25 March 2013

ತುಳುಗಾದೆ-೫೩











"ಉಪ್ಪಡ್ ದುಲಾಯಿ ಉಪ್ಪುನ ಪುರಿಲಾ ಸೈಯಂದೆ ಬದುಕುಂಡು"



{ ಕಷ್ಟ ನಷ್ಟಗಳ ಆಗರವಾದ ಬಾಳ ಪಯಣದ ಹಾದಿಯಲ್ಲಿ ನೊಂದ ಜೀವಕ್ಕೆ ಮರು ಉತ್ಸಾಹ ತುಂಬಿ ಅವರಲ್ಲಿ ಹೊಸ ಚೈತನ್ಯ ಮೂಡಿಸುವ ಹೊತ್ತಲ್ಲಿ ಬಳಸುವ ಭರವಸೆಯ ಮಾತಿದು. ತುಳುನಾಡಿನ ಇನ್ನಿತರ ಗಾದೆಗಳಂತೆ ಇದೂ ಕೂಡ ಇಲ್ಲಿನ ಗ್ರಾಮೀಣ ಜೀವನದ ಹಿನ್ನೆಲೆಯೊಂದಿಗೆ ಥಳುಕು ಹಾಕಿಕೊಂಡಿದೆ. ತಾಪ ತಟ್ಟಿದ ಬದುಕಿಗೆ ಇಂತಹ ಸಾಂತ್ವಾನದ ತಂಪು ಸುರಿವ ಮಾತುಗಳು ತುಸುವಾದರೂ ನೆಮ್ಮದಿ ತಂದು ಕೊಡುವುದರಲ್ಲಿ ಸಂಶಯವೆ ಇಲ್ಲ. ಇದು ಅವರನ್ನ ಮತ್ತೆ ಮೈಕೊಡವಿ ಮೇಲೇಳುವಂತೆ ಪ್ರೋತ್ಸಾಹಿಸುತ್ತದೆ.


"ಕುಚ್ಚಲಕ್ಕಿ ಗಂಜಿ"ಯನ್ನ ತುಳುನಾಡಿನ ರಾಷ್ಟ್ರೀಯ ತಿನಿಸನ್ನಾಗಿ ತಕರಾರಿಲ್ಲದೆ ಗುರುತಿಸಬಹುದು! ಸಾಮಾನ್ಯವಾಗಿ ತುಳುನಾಡಿನ ಬಡವ-ಬಲ್ಲಿದ, ಬ್ರಾಹ್ಮಣ-ಶೂದ್ರರೆನ್ನದೆ ಎಲ್ಲರ ದಿನದೂಟದ ಮೊದಲ ಪಾಳಿ ಗಂಜಿಯಿಂದಲೆ ಆರಂಭವಾಗುತ್ತದೆ. ತಮ್ಮ ಆರ್ಥಿಕ ಸಾಮರ್ಥ್ಯ ಹಾಗೂ ಜಾತಿಯ ಹಿನ್ನೆಲೆಯನ್ನ ಅನುಸರಿಸಿ ಗಂಜಿಯೊಂದಿಗೆ ತುಳುವರು ಉಪ್ಪಿನಕಾಯಿ, ತೆಂಗಿನಕಾಯಿ ಚಟ್ನಿ, ಹುರುಳಿ ಚಟ್ನಿ, ಎಳ್ಳಿನ ಚಟ್ನಿ, ಸುಟ್ಟ ಬದನೆ ಚಟ್ನಿ, ಒಣ ಮೀನಿನ ಚಟ್ನಿ, ಚಿಗಳಿ ಚಟ್ನಿ, ಒಣ ಸಿಗಡಿ ಚಟ್ನಿ ಹೀಗೆ ತರತರದ ಮೇಲೋಗರವನ್ನ ಗಂಜಿಯೊಂದಿಗೆ ನಂಚಿಕೊಂಡು ಊಟವನ್ನ ಮುಗಿಸುತ್ತಾರೆ. ಬಡತನದ ಕಾರಣ ಬಹುತೇಕ ಮಂದಿ ಇದರಲ್ಲಿ ಉಪ್ಪಿನಕಾಯಿಯ ಮೇಲೆಯೆ ಅವಲಂಬಿಸಿರುವುದು ವಿಶೇಷ. ತಾವು ಗೇಣಿ ಮಾಡುವ ಗುತ್ತಿನ ಮನೆಯ ಯಜಮಾನ್ತಿಯಿಂದ ಬೇಡಿ ಚಿಪ್ಪಿನಲ್ಲಿ ತಂದ ಮಾವಿನ ಅಪ್ಪೆಮಿಡಿಯ ಉಪ್ಪಿನಕಾಯಿ ಅವರ ಒಣ ಊಟದ ಏಕತಾನತೆಯನ್ನ ಸ್ವಲ್ಪವಾದರೂ ಮರೆಸುವಲ್ಲಿ ಯಶಸ್ವಿಯಾಗುತ್ತದೆ. ಈ ಉಪ್ಪಿನಕಾಯಿ ತಯಾರಿಕೆಯೂ ಒಂದು ಪಾಕಪ್ರಾವೀಣ್ಯತೆ. ಮೊದಲು ಕೂಯ್ಯಿಸಿದ ಅಪ್ಪೆ ಮಿಡಿಯ ಗೊಂಚಲಿನಲ್ಲಿ ಗಾಯವಾಗದ ಎಳೆಮಿಡಿಗಳನ್ನ ಬಿಡಿಸಿಕೊಳ್ಳಬೇಕು. ಅನಂತರ ಅದನ್ನ ಬೆಚ್ಚನೆ ನೀರಿನಲ್ಲಿ ತೊಳೆದು ಒಣಬಟ್ಟೆಯಲ್ಲಿ ಪಸೆಯಾರಿಹೋಗುವಂತೆ ಒರೆಸಿಕೊಳ್ಳಬೇಕು. ಅನಂತರ ಅದನ್ನ ಕೇವಲ ಕಲ್ಲುಪ್ಪು ಸುರಿದು ಭರಣಿಯಲ್ಲಿ ಹಾಕಿ ಗಾಳಿಯಾಡದಂತೆ ಕೆಲದಿನ ಬಾಯಿ ಕಟ್ಟಿ ಇಡಬೇಕು. ಅನಂತರ ತನ್ನೆಲ್ಲ ನೀರು ಬಸಿದುಕೊಂಡು ಬಿಗಿಯಾದ ಮಿಡಿಗಳಿಂದ ಸೋರಿದ ಉಪ್ಪುನೀರನ್ನೆ ಬಳಸಿ ಕೆಂಪು ಒಣ ಮೆಣಸು ಜೀರಿಗೆ ಸಾಸಿವೆ ಮುಂತಾದ ಸಾಂಬಾರಗಳನ್ನ ಸೇರಿಸಿ ನುಣ್ಣಗೆ ರುಬ್ಬಿದ ಮಸಾಲೆ ತಯಾರಿಸಿ ಅದಕ್ಕೆ ಇಂಗಿನ ಒಗ್ಗರಣೆ ಕೊಟ್ಟು ಈ ಪಕ್ವವಾದ ಮಿಡಿಗಳಿಗೆ ಬೆರೆಸಿ ಬಾಯಿಯನ್ನ ಬಿಗಿಯಾಗಿ ಕಟ್ಟಿಟ್ಟರೆ ಮತ್ತೊಂದು ವರ್ಷದ ಖರ್ಚಿಗೆ ಬೇಕಾದಷ್ಟು ಉಪ್ಪಿನಕಾಯಿ ಲಭ್ಯ.



ಹೀಗಂತ ಅದನ್ನ ಎಲ್ಲರೂ ಹಾಕುವಂತೆಯೂ ಇಲ್ಲ!. ಕೈಗುಣಕ್ಕನುಗುಣವಾಗಿ ಕೆಲವರಷ್ಟೆ ಹಾಕುವ ಉಪ್ಪಿನಕಾಯಿ ಕೊನೆಯ ಮಿಡಿ ಖರ್ಚಾಗುವವರೆಗೂ ತಾಜಾ ಆಗಿದ್ದು ಕೆಡದಂತಿರುತ್ತದೆ. ಕೈಗುಣ ಕೆಟ್ತವರು ಕೈಸೋಕಿಸಿದ ಉಪ್ಪಿನಕಾಯಿ ಬೇಗ ಹುಳವಾಗಿ ಕೆಟ್ಟು ಹೋಗುವುದು ಶತಸಿದ್ಧ. ಆಶ್ಚರ್ಯವೆಂದರೆ ಮಾರಕ ಖಾರ ಹಾಗೂ ವಿಪರೀತ ಉಪ್ಪು ಬೆರೆತ ಉಪ್ಪಿನಕಾಯಿಯಲ್ಲೂ ಮೊಟ್ಟೆಯಿಟ್ಟು ಅದನ್ನೆ ಆಹಾರವಾಗಿಸಿಕೊಂಡು ತುಳುನಾಡಿನ ತೇವಾಂಶಭರಿತ ವಾತಾವರಣದ ಶಾಖಕ್ಕೆ ಮೊಟ್ಟೆಯೊಡೆದು ಹುಳುಗಳಾಗಿ ಮಿಜಿಗುಡುವ ಹುಳುಗಳು ಹುಟ್ಟುವುದು, ಹುಟ್ಟಿ ಬಾಳುವುದು! ಅಂತಹ ವಿಪರೀತ ಪರಿಸ್ಥಿತಿಯಲ್ಲಿಯೂ ನಿರಾತಂಕವಾಗಿ ಬಾಳುವ ಜೀವಿಗಳು ಇರಬಹುದಾದರೆ; ಆ ಕ್ಷಣದಲ್ಲಿ ಸೋತು ಸುಣ್ಣವಾದವರೂ ಸಹ ಮುಂದೊಮ್ಮೆ ಯಶಸ್ವಿಯಾಗಿ ಬಾಳಿನಲ್ಲಿ ಏಳ್ಗೆಯ ಏಣಿಯನ್ನ ಏರಬಹುದು ಎನ್ನುವುದು ಈ ಗಾದೆಯ ವಾಚ್ಯಾರ್ಥ. "ಕಷ್ಟ ಮನುಷ್ಯರಿಗೆ ಬಾರದೆ ಮರಕ್ಕೆ ಬಾರದು!" ಎನ್ನುವ ಕನ್ನಡದ ಗಾದೆಯ ವಿವರಣೆಯೂ ಸಹ ಬಹುಷಃ ಅದೇನೆ.}




( ಉಪ್ಪಡ್'ದುಲಾಯಿ ಉಪ್ಪುನ ಪುರಿಲಾ ಸೈಯಂದೆ ಬದುಕುಂಡು = ಉಪ್ಪಿನಕಾಯಿಯೊಳಗೆ ಇರುವ ಹುಳುವೂ ಸಾಯದೆ ಬದುಕುತ್ತದೆ.)

No comments: