06 January 2023

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೮.👊

"ಕಥೆಯೊಂದು ಶುರುವಾಗಿದೆ"❤️ ಸಂಜೆಗತ್ತಲ ಹಿನ್ನೋಟ - ೪೮.👊


ಈಗ ಆ ಸಣ್ಣವನ ಮಾನದ ಪ್ರಶ್ನೆಯಾದ ಪೇಚಾಟ ಅವನಿಗೆ ಮಾತ್ರ ಒಂಥರಾ ತಮಾಷೆ ಅನಿಸಿತು. ಒಂದೊಂದು ಪ್ರಾಯಘಟ್ಟದಲ್ಭಿ ನಾವೆಲ್ಲರೂ ಬೆಳೆಸಿಕೊಂಡಿರುವ ಅನೇಕ ಭ್ರಮೆಗಳು ಬೇರೆಯವರಿಗೆ ನಗೆಪಾಟಲಿನ ವಸ್ತುವಾಗಿದ್ದರೂˌ ಆ ಪ್ರಾಯಸ್ಥರ ಪಾಲಿಗಂತೂ ಅದು ಬಹಳ ಗಂಭೀರವಾದ ವಿಚಾರ ಅನ್ನೋ ವಿಷಯವನ್ನ ಅವನು ಚೆನ್ನಾಗಿ ಬಲ್ಲ. ಒಂದು ಕಾಲದಲ್ಲಿ ಅವನೂ ಸಹ ಅದೆ ವಯಸ್ಸನ್ನ ದಾಟಿ ಬಂದಿದ್ದವವನೆ ಅಲ್ಲವೆ?


ಹೀಗಾಗಿ ಸುಭಾಶನ ಮನಸಿನ ಆತಂಕವನ್ನ ಅರ್ಥ ಮಾಡಿಕೊಂಡವನಂತೆ ಅವನನ್ನ ಸಂತೈಸುತ್ತಾ "ನೋಡಾ ಅದನ್ನ ಬೇರೆಯವರು ಕಾಣೋದು ನಿನಗಷ್ಟು ನಾಚಿಕೆ ಆಗ್ತದೆ ಅಂದ್ರೆ ಬೇಡ ಬಿಡು ಆ ಫೊಟೋಗಳನ್ನೆಲ್ಲ ಬೇರೆ ಫೊಟೋಗಳ ಹಿಂದೆ ತಿರುಗುಮುರುಗಾಗಿ ಅಡಗಿಸಿಡು. ಎಂತಸ ಆಗದಿಲ್ಲನ ಆಗ. ಆದರೆ ನೋಡುˌ ಈಗಲ್ಲ ಇನ್ಯಾವುದೋ ಒಂದು ದಿನ ನಿನಗವುಗಳನ್ನ ನೋಡಿದಾಗ ಈಗ ಅವನ್ನ ತೆಗೆಯುವಾಗ ನನಗೇನನ್ನಿಸುತ್ತಿತ್ತೋ ಅದೆ ಅನಿಸಿಯಾತು." ಕಿರಿಯನ ಹೆಗಲ ಮೇಲೆ ಆತ್ಮೀಯತೆಯಿಂದ ತನ್ನ ಎಡಗೈ ಹಾಕಿ ಬಲಗೈಯಿಂದ ಅವನ ಬಲ ಅಂಗೈ ಹಿಡಿದು ಅದೆ ಮಾತನ್ನ ಮುಂದುವರೆಸುತ್ತಾ "....ಈಗ ನಿನ್ನ ಅಂಗೈಯಲ್ಲಿರೋ ಐದು ಬೆರಳುಗಳನ್ನೆ ನೋಡು ಒಂದೆ ಸಮ ಇವೆನ ಅವೆಲ್ಲ? ಒಂದೊಮ್ಮೆ ಅವೆಲ್ಲ ಒಂದೆ ತರ ಸರಿಸಮಾನವಾಗಿರ್ತಿದ್ರೆ ಎಷ್ಟು ಗಲೀಜಾಗಿ ಕಾಣ್ತಿತ್ತು ಕೈ ಅಂತ ಯೋಚಿಸಿ ನೋಡು! ನಮ್ಮೆಲ್ಲರ ಬದುಕು ಸಹ ಹಾಗೆಯೆ. ಒಂದೊಂದು ದಿನ ಮತ್ತೊಂದು ದಿನಕ್ಕೆ ಸರಿಸಮವಾಗಿರಬೇಕು ಅಂತೇನಿಲ್ಲನ. ಹಾಗೇನಾದ್ರೂ ಎಲ್ಲಾ ದಿನಗಳೂ ಒಂದೆ ತರಹ ಇರ್ತಿದ್ರೆ ಜೀವನನೆ ಬೇಸರ ಹುಟ್ಟಿಸಿಬಿಡ್ತದೆ. ಇಂದಿನ ತಮಾಷೆ ಮುಂದೊಂದು ದಿನದ ಮಧುರ ನೆನಪುಗಳಾಗುತ್ತವೆ ಆಯ್ತ. ಅವನ್ನ ಕಳೆಯದೆ ನಾನು ಹೋದ ಮೇಲೆ ಹರಿಯದೆ ಹಾಗೆ ಉಳಿಸಿಕೊಳ್ಳ. ನಾನು ಈಗ ಹೇಳಿದ ಮಾತುಗಳು ಇನ್ಯಾವತ್ತಾದ್ರೂ ನೀನೂ ನನ್ನಂತೆನೆ ಆದಾಗ ನಿನಗೂ ಖಂಡಿತವಾಗಿ ಅರ್ಥವಾಗ್ತವೆ" ಅಂದ. 


ಮೌನವಾಗಿ ಇವನ ಬೋಧನೆ ಆಲಿಸುತ್ತಿದ್ದ ಹುಡುಗನಿಗೆ ಇನ್ನಷ್ಟು ತತ್ವ ಹೇಳುವ ಉಮೇದು ಹುಟ್ಟಿ ಅವ ತನ್ನ ಜೇಬಿನಿಂದ ರುಮಾಲು ತೆಗೆದು ಅದನ್ನ ತ್ರಿಕೋನಾಕೃತಿ ತಲೆಕೆಳಗಾಗುವಂತೆ ಮಡಚಿ ತನ್ನ ಎರಡೂ ಕೈಗಳಲ್ಲಿ ಅದರ ಒಂದೊಂದು ತುದಿ ಹಿಡಿದು "ಇಗ ಇಲ್ಲಿ ನೋಡು ನಾವೆಲ್ಲರೂ ಬದುಕುತ್ತಿರೋ ಬಾಳು ಇದಂತ ಭಾವಿಸು ಈಗ. ಈ ಎಡಗೈಯಲ್ಲಿ ನಾನು ಹಿಡಿದಿರೋದೆ 'ಹುಟ್ಟು'. ನಾವು ಯಾರ ಮಕ್ಕಳಾಗಿ-ಯಾರ ಮನೆಯಲ್ಲಿ-ಯಾವ ಜಾತಿಯಲ್ಲಿ-ಯಾವ ಮತದಲ್ಲಿ-ಯಾವ ಊರಲ್ಲಿ ಹುಟ್ತೇವೋ ಅದು ನಮ್ಮ ಹಿಡಿತದಲ್ಲಿರಲ್ಲ." ಅಂತ ಕರವಸ್ತ್ರದ ಆ ಭಾಗವನ್ನ ಕೈ ಬಿಟ್ಟ. ಅದೆ ಮಾತುಗಳನ್ನ ಮುಂದುವರೆಸಿಕೊಂಡು "....ಹಾಗೆನೆ ಈ ಬಲಗೈಯಲ್ಲಿ ಹಿಡಿದ ತುದಿಯನ್ನ ಸಾವು ಅಂತ ತಿಳಕೋ. ಯಾವಾಗ-ಎಲ್ಲಿ-ಎಷ್ಟು ಹೊತ್ತಿಗೆ-ಹೇಗೆ ಸಾಯುತ್ತೇವೋ ಅದೂ ಸಹ ನಮ್ಮ ಹಿಡಿತದಲ್ಲಿಲ್ಲ." ಅನ್ನುತ್ತಾ ಬಲಗೈಯಿಂದಲೂ ಅದನ್ನ ಕೈಬಿಟ್ಟ. ರುಮಾಲು ಅವನ ಮಡಿಲಿಗೆ ಬಿತ್ತು. 


ಅದೆ ಲಹರಿಯಲ್ಲಿ ಮುಂದುವರೆದು "...ಹೀಗೆ ಹುಟ್ಟಾಗಲಿ ಸಾವಾಗಲಿ ಯಾರದ್ದೂ ಹಿಡಿತದಲ್ಲಿರೋದಿಲ್ಲ ನೋಡು. ಹಾಗಂತ ನಾವೂ ಸಹ ಬದುಕನ್ನ ಇನ್ನಷ್ಟು ಮತ್ತಷ್ಟು ಅರ್ಥಪೂರ್ಣವಾಗಿಸಿಕೊಳ್ಳದೆ ಸೋಮಾರಿ ಸಿದ್ಧರಾಗಿ ಪ್ರಯತ್ನವನ್ನೆ ಪಡದೆ ಉಳಿಯೋದಲ್ಲ. ಹೀಗಾಗಿ ಬದುಕನ್ನ ಬಂದ ಹಾಗೆ ಎದುರಿಸ್ತಾˌ ಯಾರು ಕರೆದು ಬುದ್ಧಿ ಹೇಳಿ ತಿದ್ದಿ ತೀಡಿ ಸರಿದಾರಿಯಲ್ಲಿ ನಡೆಸುವವರು ನಮಗೆ ಇಲ್ದೆ ಇದ್ರೂಸˌ ನಮಗೆ ನಾವೆ ಒಳ್ಳೆಯವರಾಗಿ ಬದುಕುವುದನ್ನ ಯಾವಾಗಲೂ ಕಲಿಯಬೇಕು. ಬೇರೆಯವರಿಗೆ ತೊಂದರೆ ಕೊಡದೆ ಸಾಧ್ಯವಾದಷ್ಟು ನಾವಿರುವ ಈ ಸಮಾಜಕ್ಕೆ ಉಪಕಾರಿಯಾಗಿˌ ಒಂದು ಪಕ್ಷ ಉಪಕಾರ ಮಾಡೋ ಮನಸು ಒಂದ್ವೇಳೆ ಇಲ್ಲದಿದ್ರೆ ಉಪದ್ರವನ್ನಾದರೂ ಮಾಡದೆ ಬದುಕುವುದನ್ನ ಕಲಿಯಬೇಕು. ಅದು ಬೇರೆಯವರು ನಮ್ಮನ್ನ ಹೊಗಳಲಿ ಅಂತ ಒಳ್ಳೆಯವರಾಗೋದಲ್ಲ ಕೇಳ್ತ? ನಮಗೆ ನಾವೆ ಕೆಟ್ಟವರು ನಾವಲ್ಲ ಅನ್ನುವ ತೃಪ್ತಿ ಬರೋದಕ್ಕಾದ್ರೂ ಸರಿ ಒಳ್ಳೆಯ ಬುದ್ಧಿ ಬೆಳೆಸಿಕೊಂಡು ಬಾಳಬೇಕು ಗೊತ್ತಾಯ್ತನ?" ಅಂದು ತನ್ನ ಸುದೀರ್ಘ ಭಾಷಣಕ್ಕೆ ಪೂರ್ಣವಿರಾಮವನ್ನಿತ್ತು ತನ್ನದೆ ಲಹರಿಯಲ್ಲಿ ಮುಳುಗಿ ಹೋಗಿ ಕಡಲ ಒಡಲಲ್ಲಿ ಕಡುಕೆಂಪಗೆ ಹೊಳೆಯುತ್ತಾ ಮುಳುಗುತ್ತಿರುವ ಸೂರ್ಯನನ್ನ ದಿಟ್ಚಿಸುತ್ತಾ ಮೌನವಾದ.


ಇವನ ಆ ತತ್ವಸಂಚಯದ ಕೊರೆತ ಆ ಎಳೆಯನಿಗೆ ಅದೆಷ್ಟು ಅರ್ಥವಾಯಿತೋ? ಬಿಟ್ಟಿತೋ! ಅವನಿಗೆ ಆ ಹೊತ್ತಲ್ಲಿ ಹೇಳಬೇಕಿನಿಸಿದ್ದನ್ನ ಒಟ್ರಾಶಿ ಇದೆ ಸರಿಯಾದ ಸಂದರ್ಭ ಅಂದುಕೊಂಡು ಒದರಿ ಮುಗಿಸಿದ್ದ. ಬಹುಶಃ ಆ ಸಣ್ಣ ಪ್ರಾಯದವನ ಬುದ್ಧಿಮಟ್ಟಕ್ಕೆ ಇವನ ಪುಗಸಟ್ಟೆ ಉಪದೇಶ ಚೂರು ಅಧಿಕವೆ ಆಯ್ತೇನೋ. ಆದರೆ ಆ ಹುಡುಗನಿಗೆ ಈ ಮಾತುಗಳನ್ನ ಹೀಗೆ ತಿಳಿಸಿ ಹೇಳುವವರು ಇನ್ಯಾರೂ ಇಲ್ಲ ಅನ್ನುವ ಅರಿವು ಅವನಿಗಿದ್ದುದರಿಂದಲೂˌ ಈಗ ಬಿಟ್ಟರೆ ಇನ್ಯಾವತ್ತಾದರೂ ಮುಂದಿನ ದಿನಮಾನಗಳಲ್ಲಿ ಒಂದೊಮ್ಮೆ ತಾನಿಲ್ಲಿಗೆ ಮುಂದೆ ಬಂದರೂ ಇವನನ್ನ ತಾನು ಭೇಟಿಯಾಗುವ ಸಂಭವ ಕಡಿಮೆ ಎನ್ನುವ ಖಚಿತತೆ ಅವನಿಗಿದ್ದುದರಿಂದಲೂ ಒಬ್ಬ ಅಪ್ಪ ತನ್ನ ಮಗನಿಗೆ ಹೇಳಬೇಕಾದ ಆಪ್ತ ಧಾಟಿಯಲ್ಲಿ ಆ ಮಾತುಗಳನ್ನ ಸುಭಾಶನಿಗವ ಹೇಳಿ ಮುಗಿಸಿದ್ದ.


ಸುತ್ತಲೂ ಕತ್ತಲು ಮೆತ್ತಗೆ ಮುತ್ತಿ ಹೊತ್ತು ಪೂರ್ತಿ ಕಂತುತ್ತಿತ್ತು. ಅದೆ ಹತ್ತಿರದ ಮನೆಯ ರೇಡಿಯೋದಲ್ಲಿ ಅವತ್ತು ಮಲಯಾಳಿಗಳ ನೆಚ್ಚಿನ ದಾಸೆಟ್ಟ ಏಸುದಾಸ್ "ಅಕಲೇ..." ಅಂತ ದೀರ್ಘ ಆಲಾಪ ಆರಂಭಿಸಿದ್ದು ಅರೆಬರೆಯಾಗಿ ಗಾಳಿಯಲೆಗಳಲ್ಲಿ ತೇಲಿ ಬಂತು. ಅವರ ಆ ಆರ್ದ್ರ ಧ್ವನಿಗೆ ಪಕ್ಕವಾದ್ಯದಂತೆ ಪಡುವಣದ ಸಮುದ್ರದಲೆಗಳು ಮೊರೆಯುತ್ತಿದ್ದವು. "ನಡಿ ಹೋಗಣ ಇನ್ನು" ಅಂತ ಅವ ಎದ್ದು ತನ್ನ ಕುಂಡೆಗಂಟಿದ್ದ ಮರಳನ್ನ ಕೊಡವಿಕೊಂಡ. ಸುಭಾಶನೂ ಅವನನ್ನ ಅನುಸರಿಸಿದ. ಅವನ ಹೆಗಲ ಮೇಲೆ ಕೈ ಹಾಕಿಕೊಂಡು ಅವರೆಲ್ಲರೂ ನಾರಾಯಣಗುರುಗಳ ಜಯಂತಿಯ ರಜೆಯ ಗಮ್ಮತ್ತಿನಲ್ಲಿ ನಾಳೆ ಆಡಲಿಕ್ಕಿದ್ದ ಮ್ಯಾಚಿನ ಇತ್ಯೋಪರಿಗಳನ್ನ ವಿಚಾರಿಸಿಕೊಳ್ಳುತ್ತಾˌ ಅವನ ನೆಚ್ಚಿನ ಆಟಗಾರ ವಿರಾಟ ಕೋಹ್ಲಿಯ ಬಗ್ಗೆ ಬೇಕಂತಲೆ ಸಾಕಷ್ಟು ಮಕ್ಕರು ಮಾಡಿ ಅವನ ಅಭಿಮಾನದ ಆಟಗಾರನ ಇಮೇಜಿಗೆ ಭಂಗ ತರುವ ತನ್ನ ಮಾತುಗಳಿಗೆ ಈ ಅಪ್ಪಟ ಅಭಿಮಾನಿ ದೇವರು ನಿಜವಾಗಿಯೂ ಕಸಿವಿಸಿಗೊಳ್ಳುತ್ತಿದ್ದ ಕ್ಷಣಗಳ ಮಜಾ ತೆಗೆದುಕೊಳ್ಳುತ್ತಾ ರೈಲ್ವೆ ನಿಲ್ದಾಣದ ರಸ್ತೆಯತ್ತ ಇಬ್ಬರೂ ಹೊರಳಿಕೊಂಡರು.


ದಾರಿಯಲ್ಲಿದ್ದ ಕಾಕಾನ ಗೂಡಂಗಡಿಯಲ್ಲಿ ಇವನು ಉದ್ದುದ್ದದ ಎರಡು ಬೋಟಿ ಪ್ಯಾಕೇಟುಗಳ ಜೊತೆ ಎಂಟಾಣೆ ಪೆಪ್ಪರಮಿಂಟುಗಳನ್ನಿಷ್ಟು ಕೊಂಡ. ಸಣ್ಣದರಿಂದಲೂ ಈ ಪೆಪ್ಪರುಮಿಂಟು-ಚಾಕ್ಲೇಟು ತಿನ್ನುವ ಚಟ ಅವನಿಗೆ ಬಿಡಲಾರದೆ ಅಂಟಿಕೊಂಡಿತ್ತು. ಬೋಟಿ ಪೊಟ್ಟಣಗಳೆರಡನ್ನೂ ಸುಭಾಶ ಹಾಗೂ ಅವನ ಪುಟ್ಟ ತಂಗಿಗಾಗಿ ಕೊಂಡಿದ್ದ. ಅದರೊಂದಿಗೆ ಕೆಲವು ಮಿಠಾಯಿಗಳನ್ನೂ ಅವನಿಗೆ ಕೊಟ್ಟು ಅವನ ಮನೆ ಕಡೆಗೆ ತಿರುಗುವ ಮಾರ್ಗ ಒಡೆಯುವಲ್ಲಿ ಬಂದಾಗ ವಿದಾಯ ಹೇಳಿ ಅವನು ಮುಂದುವರೆದ. ಸಣ್ಣವ ಕುಣಕೊಂಡು ಅವನ ಮನೆಯ ದಿಕ್ಕಿನತ್ತ ಓಡ ತೊಡಗಿದ. ತನ್ನ ಸ್ವಂತಕ್ಕೊಂದು ತನ್ನದೆ ಚಿತ್ರಗಳಿರುವ ಫೊಟೋ ಆಲ್ಬಂ ದಕ್ಕಿದ್ದು ಅವನ ಸಂಭ್ರಮದ ಮೂಲ ಕಾರಣ ಅನ್ನುವುದನ್ನ ಬಲ್ಲ ಅವನು ನಸು ನಗುತ್ತಾ ಎಳೆಯನ ಬೀಳ್ಕೊಟ್ಟು ದಿನದ ಹಾರಾಟ ಅಲೆದಾಟ ಮುಗಿಸಿದ ಹಕ್ಕಿ ತನ್ನ ತಾವಿನತ್ತ ಹಿಂದಿರುಗುವ ಉಮೇದಿನಲ್ಲಿ ಹೆಜ್ಜೆ ಹಾಕತೊಡಗಿದ. ಇಂದು ಅವನು ಹೇಳಿದ್ದ ಮಾತುಗಳು ಮನಸಿಗದೆಷ್ಟು ಇಳಿದವೋ? ಇಲ್ಲವೋ! ಆದರೆ ಹೇಳಿದ್ದಷ್ಟನ್ನೂ ಮೌನವಾಗಿ ಆ ಪುಟ್ಟ ಮನುಷ್ಯ ಕೇಳಿಸಿಕೊಂಡಿದ್ದ ಅನ್ನುವ ತೃಪ್ತಿ ಅವನಿಗಿತ್ತು.


ಸುಭಾಶನಷ್ಟೆ ಪ್ರಾಯದಲ್ಲಿದ್ದಾಗ ಅವನಿಗೆ ಹೀಗೆ ಪಕ್ಕದಲ್ಲಿ ಕೂರಿಸಿಕೊಂಡು ಆತ್ಮವಿಶ್ವಾಸ ತುಂಬುತ್ತಾ ಸನ್ನಡತೆಯ ಪಾಠವನ್ನ ಹೇಳಿಕೊಡುವ ಕೆಲಸವನ್ನ ಯಾರೂ ಮಾಡಿರಲಿಲ್ಲ. ಅವನ ಎದುರು ಮನೆಯ "ಬಪಮ"ನ ಹೊರತು.


( ಇನ್ನೂ ಇದೆ.)



https://youtu.be/jX94JawPvwo

No comments: