22 March 2013

ತುಳುಗಾದೆ-೫೧


"ಏಪಲ ದೇವೆರೆ ಕೈತೆಲುಪ್ಪುನಾಯೆ ಮಾಮಲ್ಲ ಪಾಪಿಗೆ!"



{ ಊಟದಲ್ಲಿ ಉಪ್ಪಿನಕಾಯಿ ಇರಬೇಕು, ಆದರೆ ಉಪ್ಪಿನಕಾಯಿಯೆ ಊಟವಾಗಬಾರದು! ಅಂತೆಯೆ ತುಳುವರ ಪಾಲಿಗೆ ತುಳುನಾಡಿನಾದ್ಯಂತ ಹೆಜ್ಜೆಗೊಂದಂತೆ ಎಡೆವಿದಲ್ಲೆಲ್ಲಾ ಸಿಗುವ ಪುಣ್ಯ-ಪವಿತ್ರ ಕ್ಷೇತ್ರಗಳು! ಅವನ್ನ ಹತ್ತಿರದಲ್ಲೆ ಕಂಡು ಅಜೀರ್ಣವಾದ ಕಾರಣಕ್ಕೆ ಇರಬೇಕು ತುಳುವರಿಗೆ ಧಾರ್ಮಿಕ ಕ್ಷೇತ್ರಗಳ ಪರ್ಯಟನೆ ಒಂದು ಆದ್ಯತೆಯಲ್ಲ. ಇಂದಿನ ಕರುನಾಡಿನ ಕರಾವಳಿಯುದ್ದ ಹರಡಿರುವ ಅಸಂಖ್ಯ ಪುಣ್ಯಕ್ಷೇತ್ರಗಳನ್ನೊಮ್ಮೆ ನೆನೆದರೆ ಎದೆ ಧಸಕ್ಕೆನ್ನುತ್ತದೆ. ಇಡುಗುಂಜಿ, ಗೋಕರ್ಣ, ಶಿರಸಿ, ಸ್ವರ್ಣವಲ್ಲಿ, ಮುರ್ಡೇಶ್ವರ, ಕುಂಭಾಶಿ ಆನೆಗುಡ್ಡೆ, ಕೊಲ್ಲೂರು, ಮಂದಾರ್ತಿ, ಉಡುಪಿ, ಪಾಜಕ, ವರಂಗ, ಕಾರ್ಕಳ, ಮೂಡುಬಿದ್ರಿ, ಕೊಡ್ಯಡ್ಕ, ಕಟೀಲು, ಬಪ್ಪನಾಡು, ಕದ್ರಿ, ಮಂಗಳಾದೇವಿ, ಉಲ್ಲಾಳ, ಪೊಳಲಿ, ಧರ್ಮಸ್ಥಳ, ಶಿಶಿಲ, ಸೌತಡ್ಕ, ಉಪ್ಪಿನಂಗಡಿ, ಕುಕ್ಕೆ ಸುಬ್ರಮಣ್ಯ, ಮಧೂರು ಹೀಗೆ ಹತ್ತು ಮಾರಿಗೊಂದರಂತೆ ಗಣಪತಿಯಿಂದ ಹಿಡಿದು ಅವನಪ್ಪ ಮಂಜುನಾಥನ ಸಹಿತ ಅನೇಕ ದೇವಾನುದೇವತೆಗಳ ಪರಿವಾರ ಸಹಿತ ಪುಣ್ಯಕ್ಷೇತ್ರಗಳು ತ್ರಿವಳಿ ಜಿಲ್ಲೆಯಾದ್ಯಂತ ವ್ಯಾಪಿಸಿಕೊಂಡಿವೆ.


ಸಮಾನ್ಯವಾಗಿ ತುಳುವರು ತಮ್ಮ ಸಮೀಪವೆ ಇರುವ ಪುಣ್ಯಕ್ಷೇತ್ರಗಳ ಕುರಿತು ಅನಾಸಕ್ತರು. ತಮ್ಮ ಮನೆಗೆ ಸಮೀಪವೆ ಇದ್ದರೂ ಸಹ ಬಾಳಿನಲ್ಲಿ ಒಮ್ಮೆಯೋ, ಇಲ್ಲವೆ ಹೆಚ್ಚೆಂದರೆ ಎರಡು ಬಾರಿಯೋ ಅಂತಲ್ಲಿಗೆ ಸಂದರ್ಶಿಸಿ ಬಂದಿರುವ ತುಳುವರ ಸಂಖ್ಯೆಯೆ ಅಧಿಕ. ಹೀಗಾಗಿ ಮನೆಯ ಆಸ್ತಿಕ ಹಿರಿಯರು ತಮ್ಮ ಬೈಗುಳಗಳಲ್ಲಿ ಈ ಮಾತನ್ನ ಆಗಾಗ ಬಳಸುವುದುಂಟು. ಹೊರ ಊರುಗಳಿಂದ ಘಟ್ಟ ಇಳಿದು ಪ್ರಾವಾಹೋಪಾದಿಯಲ್ಲಿ ತುಳುನಾಡಿನಾದ್ಯಂತ ಸೊಕ್ಕಿ ಹರಿಯುವ "ಪಶ್ಚಿಮಘಟ್ಟದ ಪುಂಡು ನದಿಗಳಂತೆ" ನಿತ್ಯ ನುಗ್ಗಿ ಬರುವ ಭಕ್ತ ಕೋಟಿಯನ್ನ ಕಾಣುವಾಗ ನಮ್ಮ ಮನೆಗೆ ಸನಿಹವಿದ್ದರೂ ತಮ್ಮ ಮಕ್ಕಳು ಅಲ್ಲಿಗೆ ಭೇಟಿ ನೀಡುವಲ್ಲಿ ನಿರಾಸಕ್ತರಲ್ಲ ಅನ್ನುವ ಸಿಟ್ಟಿಗೆ ಈ ಮಾತು ಹಿರಿಯರ ಬಾಯಿಯಿಂದ ಹೊರ ಬೀಳುತ್ತದೆ.


ಅದರೆ ಈ ಮಾತನ್ನು ಕೇಳುವ ಕ್ಷಣದಲ್ಲೆಲ್ಲಾ ನಾನು ನನ್ನದೆ ಆದ ಹೊಸ ವ್ಯಾಖ್ಯಾನವೊಂದನ್ನ ಇದಕ್ಕೆ ನೀಡಿ ಅವರೊಂದಿಗೆ ವಾದಿಸುತ್ತಿದ್ದೆ. ಗಮನಿಸಿ ನೋಡಿ, ಸಾಮಾನ್ಯವಾಗಿ ಈ ಎಲ್ಲಾ ಪುಣ್ಯಕ್ಷೇತ್ರಗಳಲ್ಲಿ ವ್ಯಾಪಾರಕ್ಕೆ ಕುಳಿತ ವ್ಯಾಪಾರಿಗಳು ಲಾಭಕೋರರಾಗಿರುತ್ತಾರೆ. ತಾವು ಪಡೆಯುವ ಹಣದ ಮೌಲ್ಯಕ್ಕೆ ತಕ್ಕ ಗುಣಮಟ್ಟದ ಸರಂಜಾಮನ್ನ ಎಂದೂ ಮಾರದ ಇವರು ಭಕ್ತಿ ಪರವಶರಾದ ಗ್ರಾಹಕರನ್ನ ನಿರಂತರ ವಂಚಿಸಿ ಸುಲಿಯುತ್ತಿರುತ್ತಾರೆ. ಆಸೆ ಮಾನವರಿಗೆ ಇರುವುದು ಸಹಜ ಆದರೆ ಇಂತವರಲ್ಲಿ ದುರಾಸೆ ಮನೆ ಮಾಡಿರುವುದು ಕೇವಲ ದುರದೃಷ್ಟಕರ. ಇದು ಪುಣ್ಯಕ್ಷೇತ್ರಗಳ ಹೊಟೆಲು, ಹಣ್ಣು-ಕಾಯಿ, ಹರಕೆಯ ವಸ್ತುಗಳು ಎಲ್ಲದರ ಮಾರಾಟಕ್ಕೂ ಸರಿಯಾಗಿ ಅನ್ವಯವಾಗುತ್ತದೆ. ಇದನ್ನೆ ನಾನು "ದೇವರ ಹತ್ತಿರವಿರುವವರೆ ಮಹಾಪಾಪಿಗಳು!" ಎಂದು ವಿವರಿಸುತ್ತಿದ್ದರೆ. "ಅವರು ಭಕ್ತ ನಿಂದಕರು, ಹಾಗಂತ ಭಗವಂತ ಅವರನ್ನ ಸದಾ ತನ್ನ ಸನಿಹವೆ ಇಟ್ಟುಕೊಳ್ಳುತ್ತಾನೆ! 'ನಿಂದಕರಿರಬೇಕಯ್ಯ...' ಎಂದು ದಾಸರು ಹೇಳಿರುವುದೂ ಅದನ್ನೆ ಸಾಕು ನಿನ್ನ ಮೊಡಂಕು ಬಾಯಿಮುಚ್ಚು" ಎಂದು ಬಾಯಿ ಮುಚ್ಚಿಸಲಾಗುತ್ತಿತ್ತು. ಅದೇನೆ ಇದ್ದರೂ "ಕ್ಷೇತ್ರವಾಸಿ ಮಹಾ ಪಾಪಿ" ಎನ್ನುವ ಸಂಸ್ಕೃತ ಗಾದೆ ಹೊರ ಸೂಸುವ ಅರ್ಥವೂ ಇದೇನೆ.}


( ಏಪಲ ದೇವೆರೆ ಕೈತೆಲುಪ್ಪುನಾಯೆ ಮಾಮಲ್ಲ ಪಾಪಿಗೆ! = ಯಾವಾಗಲೂ ದೇವರ ಹತ್ತಿರವಿರುವಾತ ಬಹುದೊಡ್ಡ ಪಾಪಿಯಂತೆ!)






No comments: