20 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬೦.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೬೦.👊


ರಾತ್ರಿಯ ನಾಯರನ ಕ್ಯಾಂಟೀನಿನ ಊಟಕ್ಕೆ ಹೊರಡುವ ಮೊದಲೆ ಮಂಗಳವಾರ ಸಂಜೆಯ ರೈಲಿನಲ್ಲಿ ಹೊರಟು ಮರುದಿನ ಬುಧವಾರ ಬೆಳ್ಳಂಬೆಳಗ್ಯೆ ಬೆಂಗಳೂರಿನಿಂದ ಹೊರಟು ಬರುವ ಐಲ್ಯಾಂಡ್ ಎಕ್ಸಪ್ರೆಸ್ಸಿಗೆ ಪಾಲ್ಘಾಟಿನಲ್ಲಿ ಬದಲಾಯಿಸಿಕೊಳ್ಳಲು ಅನುಕೂಲವಾಗುವಂತೆ ಕನ್ಯಾಕುಮಾರಿಗೆ ಟಿಕೇಟನ್ನ ಮುಂಗಡವಾಗಿ ಕಾಯ್ದಿರಿಸಿದ್ದ. ಇಲ್ಲಿಂದ ಮುಂದೆ ಅಲ್ಲಿಗೆ ಹೋಗಲು ನಿರ್ಧರಿಸಿದ್ದನಾದರೂ ಅಲ್ಲಿ ಅದೆಷ್ಟು ದಿನ ಇರೋದು ಅನ್ನುವ ಬಗ್ಗೆ ಅವನಿಗೇನೆ ಖಚಿತತೆ ಇರಲಿಲ್ಲ. ಕನ್ಯಾಕುಮಾರಿಯ ವಿವೇಕಾನಂದಪುರಂನ ಶಾಶ್ವತ ದತ್ತಿದಾತರಲ್ಲಿ ಅವನೂ ಒಬ್ಬನಾಗಿದ್ದ. ಅದರಿಂದಾಗುತ್ತಿದ್ದ ಅನುಕೂಲವೆಂದರೆ ಬಯಸಿದಾಗ ವರ್ಷಕ್ಕೊಂದಾವರ್ತಿ ಅಲ್ಲಿಗೆ ಹೋಗಿ ಎರಡು ವಾರ ಅಲ್ಲಿನ ಒಂದು ಕೋಣೆಯ ಕಾಟೇಜಿನಲ್ಲಿ ಖರ್ಚಿಲ್ಲದೆ ಇದ್ದು ಬರುವ ಅವಕಾಶ ಅವನಿಗಿತ್ತು. 


ಬಾಳಿನಲ್ಲಿ ಅಸಹಾಯಕತೆ ಕಾಡಿ ವಿಹ್ವಲ ಮನಸ್ಥಿತಿ ವಿಪರೀತ ಕಾಡಿಸಿದ್ದಾಗ ಮೊತ್ತ ಮೊದಲ ಸಲ ಬರಿಗೈಯಲ್ಲಿ ಅಲ್ಲಿಗೆ ಹೋಗಿದ್ದ ನೆನಪಾಗಿ ಮಂದಹಾಸ ಮುಖದಲ್ಲಿ ಮಿನುಗಿತು. ಹೆಚ್ಚಿನ ಓದನ್ನೆ ಗುರಿಯಾಗಿಸಿಕೊಂಡು ರಾಜಧಾನಿಗೆ ಎರಡೂ ಕಾಲು ದಶಕಗಳ ಹಿಂದೆ ಬಂದಿದ್ದವ ಪಿಯುಸಿ ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಿದ್ದ ಹಣವಿಲ್ಲದೆ ದಿಕ್ಕೆಟ್ಟ ಪರಿಸ್ಥಿತಿಯಲ್ಲಿ ರೈಲು ನಿಲ್ದಾಣಕ್ಕೆ ಬಂದವನ ಜೇಬಿನಲ್ಲಿ ಅಂದು ಕನ್ಯಾಕುಮಾರಿಯ ಟಿಕೇಟು ಖರೀದಿಸಿದ ಅನಂತರ ಐವತ್ತು ರೂಪಾಯಿ ಮಾತ್ರ ಉಳಿದಿತ್ತು. 


ಹಿಂದಿರುಗಿ ಬರುವ ಯೋಚನೆಯನ್ನೆ ಇಟ್ಠುಕೊಳ್ಳದೆ ಆಗಿದ್ದಾಗಲಿ ಅಂದುಕೊಂಡು ಕೇವಲ ಅಷ್ಟನ್ನೆ ಹಿಡಿದು ಭಂಡಧೈರ್ಯದಿಂದ ಕಂಡಿರದ ಊರಿಗೆ ಹೊರಟಿದ್ದ. ಪರಿವ್ರಾಜಕನಾಗಿ ಕಾಲಯಾಪನೆ ಮಾಡಿ ಮುಂದಿನ ಜೀವನ ಸವೆಸುವ ವೈರಾಗ್ಯ ಹೊತ್ತು ಹೊರಟಿದ್ದ ಅವನನ್ನ ಅಲ್ಲಿ ಮಾಮಾಜಿ ಕೂರಿಸಿಕೊಂಡು ಮಮತೆಯಿಂದ ಅವನ ಇತ್ಯೋಪರಿಗಳನ್ನ ವಿಚಾರಿಸಿ ಧೈರ್ಯ ತುಂಬಿ ತನ್ನದೆ ಕೋಣೆಯಲ್ಲಿರಿಸಿಕೊಂಡು ಉಡಲು ಪಂಚೆ - ತೊಡಲು ಅಂಗಿ ಕೊಡಿಸಿˌ ಕೈಯಲ್ಲಿ ದುಗ್ಗಾಣಿಯಿರದಿದ್ದ ಅವನನ್ನ ಸ್ವಯಂ ಸೇವಕರ ಊಟದ ಮನೆಯಲ್ಲೆ ಉಣ್ಣಲು ವ್ಯವಸ್ಥೆ ಮಾಡಿ ಐದು ದಿನ ಉಳಿಸಿಕೊಂಡುˌ ಬೆಂಗಳೂರಿನ ಮರು ಪಯಣದ ರೈಲು ಬಂಡಿಯ ಟಿಕೇಟು ತೆಗಿಸಿಕೊಟ್ಟು ಖರ್ಚಿಗೆ ನೂರು ರೂಪಾಯಿ ಜೇಬಿನಲ್ಲಿಟ್ಟು ಬೆನ್ನು ತಟ್ಟಿ ಹಿಂದಿರುಗಿ ಕಳಿಸಿದ್ದರು.


ಮರಳಿ ಬಂದಿಳಿದಾಗ ಅವನ ಜೇಬಿನಲ್ಲಿ ಖರ್ಚು ಕಳೆದು ಐವತ್ತು ರೂಪಾಯಿ ಉಳಿದಿತ್ತು. ಈ ಐವತ್ತರ ಸಂಖ್ಯೆಗೂ ಅವನಿಗೂ ಅವಿನಾಭಾವ ಸಂಬಂಧ. ಅವನ ಮೊದಲ ಸಂಪಾದನೆ ಅದೆ ಐವತ್ತು ರೂಪಾಯಿ. ಅಡುಗೆ ಕೆಲಸ ಮಾಡುವಾಗ ಅಲ್ಲಿ ಸಂಪಾದನೆಯಾಗುತ್ತಿದ್ದುದು ಸಹ ಐವತ್ತು ರೂಪಾಯಿ. ಊರು ಬಿಟ್ಟು ಬೆಂಗಳೂರಿನ ಹಾದಿ ಹಿಡಿದಿದ್ದಾಗ ದಾರಿಯ ಖರ್ಚಿಗೆ ಬಾಲ್ಯಮಿತ್ರ ಸುಶ್ರುತ ಕೊಟ್ಟಿದ್ದು ಅವನ ಪಾಕೆಟ್ ಮನಿಯ ಉಳಿಕೆಯ ಐವತ್ತು ರೂಪಾಯಿ. ಕಾಕತಾಳೀಯವಾಗಿ ಐವತ್ತು ಇವನ ಅದೃಷ್ಟ ಬದಲಿಸಿದಾಗಲೆಲ್ಲಾ ಜೇಬಿನಲ್ಲಿದ್ದ ಹಣದ ಮೊತ್ತವಾಗಿತ್ತು. 


ಅಂದು ಮಾಮಾಜಿ ಈ ಅಪರಿಚಿತ ದಿಕ್ಕೆಟ್ಟವನಲ್ಲಿ ತೋರಿದ್ದ ಸಹೃದಯತೆ ಅವನ ಆತ್ಮವಿಶ್ವಾಸ ಸಹಜವಾಗಿ ಹೆಚ್ಚಿಸಿತ್ತು. ಬಾಳಿನ ಕವಲು ದಾರಿಯಲ್ಲಿ ನಿಂತಿದ್ದ ನಿಸ್ಪೃಹತೆಯ ಹೊತ್ತಿನಲ್ಲಿ ಅವನಿಗೆ ಅಂತಹ ಒಂದು ಧೈರ್ಯದ ಮಾತುಗಳ - ಪ್ರೋತ್ಸಾಹದ ನುಡಿಯ ಅವಶ್ಯಕತೆಯಿದ್ದ ಕಾಲ ಅದು. ಮೊದಲ ಸಲ ಅಲ್ಲಿಂದ ಮರಳಿ ಬಂದಿದ್ದವ ಅಲ್ಲಿಲ್ಲಿ ಓಡಾಡಿ ಅವರಿವರಲ್ಲಿ ಕಾಡಿಬೇಡಿ ಕೆಲಸವನ್ನೂ ಹಿಡಿದು ಓದನ್ನೂ ಮುಂದುವರೆಸಿದ. ಖಾಲಿ ಕೈಯಲ್ಲಿ ಅಂದು ಹೋಗಿದ್ದ ಕನ್ಯಾಕುಮಾರಿಯಲ್ಲಿ ಇಂದು ಅವನೂ ಒಬ್ಬ ದತ್ತಿಕೊಟ್ಟ ದಾನಿ! ಅರಿವಿಲ್ಲದಂತೆ ಬಾಳು ಪೂರ್ತಿ ಮುನ್ನೂರರವತ್ತು ಡಿಗ್ರಿ ಕೋನದಲ್ಲಿ ಬದಲಾವಣೆ ಕಂಡಿತ್ತು. ಕೋಣೆಗೆ ಬಂದು ಅರೆಬತ್ತಲಾಗಿ ಅಂಗಾತ ಹಾಸಿಗೆಯ ಮೇಲೆ ಬಿದ್ದುಕೊಂಡ. ನಿದ್ರೆ ಅಂದೇಕೋ ಸತಾಯಿಸದೆ ಬಂದು ಉಪಕರಿಸಿತು. ಕೈಫೋನಿನಲ್ಲಿ ಕಿರ್ಕರೆಯ ಧ್ವನಿ ಉಲಿಯುತ್ತಲೆ ಇತ್ತು. ಇತ್ತೀಚಿನ ಯಾವುದೋ ಟೊವಿನೋ ಥಾಮಸ್ ನಟನೆಯ ಮಲಯಾಳಂ ಸಿನೆಮಾದಲ್ಲಿ ಇದೆ ಹಾಡನ್ನ ನಟಿ ದರ್ಶನಾಳಿಂದ ಮರು ಬಳಸಲು ಹಾಡಿಸಿದ್ದ ನೆನಪಾಯಿತು. ಅದರ ಮಾಧುರ್ಯವನ್ನೆ ಕೇಳುತ್ತಾ ನಿದ್ರೆಗೆ ಜಾರಿದ್ದೆ ಅರಿವಾಗಲಿಲ್ಲ. ದೀಪ ಆರಿಸಲೂ ಮರೆತುಬಿಟ್ಟಿದ್ದ.


"ಬಾಂವರಾ ಮನ್ ದೇಖನೇ
ಚಲಾ ಏಕ್ ಸಪ್ನಾˌ
ಬಾಂವರೀ ಸೀ ಮನ್ ಕೀ ದೇಖೋ 
ಬಾಂವರೀ ಹೈಂ ಬಾತೇಂ./
ಬಾವರೀಂ ಸೀ ದಢ್ಕನೇ ಹೈಂ
ಬಾವರೀಂ ಹೈಂ ಸಾಂಸೇಂ
ಬಾವರೀಂ ಸೀ ಕರವಟೋಂ ಸೇ
ದುನಿಆ ದೂರ್ ಭಾಗೇˌ
ಬಾವರೀಂ ಸೀ ನೈನ್ ಚಾಹೇಂ
ಬಾವರೀಂ ಜ಼ರೋಕೇಂಸೇ
ಬಾವರೀಂ ನಜಾ಼ರೋಂ ಕೋ ಥಕನಾ//."


*****

ಆ ವಿಚಿತ್ರ ಕನಸು ಮರಳಿ ಬಿದ್ದು ಅವನನ್ನ ಕಾಡಿತು. ಆ ಕನಸನ್ನವನು ಕಾಣುತ್ತಿರೋದು ಅದೆ ಮೊದಲ ದಿನವೇನಲ್ಲ. "ಅವನು ಒಬ್ಬಂಟಿಯಾಗಿ ಅದೆಲ್ಲಿಗೋ ನಡುರಾತ್ರಿ ಕತ್ತಲಲ್ಲಿ ಕಾಲೆಳೆದುಕೊಂಡು ಹೋಗುತ್ತಿದ್ದಾನೆ. ಎಲ್ಲಿಗೆಂದೆ ಅರಿಯದೆ ಹೋಗಹೋಗುತ್ತಿದ್ದಂತೆ ಮುಂದೆ ಕಟ್ಟೆಯಿದ್ದ ಬಾವಿಗೆ ಅವನು ಅದು ಹೇಗೋ ಜಾರಿ ಬಿದ್ದು ಹೋದ. ಆಳದಲ್ಲಿದ್ದ ಬಾವಿಯ ನೀರಿನಲ್ಲಿ ತೇಲುತ್ತಾ ಇದ್ದವನ ಕಾಲಿಗೆ ದಪ್ಪದ ಸರಪಳಿ ಕಟ್ಟಿದೆ ಅದರ ಮತ್ತೊಂದು ದೊಡ್ಡ ಕಬ್ಬಿಣದ ಗುಂಡು ಕಟ್ಟಿದ್ದು ನೀರಿನಾಳದಲ್ಲಿತ್ತು. ಅವನ ಆ ಅವಸ್ಥೆ ನೋಡಿ ಉದ್ದುದ್ದ ಗಡ್ಡ ಬಿಟ್ಟಿದ್ದ ಅರ್ಧ ಡಝ಼ನ್ ಮಂದಿ ತಮ್ಮ ಕೈಯನ್ನ ಅವನತ್ತ ಚಾಚುತ್ತಿದ್ದಾರೆ. ಅದು ಹೇಗೋ ಅವನತ್ತ ಚಾಚಿದ ಅವರ ಕೈ ಅವನಿರವಲ್ಲಿಗೂ ಉದ್ದವಾಗುತ್ತಾ ಬೆಳೆದು ಬಂತು! ಆದರೆ ಕಾಲಿಗೆ ಕಟ್ಟಿಕೊಂಡಿದ್ದ ಆ ಭಾರವಾದ ಲೋಹದ ಗುಂಡನ್ನ ತನ್ನಿಂದ ಬೇರ್ಪಡಿಸದೆ ಅವನನ್ನ ಮೇಲೆತ್ತಲು ಅವರಿಗೂ ಸಾಧ್ಯವಿರಲಿಲ್ಲ. ಇವನಿಗೋ ಅದನ್ನ ತನ್ನಿಂದ ದೂರಾಗಿಸಿಕೊಳ್ಳಲು ಚೂರೂ ಮನಸಿರಲಿಲ್ಲ. ಅವರು ಚಾಚಿದ ಕೈಯತ್ತ ಕೃತಜ್ಞತೆಯಿಂದ ನೋಡಿದ ಅವನು ಮರಳಿ ತನ್ನ ಕಾಲಿನ ಸರಪಳಿಗೆ ಅಂಟಿದ್ದ ಗುಂಡನ್ನ ಮೋಹದ ಅಶ್ರುಗಳ ಮಿನುಗಲ್ಲಿ ದಿಟ್ಟಿಸುತ್ತಾ ಅಲ್ಲೆ ಉಳಿದುಬಿಟ್ಟ. ಮೇಲತ್ತಲು ಕೈ ಚಾಚಿದವರು ಇವನ ದ್ವಂದ್ವವನ್ನ ಅರ್ಥ ಮಾಡಿಕೊಂಡವರಂತೆ ಕೈ ಹಿಂದೆಳೆದುಕೊಂಡು ಅಸಹಾಯಕತೆಯನ್ನು ಕಂಡು ಲೊಚಗುಟ್ಟಿ ಮುಂದುವರೆದರು." ಇಲ್ಲವನಿಗೆ ಮತ್ತೆ ಅದೆ ಹಂತದಲ್ಲಿ ಎಚ್ಚರವಾಯಿತು. 


ಇವಿಷ್ಟೂ ಅವನಿಗೆ ಪ್ರತಿಬಾರಿ ಆ ಕನಸು ಬಿದ್ದಾಗಲೂ ಸ್ಪಷ್ಟವಾಗಿ ನೆನಪಿರುತ್ತದೆ. ಬಾವಿಗೆ ಬಿದ್ದ ಗಾಬರಿಗೇನೋ ಸ್ವಪ್ನ ಕಂಡು ಎದ್ದಾಗಲೆಲ್ಲಾ ಮೈ ಬೆವರಿರುತ್ತದೆ. ಆದರೆ ದಾರಿಯಲ್ಲಿ ಹೋಗುತ್ತಿದ್ದ ತಾನ್ಯಾಕೆ ಹೋಗಿ ಹೋಗಿ ಬಾವಿಯಲ್ಲಿ-ಅದೂ ಕಟ್ಟೆಯಿರುವ ಬಾವಿಯಲ್ಲಿ ಅದ್ಹೇಗೆ ಜಾರಿ ಬಿದ್ದೆ ಅನ್ನೋದೆ ಅವನಿಗೆ ಅರಿವಾಗುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಬಿದ್ದ ತನ್ನ ಕಾಲಿಗೆ ಅಂಟಿರೋ ಆ ಸರಪಳಿ ಯಾವುದು? ಅದರ ಮತ್ತೊಂದು ತುದಿಗೆ ಕಟ್ಟಿರೋ ಲೋಹದ ಗುಂಡದೇನು? ಪ್ರತಿಸಲವೂ ತನ್ನನ್ನ ರಕ್ಷಿಸಲು ಬರುವವರು ಕೇವಲ ಆರೆ ಮಂದಿ ಏಕಿರುತ್ತಾರೋ ಒಂದೂ ಅವನಿಗೆ ಅರ್ಥವಾಗುತ್ತಿರಲಿಲ್ಲ. ಎಂದಿನಂತೆ ಅಂದೂ ಅವನು ಕನಸು ಬಿಟ್ಟೆದ್ದಾಗ ಬೆವರಿದ್ದ. ಆ ಕನಸು ಬಿದ್ದಾಗಲೆಲ್ಲಾ ಮನಸು ಕಸಿವಸಿಗೊಳ್ಳುತ್ತಿತ್ತು. ಕೈಫೋನಿನ ಗಡಿಯಾರದಲ್ಲಿ ಮೂರೂವರೆ ತೋರಿಸುತ್ತಿತ್ತು. ಹೋಗಿ ಉಚ್ಛೆ ಹೊಯ್ದು ಬಂದು ಬೆಳಕನ್ನ ಆರಿಸಿ ಮಂದರಿ ಹೊದ್ದುಕೊಂಡು ಹಾಸಿಗೆಯ ಮೇಲೆ ಬಿದ್ದುಕೊಂಡ.


ಸುಭಾಶನ ಬಗ್ಗೆ ಯೋಚಿಸಿದ. ಸುಭಾಶನಂತಹ ಮುಗ್ಧ ಮಕ್ಕಳು ಇನ್ನೂ ಪ್ರಪಂಚ ಅರಿಯದವುಗಳು. ಸಿಗಬೇಕಾದ ಪ್ರಾಯದಲ್ಲಿ ಗಂಡು ಮಕ್ಕಳಿಗೆ ಅಪ್ಪನದ್ದೋ ಇಲ್ಲಾ ಸಹೋದರ ಮಾವನದ್ದೋ ಮಾರ್ಗದರ್ಶನ ಮಮತೆ ಸಿಗದಿದ್ದರೆ ಸಮಾಜದ ಕಿತ್ತು ತಿನ್ನೋ ದುರುಳ ಕೈಗಳು ಅವುಗಳ ಮುಗ್ಧತೆಯನ್ನ ಹೊಸಕಿ ಹಾಕಿ ಬಿಡಲು ಮುನ್ನುಗ್ಗುತ್ತವೆˌ ಪಾಪ ಅವನ ಮುಂದಿನ ಭವಿಷ್ಯ ಎಂದು ಲೊಚಗುಟ್ಟುತ್ತಲೆ ನಿದ್ರೆಗೆ ಜಾರಿದ.

( ಇನ್ನೂ ಇದೆ.)



https://youtu.be/T0dOuSC6g88

No comments: