12 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೩.👊಼

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೫೩.👊


ಪ್ರತಿಬಾರಿಯೂ ಅಂತಹ ವಿಷಮ ಸಂದರ್ಭಗಳು ಎದುರಾದಾಗಲೆಲ್ಲಾ ಅವನಿಂದ ಇಷ್ಟು ನೇರ ನುಡಿ ನಡೆ ನಿರೀಕ್ಷಿಸಿರದ ಅಂತಹ  ಅನ್ಯಾಯಕೋರರು ಒಂದರೆ ಕ್ಷಣ ಅವನ ನೋಟ ಎದುರಿಸಲಾಗದೆ ತಲೆ ತಗ್ಗಿಸುತ್ತಿದ್ದರು. ಬಹಳ ಸಲ ಹಾಗೆ ತಲೆ ತಗ್ಗುತ್ತಿದ್ದುದು ಅವರೊಳಗೆ ಹುಟ್ಟುವ ಪಶ್ಚಾತಾಪದಿಂದಾಗಿರದೆ ಕೇವಲ ಆ ಕ್ಷಣಕ್ಕಾಗುತ್ತಿದ್ದ ಅಪಮಾನದಿಂದ ಮಾತ್ರ ಅನ್ನುವ ಅರಿವು ಅವನಿಗೂ ಇದೆ. ಅಂತಹ ಭಂಡರಿಂದ ಸುಧಾರಣೆಯನ್ನು ನಿರೀಕ್ಷಿಸುವುದೆ ಮೂರ್ಖತನ. ಬದಲಿಗೆ ಅಂತಹ ದುರಾತ್ಮರು ಮತ್ತಷ್ಟು ದ್ವೇಷ ಸಾಧಿಸುತ್ತಾ ಮುಂದಿಂದ ಮಾತನಾಡುವ ನೈತಿಕತೆ ಕಳೆದುಕೊಂಡುˌ ಕಂಡವರ ಮುಂದೆಲ್ಲಾ ಅವನನ್ನ ಬೆನ್ನ ಹಿಂದಿನಿಂದ ಬಾಯಿಗೆ ಬಂದಂತೆ ಆಡಿಕೊಂಡು ಇಲ್ಲಸಲ್ಲದ ವದಂತಿಯನ್ನ ಅವನ ಬಗ್ಗೆ ಹಬ್ಬಿಸಿ ತಮಗಾದ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಂಡ ವಿಕೃತಿಯಲ್ಲಿ ಬೀಗುತ್ತಿದ್ದುದೂ ಇದೆ.

ತಾವು ಬೇರೆಯವರಿಗೆ ಅಂದ ಮಾತುಗಳನ್ನ ಇನ್ಯಾರಾದರೂ ತಮಗೆ ತಿರುಗಿ ಅಂದಾಗ ಮಾತ್ರ ಉರಿದು ಬೀಳುವ ಅಂತಹ ಅವಿವೇಕಿಗಳಿಗೆˌ ಈ ನುಡಿಗಳು ನಮ್ಮನ್ನ ನೋಯಿಸುವುದು ನಿಜವಾದರೆˌ ತಮ್ಮಿಂದ ಅನಿಸಿಕೊಂಡವರಿಗೆಷ್ಟು ವೇದನೆಯಾಗಿರಲಿಕ್ಕಿಲ್ಲ ಅನ್ನುವ ಅಂದಾಜಾಗದಿರುವುದು ಮಾತ್ರ ವಿಪರ್ಯಾಸ. ಆ ವಿಷಯದಲ್ಲಿ ಅಂತಹ ನೀಚ ಮನಸ್ಥಿತಿಯ ದುರುಳರು ಪರಮ ಆಶಾಡಭೂತಿಗಳೂ ಆಗಿರೋದನ್ನ ಅವನು ಕಂಡಿದ್ದಾನೆ.

ಕೆಲವೊಮ್ಮೆ ಅತಿ ವೇಗವಾಗಿ ಬೇಗ ಊರೆಲ್ಲ ಸುತ್ತುವ ಅಂತಹ ವದಂತಿಗಳು ನೂರೆಂಟು ಕಿವಿ ಬಾಯಿಗಳನ್ನೆಲ್ಲಾ ದಾಟಿ ಸುಸ್ತಾಗಿ ಕಡೆಗೆ ಸುಧಾರಿಸಿಕೊಳ್ಳಲು ಇವನ ಎದುರಿಗೆ ಬಂದು ಕುಕ್ಕರಗಾಲಲ್ಲಿ ಕೂರುವುದೂ ಇತ್ತು. ಮೊದಮೊದಲು ತನ್ನ ಬಗ್ಗೆ ಹಬ್ಬುವ ಅಂತಹ ಅಂಡೆಪಿರ್ಕಿ ವದಂತಿ ಮೂಲ ಕೆದಕಿˌ ಅದ್ಯಾವ ವಿಕಾರಿಗಳ ಮಂಡೆಯಿಂದ ಹುಟ್ಟಿದ ವಿಕೃತಿ ಅನ್ನೋದನ್ನ ಖಚಿತ ಪಡಿಸಿಕೊಳ್ಳುವ ಉಮೇದು ಉಳಿಸಿಕೊಂಡಿರುತ್ತಿದ್ದ ಅವನು ಈ ನಡುವೆ ಅದರಲ್ಲೂ ಆಸಕ್ತಿ ಕಳೆದುಕೊಂಡಿದ್ದಾನೆ. ಅಂತಹ ಮಾನವ ರೂಪದಲ್ಲಿರುವ ವಿಷಜಂತುಗಳ ಕೊಳೆತ ಮನಸ್ಥಿತಿಗೆ ಮದ್ದಿರೋದಿಲ್ಲ. ಹೀಗಾಗಿ ಹೇಳೋದನ್ನ ಹೇಳಿಯಾದ ಮೇಲೆ ಅದೇನಾದರೂ ಮಾಡಿಕೊಂಡು ಸಾಯಲಿ ಬಿಡು ಅಂದುಕೊಂಡು ನಿರ್ಲಕ್ಷ್ಯಿಸುತ್ತಿದ್ದ.

ತಮ್ಮ ನೀಚ ನಡತೆಯನ್ನ ಮರೆಯದೆ ಬಹುಕಾಲದ ನಂತರ ಅವನೆಸೆಯುವ ಮಾತಿನ ಕೊರಂಬುಗಳಿಂದ ಚುಚ್ಚಿಸಿಕೊಂಡ ಅನಂತರ ಅವರಲ್ಲಿ ಅನೇಕರು ಇರುಸುಮುರುಸಾಗಿ ಅವನ ಸಂಪರ್ಕವನ್ನೆ ಕಡಿದುಕೊಳ್ಳೋದೂ ಸಹ ಇತ್ತು. ಆದರೆ ಹೇಳುವುದನ್ನ ಒಂದು ಸಲ ಹೇಳಿ ಮುಗಿಸಿದ ನಂತರ ಅವನ ಮನದಲ್ಲಿ ಯಾವ ಹುಳಿಯೂ ಅವರ ಬಗ್ಗೆ ಉಳಿದಿರುತ್ತಿರಲಿಲ್ಲ. ಆ ಘಟನೆಯ ನಂತರ ಅವನವರ ಜೊತೆಗೆ ಸಹಜವಾಗಿಯೆ ವರ್ತಿಸುತ್ತಿದ್ದ. ಹಾಗೆಲ್ಲಾ ಆದ ನಂತರವೂ ಹಿಂದಿನ ತಮ್ಮ ತಪ್ಪುಗಳಿಗೆ ಮರುಗಿ ಪಶ್ಚಾತಾಪ ಪಡುತ್ತಿದ್ದವರೂ ಇಲ್ಲ ಅಂತೇನಿಲ್ಲ. ಆದರೆ ಅಂತವರ ಸಂಖ್ಯೆ ಮಾತ್ರ ತುಂಬಾ ಕಡಿಮೆ ಅನ್ನೋದು ಅವನಿಗೆ ಅನುಭವ ವೇದ್ಯ.

ಅವನ ಪ್ರಕಾರ ತಪ್ಪು ಮಾಡೋದು ಮನುಷ್ಯ ಜನ್ಮಕ್ಕೆ ಸಹಜವಾದ ನಡೆ. ಗೊತ್ತಿದ್ದು ಮಾಡಿದರಷ್ಟೆ ಅಲ್ಲˌ ಗೊತ್ತಿಲ್ಲದಂತೆ ಮಾಡಿದರೂ ಸಹ ಅದು ತಪ್ಪೆ. ಹಾಗಂತˌ ಅದೇನು ಮಹಾ ಅಪರಾಧವಲ್ಲ. ಆದರೆ ಮಾಡಿದ ತಪ್ಪನ್ನು ತಿದ್ದಿಕೊಳ್ಳದೆ ತನ್ನ ಮೊಂಡುತನವನ್ನ ಸಾಧಿಸೋದು ಮಾತ್ರ ಘನಪರಾಧ ಅಷ್ಟೆ ಅಲ್ಲ ಘಾತುಕತನ. ಆದ ತಪ್ಪನ್ನ ತಿದ್ದಿಕೊಳ್ಳಲು ಮೊದಲದನ್ನ ಒಪ್ಪಿಕೊಳ್ಳಬೇಕಿರುತ್ತೆ. ಅದು ಧೀಮಂತಿಕೆಯ ಲಕ್ಷಣ. ಅದಿರುವವರೆ ನಿಜವಾಗಲೂ ದೊಡ್ಡವರು ಅನ್ನೋದು ಅವನ ನಿಲುವು.

ಹಾಗಂತ ಅದೆಷ್ಟೆ ಸ್ಥಿತಪ್ರಜ್ಞತೆಯಿಂದಿರಲು ಪ್ರಯತ್ನಿಸಿದರೂನು ಅವನಲ್ಲೂ ಒಂದು ಅಳಿಸಲಾಗದ ವಿಕೃತಿ ಅವನ ಪ್ರಯತ್ನ ಮೀರಿ ಉಳಿದಿದೆ. ಬಿಳಿ ಚರ್ಮದ ಪಾಶ್ಚಿಮಾತ್ಯರನ್ನˌ ಅದರಲ್ಲೂ ಬ್ರಿಟಿಷರುˌ ಫ್ರೆಂಚರುˌ ಡಚ್ಚರುˌ ಪೋರ್ತಗೀಜರು ಹಾಗೂ ಅಮೇರಿಕಾದವರನ್ನ ಅವಕಾಶ ಸಿಕ್ಕಾಗಲೆಲ್ಲ ಸಹಾಯ  ಬೇಕಿದ್ದಲ್ಲಿ ಮಾಡಿˌ ಆಮೇಲೆ ಅವರಲ್ಲಿ ಅವರ ಪೂರ್ವಜರ ಕೊಳ್ಳೆ ಹೊಡೆಯುವ ಕಳ್ಳ ಮನಸ್ಥಿತಿಯನ್ನ ಪರಿಪರಿಯಾಗಿ ವಿವರಿಸಿ ಹೇಳಿ ಅವರೊಳಗೆ ತಮ್ಮ ಜನಾಂಗದ ಬಗ್ಗೆಯೆ ಕೀಳರಿಮೆ ಮೂಡಿಸುವುದೆಂದರೆ ಅವನಿಗೆ ಒಂಥರಾ ಇಷ್ಟದ ಕೆಲಸ. ಆ ವಿಷಯದಲ್ಲಿ ಅವನೂ ವರ್ಣತಾರತಮ್ಯ ನಿಪುಣ. ಅದರಲ್ಲೂ ಅವರ ನೆಲದಲ್ಲೆ ಅವರನ್ನ ಹಳಿದು ಖುಷಿ ಪಡುವುದರಲ್ಲಿ ಸದಾ ಅವನು ಮುಂದೆ. ವಸಾಹತು ಕಾಲದ ಕೊಳ್ಳೆ-ಹಿಂಸೆˌ ತನ್ನ ಹಿರಿಯರನ್ನ ಅವರು ಅದೆ ವರ್ಣತಾರತಮ್ಯದಿಂದ ಹೀಯ್ಯಾಳಿಸಿ ಹೀನವಾಗಿ ನಡೆಸಿಕೊಂಡದ್ದಕ್ಕೆ ಅವರನ್ನೂ ತಾನು ಹೀಗೆಯೆ ನಡೆಸಿಕೊಳ್ಳೋದು ನ್ಯಾಯ ಅನ್ನೋದು ಅವನ ವಾದ.

ಎರ್ರಿಕ್ಕನಿಗೆ ಮಾಡಿದ ಸಹಾಯದಲ್ಲೂ ವಾಸ್ತವದಲ್ಲಿ ಅವನನ್ನ ಪ್ರೇರೇಪಿಸಿದ್ದು ಅಂತಹ ಸುಪ್ತ ವಿಕೃತಿಯ ಒತ್ತಡವೆ. ಕೇವಲ ಬಿಳಿಯರಷ್ಟೆ ಅಲ್ಲದೆ ಅವರನ್ನ ದೊಂಬರಂತೆ ನಡೆ ನುಡಿಯಲ್ಲಿ ಕೆಟ್ಟ ನಕಲು ಹೊಡೆಯುವ ಕರಿ ಚರ್ಮದ "ಸೂಡೋ ಬಿಳಿಯ"ರ ಬಗ್ಗೆಯೂ ಅವನದ್ದು ಅದೆ ನಿಲುವು. ಬಿಳಿಯನೊಬ್ಬನನ್ನ ಪ್ಯಾರಿಸ್ಸಿನ ವಿಮಾನ ನಿಲ್ದಾಣದಲ್ಲಿ ಮರ್ಮಕ್ಕೆ ತಾಗುವಂತೆ ಹೀಯ್ಯಾಳಿಸಿದಾಗ ಆ ಬಿಳಿಯ ಅವಮಾನದಿಂದ ಕೆರಳಿ ಎಗರಾಡಿದ್ದುˌ ಕೊಲಂಬೋದ ಕಟುನಾಯಕೆ ವಿಮಾನ ನಿಲ್ದಾಣದ ವಲಸೆ ಸಾಲಿನಲ್ಲಿ ನಿಂತಿದ್ದಾಗ "ಶ್ರೀಲಂಕನ್ನರನ್ನ ನೀವು ಭಾರತೀಯರ ಹೋಲಿಕೆಯಲ್ಲಿ ಹೇಗೆ ನೋಡುತ್ತೀರಿ?" ಎನ್ನುವ ಪಾಶ್ಚಿಮಾತ್ಯ ಸಹ ಪಯಣಿಗರ ಪ್ರಶ್ನೆಗೆ ಗಟ್ಟಿಯಾಗಿ "We Indians are high thinking but low living, where as Lankans are low thinking and high living!" ಅಂದ ಮಾತನ್ನ ಕೇಳಿದ ಅವನ ಬೆನ್ನ ಹಿಂದೆ ಸರದಿಯಲ್ಲಿ ನಿಂತಿದ್ದ ಲಂಕೆಯ 'ರಾಕ್ಷಸಿ'ಯೊಬ್ಬಳು "How dare you to critisize my land while stood at my soil!" ಅಂತ ಎಗರಾಡಿದ್ದಳು. ಅದಕ್ಕವನು ತಣ್ಣಗೆ ಅದೆ ವೇಗದಲ್ಲಿ "May it be your soil or mine, i cannot stay hyporicrite as you." ಅಂದು ಅವಳ ಉರಿಗೆ ಮತ್ತಷ್ಟು ತೈಲ ಸುರಿದಿದ್ದ. ಆ ವಿಷಯದಲ್ಲವನು ಒಂಥರಾ ಒರಟ. ಅದನ್ನೂ ಮೀರಿ ವಿಕೃತ. ಆ ವಿಕಾರದಿಂದ ತನ್ನನ್ನ ತಾನು ಬಿಡಿಸಿಕೊಳ್ಳಲು ಬಹಳ ಪ್ರಯತ್ನಿಸಿದ್ದರೂ ಸಹ ಪದೆ ಪದೆ ವಿಫಲನಾಗುತ್ತಿದ್ದ.

*****

ಬಪಮನ ಏಕಾಂತದ ಬರ್ಬರತೆ ಮರುಕಳಿಸುತ್ತಿದ್ದ ಕಾಲದಲ್ಲಿ ಅವರಿಗೆ ಓದಿನˌ ಮಾತುಕತೆಯ ಮೂಲಕ ಹತ್ತಿರವಾದ ಅವನಲ್ಲಿ ಅವರು ಆಗಾಗ ತಮ್ಮ ಅಂತರಾಳದ ಮಾತುಗಳನ್ನ ಹಂಚಿಕೊಳ್ಳುವುದಿತ್ತು. ಪೆರಂಪಳ್ಳಿಯ ತಮ್ಮ ತವರಿನ ದಿನಗಳನ್ನ ನೆನೆಸಿಕೊಳ್ಳುವಾಗ ಮಾತ್ರ ಅವರಲ್ಲಿ ಒಂಥರಾ ಲವಲವಿಕೆ ಮೂಡುತ್ತಿದ್ದುದು ಅವನ ಗಮನಕ್ಕೆ ಬರುತ್ತಿತ್ತು. ತನ್ನ ತಾಯಿ ಮನೆಯನ್ನ-ಅಲ್ಲಿನ ತನ್ನ ಬಾಳ್ವೆಯನ್ನ ಬಪಮ ತುಂಬಾ ಕಳೆದುಕೊಂಡ ಸುಖದ ಭಾಗವಾಗಿ ಪರಿಗಣಿಸುತ್ತಿದ್ದರು. ಸೊಸೆ ಸೀತಮ್ಮನ ನಿರಂತರ ಪಿರಿಪಿರಿ ಅವರನ್ನ ಹೈರಾಣಾಗಿಸಿತ್ತು.

ಅವರ ಮನ ಗೆಲ್ಲಲು ಚಂದಾಮಾಮದಿಂದ "ಬೇತಾಳದ ಕಥೆಗಳು" ಬೊಂಬೆಮನೆಯ "ಮದ್ಭಾಗವತ" ಬಾಲಮಿತ್ರದ "ಮಂಡೂಕ ದ್ವೀಪದಲ್ಲಿ ರಾಜಕುಮಾರಿ ಸರಣಿ" ಅದರ ಕೊನೆಯಲ್ಲಿರುತ್ತಿದ್ದ "ಮನಿ ಕಾದಂಬರಿ" ಓದಿ ಹೇಳುತ್ತಿದ್ದಾಗ ಬಪಮ ಅದರ ಕಥಾ ಲಹರಿಯ ಅವೇಗದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದನ್ನ ಕಾಣೋದು ಅವನಿಗೆ ಒಂಥರಾ ಖುಷಿ ಕೊಡುತ್ತಿತ್ತು.

ಈ ಕಥೆಯ ಓದಿನ ಕಿರು ಆಲೈಕೆಯ ಕ್ಷಣಗಳಲ್ಲಿ ಮಾತ್ರ ಅವರಿಗೆ ಒಂಥರಾ ನೆಮ್ಮದಿ ಸಿಗುತ್ತಿತ್ತು ಅನ್ನೋದನ್ನವನು ಬಲ್ಲ. ಹೀಗಾಗಿ ಅವನ್ನ ಓದುವ ನೆಪ ಮಾಡಿಕೊಂಡು ತನಗೂ ಸಿಗುವ ಮನರಂಜನೆಯ ಬೆನ್ನು ಹತ್ತಿ ಬಿಡುವಿದ್ದಾಗಲೆಲ್ಲಾ ಅವರ ಮನೆಗೆ ದಾಳಿಯಿಡುವುದು ಅವನಿಗೆ ರೂಢಿಯಾಯಿತು. ಅವರ ಮನೆಯಲ್ಲಿ ವಿಜಯೇಂದ್ರಣ್ಣ ಓದಲಿ ಎಂದು ನಿತ್ಯ ಅವರ ತಮ್ಮ "ಉದಯವಾಣಿ" ತಂದು ಕೊಡುವ ರೂಢಿಯೂ ಇತ್ತು. ಓದಲವನಿಗೆ ಸಿಕ್ಕಿದ ಎರಡನೆ ದಿನಪತ್ರಿಕೆ ಅದು.

( ಇನ್ನೂ ಇದೆ.)

https://youtu.be/b4bGLGzMko0



No comments: