20 October 2011

ಕಡೆಯದೊಂದು ನಿರೀಕ್ಷೆಯ ಹನಿಯಿದೆ....

ಚಿತ್ತ ಕದಡುವ ಮಾತೇಕೆ? ಅದ ಬಿಡು
ಮೌನದ ನಾವೆಯಲ್ಲೆ ಇನ್ನೊಂದು ಸುತ್ತು....
ಸುಮ್ಮನೆ ಸಾಗೋಣ,
ನೀ ನನ್ನ ಹೀಗೆ ನೋಡುತ್ತಿರು....
ನನ್ನ ಕಣ್ಣ ಕನ್ನಡಿಯಲ್ಲಿ ಎಂದಿಗೂ ನೀನೆ ಕಾಣುತ್ತಿರು,
ಮತ್ತೆ ಒಂದಾಗಿ ದೂರ ಸರಿಯೋಣ ಬಾ....!/
ಎದೆಯ ಅಂಗಳದಲ್ಲಿ ಬಿಡಿಸಿದ ಚಿತ್ತಾರಗಳೆಲ್ಲ
ನಿನ್ನೊಂದು ನುಡಿಗೆ ಕದಡಿಹೋದಾಗ....
ನಾನು ನಿಜವಾಗಿಯೂ ಬಾಳಲ್ಲಿ ಸೋತೆ,
ಇನ್ನುಳಿದುದಿರಲಿ ಕನಿಷ್ಠ ನಿನ್ನೊಲವನ್ನೂ ಗಟ್ಟಿ ಮಾಡಿಕೊಳ್ಳುವ ಯೋಗ್ಯತೆಯಿಲ್ಲದೆ
ತಿರುಕನಂತೆ ಕಂಡಿದ್ದ ಕನಸುಗಳನ್ನೆಲ್ಲ ನೋವಿನ ಜೊತೆ ಗತದ ಗೋರಿಯಲ್ಲಿ ನಗುತಲೆ ಹೂತೆ....!//


ಮೌನವ ತೋಯಿಸುವ ನೆನಪುಗಳ ಸಿಂಚನಕ್ಕೆ
ಒಡ್ಡಿಕೊಂಡ ಮನದ ಮಾಡಿನಿಂದ ....
ಎದೆಯಂಗಳಕ್ಕೆ ಇಳಿಯುತ್ತಿರುವ ಪ್ರತಿ ಹನಿಯಲ್ಲೂ,
ಆಳದಲ್ಲಿ ನಿನ್ನದೇ ಪಿಸುದನಿಯಿದೆ/
ಅದೇನೆ ಮರೆತೆನೆಂದು ಕಳ್ಳ ಸಮಾಧಾನ ನನಗೆ ನಾನೆ ಹೇಳಿಕೊಂಡರೂ...
ನಿನ್ನೊಲವ ಮಳೆ ನಿಂತಿದ್ದರೂನು,
ಅದೆಲ್ಲೊ ಕಣ್ಣಿನಾಳದಲ್ಲಿ ಕನಸ ಸೂರಿನಿಂದ ತೊಟ್ಟಿಕ್ಕುತ್ತಿರುವ
ಕಡೆಯದೊಂದು ನಿರೀಕ್ಷೆಯ ಹನಿಯಿದೆ//


ಸತ್ತ ಭಾವಗಳ ಗೋರಿ ಕಾಯುತ
ಅವ್ಯಕ್ತ ವಾಂಛೆಗಳ ಬಚ್ಚಿಟ್ಟುಕೊಂಡ....
ನನ್ನ ನಿರ್ಜೀವ ಕಂಗಳಲ್ಲಿ ನೀನೊಂದು ಹೊಳಪು ಮಾತ್ರ,
ನಾ ಬಯಸಿದರೂ ಅಳಿಸಿ ಹಾಕಲಾಗದ ನಮ್ಮಿಬ್ಬರ ಗತದ ನೆನಪುಗಳಲ್ಲಿ
ಹುದುಗಿರುವ ನೀನು ಈ ಬಾಳಲ್ಲಿ ಅಚ್ಚಳಿಯದ ಒಂದು ಪಾತ್ರ/
ನಿರೀಕ್ಷೆ ಸತ್ತ ಖಾಲಿ ಕನಸಿನ ಹಾದಿಯಲ್ಲಿ....
ನೀನಿಲ್ಲದೆ ನನ್ನದು ಕುರುಡು ಪಯಣ,
ನೋವಂತೂ ವಿವರಿಸಲಾಗದಷ್ಟು ಭೀಕರ
ಒಡೆದಿದೆ ಹೃದಯದಲ್ಲಿ ನೀ ಮೊಳಕೆಯೊಡೆಸಿದ್ದ....
ಒಂಟಿತನ ಮಾಗಿಸಿರುವ ನೋವಿನ ವೃಣ//


ಕನಸುಗಳ ಸಾಲ ನೀ ಕೊಟ್ಟಿದ್ದೆ
ಅದರ ಬಡ್ಡಿಯನ್ನೂ ಕಟ್ಟಲಾಗದೆ....
ನಾನಾದೆ ವಿಫಲ ಸಾಲಗಾರ,
ಮೌನದ ಹೆಣ ಕಾಯುವ ವೀರಬಾಹುವಿನ ನೌಕರಿ ಸಾಕು ಸಾಕಾಗಿದೆ....
ಬೇಕಿದೆ ಇನ್ನಷ್ಟು ನಿನ್ನ ಪ್ರೀತಿಯ ಪಗಾರ/
ಕನಸ ಕೊಲೆಯಾದ ನಂತರವೂ
ಮನಸು ಅರಳೋದು ತಾನೆ ಹೇಗೆ?,
ನಿರಂತರ ನಿರೀಕ್ಷೆಗಳ ಸುಡುತ್ತಿರುವಾಗ ಬಾಳಿನುದ್ದ
ನೀನಿಲ್ಲದ ವಿರಹದ ಬೇಗೆ//

1 comment:

ಮೌನರಾಗ said...

ಕಡೆಯ ನಿರೀಕ್ಷೆಯನ್ನು ಹನಿಯು ಸೊಗಸಾಗಿ ಮೂಡಿ ಬಂದಿದೆ..
ಕನಸ ಕೊಲೆಯಾದ ನಂತರವೂ ಬದುಕ ಬಹುದು....ಕತ್ತಲೆಯ ನಂತರ ಬೆಳಕಿಹುದು...ನವ ವಸಂತಕ್ಕೆ ತಾಜಾ ಕನಸುಗಳು ಚಿಗುರಬೇಕು ಅರಳಬೇಕು....