12 October 2011

ಭಾರತೀಯತೆ ಮತ್ತು ಪರಕೀಯತೆ....

ಭಾರತೀಯತೆ ಮತ್ತು ಪರಕೀಯತೆ....

ಭಾರತೀಯ ನೆಲದ ಮೇಲೆ ವಿದೇಶಿ ಆಕ್ರಮಣದ ಚರಿತ್ರೆಯನ್ನ ಅಧಿಕೃತವಾಗಿ ಅವಲೋಕಿಸುವುದಾದರೆ ನಾವು ಇನ್ನೂ ಹಿಂದೆ ಕ್ರಿಸ್ತಪೂರ್ವಕ್ಕೆ ಹೋಗುವುದು ಅನಿವಾರ್ಯ.ಪ್ರಪಂಚವನ್ನೆ ಗೆಲ್ಲುವ (ಅಂದಿನ ಪ್ರಪಂಚದ ಕಲ್ಪನೆ ಗ್ರೀಕ್-ಸ್ಪೇನ್'ನ ಜನವಸತಿ,ಉತ್ತರದ ಅನಾಗರೀಕ ಯುರೋಪು-ಪೂರ್ವದ ಹಿಮಾಚ್ಛಾದಿತ ಯುರೋಪ್ ಹಾಗೂ ಉತ್ತರ ಆಫ್ರಿಕೆಯ ಕೆಲಭಾಗ ಹಾಗು ಅರೇಬಿಯಾ-ಪರ್ಶಿಯ-ಇಂಡಿಯ ಇಷ್ಟಕ್ಕೆ ಸೀಮಿತವಾಗಿತ್ತು.ಭಾರತಕ್ಕೆ ಮೊದಲು 'ಇಂಡಿಯ' ಅಂದವರು ಗ್ರೀಕರು.ಸಿಂಧೂನದಿಯನ್ನ ಇಂಡಸ್ ಎಂದು ಕರೆದ ಅವರು ಅದರ ತೀರದಲ್ಲಿ ವಾಸವಿದ್ದ ಎಲ್ಲರನ್ನೂ ಸಾರಾಸಗಟಾಗಿ ಇಂಡಿಯನ್ನರು ಎಂದು ಗುರುತಿಸಿದರು ಅನಂತರದ ದಿನಗಳಲ್ಲಿ ಯುರೂಪಿನಾದ್ಯಂತ ಅದೆ ಹೆಸರು ಖಾಯಂ ಆಯಿತು.) ವಿಶ್ವಕ್ಕೆ ನಿಜವಾದ ಅರ್ಥದಲ್ಲಿ ಸಾಮ್ರಾಟನಾಗುವ ಮಹತ್ವಾಕ್ಷಾಂಶೆ ಹೊಂದಿದ್ದ ಅಪರೂಪದ ಸಾಹಸಿ-ನಿಜವಾದ ಅರ್ಥದಲ್ಲಿ ಕನಸುಗಾರ ಅಲೆಕ್ಸಾಂಡರ್ ಮೊತ್ತಮೊದಲಿಗೆ ಇಲ್ಲಿನ ಸಂಪತ್ತು ಹಾಗೂ ಅಧಿಕಾರ ವಿಸ್ತರಣೆಯ ಉದ್ದೇಶದಿಂದ ಧಾಳಿ ಸಂಘಟಿಸಿದ್ದ.ಇಸ್ಲಾಂ ಹುಟ್ಟುವ ಸಾವಿರ ವರ್ಷದ ಹಿಂದೆಯೆ ಗ್ರೀಕರ ಈ ಸಾಹಸಿ ನೆಲಮಾರ್ಗದಿಂದಲೆ ಹೊರಟು ಪರ್ಶಿಯವನ್ನ ಗೆದ್ದು (ಇಂದಿನ ಇರಾಕ್) ಅಲ್ಲಿ ತನ್ನ ದಣಿದಿದ್ದ ಸೈನ್ಯವನ್ನ ಬಹುತೇಕ ಬರಾಕಸ್ತುಗೊಳಿಸಿ ಪರ್ಷಿಯಾದ ಉತ್ಸಾಹಿ ತರುಣರನ್ನೆ ಹೆಚ್ಚಾಗಿ ಹೊಂದಿದ್ದ ಹೊಸ ಸೈನ್ಯವನ್ನ ಕಟ್ಟಿ ಸಿಂದೂನದಿಯ ಎಲ್ಲೆ ಬಂದು ಮುಟ್ಟಿದ.

ಆಗಿನ ಭೂಪಟದ ಪ್ರಕಾರ ಪರ್ಶಿಯ ಭಾರತದ ನೆರೆದೇಶವಾಗಿತ್ತು (ಧರ್ಮಾಧರಿತವಾಗಿ ದೇಶ ವಿಭಜನೆಯಾಗುವವರೆಗೂ ಪರ್ಶಿಯ ಭಾರತದ ನೆರೆದೇಶವೆ ಆಗಿತ್ತು). ಅಲೆಕ್ಸಾಂಡರ್ ಉದ್ದೇಶ ಗಂಗೆಯನ್ನು ಮುಟ್ಟಿ ಅದರ ಪ್ರವಾಹದ ದಿಕ್ಕಿನಲ್ಲೆ ಸಾಗಿ ಅನಂತರ ಸಾಗರ ತೀರ ಸೇರಿ ಬಂದದಾರಿಯಲ್ಲೆ ಹಿಂದಿರುವುದಾಗಿತ್ತು.ಆದರೆ ಅವನ ಆತ್ಮಸ್ಥೈರ್ಯ ಕುಗ್ಗುವಂತ ಘಟನೆಗಳು ಒಂದಾದರ ಮೇಲೆ ಒಂದು ನಡೆದುದರಿಂದ ಸಾಮ್ರಾಟ ತನ್ನ ಈ ಯೋಜನೆಯನ್ನ ಬಿಟ್ಟು ಸ್ವದೇಶಕ್ಕೆ ಹಿಂದಿರುಗಲೆ ಬೇಕಾಯಿತು.ಮೊದಲನೆಯದಾಗಿ ಅವನ ಜೀವವೆ ಆಗಿದ್ದು ಗ್ರೀಸಿನಿಂದ ಪರ್ಷಿಯಾದವರೆಗೂ ಜೊತೆನೀಡಿದ್ದ ಕುದುರೆ ಭ್ಯೂಸಿಫಲಾಸ್ ಅತೀವ ಬಳಲಿಕೆಯಿಂದ ಅಸುನೀಗಿತು,ಎರಡನೆಯದಾಗಿ ಗಂಗೆಯ ಇಕ್ಕೆಡೆಗಳಲ್ಲೂ ನೆಲೆ ನಿಂತಿದ್ದ ಅನೇಕ ಭಾರತೀಯ ಬುಡಕಟ್ಟುಗಳನ್ನ ಮಣಿಸಿ ಮುಂದೆ ಸಾಗುವುದು ಸವಾಲಿನ ಕೆಲಸವಾಗಿತ್ತು,ಮೂರನೆಯದಾಗಿ ಭಾರತೀಯ ರಾಜ ಪುರೂರವನ ಸ್ವರಕ್ಷಣೆಯ ಯುದ್ದಾಹ್ವಾನ ಅಲೆಕ್ಸಾಂಡರ್ ಚಿಂತೆ ಹೆಚ್ಚಿಸಿತ್ತು ಹಾಗೂ ಕೊನೆಯದಾಗಿ ಸಾವಿರಾರು ಮೈಲಿ ಹೋರಾಡುತ್ತಾ ಬಂದು ವಿಭಿನ್ನ ಹವಾಮಾನಗಳನ್ನ ಎದುರಿಸಿ ಅವನ ಬಹುತೇಕ ಮೂಲಸೈನಿಕರು ಬಳಲಿ ನಿತ್ರಾಣರಾಗಿ ಹೋಗಿದ್ದರು.ಹೀಗಾಗಿ ಪುರೂರವನನ್ನು ಮಣಿಸಿದರೂ ಕೇವಲ ಕಪ್ಪಪಡೆದು ಸ್ವದೇಶದ ಹಾದಿ ಹಿಡಿಯಲು ಅಲೆಕ್ಸಾಂಡರ್ ನಿರ್ಧರಿಸಿ ತನ್ನ ಒಡನಾಡಿಗಳಿಗೆ ತನ್ನೊಂದಿಗೆ ಬರುವ ಅಥವಾ ಇಲ್ಲೇ ಉಳಿಯುವ ಸ್ವಾತಂತ್ರ ನೀಡಿದ.ಅನೇಕ ಗ್ರೀಕರು ಮರಳಿ ಹೋಗಲಿಕ್ಕೆ ಇಚ್ಚಿಸದೆ ಇಲ್ಲೆ ಉಳಿದು ಭಾರತೀಯ ಮುಖ್ಯವಾಹಿನಿಯಲ್ಲಿ ಬೆರೆತು ಹೋದರು.

ಇಲ್ಲಿ ಆಗಷ್ಟೆ ವೇದಕಾಲ ಮುಗಿದು ದೇವತಾರಾಧನೆ ಪ್ರಕೃತಿಪೂಜೆಯಿಂದ ವಿಗ್ರಹಾರಾಧನೆಗೆ ವಿಕಸಿಸಿತ್ತು.ಇಲ್ಲಿನ ಧಾರ್ಮಿಕತೆಯನ್ನೆ ಕ್ರಮೇಣ ಅನುಸರಿಸತೊಡಗಿದ ಇಲ್ಲುಳಿದ ಗ್ರೀಕರು ತಮ್ಮ ಮೂಲ ಆರಾಧನಾ ಕ್ರಮವನ್ನು ಕೊಂಚ ಮಾರ್ಪಡಿಸಿ ಕೊಳ್ಳಬೆಕಾಯಿತಷ್ಟೇ.ಇದು ಹೆಚ್ಚಿನ ಗೊಂದಲಕ್ಕೆ ಎಡೆ ಮಾಡಿ ಕೊಡಲಿಲ್ಲ ,ಏಕೆಂದರೆ ಕ್ರೈಸ್ತ ಧರ್ಮ ಬೆತ್ಲಹೆಮ್'ನಲ್ಲಿ ಉಗಮವಾಗಲು ಇನ್ನೂ ಮೂರೂಕಾಲು ಶತಮಾನ ಬಾಕಿಯಿದ್ದ ದಿನಗಳವು.ಅದು ಹುಟ್ಟಿ ಬೆಳೆದು ಗ್ರೀಕನ್ ಸಾಮ್ರಾಜ್ಯದ ನಂತರ ಪ್ರವರ್ಧಮಾನಕ್ಕೆ ಬಂದ ರೋಮನ್ ಸಾಮ್ರಾಜ್ಯದ ರಾಜಧರ್ಮವಾಗುವವರೆಗೂ ಯುರೋಪಿನಲ್ಲಿ ಭಾರತದಂತೆ ವಿಗ್ರಹಾರಾಧನೆ ಚಾಲ್ತಿಯಲ್ಲಿತ್ತು.ಇಲ್ಲಿಯೆ ಉಳಿದ ಗ್ರೀಕರ ಮುಂದಿನ ಸಂತತಿ "ಚಿತ್ಪಾವನ ಬ್ರಾಮ್ಹಣ" ಸಮುದಾಯವಾಗಿದೆ.ದೈಹಿಕವಾಗಿ ಅವರಲ್ಲಿ ಉಳಿದ ಕುರುಹುಗಳು ಅವರ ಮೂಲವನ್ನು ಸ್ಪಷ್ಟಪಡಿಸುತ್ತವೆ.ಮುಂದಿನ ದಿನಗಳಲ್ಲಿ ಗುಜರಾತದಿಂದ ಆರಂಭಿಸಿ ಕೇರಳದವರೆಗೂ ಕರಾವಳಿಯಲ್ಲಿ ಹರಡಿ ಕೊಂಡ ಈ ಸಮುದಾಯದ ಸದಸ್ಯರ ನೀಲಿ-ಹಸಿರು-ಬೂದು ಕಣ್ಣುಗಳು,ಹಾಲುವರ್ಣದ ಚರ್ಮ,ಕೆಂಚು ಕೂದಲು,ಎದ್ದುಕಾಣುವ ಮುಖಚರ್ಯೆ....ಇವೆಲ್ಲ ಅವರ ತಲೆಮಾರುಗಳ ಹಿಂದಿನ ಗ್ರೀಕನ್ ವಂಶವಾಹಿಗಳ ಕೊಡುಗೆಯಾಗಿ ಉಳಿದುಹೋಗಿದೆ.ಇವರೂ ಸಹ ಇಲ್ಲಿನವರನ್ನ ಮತಾಂತರಿಸದೆ ತಾವೆ ಇಲ್ಲಿನ ಮತಕ್ಕೆ ಮಾರು ಹೋಗಿ ಈಗ ನೂರಕ್ಕೆ ನೂರು ಶೇಕಡಾ ಭಾರತೀಯರೆ ಆಗಿಹೋಗಿದ್ದಾರೆ ಅನ್ನುವುದು ನಿಮ್ಮ ಗಮನಕ್ಕಿರಲಿ.

ಮತ್ತೆ ಕ್ರಿಸ್ತಶಕ 1175ರ ಇಸ್ಲಾಮಿ ದೊರೆ ಮಹಮದ್ ಘೋರಿಯ ಧಾಳಿಗೆ ಮರಳೋಣ.ಮಹಮದ್ ಬಿನ್ ಗಜನಿಯ ಕೊನೆಧಾಳಿಯ ನಂತರ ಭಾರತಕ್ಕೆ ನುಗ್ಗಿದ ಮತ್ತೊಬ್ಬ ಇಸ್ಲಾಮಿ ಅರಸು ಈತ.ಆ ಮೊದಲ ಧಾಳಿಯಲ್ಲಿ ಮುಲ್ತಾನನ್ನು ಆಕ್ರಮಿಸಿದ ಘೋರಿ ಸತತ ಏಳು ಬಾರಿ ಭಾರತದ ಉತ್ತರ ಭೂಭಾಗಗಳನ್ನ ಲೂಟಿ ಹೊಡೆದ.ಮೊದಲ ಧಾಳಿಯ ನಂತರ ಕ್ರಿಸ್ತಶಕ 1178ರಲ್ಲಿ ಗುಜರಾತಿನ ಸೋಮನಾಥ ದೇವಾಲಯದತ್ತ ನುಗ್ಗುವ ಯತ್ನದಲ್ಲಿದ್ದಾಗ ಘೋರಿ ಅಲ್ಲಿನ ದೊರೆ ಎರಡನೆ ಭೀಮದೇವನಿಂದ ತೀವ್ರ ಪ್ರತಿರೋಧ ಎದುರಿಸಿದನಾದರೂ ಸೋಲೊಪ್ಪಿಕೊಳ್ಳಲಿಲ್ಲ.ಆದರೆ ತನ್ನ ಮೂರನೆ ಧಾಳಿಯ ತರೈನ್ ಸಮರದಲ್ಲಿ ಪ್ರಥ್ವಿರಾಜ ಚೌಹಾನನ ಎದುರು ನಾಚಿಕೆಗೇಡಿನ ಸೋಲನ್ನ ಆತ ಎದುರಿಸಿ ತೀವ್ರವಾಗಿ ಗಾಯಗೊಂಡು ಕಾಬೂಲಿಗೆ ಓಡಿ ಹೋಗಬೇಕಾಯಿತು.

ಆದರೆ ಮುಂದಿನ ವರ್ಷ ನಡೆದ ಯುದ್ದದಲ್ಲಿ ಪರಿಣಾಮ ವ್ಯತಿರಿಕ್ತವಾಗಿ ಘೋರಿ ಯುದ್ಧ ಗೆದ್ದ.ಆಗ ಕನೋಜು ಪ್ರತಿಹಾರರ ಆಡಳಿತ ಕೇಂದ್ರವಾಗಿದ್ದರೂ ಇಂದಿನಂತೆ ಇಂದ್ರಪ್ರಸ್ಥದ (ಇಂದಿನ ದೆಹಲಿ) ಮೇಲಿನ ಒಡೆತನ ಭಾರತದ ಸಾಮ್ರಾಟರು ಯಾರು ಎಂಬುದನ್ನು ನಿರ್ಧರಿಸುತ್ತಿತ್ತು.ಹೀಗಾಗಿ ಘೋರಿ ಪ್ರಥ್ವಿರಾಜನನ್ನು ಮಣಿಸಿದ ನಂತರ ಇಂದ್ರಪ್ರಸ್ಥ,ಕನೋಜು,ಕಾಶಿ,ಅಜ್ಮೇರ್,ಗುಜರಾತ್,ಗೌಡ ದೇಶ (ಇಂದಿನ ಬೆಂಗಾಲ) ,ಗುಜರಾತ್ ಎಲ್ಲವನ್ನ ದೋಚಿದ.....ಮತ್ತೆ "ಕತ್ತಿ ಇಲ್ಲವೆ ಖುರಾನ್"ನ ಅನುಸಾರ ಸೆರೆ ಸಿಕ್ಕವರನ್ನ ಬಲವಂತದಿಂದ ಮತಾಂತರಕ್ಕೆ ಒಳಪಡಿಸಲಾಯಿತು.ಇಲ್ಲಿಯವರೆಗೂ ಕೇವಲ ಲೂಟಿಗೆ ಸೀಮಿತವಾಗಿದ್ದ ಇಸ್ಲಾಂ ಧಾಳಿಕೋರತನ ಘೋರಿ ತನ್ನ ತುರ್ಕಿ ಮೂಲದ ಗುಲಾಮ ಕುತ್ಬುದ್ದೀನ್ ಐಬಕ್'ನನ್ನು ತಾನು ಗೆದ್ದ ಭಾರತೀಯ ನೆಲೆಗಳ ಮೇಲೆ ಆಡಳಿತಾಧಿಕಾರಿಯನ್ನಾಗಿ ನೇಮಿಸುವ ಮೂಲಕ ಭಾರತೀಯ ನೆಲದಲ್ಲಿಯೆ ಇಸ್ಲಾಂ ಆಳ್ವಿಕೆ ಜಾರಿಗೆ ಬರುವಂತಾಗಲು ಮೂಲವಾಯಿತು.ಕ್ರಿಸ್ತಶಕ 1206ರಲ್ಲಿ ಘೋರಿ ಶಾಶ್ವತವಾಗಿ ಗೋರಿ ಹೊಕ್ಕ ನಂತರ ಕುತ್ಬುದ್ದೀನ್ ಐಬಕ್ ಸ್ವತಂತ್ರನಾದ.ಭಾರತೀಯ ನೆಲದಲ್ಲಿ ಅಧಿಕೃತವಾಗಿ ಅವನ ಗುಲಾಮಿ ಸಂತತಿಯ ಆಳ್ವಿಕೆ 'ಇಸ್ಲಾಮಿ ರಾಜಧರ್ಮ'ದೊಂದಿಗೆ ಹೀಗೆ ಆರಂಭವಾಯ್ತು.

(ಇನ್ನೂ ಇದೆ...)

No comments: