸರಳವಾಗಿ ಯೋಗರಾಜ ಭಟ್ಟರು ಪ್ರೇಕ್ಷಕರನ್ನು ಯಾಮಾರಿಸಿದ್ದಾರೆ.ಒಟ್ಟಿನಲ್ಲಿ ಅವರ ಪ್ರಕಾರ ಲೈಫು ಇಷ್ಟೇನೆ!

ಆಸಕ್ತಿಕರ ಸಂಗತಿಯೇನೆಂದರೆ ಲೈಫು ಇಷ್ಟೆ ಅಲ್ಲದೆ ಇನ್ನೂ ಇರೋದರತ್ತ ಭಟ್ಟರ ಜಾಣ ಮರೆವು.ಕನ್ನಡದ ನಿರ್ದೇಶಕರಾದ ಭಟ್ಟರು ಹಾಲಿವುಡ್ ತಳಿಯ ಹಿಂಗ್ಲಿಶ್ ನಿರ್ದೇಶಕಿ ಮೀರಾ ನಾಯರ್ ಚಿತ್ರಗಳನ್ನ ನೋಡೋದು ತಪ್ಪೇನಲ್ಲ.ಆದರೆ ಇಂಪೋರ್ಟೆಡ್ ಮಾಲಿನ ಮೇಲೆ ತನ್ನ ಹೆಸರನ್ನು ಬೆರೆದು ಲೋಕಲ್ ಮಾರುಕಟ್ಟೆಗೆ ಸ್ಮಗ್ಲಿಂಗ್ ಮಾಡೋದು ಮಾತ್ರ ಹಾಸ್ಯಾಸ್ಪದ.ಯೋಗರಾಜ ಭಟ್ಟರಿಗೆ ಇಂದು ಬಿದ್ದ ಕನಸು ಮೀರಾ ನಾಯರ್ ರಿಗೆ ಹತ್ತಿಪ್ಪತು ವರ್ಷಗಳ ಹಿಂದೆಯೆ ಬಿದ್ದಿರೋದು ಬಹುಷಃ ಕಾಕತಾಳೀಯವಾಗಿರಲಾರದು! ಹತ್ತು ವರ್ಷದ ಹಿಂದಿನ 'ಮಾನ್ಸೂನ್ ವೆಡ್ಡಿಂಗ್'ಗೆ ಇಪ್ಪತ್ತೆರಡು ವರ್ಷ ಹಳತಾದ (ಆದರೆ ಇನ್ನೂ ಹಳಸಿರದ) 'ಮಿಸ್ಸಿಸಿಪ್ಪಿ ಮಸಾಲ' ಬೆರೆಸಿ ಭಟ್ಟರು ತೆರೆಗೆ ತಂದಿರುವ ಮಿಸಳಭಾಜಿಗೆ 'ಮುಂಗಾರಿನ ಮದುವೆ' ಎಂಬ ಪದಾನುವಾದದ ಶೀರ್ಷಿಕೆ ಸೂಕ್ತವಾಗಿ ಹೊಂದುತ್ತಿತ್ತು! ಆದರೆ ಭಟ್ಟರಿಗೆ 'ಪಂಚರಂಗಿ'ಯಾಗುವ ತವಕ.

ಉಗಾಂಡದ ಕಂಪಾಲದಲ್ಲಿ ಹುಟ್ಟಿ ಅಮೆರಿಕೆಯ ಬೋಸ್ಟನ್ ನಲ್ಲಿ ಬೆಳೆಯುವ 'ಮಿಸ್ಸಿಸಿಪ್ಪಿ ಮಸಾಲ'ದ ವಿಚಿತ್ರ ಹುಡುಗಿ ಇಲ್ಲಿ ನಾಯಕ ದಿಗಂತನಾಗಿ ಲಿಂಗಾಂತರವಾಗಿದ್ದಾರೆ,ಎಲ್ಲಿದ್ದರೂ ಅಚ್ಚ ಭಾರತೀಯ ಆಲದಮರಕ್ಕೆ ಜೋತುಬೀಳುವ ಗುಜರಾತಿ ಅಪ್ಪ ಅಮ್ಮ ಇಲ್ಲಿ ಕನ್ನಡದ ಅಪ್ಪ-ಅಮ್ಮನಾಗಿ ಪುನರಾವರ್ತನೆಯಾಗಿದ್ದರೆ. ಮದುವೆ ಅಲ್ಲಿಯೂ ಮುಖ್ಯ ಸಂಗತಿ,ಇಲ್ಲಿಯೂ ಕೂಡ.ಇನ್ನು ಪೋಷಕರ ಮಾತಿಗೆ ಎದುರಾಡುವ ಧೈರ್ಯವಿಲ್ಲದ ; ಅವರ ಇಚ್ಛೆಯಂತೆ ಬದುಕುವ ಅಲ್ಲಿನ ನಾಯಕಿಯ ದೊಡ್ಡಪ್ಪನ ಮಗ ಇಲ್ಲಿ ನಾಯಕನ ಖಾಸಾ ಅಣ್ಣ.ಮದುವೆ ಬಸ್ಸಿನ ಡ್ರೈವರ್ ಮನೆ ಕೆಲಸದವಳನ್ನ ಮೆಚ್ಚಿ ಮದುವೆಯಾಗೋದು ಸಹ ಕಳೆದ 'ಮಾನ್ಸೂನ್...'ನಲ್ಲೆ ಬಂದು ಹೋಗಿದೆ.ಅಲ್ಲಿ ನಗರದಿಂದ ಹೊರ ಹೋಗುವ ಕುಟುಂಬವನ್ನ ಇಲ್ಲಿ ಕರ್ನಾಟಕದ ಕರಾವಳಿಗೆ ತಂದು ಮುಟ್ಟಿಸಲಾಗಿದೆ.ಕಿಲಾಡಿ ಭಟ್ಟರು ಕಡಿಮೆ ಬಜೆಟ್ಟಿನಲ್ಲಿ ನಾಲ್ಕಾರು ಹಾಡುಗಳನ್ನ ತುರುಕಿಸಿ,ಅನಂತನಾಗ್-ಜಯಂತ್ ಕಾಯ್ಕಿಣಿ ಜೋಡಿಯನ್ನ ಪಾರ್ಟ್ ಟೈಮ್ ನಟರನ್ನಾಗಿಸಿ ಎರಡೂವರೆ ಘಂಟೆ ಬಿಟ್ಟೂ ಬಿಡದೆ ಕೆರೆದರೂ ಅವರ ಮಾತಿನ ಬಂಡಿ ಅದ್ಯಾಕೋ 'ಪಂಚರ್' ಆಗೋದರಿಂದ ತಪ್ಪಿಸಿಕೊಳ್ಳೋದರಲ್ಲಿ ವಿಫಲವಾಗಿದೆ.ಇಷ್ಟು ಶೀಘ್ರ ಅವರ ಬತ್ತಳಿಕೆ ಬರಿದಾದುದು ಅಚ್ಚರಿ ಹುಟ್ಟಿಸಿದರೆ ಅದಕ್ಕೆ ಚಿತ್ರ ಪ್ರೇಮಿ ಅವರ ಮೇಲಿಟ್ಟಿರುವ ಅತಿ ನಿರೀಕ್ಷೆಯೆ ಕಾರಣ.


ಪಾಲಿಗೆ ಬಂದದ್ದನ್ನೇ ಪಂಚಾಮೃತವೆನ್ನುವ ತಲೆಮಾರು ಈಗ ಇಲ್ಲದಿರುವುದನ್ನು ಅಪ್ಡೇಟ್ ಭಟ್ಟರು ಮರೆತಿರೋದು ದುರಂತ.ಹಾಗಂತ ಚಿತ್ರ ಪೂರ್ತಿ ಬರ್ನಾಸ್ ಏನೂ ಅಲ್ಲ.ಛಾಯಾಗ್ರಹಣ ಚನ್ನಾಗಿದೆ.ಮನೋಮೂರ್ತಿ ಮತ್ತೆ ತಮ್ಮ ಎಂದಿನ ಗುಂಗಿಗೆ ಮರಳಿದ್ದಾರೆ.ಒಂದು ಹಾಡಿನ ಹೊರತು ಕನ್ನಡದ ಧ್ವನಿಗಳು ಕಿವಿಗಳ ಮೇಲೆ ಹಿತವಾಗಿ ಬೀಳುತ್ತವೆ.ಮುಖ್ಯಪಾತ್ರಗಳೆ ನಗಿಸುವ ನೊಗ ಹೊತ್ತಿರುವುದರಿಂದ ಪ್ರತ್ಯೇಕ ಹಾಸ್ಯದ ಕಪಟ ನಾಟಕ ದುಃಸ್ವಪ್ನದಂತೆ ಕಾಡುವುದಿಲ್ಲ.ವಾಸ್ತವವಾಗಿ ಘಟಿಸುವ ಮೊದಲೆ ಚಿತ್ರೀಕರಿಸಿದ್ದರೂ ಭಟ್ಟರ ಕಾಮಿಸ್ವಾಮಿ ಮೀಮಾಂಸೆ ಸಮಕಾಲಿನತೆಗೆ ಹೆಚ್ಚು ಹತ್ತಿರವಾಗಿದೆ.ಒಟ್ಟಿನಲ್ಲಿ ಭಟ್ಟರ ಈ ಜಾಣ ಕನ್ನವನ್ನ 'ರಿಮೇಕ್' ಅನ್ನಬೇಕೋ ಇಲ್ಲ 'ರಿಮಿಕ್ಸ್' ಅನ್ನಬೇಕೊ? ಅನ್ನುವ ಗೊಂದಲ ಮಾತ್ರ ಚಿರಾಯು.

No comments: